ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸೋಮಣ್ಣನ ಸಂಕಟಗಳು

ಹಾಸ್ಯ ಲೇಖನ ಸೋಮಣ್ಣನ ಸಂಕಟಗಳು ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ. ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ ಮಾತಾಡಿಕೊಂಡು”ಏನ್ ಸೋಮಣ್ಣ ,ಚೆನ್ನಾಗಿದ್ದೀರಾ? ಮಕ್ಳು  ಏನ್  ಮಾಡ್ಕೊಂಡವ್ರೆ?” ಅಂತ ಕೇಳಿದೆ. ಸೋಮಣ್ಣ ನಿಟ್ಟುಸಿರು ಬಿಡುತ್ತಾ,”ಏನ್ ಚಂದ ಬುಡಿ ಮೇಡಂ,ಯಾಕಾದ್ರೂ ಮದ್ವೆಯಾಗಿ ಮಕ್ಳು ಮಾಡ್ಕೊಂಡೆ ಅಂತ  ಆಗ್ಬುಟ್ಟದೆ”  ಎಂದರು. ನನಗೆ ಆಶ್ಚರ್ಯವಾಯಿತು.” ಅಲ್ಲ ಸೋಮಣ್ಣ,ಇಬ್ರೂ ಮಕ್ಳನ್ನ  ಎಂಜಿನಿಯರಿಂಗ್  ಓದ್ಸಿದ್ದಿರಾ,ಒಳ್ಳೆ ಮಕ್ಳು ನಿಮ್ಮವು, ಅದ್ಯಾಕೆ  ಹಂಗಂತಿರ.?” ಅಂದೆ. ಸೋಮಣ್ಣ,” ಓದಕ್ಕೇನೋ ಓದ್ದೋ,ಆದ್ರೆ ಕೆಲ್ಸವೇ  ಸಿಕ್ಕಿಲ್ಲ  ನೋಡಿ, ಏನ್ಮಾಡೋದು?”  ಅಂದ್ರು. ನನಗೆ  ಯಾವಾಗಲೋ  ಒಂದು  ಸಾರಿ  ಅವರು ” ಮಗ ಕ್ಲಾಸ್ ಒನ್ ಕಂಟ್ರಾಕ್ಟರ್  ಆಗಿ ಕೆಲ್ಸ ಮಾಡ್ತಾ  ಅವ್ನೆ,” ಅಂದಿದ್ದು  ನೆನಪಾಯಿತು. ಅದಕ್ಕೆ  ಕೇಳಿದೆ, “ಯಾಕೆ? ಕಾಂಟ್ರಾಕ್ಟ್  ಮಾಡ್ಸೋದು  ಬಿಟ್  ಬಿಟ್ನ,” ಎಂದಿದ್ದಕ್ಕೆ ” ಕಾಂಟ್ರಾಕ್ಟ್ ಏನೋ  ಮಾಡುಸ್ತ  ಅವ್ನೆ, ದುಡ್ಡು  ವಸಿ ಪರವಾಗಿಲ್ಲ ಮಾಡವ್ನೆ , ಆದ್ರೆ  ಅವರವ್ವಂಗೆ  ಸಮಾಧಾನ್ವೆ ಇಲ್ಲ. ದಿನಾ ಬೆಳಿಗ್ಗೆ ಎದ್ರೆ,” ಮಗಂಗೆ ಗೋರ್ ಮೆಂಟ್  ಕೆಲ್ಸ  ಕೊಡುಸ್ನಿಲ್ಲ  ನೀನು,” ಅಂತ ಹಂಗುಸ್ತಳೆ..ನೀವೇ  ಹೇಳಿ  ಮೇಡಂ  ಈಗ  ಗೋರ್ ಮೆಂಟ್ ಕೆಲ್ಸ ಅಷ್ಟು ಸುಲಭಕ್ಕೆ ಸಿಕ್ಕದಾ? ಕಿರಿಮಗನೂ ಎಸ್ ಐ ಆಗ್ಬೇಕು ಅಂತ ಮೂರ್ ಸತಿ ಪರೀಕ್ಷೆ ಬರ್ದ,ಫಿಸಿಕಲ್ ಆಯ್ತದೆ, ಬರೆಯೋದ್ರಲ್ಲಿ ಹೊಯ್ತದೇ,ಇವ್ಳು ‘ನಮ್ಮ ಕಡೆವ್ರು ಮಿನಿಸ್ಟ್ರು ಆಗವ್ರಲ್ಲ ಅವ್ರ ಕೇಳಿ ಕೊಡ್ಸಿ’,ಅಂತ ಜೀವ ತಿಂತಾವ್ಳೆ.”ಲೆ, ಈಗ ಕಾಲ ಕೆಟ್ಟೋಗದೆ  ಕಣೆ,ಹಿಂದ್ಲಂಗಲ್ಲ, ಎಲ್ಲಾ ಆನ್ಲೈನ್ ಮಾಡ್ಬುಟ್ಟವ್ರೆ. ಯಾರಿಗ್  ಕೆಲ್ಸ ಕೊಟ್ಟವ್ರೆ,ಮೆರಿಟ್  ಎಷ್ಟು ,ಎಲ್ಲಾ ಕಂಪ್ಯೂಟ್ರು ತೋರಿಸಿ ಬುಡ್ತದೆ. ಹಂಗೆ  ಹಿತ್ಲು ಬಾಗ್ಲಿಂದ ಕೆಲ್ಸ ಕೊಡ್ಸಕ್ಕೆ  ಹೋದ್ರೆ ಬಾಕಿ ಹೈಕ್ಳು ಬುಡಕ್ಕಿಲ್ಲ,ಕೇಸ್ ಹಾಕೊತ್ತವೆ, ಆ ಮಿನಿಸ್ಟ್ರು ಅವನ ಹಕ್ಕಳಿಗೇ ಕೆಲ್ಸ ಕೊಡ್ಸಕ್ಕಾಕ್ಕಿಲ್ಲ, ಇನ್ನು ನಮ್ ಹೈಕ್ಳಿಗೆ ಎಲ್ಲಿಂದ  ಕೊಡ್ಸಾನು? ,ಸುಮ್ನಿರು  ಅಂದ್ರೂ  ಕೇಳಕ್ಕಿಲ್ಲ,”  ಎಂದು ಬೇಜಾರಿಂದ  ಹೇಳಿದರು. ” ನಿಮ್ಮ ಮನೆದೇ ಮಸ್ತಾಗಿ  ಅದಲ್ಲ,ಅದು ಸಾಲ್ದ, ಒಬ್ಬ ಕಾಂಟ್ರಾಕ್ಟ್ ಮಾಡುಸ್ಲಿ, ಇನ್ನೊಬ್ಬುನ್ನ  ಜಮೀನಿಗ್  ಬುಡಿ,” ಎಂದೆ. “ಮೇಡಂ,ಅದು ಆಕ್ಕಿಲ್ವಂತೆ  ಅವಳ್ಗೆ, ‘ಹುಡ್ಗ  ಕೆಲ್ಸದ್ ಮೇಲವ್ನೆ  ಅಂದ್ರೆ  ಒಳ್ಳೆ  ಕಡೆ  ಹೆಣ್  ಕೊಡ್ತರೆ,ಇಲ್ದಿದ್ರೆ ಯಾರ್  ಕೊಡ್ತರೆ?’  ಅಂತಳೆ.’ ಈಗ ನಾನ್  ಕೆಲ್ಸದಲ್ಲಿ ಇಲ್ದಿದ್ರೂ  ನೀನು  ನನ್ನ  ಮದ್ವೆ ಆದ್ಯಲ್ಲ, ಹಂಗೇ ಅವುಕ್ಕೂ ಯಾರಾದ್ರೂ ಸಿಕ್ತಾರೆ ಬುಡು’,ಅಂದ್ರೆ, “ನಮ್ಮಪ್ಪಂಗೆನೋ ತಲೆ ಕೆಟ್ಟಿತ್ತು ,ನಿಂಗ್ ಕೊಟ್ಟ, ಈಗ್ಲವ್ರು  ಕೊಟ್ಟಾರಾ?” ಅಂತಳೆ ಮೇಡಂ, ಹೆಚ್ಗೆ  ಓದಿಲ್ಲ  ಮೇಡಂ  ಅವ್ಳು, ಆದ್ರೂ ಮಾತಾಡ್ ಬೇಕಾದ್ರೆ ಬರೀ ಲಾ ಪಾಯಿಂಟೇ  ಬತ್ತವೆ .ನಾನ್  ಏನ್ ಹೇಳಿದ್ರೂ  ಕೇಳಕ್ಕಿಲ್ಲ. ನಂಗೆ ರೋಸಿ ಹೋಗದೆ.ಯಾಕಾದ್ರೂ ಮದ್ವೆಯಾಗಿ ಮಕ್ಳು ಹುಟ್ಟುಸ್ದೆ,ಅಂತ  ದಿನಾ  ಕೊರಗಂಗ್  ಆಗದೆ,” ಅಂತ ಹೇಳಿ, “ಬತ್ತಿನೀ ಮೇಡಂ, ಇನ್ನೂ ಸುಮಾರ್ ಮನೆಗೆ ಹಾಲ್ ಹಾಕ್ಬೇಕು.” ಅನ್ನುತ್ತಾ ಹೋದರು.ನಾನು ನಗು ತಡೆದುಕೊಂಡು ಒಳಬಂದೆ.

ಸೋಮಣ್ಣನ ಸಂಕಟಗಳು Read Post »

ಇತರೆ

ಪಕ್ಷಿಗಳೋ… ಪಕ್ಷಿವೀಕ್ಷಕರೋ

ಲೇಖನ ಪಕ್ಷಿಗಳೋ… ಪಕ್ಷಿವೀಕ್ಷಕರೋ ಸಂಧ್ಯಾ ಕೋಟೇಶ್ವರ “ಸರ್ ಸರ್,  ನನ್ನ ಫೋಟೋನೂ ತೆಗೀರಿ ಸರ್.  ಮೇಡಂ,  ನಾನು ಪ್ರತಿದಿನದ  ಹಾಗೇ ಇವತ್ತೂ ತುಂಬಾ ಕಲರ್ ಫುಲ್ ಆಗಿ ಬಂದಿದೀನಿ. ನನ್ನ ಫೋಟೋ ತೆಗೀರಿ.  ಇವಾಗ ತಿರುಗಿ ನಿಲ್ಲುತ್ತೇನೆ.  ಈ ಕಡೆ ಕ್ಲಿಕ್ ಮಾಡಿ”.  ಹೀಗೇ ಬೇಡಿಕೆಗಳ ಪಟ್ಟಿ ಮುಗಿಯದಷ್ಟು.  ಎಷ್ಟು ಫೋಟೋ ಹೊಡೆದರೂ ಹೊಡೆಯುವವರಿಗೆ ಬೇಜಾರಾಗುತ್ತಿಲ್ಲ.  ಹೊಡೆಸಿಕೊಳ್ಳುವವರಿಗಂತೂ ಒಂದು ಚೂರು ಮುಲಾಜಿಲ್ಲ.  ಇದು ಯಾವ ಸ್ಟುಡಿಯೋ ಅಂದುಕೊಳ್ತಾ ಇದ್ದೀರಾ?  ಚಳಿಗಾಲ ಬಂತೆಂದರೆ ಸಾಕು,  ಫೋಟೋಗಾಗಿ ಬೇಡಿಕೆ ಇಡುವವರು ರಂಗುರಂಗಿನ ವಲಸೆ ಪಕ್ಷಿಗಳು.  ಹುಚ್ಚು ಹಿಡಿದಂತೆ ತಲ್ಲೀನರಾಗಿ ಕ್ಲಿಕ್ಕಿಸುವವರು ಪಕ್ಷಿವೀಕ್ಷಕರು.  ಒಂದು ವಿಶೇಷ ಪಕ್ಷಿಯ  ಕರೆ ಕೇಳುತ್ತಲೇ ಏನೇನೋ ಚರ್ಚೆ ಮಾಡುತ್ತಾ ಕೂತವರೆಲ್ಲಾ ಒಂದೇ ಸಮನೆ ತಂತಮ್ಮ  ಕ್ಯಾಮರ ಬಳಿ ಓಡುತ್ತಾರೆ. ಎಲ್ಲರ ಎದೆ ಬಡಿತ ಜೋರಾಗುತ್ತದೆ. ಏದುಸಿರು ಬಿಡುತ್ತಾರೆ. ಆ ಬಣ್ಣ ,  ಮೈಕಟ್ಟು ಸುಮ್ಮನೆ ನಿಂತು ಆನಂದಿಸುತ್ತಾರೆ.  ಎಷ್ಟು ನೋಡಿದರೂ ತೃಪ್ತಿ ಇಲ್ಲ. ಅದು ಓಡಿದ ಕಡೆ ಎಲ್ಲಾ ಓಡಿ,  ಬೇರೆ ಬೇರೆ ಅಂಗುಲಗಳಲ್ಲಿ ಅದರ ಅಂದ ಸವಿಯುತ್ತಾರೆ. ತಮಗೆ ಬೇಕಾದಷ್ಟು ಕ್ಲಿಕ್ಕಿಸಿ ಮತ್ತೆ ಬಂದು ಸುಮ್ಮನೆ  ಕುಳಿತು ಬಿಡುತ್ತಾರೆ.  ಇದು ಈಗ ಅಂತಲ್ಲ.  ಪ್ರತಿ ಬಾರಿ ಹೊಸ ಪಕ್ಷಿ ನೋಡಿದಾಗಲೂ ಇದೇ ಧಾವಂತದಿಂದ  ಪಕ್ಷಿ ವೀಕ್ಷಕರು ಧಾವಿಸುತ್ತಾರೆ.  ಮುಂಜಾವಿನ ಸರ‍್ಯೋದಯದ ಮುಂಚೆ ಗಾಢ ಮೌನದಲ್ಲಿರುವ ಪ್ರಕೃತಿ, ಚಿಲಿಪಿಲಿ ನಿನಾದದಲಿ ಎಲ್ಲರ ಉಸಿರು ಬಿಗಿ ಹಿಡಿಸಲು ತಯಾರಿ ನಡೆಸುತ್ತಿದೆಯೋ ಅನ್ನಿಸುತ್ತದೆ. ತಂಪಾಗಿರುವ ಮೌನಕ್ಕೆ,  ನಿದ್ರಿಸುತ್ತಿರುವ ಗಿಡ ಗಂಟಿಗಳಿಗೆ,  ಬಿದಿರು ಕಡ್ಡಿಗಳಿಗೆ,  ಪೊದೆಗಳಿಗೆಲ್ಲ ಚಲನೆ ಕೊಡುವುದೇ ಈ ಪಕ್ಷಿಗಳ ಚಟುವಟಿಕೆ.  ಇವುಗಳ ಅಂದ ಅನುಭವಿಸುವವನೇ ಬಲ್ಲ. ಒಂದಕ್ಕೆ ಮೈ ತುಂಬಾ ಒಂದೇ ಬಣ್ಣ; ಇನ್ನೂ ಕೆಲವು ಒಂದೊಂದು ಇಂಚಿಗೂ ಚಂದದ ಒಂದೊಂದು,  ಬಣ್ಣ,  ವಿನ್ಯಾಸವನ್ನು ಬಳಿದುಕೊಂಡಿರುತ್ತದೆ.  ಕೆಲವಕ್ಕೆ ಯಾರೋ ಅದ್ಭುತ ಕಲಾವಿದ, ಕುಂಚವನ್ನು ದಟ್ಟ ಶ್ರೀಮಂತ ಬಣ್ಣಕ್ಕದ್ದಿ ರಾಚಿ ಬಿಟ್ಟಿರಬೇಕು.  ಕೆಲವು ಪಕ್ಷಿಗಳು ಎದುರು ಬಂದು ಕುಳಿತಾಗಲಂತೂ ಸೃಷ್ಠಿಕರ‍್ತ ಎಷ್ಟು ರಸಿಕನಿರಬಹುದು ಎನಿಸುತ್ತದೆ.  ಪಕ್ಷಿಗಳ ಲಗುಬಗೆ ಒಂದೆಡೆಯಾದರೆ ಇನ್ನು ಪಕ್ಷಿ ವೀಕ್ಷಕರ ಸಂಭ್ರಮ ನೋಡಬೇಕು. ಪಕ್ಷಿಗಳನ್ನು ಹುಡುಕಿಕೊಂಡು ಹೋಗುವ ಒಂದು ಗುಂಪಿದೆ. ಅವರನ್ನು ಬರ್ಡರ್ಸ  ಅಥವಾ  ಪಕ್ಷಿವೀಕ್ಷಕರು ಅಂತ ಕರೀತಾರೆ. ಇವರಲ್ಲಿ ವೃತ್ತಿಪರರು ಹಾಗು ಹವ್ಯಾಸಿಗಳು ಇರುತ್ತಾರೆ. ಪಕ್ಷಿಗಳನ್ನು ಗಮನಿಸುವುದು, ಅವರ ಚಲನವಲನ ಕಂಡು ಆನಂದಿಸುವುದು ಎಷ್ಟು ಖುಷಿ ಕೊಡುತ್ತದೋ , ಈ  ಪಕ್ಷಿವೀಕ್ಷಕರನ್ನು ನೋಡುವುದು ಅಷ್ಟೇ ಮಜಾ ಕೊಡುತ್ತದೆ. ಅವರಿಗೆ ಪ್ರಕೃತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಪ್ರಚೋದಿಸುತ್ತವೆ. ಸಾಮಾನ್ಯರಿಗೆ ಬಹುಶಃ ಕಾಗೆ,ಮೈನಾ, ಕೊಕ್ಕರೆ, ಬಾತುಕೋಳಿ , ಇಂತಹ ಕೆಲವು ಪಕ್ಷಿಗಳ  ಹೆಸರು ತಿಳಿದಿರುತ್ತದೆ.  ಬೇರೆ ಎಲ್ಲಾ ಪಕ್ಷಿಗಳೂ ಒಂದೇ ತರಹ ಕಾಣಿಸುತ್ತದೆ.  ಆದರೆ ಇವರಿಗೆ ಪಕ್ಷಿಯ ಮೇಲಿನ ಒಂದು ಚಿಕ್ಕ ವಿವರವೂ ಮುಖ್ಯವಾಗುತ್ತದೆ.  ಪಕ್ಷಿಯ ಆವಾಸ, ಗಾತ್ರ, ಆಕಾರ,  ಬಣ್ಣ,  ಕೂಗು ಇವೆಲ್ಲದಕ್ಕೂ  ಸೂಕ್ಷ್ಮ ಗ್ರಾಹಿಗಳಾಗಿರುತ್ತಾರೆ.  ಆಗಸದ ಅಂಚಲ್ಲಿ ಎಷ್ಟೋ ಎತ್ತರದಲ್ಲಿ ಹಾರುವ ಪಕ್ಷಿಯ ಹೆಸರನ್ನು ಥಟ್ ಅಂತ ಹೇಳುತ್ತಾರೆ.  ಇಷ್ಟೇ ಅಲ್ಲ,  ಪಕ್ಷಿಗಳ ನಡವಳಿಕೆಗಳು ಕೂಡಾ ಮುಖ್ಯವಾಗುತ್ತದೆ. ಪಕ್ಷಿಗಳನ್ನು ನೋಡಿದಂತೆ ತಮ್ಮ ದಾಖಲೆ ಯ ಪಟ್ಟಿಗೆ ಸೇರಿಸುತ್ತಾರೆ.  ಅದರಲ್ಲಿ ಒಂದು ಹೊಸದು ಸರ‍್ಪಡೆಯಾದರೂ ಏನೋ ಖುಷಿ.  ಈಗ ಚಳಿಗಾಲ ಶುರುವಾಗಿದೆ ನೋಡಿ, ಈಗಂತೂ ಹಬ್ಬ.‌ ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬಂದಿರುತ್ತವೆ. ತಾವು  ನೋಡದೆ ಇರುವ ಪಕ್ಷಿ  ಒಂದು ಜಾಗದಲ್ಲಿ ಇದೆ ಎಂದು ತಿಳಿದು ಬಂದರೆ ಸಾಕು,  ಮಳೆ,  ಗಾಳಿ,  ಧೂಳು,ಕೊಚ್ಚೆ ಯಾವುದನ್ನೂ ಲೆಕ್ಕಿಸದೆ ಅದನ್ನು ನೋಡಲು ಅಣಿಯಾಗಿ ಹೊರಟುಬಿಡುತ್ತಾರೆ.  ಇನ್ನೇನಾದರೂ  ಅವರನ್ನು ಗಮನಿಸಲು ತೊಡಗಿದರೆ ಮೊದಲ ಸಲ ನೋಡಿದರೆ ಕಿರಿಕಿರಿಯಾಗುತ್ತದೆ.  ನಂತರ ಹುಚ್ಚು ಅನಿಸುತ್ತದೆ ! ಇದೊಂಥರಾ ಪ್ರಕೃತಿಯೊಂದಿಗೆ ಬೆರೆಯುವ ಹುಚ್ಚು.  ನಿರ‍್ಗದ ಮಡಿಲಲ್ಲಿ ಲೀನವಾಗುವ ಹುಚ್ಚು.  ಯಾವುದೋ ಪಕ್ಷಿ ನೀರ ಸೆಲೆಯಲ್ಲಿ ಮಿಂದು ಮೈ ಕೊಡವಿ ಎದ್ದರೆ ಇವರ ಮೈ ಎಲ್ಲಾ ರೋಮಾಂಚನ.  ಹಕ್ಕಿಯೊಂದು ಆಹಾರಕ್ಕಾಗಿ ಮೀನೋ,  ಕೀಟವನ್ನೋ ಬಾಯಲ್ಲಿ ಹಿಡಿದರೆ ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ತವಕ. ಬಯಲಿನ  ಮೂಲೆಯಲ್ಲಿ ಒಂದು ಕೂಗು ಕೇಳಿದರೂ, ಅತೀವವಾದ ಆನಂದದಿಂದ ಅದನ್ನು ಹುಡುಕಿ ಅಲೆಯುತ್ತಾರೆ. ಅವರ ಕಣ್ಣ ಮುಂದೆ ಒಂದೊಂದು ಸುಯ್ನ್ ಅಂತ ಸುಳಿದಾಗಲೂ ವಿಚಿತ್ರವಾದ ಕೌತುಕವೊಂದು ಅವರ ಕಣ್ಣಂಚಲಿ ಮೂಡುತ್ತದೆ.  ಆ ಪಕ್ಷಿಯ ಬರುವಿಕೆಗಾಗಿ,  ಒಂದು ನೋಟಕ್ಕಾಗಿ ದಿನವಿಡೀ ಕಾಯುತ್ತಾರೆ. ಬಹುಶಃ ಆ ತಾಳ್ಮೆಯನ್ನೂ ಪ್ರಕೃತಿಯೇ ಕಲಿಸಿರಬೇಕು. ಪಕ್ಷಿವೀಕ್ಷಕರ ನಿರ‍್ಗದ ಬಗೆಗಿನ ಕಳಕಳಿಯೂ  ಶ್ಲಾಘನೀಯ. ಮರ ಕಡಿಯುವುದರಿಂದ,  ಕೆರೆಗಳ ನಾಶದಿಂದ, ಜನರ ಹಾವಳಿಯಿಂದ  ಪಕ್ಷಿಗಳ ವಾಸಸ್ಥಾನಕ್ಕೆ ತೊಂದರೆಯಾಗುವುದರ ಬಗ್ಗೆ ದನಿಯೆತ್ತುತ್ತಾರೆ.  ಕಟ್ಟಿರುವ ಗೂಡು ನಾಶವಾಗದಂತೆ ಕಾಳಜಿ ವಹಿಸುತ್ತಾರೆ.  ಅಪಾಯದ ಅಂಚಿನಲ್ಲಿರುವ ಸಂಕುಲದ ಬಗ್ಗೆ ಮರುಗುತ್ತಾರೆ.  ಇವರ ಆಸಕ್ತಿಯಿಂದ ಪಕ್ಷಿಸಂಕುಲ ಉಳಿದು ಪರಿಸರ ಸಮೃದ್ಧಿಯಾಗಿರಲಿ ಎಂಬುದೇ ಆಶಯ.

ಪಕ್ಷಿಗಳೋ… ಪಕ್ಷಿವೀಕ್ಷಕರೋ Read Post »

ಇತರೆ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ   ಒಬ್ಬ ಮನುಷ್ಯ ಸಮಾಜಮುಖಿಯಾಗಿ ಚಿಂತಿಸಲು ಒಂದು ಕಾರಣ, ಘಟನೆ ಆತನೊಳಗೆ ಅಡಗಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶಿಕ್ಷಣವಂತನಾಗಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಿಕ್ಷಣಕ್ಕಾಗಿಯೇ ದುಡಿಯುತ್ತ ಅದರ ಸೇವೆಯಲ್ಲಿಯೇ ನಿರತರಾಗಿರುವ ಹರೇಕಳ ಹಾಜಬ್ಬರು ಸರ್ಕಾರಕ್ಕಲ್ಲದೆ ಜನ ಸಾಮಾನ್ಯರಿಗೂ ಮಾದರಿ. ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದವರಾದ ಹಾಜಬ್ಬರು ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದವರು. ಬೀದಿಬದಿಯಲ್ಲಿ ಬುಟ್ಟಿಯೊತ್ತು ಕಿತ್ತಲೆ ಹಣ್ಣನ್ನು ಮಾರಿ ಅದರಿಂದಲೇ ತಮ್ಮ ಕುಟುಂಬದ ಜೀವನ ನಡೆಸುವ ಕಾಯಕ ಯೋಗಿ. ಔಪಚಾರಿಕವಾದ ಶಿಕ್ಷಣವನ್ನೆ ಹೊಂದಿರದ ಇವರು ತುಳು ಮತ್ತು ಬ್ಯಾರಿ ಭಾಷೆಗಳ ಬಗ್ಗೆ ಮಾತ್ರ ತಿಳುವಳಿಕೆಯುಳ್ಳವರು. ಹೀಗೆ ಒಂದು ದಿನ ಕಿತ್ತಲೆ ಮಾರುತ್ತ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಮತ್ತೊಂದು ಕೈಯಲ್ಲಿ ಕಿತ್ತಲೇ ಹಿಡಿದು ಮಾರುತ್ತ ಸಾಗುವಾಗ 68 ವರ್ಷದ ವೃದ್ಧ ಇಂಗ್ಲೀಷ್ ದಂಪತಿಗಳು ಕಿತ್ತಲೇ ಹಣ್ಣನ್ನು ಕೊಂಡುಕೊಳ್ಳಲು “How Much” ಎಂದು ಕೇಳುತ್ತಾರೆ. ವರ್ಷಾನುಗಟ್ಟಲೆ ವ್ಯಾಪಾರ ಮಾಡುತಿದ್ದರು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಮೂಲಕಾರಣ ನಾನು ಶಿಕ್ಷಣದಿಂದ ವಂಚಿತನಾಗಿರುವುದು ಎಂಬುದನ್ನು ಮನಗಾಣುತ್ತಾರೆ. ಈ ಘಟನೆಯೆ ಅವರ ಶಿಕ್ಷಣಕ್ರಾಂತಿಯ ತಿರುವು. ಹಾಜಬ್ಬರ ಹರೇಕಳ ಗ್ರಾಮದಲ್ಲಿ ಶಾಲೆಯೆ ಇರಲಿಲ್ಲ. ಈ ಕಾರಣಕ್ಕಾಗಿಯೆ ಅವರು ಶಿಕ್ಷಣವನ್ನೆ ಕಾಣಲಿಲ್ಲ. ಅಲ್ಲದೆ ಹಾಜಬ್ಬರು ಆ ಊರಿಗೆ ಶಾಲೆ ತರುವ ತನಕ ಅಲ್ಲಿನ ಮಕ್ಕಳು ಶಿಕ್ಷಣವಿಲ್ಲದೆ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದರು. ನನಗಂತೂ ಶಿಕ್ಷಣ ಸಿಗಲಿಲ್ಲ, ಆದರೆ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆಂದು, ಆ ಕಡುಬಡತನ ಜೊತೆಗೆ ಕಿತ್ತಲೆ ಹಣ್ಣು ವ್ಯಾಪಾರದ ನಡುವೆ ಸರ್ಕಾರಿ ಕಛೇರಿ, ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಅಲೆದಾಡಿದರು. ಅವರ ಅಲೆದಾಟದ ಪರಿಶ್ರಮಕ್ಕೆ 17 ಜೂನ್ 2000 ನೇ ಇಸವಿಯಲ್ಲಿ ಹರೇಕಳಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು.  ಸರ್ಕಾರ ಶಾಲೆಯನ್ನೆನೊ ಮಂಜೂರು ಮಾಡಿದೆ, ಆದರೆ ಮಕ್ಕಳಿಗೆ ಪಾಠ ಮಾಡಲು ಕಟ್ಟಡವಿಲ್ಲ. ಹೀಗಿರುವಾಗ ಹಾಜಬ್ಬರು ತಾವು ಕಿತ್ತಲೆ ಹಣ್ಣು ಮಾರಿ ಉಳಿತಾಯ ಮಾಡಿದ್ದ 25.000 ರೂ ಜೊತೆಗೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ  ಮಕ್ಕಳಿಗೆ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಇದೀಗ ಆ ಶಾಲೆ ಪ್ರಾಥಮಿಕದೊಂದಿಗೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಇಂದಿಗೂ ಸಹ ತನಗೆ ಬರುವ ಲಕ್ಷಾಂತರ ರೂ ಪ್ರಶಸ್ತಿ ಮೊತ್ತವನ್ನು ತಮಗಾಗಿ ಬಳಸದೆ ಶಾಲೆ ಅಭಿವೃದ್ಧಿಗಾಗಿಯೇ ಬಳಸುತ್ತಾರೆ. ವಿವಿಧ ದಾನಿಗಳಿಂದ ಈ ವರೆವಿಗೂ 70 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಅದನ್ನು ಶಾಲೆಯ ಅಭಿವೃದ್ಧಿಗೆ ಬಳಸಿ ಯಶಸ್ವಿಯಾಗಿ ಅಕ್ಷರ ಸಂತನಾಗಿ ಜನಮಾಸದಲ್ಲಿ ನೆಲೆಸಿದ್ದಾರೆ. ಅಕ್ಷರ ಸಂತ ಹಾಜಬ್ಬರ ಕುರಿತು ಇರ್ಸತ್ ಪಜೀರ್ ರವರು ‘ಹರಕೇಳ ಹಾಜಬ್ಬ ಜೀವನ ಚರಿತ್ರೆ’ ಎಂಬ ಪುಸ್ತಕವನ್ನು ಬರೆದರು. ಅನಂತರ ಹಾಬಜ್ಜರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯಕ್ರಮದಲ್ಲಿ ಸೇರಿಸಿತು. ಇವರ ಸಮಾಜ ಸೇವೆಯನ್ನು ಮೆಚ್ಚಿ ಬ್ರಿಟಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) 2012 ರಲ್ಲಿ ‘ಅಕ್ಷರವಿಲ್ಲದ ಹಣ್ಣು ಮಾರಾಟಗಾರನ ಭಾರತೀಯ ಶಿಕ್ಷಣ ಕನಸು’ ಎನ್ನುವ ಶೀರ್ಷಿಕೆಯಡಿ ಲೇಖನ ಪ್ರಕಟಿಸಿತು.  CNN, IBN ಮತ್ತು Relaince Foundation ನವರು ‘The Real Hero’ ಪ್ರಶಸ್ತಿ ನೀಡಿದರು.  ಇದೀಗ ಅವರಿಗೆ ಭಾರತೀಯ ಸರ್ಕಾರ ಕೊಡಮಾಡುವ 2020 ರ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಭಾಜನರಾಗಿದ್ದಾರೆ. ಪ್ರಶಸ್ತಿ ತೆಗೆದುಕೊಳ್ಳುವಾಗಲೂ ರಾಷ್ಟ್ರಪತಿ ಭವನಕ್ಕೆ ಬರಿಗಾಲಿನಲ್ಲಿಯೇ ತೆರಳಿ ಸ್ವೀಕರಿಸಿದ ಇವರು ಶಿಕ್ಷಣ ಕ್ರಾಂತಿಯ ಕಣ್ಣಂತೆಯೆ.  ತಾನು ಒಂದಕ್ಷರವನ್ನು ಕಲಿಯದೆ ಈ ತಲೆಮಾರಿನ ಮಕ್ಕಳಿಗೆ ಅರಿವಿನ ದೀಪವನ್ನು ಬೆಳಗಿಸುತ್ತಲೆ, ತಾನು ಮಾತ್ರ ಎಡಗೈಯಲ್ಲಿ ಬುಟ್ಟಿಯೊತ್ತು ಬಲಗೈಯಲ್ಲಿ ಕಿತ್ತಲೆ ಹಣ್ಣಿಡಿದು ಶಾಲೆ ಮತ್ತು ಮಕ್ಕಳ ಓದಿನ ಬಗೆಯೆ ಧ್ಯಾನಿಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬರು ಈ ಕಾಲಮಾನದಲ್ಲಿ ಸಂತೆಯೊಳಗೆ ನಿಂತ ಕಬೀರ. ಹಾರೋಹಳ್ಳಿ ರವೀಂದ್ರ

ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ Read Post »

ಇತರೆ

‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ

ಬೆಂಗಳೂರಿನ ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ.

‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ Read Post »

ಇತರೆ, ಮಕ್ಕಳ ವಿಭಾಗ

ಕುದುರೆ ಸವಾರ

ಮಕ್ಕಳ ಕವಿತೆ ಕುದುರೆ ಸವಾರ ಸೋಮಲಿಂಗ ಬೇಡರ ಬಂದನೊಬ್ಬ ಸವಾರಬಿಳಿಯ ಕುದುರೆ ಹತ್ತಿಕೋರೆ ಮೀಸೆ ತಿರುವುತಓಣಿ ಓಣಿ ಸುತ್ತಿ ಓಣಿ ಮಕ್ಕಳೆಲ್ಲರುನೋಡುತವನ ಮೆಚ್ಚಿಕುದುರೆ ಹಿಂದೆ ನಡೆದರುಹಾಕುತವರು ಹೆಜ್ಜಿ ಊರ ಜಾತ್ರೆ ಮರುದಿನಕುಸ್ತಿ ಗೆದ್ದ ವೀರತಾನೇ ಎನುತ ಗತ್ತಲಿಸಾರುತ್ತಿದ್ದ ಧೀರ ಬೆಳಗುತ್ತಿದ್ದರಾರುತಿದೃಷ್ಟಿ ಬೊಟ್ಟು ಇಟ್ಟುನಗುತಲಿದ್ದ ಸವಾರಹೆಚ್ಚು ಹೆಮ್ಮೆ ಪಟ್ಟು ಢಂ! ಎಂದು ಒಮ್ಮೆಲೆಸಿಡಿಯಿತಲ್ಲಿ‌ ಮದ್ದುಕುದರೆ ಬೆಚ್ಚಿ ನೆಗೆಯಲುಬಿದ್ದನವ ಜಟ್ಟಿಯು ಕಣ್ಣು ಬಿಟ್ಟು ನೋಡಿದನಗುತಲಿದ್ದ ತಮ್ಮಮಂಚದಿಂದ ತಿಮ್ಮನುಬಿದ್ದು ಎದ್ದ ಸುಮ್ಮ!

ಕುದುರೆ ಸವಾರ Read Post »

ಇತರೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ ಹಾರೋಹಳ್ಳಿ ರವೀಂದ್ರ ಬಲಿ ಚಕ್ರವರ್ತಿಯ ರಾಜ್ಯವು ಮಹಾರಾಷ್ಟ್ರದಿಂದ ಅಯೋಧ್ಯೆವರೆವಿಗೂ ವ್ಯಾಪಿಸಿತ್ತು. ಈತನ ಆಳ್ವಿಕೆಯಲ್ಲಿ ಯಾರಿಗೂ ತೊಂದರೆ ಇರಲಿಲ್ಲ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ. ಗೂಂಡಾಗಿರಿಗಂತು ಅವಕಾಶವೇ ಇರಲಿಲ್ಲ. ಆದರೆ ವಿದೇಶಿ ದಾಳಿಕೋರರಾದ ಆರ್ಯರು ಇದನ್ನು ಸಹಿಸದೆ ಬಲಿಯನ್ನು ಕೊಂದು ಐತಿಹಾಸಿಕ ಚರಿತ್ರೆಯನ್ನು ಪುರಾಣದೊಳಗೆ ತುರುಕಿ ಮಕ್ಕಳನ್ನು ರಂಜಿಸುವ ಕಥೆಯನ್ನಾಗಿ ಸೃಷ್ಟಿಸಲಾಗಿದೆ. ವಾಮನ ಭಿಕಾರಿಯ ವೇಷದಲ್ಲಿ ಬಂದು ಮೂರು ಹೆಜ್ಜೆ ಭೂಮಿ ಕೇಳಿದನಂತೆ ಬಲಿಯು ಅದಕ್ಕೆ ಸಮ್ಮತಿಸಿದನಂತೆ, ವಾಮನ ಮೂರು ಹೆಜ್ಜೆಯಲ್ಲಿ ಒಂದು ಹೆಜ್ಜೆಯನ್ನು ಭೂಮಿಗೆ ಇಟ್ಟನಂತೆ, ಭೂ ಮಂಡಲವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಆಕಾಶಕ್ಕೆ ಇಟ್ಟನಂತೆ, ಆಕಾಸವೇ ಆವರಿಸಿಕೊಳ್ಳಿತಂತೆ. ಮತ್ತೊಂದು ಹೆಜ್ಜೆಯನ್ನು ಎಲ್ಲಿ ಹಿಡುವುದು ಎಂದಾಗ ಬಲಿಯು ನನ್ನ ತಲೆ ಮೇಲಿರಿಸಿ ಎಂದನಂತೆ. ಬಲಿಯ ತಲೆ ಮೇಲೆ ಪಾದವಿಟ್ಟಾಕ್ಷಣ ಬಲಿಯು ಪಾತಾಳಕ್ಕೆ ಹೋದನಂತೆ. ವಾಮನವಿಟ್ಟ ಪಾದ ಭೂಮಿಯನ್ನೆಲ್ಲಾ ಆವರಿಸಿಕೊಂಡಿತೆಂದರೆ ಭೂ ಮಂಡಲದ ಜೀವರಾಶಿಗಳು ಪಾದದ ಕೆಳಗೆ ಸಿಕ್ಕಿ ಯಾವೊಂದು ಜೀವಿಯು ಸಾಯಲಿಲ್ಲವೇ? ಪ್ರಸ್ತುತದಲ್ಲಿ ಸೌರಮಂಡಲದ ಅನ್ವೇಷಣೆಗೆಂದು ಸಾವಿರಾರು ಕೋಟಿ ಖರ್ಚು ಮಾಡಿ ವಿಜ್ಞಾನಿಗಳನ್ನು ಕಳುಹಿಸುತ್ತಿದ್ದಾರೆ. ಅದರ ಬದಲಾಗಿ ಆಕಾಶಕ್ಕೆ ಪಾದವಿಟ್ಟ ವಾಮನ ಪಾದವೇರಿಯೇ ಕಂಡು ಹಿಡಿಯಬಹುದಿತ್ತಲ್ಲ? ಭೂಮಿಗೊಂದು ಕಾಲು, ಆಕಾಶಕ್ಕೊಂದು ಪಾದವಿಡುವ ಮುನ್ನ ವಾಮನ ನಿಂತಿದ್ದ ಜಾಗಯಾವುದು? ಆಕಾಶಕ್ಕೊಂದು ಕಾಲು, ಭೂಮಿಗೊಂದು ಕಾಲಿಟ್ಟಮೇಲೆ, ಮೂರನೇ ಪಾದವನ್ನು ಬಲಿಯ ಮೇಲಿಡಲು ಎಲ್ಲಿಂದ ತಂದ? ಇಷ್ಟೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಲು ಅವರಲ್ಲಿ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಇತಿಹಾಸವನ್ನು ತಿರುಚಿ ವಿರೂಪಗೊಳಿಸುವುದಷ್ಟೇ ಅವರ ಕಾಯಕವಾಗಿದೆ. ಕಶ್ಯಪನ ಮಗ ಪ್ರಹ್ಲಾದ, ಪ್ರಹ್ಲಾದನ ಮಗ ವಿರೋಚನ. ಈ ವಿರೋಚನನ ಮಗನೇ ಬಲಿ. ಕಶ್ಯಪನನ್ನು ಮೋಸದಿಂದ ಕೊಂದರು. ಬಲಿರಾಜನ ತಾತ ಪ್ರಹ್ಲಾದನನ್ನು ವಂಚಿಸಿ ತಂದೆಯ ವಿರುದ್ಧವೇ ಎತ್ತಿಕಟ್ಟಿ ತಮ್ಮ ಕೈವಶ ಮಾಡಿಕೊಂಡಿದ್ದರು. ಅನಂತರ ಇವರ ಎಲ್ಲಾ ನಯವಂಚನೆಯ ಬುದ್ಧಿ ಅರ್ಥವಾಗಿ ಆರ್ಯ ಸಂಸ್ಕೃತಿಯನ್ನು ವರ್ಜಿಸಿ ಮುಂದೆ ಬೌದ್ಧ ಉಪಾಸಕನಾದ. ವಿರೋಚನನು ಮತ್ತು ಬಲಿಯು ಕೂಡ ಆರ್ಯ ಸಂಸ್ಕೃತಿಯ ವಿರೋಧಿಗಳೇ ಆಗಿದ್ದರೂ. ವಿರೋಚನನ ನಂತರ ಸಾಮ್ರಾಜ್ಯ ಬಲಿಯ ಕೈಗೆ ಬಂತು. ಈತನ ಆಳ್ವಿಕೆಯನ್ನು ಹೇಗಾದರು ಮಾಡಿ ಕಸಿದುಕೊಳ್ಳಬೇಕೆಂದು ವಾಮನ ತನ್ನ ಸೇನೆಯನ್ನು ಕೂಡಿಕೊಂಡು ಬಲಿಯ ರಾಜ್ಯಕ್ಕೆ ನುಗ್ಗಿ, ರಾಜಧಾನಿಯ ಸಮೀಪದಲ್ಲಿ ಬೀಡುಬಿಟ್ಟಿದ್ದ. ಬಲಿಗೆ ವಾಮನ ಮಾಡಿದ ಅನಿರೀಕ್ಷಿತ ದಾಳಿಯ ಕಲ್ಪನೆ ಇಲ್ಲವಾದ್ದರಿಂದ ಅಲ್ಪ ಸೈನ್ಯದೊಡನೆಯೆ ಹೋರಾಡಿದ. ಆತನಿಗೆ ತಮ್ಮ ಸಾಮ್ರಜ್ಯದಾಧ್ಯಂತ ಯುದ್ಧದ ಸಲುವಾಗಿ ಸೈನ್ಯ ಕರೆಸುವಷ್ಟು ಸಮಯವೂ ಇರಲಿಲ್ಲ. ವಾಮನೊಡನೆ ಯುದ್ದ ನಡೆದು ಬಲಿರಾಜ ಹತನಾದ. ಬಾಣಾಸುರ ವಾಮನನ್ನು ಹತ್ತಿಕ್ಕಲು ಸಾಕಷ್ಟು ಸಾಹಸ ಮಾಡಿದರು ಸಾಧ್ಯವಾಗದೇ ಸೈನ್ಯದೊಡನೆ ವಾಪಸ್ಸು ಮರಳಿಬಿಟ್ಟ. ಬಾಣಾಸುರ ಬರುವಷ್ಟರಲ್ಲಿ ಎರಡನೇ ಬಲಿಗೆ ಅಧಿಕಾರವಹಿಸಿ ಸಾಮ್ರಾಜ್ಯದಲ್ಲಿನ ಸಮಸ್ತ ಜನರು ‘ದ್ವಿಜರ ಅಧಿಕಾರ ಹೋಗಬೇಕು ಬಲಿಯ ರಾಜ್ಯ ಬರಬೇಕು’ ಎಂದು ದೀಪ ಹಚ್ಚಿದ್ದರು.  ಆ ದಿವಸದಿಂದ ಇಂದಿಗೂ ನಮ್ಮ ನೆಲಮೂಲರು ದೀಪ ಹಚ್ಚುತ್ತಲೇ ಇದ್ದಾರೆ. ಬಲಿರಾಜನ ಸರದಾರರಿಗೆಲ್ಲಾ ಈ ವಿಷಯ ತಿಳಿದು ಬಾಣಾಸುರನ ಬಳಿ ಬಂದರು. ಈ ವಿಷಯ ತಿಳಿದ ಆರ್ಯರು ಜೀವ ಕೈಲಿ ಹಿಡಿದುಕೊಳ್ಳಲು ಪ್ರಾರಂಭಿಸಿದರು. ಎಲ್ಲಾ ಸೈನ್ಯವನ್ನು ತೆಗೆದುಕೊಂಡು ಹೋದ ಬಾಣಾಸುರ ವಾಮನನ್ನು ಅವನ ಸೈನ್ಯದ ಸಮೇತ ಧೂಳಿಪಟ ಮಾಡಿದನು. ಅನಂತರ ವಾಮನ ಅಪಮಾನಿತನಾಗಿ ಹಿಮಾಲಯ ಪರ್ವತಕ್ಕೆ ಓಡಿಹೋದ. ಇದಾದ ಬಳಿಕ ಅಬಾಲವೃದ್ಧ ಸ್ತ್ರೀಯರಿಗೆ ಅಪಾರ ಆನಂದವಾಗಿ ಕಾರ್ತೀಕ ಶುದ್ಧ ದ್ವಿತೀಯದಂದು ತಮ್ಮ ಬಾಂಧುಬಾಂಧವರನ್ನು ಕರೆಯಿಸಿ ಯಥಾಪ್ರಕಾರ ಭೋಜನಾ ಕೂಟ ಏರ್ಪಡಿಸಿ ಆರತಿ ಮಾಡಿ ದೀಪಗಳನ್ನೆಲ್ಲಾ ಹಚ್ಚುವ ಮೂಲಕ ‘ಇಡಾಪೀಡಾ ಹೋಗಲಿ ಬಲಿರಾಜ್ಯ ಬರಲಿ’ ಎಂದು ಬಲಿರಾಜನನ್ನು ನೆನೆಯುತ್ತಾರೆ. ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು- ಸಂಪುಟ 21’ ಕನ್ನಡ ಸಂಸ್ಕೃತಿ ಇಲಾಖೆ ತಂದಿರುವ 2015ರ ಪರಿಷ್ಕೃತ ಮುದ್ರಣದಲ್ಲಿ  ಪದ್ಮಪುರಾಣದಲ್ಲಿನ ಬಲಿಯ ವಿಷಯವನ್ನು ಹೀಗೆ ಪ್ರಸ್ತಾಪಿಸಿದ್ದಾರೆ. ಬಲಿನಾಮ ಮಹಾದೈತ್ಯೋ ದೇವಾರಿರಪರಾಜಿತಃ ಧರ್ಮೇಣ ಯಶ ಸಾಚೈವ ಪ್ರಜಾ ಸಂರಕ್ಷಣೇ ಚ ತಸ್ಮಿನ್ ಶಾಸತಿ ರಾಜ್ಯಂ ತು ತ್ರೈಲೋಕ್ಯ ಹತಕಷ್ಟಕಮ್ ನಾರಯೋ ವ್ಯಾಧಯೋಪಾಡಪಿ ನಾಧಯೋಯಾ ಕಥಂ ಚ ನ ಅನಾವೃಷ್ಟಿಧಮರ್ೋ ವಾ ನಾಸ್ತಿ ಶಬ್ದೋ ನ ದುರ್ಜನಃ ಸ್ವಸ್ನೇ ಪಿ ನೈವ ಧೃಶ್ಯತೇ ಬಲೌ ರಾಜ್ಯ ಪ್ರಶಾಸತಿ ಮೇಲಿನ ಪದ್ಮಪುರಾಣದ ಉಲ್ಲೇಖದ ಅರ್ಥ ಹೀಗಿದೆ : ಬಲಿ ಹೆಸರಿನ ಮಹಾದೈತ್ಯ ದೇವರ ಶತ್ರುವಾಗಿ ಅಪರಾಜೇಯನಾಗಿದ್ದ. ಧರ್ಮ ಯಶ ಮತ್ತು ಪ್ರಜೆಗಳ ರಕ್ಷಣೆಯಲ್ಲಿ ಅವನು ಅತ್ಯಂತ ತರ್ಕಬದ್ಧವಾಗಿದ್ದ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ, ಯಾರು ಯಾರಿಗೂ ಶತ್ರುವಾಗಿರಲಿಲ್ಲ. ಯಾರಿಗೂ ಯಾವ ಚಿಂತೆಯೂ ಇರಲಿಲ್ಲ. ಅವನ ಆಡಳಿತ ಕಾಲದಲ್ಲಿ ಜನರ ದುಃಖ ಕಷ್ಟ ದೂರವಾಗಿತ್ತು. ಅವನ ರಾಜ್ಯದಲ್ಲಿ ನೀರಿನ ಕೊರತೆ ಇರಲಿಲ್ಲ. ಗೂಂಡಾಗಿರಿ, ಹಠಮಾರಿತನ ಇರಲಿಲ್ಲ. ಮತ್ತು ಕನಸಿನಲ್ಲಿಯೂ ಸಹ ಅಂಥವರು ಕಾಣಿಸುತ್ತಿರಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಉಲ್ಲೇಖವನ್ನು ಗಮನಿಸಿದರೆ ಬಲಿ ರಾಜ್ಯವು ಎಂತಹ ಪ್ರಜಾಪ್ರಭುತ್ವ ಮಾದರಿಯನ್ನು ಒಳಗೊಂಡಿತ್ತು ಎಂಬುದು ಸ್ಪಷ್ಟವಾಗುತ್ತದೆ. ಆದರೆ ವೈದಿಕರು ಇಂತಹ ಬಹುದೊಡ್ಡ ಚರಿತ್ರೆಯನ್ನು ವಿರೂಪಗೊಳಿಸಿದ್ದಾರೆ. ಬಲಿ ಚಕ್ರವತರ್ಿಯ ವಂಶಾವಳಿಯ ಪರಂಪರೆಯು ಮೂಲತಹ ಬೌದ್ಧ ಪರಂಪರೆಯನ್ನು ಸಾರಿಕೊಂಡು ಬಂದವರು. ಬೌದ್ಧರ ಈ ಪರಂಪರೆಯನ್ನು ನಾಶ ಮಾಡಲೆಂದೆ ಚರಿತ್ರೆಯನ್ನೆಲ್ಲಾ ವಿರೂಪಗೊಳಿಸಿ ಇವರನ್ನು ಜನರು ನೆನೆಯಬಾರದು ಬೌದ್ಧ ಚರಿತ್ರೆ ತಿಳಿಯಬಾರದೆಂದು ಹೀಗೆ ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ. ಭಗವಾನ್ ಬುದ್ಧರ ಪೂರ್ವ ಚರಿತ್ರೆ ಹಾಗೂ ಬುದ್ಧರ ನಂತರದ ಚರಿತ್ರೆ ಎರಡನ್ನು ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರಿಗೂ ಹಿಂದೆ ಬೌದ್ಧ ಪರಂಪರೆ ಅಸ್ಥಿತ್ವದಲ್ಲಿತ್ತು. 1911 ರಲ್ಲಿ ಆರ್.ಡಿ. ಬ್ಯಾನರ್ಜಿಯವರು ಸಿಂಧೂ ಬಯಲಿನ ಹರಪ್ಪ ಮತ್ತು ಮಹೆಂಜೊದಾರೊಗಳಲ್ಲಿ ಭೂ ಉತ್ಕನನ ಮಾಡುವಾಗ ಸಿಕ್ಕ ಚಕ್ರ ಮತ್ತು ಪಶುಪತಿನಾಥನ ಕೆತ್ತನೆಗಳು ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಬುದ್ಧರು ಬರುವ ಮುನ್ನವೇ ಹಿಂದೆ ಈ ಸಂಸ್ಕೃತಿ ಇತ್ತು ಎಂದು ಅಭಿಪ್ರಾಯ ಪಡುತ್ತಾರೆ. ಪ್ರತಾಪ್ ಚೆಟ್ಸೆ ಅವರ ಇಂಗ್ಲೀಷ್ ಮೂಲ ಕೃತಿಯಾದ ‘ದ ರೆವ್ಯುಲುಷನರಿ ಬುದ್ಧ’ ಕೃತಿಯನ್ನು ‘ಕ್ರಾಂತಿಕಾರಿ ಬುದ್ಧ’ಎಂದು ಲೇಖಕ ಹಾಗೂ ಪತ್ರಕರ್ತ ರವಿಂದ್ರ ಸುಂಟನಕರ  Ravindra N S ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಈ ಕೃತಿಯಲ್ಲು ಸಹ ಬುದ್ಧರು ನಾನೆ ಮೊದಲಲ್ಲ ನಾನು 28ನೇಯವನು. ನನಗಿಂತ ಹಿಂದೆಯೇ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ, ವಿರೋಚನಾ ಮುಂತಾದ ಬೌದ್ಧ ತತ್ವಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದಲ್ಲಿ ನಿರಂತರ ಅಧ್ಯಯನಕಾರರಾಗಿದ್ದರು. ಅವರ ತತ್ವಶಾಸ್ತ್ರ ಮತ್ತು ಸಂಖ್ಯಾಶಾತ್ರವನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ ಹಾಗಾಗಿ ನಾನು 28ನೇ ಬುದ್ಧ ಎಂದು ಕರೆದುಕೊಂಡಿರುವುದು ಕ್ರಾಂತಿಕಾರಿ ಬುದ್ಧ ಪುಸ್ತಕದಲ್ಲಿ ದಾಖಲಾಗಿದೆ. ಬುದ್ಧ ಎನ್ನುವ ಪದ ಹೆಸರಲ್ಲ ಅದೊಂದು ಡಿಸಿಗ್ನೇಶನ್. ಕಾಲಾನಂತರದಲ್ಲಿ ಅದು ಹೆಸರಿನ ಸ್ವರೂಪ ಪಡೆದುಕೊಂಡಿದೆ. ಬುದ್ಧ ಪೂರ್ವ ಮತ್ತು ಭಗವಾನ್ ಬುದ್ಧರ ನಂತರ ಚರಿತ್ರೆಯನ್ನು ಎರಡು ರೀತಿಯಲ್ಲಿ ವಿರೂಪಗೊಳಿಸಲಾಗಿದೆ. ಭಗವಾನ್ ಬುದ್ಧರ ಪೂರ್ವದಲ್ಲಿ ಬರುವ ಬಲಿ ಚಕ್ರವರ್ತಿಯ ವಂಶಜರು ಮೂಲತಹ ಬೌದ್ಧ ಪ್ರತಿಪಾದಕರಾಗಿದ್ದು ಅವರನ್ನು ಪುರಾಣಗಳಲ್ಲಿ ಬರೆದುಕೊಂಡು ಹಿಂದೂಕರಣ ಮಾಡಿಕೊಳ್ಳಲಾಗಿದೆ ಜೊತೆಗೆ ಅವರನ್ನು ದುಷ್ಟರು ಎಂಬಂತೆ ಬಿಂಬಿಸಲಾಗಿದೆ. ಭಗವಾನ್ ಬುದ್ಧರ ಅನಂತರದ ಚರಿತ್ರೆಯನ್ನು ಮೂಲಭಾಷೆಗೆ ಬರೆಯದೆ ಸಂಸ್ಕೃತದಲ್ಲಿ ಬರೆದುಕೊಂಡು ಅದನ್ನು ಮೂಲನಿವಾಸಿಗಳು ಓದಿ ತಿಳಿದುಕೊಳ್ಳದ ರೀತಿಯಲ್ಲಿ ಬಂಧಿಸಲಾಗಿದೆ. ಒಂದು ವೇಳೆ ಓದಿದರು ಸಹಿತ ಬುದ್ಧರ ನಿಜವಾದ ಚರಿತ್ರೆಯು ಜನರ ಕೈಗೆ ಸಿಗದಂತೆ ಮಾಡಲಾಗಿದೆ.  ಈ ರೀತಿ ಮಾಡಿದವರಲ್ಲಿ ಮೊದಲಿಗರು ಬ್ರಾಹ್ಮಣ ಲೇಖಕ ಅಶ್ವಘೋಷ ‘ಬುದ್ಧಚರಿತಂ’ ಬರೆಯುವ ಮೂಲಕ ಬೌದ್ಧ ಸಂಸ್ಕೃತಿ ಹಾಗೂ ಬುದ್ಧರ ನಿಜವದ ಬೊಧನೆಗಳನ್ನು ವಿರೂಪಗೊಳಿಸಿದ್ದಾರೆ ಎಂದು ‘ದ ರೆವ್ಯುಲುಷನರಿ ಬುದ್ಧ’ ಕನ್ನಡಾನುವಾದ ‘ಕ್ರಾಂತಿಕಾರಿ ಬುದ್ಧ’ ಕೃತಿಯಲ್ಲಿ ನಾವು ಬುದ್ಧರ ಚಿಂತನೆಗಳನ್ನು ಹೇಗೆ ಹತ್ಯೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಬೌದ್ಧ ಸಂಸ್ಕೃತಿ ಮತ್ತು ಜೀವನ ಕ್ರಮ ವೈಜ್ಞಾನಿಕವಗಿದ್ದು ಯಾವುದೇ ಮೌಢ್ಯವನ್ನು ಬೆಂಬಲಿಸಿಲ್ಲ. ಆದರೆ ವಿಪ್ರರು ಬೌದ್ಧ ಚರಿತ್ರೆಯನ್ನು ಧ್ವಂಸಗೊಳಿಸಿದ್ದಾರೆ. ಬುದ್ಧರ ಪೂರ್ವದಲ್ಲಿನ ಪಶುಪತಿನಾಥ, ಚಕ್ರವಾಕ, ಬಾವಲಿ, ಪ್ರಹ್ಲಾದ ಮತ್ತು ವಿರೋಚನರಂತಹ ಮಹಾನ್ ಬೌದ್ಧರನ್ನು ಅವರ ತಾತ್ವಿಕತೆಯನ್ನು ಪೌರಾಣಿಕಗೊಳಿಸಿ ಜನರನ್ನು ಧಿಕ್ಕು ತಪ್ಪಿಸಿದ್ದಾರೆ. ಬಲಿಯನ್ನು ಕೊಲ್ಲುವ ಮೂಲಕ ಬೌದ್ಧ ಸಂಸ್ಕೃತಿ ಬಿಂಬವನ್ನು ಅಳಿಸಲಾಗಿದೆ. ಭಗವಾನ್ ಬುದ್ಧರ ಮರಣದ ನಂತರ ಸಾಹಿತ್ಯಾತ್ಮಕ ಚರಿತ್ರೆಯನ್ನು ಭಗ್ನಗೊಳಿಸಲಾಗಿದೆ. ಈ ಮೂಲಕ ಎರಡು ರೀತಿಯ ಸಾಂಸ್ಕತಿಕ ಹತ್ಯೆಯನ್ನು ವೈದಿಕರು ಬಹಳ ಕುತಂತ್ರದಿಂದ ಮಾಡಿದ್ದರೆ. ಇನ್ನು ಮುಂದಾದರು ನಮ್ಮ ಚರಿತ್ರೆಯನ್ನು ಮತ್ತೆ ಪುನರುತ್ಥಾನಗೊಳಿಸಿಕೊಳ್ಳುವ ಕಡೆ ನಾವು ಹೆಜ್ಜೆಯನ್ನಿಡಬೇಕಿದೆ.

ಬಲಿ ಚಕ್ರವರ್ತಿಯ ಹತ್ಯೆಯ ಜೊತೆಗೆ ಸಾಂಸ್ಕೃತಿಕ ಹತ್ಯೆಯು ನಡೆದು ಹೋಗಿದೆ Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-41 ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ. ‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ ಆ ಕುರಿತು ನಾನು ಮಾತಾಡುವುದಿಲ್ಲ. ಅದು ನಿಮಗೂ ಅವರಿಗೂ ಸಂಬಂಧಿಸಿದ ವಿಚಾರ. ಆದರೆ ನೀವೀಗ ಆಸಕ್ತಿಯಿಂದಲೋ, ಅಸಮಾಧಾನದದಿಂದಲೋ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಧರ್ಮ. ಆ ಉದ್ದೇಶದಿಂದ ಹೇಳುತ್ತೇನೆ ಕೇಳಿ. ನಾಗರಹಾವೇ ಅಂತಲ್ಲ ಬೇರೆ ಯಾವುದೇ ಹಾವೊಂದು ನಮ್ಮ ಮನೆ ಮತ್ತು ವಠಾರದೊಳಗೆ ಪ್ರವೇಶಿಸಬೇಕಾದರೆ ಆ ಜೀವಿಗೆ ಹಸಿವು ಅಥವಾ ಬಾಯಾರಿಕೆಯಾಗಿದೆ ಮತ್ತದರ ಆಹಾರದ ಜೀವಿಗಳಾದ ಇಲಿ, ಹೆಗ್ಗಣ, ನಾಯಿಮರಿ, ಬೆಕ್ಕು, ಕೋಳಿ ಅಥವಾ ಇನ್ನಿತರ ಜೀವಿಗಳು ಹಾಗೂ ನೀರು ನಮ್ಮ ವಠಾರದಲ್ಲಿಯೇ ಇದೆ ಅಥವಾ ಆ ಹಾವು ಅಲ್ಲಿರಬಹುದಾದ ತನ್ನ ಸಂಗಾತಿಯನ್ನು ಅರಸುತ್ತಲೂ ಬಂದಿರಬಹುದು ಎಂದರ್ಥ. ಆದ್ದರಿಂದ ಯಾವುದೇ ಒಂದು ಬಡಾವಣೆಯೊಳಗೆ ಹಾವುಗಳಿಗೆ ಸಂಬಂಧಿಸಿದ ಇಂಥ ವಸ್ತುಗಳು ಇಲ್ಲವೇ ಇಲ್ಲವೆಂದಾದಲ್ಲಿ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಯಾವ ಹಾವುಗಳೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಒಂದುವೇಳೆ ಕಾಣಿಸಿಕೊಂಡವೆಂದರೆ ಅದು ಪ್ರಪಂಚದ ಅದ್ಭುತಗಳಲ್ಲಿ ಒಂದೆನ್ನಬಹುದು. ನಾವೆಲ್ಲರೂ ಯೋಚಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೇನೆಂದರೆ ಕೇರೆಹಾವು ಅಥವಾ ಇನ್ನಿತರ ಯಾವುದೇ ಹಾವುಗಳು ನಮ್ಮ ಸುತ್ತಮುತ್ತ ಕಂಡು ಬಂದರೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ನಾವುಗಳು ಅದೇ ನಾಗರಹಾವೊಂದು ಕಾಣಿಸಿಕೊಂಡ ಕೂಡಲೇ ಏನೇನೋ ತಪ್ಪುನಂಬಿಕೆ ಮತ್ತು ಅರ್ಥವಿಲ್ಲದ ಭಯಕ್ಕೆ ಬಿದ್ದು ಸೋತು ಕುಗ್ಗುತ್ತೇವೆ ಯಾಕೆ…? ಈ ಪ್ರಶ್ನೆಯನ್ನು ಯಾವತ್ತಾದರೂ ನಮಗೆ ನಾವೇ ಕೇಳಿಕೊಂಡಿದ್ದುಂಟಾ…? ಇಲ್ಲ ಅಲ್ಲವೇ? ಬದಲಿಗೆ ನಾವೇನು ಮಾಡುತ್ತೇವೆಂದರೆ ಹಿಂದಿನವರು ಹೇಳುತ್ತ ಬಂದಿರುವ ಅಥವಾ ಯಾರೋ ಅಜ್ಞಾನಿಗಳು ಅಂಥ ಸಂದರ್ಭದಲ್ಲೇ ಹೆಣೆಯುವ ಕಟ್ಟುಕಥೆ ಮತ್ತು ಮೂಢನಂಬಿಕೆಗಳನ್ನೇ ನಂಬಿ ಭಯದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವಲ್ಲದೇ ಅದೇ ವಿಷಯವನ್ನು ಹಿಡಿದುಕೊಂಡು ಮುಂದಿನ ಜೀವನದ ಸಣ್ಣಪುಟ್ಟ ಸುಖಸಂತೋಷಗಳನ್ನೂ ಹಾಳು ಮಾಡಿಕೊಳ್ಳಲು ತೊಡಗುತ್ತೇವೆ!    ಹಾಗಾಗಿ ಸುಮಿತ್ರಮ್ಮಾ ಎಲ್ಲಿಯವರೆಗೆ ನಮ್ಮಲ್ಲಿ ಯಾವುದೇ ಒಂದು ವಿಷಯದ ಕುರಿತು ಸಾಮಾನ್ಯ ಜ್ಞಾನವೇ ಇರುವುದಿಲ್ಲವೋ ಅಲ್ಲಿಯತನಕ ಅದರ ಕುರಿತ ಅಜ್ಞಾನ ಮತ್ತು ಭಯಗಳೂ ನಮ್ಮನ್ನು ಕಾಡುವುದು ಸಹಜವೇ. ಅಂಥ ಭಯ ಪೀಡಿತರಾದವರಿಗೆ ನೀವು ಹೇಳಿದ ಹಾಗೆ ಹಾವಿನ ಸಮಸ್ಯೆಯೂ ಎದುರಾಯಿತೆಂದರೆ ಅವರು ಸಂಪೂರ್ಣ ಕಂಗೆಟ್ಟುಬಿಡುತ್ತಾರೆ. ಅಂಥ ಪರಿಸ್ಥಿತಿಯಲ್ಲಿಯೇ ಆ ಅಮಾಯಕರ ದೌರ್ಬಲ್ಯವನ್ನು ಸುತ್ತಮುತ್ತಲಿನ ಅರೆಬರೆ ಜ್ಞಾನಿಗಳೋ ಅಥವಾ ಪ್ರಕೃತಿಯ ಜೀವಜಾಲ ಪ್ರಕ್ರಿಯೆಯ ಬಗ್ಗೆ ಎಳ್ಳಷ್ಟೂ ತಿಳಿವಳಿಕೆಯಿಲ್ಲದ ಜ್ಯೋತಿಷ್ಯರುಗಳೋ ಅಥವಾ ಸ್ವಯಂಘೋಷಿತ ಗುರೂಜಿ, ಬಾಬಾಗಳೋ ತಮ್ಮ ಲಾಭಕ್ಕಾಗಿ ಬಳಸಿಕೊಂಡು ತಾವೇ ಸೃಷ್ಟಿಸಿದ ಮೂಢನಂಬಿಕೆಗಳನ್ನು ಅವರೊಳಗೆ ತುರುಕಿಸುತ್ತ ಜೀವನ ಪರ್ಯಂತ ಅವರನ್ನು ಶೋಷಿಸುತ್ತಾ ಬಂದಿರುವುದು ಈಗೀಗ ದೇಶದಾದ್ಯಂತ ಕಂಡು ಬರುವ ವಿಲಕ್ಷಣ ಸಮಸ್ಯೆಯಲ್ಲವೇ!’ ಎಂದು ನರಹರಿಯು ಸುಮಿತ್ರಮ್ಮನನ್ನು ಅನುಕಂಪದಿಂದ ನೋಡುತ್ತ ವಿವರಿಸಿದ. ಆದರೆ ಆರಂಭದಲ್ಲಿ ಅವನ ಮಾತುಗಳನ್ನು ಒಲ್ಲದ ಮನಸ್ಸಿನಿಂದ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮನಲ್ಲಿ ಬಳಿಕ ವಿಚಿತ್ರ ತಳಮಳವೂ ಗೊಂದಲವೂ ಆರಂಭವಾಗಿತ್ತು. ಹಾಗಾಗಿ ಅವರು ಮೌನವಾಗಿ ಅವನ ವಿಚಾರಧಾರೆಯನ್ನು ಆಲಿಸತೊಡಗಿದ್ದರು. ಅವರ ಸ್ಥಿತಿಯನ್ನು ಗಮನಿಸಿದ ನರಹರಿಯು ಮತ್ತೆ ಮಾತು ಮುಂದುವರೆಸಿದ. ‘ನಮ್ಮ ವಠಾರದಲ್ಲೂ ಸುತ್ತಾಡುತ್ತಿರುವ ಹಾವಿನ ಕಥೆಯೂ ಇದೇ ಸುಮಿತ್ರಮ್ಮ. ಹಸಿದ ಹಾವೊಂದಕ್ಕೆ ಅದರ ಆಹಾರದ ಜೀವಿಗಳು ನೇರವಾಗಿ ಬಾಯಿಗೆ ಬಂದು ಬೀಳುತ್ತವೆಯೇ ಹೇಳಿ…? ಆ ಹಾವು ಅವುಗಳನ್ನು ಹುಡುಕಾಡಿ ಬೆನ್ನುಹತ್ತಿ ಬೇಟೆಯಾಡಿಯೇ ತಿನ್ನಬೇಕಲ್ಲವೇ. ನಾನು ಸ್ವತಃ ಕಂಡ, ಓದಿದ ಮತ್ತು ಒಂದಷ್ಟು ಉರಗತಜ್ಞರಿಂದಲೂ ತಿಳಿದುಕೊಂಡ ಮಾಹಿತಿಯ ಪ್ರಕಾರ ಇನ್ನೊಂದೆರಡು ತಿಂಗಳಲ್ಲಿ ಹಾವುಗಳ ಸಂತಾನೋತ್ಪತ್ತಿ ಕಾಲ ಆರಂಭವಾಗಲಿದೆ. ಆ ಕಾಲಕ್ಕಿಂತ ಒಂದೆರಡು ತಿಂಗಳು ಮುಂಚಿತವಾಗಿ ಹೆಚ್ಚಿನ ಪ್ರಭೇದದ ಹಾವುಗಳೆಲ್ಲ ತೀವ್ರ ಆಹಾರದ ಹುಡುಕಾಟದಲ್ಲಿ ತೊಡಗುತ್ತವೆ. ಆ ಮೂಲಕ ಅವು ಮುಂದಿನ ಎರಡು, ಮೂರು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಿಂದು ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದು ವಂಶೋತ್ಪತ್ತಿಗೆ ತಯಾರಾಗುತ್ತವೆ. ಅಂಥ ಕಾಲದಲ್ಲಿ ಹಾವುಗಳ ಓಡಾಟವೂ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ ನಾಗನಿಗೆ ಸಂಬಂಧಿಸಿದ ನಮ್ಮ ನಂಬಿಕೆ, ಆಚರಣೆಗಳಿಗೂ ಜೀವ ಬರುತ್ತದೆ. ಹಾಗಾಗಿ ಆ ನಾಗರಹಾವಿನ ವಿಷಯದಲ್ಲೂ ಯಾರ್ಯಾರೋ ಏನೇನೋ ಹೇಳಿದ್ದನ್ನೂ ಮತ್ತು ನಿಮಗೆ ನೀವೇ ಒಂದಷ್ಟು ಕಲ್ಪಿಸಿಕೊಂಡದ್ದನ್ನೂ ಕಲಸುಮೇಲೊಗರ ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಂಡಿದ್ದೀರಷ್ಟೆ!’ ಎಂದು ಆಪ್ತವಾಗಿ ವಿವರಿಸಿದ.    ನರಹರಿಯ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಂಡ ಸುಮಿತ್ರಮ್ಮ ಕೊನೆಯಲ್ಲಿ ಅವನ ವಿಚಾರದಲ್ಲಿದ್ದ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಪೇಚಾಡತೊಡಗಿದರು. ಅತ್ತ ರಾಧಾಳಿಗೂ ತನ್ನ ನಂಬಿಕೆಯು ನಿಂತ ನಿಲುವಿನಲ್ಲೇ ಬುಡಮೇಲಾದುದು ಗೊಂದಲವನ್ನೂ ವಿಸ್ಮಯವನ್ನೂ ತರಿಸಿತ್ತು. ಆದರೆ ಡಾ. ನರಹರಿ ಅವರದೇ ಹಿತಚಿಂತಕನಾಗಿ ಕರುಣೆಯಿಂದ ಮಾತಾಡಿದ್ದ. ಅವಳು ಕೂಡಾ ಅವನ ಮಾತುಗಳನ್ನು ಯಾವುದೇ ವಿರೋಧವಿಲ್ಲದೆ ತಲ್ಲೀನತೆಯಿಂದ ಕೇಳಿಸಿಕೊಂಡಿದ್ದಳು. ಆದ್ದರಿಂದ ಅಷ್ಟರವರೆಗೆ ಅವಳನ್ನು ಪೀಡಿಸುತ್ತಿದ್ದ ನಾಗದೋಷವೆಂಬ ಭಯವು ಮೆಲ್ಲನೆ ಕಣ್ಮರೆಯಾಗಿ ಹಗುರ ಭಾವವು ಮೂಡಿತು. ಹಾಗಾಗಿ ಅವಳು, ‘ದೇವರೇ ನಮ್ಮನ್ನು ಕಾಪಾಡಿದೆಯಪ್ಪಾ…!’ ಎಂದು ಕಣ್ಣು ತುಂಬಿಕೊಂಡು ಮನದಲ್ಲೇ ಕೈಮುಗಿದವಳು,‘ಅಂದರೆ ಡಾಕ್ಟ್ರೇ, ನನ್ನ ಗಂಡನನ್ನು ಕಾಡುತ್ತಿರುವುದು ನಾಗದೋಷದ ತೊಂದರೆಯಲ್ಲವಾ…? ಎಂದು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳುವ ಆತುರದಿಂದ ಪ್ರಶ್ನಿಸುತ್ತ ಕಣ್ಣೀರೊರೆಸಿಕೊಂಡಳು. ‘ಛೇ, ಛೇ! ಅಲ್ಲಮ್ಮಾ. ಇದೊಂದು ಯಾರಿಗೂ ಬರಬಹುದಾದ ಗಂಭೀರ ಕಾಯಿಲೆ! ಆದರೂ ಹೆದರಬೇಕಾಗಿಲ್ಲ. ಇದಕ್ಕೂ ಸರಿಯಾದ ಚಿಕಿತ್ಸೆಯಿದೆ! ಎಂದು ನರಹರಿ ಮೃದುವಾಗಿ ಹೇಳಿ ಅವಳನ್ನು ಸಂತೈಸಿದ. ಮರುಕ್ಷಣ ರಾಧಾ ಅವನನ್ನು ಧನ್ಯತೆಯಿಂದ ದಿಟ್ಟಿಸಿದವಳು ತಟ್ಟನೆ ಸುಮಿತ್ರಮ್ಮನತ್ತ ಹೊರಳಿ,‘ನಮ್ಮಂಥ ಬಡವರನ್ನು ಹೀಗೆಲ್ಲ ಶೋಷಿಸಬಾರದಿತ್ತು ಸುಮಿತ್ರಮ್ಮಾ ನೀವು…!’ ಎಂಬಂತೆ ವಿಷಾದದಿಂದ ದಿಟ್ಟಿಸಿದಳು. ಅವಳ ನೋಟವನ್ನು ಕಂಡ ಸುಮಿತ್ರಮ್ಮನಿಗೆ ಅವಮಾನದಿಂದ ನಿಂತ ನೆಲವೇ ಕುಸಿದಂತಾಯಿತು. ಆದ್ದರಿಂದ ಎತ್ತಲ್ಲೋ ನೋಡುತ್ತ ನಿಂತರು. ಅದನ್ನು ಗಮನಿಸಿದ ನರಹರಿಯು,‘ಸುಮಿತ್ರಮ್ಮಾ, ನಮ್ಮ ನಾಡಿನ ಒಂದಷ್ಟು ಅಮಾಯಕ ಜನರು, ನಾಗರ ಹಾವಿಗೆ ಸಂಬಂಧಿಸಿದೆ ಎಂದು ನಂಬಿರುವ ‍ನಾಗದೋಷ ಎಂಬ ಸಂಗತಿ ಅಥವಾ ಅಂಥದ್ದೊಂದು ನಂಬಿಕೆಯ ಕುರಿತು ನಮ್ಮ ಸನಾತನವಾದ ಯಾವ ಶಾಸ್ತ್ರಗ್ರಂಥಗಳಲ್ಲೂ ಉಲ್ಲೇಖವಿಲ್ಲಮ್ಮಾ…! ಇದು ನಮ್ಮ ನಡುವೆಯೇ ಇರುವ ಕೆಲವು ಸ್ವಾರ್ಥ ಬುದ್ಧಿಗಳು ತಮ್ಮ ತಮ್ಮ ಲಾಭಕ್ಕೋಸ್ಕರ ಸೃಷ್ಟಿಸಿರುವ ವ್ಯಾಪಾರಿ ನಂಬಿಕೆಗಳಷ್ಟೆ!’ ಎಂದು ಒತ್ತಿ ಹೇಳಿದ.    ಅಷ್ಟು ಕೇಳಿದ ಸುಮಿತ್ರಮ್ಮ ಈಗ ತೀವ್ರ ಗೊಂದಲಕ್ಕೆ ಬಿದ್ದರು. ಆದರೂ ನರಹರಿಯೊಂದಿಗೆ ವಾದಿಸುವ ಶಕ್ತಿಯಾಗಲೀ, ಜ್ಞಾನವಾಗಲೀ ಇಲ್ಲದ ಅವರು,‘ಏನೋ ಡಾಕ್ಟ್ರೇ, ನನಗೊಂದೂ ಅರ್ಥವಾಗುವುದಿಲ್ಲ. ಆ ಗುರೂಜಿಯವರು ನೋಡಿದರೆ ನಾಗದೋಷದಿಂದಲೇ ನಾಗರಹಾವು ಸುತ್ತಾಡುವುದು. ಅದೇ ಕಾರಣಕ್ಕೆ ನಿಮ್ಮನ್ನು ಕಾಯಿಲೆ ಕಸಾಲೆಗಳೂ ಮತ್ತಿತರ ತೊಂದರೆಗಳೂ ಕಾಡುತ್ತಿರುವುದು. ಆ ದೋಷವನ್ನು ನಿವಾರಿಸಿಕೊಳ್ಳದಿದ್ದರೆ ಕೊನೆಯ ತನಕವೂ ನೀವೆಲ್ಲ ನರಳುತ್ತಲೇ ಸಾಯಬೇಕಾಗುತ್ತದೆ! ಅದಕ್ಕೆ ಆ ಶಾಸ್ತ್ರ ಮಾಡಿಸಿ, ಈ ಪೂಜೆ ಮಾಡಿಸಿ ಅಂತಾರೆ. ನೀವು ನೋಡಿದರೆ ಬೇರೇನೋ ಹೇಳುತ್ತಿದ್ದೀರಿ. ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಒಂದೂ ಅರ್ಥವಾಗುತ್ತಿಲ್ಲ. ಆದರೆ ಈಗ ಯೋಚಿಸಿದರೆ ಆ ಗುರೂಜಿಯನ್ನೂ ಊರ ಕೆಲವರ ಮಾತುಗಳನ್ನೂ ನಂಬಿಕೊಂಡು ನಾನೂ ಹೆದರಿದೆನಲ್ಲದೇ ಈ ಪಾಪದ ಹುಡುಗಿಯನ್ನೂ ಹೆದರಿಸಿಬಿಟ್ಟೆನೇನೋ ಅಂತನೂ ಅನ್ನಿಸುತ್ತದೆ. ಅಯ್ಯೋ ದೇವರೇ…!’ಎಂದು ಪಶ್ಚಾತ್ತಾಪಪಟ್ಟರು. ಅಷ್ಟು ಕೇಳಿದ ರಾಧಾಳಲ್ಲೂ ನೆಮ್ಮದಿಯ ಭಾವ ಮೂಡಿತು. ‘ಸುಮಿತ್ರಮ್ಮಾ, ಒಬ್ಬ ಮನುಷ್ಯನ ಬಹಳ ದೊಡ್ಡ ಗೆಲುವೆಂದರೆ ಅವನು ತನ್ನ ತಪ್ಪಿಗೆ ಪಡುವ ಪಶ್ಚಾತ್ತಾಪವಂತೆ! ಆದ್ದರಿಂದ ಯಾವುದೇ ಒಂದು ವಿಷಯವಿರಲಿ ಅದನ್ನು ಕುರುಡಾಗಿ ನಂಬುವುದಕ್ಕಿಂತ ಧೈರ್ಯದಿಂದ ಪ್ರಶ್ನಿಸುತ್ತ ಸ್ವಂತ ಬುದ್ಧಿ ಮತ್ತು ವಿವೇಕದಿಂದ ವಿಚಾರ ಮಾಡಿ ನೋಡಿ ಸ್ವೀಕರಿಸುವುದು ಒಳ್ಳೆಯದಲ್ಲವೇ. ನಾವೆಲ್ಲರೂ ಆ ಮನಸ್ಥಿತಿಯನ್ನು ಬೆಳೆಸಿಕೊಂಡೆವೆಂದರೆ ಆಮೇಲೆ ಯಾರೂ ನಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ! ನಮ್ಮ ಗೋಪಾಲ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದಾನೆ. ಈ ರೋಗ ಭಾದಿಸುವ ಮನುಷ್ಯರು ಕೆಲವೊಮ್ಮೆ ಅದರ ತೀವ್ರತೆಗೆ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾರೆ. ಅವನ ವರ್ತನೆಗಳನ್ನೂ, ನಿಮ್ಮೊಳಗಿನ ನಂಬಿಕೆಗಳನ್ನೂ ಒಂದಕ್ಕೊಂದು ತಾಳೆ ಹಾಕಿ ಭ್ರಮೆಗೆ ಬಿದ್ದು ಹೆದರಿಕೊಂಡಿದ್ದೀರಷ್ಟೆ!’ ಎಂದು ಹೇಳಿದ ನರಹರಿ ರಾಧಾಳತ್ತ ತಿರುಗಿ,‘ನೋಡಮ್ಮಾ ನಿಮ್ಮ ಬಂಧುಗಳು ಯಾರಾದರಿದ್ದರೆ ಬೇಗ ಕರೆಸಿಕೊಂಡು ಇವನನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ. ಹುಷಾರಾಗುತ್ತಾನೆ!’ಎಂದು ಹೇಳಿ ಹೊರಡಲನುವಾದ. ಆದರೆ ರಾಧಾಳಿಗೆ ಭಯವಾಯಿತು.‘ಅಯ್ಯಯ್ಯೋ ಡಾಕ್ಟ್ರೇ… ಇಲ್ಲಿ ಸಮೀಪದಲ್ಲಿ ನಮ್ಮವರು ಯಾರೂ ಇಲ್ಲವಲ್ಲ ಏನು ಮಾಡಲೀ…!’ಎಂದು ಅಳತೊಡಗಿದಳು. ನರಹರಿಗೆ ಕನಿಕರವೆನಿಸಿತು.‘ಆಯ್ತಮ್ಮ ಅಳಬೇಡಿ. ಕಾರು ತರುತ್ತೇನೆ. ಅಡ್ಮಿಟ್ ಮಾಡೋಣ!’ಎಂದವನು ಕೂಡಲೇ ಮನೆಗೆ ಹೋಗಿ ಕಾರು ತಂದು ರಾಧಾಳೊಂದಿಗೆ ಗೋಪಾಲನನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೊರಟ. ನರಹರಿಯ ಕಾರು ಕಣ್ಮರೆಯಾಗುವವರೆಗೂ ಮರಗಟ್ಟಿ ನಿಂತು ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಸುಮಿತ್ರಮ್ಮ ಆಮೇಲೆ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಅರ್ಥವಾಗದ ಆಲೋಚನೆ ಮತ್ತು ದ್ವಂದ್ವ ತಾಕಲಾಟಗಳಿಗೆ ಸಿಲುಕಿದ್ದ ಅವರ ಮನಸ್ಸು ಗಿಡುಗನ ದಾಳಿಯಿಂದ ನೆಲೆ ತಪ್ಪಿದ ಹಕ್ಕಿಯಂತೆ ಒದ್ದಾಡುತ್ತಿತ್ತು. ಅವರು ಅದನ್ನು ಸಹಿಸಲಾಗದೆ ಅಶಾಂತರಾಗಿ ನಡೆಯುತ್ತಿದ್ದರು.                                                                                 *** ಆಸ್ಪತ್ರಗೆ ಹೋಗುತ್ತಿದ್ದ ನರಹರಿಯು ರಾಧಾಳೊಡನೆ ಮಾತಿಗಾರಂಭಿಸಿದವನು, ನಮ್ಮ ಪ್ರಾಚೀನರಿಂದ ಸೃಷ್ಟಿಯಾದ ನಾಗಾರಾಧನೆ ಮತ್ತು ಅದರ ಮಹತ್ವದ ಕುರಿತು ಹಾಗೂ ಅಂಥದ್ದೊಂದು ನಿಸರ್ಗಾರಾಧನೆಯ ಆಚರಣೆಗೆ ಈಚೀಚೆಗೆ ಸೋಕಿರುವ ‘ದೋಷ’ ಎಂಬ ಹುಸಿನಂಬಿಕೆಯ ಕುರಿತೂ ಅವಳಿಗೆ ಸರಳವಾಗಿ ವಿವರಿಸಿ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತ ಸಾಗಿದ. ಅದರಿಂದ ಅವಳಲ್ಲೂ ಆ ಕುರಿತ ಅಜ್ಞಾನ ಮತ್ತು ಭಯ ನಿಧಾನವಾಗಿ ಕಡಿಮೆಯಾಗುತ್ತ ಅವಳು ಮತ್ತಷ್ಟು ಗೆಲುವಾದಳು. ಆಗ ಅವಳಿಗೊಂದು ವಿಚಾರವೂ ನೆನಪಿಗೆ ಬಂತು. ಆದ್ದರಿಂದ ತಮ್ಮ ವಠಾರದಲ್ಲಿ ಸುತ್ತಾಡುತ್ತಿದ್ದ ನಾಗರಹಾವಿನ ಕಥೆಯನ್ನೂ ಮತ್ತದರ ಸಲುವಾಗಿ ಸುಮಿತ್ರಮ್ಮ ಬಂದು ತಮ್ಮನ್ನು ಹೆದರಿಸುತ್ತಿದ್ದುದನ್ನೂ, ಅದಕ್ಕೆ ಸಂಬಂಧಿಸಿ ಸಮೀಪದ ದೊಡ್ಡ ಕಾಡೊಂದು ಇನ್ನು ಕೆಲವೇ ತಿಂಗಳೊಳಗೆ ನೆಲಸಮವಾಗಿ ಜೀರ್ಣೋದ್ಧಾರವಾಗಲಿರುವುದನ್ನೂ, ಆ ಕೆಲಸವನ್ನು ಊರಿನವರೂ ಮತ್ತು ತಮ್ಮ ವಠಾರದವರೂ ಕೂಡಿಯೇ ಮಾಡಬೇಕೆಂದು ಏಕನಾಥ ಗುರೂಜಿಯವರು ಆಜ್ಞೆ ಮಾಡಿರುವುದನ್ನೂ ಸವಿವರವಾಗಿ ಅವನಿಗೆ ತಿಳಿಸಿದಳು. ಅಷ್ಟು ಕೇಳಿದ ನರಹರಿಗೆ ತನ್ನ ಹೃದಯವನ್ನು ಯಾರೋ ಬಲವಾಗಿ ಹಿಂಡಿದಂತಾಯಿತು! ಏಕೆಂದರೆ ಅವನು ಕೂಡಾ ಬುಕ್ಕಿಗುಡ್ಡೆಯ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನೂ ಮುಖ್ಯವಾಗಿ ನಿತ್ಯ ಹರಿದ್ವರ್ಣದ ಆ ದೇವರಕಾಡನ್ನೂ, ಅದರ ಶುದ್ಧ ಆಮ್ಲಜನಕವನ್ನೂ ಹಾಗೂ ವರ್ಷವಿಡೀ ತುಂಬಿ ಹರಿಯುತ್ತ ಇಡೀ ಊರಿಗೆ ತಣ್ಣನೆಯ ನೀರನ್ನು ಪೂರೈಸುತ್ತಿದ್ದ ಅಲ್ಲಿನ ಬೃಹತ್ ಮದಗವನ್ನೂ ನೋಡಿಯೇ ಮನಸೋತು ಅಲ್ಲಿ ಜಾಗವನ್ನು ಕೊಂಡು ಮನೆ ಕಟ್ಟಿಸಿ ಬಾಳಲು ಮನಸ್ಸು ಮಾಡಿದ್ದವನು.    ಅಷ್ಟುಮಾತ್ರವಲ್ಲದೇ, ಅವನು ತನ್ನ ಬಿಡುವಿನ ಸಮಯವನ್ನು ಹಾಗೂ ರಜಾದಿನಗಳ ಬಹುಪಾಲನ್ನು ಸ್ವರ್ಗದಂಥ ಆ ಕಾಡಿನಲ್ಲೂ, ಅದರೊಳಗಿನ ಸರೋವರದ ದಡದಲ್ಲೂ ಕುಳಿತು ಕಳೆಯುತ್ತ ಅಲ್ಲಿನ ಪ್ರಾಣಿಪಕ್ಷಿಗಳ ಕಲವರವನ್ನೂ ಇತರ ಜೀವರಾಶಿಗಳ ವಿಸ್ಮಯ ಜಗತ್ತನ್ನೂ ಕಂಡು ಆಸ್ವಾದಿಸುತ್ತ ಬಂದಂಥ ಮನಸ್ಥಿತಿಯವನು. ಹಾಗಾಗಿ ಆ ಹಸಿರು ತಾಣವನ್ನು ಅವನು ತನ್ನ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ. ಆದರೆ ಆ ಅಮೂಲ್ಯ ಪರಿಸರವು ಇನ್ನು ಕೆಲವೇ ಕಾಲದೊಳಗೆ ಸುಡುಗಾಡಾಗಿ ಬಿಡಲಿದೆ ಎಂಬ ಸತ್ಯವನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ! ಅದೇ ನೋವಿನಿಂದ ಮೌನವಾಗಿ ಕಾರು ಚಲಾಯಿಸುತ್ತಿದ್ದ. ಅವನು ಸಾಗುತ್ತಿದ್ದ ದಾರಿಯುದ್ದಕ್ಕೂ ಕಣ್ಣ ಮುಂದೆ ಚಿತ್ರಪಟಗಳಂತೆ ಸರಿದು ಹೋಗುತ್ತಿದ್ದ ಬೆಟ್ಟಗುಡ್ಡಗಳೂ, ಗಿಡಮರ ಬಳ್ಳಿಗಳೂ

Read Post »

ಇತರೆ

ತಮಸೋಮಾ ಜ್ಯೋತಿರ್ಗಮಯ

ತಮಸೋಮಾ ಜ್ಯೋತಿರ್ಗಮಯ ಕತ್ತಲಿನ ಬಗೆಗೆ ಸೋಜಿಗವೂ ಬೆಳಕಿನ ಬಗೆಗೆ ಬೆರಗು ಹುಟ್ಟಿಸುವ ಹಬ್ಬವೇ ದೀಪಾವಳಿ. ಮನುಷ್ಯ  ಮೊಟ್ಟಮೊದಲು ಬೆಳಕು ನೀಡಿದ ಸೂರ್ಯನ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಂಡ. ನಂತರ ಬೆಂಕಿ ಆವಿಷ್ಕಾರವಾದ ಮೇಲೆ ಬೆಳಕಿನ ಮೂಲವಾದ ಅದು ತನ್ನ ಅಗತ್ಯತೆಗಳನ್ನು ಪೂರೈಸಲು ಸಹಾಯಕವಾದಾಗ ಅದನ್ನು ದೈವತ್ವಕ್ಕೇರಿಸಿದ.  ಹೀಗೆ ಬೆಳಕು ಹಾಗೂ ಅದರ ವಿವಿಧ ಮೂಲಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಪ್ರಮುಖ ಸ್ಥಾನವನ್ನು ನಿರ್ಮಿಸಿಕೊಂಡವು.   ಪ್ರಾಚೀನ ಕಾಲದಿಂದಲೂ ಕತ್ತಲು ನಿಗೂಡತೆ ಅಜ್ಞಾನದ ಸಂಕೇತ .ಬೆಳಕು ಜ್ಞಾನದ ಪ್ರತಿನಿಧಿ. ಬೆಳಕಿನ ಬಲದಲ್ಲಿ ಅಜ್ಞಾನದ ಕತ್ತಲೆ ಹರಿದು ಅರಿವಿನ ವಿವೇಕ ಅರಳುತ್ತದೆ.  ಕತ್ತಲಿನ ಮಾರ್ಗದಲ್ಲಿ ಅರಿವಿನ ದಾರಿ ದೀಪ ಬೆಳಗಿ ಮನುಷ್ಯನಿಗೆ ಚೈತನ್ಯ ತುಂಬಿ ಮಾರ್ಗದರ್ಶಿಯಾಗುತ್ತದೆ. ಹಾಗಾಗಿಯೇ ಎಲ್ಲ ನಾಗರಿಕತೆ ಸಂಸ್ಕೃತಿಗಳಲ್ಲಿ ದೀಪಕ್ಕೆ ಜ್ಯೋತಿಗೆ ಅತ್ಯಂತ ಪ್ರಾಧಾನ್ಯತೆ.   ಬ್ರಹ್ಮಾಂಡದಲ್ಲಿ ಅಂಧಕಾರ ಅಥವಾ ಕತ್ತಲೆಯೆಂಬುದೇ ವ್ಯಾಪಕ ಅಂದರೆ ಕತ್ತಲೆಯೇ ಒಂದು ರೀತಿಯ ನಿರಂತರತೆ .ಆದರೆ ಒಂದು ಸಣ್ಣ ಜ್ಯೋತಿಯು ಕತ್ತಲೆಯನ್ನು ಓಡಿಸುತ್ತದೆ. ತಮಸ್ಸು ಎಂದರೆ ಮನಸ್ಸಿಗೆ ನಯನಕ್ಕೆ ಆವರಿಸಿದ ಅಂಧತ್ವ . ಅಜ್ಞಾನ ಅಂದರೆ ಮನುಷ್ಯನ ಕುರುಡುತನವೇ.  ಹಾಗಾಗಿಯೇ ಬೆಳಕು ಕಣ್ಣಿಗೆ ಕವಿದ ಕತ್ತಲೆಯನ್ನು ದೂರ ಮಾಡುತ್ತದೆ ದೃಷ್ಟಿಗೋಚರವಾಗಿಸುತ್ತದೆ. ವಿಸ್ತೃತ ಪರಿಭಾಷೆಯಲ್ಲಿ ಮನದ ಅಜ್ಞಾನ ತಮವನು ನಿವಾರಿಸಿ ಜ್ಞಾನ ದರ್ಶನ ಮಾಡಿಸುತ್ತದೆ. ಅಂಧಕಾರವೆಂದರೆ ಅದು ಕಪ್ಪು, ವಿಷ . ಬೆಳಕು ಪ್ರಕಾಶ, ಜೀವನದ ಸಂಕೇತ, ಅಮೃತತ್ವದ ದ್ಯೋತಕ . ಹೀಗಾಗಿಯೇ ಬೆಂಕಿ ಬೆಳಕು ಪ್ರಕಾಶ ಇವೆಲ್ಲವೂ ಚೈತನ್ಯದ ಸ್ವರೂಪ.  ಬೆಳಕನ್ನುಂಟು ಮಾಡುವುದು ಎಂದರೆ ದೀಪವನ್ನು ಹಚ್ಚುವುದು ಜ್ಞಾನಾರ್ಜನೆಯ ಸಂಕೇತವಾಗಿ ಶುಭದ ಸೂಚನೆಯಾಗಿ ನಂಬಿಕೆಯ, ಧಾರ್ಮಿಕತೆಯ ಅವಿಭಾಜ್ಯ ಅಂಗವಾಗಿದೆ.   ಕಾರ್ತೀಕ ಮಾಸದಲ್ಲಿ ಬೇಗ ಕತ್ತಲು. ಚಳಿಯ ಕಾಲವಾದ್ದರಿಂದ ವಾತಾವರಣವು ಚಳಿ ಹೆಚ್ಚಾಗಿ ಮಂಕುತನ.  ಇಂತಹ ಸಮಯದಲ್ಲಿ ತಮ ನಿವಾರಕ ದೀಪ ಜ್ಯೋತಿಯನ್ನು ಬೆಳಗುವ ಮೂಲಕ ಮನೆ ಮನಗಳಲ್ಲಿ ಚೈತನ್ಯ ಲವಲವಿಕೆ ಪ್ರವಹಿಸುವ ಆಚರಣೆಯೇ ದೀಪಾವಳಿಯ ಸಂಭ್ರಮದ ಆದಿ.  ಹಿಂದೂ ಧರ್ಮದ ಅತ್ಯಂತ ಜನಪ್ರಿಯ, ಪ್ರತಿ ಮನೆಯಲ್ಲೂ ಆಚರಿಸುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಅಗ್ನಿಗೆ ನೀಡಿದ ಮಹತ್ತ್ವಕ್ಕೆಉದಾಹರಣೆ. ಆದರೆ ಜಗತ್ತಿನ ವಿವಿಧ ಧರ್ಮಗಳಲ್ಲೂ ಬೆಂಕಿ ದೀಪ ಬೆಳಕುಗಳಿಗೆ ಧಾರ್ಮಿಕ ಪ್ರಾಧಾನ್ಯತೆ ಇದೆ ಎಂಬ ಅಂಶವೂ ಇಲ್ಲಿ ಗಮನಾರ್ಹ.   “ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ” ಭಾರತೀಯ ಪರಂಪರೆಯಲ್ಲಿ ದೀಪವೆಂದರೆ ಶುಭ ಮಂಗಳ ಎಂಬ ಉದಾತ್ತ ಕಲ್ಪನೆ.  ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಃ ಶತ್ರು ಬುದ್ದಿ ವಿನಾಶಾಯ ದೀಪಜ್ಯೋತಿ ನಮೋಸ್ತುತೆ  ದೀಪ ಪ್ರಾಣದ ಸಂಕೇತ ಜ್ಞಾನದ ಸಂಕೇತ ಶುಭದ ಸಂಕೇತ ಅಭಿವೃದ್ಧಿಯ ಸಂಕೇತ. ದೀಪದ ಬೆಳಗುವಿಕೆಯಿಂದ ಶುಭವಾಗಲಿ ಮಂಗಳವಾಗಲಿ ಆರೋಗ್ಯ ಧನ ಸಂಪತ್ತು ವೃದ್ಧಿಯಾಗಲಿ.  ಮನದ ಶತ್ರುಗಳು ಅಂದರೆ ರಜೋತಾಮಸ ಗುಣಗಳು, ಅರಿಷಡ್ವರ್ಗಗಳು ನಾಶವಾಗಲಿ ಎಂಬ ಆಶಯ.   ದೀಪದ ಮತ್ತೊಂದು ವಿಭಿನ್ನ ವಿಶಿಷ್ಟ ಸ್ವಭಾವ ಬೆಳಗುವುದು.  ತನ್ನನ್ನು ತಾನೇ ದಹಿಸಿಕೊಳ್ಳುವುದು . ಉರಿಯುತ್ತಲೇ ಕತ್ತಲನ್ನು ದಕ್ಕಿಸಿಕೊಂಡು ಅರಗಿಸಿಕೊಳ್ಳುವುದು .ಎಂತಹ ಗಾಢವಾದ ಕತ್ತಲೆಯನ್ನು ಸಣ್ಣ ದೀಪ ನಿವಾರಿಸುತ್ತದೆ ನುಂಗಿಬಿಡುತ್ತದೆ.  ಕತ್ತಲೆಗೆ ಹೇಗೆ ಆವರಿಸಿಕೊಳ್ಳುವ ಗುಣ ಇದೆಯೋ ಆ ಕೊನೆಯಿಲ್ಲದ ದಾಹ ಬೆಳಕಿಗೂ ಇದೆ. ಬೆಳಕಿನ ಮಹತ್ವ ತಿಳಿಯುವುದು ಕತ್ತಲೆಯಿದ್ದಾಗ. ಕತ್ತಲೆ ನೀಡುವ ಅವಕಾಶವೇ ಬೆಳಕಿನ ಪ್ರಜ್ವಲನೆ. ಅಜ್ಞಾನವಿದ್ದಾಗಲೇ ಜ್ಞಾನದ ಮಹತ್ವ.  ಜ್ಞಾನ ಗಳಿಕೆಗೆ ಮೂಲ ಅಜ್ಞಾನವೇ. ಅಂತೆಯೇ ಅಜ್ಞಾನಿಗಳಾದ ನಾವು ಜ್ಞಾನ ಪ್ರಾಪ್ತಿಗೊಳಿಸಿಕೊಳ್ಳಬೇಕೆಂಬ ಕ್ರಿಯೆಯೇ ಈ ದೀಪೋತ್ಸವ .  ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ  ಇದು ಒಮ್ಮೆ ಮಾತ್ರ ಮಾಡಿ ಮುಗಿಯಿತೆಂದು ಕೊಳ್ಳುವ ಕ್ರಿಯೆ ಖಂಡಿತ ಅಲ್ಲ . ಕತ್ತಲು ಮತ್ತೆಮತ್ತೆ ಮುಸುಕುವಂತೆ ಅಜ್ಞಾನವು ಅಡರುತ್ತಲೇ ಇರುತ್ತದೆ . ಹಾಗಾಗಿ ದೀಪ ಬೆಳಗುವಿಕೆ ಪುನರಾವರ್ತನ ಕ್ರಿಯೆ. ಅಗ್ನಿ ಬಲದ ದ್ಯೋತಕವಾದ ದೀಪ ಬೌದ್ಧಿಕ ಬಲ. ಇದಕ್ಕೆ ೭ಬಣ್ಣ ಹಾಗೂ ೭ ಜಿಹ್ವೆಗಳಿವೆ ಎನ್ನುತ್ತಾರೆ. ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಪಂಚೇಂದ್ರಿಯಗಳ ಜತೆ ಮನಸ್ಸು ಅಹಂಕಾರಗಳನ್ನು ಸಹ ಅಭಿವ್ಯಕ್ತಿಸುತ್ತದೆ .ದೀಪ  ಅನಂತ. ದೀಪದಿಂದ ದೀಪವನ್ನು ಬೆಳಗುತ್ತಾ ಹೋದಂತೆ ಅದು ಅಕ್ಷಯವಾಗಿ ಬಿಡುವುದಿಲ್ಲ. ಹಾಗೆಯೇ ಓದಿದಷ್ಟೇ ಜ್ಞಾನ ವಿಸ್ತರಿಸುತ್ತದೆ .  ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಮನಸ್ಸಿನ ತಮಸ್ಸನ್ನು ದುಷ್ಟಬುದ್ಧಿ ರಾಕ್ಷಸಿ ಪ್ರವೃತ್ತಿ ಮೊದಲಾದ ತಮೋ ಗುಣಗಳನ್ನು ವಿನಾಶ ಮಾಡುವ ಜ್ಞಾನದ ದೀಪವನ್ನು ಮನೆಮನೆಗಳಲ್ಲಿ ಬೆಳಗೋಣ . ಈ ದೀಪ ಪ್ರಜ್ವಲನೆಯ ಸತ್ಕಾರ್ಯ ಕೆಲ ಘಳಿಗೆ, ಕೆಲದಿನ  ಅಥವಾ 1ತಿಂಗಳಿಗೆ ಸಿಮೀತ ಗೊಳಿಸದೆ ಆಜೀವ ಪರ್ಯಂತದ ವ್ರತವಾಗಿ ನೋಮಿಯಾಗಿ ನೇಮವಾಗಲಿ .  ಕೆ ಎಸ್ ನರಸಿಂಹಸ್ವಾಮಿ ಅವರು ನುಡಿದಂತೆ ಬೆಳಕಿನಸ್ತಿತ್ವವನೆ  ಅಣಕಿಸುವ ಕತ್ತಲೆಗೆ  ತಕ್ಕ ಉತ್ತರವಿಲ್ಲಿ ಕೇಳಿ ಬರಲಿ  ದೀಪಾವಳಿಯ ಜ್ಯೋತಿ  ಅಭಯ ಹಸ್ತವನೆತ್ತಿ  ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ 

ತಮಸೋಮಾ ಜ್ಯೋತಿರ್ಗಮಯ Read Post »

ಇತರೆ

ಬದಲಾಗಲಿ ಕರ್ನಾಟಕದ ಸನ್ನಿವೇಶ

ಬದಲಾಗಲಿಕರ್ನಾಟಕದಸನ್ನಿವೇಶ ಇರಾಜ ವೃಷಭ ಎ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬ ಅಂದರೆ ಎಲ್ಲರೂ ಹೇಳೋದು ದೀಪಾವಳಿ, ದಸರಾ, ಗಣೇಶ ಚತುರ್ಥಿ, ನಾಗರಪಂಚಮಿ ಇತ್ಯಾದಿ. ಆದರೆ ಇದು ಅವರ ಪಾಲಿಗೆ ಹಬ್ಬಗಳಲ್ಲಿ ದೊಡ್ಡದಾದ ಹಬ್ಬ. ಪಟಾಕಿ ಶಬ್ದ, ಮೆರವಣಿಗೆ, ಡ್ಯಾನ್ಸ್, ಡಿಜೆ, ಕೋಲಾಟ, ಹಾಡು ಇತ್ಯಾದಿ ಆದರೆ ಸಮಯ ಮತ್ತು ಆಚರಿಸುವ ವಿಧಾನಗಳು ಎರಡು ಜಾಸ್ತಿನೇ.  ಅದೇನೊ ಖುಷಿ ಮತ್ತು ಸ್ವಾಭಿಮಾನ  ಈ ಹಬ್ಬವನ್ನು ಹೆಚ್ಚಾಗಿ ವಿಜ್ರಂಭಣೆಯಿಂದ ಆಚರಿಸುವಂತೆ ಮಾಡುತ್ತವೆ. ಆ ಹಬ್ಬವೇ ಕರ್ನಾಟಕ ರಾಜ್ಯೋತ್ಸವ. ಕನ್ನಡಿಗರ ಪಾಲಿಗೆ ಅದರಲ್ಲೂ ಬೆಳಗಾವಿಯಲ್ಲಿ ಅತಿ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಕನ್ನಡ ರಾಜ್ಯೋತ್ಸವವು ಒಂದು. ಹಳದಿ-ಕೆಂಪು ಬಾವುಟ, ಬಣ್ಣಬಣ್ಣದ ತೋರಣ, ತಾಯಿ ಭುವನೇಶ್ವರಿಗೆ ಮಾಡುವ ಸುಂದರ ಅಲಂಕಾರ, ಕಿತ್ತೂರರಾಣಿ ಚೆನ್ನಮ್ಮನ ಪ್ರತಿಮೆಗೆ ಸುತ್ತುವರೆದು ಹೂ ಗುಚ್ಚ ಅರ್ಪಿಸುವುದು,  ಭಿನ್ನ  ಮತ್ತು ವಿಭಿನ್ನ ರೀತಿಯಲ್ಲಿ ಸಂದೇಶ ಸಾರುವ ಕನ್ನಡದ ಘೋಷವಾಕ್ಯಗಳು, ಪರಿಸರ, ನೆಲ-ಜಲ ರಕ್ಷಿಸಿದ ಮಹಾತ್ಮರ ಭಾವಚಿತ್ರವಿಟ್ಟು ಪೂಜಿಸುವುದು, ಇದೆಲ್ಲದರ ಜೊತೆಗೆ ಕನ್ನಡ ನಾಡು ನುಡಿಗೆ ಗೌರವ ಕೊಡುವ ಕನ್ನಡ ನುಡಿಯ ಡಿಜೆ ಸಾಂಗ್ಸ್! ಅಬ್ಬಬ್ಬಾ!! ಮನಸ್ಸು ಮತ್ತು ಮೈ ಹೇಳದೆ, ಕೇಳದೆ ಕುಣಿದು ಬಿಡುತ್ತದೆ. ಅಲೆಗಳಂತೆ ಬರುವ ಜನಸಾಗರದಲ್ಲಿ ನೂಕುನುಗ್ಗಲು ಸಾಮಾನ್ಯ. ಅದರಲ್ಲಿ ನಾಮುಂದು, ತಾಮುಂದು ಎಂದು ಕುಣಿಯುವುದನ್ನು  ನೋಡುವುದು ಮತ್ತು ಅದರಲ್ಲಿ ಭಾಗಿಯಾಗುವುದಕ್ಕೆ ನಿಜಕ್ಕೂ ಅದೃಷ್ಟ ಮಾಡಿರಬೇಕು. ಕರ್ನಾಟಕದ ಮೂಲೆ ಮೂಲೆಗಳಿಂದ ಜನ ರಾಜ್ಯೋತ್ಸವ ನೋಡಲೆಂದೇ ಬರುತ್ತಾರೆ. ಮದ್ರಾಸ್, ಹೈದರಾಬಾದ್, ಮೈಸೂರು ಮತ್ತು ಮುಂಬೈ ಪ್ರಾಂತ್ಯಗಳಾಗಿ ಕರ್ನಾಟಕ ಹರಿದು ಹಂಚಿಹೋಗಿತ್ತು. ಅದನ್ನು ಸರಿಪಡಿಸಲು ಕಾರಣೀಭೂತರಾದ ನಿಜಲಿಂಗಪ್ಪ, ಬೆಳಗಲ್ ರಾಮರಾಯರು, ಹುಲ್ಲೂರು ಶ್ರೀನಿವಾಸ ಜೋಯಿಸ ಇನ್ನು ಮುಂತಾದ ಕೈಗಳಿಂದ ಭವ್ಯ ಮತ್ತು ಅಖಂಡ  ಕರ್ನಾಟಕವಾಗಿ ನಿರ್ಮಾಣವಾಗಿದೆ.  ೧೯೫೬ ರ ನವೆಂಬರ್ ೧ ರಂದು ಭಾಷಾವಾರು ಪ್ರಾಂತ್ಯಗಳಿಗೆ ಅನುವು ಕೊಟ್ಟಿದ್ದರಿಂದ, ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರಚನೆಯಾದವು ಎನ್ನುವುದು ಗೊತ್ತಿರುವ ಇತಿಹಾಸ.       ರಾಜ್ಯೋತ್ಸವದ ದಿನ ಬೆಳಗಾವಿಯಲ್ಲಿರುವ ಕನ್ನಡ ಬರದವನು/ ಬರದವಳು ಕೂಡ ಆಟೋಮೆಟಿಕ್ ಆಗಿ ಕನ್ನಡ ಮಾತನಾಡುತ್ತಾರೆ.  ಅದು ಹೇಗೆ ಅಂತ ತಿಳ್ಕೊಬೇಕು ಅಂದ್ರೆ, ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಜೀವನದಲ್ಲಿ ಒಂದು ಸಲನಾದರೂ ನೀವು ನೋಡಲೇಬೇಕು ಮತ್ತು ಆಚರಿಸಲೇಬೇಕು ಆದರೆ ಇನ್ನೊಂದು ಕಡೆ ಕರಾಳ ದಿನ ಆಚರಿಸುವ ಮೂರ್ಖರು ಕೂಡ ಅಲ್ಲೇ ತಂಗಿದ್ದಾರೆ. ಇತ್ತ ಕನ್ನಡ ರಾಜ್ಯೋತ್ಸವನ್ನು ಕನ್ನಡಿಗರು ಆಚರಿಸುತ್ತಿದ್ದರೆ ಅಲ್ಲೇ ಹುಟ್ಟಿ ಬೆಳೆದು ಕನ್ನಡ ನಾಡಿಗೆ ಕೇಡು ಬಗೆಯುವ ಜನರು ಕಪ್ಪುಬಟ್ಟೆ ಮತ್ತು ಧ್ವಜದ ಜೊತೆ ಕನ್ನಡದ ವಿರುದ್ಧ ಮಾತುಗಳನ್ನು ಆಡುತ್ತಾ ಪ್ರತಿಭಟನೆ ಮಾಡುತ್ತಾ ಇರುವುದು ನೋವಿನ ಸಂಗತಿ. ಈ ಘಟನೆ ಇಂದು ನಿನ್ನೆಯದಲ್ಲ. ಹೆಚ್ಚು ಕಮ್ಮಿ ಕರ್ನಾಟಕ ಏಕೀಕರಣವಾದಾಗಿನಿಂದ ನಡೆಯುತ್ತಾ ಬಂದಿದೆ. ಎಲ್ಲ ಸೌಲತ್ತುಗಳನ್ನು ಕರ್ನಾಟಕ ಸರ್ಕಾರದಿಂದ ಪಡೆದುಕೊಂಡು; ಅದೇ ನಾಡಿನ ವಿರುದ್ಧ ಘೋಷಣೆ ಕೂಗುವ ದ್ರೋಹಿಗಳನ್ನು ಈಗಲೂ ಕಾಣಬಹುದು. ಇದೆಲ್ಲವೂ ಬದಲಾಗಬೇಕಿದೆ. ನಾಡು-ನುಡಿಗೆ ಸರ್ಕಾರ ಮಾಡಬೇಕಾಗಿರೋದು ಬಹಳಷ್ಟಿದೆ. * ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡದ ಕಾರ್ಯಕ್ರಮಗಳಲ್ಲಿ ಕನ್ನಡ ಧ್ವಜ ಹಾರಿಸುತ್ತಿಲ್ಲ.  ಈ ಸಮಯದಲ್ಲಿ ದೇಶದ ತ್ರಿವರ್ಣಧ್ವಜ ಹಾರಿಸುತ್ತಿದ್ದಾರೆ. ಈ ಸಮಯದಲ್ಲಿ ತ್ರಿವರ್ಣಧ್ವಜದ ಅವಶ್ಯಕತೆ ಇಲ್ಲ ಮತ್ತು ಬೇಕಾಗಿಲ್ಲ. * ನಾಡಗೀತೆಯನ್ನು ಎಲ್ಲಿ, ಯಾವಾಗ, ಎಷ್ಟು ಸಮಯ ಬಳಸಬೇಕು ಎನ್ನುವುದು ಕಾನೂನಿನಲ್ಲಿ ಬದಲಾವಣೆಯಾಗಬೇಕು ಮತ್ತು ಅದು ರೂಢಿಕೃತ ವಾಗಬೇಕು. * ಮಕ್ಕಳಿಂದ ಹಿಡಿದು ಮುದುಕರ/ಮುದುಕಿಯರ ವರೆಗೆ ನಾಡ ಗೀತೆ, ನಾಡ  ದ್ವಜಕ್ಕೆ ಗೌರವ ನೀಡುವುದು ಕಡ್ಡಾಯವಾಗಬೇಕು( ಅಂದರೆ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ನೀಡುವ ಗೌರವದ  ಹಾಗೆ ನಾಡ ಗೀತೆ, ಮತ್ತು ನಾಡ ಧ್ವಜಕ್ಕೆ ನೀಡಬೇಕು) * ಗಡಿಜಿಲ್ಲೆಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ನಾಡಿಗೆ ಹಾನಿ ಉಂಟಾಗದಂತೆ ಅತಿ ಹೆಚ್ಚಿನ ಭದ್ರತೆಯನ್ನು ಸರ್ಕಾರ ಒದಗಿಸಬೇಕು. ರಾಜ್ಯ ಒಡೆಯುವ, ಕೆಡಕು ಬಯಸುವ ಮತ್ತು ಮಾಡುವ ವ್ಯಕ್ತಿ ಅಥವಾ ರಾಜಕಾರಣಿ ಯಾರೇ ಆಗಲಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. *  ಕರ್ನಾಟಕ ರಾಜ್ಯಕ್ಕೆ ಸೇರಿರುವ ಪ್ರತಿ ಶಾಲೆ-ಕಾಲೇಜು ಮತ್ತು ಕಚೇರಿಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಿಸಬೇಕು. ತಪ್ಪಿದ್ದಲ್ಲಿ ದಂಡ ವಸೂಲಾತಿ ಮತ್ತು ಶಿಕ್ಷೆಗೆ ಒಳಪಡಿಸಬೇಕು. *  ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಕನ್ನಡ ವಿಷಯದಲ್ಲಿ ಹೆಚ್ಚು ಪರಿಣಿತ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಮತ್ತು ಅದಕ್ಕೆ ತಕ್ಕಂತೆ ಇರುವ ಉದ್ಯೋಗಗಳನ್ನು ನೀಡಬೇಕು. ಈ ಮೇಲಿನವುಗಳನ್ನೆಲ್ಲಾ ಚಾಚೂತಪ್ಪದೆ ಪಾಲಿಸುವುದರಿಂದ ಮತ್ತು ರೂಢಿಕರಿಸುವುದರಿಂದ ಕರ್ನಾಟಕದಲ್ಲಿ ಕನ್ನಡಕ್ಕೆ ಯಾವುದೇ ಕೊರತೆ ಬರುವುದಿಲ್ಲ. ಕನ್ನಡರಾಜ್ಯ ಒಂದು ಬಲಿಷ್ಠ ರಾಜ್ಯವಾಗಿ ಎದ್ದು ನಿಲ್ಲುತ್ತದೆ. ಈ ತರಹದ ಬಲಿಷ್ಠ ರಾಜ್ಯವನ್ನು ಕಣ್ತುಂಬಿಕೊಳ್ಳಲು ಕನಸು ಕಟ್ಟಿದ ಅದೆಷ್ಟು ಕನ್ನಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ಎಲ್ಲ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. “ಜೈ ಕರ್ನಾಟಕ, ಜೈ ಕನ್ನಡ “

ಬದಲಾಗಲಿ ಕರ್ನಾಟಕದ ಸನ್ನಿವೇಶ Read Post »

ಇತರೆ

ನಿದ್ದೆ ಬಾರದಿದ್ದಾಗ

ಈ ಗೊರಕೆ ಅನ್ನೋದು ಖಾಯಿಲೆ ಏನೂ ಅಲ್ಲ.ಒಂದು ವಿಧದ ಡಿಸ್ ಆರ್ಡರ್ ಅಷ್ಟೇ. ಅಲ್ಲದೇ ಇದು ವಂಶ ಪಾರಂಪರ್ಯವಾಗಿ ಬಂದಿರುವ,ಅದರಲ್ಲೂ ನಮ್ಮಪ್ಪ,ಅಣ್ಣನಿಂದ ಬಂದಂತಹ ಕೊಡುಗೆ.ಅಷ್ಟು ಸುಲಭವಾಗಿ ಹೊರಟು ಹೋಗು ಅಂದ್ರೆ ಹೋಗದು

ನಿದ್ದೆ ಬಾರದಿದ್ದಾಗ Read Post »

You cannot copy content of this page

Scroll to Top