ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಹೀಗೇಕೆ ನನ್ನವ್ವ ?

ಲೇಖನ ಹೀಗೇಕೆ ನನ್ನವ್ವ ? ಸುಮಾ ಆನಂದರಾವ್       ಇಂದೇಕೆ ನನ್ನವ್ವ ಪದೇ ಪದೇ ನೆನಪಾಗುತ್ತಿದ್ದಾಳೆ? ಅವಳೇಕೆ ಹಾಗಿದ್ದಳು?                  ಜೆರ್ಮನಿಯಲ್ಲಿ  ಒಬ್ಬ  ವಯೋ ವೃದ್ಧೆಯ ಪರಿಚಯವಾದಂದಿನಿಂದ ಗಮನಿಸುತ್ತಿದ್ದೇನೆ.  ಅವಳ ದಿಟ್ಟತನ ಅಚ್ಚರಿ ಉಂಟುಮಾಡುತ್ತಿದೆ. ಅವಳು ತನ್ನೆಲ್ಲಾ  ಕರ್ತವ್ಯ ಮುಗಿಸಿದ್ದಳು, ಮಕ್ಕಳನ್ನು ಓದಿಸಿ ಅವರ ಕಾಲಮೇಲೆ ಅವರು ನಿಲ್ಲುವ ಹಾಗೆ ಮಾಡಿದ್ದಾಳೆ. ಆಗಾಗ ಮಕ್ಕಳು ಬಂದು ಹೋಗುತ್ತಿರುತ್ತಾರೆ. ತೊಂಬತ್ತು ವರ್ಷಆದರೂ ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾಳೆ, ಕೈಯಲ್ಲಿ ಕೋಲು  ಹಿಡಿದು ಸಣ್ಣ ನೂಕುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ತರುತ್ತಾಳೆ, ಇಲ್ಲಿ ಬಹಳಷ್ಟು ವಯಸ್ಸಾದವರು ನಡೆದೇ ಹೋಗುತ್ತಿರುತ್ತಾರೆ. ಅವರೆಲ್ಲರೂ ಬೈಸಿಕಲ್ ತುಳಿಯುವ ಪರಿ ನೋಡಿದರೆ ಗೊತ್ತಾಗುತ್ತದೆ ,  ಇದೆಲ್ಲ ಅವರಿಗೆ ಚಿಕ್ಕಂದಿನ ಅಭ್ಯಾಸ ಎಂದು. ಮೊಮ್ಮಕ್ಕಳನ್ನು ಅಜ್ಜ ಅಜ್ಜಿಯರು ಸುತ್ತಾಟಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ವಿಷಯಗಳನ್ನು ತಿಳಿಸುವ ಪರಿ ಬೆರಗು ಮೂಡಿಸುತ್ತದೆ. ಇಲ್ಲಿಯ ಸರಕಾರ ನಿವೃತ್ತಿ ವೇತನ ಕೈತುಂಬ ಕೊಡುತ್ತಾರೆ, ಅಂತೇಲೆವಯಸ್ಸಾದವರು  ಕಣ್ಣಗೆ ಕಂಡ ಬಟ್ಟೆ ತೊಟ್ಟು ಸಂತಸದಿಂದ ಉತ್ಸಾಹವಾದ ಜೀವನ ನಡೆಸುತ್ತಾರೆ. ಅವರಲ್ಲೂ ಮಮಕಾರಗಳು, ಅನುಬಂಧಗಳಿವೆ. ಮಕ್ಕಳು ಮೊಮ್ಮಕ್ಕಳು, ಅಕ್ಕ ತಂಗಿ ಹೀಗೆ ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದು ತಿಳಿದದ್ದು ಆ ಜರ್ಮನ್ ಮಹಿಳೆಯಿಂದ. ಆಕೆಗೆ ಬದುಕನ್ನು ಎದುರಿಸುವ ರೀತಿಯನ್ನು ಅವರಮ್ಮ ” ಕ್ರಿಸ್ಟಿನಾ”  ಹೇಳಿಕೊಟ್ಟಳಂತೆ.               ” ಕ್ರಿಸ್ಟಿನಾ” ಆಕೆಯ ಫೋಟೋ ನೋಡಿದಾಗ ತಟ್ಟನೆ ನನಗೆ ನನ್ನವ್ವ ನೆನಪಾದಳು. ಈಗ್ಗೆ ಆಕೆ ಇದ್ದರೆ ೧೩೦ ವರ್ಷ. ಬಹುಶಃ ನನ್ನವ್ವನ ಆಸುಪಾಸಿನವಳೇ. ಕ್ರಿಸ್ಟಿನಾ ಎಷ್ಟು ಚೆಂದ ಇದ್ದಾಳೆ! ಆಧುನಿಕ ಮಹಿಳೆಯಂತೆ ಅಲಂಕಾರ! ವಿದ್ಯಾವಂತಳು, ವಿಜ್ಜ್ನಾನಿ,  ಸಬಲೆ. ಇಲ್ಲಿ ಹೆಣ್ಣುಮಕ್ಕಳಿಗೆ ಶತ ಶತಮಾನಗಳಿಂದಲೂ ಸಮಾನತೆ, ಸ್ವತಂತ್ರತೆಯ ಹಕ್ಕು ಇತ್ತು. ಆದರೆ ನನ್ನವ್ವ ಏಕೆ ಹಾಗಿದ್ದಳು?               ಅವ್ವ ಎಂದರೆ ನಮ್ಮ ತಂದೆಯ ತಾಯಿ ಹನುಮಕ್ಕ. ಅವಳದು ನಾಗಸಮುದ್ರ ತವರು ಮನೆ, ಗಂಡನ ಮನೆ ಸಂಡೂರು ತಾಲೂಕಿನ ಬಂಡ್ರಿ . ಆಕೆಗೆ ಐದು ಗಂಡುಮಕ್ಕಳು ಎರೆಡು ಹೆಣ್ಣು ಮಕ್ಕಳು. ತುಂಬು ಕುಟುಂಬ, ಗಂಡ ಶಾನುಭೋಗರು ರಾಘಪ್ಪ ದತ್ತು ಪುತ್ರ. ಆತನ ಅಜ್ಜಿಪುಟ್ಟಮ್ಮ ಮಗಳ ಮಗ ಅಂದರೆ  ಮೊಮ್ಮಗನನ್ನು ತನ್ನ ಸಮಸ್ತ ಆಸ್ತಿಗೂ ವಾರಸುದಾರನನ್ನಾಗಿ ಮಾಡಿದ್ದಳು.               ನನ್ನವ್ವ ಹನುಮಕ್ಕನಿಗೆ  ಕೊನೆಯ ಮಗ ನಮ್ಮಪ್ಪ.  ಹಾಗಾಗಿ ಅವ್ವನಿಗೆ ವಯಸ್ಸಾಗಿತ್ತು. ನಾನು ಹನ್ನೆರೆಡು ವಯಸ್ಸಿಗೆ ಬರುವವರೆಗೂ ಮಾತ್ರ ಇದ್ದಳು. ತಂಗಿ ತಮ್ಮಂದಿರು ಹುಟ್ಟುವವರೆಗೂ ಅವ್ವನೇ ಗೆಳತಿ. ನನ್ನಮ್ಮ , ಅವ್ವನಿಗೆ ತಮ್ಮನ ಮಗಳು ಸೋದರ ಸೊಸೆಯನ್ನೇ ಮಗನಿಗೆ ತಂದುಕೊಂಡಿದ್ದಳು. ಅವ್ವ  ಒಳ್ಳೆಯ ಬಣ್ಣ. ಉದ್ದನೆಯ ಮೂಗು, ಪುಟ್ಟ ಬಾಯಿ  ನಿಜಕ್ಕೂ ಸುಂದರಿ. ಆದರೆ ಮಡಿ ಹೆಂಗಸು. ಅಂತಹವರು ಉಡುವ ಸೀರೆಗಳು ಬೇರೆ ರೀತಿಯೇ ಇರುತ್ತಿದ್ದವು . ಯಾವಾಗಲು ಸೆರಗು ಹೊದ್ದು ತಲೆ ಮುಚ್ಚಿಕೊಂಡಿರುತ್ತಿದ್ದಳು .  ನಾನು ಅವ್ವನ ಪಕ್ಕ ಮಲಗುತ್ತಿದ್ದೆ ರಾತ್ರಿ ಹೊತ್ತು ಅವಳನ್ನು ಹತ್ತಿರದಿಂದ ನೋಡಿ ನನ್ನ ಮುಗ್ದ ಮನಸ್ಸಿಗೆ ನೂರಾರು ಯೋಚನೆ ಬರುತ್ತಿತ್ತು. ಅವ್ವನೇಕೆ ಎಲ್ಲರಹಾಗಿಲ್ಲ?               ಅವಳ ಆ ವಿರೂಪವು ಪ್ರಶ್ನಾರ್ಥಕ ಚಿನ್ಹೆ ಯಾಗಿರುತ್ತಿತ್ತು. ಒಂದೊಮ್ಮೆ ನಾನು ”ಅವ್ವ ನೀ ಹೀಗೇಕೆ? ಎಲ್ಲರಂತೇಕಿಲ್ಲ? ಎಂದಾಗ ಏನು ಹೇಳದೆ ಕಣ್ಣ ತುಂಬ ನೀರು ತುಂಬಿದಳು. ಅದೆಷ್ಟು ನೋವನುಂಗಿದ್ದಳೋ ಕಣ್ಣೀರನ್ನು ಹೊರಗೆ ಬಿಡದೆ ತಡೆಯುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅವ್ವನ ಮೇಲೆ ಅಪಾರ ಪ್ರೀತಿ. ಪ್ರತಿದಿನ ರಾತ್ರಿ ನನ್ನ  ತಲೆಸವರುತ್ತಾ ಬಂಡ್ರಿ  ಕತೆಯನ್ನೆಲ್ಲ ಹೇಳುತ್ತಿದ್ದಳು.               ಬಂಡ್ರಿಯ ಜಮೀನ್ದಾರ  ಸಾಹುಕಾರ ರಾಗಪ್ಪನಿಗೆ ತನ್ನಪ್ಪ ತನ್ನನ್ನು ಮದುವೆ  ಮಾಡಿ ಕೊಟ್ಟಿದ್ದು, ಅಜ್ಜಿ ಮೊಮ್ಮಗ ಇಬ್ಬರೇ ಇದ್ದ ಆ ಮನೆಗೆ ತಾನು ಕಾಲಿಟ್ಟಿದ್ದು, ಆ ಸಿರಿವಂತಿಕೆ, ಮರ್ಯಾದೆ ಎಲ್ಲವನ್ನು ಕಂಡು ಕೊನೆ ಕಾಲಕ್ಕೆ  ಊರಿನ ವ್ಯಾಜ್ಯದಲ್ಲಿ ಮುಗ್ದ ರಾಗಪ್ಪನ ಕರಗಿದ ಆಸ್ತಿ  ಎಲ್ಲವನ್ನು ಸಹಿಸಿ  ಗಟ್ಟಿಯಾದ ಬಂಡೆಯಂತಾಗಿದ್ದಳು ನನ್ನವ್ವ.               ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಐದು ಗಂಡುಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ ಚತುರೆ ಅವ್ವ. ಊರಲ್ಲಿ ನಡೆಯುವ ಯಾವ ಕಲುಷಿತ ಗಾಳಿ ತನ್ನ ಮಕ್ಕಳ ಮೇಲೆ ಬೀಳದಂತೆ ತಡೆದು ಅವರನ್ನೆಲ್ಲ ಉಚ್ಛ ಹುದ್ದೆಗೆ ಸೇರಿಸಿದ ಧೈರ್ಯ ಮೆಚ್ಚಲೇಬೇಕು.               ತಾತ ತುಂಬಾ ಮೆದುಸ್ವಭಾವದವರಂತೆ ನಾನು ನೋಡಿರಲಿಲ್ಲ. ನನ್ನಪ್ಪನಿಗೆ ಕೆಲಸ ಸಿಕ್ಕ ಸಂತಸವನ್ನು ಊರೆಲ್ಲ ಹಂಚಿ  ಅಂದೇ ಇಹಲೋಕ ತ್ಯೆಜಿಸಿದರಂತೆ.  ಮಕ್ಕಳಿಗೆ ಹಾಸಿಗೆ ಇದ್ದುದರಲ್ಲಿ ಕಾಲು ಚಾಚು ರೀತಿ ಹೇಳಿಕೊಟ್ಟಿದ್ದು ಅವ್ವ. ಐದು ಜನರು ಒಳ್ಳೆಯ ಹುದ್ದೆಯಲ್ಲಿದ್ದರು. ಅವರ ವಿದ್ಯೆಯೇ ಅವರಿಗೆ ದಾರಿದೀಪವಾಗಿತ್ತು. ಅವ್ವ ಒಂದು ಮಾತು ಹೇಳುತ್ತಾ ಇದ್ದಳು “ಆಸ್ತಿ ಯಾವತ್ತೂ ಶಾಶ್ವತ  ಅಲ್ಲ ವಿದ್ಯೆ ಯಾವತ್ತೂ ಯಾರು ಕಸಿದುಕೊಳ್ಳದ ಆಸ್ತಿ”. ಅವ್ವನಿಗೆ ಆ ಊರು ಅಲ್ಲಿಯ ವ್ಯಾಜ್ಯಗಳು ಎಷ್ಟೊಂದು ಹೈರಾಣಗೊಳಿಸಿತ್ತೆಂದರೆ ತನ್ನ ಮಕ್ಕಳು ಯಾರು ಅಲ್ಲಿ ನೆಲೆಸಿಲ್ಲ ಎಂದು ಯಾವತ್ತೂ  ಕೊರಗುತ್ತಿರಲಿಲ್ಲ. ಬದಲಿಗೆ ಐದು ಜನರು ತಮ್ಮ ಕಾಲ ಮೇಲೆತಾವು ನಿಂತು ಅಚ್ಚುಕಟ್ಟಾಗಿ ಸಂಸಾರ ನಡೆಸುವುದ ಕಂಡು ಹೆಮ್ಮೆಪಟ್ಟುಕೊಳ್ಳುತ್ತಿದ್ದಳು.               ನಾಗಸಮುದ್ರದಿಂದ ನನ್ನವ್ವನ ತಮ್ಮ , ನನ್ನ ಅಮ್ಮನ ತಂದೆ  ತಾತ ಬಂದರೆ ಅಕ್ಕ ತಮ್ಮನ ಮಾತಿನ ಧಾಟಿ, ಉಭಯಕುಶಲೋಪರೀ, ಮಕ್ಕಳ ಬಳಿ ಹೇಳಲಾಗದ್ದನ್ನು ತಮ್ಮನ ಬಳಿ ಹೇಳುವುದು, ತಾತನೋ ಮಗಳು ಮೊಮ್ಮಕ್ಕಳ ಜೊತೆ ಅಕ್ಕನಿಗೂ ತವರು ಮನೆಗೆ ಕರೆದೊಯ್ಯುವುದು ಎಷ್ಟು ಚೆಂದ ಇತ್ತು! ತಾತನ ಪ್ರಭಾವ ಎಷ್ಟಿತ್ತೆಂದರೆ ಅಪ್ಪ ದೊಡ್ಡಪ್ಪಂದಿರೆಲ್ಲ ಅವ್ರಮ್ಮನನ್ನು ತಾತ ಕರೆದಂತೆ ತಾವು ಅಕ್ಕ ಅಂತೇಲೇ ಕರೆಯುತ್ತಿದ್ದರು.               ” ನನ್ನಕ್ಕ ತೆಳ್ಳಗೆ ಬೆಳ್ಳಗೆ ಹಣೆತುಂಬಾ ಕುಂಕುಮ ಇಟ್ಟು, ಜಡೆಹೆಣೆದ ಕೂದಲನ್ನು ತುರುಬು ಕಟ್ಟಿ, ಸಿಹಿ ನೀರ ಬಾವಿಯಿಂದ ತಲೆ ಮೇಲೊಂದು ಕೊಡ ಕೈಯ್ಯಲ್ಲೊಂದು ಕೊಡ ಹಿಡಿದು ಬರುತ್ತಿದ್ದಳು, ಆಗ ಎಷ್ಟು ಗಟ್ಟಿಮುಟ್ಟಾಗಿದ್ದಳು ಬಹಳ ಸುಂದರಿ ” ಎಂದು ತಮ್ಮ ಹೇಳುತ್ತಿದ್ದರೆ ನನ್ನವ್ವ ವಿಷಾದದ ನಗೆ ಬೀರುತ್ತಿದ್ದಳು. ಆ ನಗೆಯ ಹಿಂದೆ ಅದೆಷ್ಟು ನೋವಿತ್ತೋ               ಅವ್ವನಿಗೆ ಯಾರು ಹಾಗಿರಲು ಒತ್ತಾಯಮಾಡಿರಲಿಲ್ಲ, ಅಂದಿನ ಸಮಾಜಕ್ಕೆ ಹೆದರಿಯೋ ತನ್ನ ಗೆಳತಿಯರು ಅಕ್ಕತಂಗಿಯರಂತೆ  ತಾನಿರಬೇಕೆಂಬ ಭ್ರಮೆಯೋ ಒಟ್ಟಿನಲ್ಲಿ ವಿರೂಪಿಯಾಗಿದ್ದಳು.               ಇಂದು ಕ್ರಿಸ್ಟಿನಾಳ ಫೋಟೋ ನೋಡಿದಾಗಿಂದ ಮನದಲ್ಲೇನೋ ಹೊಯ್ದಾಟ. ನನ್ನವ್ವನಲ್ಲೂ ಅವಳಷ್ಟೇ ದಿಟ್ಟತನ, ಮಕ್ಕಳನ್ನು  ಸನ್ಮಾರ್ಗದಿ ಬೆಳೆಸುವ ಅಗಾಧ ಶಕ್ತಿ,ಕಷ್ಟಗಳನ್ನು ಸಹಿಸಿ ಕುಟುಂಬವನ್ನು ಮೇರು ಮಟ್ಟಕ್ಕೆ ತರುವಛಲ ಇವೆಲ್ಲ ಗಮನಿಸಿದಾಗ  ಅವಳೊಬ್ಬ ಕೌಟುಂಬಿಕ ವಿಜ್ಜ್ಞಾನಿಯಾಗಿದ್ದಳಲ್ಲವೇ ? ಮತ್ತೇಕೆ ಅವಳಿಗೆ ಆ ವಿರೂಪ?  ಅದು ಅವಳಿಗೆ ಹಿಡಿದ ಗ್ರಹಣವೇ?  ಗ್ರಹಣವಾಗಿದ್ದರೆ ಬಿಡಬೇಕಿತ್ತಲ್ಲವೇ? ಇಲ್ಲ ಅದು ಶಾಪ ಹೌದು ನನ್ನವ್ವ ಶಾಪಗ್ರಸ್ತೆ. ******************************************

ಹೀಗೇಕೆ ನನ್ನವ್ವ ? Read Post »

ಇತರೆ, ಜೀವನ

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ

ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ ನಿರ್ವಹಿಸಬಹುದಾದ ಶಿಕ್ಷಕ ವೃತ್ತಿಯನ್ನೇ ನಾನೂ ಪಡೆಯಲಿ ಅಂತ ಅಮ್ಮ ಹಂಬಲಿಸಿದ್ದು ಅದರಂತೆಯೇ ಆದದ್ದು ಈಗ ಭೂತಕಾಲ. ಇಬ್ಬರಿಗೂ ದೊಡ್ಡ ದೊಡ್ಡ ಆಸೆ ಹಂಬಲಗಳಿಲ್ಲ. ಆದರೆ ನನ್ನ ಆಲೋಚನೆ ಸರಳವಾಗಿರಲಿಲ್ಲ. ಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿಯೇ ಓದಿದ ನನಗೆ ಯಾರೂ ಮಾರ್ಗದರ್ಶಕರಿಲ್ಲದ್ದು, ಮುಂದಿನ ಹಂತದ ವಿದ್ಯೆ, ಉದ್ಯೋಗಗಳ ಪರಿಚಯವಿಲ್ಲದ್ದು ಹಿನ್ನಡೆ. ಸಣ್ಣಪುಟ್ಟ ಅವಕಾಶದಲ್ಲಿಯೇ ತುಂಬಾ ಪುಸ್ತಕಗಳನ್ನು ಓದುತ್ತಿದ್ದ ನನಗೆ ಪ್ರಾಥಮಿಕ ಪ್ರೌಢ ಹಂತ ಮುಗಿಯುತ್ತಿದ್ದಂತೆ ಶಿಕ್ಷಣ ಕ್ಷೇತ್ರ ಬೇಡವೆನಿಸತೊಡಗಿ ಬೇರೆ ಬೇರೆ ಸಾಧ್ಯತೆಗಳ ಕ್ಷೀಣ ಪರಿಚಯವಾಗತೊಡಗಿತ್ತು. ಶತಾಯ ನಿರಾಕರಿಸಿದರೂ ಮನೆಯ ಬಲವಂತಕ್ಕೆ ಕಡೆಗೂ ತರಬೇತಿಗೆ ಸೇರಿದ ಎರಡು ವರ್ಷಗಳು ಪಟ್ಟ ಹಿಂಸೆ ಮತ್ತು ಅಲ್ಲಿನ ಪರಿಸರ, ಸ್ನೇಹಿತರ ಒಲವಿನ ದಿನಗಳು ನನ್ನ ಮೇಲೆ ಅಧ್ಯಾಪಕರ ಕರುಣೆ, ಮೆಚ್ಚುಗೆ ಪ್ರೋತ್ಸಾಹ ಎಲ್ಲವೂ ನೆನಪಿನಲ್ಲಿವೆ. ಸದಾ ಚಡಪಡಿಸುತ್ತಿದ್ದ ನನ್ನ ಅಳಲಾಟವನ್ನು ಮನೆಯವರು ಕೇಳಿಸಿಕೊಳ್ಳದಿದ್ದರೂ ನನ್ನ ಅಧ್ಯಾಪಕರೂ ಸಹಿಸಿದ್ದು ಈಗಲೂ ಸೋಜಿಗ ನನಗೆ. ಶಿಕ್ಷಕ ವೃತ್ತಿ ಬೇಡವೆನಿಸದಿರಲೂ ಕಾರಣವಿತ್ತು. ಶೈಕ್ಷಣಿಕ ಸಾಮಾನ್ಯಜ್ಞಾನವನ್ನ  ಗಳಿಸಲು ತುಂಬಾ ಪ್ರಯತ್ನ ಪಡುತ್ತಿದ್ದ ನನಗೆ ಯಾವುದೇ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಯಾವತ್ತೂ ಪ್ರಥಮ ಸ್ಥಾನ. ಸ್ಥಳೀಯ, ಜಿಲ್ಲೆ, ರಾಜ್ಯ ಮಟ್ಟದ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನಗಳನ್ನ ಗಿಟ್ಟಿಸಿದ್ದರಿಂದಲೂ ತುಂಬಾ ಓದುತ್ತಿದ್ದುದರಿಂದಲೂ ಕೆ.ಎ.ಎಸ್‌ ಅಥವಾಐ.ಎ.ಎಸ್. ಮಾಡಬೇಕೆಂಬ ಹುಚ್ಚು ಹತ್ತಿತ್ತು. ಅದಾವುದೂ ಸಾಧ್ಯವಾಗದೇ ಖಿನ್ನತೆಗೆ ಬಿದ್ದೆ.ಖಿನ್ನತೆಯ ಪರ್ವ ಆರಂಭವಾದದ್ದು ಅಲ್ಲಿಂದಲೇ.ಕೆಲಸ ಸಿಕ್ಕ ಮೇಲೆ ಒಂದೆರಡು ಸಲ ಕೆ.ಎ.ಎಸ್. ಪರೀಕ್ಷೆ ಬರೆದು ಒಮ್ಮೆ ಮಾತ್ರ ಪ್ರಿಲಿಮಿನರಿಯಲ್ಲಿ ಯಶಸ್ವಿಯಾಗಿ ನಂತರ ಸಾಧ್ಯವಾಗದೇ ಪ್ರಯತ್ನವನ್ನೇ ಬಿಟ್ಟುಬಿಟ್ಟೆ. ಉದ್ಯೋಗವದಕ್ಕಿದ ಆಲಸ್ಯ ಜೊತೆಗೆತಿ ರುಗಾಟ, ಸಂಘಟನೆಯ ರುಚಿಯೂ ಕಾರಣ. ಇಷ್ಟವಿಲ್ಲದೇ ಬಹಳವೆಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ಉದ್ಯೋಗ ಹಿಡಿದು ನಂತರ ಓದುವುದು ಮುಂದುವರೆಸಿ ಬಿ.ಎ.  ಬಿ.ಎಡ್. ಎಂ.ಎ. ಮಾಡುವ ವೇಳೆಗೆ ಓದುವುದು ಸಾಕೆನಿಸಿತ್ತು.ರಂಗಭೂಮಿ, ಸಾಹಿತ್ಯ, ವಿಜ್ಞಾನ ಪರಿಷತ್ ಗೀಳು ಹಿಡಿದಿತ್ತು. ಒಂದಂತೂ ನಿಜ ನನ್ನ ಬೇರೆ ಬೇರೆ ಚಟುವಟಿಕೆಗೆ ನನ್ನ ಉದ್ಯೋಗ ಆತ್ಮವಿಶ್ವಾಸದ ದೀವಿಗೆ ಹಿಡಿದಿತ್ತು.ಸ್ವಾವಲಂಬನೆ ಬದುಕಿಗೆ ದಾರಿಯಾಗಿಯೂ, ಮನೆಯ ಆರ್ಥಿಕತೆಗೆ ಸಹಕಾರಿಯಾಗಿಯೂ ಒದಗಿಬಂತು. ಸತತ ೧೫ ಕ್ಕೂ ಹೆಚ್ಚು ವರ್ಷ ನನ್ನ ಓಡಾಟ, ರಂಗಭೂಮಿ ಚಟುವಟಿಕೆ, ಮೊದಲ ಬಾರಿಗೆ ಒಂದು ತಿಂಗಳು ರಜೆ ಪಡೆದು ನಾಟಕದಲ್ಲಿ ಅಭಿನಯಿಸಿದ್ದು, ಆ ಮೂಲಕ  ಶಿಕ್ಷಣದಲ್ಲಿ ರಂಗಕಲೆಯೆಂಬ ಎನ್.ಎಸ್.ಡಿ.ಯ ಮೂರು ತಿಂಗಳ ತರಬೇತಿ, ನಾಟಕ ನಿರ್ಮಾಣ, ಅಭಿನಯ, ಕಾಲೇಜುಗಳಲ್ಲಿ ಸತತವಾಗಿ ಸೆಮಿನಾರ್‌ಗಳು, ವಿಜ್ಞಾನ ಜಾಥಾಗಳು ಮೊದಲಾದ ಕ್ರಿಯಾತ್ಮಕತೆಗೆ ರಹದಾರಿಯೂ ಆಯಿತು.ಸುಮಾರು ಮೂರು ನಾಲ್ಕು ಬಾರಿ ಕರ್ನಾಟಕ ಸುತ್ತಿದ ಓಡಾಟದ ಹುಚ್ಚನ್ನ ಬೆಂಬಲಿಸಿದ್ದು ಇದೇ ಉದ್ಯೋಗ.ಯಾವುದೇ ಕೆಲಸಕ್ಕೂ ದಿಟ್ಟತನದಿಂದ ಮುನ್ನುಗ್ಗುವ ಪ್ರಕ್ರಿಯೆಯಿಂದ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳಿಗೆ ಅದೆಷ್ಟು ಮುಖ್ಯವೆಂಬುದನ್ನೂ ತಿಳಿಸಿಕೊಟ್ಟಿತ್ತು. ಇನ್ನು ನನ್ನ ನೌಕರಿಯ ಸ್ವರೂಪ ಸಹಜವಾಗಿ ವಯಸ್ಸಿನಲ್ಲಿ ಚಿಕ್ಕ ಮಕ್ಕಳೊಂದಿಗೆ ಒಡನಾಡುವುದು.ಅಷ್ಟೊತ್ತಿಗಾಗಲೇ ಈ ಹುದ್ದೆಗೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಜಿಲ್ಲೆಗೆ ಆರನೇ ಸ್ಥಾನ ಪಡೆದು ಶಾಲೆಯೊಂದನ್ನು ಆರಿಸಿಕೊಂಡು ತಾಲೂಕು ಕೇಂದ್ರದಿಂದ ೫ ಕಿ.ಮೀ. ಇದ್ದ ನಾಗತೀಹಳ್ಳಿ ಎಂಬ ಆ ಗ್ರಾಮವನ್ನು ತಲುಪಿದಾಗ ನಿಜಕ್ಕೂ ಖುಷಿಯಾಗಿತ್ತು.ಒಂದಿಷ್ಟು ಒಳ ಪ್ರದೇಶ, ಸುತ್ತ ತೋಟ, ಹಸಿರಿನ ನಡುವಿನ ಹೆಂಚಿನದಾದರೂ ಸುಸಜ್ಜಿತ ಕಟ್ಟಡ.ಸೊಗಸೋ ಸೊಗಸು. ಮತ್ತು ಆ ಕಾಲಕ್ಕೆ ಆಧುನಿಕವೇ ಆಗಿದ್ದಂತಹ ಶಾಲೆಯದು ಸ್ಥಾಪನೆಯಾಗಿ ಸರಿಯಾಗಿ ೫೦ ವರ್ಷವಾಗಿತ್ತು.ಆಶ್ಚರ್ಯವೆಂದರೆ ಆ ಶಾಲೆಯಲ್ಲಿ ಎಲ್ಲಾ ಬಗೆಯ ಸೌಲಭ್ಯಗಳಿದ್ದವು. ಮೂರು ಕೊಠಡಿಗಳು, ಅಡುಗೆಮನೆ, ಶೌಚಾಲಯ, ಆಟದ ಮೈದಾನ, ಪೀಠೋಪಕರಣ, ನೀರಿನ ವ್ಯವಸ್ಥೆ, ಕಲಿಕೋಪಕರಣಗಳು, ಸಂಗೀತೋಪಕರಣಗಳು, ಆಟದ ಸಾಮಗ್ರಿಗಳು, ಮತ್ತೂ ವಿಸ್ಮಯವೆಂದರೆ ವಿಜ್ಞಾನದ ಉಪಕರಣಗಳು ಇದ್ದವು..ಉದಾ. ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಪ್ರಯೋಗಾಲಯದಲ್ಲಿ ಉಪಯೋಗಿಸುವ ಸಾಮಗ್ರಿಗಳು, ಎಲ್ಲವೂ..ಏನುಂಟು ಏನಿಲ್ಲ.. ಅದು ಗ್ರಾಮವಾದರೂ ಇಡೀ ಗ್ರಾಮ ಒಂದೇ ಜನಾಂಗದವರು ಮತ್ತು ಎಲ್ಲರೂ ವಿದ್ಯಾವಂತರು, ಆರ್ಥಿಕವಾಗಿ ಸಬಲರು.ಅಷ್ಟರಲ್ಲಾಗಲೇ ಅಲ್ಲಿಗೂ “ಕಾನ್ವೆಂಟ್ ಶಿಕ್ಷಣದ ಬಿಸಿಗಾಳಿ ಸೋಕಿತ್ತು. ಕೆಲವರು ಇಂಗ್ಲೀಷ್ ಮಾಧ್ಯಮ ಆರಿಸಿಕೊಂಡು ಸಮೀಪದ ಆಂಗ್ಲ ಮಾಧ್ಯಮ ಶಾಲೆಗೆ ಆಟೋಗಳಲ್ಲಿ ಓಡಾಡುತ್ತಿದ್ದರೆ ಅಷ್ಟೇ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೂ ಬರುತ್ತಿದ್ದರು.ಸ್ವಚ್ಛವಾಗಿ, ಮುದ್ದಾಗಿ ಕಾಣುತ್ತಿದ್ದ ಬುದ್ದಿವಂತ ಮಕ್ಕಳವರು.ವೈವಿಧ್ಯ ಆಚರಣೆಗಳೂ ಆ ಗ್ರಾಮದಲ್ಲಿದ್ದವು. ವರ್ಷಕ್ಕೊಮ್ಮೆಕೆಂಡ ತುಳಿಯುವ ಅದ್ದೂರಿ ಜಾತ್ರೆ, ಹುಣ್ಣಿಮೆ ಅಮಾವಾಸ್ಯೆಗೆ ಕಟ್ಲೆಗಳು, ಮಾದೇಶ್ವರ ಮೊದಲಾದವು.ಶ್ರಾವಣದಲ್ಲಿ ಪ್ರತಿ ಸೋಮವಾರ ಮನೆಮನೆಗೆ ಹೋಗಿ ಕಂತೆಭಿಕ್ಷೆ ಎತ್ತಿ ಒಟ್ಟಿಗೆ ಊಟ ಮಾಡುವುದು ಮತ್ತು ಆ ಸಮಯದಲ್ಲಿ ಯಾವುದೇ ಅನ್ಯಜಾತಿಯವರಿಗೆ ಊರಿನೊಳಗೆ ಪ್ರವೇಶವಿಲ್ಲ. ಮರುಳಸಿದ್ದೇಶ್ವರ ಗ್ರಾಮದೇವರಾದ್ದರಿಂದ ಅನ್ಯರ ಪ್ರವೇಶ ನಿಷಿದ್ಧ.ಊರಿನೊಳಗೆ ಮಾಂಸ, ಮದ್ಯ ಕೂಡ ತರುವಂತಿರಲಿಲ್ಲ ಮಾತ್ರವಲ್ಲ ಸೇವಿಸಿಯೂ ಬರುವಂತಿರಲಿಲ್ಲ.ನಮ್ಮಲ್ಲಿದ್ದ ಒಬ್ಬ ಮುಸ್ಲಿಂ ಮೇಷ್ಟಿಗೆ ಆ ದಿನ ಅಲಿಖಿತ ರಜೆ. ಮಾದೇಶ್ವರ ಹಾಗೂ ಕಟ್ಲೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಹೀಗೆ ಸಣ್ಣಪುಟ್ಟ ನಿರ್ಬಂಧಗಳಿದ್ದ ಊರದು.ಮುಖ್ಯವಾಗಿ ಆ ಊರಿನ ಮಂದಿ ವೀರಗಾಸೆಯಲ್ಲಿ ಪರಿಣತರು. ಕಾರ್ಯಕ್ರಮಗಳಿಗಾಗಿ ದೇಶ ವಿದೇಶ ಸುತ್ತಿದ್ದರು.ಈ ಎಲ್ಲವನ್ನೂ ಸಾಂಸ್ಕೃತಿಕ ದೃಷ್ಟಿಕೋನದಿಂದ ನೋಡಲು ಕಲಿಯಲು ಸಾಧ್ಯವಾಯಿತು. ಒಂದಿಷ್ಟು ಮುನಿಸಿನಲ್ಲಿಯೇ ನವಂಬರ್ ೧ ರಂದು ಹುದ್ದೆ ಸ್ವೀಕರಿಸಲು ತೆರಳಿದೆ.ಅಲ್ಲಿನ ವಾತಾವರಣಕಂಡು ಮನಸ್ಸಾಗಲೇ ಅರಳಿತ್ತು.ಅಮ್ಮನ ಶ್ರಮದ ಫಲ ಈ ನೌಕರಿ.ಅವರಿಗಂತೂ ಹಿಗ್ಗು. ಆ ದಿನ ಅವರೂ ಜೊತೆಗಿದ್ದರು.ಅಕ್ಟೋಬರ್ ೨೫ ರಂದು ಆದೇಶ ಸ್ವೀಕರಿಸಿದರೂ ೫ ದಿನಗಳ ತರಬೇತಿ ಮುಗಿಸಿ ಶಾಲೆಗೆ ಪಾದವಿಟ್ಟದ್ದು ನವಂಬರ್ ೧ ನೇ ತಾರೀಕು.ಏಳನೇ ತರಗತಿಯವರೆಗೆ, ನಾಲ್ಕು ಮಂದಿ ಶಿಕ್ಷಕರಿದ್ದ ಶಾಲೆ. ವಿದ್ಯಾರ್ಥಿಗಳ ಸಂಖ್ಯೆಯೂ ಪರವಾಗಿಲ್ಲ ಎನ್ನುವಷ್ಟು.ಏಳನೇ ತರಗತಿಯವರಂತೂ ನನ್ನ ಎತ್ತರವೇ ಇದ್ದರು.ನಂತರ ಗೆಳೆಯರಾದರು.ಸಹೋದ್ಯೋಗಿಗಳ ಸಹಕಾರವಂತೂ ಬಹಳ ಸ್ಮರಣೀಯ.ಪರಸ್ಪರ ಸಹಕಾರ.ಪ್ರಬುದ್ಧ ನಡೆ, ಏನೇ ಕೆಲಸ ಮಾಡಬೇಕಿದ್ದರೂ ಮಾತನಾಡಿಕೊಂಡು ಆಚರಣೆಗೆ ತರುವುದು, ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವಿಕೆ ಮೊದಲಾದ ಸ್ನೇಹ ಸೌಹಾರ್ದತೆಯಿತ್ತು.ಊರಿನ ಮಂದಿಯೂ ಅಷ್ಟೆ,  ಆ ಊರಲ್ಲಿದ್ದಷ್ಟೂ ದಿನ ಸಂಪರ್ಕ-ಸಹಕಾರಕ್ಕೇನೂ ಕೊರತೆಯಿರಲಿಲ್ಲ. ಬರೋಬ್ಬರಿ ೧೯ ವರ್ಷಗಳು ಒಂದೇ ಶಾಲೆಯಲ್ಲಿ ಸೇವೆ ನಿರ್ವಹಿಸಿದರೂ ಒಂದೇ ಒಂದು ಕಪ್ಪುಚುಕ್ಕಿಯಿಲ್ಲದೇ ಕೆಲಸ ಮಾಡಿದೆ. ಇವತ್ತಿಗೂ ಅಲ್ಲಿನ ಮನೆಮಗಳು ನಾನು.೧೫೦ ಮನೆಗಳಿರುವ ಗ್ರಾಮದಲ್ಲಿ ಯಾರ ಮನೆಗೆ ಕಾಲಿಟ್ಟರೂ ಆತಿಥ್ಯಕ್ಕೇನೂ ಬರವಿಲ್ಲ. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಇಬ್ಬರು ಶಿಕ್ಷಕರಾಗಿ ತರಗತಿಗಳೂ ಕಡಿಮೆಯಾದವು.ಊರೊಳಗೆ ನಾಲ್ಕೈದು “ಕಾನ್ವೆಂಟ್” ಬಸ್ಸುಗಳು ಕಾಲಿಟ್ಟವು. ನಾವು ಏನೇ ಆಶ್ವಾಸನೆಕೊಟ್ಟರೂ ಪೋಷಕರ ಅಕ್ಕ ಪಕ್ಕದ ಮನೆಗಳ ಮಕ್ಕಳೊಡನೆ  ಹೋಲಿಕೆ ಪ್ರಾರಂಭವಾಗಿ ನಮ್ಮ ಮಕ್ಕಳೆಲ್ಲರೂ ಆಂಗ್ಲಮಾಧ್ಯಮ ಆರಿಸಿಕೊಂಡು ಸರ್ಕಾರಿ ಶಾಲೆಯ ಕೊಠಡಿಗಳಿಗೆ ಬೀಗ ಹಾಕಿಸಿಯಾಯಿತು. ಅದಕ್ಕೂ ಮೊದಲು ಅಲ್ಲಿನ ಕರ್ತವ್ಯದ ಅವಧಿ ನಿಜಕಕೂ ಮರೆಯಲಾರದಂತದ್ದು.ವಿದ್ಯಾರ್ಥಿಗಳೊಂದಿಗೆ ಸಾಕಷ್ಟು ಪ್ರಯೋಗ ಮಾಡಿದೆ.ಪಠ್ಯಕ್ರಮವಲ್ಲದೇ ಬೇರೆ ಬೇರೆ ವಿಷಯಗಳನ್ನು ತಿಳಿಸಿ ಹೇಳುತ್ತಿದ್ದುದೇ ಹೆಚ್ಚು.ನನ್ನ ವಿಜ್ಞಾನ,ರಂಗಭೂಮಿಯ ಸಂಪರ್ಕ ಬಳಸಿಕೊಂಡು ಸಾಕಷ್ಟು ಕೆಲಸ ಮಾಡಿದೆ.ಪಠ್ಯಗಳನ್ನೆಲ್ಲ ರಂಗಕಲೆಯ ಮೂಲಕವೇ ಬೋಧನೆ ಮಾಡುತ್ತಿದ್ದುದು.ವಿಜ್ಞಾನ ಯೋಜನೆಗಳನ್ನು ತಯಾರಿಸಿಕೊಂಡು ಮಕ್ಕಳು ಬೇರೆ ಬೇರೆ ಕಡೆ ಪ್ರದರ್ಶನ ಕೊಟ್ಟವು. ವಿಜ್ಞಾನ ನಾಟಕಗಳನ್ನು ಮಾಡಿಸಿದೆ. ಪಠ್ಯೇತರ ಪರೀಕ್ಷೆಗಳನ್ನು ಕಟ್ಟಿಸಿದೆ.ಶಾಲೆಯಲ್ಲಿದ್ದ ವಿಜ್ಞಾನದ ಸಾಮಗ್ರಿಗಳನ್ನು ಬಳಸಿ ಪ್ರಯೋಗಗಳನ್ನು ಕೈಗೊಂಡೆವು.ಆಟದ ವಸ್ತುಗಳು, ಸಂಗೀತೋಪಕರಣಗಳು, ಗಣಿತ ಕಿಟ್‌ಗಳನ್ನು ಸಮರ್ಥವಾಗಿ ಬಳಸಿದೆವು.ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಸತತವಾಗಿ ೫-೬ ವರ್ಷ ಬಹುಮಾನ ಗಳಿಸಿದರು.ಪ್ರತಿಭಾಕಾರಂಜಿಯಲ್ಲಿ ಪ್ರಶಂಸೆ ಗಿಟ್ಟಿಸಿದರು.ವಾರಕ್ಕೊಮ್ಮೆ ಪರಿಸರದೆಡೆಗೆ ಯಾತ್ರೆ ಸಾಗುತ್ತಿತ್ತು.ಅನೇಕ ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳೇ ಬೆಳೆಸಿದರು. ವಿಜ್ಞಾನ ಪರಿಷತ್ ಸಹಯೋಗದಲ್ಲಿ ಶಾಲೆಯ ಪಕ್ಕದಲ್ಲಿದ್ದ ಬಯಲಿನಲ್ಲಿ ನೂರಾರುಗಿಡ ನೆಟ್ಟೆವು. ಕೈತೋಟ ಮಾಡಿದೆವು.ಜನಗಳಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆವು.ಮಕ್ಕಳೊಂದಿಗೆ ಸಿನೆಮಾ ನೋಡಿದೆವು.ಪಿಕ್‌ನಿಕ್ ಹೋದೆವು.ಪಠ್ಯ ಹಾಗೂ ಪಠ್ಯೇತರ ವಿಷಯಗಳೆರಡೂ ಯಶಸ್ವಿಯಾಗಿ ಜತೆಜತೆಗೇ ಸಾಗಿತ್ತು.ಅಕ್ಷರದಾಸೋಹ ಆರಂಭವಾದಾಗ ಶುಚಿ ರುಚಿ ಆಹಾರ ಪೂರೈಸಿದೆವು.ಮಕ್ಕಳ ಆರೋಗ್ಯತಪಾಸಣೆ ಮಾಡಿಸಿದೆವು.ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿದೆವು. ಎರಡು ಬಾರಿ ಬೇಸಿಗೆಯಲ್ಲಿ ಶಿಬಿರವನ್ನೂ ಏರ್ಪಡಿಸಿ ಊರಿನ ಮಕ್ಕಳನ್ನು ಸೇರಿಸಿ ರಂಗತರಬೇತಿಯನ್ನೂ ಕೊಡಿಸಿದ್ದಾಗಿತ್ತು.ವಿದ್ಯಾರ್ಥಿಗಳು ಅದ್ಭುತವಾಗಿ ಪ್ರದರ್ಶನ ನೀಡಿದ್ದರು.ಅಷ್ಟೇ ಅಲ್ಲದೇ ತೀರಾ ಇತ್ತೀಚೆಗೆ ಶಾಲೆಯನ್ನು ಮುಚ್ಚುವ ಮುನ್ನ ಹೊರಗಿನ ರಂಗ ತಂಡಗಳನ್ನು ಕರೆಸಿ ನಾಟಕೋತ್ಸವವನ್ನೂ ಆಯೋಜಿಸಿದ್ದೆವು.  ಈ ಎಲ್ಲಾ  ಚಟುವಟಿಕೆಗಳಿಗೂ ನಮ್ಮ ಮೇಷ್ಟುಗಳ  ಸಹಕಾರವಿತ್ತು. ಮಹತ್ವದ ವಿಷಯವೆಂದರೆ ಬಹಳಷ್ಟು ಮಂದಿ ಖ್ಯಾತನಾಮರು ಶಾಲೆಗೆ ಕಾಲಿಟ್ಟದ್ದು.ಅರಸೀಕೆರೆ ಮೂಲಕ ಹಾದು ಹೋಗುವ ಗೆಳೆಯರು, ಹಿರಿಯ ಲೇಖಕರು.ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ಅಧಿಕಾರಿಗಳು ನನ್ನನ್ನು ಸಂಪರ್ಕಿಸಿ ಕರೆ ಮಾಡಿ ಶಾಲೆಗೆ ಭೇಟಿಕೊಟ್ಟು ಹೋಗುತ್ತಿದ್ದದು ಸ್ಮರಣೀಯ ಸಂಗತಿ. ಹೆಸರು ಪಟ್ಟಿ ಮಾಡಿದರೆ ಅನೇಕವಾದೀತು. ಅವರಿಗೆಲ್ಲಾ ಶಾಲೆಯ ಆತಿಥ್ಯದಕ್ಕುತ್ತಿತ್ತು.ಸರಳ ಸಾಮಾನ್ಯರಂತೆ ಅವರೂ ಮಕ್ಕಳೊಂದಿಗೆ ಬೆರೆಯುತ್ತಿದ್ದaರು. ಧನಾತ್ಮಕ ಅಂಶಗಳನ್ನಷ್ಟೇ ದಾಖಲಿಸಿದೆನೇನೋ. ಋಣಾತ್ಮಕವಾಗಿ ವಿಷಯಗಳು ಸಾಕಷ್ಟು ಕಾಡಿದರೂ ಸಂತೋಷದ ಸಂಗತಿಗಳೆದುರು ಅವು ಕಾಲಕ್ರಮೆಣ ಮಾಸಿಹೋಗುವಂತವು.ಕೆಲವು ಕಿರಿಕಿರಿಗಳಾದವು. ನಾನೂ ಸಹ ಈ ಕೆಲಸದ ವಿಷಯಕ್ಕೆ ಕೆಲವೊಮ್ಮೆ ಉದಾಸೀನ ಮಾಡಿದ್ದಿದೆ.ಚಿಕ್ಕ ಪ್ರಾಯದಲ್ಲಿ ಕೆಲವು ತಪ್ಪು ಮಾಡಿದ್ದಿದೆ. ನೂರಕ್ಕೆ ನೂರಷ್ಟೇನೂ ಪ್ರಾಮಾಣಿಕವಾಗಿ ಕೆಲಸ ಮಾಡದಿದ್ದರೂ ವಿದ್ಯಾರ್ಥಿಗಳ ವಿಷಯದಲ್ಲಿ ಮಾತ್ರ ಯಾವುದೇ ತಾರತಮ್ಯಅಥವಾ ಅಸಡ್ಡೆ ಮಾಡಿದ್ದಿಲ್ಲ. ನನ್ನ ಕನಸುಗಳನ್ನು ಕೊಂದು ಹಾಕಿದ ಉದ್ಯೋಗವಿದೆಂದು ಅನೇಕ ಬಾರಿ ತೀರಾ ಖಿನ್ನತೆಗೆ ಬಿದ್ದು ಕೆಲಸ ಬಿಟ್ಟುಬಿಡುತ್ತೇನೆಂದಿದ್ದು ಅದೆಷ್ಟು ಸಲವೋ.ಅಸಾಧ್ಯ ನೆನಪಿನ ಶಕ್ತಿ ಕುಂದಿತೆಂದು ಪರಿತಾಪ ಪಟ್ಟಿದದೆಷ್ಟೋ.ಉದ್ವೇಗಕ್ಕೊಳಗಾಗಿ ಸಂಘಟನೆಯೆಡೆ ತೀವ್ರ ತೊಡಗಿಸಿಕೊಂಡು ತಾತ್ಕಾಲಿಕವಾಗಿ ಮರೆತದ್ದಿದೆ.ಸ್ವಾಭಿಮಾನಿತನವನ್ನು ದಕ್ಕಿಸಿದ ಉದ್ಯೋಗವೆಂದು ಸಮಾಧಾನ ಪಟ್ಟಿದ್ದಿದೆ.ಈಗಂತೂ ನಿರ್ಲಿಪ್ತ. ಶಾಲೆ ಮುಚ್ಚಿದ್ದು ನನ್ನ ಪಾಲಿಗೆ ಹಿನ್ನಡೆ.ಕನ್ನಡ ಮಾಧ್ಯಮದಲ್ಲಿ ಭವಿಷ್ಯವಿಲ್ಲವೆಂದು ಆಂಗ್ಲ ಮಾಧ್ಯಮ ಅರಸಿ ಹೋದ ಪೋಷಕರನ್ನು ಮನವೊಲಿಸಲು ಪ್ರಯತ್ನಿಸಿದರೂ ನನ್ನ ಮನೆ ಮಕ್ಕಳು ಅದೇ ಆಂಗ್ಲ ಮಾಧ್ಯಮದಲ್ಲಿ ಭವಿಷ್ಯ ಅರಸುವಾಗ, ಪೋಷಕರು ಆ ಕುರಿತು ಪ್ರಶ್ನಿಸುವಾಗ ಉತ್ತರ ತೋಚದೇ ಸುಮ್ಮನಾಗಿದ್ದೇನೆ. ಇಂಗ್ಲೀಷ್‌ನ ಪ್ರಭಾವಕ್ಕೆ ಸಿಲುಕಿದ ಮತ್ತು ಅಲ್ಲಿಯೇ ಮಕ್ಕಳ ಉಜ್ವಲ ಬೆಳಗನ್ನು ನಿರೀಕ್ಷಿಸುವ ತಂದೆತಾಯಿಗಳ ಮಹತ್ವಾಕಾಂಕ್ಷೆಯೂ ತಪ್ಪೆಂದು ಹೇಳಲಾಗದು. ಸತತ ಇಪ್ಪತ್ತು ವರ್ಷಗಳ ಶಿಕ್ಷಣ ಇಲಾಖೆ ನೀಡಿದ ಅಪಾರ ಅನುಭವದ ಅನೇಕ ದಿನಾಂಕ ಹಾಗೂ ದಿನಗಳು ಇಲ್ಲಿ ಸಂಕ್ಷಿಪ್ತವಾಗಿ ದಿನಚರಿಯಂತೆ ಮಾಹಿತಿ ದಾಖಲಿಸಿವೆ. ಸದ್ಯಕ್ಕೆ ಸಿ.ಆರ್.ಪಿ.ಯಾಗಿ ನನ್ನ ವಲಯಕ್ಕೆ ಸೇರಿರುವ  ಸರ್ಕಾರಿ ಶಾಲೆಗಳಲ್ಲಿ  ಬಹಳಷ್ಟು ಕೆಲಸ ಮಾಡಬೇಕೆಂಬ ಆಶಯವಿದೆ.ಇಲ್ಲೀವರೆಗಿನ ಸಹಾಯ ಸಹಕಾರಕ್ಕಾಗಿ ಗ್ರಾಮಸ್ಥರಿಗೂ, ಇಲಾಖೆಯ ಸಹದ್ಯೋಗಿಗಳಿಗೂ, ಸಹೃದಯ ಅಧಿಕಾರಿಗಳಿಗೂ, ಶಿಕ್ಞಣ ಇಲಾಖೆಗೂ ಆಭಾರಿ. **************************************

ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ Read Post »

ಇತರೆ, ಜೀವನ

ಬದಲಾದ ಕಾಲಕ್ಕೆ ಹಳ್ಳಿಯ ಬದುಕು

ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ  ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು ವ್ಯಕ್ತಿಗಳು ಮಾತ್ರ ಈ ವ್ಯವಸ್ಥೆಯ ವಿರೋಧಿಸಿ ಹೊರನಡೆದಿರಬಹುದು. ಶಾಲಾ ಶಿಕ್ಷಣದ ಜೊತೆ ಜೊತೆಗೆ ಹಿರಿಯರ ಮೂಲಕ ಅನೌಪಚಾರಿಕವಾಗಿ ಜೀವನ ಮೌಲ್ಯಗಳು ಒಟ್ಟುಗೂಡಿ ಮುಂದಿನ ಬದುಕಿಗೆ ಮೆರುಗು ತರುತ್ತಿದ್ದವು.ಹಳ್ಳಿಯ ಶಾಲೆಯಲ್ಲಿ ಕಲಿತ ನನ್ನನ್ನೂ ಒಳಗೊಂಡಂತೆ ಸಾವಿರಾರು ಕನಸುಗಳಿಗೆ ರೆಕ್ಕೆ ಹಚ್ಚಿದ್ದು ನಮ್ಮ ಹಳ್ಳಿಯೇ . ಇಲ್ಲಿಗೆ ಸುಮಾರು ಐವತ್ತು – ಅರವತ್ತು ವರ್ಷಗಳ ಹಿಂದಿನ ಜೀವನ ಬಹಳ ಕಠಿಣವಾಗಿತ್ತು. ಹೀಗಂತ ನನ್ನ ಅಪ್ಪ ಲೆಕ್ಕವಿಲ್ಲದಷ್ಟು ಸಲ ನಮ್ಮ ಬಳಿ ಹೇಳಿದ್ದಾರೆ. ಅವರು ವಾಸಿಸುತ್ತಿದ್ದ ಮನೆಯಲ್ಲಿ ಕನಿಷ್ಟ ಮೂವತ್ತು ಮಂದಿ ಇರುತ್ತಿದ್ದರು. ಊಟವೆಂದರೆ ಅವರಿಗೆ ಮೂಲಭೂತ ಅವಶ್ಯಕತೆ ಆಗಿತ್ತು. ಕಾರಣ ಈಗಿನಷ್ಟು  ಸುಖ ಸಮೃದ್ಧಿಯ ಭೋಜನವಿರುತ್ತಿರಲಿಲ್ಲ. ಅನ್ನದ ಊಟವೆಂದರೆ ಅದು ಹಬ್ಬ ಹರಿದಿನಗಳಿಗೆ ಮಾತ್ರವಂತೆ. ರಾತ್ರಿ ರೊಟ್ಟಿ ಊಟವಾದರೆ ಒಂದೆರಡು ರೊಟ್ಟಿಗಳನ್ನು ಪಲ್ಯದ ಸಮೇತ ಸುತ್ತಿ ಜೋಡಿಸಿಟ್ಟ  ಜೋಳದ ಚೀಲಗಳ ನಡುವೆ ಬಚ್ಚಿಡುತ್ತಿದ್ದರಂತೆ.ಅದು ರಹಸ್ಯವಾಗಿ ಬೆಳಗಿನ ತಿಂಡಿಗಾಗಿ.ಶಾಲೆಗೆ ಹೋಗುವಾಗ ತಿನ್ನುವುದಕ್ಕಾಗಿ. ಕಾರಣ ಈಗಿನಂತೆ ಮಕ್ಕಳ ಕೈತಿಂಡಿ ಇರುತ್ತಿರಲಿಲ್ಲ. ಹಾಗಾಗಿಯೇ ಅವರು ಸದೃಢ ವಾಗಿದ್ದಿರಬೇಕು. ಬಟ್ಟೆಗಳೂ ಕೂಡ ಅತಿ ಕಡಿಮೆ . ಆದರೆ ನಮ್ಮ ಈಗಿನ ಬದುಕು ವಿಭಿನ್ನವಾದ ನೆಲೆ ಕಂಡುಕೊಂಡಿದೆ. ಎಲ್ಲವೂ ಕೈಗೆಟುಕುವ ಅಂತರದಲ್ಲೇ ಇವೆ . ಸಾವೂ ಕೂಡಾ ಅಲ್ಲವೇ? ನಮ್ಮ ಹಿಂದಿನ ಹಳ್ಳಿ ಹಾಡು ಪಾಡು ಕಷ್ಟಕರ ವಾಗಿದ್ದಿರಬಹುದು. ಆದರೆ ಈಗಿನಂತೆ ಇರಲಿಲ್ಲ. ಎಲ್ಲವೂ ನಗರೀಕರಣದ   ಪ್ರಭಾವ . ಅನುಕರಿಸಿದ್ದು ತುಸು ಹೆಚ್ಚೇ ಆಯಿತಲ್ಲವೇ? ಆಧುನಿಕತೆಯ ಸೋಗಿಗೆ ಮುಗ್ಧ ಜನರು ಗುರುತೇ ಸಿಗದಷ್ಟು ಬದಲಾದರು. ಕುಟುಂಬಗಳು ಒಡೆದವು ಹಾಗೆಯೇ ಭಾವನೆಗಳೂ. ಮೊದಲೆಲ್ಲ ಬೀದಿಯಲ್ಲಿ ಜಗಳಗಳು ಸಾಮಾನ್ಯವಾಗಿ ಇದ್ದವು. ಅಲ್ಲಿಗೆ ಮಾತು ನೇರವಾಗಿ ಮುಗಿಯುತ್ತಿದ್ದವು. ಆದರೆ ಈಗ ಮುಸುಕಿನೊಳಗಿನ ಗುದ್ದಾಟ. ಮಾತುಗಳಿಲ್ಲದ ಒಳಗೊಳಗಿನ ಕಿಚ್ಚುಗಳು, ಸಲ್ಲದ ಮಾತುಗಳು. ನಿಜಕ್ಕೂ ಹಳ್ಳಿಗಳು ಬದಲಾಗಬಾರದಿತ್ತು. ಸೌಕರ್ಯಗಳಿಗೆ ಮನಸೋತ ಮಂದಿ ನೆಮ್ಮದಿಯನ್ನು ಬಲಿನೀಡಿದ್ದಾರೆ. ಹೊಲಗದ್ದೆಗಳು ಕ್ರಮೇಣ ತೋಟಗಳಾದವು. ಆಹಾರ ಬೆಳೆಗಳು ಮರೆಯಾಗಿ ವಾಣಿಜ್ಯ ಬೆಳೆಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. ಮೊದಲಾದರೆ ವಸ್ತುಗಳ ವಿನಿಮಯದ ಮೂಲಕವೇ ಜೀವನ ನಡೆಯುತ್ತಿತ್ತು. ಮನೆಯಲ್ಲಿ ಎಲ್ಲವೂ ಚೀಲದಲ್ಲಿ , ಹಗೇವು ಅಥವಾ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದವು‌. ಆದರೆ ಈಗ ಹಳ್ಳಿಗಳಲ್ಲಿ ಭತ್ತ, ರಾಗಿ, ಜೋಳ, ಅವರೆ, ಉದ್ದು, ಕಡಲೆ ಹೀಗೆ ಬೆಳೆಗಳೇ ಇಲ್ಲ. ಮನೆಯಲ್ಲಿ ದನಕರುಗಳೂ ಇಲ್ಲ. ಸಾಕುವವರಿಲ್ಲದೇ ಎಲ್ಲವೂ ಮಾರಲ್ಪಟ್ಟವು. ಸ್ವಂತಿಕೆಯೂ ಬಿಕರಿಯಾಯಿತು ಈ ನಡುವೆ. ಎತ್ತುಗಳಿಲ್ಲದ ಜಾಗಕ್ಕೆ ಟ್ರ್ಯಾಕ್ಟರ್ಗಳು, ಎತ್ತಿನ ಬಂಡಿಯ ಜಾಗಕ್ಕೆ ಕಾರುಗಳು ಮನೆಯನ್ನು ಸೇರಿದವು. ಎಲ್ಲವೂ ಬಹಳ ಬೇಗ ಬದಲಾಗಿ ಬಿಟ್ಟಿತು. ಜೀವನ ಶೈಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಕರೆದೊಯ್ದಿತು. ಬಣ್ಣ ಬಣ್ಣದ ಬಟ್ಟೆಗಳಂತೆ ಹೊದಿಕೆ ಮಾತ್ರ ಬದಲಾಗಲಿಲ್ಲ ಮನುಷ್ಯನೇ ಬದಲಾವಣೆಗೆ ಒಳಪಟ್ಟನು. ಕಾರಣ ಬದಲಾವಣೆ ಜಗದ ನಿಯಮ , ಏನಂತೀರಿ? ಆಹಾರ – ವಿಹಾರ , ಉಡುಗೆ- ತೊಡುಗೆ, ಮನೆ- ಸಂಸಾರ ಎಲ್ಲವೂ ಸಾರ್ವಜನಿಕವಾಗಿ ಪ್ರದರ್ಶನಗೊಂಡವು. ನಾಲ್ಕು ಗೋಡೆಗಳ ನಡುವಣ ಬದುಕು ನಾಲ್ಕು ದಿಕ್ಕುಗಳಲ್ಲಿ ಪ್ರಸಾರವಾಗಿದ್ದು ನಮ್ಮ ಸಾಧನೆಯೇ? ಹಳ್ಳಿಗಳಾದ್ರೂ ಮೊದಲಿನಂತೆ ಇರಬೇಕಿತ್ತು ಅಂತ ನನಗೆ ತುಂಬಾ ಸಲ ಅನಿಸಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಅಮ್ಮನ ಅಡುಗೆಯ ವಿಷಯದಲ್ಲಿ ನಾನೂ ತುಂಬಾ ಮಿಸ್ ಮಾಡಿಕೊಳ್ಳಲು ಕಾರಣ ಇದೆ. ಅಮ್ಮ ಒಲೆಯಲ್ಲಿ ಅಡುಗೆ  ಮಾಡುತ್ತಿದ್ದ ದಿನಗಳವು. ಎಷ್ಟು ರುಚಿಯಾಗಿರುತ್ತಿತ್ತು ಅಂದರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.ನಮ್ಮ ಮನೆಗೆ ಸದಾ ಬರುತ್ತಿದ್ದ ನನ್ನ ಅಪ್ಪನ ಸೋದರಮಾವ ಕೇವಲ ಸಾಂಬಾರನ್ನೇ ಸೊರ್ ಎಂದು ಕುಡಿದುಬಿಡುತ್ತಿದ್ದರು. ಇದಲ್ಲವೇ ಹಳ್ಳಿಯ ಊಟದ ಗಮ್ಮತ್ತು‌. ಈಗೆಲ್ಲಿದೆ ನಮಗೆ ಒಲೆ ಹಚ್ಚಿ ಅಡುಗೆ ಮಾಡುವ ಸಮಯ ಗ್ಯಾಸ್ ಮೇಲೆ ಕುಕ್ಕರ್ ಸೀಟಿ ಒಡೆಸಿ , ರುಬ್ಬುವ ಯಂತ್ರದಲ್ಲಿ ನುಣ್ಣಗೆ ಮಾಡಿ  ಜಠರಕ್ಕೆ ಕೆಲಸವನ್ನು ನೀಡದೇ ಬೊಜ್ಜು ಬರಿಸಿಕೊಂಡಿದ್ದು. ಬರೆಯುತ್ತಾ ಹೋದರೆ ಹಳ್ಳಿಯ ಜೀವನದ ಸೊಗಸಿಗೆ ಪದಗಳೇ ಕಡಿಮೆ. ನನಗಂತೂ ಹೀಗೆ ಹಲವಾರು ಬಾರಿ ಅನಿಸಿದ್ದು ಹೋದವರೆಲ್ಲ ಪುಣ್ಯಮಾಡಿದ್ದಿರಬೇಕು. ಸಂಪೂರ್ಣ ಜೀವನವನ್ನು ಅನುಭವಿಸಿದ್ದಾರೆ‌. ಮೊದಲ ಹಳ್ಳಿಯ ಬದುಕು ಮತ್ತೊಮ್ಮೆ ಬಾರದೇ? ******************************

ಬದಲಾದ ಕಾಲಕ್ಕೆ ಹಳ್ಳಿಯ ಬದುಕು Read Post »

ಇತರೆ, ಜೀವನ

ಕಡಿವಾಣವೂ ಪ್ರೀತಿಯೇ!!!!!

ಲೇಖನ ಕಡಿವಾಣವೂ ಪ್ರೀತಿಯೇ!!!!! ಮಾಲಾ ಅಕ್ಕಿಶೆಟ್ಟಿ   ಕೊರೊನಾ ಲಾಕಡೌನ್ ಕ್ಕಿಂತ ಮುಂಚೆ ನಡೆದ ಮಾತಿದು.ಆತ್ಮೀಯರೊಬ್ಬರು ಚರ್ಚಿಸಿದ ವಿಚಾರ.ಅವರು ವಿವರಿಸಿದ ಹಾಗೆ ಈಗ ಒಂದು ವರ್ಷದಿಂದ ಶಾಲೆಗೆ ಹೋಗುವ ನಾಲ್ಕು ವರ್ಷದ ಮಗಳು ದಿನಾಲು ಒಂದಿಲ್ಲೊಂದು ವಸ್ತುಗಳನ್ನು ಶಾಲೆಯಲ್ಲಿ ಕಳೆದುಕೊಂಡು ಬಂದು ತಾಯಿಗೆ ಮತ್ತೆ ಹೊಸ ವಸ್ತುಗಳನ್ನು ಕೊಡಿಸುವಂತೆ ಪೀಡಿಸುತ್ತಿದ್ದಳು. ಮಗಳು ದಿನವೂ ಪೆನ್ಸಿಲ್, ರಬ್ಬರ್, ಶಾರ್ಪನರ್, ಕ್ರೆಯಾನ್ಸ್ ಗಳನ್ನು ಕಳೆದುಕೊಂಡು ಬರುವುದು ತಾಯಿಗೆ ತಲೆನೋವಾಗಿ ಪರಿಣಮಿಸಿತ್ತು. ಬೇಸತ್ತ ತಾಯಿ ಒಂದು ದಿನ ಮಗಳಿಗೆ ಸ್ಟ್ರಿಕ್ಟಾಗಿ ಎಚ್ಚರಿಕೆ ಕೊಟ್ಟಳು. ದಿನಾಲೂ ಶಾಲೆಯಿಂದ ಬಂದ ತಕ್ಷಣ ತನ್ನಲ್ಲಿರುವ ಪೆನ್ಸಿಲ್, ರಬ್ಬರ್, ಶಾರ್ಪನರ್ ಮತ್ತು ಕ್ರೆಯಾನ್ಸ್ ಗಳನ್ನು ತಪ್ಪದೇ ತನಗೆ ತೋರಿಸಬೇಕು, ಕಳೆದುಕೊಂಡು ಬಂದರೆ ಹೊಸ ವಸ್ತುಗಳನ್ನು ಕೊಡುವುದಿಲ್ಲವೆಂದು.ಈ ನಿಯಮವನ್ನು ತಲೆಯಲ್ಲಿ ಇಟ್ಟುಕೊಂಡ ಮಗಳು ದಿನಾಲೂ ತಪ್ಪದೆ ವಸ್ತುಗಳನ್ನು ತೋರಿಸತೊಡಗಿದಳು. ಕಳೆದುಕೊಂಡು ಅಥವಾ ಶಾಲೆಯಲ್ಲಿ ಎಲ್ಲೋ ಇಟ್ಟು ಮರೆತು ಬರುವ ಪದ್ಧತಿ ಕೊನೆಗೊಂಡಿತು.           ಈಗಿನ ಪಾಲಕರು ಮಕ್ಕಳಿಗೆ ಬೇಕೆಂದು ಎಲ್ಲವನ್ನೂ ಮಕ್ಕಳು ಕೇಳುವ ಮೊದಲೇ ಬಹುವಾಗಿ ತಂದು ಬಿಡುವ ಸಂಪ್ರದಾಯ ರೂಢಿಸಿಕೊಂಡು ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಒಂದು ಪೆನ್ಸಿಲ್, ಒಂದು ರಬ್ಬರ್, ಒಂದು ಶಾಪ್ ನರ್, ಒಂದು ಕ್ರೆಯಾನ್ ಬಾಕ್ಸ್ ಇದ್ದರೆ ಸಾಕು. ಆದರೆ ಪಾಲಕರು ಡಜನ್ಗಟ್ಟಲೆ ವಸ್ತುಗಳನ್ನು ತಂದಿಟ್ಟಿರುತ್ತಾರೆ. ಅವು ಎಲ್ಲಿಟ್ಟಿರುತ್ತಾರೆಂದು ಮಕ್ಕಳಿಗೂ ಗೊತ್ತು. ದಿನವೂ ಯಾವುದಾದರೂ ವಸ್ತುವನ್ನು ಕಳೆದುಕೊಂಡು ಬಂದು ಪಾಲಕರಿಗೆ ಹೇಳದೆಯೇ ಹೊಸದನ್ನು ಪ್ಯಾಕೆಟ್ ನಿಂದ ಒಡೆದು ಉಪಯೋಗಿಸಲು ಪ್ರಾರಂಭಿಸುತ್ತಾರೆ. ತಿಂಗಳೊಪ್ಪತ್ತಿನಲ್ಲಿ ಡಜನ್ ಡಜನ್ ವಸ್ತುಗಳು ಮಾಯವಾಗಿರುತ್ತವೆ. ಮತ್ತೆ ಬೇಕು ಎಂದು ಹಟ ಹಿಡಿದಾಗ ಮಾತ್ರ, ಸಾಮಾನು ಖಾಲಿಯಾಗಿದೆ ಎಂಬ ಅರಿವು ಪಾಲಕರದ್ದಾಗುತ್ತದೆ. ಅಲ್ಲಿಯವರೆಗೂ ಎಷ್ಟಿತ್ತು?ಹೇಗೆ ಖಾಲಿಯಾಯಿತು? ಎಂಬುದು ಗೊತ್ತೇ ಆಗಿರುವುದಿಲ್ಲ.        ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಹಟ ಎನ್ನುವ ಶಬ್ದ ಎಂದೂ ಶಬ್ದಕೋಶದಲ್ಲಿ ಇರಲೇ ಇಲ್ಲ. ಪಾಲಕರು ಕೊಡಿಸಿದ ವಸ್ತುಗಳನ್ನು ಅವು ಇನ್ನೂ ಉಪಯೋಗಕ್ಕೆ ಬರಲ್ಲ ಎನ್ನುವವರಿಗೆ ಬಳಸಲಾಗುತ್ತಿತ್ತು. ಜೂನ್ ತಿಂಗಳಲ್ಲಿ ಸಾಮಾನುಗಳನ್ನು ಕೊಡಿಸಿದರೆ ಮುಗಿಯಿತು ಮುಂದೆ ಮುಂದಿನ ಜೂನ್ನಲ್ಲಿ ಶಾಲೆಯ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಕಳೆದುಕೊಂಡು ಬಂದ ಉದಾಹರಣೆಗಳು ತುಂಬಾ ಕಡಿಮೆ. ಜೊತೆಗೆ ವೆರೈಟಿ,ವೆರೈಟಿ ಅಥವಾ ಪ್ರತಿದಿನಕ್ಕೆ ಹೊಸದನ್ನು ಉಪಯೋಗಿಸಬೇಕೆಂಬ ಹಟವೂ ಇರಲಿಲ್ಲ. ಮೇಲಾಗಿ ಆಗಿನ ಪಾಲಕರು ಎಷ್ಟು ಬೇಕೋ ಅಷ್ಟೇ ತಂದು ಮಕ್ಕಳಿಗೆ ಕೊಡುತ್ತಿದ್ದರು. ಡಜನ್ಗಟ್ಟಲೆ ತಂದ ರೂಢಿಯೇ ಇರಲಿಲ್ಲ. ವರ್ಷಕ್ಕೆ ಇಂತಿಷ್ಟೇ ಎಂಬ ಕಟ್ಟುನಿಟ್ಟು ಇದ್ದುದರಿಂದ ವಸ್ತುಗಳ ಉಪಯೋಗ ಮತ್ತು ರಕ್ಷಣೆ ಸರಿಯಾಗಿಯೇ ಆಗುತ್ತಿತ್ತು.           ಕಾಲ ಬದಲಾದಂತೆ ಪಾಲಕರ ಮನಸ್ಥಿತಿಯೂ ಬದಲಾಗಿದೆ. ಮಕ್ಕಳು ಬೇಡಿದ್ದೆಲ್ಲವನ್ನು ಕೊಡಿಸುವುದು ತಮ್ಮ ಧರ್ಮ ಎಂದು ತಿಳಿದು, ಕೇಳಿದ್ದು ಕೇಳದೆ ಇದ್ದದ್ದನ್ನೆಲ್ಲ ಕೊಡಿಸುವುದನ್ನು ಪಾಲಕರು ಅನುಸರಿಸುತ್ತಿದ್ದಾರೆ. ಅವಶ್ಯಕತೆಗೆ ತಕ್ಕಂತೆ ಕೊಡಿಸುವುದು ಉತ್ತಮ. ಜೊತೆಗೆ ಅದರ ಉಪಯೋಗ ಸರಿಯಾಗಿ ಆಗುತ್ತದೆಯೋ ಇಲ್ಲವೋ ಅನ್ನುವುದನ್ನು ಪರೀಕ್ಷಿಸುತ್ತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ದುಡ್ಡಿನ ಮಹತ್ವ ತಿಳಿಯುವಂತೆ ಮಾಡಬೇಕು.            ಇಗೀಗ ಡ್ರಗ್ಸ ಜಾಲದಲ್ಲಿ ಸಿಕ್ಕಿಕೊಂಡವರನ್ನ ನೋಡಿದರೆ ಇವರಿಗೆ ದುಡ್ಡು ಸಿಕ್ಕುವುದು ಎಷ್ಟು ಸಲೀಸು!!!ಮೈಯೊಳಗಿನ ರಕ್ತವನ್ನು ಬೆವರಿನಂತೆ ಸುರಿಸಿದರೂ ಬಡವನಿಗೆ ಎರಡು ಹೊತ್ತಿನ ಕೂಳು ದುರ್ಲಭ.ಇಂಥ ಬಡತನವನ್ನು ಉಂಡುಟ್ಟವರಿಗೆ,ಉತ್ತಮ ನೌಕರಿ, ತಮ್ಮದೊಂದು ಮನೆ,ಮಕ್ಕಳಿಗೆ ವಿದ್ಯಾಭ್ಯಾಸ ಕೊನೆಗೆ ಸಾಧ್ಯವಾದರೆ ಕಾರ್ ಒಂದು ಖರೀದಿ.ಇವಷ್ಟೇ ಕನಸುಗಳು.ಶ್ರೀಮಂತಿಕೆಯಲ್ಲೇ ಹುಟ್ಟಿದವರಿಗೆ, ಇಲ್ಲಾ ಇಗೀಗ ಶ್ರೀಮಂತ ಆದವರಿಗೆ ಅಥವಾ ತಾವಾಗಿಯೇ ದುಡ್ಡು ಗಳಿಸಿ ಪ್ರಾಥಮಿಕ ಹಂತದ ಎಲ್ಲಾ ಆಸೆಗಳು ಸಂಪೂರ್ಣಗೊಂಡವರಿಗೆ ದುಡ್ಡು ಕಷ್ಟವಲ್ಲ.ಇಂಥವರೇ ವ್ಯಸನಿಗಳಾಗುತ್ತಾರೆ.        ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿ ಎಂದುಕೊಂಡಿದ್ದಾರೆ ಕೊಡಿಸದಿದ್ದರೆ ಪ್ರೀತಿ ಇಲ್ಲ ಅಥವಾ ಕಡಿಮೆ ಎಂದು ಮಕ್ಕಳು ತಿಳಿದಾರು ಎಂಬ ಭಯದಲ್ಲೇ ಕೊಡಿಸುತ್ತಾರೆ. ಬೇಡಿದ್ದೆಲ್ಲವನ್ನೂ ಕೊಡಿಸುವುದು ಪ್ರೀತಿಯೇ? ಹಟ ಯಾವಾಗಲೂ ಗೆಲ್ಲಬೇಕೆ? ಇಲ್ಲ ಬೇಡಿದ್ದೆಲ್ಲವನ್ನೂ ಕೊಡಿಸದಿರುವುದು ಪ್ರೀತಿ ಎಂಬುದನ್ನು ಪಾಲಕರು ತೋರಿಸಬೇಕು.ಕಡಿವಾಣವೂ ಪ್ರೀತಿಯ ಸಂಕೇತ. ಯಾವ ವಸ್ತುವೂ ಜಗತ್ತಿನಲ್ಲಿ ಪುಗ್ಗಟ್ಟೇ ಸಿಗಲ್ಲವೆಂದು ತಿಳಿಹೇಳಬೇಕಾಗಿದೆ.ಹಣದ, ದುಡಿತದ ಮಹತ್ವವನ್ನು ಹೇಳಿಕೊಡಬೇಕು. ಬೇಕಾಬಿಟ್ಟಿ ವಸ್ತುಗಳನ್ನು ತೆಗೆದುಕೊಂಡು, ಒಂದು ದಿನವೂ ಉಪಯೋಗಿಸದೇ ಮತ್ತೆ ಹೊಸದು ಬೇಕೆನ್ನುವುದಕ್ಕೆ ಲಗಾಮ ‌ಮತ್ತು ‌ಹಟ ‌ಒಳ್ಳೆಯದಲ್ಲವೆಂದು ತಿಳಿಹೇಳಬೇಕು.  ***********************************************************

ಕಡಿವಾಣವೂ ಪ್ರೀತಿಯೇ!!!!! Read Post »

ಇತರೆ, ಜೀವನ

ಕಾಯಕದ ಮಹತ್ವ.

ಲೇಖನ ಕಾಯಕದ ಮಹತ್ವ. ಜಯಶ್ರೀ ಭ.ಭಂಡಾರಿ. ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ.ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು.ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ.ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು.ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ….”. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ.ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ.”ತನು ಮನ ಬಳಲಿಸಿ ತಂದು ದಾಸೋಹ ಮಾಡುವವ”ರನ್ನು ಸದ್ಭಕ್ತರೆನ್ನುತ್ತಾರೆ ಅಣ್ಣ. ಸಂಪತ್ತನ್ನು ಕೂಡಿಡುವ ,ಮಣ್ಣಿನಲ್ಲಿ ಹೂತಿಡುವ,ಕಂಗಳಲ್ಲಿ ನೋಡಿ ಹಿಗ್ಗುವ ಮರುಳರನ್ನು ಎಚ್ಚರಿಸಿ “ಕೂಡಲ ಸಂಗನ ಶರಣರಿಗೊಡನೆ ಸಂಪತ್ತನ್ನು ಸವೆಸಬೇಕು” ಎಂದು ಹೇಳುತ್ತಾರೆ.ಇನ್ನೊಂದು ಲೋಕೋತ್ತರ ವಚನದಲ್ಲಿ: ” ನಾನ್ಯಾವ ಕರ್ಮವ ಮಾಡಿದರೆಯೂನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದು ಕ್ರೀಯೆಯ ಮಾಡೆನುನಿಮ್ಮ ಸೊಮ್ಮಿಂಗೆ ಸಲಿಸುವೆನು ನಿಮ್ಮಾಣೆಕೂಡಲ ಸಂಗಮದೇವಾ” ಎಂದು ಹೇಳುವಾಗ ಅಸಂಗ್ರಹಾದುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ.ಆದ್ದರಿಂದಲೇ ಅಣ್ಣನವರನ್ನು 12 ನೇ ಶತಮಾನದ ಮಾರ್ಕ್ಸ ಎಂದು ಕೆಲವರು ಕರೆಯುತ್ತಾರೆ. ಬಸವಣ್ಣನವರ ಪ್ರಕಾರ ಐಹಿಕ ವಸ್ತುಗಳ ಮೋಹಕ್ಕೆ ಒಳಗಾಗುವವನು ಭವಿ. ಐಹಿಕ ವಸ್ತುಗಳೆಲ್ಲ ಶಿವನ ಪ್ರಸಾದವೆಂದು ಭಾವಿಸಿ ದಾಸೋಹಂ ಭಾವದ ಮೂಲಕ ಇವೆಲ್ಲ ಜಗತ್ತಿನ  ಜೀವಿಗಳಿಗೆ ಸೇರಿದ್ದು ಎಂದು ನಂಬಿದವನು ಭಕ್ತ. ಲಿಂಗಧಾರಣೆಯಿಂದ ಶರೀರವು ಭಕ್ತನ ಹಾಗೆ ಕಾಣಬಹುದೇ ಹೊರತು ವ್ಯಕ್ತಿ ಭಕ್ತ ಆಗಲಾರ. ಭಕ್ತಿ ಎಂಬುದು ಸರ್ವ ಸಮತ್ವ ಭಾವದಿಂದ ಬರುವಂಥದ್ದು.ಅಂತೆಯೇ ಬಸವಣ್ಣನವರು ‘ಎನ್ನ ತನು ಭಕ್ತ, ಮನ ಭವಿ’ ಎಂದು ಸೂಚ್ಯವಾಗಿ ಖಂಡಿಸಿದ್ದಾರೆ.ಯಾರು ಆತ್ಮಸಾಕ್ಷಿಯಾಗಿ ಬದುಕುವದಿಲ್ಲವೋ ಅವರೇ ಭವಿಗಳು ಎಂದು ಅವರು ಸೂಚಿಸಿದ್ದಾರೆ. ಕಾಯಕದಿನದ ಬಂದ  ಹಣವನ್ನು ದಾಸೋಹಕ್ಕೆ ವಿನಿಯೋಗಿಸುತಿದ್ದ ಕಕ್ಕಯ್ಯನನ್ನು ಪರೀಕ್ಷೀಸಲೆಂದು  ಬಂದ ಶಿವ ಕಂಕರಿಯ ನಾದಕ್ಕೆ ಮಾರುಹೋಗಿ ಕುಣಿಯತೊಡಗಿದ.ಕಕ್ಕರಿಯ ಕಕ್ಕಯ್ಯ ಶಿವ ಕುಣಿಯುವದನ್ನು ನೋಡಿ ಕಂಕರಿಯನ್ನು ಇನ್ನಷ್ಟು ಜೋರಾಗಿ ಸೊಗಸಾಗಿ ಬಾರಿಸಲು ಇಬ್ಬರಲ್ಲೂ ಸ್ಪರ್ಧೆ ಏರ್ಪಟ್ಟಿತು.ಮೂರು ದಿನಗಳ ನಿರಂತರ ನರ್ತನದ ಕೊನೆಗೆ ಶಿವನೇ ಸೋತು ಕುಣಿಯಲಾರದೆ ನೆಲಕ್ಕೊರಗಿದ.ಅವನ ಕೈ ಹಿಡಿದು ಎಬ್ಬಿಸಿದ ಕಕ್ಕಯ್ಯ ಕುಣಿಯುವಂತೆ ಹೇಳಿದ.ಜಂಗಮರೂಪದ ಶಿವ ತನ್ನ ನಿಜರೂಪ ತೋರಿ “ಈ ಲೋಕದ ಹಂಗು ಸಾಕು,ನನ್ನ ಜೊತೆ ಕೈಲಾಸಕ್ಕೆ ಬಾ” ಅಂದನಂತೆ.ಶಿವ ಮತ್ತು ಕೈಲಾಸ ಎರಡನ್ನೂ ಧಿಕ್ಕರಿಸಿದ ಕಕ್ಕಯ್ಯ “ಮೂರು ದಿನ ತಪ್ಪಿಹೋದ ಕಾಯಕದ ಆಯ ಕೊಡದೆ ನಿನ್ನನ್ನು ಬಿಡಲಾರೆ” ಎಂದನಂತೆ. ನಾನೂ ಮೂರು ದಿನ ಕುಣಿದೆ.ನಿಜವಾಗಿ ನೋಡಿದರೆ ನೀನೆ ನನಗೆ ಕಾಯಕದ ಪ್ರತಿಫಲವನ್ನು ಕೊಡಬೇಕು” ಎಂದ ಶಿವ.”ಕಾಯಕ ಸಿಕ್ಕುವದು ಈ ಭೂಮಿಯಲ್ಲಿ ಇರುವವರಿಗೆ ಮಾತ್ರ, ನಿನ್ನ ಕೈಲಾಸದವರು ಸೋಮಾರಿಗಳು, ನೀನು ಕಾಯಕವೆಂಬ ಪವಿತ್ರ ಭಾವನೆಯಿಂದ ಕುಣಿಯಲಿಲ್ಲ.ನನ್ನನ್ನು ಪರಿಕ್ಷಿಸಲು ಕುಣಿದೆ….ಕಾಯಕ ತೆಗೆದುಕೊಂಡು ನೀನು ಯಾರಿಗಾಗಿ ದಾಸೋಹ ಮಾಡುವೆ? ನಿನಗೆ ಕಾಯಕ ಬೇಕಾಗಿದ್ದರೆ ಈ ಭೂಮಿಯಲ್ಲಿ ವಾಸಮಾಡು. ಸತ್ಯಶುದ್ಧನಾಗಿ ದುಡಿ” ಎಂದು ಸವಾಲೆಸೆದು ಮುಲಾಜಿಲ್ಲದೆ ಕಾಯಕದ ಹಣವನ್ನು ವಸೂಲು ಮಾಡಿ ದಾಸೋಹಕ್ಕೆ ತೆರಳಿದ.   ಇದೇ ರೀತಿ ಶಿವನಿಂದ ಕಾಯಕವನ್ನು ಪಡೆದ ಮತ್ತೊಬ್ಬ ಶರಣನೆಂದರೆ ನಗೆಯ ಮಾರಿತಂದೆ.ಮುಖದಲ್ಲಿ ನಗೆಮಲ್ಲಿಗೆ ಅರಳಲು ಯಾರ ಅಪ್ಪಣೆಯೂ ಬೇಕಿಲ್ಲ.ನಗೆಯನ್ನು ದುಡ್ಡುಕೊಟ್ಟು ಕೊಳ್ಳಬೇಕಿಲ್ಲ ಆದರೂ ನಗೆ ನಮ್ಮ ಬಾಳಿನಲ್ಲಿ ಅಪರೂಪವಾಗುತ್ತಿದೆ.ನರನ ಬಾಳಿನಲ್ಲಿ ನಗೆಗಿಂತ ಹೊಗೆ,ಧಗೆಗಳೇ ಜಾಸ್ತಿ.ನಗುವ ಮನಸ್ಸಿದ್ದರೂ ಜಗದ ವೈಚಿತ್ರ್ಯದಿಂದ  ಮಿಡುಕುತ್ತ,ಸಿಡುಕುತ್ತ ದುಡಿಯುವ ಜನರಿಗೆ ನಕ್ಕು ನಗಿಸುವ ನಗೆಗಾರರು ಬೇಕಾಗುತ್ತಾರೆ. ಮಾರಿತಂದೆ ಅಂಥ ನಗೆಗಾರರಿಗೆಲ್ಲ ಗುರು.ಮ್ಲಾನಮುಖದಲ್ಲಿ ಮಂದಹಾಸವನ್ನು ಉಕ್ಕಿಸುವದೇ ಅವನ ಕಾಯಕವಾಗಿದ್ದಿತು.ಅವನ ವಿನೋದ ವಿನ್ಯಾಸದಿಂದ ನಕ್ಕು ಆನಂದ ಹೊಂದಿದ ಭಕ್ತರು ಸ್ವಸಂತೋಷದಿಂದ ಏನಾದರೂ ಕೊಟ್ಟರೆ ಅದನ್ನು ಭಕ್ತಿಯಿಂದ ಸ್ವೀಕರಿಸಿ ಅದರಲ್ಲಿಯೇ ಉದರ ನಿರ್ವಹಣೆ ಪೂರೈಸಿ,ಉಳಿದುದರಲ್ಲಿ ದಾಸೋಹ ಮಾಡುತ್ತಿದ್ದ. ಇಂಥಹ ದಾಸೋಹದ ಶರಣಸಂಕುಲವೇ ನಮ್ಮ ಮುಂದಿದೆ. ನಮಗೆ ಬಿಟ್ಟುಹೋದ ದಾಸೋಹ ಸಂಸ್ಕ್ರತಿಯನ್ನು ನಾವು ಚಾಚೂತಪ್ಪದೆ ಪಾಲಿಸೋಣ ಹಾಗೂ ಶರಣ ಸಂಸ್ಕ್ರತಿಯಲ್ಲಿ ನಡೆದು ಧನ್ಯರಾಗೋಣ. ******************************

ಕಾಯಕದ ಮಹತ್ವ. Read Post »

ಇತರೆ, ಜೀವನ

ಖುಷಿ ನಮ್ಮಲ್ಲೇ!!!

ಲೇಖನ ಖುಷಿ ನಮ್ಮಲ್ಲೇ!!! ಮಾಲಾ ಅಕ್ಕಿಶೆಟ್ಟಿ  ಕೈಯಲ್ಲಿ10 ರ ನೋಟು ಹಿಡಿದುಕೊಂಡು ಬಡ ಹುಡುಗ ರೋಡ್ ಮೇಲೆ ಇರುವ ಭಜಿ ಅಂಗಡಿಗೆ ಬಂದಿದ್ದ. ಆಸೆ ಕಂಗಳಿಂದ ಮೂರು ತರಹದ ಭಜಿ, ‌ಅಂದರೆ ‌ಕಾಂದಾ, ‌ಮಿರ್ಚಿ ‌ಮತ್ತು ‌ಮೈಸೂರ ‌ಭಜಿಯನ್ನು ‌‌ಒಂದೇ ‌ಸಮನೇ ನೋಡಿದ. ‌ಆ ‌ಅಂಗಡಿಯಲ್ಲಿ 4 ‌ಭಜಿಗಳ ‌ಪ್ಲೇಟ್ಗೆ 20 ‌ರೂಪಾಯಿ.ಒಂದು ಭಜಿಯನ್ನು ಕೊಡುವ ಸೌಲಭ್ಯವಿರುವದರಿಂದ 5ರೂಪಾಯಿಗೆ ‌ಯಾವುದಾದರು ‌ಭಜಿ ‌ತಿನ್ನಬಹುದು.ಆತ ‌ಡಿಸೈಡ್ ‌ಮಾಡಿ 5 ರೂ ‌ಕೊಟ್ಟು ‌ಮಿರ್ಚಿ ‌ಭಜಿಯನ್ನು ಸವಿದ.ಬಸಿಯಾಕಾರದಲ್ಲಿ ಕಣ್ಣು ತೆರೆದು, ಬಾವಿಯಂಥ ಬಾಯಲ್ಲಿ ಹಾಕಿ ಸುತ್ತಲೂ ನೋಡುತ್ತಾ ‌‌ಭಜಿಯನ್ನು ‌ಆತ್ಮೀಯತೆಯಿಂದ ಅನುಭವಿಸಿದ. ಹೊರಗೆ ‌ಧೋ ‌ಧೋ ಅನ್ನುವ ಎಡಬಿಡದ ಮಳೆ, ಅಲ್ಲಲ್ಲಿ ಛತ್ರಿಗಳ ಸಹಾಯದಿಂದ ಜನರ ಓಡಾಟ,‌ ‌ಜೋರ ‌ಮಳೆಯಲ್ಲಿ,ರೋಡ ‌ಖಾಲಿಯಾದ್ದರಿಂದ, ‌ಬುರ್ ಬುರ್ ಎಂದು ಹೋಗುವ ವಾಹನಗಳು ಮಳೆಗೆ ಕಳೆ ತಂದಿದ್ದವು.ಆ ಚಿಕ್ಕ ಅಂಗಡಿಯಲ್ಲಿ ಎಲ್ಲರೂ ಜಮಾಯಿಸಿ ಮಳೆ ನಿಂತರಾಯ್ತು,‌‌ ಹೊರಗೆ ಕಾಲಿಡುವಾ ಅನ್ನುವ ಸಾಂದರ್ಭಿಕ ನಿರ್ಣಯ. ಇನ್ನೂ 5 ‌ರೂಪಾಯಿ ಉಳಿದಿತ್ತಲ್ಲ, ‌ಅದರಿಂದ ಮೈಸೂರು ‌ಭಜಿ ತೆಗೆದುಕೊಂಡು ಬೇಕಾದಷ್ಟು ಸಾಸ್ ‌ಮೆತ್ತಿಸಿ,‌ ಮತ್ತೆ ಆನಂದದಿಂದ ಸವಿದ.ಇವನೊಂದಿಗೆ ಬಂದ ಇನ್ನುಳಿದ ಎರಡು ಹುಡುಗರೂ ‌ಥೇಟ್ ‌ಇವನಂಗೆ ‌ಸಂತೋಷ. ಅಬ್ಬಾ!!! ‌‌5 ರೂನಲ್ಲಿ ಒಂದು ‌ಭಜಿ ಕೊಡುವ ಆನಂದ ಯಾವ ಫೈವ್ ‌ಸ್ಟಾರ್ ಹೋಟೆಲ್ ನಲ್ಲಿ ಸಿಗುತ್ತೆ?                            ರೋಡಿನಲ್ಲಿಯ ಗೂಡಂಗಡಿಗಳಲ್ಲಿ ಆಹಾರ ಸರಿಯಿರಲ್ಲ,‌low quality ಎಣ್ಣೆ, ಕಾಳು, ಹಿಟ್ಟು ಬಳಸಿರುತ್ತಾರೆ, ಸ್ವಚ್ಛತೆ ಕಡಿಮೆ, ಆರೋಗ್ಯಕ್ಕೆ ಹಾನಿ ಎನ್ನುವುದೇನೋ ಸರಿ. ಆದರೆ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿಯ ಎಣ್ಣೆ, ಕಾಳು, ಹಿಟ್ಟು ಸ್ವಚ್ಛತೆಯನ್ನು ಸಾಮಾನ್ಯನು ‌ಪರೀಕ್ಷಿಸಲಾಗುತ್ತಾ? ಹೊರಗಡೆ ಲಕಲಕ ಹೊಳೆದು ಒಳಗೆ ರೋಡ್ ಅಂಗಡಿಗಿಂತ  ‌ಕೀಳಿದ್ದರೆ ವ್ಯತ್ಯಾಸವೇನು? 5 ರೂ ನಲ್ಲಿ ಸಿಗುವ ಇಂಥದ್ದೇ ‌ಭಜಿ, ದೊಡ್ಡ ಹೋಟೆಲ್ ನಲ್ಲಿ ‌ಸುಮಾರು ‌20 ರೂಪಾಯಿ‌ಯಾದರೂ ಇರುತ್ತೆ. ಲೋ ಕ್ವಾಲಿಟಿ ಎಂದು ಬಡ ಹುಡುಗ ನಿಂತರೆ, ಎಂದು ‌ಆತ ಒಂದು ‌ಭಜಿ ‌ತಿಂದಾನು? ರೋಡ್ ನಲ್ಲಿ ತಿಂದ ಎಲ್ಲರ ಆರೋಗ್ಯ ಹಾಳಾಗುವುದರೆ, ಹೋಟೆಲ್ನಲ್ಲಿ ತಿಂದವರಿಗೆ ರೋಗವೇ ಬರಲ್ಲವೇ? ಅಥವಾ ದೊಡ್ಡ ಹೋಟೆಲ್ ನಲ್ಲಿ ತಿಂದವರ ಆರೋಗ್ಯ ಎಂದೂ ಕೊಡುವುದಿಲ್ಲವೇ? ಒಟ್ಟಾಗಿ ಹೇಳುವ ತಾತ್ಪರ್ಯ ಅವರವರ ಇಮ್ಯೂನಿಟಿ ಪವರ್ ಮೇಲೆ ಆರೋಗ್ಯ ನಿಂತಿದೆ.          ಬಡವನೊಬ್ಬ ಒಳ್ಳೆ ಹೋಟೆಲ್ ನಲ್ಲೇ ತಿನ್ನಬೇಕೆಂದರೆ ಎಷ್ಟು ಜನ್ಮ ಆತ ಕಾಯಬೇಕು? ಯಾರಿಗ್ಗೊತ್ತು? ರೋಡ್ ನಲ್ಲಿಯ ‌ಅಂಗಡಿಗಳಿಂದ ಎಟ್ಲೀಸ್ಟ್ ಈ ‌ಈ ತಿನಿಸುಗಳು ಹೀಗೆಯೇ ಇರುತ್ತವಪ್ಪಾ  ಎನ್ನುವ ಕಲ್ಪನೆಯಾದರೂ ಬಡವರಿಗೆ ಬಂದೀತು. ಇಲ್ಲಾದರೆ ರುಚಿ ಕೂಡ ‌ಬರೀ ಕಲ್ಪನೆಯಲ್ಲಿ ಅನುಭವಿಸಬೇಕಾಗಬಹುದು.ದೊಡ್ಡ ಹೋಟೆಲ್ ನಲ್ಲಿ ಇಬ್ಬರ ನಾಷ್ಟಾ ಸುಮಾರು 600 ರೂಪಾಯಿ.‌ಇದು ಬಡವನ ‌ತಿಂಗಳ ‌ಸಂಬಳವೂ ಹೌದು.        ಈ ‌ದೊಡ್ಡ ಹೋಟೆಲ್ ನಲ್ಲಿ ಇದನ್ನು ತಿಂದೇ, ಇಷ್ಟು ಬಿಲ್ ‌ಬಂತು, ‌ಆದ್ರೂ ಎಂಜಾಯ್ ಮಾಡಿದೆ ಎನ್ನುವ, ಅದೇ ಒಂದು ಸಿನಿಮಾ ಸಾಮಾನ್ಯ ಥೇಟರ್ನಲ್ಲಿ ನೋಡಲು ಸಿಕ್ಕಾಗೂ ಆ ದೊಡ್ಡ ಥಿಯೇಟರ್ನಲ್ಲಿ ನೋಡಿದೆ, ಫಸ್ಟ್ ಡೇ, ಫಸ್ಟ್ ಶೋ ಎಂದು ಒಂದು ಟಿಕೆಟ್ಗೆ ಇಷ್ಟು ದುಡ್ಡಿತ್ತು ಗೊತ್ತಾ? ಆದ್ರೂ ಸಂತೋಷ ಆತು ಅಂತ ಹೇಳುವ ಮನುಜರು ಇದ್ದಾರೆ. ಇರಲಿ, ಅವರಿಗೆ ಇರುವ ಆದಾಯದ ಮೇಲೆ ಅವರು ಆಯಾ ಹೋಟೆಲ್ ಹಾಗೂ ಥಿಯೇಟರ್ಗಳಿಗೆ ಹೋಗುತ್ತಾರೆ ಎನ್ನೋಣ. ಆದರೆ ತಾವು ಮಾಡಿದ್ದೇ ಶ್ರೇಷ್ಠ, ಬೇರೆಯವರದು ಕನಿಷ್ಠ ಅಂದರೆ ಹೇಗೆ? ಎಷ್ಟೋ ಶ್ರೀಮಂತರ ಮನೆಯಲ್ಲಿ ಲಕ್ಷ್ಮಿ ಕಾಲುಮುರಿದುಕೊಂಡು ಬಿದ್ದಿದ್ದರೂ ದುಂದು ವೆಚ್ಚ ಮಾಡಿಲ್ಲ. ದೊಡ್ಡ ಹೋಟೆಲ್ ಅಥವಾ ಥೇಟರ್ ಗಳ ವಿರೋಧ ಇಲ್ಲಿ ಇಲ್ಲ. ಆದರೆ ಅಂಥದ್ದೇ ವಾತಾವರಣ ಸಾಮಾನ್ಯ ಸ್ಥಿತಿಯಲ್ಲಿ ಬಡವರಿಗೆ ಸಿಕ್ಕಾಗ ಅದನ್ನು ಶ್ಲಾಘೀಸೋಣ ಎನ್ನುವ ಕಳಕಳಿ.ಅದು ಅವರ ದುಡ್ಡು, ಹೇಗಾದರೂ ಖರ್ಚು ಮಾಡಿಕೊಳ್ಳಲಿ                           ಸಾಮಾನ್ಯರಿಗೆ ಸಾಮಾನ್ಯವಾದ ವಸ್ತುಗಳು ಈ ಜಗತ್ತಿನಲ್ಲಿ ಸಿಗುತ್ತಿರುವುದರಿಂದಲೇ ಅವರಿಗೂ ಎಲ್ಲದರ ರುಚಿ ಗೊತ್ತಾಗಿದೆ. ಬಡವರಿಂದಲೇ ನಡೆಸಲ್ಪಡುವ ಅಂಗಡಿಗಳು ಬಡವರ ಜೀವಾಳ. ಬಡ ಅಂಗಡಿ ಮಾಲೀಕನಿಗೆ ಹೆಚ್ಚಿನ ಆದಾಯದ ಚಿಂತೆಯಿಲ್ಲ. ತನ್ನಂತೆ ಜನ ಅಂದು ಇದ್ದದ್ದರಲ್ಲೇ ತುಸು ಲಾಭ ಗಳಿಸುವ ಆಸೆ. ಇದರಿಂದ ತನಗೂ ಲಾಭ ಜೊತೆಗೆ ತನ್ನಂಥವನಿಗೆ ಹೊಟ್ಟೆ ತುಂಬಿಸಿದೆ ಅನ್ನುವ ಧನ್ಯತಾ ಭಾವ. ಇಷ್ಟಿಷ್ಟರಲ್ಲೇ ಇಷ್ಟಿಷ್ಟದ ಖುಷಿಯನ್ನು ಹುಡುಕುವ ತವಕ. ಸಂತೃಪ್ತಿ ಜೀವನದ ಸೆಲೆ. ಇವುಗಳನ್ನು ಸ್ವೀಕರಿಸಿ ದೋಷಗಳನ್ನು ಬಹಿರಂಗಪಡಿಸದೇ ಆನಂದಿಸುವ ಘಳಿಗೆ. ಬಹುಶಃ ಇದಕ್ಕೇನೆ ವಿಶಾಲ ಮನೋಭಾವ ಅಂತ ಕರೀಬಹುದು. *************************************

ಖುಷಿ ನಮ್ಮಲ್ಲೇ!!! Read Post »

ಇತರೆ, ಜೀವನ

ಯಾಕೆ ನೆಗೆಟಿವಿಟಿ?

ಲೇಖನ ಯಾಕೆ ನೆಗೆಟಿವಿಟಿ? ಮಾಲಾ.ಮ. ಅಕ್ಕಿಶೆಟ್ಟಿ.  “ಆಕೆ ಯಾವಾಗಲೂ ಹಾಗೆಯೇ ಬಿಡಿ. ಏನ್ ಹೇಳಿದ್ರು ನೆಗೆಟಿವ್ ಆಗಿ ಯೋಚಿಸಿ, ಅದರಲ್ಲೇ ಮುಳುಗಿರುತ್ತಾಳೆ. ಇದ್ದ ಗಳಿಗೆಯನ್ನು ಆನಂದಿಸಲು ಬರಲ್ಲ. ಬರೀ ನೆಗೆಟಿವ್. ಜೀವನವನ್ನು ಆನಂದಿಸುವುದೂ ಒಂದು ಕಲೆ. ಅದು ಆಕೆಗೆ ಗೊತ್ತಿಲ್ಲ. ಎಲ್ಲರದೂ ಒಂದೊಂದು ಸಮಸ್ಯೆ ಇದ್ದೇ ಇರುತ್ತೆ. ಯಾರಿಗೂ ಸಮಸ್ಯೆ ತಪ್ಪಿದ್ದಿಲ್ಲ. ಜೀವನ ಇದ್ದ ಹಾಗೆ ನಡೆದುಕೊಂಡು ಹೋಗಬೇಕು. ಅದು ಬಿಟ್ಟು ಸತತ ಇಪ್ಪತ್ತನಾಲ್ಕು ಗಂಟೆಯೂ ನಕಾರಾತ್ಮಕವಾಗಿ ಯೋಚಿಸಿದರೆ ಹೇಗೆ? ಅದೇನೊ ಅಂತಾರಲ್ಲ ಪ್ರತಿ ಪರಿಹಾರಕ್ಕೂ ಇಂಥವರು ಸಮಸ್ಯೆಯನ್ನು ಹುಟ್ಟಿಸಿಬಿಡತಾರೆ ಅನ್ನೊ ಗುಂಪಿನಲ್ಲಿ ಇವಳೂ ಒಬ್ಬಳು”  ಎಂದು ನಾವು, ನೀವು ಹೀಗಿರುವವರನ್ನು ಭಾರಿ ಬಾರಿ ಟೀಕಿಸಿ ಮಾತನಾಡಿರಬಹುದು.ಕೊರೊನಾ ರೋಗದ ಬೆನ್ನಲ್ಲೇ ಎಲ್ಲಾ ವಯಸ್ಸಿನವರನ್ನೂ ಈ ನಕಾರಾತ್ಮಕತೆ ಕಾಡುತ್ತಿದೆ.ಆದರೆ ಎಲ್ಲರೂ ಮಾಡುವ ತಪ್ಪು ಇಲ್ಲೇ ಇದೆ. ಹೌದು ಸಕಾರಾತ್ಮಕವಾಗಿ ಇರಬೇಕು, ಯೋಚಿಸಬೇಕು… ಎಲ್ಲಾ ಸರಿ. ಆದರೆ ಯಾಕೆ ವ್ಯಕ್ತಿ ಇಷ್ಟೊಂದು ನಕಾರಾತ್ಮಕವಾಗಿ ಯೋಚಿಸುತ್ತಾನೆ ಅನ್ನುವುದನ್ನು ನಾವು, ಅಂದರೆ ಅಂತ ಅಂಥ ವ್ಯಕ್ತಿಗಳಿಗೆ ಉಪದೇಶ ಮಾಡುವಾಗ ಯೋಚಿಸಬೇಕಾಗುತ್ತದೆ.ಪೊಜಿಟಿವ್ ಥಿಂಕ್ ಮಾಡಿ, ಮಾಡಿ, ಎಂದು ಒತ್ತಾಯಿಸಿದಾಗ ಅತೀವ ದುಃಖದಲ್ಲಿದ್ದ ವ್ಯಕ್ತಿ ಹೇಗೆ ತಾನೇ ಪೊಜಿಟಿವ್ ಆಗಿ ಯೋಚಿಸಬಲ್ಲ! ಆದ್ದರಿಂದ ನೆಗೆಟಿವ್ ವ್ಯಕ್ತಿಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.               ತಾನು ಅತಿಯಾಗಿ ಪ್ರೀತಿಸಿದ ವ್ಯಕ್ತಿ ಮರಣ ಹೊಂದಿದಾಗ, ಆತ್ಮೀಯರಿಂದ ಬೇರ್ಪಟ್ಟ ನೋವು ಅಪಾರ.ಈ ಆತ್ಮೀಯರು.. ತಂದೆ ,ತಾಯಿ, ಅಕ್ಕ, ಅಣ್ಣ, ತಂಗಿ, ತಮ್ಮ, ತಂಗಿ, ಗೆಳೆಯ,ಗೆಳತಿ ಅಥವಾ ತನ್ನದು ಅಂದುಕೊಂಡ ಯಾವುದೇ ಜೀವ, ಇತ್ಯಾದಿಗಳ ಯಾದಿಯನ್ನು ಹೊಂದಿರುತ್ತದೆ. ಜೀವನವೇ ಅವರು ಎಂದಾಗ ಅವರಿಲ್ಲದ ಜೀವನಕ್ಕೆ ಅರ್ಥವೇ ಇಲ್ಲ ಎನ್ನಿಸುವುದು ತೀರ ಸ್ವಾಭಾವಿಕ. ಅನುಭವಗಳು ಜೀವನಕ್ಕೆ ಪಾಠ ಕಲಿಸುತ್ತಾ ಎನ್ನುವುದೇನೋ ಸರಿ. ಆದರೆ ಆದ ಕೆಟ್ಟ ಅನುಭವಗಳು ಮನುಷ್ಯನನ್ನು ನೆಗೆಟಿವ್ ಕೂಪಕ್ಕೆ ತಳ್ಳುವುದೂ ಅಷ್ಟೇ ಸತ್ಯವಾಗಿದೆ. ಕೆಟ್ಟ ಅನುಭವಗಳು  ಒಬ್ಬನನ್ನು ಮೇಲೆತ್ತುವಂತೆ ಮಾಡಿದರೆ, ಇನ್ನುಳಿದವರಿಗೆ ಅಂಥ ಘಟನೆಗಳಿಂದ ಹೊರಬಾರದಂತೆ ಮಾಡಿರುತ್ತವೆ. ಪೆಟ್ಟು ತಿಂದ ವ್ಯಕ್ತಿ ಪೆಟ್ಟನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾಗಾಲೋಟದಲ್ಲಿ ಮುಂದುವರಿದು ಪ್ರಗತಿಯನ್ನು ಸಾಧಿಸಬಹುದು… ಆದರೆ ಅದು ಎಲ್ಲರ ಜೀವನದಲ್ಲೂ ಸಾಧ್ಯವಿಲ್ಲ.          ಎಷ್ಟೇ ಪೊಜಿಟಿವ್ ಆಗಿ ಇರಲು ಬಯಸಿದರೂ ಬರುವ ಸಂದರ್ಭಗಳು ಮನುಷ್ಯನನ್ನು ಕುಗ್ಗಿಸಿ ನೆಲಕಚ್ಚುತ್ತವೆ. ಅಂಥ ಸಂದರ್ಭ ಎಂದರೆ ಭಯ ಪೀಡಿತರಾಗುವ ಅನುಭವಗಳು ಅವರಲ್ಲಿ ಬೇರೂರಿ ಬಿಡುತ್ತವೆ.ಇನ್ನೊಂದೆಡೆ, ಮರಳಿ ಪ್ರಯತ್ನ ಮಾಡು ಎನ್ನುವ ಸಿದ್ಧಾಂತವನ್ನು ಕಟ್ಟಾ ನಿರ್ವಹಿಸಿದಾಗಲೂ ಮಾಡಿದ ಪ್ರಯತ್ನಗಳಿಗೆ ಬೆಲೆಯೇ ಇರಲ್ಲ; ಎಲ್ಲ ವಿಫಲವಾಗುತ್ತವೆ ಅಥವಾ ಪ್ರಯತ್ನಕ್ಕೆ ಫಲವೇ ಇರೋದಿಲ್ಲ. ಇನ್ನಷ್ಟು ಸಂದರ್ಭಗಳಲ್ಲಿ ಒಳ್ಳೆಯದೇ ಆಗುತ್ತೆ ಎಂದು ಕಾದು ಕಾದು ಕುಳಿತಿರುತ್ತಾರೆ. ಆದರೆ ಕಾಯುವಿಕೆಗೆ ಸಫಲತೆ ಸಿಕ್ಕಿರಲ್ಲ. ಒಳ್ಳೆಯ ಗಳಿಗೆ ನಿರೀಕ್ಷೆಯಲ್ಲಿ ದಿನ, ತಿಂಗಳು ವರ್ಷಗಳನ್ನು ಸವೆಸಿದರೂ ಸಾಧನೆ ಆಗಿರಲ್ಲ.ಕಾದು ಬರೀ ಸುಣ್ಣವಾಗುತ್ತಾರೆ ಅಷ್ಟೇ. ಕೆಲವು ಸಲ ಮನೆಯವರಿಂದ ಅಥವಾ ಸ್ನೇಹಿತರಿಂದ ನಿರೀಕ್ಷಿಸಿದ ಮಟ್ಟದ ಸಹಾಯ, ಸಹಕಾರಗಳು, ವ್ಯಕ್ತಿಗೆ ಸಿಕ್ಕಿರಲ್ಲ. ಒಂದು ಕಿರುಬೆರಳಷ್ಟೇ ಸಹಾಯ, ಸಹಕಾರ, ಉತ್ತೇಜನದ ಲಾಲಸೆಯನ್ನು ಇಟ್ಟುಕೊಂಡ ವ್ಯಕ್ತಿ ಒಮ್ಮೆಲೇ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಇದಕ್ಕೆ ವಿರುದ್ಧವಾದ ಸಂದರ್ಭಗಳಲ್ಲಿ ವ್ಯಕ್ತಿಯ ಸಹಾಯ, ಪ್ರೋತ್ಸಾಹ, ಕೆಲಸಕ್ಕೆ ಬಂದಿರಲ್ಲ. ಕಾರಣ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಚಿಮ್ಮುತ್ತಿರುತ್ತದೆ. ತಮ್ಮ ಮೇಲೆ ತಮಗೆ ವಿಶ್ವಾಸವಿಲ್ಲ. ಈ ಕೆಲಸದಲ್ಲಿ ನಾನು ಸೋತರೆ ಹೇಗೆ? ಜನ ಏನೆಂದಾರು? ಎಂಬುದರಲ್ಲಿ ಕಾಲಹರಣವಾಗುತ್ತದೆ. ಇಂಥದ್ದೇ ಸಂದರ್ಭಗಳು ವ್ಯಕ್ತಿಯನ್ನು ಜಿಗುಪ್ಸೆ ಹೊಂದುವಂತೆ ಮಾಡುತ್ತವೆ. ಈ ಜಿಗುಪ್ಸೆ ಜೀವನದುದ್ದಕ್ಕೂ ಮುಂದುವರಿದು ಜನ ಎಲ್ಲ ಆತ ಬರೀ ನೆಗೆಟಿವ್ ಬಿಡು ಎಂಬ ನೇಮಪ್ಲೇಟ್ ತಯಾರಿಸಿ, ಹಾಕುವುದರಲ್ಲಿ ಉತ್ಸುಕರಾಗಿರುತ್ತಾರೆ.                               ಆದರೆ ನಿಜಸಂಗತಿ ಇರೋದೇ ಇಲ್ಲಿ. ಒಬ್ಬ ವ್ಯಕ್ತಿ ಯಾವ ಕಾರಣಗಳಿಂದ ನೆಗೆಟಿವ್ ಆಗಿ ಯೋಚಿಸುತ್ತಾನೆ ಎಂಬುದನ್ನು ಅರಿಯಬೇಕಾಗಿದೆ. ಮೂಲ ಸಮಸ್ಯೆಗಳಿಗೆ ಪರಿಹಾರಗಳು ಸೃಷ್ಟಿಯಾದಾಗ ಸ್ವಾಭಾವಿಕವಾಗಿ ಪೊಜಿಟಿವ್ ಎಡೆಗೆ ಮನುಷ್ಯ ವಾಲಬಹುದು. ಇಲ್ಲಾದರೆ ಎಂದೂ ಆಗಲ್ಲ. ಪಾಸಿಟಿವ್ ಆಗಿ ಆಗಿ ಎಂದರೆ ನಾಟಕೀಯ ನಗುವನ್ನು ಹೊದ್ದು ಹೃದಯದಲ್ಲಿ ನೋವು ತುಂಬಿಕೊಂಡು ಸಾಗಬೇಕಾಗುತ್ತದೆ. ಇಂಥವರಿಗೆ ನಿಜವಾಗಿಯೂ ಸಹಾಯ ಮಾಡುವ ಮನಸ್ಸಿದ್ದರೆ ಅವರೊಂದಿಗೆ ಒಂದು ಆಪ್ತ ಸಮಾಲೋಚನೆಯ ಅಗತ್ಯವಿದೆ.ಸಮಸ್ಯೆಯ ಆಳ ಅರಿತು, ಪರಿಹಾರ ಒದಗಿಸಿ.ಇಲ್ಲಾ ಅವರಿಗೆ ಸಾಂತ್ವನ ನೀಡುವ ವ್ಯಕ್ತಿಗಳ ಹತ್ತಿರವಾದರೂ ಕರೆದುಕೊಂಡು ಹೋಗಿ. ಅವರಂಥದ್ದೇ ಸಮಸ್ಯೆಯಿಂದ ಬಳಲಿ, ಅವುಗಳನ್ನು ಮೆಟ್ಟಿನಿಂತ ವ್ಯಕ್ತಿಗಳ ಪರಿಚಯ ಮಾಡಿರಿ.ಅತೀಯಾದ negativity ಯಿಂದ ದೇಹಾರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಿ.ನೀವು ಕೊಡುವ ಸಲಹೆಗಳು ಅಥವಾ ಕ್ರಮಗಳು ನೈಜವಾದಲ್ಲಿ, ಖಂಡಿತ ವ್ಯಕ್ತಿ ತನ್ನ ನೆಗೆಟಿವಿಟಿಯಿಂದ ಹೊರಬರಬಹುದು.ಹೀಗೆ ಮಾಡಿದಾಗ ಒಳ್ಳೆಯ ಮಾರ್ಗದರ್ಶನ ಹಾಗೂ ಸಹಾಯ ಮಾಡಿದ ಆತ್ಮ ಸಂತೋಷ ನಿಮಗೂ ಇರುತ್ತದೆ. **************************************

ಯಾಕೆ ನೆಗೆಟಿವಿಟಿ? Read Post »

ಇತರೆ, ಜೀವನ

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು ಎಲ್ಲರಿಗೂ ಗೊತ್ತಾಗಿದ್ದೇ ಆಗ. ಪಟಪಟ ಮಾತು, ಹಠ ಹಾಗೂ ಅತಿ ಶುದ್ಧತೆಯಿದ್ದ ನಾನು ನಮ್ಮಪ್ಪನ ಕಣ್ಣಲ್ಲಿ “ಸಾಧಕಿ”. ಅತೀ ಕೋಪ ಇದ್ದ ನಮ್ಮಪ್ಪ ಬಹಳ ಶಿಸ್ತಿನ ಸಿಪಾಯಿಯಾಗಿದ್ದರು. ಮನೆಗೆ ಯಾರೇ ಬಂದರೂ ಯಾರೂ ಮುಖ ಹೊರಹಾಕುವಂತಿರಲಿಲ್ಲ. ನನಗೊಬ್ಬಳಿಗೆ ಮಾತ್ರ ಅದರಲ್ಲೆಲ್ಲ ಸ್ವಲ್ಪ ಸಡಿಲತೆಯಿತ್ತು. ಬಂದವರೆದುರು ಮಾತು, ಡಾಕ್ಟರ್ ರಾಜ್ ಕುಮಾರ್ ಪರ ವಾದ, ಚರ್ಚೆ ಮಾಡುವುದಕ್ಕೂ ಮತ್ತು ಅವರಿಗೆಲ್ಲಾ ತಿಂಡಿ ಕಾಫಿ ಕೊಡುವುದಕ್ಕೂ ನನಗೆ ಮಾತ್ರ ಅವಕಾಶವಿತ್ತು. ನಾವು ನಾಲ್ಕು ಜನ ಅಕ್ಕತಂಗಿಯರು ಕೂರವ, ನಿಲ್ಲುವ ಭಂಗಿಗಳೆಲ್ಲ ಅವರು ಮಾಡಿದ ನಿಯಮಗಳ ಪಟ್ಟಿಯಲ್ಲಿದ್ದವು. ಮಕ್ಕಳು ಕೂರುವಂಥ ಪುಟ್ಟ ಪುಟ್ಟ ಕಬ್ಬಿಣದ ಕಟ್ಟಿನಲ್ಲಿ ಬಿಗಿದ ಪ್ಲಾಸ್ಟಿಕ್ ವೈರಿನ ಮೂರು ಖುರ್ಚಿಗಳನ್ನು ತಂದು ಅದರಲ್ಲಿಯೇ ಕೂರಲು ನಿರ್ಭಂಧ ಹೇರಿದ್ದರು. ನನಗೆ ಬುದ್ದಿ ಬಂದ ಮೇಲೆ (ನನಗೆ ಪ್ರಶ್ನೆ ಕೇಳುವಷ್ಟು ಬುದ್ದಿ ಬಂದದ್ದು ನನ್ನ 20 ವರ್ಷ ವಯಸ್ಸಿನ ನಂತರ) ಕೇಳಿದ್ದೆ “ಯಾಕಣ್ಣ ನಮ್ಮನ್ನ ಯಾವಾಗಲೂ ಪುಟ್ಟ ಖುರ್ಚಿ ಮೇಲೆ ಕೂರಿಸ್ತಿದ್ದೆ” ಅಂತ. ಅದಕ್ಕವರು “ಜಾಗ ದೊಡ್ಡದಿದ್ರೂ ಚಿಕ್ಕದಾಗಿ ಕೂತ್ಕೋಳ್ಳೋದನ್ನು ಕಲಿಸೋಕ್ಕೆ” ಎಂದಿದ್ದರು. ಯಾರಿಗೂ ಏನೂ ಅಲ್ಲವೆನಿಸುವ, ಅಷ್ಟು ಸಣ್ಣ ವಿಷಯ ಕೂಡಾ ನನ್ನ ತಂದೆಯ ಜೀವನದಲ್ಲಿ ಶಿಸ್ತಿನ ಭಾಗವಾಗಿತ್ತು. ನನ್ನ ತಂದೆಯ ಕೊನೇ ದಿನ ನನ್ನನ್ನು ಮನೆಗೆ ಕರೆಸಿಕೊಂಡು, ಪಕ್ಕದಲ್ಲೇ ರಾತ್ರಿ ಪೂರ್ತಿ ಕೂಡಿಸಿಕೊಂಡು ತಾನು ನಿದ್ದೆ ಮಾಡಿದ್ದರು. ಕೊನೆಯ ಊಟ ನನ್ನ ಕೈಯಿಂದ ಮಾಡಿ, ತಲೆಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ, ದೀರ್ಘವಾದ ಉಸಿರಿನೊಂದಿಗೆ ಹಾಗೇ ಹೊರಟುಬಿಟ್ಟರು. ನಾನು ತಣ್ಣಗಾದ್ರೆ ತಿನ್ನಲ್ಲ ಅಂತ ಪ್ರತಿದಿನ ಬೇಸರ ಮಾಡದೆ, ಎರಡು ಕಿಲೋಮೀಟರ್ ದೂರವಿದ್ದ ನನ್ನ ಶಾಲೆಯ ತನಕ ನಡೆದು ಊಟ ತಂದುಕೊಟ್ಟು, ಮತ್ತೆರಡು ಕಿಲೋಮೀಟರ್ ವಾಪಸ್ ಮನೆಗೆ ಬರುತ್ತಿದ್ದ ನನ್ನಪ್ಪನಿಗೋ, ತಾತನಿಗೋ ನಾನೆಂದೂ ಥಾಂಕ್ಸ್ ಹೇಳೇ ಇಲ್ಲ. ನನಗೆ ಊಟದ ಡಬ್ಬಿ ಕೊಟ್ಟುಬಂದು ನಮ್ಮಪ್ಪ, ಊಟ ಮಾಡಿ ಎರಡು ಕಿಲೋಮೀಟರ್ ದೂರದ ಕಾರ್ಖಾನೆಗೆ ಎರಡನೇ ಪಾಳಿಯ ಕೆಲಸಕ್ಕೆ ನಡೆದು ಹೋಗಬೇಕಿತ್ತು. ಅಲ್ಲಿ ಮೆಷಿನಿನ ಮುಂದೆ ನಿಂತು ಕೆಲಸ ಮಾಡಿ, ಮಧ್ಯರಾತ್ರಿ 12.30ಗೆ ಮನೆಗೆ ನಡೆದು ಬರುತ್ತಿದ್ದ ನನ್ನಪ್ಪನ ಕಷ್ಟಗಳು, ಪ್ರೀತಿ ನನಗೆ ತಿಳಿದದ್ದು ಮಾತ್ರ ಗಂಡನ ಮನೆ ಮೆಟ್ಟಿದ ನಂತರವೆ. ನಾಲ್ಕು ಹೆಣ್ಣು ಮಕ್ಕಳಿಗೂ 8 ಗಂಟೆ ಒಳಗೆ ಸ್ನಾನ, ಸೀಮೆಎಣ್ಣೆ ಸ್ಟವ್ವಿನಲ್ಲಿ ತಿಂಡಿ, ಬ್ಯಾಗು ಏನೇನೋ ಅವಸ್ಥೆ ಜೊತೆಗೆ ಎಂಟು ಜಡೆ ಹೆಣಿದ ಅಮ್ಮನಿಗೂ ನಾನೆಂದೂ ಥಾಂಕ್ಸ್ ಹೇಳಲಿಲ್ಲ. ಎಳವೆಯಲ್ಲಿ ಅಂದರೆ ಇಲ್ಲಿಗೆ 45 ವರ್ಷಗಳ ಹಿಂದೆ ಬೇನೆ ಬಂದು, ಮುಚ್ಚಿಹೋದ ಕಣ್ಣಿಗೆ ಹಾಕಲು, ಕಳ್ಳರ ಕೂಪವಾಗಿದ್ದ, ಆಗಿನ ಬೆಂಗಳೂರು ಹೊರವಲಯದಲ್ಲಿದ್ದ (ಈಗ ಈ ಜಾಗವನ್ನೂ ದಾಟಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿಕೊಂಡಿದೆ) 40 ಕ್ಯಾಂಡಲ್ ಬ್ರಿಡ್ಜ್ ಹತ್ತಿರವಿದ್ದ ಸೀಗೇ ಬೇಲಿಯ ಕೊರಡನ್ನು, ನನ್ನ ಸೋದರಮಾವನೊಡನೆ ನಡೆದೇ ಹೋಗಿ ತಂದು, ಪ್ರಾಣ ಹಾರಿಹೋಗುವಂತೆ ಊದಿದರೆ, ಬರುವ ಎಣ್ಣೆಯನ್ನು ಹಾಕಿ ಕಣ್ಣುಳಿಸಿದ ನನಪ್ಪನನ್ನು ಕಣ್ಣುಮುಚ್ಚುವ ತನಕ ಮಗುವಂತೆ ಕಾಯ್ದಿದ್ದೇನೆ. ಗಂಡ್ಯಾಕೆಂದು ಇಂದು ನಿಡುಸುಯ್ವ ಇದೇ ಜನ, ಅಂದು “ನಾಲ್ಕೂ ಹೆಣ್ಣು ಬೋಕಿಗಳೆಂದೂ, ಕೊಳ್ಳಿ ಇಡಲು ಒಬ್ಬ ಗಂಡು ಹೆರಲು ಯೋಗ್ಯತೆಯಿಲ್ಲದವಳು, ಕೊನೇ ಕಾಲದಲ್ಲಿ ನಿನಗ್ಯಾರು ಆಸರೆ” ಎನ್ನುತ್ತಾ ಮೂದಲಿಸಿ, ಹೆದರಿಸಿದಾಗೆಲ್ಲ, ಕೊರಗುತ್ತಿದ್ದ ನಮ್ಮಮ್ಮನ ಮನಸ್ಸನ್ನು ಮಾತ್ರ, ಅವರಿರುವ ತನಕವೂ ಬದಲಾಯಿಸಲಾಗದೆ ಸೋತಿದ್ದೇನೆ… ಇದುವೇ ಅಲ್ಲವೇ “ಸಹಜ ಜೀವನ” ಮಾತುಮಾತಿಗೆ ಥಾಂಕ್ಸ್ ಥಾಂಕ್ಸ್ ಅನ್ನುವುದು, ಮತ್ತು ನಮ್ಮ ಮಕ್ಕಳಿಗೆ ನಾವು ಮಾಡಲೇಬೇಕಾದ ಕರ್ತವ್ಯಕ್ಕೂ ಥಾಂಕ್ಸ್ ನಿರೀಕ್ಷಿಸುವ ಇಂದಿನ ಮನಃಸ್ಥಿತಿ ಖಂಡಿತ ಅಸಹಜ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನನ್ನ ತಂದೆತಾಯಿಯರಿಗೋ ಮತ್ತು ಅವರ ಸಮವಯಸ್ಕರಿಗೋ ಈ ವಿಷಯದಲ್ಲಿ ಖಿನ್ನತೆ ಇರಲಿಲ್ಲ. ಯಾಕೆಂದ್ರೆ ಎಲ್ಲರೂ ಮಾಡುವ ಕೆಲಸವನ್ನೇ ನಾವು ಮಾಡುವುದೆಂಬ ಭಾವನೆಯಿತ್ತು. ಕುಟುಂಬಕ್ಕಾಗಿ ನಾನೇನೂ ವಿಶೇಷವಾದದ್ದನ್ನು ಮಾಡುತ್ತಿಲ್ಲ ಅನ್ನೋ ಹಾಗೆ ಹೇಳದೆ ಬದುಕಿಬಿಟ್ಟರು. ಮುಖ್ಯವಾಗಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ನಿರೀಕ್ಷೆಗಳೆ ಇರಲಿಲ್ಲ. ಬದಲಾದ ಪರಿಸ್ಥಿತಿಗಳು ಜೀವನದ ಸಹಜತೆಯನ್ನು ನುಂಗಿ ಖಿನ್ನತೆಯನ್ನು ಹುಟ್ಟುಹಾಕುತ್ತಿವೆ. ******************************************

ಥಾಂಕ್ಸ್ ಎಂದರೆ ಸಾಕೇ Read Post »

ಇತರೆ, ಜೀವನ

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ

ಅನುಭವ ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ             ಪ್ರತಿ ಡಿಸೆಂಬರ್ ೨೨ಕ್ಕೆ ನಮ್ಮ ಶಾಲೆಯ ವಾರ್ಷಿಕೋತ್ಸವ, ಯಾವಾಗಲು ವಾರ್ಷಿಕೋತ್ಸವ ಮುಗಿದ ಬಳಿಕ ನಮಗೆ ಕ್ರಿಸ್ಮಸ್ರಜೆ. ರಜೆ ಕಳೆಯಲೆಂದೇ ಅಜ್ಜನ ಮನೆಗೆ ಹೋದೆವು. ನಮ್ಮ ಹಾಗೆ ಕ್ರಿಸ್ಮಸ್ ರಜೆ ಕಳೆಯಲು ನಮ್ಮಜ್ಜನ ದಾಯಾದಿಗಳ ಮನೆಮಕ್ಕಳೂ ಬಂದಿದ್ದರು. ಒಂದು ರೀತಿ ಮಕ್ಕಳ ಸೈನ್ಯವೇ ಸರಿ. ನಿಮ್ಮ ಶಾಲೆ ಹೇಗೆ? ನಿಮ್ಮ ಶಾಲೆಯಲ್ಲಿ ಏನೇನು ಕಲಿಸುತ್ತಾರೆ? ನಿಮಗೆ ಯಾವ ಟೀಚರ್ ಇಷ್ಟ? ಯಾರು ಹೇಗೆ ಬಯ್ಯುತ್ತಾರೆ? ಇತ್ಯಾದಿಗಳ ಚರ್ಚೆ ಮಾಡುತ್ತಿದ್ದೆವು. ರಜೆಗೆಂದು ಹೋದ ದಿನ ನಮಗೆ ಅಲ್ಲಿ ಭರ್ಜರಿ ಸ್ವಾಗತ. ನಮ್ಮಜ್ಜ ಅಜ್ಜಿಯಂತೂ ಬಸ್ ಬಳಿಯೇ ಬಂದು ನಮ್ಮ ಹೆಗಲ ಮೇಲೆ ಕೈಹಾಕಿ, ತಲೆನೇವರಿಸಿ ಕರೆದುಕೊಂಡು ಹೋದರು. ಇಂದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರು ತುಳುಕುತ್ತದೆ. ಅಣ್ಣನ ಮಕ್ಕಳು ಬರುತ್ತಾರೆಂಬ ಖುಷಿಯಲ್ಲಿ ನಮ್ಮತ್ತೆ (ಆಗಿನ್ನು ಲಗ್ನವಾಗಿರಲಿಲ್ಲ) ಗಸಗಸೆ ಪಾಯಸ ಮಾಡಿ ತಣಿಸಿ ನಮಗಾಗಿ ಕಾಯುತ್ತಿದ್ದರು. ಭರ್ಜರಿ ತಿಂಡಿತಿನಿಸುಗಳು ಅವುಗಳನ್ನು ತಿಂದ ನಮಗೆ ಊಟ ಬೇಡ ಅನ್ನಿಸಿ ಹಾಗೆ ಮಲಗಿಕೊಂಡೆವು. ನನ್ನಜ್ಜಿ ನಾವೆಲ್ಲ ಮಲಗಿದ ಮೇಲೆ ಬಂದು ಸರಿಯಾಗಿ ಹೊದಿಸಿ ತಾನೂ ಪಕ್ಕದಲ್ಲೆ ಕುಳಿತುಕೊಂಡು ಹೂ ಕಟ್ಟುತ್ತಾ “ಇವತ್ತೇನೊ ಹೊಸದು ಏನು ಗಲಾಟೆಯಿಲ್ಲ, ನಾಳೆಯಿಂದ ಇವರ ಜಗಳ ಬಿಡಿಸುವುದೇ ನನಗೊಂದು ಕೆಲಸ” ಎಂದರು. ಅದಕ್ಕೆ ಪ್ರತಿಯಾಗಿ “ಅವರು ಹೇಳಿದ್ದಕ್ಕೆಲ್ಲ ನಾನು ಹೂ ಅನ್ನಬೇಕು ಅದೊಂದು ನನಗೆ ತಾಪತ್ರಯ” ಎಂದು ಅತ್ತೆ ನಗುತ್ತಿದ್ದರು.              ಡಿಸೆಂಬರ್ ಅಂದರೆ ಚಳಿಗಾಲ ಜೊತೆಗೆ ಸುಗ್ಗಿಯ ಕಾಲವೂ ಹೌದು, ಭತ್ತ ಕೊಯ್ದು ಹೊರೆ ಕಟ್ಟಿ ಬಣವೆಗಳನ್ನು ಒಟ್ಟುತ್ತಿದ್ದ ಸೀಸನ್ ಅದು. ನಮಗೆ ಅದನ್ನು ಹೇಗೆ ಜೋಡಿಸುತ್ತಾರೆ ಎಂಬ ಕುತೂಹಲ, ಅಜ್ಜನ ಬಳಿಗೆ ಹೋಗಿ ಮೆಲ್ಲನೆ “ನಾವೂ ಬರ್ತೀವಿ ನಿಮ್ಮ ಜೊತೆಗೆ ಗದ್ದೆಹತ್ರ” ಅಂದೆವು ಒಂದೇ ಬಾರಿಗೆ “ಬನ್ನಿ ಅದಕ್ಕೇನಂತೆ” ಎಂದರು. ಆದರೆ ಅಜ್ಜಿ “ನೀವುಗಳು ಬಂದು ಅಲ್ಲೇನು ಮಾಡ್ತೀರಿ ಮನೆಲ್ಲೇ ಇರಿ” ಎಂದರು. ಪುರುಸೊತ್ತಿಲ್ಲದ ಕೆಲಸದ ನಡುವೆ ಈ ಮಕ್ಕಳ ತುಂಟಾಟ ತಡೆಯಲಾಗದು ಎಂಬ ಭಾವ ಆಕೆಯದ್ದು. ನಾವು ಅವರ ಬಳಿ ಇವರ ಬಳಿ ಹೇಳಿಸಿ ಶಿಫಾರಸ್ಸು ಮಾಡಿಸಿ ಕಡೆಗೆ ಗದ್ದೆ ಬಯಲಿಗೆ ಪ್ರಯಾಣ ಬೆಳೆಸಿದೆವು. ದಾರಿಯಲ್ಲಿ ಹೋಗುವಾಗ ನಮ್ಮ ಕೂಗಾಟ ಸ್ವಲ್ಪ ಹೆಚ್ಚೇ ಇತ್ತು ಅಜ್ಜಿ  ಆ ಕೂಗಾಟವನ್ನು ತನ್ನ ಕಣ್ಣುಗಳಿಂದಲೇ ನಿಯಂತ್ರಿಸುತ್ತಿದ್ದರು. ಭತ್ತವನ್ನು ಕಟಾವು ಮಾಡಿದ್ದರಿಂದ ಆ ಗದ್ದೆ ಬಯಲಿನಲ್ಲಿ ಬರಿಗಾಲಲ್ಲಿ ಹೋಗಲಿ ಚಪ್ಪಲಿ ಧರಿಸಿದ ಕಾಲುಗಳಿಂದಲೂ ಆಗುತ್ತಿರಲಿಲ್ಲ.             ಸ್ವಲ್ಪ ಹೊತ್ತು ನೋಡಿ ಪಕ್ಕದವರ ತೋಟಕ್ಕೆ ನಮ್ಮ ಪ್ರವೇಶವಾಯಿತು. ರಜೆಗೆ ಮಕ್ಕಳು ಬಂದಿದ್ದಾರೆ ಎಂದು ಎಳನೀರು, ಸೀಬೆಕಾಯಿ, ಗಣಿಕೆ ಹಣ್ಣು ಇತ್ಯಾದಿಗಳನ್ನು ಕೊಟ್ಟರು. ಹೆಣ್ಣುಮಕ್ಕಳಿಗೆಲ್ಲ ಆ ಪಕ್ಕದ ತೋಟದ ಅಜ್ಜಿ “ಕಾಕಡ, ಕನಕಾಂಬರ, ದವನ, ಮರುಗ ಎಲ್ಲಾ ಇವೆ ಎಲ್ಲಾ ಕೊಯ್ದುಕೊಂಡು ಕಟ್ಟಿ ಮುಡಿದುಕೊಳ್ಳಿ” ಎಂದು ಎಲ್ಲೊ ಸಿಕ್ಕಿಸಿ ಇಟ್ಟಿದ ದಾರವನ್ನು ನಮ್ಮೆಡೆಗೆ ಎಸೆದರು. ಅಭ್ಯಾಸವಿಲ್ಲದ ನಮಗೆ ಹೂ ಬಿಡಿಸಲು ಗೊತ್ತಾಗುತ್ತಿರಲಿಲ್ಲ ತರಚಿ ಹಾಳು ಮಾಡುತ್ತಿದ್ದೆವು ಅದನ್ನು ಕಂಡ ಅವರು “ಉಪಯೊಗಕ್ಕೆ ಬಾರದ್ಹಾಗೆ ಮಾಡ್ತೀರಲ್ಲ”  “ಓದೋ ಮಕ್ಕಳೇ ಹಿಂಗೆ ಹೂ ಬಿಡಿಸೋಕ್ಕು ಬರಲ್ವೆ?” ಎಂದು ಅವರೆ ಬಿಡಿಸಿ ಅಲ್ಲೆ ಒಂದು ಮುತ್ತುಗದ ಎಲೆ ಕೊಯ್ದು ಪೊಟ್ಟಣಕಟ್ಟಿ ನಯವಾಗಿ ಬೀಳ್ಕೊಟ್ಟರು ಇನ್ನು ಹೆಚ್ಚಿನ ನಷ್ಟವಾಗಬಾರದೆಂದು.             ನನ್ನಜ್ಜನಿಗೆ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಳ್ಳುವುದೇ ಖುಷಿ. ಆದರೆ ನಮ್ಮಜ್ಜಿಗೆ ಬೇರೆಯವರ ಬಳಿ ದೂರು ಹೇಳಿ ಬಯ್ಯವುದರಲ್ಲೆ ಖುಷಿ. ಅಜ್ಜ ನನ್ನನ್ನು ತೋರಿಸಿ “ಇವಳು ಕಾನ್ವೆಂಟ್ ಶಾಲೆಗೆ ಹೋಗ್ತಾಳೆ ಅಕ್ಷರವಂತೂ ಮುತ್ತು ಪೋಣಿಸಿದ ಹಾಗೆ ಬರಿತಾಳೆ” ಅಂದರೆ ಅಜ್ಜಿ ಮಧ್ಯೆ ಪ್ರವೇಶಿಸಿ “ಹೌದು ಮನೆಯಲ್ಲಿ ಒಂದೇ ಒಂದು ಕೆಲಸ ಮಾಡಲ್ಲ ಲಕ್ಷಣವಾಗಿ ಉದ್ದಲಂಗ ಹಾಕ್ಕೋಳದ್ ಬಿಟ್ಟು ಎನೋ ಹಿಜಾರ ಸಿಕ್ಕಿಸಿಕೊಂಡಿದ್ದಾರೆ ನೋಡಿ ಮೆರೆಯೋ ದೇವರುಗಳು ಇದ್ದ ಹಂಗೆ” ಎಂದರು. ನಮಗೆ ಆ ಮಾತುಗಳನ್ನು ಕೇಳಿ ನಗುಬಂತು, ತಕ್ಷಣ ಪಕ್ಕದ ಮನೆಯ ನೆಂಟರ ಹುಡುಗಿ “ ಇಲ್ಲ ನಿನ್ನ ತರ ಉದ್ದನೆ ಪಂಚೆ ಸುತ್ತೊಕಬೇಕ ಅಜ್ಜಿ” ನಮ್ಮ ಹಾಗೆ  ನೀವೂ ಹಾಕೊಳಿ ಎಷ್ಟು ಆರಾಮ್ ಫೀಲ್ ಆಗುತ್ತೆ ಗೊತ್ತ” ಎಂದೆ ಬಿಟ್ಟಳು ಎಲ್ಲರು ನಕ್ಕುಬಿಟ್ಟರು ಪಾಪ ಅಜ್ಜಿ ಬೇಜಾರು ಮಾಡಿಕೊಳ್ಳಲಿಲ್ಲ ನಕ್ಕು ಸುಮ್ಮನಾದರು. ಹೊತ್ತು ಕಳೆದ್ದು ಗೊತ್ತಾಗಲಿಲ್ಲ.             ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ಊಟ ಮನೆಯಿಂದ ಬಂತು. ಗದ್ದೆ ಕೆಲಸಕ್ಕೆ ಬಂದವರೊಬ್ಬರು ಸೈಕಲ್ ಮೇಲೆ ಊಟ ಇರಿಸಿಕೊಂಡು ಬಂದರು ಅವರ ಜೋತೆಗೆ ಅತ್ತೆಯೂ ಬಂದರು. ಗದ್ದೆ ಬಯಲಿನಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ ಎಲ್ಲಾ ಸೇರಿ ಊಟ ಮಾಡಿದೆವು. ನನ್ನಜ್ಜನಿಗೆ ಎಲೆಯಲ್ಲಿ ಊಟ ಬಿಡುವಂತಿರಲಿಲ್ಲ ಹಾಗೆ ಉಳಿಸಿದರೆ ಬಹಳ ಕೋಪಮಾಡಿಕೊಂಡು ಬಡಿಸಿದವರಿಗೂ, ಊಟಕ್ಕೆ ಕುಳಿತವರಿಗೂ ಬಯ್ದುಬಿಡುತ್ತಿದ್ದರು. ಗದ್ದೆ ಕೆಲಸಕ್ಕೆಂದು ಬಂದಿದ್ದ ಅಳು ಸೈಕಲ್ನಲ್ಲಿ ಊಟ ತಂದಿದ್ದರಲ್ಲ ಅದಕ್ಕೆ ಪ್ರತಿಫಲವೆಂಬಂತೆ “ಇಲ್ಲೇ ಒಂದು ನಿಮಿಷ” ಎಂದು ಹೋದವರು ಒಂದು ಗಂಟೆಯಾದರು ಪತ್ತೆಯಿರಲಿಲ್ಲ. ಕೆಲಸ ಸಾಗುತ್ತಿಲ್ಲ ಎಂದು ಅಜ್ಜ ಸಿಟ್ಟು ಮಾಡಿಕೊಂಡು ನಾವಿದ್ದ ಜಾಗ ಬಿಟ್ಟು ಮುಂದೆ ಹೋದರು. ಹಾಗೆ ಮುಂದೆ ಹೋದರು. ಹಾಗೆ ಮುಂದೆ ಹೋಗುತ್ತಾ ಹೋಗುತ್ತಾ ಇದ್ದಂತೆ ಏನೋ ಸದ್ದಾಯಿತು. ಅದನ್ನು ಗಮನಿಸಿದ ನಮ್ಮ ಸೋದರ ಅತ್ತೆ “ಅದೇನೂ ಅಲ್ಲ ಸಮಯ ಬಂದರೆ ಇರಲಿ ಅಂತ ಒಂದು ಮಡಚುವ ಚಾಕು, ಅರ, ಬೀಗದ ಕೀ ಇತ್ಯಾದಿಗಳನ್ನು ಇಟ್ಟುಕೊಂಡಿದ್ದಾರೆ”. “ಹಾಗಿದ್ದರೆ ಅಜ್ಜಿ” ಎಂದರೆ ಅವರು  “ಚಿಮ್ಮಟ, ಹೂಕಟ್ಟುವ ನೂಲು, ಸೇಪ್ಟಿಪಿನ್, ಹರಶಿಣ ಕೊಂಬು, ಅರ್ಚನೆ ಪ್ರಸಾದ ಇತ್ಯಾದಿ ಇತ್ಯಾದಿ ಅಂದರು ಅದೆಲ್ಲ ಸರಿ ನೀವು………….” ಎಂದಾಗ ಅತ್ತೆಗೆ ಕೋಪ ಬಂದು ಕೈ ಎತ್ತಿದಾಗ ನಾವೆಲ್ಲ ಚೆಲ್ಲಾಪಿಲ್ಲಿಯಾದೆವು.             ಸ್ವಲ್ಪ ಹೊತ್ತಿನ ಬಳಿಕ ನಮ್ಮಜ್ಜಿ ಮತ್ತು ಅತ್ತೆ ಹೂಕಟ್ಟುತ್ತಾ ಕುಳಿತರು ನಾವು ಹೋಗಿ ಕುಳಿತುಕೊಂಡು ಅದೇನು ಮ್ಯಾಜಿಕ್ ಎಂಬಂತೆ ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆವು. ಏನೋ ದೂರಕ್ಕೆ ಕಣ್ಣು ಹಾಯಿಸಿದರೆ ಎದರೊಂದು ಬೆಟ್ಟ ಅದರ ಮೇಲೊಂದು ಗುಡಿಕಾಣಿಸುತ್ತಿತ್ತು. ಕುತುಹಲ ತಡೆಯಲಾಗಲಿಲ್ಲ ಏನು?ಏನು?  ಎಂದು ಕೇಳಿದೆವು “ಇರಿ ಸ್ವಲ್ಪ ಪಕ್ಕದ ತೋಟದವರು ನಾವು ಕೇಳಿದ್ರೆ ಇಷ್ಟೊಂದು ಹೂ ಕೊಡ್ತಾ ಇರಲಿಲ್ಲ ಎನೋ ನೀವು ಹೋಗಿದಿರ ಅಂತ ಅಪ್ಪಿ ತಪ್ಪಿ ಕೊಟ್ಟಿದ್ದಾರೆ, ಬಾಡಿ ಹೋಗುತ್ತವೆ ಹೂಗಳು ಕಟ್ಟಣ ಇರಿ ಎಂದರು” ನಾವು ಬಿಡಲಿಲ್ಲ ನಮ್ಮ ಬಲವಂತಕ್ಕೆ “ಅದು ರಂಗನಾಥಸ್ವಾಮಿ ಬೆಟ್ಟ” ಅಂದೇ ಬಿಟ್ಟರು. ಹೋಗೋಣ!  ಹೋಗೋಣ! ಅಂದೆವು.             ಅತ್ತೆ “ಈಗ ………..” ಎಂದರೆ ನಾವು “ಹೌದು ಈಗ್ಲೆ………… ಈ ಕ್ಷಣವೇ” ಎಂದು ಅತ್ತೆಗೆ ಬಲವಂತ ಮಾಡಿದೆವು. ಇವರುಗಳು ಸುಮ್ನೆ ಇರಲ್ಲ ಎಂದು ಅಜ್ಜಿಯ ಕಡೆಗೆ ಕಣ್ಸನ್ನೆ ಮಾಡಿದರು. ಹೊ………. ಇರಲಿ ಇರಲಿ ಬನ್ನಿ ಎಂದೆವು. ನಾವು ಇನ್ಯಾವಾಗ  ಬರ್ತೀವೋ ?ಬಂದರೂ ನೀವು ಮದುವೆಯಾಗಿ ಹೋಗಿರ್ತೀರ ಬನ್ನಿ! ಬನ್ನಿ!  ಪ್ಲೀಸ್! ಪ್ಲೀಸ್! ಅಂದೆವು ಕಡೆಗೂ ಒಪ್ಪಿಗೆ ಕೊಟ್ಟೇ ಬಿಟ್ಟರು. ನಾವುಗಳು ಉತ್ಸಾಹದಿಂದ ಹೊರೆಟೆವೂ. ಹಾಗೆ ಬೆಟ್ಟದ ಕಡೆಗೆ ಹೋಗುವಾಗ ನಾವು ನಮ್ಮ ದೊಡ್ಡಜ್ಜನ ಗದ್ದೆಬಯಲು ಧಾಟಿಕೊಂಡು ಹೋಗಬೇಕಾಗಿತ್ತು ಏನೋ ಮರ ಅದರ  ಹೆಸರು ಗೊತ್ತಿಲ್ಲ  ಆ ಮರದ ಕೆಳಗೆ ಪಾರ್ಕಲ್ಲಿ ವೃತ್ತಾಕಾರದಲ್ಲಿ ಬೆಳೆದ ಸಸ್ಯಗಳಂತೆ ಪೊದೆಪೊದೆಯಾಗಿ ಕಡ್ಡಿಕಡ್ಡಿಯಾಗಿ ಕೆಲವು ಸಸ್ಯಗಳು ಬೆಳೆದಿದ್ದವು. ಅ ಗಿಡಗಳನ್ನು ನೋಡುತ್ತಲೇ “ನನಗೆ ಈ ಗ್ರೀನ್ಶೇಡ್ ಎಂದರೆ ಬಹಳ ಇಷ್ಟ” ಎಂದೆ ಇನ್ನೊಬಳು “ನನಗೆ ಆ ಡೀಪ್ ಗ್ರೀನ್” ಎಂದಳು. ಅತ್ತೆ ನಮ್ಮನ್ನು ಕರೆದು “ಇಂಗ್ಲೀಷ್ ಇಲ್ಲಲ್ಲ ಯಾವ ಗಿಡ? ಅಂತ ಹೇಳಿ” ಎಂದರು ನಮಗೆ ಗೊತ್ತಿದ್ರೆ ಅಲ್ವೆ! ಹೇಳೋದು? ಗೊತ್ತಾಗಲಿಲ್ಲ ಸ್ವಲ್ಪ ಪೊದೆಯಾಗಿ  ತಿಳಿ ಹಸಿರಿನಿಂದ ಇದ್ದ ಸಸ್ಯ ತೋರಿ ಇದು ಹರಿಶಿಣ ಎಂದರು. ಚೂಪಾದ ಗಾಡ ಹಸಿರಿನ ಚೂಪಾದ ಎಲೆ ತೋರಿಸಿ ಇದು ಶುಂಠಿ ಎಂದರು.             ಅಷ್ಟರಲ್ಲಿ ಅತ್ತೆಗೆ ನಾವು ಅದನ್ನು ನೋಡುತ್ತಿರುವ ಕ್ರಮ ಕಂಡು ಅದನ್ನು ಕಿತ್ತು ತೋರಿಸಬೇಕೆನಿಸಿತು. ಕೀಳಲು ಮುಂದಾದರೆ ಬುಡ ಗಟ್ಟಿಯಾಗಿತ್ತು. ಆಗವರು “ನಿಮ್ಮಜ್ಜಿ ಹತ್ತಿರ ಹೋಗಿ ಕೂಡುಗೋಲು ತೆಗೆದುಕೊಂಡು ಬನ್ನಿ” ಎಂದರು. ಕಣ್ಣು ಮುಚ್ಚಿ ಬಿಡುವುದರಲ್ಲಿ ತಂದು ಕೊಟ್ಟೆವು. ಅತ್ತೆ ಚೂಪಾದ ಕೂಡಗೋಲಿನಿಂದ ನಯವಾಗಿ ಗಿಡಗಳಿಗೆ ಹಾನಿಯಾಗದಂತೆ ಹರಿಶಿಣ, ಶುಂಠಿಯನ್ನು ತೆಗೆದು ತೋರಿಸಿದರು. “ಇನ್ನು ಸ್ವಲ್ಪ ತೋರಿಸಿ” ಎಂದಾಗ “ನಿಮ್ಮ ದೊಡ್ಡಜ್ಜಿ ಬಂದರೆ ಕೋಲಲ್ಲೇ ತೋರಿಸ್ತಾರೆ” ಅಂದರು. ಆದರೆ ಯಾಕೋ ಏನೋ ಅವರ ಮನಸ್ಸಿನಲ್ಲಿ ಎನನ್ನಿಸಿತೋ ಊಟ ಖಾಲಿಯಾಗಿ ತೊಳೆದು ಇಟ್ಟಿದ್ದೀವಲ್ಲ ಆ ಬಾಕ್ಸ್ ತೆಗೆದುಕೊಂಡು ಬನ್ನಿ ಎಂದರು. ನಾವೆಲ್ಲ ಹೊರೆಟೆವು. ಅತ್ತೆ ನಮ್ಮನ್ನು ಕಂಡು “ಈ ಮೆರವಣಿಗೆ ಬೇಕಾ ಯಾರದರು ಒಬ್ಬರು ಹೋಗಿ” ಅಂದರು. ಆ ಮಾತಿನ ಧಾಟಿಗೆ ಅದರಿ ಅಲ್ಲಾಡಿದಂತೆ ನಾವಿದ್ದರೂ ನಮಗೆ ಮನಸ್ಸಿನಲ್ಲಿ ತಡೆಯಲಾಗದ ನಗು ನಗು. ಅತ್ತೆ ಹರಿಶಿಣವನ್ನು, ಶುಂಠಿಯನ್ನು ಬಗೆದು ಬಗೆದು ಬಾಕ್ಸ್ನಲ್ಲಿ ತುಂಬಿಸುತ್ತಿದ್ದರೆ  ನಮಗೆ ನಗು ಮತ್ತು ಹೆದರಿಕೆ ಒಟ್ಟೊಟ್ಟಿಗೆ ಆಗುತ್ತಿತ್ತು. ಮರು ಮಾತನಾಡದೆ ಅತ್ತೆ ಬಾಕ್ಸ್ ತುಂಬಿದ ಮೇಲೆ ಎತ್ಲಾರದಂತೆ ತೆಗೆದುಕೊಂಡು ಹೋಗಿ ಅಜ್ಜಿಯ ಬಳಿ ಕುಕ್ಕರಿಸಿ ಬಂದರು.             ಹಾಗೆ ನಮ್ಮ ಬಳಿಗೆ ಬಂದವರೆ “ಹರಿಶಿಣ ಫ್ರೆಶ್ ಆಗಿದೆ ಹಾಲಲ್ಲಿ ಅರೆದು ಹಚ್ಚಿಕೊಂಡರೆ ಮುಖ  glove ಆಗುತ್ತೆ  ಗೊತ್ತ” ಎಂದರು. “ಶುಂಠಿನೂ ಹಾಗೆ ಮಾಡಬೇಕ?” ಎಂದು ಇನ್ನೊಬ್ಬರಿಂದ ಮರು ಪ್ರಶ್ನೆ ಬಂತು. ಅತ್ತೆ ಅದೆಲ್ಲ ಇರಲಿ ಬೆಟ್ಟಕ್ಕೆ ಹೋಗ್ಬೇಕೋ ಬೇಡ್ವೋ ಎಂದರು. ಹೂ ಸರಿ ಸರಿ ಎಂದು ಬೇಗನೆಹೆಜ್ಜೆ ಹಾಕಿದೆವು. ನಮಗೆ  ಆ ಗದ್ದೆ ಬಯಲಿನಲ್ಲಿ ತೆಂಗಿನ ಅಡಿಕೆ ತೋಟಗಳ ನಡುವೆ ಅಜ್ಜನ ಮನೆಗೆ ಬಂದ ಕಾರಣಕ್ಕೆ ಹಾಕಿಕೊಂಡಿರುವ ಕಾಲುಗೆಜ್ಜೆ, ಪುಟ್ಟ ಹ್ಯಾಂಗಿಗ್ಸೆಗಳನ್ನು ಕುಣಿಸಿಕೊಂಡು ಅಲುಗಾಡಿಸಿಕೊಂಡು ವೇಲ್ಗಳನ್ನು ಮತ್ತೆ ಮತ್ತೆ ಸರಿಮಡಿಕೊಂಡು ಹೋಗುವುದೇ ಸಂಭ್ರಮವಾಗಿತ್ತು. ದೂರಕ್ಕೆ ಚಿಕ್ಕದಾಗಿ ಕಾಣುತ್ತಿದ್ದ ಅ ಬೆಟ್ಟ ಹತ್ತಿರ ಹೋದಂತೆ ದೊಡ್ಡದು, ದೊಡ್ಡದು ಅನ್ನಿಸುತ್ತಿತ್ತು.             ಬೇಗ ಬೇಗ ಹತ್ತಿ ಮನಗೆ ಹೋಗಿ ಮತ್ತೆ ಕೆಲಸ ಇದೆ ಧನುರ್ಮಾಸದ ಪೂಜೆ ಬೇರೆ ಬನ್ನಿ ಎಂದರು. ಹೊರಟಾಗ ಇದ್ದ ಖುಷಿ ಬೆಟ್ಟ ಹತ್ತುವಾಗ ಇರಲಿಲ್ಲ. ಆದರೂ ಹೇಗೊ ಸಾಹಸದ ದಂಡಯಾತ್ರೆ ಎಂಬಂತೆ ಗುಡಿಯ ಮುಂಭಾಗ ತಲುಪಿದೆವು. ಬಾಗಿಲು ಕಡೆ ನೋಡಿದರೆ ಎರಡೆರಡು ಬೀಗ ಹಾಕಿದ್ದರು. ಅತ್ತೆ ಇದೇ ಬೆಟ್ಟ  ರಂಗನಾಥಸ್ವಾಮಿ ಬೆಟ್ಟ ನೋಡಿದ್ರಾ ಇಳಿರಿ ಎಂದರು. ನಮಗೆ ಕುತೂಹಲ ಗರ್ಭಗುಡಿಯ ಸುತ್ತು ಬಂದರೆ ಗುಡಿಯ ಪೂರ್ವಕ್ಕೆ ನಮ್ಮ ಹಳ್ಳಿ ಹುಲಿಕಲ್ ಕಾಣುತ್ತಿತ್ತು. ಜೊತೆಗೆ ಶ್ರೀನಿವಾಸ ದೇವಾಲಯದ ರಾಜ ಗೋಪುರ. ಸುಮ್ಮನೆ ಎಲ್ಲಿ? ಎಲ್ಲಿ? ಹುಡುಕೋಣ! ಎಂದು ನಿಂತೆವು. ಅತ್ತೆ ಬಿಡಲಿಲ್ಲ ಈಗ ಕೋಲು ತೆಗೆದುಕೊಂಡು ತೋರಿಸುತ್ತೇನೆ ಎಂದರು. ನಮ್ಮಗಲ್ಲಿ ಕಂಡಿದ್ದು ಕಾಗೆಗಳು ತಿನ್ನಲಾರದ ಮೆಣಸಿನ ಕಾಯಿ, ಕರೀಬೇವು, ಕಡಲೇಬೀಜ, ಉದ್ದನೆಯ ಕೊಬ್ಬರಿ ತುರಿ ಇತ್ಯಾದಿ ಎಲ್ಲ ಪುಳಿಯೋಗರೆಯ ಅವಶೇಷ.             ಹತ್ತುವಾಗ ಆದ ಕಷ್ಟ ಇಳಿಯುವಾಗ ಆಗಲಿಲ್ಲ. ಬೇಗನೆ ಬಂದರೂ ಮುಸ್ಸಂಜೆ ಅವರಿಸಿದ ಕಾರಣ ಅಜ್ಜಿ ನಮಗಲ್ಲ ಅತ್ತೆಯನ್ನು ಬಯ್ಯಲು ಪ್ರಾರಂಭಿಸಿದರು. “ನೀನು ಅವರುಗಳ ಜೊತೆ ಕುಣಿಯುತ್ತಾ ಇದ್ದೀಯಲ್ಲ”

ಹೋಗಿ ಬರುತ್ತೇವೆ ಆ ಬೆಟ್ಟಕ್ಕೆ Read Post »

ಇತರೆ, ಜೀವನ

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ

ಪ್ರಸ್ತುತ       ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧದ ಕುರಿತು ಮಹಾತ್ಮ ಗಾಂಧೀಜಿ ಡಾ.ಎಸ್.ಬಿ. ಬಸೆಟ್ಟಿ ಮಹಾತ್ಮ ಗಾಂಧೀಜಿಯವರು ಜನರು ಬಯಸುವ ಹಾನಿಕಾರಕ ಮತ್ತು ಅನಾವಶ್ಯಕ ಮಾದಕ ವಸ್ತುಗಳನ್ನು  ವಿರೋಧಿಸುತ್ತಿದ್ದರು. ಗಾಂಧೀಜಿಯವರು ತಂಬಾಕು ಮತ್ತು ಮಧ್ಯವನ್ನು ಜನರ ಆರೋಗ್ಯಕ್ಕೆ ಅತ್ಯಂತ ಹಾನಿ ಕಾರಕ ವಸ್ತುಗಳೆಂದು ಪರಿಗಣಿಸಿದ್ದರು ಜೊತೆಗೇ ಚಹಾ ಮತ್ತು ಕಾಫಿಯನ್ನು ಕೂಡಾ ಅನಾವಶ್ಯಕ ವಸ್ತುಗಳೆಂದು ಭಾವಿಸಿದ್ದರು. “ಬೆಂಕಿ ದೇಹವನ್ನು ನಾಶ ಮಾಡಿದರೆ, ಮದ್ಯ ಮತ್ತು ಮಾದಕ ವಸ್ತು ದೇಹ  ಮತ್ತು ಆತ್ಮ ಎರಡನ್ನೂ ನಾಶ ಮಾಡುತ್ತದೆ” ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದಾರೆ. ವೈದ್ಯರು, ಮದ್ಯಪಾನಿಯಗಳು ಮತ್ತು ಅಫೀಮು ವ್ಯಸನಿಗಳನ್ನು ಈ ಶಾಪದಿಂದ ಹೊರತರುವ ದಾರಿಗಳನ್ನು ಕಂಡುಹಿಡಿಯಬೇಕು. ಪ್ರೀತಿಯಿಂದ ಈ ವ್ಯಸನಿಗಳನ್ನು ತಮ್ಮ ಮಾತು ಕೇಳುವಂತೆ ಮಾಡಿ ಅದರ ಸೇವನೆಯಿಂದಾಗುವ ಕೆಡಕನ್ನು ಅವರಿಗೆ ಮನದಟ್ಟು ಮಾಡಿ ಕೆಟ್ಟ ಚಟವನ್ನು ಬಿಡುವಂತೆ ಮನವರಿಕೆ ಮಾಡಬೇಕು ಎಂದಿದ್ದರು. ಮಾದಕ ವಸ್ತುಗಳಲ್ಲಿ ಹೊಗೆಸೊಪ್ಪು, ಭಂಗಿ, ಗಾಂಜಾ, ಅಫೀಮು, ಬ್ರಾಂದಿ, ವಿಸ್ಕಿ, ರಮ್ಮ, ಜಿನ್, ವೈನ್, ಶೇಂದಿ, ಸಾರಾಯಿ ಹೀಗೆ ಇನ್ನೂ ಹತ್ತು ಹಲವಾರು ಬಗೆಯ ವಸ್ತುಗಳು ಸೇರಿವೆ. ಇವುಗಳ ಅವಶ್ಯಕತೆ ನಮ್ಮ ಶರೀರಕ್ಕೆ ಖಂಡಿತಾ ಇಲ್ಲ. ಇವುಗಳಿಂದ ಶರೀರದ ಆರೋಗ್ಯ ಹಾಳಾಗಿ ಆರ್ಥಿಕವಾಗಿ ಸಂಸಾರ  ಸರ್ವನಾಶವಾಗುತ್ತದೆ. ಅಗೌರವಯುತ ಬಾಳು ದಕ್ಷತೆಗೆ ಕುಂದು ಮತ್ತು ದೇಶದ ಗೌರವಕ್ಕೆ ಚ್ಯುತಿ ತರುತ್ತದೆ. ಇದಕ್ಕೆ ದಾಸನಾದವನು ತನ್ನ ಮತ್ತು ಸಂಸಾರದ ಮಾನ ಮರ್ಯಾದೆಯನ್ನು  ಬೀದಿ ಬೀದಿಗಳಲ್ಲಿ ಹರಾಜು ಹಾಕುತ್ತಾನೆ.  ಈ ಮಾದಕ ವಸ್ತುಗಳನ್ನು ದೇಶದಿಂದ ಸಂಪೂರ್ಣವಾಗಿ ಪ್ರತಿಬಂಧಿಸಬೇಕೆಂಬುದು ಗಾಂಧೀಜಿಯವರ ಅದಮ್ಯ ಕನಸು. ಆದರೆ ಇಂದಿನ ಸರಕಾರಗಳು ಬದುಕಿರುವುದೇ ಅಬಕಾರಿ ಬಾಬ್ತಿನ ವರಮಾನದಿಂದ ಯಾವ ಪಕ್ಷದ ಸರ್ಕಾರಗಳಿದ್ದರೂ ಇದರ ಬಗೆ ಗಮನ ಹರಿಸಲು ಹಿಂಜರಿಯುತ್ತವೆ. ಗಾಂಧೀಜಿಯವರ ಪರಿಕಲ್ಪನೆಯ ಸಂಪೂರ್ಣ ಪಾನನಿಷೇದ ಎಂದೆಂದಿಗೂ ಸಾಧ್ಯವಾಗದಿರಬಹುದು. ಆದರೆ ಗುಜರಾತ್ ನಂತರ ಇತ್ತೀಚಿನ ವರ್ಷಗಳಲ್ಲಿ ಬಿಹಾರದಲ್ಲಿ   ಪಾನ ನಿಷೇದ ಜಾರಿಗೆ ಬಂದಿದೆ. ತಮಿಳುನಾಡು ಮೊದಲು ನಂತರ ಕರ್ನಾಟಕ ರಾಜ್ಯಗಳು ಸರಾಯಿ ನಿಷೇಧಿಸಿದವು. ಆದರೆ ಆ ನಂತರ ಹೆಚ್ಚೆಚ್ಚು ವೈನಶಾಪ ತೆರೆಯಲು ಅನುಮತಿ ನೀಡಿದವು. ಒಂದು ಅವಿವೇಕದ ವಾದವನ್ನು ಪ್ರತಿಪಾದಿಸುವವರು ಇದ್ದಾರೆ.  ಸ್ವಲ್ಪ (ಅತೀಕಡಿಮೆ) ಮಧ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಸರ್ವರೋಗಕ್ಕೂ ಸರಾಯಿ ಮದ್ದು ಎನ್ನುತ್ತಾರೆ. ಇಂದಿನ ಜಗತ್ತಿಗೆ ಸವಾಲಾಗಿರುವ ಮಹಾಮಾರಿ ಕೋವಿಡ-೧೯ ರೋಗಕ್ಕೂ ಸರಾಯಿ ಮದ್ದು ಎನ್ನುವವರಿದ್ದಾರೆ. ಆದರೆ ಈ ವಾದಕ್ಕೆ ಹುರುಳಿಲ್ಲ. ಪಾರ್ಸಿ ಜನಾಂಗದವರು ಹೆಂಡ ಕುಡಿಯುವುದನ್ನು ಒಳ್ಳೆಯದೆಂದು ಪ್ರತಿಪಾದಿಸುತ್ತಿದ್ದರು. ಇದು ಮಾದಕ ವಸ್ತುವಾದರೂ ಆಹಾರವೂ ಸಹ ಆಗಬಲ್ಲದು ಎಂದು ಹೇಳುತ್ತಿದ್ದರು. ಆದರೆ ತಜ್ಞರ ಪ್ರಕಾರ ಇದು ಸತ್ಯವಲ್ಲ. ‘ನೀರಾ’ ಭಟ್ಟಿ ಇಳಿಸಿದ ತಕ್ಷಣ ಮದ್ಯವಲ್ಲ. ನಿಜ ಅದು ಒಂದು ಆಹಾರ. ಇದನ್ನು ಕುಡಿದರೆ ಮಲಬದ್ಧತೆ ಇರುವುದಿಲ್ಲವೆಂದು ಕೇಳಿ ಗಾಂಧೀಜಿಯವರೇ ಕೆಲವು ದಿನಗಳ ಕಾಲ  ‘ನೀರಾ’ ಕುಡಿಯಲು ಪ್ರಾರಂಭಿಸಿದಾಗ ಅವರಿಗೆ ಅದರ ಉಪಯುಕ್ತತೆಯ ಅರಿವಾಗುತ್ತದೆ. ಪಾಮ್ ಜಾತಿಗೆ ಸೇರಿದ ತೆಂಗು, ಈಚಲು, ಖರ್ಜೂರ ಇತ್ಯಾದಿ ಇವುಗಳಲ್ಲಿ ಕಾಂಡ ಕೊರೆದು ತೆಗೆಯುವ ಬಣ್ಣವಿಲ್ಲದ ನೀರಿನಂತಹ ರಸಕ್ಕೆ ಅಥವಾ ಹಾಲಿಗೆ ‘ನೀರಾ’ ಎಂದು ಕರೆಯುತ್ತಾರೆ. ತೆಗೆದ ಕೆಲವೇ ನಿಮಿಷಗಳಲ್ಲಿ ಈ ‘ನೀರಾ’ ಹುಳಿ ಬಂದು ಜನರಿಗೆ ಅಮಲೇರಿಸಿ ಹುಚ್ಚೆಬ್ಬಿಸುತ್ತದೆ. ಮಹಾತ್ಮಾ ಗಾಂಧೀಜಿಯವರು ಮಧ್ಯಪಾನವನ್ನು ಒಂದು ಘೋರ ಖಾಯಿಲೆ ಎಂಬುದಾಗಿ ಕರೆಯುತ್ತಾರೆ. ಆದರೆ ವೈದ್ಯಕೀಯ ಉದ್ದೇಶಕ್ಕೆ ಮದ್ಯ ಬಳಸುವುದನ್ನು ಗಾಂಧೀಜಿಯವರು ಆಕ್ಷೇಪಿಸುವುದಿಲ್ಲ. ಕುಡಿತದ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತ ಎನ್ನುವುದು ದುರಾಚಾರ ಎನ್ನುವುದಕ್ಕಿಂತಲೂ ಹೆಚ್ಚಾಗಿ ಅದನ್ನು ಕಾಯಿಲೆ ಎಂದು ಕರೆಯಬಹುದು. ಬಹಳ ಮಂದಿ ಸಾಧ್ಯವಾಗುವುದಾದರೆ ಸಂತೋಷದಿಂದ ಕುಡಿತವನ್ನು ಬಿಟ್ಟುಬಿಡುವರು ಎಂದು ನನಗೆ ಗೊತ್ತಿದೆ. ಪ್ರಲೋಭನೆಗೆ ಒಳಗಾಗಿರುವ ಕೆಲವರು ಅದನ್ನು ದೂರವಿರಿಸಬಹುದು ಎಂದು ನನಗೆ ಗೊತ್ತಿದೆ. ನಿರ್ದಿಷ್ಟ ಪ್ರಸಂಗದಲ್ಲಿ ಆ ಪ್ರಲೋಭನೆಯನ್ನು ದೂರವಿರಿಸುವವರು  ಕಳ್ಳತನದಲ್ಲಿ ಕುಡಿಯುತ್ತಾರೆ ಎಂದು ನನಗೆ ಗೊತ್ತಿದೆ. ಆದ್ದರಿಂದ ಪ್ರಲೋಭನೆಯನ್ನು ಕಿತ್ತು ಹಾಕುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಕಾಯಿಲೆಯಾಗಿರುವ ವ್ಯಕ್ತಿಗಳು ಅವರಷ್ಟಕ್ಕೆ ಅವರೇ ಸಹಾಯ ಮಾಡಿಕೊಳ್ಳಬೇಕು”.( ಯಂಗ ಇಂಡಿಯಾ – ೧೨-೧-೧೯೨೮) ಗಾಂಧೀಜಿಯವರು “ನಾನು ನನ್ನನ್ನು ಶ್ರಮಿಕರ ಜತೆಯಲ್ಲಿ ಗುರುತಿಸಿಕೊಂಡಿರುವುದರಿಂದ ಕುಡಿತದ ಚಟಕ್ಕೆ ಅಂಟಿಕೊಂಡಿರುವ ಶ್ರಮಿಕರ ಮನೆಗಳಿಗೆ ಕುಡಿತವು ಎಂತಹ ಹಾನಿಯನ್ನುಂಟು ಮಾಡಿದೆ ಎಂದು ನನಗೆ ಗೊತ್ತಿದೆ. ಅವರಿಗೆ ಸುಲಭವಾಗಿ ದೊರೆಯುವಂತಿಲ್ಲದಿದ್ದರೆ ಅವರು ಮಧ್ಯವನ್ನು ಮುಟ್ಟುವುದಿಲ್ಲ ಎಂದು ನನಗೆ ಗೊತ್ತಿದೆ. ಅನೇಕ ಪ್ರಸಂಗಗಳಲ್ಲಿ ಕುಡುಕರೇ ಸ್ವತಃ ಪಾನನಿರೋಧಕ್ಕೆ ಕೋರಿಕೆ ಸಲ್ಲಿಸಿದ್ದಾರೆ ಎಂಬುದಕ್ಕೆ ನಮ್ಮ ಬಳಿ ಸಮಕಾಲೀನ ಸಾಕ್ಷ್ಯಗಳಿವೆ” (ಹರಿಜನ ಪತ್ರಿಕೆ -೩-೬-೧೯೩೯)  ಎಂದು ಹೇಳಿದ್ದಾರೆ. “ಆರ್ಥಿಕ ನಷ್ಟಕ್ಕಿಂತ ಯಾವಾಗಲೂ ನೈತಿಕ ನಷ್ಟ ಹೆಚ್ಚಿನದು” ಎಂಬುದು ಗಾಂಧೀಜಿಯವರ ವಾದ. ಏಕೆಂದರೆ ಅವರು ಹೀಗೆ “ಕುಡಿತದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ ಮತ್ತು ಅವನನ್ನು ಮೃಗವಾಗಿ ಪರಿವರ್ತಿಸುತ್ತದೆ. ಹೆಂಡತಿ, ತಾಯಿ ಮತ್ತು ಸಹೋದರಿಯ ನಡುವಣ ಬೇಧವನ್ನು ಗ್ರಹಿಸಿಕೊಳ್ಳಲಾರದಷ್ಟು ಅಸಮರ್ಥವಾಗುತ್ತಾನೆ. ಮಧ್ಯದ ಪ್ರಭಾವದಡಿಯಲ್ಲಿ ಈ ಬೇಧವನ್ನು ಮರೆಯುವವರನ್ನು ನಾನು ಕಂಡಿದ್ದೇನೆ. ಮತ್ತು ಅಮಲೇರದೆ ಶಾಂತಚಿತ್ತನಾಗಿರುವ ಸಮಯದಲ್ಲಿ ತನ್ನ ಹೀನ ಕೃತ್ಯಗಳಿಗೆ ನಾಚಿಕೆಪಟ್ಟುಕೊಳ್ಳುತ್ತಾನೆ. ಆದುದರಿಂದ ಕುಡಿತ ಅತ್ಯಂತ ನೀಚತನದ ಕೆಲಸ” (ಹರಿಜನ ಪತ್ರಿಕೆ- ೯-೩-೧೯೩೪) ಎಂದಿದ್ದಾರೆ. ಕುಡುಕರ ಪತ್ನಿಯರ ಬಗ್ಗೆ ಗಾಂಧೀಜಿಯವರು ಕನಿಕರ ವ್ಯಕ್ತಪಡಿಸುತ್ತಾರೆ. ಅವರು ಕೊಡುವ ಎರಡು ಉದಾಹರಣೆಗಳು ಕುಡಿತದ ದುಷ್ಪರಿಣಾಮಗಳನ್ನು ತಿಳಿಸುತ್ತದೆ. ಹಡುಗುಗಳ ಕ್ಯಾಪ್ಟನ್ಗಳು ಪಾನಮತ್ತರಾಗಿದ್ದಲ್ಲಿ. ಅವರಿಗೆ ಯಾವ ರೀತಿಯಿಂದಲೂ ಹಡಗನ್ನು ನಿಯಂತ್ರಿಸಲು ಸಾಧ್ಯವಾಗದು. ಅವರ ಕುಡಿತದ ಅಮಲು ಇಳಿದು ಅವರು ಯಥಾಸ್ಥಿತಿಗೆ ಬಂದ ನಂತರ ಮಾತ್ರ ಸಾಧ್ಯವಾಗಬಹುದು. ಅದೇ ರೀತಿ ಓರ್ವ ವಕೀಲ ಪಾನಮತ್ತನಾಗಿ ನಡೆಯಲಾಗದೆ ಚರಂಡಿಯಲ್ಲಿ ಉರುಳಿ ಬಿದ್ದಲ್ಲಿ ಪೋಲಿಸರು ಆತನನ್ನು ಹೊತ್ತೊಯ್ದು ಆತನ ಮನೆ ತಲುಪಿಸಬೇಕಾಗಬಹುದು. “ಕುಡಿತದಿಂದ ಸರ್ವನಾಶ” ಕುಡಿತವು ಆತನ ಸಂಸಾರದ ಮತ್ತು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತದೆ. ಗಾಂಧೀಜಿಯವರು ಹೀಗೆ “ಕುಡಿತ ಮತ್ತು ಮಾದಕವಸ್ತುವಿನ ಚಟದ ಕೆಡಕು ಅನೇಕ ರೀತಿಗಳಲ್ಲಿ ಮಲೇರಿಯಾ ಮತ್ತು ಅದರಂತಹ ಕಾಯಿಲೆಗಳಿಂದ ಉಂಟಾಗುವ ಕೆಡುಕಿಗಿಂತಲೂ ಅಪಾರವಾಗಿ ಹಾನಿಯನ್ನುಂಟು ಮಾಡುವುದಾಗಿರುತ್ತದೆ. ಏಕೆಂದರೆ ಕಡೆಯದು ದೇಹಕ್ಕೆ ಅಪಾಯವನ್ನುಂಟು ಮಾಡಿದರೆ ಕುಡಿತ ಮತ್ತು ಮಾದಕ ವಸ್ತುಗಳು ದೇಹ ಮತ್ತು ಆತ್ಮ ಜೀವ ಎರಡನ್ನು ಹಾಳು ಮಾಡುತ್ತದೆ” (ಯಂಗ್ ಇಂಡಿಯಾ – ೩-೩-೧೯೨೭)  ಎಂದಿದ್ದಾರೆ. ದೇಶ ದಿವಾಳಿಯಾದರೂ ಚಿಂತೆಯಿಲ್ಲ ನಮ್ಮ ಮಧ್ಯೆ ಸಾವಿರಾರು ಮಂದಿ ಕುಡುಕರು ಇರುವ ಸಮಾಜವನ್ನು ನೋಡಲು ನಾನು ಇಷ್ಟಪಡುವದಿಲ್ಲವೆನುತ್ತಿದ್ದರು. ಅಬಕಾರಿ ಸುಂಕದಿಂದ ಬರುವ ಆದಾಯದಿಂದ ನಾವು ಶಿಕ್ಷಣ ಕೊಡುತ್ತೇವೆಂದಾದರೆ ಅಂತಹ ಶಿಕ್ಷಣವೇ ನಮಗೆ ಬೇಡವೆನ್ನುತ್ತಿದ್ದರು. ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಕುಡಿತದ ಚಟಕ್ಕೆ ಬಲಿಯಾಗಿರುವ ರಾಷ್ಟ್ರದ ಮುಖದಲ್ಲಿ ವಿನಾಶವಲ್ಲದೇ ಬೇರೆನೂ ಕಣ್ಣಿಗೆ ಹೊಳೆಯುವಂತಿರುವುದಿಲ್ಲ. ಆ ಚಟದ ಮೂಲಕ ಸಾಮ್ರಾಜ್ಯಗಳು ಹಾಳಾಗಿವೆ ಎಂದು ಇತಿಹಾಸ ದಾಖಲಿಸಿದೆ. ಶ್ರೀ ಕೃಷ್ಣ ಸೇರಿದ್ದ ಪ್ರಸಿದ್ಧ ಸಮುದಾಯವೊಂದು ಆದ್ದರಿಂದ ಪತನಗೊಂಡಿತು ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ರೋಮ್ನ ಪತನಕ್ಕೆ ನೇರವಾಗಿ   ಈ ಭಯಾನಕ ಮಧ್ಯವೇ ಕಾರಣವಾಗಿತು”್ತ.( ಯಂಗ್ ಇಂಡಿಯಾ- ೪-೪-೧೯೨೯) ಗಾಂಧೀಜಿಯವರು ಹೀಗೆ ಹೇಳಿದ್ದಾರೆ, ‘ಇಡೀ ಭಾರತಕ್ಕೆ ನನ್ನನ್ನು ಒಂದು ಗಂಟೆ ಕಾಲ ಸರ್ವಾಧಿಕಾರಿಯೆಂದು ನೇಮಿಸಿದರೆ ನಾನು ಮಾಡಲಿರುವ ಮೊದಲ ಕೆಲಸವೆಂದರೆ ಪರಿಹಾರ ನೀಡದೇ ಎಲ್ಲ ಮಧ್ಯದಂಗಡಿಗಳನ್ನು ಮುಚ್ಚಿಸುವುದು ಮತ್ತು ಖಾರಕಾನೆ ಮಾಲೀಕರುಗಳಿಗೆ ಅವರ ಕೆಲಸಗಾರರುಗಳಿಗೆ ಮಾನವೀಯ ಸೌಲಭ್ಯಗಳನ್ನು ಒದಗಿಸಲು ಬಲವಂತಪಡಿಸುವುದು ಮತ್ತು ಈ ಶ್ರಮಿಕರುಗಳು ಪರಿಶುದ್ಧ ಪಾನೀಯಗಳನ್ನು ಮತ್ತು ಮನರಂಜನೆಗಳನ್ನು ಪಡೆಯುವಂತಹ ಆಹಾರ ಪಾನೀಯಗಳ ಮತ್ತು ಮನರಂಜನಾ ರೂಮುಗಳನ್ನು ತೆರೆಯುವಂತೆ ಸೂಚನೆ/ಸಲಹೆ ನೀಡುತ್ತಾರೆ’ .(ಯಂಗ್ ಇಂಡಿಯಾ-೨೫-೬-೧೯೩೧) ರಷ್ಯಾ ದೇಶದ ಲಿಯೋ ಟಾಲ್ಸ್ಟಾಯ್ ಎಂಬ ಮಹಾಶಯ ತಾನೇ ಈ ಚಟಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ಬಲಿಯಾಗಿ ನಂತರ ತ್ಯಜಿಸಿ, ಹೊಗೆಸೊಪ್ಪಿನ ಯಾವುದೇ ರೂಪದ ಸೇವನೆ ಎಲ್ಲಾ ಚಟಗಳಿ ಗಿಂತ ಅತ್ಯಂತ ದುಷ್ಟ ಚಟವೆಂದಿದ್ದನು. ಈ ಚಟ ‘ದುಶ್ಚಟಗಳ ರಾಜ’ ‘ತಂಬಾಕು ಅತ್ಯಂತ ಹೀನ ಮಾದಕ ವಸ್ತು ಎಂದು ಆ ಮಹಾನುಭಾವ ಹೇಳಿದ್ದ. ಸಾಮಾನ್ಯವಾಗಿ ಹದಿಹರೆಯದವರು ಎರಡು ರೀತಿಯ ದುಶ್ಚಟಗಳಿಗೆ ಸಿಲುಕಿಕೊಳ್ಳುತ್ತಾರೆ. ಕೆಲವರು ಸಿಗರೇಟ, ಮದ್ಯಪಾನದ ಸುಳಿಗೆ ಬಿದ್ದರೆ, ಇನ್ನೂ ಕೆಲವರು ಮಾದಕ ದ್ರವ್ಯಗಳ ದಾಸರಾಗುತ್ತಾರೆ. ಸಿಗರೇಟ, ಮದ್ಯಪಾನದ ಸುಳಿಯಲ್ಲಿ ಬಿದ್ದವರು ಚಟವನ್ನು ತುಂಬ ದಿನ ರಹಸ್ಯವಾಗಿ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಸಿಗರೇಟ ಸೇದುವುದು ಒಂದು ಬೇಜವಾಬ್ದಾರಿಯುತ ವರ್ತನೆಯ ಪ್ರತೀಕ ಬಸ್ಸ್,  ರೈಲು, ಟ್ಯಾಂಗಾ, ಮನೆಯಲ್ಲಿ ಅಕ್ಕಪಕ್ಕದವರ ನಿಂದನೆಯನ್ನು ಲೆಕ್ಕಿಸದೇ ಮಾಡುವ ಒಂದು ಅನಾಗರಿಕ ವರ್ತನೆ ಹೊಗೆಸೊಪ್ಪು ಪಾತಕ ಕೃತ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆಂದು ತಜ್ಞರು ಸಾಬೀತುಪಡಿಸಿದ್ದಾರೆ. ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದಿಸಿದ್ದರೂ. ಸಿಗರೇಟ ಸೇವನೆ ಕಡಿಮೆಯಾಗಿಲ್ಲ. ಧೂಮಪಾನ ಮಾಡುವವನು ಪ್ರಜ್ಞೆ ಇಲ್ಲದೆ ಸುತ್ತಲೂ ಹೊಗೆ ಮತ್ತು ವಾಸನೆ ಹರಡಿ ಪಕ್ಕದವರಿಗೆ ಅಸಹ್ಯ ಹುಟ್ಟಿಸುತ್ತಾನೆ. ಆದರೆ ಮಾದಕ ದ್ರವ್ಯದ  ವ್ಯಸನ ಹಾಗಲ್ಲ. ಮಕ್ಕಳು ಡ್ರಗ್ ದಾಸರಾಗಿ ಅತಿರೇಕಕ್ಕೆ ಹೋಗುವವರೆಗೂ ಪೋಷಕರಿಗೆ ತಮ್ಮ ಮಗ ಮಾದಕ ವ್ಯಸನಿ ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರುವುದಿಲ್ಲ. ಸೈಲೆಂಟ ಕಿಲ್ಲರ್ನಂತೆ ತನ್ನ ಚಟಕ್ಕೆ ಬಿದ್ದವರನ್ನು ಅಪೋಶನ ತೆಗೆದುಕೊಂಡಿರುತ್ತದೆ. ಹಾಗಾಗಿ ಯುವಸಮುದಾಯದ ಪಾಲಿಗೆ ಮಾದಕದ್ರವ್ಯ ಯಾವತ್ತಿಗೂ ಅತಿಘೋರ ಶಾಪವಿದ್ದಂತೆ. ವಾಸ್ತವವಾಗಿ ಮದ್ದು ಎಂದರೇನು? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಪದಾರ್ಥವನ್ನು ಜೀವಿಯೊಂದು ಸೇವಿಸಿದಾಗ ಅದರ ಸ್ವಾಭಾವಿಕ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟುಮಾಡುವ ಸಾಮರ್ಥ್ಯ ಹೊಂದಿದ್ದರೆ. ಅದನ್ನು ಮದ್ದು ಎಂದು ಕರೆಯಲಾಗುತ್ತದೆ. ‘ನಾರ್ಕೋಟಿಕ್ ಡ್ರಗ್ಸ್’ ಇಂದು ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವಾಗುತ್ತಿವೆ. ಸುಂಕದ ಇಲಾಖೆಯವರು ವಿಮಾನ ನಿಲ್ದಾಣಗಳಲ್ಲಿ ಅವುಗಳನ್ನು ವಶಪಡಿಸಿಕೊಂಡ ಸುದ್ಧಿ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ಆಗಾಗ್ಗೆ ಓದುತ್ತೇವೆ. ಹೆಚ್ಚೆÀಚ್ಚ್ಚು ಯುವಜನರು ಅದರ ಕಪಿಮುಷ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮದ್ದುಗಳ ಕಳ್ಳ ಸಾಗಾಣಿಕೆ ಮತ್ತು ಅವುಗಳ ದುರ್ಬಳಕೆಯ ಅವಳಿ ಸಮಸ್ಯೆ ಇಂದು ನಮ್ಮೆದುರಿಗೆ ಬೃಹದಾಕಾರವಾಗಿ ತಲೆಯೆತ್ತಿ ನಿಂತಿದೆ. ಭೌಗೋಳಿಕವಾಗಿ ನಮ್ಮ ದೇಶ ಮದ್ದುಗಳನ್ನು ಕದ್ದು ಸರಬರಾಜು ಮಾಡುವ ಎರಡು ಪ್ರಮುಖ ವಲಯಗಳ ನಡುವೆ ನೆಲೆಯಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ, ಆಗ್ನೇಯ ಏಷ್ಯಾದ ರಾಷ್ಟ್ತಗಳಾದ ಬರ್ಮಾ, ಥೈಲ್ಯಾಂಡ, ಮತ್ತು ಲಾವೋಸ್ (ಸುವರ್ಣ ತ್ರಿಕೋಣ) ಮತ್ತು ಸನಿಹದ ಮದ್ಯಪೂರ್ವ ದೇಶಗಳಾದ ಪಾಕಿಸ್ತಾನ, ಅಪಘಾನಿಸ್ಥಾನ ಮತ್ತು ಇರಾನ್ (ಬಂಗಾರದ ಅರ್ಧಚಂದ್ರ) ಕೇಂದ್ರ ಕಾರ್ಯಸ್ಥಾನಗಳಾಗಿದ್ದು ಭಾರತ ಅವುಗಳ ನಡುವೆ ಸ್ಯಾಂಡವಿಜ್ ನಂತೆ ಸೇರಿಕೊಂಡಿವೆ. ಹೀಗಾಗಿ ಭಾರತ ಮದಕ ವಸ್ತುಗಳ ಕಳ್ಳ ಸಾಗಾಣಿಕೆಯ ಪ್ರಮುಖ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. ಜೊತೆಗೆ ಮರಿಜುವಾನ ಮತ್ತು ಹಶೀಶಗಳನ್ನು ವಿಶ್ವದ ಮಾರುಕಟ್ಟೆಗಳಿಗೆ ಸರಬರಾಜು ಮಾಡುವ ನೇಪಾಳ ನಮ್ಮ ಉತ್ತರಕ್ಕಿದೆ. ಸದ್ಯ ಬಾಲಿವುಡ್ ನಟ ಸುಶಾಂತಸಿಂಗ್  ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಮದ್ದಿನ ವಿರಾಟ್ ಸ್ವರೂಪ ಬಯಲಾಗಿಬಿಟ್ಟಿದೆ. ಎನ್ಸಿಬಿ ಅಧಿಕಾರಿಗಳು ರಾಜ್ಯದ  ಡ್ರಗ್ಸ್  ದಂಧೆಯಲ್ಲಿ, ಬಾಲಿವುಡ್, ಹಾಗೂ ಕನ್ನಡ ಚಿತ್ರರಂಗದ ನಟ-ನಟಿಯರು ನಂಟು ಬೆಸೆದುಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ಇದು ಪ್ರಕರಣಕ್ಕೆ ಇನ್ನಷ್ಟು ರೋಚಕತೆ ತಂದುಕೊಟ್ಟಿದೆ. ಜೊತೆಗೆ ರಾಜಕೀಯ ಕೆಸರೆರಚಾಟಕ್ಕೂ ಈ ಪ್ರಕರಣ ಹಾದಿ ಮಾಡಿಕೊಟ್ಟಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಂದ ಡ್ರಗ್ ವಿರುದ್ಧದ ಹೋರಾಟ ಹಾದಿ ತಪ್ಪುತ್ತಿದೆ. ಈಗ ರಾಜಕೀಯ ಮಾಡುತ್ತಾ ಕುಳಿತುಕೊಳ್ಳುವ ಬದಲು ಅತ್ಯಂತ ಕೆಟ್ಟ ಪಿಡುಗಾಗಿರುವ ಈ ದಂದೆಯನ್ನು ಮಟ್ಟಹಾಕುವ ಬಗ್ಗೆ ಆರೋಗ್ಯಕರವಾಗಿ ಚಿಂತಿಸುವ ಕಾಲ ಸನ್ನಿಹಿತನಾಗಿದೆ. ಇಂದು

ಮದ್ಯಪಾನ ಮತ್ತು ಮಾದಕ ದ್ರವ್ಯಗಳ ನಿಷೇಧ Read Post »

You cannot copy content of this page

Scroll to Top