ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಮೂರನೆ ಆಯಾಮ

ಕೈರಳಿಯ ದೇವನಾಡಿನಲ್ಲಿ ರಂಗಪಯಣ ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.ಎಂತಕ್ಕೋ… ಪುಸ್ತಕ ಕಳಸ್ತ್ಯಾ? ಯಾವುದು? ನಾನು ಮಾಮೂಲಿಯಾಗಿ ಕೇಳಿದೆ. ನನ್ನ ಕೆಲವು ಸ್ನೇಹಿತರಿಗೆ, ಹಿರಿಯರಿಗೆ ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ನನಗೆ ಕಳುಹಿಸಿ ಓದು ಎನ್ನುವ ರೂಢಿಯಿದೆ.ಹಾಂ ನನ್ನ ಪುಸ್ತಕ ಕಳಸ್ತೆ. ಅದೇ ಅವಧಿಲಿ ಬತ್ತಿತ್ತಲೇ…        ಒಂದು ಕ್ಷಣ ಹೊಟ್ಟೆಕಿಚ್ಚಾಯಿತು. ಅವಧಿಯ ನನ್ನ ಪುಸ್ತಕ ಆಗಲೇ ಇಲ್ಲ, ಅದರ ಬಗ್ಗೆ ಯಾವ ಮಾತುಕತೆಯೂ ಆಗ್ತಿಲ್ಲ ಎನ್ನುವ ಬೇಸರ. ಆದರೆ ಮರುಕ್ಷಣವೇ ಖುಷಿ. ಬಹುಶಃ ಕಿರಣ ಭಟ್ಟರ ಪರಿಚಯ ಇದ್ದವರು ಯಾರೂ ಅವರ ಬಗ್ಗೆ ಹೊಟ್ಟೆಕಿಚ್ಚು ಕೋಪ ಮಾಡಿಕೊಳ್ಳುವುದಿಲ್ಲ. ಅಷ್ಟೊಂದು ಪ್ರೀತಿ ತುಂಬಿದ ಜೀವ ಅದು. ಎದುರಿಗಿರುವ ಯಾರೇ ಆದರೂ ಪ್ರೀತಿ ತುಂಬಿದ ಕಳಶವನ್ನು ಕಂಡಂತೆ ತಮ್ಮೆಲ್ಲ ನೋವನ್ನು ಮರೆತು ಬಿಡುವಷ್ಟು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.  ಕಿರಣ ಭಟ್ಟರ ಬಗ್ಗೆ ಹೇಳಹೊರಟರೆ ನನಗೆ ನೆನಪಾಗುವುದು ನನ್ನ ಅಮ್ಮನೇ. ಅದೇ ತಾಯಿ ಪ್ರೀತಿಯ ಕಿರಣರ ಬಗ್ಗೆ ಹೇಳುತ್ತ ಹೋದರೆ ಹೇಳುತ್ತಲೇ ಹೋಗಬಹುದು. ಅವರ ಪುಸ್ತಕ ರಂಗ ಕೈರಳಿ ಕೂಡ ಹಾಗೇ. ಥೇಟ್ ತಾಯಿ ಪ್ರೀತಿಯನ್ನೇ ಹೊದ್ದುಕೊಂಡು ನಿಂತಷ್ಟೇ ಆತ್ಮೀಯವೆನಿಸಿತು ನನಗೆ.       ಕಿರಣ ಮತ್ತು ಶ್ರೀಪಾದ ಎಂದರೆ ನೆನಪಾಗುವುದು ನಾಟಕ.  ಚಿಕ್ಕ ಮಕ್ಕಳೊಡನೆ ಅವರಿಬ್ಬರೂ ಮಕ್ಕಳಾಗುವ ಪರಿ. ಅದರಲ್ಲೂ ಕಿರಣನೆಂದರೆ ಮಕ್ಕಳ ನಾಟಕ, ಮಕ್ಕಳ ಬೇಸಿಗೆ ಶಿಬಿರ. ಹಿಂದೊಮ್ಮೆ ಬೇಸಿಗೆ ಶಿಬಿರಕ್ಕೆ ನನ್ನ ಮಗನನ್ನು ಸೇರಿಸಿಕೊಳ್ಳಲು ಕೇಳಿದ್ದೆ. ಆಗ ನನ್ನ ಮಗನಿಗೆ ನಾಲ್ಕೋ ಐದೋ ವಯಸ್ಸು. ಈಗ ಬ್ಯಾಡ್ದೆ. ಒಂಚೂರೂ ದೊಡ್ಡಾಗಲಿ. ತನ್ನ ಕೆಲಸ ಆದ್ರೂ ಮಾಡ್ಕಳ್ಳಂಗಿದ್ರೆ ಛಲೋ ಆಗ್ತು. ಎಂದಿದ್ದರು. ತನ್ನ ಕೆಲಸ ಮಾಡ್ಕತ್ತಾ. ಆದ್ರೆ ರಾಶಿ ತುಂಟ. ಎಂದಿದ್ದೆ. ತುಂಟ ಅಲ್ದಿರೆ ಶ್ರೀದೇವಿ ಮಗ ಹೇಳಿ ಗೊತ್ತಾಪುದರೂ ಹ್ಯಾಂಗೆ ಮಾರಾಯ್ತಿ..? ಎಂದು ನಕ್ಕಿದ್ದರು. ಆದರೆ ನನ್ನ ಅಭಿಪ್ರಾಯದಲ್ಲಿ ಕಿರಣ ಭಟ್ ಇದ್ದಾರೆಂದರೆ ಮಕ್ಕಳನ್ನು ನಿಶ್ಚಿಂತೆಯಿಂದ ಬಿಟ್ಟುಹೋಗಬಹುದು ಎಂಬ ನಂಬಿಕೆ. ರಂಗ ಕೈರಳಿಯ ಪ್ರತಿ ಲೇಖನದಲ್ಲೂ ಇಂತಹುದ್ದೊಂದು ನಂಬಿಕೆಯ ಕಥೆಯನ್ನೇ ಕಿರಣ ಭಟ್ ಹೇಳಹೊರಟಿದ್ದಾರೆ. ಸಾಧಾರಣವಾಗಿ ಓದಿದವರಿಗೆಲ್ಲ ರಂಗ ಕೈರಳಿ ಎಂಬುದು ನಾಟಕದ ಕುರಿತಾದ ಮಾಹಿತಿ ಎನ್ನಿಸಬಹುದು. ಲಘು ಪ್ರಬಂಧ ಎನ್ನಿಸಬಹುದು. ಅಥವಾ ಕೇರಳದ ರಂಗ ಪ್ರವಾಸ ಎಂದೂ ಕಾಣಿಸಬಹುದು. ಆದರೆ ನನಗೆ ಮಾತ್ರ ಇಲ್ಲಿಯ ಪ್ರತಿ ಲೇಖನದಲ್ಲೂ ಕಂಡಿದ್ದು ಕಿರಣ ಭಟ್ಟರ ನಂಬಿಕೆ ಮತ್ತು ಪ್ರೀತಿ, ಅದೂ ತಾಯಪ್ರೀತಿ.              ಇಂತಹುದ್ದೊಂದು ನಂಬಿಕೆಯಿಂದಾಗಿಯೇ ಕಿರಣ ಭಟ್ಟರು ಕೇರಳಕ್ಕೆ ಹೊರಡುತ್ತಾರೆ. ನಮ್ಮ ಕಡೆ ಮಲೆಯಾಳಿ ಮಾಂತ್ರಿಕರು ಎಂದರೆ ಭಯಂಕರ ಎಂಬುದೊಂದು ಮಾತಿದೆ. ಹೀಗಿರುವಾಗ ಮಲೆಯಾಳಿ ಮಾಂತ್ರಿಕರ ಬಾಯಿಗೆ ನೇರವಾಗಿ ಹೋಗಿ ಬೀಳುವುದೆಂದರೆ ಅದಕ್ಕೆ ನಂಬಿಕೆಯೆನ್ನದೇ ಬೇರೇನು ಹೇಳಲು ಸಾಧ್ಯ? ಅದೇ ನಂಬಿಕೆಯಿಂದಲೇ ಉನ್ನಿಕುಟ್ಟಿ, ಬಾಬು ಮುಂತಾದವರು ಸ್ನೇಹಿತರಾಗುತ್ತಾರೆ. ಮತ್ತದೇ ನಂಬಿಕೆಯೇ ಪಾರ್ವತಿ ಅಜ್ಜಿಯನ್ನು ಆರೇಳು ದಶಕಗಳ ನಂತರ ತನ್ನ ತವರಿನೊಂದಿಗೆ ಬೆಸೆಯುವಂತೆ ಮಾಡುತ್ತದೆ. ಮತ್ತು ಹಾಗೆ ಜನರ ಮೇಲೆ ನಂಬಿಕೆಯನ್ನಿಡುವ ಕಿರಣ ಭಟ್ಟರ ಗುಣವೇ ಪಾರ್ವತಿ ಅಜ್ಜಿ ತವರನ್ನು ಬಿಟ್ಟು ಬರುವಾಗ ಆರೇಳು ವರ್ಷದವರಾಗಿದ್ದ ಅವರ ತಮ್ಮ ದಾಮೋದರ ಭಟ್ಟರನ್ನು ಹುಡುಕಿಸುತ್ತದೆ. ಹೀಗಾಗಿಯೇ ಇಲ್ಲಿನ ಪ್ರತಿ ಲೇಖನದಲ್ಲೂ ಕಿರಣ ನಂಬಿಕೆಯ ಪಾಠ ಹೇಳುತ್ತಾ ಹೋಗುತ್ತಾರೆ.                   ಕೇರಳಕ್ಕೆ ಹೋಗುವುದು ಕಿರಣನಿಗೆ ಕೇವಲ ನೌಕರಿಗಾಗಿ ಮಾತ್ರವಾಗಿರಲಿಲ್ಲ. ಅದೊಂದು ರಂಗಯಾತ್ರೆ ಎಂದುಕೊಂಡೇ ಹೊರಟಿದ್ದು. ಈ ಪುಸ್ತಕ ಎಂದರೆ ನಾಟಕದ ಮಾತುಕತೆ ಎಂದುಕೊಂಡರೂ ಇದು ಬದುಕಿನ ಪಯಣದ ಕಥೆಗಳೇ ಆಗಿರುವುದು ವಿಶೇಷ. ಹೀಗಾಗಿ ಇಲ್ಲಿನ ಮಾತುಗಳು, ಘಟನೆಗಳು ಕೇವಲ ಅವರ ಜೀವನಕ್ಕಷ್ಟೇ ಅಲ್ಲ, ಎಲ್ಲರ ಜೀವನಕ್ಕೂ ಕನೆಕ್ಟ್ ಆಗುತ್ತವೆ. ಈ ಕಾರಣದಿಂದಾಗಿಯೇ ರಂಗ ಕೈರಳಿ ನಮ್ಮೆಲ್ಲರ ಬದುಕಿನ ಘಟನೆಗಳಂತೆಯೇ ಗೋಚರಿಸುತ್ತದೆ. ಎಲ್ಲೋ ಹೋದಲ್ಲಿ ನಮ್ಮದೇ ಆಸಕ್ತಿಯ ಉಣ್ಣಿಯಂತಹ ಸ್ನೇಹಿತ ಸಿಕ್ಕಿಬಿಡುವುದು ಅದೆಷ್ಟು ಖುಷಿಯ ವಿಷಯ. ಹಾಗಾದಾಗ ಸಿಕ್ಕಿಕೊಂಡ ಉಸಿರು ಸರಾಗವಾಗಿ ಹೊರಬಂದಂತೆನಿಸುತ್ತದೆ. ಕುಮಟಾದಲ್ಲಿ ಆಗತಾನೆ ಬಿಇಡಿ ಮುಗಿಸಿದ್ದೆ. ರಿಸಲ್ಟ್ ಬರಲು ಇನ್ನೂ ತಡವಿತ್ತು. ಅಲ್ಲೇ ಸಮೀಪದ ಆಂಗ್ಲ ಮಾಧ್ಯಮ ಶಾಲೆಯೊಂದು ಇಂಗ್ಲೀಷ್ ಭಾಷಾ ಶಿಕ್ಷಕರು ಬೇಕು ಎಂದಿದ್ದರಂತೆ. ನಮ್ಮ ಇಂಗ್ಲೀಷ್ ಮೆಥಡ್‌ನ ಪ್ರೊಫೆಸರ್ ಬಳಿ. ಅವರೋ ನನ್ನ ಪ್ರೀತಿಯ ಗುರುಗಳು, ಕಥೆಗಾರರಾದ ಶ್ರೀಧರ ಬಳಗಾರರು. ಒಂದು ನಾನವರ ಪ್ರೀತಿಯ ಶಿಷ್ಯೆ. ಜೊತೆಗೆ ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮದ ವಿದ್ಯಾರ್ಥಿಗಳಲ್ಲಿ ನಾನು ತುಸು ಮುಂದಿದ್ದೆ ಎಂಬ ಕಾರಣಕ್ಕಾಗಿ ಸಹಜವಾಗಿಯೇ ನನ್ನ ಹೆಸರನ್ನು ಸೂಚಿಸಿದ್ದರು. ಆದರೆ ಅಲ್ಲಿ ಹೋದ ಮೇಲೆ ನಾನು ನೀರಿಂದ ತೆಗೆದ ಮೀನಿನಂತಾಗಿದ್ದೆ. ಅಲ್ಲಿ ಯಾರೆಂದರೆ ಯಾರಿಗೂ ಸಾಹಿತ್ಯದ ಕುರಿತಾಗಿ ಒಂದಿಷ್ಟೂ ಆಸಕ್ತಿ ಇರಲಿಲ್ಲ. ನಾನಂತೂ ಖಿನ್ನತೆಯಲ್ಲಿ ಕಳದೇ ಹೋಗುತ್ತೇನೆ ಎನ್ನುವಂತಾಗಿದ್ದೆ. ಅದೇ ಸಮಯದಲ್ಲಿ ಅಲ್ಲಿ ಲಕ್ಷ್ಮಿ ಹೆಗಡೆ ಜೊತೆಯಾಗಿದ್ದರು. ಒಂದಿಷ್ಟು ಪುಸ್ತಕಗಳ ಮಾತು ಪ್ರಾರಂಭವಾಗಿತ್ತು. ಕಿರಣ ತನ್ನ ನಾಟಕದ ಆಸಕ್ತಿಯ ಉನ್ನಿಕೃಷ್ಣನ್ ದೊರೆತಾಗ ಬರೆದ ಖುಷಿ ಓದುವಾಗ ಇದೆಲ್ಲ ನೆನಪಾಗಿತ್ತು. ಇಂತಹ ಹಲವಾರು ನಮ್ಮ ಜೀವನಕ್ಕೂ ಅನ್ವಯಿಸುವ ಸ್ನೇಹಿತರನ್ನು ನಾವಿಲ್ಲಿ ಕಾಣಬಹುದು. ಅದಕ್ಕೆಂದೆ ಮುನ್ನುಡಿಯಲ್ಲಿ ಶ್ರೀಪಾದ ಭಟ್ಟ  ‘ನನ್ನ ಬೆರಳಿನಗಾಯಗಳ ಕುರಿತು ಮಾತನಾಡುವ ಅಂದುಕೊಂಡರೂ ಅದು ಏಕಲವ್ಯನ ಬೆರಳಿನ ಗಾಯದ ಕಥೆಯಾಗಿ ಮಾರ್ಪಡುತ್ತದೆ. ಸಮಾಜದ ಗಾಯದ ಮಾತಾಗಿಬಿಡುತ್ತದೆ.’ ಎಂದು ಬರೆದುದು ನಿಜವಾದರೂ ಅದು ಉಲ್ಟಾ ಕೂಡ ಆಗಬಹುದು. ಏಕಲವ್ಯ ನಾಟಕ ನೋಡುತ್ತಿದ್ದರೆ ನಮ್ಮದೇ ಜೀವನದ ಘಟನೆಯೂ ಅದಕ್ಕೆ ರಿಲೇಟ್ ಆಗಿಬಿಡಬಹುದು ಎಂಬುದೂ ಅಷ್ಟೇ ಸತ್ಯ.                ‘ಅದೃಷ್ಟಾನಾ, ನೋಡಿ ಅದೇ ನನ್ನ ಹುಡುಕಿಕೊಂಡು ಬರ್ತದೆ’ ಎಂದು ‘ಕಿಳವನುಂ ಕಡಲುಂ’ ನಾಟಕದ ಕೊನೆಯಲ್ಲಿ ಯುವ ಮೀನುಗಾರ ಹುಡುಗನೊಬ್ಬ ಆಶಾವಾದಿಯಾಗಿ ಹೇಳುತ್ತಾನೆ. ಬಹುಶಃ ನಾಟಕಗಳ ವಿಷಯದಲ್ಲಷ್ಟೇ ಅಲ್ಲ, ಜೀವನದಲ್ಲೂ ಈ ಅದೃಷ್ಟ ಕಿರಣರನ್ನು ಹುಡುಕಿಕೊಂಡೇ ಬಂದಿದೆ. ಇಲ್ಲವೆಂದರೆ ಪಾರ್ವತಿ ಅಜ್ಜಿಯ ತವರುಮನೆಯನ್ನು ಎಷ್ಟೋ ದಶಕಗಳ ನಂತರ ಹುಡುಕಿಕೊಡುವ ಸೌಭಾಗ್ಯ ಒದಗುವುದು ಸುಲಭದ ವಿಷಯವಲ್ಲ. ಸುಮಾರು ಅರವತ್ತೈದು ವರ್ಷಗಳ ಹಿಂದೆ ಕುಮಟಾದ ಮುರೂರಿಗೆ ಕೇರಳದ ಪಯ್ಯನೂರಿನಿಂದ ಮದುವೆಯಾಗಿ ಬಂದ ಪಾರ್ವತಿ ಅಜ್ಜಿ ನಂತರ ಒಮ್ಮೆಯೂ ತವರಿಗೆ ಹೋಗಿದ್ದೇ ಇಲ್ಲ. ಸಂಪರ್ಕವೂ ಇರಲಿಲ್ಲ. ಅವರು ಮದುವೆಯಾಗಿ ಬರುವಾಗ ಅವರ ಸಹೋದರ ದಾಮೋದರ ಇನ್ನೂ ತೀರಾ ಚಿಕ್ಕವ. ಉಳ್ಳಾಲತಿಟ್ಟ, ಪಯ್ಯನೂರು, ಶಿವ ದೇಗುಲದ ಹೊರತಾಗಿ ಅವರಿಗೆ ಬೇರಾವ ನೆನಪೂ ಇರಲಿಲ್ಲ. ಅಲ್ಲಿ ಹೋಗಿ ನೋಡಿದರೆ ಉಳ್ಳಾಲತಿಟ್ಟ ಎಂಬ ಹೆಸರಿನ ಊರೇ ಇರಲಿಲ್ಲ. ಹೀಗಿರುವಾಗ ಒಬ್ಬ ಲೈನ್‌ಮನ್ ವಿಲಿಯಂಕೋಡ್‌ದಲ್ಲಿ ಶಿವ ದೇಗುಲದಲ್ಲಿ ದಾಮೋದರ ಭಟ್ಟರು ಇರುವ ಬಗ್ಗೆ ತಿಳಿಸಿದ್ದ. ನೋಡಿದರೆ ನೆನಪಿಟ್ಟುಕೊಳ್ಳುವ ವಯಸ್ಸಿಗೆ ಬರುವ ಮುನ್ನವೇ ಪಾರ್ವತಿ ಎಂಬ ಚೇಚಿಯನ್ನು ಕಳೆದುಕೊಂಡ ಅದೇ ದಾಮೋದರ. ಒಂದು ತಾಯಿಗೆ ತವರನ್ನು, ಮಕ್ಕಳಿಗೆ ಅಜ್ಜಿಮನೆಯನ್ನು ದೊರಕಿಸಿಕೊಡುವುದು ಅದೃಷ್ಟ ಒಂದು ಚೂರು ಕೊಟ್ಟಿಯಾದರೂ ಅವಕಾಶ ಸಿಗುವುದಿಲ್ಲ. ಹೀಗಿರುವಾಗ ಕಿರಣ ಭಟ್ಟರಿಗೆ ಈ ಅದೃಷ್ಟ ಅನಾಯಾಸವಾಗಿ ಒದಗಿಬಂದಿದೆ. ಇಂತಹ ಮನಕಲಕುವ ಬಹಳಷ್ಟು ಕಥೆಗಳು ಇಲ್ಲಿವೆ. ಹೀಗಾಗಿಯೇ ಇದು ಮನುಕುಲದ ಕಥೆ.    ನಾನು ನಾಟಕ ಮತ್ತು ಸಿನೇಮಾ ನೋಡುವುದೇ ಕಡಿಮೆ. ಮೂರು ತಾಸು ಕುಳಿತು ನೋಡುವ ತಾಳ್ಮೆ ನನ್ನಲ್ಲಿ ಇಲ್ಲ ಎನ್ನುವುದು ಮೊದಲ ಕಾರಣವಾದರೆ ಒಮ್ಮೆ ನೋಡಿದರೆ ಎರಡು ದಿನ ಅದರಲ್ಲೇ ಮನಸ್ಸು ಮುಳುಗಿ ಬೇರೇನೂ ಮಾಡಲಾಗುವುದಿಲ್ಲ ಎನ್ನುವುದು ಇನ್ನೊಂದು ಕಾರಣ.  ಹೀಗಾಗಿ ನನ್ನ ಮತ್ತು ನಾಟಕದ ಸಂಪರ್ಕ ಇತ್ತೀಚಿನ ದಿನಗಳವರೆಗೂ ಕಡಿಮೆಯೇ. ಚಿಕ್ಕವಳಿರುವಾಗ ಒಮ್ಮೆ ಶಿರಸಿ ಜಾತ್ರೆಯಲ್ಲಿ ಯಾವುದೋ ನಾಟಕಕ್ಕೆ ಹೋಗಿದ್ದೆ. ಕಂಪನಿ ನಾಟಕ ಅದು. ಹೆಸರಾಂತ ಕಂಪನಿಯದ್ದೇ. ಆದರೂ ಅಲ್ಲಿನ ಡಾನ್ಸು, ಅಭಿನಯ ಹಾಗೂ ಡಬಲ್ ಮೀನಿಂಗ್ ಮಾತುಗಳು ಬೇಸರ ಹುಟ್ಟಿಸಿ ನಾಟಕವೆಂದರೆ ಇಷ್ಟೇ ಎಂಬ ಭಾವನೆ ಹುಟ್ಟಿಸಿಬಿಟ್ಟಿತ್ತು. ಇನ್ನೊಮ್ಮೆ ಊರಲ್ಲಿಯೇ ನಡೆದ ನಾಟಕವೊಂದಕ್ಕೆ ಹೋಗಿದ್ದೆ. ಅದೂ ನನ್ನೂರಿನ ವೆಂಕಟೇಶಣ್ಣ ಅದರಲ್ಲಿ ಪಾತ್ರ ಮಾಡಿದ್ದ ಮತ್ತು ಪ್ರತಿಸಲ ಎದುರಿಗೆ ಸಿಕ್ಕಾಗಲೂ ‘ತಂಗಿ, ನನ್ನ ನಾಟಕ ನೋಡಲು ಬಾರೆ..’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಎಂಬ ಕಾರಣಕ್ಕಾಗಿ. ಶಾಲೆಯ ಆಟದ ಮೈದಾನದಲ್ಲಿ ಕುಳಿತು ನೋಡುವ ನಾಟಕ ಅದು. ಯಾಕೋ ಅಲ್ಲಿ ನಡೆದ ಅಹಿತಕರ ಸನ್ನಿವೇಶ ಇನ್ಯಾವತ್ತೂ ನಾಟಕವನ್ನೇ ನೋಡಬಾರದು ಎಂಬಷ್ಟು ಬೇಸರ ಹುಟ್ಟಿಸಿತ್ತು. ರಘು ಅಣ್ಣನವರ ತುಮುರಿ ಕಾರ್‍ಯಕ್ರಮದಲ್ಲಿ  ತುಮುರಿಯ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಗೆಳೆಯ ಜಿ. ಟಿ ಸತ್ಯನಾರಾಯಣ ಲಂಕೇಶರ ಜೀವನವನ್ನು ಆಧರಿಸಿದ ನಾಟಕನ್ನು ಮಾಡಿದ್ದರು. ‘ಅರೆ, ನಾಟಕ ಇಷ್ಟು  ಚಂದನೂ ಇರ್ತದಲ್ಲ’ ಎಂದು ಅಂದುಕೊಂಡಿದ್ದೆ. ಹಿಂದಿನ ವರ್ಷ ಅದ್ಭುತ ರಂಗಪ್ರಯೋಗಗಳ ಮೂಲಕ ಮನೆಮಾತಾಗಿರುವ ಕೆ ಆರ್ ಪ್ರಕಾಶರವರು ‘ಕಾರವಾರದ ರಾಕ್ ಗಾರ್ಡನ್‌ನಲ್ಲಿರುವ ತೂಗುಸೇತುವೆಯ ಮೇಲೆ ಒಂದು ನಾಟಕ ಮಾಡೋಣ. ಬರೆಯಿರಿ’ ಎಂದಿದ್ದರು. ನಾಟಕಗಳನ್ನು ಹೆಚ್ಚು ನೋಡಿಲ್ಲದ ಕಾರಣ ಮೊದಲೊಂದಿಷ್ಟು ಗಡಿಬಿಡಿಯಲ್ಲಿ ಬರೆದೆನಾದರೂ ನಂತರ ಕುಳಿತು ಅದನ್ನು ಮತ್ತೆ ತಿದ್ದಿ ಬರೆದಿದ್ದೆ. ಆದರೆ ನನ್ನಿಂದ ಅದಕ್ಕೆ ರಂಗಗೀತೆ ಬರೆಯಲಾಗಲಿಲ್ಲ. ಅಷ್ಟರಲ್ಲಿ ಮಳೆಯೂ ಪ್ರಾರಂಭವಾಯಿತಾದ್ದರಿಂದ ನಮ್ಮ ನಾಟಕದ ಪ್ರೋಗ್ರಾಂ ಅಲ್ಲಿಗೇ ಮುಗಿಯಿತು. ಮುಂದೆ ಪ್ರಕಾಶ ನಾಟಕ ಅಕಾಡೆಮಿಯ ಸದಸ್ಯರಾಗಿ ಬ್ಯೂಸಿ ಆಗಿಬಿಟ್ಟರು. ಹೀಗಾಗಿ ನಾಟಕದೊಡನೆ ನನ್ನ ಒಡನಾಟ ತೀರಾ ಕಡಿಮೆಯೆ. ಆದರೆ ಕಿರಣ ಭಟ್ಟರ ‘ರಂಗ ಕೈರಳಿ’ಯನ್ನು ಓದಿದ ಮೇಲೆ ಇನ್ನು ಮುಂದೆ ನಾಟಕ ನೋಡಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದೇನೆ. ನೀವೂ ಓದಿನೋಡಿ. ಖಂಡಿತಾ ನೀವೂ ನಾಟಕ ಹುಡುಕಿಕೊಂಡು ಹೋಗಿ ನೋಡಬೇಕು ಎಂದುಕೊಳ್ಳುತ್ತೀರಿ.                              ******* ಲೇಖಕರ ಬಗ್ಗೆ ಎರಡು ಮಾತು: ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ  ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಮೂರನೆ ಆಯಾಮ Read Post »

ಅಂಕಣ ಸಂಗಾತಿ

ಸಂಪ್ರೋಕ್ಷಣ

ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ ನಕ್ಕು ಕನಸಿನಂತೆ ಮರೆಯಾಗುತ್ತಿದ್ದ ಹುಡುಗನೊಬ್ಬ ಎರಡು ಮಕ್ಕಳ ತಂದೆಯಾಗಿ ಮಾರ್ಕೆಟ್ಟಿನಲ್ಲೆಲ್ಲೋ ಎದುರಾಗಿಬಿಡಬಹುದು. ಹಳೆಯ ಕನಸೊಂದು ಇಂದಿನ ವಾಸ್ತವವಾಗಿ, ಇವತ್ತಿನ ಸುಂದರ ಬದುಕೊಂದು ನಾಳೆಯ ಕನಸಾಗಿ, ಏನೆಲ್ಲವೂ ಆಗಿಬಿಡಬಹುದು. ಮನುಷ್ಯ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮ. ಜನ್ಮದಾಖಲೆಯಿಂದ ಶುರುವಾಗುವ ಮನುಷ್ಯಜನ್ಮದ ಯಶಸ್ಸೆಲ್ಲವೂ ದಾಖಲೆಗಳ ಸುತ್ತಲೇ ಸುತ್ತುವಂಥದ್ದು. ಆದರೆ ಕನಸುಗಳೊಂದಿಗಿನ ನಮ್ಮ ಪಯಣ ಮಾತ್ರ ಇಂಥದ್ದೇ ದಿನದಂದು ಇದೇ ಸಮಯದಲ್ಲಿ ಪ್ರಾರಂಭವಾಯಿತೆಂದು ನಿಖರವಾಗಿ ದಾಖಲಿಸಲಾಗದು. ಬಾಳೆಮರದಲ್ಲಿ ತೆಂಗಿನಕಾಯಿ ಬಿಟ್ಟಂತೆ ನಿದ್ದೆಯಲ್ಲೊಮ್ಮೆ ಕನಸು ಬಿದ್ದಿರಬಹುದು ಅಥವಾ ಮುಸ್ಸಂಜೆಯಲ್ಲೊಮ್ಮೆ ಕಾಫಿ ಕುಡಿಯುತ್ತಾ ಅಂಥ ವಿಲಕ್ಷಣ ಯೋಚನೆಯೊಂದು ಕನಸಿನಂತೆ ಹಾದುಹೋಗಿರಬಹುದು. ಅಂಥದ್ದೊಂದು ಕನಸಿಗೆ ಪ್ರತಿಕ್ರಿಯೆಯಾಗಿ ಒಮ್ಮೆ ನಕ್ಕು ಸುಮ್ಮನಾಗಿಬಿಡುತ್ತೇವೆಯೇ ಹೊರತು ವಿಲಕ್ಷಣ ಕನಸುಗಳದ್ದೊಂದು, ಸುಂದರ ಕನಸುಗಳದ್ದೊಂದು ಅಥವಾ ಕನಸುಗಳೇ ಮುಗಿದುಹೋದ ಬದುಕಿನದೊಂದು ದಾಖಲೆಗಳನ್ನು ಸೃಷ್ಟಿ ಮಾಡಲಾಗದು. ನಮ್ಮೊಳಗೇ ಹುಟ್ಟಿ, ಕಸುವಿಗನುಸಾರವಾಗಿ ಬೆಳೆದು, ಒಮ್ಮೊಮ್ಮೆ ಸಂಭವಿಸಿ, ಮತ್ತೆಲ್ಲೋ ಮುಗಿದುಹೋಗುವ ಕನಸುಗಳೆಲ್ಲವೂ ಮುಖಪುಟ-ಮುನ್ನುಡಿಗಳಿಲ್ಲದ ಸ್ವಚ್ಛಂದ ಆತ್ಮಕಥನಗಳು. ಈ ಆತ್ಮಕಥನಗಳಲ್ಲೊಂದಿಷ್ಟು ವಿವರಗಳು ಕಥೆಗಳಾಗಿ ಅವರಿವರ ಕಿವಿಗಳನ್ನು ತಲುಪಿದರೆ, ಇನ್ನೆಷ್ಟೋ ಅನುಭವಗಳು ನಮ್ಮೊಳಗೇ ಉಳಿದು ಬದುಕಿಗೊಂದು ದಿವ್ಯತೆಯನ್ನು ಒದಗಿಸುತ್ತವೆ. ನಡುವೆ ಕನವರಿಸುವ ಕನಸುಗಳು ಮಾತ್ರ ಆಗಾಗ ಬಣ್ಣಗಳನ್ನು ಬದಲಾಯಿಸುತ್ತ, ತಾವೇ ಸೃಷ್ಟಿಸಿದ ತಲ್ಲಣಗಳನ್ನೆಲ್ಲ ತಮ್ಮದೇ ಜವಾಬ್ದಾರಿಯೆನ್ನುವಂತೆ ತಣ್ಣಗಾಗಿಸುತ್ತ ತಪಸ್ಸಿಗೆ ಕುಳಿತ ಆತ್ಮವೊಂದರಂತೆ ನಮ್ಮೊಳಗೊಂದು ನೆಲೆ ಕಂಡುಕೊಳ್ಳುತ್ತವೆ. ಒಳ್ಳೊಳ್ಳೆಯ ಕನಸುಗಳು ಸಂಭವಿಸಿದಾಗಲೆಲ್ಲ ಮುದಗೊಳ್ಳುವ ನಾವು, ಕೆಟ್ಟ ಕನಸುಗಳಿಗೆಲ್ಲ ಸಮಾಧಾನ ಹುಡುಕಲಿಕ್ಕೆಂದು ಆಶ್ರಯ ಹುಡುಕುವುದು ಕೂಡಾ ಇನ್ನೊಂದು ಕನಸಿನ ಮಡಿಲಿನಲ್ಲಿಯೇ. ಕೆಟ್ಟಕನಸು ಬಿತ್ತೆಂದು ಅಮ್ಮನ ಮಡಿಲು ಹುಡುಕುವ ಪುಟ್ಟ ಮಗುವಿಗೆ ಮುಂದೊಂದು ದಿನ ಅಮ್ಮನ ಮಡಿಲು ಕೂಡಾ ಕನಸಾಗಿಬಿಡುವ ಕಲ್ಪನೆ ಇದ್ದೀತೇ! ಪರ್ಯಾಯ ಕನಸೆನ್ನುವ ಪರಿಕಲ್ಪನೆಯೊಂದು ಇದ್ದಿದ್ದರೆ ಬದುಕಿನುದ್ದಕ್ಕೂ ಒಳ್ಳೊಳ್ಳೆಯ ಕನಸುಗಳು ಹೂವರಳಿ ನಿಂತ ಪಾರಿಜಾತ ಮರವೊಂದರ ನೆರಳಿನಂತೆ ನಮ್ಮನ್ನು ಪೊರೆಯುತ್ತಿದ್ದವೇನೋ; ಬಾಲ್ಯವೊಂದು ಮುಗಿದುಹೋಗುವ ದುಃಖ ಯಾರ ಎದೆಗೂ ಇಳಿಯುತ್ತಿರಲಿಲ್ಲವೇನೋ! ಬಾಲ್ಯ ಎನ್ನುವ ಸುಂದರ ಸಮಯವೊಂದು ಮುಗಿದೇ ಹೋಗಿದ್ದರೂ ಬಾಲ್ಯದ ನೆನಪುಗಳನ್ನೆಲ್ಲ ಜೋಪಾನವಾಗಿ ಗಳಿಗೆ ಮಾಡಿ ಮೂಲೆಯ ಕಪಾಟೊಂದರಲ್ಲಿ ಭದ್ರವಾಗಿ ಇಟ್ಟುಕೊಂಡಿರುತ್ತೇವೆ. ಆ ನೆನಪಿನ ನವಿಲುಗರಿಯ ನೂಲೊಂದರಲ್ಲಿ ಬಾಲ್ಯದ ಗೆಳೆಯನೊಬ್ಬನ ಚಕ್ರವೊಂದು ಕನಸಾಗಿ ಸುತ್ತುತ್ತಿರಬಹುದು; ಹೈಸ್ಕೂಲಿನ ಯೂನಿಫಾರ್ಮಿನಲ್ಲಿ ಟೀಚರಾಗಬೇಕೆಂದಿದ್ದ ಕನಸೊಂದು ಇನ್ನೂ ಹಸಿರಾಗಿದ್ದಿರಬಹುದು; ಗ್ರೀಟಿಂಗ್ ಕಾರ್ಡ್ ಒಂದು ಹೊಸವರುಷದ ಕನಸು ಕಾಣುತ್ತಿರಬಹುದು. ಒಟ್ಟಿನಲ್ಲಿ ನೆನಪುಗಳನ್ನು ನೇವರಿಸುವ ಕನಸೊಂದು ನಮ್ಮೊಳಗನ್ನು ಸದಾ ಕಾಯುತ್ತಿರುತ್ತದೆ. ಅಂಥದ್ದೇ ಒಂದು ಕನಸಿನಂತಹ ನೆನಪಲ್ಲಿ ಅಪ್ಪನ ಕೆಂಪು ಚಾದರವೊಂದು ಬೆಚ್ಚಗೆ ಕುಳಿತಿದೆ. ಆ ಚಾದರದ ಮೇಲೆ ನೀಲಿಕಣ್ಣಿನ ನವಿಲುಗರಿಯ ಚಿತ್ರವಾಗಲೀ, ಮಾವಿನ ಎಲೆಯ ಪೇಂಟಿಂಗ್ ಆಗಲೀ ಯಾವುದೂ ಇರಲಿಲ್ಲ; ಮಬ್ಬುಬಿಳುಪು ದಾರಗಳ ನೇಯ್ಗೆಗಳು ಕೆಂಪುಬಣ್ಣವೇ ತಮ್ಮದೆನ್ನುವಂತೆ ಚಾದರವನ್ನೆಲ್ಲ ಆವರಿಸಿಕೊಂಡಿದ್ದವು. ಅಪ್ಪ ನಿದ್ರೆಹೋಗಿ ಅದೆಷ್ಟೋ ಸಮಯದ ನಂತರ ಮಲಗುವ ಅಭ್ಯಾಸವಿದ್ದ ನಾನು ಗುಬ್ಬಚ್ಚಿಯೊಂದು ಗೂಡು ಸೇರಿಕೊಳ್ಳುವಂತೆ ಚಾದರದೊಳಗೆ ಸೇರಿಕೊಳ್ಳುತ್ತಿದ್ದೆ. ನಾನು ಎದ್ದೇಳುವಷ್ಟರಲ್ಲಿ ಅಪ್ಪ ತನ್ನ ದಿನನಿತ್ಯದ ಕೆಲಸದಲ್ಲಿ ನಿರತನಾಗಿರುತ್ತಿದ್ದನಾದರೂ ಚಾದರ ಮಾತ್ರ ಬೆಳಗಿನ ಜಾವದ ಕನಸುಗಳನ್ನೆಲ್ಲ ಸಲಹುತ್ತಿತ್ತು. ಕೆಟ್ಟ ಕನಸುಗಳನ್ನೆಂದಿಗೂ ತನ್ನೊಳಗೆ ಬಿಟ್ಟುಕೊಳ್ಳದ ಕೆಂಪು ಚಾದರ ಬಾಲ್ಯವನ್ನು ಸೊಗಸಾಗಿ ಪೊರೆದ ಪರಿಗೆ ಈಗಲೂ ಬೆರಗಾಗುತ್ತೇನೆ; ಅಗತ್ಯಗಳನ್ನೆಲ್ಲ ಪರಿಮಿತಿಗನುಗುಣವಾಗಿ ಒದಗಿಸುವ ಪ್ರಕೃತಿಯ ಚಮತ್ಕಾರಕ್ಕೆ ಅಚ್ಚರಿಗೊಳ್ಳುತ್ತೇನೆ. ಈ ಕನಸುಗಳ ಸಾಂಗತ್ಯದಲ್ಲಿ ಅಪ್ಪನಷ್ಟೇ ಅಲ್ಲದೇ ಅಜ್ಜನ ಪಾತ್ರವೂ ಇದೆ. ಬೇರೆಯವರಿಗೆ ತೊಂದರೆಯಾಗದ ಚಟುವಟಿಕೆಗಳೆಲ್ಲವನ್ನೂ ಕಾನೂನುಬದ್ಧವೆಂದು ಪರಿಗಣಿಸುತ್ತಿದ್ದ ಹಳ್ಳಿಗಳಲ್ಲಿ ಓಸಿ ಎನ್ನುವ ಜೂಜಾಟವೊಂದು ಪ್ರಚಲಿತದಲ್ಲಿದ್ದ ಕಾಲವದು. ನಂಬರುಗಳ ಮೇಲೆ ದುಡ್ಡು ಕಟ್ಟುವ ಈ ಆಟದಲ್ಲಿ ಕನಸಿನ ಆಧಾರದ ಮೇಲೂ ನಂಬರುಗಳನ್ನು ಹುಡುಕಿ ತೆಗೆಯುತ್ತಿದ್ದರು. ಕನಸಿನಲ್ಲಿ ಕಾಣುವ ನದಿಗೆ ಒಂದು ನಂಬರಾದರೆ, ನಾಯಿಗೆ ಇನ್ನೊಂದು, ಹಾವಿಗೊಂದು ಹೀಗೆ. ಹದಿನೈದು ಇಪ್ಪತ್ತು ಜನರು ಒಟ್ಟಿಗೇ ವಾಸಿಸುತ್ತಿದ್ದ ಹಳ್ಳಿಗಳ ಮನೆ ಜಗಲಿಗಳೆಲ್ಲ ಮಕ್ಕಳಿಂದ ತುಂಬಿರುತ್ತಿದ್ದವು. ಬೇಸಿಗೆರಜೆಗಳಲ್ಲಂತೂ ಮೊಮ್ಮಕ್ಕಳಿಂದ ತುಂಬಿಹೋಗುವ ಮನೆಯಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಶಿಸ್ತಿನ ಮನುಷ್ಯ ಅಜ್ಜ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿದವನೇ ನಮ್ಮೆಲ್ಲರನ್ನೂ ಕೇಳುತ್ತಿದ್ದ ಮೊದಲ ಪ್ರಶ್ನೆಯೆಂದರೆ ರಾತ್ರಿಯೇನಾದರೂ ಕನಸು ಬಿದ್ದಿತ್ತಾ ಎಂದು. ನಮ್ಮ ಕನಸುಗಳ ಆಧಾರದ ಮೇಲೆ ಅವನ ಓಸಿ ನಂಬರೊಂದು ರೆಡಿಯಾಗುತ್ತಿತ್ತು. ಅಡುಗೆಮನೆಯಲ್ಲಿ ತಿಂಡಿಯ ತಯಾರಿಯಲ್ಲಿರುತ್ತಿದ್ದ ಅಮ್ಮ-ದೊಡ್ಡಮ್ಮಂದಿರೆಲ್ಲ ಅವರವರ ಕನಸುಗಳನ್ನು ಮಕ್ಕಳ ಮೂಲಕ ಜಗಲಿಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಮನೆಯವರ್ಯಾರಿಗೂ ಕನಸೇ ಬೀಳದೇ ಅಜ್ಜ ನಂಬರಿಗಾಗಿ ಪರದಾಡುವ ಪರಿಸ್ಥಿತಿಯೂ ಎದುರಾಗುತ್ತಿತ್ತು. ಆಮೇಲಾಮೇಲೆ ಈ ಓಸಿ ಎನ್ನುವುದು ಒಂದು ಕನಸಿನ ಆಟದಂತಾಗಿ, ಮಲಗುವ ಮೊದಲು ದೇವರಿಗೆ ನಮಸ್ಕರಿಸುವ ಪರಿಪಾಠವಿದ್ದ ನಾವೆಲ್ಲರೂ ರಾತ್ರಿ ಕನಸು ಬೀಳುವಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು. ಈಗಲೂ ಲಿಂಬೆಹಣ್ಣಿನ ಗೊಂಚಲೊಂದು ಕನಸಿನಲ್ಲಿ ತೂಗಿತೊನೆದಾಡಿದರೆ, ಹಾರರ್ ಸಿನೆಮಾದ ಪಾತ್ರವೊಂದು ಕನಸಿಗೆ ಬಂದು ಭಯಹುಟ್ಟಿಸಿದರೆ, ಓಸಿಪಟ್ಟಿಯ ನಂಬರುಗಳೊಂದಿಗೆ ಸಂತೋಷದಿಂದ ಬದುಕಿದ ಅಜ್ಜನ ನೆನಪೊಂದು ಸುಂದರವಾದ ಕನಸಾಗಿ ಮನಸ್ಸನ್ನೆಲ್ಲ ಆವರಿಸಿಕೊಳ್ಳುತ್ತದೆ. ಕ್ವಿಲ್ಟ್ ಗಳನ್ನು ಕೊಳ್ಳಲೆಂದು ಅಂಗಡಿಗೆ ಹೋದಾಗಲೆಲ್ಲ ಅಲ್ಲೆಲ್ಲಾದರೂ ಕೆಂಪುಚಾದರವೊಂದು ಮೈತುಂಬ ನೇಯ್ಗೆ ಹೊತ್ತು ಎದುರಾಗಬಾರದೇ ಎಂದುಕೊಳ್ಳುತ್ತೇನೆ. ಹುಟ್ಟಿದದಿನದಂದು ನೆಟ್ಟ ಸಂಪಿಗೆಗಿಡ ಒಂದಿಂಚು ಚಿಗುರಿದರೂ ಮೈತುಂಬ ಹೂವರಳಿಸಿ ನಿಂತ ಸಂಪಿಗೆಮರವೊಂದು ಅರಳಿಸಬಹುದಾದ ಹೊಸಹೊಸ ಕನಸುಗಳಿಗಾಗಿ ಪ್ರತಿನಿತ್ಯ ಕಾಯುತ್ತೇನೆ. ಸದಾ ಮುಗುಳ್ನಗುತ್ತ ಚಿಗುರುವ ಹೊಸ ಕನಸುಗಳೆಲ್ಲವನ್ನೂ ಅಪ್ಪನ ಕೆಂಪು ಚಾದರ ಪೊರೆಯುತ್ತಿರಬಹುದು! ************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಸಂಪ್ರೋಕ್ಷಣ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ದೇವನೂರು ಮಹಾದೇವರೂ..! ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!! ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. ಯುದ್ಧದಲ್ಲಿನ ಕ್ಷಿಪಣಿ ಪ್ರಯೋಗಗಳು, ಬಾಂಬ್ ಹೇಗೆ ಬೀಳುತ್ತಿವೆ ಎಂದು ಕುತೂಹಲದಿಂದ ಅಲ್ಲಿನ ರಸ್ತೆಗಳಲ್ಲಿ ನೋಡುತ್ತಿದ್ದ ಮಕ್ಕಳು, ಇಂಧನ ಸೋರಿಕೆಯಿಂದ ಕಪ್ಪುಗಟ್ಟಿದ ಸಮುದ್ರ, ಆ ಸಮುದ್ರದ ದಡದಲ್ಲಿ ಬದುಕಲೂ ಆಗದೆ, ಸಾಯಲು ಆಗದೆ ನಲುಗುತ್ತಿದ್ದ ಒಂದು ಪಕ್ಷಿ ಇವೆಲ್ಲಾ ನಮ್ಮ ಮನಸ್ಸಿನಲ್ಲಿ ಮರೆಯಾಗದೆ ನಿಂತಿವೆ. ಅದೇ ದಿನಗಳಲ್ಲಿ ನಮ್ಮ ದೇವನೂರು ಮಹಾದೇವರ ಒಂದು ಸಂದರ್ಶನ ಕೂಡಾ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅವರನ್ನು ಕೇಳಿದ ಪ್ರಶ್ನೆ, “ಇಂದಿನ ಬದುಕಿನಲ್ಲಿ ತಮ್ಮನ್ನು ಕಾಡುತ್ತಿರುವ ಪ್ರಶ್ನೆ ಯಾವುದು?”. ದೇವನೂರು ಮಹಾದೇವ ಅವರು ಹೇಳಿದ್ದು, “ಗಲ್ಫ್ ಯುದ್ಧದಲ್ಲಿ ತನ್ನ ಬದುಕನ್ನು ಕಳೆದು ಕೊಂಡು ಒದ್ದಾಡುತ್ತಿದೆಯಲ್ಲಾ ಆ ಪಕ್ಷಿ…. ಅದು ನನ್ನನ್ನು ತುಂಬಾ ಕಾಡುತ್ತಿದೆ!” ದೇವನೂರ ಮಹಾದೇವ ಎಂದರೆ ತಕ್ಷಣ ನೆನಪಿಗೆ ಬರುವುದು ಅವರ ಒಡಲಾಳ, ಕುಸುಮಬಾಲೆ, ಅಮಾಸ, ಗ್ರಸ್ತ, ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ, ಮಾರಿಕೊಂಡವರು ಹೀಗೆ ಹಲವು ಕಥೆಗಳು. ನಮ್ಮ ದೇಶದಲ್ಲಿ ನಾವು ಜನರನ್ನು ಪ್ರಾಂತ್ಯ, ಭಾಷೆ, ಜಾತಿ, ಉಪಜಾತಿ, ಮರಿ ಜಾತಿ ಹೀಗೆ ಯಾವ ರೀತಿಯಲ್ಲಿ ಛಿದ್ರ ಛಿದ್ರವಾಗಿ ಒಡೆದುಹಾಕಿದ್ದೇವೆಯೋ ನಮ್ಮ ಬುದ್ಧಿವಂತ ಜನಾಂಗ ಸಾಹಿತ್ಯವನ್ನೂ ಕೂಡ ನವ್ಯ, ದಲಿತ, ಬಂಡಾಯ, ಮರಿ ಬಂಡಾಯ ಹೀಗೆ ಒಡೆದು ಹಾಕಿಬಿಟ್ಟಿದೆಯೇನೋ ಅಂತನಿಸುತ್ತದೆ. ನಾನು ಸಾಹಿತ್ಯದ ಬಗ್ಗೆ ಅಷ್ಟೊಂದು ಬಲ್ಲವನಲ್ಲವಾದದ್ದರಿಂದ ಆ ಬಗ್ಗೆ ಹೇಳಿದರೆ ಇವನೊಬ್ಬ ಶುದ್ಧ ಶುಂಠ, ಅವೈಜ್ಞಾನಿಕ ಎಂದು ಹಲವು ಮಹನೀಯರು ಪ್ರತಿಭಾನ್ವಿತ ವಿಶ್ಲೇಷಣೆಗೆ ಬರುವ ಸರ್ವ ಸಾಧ್ಯತೆಗಳಿವೆ! ಅದು ಏನೇ ಇರಲಿ, ಇಂತಹ ವಾದ ವಿವಾದಗಳು ನಮ್ಮನ್ನು ಮಾನವನ ಆಳದಲ್ಲಿ ಇಳಿಯುವ ಶ್ರೇಷ್ಠ ಅನುಭಾವದಿಂದ ದೂರ ಮಾಡುತ್ತಿವೆಯೇನೋ ಎಂಬುದು ನನ್ನಲ್ಲಿರುವ ವ್ಯಥೆ. ದೇವನೂರ ಮಹಾದೇವ ಅಂತಹ ಅಂತರಾಳಕ್ಕಿಳಿಯುವ ಸಮರ್ಥ ಬರಹಗಾರನನ್ನು ಯಾವುದೋ ದಲಿತ – ಬಂಡಾಯ ಎಂದು ಪ್ರತ್ಯೇಕಿಸ ಹೊರಟಾಗ ಇಡೀ ಮಾನವ ಸಂಕುಲಕ್ಕೆ ಅಗತ್ಯವಾಗಿರುವ ಅವರ ಬರಹಗಳಲ್ಲಿನ ತೀವ್ರವಾದ ಸ್ಪಂದನೆಗಳ ಲಾಭ ಸರಿಯಾಗಿ ಆಗುವುದಿಲ್ಲ. ಅವರ ಬರಹಗಳ ಆಳವನ್ನು ವರ್ಗರಹಿತವಾಗಿ ಪ್ರತಿಯೊಬ್ಬರೂ ತಲುಪಿ ಮಾನವನ ಮೂಲಸ್ಪಂದನೆಗಳನ್ನು ಅರ್ಥೈಸಿ ಅದರಲ್ಲೊಂದಾಗುವ ಅವಶ್ಯಕತೆ ತುಂಬಾ ಇದೆ. ಒಮ್ಮೆ ಅವರು ಮಾನಸ ಗಂಗೋತ್ರಿಯಲ್ಲಿ ಮಾಡಿದ ಭಾಷಣದ ತುಣುಕುಗಳು ಹೀಗಿವೆ ‘ನಾನು ಬರೆಯುತ್ತಾ ಬರೆಯುತ್ತಾ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಕಳೆದುಕೊಂಡು ಬೇರೆಯವನಾಗಬೇಕು. ಹಾಗೆ ಬೇರೆಯಾದವನು ಯಾರೂ ಆಗಬಹುದು ಆ ಮೂಲಕ ಎಲ್ಲರಂತೂ ಆಗಬಹುದು. ಹೀಗಾದಾಗ ನನ್ನನ್ನು ನಾನು ಕಳೆದುಕೊಳ್ಳಲು ಸಾಧ್ಯ. ನಾನು ಮಹಾದೇವ ಎನ್ನುವುದನ್ನೂ ಬಿಟ್ಟು ಬಿಡಬೇಕು. ನನ್ನ ಜಾತಿಯನ್ನು ಮರೆಯಬೇಕು. ನನ್ನ ಭಾಷೆಯನ್ನು ಮರೆಯಬೇಕು. ಆ ಬರೆಯುವ ಕ್ರಿಯೆಯಲ್ಲಿ ಈ ಎಲ್ಲವುಗಳನ್ನೂ ಮೀರಬೇಕು. ಸಭೆಯ ಮಧ್ಯದ ಸಭಿಕನಾಗಿದ್ದರೆ ಹೇಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೆ ಬರೆಯುವ ಕ್ರಿಯೆ ಕೂಡ. ಅಂದರೆ ಬಿಕಮಿಂಗ್ ಅದರ್ ಬೀಯಿಂಗ್ ಎಂದಾಯಿತು. ಬರೆಯುವ ಕ್ರಿಯೆಯಲ್ಲಿ ಕೆಲವು ಬಾರಿ ‘ಆತ್ಮ’ವಾಗಿ ಬರಬಹುದು. ಕೆಲವು ಬಾರಿ ‘ದೇಹ’ವಾಗಿ ಬರಬಹುದು. ಒಟ್ಟಿನಲ್ಲಿ ನೋಡಿದರೆ ನೋವು, ಕಷ್ಟ, ಸಂಕಟ, ದುಃಖ, ಖುಷಿ ಎಲ್ಲವೂ ಒಂದೇ. ಅದು ಒಂದು ಜೀವದಿಂದ ಮತ್ತೊಂದು ಜೀವಕ್ಕೆ ಹೋಗುವಂತೆ ಅಥವಾ ತನ್ನೊಳಗೆ ಜಗತ್ತನ್ನು ಭಾವಿಸುವ, ಜಗತ್ತಿನೊಳಗೆ ತನ್ನನ್ನು ಭಾವಿಸಿಕೊಳ್ಳುವಂತಹ ಪ್ರಕ್ರಿಯೆ. ಹಿಂದೆ ಹೇಳಿದೆನಲ್ಲಾ ರೂಢಿ ಎಂದು ಹಾಗೆ. ಅಂದರೆ ನಾನು ಮುಸ್ಲಿಂ, ದಲಿತ, ಬ್ರಾಹ್ಮಣ, ಮಹಾದೇವ ಎಂಬಲ್ಲಿಗೇ ನಿಂತರೇ ಸಾಯುವವರೆಗೂ ಆ ಸ್ಥಿತಿಯಲ್ಲೇ ನಿಂತು ಬಿಡುತ್ತೇನೆ (ಅರವತ್ತು ವರ್ಷದವನಾದರೂ ಪ್ರೈಮರಿ ಶಾಲೆಯೇ ಫೇಲಾಗಿರುವ ಹುಡುಗನ ಮನಸ್ಥಿತಿಯಲ್ಲಿಯೇ ಉಳಿದಂತೆ ಕಾಣುತ್ತಾನೆ). ಗಿರೀಶ ಕಾರ್ನಾಡ್ ಒಮ್ಮೆ ಹೇಳುತ್ತಿದ್ದರು – ಪಂಜಾಬ್‌ನಲ್ಲಿ ಗಲಭೆ ಆಗಿ ಆಗಿ ಹೆಣ ರಸ್ತೇಲಿ ಬಿದ್ದಿದ್ದರೂ ಮಕ್ಕಳು ಅದನ್ನೂ ನೋಡಿ ಸುಮ್ಮನೆ ಹೋಗುತ್ತಿರುತ್ತಾರೆ – ಅಂದರೆ ಅವರು ಅದಕ್ಕೆಲ್ಲ ಅಡ್ಜೆಸ್ ಆಗಿ ಹೋಗಿರುತ್ತಾರೆ. ಸಾವಿನ ಬಗೆಗಿನ ಸೂಕ್ಷ್ಮತೆ ಕೂಡ ಕಳೆದುಕೊಂಡು ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಅದು ಸೃಜನಶೀಲವಾಗುವುದಿಲ್ಲ”. ದೇವನೂರು ಮಹಾದೇವ ಅವರು ಸೂಕ್ಷ್ಮಜ್ಞತೆಯಲ್ಲಿ ನಮ್ಮನ್ನು ಇಳಿಸುವ ಅವರ ಹಲವು ಲೇಖನಗಳಾದ ಅಂಬೇಡ್ಕರ್, ಗಾಂಧೀ ಮತ್ತು ಹಲವು ವರ್ಗಸಂಹಿತೆಗಳ ವಿರೋಧಗಳು ಇವೆಲ್ಲಾ ವೈಯಕ್ತಿಕತೆಗೆ ಮೀರಿದ ಆಳದಲ್ಲಿ ಮನಸ್ಸು ಈಜುತ್ತಿರುವ, ಏನನ್ನೋ ಗಾಢವಾದದ್ದನ್ನು ಅರಸುತ್ತಿರುವ ಅನುಭಾವವನ್ನು ಕೊಡುತ್ತವೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು ತಮ್ಮ ಶಿಕ್ಷಣ-ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವಿ ಪಡೆದರು. 1975-1989ರ ಅವಧಿಯಲ್ಲಿ ಮೈಸೂರಿನ ಸೆಂಟ್ರಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ನಲ್ಲಿ ಉದ್ಯೋಗನಿರತರಾಗಿದ್ದ ಇವರು ನಂತರದ ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. ದ್ಯಾವನೂರು ಸಂಕಲನದ ಕತೆಗಳನ್ನು ಗಮನಿಸಿದರೆ ನವ್ಯ ಸಾಹಿತ್ಯ ಚಳುವಳಿಯ ಪರಿಚಯ ಪ್ರೇರಣೆ ಒಂದು ಹಂತದಲ್ಲಿ ಇವರಿಗೆ ಗಾಢವಾಗಿತ್ತೆಂದು ತಿಳಿದು ಬರುತ್ತದೆ. ಇದರ ಜೊತೆಗೆ ಅರವತ್ತು – ಎಪ್ಪತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ ಸಮಾಜವಾದಿ ಯುವಜನ ಸಭಾದ ಚಿಂತನ ಚಟುವಟಿಕೆಗಳು, ಮೈಸೂರಿನಲ್ಲಿ ವಾಸವಾಗಿದ್ದ ಯು. ಆರ್. ಅನಂತಮೂರ್ತಿ, ಶ್ರೀ ಕೃಷ್ಣ ಆಲನಹಳ್ಳಿ ಇಂತಹ ಲೇಖಕರೊಡನೆ ಇದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ನೆರವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ‘ನರ’ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದರು. 1975ರಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ ಕಾಲದ ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ. ದೇವನೂರ ಮಹಾದೇವ ಅವರ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. 1984ರಲ್ಲಿ ಕಲ್ಕತ್ತಾದ ಭಾರತೀಯ ಪರಿಷತ್ ಇವರ ‘ಒಡಲಾಳ’ ವನ್ನು ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. 1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ”ನಲ್ಲಿ ಮಹಾದೇವ ಭಾಗವಹಿಸಿದರು. 1991ರಲ್ಲಿ ಕುಸುಮ ಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ನಲವತ್ತೊಂದರ ಕಿರಿವಯಸ್ಸಿನಲ್ಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಭಾರತೀಯ ಲೇಖಕರಲ್ಲಿ ಮಹಾದೇವ ಅವರೇ ಮೊದಲನೆಯವರಿರಬೇಕು. ಅವರಿಗೆ ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವ ಕೂಡಾ ಸಂದಾಯವಾಯಿತು. ಪ್ರಶಸ್ತಿ ಸ್ವೀಕರಿಸಲು ಕೂಡಾ ಅವರು ಹೋಗಿರಲಿಲ್ಲ. ಅವರ ಮನೆ ಬಾಗಿಲಿಗೇ ಅದು ಅರಸಿಕೊಂಡು ಬಂತು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೇಂದ್ರಸರ್ಕಾರದ ವಿರುದ್ಧವಾಗಿ ಹಲವಾರು ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡುತ್ತಿದ್ದ ಅಭಿಯಾನದಲ್ಲಿ ಮಹಾದೇವರೂ ತಮಗೆ ಸಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಮತ್ತ ಪದ್ಮಶ್ರೀ ಗೌರವಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದರು. ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ ದೇವನೂರ ಮಹಾದೇವ ಅವರು ಪಡೆದಿರುವ ವಿಮರ್ಶಾ-ಪ್ರೀತಿ ಗೌರವ ಕೂಡಾ ತುಂಬಾ ಅಪೂರ್ವವಾದದ್ದು. ಪುತಿನ, ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ್ ಅಂತಹ ಹಿರಿಯರು ಕೂಡಾ ಈ ವಿಮರ್ಶಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು ಮುಖ್ಯ. ಒಡಲಾಳ, ಕುಸುಮಬಾಲೆ, ಅಮಾಸ – ಈ ಕೃತಿಗಳೆಲ್ಲಾ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ. ಹಿಂಸೆ, ದಬ್ಬಾಳಿಕೆ ಕ್ರೌರ್ಯ – ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆಯೆಂದರೆ,ಈ ವಿದ್ಯಮಾನಗಳೆಲ್ಲಾ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ. ಇಂತಹ ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ ತಿಳಿದಿರಬೇಕು. ಇಲ್ಲಿ ಮನುಷ್ಯನಲ್ಲಿ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು ಮುಕ್ಕಾಗಿ ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ ಅನಾವರಣಗೊಂಡಾಗ, ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು ಎಂಬುದನ್ನು ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು. ಮಹಾದೇವರ ಬರವಣಿಗೆ ಪ್ರಾರಂಭಿಕ ಹಂತದಿಂದಲೂ ಈ ಎಲ್ಲ ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, ವಿಕಾಸಗೊಂಡಿದೆ ಎಂಬುದೇ ಅವರ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಈ ಕಾರಣಕ್ಕಾಗಿಯೇ ಮಹಾದೇವ ದಲಿತರ ಬದುಕಿನ ಬಗ್ಗೆ ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು ಗ್ರಹಿಸಲು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ದಲಿತರು ನಮ್ಮಗಳ ಮನಸ್ಸನ್ನು ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು ಸೂಚಿಸುವ ಕ್ರಮ ಕೂಡಾ ಇದಾಗಿರಬಹುದು. ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲಾ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ. ಗ್ರಸ್ತ, ಮಾರಿಕೊಂಡವರು ಇಂಥ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೇ ದೊಡ್ದದಾಗಿದೆ. ಅವುಗಳು ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದು. ಗ್ರಸ್ತ ಕತೆಯಲ್ಲಿ ನಿರೂಪಕ, ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೆ ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ. ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೆ ರೀತಿಯದು. ‘ಒಡಲಾಳ’ ಕಥಾನಕವನ್ನು ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. ಸಾಕವ್ವನ ಪರಿವಾರದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಕಡಲೇಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು, ಇಂತಹ ಪ್ರಕರಣಗಳು ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ. ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ ಪ್ರೀತಿಯ ಕತೆಯ ಪ್ರಭಾವ ಮುಕ್ಕಾಗಲಾರದು. ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ ಕತೆಯೆಂದು ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ ಆಸೆ-ಆಕಾಂಕ್ಷೆಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ ಎಂಬುದೇ ಈ ಕೃತಿಯ ಸಾಧನೆ. ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು ಶ್ರೇಷ್ಠಬರಹಗಾರರಾದ ಮಾಸ್ತಿ ಮತ್ತು ಕುವೆಂಪು ಅವರನ್ನು ಮತ್ತೆ ಮತ್ತೆ ನೆನೆಪಿಗೆ ತರುತ್ತದೆ. ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆಗಳ ಮೆಲುದನಿಯಿದ್ದರೂ ಅದು ಕಥಾವಸ್ತುವಿನಲ್ಲಿ ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ. ಈ ಕೃತಿಯಲ್ಲಿ ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕಾರಣದ ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು. ಹಾಗೆಂದರೆ ಕತೆ ಇಲ್ಲವೆಂದಲ್ಲ. ಘಟನೆ ಇಲ್ಲವೆಂದಲ್ಲ. ಲೇಖಕನೇ ಕತೆಯ ಸ್ವಾರಸ್ಯವನ್ನೆಲ್ಲಾ ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು ಮೀರಿದ್ದಕ್ಕೆ ಓದುಗನನ್ನು ಸಿದ್ಧಗೊಳಿಸುವಂತಿದೆ. ಅಕ್ಕಮಹಾದೇವಿ, ಆಕೆಗೆ ಜೀತದಾಳಿನಿಂದ ಹುಟ್ಟಿದ ಮಗ ಯಾಡ, ನಂತರ ಅವನು ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ ದೊಡ್ಡವನು, ಅವನ ಮಗಳು ಕುಸುಮ, ಅವಳಿಗೆ ಚನ್ನನ ಮೂಲಕ ಮಗು, ಚೆನ್ನನ

ಸ್ವಾತ್ಮಗತ Read Post »

ಅಂಕಣ ಸಂಗಾತಿ, ಜೀವನ

ದಿಕ್ಸೂಚಿ

ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ. ಜಯಶ್ರೀ ಜೆ.ಅಬ್ಬಿಗೇರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ “ನ್ಯಾಯಾಧೀಶರೇ, ನನ್ನ ಜೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ” ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ “ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ. ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ ಬೇರೆ ವಸ್ತುಗಳನ್ನು ಕದ್ದು ತರತೊಡಗಿದೆ. ಕಳ್ಳತನದ ವಿಷಯ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಏನೂ ಹೇಳುತ್ತಿರಲಿಲ್ಲ. ನನ್ನ ಕುಕೃತ್ಯವನ್ನು ಅವರು ನಿರ್ಲಕ್ಷಿಸಿದರು. ಬರಬರುತ್ತ ನನಗೆ ಕಳ್ಳತನ ಚಟವಾಯಿತು. ಇಂದು ನಾನು ದೊಡ್ಡ ಪ್ರಮಾಣದ ಕಳ್ಳನಾಗಲು ಅವರೇ ಕಾರಣ. ಹೀಗಾಗಿ ನನ್ನೊಂದಿಗೆ ಅವರನ್ನೂ ಶಿಕ್ಷಿಸಿ.” ಎಂದುತ್ತರಿಸಿದ. ಕಳ್ಳ ಹೇಳಿದ್ದು ಸರಿಯಾಗಿದೆ. ಪಾಲಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಇದ್ದುದರಿಂದ ಅಪರಾಧದಲ್ಲಿ ಪಾಲುದಾರರಾದರು. ಈ ದೃಷ್ಟಾಂತವು ಯಾವುದೇ ಕೆಟ್ಟದ್ದನ್ನು ಸಸಿಯಾಗಿದ್ದಾಗ ಚಿವುಟದಿದ್ದರೆ ಹೆಮ್ಮರವಾಗಿ ಬೆಳೆದು ಬಾಳು ಹಾಳು ಮಾಡುತ್ತದೆ ಎಂಬುದಕ್ಕೆ ನಿದರ್ಶನ.. ಸೋಮಾರಿತನವನ್ನು ಸ್ವಲ್ಪದರಲ್ಲಿದ್ದಾಗಲೇ ಚಿವುಟಬೇಕು ಇಲ್ಲದಿದ್ದರೆ ಜೀವನವನ್ನೇ ನಾಶಮಾಡುತ್ತದೆ. ಆಲಸ್ಯತನಕ್ಕೆ ಮೈಗಳ್ಳತನವೆಂಬ ಶಬ್ದವೂ ಚಾಲ್ತಿಯಲ್ಲಿದೆ. ಆಲಸ್ಯತನವೂ ಒಂದು ರೀತಿಯ ಕಳ್ಳತನವೇ. ಮೈಗಳ್ಳತನ ಮಾಡಿದರೆ ಭವಿಷ್ಯ ಮಣ್ಣು ಪಾಲಾದಂತೆಯೇ ಸರಿ. ‘ನಾನು ಆಲಸಿ’ ಎಂದುಕೊಳ್ಳದೇ ಚಟುವಟಿಕೆಯಿಂದಿರುವುದು ನಮ್ಮ ಕೈಯಲ್ಲೇ ಇದೆ. ಆಲಸ್ಯತನವೆಂದರೆ? ಆಲಸ್ಯತನವೆಂಬುದು ಏನೂ ಮಾಡದೇ ಇರುವ ಮನಸ್ಥಿತಿ. ನಮ್ಮನ್ನು ಕೆಳಗೆ ನೂಕುವ ವೈರಿ. ‘ಹತ್ತಕ್ಕೆ ಒಂಭತ್ತು ಪಾಲಿನ ದೂಃಖಕ್ಕೆ ಕಾರಣ ಸೋಮಾರಿತನ.’ ಎಂಬುದು ಕರ‍್ಲೈಲ್ ಅಭಿಮತ. ‘ಹೂವನ್ನು ಒಡನೆಯೇ ಕಿತ್ತು ಸ್ವೀಕರಿಸು.. ಇಲ್ಲದಿದ್ದರೆ ಅದು ಬಾಡಿ ಹೋಗುವುದು.’ ಇದು ಕವಿ ಟ್ಯಾಗೋರ ಮಾತು.. ಎಲ್ಲದಕ್ಕೂ ನಿರಾಸಕ್ತಿಯನ್ನು ತೋರುವ ಸ್ಥಿತಿ. ಸವಾಲೆನಿಸುವ ಕಾರ‍್ಯ ಮಾಡಬೇಕಾದಾಗ ಇಲ್ಲವೇ ಬೋರೆನಿಸಿದಾಗ, ಕೆಲಸದ ಹೊರೆ ಹೆಚ್ಚಾದಾಗಲೂ ಈ ಸ್ಥಿತಿ ಉಂಟಾಗಬಹುದು. ಆಲಸ್ಯತನವೊಂದು ಲಕ್ಷಣವೇ ಹೊರತು ಸಮಸ್ಯೆ ಅಲ್ಲ ಎಂಬುದನ್ನು ಸರಿಯಾಗಿ ನೆನಪಿನಲ್ಲಿಡಿ. ಪ್ರೇರಣೆಯ ಕೊರತೆ, ಭಯ, ದಣಿವು ಕಂಫರ್ಟ್ ಸ್ಥಿತಿಯಲ್ಲಿ ಇರಲು ಇಚ್ಛಿಸುವುದು. ಸಹ ಆಲಸ್ಯತನಕ್ಕೆ ಕಾರಣವಾಗುತ್ತವೆ. ಇದೊಂದು ಜೀವ ಕಳೆಯನ್ನು ಕಳೆದುಕೊಂಡಿರುವ ಸ್ಥಿತಿ. ದೈನಂದಿನ ಚಟುವಟಿಕೆಗಳಲ್ಲೂ ಉಲ್ಲಾಸ ಕಳೆದುಕೊಳ್ಳಬಹುದು.. ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಇದರಿಂದ ಹೊರ ಬರುವುದು ಸುಲಭ. ಆಪಾದಿಸಿದ ಸಂಗತಿ ನಿಜ ಮಾಡಬೇಡಿ ‘‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂಬ ಗಾದೆ ಮಾತಿದೆ. ಹೀಗಾಗಿ ನಾವು ಚಟುವಟಿಕೆಯುಳ್ಳವರಾಗಿ ಸದಾ ಕ್ರಿಯಾಶೀಲರಾಗಿ ಸೃಜನಶೀಲರಾಗಿ ಇರಬೇಕೆಂದರೆ ಚಿಕ್ಕವರಿದ್ದಾಗಿನಿಂದಲೇ ಚುರುಕುತನದಿಂದ ಪಾದರಸದಂತೆ ಕೆಲಸ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಬಗ್ಗೆ ನಮಗಿರುವ ದುರಭಿಪ್ರಾಯಗಳಲ್ಲಿ ಹೆಚ್ಚು ನಮ್ಮ ಮೇಲೆ ಇತರರು ಅಪಾದಿಸಿದ ಸಂಗತಿಗಳೇ ಇರುತ್ತವೆ. ಅವುಗಳನ್ನು ಒಪ್ಪಿಕೊಂಡು ನಿಜ ಮಾಡಬೇಡಿ.”ನೀನು ತುಂಬಾ ಆಲಸಿ. ನಿನ್ನಿಂದ ಕೆಲಸ ಸಾಧ್ಯವಿಲ್ಲ” ಎಂದು ಅವರೆಂದರೆ “ಇಲ್ಲ, ಅದು ನಿಜವಲ್ಲ. ನನಗೆ ಬೇಕೆನಿಸಿದ್ದನ್ನು ಚೆನ್ನಾಗಿ ಉತ್ಸಾಹದಿಂದ ಮಾಡಬಲ್ಲೆ.’ ಎಂದು ಮಾಡಿ ತೋರಿಸಿ. ‘ಮನುಷ್ಯ ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣ ಯಿಸುತ್ತದೆ..’ ಎಂದಿದ್ದಾನೆ ಎಚ್ ಡಿ ಥೋರೇ. ‘ಯಾವಾಗಲೂ ಬಾತುಕೋಳಿಯಂತೆ ನಡೆದುಕೊಳ್ಳಿ–ಮೇಲ್ಮಟ್ಟದಲ್ಲಿ ಶಾಂತವಾಗಿರಿ ಮತ್ತು ತಳ ಮಟ್ಟದಲ್ಲಿ ಜೋರಾಗಿ ಹುಟ್ಟು ಹಾಕಿ..’. ಕಾರಣದ ಮೇಲೆ ಬೆಳಕು ಚೆಲ್ಲಿ ಆಲಸ್ಯತನದ ಮೂಲ ಕಾರಣವೇನೆಂದು ಯೋಚಿಸಿ ಅದರ ಮೇಲೆ ಬೆಳಕು ಚೆಲ್ಲಿ. ದಣಿವಾಗಿದ್ದರೆ ಕೆಲ ಹೊತ್ತು ವಿಶ್ರಮಿಸಿಕೊಳ್ಳಿ. ವಿಶ್ರಾಂತಿಯಿಂದ ದಣಿವಾಗುವಷ್ಟು ವಿಶ್ರಾಂತಿ ತೆಗೆದುಕೊಳ್ಳದಿರಿ. ಕಾರ್ಯದ ಹೊರೆ ಹೆಚ್ಚಾಗಿದ್ದರಿಂದ ಮೈಗಳ್ಳತನ ಉಂಟಾಗಿದ್ದರೆ ಭಾರವೆನಿಸುವ ಕೆಲಸವನ್ನು ಸರಳೀಕರಿಸಿ, ತುಂಡು ತುಂಡಾದ ಭಾಗಗಳಲ್ಲಿ ಹೇಗೆ ಮಾಡುವುದು ಯೋಜಿಸಿ ಕಾರ‍್ಯಕ್ಕಿಳಿಯಿರಿ. ಮಾಡುತ್ತಿರುವ ಕೆಲಸದ ಬಗ್ಗೆ ಭಯವೇ? ‘ಮಾಡುವ ಕೆಲಸದ ಮೇಲೆ ಗಾಢಾಸಕ್ತಿ ಇರುವ ವ್ಯಕ್ತಿಗೆ ಜೀವನದಲ್ಲಿ ಭಯವಾಗಿಸುವ ಅಂಶ ಯಾವುದೂ ಇಲ್ಲ.’ ಎಂದಿದ್ದಾನೆ ಸ್ಯಾಮ್ಯುವೆಲ್ ಗೋಲ್ಡ್ವಿನ್. ನಿಮ್ಮ ಪ್ರತಿಭೆ ಸಾಮರ್ಥ್ಯದ ಬಗ್ಗೆ ನಂಬಿಕೆ ಬೆಳೆಸಿಕೊಂಡರೆ ಭಯ ಮಂಗಮಾಯ. ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಕಾಲ ಹರಣ ಮಾಡುತ್ತಿದ್ದರೆ ಮೊಬೈಲಿನಿಂದ ದೂರವಿರಿ.ದಿನಚರಿ ಬದಲಿಸಿ.ಸಂಗೀತ ಆಹಾರ ಹಾಸ್ಯ ಪ್ರಜ್ಞೆಯಿಂದ ದಿನಚರಿಯನ್ನು ಬದಲಿಸಿ. ಕೆಲವು ವಿಷಯಗಳು ಆಗಬೇಕೆಂದು ನೀವು ನಿರೀಕ್ಷಿಸಿದಾಗ ವಿಚಿತ್ರವಾಗಿ ಹಾಗೇ ಆಗುತ್ತವೆ.’ ಒಂದು ದೊಡ್ಡ ವಿಚಾರವು ನಮ್ಮ ಬದುಕನ್ನು ಮತ್ತು ಸುತ್ತಲಿನ ವಿಶ್ವವನ್ನೇ ಬದಲಿಸಬಹುದು. ಒಂದೇ ಒಂದು ಮೇಧಾವಿ ವಿಚಾರ ಇಡೀ ಪರಿಸ್ಥಿತಿಯನ್ನೇ ಬದಲಿಸಬಲ್ಲದು. ಚೆನ್ನಾಗಿ ಹೇಳುವುದಕ್ಕಿಂತ ಚೆನ್ನಾಗಿ ಮಾಡುವುದು ಉತ್ತಮ.. ಉತ್ಸಾಹ ಕೂಡಗೊಡುವುದಿಲ್ಲ ಆಲಸ್ಯತನ ಎಬ್ಬಿಸಿಗೊಡುವುದಿಲ್ಲ. ಹೀಗಾಗಿ ನಾವು ಪ್ರಯತ್ನ ಪಟ್ಟಾಗ ಮಾತ್ರ ಗೆಲ್ಲುತ್ತೇವೆ. ಹಾಗಂತ ಒಮ್ಮೆಲೇ ಎಲ್ಲ ಕೆಲಸಗಳನ್ನು ಮಾಡಲು ಹೋಗದಿರಿ. ‘ಅನೇಕ ಕೆಲಸಗಳನ್ನು ಮಾಡಲು ಅತಿ ಚಿಕ್ಕ ದಾರಿಯೆಂದರೆ ಒಂದು ಸಲಕ್ಕೆ ಒಂದು ಕೆಲಸ ಮಾತ್ರ ಮಾಡುವುದು.’ಭವಿಷ್ಯದ ಬಗ್ಗೆ ಆಲೋಚಿಸಿಇವತ್ತು ನಾನು ಆರಾಮವಾಗಿದ್ದೇನೆ ಎಂದು ಕಾಲಿನ ಮೇಲೆ ಕಾಲು ಹಾಕಿ ಸೋಮಾರಿತನ ತೋರಿದರೆ ಭವಿಷ್ಯತ್ತಿನಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ‘ಭವಿಷ್ಯತ್ ಬಗ್ಗೆ ಆಲೋಚಿಸುವವನೇ ಸರಿಯಾದ ದೃಷ್ಟಿಕೋನವಿರುವ ವ್ಯಕ್ತಿ.’ಎಂದು ಇನ್ಯೆನ್ ಹೇಳಿದ್ದಾನೆ. .’ಇಬ್ಬರು ವ್ಯಕ್ತಿಗಳು ಕಿಟಕಿಯ ಮೂಲಕ ನೋಡುತ್ತಾರೆ. ಒಬ್ಬನು ಮಣ್ಣನ್ನು ನೋಡುತ್ತಾನೆ. ಇನ್ನೊಬ್ಬನು ನಕ್ಷತ್ರಗಳನ್ನು ನೋಡುತ್ತಾನೆ.’ ನಾವು ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಂಡಿರುವುದರ ಕಡೆಗೆ ಚಲಿಸುತ್ತೇವೆ. ಇಂದು ನಿಮ್ಮಲ್ಲಿರುವ ಶಕ್ತಿ ಪ್ರತಿಭೆಗಳನ್ನು ಗುರಿಯೆಡೆಗೆ ಸರಿಯಾಗಿ ಅಳವಡಿಸಿ.ಇದು ಆಲಸ್ಯತನದಿಂದ ಮುಂದೂಡುವ ಕೆಟ್ಟ ಚಟವನ್ನು ಅದರಿಂದುಂಟಾಗುವ ಕೆಡುಕನ್ನು ನಿವಾರಿಸುತ್ತದೆ ಆಲಸಿಗಳು ಅವಕಾಶದ ಬದಲು ರಕ್ಷಣೆಯ ಕುರಿತಾಗಿ ಚಿಂತಿಸುತ್ತಾರೆ. ಸೋಮಾರಿಗಳಿಗೆ ಸಾವಿಗಿಂತ ಹೆಚ್ಚಾಗಿ ಜೀವನವೆಂದರೆ ಭಯ ಎನಿಸುತ್ತದೆ. ಮನಸ್ಸಿನ ಅಂಗವಿಕಲತೆಗೆ ಸೊಪ್ಪು ಹಾಕದಿರಿ ‘ಒಂದು ಹಾವನ್ನೋ ದುರ್ಜನರನ್ನೋ ಆರಿಸಿಕೊಳ್ಳಬೇಕಾದಾಗ ಹಾವನ್ನೇ ಆರಿಸಿಕೋ. ಹಾವು ಆತ್ಮ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ. ದುರ್ಜನರು ನಿಷ್ಕಾರಣವಾಗಿ ಹೆಜ್ಜೆ ಹೆಜ್ಜೆಗೂ ಕಚ್ಚುತ್ತಾರೆ.’ ಎಂದಿದ್ದಾನೆ ಚಾಣಕ್ಯ. ಇದೇ ರೀತಿಯಲ್ಲಿ ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸಮರ್ಥನನ್ನೋ ಆಲಸಿಯನ್ನೋ ಆರಿಸಿಕೊಳ್ಳಬೇಕಾದಾಗ ಅಸಮರ್ಥನನ್ನು ಆರಿಸಿಕೋ ಎನ್ನುತ್ತಾರೆ. ಏಕೆಂದರೆ ಅಸಮರ್ಥನಿಗೆ ತಿಳಿ ಹೇಳಿ ತರಬೇತಿ ನೀಡಿ ಕೆಲಸ ತೆಗೆಯಬಹದು. ಆದರೆ ಆಲಸಿ ತನ್ನೊಂದಿಗೆ. ಸಮರ್ಥರನ್ನೂ ಹಾಳು ಮಾಡುತ್ತಾನೆ ‘. ಶರೀರಕ್ಕೆ ಅಂಗವಿಕಲತೆ ಇದ್ದರೂ ಗೆದ್ದು ತೋರಿದ ಮಹನೀಯರು ಹಲವರು. ಅದರಲ್ಲಿ ಕುಂಟನಾದರೂ ಅಮೇರಿಕದಂಥ ದೇಶವನ್ನು ಅತ್ಯದ್ಭುತವಾಗಿ ಮುನ್ನಡೆಸಿದ ರೂಸ್ ವೆಲ್ಟ್ .ವಿವಿಧ ಅಂಗಗಳ ವಿಕಲತೆಯಿಂದ ಕಂಗೆಡದೇ ಗೆದ್ದು ತೋರಿದ ಹೆಲೆನ್ ಕೆಲ್ಲರ್. ಜಗತ್ತು ಕಂಡು ಬೆರಗಾದ ಸ್ಟೀಫನ್ ಹಾಕಿಂಗ್ ಹೀಗೆ ಪಟ್ಟಿ ಬೆಳೆಯುತ್ತದೆ. ಆಲಸ್ಯತನವೊಂದು ಮನಸ್ಸಿನ ಅಂಗವಿಕಲತೆ. ಇದರ ಬಲಿಗೆ ಬಿದ್ದರೆ ಮುಗಿದು ಹೋಯಿತು. ಎಂಥ ಮೇದಾವಿ, ಅಪ್ರತಿಮ ಪ್ರತಿಭಾವಂತನೂ ಹೇಳ ಹೆಸರಿಲ್ಲದಂತಾಗುವುದನ್ನು ಕಣ್ಣಾರೆ ಕಾಣುತ್ತೇವೆ. ನೀವು ನಿಮ್ಮ ಮನಸ್ಸಿನಿಂದ ಆಳಲಾಗುತ್ತಿದ್ದರೆ ಒಬ್ಬ ಅರಸ, ದೇಹದಿಂದಾದರೆ ಗುಲಾಮ. ತನ್ನನ್ನು ತಾನು ಗೆಲ್ಲುವ ಶಕ್ತಿ ಹೊಂದಿರುವವನನ್ನು ತಡೆಯುವಂಥದ್ದು ಯಾವುದೂ ಇಲ್ಲ. ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ.

ದಿಕ್ಸೂಚಿ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ

ಸಂಪ್ರೋಕ್ಷಣ ಬಣ್ಣಗಳಲ್ಲದ್ದಿದ ಬದುಕು ಅಂಜನಾ ಹೆಗಡೆ ಬಣ್ಣಗಳೇ ಇರದಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ ನೋಡಿ. ಪುಟ್ಟ ಮಗುವೊಂದು ಬಣ್ಣದ ಬಲೂನುಗಳ ಹಿಂದೆ ಓಡುವ ದೃಶ್ಯವೇ ಕಾಣಸಿಗುತ್ತಿರಲಿಲ್ಲ. ಗಾಳಿಪಟವೊಂದು ಚೂರುಚೂರೇ ನೆಗೆಯುತ್ತ ಆಕಾಶಕ್ಕೆ ಎಗರಿ ಬಣ್ಣದ ಲೋಕವೊಂದನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಕೆಂಡಸಂಪಿಗೆಗೆ ಕೆಂಡದಂತಹ ಬಣ್ಣವಿರುತ್ತಿರಲಿಲ್ಲ. ಕಾಮನಬಿಲ್ಲೊಂದು ಹುಟ್ಟುತ್ತಲೇ ಇರಲಿಲ್ಲ. ಬಣ್ಣಗಳಿಲ್ಲದಿದ್ದರೆ ಕಲೆ, ಸೌಂದರ್ಯ, ಪ್ರಕೃತಿ ಇವೆಲ್ಲವುಗಳ ಪರಿಕಲ್ಪನೆ ಬೇರೆಯೇ ಏನೋ ಆಗಿರುತ್ತಿತ್ತು. ಅದೇನಾಗಿರಬಹುದಿತ್ತು ಎಂದು ಒಂದು ಸೆಕೆಂಡು ಯೋಚಿಸಿದರೂ ಒಂದಿಷ್ಟು ಬಣ್ಣಗಳೂ ಯೋಚನೆಯೊಂದಿಗೆ ಅಂಟಿಕೊಳ್ಳುತ್ತವೆ.      ಯೋಚನೆಗಳಷ್ಟೇ ಅಲ್ಲದೇ ಮನುಷ್ಯನ ಭಾವನೆಗಳೊಂದಿಗೂ ಬೆಸೆದುಕೊಂಡಿರುವಂಥದ್ದು ಈ ಬಣ್ಣಗಳ ಪ್ರಭಾವ. ಹೆಣ್ಣು ಎಂದರೆ ಗುಲಾಬಿಬಣ್ಣ, ಪ್ರೀತಿಯೆಂದರೆ ಕೆಂಪು, ಸಂಭ್ರಮಕ್ಕೆ ಹಸಿರು, ದುಃಖಕ್ಕೆ ಬಿಳಿ-ಕಪ್ಪು, ಹೀಗೆ ವಿವೇಚನೆ ಅಥವಾ ತರ್ಕಗಳೆಲ್ಲ ಅಮುಖ್ಯವಾಗಿ ಭಾವನೆಗಳೊಂದಿಗೆ ಬಣ್ಣಗಳು ಬೆರೆತುಹೋಗಿವೆ. ಸೀಮಂತಕ್ಕೋ, ಮದುವೆಗೋ ಹಸಿರುಸೀರೆಯನ್ನೇ ಏಕೆ ಉಡಬೇಕು ಎಂದು ಪ್ರಶ್ನಿಸುವವರನ್ನು ಯಾವ ನ್ಯಾಯಾಲಯವೂ ಜೈಲಿಗೆ ತಳ್ಳುವುದಿಲ್ಲ. ಧಾರೆಸೀರೆಗೆ ಹಸಿರುಬಣ್ಣವೇ ಶ್ರೇಷ್ಠ ಎಂದ ಅಮ್ಮ, ಸೀಮಂತಕ್ಕೆ ಹಸಿರುಸೀರೆ ಉಡುವುದು ಉತ್ತಮ ಎಂದ ಅತ್ತೆ ಇವರುಗಳೇ ನ್ಯಾಯಾಧೀಶರಾಗಿ ನಮ್ಮ ಸಂಭ್ರಮಕ್ಕೊಂದಷ್ಟು ಬಣ್ಣಗಳನ್ನು ತುಂಬುತ್ತಾರೆ. ಅಷ್ಟಕ್ಕೂ ಬದುಕಿನಲ್ಲಿ ಯಾವತ್ತಿಗೂ ಮರೆಯಾಗದ, ಮುಗಿದುಹೋಗದ ಸಂಭ್ರಮಗಳೆಂದರೆ ಬಣ್ಣಗಳೇ ಅಲ್ಲವೇ!      ಮನುಷ್ಯನಿಗೆ ಬಾಲ್ಯಕ್ಕಿಂತ ಬಲುದೊಡ್ಡ ಸಂಭ್ರಮ ಇನ್ನೊಂದಿಲ್ಲ ಎಂದು ನಂಬಿದವಳು ನಾನು. ಕಾಲ ದೇಶ ಭಾಷೆ ಜಾತಿ ಧರ್ಮ ಯಾವ ಬೇಲಿಯನ್ನಾದರೂ ಕಟ್ಟಿಕೊಳ್ಳಿ, ಅದರಾಚೆಗಿನ ಸ್ವಚ್ಛಂದ ಬಾಲ್ಯವೊಂದರ ನೆನಪು ಎಲ್ಲರೊಳಗೂ ಸದಾ ಜಾಗ್ರತ. ಇನ್ನೊಮ್ಮೆ ಬಾಲ್ಯಕ್ಕೆ ಮರಳುವುದು ಸಾಧ್ಯವಾದರೆ ಅದನ್ನು ಇನ್ನಷ್ಟು ಸುಂದರವಾಗಿಸುವ ಹಗಲುಗನಸೊಂದು ಎಲ್ಲರ ಹೆಗಲಮೇಲೂ ನೇತಾಡುತ್ತಿರುತ್ತದೆ; ಆ ಕನಸುಗಳನ್ನೆಲ್ಲ ಒಂದಿಷ್ಟು ಬಣ್ಣಗಳು ನೇವರಿಸುತ್ತಿರುತ್ತವೆ ಆಗಾಗ. ಬಾಲ್ಯವೊಂದು ಕನಸಾಗುವ ಗಳಿಗೆಯಲ್ಲಿ ಆಗಷ್ಟೇ ನೆಲಕ್ಕುರುಳಿದ ಅಚ್ಚಹಳದಿ ಕರವೀರದ ಮೇಲೆ ಇಬ್ಬನಿಯೊಂದು ಹೂಬಿಸಿಲಿಗೆ ಹೊಳೆದು, ಆ ಜಾಗವನ್ನೆಲ್ಲ ತಿಳಿಹಳದಿ ಬಣ್ಣವೊಂದು ಮಾಯೆಯಾಗಿ ಆವರಿಸಿದಂತೆ ಅನ್ನಿಸುವುದುಂಟು ನನಗೆ. ಹೂಹೃದಯದ ಹುಡುಗನೊಬ್ಬನಿಗೆ, ತಿಳಿಗುಲಾಬಿ ಬಣ್ಣದ ಗ್ರೀಟಿಂಗ್ ಕಾರ್ಡೊಳಗೆ ಹಸಿರು ಜೆಲ್ ಪೆನ್ನಿನಲ್ಲಿ ಬಿಡಿಸಿದ್ದ ಹೃದಯವೊಂದು ಕೆಂಪು ಚೂಡಿದಾರ ಧರಿಸಿ ಕನಸಿನೊಳಗೊಂದು ಕನಸ ಹುಟ್ಟಿಸಿರಬಹುದು. ಒಂಟಿಜೀವವೊಂದು, ಬಾಲ್ಯಕ್ಕೊಂದಿಷ್ಟು ಕನಸುಗಳ ಕರುಣಿಸಿ ಮರೆಯಾದ ನೀಲಿಕಣ್ಣಿನ ಹುಡುಗನ ನೆನಪಲ್ಲಿ ಹೊಸಹೊಸ ಕನಸುಗಳ ಸ್ವೆಟರೊಂದನ್ನು ಹೆಣೆಯುತ್ತಿರಬಹುದು.      ಹೀಗೆ ನೆನಪುಗಳಿಗೆ ಜಾರಿದಂತೆಲ್ಲ ಜೊತೆಗಿಷ್ಟು ಬಣ್ಣಗಳು ಹಿಂಬಾಲಿಸುತ್ತಲೇ ಇರುತ್ತವೆ. ಅಜ್ಜಿಯೋ, ಅಮ್ಮನೋ, ಚಿಕ್ಕಮ್ಮನೋ ನಮ್ಮ ಬಾಲ್ಯದ ಕಥೆ ಹೇಳುವುದನ್ನು ಯಾವತ್ತಾದರೂ ಗಮನಿಸಿದ್ದೀರಾ! ಪುಟ್ಟಪುಟ್ಟ ಸರಕುಗಳೆಲ್ಲ ಸಕಲ ಬಣ್ಣಗಳನ್ನೊಳಗೊಂಡ ವಿವರಗಳಾಗಿ, ಸಾದಾಸೀದಾ ಸುಂದರ ಕಥೆಯೊಂದರಂತೆ ನಮ್ಮ ಬಾಲ್ಯ ಅನನ್ಯ ಅನುಭೂತಿಯಾಗಿ ನಮ್ಮೆದುರು ತೆರೆದುಕೊಳ್ಳುವ ಸಮಯವಿದೆಯಲ್ಲ, ಅದಕ್ಕಾಗಿ ಸದಾ ಕಾಯುತ್ತಿರುತ್ತೇನೆ ನಾನು. ಅಂಥದ್ದೇ ಒಂದು ಚಂದದ ಕಥೆಯಲ್ಲಿ ನನ್ನ ಬಾಲ್ಯ ಒಂದಿಷ್ಟು ಬಣ್ಣಬಣ್ಣದ ಮಣಿಗಳೊಂದಿಗೆ ಸೇರಿಕೊಂಡಿದೆ. ಜೀವನಶೈಲಿಯಂತೆಯೇ ಆಟಿಕೆಗಳೂ ಸಿಂಪಲ್ಲಾಗಿದ್ದ ಹಳ್ಳಿಗಳಲ್ಲಿ ಆಗೆಲ್ಲ ಕಾಣಸಿಗುತ್ತಿದ್ದ ಆಟಿಕೆಗಳೆಂದರೆ ಜಾತ್ರೆಗಳಲ್ಲೋ ಅಥವಾ ತೇರುಗಳಲ್ಲೋ ಮಾರಾಟವಾಗುತ್ತಿದ್ದ ಪ್ಲಾಸ್ಟಿಕ್ ಚೆಂಡುಗಳು, ಲಾರಿ-ಬಸ್ಸುಗಳ ಆಕಾರದ ಪುಟ್ಟಪುಟ್ಟ ಪ್ಲಾಸ್ಟಿಕ್ ವಾಹನಗಳು. ಅವುಗಳಿಗೆ ದಾರಕಟ್ಟಿ ಎಳೆಯುತ್ತಾ ಕೇರಿಯ ಮನೆಗಳನ್ನೆಲ್ಲ ಸುತ್ತುತ್ತಾ ಹಗಲುಗಳು ಕಳೆದುಹೋಗುತ್ತಿದ್ದವಾದರೂ ರಾತ್ರಿಗಳಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು. ಹಗಲುಗಳ ಶಾಂತಸ್ವರೂಪಿ ಅಮ್ಮಂದಿರೆಲ್ಲ ರಾತ್ರಿ ರಣಚಂಡಿಯ ಅವತಾರವನ್ನು ತಾಳುವ ದೃಶ್ಯ ಸಾಮಾನ್ಯವಾಗಿತ್ತು. ಅಂತಹ ದೃಶ್ಯವೊಂದನ್ನು ಸುಂದರ ಕಾವ್ಯವನ್ನಾಗಿ ಪರಿವರ್ತಿಸಿದ್ದು ಬಣ್ಣದ ಮಣಿಗಳ ಹಳೆಯದೊಂದು ಪುಟ್ಟ ಪೆಟ್ಟಿಗೆ.      ಅಮ್ಮನಿಗೆ ಆ ಪೆಟ್ಟಿಗೆಯನ್ನು ನನ್ನ ಆಟಿಕೆಯನ್ನಾಗಿಸುವ ಯೋಚನೆ ಅದೆಲ್ಲಿಂದ ಬಂತು ಅವಳಿಗೂ ಗೊತ್ತಿಲ್ಲ. ಅಥವಾ ಆ ಪೆಟ್ಟಿಗೆಯೊಳಗೆ ಮಣಿಗಳು ಎಲ್ಲಿಂದ ಬಂದು ಸೇರಿಕೊಂಡವು ಎನ್ನುವುದಕ್ಕೂ ಉತ್ತರವಿಲ್ಲ. ತುಂಬುಕುಟುಂಬದ ಯಾವುದೋ ಹೆಣ್ಣುಮಗಳ ಸರವೊಂದು ಹರಿದುಹೋದಾಗಲೋ, ಮಕ್ಕಳ ಕೈಗಳನ್ನು ಅಲಂಕರಿಸುತ್ತಿದ್ದ ಕರಿಮಣಿಯ ಬಳೆಯೊಂದು ತುಂಡಾದಾಗಲೋ ಚಲ್ಲಾಪಿಲ್ಲಿಯಾದ ಮಣಿಗಳನ್ನೆಲ್ಲ ಯಾರೋ ಅದರಲ್ಲಿ ತುಂಬಿಸಿಟ್ಟಿರಬಹುದು. ಈಗಲೂ ಅಟ್ಟದಮೇಲೆ ನೆನಪುಗಳ ಪಳೆಯುಳಿಕೆಯಂತೆ ಬೆಚ್ಚಗೆ ಕುಳಿತಿರುವ ಆ ಪೆಟ್ಟಿಗೆಯಲ್ಲಿ ಬಣ್ಣಗಳೆಲ್ಲ ಬೆಳಕಿಗೆ ಹೊರಳಲು ಹಾತೊರೆಯುತ್ತಿರುವ ಹಂಬಲವೊಂದು ಕಾಣಿಸುವುದುಂಟು ನನಗೆ. ಆಕಾಶಬಣ್ಣದ ನುಣುಪಾದ ಮಣಿಗಳು, ಪಾರಿವಾಳದ ಕಣ್ಣುಗಳು ಅತ್ತಿತ್ತ ಹರಿದಾಡುವ ಅನುಭವ ನೀಡುವ ಕಪ್ಪುಮಿಶ್ರಿತ ಕೆಂಪುಮಣಿಗಳು, ಜೊತೆಗೊಂದಿಷ್ಟು ಬೇರೆಬೇರೆ ಆಕಾರ-ಗಾತ್ರಗಳ ಕರಿಮಣಿಗಳು ಎಲ್ಲವೂ ಇದ್ದವು ಅದರಲ್ಲಿ. ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಮಲಗಲು ರೆಡಿಯಾಗುತ್ತಿದ್ದ ಅಮ್ಮ ರೂಮಿನ ಲೈಟನ್ನು ಉರಿಯಲು ಬಿಟ್ಟು, ಪೆಟ್ಟಿಗೆಯ ಪುಟ್ಟ ಪ್ರಪಂಚವನ್ನು ನನ್ನೆದುರು ತೆರೆದಿಟ್ಟು, ಕೈಗೊಂದು ದಾರವನ್ನು ಕೊಟ್ಟು ಮಲಗಿಬಿಡುತ್ತಿದ್ದಳಂತೆ. ನಾನು ದಾರದೊಳಗೆ ಒಂದೊಂದಾಗಿ ಮಣಿಗಳನ್ನು ಪೋಣಿಸಿ, ಬಣ್ಣಬಣ್ಣದ ಸರವೊಂದನ್ನು ಸೃಷ್ಟಿ ಮಾಡಿ ಪೆಟ್ಟಿಗೆಯೊಳಗೆ ಇಟ್ಟು, ಡ್ಯೂಟಿಯೊಂದನ್ನು ಮುಗಿಸಿದವಳಂತೆ ಅಪ್ಪನ ಕೆಂಪುಚಾದರದೊಳಗೆ ಸೇರಿಕೊಂಡು ಮಲಗುತ್ತಿದ್ದೆನಂತೆ. ಒಂದೆರಡು ದಿನಗಳ ಕಥೆಯಲ್ಲ ಈ ಮಣಿಸರಗಳದ್ದು; ಎರಡು ಮೂರು ವರ್ಷಗಳ ದಿನಚರಿ. ಪುಟ್ಟಮಗುವೊಂದು ಪುಟ್ಟಪುಟ್ಟ ಕೈಗಳಲ್ಲಿ ದಾರ ಹಿಡಿದು ಮಣಿಗಳನ್ನು ಪೋಣಿಸುತ್ತಾ, ತನ್ನ ಸುತ್ತ ಬಣ್ಣದ ಲೋಕವೊಂದನ್ನು ಸೃಷ್ಟಿಸಿಕೊಳ್ಳುವಂತಹ ಸುಂದರ ದೃಶ್ಯಕಾವ್ಯ ಬೇರೆಲ್ಲಾದರೂ ನೋಡಲು ಸಿಕ್ಕೀತೇ!      ಹೀಗೆ ಬಾಲ್ಯವೆಂಬ ಸಂಭ್ರಮ ಅಚ್ಚುಕಟ್ಟಾಗಿ ಬಣ್ಣಗಳೊಂದಿಗೆ ಬೆರೆತು, ನೆನಪಾಗಿ ಎದೆಯ ಗೋಡೆಗಂಟಿಕೊಂಡಿತು. ಜಡೆಯ ಮೇಲೆ ಹೂವಾಗಿ ಅರಳುತ್ತಿದ್ದ ಕೆಂಪು, ಹಸಿರು ರಿಬ್ಬನ್ನುಗಳನ್ನು ಲವ್ ಇನ್ ಟೋಕಿಯೊ ಹೇರ್ ಕ್ಲಿಪ್ ಗಳು ರಿಪ್ಲೇಸ್ ಮಾಡಿದವು. ಉದ್ದಜಡೆಯ ಮೋಹ ಮರೆಯಾದಂತೆಲ್ಲ ಪಾರ್ಲರುಗಳ ಕೆಂಪು, ಗೋಲ್ಡನ್ ಕಲರುಗಳು ಸ್ಟ್ರೀಕ್ಸುಗಳಾಗಿ ತಲೆಯನ್ನೇರಿದವು. ಬಾಲ್ಯದ, ಯೌವನದ ಅವೆಷ್ಟೋ ಆಸೆ-ಕನಸುಗಳು ಕಣ್ಮರೆಯಾಗಿ ಹೋದರೂ ಬಣ್ಣಗಳೆಡೆಗಿನ ಮೋಹ ಮಾತ್ರ ಅಟ್ಟದ ಮೇಲಿನ ಪೆಟ್ಟಿಗೆಯಂತೆ; ಮುಪ್ಪಾಗುವುದಿಲ್ಲ. ಮಳೆಗಾಲಕ್ಕೆ ತಿಳಿಹಳದಿ ಕೊಡೆಯೊಂದು ಸಂಗಾತಿಯಾಗಿ ಜಗಲಿಗಿಳಿದರೆ, ಚಳಿಗಾಲಕ್ಕೊಂದು ಬಣ್ಣಬಣ್ಣದ ಹೂಗಳ ದುಪ್ಪಟಿ ಮಂಚವೇರುತ್ತದೆ. ಬೇಸಿಗೆಯ ತಿಳಿಮಜ್ಜಿಗೆಯ ಮೇಲೆ ಅಚ್ಚಹಸಿರು ಕೊತ್ತಂಬರಿಸೊಪ್ಪಿನ ಎಲೆಯೊಂದು ತಣ್ಣಗೆ ತೇಲುತ್ತಿರುತ್ತದೆ; ನೆನಪುಗಳಂತೆ!      ಹೀಗೆ ಹಚ್ಚಹಸಿರಾಗಿ ತೇಲುವ ನೆನಪುಗಳಲ್ಲಿ ಆಫೀಸಿನ ಹೋಳೀಹಬ್ಬವೊಂದು ಕೂಡಾ ಶಾಮೀಲಾಗಿದೆ. ಅಲ್ಲೊಬ್ಬ ಹುಡುಗನಿದ್ದ; ಲೆನ್ಸ್ ಹಾಕುತ್ತಿದ್ದ ಅವನ ಕಣ್ಣುಗಳಲ್ಲೊಂದು ಅನನ್ಯವಾದ ನಿರ್ಲಿಪ್ತತೆಯಿರುತ್ತಿತ್ತು. ಅವನೊಂದಿಗೆ ಮಾತನಾಡುವಂತಹ ಯಾವ ಅಗತ್ಯವೂ ಇರದಿದ್ದ ಕಾರಣ ಅವನು ಎದುರಾದಾಗಲೆಲ್ಲ ಅವನ ಕಣ್ಣುಗಳನ್ನೊಮ್ಮೆ ನೋಡಿ ಸುಮ್ಮನಾಗಿಬಿಡುತ್ತಿದ್ದೆ. ಆಫೀಸಿನ ತುಂಬಾ ಹೋಳೀಹಬ್ಬದ ಸಂಭ್ರಮ ತುಂಬಿದ್ದ ಒಂದು ಸಂಜೆ ನಾನೊಬ್ಬಳೇ ಮುಗಿಸಲೇಬೇಕಾದ ಕೇಸೊಂದನ್ನು ಹಿಡಿದು ಕೂತಿದ್ದೆ. ಡ್ರಾದಲ್ಲಿದ್ದ ಬಣ್ಣದ ಪ್ಯಾಕೇಟುಗಳನ್ನು ಒಯ್ಯುತ್ತಿದ್ದ ಅದೇ ಲೆನ್ಸ್ ಕಣ್ಣಿನ ಹುಡುಗ ನನ್ನ ಡೆಸ್ಕಿನೆದುರು ಒಮ್ಮೆ ನಿಂತು ಗಿಳಿಹಸಿರು ಬಣ್ಣದ ಪ್ಯಾಕೆಟೊಂದರ ಟಾಚಣಿಯನ್ನು ಬಿಡಿಸಿ, ಚಿಟಿಕೆಬಣ್ಣವನ್ನು ಕೆನ್ನೆಗಂಟಿಸಿ ಅವನ ಪಾಡಿಗೆ ಹೊರಟುಹೋದ. ಆ ಘಟನೆಯಿಂದಾಗಿ ನಮ್ಮ ಮಧ್ಯೆ ಪ್ರೇಮಾಂಕುರವಾಗುವಂತಹ ಅದ್ಭುತಗಳೇನೂ ಘಟಿಸದೇ ಹೋದರೂ, ಈಗಲೂ ಹೋಳೀಹಬ್ಬದ ಗಿಳಿಹಸಿರು ಬಣ್ಣದ ಪ್ಯಾಕೆಟನ್ನು ನೋಡಿದಾಗಲೆಲ್ಲ ನಿರ್ಲಿಪ್ತ ಕಣ್ಣುಗಳಿಂದ ಟಾಚಣಿ ಬಿಡಿಸಿದ ಹುಡುಗ ನೆನಪಾಗುತ್ತಾನೆ. ಅವನ ಬೆರಳಂಚಿಗೂ ಗಿಳಿಹಸಿರು ಬಣ್ಣದ ನೆನಪೊಂದು ಅಂಟಿಕೊಂಡಿರಬಹುದು! **** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು; ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡೆನಿಂಗ್ ಇವರ ನೆಚ್ಚಿನ ಹವ್ಯಾಸ

ಅಂಕಣ ಬರಹ Read Post »

ಅಂಕಣ ಸಂಗಾತಿ, ಜೀವನ

ದಿಕ್ಸೂಚಿ

ವಿಶಾಲ ಗೋಲದೊಳಗೆ ಎಂದೆಂದಿಗೂ ಅನಿಶ್ಚತತೆ ಜಯಶ್ರೀ ಜೆ.ಅಬ್ಬಿಗೇರಿ . ಅನಿಶ್ಚಿತತೆ ಎಂದ ಕೂಡಲೇ ನನಗೆ ನೆನಪಿಗೆ ಬರೋದು ತತ್ವಜ್ಞಾನಿಯೊಬ್ಬನ ಜೀವನದ ನೈಜ ಘಟನೆ.ಆತ ಪ್ರಸಿದ್ಧ ಪಾಶ್ಚಿಮಾತ್ಯ ತತ್ವಜ್ಞಾನಿ ನರ‍್ಮನ್ ಕಸಿನ್ಸ್.ಆತನ ದಿ ಅನಾಟಮಿ‌‌ ಆಫ್ ಇಲ್ನೆಸ್ ಎಂಬ ಗ್ರಂಥ ತುಂಬಾ ಪ್ರಸಿದ್ಧಿಯನ್ನು ಹೊಂದಿದೆ.ಇಂಥ ಸಾಧಕನಿಗೆ ರಕ್ತ ಕ್ಯಾನ್ಸರ್ ಎಂದು ಗೊತ್ತಾಯಿತು.ಇದನ್ನು ಕೇಳಿ ಆತನಿಗೆ ಬರಸಿಡಿಲು ಬಡಿದಂತಾಯಿತು.ಆದರೆ ಅವನು ತನ್ನ ಮನೋಭಾವನೆ ಯಿಂದ ಅದನ್ನು ಗುಣಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಹಾಸ್ಯ ಚಲನಚಿತ್ರಗಳನ್ನು ನೋಡತೊಡಗಿದ.ಸುಮಾರು ೫೦೦ ಹಾಸ್ಯ ಚಲನಚಿತ್ರಗಳನ್ನು ನೋಡಿದ್ದರ ಪರಿಣಾಮ ಭಾರಿ ಆಗಿತ್ತು.ಆತ ರಕ್ತ ಕ್ಯಾನ್ಸರ್‌ನಿಂದ ಗುಣ ಮುಖ ಆಗು ವುದು ಅಷ್ಟೇ ಅಲ್ಲ.ಮುಂದೆ ಇಪ್ಪತ್ತು ವರ್ಷಗಳ ಕಾಲ ಸು ಖವಾಗಿ ಬದುಕಿದ.ನರ‍್ಮನ್‌ನ ಕಥೆ ಓದಿ ಅರೆ! ಅನಿಶ್ಚಿತತೆ ಯ ಮನೋಭಾವನೆಯಿಂದ ಇಷ್ಟು ಸಲೀಸಾಗಿ ಗೆಲ್ಲಬಹು ದೇ ಅಂತೆನಿಸಿತಲ್ಲವೇ? ಶತಾಯುಷಿಗಳಾಗಿ ಬದುಕಿದವರ ಜೀವನ ಚರಿತ್ರೆಯ ಅಧ್ಯಯನ ಮಾಡಿದವರು ಮತ್ತು ಸ ಮೀಕ್ಷೆಗಳು ಪ್ರಕಟಿಸಿದ ವರದಿ ‘ಸಂತೋಷದಾಯಕ ಮ ನೋಭಾವವೇ ಶತಾಯಿಷಿಗಳನ್ನು ಎಂಥ ಕಡುಕಷ್ಟ ಕಾಲ ದ ಪರಿಸ್ಥಿತಿಯಲ್ಲಿ ಮತ್ತು ಅನಿಶ್ಚಿತತೆಯಲ್ಲಿ ರಕ್ಷಿಸಿತು’ ಎಂದು ಹೇಳುತ್ತದೆ.ಅನಿಶ್ಚಿತತೆ ಜೀವನದ ಒಂದು ಭಾಗ ಎಲ್ಲವೂ ನಾವೆಂದಕೊಂಡಂತೆ ನಡೆದರೆ ಬದುಕು ನಮ್ಮ ನಿಯಂತ್ರಣದಲ್ಲಿದೆ ಅಂತ ಖುಷಿಯಾಗುತ್ತದೆ.ಯಾವುದೇ ಒಂದು ದಿನ ಹೀಗೆಲ್ಲ ಆಗುತ್ತೆ ಅಂತ ನಾವೆಲ್ಲ ನಿರೀಕ್ಷಿಸಿರು ವುದಿಲ್ಲ.ಅಷ್ಟೇ ಅಲ್ಲ ಆ ದಿಸೆಯಲ್ಲಿ ಎಳ್ಳಷ್ಟು ಯೋಚಿಸಿರು ವುದಿಲ್ಲ. ಅಂಥ ಸಂದರ್ಭದಲ್ಲಿ ಒಂದು ಅನಿಶ್ಚಿತತೆ ನಮಗೆ ಹೇಳದೇ ಕೇಳದೇ ಒಮ್ಮೆಲೇ ಧುತ್ ಎಂದು ಪ್ರತ್ಯಕ್ಷವಾಗಿ ಬಿಡುತ್ತದೆ.ಅದು ನೈಸರ್ಗಿಕ ವಿಕೋಪದ ದಿನಗಳಲ್ಲಿ ಆದ ರಂತೂ ಮುಗಿದೇ ಹೋಯಿತು. ಅಯ್ಯೋ! ಇದನ್ನು ಇನ್ನು ಹೇಗೆ ನಿಭಾಯಿಸಬೇಕೆಂದು ತಲೆಗೆ ಕೈ ಹಚ್ಚಿಕೊಂಡು ಅಸ ಹಾಯಕರಾಗಿ ಕೂತು ಬಿಡುತ್ತೇವೆ.ಕೆಲವರು ಇದು ಹೀಗೆ ಒಂದು ದಿನ ಆಗಬಹುದು ಅಂತ ಅಂದುಕೊಂಡಿದ್ದೆ ಅಂತ ಹೇಳುವುದನ್ನೂ ಕೇಳುತ್ತೇವೆ.ಅದು ಮೊದಲೇ ಗೊತ್ತಿದ್ದರೆ, ಏನಾದರೂ ಕ್ರಮ ಏಕೆ ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆ ನಮ್ಮ ಮುಖಕ್ಕೆ ಮುಖ ಮಾಡಿ ನಿಲ್ಲುತ್ತದೆ.ಅಂದರೆ ಅದೆಲ್ಲ ನಾವೆಷ್ಟು ಜಾಣರು ಅಂತ ತೋರಿಸಿಕೊಳ್ಳುವ ನಂಬ‌ಲಾಗ ದ ತಂತ್ರ ಅಷ್ಟೇ.ಕೆಲವೊಮ್ಮೆ ಬರೀ ಸಮಾಧಾನಕ್ಕೆ ಹಾಗೆ ಹೇಳಿಕೊಳ್ಳುತ್ತೇವೆ.ಅಂದ್ಹಾಗೆ ಅನಿಶ್ಚಿತತೆ ಜೀವನದ ಒಂದು ಭಾಗ.ಅನ್ನುವುದನ್ನು ನಾವು ಬಹಳಷ್ಟು ಸಲಮರೆತು ಬಿಡು  ತ್ತೇವೆ.ಹಾಗೆ ಕೂಲಂಕುಷವಾಗಿ ಗಮನಿಸಿದರೆ ಅನಿಶ್ಚಿತತೆ ಯ ಬಗ್ಗೆ ನಾವು ಆತಂಕ ಪಡಬೇಕಿಲ್ಲ.ಏಕೆಂದರೆ ‘ಅನಿಶ್ಚಿತ ತೆಯ ಸನ್ನಿವೇಶದಲ್ಲಿ ಸಾಧ್ಯತೆಗಳು ಮತ್ತು ಆಯ್ಕೆಗಳು ಹೆಚ್ಚಾಗಿರುತ್ತವೆ’ . ಬದಲಾವಣೆಯ ಆಗರ ಅನಿಶ್ಚಿತತೆ ಆವರಿಸಿದಾಗ ಎಷ್ಟೇ ಗಟ್ಟಿಗರಾಗಿದ್ದರೂ ಅರಿವಿಗೆ ಬರದೇ ಭಯ ಆವರಿಸಿಕೊ ಳ್ಳುತ್ತದೆ.ಉಳಿದ ಸಮಯದಲ್ಲಿ ಅತಿ ಚುರುಕಾಗಿ ಕೆಲಸ ಮಾಡುವ ಮೆದುಳು ಮಂಕಾಗಿ ಬಿಡುತ್ತದೆ.ಹಿಂಡನ್ನು ಅಗ ಲಿದ ಮರಿ ಆನೆಯಂತಾಗುತ್ತದೆ.ಬಿದ್ದರೂ ಮೀಸೆ ಮಣ್ಣಾಗಿ ಲ್ಲ ವೆಂದು ತೋರಿಸಿಕೊಳ್ಳುವ ಜಾಯಮಾನ.ಅಷ್ಟು ಸುಲ ಭ ವಾಗಿ ಒಪ್ಪಿಕೊಳ್ಳುವುದಿಲ್ಲ.ಇದೇನು ಮಹಾ ಅದೆಷ್ಟೋ ಕಷ್ಟಗಳ ಮೂಟೆಗಳನ್ನು ಎತ್ತಿ ಬಿಸಾಕಿದ್ದೀನಿ.ಇದು ಯಾವ ಲೆಕ್ಕ ಬಿಡಿ ಎನ್ನುವ ಅಹಂಕಾರದ ಮಾತುಗಳನ್ನೂ ಆಡು ತ್ತೇವೆ.ಆದರೆ ವಾಸ್ತವ ಬೇರೆಯೇ ಇರುತ್ತದೆ.ನಮ್ಮೆದುರು ದೊಡ್ಡದೊಂದು ಶೂನ್ಯ ನಗುತ್ತ ನಿಂತಿರುತ್ತದೆ.ಸಣ್ಣ ವಿಷ ಯಗಳು ಸಣ್ಣ ಮನಸ್ಸುಗಳಿಗೆ ಸಂತೋಷ ನೀಡುತ್ತವೆ. ಎನ್ನುತ್ತ ದೊಡ್ಡದರತ್ತ ಚಿತ್ತ ಹರಿಸಿದರೆ ಮುಂದೇನು ಅಂತ ದಿಕ್ಕೇ ತೋಚದ ಹಾಗೆ ಕೂತಲ್ಲೇ ಕಣ್ಣೀರು ಹರಿಯುತ್ತದೆ. ಕೆಲವೊಮ್ಮೆ ದೇವರ ಮನೆಗೆ ಓಡಿ ಹೋಗಿ ಕಾಪಾಡಪ್ಪಾ ಅಂತ ಗಲ್ಲ ಗಲ್ಲ ಬಡಿದುಕೊಳ್ಳುವುದೂ ಉಂಟು.ಹಾಗಾದ ರೆ ಈ ಅನಿಶ್ಚಿತತೆ ಸನ್ನಿವೇಶದಲ್ಲಿ ಏನೆಲ್ಲ ಮಾಡಬಹುದು? ಚಿನ್ನದಂಥ ಕನಸನ್ನು ಮತ್ತೆ ಮತ್ತೆ ಕಂಡು ಹತಾಶರಾಗುತ್ತೇ ವೆ. ಹಾಗೆ ನೋಡಿದರೆ ಬದುಕು ಬದಲಾವಣೆಯ ಆಗರವೇ ಅಲ್ಲವೇ? ಪ್ರತಿನಿತ್ಯ ಅನಿಶ್ಚತತೆ ನಮ್ಮ ಸುತ್ತಲೂ ಸುತ್ತುತ್ತ ಲೇ ಇರುತ್ತದೆ. ಅದರಿಂದ ಪಾರಾಗವುದು ಸುಲಭವಲ್ಲ. ಸುಲಭವಲ್ಲ ಅಂದ ಮಾತ್ರಕ್ಕೆ ಅಸಾಧ್ಯ ಅಂತ ಅರ್ಥವಲ್ಲ. ‘ನಾವು ವಿಶಾಲವಾದ ಗೋಲದೊಳಗೆ ಪ್ರಯಾಣಿಸುತ್ತೇವೆ. ಎಂದೆಂದಿಗೂ ಅನಿಶ್ಚಿತತೆಯಿಂದ ಚಲಿಸುತ್ತೇವೆ’.ಎನ್ನುತ್ತಾ ನೆ ಬ್ಲೇಸ್ ಫಾಸ್ಕಲ್.ಅನಿಶ್ಚಿತತೆಯನ್ನು ಎದುರಿಸುವುದು ಹೇಗೆ ಎಂದು ತಿಳಿಯೋಣ ಬನ್ನಿ,ಗುರಿ ಸ್ಪಷ್ಟಪಡಿಸಿಕೊಳ್ಳಿ. ‘ಬರೆದಿಡಲಾರದ ಗುರಿಯು ಕೇವಲ ಒಂದು ಆಸೆ.ಎನ್ನುತ್ತಾ ರೆ ಬಲ್ಲವರು.ಆದ್ದರಿಂದ ಗುರಿಯನ್ನು ಸ್ಪಷ್ಟವಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿಡಿ.ಅದು ಮೇಲಿಂದ ಮೇಲೆ ನಿಮ್ಮ ಕಣ್ಣಿಗೆ ಬೀಳುವಂತಿರಲಿ.ನಿಮ್ಮ ಗಮನ ಸೆಳೆಯುವಂತಿರಲಿ ಸ್ಪಷ್ಟತೆ ಇರದೇ ಇದ್ದಾಗ ಸಮಯವು ಹೇಗೇಗೋ ವ್ಯರ್ಥ ವಾಗಿ ಕಳೆದು ಹೋಗಿ ಬಿಡುತ್ತದೆ.ಇಲ್ಲದ ಅನಿಶ್ವಿತತೆಗಳ ರಾಶಿಯನ್ನು ತಂದು ನಮ್ಮ ಮುಂದೆ ಚೆಲ್ಲುತ್ತದೆ. ಒಂದು ವೇಳೆ ಸಾಗುವ ದಾರಿ ಇದೇ ಅಂತ ಗೊತ್ತಾದರೆ ನಿಶ್ವಿತತೆಗೆ ದೊಡ್ಡ ಮಣೆ ಸಿಗುತ್ತದೆ. ಗುರಿಯೊಂದಿಗೆ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಂಡರೆ ನಡೆಯುವ ದಾರಿ ಅನಿಶ್ಚತತೆಯಿಂದ ಪರ‍್ತಿ ಸರಳಗೊಳಿಸಬಹುದು. ಯೋಜನೆಗಳ ಮೂಲಕ ಕೈಗೆತ್ತಿಕೊಳ್ಳಬಹುದು.ಎದೆಗಪ್ಪಿಕೊಳ್ಳಬಹುದು.ನಿರ್ಧಿಷ್ಟ ದಿಕ್ಸೂಚಿ ಬದಲಾವಣೆಗೆ ಪ್ರತಿರೋಧಿಸುವ ಗುಣ ನಮ್ಮ ಜೀನ್ಸಗಳಲ್ಲಿದೆ.ಗುರಿಯತ್ತ ಸಾಗಲು ಒತ್ತಡ ನೋವುಗಳ ನ್ನು ತಾಳಿಕೊಳ್ಳಲಾರದೇ ಪ್ರಯತ್ನಕ್ಕೆ ಮಂಗಳ ಹಾಡುತ್ತೇವೆ ನಡುವೆ ಕೈ ಬಿಡುವ ಜಾಯಮಾನಕ್ಕೆ ಒಗ್ಗಿಕೊಂಡ ಮನಸ್ಸಿ ಗೆ ಇದೆಲ್ಲ ಬೇಡವಾಗುತ್ತದೆ.ಕೂಲಂಕಷವಾಗಿ ಅವಲೋಕಿ ಸಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಅನಿಶ್ಚಿತತೆಯು ಭಾವನೆಗಳಿಗೆ ಮತ್ತು ಆಲೋಚನೆಗಳಿಗೆ ಲಗ್ಗೆ ಇಡುತ್ತದೆ.ಹೀಗಾಗಿ ಭಾವ ಲೋಕವನ್ನು ಪರಿಶುದ್ಧವಾ ಗಿ ಇಟ್ಟುಕೊಳ್ಳಬೇಕಾಗುತ್ತದೆ.ಗೊತ್ತಿಲ್ಲದ ಪ್ರದೇಶಗಳಿಗೆ ಭೇ ಟಿ ನೀಡುವಾಗ ಅಲ್ಲಿಗೆ ಹೋಗಿ ಬಂದವರನ್ನು ಕೇಳುತ್ತೇವೆ.  ಅದರೊಂದಿಗೆ ಹೋಗುವ ದಾರಿಯ ವಿವರಣೆಯನ್ನು ತಿಳಿ ದುಕೊಳ್ಳುತ್ತೇವೆ ಅಲ್ಲವೇ? ಹಾಗೆಯೇ ನಿಶ್ಚಿತಗೊಳಿಸಿದ ಗುರಿಯಲ್ಲಿ ನೀವೀಗ ಎಲ್ಲಿದ್ದೀರಿ. ಅದನ್ನು ತಲುಪಲು ದಿನ ನಿತ್ಯ ಮಾಡಬೇಕಾದ ಕಾರ‍್ಯಗಳ ಪಟ್ಟಿಯನ್ನು, ಮಾಡುವ ಕೆಲಸದ ವೇಳಾ ಪಟ್ಟಿಯನ್ನು ತಯಾರಿಸಿಕೊಳ್ಳುವುದರಿಂದ ಅನಿಶ್ಚಿತತೆಯಿಂದ ದೂರ ಬರಬಹುದು. ವೇಳಾ ಪಟ್ಟಿಯು ನಿಮ್ಮನ್ನು ನಿರ‍್ದೇಶಿಸುತ್ತದೆ. ಯೋಜನೆಗಳಲ್ಲಿ ಮಾಡಿಕೊಳ್ಳ ಬೇಕಾದ ಬದಲಾವಣೆಗಳು ಅದರಲ್ಲಿ ತೊಡಗಿಕೊಂಡ ಮೇಲೆ ದಿನೇ ದಿನೇ ಸ್ಪಷ್ಟವಾದ ಚಿತ್ರವನ್ನು ನೀಡುತ್ತ ಹೋ ಗುತ್ತವೆ.ಆದ್ದರಿಂದ ಒಂದು ವೇಳಾ ಪಟ್ಟಿಯನ್ನು ನಿರ‍್ಧಿಷ್ಟ   ದಿಕ್ಸೂಚಿಯಂತೆ ಬಳಸುವುದು ಉತ್ತಮ ಮಾರ್ಗವೆಂದರೆ ಏಕಾಗ್ರತೆ. ಬದುಕಿನಲ್ಲಿ ಎಲ್ಲವೂ ನಮ್ಮ ನಿಯಂತ್ರಣದಲ್ಲಿಲ್ಲ.ಕೆಲವು ಸಂಗತಿಗಳು ನಿಯಂತ್ರಣದಾಚೆಗೆ ಇವೆ.ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದೇ ಉಚಿತ.ಸಾಮಾಜಿಕ ಜಾಲ ತಾಣ ಗಳಲ್ಲಿ ಕಳೆಯುವ ಬಹುತೇಕ ಸಮಯ ಕೃತಕ ಖುಷಿ ನೀಡ ಡುತ್ತದೆ.ಅಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸು ವುದು ನಮ್ಮ ನಿಯಂತ್ರಣದಲ್ಲಿದೆ.ಅನಿಶ್ಚತತೆಯನ್ನು ನೀಗಿ ಸಲು ಅನೇಕ ಹಂತಗಳು ನಮ್ಮ ಕೈಯಲ್ಲೇ ಇವೆ.ಕೆಲವು ಸಮಯ ನೀವು ವಾಟ್ಸಪ್ ಫೇಸ್ ಬುಕ್ ನೋಡದಿದ್ದರೆ ರಾತ್ರೋ ರಾತ್ರಿ ಏನೂ ಆಗಿ ಬಿಡಲ್ಲ.ಕಾರ‍್ಯದೆಡೆಗಿನ ಸರಳ ಶಿಸ್ತು,ನಿರ‍್ಧಿಷ್ಟವಾದುದರ ಮೇಲಿನ ಕೇಂದ್ರೀಕರಿಸುವಿಕೆ ಫಲಿತಾಂಶವನ್ನು ಎತ್ತರಕ್ಕೇರಿಸುತ್ತದೆ.ಉತ್ಕೃಷ್ಟತೆ ಎಂದರೆ ಕೇಂದ್ರೀಕರಿಸುವಿಕೆ ಪರಿಣಾಮಕಾರಿಯಾಗಿ ಕಾರ‍್ಯ ನಿರ‍್ವಹಿ ಸಲು ಪ್ರಯತ್ನ ಮಾಡುವುದು.ಒಮ್ಮೆ ನೆಪೋಲಿಯನ್ ಹೀ ಗೆ ಹೇಳಿದನು: ‘ಏಕಾಗ್ರತೆಯಿಂದ ಯಾವನು ಪ್ರಯತ್ನಿಸು ವುದಿಲ್ಲವೋ, ಅವನು ಎಂದೂ ಯಶಸ್ವಿಯಾಗಲಾರನು. ಸಮಯ ಅಮೂಲ್ಯ ಸಮಯವನ್ನು ಹೆಚ್ಚು ಸಮರ್ಥವಾ ಗಿ ನಿರ‍್ವಹಿಸಲು ಬದ್ಧರಾಗಬೇಕು. ‘ಸಮಯವೇ ಜೀವನ.’ ಒಮ್ಮೆ ಕಳೆದು ಹೋದರೆ ಮರಳಿ ಸಿಗದ ಸಂಪತ್ತು ಎಂಬ ಗಾಢ ಭಾವವನ್ನು ಬೆಳೆಸಿಕೊಳ್ಳಬೇಕು.ಇತರರು ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಬಿಡಬೇಡಿ. ಬರೀ ಚಟುವಟಿಕೆಯಿಂದ ಕೂಡಿದ ಕೆಲಸಗಳಲ್ಲಿ ತೊಡಗಿ ಕೊಳ್ಳುವುದನ್ನು ಬಿಟ್ಟು ಉತ್ಪಾದನಶೀಲ ಕಾರ‍್ಯಕ್ಕೆ ಒತ್ತು ಕೊಡಬೇಕು.‘ಕಾಲದ ಪ್ರಯೋಜನ ಗೊತ್ತಿರದವರಿಗೆ ದಿನ ವು ಬಹು ದುಗರ್ಮವಾಗುತ್ತದೆ’.ಎನ್ನುತ್ತಾನೆ ಬುದ್ಧ.ಅನಿಶ್ಚಿ ತ ಸಮಯದಲ್ಲಿ ಕೈಯಲ್ಲಿರುವ ಸಮಯ ಒಂದು ಅವಕಾ ಶದಂತೆ ಅದನ್ನು ಸಿದ್ಧತೆಗಾಗಿ ಬಳಸಿಕೊಳ್ಳಬೇಕು.ಇದನ್ನೇ ಡಿಸ್ರೆಲ್ ಹೀಗೆ ಹೇಳುತ್ತಾನೆ,’ಅವಕಾಶವು ಎದುರಾದಾಗ ಅದನ್ನು ಎದುರುಗೊಳ್ಳುವ ಸಿದ್ಧತೆಯಲ್ಲಿರುವುದೇ ಯಶ ಸ್ವಿ ಜೀವನದ ರಹಸ್ಯವಾಗಿದೆ’.ಅಚ್ಚರಿಗಳಿಗೆ ಮುಕ್ತ ವಾಗಿರಿ ‘ಸುಂದರ ಬದುಕು ಒಂದು ಆಕಸ್ಮಿಕವಲ್ಲ.’ ಬದುಕು ಸುಂದ ರವಾಗಿಲ್ಲ ಅದನ್ನು ನಾವೇ ಸುಂದರವಾಗಿವಾಗಿಸಿ ಕೊಳ್ಳ ಬೇಕು.ಬದುಕು ಅಚ್ಚರಿಗಳ ಆಗರವೂ ಹೌದು. ಹೀಗಾಗಿ ಅಚ್ಚರಿಗಳು ನಡದೇ ಇರುತ್ತವೆ.ಆದ್ದರಿಂದ ಅಚ್ಚರಿಗಳನ್ನು ಮುಕ್ತವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇ ಕು.ಅಚ್ಚರಿಗಳಿಗೆ ಸಿದ್ದತೆ ಮಾಡಿಕೊಳ್ಳಲು ಕಲಿಯಬೇಕು. ಅದನ್ನು ಹಿರಿಯರ ಹಿತೋಪದೇಶದಿಂದಲೂ ಕಲಿಯಬ ಹುದು.ಅಚ್ಚರಿಗಳು ಅದ್ಭುತವನ್ನು ನೀಡುತ್ತವೆ.’ಯಾಕೋ ಏನೋ ಈ ಪ್ರಪಂಚದಲ್ಲಿ ಉಪದೇಶವೆಂದರೆ ಯಾರೂ ಇಷ್ಟ ಪಡುವುದಿಲ್ಲ.ನಿಜಕ್ಕೂ ಅವುಗಳ ಅಗತ್ಯ ಹೆಚ್ಚಾಗಿರು ವವರು ಅವುಗಳನ್ನು ತೀರಾ ಕಡಿಮೆ ಇಷ್ಟ ಪಡುತ್ತಿರುತ್ತಾರೆ  ಎಂದಿದ್ದಾನೆ ಜಾನ್ಸನ್.ಅನಿಶ್ಚತತೆಯ ಸವಾಲುಗಳನ್ನು ತೊಡೆದು ಹಾಕಲಾಗುವುದಿಲ್ಲ ಸ್ವೀಕರಿಸಲೇಬೇಕು. ಅನಿಶ್ಚಿತತೆಯನ್ನು ಎದುರಿಸುವಲ್ಲಿ ತಪ್ಪುಗಳಾಗಬಹುದು ಆದರೆ ನಿಂತಲ್ಲೇ ಕೊಳೆಯುವುದಕ್ಕಿಂತ ತಪ್ಪು ಮಾಡಿ ಅನಿಶ್ಚತತೆಯನ್ನು ಎದುರಿಸುವುದು ಉತ್ತಮವಲ್ಲವೇ? ***************

ದಿಕ್ಸೂಚಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಅವರ ಸಾಹಿತ್ಯ ಕೃಷಿಯೂ..!ಮತ್ತವರ ಉಧೋ ಉಧೋ ಎನ್ನುವ ಉತ್ತರ ಕರ್ನಾಟಕದ ಭಾಷೆಯೂ.!! ಬಾಳಾಸಾಹೇಬ ಲೋಕಾಪುರ ಇವರು ನವ್ಯೋತ್ತರ ಸಾಹಿತಿಗಳು. ಬಾಗಲಕೋಟದ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾಗಿದ್ದಾರೆ… ಇವರ ಕೃತಿಗಳು ಹೀಗಿವೆ– ಕಥಾಸಂಕಲನಗಳು– ಕವಣಿಗಲ್ಲು,ಹಾರುವ ಹಕ್ಕಿ ಮತ್ತು ಆಕಾಶ,ತನು ಕರಗದವರಲ್ಲಿ,ಕಂಗಳು ತುಂಬಿದ ಬಳಿಕ, ಇವರ ಕಾದಂಬರಿಗಳು– ಉಧೊ ಉಧೊಹುತ್ತಬಿಸಿಲುಪುರನೀಲಗಂಗಾ. ಇವರ ಕವನ ಸಂಕಲನಗಳು– ಭ್ರಮರಂಗೆ. ಇವರು ಪಡೆದ ಪ್ರಸಸ್ತಿಗಳು– ಕನ್ನಡ ಸಾಹಿತ್ಯ ಅಕಾಡಮಿ ಪ್ರಸಸ್ತಿಚದುರಂಗ ಪ್ರಸಸ್ತಿಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಬಾಳಾ ಸಾಹೇಬ ಲೋಕಾಪುರರು. ‘ನೀಲಗಂಗಾ’ ಕಾದಂಬರಿಯ ಪರಿಚಾಯಾ ಮೆಲಕು– ನೀಲಗಂಗಾ ಕಾದಂಬರಿಯ ತುಣುಕುಗಳು‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮಾದ ಲಹರಿಯೂ ಹೌದು… ಮೇಲ್ನೋಟಕ್ಕೆ ತ್ರಿಕೋನ ಪ್ರೇಮದ ಕಥೆಯೆನಿಸಿದರೂ ಕಾದಂಬರಿಯ ಶ್ರೀಮಂತಿಕೆಯಿರುವುದು ಕಥೆಗಿಂತಲೂ ಅದನ್ನು ಬರೆದ ಶೈಲಿಯಲ್ಲಿ. ಆಡು ಭಾಷೆಯ ಸೊಗಸು ಆಡುವುದಕ್ಕಿಂತಲೂ, ಓದುವುದರಲ್ಲಿಯೇ ಹೆಚ್ಚು ಆಪ್ತವೆನಿಸುತ್ತದೆ. ಪಂಚಯ್ಯ, ನೀಲಗಂಗಾ ಮತ್ತು ಸ್ವರೂಪರಾಣಿ ಪಾತ್ರಗಳ ಮೂಲಕ ಸ್ವಗತವಲ್ಲದೇ ಆಯಾಯ ಪಾತ್ರ ಚಿತ್ರಣದ ಮೂಲಕ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.”.. ತುತ್ತು ಕೂಳಿಗೂ ಗತಿಯಿಲ್ಲದ ಬಡ ಹುಡುಗ ಪಂಚಯ್ಯ. ಮನೆಯವರ ಅನಾಧಾರದಲ್ಲಿ ಅನಾಥನಾಗಿ ಆಶ್ರಮ ಸೇರಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಕವಿ ಹೃದಯದ ಆತ ಪ್ರಬುದ್ದನಾಗಿ ಬೆಳೆದು ಸಾರಸ್ವತ ಲೋಕದ ‘ಮೃತ್ಯುಂಜಯ’ ಆಗಿ ಕಾಲೇಜ್ನಲ್ಲಿ ಪ್ರೊಫೆಸರೂ ಆಗುತ್ತಾನೆ… ನೀಲಗಂಗಾ, ವೇದಮೂರ್ತಿ ‘ಮಲ್ಲಯ್ಯ’ನವರ ಮಗಳು. ಹೆಡೆದವ್ವನ ಪ್ರೀತಿಯಿಂದ ವಂಚಿತಳಾದ ಅವಳಿಗೆ ಹೆತ್ತಬ್ಬೆಯ ಪ್ರೀತಿಯ ಜೊತೆಗೆ ಜವಾಬ್ದಾರಿಯ ತಂದೆಯಾಗಿ ಅವೆರಡು ತಾವೇ ಆಗಿ ಅವಳನ್ನು ಬೆಳೆಸುತ್ತಾರೆ ಮಲ್ಲಯ್ಯ. ಕೊರ್ಯಾಣ ಹಿಡಿದು ಬದುಕುವ ಅವರ ಮನೆ ಬಡತನದ, ಬಟ್ಟಾ ಬಯಲಿನಂತೆ ಬಾಗಿಲುಗಳಿಲ್ಲದ ತೆರೆದ ಜಾಗ. ಹೀಗೆ ಬಡತನದಲ್ಲಿಯೇ ಬೆಳೆಯುತ್ತಾ ಕೃಷ್ಣೆಯಷ್ಟೇ ಮುಗ್ಧಳಾಗಿರುವ ನೀಲಗಂಗಾಳಿಗೆ ಓದಿ, ಪ್ರೊಫೆಸರ್ ಆಗಿರುವ ಪಂಚಯ್ಯನ ಮೇಲೆ ಹೇಳಿಕೊಳ್ಳಲಾರದಷ್ಟು ಪ್ರೀತಿ. ಅವನು ಮಾತನಾಡದಿದ್ದರೆ ಏನೋ ಕಳೆದುಕೊಳ್ಳುವ ತಳಮಳ. ಅಂತೊಂದು ಕಾತುರದ ದಿನ ಕೃಷ್ಣೆಯ ಬಳಿ ಅವನ ಭೇಟಿಯಾದಾಗ ಮಾತನಾಡಿದರೂ, ನಿರ್ಲಕ್ಷಿತನಂತೆ ಮೌನೊದೊಳಗೆ ನುಸುಳಿ ಹೋದ ಪಂಚಯ್ಯ ಮಲ್ಲಯ್ಯನವರು ಇಲ್ಲದ ಸಮಯದಲ್ಲಿ ನೀಲಗಂಗಾಳನ್ನು ಹುಡುಕಿಕೊಂಡು ಬರುತ್ತಾನೆ. ಹದಿಹರೆಯದ ಕನಸುಗಳ ಬೆಚ್ಚನೆಯ ಮುಸುಕೊಳಗೆ ಅರಿಯದೆ ನೀಲಗಂಗಾಳ ಕತ್ತಲ ಬದುಕಿಗೆ ನಾಂದಿ ಹಾಡುತ್ತಾನೆ… ನೀಲಗಂಗಾಳ ಬದಲಾದ ಭಾವಕ್ಕೆ ಕಾರಣ ತಿಳಿದ ಮಲ್ಲಯ್ಯ ‘ಎಲ್ಲಾ ಶಿವನಿಚ್ಛೆ’ಯೆನ್ನುವ ದೈವ ಭಕ್ತ. ಮಗಳಿಗಾದ ಅನ್ಯಾಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದರೂ, ಅವರುಗಳ ಅಸಹಾಯಕತೆ, ಗೌಡರ ವಿಳಂಬ ನಿರ್ಧಾರ, ಕೊನೆಗೂ ಕೆಟ್ಟ ಸುದ್ದಿಯಾಗಿಯೇ ಎದುರಾಗುತ್ತದೆ. ಪಂಚಯ್ಯನನ್ನು ಹುಡುಕಿಕೊಂಡು ಬರುವಾಗ ಅವನು ಸ್ವರೂಪರಾಣಿಯೆನ್ನುವ ಅವನ ಅಭಿಮಾನಿಯಾದ ವೈದ್ಯೆಯ ಜೊತೆಗೆ ಮದುವೆಯಾಗಿ ಹನಿಮೂನಿಗೆ ಹೊರಟಿರುವುದು ತಿಳಿಯುತ್ತದೆ. ಇದರಿಂದ ನೊಂದ ಮಲ್ಲಯ್ಯ ಊರಿನವರಿಂದಲೂ ನಿಂದೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿ ನೀಲಗಂಗಾಳನ್ನು ನಿರ್ಗತಿಕಳನ್ನಾಗಿಸುತ್ತಾನೆ… ಮುಂದೆ ಗಂಡು ಕೂಸಿಗೆ ಜನ್ಮವಿತ್ತ ನೀಲಗಂಗಾ ಎಲ್ಲದರಲ್ಲಿಯೂ ನಿರಾಸಕ್ತಳಾಗಿ, ಇನ್ನೊಂದೆಡೆ ತನ್ನ ತಂದೆಯ ಸಾವಿಗೆ ಕಾರಣನಾದೆನಲ್ಲಾವೆನ್ನುವ ದು:ಖ ಅವಳನ್ನು ಅಂತರ್ಮುಖಿಯನ್ನಾಗಿಸುತ್ತದೆ. ಬದುಕಿನಲ್ಲಿ ಸತ್ವವನ್ನೇ ಕಳೆದುಕೊಂಡ ಅವಳು ಅನ್ನಕ್ಕೂ ತಾತ್ವರ ಪಡುತ್ತಾಳೆ. ಕೊನೆಗೆ ತನ್ನ ಮೇಲೆ ಅನುಕಂಪ ತೋರಿದ ನಾಗವ್ವನೇ ಅವಳನ್ನು ನಿಂದಿಸುತ್ತಾಳೆ. ಆದರೆ ಹಸಿದ ಒಡಲಿನ ಜೊತೆಗೆ ಎಳೆ ಕೂಸಿನ ಮಮತೆ ಅವರ ಮುಂದೆ ಕೈಯೊಡ್ಡುತ್ತದೆ. ಅಲ್ಲಿ ನಾಗವ್ವನಿಂದ ಅವಮಾನಿತಳಾದ ಅವಳು ಹೆಣ್ಣು ಮಕ್ಕಳಿಗೆ ಕೊರ್ಯಣದ ಹಕ್ಕು ಇಲ್ಲದಿದ್ದರೂ ತನ್ನ ಗಂಡುಮಗುವಿಗೆ ಆ ಹಕ್ಕಿದೆಯೆಂದು ಹೊರಟಾಗ ನಾಗಮ್ಮ, ‘… ಈ ಜೋಳಿಗೆ ಐತಲ್ಲಾ ಅದು ಭಿಕ್ಷಾ ಬೇಡು ವಸ್ತು ಅಲ್ಲ. ಅದು ಶಿವನ ಸಂಕೇತ… ನಿನಗಾ ಧರ್ಮ ಸೂಕ್ಷ್ಮ ಕಲಿಸಿಕೊಡಬೇಕಾಗಿಲ್ಲ’ ಅನ್ನುವಾಗ ಸತ್ಯದ ಅರಿವಾಗಿ ಹಿಂದಕ್ಕೆ ಬರುತ್ತಾಳೆ ನೀಲಗಂಗಾ… ಕವಿ ಹೃದಯದ ಪಂಚಯ್ಯನನ್ನು ಭೇಟಿಯಾಗಿ ತನ್ನ ತಾಯಿಯ ಮಾತನ್ನೂ ಮೀರಿ ಮದುವೆಯಾದ ಸ್ವರೂಪರಾಣಿ, ಓದುಗರನ್ನು ಭ್ರಾಮಾಲೋಕಕ್ಕೆ ಕರೆದೊಯುವ ಕವಿ, ವಾಸ್ತವದ ಬಗ್ಗೆ ಸ್ಪಷ್ಟವಾಗಿ ಮತ್ತು ನಿಷ್ಟುರವಾಗಿ ತನ್ನ ಮಡದಿಗೆ ಹೇಳುವಾಗ ತಾನು ಭಾವಿಸಿದೆಲ್ಲಾ ಸುಳ್ಳೇ ಅನಿಸುತ್ತದೆ ಅವಳಿಗೆ. ಅವಳನ್ನು ನಿರಾಶೆ ಆವರಿಸಿ, ಅವನ ಮೇಲೆ ಬೇಸರ ಮೂಡಿದರೂ, ಅದು ಪ್ರೀತಿಯ ಉನ್ಮಿಲಿತವೆನಿಸುತ್ತದೆ. ಅವನ ಬಗ್ಗೆ ವ್ಯತಿರೀಕ್ತವಾದ ಭಾವನೆಯೊಂದು ಉದಯಿಸುತ್ತದೆ. ಆದರೂ ಅವಳ ಪ್ರೀತಿಯೇನೂ ಕಡಿಮೆಯಾಗುವುದಿಲ್ಲ… ಒಮ್ಮೆ ಪಂಚಯ್ಯ ತನ್ನ ಮುಖ್ಯ ಕಾರ್ಯದ ನಿಮಿತ್ತ ಬೆಂಗಳೂರಿಗೆ ಹೊರಟಾಗ ಆತ ತನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಾನೆ ಅನ್ನುವ ಸಂಶಯ ಸ್ವರೂಪರಾಣಿಗೆ ಮೂಡುತ್ತದೆ. ಅವನು ಬೆಂಗಳೂರಿಗೆ ಹೊರಟ ಮೇಲೆ ತಾನು ಉತ್ತರಭಾರತದ ಪ್ರವಾಸ ಕೈಗೊಂಡು ಅವನಿಗೆ ವಿಸ್ಮಯ ಮೂಡಿಸುವ ಹವಣಿಕೆಯಲ್ಲಿರುತ್ತಾಳೆ… ಆದರೆ ಕಥೆ ತಿರುವು ಪಡೆಯುವುದು ಅಲ್ಲಿಯೆ. ಪಂಚಯ್ಯನ ಊರಿನವನೇ ಆದ ವಿದ್ಯಾರ್ಥಿಯೊಬ್ಬ ನೀಲಗಂಗಾಳಿಗೆ ಪಂಚಯ್ಯನಿಂದ ಆದ ಅನ್ಯಾಯವನ್ನು ಸ್ವರೂಪರಾಣಿಗೆ ತಿಳಿಸುತ್ತಾನೆ. ತಾನು ಕೈ ಹಿಡಿದಾತನ ಬಣ್ಣ ಬದಲಾದಾಗ ಹತಾಶಳಾದರೂ ತನ್ನ ಕಾರಿನಲ್ಲಿಯೇ ಪಂಚಯ್ಯನ ಊರಿಗೆ ಬರುತ್ತಾಳೆ. ನೀಲಗಂಗಾಳಿಗಾದ ಅನ್ಯಾಯವನ್ನು ತಿಳಿದು ಅವಳ ಇಚ್ಛೆಯಂತೆಯೇ ತನ್ನ ಜೊತೆಗೆ ಕರೆದುಕೊಂಡು ಬರುತ್ತಾಳೆ… ಇತ್ತ ಪಂಚಯ್ಯ ಬೆಂಗಳೂರಿನಿಂದ ಮರಳಿದವನು ಸ್ವರೂಪರಾಣಿ ತನ್ನ ಊರಿಗೆ ಹೊರಟಿರುವುದು ತಿಳಿದು ಅವನು ಹುಡುಕಿಕೊಂಡು ಅಲ್ಲಿಗೆ ಬರುವಾಗ ಅವನ ತಾಯಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ಆತನ ಅಕ್ಕ ನಾಗವ್ವ ತಮ್ಮನಿಂದ ನೀಲಗಂಗಾಳಿಗಾದ ಮೋಸವನ್ನು ಕೇಳಿ ಸಿಟ್ಟಾಗುತ್ತಾಳೆ. ಆದರೂ ಅವಳಿಗೆ ಆತ ನಿರ್ದೋಶಿಯೆನ್ನುವುದು ಬೇಕು. ಆದರೆ ಪಂಚಯ್ಯ ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಾಗವ್ವ ನಿಷ್ಠುರವಾಗಿ ಮಾತನಾಡಿ ಒಂದು ಅಮಾಯಕ ಹೆಣ್ಣಿಗಾದ ನೋವನ್ನು ಪ್ರತಿಭಟಿಸುತ್ತಾಳೆ. ಪಂಚಯ್ಯ ಅಲ್ಲಿ ಸ್ವರೂಪರಾಣಿ ಮತ್ತು ನೀಲಗಂಗಾಳನ್ನು ಕಾಣದೆ ಹುಡುಕುತ್ತ ಬರುವಾಗ ಅವನಿಗೆ ಒಮ್ಮೆ ಸ್ವರೂಪರಾಣಿ ಹೇಳಿದ ಮಾತುಗಳು ನೆನಪಾಗಿ ಆಶ್ರಮಕ್ಕೆ ಹೋಗುತ್ತಾನೆ. ಅಲ್ಲಿ ಅವಳನ್ನು ಭೇಟಿಯಾದರೂ ಸ್ವರೂಪರಾಣಿಯ ದೃಢ ನಿರ್ಧಾರದ ಮುಂದೆ ತಲೆ ತಗ್ಗಿಸುತ್ತಾನೆ. ಆಕೆಯೇ ನೀಲಗಂಗಾಳ ಜೊತೆಗೆ ಊರಿಗೆ ಹೋಗು ಅನ್ನುತ್ತಾಳೆ. ಪಂಚಯ್ಯ ಕ್ಷಮಾಪಣೆ ಕೇಳಿಕೊಂಡು ಮಗುವಿನ ಜೊತೆಗೆ ನೀಲಗಂಗಾಳನ್ನು ಕರೆದುಕೊಂಡು ಊರಿಗೆ ಹಿಂತಿರುಗುತ್ತಾನೆ… ಹೀಗೆ ಕಥೆ ಮುಗಿದರೂ ಆ ಕಥಾಭಾಷೆಯ ಸವಿ ಕೃತಿಯನ್ನು ಮಗದೊಮ್ಮೆ ಓದುವಂತೆ ಪ್ರೇರೇಪಿಸುತ್ತದೆ. ಅದೇ ಲಹರಿ, ಪದಗಳ ಸಿಹಿಯನ್ನು ಅಸ್ವಾದಿಸುವ ಮನಸ್ಸು ತನ್ನಿಂದ ತಾನೆ ಖುಷಿಪಡುತ್ತದೆ… ಹೀಗಿದೆ ಬಾಳಾಸಹೇಬ ಲೋಕಾಪುರರ ಸಾಹಿತ್ಯ ಕೃಷಿ..! ********** ಕೆ.ಶಿವು.ಲಕ್ಕಣ್ಣವರ

ಸ್ವಾತ್ಮಗತ Read Post »

ಅಂಕಣ ಸಂಗಾತಿ, ಆರೋಗ್ಯ

ಆರೋಗ್ಯ ಅರಿವು

ಆಗಾಗ್ಗೆ ಹಿಂತಿರುಗಿ ನೋಡಬೇಕು… ಡಾ ವಿಜಯಲಕ್ಷ್ಮಿ ( ರಮಾ) ಪುರೋಹಿತ “ಆಗಾಗ್ಗೆ ಹಿಂತಿರುಗಿ ನೋಡಬೇಕುಭವಿಷ್ಯದ ಹಾದಿಯಲ್ಲಿ ಸಾಗುತ್ತ. ಆರೋಗ್ಯದ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಮಹದಾಸೆ ಏನಾದರೂ ಸಾಧಿಸಬೇಕೆಂಬ ಉತ್ಕಟ ಬಯಕೆ ಇದ್ದೇ ಇರುತ್ತದೆ.ಅದು ಸಂತೋಷಕರ ಸಂಗತಿಯೇ.ಈ ಕಾಲದಲ್ಲಿಯ ಜೀವನ ಆನಂದಮಯ ಹಾಗೂ ತೃಪ್ತಿಕರವಾಗಿರದೇ ಎಲ್ಲೊ ಕಳೆದುಕೊಂಡಹಾಗೆ,ಏನೊ ಹುಡುಕುತ್ತಿರುವ ಹಾಗೆ ಬಹಳ ಜನರನ್ನು ಕಾಣುತ್ತೇವೆ.ಯಾವದರಲ್ಲಿಯೂ ಸಮಧಾನ ಇಲ್ಲ.ಇನ್ನು ಕೆಲವರಿಗಂತೂ ಭಯವೇ ಜೀವನದಲ್ಲಿ ಆವರಿ ಸಿದೆ.ಚಿಕ್ಕವರಿಗೆ ಶಾಲಾ,ಕಾಲೇಜಿನಲ್ಲಿ ಅಂಕಗಳಿಸುವ ತುಡಿತವಿದ್ದರೆ,ಯುವಕರಿಗೆ ಜೀವನೋಪಾಯದ ಚಿಂತೆ  ವಯಸ್ಕರಿಗೆ ಅನಾರೋಗ್ಯದ ಛಾಯೆ ಅಷ್ಟೇ ಅಲ್ಲದೇ ತಪ್ಪಿಸಲಾಗದ ಮರಣ ಹತ್ತಿರವಾದಂತೆ ಅವರದೇ ಬೇರೆ ದುಗುಡ,ಆತಂಕ.ಹೀಗಾಗಿ ದೊರಕಿರುವ ಆಯುಷ್ಯದಲ್ಲಿ ಮನುಷ್ಯನಿಗೆ ಕ್ರಮಬದ್ಧವಾಗಿ,ಶಿಸ್ತಿನ ಜೀವನ ಶೈಲಿ ಇದ್ದರೆ ಒಳ್ಳೆಯ ಆರೊಗ್ಯ ಲಭಿಸಿ ಅಂದು ಕೊಂಡ ಸಾಧನೆ ಸಾಧ್ಯ. ಶರೀರ ಮಾಧ್ಯಂ ಖಲು ಧರ್ಮ ಸಾಧನಂ !! ಸಾಧನೆ ಮಾಡಬೇಕಿದ್ದರೆ ಆರೋಗ್ಯಕರ ಶರೀರದ ಅತ್ಯವ ಶ್ಯಕತೆ ಇರುತ್ತದೆ.ಒಟ್ಟಿನಲ್ಲಿ ರೋಗ ರಹಿತವಾಗಿರುವದೆಂದ ರೆ,ಮಾನಸಿಕ ಹಾಗೂ ದೈಹಿಕಸ್ವಾಸ್ಥ್ಯಕಾಪಾಡಿಕೊಳ್ಳುವು ದು.ಹಾಗಾದರೆ ಅನಾರೋಗ್ಯ ಇರದೇ ಆರೋಗ್ಯ ಭಾಗ್ಯ ದೊರಕುವ ಬಗೆಯನ್ನು ತಿಳಿಯಲು ಪ್ರಯತ್ನ ಮಾಡೋಣ ಔಷಧಿಗಳ ಬಳಕೆ ತೀರಾ ಅವಶ್ಯಕವಾದಾಗ ಮಾಡಬೇಕು. ಅದನ್ನು ಉಪೇಕ್ಷಿಸುವಂತಿಲ್ಲ. ಆದರೆ ಯಾವ ಔಷಧಗಳು ಅಡ್ಡಪರಿಣಾಮ ಬೀರುವದಿಲ್ಲವೋ ಅವು ಹೆಚ್ಚು ಸೂಕ್ತ. “ಧರ್ಮಾರ್ಥಕಾಮ ಮೋಕ್ಷಾಣಾಮಾರೋಗ್ಯಂಮೂಲ ಮುತ್ತಮಂ! ರೋಗಾಸ್ತಸ್ಯಾಪಹರ್ತಾರ: ಶ್ರೆಯಸೋ   ಜೀವಿತ ಸ್ಯಚ!!”. ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿವಪ್ರತಿ ಮನುಷ್ಯನ ಮೂಲ ಉದ್ದೇಶ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷವ ನ್ನುಪಡೆಯುವದು.ಈ ನಾಲ್ಕು ಮನುಷ್ಯನ ವಶವಾಗಬೇ ಕಾದರೆ ಎಲ್ಲಕ್ಕಿಂತ ಅತಿ ಮುಖ್ಯವಾಗಿ ಬೇಕಾಗಿರುವದು ಒಳ್ಳೆಯ ಆರೋಗ್ಯ.ಅನಾರೋಗ್ಯ ವ್ಯಕ್ತಿಗೆ ಧರ್ಮಕರ್ಮ ಗಳಾಗಲೀ ಸಾಧಿಸುವದಿಲ್ಲ ಹಾಗೂ ಅರ್ಥವ್ಯವಸ್ಥೆಯೂ ದೊರಕುವದಿಲ್ಲ.ಜೀವನದ ಸುಖ ಸಂತೋಷಗಳಿಂದ ಅವನು ದೂರವೇ ಉಳಿಯಬೇಕಾಗುತ್ತದೆ.ಮೋಕ್ಷವಂತು ದೂರವೇ ಉಳಿಯಿತು.ಜೀವನದಲ್ಲಿ ಆರೋಗ್ಯ ಒಂದು ಕಡೆಯಾದರೆ ಉಳಿದೆಲ್ಲಸುಖ,ಸಂಪತ್ತು,ಧನ,ಕೀರ್ತಿ,ಬಲು ದ್ದಿ ಮಟ್ಟ,ಜನಮನ್ನಣೆ ಇತ್ಯಾದಿಗಳೆಲ್ಲವೂ ಇನ್ನೊಂದು ಕಡೆ ತೂಗುತ್ತವೆ.”ಆರೋಗ್ಯವಂತ ಬಡವನ ಬಾಳು  ಸಿರಿವಂತ ರೋಗಿಯ ಅಳು” ಇವೆರಡರಲ್ಲಿ ಆರೋಗ್ವಂತನ ಬಾಳೇ ಶ್ರೇಷ್ಠ.ಅನಾದಿ ಕಾಲದಿಂದಲೂ ಭಾರತೀಯರಿಗೆ ಆರೋಗ್ಯ ದ ಕಾಳಜಿ,ಅರಿವು,ಪಾಲಿಸುವ ಸದಭಿರುಚಿ ಇದ್ದೇ ಇತ್ತು. ಅವೆಲ್ಲ ಜೀವನದ ಅವಿಭಾಜ್ಯ ಅಂಗಗಳಾಗಿಯೂ ಇತ್ತು. ಅದಕ್ಕಾಗಿಯೇ,”ಸ್ವಾಸ್ಥಸ್ಯಸ್ವಾಸ್ಥ್ಯರಕ್ಷಣಂ!ಆತುರಸ್ಯವಿಕಾರಪ್ರಶಮನ!!ಎಂದುಹೇಳಿದ್ದಾರೆ.ಅಂದರೆ:: ಆರೋಗ್ಯವಂತನ ಆರೋಗ್ಯ ನನ್ನು ಕಾಪಾಡಿ ಕೊಂಡು ಹೋಗುವದು ಹಾಗೂ ರೋಗ ಬಂದಾಗ ಅದನ್ನು ಶಮನಗೊಳಿಸುವದು ಎಂದರ್ಥ‌. ಆದರೆ ಇಂದಿನ ದಿನಗಳಲ್ಲಿ ಎಲ್ಲರ ಮನೋಭಿಲಾಷೆಗಳು ಶೀಘ್ರಹಣ ಮಾಡುವದು, ಹೆಚ್ಚು ಹಣ ಮಾಡುವದು ಇತ್ಯಾದಿ ಕ್ಷುಲ್ಲಕ ಆಮಿಷಗಳಿಗೆ ಬಿದ್ದು ಆರೋಗ್ಯದ ಪರಿವೆ ಇಲ್ಲದೆ ನಿತ್ಯ ನರಕ ಅನುಭವಿಸುತ್ತಾರೆ.ಅಷ್ಟೇ ಅಲ್ಲದೆ ಬೇ ಗ ಗುಣವಾಗಬೇಕು,ಯಾರಿಗೂ ರಜೆ ಇಲ್ಲ,ಮತ್ತೆ ಮಾರನೆ ದಿನ ಎಂದಿನಂತೆ ಕೆಲಸಗಳಿಗೆ ಹಾಜರಾಗಬೇಕೆಂಬ ಅನಿ ವಾರ್ಯತೆಯೂ ಇರುವದರಿಂದ ತಮ್ಮ ದೇಹದ ಮಾತನ್ನ ಆಲಿಸುವ ಸಹನೆ,ವೇಳೆ ಯಾರಲ್ಲಿಯೂ ಇಲ್ಲ.ಆತುರದ ಮನಸ್ಸಿನಲ್ಲಿ ಯಾವ ಔಷಧಿ ಸೂಕ್ತ ಅಂತ ಯೋಚಿಸದೇ, ಆದರ ಅಡ್ಡಪರಿಣಾಮಗಳನ್ನು ತಿಳಿಯದೇ ಸಧ್ಯಕ್ಕೆ ಆರಾ ಮ ಆದರೆ ಆಯಿತು ಅನ್ನುವ ಮನೋಭಾವದಲ್ಲಿ ನಾವೆಲ್ಲ ಇದ್ದೆವೆ. ಈಗಂತೂ ಔಷಧಿಗಳ ಜಾಹಿರಾತುಗಳು ಸಹಜನ ರನ್ನು ತಪ್ಪು ದಾರಿಗೆಳೆಯುತ್ತವೆ. ರೋಗ ಬಂದಾಗ ಔಷಧೋಪಚಾರ ಇರಲಿ ಆದರೆ ರೋಗ ಬಾರದಂತೆ ನಮ್ಮ ಹಿಂದಿನವರು ನಡೆದುಕೊಂಡು ಬಂದ ದಾರಿ ಅವರ ತಿಳುವಳಿಕೆ,ಜಾಣ್ಮೆ,ಮೈಬಗ್ಬಿಸಿ ದುಡಿಯುವ ದು,ಹಿತ,ಮಿತ ಮಾತು,ಆಹಾರ ಸೇವನೆ,ನಿದ್ದೆ,ಕಾಯಿಲೆಗೆ ತುತ್ತಾಗದಂತೆ ಅವರು ತೆಗೆಳ್ಳುತಿದ್ದ ಮುಂಜಾಗ್ರತೆ ಎಲ್ಲವ ನ್ನೂ ಅವಲೋಕಿಸಿದಾಗ ನಾವು ಸುಶಿಕ್ಷಿತರು ಎನ್ನಿಸಿಕೊಳ್ಳು ವವರು ಖಂಡಿತ ನಮ್ಮನ್ನು ನಾವೇ ಅರಿಯಬೇಕಾಗಿದೆ. ಕೆಲವರಂತೂ ಆಹಾರಕ್ಕಿಂತ ಔಷಧಿಯ ಮೇಲೆಯೇ ಅವ ಲಂಬಿತರಾಗಿದ್ದು ಅವರ ಹಣಕಾಸಿನ ಖರ್ಚು,ಔಷಧಿಯ ಬೇಡದ ಪರಿಣಾಮಗಳು ಇತ್ಯಾದಿಯಿಂದ ಮನುಷ್ಯ ಖಿನ್ನ ತೆಯನ್ನು ಹೊಂದುತ್ತಾನೆ. ಭಗವಾನ ಧನ್ವಂತರಿ ಆಯುವೇ ೯ದ ಶಾಸ್ತ್ರದಲ್ಲಿ ಹೇಳಿದಂತೆ “ಸಮದೋಷ:ಸಮಾಗ್ನಿಷ್ಚಸಮಧಾತುಮಲಕ್ರಿಯಾ: ! ಪ್ರಸನ್ನಾತ್ಮೇಂದ್ರಿಯಮನ: ಸ್ವಸ್ಥಇತ್ಯಭಿದಿಯತೆ!! ಅರ್ಥ:: ಯಾವ ಮನುಷ್ಯನ ದೋಷ (ವಾತ, ಪಿತ್ತ,ಹಾಗೂ ಕಫ ೩ ದೋಷಗಳು) ಸಮಸ್ಥಿತಿಯಲ್ಲಿದ್ದು,ಅಂದರೆ ಹೆಚ್ಚು ಕಡಿಮೆ ಆಗದೇ,ಯಾರ ಅಗ್ನಿ (ಜೀರ್ಣಶಕ್ಕ್ತಿ),(digestive         fire) ಶರೀರದ ಧಾತುಗಳು (bodytissues) ಅಂದರೆ ರಸ ( lymphatic fluid) ,ರಕ್ತ( blood),ಮಾಂಸ (mu scle),ಮೇದ(lipids),ಅಸ್ಥಿ(bone),ಮಜ್ಜಾ(bonema rrow) ಹಾಗೂ ಶುಕ್ರ(sperm/ovum) ಎಲ್ಲವೂ,ಅಷ್ಟೇ ಅಲ್ಲದೇ ಮಲನಿರ್ಹರಣ ಅಂಗಗಳೂ ಕೂಡ ಸರಿಯಾಗಿ ಕಾರ್ಯನಿರ್ವಹಿಸಿದರೆ ಮತ್ತುಆತ್ಮ,ಇಂದ್ರಿಯಗಳನ್ನೂ ಹಾಗೂ ಮನಸ್ಸು ಪ್ರಸನ್ನವಾಗಿಟ್ಟು ಕೊಂಡ ವ್ಯಕ್ತಿ ಮಾತ್ರ ನಿರೋಗಿ,ಆರೋಗ್ಯವಂತ ಸ್ವಸ್ಥ ಅನಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಅವನ ಅವಳ ಸಾಧನೆ ಪೂರ್ಣಗೊಳ್ಳುವದರ ಲ್ಲಿ ಸಫಲತೆಯನ್ನು ಕಾಣುತ್ತಾನೆ. ಒಂದು ನೆನಪಿರಲಿ  ಆರೋಗ್ಯ ಎಂದರೆ ಬರೀದೇಹ ಸಾಸ್ಥ್ಯವಷ್ಟೇ ಅಲ್ಲ,ಮನ ಸ್ಸಿನ ಆರೋಗ್ಯವೂ ಅಷ್ಟೇ ಪ್ರಾಮುಖ್ಯ ತೆಯನ್ನು ಪಡೆದಿದೆ.”ಇಂದಿನ ನಮ್ಮ ಆಹಾರ ವಿಹಾರ ನಾಳೆಯ ಗುಣಮಟ್ಟದಬದುಕು.” ************

ಆರೋಗ್ಯ ಅರಿವು Read Post »

ಅಂಕಣ ಸಂಗಾತಿ

ಗಾಳೇರ ಬಾತ್

ಗಾಳೇರ ಬಾತ್-06 ಆ ದಿನಗಳ ದಸರಾ…… ಆ ದಿನಗಳ ದಸರಾ……         ದಸರಾ ಹಬ್ಬಕ್ಕೆ ನಮ್ಮ ಕಡೆಯ ಹಳ್ಳಿಗಳಲ್ಲಿ  ಮಾರ್ನಮಿ ಹಬ್ಬ ಅಂತ ಕರೀತಾರೆ. ಮಾರ್ನಮಿ ಹಬ್ಬ ಅಂದ್ರೆ ಸಾಕು, ನಮಗೆ ಎಲ್ಲಿಲ್ಲದ ಖುಷಿ, ಎಲ್ಲಿಲ್ಲದ ಆನಂದ. ಯಾಕಂದ್ರೆ ಈ ಹಬ್ಬಕ್ಕೆ ನಮಗೆಲ್ಲಾ ಹೊಸಬಟ್ಟೆಗಳು! ಆ ಬಟ್ಟೆಗಳನ್ನ ನೆನಸಿಕೊಂಡ್ರೆ ಇವತ್ತಿಗೂ ನಗು ತಡಿಯೋಕೆ ಆಗಲ್ಲ ಕಣ್ರಿ. ಆಗ ನಮಗೆ ಚಡ್ಡಿ ಮತ್ತೆ ಅಂಗಿ, ಆಗಿನ ಚಡ್ಡಿಗಳನ್ನ ಇವತ್ತಿನ ಬರ್ಮುಡಾ ಗಳಿಗೆ ಹೋಲಿಸಬಹುದು ನೋಡ್ರಿ. ಯಾಕಪ್ಪಾ ಇಷ್ಟು ದೊಡ್ಡದು ಅಂತ ಕೇಳೋಕೆ ಹೋಗಬೇಡ್ರಿ ; ಯಾಕೆಂದ್ರೆ ಬೆಳೆ ಮಕ್ಕಳು ನೋಡು ನೋಡುತ ಮಾರುದ್ದ ಬೆಳಿತಾರ ದೊಡ್ಡವಾದ್ರಾ ಒಂದನಾಲ್ಕು ವರ್ಷ ಹಾಕೊಬಹುದಂತ future plan ನಮ್ಮ ಹೆತ್ತವರದು .        ನಿನ್ನೆ ನಾನು, ಒಬ್ಳು ಫೇಸ್ಬುಕ್ ಫ್ರೆಂಡ್ ದೀಪ ಅಂತ; ಅವ್ಳಿಗೆ ಕಾಲ್ ಮಾಡಿದೆ. “ಹಾಯ್ ಮೇಡಂ ಹಬ್ಬ ಜೋರ”. ಆ ಕಡೆಯಿಂದ “ಹಾಯ್ ಸರ್ ಹೇಗಿದ್ದೀರಾ, ಯಾವ ಹಬ್ಬ! ಅಷ್ಟೇನಿಲ್ಲ ಬಿಡಿ ಮಾಮೂಲಿ ಇದ್ದಿದೇ”. ಮತ್ತೆ ನಾನು “ಯಾಕ್ ಮೇಡಂ ಮೈಸೂರಿಗೆ ಹೋಗ್ಲಿಲ್ವಾ ದಸರಾಕ್ಕೆ” ಆ ಕಡೆಯಿಂದ “ಹೇ ಏನು ದಸರಾ ನಾ, ಏನೋ ಬಿಡ್ರಿ, ಈ ಟೈಮಲ್ಲಿ ಮೈಸೂರು ನೋಡೋಕಾಗುತ್ತಾ, ಫುಲ್ ಜನ ಇರುತ್ತೆರಿ, ಇವಾಗ್ ಏನಾದ್ರೂ ಹೋದರೆ, ಮೈಕೈ ನೋವು ಮಾಡಿಕೊಂಡು ಸುಸ್ತಾಗಿ ಬರಬೇಕಾಗುತ್ತೆ, ಅಷ್ಟೇ ಕಥೆ”. ಈ ಮಾತುಗಳನ್ನು ಕೇಳಿ ನನಗೆ ಏನು ಹೇಳಬೇಕು ಅಂತ ತೋಚದೆ ನನ್ನ ಮುಖಕ್ಕೆ ನಾನೇ ಹೊಡಕಂಡಂಗಾಯಿತು. ಅದು ಕ್ಷಣ ಮಾತ್ರಕ್ಕೆ ನೋಡ್ರಿ ಯಾಕಂದ್ರಾ ನಾನು ಪಕ್ಕಾ village boy ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ಅನ್ಕೊಂಡಿನಿ. ಪಾಪ ಇದು ಅವರ ತಪ್ಪಲ್ಲ. ಬೃಹತ್ ಬೆಂಗಳೂರಿನ ತಪ್ಪು. ಮತ್ತೆ ನಾನು ಹೇಳಿದೆ “ನೋಡಿ ಮೇಡಂ, ಮೈಕೈ ನೋವು ಮಾಡಿಕೊಂಡು ನೋಡದರಲ್ಲಿ ಇರುವಂತ ಮಜ, ಮತ್ಯಾವುದರಲ್ಲಿಲ್ಲ ರೀ. ” ಅದಕ್ಕ ಆ ಕಡೆಯಿಂದ “ಹೇ ಬಿಡ್ರಿ ದಸರಾ ನೋಡಾಕ ಮೈಸೂರಿಗೆನಾ ಹೋಗಬೇಕಾ. ಇಲ್ಲೇ ಟಿ.ವಿಯಲ್ಲಿ ಅಲ್ಲಿಗಿಂತ ಚೆನ್ನಾಗಿ ಕಾಣ್ತಾದ, ಎನ್ನಬೇಕಾ! ಆಯಾಮ್ಮ” ಇದನ್ನ ಕೇಳಿ ನಂಗೆ ತಲೆ ತಿರುಗಿ ಬಿಳೋದೊಂದೆ ಬಾಕಿ ಇತ್ತು. ಯಪ್ಪ ಉಸ್ಸಾ ಅಂತ ಪೋನ್ ಇಟ್ಟು ನನ್ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ.           “ಏನೋ ಮಗ, ಊರಿಗೆ ಬರಲೇನೋ. ನಮ್ಮ  old ಡೌವ್ ಗಳೆಲ್ಲಾ ಬಂದಾರ; ಬಾರಲೇ ಎನ್ನಬೇಕಾ ಬಡ್ಡಿ ಮಗಾ”. Old ಡೌವ್ ಗಳು ಅಂದ ತಕ್ಷಣ ನಂಗೆ ಇವತ್ತಿಗೂ ನೆನಪಿಗೆ ಬರೋದಂದ್ರೆ; ಸರ್ಕಾರದವರು ಕೊಡತಿದ್ದ ಕಡು ನೀಲಿ, ತಿಳಿ ನೀಲಿ, ಲಂಗ ಮೇಲೊಂದಿಷ್ಟು ಅಂಗಿ ಅಂತ ಚೋಲಿ ಹಾಕೊಂಡು ನಮ್ಮ ಜೊತೆ ಎಮ್ಮಿಕರಗಳನ್ನ ಮೇಯಿಸೋಕೆ ಎರಡು ಜಡೆ ಇಳಿಬಿಟ್ಟು ಬರೋ ಹಳ್ಳಿ ಹುಡುಗಿರು. ಮತ್ತೆ “ಲೇ ಮೂಗ ಮಾತಾಡಲೇ ಆ ರೆಡ್ ಇಂಕ್ ನೆನಪಾದ್ಲ್ ಅನ್ನಬೇಕಾ”. ಯಪ್ಪ ಇದೇನೋ ಮಾತಡತಾನೋ ಇವನೌನ್; ಬಿಟ್ರೆ  ಪ್ರೈಮರಿ ಸ್ಕೂಲಲಿ ಓದಿರೋ ಹುಡುಗಿರನೆಲ್ಲಾ ನನ್ ಕೊಳ್ಳಿಗೆ ಕಟ್ಟಾಂಗ್ ಇದಾನ ಅನಿಸಿತು. ಆದ್ರೆ ಅವನೇನೋ ಕಟ್ಟಬಹುದು, ಕಟ್ಕೋಳಾಕೆ ಹುಡುಗಿರು ಬೇಕಲ್ಲ. ಎಲ್ರೂ ಕರಿಮಣಿ ಕಟ್ಕೋಂಡು; ಕೈಯಲ್ಲೊಂದು ಬ್ಯಾಗ್, ಕುಂಕಳದಲ್ಲೊಂದು ಮಗು. ಹೀಗೆ ನಮ್ಮ ಹಳ್ಳಿ ಹುಗಿಯರ ಬದುಕಿನ ಬಣ್ಣವೇ ಬದಲಾಗಿತ್ತು. ಅಷ್ಟ್ರಲ್ಲಿ ನೋ ಹೊರಗಡೆ ಶಬ್ದ!  ಹೋಗಿ ನೋಡಿದ್ರೆ ಬಡ್ಡಿ ಮಗಂದು ಬೆಕ್ಕು ಇಲಿ ತಿನ್ನಾಕ ಓಡಾಡುತ್ತಿತ್ತು. ಆ ನನ್ ಗೆಳೆಯಗ ಮತ್ತೆ phone ಮಾಡೋ ಗೋಜಿಗೆ ಹೋಗಲಿಲ್ಲ.        ನಾನು ದಸರಾ ಬಗ್ಗೆ ಹೇಳ್ತಾ ಇದ್ದೆ ಅಲ್ವಾ! ಹೌದು ನಮ್ಮ ಹಳ್ಳಿಗಳ ದಸರಾವನ್ನು ನೋಡೋದೇ ಒಂದು ಚಂದ. ಚಂದಚಂದದ ಲಂಗ ದಾವಣಿ ಹಾಕಿಕೊಂಡು ಹಳ್ಳಿ ಹುಡುಗೇರು, ಎದುರುಗಡೆ ಮನೆ ಹುಡುಗರು ನೋಡಲಿ ಅಂತ ಹಲ್ಲಕಿಸ್ಕಂಡು ನಿಂತಾಗ ಹಿಂದಿನಿಂದ ಅವರಜ್ಜ ಬಂದು “ಏ ಇಲ್ಲೇನು ಮಾಡ್ತೀಯಾ,  ಯಾಕ ಹಲ್ಲುಕಿಸಗೊಂಡ ನಿಂತೀಯಾ! ಅವನಿಗೆ ಹೇಳಿದೆ ಹೆಣ್ಮಕ್ಕಳಿಗೆ ಜಾಸ್ತಿ ಕಲಿಸೋದು ಬೇಡಂತ; ಎಲ್ಲಿ ಕೇಳ್ತಾನ, ನನ್ನ ಮಾತು, ಬಿದ್ದಾಡದೋನು”, ಅಂತ ಎಚ್ಚರಿಸೋ ಅರವತ್ತು ದಾಟಿದ ಮುದಕರು ಸಹ ನನ್ನ ಹಳೆ ಡವ್ ಬಂದಿರಬಹುದಾ ಅಂತ ಕುತೂಹಲ ಕೆರಳಿಸೋ ದಸರಾ ಕಣ್ರೀ ಇದು. ನನಗೆ ಇನ್ನೂ ಸರಿಯಾಗಿ ನೆನಪಿದೆ; ನಮ್ಮ ಮನೆಯಲ್ಲಿ ಆಗ ನವಣೆ ಅನ್ನ ಮಾಡ್ತದ್ವಿ. ಅದು ನಮ್ಮ ದೈನಂದಿನ ಆಹಾರ ಆಗಿತ್ತು. ನೆಲ್ಲಕ್ಕಿ ಅನ್ನ ಮಾಡೊದು, ಹಬ್ಬ ಹರಿದಿನಗಳಲ್ಲಿ ಮಾತ್ರ. ಅದು ಸೋಸೈಟಿಯಲ್ಲಿ ಕೊಡೋ ನೆಲ್ಲಕ್ಕಿ, ಅದರಲ್ಲಿ ಬಹುಪಾಲು ಶಾಲಿ ಹುಡುಗರಿಗೆ ಕೊಡೋ ಅಕ್ಕಿನೇ ಹಬ್ಬಕ್ಕೆ ಶೇಖರಣೆ ಮಾಡಿಡತಿದ್ರು ಮನಿಗೆ ಹಿರೆ ತಲೆ ಅನಿಸಿಕೊಂಡ  ಅಜ್ಜಿಗಳು. ನೆಲ್ಲಕ್ಕಿ ಅನ್ನ, ಗೋದಿ ಹುಗ್ಗಿ, ಆಕಳ ತುಪ್ಪ, ಜೊತೆಗೆ ಒಲೆಯಲ್ಲಿ ಹಾಕಿ ಸುಟ್ಟ ಹಪ್ಪಳ. ಮನೆಯ ಎಲ್ಲಾ ಗಂಡಸರು, ಮಕ್ಕಳಿಗೆ ಉಣ್ಣಾಕ ನೀಡಿ. ಅಡುಗೆ ಹೇಗಿದೇನೋ ಏನೋ! ಅಂತ ಸೆರಗನ್ನ ತಲೆ ತುಂಬಾ ಹೊದ್ಕೊಂಡು, ಆಕಾಶವೇ ನೆಲದ ಮೇಲೆ ಬಿದ್ದಿರೋ ತರ ನಮ್ಮ ಹಳ್ಳಿ ಸೊಸೆಯಂದಿಯರ ಮಾರಿಗಳನ್ ನೋಡೋದೆ ಒಂದು ಚೆಂದ.         ಇನ್ನೂ ದಸರಾದಲ್ಲಿ ಆಯುಧಪೂಜೆಯನ್ನುವುದು. ಇಂದಿಗೂ ಹಳ್ಳಿಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆಂದರೆ ತಪ್ಪಾಗಲಾರದು. ಮನೆಯಲ್ಲಿರುವ ಎಲ್ಲಾ ಆಯುಧಗಳು ಬೆಳಕಿಗೆ ಬರುತ್ತವೆ. ಅಜ್ಜ ಹಂದಿ ಓಡಿಸಲೆಂದು ತಂದಿದ್ದ ಭರ್ಚಿ, ಅಪ್ಪನ ಗಳೆಸಮಾನುಗಳು, ಕುಡುಗೋಲು, ಕುರ್ಚಿಗಿ, ಚಾಕು, ಚೂರಿ, ಒಳಕಲ್ಲು, ಬೀಸೋ ಕಲ್ಲು, ಗುಂಡಕಲ್ಲು, ಇವೆಲ್ಲವೂ ದಸರಾ ದಿನ ದೇವರಾಗಿ ಹೊಸ ರೂಪ ಪಡೆದು ಕೊಂಡಿರುತ್ತವೆ. ಇನ್ನೂ ನಮ್ಮಜ್ಜಿ ಪೂಜೆ ಹೇಳೋದೆ ಒಂದು ಚೆಂದ ಕಣ್ರೀ. ವರ್ಷಗಟ್ಟಲೆ ಮನೆಯ ಮೂಲೆಯೊಂದರಲ್ಲಿ ನೇತಾಡುತ್ತಾ ಜಾಡು ಮೆತ್ತಿ, ಕಪ್ಪು ಹಿಡಿದಿದ್ದ ಮಣ್ಣಿನ ಕುಡಿಕೆಯನ್ನು ತೊಳೆದು,  ಬಳಿದು , ಸಿಂಗರಿಸಿ ಅದಕ್ಕೆ, ಊರಿನ ಕರಿಯಮ್ಮ ದೇವಿ ಅಂತ ಬಿರುದು ನೀಡಿ. ಸಿಹಿ ಪದಾರ್ಥದ ಹೆಡೆ ಇಟ್ಟು. ನಂತರ ಅದನ್ನು ಹುಡಿಯಲ್ಲಿ ತುಂಬಿಕೊಂಡು; ಕರಿಯಮ್ಮ ನಿನ್ನಾಲಿಕೆಗೆ ಉಧೋ ಉಧೋ ಎಂದು ದೇವರ ಕೇಲ್ನ್ ನಮ್ಮೂರ ಹಳೆ ಬಾವಿಗೆ ಕಳಿಸಿ ಬರಲಿಕ್ಕೆ ಹೊರಡುವುದು. ಇಂತಹ ಎಷ್ಟೊಂದು ವಿಸ್ಮಯ ಆಚರಣೆಗಳು ಹಳ್ಳಿಯಲ್ಲಿ ಈಗಲೂ ಲಭ್ಯ.        ನಮ್ಮೂರ ದಸರಾ ಅಂದರೆ, ಬನ್ನಿ ಮುಡಿಯುವುದು ಹೇಳದೇ ಇದ್ರೇ ಹಬ್ಬ ಪೂರ್ತಿಯಾಗಲ್ಲ. ಏಕೆಂದರೆ ಬನ್ನಿಗೂ ಇವತ್ತಿಗೂ ಪವಿತ್ರವಾದ ಸ್ಥಾನವಿದೆ. ಅಂತ ಬನ್ನಿಯನ್ನು ಹಿರಿಯರು ಕಿರಿಯರು ವಿನಿಮಯ ಮಾಡಿಕೊಂಡು. ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿದಾಗ, ಹಿರಿಯರು ಅದಕ್ಕೆ ಪ್ರತಿ ಬನ್ನಿ ನೀಡಿ. “ಬನ್ನಿ ತಗೊಂಡು ಬಂಗಾರದಂಗ ಇರು” ಎನ್ನುವ ಆರ್ಶೀವಾದ. ಇನ್ನೂ ಎಷ್ಟೆಷ್ಟೋ ಸಂಗತಿಗಳು, ಆಚರಣೆಗಳು ಈ ಹಬ್ಬ ನಮ್ಮ ಹಳ್ಳಿಯ ವಾತಾವರಣವನ್ನು ಇನ್ನು ಹಿಡಿದಿಟ್ಟುಕೊಂಡಿದೆ. ಹೀಗೆ ನನ್ನ ಆ ದಿನಗಳ ದಸರಾ ಆಚರಣೆಗಳನ್ನು ನೆನಪಿಸಿಕೊಂಡರೆ ಇಂದಿಗೂ ಮೈಯ್ಯಲ್ಲಿ ರೋಮಾಂಚನವಾಗುತ್ತದೆ. ಈ ನನ್ನ ಬರವಣಿಗೆ ನಿಮಗೆ ಮೆಚ್ಚುಗೆಯಾದರೆ ನನ್ನ ಈ ಲೇಖನಕ್ಕೆ ಹೊಸ ಕಳೆ ಎಂದು ಭಾವಿಸುವೆ. ******************** ಮೂಗಪ್ಪ ಗಾಳೇರ

ಗಾಳೇರ ಬಾತ್ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಶಾಂತಾದೇವಿ ಕಣವಿ ಚೆನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿಯವರ ಸಾಹಿತ್ಯಕ ಕೊಡುಗೆಯೂ..! ಅಲ್ಲದೇ ಇವರಂತೆ ಸಾಹಿತ್ಯಕ್ಕೆ ಕೊಡುಗೆ ನೀಡಿದ ಸಾಹಿತ್ಯಕ ದಂಪತಿಗಳೂ..!! ಶಾಂತಾದೇವಿ ಕಣವಿ ಅವರು ಈಗ ತೀರಿದ್ದಾರೆ. ಅವರಿಗೆ ಗೌರವ ನಮನ ಸಲ್ಲಿಸುತ್ತಾ ಅವರಂತೆಯೇ ಇತರ ಸಾಹಿತ್ಯಕ ದಂಪತಿಗಳ ಬಗೆಗೂ ನೋಡೋಣ. ಅವರು ಹೀಗಿದ್ದಾರೆ ನೋಡಿ. ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನೆವರಿ 17 ರಂದು ವಿಜಾಪುರದಲ್ಲಿ. ತಂದೆಯವರು ಸಿದ್ದಬಸಪ್ಪ ಗಿಡ್ನವರ, ತಾಯಿಯವರು ಭಾಗೀರಥಿ ದೇವಿ. ಇಂತಹ ಶಾಂತಾದೇವಿ ಕಣವಿಯವರ ಪ್ರಕಟಿತ ಕೃತಿಗಳು– ಸಂಜೆ ಮಲ್ಲಿಗೆ (ಕವನ ಸಂಕಲನ), ಬಯಲು ಆಲಯ, ನಿಜಗುಣ ಶಿವಯೋಗಿ (ಜೀವನ ಚರಿತ್ರೆ), ಮರು ವಿಚಾರ (ಹರಟೆ), ಜಾತ್ರೆ ಮುಗಿದಿತ್ತು (ಸಣ್ಣಕತೆ), ಅಜಗಜಾಂತರ (ಲಲಿತ ಪ್ರಬಂಧ), ಕಳಚಿ ಬಿದ್ದ ಪಂಜರ, ಪ್ರಶಾಂತ (ಸಂಪಾದನೆ) ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು, ಇನ್ನೊಂದು ಸಂಪುಟ. ಹೀಗೆಯೇ ಶಾಂತಾದೇವಿ ಕಣವಿ ಅವರ ಸಾಹಿತ್ಯ ಸಾರವಾಗಿದೆ. ಶಾಂತಾದೇವಿ ಕಣವಿ ಅವರಿಗೆ ಬಯಲು ಆಲಯ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1987) ಹಾಗೂ 2009ರ ರಾಜ್ಯ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿಗಳೂ ಸಂದಿದೆ. ಇದು ಶಾಂತಾದೇವಿ ಕಣವಿಯವರು ತಮ್ಮ ಪತಿಯ ಜೊತೆ ಜೋತೆಗೆ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಹೀಗೆಯೇ ಶಾಂತಾದೇವಿ ಕಣವಿಯವರಂತೆ ಸಾಹಿತ್ಯಕ ಬರಹಗಾರಿಕೆಯಲ್ಲಿ ತೊಡಗಿಕೊಂಡವರು ಸಾಕಷ್ಟು ಜನ ಸಾಹಿತ್ಯಕ ದಂಪತಿಗಳು ಇದ್ದಾರೆ. ಅವರ ಬಗೆಗೂ ತುಸು ಗಮನ ಹರಿಸೋಣ. ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಕಮಲಾ ಹಂಪನಾ, ಮಾಲತಿ ನಾಡಿಗ್‌, ಗಾಯತ್ರಿ ನಾವಡ,‌ ಉಷಾ ನವರತ್ನಾರಾಂ ಮುಂತಾದ ಹಲವಾರು ದಂಪತಿಗಳು ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಈ ಮಹಿಳೆಯರಿಗೆ ಶೈಕ್ಷಣಿಕ ಶಿಸ್ತಿನ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶಗಳು ಸುಲಭವಾಗಿ ದೊರೆತಿದ್ದು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಹಿಂದಿನ ತಲೆಮಾರಿನ ದಂಪತಿ ಲೇಖಕರುಗಳಾದ ಶಾರದಾ ಗೋಕಾಕ್‌, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ ಇವರುಗಳಿಗೆ ಅಂದಿನ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಿಂದ ವಂಚಿತರಾದುದಷ್ಟೇ ಅಲ್ಲದೆ ಪ್ರೌಢಾವಸ್ಥೆ. ತಲುಪುವ ಮೊದಲೇ ವಿವಾಹ ಬಂಧನಕ್ಕೊಳಗಾಗಿ ವಿದ್ಯೆ ಕಲಿಯುವ ಅವಕಾಶಗಳು ಕಮರಿ ಹೋಗಿದ್ದರೂ, ಪತಿಗೃಹ ಸೇರಿದ ನಂತರ ಪತಿಯಿಂದ ಅಥವಾ ಮನೆಯವರಿಂದ ದೊರೆತ ಸಹಕಾರ, ಸಹಾನುಭೂತಿಯಿಂದ ವಿದ್ಯೆ ಕಲಿತು ಸಾಹಿತ್ಯ ಕೃಷಿ ರಚಿಸಿದ್ದಷ್ಟೇ ಅಲ್ಲದೇ ಪತಿಯ ಯಶಸ್ಸಿನ ರೂವಾರಿಯಾಗಿಯೂ ದುಡಿದಿದ್ದಾರೆ. ಶಾರದಾ ಗೋಕಾಕರು ಓದಿದ್ದು ಆರನೆಯ ತರಗತಿಯವರೆಗಾದರೆ ಶಾಂತಾದೇವಿ ಮಾಳವಾಡರು ಪತಿಗೃಹ ಸೇರಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಕವಿ, ಕಾವಾ, ಜಾಣ ಮುಂತಾದ ಪರೀಕ್ಷೆಗಳನ್ನೂ ಪಾಸು ಮಾಡಿದ್ದಲ್ಲದೇ ಉಪಾಧ್ಯಾಯರ ಸಹಾಯದಿಂದ ಹಿಂದಿ, ಇಂಗ್ಲಿಷ್‌ ಭಾಷೆಯನ್ನು ಮನೆಯಲ್ಲಿಯೇ ಪಾಠ ಹೇಳಿಸಿಕೊಂಡು ಕಲಿತವರು. ಇವರಿಬ್ಬರಿಗಿಂತ ಸ್ವಲ್ಪ ಸುಧಾರಿಸಿದವರೆಂದರೆ ಶಾಂತಾದೇವಿ ಕಣವಿಯವರು. ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಪತಿ ಗೃಹ ಸೇರಿದ್ದರಿಂದ ಓದು ಮುಂದುವರೆಸಲಾಗಲಿಲ್ಲ. ಕಣವಿಯವರು ಕವಿಯಾಗಿ ಪ್ರಸಿದ್ಧರಾಗಿದ್ದರೆ ಶಾಂತಾದೇವಿ ಕಣವಿಯವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯವನ್ನೂ ಅಭ್ಯಸಿಸಿ ಕತೆಗಾರ್ತಿಯಾಗಿ ರೂಪಗೊಂಡು ಎಂಟು ಕಥಾಸಂಕಲನಗಳಲ್ಲದೆ ಪ್ರಬಂಧ, ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಶಾಂತಾದೇವಿ ಮಾಳವಾಡರು ರಚಿಸಿದ ಕೃತಿಗಳು ವೈವಿಧ್ಯತೆಯಿಂದ ಕೂಡಿದೆ. ಕಾದಂಬರಿ, ಜೀವನ ಚರಿತ್ರೆಗಳು, ವಚನ ಸಾಹಿತ್ಯ ಕೃತಿಗಳಲ್ಲದೆ ಹಲವಾರು ಸೃಜನ ಶೀಲ ಕೃತಿಗಳನ್ನು ರಚಿಸಿದ್ದು ಒಟ್ಟು ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸ.ಸ. ಮಾಳವಾಡರ ಆಕಸ್ಮಿಕ ನಿಧನದಿಂದ ಧೃತಿಗೆಟ್ಟರೂ, ಮನಸ್ಸನ್ನೂ ಸ್ಥಿಮಿತಕ್ಕೆ ತಂದುಕೊಂಡು ಮಾಳವಾಡರು ಪ್ರಾರಂಭಿಸಿದ್ದ ಆತ್ಮ ಚರಿತ್ರೆ ‘ದಾರಿ ಸಾಗಿದೆ’ ಕೃತಿಯನ್ನೂ’ ಶಾಂತಾದೇವಿ ಮಾಳವಾಡರೇ ಬರೆದು ಪೂರ್ಣಗೊಳಿಸಿದರು. ಅನುರೂಪ ದಾಂಪತ್ಯದ ಶಾರದಾ ಗೋಕಾಕರು ಹುಟ್ಟಿದ್ದು ಧಾರವಾಡದಲ್ಲಿ. ೧೯೧೬ ರ ಜುಲೈ ೩೧ ರಂದು. ತಂದೆ ಬಳವಂತರಾವ್‌ ಬೆಟ್ಟದೂರು, ತಾಯಿ ಕಮಲಾಬಾಯಿ. ಓದಿದ್ದು ಮಾಧ್ಯಮಿಕ ಶಾಲೆಯವರೆಗಾದರೂ ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡವರು. ಗೋಕಾಕರ ಯಶಸ್ಸಿಗೆ ಶಾರದಾ ಗೋಕಾಕರ ಪಾತ್ರವೂ ಬಹುದೊಡ್ಡದೆ. ಗೋಕಾಕರ ಷಷ್ಟ್ಯಬ್ದಿ ಸಂದರ್ಭದಲ್ಲಿ ಶಾರದಾ ಗೋಕಾಕರು ಬರೆದ ಕವನ ಸಂಕಲನ ‘ಸುಮಂಗಲಾಕ್ಷತೆ’ಯು ಪ್ರಕಟಗೊಂಡಿದ್ದು (೧೯೬೯) ಅದರಲ್ಲಿ ೩೭ ಕವನಗಳಿವೆ. “ಶ್ರೀ ವಿನಾಯಕರ ಷಷ್ಟ್ಯಬ್ದಿಪೂರ್ತಿಯ ಸುಮಂಗಲ ಸಮಾರಂಭದಲ್ಲಿ ನನ್ನ ಕೆಲವು ಸುಮಂಗಲಾಕ್ಷತೆಯನ್ನು ಅರ್ಪಿಸಲು ಸಾಧ್ಯವಾದುದಕ್ಕೆ ಭಗವಂತನಿಗೆ ಕೃತಜ್ಞತೆಯ ಪ್ರಣಾಮಗಳನರ್ಪಿಸುತ್ತಿದ್ದೇನೆ. ನನ್ನ ಒಳ ಜೀವನದಲ್ಲಿ ಹೊಳೆದ ಚಿತ್ರಗಳ ಶಬ್ದ ರೂಪಗಳನ್ನೂ ಕವನಗಳನ್ನಾಗಿಸಿ ಜನತೆಯ ಮುಂದಿಟ್ಟಿದ್ದೇನೆ” ಎಂದು ವಿನಮ್ರರಾಗಿ ನುಡಿದಿದ್ದರು. ಗೋಕಾಕರು ತಮ್ಮ ಕವನ ಸಂಗ್ರಹ ಸಿಮ್ಲಾ ಸಿಂಫನಿಗೆ (೧೯೭೩) ತಮ್ಮ ಮಡದಿ ಶಾರದಾರವರನ್ನೂ ಸಹಲೇಖಕಿಯಾಗಿಸಿಕೊಂಡಿದ್ದರು. ಆ ಸಂಗ್ರಹದ ಒಂದು ಭಾಗದಲ್ಲಿ ಶಾರದಾ ಗೋಕಾಕರ ರಚನೆಗಳಿವೆ. ಬಾ ಎಂದು ಕರೆದಾವ ಸೋಬಾನ ಹಾಡ್ಯಾವ ಸಿಮ್ಲಾದ ಹಕ್ಕಿ…ಎಂದು ಸಿಮ್ಲಾ ನಿಸರ್ಗದ ಸೊಬಗಿಗೆ ಮಾರು ಹೋಗಿ ರಚಿಸಿದ ಕವನ ಇದಾಗಿದೆ. ಶಾರದಾ ಗೋಕಾಕರ ಮತ್ತೊಂದು ಬಹು ಮುಖ್ಯ ಕೃತಿ ಎಂದರೆ ‘ಒಲವೇ ನಮ್ಮ ಬದುಕು’ (೧೯೭೭). ಮರಾಠಿಯಲ್ಲಿ ಪ್ರಕಟವಾಗಿದ್ದ ಮರಾಠಿ ಸಾಹಿತಿ ವಾಮನ ತಿಲಕರ ಪತ್ನಿ ಲಕ್ಷ್ಮೀಬಾಯಿ ತಿಲಕರು ಬರೆದ ‘ಸ್ಮೃತಿ ಚಿತ್ರಗಳ’ ಕೃತಿಯಲ್ಲಿ ವಾಮನ ತಿಲಕರ ವ್ಯಕ್ತಿತ್ವದ ಚಿತ್ರಣವಿರುವುದನ್ನೂ ಓದಿದ ಶಾರದಾ ಗೋಕಾಕರು ಇದರಿಂದ ಪ್ರೇರಿತರಾಗಿ ಬರೆದ ಆತ್ಮಕಥೆ ‘ಒಲವೇ ನಮ್ಮ ಬದುಕು’. ಮದುವೆಯಾದಂದಿನಿಂದ ಬೆಂಗಳೂರಿಗೆ ಬಂದು ನೆಲೆಸುವಾಗಿನ ದಾಂಪತ್ಯ ಕತೆಯ ನಿರೂಪಣೆಯದಾಗಿದೆ. ಮೂರು ಕೃತಿಗಳಲ್ಲೂ ಶಾರದಾ ಗೋಕಾಕರು ಗೋಕಾಕರ ವ್ಯಕ್ತಿತ್ವವನ್ನು ಹಿಡಿದಿಟ್ಟು, ಗೋಕಾಕರ ಬದುಕನ್ನೂ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಕೃತಿ ರಚಿಸಿದ್ದರು. ಗೋಕಾಕರು ಶಾರದಾರವರಿಗೆ ಬರೆದ ಪತ್ರಗಳನ್ನೂ ‘ಜೀವನ’ ಪತ್ರಿಕೆಯಲ್ಲಿ ‘ವನಮಾಲಿಯ ಒಲವಿನೋಲೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ನಂತರ ‘ಜೀವನ ಪಾಠಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ಶಾರದಾರವರ ವ್ಯಕ್ತಿತ್ವವನ್ನು ಪರಿಚಯಿಸಿದ್ದರು. ಹೀಗೆ ಗೋಕಾಕರು ಮತ್ತು ಶಾರದಾ ಗೋಕಾಕರ ಬದುಕನ್ನರಿಯಲು ಈ ಗ್ರಂಥಗಳು ಸಹಾಯಕವಾಗಿವೆ. ಹೀಗೆ ಸಾಹಿತ್ಯಕ ದಂಪತಿಗಳ ಸಾಹಿತ್ಯ ಕೊಡುಗೆ‌ ಅಪಾರ. ******* ಕೆ.ಶಿವು. ಲಕ್ಕಣ್ಣವರ

ಸ್ವಾತ್ಮಗತ Read Post »

You cannot copy content of this page

Scroll to Top