ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊಂಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿಂದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ.’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನಂತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ. ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ. ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಪ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . .? ಯಾರಿಗೂ ಹೇಳಿಕೊಳ್ಳಲಾಗದ ಅವಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.’ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿಂದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳ ಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ. ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ ಸಿಟ್ಟು ಅವಮಾನಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು. ‘ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬಂಧಗಳೊಂದಿಗೆ ಸರಿ ಹೊಂದುವುದಿಲ್ಲ.ಇಂಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ದಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿಂದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊಂಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅವಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅವಮಾನದ ಭೀತಿ ಇರುವವರೆಗೂ ಅವಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅವಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅವಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊಂದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ******** ಜಯಶ್ರೀ ಜೆ.ಅಬ್ಬಿಗೇರಿ
ರೇಖಾಚಿತ್ರ ಕಲೆಯ ತಾಯಿ “ಚಿತ್ರಕಲಾ ಅಧ್ಯಾಪಕರ ಆಯ್ಕೆಯಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾಗಬೇಕು” …………………………………. ಹಜರತ್ ಅಲಿ ನಾಡಿನ ಖ್ಯಾತ ಕಲಾವಿದ. ಹರಪನಹಳ್ಳಿ ಬಳಿಯ ಉಚ್ಚಂಗಿ ದುರ್ಗ ಅವರ ಹುಟ್ಟೂರು. ಅವರು ನೆಲೆಸಿರುವುದು ದಾವಣೆಗರೆಯಲ್ಲಿ. ಕಾರ್ಯ ನಿರ್ವಹಿಸುತ್ತಿರುವುದು ತುಮಕೂರು ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದಲ್ಲಿ ಉಪನ್ಯಾಸಕರಾಗಿ. ಉತ್ಸವಾಂಬ ಪ್ರೌಢಶಾಲೆಯಲ್ಲಿ ಕಲಿತ ಅವರು , ದಾವಣಗೆರೆಯ ಚಿತ್ರಕಲಾ ಶಾಲೆಯಲ್ಲಿ ಫೈನ್ ಆರ್ಟ ಮತ್ತು ಮಾಸ್ಟರ್ ಆಫ್ ಆರ್ಟ ಪದವಿಗಳಿಸಿದರು. ಹಂಪಿ ಅವರ ನೆಚ್ಚಿನ ತಾಣ. ನಿಸರ್ಗ ಮತ್ತು ಹಳ್ಳಿ ಬದುಕು ಅವರ ಚಿತ್ರಕಲೆಯ ಮೂಲ ನೆಲೆ. ರೇಖಾ ಚಿತ್ರಗಳನ್ನು ಅವರು ಅದ್ಭುತವಾಗಿ ಚಿತ್ರಿಸುತ್ತಾರೆ. ನಾಡಿನ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರರ ರೇಖಾ ಚಿತ್ರಗಳನ್ನು ಮೀರಿಸುವಂತೆ ಬೆಳೆದ ಕಲಾವಿದ ಇವರು. ರೇಖೆಗಳ ಮಾಂತ್ರಿಕ ಹಜರತ್ ಅಲಿ ಅವರ ಚಿತ್ರಗಳಿಗೆ ಸೋಲದ ಚಿತ್ರರಸಿಕರೇ ಇಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಗದಗನಲ್ಲಿ ಕಲಾವಿದ ಗೆಳೆಯ ಹಜರತ್ ಮಾತಿಗೆ ಸಿಕ್ಕಿದ್ದರು. ತುಂಬಾ ಸಂಕೋಚದ, ನಾಚಿಕೆ ಸ್ವಭಾವದ ಹಜರತ್ ಅವರನ್ನು ಮಾತಿಗೆ ಎಳೆದು, ಅವರೊಳಗಿನ ಮೌನವನ್ನು ಮಾತಾಡಿಸಿ, ಸಂದರ್ಶನ ರೂಪದಲ್ಲಿ ಇಲ್ಲಿ ನೀಡಲಾಗಿದೆ. ಹಂಪಿಯ ಅವಶೇಷ ಹಾಗೂ ಅಳಿದುಳಿದ ವೈಭವವನ್ನು ವಿದ್ಯಾರ್ಥಿಯಾಗಿದ್ದಾಗ, ಕಲಾವಿದ ಅಧ್ಯಾಪಕನಾಗಿದ್ದಾಗ ಹಲವು ಸಲ ಚಿತ್ರಿಸಿದ ಪ್ರೀತಿ ಅವರದ್ದು. ನಾಡಿನ ಶಿಲ್ಪ ಕಲೆಯ ಬಗ್ಗೆ, ರೇಖಾ ಚಿತ್ರ, ಬಣ್ಣದ ಚಿತ್ರಗಳು, ಅವುಗಳ ಬೆರಗು, ವಾಟರ್ ಕಲರ್ ಪೇಯಿಂಟಿಂಗ್ಸ, ಮಣ್ಣಿನ ಕಲಾಕೃತಿಗಳ ಬಗ್ಗೆ, ಲೋಹದ ಕಲಾಕೃತಿಗಳ ಬಗ್ಗೆ ಅವರು ಗಂಟೆಗಟ್ಟಲೆ ಮಾತಾಡಬಲ್ಲರು. ಹಾಗೂ ವಿವಿಧ ಪ್ರಕಾರಗಳಲ್ಲಿ ಚಿತ್ರಗಳನ್ನು ರೂಪಿಸಬಲ್ಲರು. ನಾಡಿನ ಶ್ರೇಷ್ಠ ಕಲಾವಿದರ ಪರಂಪರೆಯಲ್ಲಿ ಹಜರತ್ ಅಲಿ ಅವರನ್ನು ಸಹ ಕಾಣಬೇಕು. ಅಂಥ ಪ್ರತಿಭೆ ಅವರಲ್ಲಿದೆ. …………………………………. “ಸಂದರ್ಶನದಲ್ಲಿ ನಾಡಿನ ಖ್ಯಾತ ಚಿತ್ರ ಕಲಾವಿದ ಹಜರತ್ ಅಲಿ ಅವರು ಚಿತ್ರ ಕಲೆಯ ಕುರಿತು ಮಾತಾಡಿದ್ದು ಇಲ್ಲಿದೆ. ……………………………. ನಾಗರಾಜ ಹರಪನಹಳ್ಳಿ : ಚಿತ್ರ ನಿಮ್ಮ ಉಸಿರು ಎಂದು ಗೊತ್ತು. ಆದರೂ ಈ ಪ್ರಶ್ನೆ ಕೆಣಕಲು ಕೇಳುತ್ತಿರುವೆ. ಚಿತ್ರ, ಬಣ್ಣಗಳ ಜೊತೆ ಯಾಕೆ ಆಟವಾಡುತ್ತೀರಿ ಅಥವಾ ಚಿತ್ರ ಬರೆಯುತ್ತೀರಿ ? ಹಜರತ್ ಅಲಿ : ಕಲೆ ಮಾನವನ ಆಲೋಚನೆಗಳು ತೀವ್ರಗೊಂಡಾಗ ಸ್ಪೋಟಗೊಳ್ಳುವ ಮೂರ್ತರೂಪದ ಅಥವಾ ದೃಶ್ಯ ರೂಪದ ಭಾವನೆಗಳೇ ಆಗಿರುತ್ತವೆ. ಅದು ಬಣ್ಣ, ರೇಖೆ, ಶಿಲ್ಪ, ಶ್ರಾವ್ಯ,ಅಭಿನಯ, ನೃತ್ಯ ಸಾಹಿತ್ಯ …..ಹೀಗೆ ಹತ್ತುಹಲವು ಬಗೆಗಳಲ್ಲಿ ಅಭಿವ್ಯಕ್ತಿಯಾಗಿರುತ್ತದೆ. ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? ಉತ್ತರ ; ಯಾವುದೇ ಬಗೆಯ ಕಲೆಯ ಹುಟ್ಟಿಗೆ ಮೂಲ ಪ್ರೇರಕ ಶಕ್ತಿ ಪ್ರಕೃತಿಯೇ ಆಗಿರುತ್ತದೆ. ಅದು ಕಾಲ ಮತ್ತು ದೇಶಾತೀತವಾದುದು, ಹಾಗಾಗಿ ಇಂಥದ್ದೇ ಸಮಯದಲ್ಲಿ ಕಲೆ ಹುಟ್ಟುತ್ತದೆ ಎಂದೇನಿಲ್ಲ, ಕಲಾವಿದನಲ್ಲಿ ಭಾವತೀವ್ರಗೊಳಿಸುವ ಯಾವುದೇ ವಿಷಯಯವೂ ಚಿತ್ರರೂಪ ಪಡೆಯಬಲ್ಲದು. ನನ್ನನ್ನು ಹೆಚ್ಚಾಗಿ ಕಾಡುವ ವಸ್ತು ವಿಷಯ ಗ್ರಾಮೀಣ ಪ್ರದೇಶದ ಬದುಕು ಮತ್ತು ನೆಲೆ. ನಗರದ ಯಾಂತ್ರಿಕ ಬದುಕಿನ ನಿರ್ಭಾವುಕತೆಗಿಂತಲೂ , ಭಾವುಕ ಜಗತ್ತಿನ ಸ್ವಭಾವ ನನಗೆ ಇಷ್ಟದ ವಿಷಯ. ಪ್ರಶ್ನೆ : ನಿಮ್ಮ ರೇಖಾ ಚಿತ್ರಗಳು ತುಂಬಾ ಕಾಡುತ್ತವೆ. ಹೇಗೆ ಅದರ ಸೆಳೆತ ನಿಮಗೆ ? ಉತ್ತರ : ಚಿತ್ರಕಲೆಯಲ್ಲಿ ರೇಖಾಚಿತ್ರ ಕಲೆಯ ತಾಯಿ ಎಂದು ಕರೆಯಲಾಗುತ್ತದೆ. ಹಾಗಾಗಿ ರೇಖಾಚಿತ್ರದ ಅಭ್ಯಾಸ ಪ್ರತಿಯೊಬ್ಬ ಕಲಾವಿದ್ಯಾರ್ಥಿಗೆ ಹಾಗೂ ಕಲಾವಿದನಿಗೆ ಅತ್ಯಗತ್ಯ. ಪ್ರಶ್ನೆ : ರೇಖೆಗಳು ಚಿತ್ರ ಕಲೆಯ ಶಾಸ್ತ್ರೀಯ ನೆಲೆ ಅಂತ ನೀವು ಹೇಳಿದ ನೆನಪು ನನಗೆ. ಬದಾಮಿ-ಬೇಲೂರು ಶಿಲ್ಪಕಲಾ ವೈಭವದ ವಿಶೇಷತೆ ಏನು ? ಉತ್ತರ : ನಮ್ಮ ಐತಿಹಾಸಿಕ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ, ಬೇಲೂರು ಹಳೇಬೀಡು ಮೊದಲಾದ ಸ್ಥಳಗಳು ಆಯಾಕಾಲದ ಜನಜೀವನದ ಸಾರವನ್ನು ಹೊಂದಿರುವ ಆಕರ ಕೇಂದ್ರಗಳಾಗಿವೆ. ಇವು ಆ ಕಾಲದ ಕಲಾ ಪರಂಪರೆಯನ್ನು ಒಳಗೊಂಡಿದ್ದು ಇಲ್ಲಿ ರಚಿಸಲಾಗಿರುವ ಶಿಲ್ಪಕಲಾಕೃತಿಗಳು ಧಾರ್ಮಿಕ ವಿಷಯಗಳನ್ನಷ್ಟೇ ಅಲ್ಲದೆ, ಆ ಕಾಲದ ಜನರ ಉಡುಗೆ ತೊಡುಗೆಗೆಳು, ವೇಷ ಭೂಷಣಗಳು,ಕ್ರೀಡೆ, ಯುದ್ಧದ, ವೈಭೋಗ ಮುಂತಾದ, ತಮ್ಮ ಕಾಲದ ವರ್ತಮಾನವನ್ನ ನಮ್ಮ ಕಾಲಕ್ಕೂ ತೆರೆದಿಟ್ಟಿರುವ ಜ್ಞಾನ ಭಂಡಾರಗಳಾಗಿವೆ. ಇಲ್ಲನ ವಾಸ್ತುಶಿಲ್ಪ ಶಿಲ್ಪಕಲೆಗೆ ಮನಸೋಲದವರಾರು ? ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಹಂಪಿ ನನ್ನ ನೆಚ್ಚಿನ ಪ್ರಕೃತಿ ತಾಣ, ವಿದ್ಯಾರ್ಥಿಯಾಗಿ, ಅಧ್ಯಾಪಕನಾಗಿ ಇಲ್ಲಿ ನೂರಾರು ನಿಸರ್ಗ ಚಿತ್ರಗಳನ್ನು ರಚಿಸಿದ್ದೇನೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ತುಂಬಾ ಕಲುಷಿತ ಗೊಂಡಿದೆ . ಜಾತಿ ಜಾತಿಗಳ ಮಧ್ಯೆ ಗೋಡೆಗಳು ನಿರ್ಮಿಸುವುದೇ ಸದ್ಯದ ರಾಜಕೀಯ ಬಂಡವಾಳ.. ಪ್ರಶ್ನೆ : ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ ತೋರಿಕೆಯಾಗಬಾರದು. ಹೊಸ್ತಿಲೊಳಗಿರಬೇಕಾದ ಧರ್ಮ ಬೀದಿಗೆ ಬಂದು ಅಬ್ಬರಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಮಾನವತೆಯ ಬಿತ್ತದ ಧರ್ಮ ನನ್ನದೃಷ್ಟಿಯಲ್ಲಿ ಅಪ್ರಯೋಜಕ. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕ ವಲಯವ ಉಳ್ಳವರ ಪ್ರಾಯೋಜಿತ ಕಾರ್ಯಕ್ರಮವಾಗುತ್ತಿದೆ. ಅಕಾಡೆಮಿಯಗಳಲ್ಲಿ ಬಹುತೇಕ ಜಾತಿ ಮತಗಳ ಪರವಾದ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರಿಗೆ ಗುರುತಿಸಲ್ಪಡುವುದು ಅತಿವಿರಳ. ಪ್ರಶ್ನೆ : ಚಿತ್ರ, ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ: ಚಿತ್ರಕಲಾ ಕ್ಷೇತ್ರವೂ ಈ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿಲ್ಲ. ಇಂದು ಕರ್ನಾಟಕದ ಚಿತ್ರಕಲಾ ಶಿಕ್ಷಣ ಬಹುತೇಕ ಸೊರಗಿದೆ. ಇಂದು ಕಾಲೇಜುಗಳಲ್ಲಿ ಬೋಧನೆ ಮಾಡುವ ಅಧ್ಯಾಪಕರು ಬಹುತೇಕ ಯೂಜಿಸಿ ಮಾನ್ಯತೆಯ ಪದವಿಧರರಿದ್ದಾರೆಯೇ ಹೊರತು, ಪ್ರತಿಭಾವಂತ ರಿರುವುದು ಕಡಿಮೆಯೆ.. ವಿ.ವಿ.ಗಳ ಅಧಿಕಾರಿಗಳಿಗೆ ಚಿತ್ರಕಲಾ(ದೃಶ್ಯ ಕಲಾ) ಶಿಕ್ಷಣದ ಅರಿವಿನ ಕೊರತೆ ಇದೆ. ಪಠ್ಯಕ್ರಮದಲ್ಲಿ ಏನನ್ನು ಕಲಿಸಲಾಗುತ್ತದೆ ಎಂಬುವುದು ಅವರಿಗೆ ತಿಳಿದಿರುವುದಿಲ್ಲ. ಅಧ್ಯಾಪಕರ ಆಯ್ಕೆ ಯಲ್ಲಿ ಸರ್ಟಿಫಿಕೇಟ್ ಅಷ್ಟೇ ಮುಖ್ಯ, ಅಧ್ಯಾಪಕ ನ ಪ್ರತಿಭೆ ನಗಣ್ಯ. ಚಿತ್ರಕಲಾ ಶಿಕ್ಷಣ ಪ್ರಾಯೋಗಿಕ ಆಧಾರಿತ ಶಿಕ್ಷಣ ವಾಗಿರುವುದರಿಂದ ಅಧ್ಯಾಪಕರ ಆಯ್ಕೆಯಲ್ಲಿ ಅಥವಾ ಸಂದರ್ಶನದಲ್ಲಿ ಪಠ್ಯಕ್ಕೆ ಅನುಗುಣವಾದ ಪ್ರಯೋಗಿಕ ಪರೀಕ್ಷೆ ಮಾನದಂಡವಾದರೆ ಶಿಕ್ಷಣದ ಗುಣಮಟ್ಟ ಸುಧಾರಿಸಬಹುದು.. ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಸದ್ಯ ದೇಶಕ್ಕೆ ಮನುಷ್ಯ ಮನುಷ್ಯರನ್ನು ಬೆಸೆಯುವ ಧರ್ಮ ಧರ್ಮ ಗಳನ್ನ ಬೆಸೆಯುವ ಸೌಹಾರ್ದ ಸಂತನ ಅಗತ್ಯವಿದೆ. ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯಲ್ಲಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಯುವಜನತೆಯಲ್ಲಿ ಪ್ರಜ್ಞೆ ಮೂಡಿಸಬೇಕು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿರುವ ಸಂವಿಧಾನದ ಘನತೆ ನಮ್ಮಲ್ಲಿ ಎಚ್ಚರಗೊಳ್ಳಬೆರಕು.. ಪ್ರಶ್ನೆ : ಆರ್ಟ ,ಪೇಯಿಂಟಿಂಗ್ಸ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಮನುಷ್ಯನ ಬದುಕು ಅರಾಜಕವಾದಲ್ಲಿ ಕಲೆ ಮತ್ತು ಸಂಸ್ಕ್ರತಿಗಳು ಅವಸಾನದ ಹಾದಿ ಹಿಡಿಯುತ್ತವೆ. ದೇಶ ಸುಭಿಕ್ಷುವಾಗಿದ್ದರೆ ಮಾತ್ರ ಕಲೆ, ಕಲಾವಿದರ ಅಸ್ತಿತ್ವ. ಇದಕ್ಕೆ ಪೂರಕವಾದ ಸಮಾಜ ನಮ್ಮದಾಗಲಿ. …………… ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಹಾ ಎನ್ನುವ ಜನುಮದ ಸಾಕಿ ಬುಕ್ ಆಫ್ ಟೀ ಲೇಖಕರು – ಕುಮಾರ್ ಎಸ್ ಬೆಲೆ- -100 ಎಲ್ಲವನ್ನೂ ಬೆಸೆದ ಚಹಾ ಪ್ರೀತಿಗೆ ಎನ್ನುವ ಬರೆಹದೊಂದಿಗೆ ಈ ಪುಸ್ತಕ ನನ್ನ ಕೈ ಸೇರಿದಾಗ ಎಷ್ಟೊಂದು ಖುಷಿಯಾಗಿತ್ತು ಎಂದರೆ ಕುಳಿತಲ್ಲೇ ಒಂದು ಕಪ್ಪು ಬಿಸಿಬಿಸಿ ಚಹಾ ಕುಡಿದಷ್ಟು ರಿಲ್ಯಾಕ್ಸ್ ಆಗಿದ್ದೆ. ನನ್ನ ಚಹಾ ಪ್ರೀತಿಯೇ ಅಂತಹುದ್ದು. ಕೊಟ್ಟರೆ ಮೊಗಮೊಗೆದು ಕುಡಿಯುತ್ತಲೇ ಇರುವ ಇಲ್ಲದಿದ್ದರೆ ದಿನವಿಡೀ ಕುಡಿಯದ ಪ್ರೀತಿಯಂತಹ ಪ್ರೀತಿ ಈ ಚಹ. ಪ್ರೀತಿಯೂ ಹಾಗೆ. ಪ್ರೇಮ ಸಾಗರದಲ್ಲಿ ಮುಳುಗೇಳು ಎಂದರೆ ‘ಮುಳುಗಿಯೇ ಇರುತ್ತೇನೆ ಬಿಡು’ ಎನ್ನಬಲ್ಲೆ ನಾನು. ‘ಬೇಡ, ಒಂಟಿಯಾಗಿರು’ ಎಂದರೆ ಸರಿ ಬಿಡು ಎನ್ನುತ್ತ ಯಾವುದೋ ಪುಸ್ತಕ ಹಿಡಿದು ಕುಳಿತುಬಿಡಲೂ ಸೈ. ಅದಕ್ಕೇ ನನಗೆ ಈ ಪ್ರೀತಿ ಮತ್ತು ಚಹಾ ಒಂದೇ ರೀತಿಯದ್ದಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿರುವ ಸುಖ ಒಂಟಿಯಾಗಿರುವುದರಲ್ಲೆಲ್ಲಿದೆ ಹೇಳಿ? ಹೀಗಾಗಿಯೇ ಚಹ ಕೊಟ್ಟಷ್ಟೂ ಪ್ರೀತಿಯಿಂದ ಕುಡಿಯುತ್ತಲೇ ಇರುತ್ತೇನೆ. ಹೀಗಾಗಿ ಪುಸ್ತಕ ಕೈ ಸೇರಿದಾಗ ಮತ್ತೊಮ್ಮೆ ಚಹಾ ಕುಡಿದಷ್ಟೇ ಖುಷಿಯಿಂದ ಓದತೊಡಗಿದೆ. ಈ ಪುಸ್ತಕವನ್ನು ಕುಮಾರ್ ಅವರು ನನಗೆ ಕಳುಹಿಸಲೂ ಒಂದು ಉದ್ದೇಶವಿದೆ. ನಾನು ಆಗ ದಿನಕ್ಕೊಂದರಂತೆ ಚಹಾ ಕವನಗಳನ್ನು ಬರೆಯುತ್ತಿದ್ದೆ. ಹಿಂದಿನ ದಿನ ರಾತ್ರಿ ಕುಳಿತು ಕವನ ಬರೆಯುವುದು, ಬೆಳಗೆದ್ದು ಒಮ್ಮೆ ಅದನ್ನು ಓದಿ, ತಿದ್ದುವುದಿದ್ದರೆ ತಿದ್ದಿ, ಪೋಸ್ಟ್ ಮಾಡುವುದು. ಪ್ರಾರಂಭದಲ್ಲಿ ಕೇವಲ ಇಬ್ಬರು ಸದಾ ಪ್ರೀತಿಸುವ ಜೀವಗಳ- ಅದು ಪ್ರೇಮಿಗಳೂ ಆಗಿರಬಹುದು ಅಥವಾ ಗಂಡ ಹೆಂಡಿರೂ ಆಗಿರಬಹುದು. – ನಡುವಣ ಪ್ರೇಮ ಸಲ್ಲಾಪಕ್ಕೆ ಚಹಾ ಒಂದು ಮಾಧ್ಯಮ ಎಂಬಂತೆ ಚಿತ್ರಿಸಿ ಬರೆಯುತ್ತಿದ್ದರೆ ನಂತರದ ದಿನಗಳಲ್ಲಿ ಹೆಣ್ಣಿನ ಒಳಕುದಿತವನ್ನು ಕುದಿಯುತ್ತಿರುವ ಡಿಕಾಕ್ಷನ್ಗೆ ಹೋಲಿಸಿ ಬರೆಯುತ್ತಿದ್ದೆ. ಬಹಳಷ್ಟು ಜನರಿಗೆ ಅದು ಬಹಳ ಇಷ್ಟವಾಗುತ್ತಿತ್ತು. (ಕೆಲವರಿಗೆ ಕಿರಿಕಿರಿ ಎನ್ನಿಸಿತೆಂದೂ ನಂತರ ತಿಳಿಯಿತು.) ಹಿರಿಯರಾದ ಎಲ್ ಸಿ ನಾಗರಾಜ್ ಚಹಾದ ಕುರಿತು ಜಪಾನಿ ಹಾಯಿಕುಗಳನ್ನು ಕಳಿಸುತ್ತ ಬರೆಯಿರಿ. ನಾನು ಬೇಕಾದ ಮಾಹಿತಿ ಕೊಡುತ್ತೇನೆ ಎನ್ನುತ್ತ ಜಪಾನಿನ ಪ್ರಸಿದ್ದ ಚಹಾ ಗೋಷ್ಠಿಯ ಕುರಿತು ಮಾಹಿತಿ ನೀಡಿದರು. ಈ ಸಮಯದಲ್ಲಿ ಕುಮಾರ್ ಕೂಡ ಈ ಕವಿತೆಗಳನ್ನು ಓದಿ ಅದೆಷ್ಟು ಖುಷಿಪಟ್ಟರೆಂದರೆ ಚಹಾದ ಕುರಿತಾಗಿ ನನ್ನದೊಂದು ಪುಸ್ತಕವಿದೆ ಎಂದು ಕಳಿಸಿಯೇ ಬಿಟ್ಟರು. ಹೀಗೆ ಚಹಾದ ಘಮದ ಬೆನ್ನು ಹತ್ತಿ ಮನೆಗೆ ಬಂದ ಪುಸ್ತಕ ಇದು. ಕುಡಿಯುವವರು ಯಾವಾಗಲೂ ಹೇಳುವ ಮಾತೊಂದಿದೆ. ‘ನಾವೇನೂ ಕುಡಿಯುವ ಕಿಕ್ಕಿಗಾಗಿ ಕುಡಿಯುತ್ತೇವೆ ಎಂದುಕೊಂಡಿದ್ದೀರಾ? ಹಾಗೇನಿಲ್ಲ. ಕುಡಿಯುವ ನೆಪದಿಂದ ಸ್ನೇಹಿತರೆಲ್ಲ ಜೊತೆಗೆ ಸೇರ್ತೀವಿ, ಎಲ್ಲರ ಮನದ ಮಾತು ಹೊರಗೆ ಬರುತ್ತದೆ, ಎಲ್ಲರೂ ಪರಸ್ಪರ ಮುನಿಸು ಮರೆತು ಮತ್ತೆ ಒಂದಾಗ್ತೀವಿ ಅದಕ್ಕೇ ಕುಡಿಯೋದು.’ ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ. ‘ಹೌದಲ್ವಾ? ಕುಡಿಯೋಕೆ ಕುಳಿತರೆ ಎಷ್ಟೆಲ್ಲ ವಿಷಯಗಳು ಹೊರಬರುತ್ತವೆ. ಆದರೆ ಅದಕ್ಕೆ ಅಲ್ಕೋಹಾಲ್ ಯಾಕಾಗಬೇಕು? ಚಹ ಆಗುವುದಿಲ್ಲವೇ?’ ಎಂದುಕೊಳ್ಳುವಾಗಲೇ ಈ ಪುಸ್ತಕ ನನ್ನ ಕೈ ಸೇರಿದ್ದು. ನಿಮ್ಮ ಜೊತೆಗೆ ಒಂದು ಕಪ್ ಚಹಾದೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಬಹುದೆಂದುಕೊಂಡೇ ಈ ಬುಕ್ ಆಫ್ ಟೀ’ ನಿಮ್ಮ ಕೂಗಿಡುತ್ತಿದ್ದೇನೆ’ ಎನ್ನುತ್ತ ಕುಮಾರ್ ಚಹಾದ ಜಗತ್ತಿನೊಳಗೆ ನಮ್ಮನ್ನೆಲ್ಲ ಅಕ್ಷರಶಃ ಕೈ ಹಿಡಿದು ಯಾತ್ರೆ ಹೊರಡಿಸುತ್ತಾರೆ. ಚಹಾದ ಬಗ್ಗೆ ಇನ್ನೂವರೆಗೆ ನಾವೆಲ್ಲ ಕಂಡು ಕೇಳರಿಯದ ಎಷ್ಟೊಂದು ವಿಷಯಗಳು ಬರುತ್ತವೆಂದರೆ ನಾವು ಕುಡಿಯುವ ಯಕಶ್ಚಿತ್ ಚಹಾದೊಳಗೆ ಇಷ್ಟೆಲ್ಲ ವಿಷಯ ಇದೆಯಾ? ಎಂದು ಖಂಡಿತವಾಗಿ ನಿಬ್ಬೆರಗಾಗಿ ಬಿಡುತ್ತೇವೆ. ಚಹಾದ ಬಗ್ಗೆ ನಾನು ತಿಳಿದುಕೊಳ್ಳಲೇ ಬೇಕೆಂದುಕೊಂಡ ಎಲ್ಲ ವಿಷಯಗಳೂ ಇಲ್ಲಿದ್ದು ನನ್ನಂತಹ ಚಹಾದ ಬಯಕೆಯವರಿಗೆ ಇದು ಸಣ್ಣ ಎನ್ಸೈಕ್ಲೋಪೀಡಿಯಾ ಅಂತನ್ನಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಚಿಕ್ಕವಳಿರುವಾಗ ನಾನು ಚಹಾ ಕುಡಿಯುತ್ತಲೇ ಇರಲಿಲ್ಲ. ನನ್ನ ಅಣ್ಣ ಈಗಲೂ ಚಹಾ ಕುಡಿಯುವುದಿಲ್ಲ. ‘ಮಾವ ಇನ್ನೂ ಸಣ್ಣ ಪಾಪು, ಹಾಲು ಕುಡಿತಾನೆ’ ನನ್ನ ಮಕ್ಕಳು ನನ್ನಣ್ಣನನ್ನು ಅವನು ಚಹಾ ಕುಡಿಯದಿರುವುದಕ್ಕಾಗಿ ಕಿಚಾಯಿಸುತ್ತಾರೆ. ಚಿಕ್ಕವಳಿದ್ದಾಗ ಚಹಾ ಬೇಕು ಎಂದರೆ ಮೊದಲೇ ಕಪ್ಪು, ಚಹಾ ಕುಡಿದರೆ ಮತ್ತಿಷ್ಟು ಕಪ್ಪಾಗ್ತೀಯಾ ನೋಡು’ ಅಮ್ಮ ಅತ್ತ ಹೆದರಿಸುವ ದನಿಯೂ ಅಲ್ಲದ, ಇತ್ತ ರೇಗುವ ದನಿಯೂ ಅಲ್ಲದ ಧ್ವನಿಯಲ್ಲಿ ಸೀರಿಯಸ್ ಆಗಿ ಹೇಳುವಾಗಲೆಲ್ಲ ತುಟಿಗಿಟ್ಟ ಚಹಾದ ಲೋಟವನ್ನು ಮರುಮಾತನಾಡದೇ ಕೆಳಗಿಡುತ್ತಿದ್ದೆ. ಥೇಟ್ ಅಪ್ಪನ ಬಣ್ಣವನ್ನೇ ಹೊತ್ತುಕೊಂಡು ಬಂದಿದ್ದ ನನಗೆ ಆ ಕ್ಷಣಕ್ಕೆ ನನ್ನ ಬಣ್ಣ ಹಾಗೂ ಚಹಾದ ಸೆಳೆತ ಎರಡೂ ಒಂದೊಂದು ಕಡೆ ಪಾಶ ಹಾಕಿ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಬಣ್ಣ ಅನ್ನುವುದು ಯೋಚಿಸಬೇಕಾದ ವಿಷಯವೇ ಅಲ್ಲ, ಅಪ್ಪ ನಾನು ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಮೂಲೆಗೆ ಸೇರದಂತೆ ಕಿವಿ ಮಾತು ಹೇಳುತ್ತಲೇ ಆತ್ಮವಿಶ್ವಾಸ ತುಂಬುವ ಹೊತ್ತಿಗೆ ಅದ್ಯಾವ ಮಾಯಕದಲ್ಲಿ ನಾನು ಚಹಾದ ಅತ್ಯುಗ್ರ ಅಭಿಮಾನಿಯಾಗಿ ಬದಲಾದೆನೋ ನನಗೆ ಅರ್ಥವೇ ಆಗಲಿಲ್ಲ. ಚಹಾದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ. ಚಹಾ ಮೊದಲು ಕೇವಲ ಈಗಿನಂತೆ ಪೇಯವಾಗಿರಲಿಲ್ಲ. ಅದೊಂದು ಔಷಧಿಯಾಗಿತ್ತು ಎನ್ನುತ್ತಲೇ ತಮ್ಮ ಚಹಾದ ಅತಿ ಪ್ರೀತಿಗೊಂದು ಘನತೆಯನ್ನು ತಂದುಕೊಡಲೆತ್ನಿಸುತ್ತ ತಮ್ಮ ಬರೆಹವನ್ನು ಪ್ರಾರಂಭಿಸುತ್ತಾರೆ. ಐದು ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ಚಹಾವನ್ನು ತಯಾರಿಸಿದ್ದು ಚೀನಿ ದೊರೆ ಶೆನ್ ನುಂಗ್ ಕೃಷಿ ದೇವರೆಂದೇ ಆತನನ್ನು ಪೂಜಿಸುತ್ತಿದ್ದ ಚೀನಿಯರಿಗೆ ಆತ ಹೊಸ ಹೊಸ ಕೃಷಿ ಪದ್ದತಿಯನ್ನು ಕಲಿಸಿಕೊಟ್ಟಿದ್ದ ಶೆನ್ ನುಂಗ್ ಒಮ್ಮೆ ಔಷಧಿಯ ಸಸ್ಯಗಳನ್ನು ಹುಡುಕುತ್ತ ಹೋದಾಗ ವಿಶ್ರಾಂತಿಗೆಂದು ತಂಗಿದ್ದ ಕುಟೀರದಲ್ಲಿ ಆತನ ಕುದಿಸುವ ನೀರಿನ ಪಾತ್ರೆಗೆ ಎಲ್ಲಿಂದಲೋ ಚಹಾದ ಎಲೆಯೊಂದು ಹಾರಿ ಬಂದು ಬಿದ್ದಿತ್ತಂತೆ. ಅದು ನೀರಿನ ಬಣ್ಣವನ್ನು ಬದಲಾಯಿಸಿತ್ತು. ಅದನ್ನು ಕುಡಿದ ಶೆನ್ ನುಂಗ್ ದೊರೆಗೆ ಆಯಾಸವೆಲ್ಲ ಪರಿಹಾರವಾಗಿ ಹೊಸ ಚೈತನ್ಯ ಮೂಡಿತ್ತಂತೆ. ಆದರೆ ಈಗಿನ ಚೀನಾ- ಭಾರತದ ನಡುವಣ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಚೀನಿಯದ್ದು ಎಂದು ಹೇಳಲೂ ಭಯವೇ ಆದರೂ ಅದು ನಿಷೇಧೀತ ಪಟ್ಟಿಯಲ್ಲಿಲ್ಲ ಎಂಬುದೇ ಚಹಾದ ತಲುಬಿರುವವರಿಗೆ ಸಮಾಧಾನದ ವಿಷಯ. ಯಾಕೆಂದರೆ ಚಹಾ ಕುಡಿಯುವವರಿಗೆ ಒಮ್ಮೆ ಚಹಾ ಕುಡಿಯಬೇಕು ಎನ್ನಿಸಿದರೆ ತಕ್ಷಣವೇ ಕುಡಿಯಲೇ ಬೇಕು ಅನ್ನಿಸಿಬಿಡುತ್ತದೆ. ಆ ಸಮಯದಲ್ಲಿ ಉಳಿದೆಲ್ಲವೂ ನಗಣ್ಯವಾಗಿ ಬಿಡಬಹುದು. ಆದರೆ ಮತ್ತೊಂದು ಸಮಾಧಾನದ ವಿಷಯವೇನೆಂದರೆ ಕುಮಾರ್ ಉಲ್ಲೇಖಿಸಿದ ಮತ್ತೊಂದು ಕಥೆಯ ಪ್ರಕಾರ ಚಹಾದ ಮೂಲ ಭಾರತವೇ ಆಗಿರುವುದು. ಬೋಧಿಧರ್ಮ ಸತತ ಒಂಬತ್ತು ವರ್ಷಗಳ ಕಾಲ ನಿರಂತರ ಧ್ಯಾನ ಮಾಡುವ ಶಪಥ ಮಾಡಿದ್ದ. ಆದರೆ ಕೆಲವು ಸಮಯದ ನಂತರ ನಿತ್ರಾಣಗೊಂಡು ನಿದ್ದೆ ಹೋದ. ಎದ್ದಾಗ ತನ್ನ ಕಣ್ಣುಗಳ ಮೇಲೆ ಕೋಪಗೊಂಡು ಮುಚ್ಚಿಕೊಂಡ ರೆಪ್ಪೆಗಳನ್ನು ಕಿತ್ತೆಸೆದ. ಆ ರೆಪ್ಪೆಗಳು ಬೇರು ಬಿಟ್ಟು ಗಿಡವಾಗಿ ಬೆಳೆಯಿತು. ಅದರ ಎಲೆಗಳು ಕಣ್ಣಿನ ರೆಪ್ಪೆಯ ಆಕಾರದಲ್ಲೇ ಇತ್ತು. ಆ ಎಲೆಗಳನ್ನು ತಿಂದಾಗ ಆಯಾಸವೆಲ್ಲ ಪರಿಹಾರವಾಗಿ ಉತ್ಸಾಹ ತುಂಬಿಕೊಂಡಿತ್ತು. ಈತನೇ ಮುಂದೆ ಈ ಗಿಡವನ್ನು ಚೀನಾಕ್ಕೆ ಒಯ್ದನೆಂದು ಹೇಳಲಾಗುತ್ತದೆ. ನಂತರ ಬೇರೆ ಬೇರೆ ದೇಶಗಳಲ್ಲಿ ಚಹಾದ ಮಹಿಮೆ ಹಬ್ಬಿತು. ಕ್ರಿಶ 726ರಲ್ಲಿ ಚಹಾ ಜಪಾನನ್ನು ಪ್ರವೇಶಿಸಿತು. ಶೋಮು ಎಂಬ ದೊರೆ ಚಹಾದ ಕೃಷಿಯನ್ನು ಪ್ರಾರಂಭಿಸಿದ. ಚೀನಾದ ಹೊರಗೆ ಚಹಾ ಬೆಳೆದ ಮೊದಲ ದೇಶ ಎಂಬ ಹೆಗ್ಗಳಿಕೆ ದೊರೆಯಿತು. ಚೀನಾದಲ್ಲಿ ಟಿಯಿಸಂ ಬೆಳೆದ ಹಾಗೆ ಜಪಾನಿನಲ್ಲಿ ಚಹಾ ಸಮಾರಾಧನೆ ಎನ್ನುವ ವಿಶಿಷ್ಟ ಸಂಪ್ರದಾಯವೇ ಬೆಳೆಯಿತು. ಹೇಗೆ ಸಮಾರಾಧನೆಯ ಕೋಣೆಯನ್ನು ಪ್ರವೇಶಿಸಬೇಕು, ಹೇಗೆ ನಿಂತುಕೊಳ್ಳಬೇಕು ಎಂಬುದರಿಂದ ಹಿಡಿದು ಪ್ರತಿಯೊಂದನ್ನೂ ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ರೂಪಿಸಿ ಮಾಡುವ ಸಮಾರಾಧನೆ ಇದು. 16ನೇ ಶತಮಾನದಲ್ಲಿ ಡಚ್ಚರಿಂದ ಚಹಾ ಯುರೋಪಿಗೆ ಪರಿಚಯಿಸಲ್ಪಟ್ಟಿತ್ತು. ಅವರು ಚೀನಾದ ಪ್ರಮುಖ ಬಂದರಾದ ಅಮೋಯ್ ಎಂಬಲ್ಲಿ. ಅಲ್ಲಿನ ವ್ಯಾಪಾರಿಗಳು ತಮ್ಮ ಆಡು ಭಾಷೆಯಲ್ಲಿ ಟೇ ಎನ್ನುತ್ತಿದ್ದರಂತೆ. ಹೀಗಾಗಿ ಡಚ್ಚರು ಅದನ್ನು ಟೀ ಯನ್ನಾಗಿಸಿದರು. 1650ರಲ್ಲಿ ಚಹಾ ಇಂಗ್ಲೆಂಡಿಗೆ ಕಾಲಿಟ್ಟಾಗ ಅದ್ಭುತವೂ, ವೈದ್ಯರಿಂದ ಪ್ರಮಾಣಿಕೃತವೂ ಆದ ಚೀನಿ ಪೇಯ.’ ಎಂದಿದ್ದು ದಾಖಲೆಯಾಗಿ ಉಳಿದಿದೆ. ಮೊದಮೊದಲು ಚಾ, ಚಾಯ್, ಟು, ಟೆ, ಮಿಂಗ್, ಥಿಯ ಮುಂತಾದ ಪದಗಳಿಂದ ಪರಿಚಿತವಾಗಿದ್ದ ಈ ಪಾನೀಯಕ್ಕೆ ಚಹಾ ಹಾಗೂ ಟೀ ಎನ್ನುವ ಹೆಸೆರು ಸೂಟ್ ಆದಷ್ಟು ಬೇರೆ ಯಾವುದೇ ಹೆಸರೂ ಆಗುವುದಿಲ್ಲ. ನಾನು ಕೆಲಸ ಸಿಕ್ಕ ಸಂಭ್ರಮದಲ್ಲಿ ಯಾವ ಸ್ಥಳ ಒಳ್ಳೆಯದೆಂದೇ ತಿಳಿಯದೇ ಬೆಳ್ತಂಗಡಿಯ ಒಂದು ಕಾಡೊಳಗಿನ ಹಳ್ಳಿಯನ್ನು ಆರಿಸಿಕೊಂಡಿದ್ದೆ. ಅಲ್ಲಿನ ಹೆಚ್ಚಿನವರಿಗೆ ಕನ್ನಡವೇ ಬರುವುದಿಲ್ಲ. ಆದರೆ ನಮಗೆ ತುಳು ಮಾತನಾಡಲು ಬರದಿದ್ದರೆ ‘ಭಾಷೆ ಇಜ್ಜಿ’ ಎನ್ನುವವರು. ಹೀಗಾಗಿ ತುಳು ಕಲಿಯಲೇ ಬೇಕಾಗಿತ್ತು. ಪ್ರೌಢಶಾಲೆಯಲ್ಲಿ ಉಳಿದ ಶಿಕ್ಷಕರೆಲ್ಲ ತುಳು ಮಾತಾಡುವಾಗ ನಾನು ಮುಖ ಮುಖ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು. ಹೀಗಾಗಿ ತುಳು ಕಲಿಯುವ ಪ್ರಯತ್ನದಲ್ಲಿ ನನಗೆ ಸಿಕ್ಕ ಮೊದಲ ವಾಕ್ಯವೇ ‘ಚಾ ಪೆರಿಯಾರ?’ ಮುಂದಿನ ವಾಕ್ಯ ‘ಬಲ್ಲೆ, ಚಾ ಪರ್ಕ’ ಹೀಗಾಗಿ ಚಹಾ ನನಗೆ ನನ್ನನ್ನು ತುಳುನಾಡಿನೊಟ್ಟಿಗೆ ಬೆಸೆಯುವ ಕೊಂಡಿಯಾಗಿದ್ದು. ಮುಂದೆ ಈ ‘ಬಲ್ಲೆ ಚಾ ಪರ್ಕ’ ಎನ್ನುವುದು ತುಳುನಾಡಿನ ಪ್ರಸಿದ್ಧ ನಾಟಕವೊಂದರ ಹೆಸರು ಎಂಬುದೂ ಗೊತ್ತಾಗಿದ್ದು. ನಾಟಕಕ್ಕೂ ಚಹಾ ಕುಡಿಯೋಣ ಬನ್ನಿ ಎಂಬ ಹೆಸರಿಡುತ್ತಾರೆಂದರೆ ಈ ಚಹಾ ನಮ್ಮನ್ನು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ‘ಒಬ್ಬ ಬಾಲ್ಟಿಯೊಂದಿಗೆ ನೀವು ಚಹಾ ಕುಡಿಯುತ್ತಿದ್ದೀರಿ ಎಂದರೆ ನೀವೊಬ್ಬ ಅಪರಿಚಿತ ಅಷ್ಟೆ. ಎರಡನೇ ಸಾರಿ ನೀವು ಅವನೊಡನೆ ಚಹಾ ಸೇವಿಸುತ್ತಿದ್ದೀರಿ ಎಂದರೆ ನೀವು ಆತನ ಅತಿಥಿ, ಮೂರನೇ ಸಲ ನೀವು ಅವನೊಂದಿಗೆ ಚಹಾ ಕಪ್ ಹಂಚಿಕೊಳ್ಳುತ್ತಿದ್ದೀರೆಂದರೆ ಅದರರ್ಥ ನೀವು ಆ ಕುಟುಂಬದ ಸದಸ್ಯ. ನಿಮಗಾಗಿ ಆತ ಸಾಯಲೂ ಸಿದ್ಧ ಎಂದರ್ಥ’ ಈ ಮಾತನ್ನು ಹೇಳಿದ್ದು ಒಬ್ಬ ತಾಲಿಬಾನಿಯಂತೆ. ಅಂದರೆ ಚಹಾದ ಶ್ರೇಷ್ಟತೆಯನ್ನು ಅರ್ಥಮಾಡಿಕೊಳ್ಳಿ. ಇಂತಹ ಚಹಾದ ಹಿರಿಮೆಯನ್ನು ಓದುತ್ತಿದ್ದರೆ ನನಗೆ ನಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಚಹಾದ ಕುರಿತಾದ ಲೇಖನಗಳೂ ಅಷ್ಟೇ. ಒಂದೊಂದೂ ಒಂದೊಂದು ತರಹ ಚಹಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತಹುದ್ದು. ಚಹಾದ ಮೂಲ, ಎಲ್ಲೆಲ್ಲಿ ಬೆಳೆದ ಚಹಾದ ರುಚಿ ಹೇಗಿರುತ್ತದೆ, ವಿವಿಧ ಚಹಾ ಪ್ರಕಾರಗಳ ಬಗ್ಗೆ, ಟೀ ಬ್ಯಾಗ್ ಕುರಿತು, ಜಾರ್ಜ್ ಆರ್ವೆಲ್ಲರ ಟೀ ಟಿಪ್ಸ್ ಬಗ್ಗೆ, ಚಹಾದ ಎಲೆಗಳನ್ನು ಸಂಗ್ರಹಿಸುವ ಒಣಗಿಸುವ ಹಾಗೂ ಸಂಸ್ಕರಿಸುವ ವಿಧಾನಗಳನ್ನು ತಿಳಿಸುವ ಲೇಖನಗಳು ಖಂಡಿತಾ ಗಮನ ಸೆಳೆಯುತ್ತವೆ. ಹಲವಾರು ತರಹದ ಚಹಾ ಮಾಡುವ ವಿಧಾನಗಳ ಬಗ್ಗೆಯೂ ಲೇಖಕರು ವಿವರವಾಗಿ ತಿಳಿಸುತ್ತಾರೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳ ಚಹಾ ಪ್ರೀಯತೆ ಮತ್ತು ಅವರು ಇಷ್ಟಪಡುವ ಚಹಾದ ವೆರೈಟಿಯನ್ನೂ ತಿಳಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ ಎಂಬುದನ್ನು ಬಹು ಚಂದವಾಗಿ ವಿವರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ನಡೆಯುವ ಚಹಾ ಸಮಾರಾಧನೆಯ ಹಾಗೂ ಸೆನ್ ರಿಕ್ಯೂ ಹೇಳಿದ ಚಹಾದ ನಾಲ್ಕು ತತ್ವಗಳು ತೀರಾ ಆಕಷರ್ಿಸುತ್ತವೆ. ಹಿಂದೆ ನಮ್ಮ ಹಳ್ಳಿಯ ಕಡೆ ಬೆಳಗೆದ್ದು ಚಹಾ ಕುಡಿಯುತ್ತಾರೆಂದರೆ ಕೀಳು ಎಂಬಂತೆ ಕಾಣುತ್ತಿದ್ದರಂತೆ. ‘ಛೀ ಅಂವಾ ಬೆಳಿಗ್ಗೆನೇ ಚಹಾ ಕುಡಿತಾನೆ’ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತಂತೆ. ನಾವೀಗ ಹೇಗೆ ‘ಅವನು ಬೆಳಿಗ್ಗೆ ಬೆಳಿಗ್ಗೆನೆ ಕುಡಿತಾನೆ’ ಎಂದು ಕುಡುಕರನ್ನು ಆಡಿಕೊಳ್ಳುತ್ತೇವೋ ಹಾಗೆ. ಹಳ್ಳಿಯ ಯಾವುದೋ ಮನೆಯಲ್ಲಿ ಚಹಾವನ್ನು ಬಳಸಲು ಪ್ರಾರಂಭಿಸಿದಾಗ ಹಳ್ಳಿಯ
ಜಾಮಿನಿಯ ನೆನಪಿನಲ್ಲಿ ಈ ಮಳೆಗಾಲದಲ್ಲಿಯೇ ನೆನಪುಗಳು ಹುಟ್ಟಿಕೊಂಡಿರಬಹುದು ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಮೋಡಗಳೊಂದಿಗೆ ತಣ್ಣಗೆ ತೇಲಿಬಂದ ನೆನಪೊಂದು, ಏಕಾಂತ ಬಯಸಿ ಟೆರೇಸಿನಲ್ಲಿ ಕುಳಿತು ಆಕಾಶ ದಿಟ್ಟಿಸುತ್ತಿದ್ದ ಹೃದಯವೊಂದನ್ನು ತಾಕಿ ನೆಲಕ್ಕೆ ಇಳಿದಿರಬಹುದು. ಹಾಗೆ ತಾಕಿದ ನೆನಪು ಒಮ್ಮೆ ಬಾಲ್ಯದ ಬೆರಗಾಗಿ, ಇನ್ನೊಮ್ಮೆ ಹರೆಯದ ಕನಸಾಗಿ, ಮತ್ತೊಮ್ಮೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮಾಗಿ ಎಲ್ಲರ ಅರಿವಿಗೂ ದಕ್ಕಿರಬಹುದು. ಹಾಗೆ ದಕ್ಕಿದ ನೆನಪು ಈಗಷ್ಟೇ ಟ್ರೆಕ್ಕಿಂಗ್ ಮುಗಿಸಿದ ಹುಡುಗನೊಬ್ಬನ ಭಾರವಾದ ಬ್ಯಾಗ್ ನಲ್ಲೋ, ಕಾಡುಪಾಪವೊಂದನ್ನು ಕಷ್ಟಪಟ್ಟು ಕ್ಲಿಕ್ಕಿಸಿದ ಫೋಟೋಗ್ರಾಫರ್ ನ ಕ್ಯಾಮರಾದಲ್ಲೋ, ಸಮುದ್ರದಂಚಿಗೆ ಕಾಲುಚಾಚಿ ಕುಳಿತ ಹುಡುಗಿಯೊಬ್ಬಳ ಉಗುರಿನೊಳಗೆ ಸೇರಿಕೊಂಡ ಮರಳಿನ ಕಣಗಳಲ್ಲೋ ಹೊಸದೊಂದು ರೂಪ ಪಡೆದುಕೊಂಡಿರಬಹುದು. ಹೀಗೆ ಹೊಸ ರೂಪ ಪಡೆದ ನೆನಪುಗಳೆಲ್ಲ ಒಂದೊಂದಾಗಿ ಹಿಂದೆಮುಂದೆ ಸುಳಿದಾಡಿ ಅವನೆಂದರೆ ಇವಳು, ಇವಳೆಂದರೆ ಬದುಕು ಹೀಗೆ ಎಲ್ಲವೂ ಹುಟ್ಟಿಕೊಂಡಿರಬಹುದು. ಬದುಕು ಸಹ್ಯವಾಗುತ್ತಾ, ಸಲೀಸಾಗುತ್ತಾ ಸಾಗಬೇಕೆಂದರೆ ಅಲ್ಲೊಂದಿಷ್ಟು ಸುಂದರ ನೆನಪುಗಳು ಸರಿದಾಡುತ್ತಿರಬೇಕು. ಅಪ್ಪ ದೀಪಾವಳಿಗೆಂದು ತಂದುಕೊಟ್ಟ ಫ್ರಾಕಿನ ಮೇಲೆ ಪ್ರಿಂಟಾಗಿದ್ದ ಕೀಲಿಕೈಗಳು, ವಾಲಿಬಾಲ್ ಕೋರ್ಟ್ ನೊಳಗಿಂದಲೇ ಕದ್ದು ನೋಡುತ್ತಿದ್ದ ಹತ್ತನೇ ಕ್ಲಾಸಿನ ಹುಡುಗನ ಕಣ್ಣುಗಳಲ್ಲಿರುತ್ತಿದ್ದ ತುಂಟತನ, ಗಾಳಿ ಕೂಡಾ ನುಸುಳಲು ಸಾಧ್ಯವಾಗದಂತೆ ತುಂಬಿರುತ್ತಿದ್ದ ಸಿಟಿಬಸ್ಸನ್ನು ಸೇಫಾಗಿ ಕಾಲೇಜು ತಲುಪಿಸುತ್ತಿದ್ದ ಡ್ರೈವರ್ ಸಲೀಮಣ್ಣನ ಸಹನೆ, ಆಫೀಸಿನ ಗ್ರಾನೈಟ್ ಕಟ್ಟೆಯ ಮೇಲೆ ತಪಸ್ಸಿಗೆ ಕೂತ ಕಾಮಧೇನುವಿನಂಥ ಕಾಫಿ ಮಷಿನ್ನು ಹೀಗೇ ಲಕ್ಷ್ಯಕ್ಕೇ ಬಾರದ ಸಣ್ಣಪುಟ್ಟ ಸಂಗತಿಗಳೆಲ್ಲ ನೆನಪಾಗಿ ದಿನನಿತ್ಯ ಎದುರಾಗುತ್ತಲೇ ಇರುತ್ತವೆ. ಈ ನೆನಪುಗಳೊಟ್ಟಿಗಿನ ಸಾಂಗತ್ಯ ಸಾಧ್ಯವಾಗದೇ ಇದ್ದಿದ್ದರೆ ಪಾರಿವಾಳವೊಂದು ಪತ್ರ ವಿಲೇವಾರಿ ಮಾಡಿದ ಕಥೆಯೊಂದು ಸಿನೆಮಾವಾಗುತ್ತಲೇ ಇರಲಿಲ್ಲ; ಆ ಸಿನೆಮಾದ ಡ್ಯೂಯೆಟ್ ಒಂದು ಬಾತ್ ರೂಮ್ ಸಿಂಗರ್ ಗಳನ್ನು ಹುಟ್ಟುಹಾಕುತ್ತಿರಲಿಲ್ಲ; ಅಪ್ಪ-ಅಮ್ಮನ ವಿರೋಧವನ್ನು ಧಿಕ್ಕರಿಸಿ ಒಂದಾಗುವ ಪ್ರೇಮಿಗಳು ಆದರ್ಶಪ್ರೇಮವೊಂದರ ಉದಾಹರಣೆಯಾಗುತ್ತಿರಲಿಲ್ಲ. ಹೀಗೇ ನವರಸಗಳನ್ನೂ ಒಟ್ಟೊಟ್ಟಿಗೇ ನಮ್ಮೆದುರು ಬಿಚ್ಚಿಡುವ ಸಾಮರ್ಥ್ಯವೊಂದು ಅದು ಹೇಗೋ ಈ ನೆನಪಿಗೆ ಸಿದ್ಧಿಸಿದೆ. ನೆನಪಿನ ಒಡನಾಟದಲ್ಲಿ ವಿಷಾದವೆನ್ನುವುದು ಇರದಿದ್ದರೆ ಬದುಕು ಇನ್ನಷ್ಟು ವರ್ಣಮಯವೆನ್ನಿಸುತ್ತಿದ್ದಿರಬಹುದು. ಹೊಸ ಸೀರೆಗೊಂದು ಮ್ಯಾಚಿಂಗ್ ಚಪ್ಪಲಿ ಧರಿಸಿ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿಯೊಂದಕ್ಕೆ ಹೋದಾಗ, ಊಟದ ತಟ್ಟೆಯಲ್ಲಿನ ಜಿಲೇಬಿಯೊಂದು ಜಿಲೇಬಿಪ್ರಿಯರನ್ನೆಲ್ಲ ನೆನಪಿಸುವುದುಂಟು. ಹಾಗೆ ಥಟ್ಟನೆ ನೆನಪಿಗೆ ಬರುವವರ ಲಿಸ್ಟ್ ನಲ್ಲಿ ಹೈಸ್ಕೂಲಿನ ಬೆಂಚಿನ ಮೇಲೆ ಊಟ ಹಂಚಿಕೊಂಡು ತಿಂದ ಗೆಳತಿಯೊಬ್ಬಳಿರಬಹುದು; ಮದುವೆ-ಮುಂಜಿಗಳಲ್ಲಿ ಮಾತ್ರ ಭೇಟಿಯಾಗುವ ದೂರದ ಸಂಬಂಧಿಯೊಬ್ಬನಿರಬಹುದು; ಫೇಸ್ ಬುಕ್ ಪೇಜಿನಲ್ಲಿ ಕಾಣಿಸಿಕೊಂಡ ಜಿಲೇಬಿ ತಿನ್ನುತ್ತಿರುವ ಪುಟ್ಟ ಮಗುವೊಂದಿರಬಹುದು. ಆ ಲಿಸ್ಟ್ ನಲ್ಲಿರುವ ಎಲ್ಲರೊಂದಿಗೂ ಕುಳಿತು ಜಿಲೇಬಿ ತಿನ್ನಲಾಗುವುದಿಲ್ಲ ಎನ್ನುವ ಸತ್ಯವೊಂದು ಗೊತ್ತಿದ್ದರೂ, ಅವರ ಊಟದ ತಟ್ಟೆಯಲ್ಲಿಯೂ ಜಿಲೇಬಿ ಲಭ್ಯವಿರುತ್ತದೆಯೆನ್ನುವ ಸಮಾಧಾನವೊಂದು ನೆನಪುಗಳನ್ನು ಸಲಹುತ್ತಿರುತ್ತದೆ. ಆದರೆ ಆ ಲಿಸ್ಟ್ ನಲ್ಲಿದ್ದ ಮುಖವೊಂದು ಇನ್ನೆಂದಿಗೂ ಎದುರಾಗುವುದೇ ಇಲ್ಲವೆನ್ನುವ ವಿಷಾದವೊಂದು ನೆನಪಿನ ರೂಪದಲ್ಲಿ ಜಿಲೇಬಿಯೊಂದಿಗೆ ಪ್ಲೇಟಿನ ತುದಿಯಲ್ಲಿ ಕಾಣಿಸಿಕೊಂಡಾಗ, ಜಿಲೇಬಿಯೆಡೆಗಿನ ಮೋಹ ಇನ್ನಿಲ್ಲದಂತೆ ಮಾಯವಾಗಿಬಿಡುತ್ತದೆ. ಹಾಗೆ ಲಿಸ್ಟ್ ನಿಂದ ಥಟ್ಟನೆ ಅರಿವಿಗೇ ಬಾರದಂತೆ ಕಳೆದುಹೋದವಳು ಜಾಮಿನಿ. ಮಣಿಪುರದ ಹುಡುಗಿ ಜಾಮಿನಿ ನನ್ನೊಂದಿಗೇ ಕೆಲಸಕ್ಕೆ ಸೇರಿದವಳು. ಮೆತ್ತನೆಯ ಕೂದಲನ್ನು ಮೇಲಕ್ಕೆ ಎತ್ತಿಕಟ್ಟಿ ಜುಟ್ಟು ಅಲ್ಲಾಡಿಸುತ್ತಾ ಫ್ಲೋರ್ ತುಂಬಾ ಓಡಾಡುತ್ತಿದ್ದ ಜಾಮಿನಿ, ಅವಳ ಅಪರೂಪದ ಹೆಸರಿನಿಂದಾಗಿ ಆಫೀಸಿನಲ್ಲೆಲ್ಲ ಫೇಮಸ್ಸಾಗಿದ್ದಳು. ಮೆಲುಮಾತಿನ ಮಿತಭಾಷಿ ಜಾಮಿನಿ ಮನಸ್ಸಿಗೆ ಹತ್ತಿರವಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ತುಂಬುಕುಟುಂಬವೊಂದರ ಕಿರಿಯ ಸೊಸೆಯರಂತೆ ನಾವಿಬ್ಬರೂ ಮನಬಂದಾಗ ಕೆಲಸ ಮಾಡುತ್ತಾ, ಪಾಪ್ ಕಾರ್ನ್ ತಿನ್ನುತ್ತಾ ವರ್ಷಗಳನ್ನೇ ಕಳೆದೆವು. ಮೆಚ್ಚಿದ ಹುಡುಗನನ್ನು ಮದುವೆಯಾದ ಜಾಮಿನಿ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಳು. ನಂತರದ ಐದು ವರ್ಷಗಳಲ್ಲಿ ಒಮ್ಮೆ ಭೇಟಿಯಾಗಿದ್ದು ಬಿಟ್ಟರೆ ಜಾಸ್ತಿ ಮಾತುಕತೆಯೇನೂ ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಊಟ ಮಾಡುವಾಗಲೋ, ಪಾಪ್ ಕಾರ್ನ್ ತಿನ್ನುವಾಗಲೋ, ಕೆಲವೊಮ್ಮೆ ಮೀಟಿಂಗುಗಳಲ್ಲೋ ಅವಳ ವಿಷಯ ಪ್ರಸ್ತಾಪವಾಗುತ್ತಾ ಫ್ಲೋರ್ ನಲ್ಲಿ ಅವಳ ನೆನಪೊಂದು ಸುಳಿದಾಡುತ್ತಲೇ ಇತ್ತು. ಅಚಾನಕ್ಕಾಗಿ ಒಮ್ಮೆ ಮಧ್ಯಾಹ್ನದ ಹೊತ್ತು ಫೋನ್ ಮಾಡಿದವಳೇ, ಮಾತನಾಡುವುದಿದೆ ಭೇಟಿ ಆಗಬೇಕು ಎಂದಳು. ಅನಿವಾರ್ಯ ಕಾರಣಗಳಿಂದ ಆ ವೀಕೆಂಡ್ ಭೇಟಿ ಸಾಧ್ಯವಾಗಲೇ ಇಲ್ಲ. ಮುಂದಿನ ಶನಿವಾರ ಭೇಟಿಯಾಗುವುದಾಗಿ ಮೆಸೇಜ್ ಕಳಿಸಿ ಸುಮ್ಮನಾಗಿಬಿಟ್ಟೆ. ಅದಾಗಿ ನಾಲ್ಕೇ ದಿನಕ್ಕೆ, ಗುರುವಾರ ಸಂಜೆ ಕ್ಯಾಬ್ ನಲ್ಲಿ ಕುಳಿತು ಮೊಬೈಲ್ ತೆಗೆದರೆ ಜಾಮಿನಿ ಇನ್ನಿಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಏನಾಗಿತ್ತು, ಏನಾಯಿತು, ಅವಳ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ಅವಳು ಎರಡು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳೆಂಬ ವಿಷಯವೇ ನಮಗೆಲ್ಲ ಅವಳ ಬಗ್ಗೆ ದೊರಕಿದ ಕೊನೆಯ ಮಾಹಿತಿ. ಅವಳ ಮನಸ್ಸಿನಲ್ಲಿ ಏನಿತ್ತು, ಅವಳು ನನ್ನ ಹತ್ತಿರ ಮಾತನಾಡಬೇಕೆಂದಿದ್ದ ವಿಷಯ ಏನಿದ್ದಿರಬಹುದು, ಅವಳ ಸಮಸ್ಯೆಗೆ ನನ್ನಲ್ಲೇನಾದರೂ ಉತ್ತರವಿತ್ತೇ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೂ ಈಗಲೂ ಉತ್ತರ ಹುಡುಕುತ್ತಲೇ ಇದ್ದೇನೆ. ನಾನು ಆ ವೀಕೆಂಡ್ ಅವಳನ್ನು ಭೇಟಿಯಾಗಿದ್ದರೆ ಅವಳ ಸಾವನ್ನು ತಪ್ಪಿಸಲು ಸಾಧ್ಯವಿತ್ತೇನೋ ಅಥವಾ ಕೊನೆಪಕ್ಷ ಮುಂದೂಡಬಹುದಿತ್ತೇನೋ ಎನ್ನುವ ಎಲ್ಲ ತಪ್ಪಿತಸ್ಥ ಭಾವನೆಗಳು ಈಗಲೂ ಹಾಗೆಯೇ ಇವೆ. ಜಾಮಿನಿಯ ಘಟನೆಯ ನಂತರ ಯಾರಾದರೂ ಭೇಟಿಯಾಗುವ ಪ್ರಸ್ತಾಪವನ್ನಿಟ್ಟರೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಜೊತೆಗೊಂದು ಮಸಾಲೆದೋಸೆ ತಿಂದು ಬರುತ್ತೇನೆ. ಹಾಗೆ ಜೊತೆಯಾಗಿ ಕುಡಿದ ಕಾಫಿಯೊಂದು ಯಾವುದೋ ದುಃಖವೊಂದರ ಸಮಾಧಾನವಾಗಿರಬಹುದು; ಸಮಸ್ಯೆಯೊಂದಕ್ಕೆ ಪರಿಹಾರವೂ ಆಗಬಹುದು; ಏನಿಲ್ಲವೆಂದರೂ ಅಲ್ಲೊಂದು ಸುಂದರವಾದ ನೆನಪು ಹುಟ್ಟಿಕೊಳ್ಳಬಹುದು; ಆ ನೆನಪು ಜಾಮಿನಿಯಿಲ್ಲದ ನೋವನ್ನು ಕೊಂಚವಾದರೂ ಕಡಿಮೆ ಮಾಡಬಹುದು. ನೋವಿನೊಂದಿಗಿನ ನೆನಪಿನ ಪಯಣ ಯಾವಾಗಲೂ ದೀರ್ಘ. ಖುಷಿಯಾಗಿ, ಸುಖವಾಗಿ ಕಳೆದ ಗಳಿಗೆಗಳನ್ನು ಎಷ್ಟೋ ಸಲ ಮರೆತೇಹೋಗಿರುತ್ತೇವಾದರೂ, ನೆನಪಲ್ಲಿ ಉಳಿದುಹೋದ ನೋವು ಮಾತ್ರ ಬೇಗ ಮರೆಯಾಗುವಂಥದ್ದಲ್ಲ. ಕಾರಣವೇ ಇಲ್ಲದೇ ಮುರಿದುಬಿದ್ದ ಮೊದಲಪ್ರೇಮ, ಆಪ್ತ ಸಂವಹನವಿಲ್ಲದೇ ಮುಗಿದುಹೋದ ಗೆಳೆತನ, ಅಜ್ಜಿಯ ಸಾವು ಹೀಗೇ ನೋವು ತರುವ ನೆನಪೊಂದು ಎಲ್ಲರ ಬದುಕಿನಲ್ಲೂ ಬೇಡವೆಂದರೂ ಜೀವಂತವಾಗಿರುತ್ತದೆ. ಅಂಥದ್ದೇ ಒಂದು ಅತ್ತ ತೀರಾ ಗಂಭೀರವೂ ಅಲ್ಲದ ಹಾಗಂತ ನಿರ್ಲಕ್ಷ್ಯಿಸಲೂ ಸಾಧ್ಯವಾಗದ, ನೆನಪಿನಿಂದ ಎಂದೂ ಮರೆಯಾಗದ ನೋವೆಂದರೆ ಮನೆಗಳನ್ನು ಬದಲಾಯಿಸುವುದು. ಕೆಲಸಕ್ಕಾಗಿ ಊರು ಬದಲಾಯಿಸುವವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಾಲ್ಕೈದು ಮನೆಗಳಾದರೂ ನೆನಪಿನ ಅರಮನೆಗಳಾಗಿ ಉಳಿದುಕೊಂಡಿರುತ್ತವೆ. ಪುಟ್ಟ ಮನೆಯೊಂದರ ಹಾಲ್ ನಲ್ಲಿ ರಾಜಗಾಂಭೀರ್ಯದಲ್ಲಿ ಕುಳಿತಿರುತ್ತಿದ್ದ ಆರಾಮ ಕುರ್ಚಿ, ವಿಶಾಲವಾದ ಮನೆಯಂಗಳದ ಅಂಚಿನಲ್ಲಿ ಯಾರೋ ನೆಟ್ಟು ಬೆಳೆಸಿದ್ದ ಕರಿಬೇವಿನ ಗಿಡ, ಅಪಾರ್ಟ್ಮೆಂಟಿನ ಫ್ಲ್ಯಾಟ್ ನ ಬಾಲ್ಕನಿಯ ಸರಳುಗಳಿಗೆ ಹಬ್ಬಿಕೊಂಡಿದ್ದ ಮನಿಪ್ಲಾಂಟ್ ಹೀಗೇ ಒಂದೊಂದು ಮನೆಯೂ ಸಿಂಪಲ್ಲಾದ ಯಾವುದೋ ನೆನಪಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಮನೆ ಬದಲಾದಾಗ ಲಕ್ಷಗಟ್ಟಲೆ ಸುರಿದು ಸೋಫಾ ಖರೀದಿಸಿ ಮನೆಯನ್ನು ಅಲಂಕರಿಸಿದರೂ ಹಳೆಮನೆಯಲ್ಲಿದ್ದ ಆರಾಮ ಕುರ್ಚಿ ಆಗಾಗ ನೆನಪಿಗೆ ಬಂದು ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುತ್ತದೆ. ಹೀಗೆ ಸುಖ-ದುಃಖ, ನೋವು-ನಲಿವು ಎನ್ನುವ ಭಾವನೆಗಳೆಲ್ಲವೂ ನೆನಪಿನ ವ್ಯಾಪ್ತಿಯಲ್ಲಿ ಸ್ಥಾನಪಲ್ಲಟಗೊಳ್ಳುತ್ತಾ, ಹೊಸದಾಗಿ ಸೇರ್ಪಡೆಯಾದ ನೆನಪೊಂದು ಹಳೆಯ ನೆನಪುಗಳೊಂದಿಗೆ ವಾದ-ಸಂವಾದಗಳನ್ನು ನಡೆಸುತ್ತಾ ಬದುಕಿನ ಚಲನೆಯುದ್ದಕ್ಕೂ ನೆನಪಿನ ಹೆಜ್ಜೆಗಳು ಜೊತೆಯಾಗುತ್ತಲೇ ಇರುತ್ತವೆ. ದೀಪಾವಳಿಯ ಫ್ರಾಕಿನ ಮೇಲಿದ್ದ ಕೀಲಿಕೈಗಳೆಲ್ಲ ಬದಲಾಯಿಸಿದ ಮನೆಗಳ ನೆನಪೆಲ್ಲವನ್ನೂ ಜೋಪಾನ ಮಾಡಿದರೆ, ಥಿಯೇಟರಿನಲ್ಲಿ ಹೊಸ ಸಿನೆಮಾ ನೋಡುತ್ತಾ ಪಾಪ್ ಕಾರ್ನ್ ತಿನ್ನುವಾಗ ಜಾಮಿನಿಯ ನೆನಪೊಂದು ಪಕ್ಕದ ಸೀಟಿನಲ್ಲಿ ತಣ್ಣಗೆ ಕುಳಿತಿರುತ್ತದೆ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರ ಆತ್ಮಕತೆ ಸಹ ಪ್ರಕಟವಾಗಿದೆ. ಯಕ್ಷಗಾನ ಕಲಾವಿದರೂ ಆಗಿರುವ ಡಾ.ಗುಂದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸುಧೀರ್ಘ ಅವಧಿ ಕಾರ್ಯ ನಿರ್ವಹಿಸಿದ ಅವರು, ಕಾರವಾರದ ದಿವೇಕರ ಕಾಲೇಜಿನಲ್ಲಿ ಕೆಲ ವರ್ಷ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರು ಅಂಕೋಲಾದ ನಾಡು ಮಾಸ್ಕೇರಿ ಬಳಿಯ ಗ್ರಾಮದವರು. ಈಗ ನೆಲಸಿರುವುದು ಅಂಕೋಲಾದಲ್ಲಿ. ಅವಾರಿ, ಕಡಲ ಬೆಳಕಿನ ದಾರಿಯಲ್ಲಿ, ಸೀತೆ ದಂಡೆ ಹೂವೆ, ಮಾನಿನಿ ಮಣಿಯೆ ಬಾರೆ ಅವರ ಬರೆದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವಂತಹವು. ಬಂಡಾಯ ಮತ್ತು ದಲಿತ ಸಾಹಿತ್ಯದ ಓದು ಅವರ ಕತೆಗಳನ್ನು ಪ್ರಭಾವಿಸಿದೆಯಾದರೂ, ಕರಾವಳಿಯಲ್ಲಿ ಶೋಷಣೆ, ಜಾತಿಯ ಮುಸುಕು, ಕಾಣುವ ದೌರ್ಜನ್ಯ ಕತೆಗಳಲ್ಲಿ ಅನಾವರಣಗೊಳ್ಳುವ ಬಗೆ ವಿಶಿಷ್ಟ. ಅವರ ಕತೆಗಳಲ್ಲಿ ಮಾನವೀಯ ಅನುಕಂಪ ಮತ್ತು ಮನುಷ್ಯನ ಸೂಕ್ಷ್ಮ ಪ್ರತಿಸ್ಪಂದನಗಳು ಎದ್ದು ಕಾಣುವಂತಹವು. …………………………. ನಾಗರಾಜ ಹರಪನಹಳ್ಳಿ : ಕತೆಗಳನ್ನು ಯಾಕೆ ಬರೆಯುತ್ತೀರಿ? ರಾಮಕೃಷ್ಣ ಗುಂದಿ : ನನ್ನ ಊರು ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಎಂಬ ಪುಟ್ಟ ಗ್ರಾಮ. ನನ್ನ ಬಾಲ್ಯ ಮತ್ತು ಹರೆಯದ ಬಹುಪಾಲು ಅಲ್ಲಿಯೇ ಕಳೆದವು. ಅಂದಿನ ಅಲ್ಲಿಯ ಸಾಮಾಜಿಕ ಪರಿಸರ, ಜಾತಿ ವ್ಯವಸ್ಥೆ, ಮುಖಾಮುಖಿಯಾದ ವಿಕ್ಷಿಪ್ತ ಮತ್ತು ಉದಾತ್ತ ವ್ಯಕ್ತಿತ್ವಗಳು, ನನ್ನೊಳಗೆ ಉಂಟು ಮಾಡಿದ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ್ಯತೆಯಲ್ಲಿ ನಾನು ಬರೆಯಲು ಮನಸ್ಸು ಮಾಡಿದೆ ಮತ್ತು ಅದಕ್ಕೆ ಕಥೆಯೇ ಸೂಕ್ತವಾದ ಮಾಧ್ಯಮ ಅನ್ನಿಸಿತು. ಅದೇ ಸಮಯ ಆರಂಭವಾದ ದಲಿತ-ಬಂಡಾಯ ಚಳುವಳಿಯಿಂದಲೂ ಪ್ರಭಾವಿತನಾಗಿ ಕತೆ ಬರೆಯಲು ತೊಡಗಿದೆ. ಪ್ರಶ್ನೆ : ಕಥೆ ಹುಟ್ಟುವ ಕ್ಷಣ ಯಾವುದು? ಉತ್ತರ : ಸಂವೇದನಾ ಶೀಲತೆ ಇದ್ದರೆ ಬರಹಗಾರನಿಗೆ ಇಂಥಹುದೇ ಕ್ಷಣ ಎಂಬುದೇನಿಲ್ಲ. ಅಥವಾ ಅದು ನಿಜವೂ ಇರಬಹುದೇನೋ. ತೀರ ಮನಸ್ಸನ್ನು ಕಾಡುವ ಕ್ಷಣವೊಂದು ಅಭಿವ್ಯಕ್ತಿಯ ಉದ್ದೀಪನಕ್ಕೆ- ಪ್ರೇರಣೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ನಮ್ಮೂರಿನ ಬಂಡಿಹಬ್ಬ ನೋಡಲು ನೂರಾರು ಜನರ ನಡುವೆ ನಿಂತಿದ್ದೆ, ಆಗ ದೇವರ ಮೋಕ್ತೇಸರ ಭಕ್ತ ಜಂಗುಳಿಯತ್ತ ತೆಂಗಿನ ಕಾಯಿ ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೋ ಅವರು ಬಂಡಿ ಕಟ್ಟೆಗೆ ಒಡೆಯುವ ಅವಕಾಶ ಪಡೆಯುತ್ತಾರೆ. ಅಲ್ಲಿ ಆಕಸ್ಮಿಕವಾಗಿ ದಲಿತ ಯುವಕನೋರ್ವನ ಕೈಗೆ ಕಾಯಿ ಸಿಕ್ಕಾಗ ಅದನ್ನು ಒಡೆಯಲು ಆತನಿಗೆ ಅವಕಾಶ ನೀಡದೆ ಸವರ್ಣೀಯನೊ ಬ್ಬನ ಕೈಗೆ ನೀಡಿ ಕಾಯಿ ಒಡೆಯಲಾಯಿತು. ಈ ದೃಶ್ಯ ನನಗೆ ಆ ಕ್ಷಣದಲ್ಲಿ ತುಂಬ ಕಾಡಿತು. ಮತ್ತು ಅಂದೇ ನಾನು ‘ಚಾಚುದಾರರು’ ಎಂಬ ಕಥೆ ಬರೆಯಲೇ ಬೇಕಾಯಿತು. ದಲಿತನಾದ ನನಗೆ ಅಸ್ಪ್ರಶ್ಯತೆಯ ಕಾರಣದಿಂದ ನೋವು ನೀಡಿದ ಕ್ಷಣಗಳೇ ನನ್ನ ಹಲವು ಕಥೆಗಳ ಹುಟ್ಟಿಗೆ ಕಾರಣವೂ ಆಗಿದೆ. ಪ್ರಶ್ನೆ : ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ : ನಾನು ಆಗಲೇ ಹೇಳಿರುವಂತೆ ನನ್ನೂರಿನ ದಲಿತ ಕೇರಿಯ ಬಡತನ, ಹಸಿವು, ಅಸ್ಪ್ರಶ್ಯತೆಯ ಅವಮಾನಕರ ಪ್ರಸಂಗಗಳು ಇದೇ ಕಾರಣದಿಂದ ಅನಿವಾರ್ಯವಾಗಿ ಅನುಭವಿಸುವ ಶೋಷಣೆ ಮುಂತಾದವುಗಳೇ ನನ್ನ ಕಥೆಗಳಿಗೆ ವಸ್ತುವಾದವು. ಮುಖ್ಯವಾಗಿ ಒಂದು ಉಪೇಕ್ಷಿತ ದಲಿತ ಸಮುದಾಯವಾಗಿ ಇಂದಿಗೂ ನಿರೀಕ್ಷಿತ ಪ್ರಗತಿ ಕಾಣದ ನಮ್ಮ ‘ಆಗೇರ’ ಜನಾಂಗದ ಧ್ವನಿಯಾಗಬೇಕೆಂಬ ಉತ್ಕಟ ಹಂಬಲವೇ ನನ್ನ ಬಹುತೇಕ ಕಥೆಗಳ ಪ್ರೇರಣೆ ಅನ್ನಬಹುದು. ಹಾಗಾಗಿ ನನ್ನ ಕಥೆಗಳ ವಸ್ತು ವ್ಯಾಪ್ತಿ ಅದರಾಚೆಗೆ ವಿಸ್ತರಿಸಿದ್ದು ಬಹಳ ಕಡಿಮೆಯೇ ಎಂದು ಒಪ್ಪಿಕೊಳ್ಳುವೆ. ಈಗಲೂ ಜಾತಿ-ಮತ-ಧರ್ಮದ ಕಾರಣದಿಂದಲೇ ನಿರ್ಧಾರಿತವಾಗುತ್ತಿರುವ ‘ಮನುಷ್ಯ ವ್ಯಕ್ತಿತ್ವ’ ನನ್ನನ್ನು ಯಾವಾಗಲೂ ಕಾಡುತ್ತದೆ. ಪ್ರಶ್ನೆ : ಕಥೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಉತ್ತರ : ಖಂಡಿತವಾಗಿ. ಬಹುಶಃ ಯಾವುದೇ ವ್ಯಕ್ತಿತ್ವ ಬೆಳೆದು ಬರುತ್ತಲೇ ಬಾಲ್ಯ-ಯೌವನಗಳ ಅನುಭವಗಳು ಗಾಢವಾಗಿ ಪ್ರಭಾವಿಸಿರುತ್ತವೆ. ನನ್ನ ಬಹುತೇಕ ಕಥೆಗಳು ನನ್ನ ಬಾಲ್ಯದ ಅನುಭವಗಳಿಂದಲೇ ಸಾಕಷ್ಟು ವಸ್ತುಗಳನ್ನು ದೊರಕಿಸಿಕೊಂಡಿವೆ. ಹರೆಯದ ಅನುಭವಗಳ ಹಿನ್ನಲೆಯಲ್ಲಿ ಕೆಲವು ಕಥೆಗಳನ್ನು ನಿರೂಪಿಸಿದ್ದೇನೆ. ನನ್ನ ‘ಅವಾರಿ’, ‘ಇರಿತ’, ‘ಉಲ್ಕಾಪಾತ’, ‘ಅತಿಕ್ರಾಂತ’ ಮುಂತಾದ ಕಥೆಗಳು ನನ್ನ ಬಾಲ್ಯದ ಹಸಿ ಹಸಿ ನೆನಪುಗಳ ಹಿನ್ನೆಲೆಯಿಂದಲೇ ರೂಪುಗೊಂಡವು. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು? ಉತ್ತರ : ರಾಜಕೀಯ ವಿದ್ಯಮಾನಗಳ ಕುರಿತು ಮಾತೇ ಆಡದಿರುವುದು ಒಳಿತು ಎಂಬಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನುವುದು ಕೇವಲ ಬಾಯಿ ಮಾತಿಗೆ ಅಷ್ಟೇ. ಎಲ್ಲರಿಗೂ ಅಧಿಕಾರ-ಗದ್ದುಗೆ ಮತ್ತು ಸ್ವಾರ್ಥವೇ ಮುಖ್ಯವಾಗಿರುವಾಗ ಪ್ರಜಾಹಿತವೆಂಬುದು ಒಂದು ಚರ್ಚಿತ ವಿಷಯವಾಗಿ ಅಷ್ಟೇ ಉಳಿದುಕೊಂಡಿದೆ. ರೈತರ, ನಿರುದ್ಯೋಗಿಗಳ, ಸಂತ್ರಸ್ತರ ಕುರಿತು ಆಲೋಚಿಸಬೇಕಾದ ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದು, ಪರಸ್ಪರ ಕಾಲೆಳೆಯುವ, ಕೆಸರೆರಚುವ ಹುಡುಗಾಟದಲ್ಲಿ ಮಗ್ನರಾಗಿರುವುದು ರಾಜಕೀಯದ ಶೋಚನೀಯ ಸ್ಥಿತಿಗೆ ದೃಷ್ಟಾಂತಗಳಾಗಿ ತೋರುತ್ತಿವೆ. ಪ್ರಶ್ನೆ: ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ನನಗೆ ‘ವಚನ ಸಾಹಿತ್ಯ’ ತುಂಬಾ ಪ್ರಭಾವಿಸಿದ ಪ್ರಕಾರ ಅಲ್ಲಿಯೂ ಬಸವಣ್ಣನಂಥವರ ಧರ್ಮ ಮತ್ತು ದೇವರ ಕುರಿತಾದ ನಿಲುವು ಪರಿಕಲ್ಪನೆಗಳೇ ಹೃದಯದಿಂದ ಒಪ್ಪಿತವಾದವುಗಳು. ನನ್ನ ಬಾಲ್ಯ, ತಾರುಣ್ಯದ ಬಹು ಮುಖ್ಯ ಜೀವಿತಾವಧಿಯಲ್ಲಿ ನನಗೆ ಜಾತಿಯ ಕಾರಣದಿಂದ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗೋಕರ್ಣದ ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ಅರ್ಚಕರು ತಡೆದಾಗ ನಮ್ಮ ತಂದೆಯವರು ಅರ್ಚಕರೊಡನೆ ಜಗಳಕ್ಕೇ ನಿಂತಿದ್ದು ನನಗೆ ನೆನಪಿದೆ. ಇಂಥ ಸನ್ನಿವೇಶಗಳಿಂದಾಗಿ ‘ದೇವಾಲಯಗಳಿಗೆ ಹೋಗದಿದ್ದರೆ ಆಗುವ ನಷ್ಟವೇನು?’ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಅವುಗಳಿಂದ ದೂರವೇ ಉಳಿದೆ. ಹಾಗೆಂದು ನಾಸ್ತಿಕನೇನಲ್ಲ. ನಾನು ದೇವರನ್ನು ಆರಾಧಿಸುವ ಕ್ರಮ-ಪರಿಕಲ್ಪನೆಗಳು ಬೇರೆ ಅಷ್ಟೇ. ಮನುಷ್ಯನನ್ನು ಮನುಷ್ಯನಾಗಿ ನೋಡದ, ಮನುಷ್ಯ ಮನುಷ್ಯರ ನಡುವೆ ಭೇದ ಕಲ್ಪಿಸುವ ಯಾವ ದೇವರು ಧರ್ಮದ ಕುರಿತಾಗಿಯೂ ನನ್ನ ದಿಕ್ಕಾರವೇ. ಸೌಹಾರ್ದತೆ-ಶಾಂತಿ – ಪ್ರೀತಿಯ ನೆಲೆಯ ಯಾವ ಧರ್ಮವೇ/ದೇವರೇ ಆದರೂ ನಾನು ಆತ್ಮಸಾಕ್ಷಿಯಾಗಿ ಆರಾಧಿಸುವೆ. ದೇವಾಲಯ ಪ್ರವೇಶ, ಕ್ಷೇತ್ರದರ್ಶನ ಇತ್ಯಾದಿ ನನಗೆ ನಂಬಿಕೆಯಿಲ್ಲ. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತದೆ? ಉತ್ತರ : ಸಾಂಸ್ಕೃತಿಕ ವಾತಾವರಣ ತಕ್ಕಮಟ್ಟಿಗೆ ಆಶಾದಾಯಕವಾಗಿಯೇ ಇದೆ ಅನಿಸುತ್ತದೆ. ಅಲ್ಲಿಯೂ ಆಗಾಗ ಪ್ರವೇಶ ಪಡೆಯುವ ರಾಜಕಾರಣ, ಸ್ವಜನಪಕ್ಷಪಾತ ಇತ್ಯಾದಿಗಳು ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದರೂ ಒಟ್ಟಾರೆಯಾಗಿ ಸಾಂಸ್ಕೃತಿಕ ವಾತಾವರಣ ಸಹನೀಯವಾಗಿದೆ ಎನ್ನಬಹುದು. ಪ್ರಶ್ನೆ: ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತದೆ. ಸಾಹಿತ್ಯ ವಲಯ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಮತ್ತೆ ಅದೇ ಪ್ರಶ್ನೆ. ಮತ ಧರ್ಮಗಳಿಗೆ ಸೇರಿದ, ಸೇರದ ಎಂಬ ಗುಂಪುಗಾರಿಕೆ, ಅಕಾಡೆಮಿ, ಸಾಹಿತ್ಯ ಪರಿಷತ್ತು, ಮತ್ತಿತರ ಸಾಹಿತ್ಯ ಸಂಘಟನೆಗಳಲ್ಲಿನ ಗದ್ದುಗೆಯ ಗುದ್ದಾಟ ಇತ್ಯಾದಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಅಸಹನೀಯವೆನಿಸುತ್ತದೆ. ಸಾಹಿತ್ಯದ ಓದು-ಬರಹಗಳು ಭಾವನಾತ್ಮಕವಾಗಿ ನಮ್ಮನ್ನು ಒಂದುಗೂಡಿಸಲು ವಿಫಲವಾದರೆ ಅದರಿಂದ ಶ್ರೀಸಾಮಾನ್ಯನಿಗಾಗುವ ಪ್ರಯೋಜನವಾದರೂ ಏನು? ಪ್ರಶ್ನೆ: ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ : ಅಂತರಾಷ್ಟ್ರೀಯ ಮಟ್ಟದ ಸ್ನೇಹ-ಬಾಂಧವ್ಯ, ಸ್ವಚ್ಛತೆಯ ಕುರಿತಾದ ರಾಷ್ಟ್ರಮಟ್ಟದ ಅರಿವು ಮುಂತಾದ ಸಂಗತಿಗಳು ಹೆಮ್ಮೆಯೆನಿಸುವಂತಿವೆ. ದಿನದಿಂದ ದಿನಕ್ಕೆ ಗಾಬರಿ ಹುಟ್ಟಿಸುವಂತೆ ಬೆಳೆಯುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ತೀವ್ರ ಸಮಸ್ಯೆ, ರೈತರು ಮತ್ತು ಮದ್ಯಮ ವರ್ಗದ ಜನಸಾಮಾನ್ಯರ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದೊಂದಿಗೆ ಪ್ರಬಲ ವಿರೋಧಿ ಪಕ್ಷವೂ ಸಕ್ರಿಯವಾಗಿರಬೇಕಾಗುತ್ತದೆ. ರಾಜ್ಯದಲ್ಲಿಯೇ ಇರಲಿ ರಾಷ್ಟ್ರಮಟ್ಟದಲ್ಲಿಯೇ ಇರಲಿ ಧ್ವನಿ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ಸ್ಥಿತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಭವಿಷತ್ತಿನಲ್ಲಿ ಸಾಧ್ಯವೆ? ಸಂವಿಧಾನ ನಿಷ್ಠೆಯ ಕುರಿತು ಗಂಭೀರ ಚಿಂತನೆ ತುರ್ತು ಅಗತ್ಯವೆನಿಸುತ್ತದೆ. ಪ್ರಶ್ನೆ: ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯ ರಚನೆ ಆಶಾದಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತರುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಬೆಳೆಯುವಂತೆ ತೋರುತ್ತಿಲ್ಲ. ಸಾಹಿತ್ಯ ವೇದಿಕೆಗಳು, ಸಂಘ-ಸಂಸ್ಥೆಗಳು ಯುವ ಓದುಗರನ್ನು ಹೆಚ್ಚಿಸುವ ಕುರಿತು ಯೋಜನೆಗಳನ್ನು ರೂಪಿಸಬೇಕು, ಪ್ರಯತ್ನಿಸಬೇಕು. ವೈಯುಕ್ತಿಕವಾಗಿ ಇನ್ನಷ್ಟು ಬರಹಗಳಲ್ಲಿ ತೊಡಗಿಕೊಳ್ಳುವ, ಪ್ರಕಟನೆಯ ಕನಸುಗಳಿವೆ ನೋಡಬೇಕು. ಪ್ರಶ್ನೆ: ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕಾಡಿದ ಕತೆಗಾರ ಸಾಹಿತಿ ಯಾರು? ಕನ್ನಡದಲ್ಲಿ ಬಹುತೇಕ ಎಲ್ಲ ಹಿರಿಯ ಸಾಹಿತಿಗಳೂ ಕವಿಗಳೂ ನನ್ನ ನೆಚ್ಚಿನವರೇ. ದೇವನೂರು, ತೇಜಸ್ವಿ, ಕುಂ. ವೀರಭದ್ರಪ್ಪ ನನ್ನ ಬಹುಮೆಚ್ಚಿನ ಲೇಖಕರು. ಮುಖ್ಯವಾಗಿ ಕಥೆ ಬರೆಯುವ ನಿಟ್ಟಿನಲ್ಲಿ ಕುಂ.ವೀ. ನನ್ನ ಇಷ್ಟದ ಮತ್ತು ನನ್ನನ್ನು ತುಂಬ ಪ್ರಭಾವಿಸಿದ ಕತೆಗಾರ. ಇಂಗ್ಲೀಷ ಸಾಹಿತ್ಯ ಶ್ರದ್ಧೆಯ ಓದು ನನ್ನದಲ್ಲ ಹೆಮಿಂಗ್ವೇ, ಗಾರ್ಕಿ ಟಾಲ್ಸ್ಟಾಯ್ರಂಥವರ ಪ್ರಾಸಂಗಿಕ ಬೀಸು ಓದು ಮಾತ್ರವೇ ನನಗೆ ಸಾಧ್ಯವಾಗಿದೆ. ಯಾವ ಬಗೆಯ ಪ್ರಭಾವಕ್ಕೆ ದಕ್ಕುವ ಲೇಖಕರನ್ನು ಹೆಸರಿಸಲಾರೆ ಕ್ಷಮಿಸಿ. …. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿಕ್ಸೂಚಿ
ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ ಜಯಶ್ರೀ.ಜೆ.ಅಬ್ಬಿಗೇರಿ ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದೀನಿ ಯಾವುದು ಕ್ಲಿಕ್ ಆಗುತ್ತೋ ಗೊತ್ತಿಲ್ಲ. ತರಾತುರಿಯಲ್ಲಿ ಓದಿ ಮುಗಿಸಬೇಕು ಎಂದುಕೊಳ್ಳುತ್ತಿರುವಾಗ ಪಕ್ಕದ ಮನೆಯ ಟಿವಿ ವ್ಯಾಲ್ಯೂಮ್ ಕಿವಿಗಡಚಿಕ್ಕುವಂತೆನಿಸಿ ಅಸಾಧ್ಯ ಸಿಟ್ಟು ಉಕ್ಕಿ ಬರುತ್ತದೆ. ನೆರೆಯ ಹುಡುಗರು ತಮ್ಮ ಪರೀಕ್ಷೆಗಳು ಮುಗಿದಿವೆ ಎಂಬ ಖುಷಿಯಲ್ಲಿ ಮನೆಯ ಮುಂದೆ ಜೋರಾಗಿ ಕಿರುಚುತ್ತ ಆಡುತ್ತಿವೆ. ಹೇಗೆ ಇವರಿಗೆಲ್ಲ ಬುದ್ಧಿ ಹೇಳಿ ನಾನು ಏಕಾಗ್ರತೆಯಿಂದ ಓದುವುದು? ಹೇಗೆ ?ಅದರಲ್ಲೂ ಇಷ್ಟು ದಿನ ಮನೆಯಲ್ಲಿ ಸ್ವಂತ ಕೋಣೆಯಲ್ಲಿ ಓದಿ ರೂಢಿಯಿದ್ದವರು ಹಾಸ್ಟೆಲ್ಗೆ ಪಿಜಿಗಳಿಗೆ ಸೇರ್ಪಡೆಯಾದರೆ ಮುಗಿದೇ ಹೋಯ್ತು. ನಮ್ಮ ಗೋಳು ಕೇಳುವವರಾರೂ ಇಲ್ಲ ಎಂದೆನಿಸಿಬಿಡುತ್ತದೆ. ಅತಿ ಹೆಚ್ಚು ಅಂಕ ಗಳಿಸಿದವರು ಇಂಥ ಹೊಂದಾಣಿಕೆಯ ತೊಂದರೆಗಳಿಂದ ಓದಿನಲ್ಲಿ ಹಿಂದೆ ಬೀಳುವ ಪ್ರಸಂಗಗಳು ಇಲ್ಲದಿಲ್ಲ. ಬಸ್ನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ತೂರಿ ಬರುವ ಗಾಳಿ ನಿಮಗೆ ಆಗಿ ಬರುವುದಿಲ್ಲ. ಮುಂದೆ ಕುಳಿತ ನಿಮ್ಮ ಗೆಳೆಯ ಮುದ್ದಾಂ ಕಿಟಕಿ ತೆರೆದಿಡುತ್ತಾನೆ. ಸಿನಿಮಾ ಥೇಟರ್ನಲ್ಲಿ ನಿಮ್ಮ ಮುಂದೆ ಕುಳಿತ ವ್ಯಕ್ತಿಯ ತಲೆ ಅಡ್ಡ ಬರುತ್ತಿದೆ. ನಿಮ್ಮ ಪಕ್ಕಕ್ಕೆ ನಿಂತು ಬೀಡಿ ಸಿಗರೇಟ್ ಸೇದುವವರನ್ನು, ರೈಲ್ವೇ ಪಯಣದಲ್ಲಿ ನಿಮಗೆ ತಲೆ ಸುತ್ತು ತರಿಸುವ ಗುಟಕಾ ವಾಸನೆ, ಪಾನ್ ಜಗಿದು ಉಗಿಯುವರನ್ನು, ಮಲಗುವ ಸಮಯವಾದರೂ ಏರು ದನಿಯಲ್ಲಿ ಮಾತನಾಡುವವರನ್ನು ಕಂಡಾಗ ಮೈ ಉರಿಯುತ್ತದೆ. ಇಂಥ ತೊಂದರೆಗಳ ಸಾಲು ಸಾಲು ಪಟ್ಟಿಯನ್ನು ಮಾಡಬಹುದು.ನೋಡೋಕೆ ಕೇಳೋಕೆ ಇವೆಲ್ಲ ತೀರ ಸಣ್ಣ ಪುಟ್ಟ ತೊಂದರೆಗಳೆನಿಸಿದರೂ ಇವು ಹೆಚ್ಚು ಸಮಯ ಮುಂದುವರೆದರೆ ಆಗುವ ತೊಂದರೆ ಮತ್ತು ಹಾನಿ ಅಷ್ಟಿಷ್ಟಲ್ಲ. ಬಹುತೇಕ ಳಷ್ಟು ಸಲ ಈ ತೊಂದರೆಗಳನ್ನು ಬಾಯಿ ಮುಚ್ಚಿ ಸಹಿಸಿಕೊಂಡು ಬಿಡುತ್ತೀರಿ.ನೀವು ಹೀಗೆ ಈ ತೊಂದರೆಗಳನ್ನು ಸಹಿಸುವ ಅಗತ್ಯವೇ ಇಲ್ಲ. ತೊಂದರೆ ಕೊಡುವವರು ತಮ್ಮ ಚಾಳಿಯನ್ನು ರಾಜಾರೋಷವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ಇಂಥ ತೊಂದರೆಗಳಿಂದ ಬಚಾವಾಗುವುದು ಹೇಗೆ ಅಂತ ಅನಿಸ್ತಿದೆಯಲ್ಲವೇ? ಹಾಗಾದರೆ ಮುಂದಕ್ಕೆ ಓದಿ. ಭಯ ಬಿಡಿ ತೊಂದರೆ ಕೊಡುವವರಿಗೆ ಮುಕ್ತವಾಗಿ ನಿಮ್ಮಿಂದ ತೊಂದರೆ ಆಗ್ತಿದೆ ಎಂದು ಹೇಳೋದಕ್ಕೆ ತುಂಬಾ ಭಯ ಆಗುತ್ತಿದೆಯೇ? ನಿಮ್ಮ ಮೇಲೆ ನಡೆದು ಹೋಗಲು ಜನಗಳಿಗೆ ಬೇಕಾಗಿಲ್ಲ. ನೀವು ಮಲಗಲು ಇಚ್ಛಿಸುವವರೆಗೆ ತೊಂದರೆ ಕೊಡಲು ದಾರಿ ಮಾಡಿ ಕೊಡಬೇಡಿ. ರಾಮಕೃಷ್ಣ ಪರಮಹಂಸರು ಹೇಳಿದಂತೆ ಮನವೆಂಬ ಆನೆಗೆ ಬುದ್ಧಿಯೇ ಅಂಕುಶ. ಬುದ್ಧಿಯನ್ನು ಬಳಸಿ ನಯವಾಗಿ ಮತ್ತು ನೇರವಾಗಿ ಮೆಲುದನಿಯಲ್ಲಿ ಹೇಳಿ. ನಿಮ್ಮ ಸೌಜನ್ಯಪೂರಿತ ನಡೆಗೆ ಪ್ರತಿಯಾಗಿ ತೊಂದರೆಯ ಕಿರಕಿರಿ ನಿಲ್ಲುವುದು. ದಯವಿಟ್ಟು, ಸ್ವಲ್ಪ, ಅನ್ನುವ ಶಬ್ದಗಳನ್ನು ಬಳಸಿ. ಇವು ಖಂಡಿತ ಪರಿಣಾಮ ಬೀರುವವು. ಮುಂದಿನ ವ್ಯಕ್ತಿ ಅಪರಿಚಿತನಾಗಿದ್ದರೆ ಹೀಗೆ ಹೇಳುವಾಗ ತುಟಿಯ ಮೇಲೆ ಸ್ನೇಹಪೂರ್ವಕವಾದ ನಗೆಯಿದ್ದರೆ ಉತ್ತಮ. ಮಾತುಗಾರಿಕೆ ಎಂಥ ಸಮಸ್ಯೆಯನ್ನೂ ಬಗೆಹರಿಸಬಲ್ಲದು. ಆದ್ದರಿಂದ ಸಂವಹನ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸಿ. ಇತರರಿಗೆ ಕಾಯಬೇಡಿ ನಿಮಗಾಗುತ್ತಿರುವ ತೊಂದರೆಯನ್ನು ಯಾರೋ ಬಂದು ಬಗೆಹರಿಸುತ್ತಾರೆ ಅಂತ ಕಾಯುತ್ತ ಕುಳಿತುಕೊಳ್ಳಬೇಡಿ. ಗಾಂಧೀಜಿಯವರು ಹೇಳಿದಂತೆ ಸ್ವ ಸಹಾಯವೇ ಅತ್ಯುತ್ತಮ ಸಹಾಯ. ಹಲವು ಬಾರಿ ನಿಮಗೆ ತೊಂದರೆ ಆಗುತ್ತಿದೆ ಅಂತ ಮುಂದಿನವರಿಗೆ ಗೊತ್ತಿಲ್ಲದೇನೂ ಇರಬಹುದು. ನೀವೇ ಸ್ವತಃ ಮುಂದುವರೆದು ತೊಂದರೆ ನಿಲ್ಲಿಸಲು ಹೇಳಿ. ಹೀಗೆ ಹೇಳಿಕೊಳ್ಳುವುದರಿಂದ ಅವರು ತಿದ್ದಿಕೊಳ್ಳುತ್ತಾರೆ. ನಮ್ಮ ಅತ್ಯಂತ ಕಷ್ಟ ಅನುಭವಗಳಿಂದ ನಾವು ಸಾಕಷ್ಟು ಕಲಿಯುತ್ತೇವೆ ಎನ್ನುವುದು ಸತ್ಯ ಹಾಗಂತ ಇಂಥ ಕಿರಿಕಿರಿಗಳನ್ನು ಸಹಿಸುವುದು ತರವಲ್ಲ. ನೀವು ಹೊಂದಿರುವ ಜ್ಞಾನ ಮತ್ತು ಅನುಭವಗಳನ್ನು ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ನೀವು ತಾಳ್ಮೆಯಿಂದ ಹೇಳಿದರೂ ಆ ಕಡೆಯಿಂದ ಒರಟಾದ ಮಾತಿನ ಪ್ರತಿಕ್ರಿಯೆ ಬರಬಹುದು.ತಾಳ್ಮೆಯು ಸಂತೋಷದ ಬೀಗದ ಕೈ.ಆತುರವು ಸಂಕಟದ ಬೀಗದ ಕೈ. ಎಂಬುದನ್ನು ಮನದಟ್ಟು ಮಾಡಿಕೊಳ್ಳಿ..ನೀವು ತಾಳ್ಮೆ ಕಳೆದುಕೊಂಡು ವರ್ತಿಸಿದರೆ ಜಗಳ ತಪ್ಪಿದ್ದಲ್ಲ.ಎಚ್ಚರಿಕೆ ವಹಿಸಿ. ಬೇಡ ಹೊಂದಾಣಿಕೆ. ಹೊಂದಾಣಿಕೆಯೇ ಜಾಣತನ ಅಂತಾರೆ ಅಂಥದ್ದರಲ್ಲಿ ಹೊಂದಾಣಿಕೆ ಬೇಡ ಅಂದರೆ ಹೇಗೆ? ಅಂತಿದ್ದೀರಾ! ನಿಮ್ಮ ಏಳ್ಗೆಗೆ ಅಡೆತಡೆಯಾಗುವ ಗೆಳೆಯ/ತಿಯರ ನಡುವಳಿಕೆಗಳ ಜೊತೆಗೆ ಹೊಂದಾಣಿಕೆ ಬೇಡವೇ ಬೇಡ. ನೀವು ಮುಖ್ಯವಾದ ಕೆಲಸದಲ್ಲಿರುವಾಗ ನಿಮ್ಮನ್ನು ತಮ್ಮ ಅಮುಖ್ಯ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸುವವರ ಜೊತೆಗೆ ರಾಜಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತೊಂದರೆಯನ್ನು ಸಹಿಸಿಕೊಳ್ಳಬೇಡಿ. ನಿಮ್ಮ ಬುದ್ಧಿಯೇ ನಿಮಗೆ ಗುರು ಎಂಬ ವಿಲಿಯಮ್ ಷೇಕ್ಸ್ ಪಿಯರ್ ನ ಸೊಗಸಾದ ನುಡಿಯಂತೆ ಚಾಣಾಕ್ಷತನದಿಂದ ಸ್ನೇಹಿತರಿಗೆ ತಿಳಿ ಹೇಳಿ.ಅವರಿಂದ ನಿಮಗೆ ತೊಂದರೆಯಾಗುತ್ತಿದೆ ಎಂದು ಅರ್ಥೈಸಿಕೊಳ್ಳುವಂತೆ ಹೇಳಿ. ನಿಮ್ಮ ಬುದ್ಧಿಮಾತು ಅವರು ತಪ್ಪು ತಿದ್ದಿಕೊಳ್ಳುವಂತಿರಬೇಕು. ಮುಖಕ್ಕೆ ಹೊಡೆದಂತೆ ಹೇಳಿ ಮುಖ ಕಟ್ಟಿಕೊಳ್ಳಬೇಡಿ. ನಿಂದಿಸಿ ನುಡಿಯದಿರಿ ನಿಮಗೆ ತೀರಾ ಆಪ್ತರಾದವರು ನೆಂಟರಿಷ್ಟರು ತಮಗೆ ಗೊತ್ತಿಲ್ಲದಂತೆ ತೊಂದರೆ ಕೊಡುವವರ ಪಟ್ಟಿಯಲ್ಲಿರಬಹುದು. ಅಂಥವರಿಗೆ ಎಲ್ಲರೆದುರು ನೀವು ಹೀಗೆ ನಡೆದುಕೊಳ್ಳುತ್ತಿರುವುದು ನನಗೆ ತುಂಬಾ ಕಿರಿಕಿರಿ ಆಗುತ್ತಿದೆ. ನನಗೆ ಸತಾಯಿಸಬೇಡಿ ಅಂತ ಜೋರಾಗಿ ಹೇಳಬೇಡಿ. ನಿಂದಿಸಿ ನುಡಿಯದಿರಿ ಯಾರನು. ನಿಂದನೆ ಮುಜುಗರಕ್ಕೆ ಎಡೆಮಾಡಿಕೊಡುವುದಲ್ಲದೇ ಮನಸ್ಸನ್ನು ಒಡೆಯುತ್ತದೆ. ಇದು ಶಾಶ್ವತವಾಗಿ ಸಂಬಂಧವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಬಹುದು. ಆದ್ದರಿಂದ ನೀವಿಬ್ಬರೇ ಇದ್ದಾಗ ಅವರ ಯಾವ ನಡುವಳಿಕೆ ನಿಮಗೆ ತೊಂದರೆ ಆಗುತ್ತಿದೆಯೋ ಸ್ಪಷ್ಟವಾಗಿ ಹೇಳಿಬಿಡಿ. ಇರಲಿ ಕೊಂಚ ಹೊಂದಾಣಿಕೆ ಬಿಜಿ ದಿನಚರಿಯ ಜೀವನದಲ್ಲಿ ಇಂಥ ತೊಂದರೆಗಳ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ನೆಮ್ಮದಿ ಹಾಳಾಗುತ್ತದೆ. ಕೆಲಸದ ನಡುವೆ ಇವು ಅಡ್ಡ ಗೋಡೆಗಳಾಗಿ ದೊಡ್ಡ ಕಂದಕಗಳಾಗಿ ನಿಂತು ಬಿಡುವ ಸಾಧ್ಯತೆಗಳೂ ಇಲ್ಲದಿಲ್ಲ.ಕೆಲ ಸಲ ತೊಂದರೆಯಾಗುತ್ತಿದೆ ಅಂತ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ ಅನ್ನುವ ಸಂದಿಗ್ಧ ಪರಿಸ್ಥಿತಿ ಬರುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲೂ ಕ್ಯಾತೆ ತೆಗೆಯಲು ನೋಡಬೇಡಿ. ಹೊಂದಾಣಿಕೆಯೇ ಜೀವನ ಎಂದಿದ್ದಾರೆ ಬಲ್ಲವರು. ಹೊಂದಾಣಿಕೆಯ ಕೊರತೆ ಸಹಜವಾದರೂ ಅದು ಕೆಲವು ಸಲ ದೊಡ್ಡ ಬಿರುಕು ಮೂಡಿಸುತ್ತದೆ. ‘ಇಡೀ ಜಗತ್ತು ಹೊಂದಾಣಿಕೆಯ ಸುತ್ತ ಗಿರಕಿ ಹೊಡಿಯುತ್ತದೆ’ ಎಂದು ಪ್ರಾಜ್ಞವಾಗಿ ಹೇಳಿದ್ದಾನೆ ಫ್ರೆಂಚ್ ಕವಿ ಚಾಲ್ಸ್ ð ಬೋದಿಲೇರ್ಮಾನವ ನೆಮ್ಮದಿ ಬಯಸುವ ಜೀವಿ. ಸ್ನೇಹ ಜೀವಿ ಕೂಡ.. ಸಂಬಂಧಗಳ ಬಲೆಯಲ್ಲಿ ತೀವ್ರ ವಿಶ್ವಾಸವಿಟ್ಟುಕೊಂಡವನು. ನನಗೆ ತೊಂದರೆ ಕೊಡುತ್ತಿದ್ದೀರಿ ಎಂದು ಭಾವುಕರಾಗಿ ಕಿರುಚದೇ ಸಹಜವಾಗಿ ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ.ತೊಂದರೆಗಳ ಲೋಕದ ಚಿಂತೆಯನ್ನು ದೂರ ಸರಿಸಿ ಉತ್ತಮ ಭವಿಷ್ಯಕ್ಕಾಗಿ ಶಾಂತಿಯಿಂದ ವರ್ತಮಾನದಲ್ಲಿ ಜೀವಿಸೋಣ. ಬದುಕನ್ನು ಬದಲಿಸಿಕೊಳ್ಳೋಣ ಅಲ್ಲವೇ? **************
ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ. ತೇರೂವೋ ಮೂಲ ಗೌರಿ ದೇಶಪಾಂಡೆ ಕನ್ನಡಕ್ಕೆ- ಚಂದ್ರಕಾಂತ ಪೋಲಳೆ ಬೆಲೆ-೮೦ ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. ಅವರ ಸಲಹೆ ಯಾವತ್ತೂ ತಪ್ಪಾಗಿದೆ ಎನಿಸಿದ್ದೇ ಇಲ್ಲ ನನಗೆ. ತೆರೂವೋ ಕಳಿಸಿದಾಗಲೂ ಅಷ್ಟೇ. ಅದರ ಜೊತೆ ಇನ್ನೂ ನಾಲ್ಕೈದು ಪುಸ್ತಕಗಳನ್ನು ಕಳುಹಿಸಿದ್ದರೂ ‘ಮೊದಲು ತೆರೂವೋ ಓದಿ ನಂತರ ಬೇರೆಯದ್ದನ್ನು ಓದಿ’ ಎಂದೇ ಕಳುಹಿಸಿದ್ದರು. ಅವರು ಹೇಳಿರುವ ಕಾರಣಕ್ಕಾಗಿಯೇ ಮೊದಲು ತೆರೂವೋ ತೆರೆದವಳು ಕಕ್ಕಾಬಿಕ್ಕಿಯಾಗಿದ್ದೆ. ನಾಗೇಶ್ ಯಾಕೆ ಈ ಪುಸ್ತಕ ಸಜೆಸ್ಟ್ ಮಾಡಿದ್ದಾರೆ ಎಂಬುದೇ ಅರ್ಥವಾಗದೇ ಅದೆಷ್ಟು ಕಂಗಾಲಾಗಿದ್ದೆ ಎಂದರೆ ನಾನೇನು ಓದುತ್ತಿದ್ದೇನೆ ಎಂಬುದೇ ನನಗೆ ಅರ್ಥವಾಗುವಂತಿರಲಿಲ್ಲ. ಅದೇನು ‘ಜಿ’? ಅದೇನು ತಿಂಗಳುಗಳ ಹೆಸರುಗಳು? ಅದ್ಯಾಕೆ ತೆರೂವೋಗೆ ಪತ್ರ ಬರೆಯಬೇಕು? ಮಧ್ಯೆ ಬರುವ ಈ ಜಿ ಆಕೆಗೆ ಏನಾಗಬೇಕು? ಯಾವುದೂ ಅರ್ಥವಾಗದೆ ಅಯೋಮಯದ ಓದಾಯ್ತಲ್ಲ ಇದು ಎಂದುಕೊಂಡಿದ್ದೆ. ಆದರೂ ನಾಗೇಶ್ ಓದಲು ಹೇಳಿದ್ದಾರೆ ಎಂದರೆ ಅದಕ್ಕೇನೋ ಅರ್ಥವಿದ್ದಿರಲೇಬಹುದು ಎಂದುಕೊಳ್ಳುತ್ತ ಮತ್ತೊಮ್ಮೆ ಓದಿದೆ, ಬರೀ ತೇರೂವೋಗೆ ಬರೆದ ಪತ್ರಗಳನ್ನು, ನಂತರ ಪ್ರಿಯ ಜೆ ಎಂದಿದ್ದದ್ದನ್ನು, ಮತ್ತೊಮ್ಮೆ ಬರಿದೇ ತಿಂಗಳುಗಳ ಹೆಸರಿರುವುದನ್ನು, ಇನ್ನೊಮ್ಮೆ ಅವಳ ಮಾತುಗಳನ್ನು ಓದಿಕೊಂಡೆ. ಆಗ ಶುರುವಾಯ್ತು ನೋಡಿ ಕ್ರಶ್. ಕಾದಂಬರಿಯ ಮೇಲಲ್ಲ, ಕಥಾನಾಯಕಿ ಹೇಳುವ ತೆರೂವೊ ಎಂಬ ಜಪಾನಿನ ಐವತ್ತು ವರ್ಷದ ವ್ಯಕ್ತಿಯ ಮೇಲೆ, ಅದರ ಜೊತೆಜೊತೆಗೇ ಕಥಾನಾಯಕಿಯ ನೇರವಾದ ಮಾತುಗಳ ಮೇಲೆ, ಪ್ರೀತಿಸಿದ್ದನ್ನು ಹಪಾಹಪಿಯಿಂದ ಪಡೆದುಕೊಳ್ಳುವುದರ ಮೇಲೆ, ಮತ್ತು ಪ್ರೀತಿಸಿದ್ದರೂ ಆ ಪ್ರೀತಿ ತನ್ನದಲ್ಲ ಎಂದು ಆಕೆ ಎಚ್ಚರಿಕೆ ವಹಿಸಿದ ರೀತಿಯ ಮೇಲೆ. ಇಡಿ ಕಾದಂಬರಿ ಮೊದಲ ಓದಿಗೆ ತಲೆಬುಡವೂ ಅರ್ಥವಾಗುವುದಿಲ್ಲ ಎಂಬುದು ನಿಜವಾದರೂ ಎರಡನೆಯ ಓದಿನ ನಂತರ ಆ ಪುಸ್ತಕ ಇಷ್ಟವಾಗುವುದರ ಜೊತೆಗೆ ತೆರೂವೋ ಮೇಲೆ ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಯಾಕೋ ನನಗೆ ಜಪಾನಿಯರ ಮೇಲೆ ಮೊದಲಿನಿಂದಲೂ ಪೂರ್ವಾಗ್ರಹ. ಬಹುಶಃ ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಬಾಂಗ್ಲಾ ದೇಶದ ಮೇಲೆ ಹಾಗೂ ಆಗಿನ ಬರ್ಮಾ ಎಂಬ ಹೆಸರಿನ ಈಗ ಮಾಯನ್ಮಾರ್ ಎಂದು ಕರೆಯಿಸಿಕೊಳ್ಳುವ ಭೂಭಾಗದ ಮೇಲೆ ನಡೆಸಿದ ಪೈಶಾಚಿಕ ಕೃತ್ಯ ಯಾಕೋ ಮತ್ತೆ ಮತ್ತೆ ಕಣ್ಣೆದುರಿಗೆ ರುದ್ರನರ್ತನವನ್ನಾಡಿದಂತಾಗುತ್ತದೆ. ಇತಿಹಾಸದ ಓದು ಜಾಸ್ತಿಯಾದರೆ ಇಂತಹುದ್ದೊಂದು ಪೂರ್ವಾಗ್ರಹ ತಾನಾಗಿಯೇ ಮೂಡುತ್ತದೆಯೇ? ಕೆಲವು ದಿನಗಳ ಹಿಂದೆ ವಿಕಿ ಕ್ರುಕ್ ಬರೆದ ‘ಎಲಿಫಂಟ್ ಕಂಪನಿ’ ಓದುತ್ತಿದ್ದೆ. ಅಲ್ಲಿ ಜಪಾನಿಯರು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ಭೀಕರ ಅನುಭವ ದಾಖಲಾಗಿತ್ತು. ಯುದ್ಧ ಕೈದಿಗಳನ್ನು ಮರಕ್ಕೆ ಕಟ್ಟಿಹಾಕಿ ಹರಿತವಾದ ಕತ್ತಿಯಿಂದ ಉದ್ದಕ್ಕೆ ಸೀಳಿಬಿಡುತ್ತಿದ್ದರಂತೆ. ನೆತ್ತಿಯಿಂದ ನಡುವೆ ಎರಡು ಭಾಗ ಮಾಡಿ ಎಸೆಯುತ್ತಿದರಂತೆ. ಸೆರೆ ಸಿಕ್ಕ ವಿರೋಧಿ ಸೈನ್ಯದ ಆನೆಗಳನ್ನು ಕೂಡ ಬಿಡದೆ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಚಿತ್ರ ಈ ಪುಸ್ತಕ ಓದಿದ ನಂತರ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಾಗಿ ಜಪಾನಿಗಳು ಎಂದ ತಕ್ಷಣ ಪುಟ್ಟ ಕಣ್ಣಿನ, ಚಂದದ ನಗುವಿನ, ಕುಳ್ಳಗಿನ ಜನ ನೆನಪಾಗುವಂತೆಯೇ ಈ ಕ್ರೂರತನದ ಚಿತ್ರಣವೂ ಅದರ ಜೊತೆ ಜೊತೆಗೇ ನೆನಪಾಗಿ ಬಿಡುತ್ತದೆ. ಆದರೆ ತೆರೂವೋ ಓದಿದ ನಂತರ ನನ್ನ ಮನದೊಳಗೆ ಮೂಡಿದ್ದ ಜಪಾನಿಯರ ಚಿತ್ರ ಒಂದಿಷ್ಟು ಪಲ್ಲಟವಾಗಿ ಒಂದಿಷ್ಟು ಅಲ್ಲಲ್ಲ ತುಸು ಹೆಚ್ಚೇ ಎನ್ನಿಸುವಷ್ಟು ಪ್ರೇಮಮಯವಾದ ಒಂದು ಚಿತ್ರ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ. ಬಹಳಷ್ಟು ಸಲ ನನ್ನನ್ನು ನಾನೇ ಕೇಳಿಕೊಳ್ಳುವುದಿದೆ. ಈ ಪ್ರೀತಿ ಪ್ರೇಮವೆಲ್ಲ ಯಾವತ್ತಾದರೂ ಹೇಳಿಕೇಳಿ ಹುಟ್ಟುತ್ತವೆಯೇ? ‘ಒಬ್ಬ ಇಷ್ಟವಾದ’ ಎಂದು ಹೆಣ್ಣು ಹೇಳುವುದಕ್ಕೆ ಅದೆಷ್ಟು ಒದ್ದಾಡಬೇಕು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ, ಈ ಕ್ಷಣಕ್ಕೂ ಅದು ಅಸಾಧ್ಯವೇ. ನಾವು ತೀರಾ ಮುಂದುವರಿದಿದ್ದೇವೆ ಎಂದುಕೊಂಡ ಈ ಜಮಾನಾದಲ್ಲೂ ‘ಆತ ಇಷ್ಟವಾದ’ ಎಂದು ಬಾಯಿ ಮಾತಿಗೂ ಹೇಳುವುದು ಅಪರಾಧವೇ ಆಗಿದೆ. ಹಾಗೇನಾದರೂ ಹೆಣ್ಣೊಬ್ಬಳು ಹೇಳಿ ಬಿಟ್ಟರೆ ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ. ನನ್ನ ಗೆಳತಿಯೊಬ್ಬಳು ಒಬ್ಬನನ್ನು ಇಷ್ಟಪಟ್ಟು, ಅದನ್ನು ಆತನ ಬಳಿ ಮುಚ್ಚುಮರೆ ಇಲ್ಲದೇ ಹೇಳಿಕೊಂಡು ಒದ್ದಾಡಿದ ಪರಿಯನ್ನು ತೀರಾ ಹತ್ತಿರದಿಂದ ನೊಡಿದ್ದೇನೆ. ಈ ಸಮಾಜ ರೀತಿ ರಿವಾಜುಗಳಿಂದಷ್ಟೇ ಅಲ್ಲ, ಅದು ಕಟ್ಟಳೆಗಳಿಂದ ತನ್ನನ್ನು ತಾನೇ ಬಿಗಿದುಕೊಂಡ ಬಂಧನ. ಹೀಗಾಗಿ ಯಾವ ಕಾರಣಕ್ಕೂ ಹೆಣ್ಣು ತನ್ನೊಳಗಣ ಪ್ರೇಮವನ್ನು ಬಿಚ್ಚಿಡುವಂತೆಯೇ ಇಲ್ಲ ಎಂಬುದು ಹಲವಾರು ಸಲ ಸಾಬೀತಾಗಿದೆ. ಹೆಣ್ಣು ಪ್ರೀತಿಸುವುದನ್ನು ಸಮಾಜ ಒಪ್ಪಿಕೊಳ್ಳಬಹುದು. ಆದರೆ ತಾನಾಗಿಯೇ ಮುಂದುವರೆದು ಪ್ರೀತಿಸುತ್ತೇನೆ ಎಂದರೆ ಅದನ್ನು ಯಾರಿಗಾಗಿ ಹೇಳಿದ್ದಳೋ ಆ ಹುಡುಗನೂ ಆಡಿಕೊಳ್ಳುವುದೆಂದರೆ ಅದೊಂದು ಹಿಂಸಾರತಿಯೆಂದೇ ನನಗೆ ಭಾಸವಾಗುತ್ತದೆ. ಪ್ರೀತಿಸಿ ಮದುವೆಯಾದವರನ್ನು ಕೇಳಿ ನೋಡಿ. ಅದರಲ್ಲೂ ಹುಡುಗಿಯೇ ಮುಂದುವರೆದು ಪ್ರೀತಿಸುತ್ತೇನೆ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಪ್ರೀತಿಸುವಾಗೇನೋ ಖುಷಿಯಿಂದಲೇ ಪ್ರೀತಿಸುತ್ತಾರೆ. ಮದುವೆಯಾಗಲೂ ಅಂಂತಹುದ್ದೇನೂ ತಕರಾರು ಕಾಡುವುದಿಲ್ಲ. ಆದರೆ ಸಂಸಾರ ನಡೆಸುವಾಗ ಏನಾದರೂ ಮಾತಿಗೆ ಮಾತು ಬೆಳೆದರೆ ‘ನಂಗೊತ್ತಿಲ್ವಾ ನೀನೇನು ಅಂತ? ಯಾವ ಹೆಣ್ಣು ನಾಚಿಕೆ ಬಿಟ್ಟು ಪ್ರೀತಿಸ್ತೇನೆ ಅಂತಾ ಬರ್ತಾಳೆ? ನೀನಾಗೇ ಮೊದಲು ಪ್ರಪೋಸ್ ಮಾಡಿದಾಗಲೇ ನಾನು ಎಚ್ಚರಿಕೆ ವಹಿಸಬೇಕಾಗಿತ್ತು.’ ಎನ್ನುವ ತರಹದ ಮಾತುಗಳು ಬರುವ ಬಗ್ಗೆ ಹಲವಾರು ಸ್ನೇಹಿತೆಯರು ಅಂತರಂಗದಲ್ಲಿ ತೋಡಿಕೊಂಡಿದ್ದಾರೆ. ಅಂದರೆ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಈ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದಿರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಕನಿಷ್ಟ ಅವಕಾಶವೂ ಇಲ್ಲ ಎಂದರ್ಥ. ಆದರೆ ಅಚ್ಚರಿಯೆಂದರೆ ಅದು ಭಾರತವಿರಲಿ ಅಥವಾ ಜಪಾನ್ ಇರಲಿ, ಬಹುಶಃ ಪೌರಾತ್ಯ ದೇಶಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಅಲ್ಪಸ್ವಲ್ಪವಾದರೂ ಧಾರಾಳತನ ದೊರಕಬಹುದೇನೋ. ಯಾಕೆಂದರೆ ಜಪಾನಿನಲ್ಲಿರುವಾಗ ನಮ್ಮ ಕಥಾ ನಾಯಕಿ ತನ್ನ ಗಂಡ ಜನಕನೊಡನೆ ಮೊದಲ ಸಲ ಪಾರ್ಟಿಗೆಂದು ಬಾರಿಗೆ ಹೋದಾಗ ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲ ಅಚ್ಚರಿ. ಅಲ್ಲಿ ಪ್ರತಿಯೊಬ್ಬ ಗಂಡಸಿಗೂ ತನ್ನದೇ ಫೆವರಿಟ್ ಬಾರ್ ಇರುತ್ತದೆ. ಅದರ ಜೊತೆಗೇ ಕಂಪನಿ ಕೊಡಲು ಮಾಮಾಸಾನ ಮತ್ತು ಪ್ರತಿಯೊಬ್ಬರಿಗೂ ಕುಡಿತದ ಖುಷಿ ಅನುಭವಿಸಲು, ಖಾಲಿಯಾದ ಮಧು ಸೀಸೆಯನ್ನು ತುಂಬಿಸಲು, ಅಪ್ಪಲು, ಮುದ್ದಿಸಲು ಪೆವರಿಟ್ ಕಂಪಾನಿಯನ್ ಕೂಡ ಇರುತ್ತಾಳೆ. ಆದರೆ ಅವರೇ ನೇರವಾಗಿ ಹೇಳುವಂತೆ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ದತಿ ಅಲ್ಲಿಲ್ಲ. ಹೆಣ್ಣೊಬ್ಬಳು ಬಾರಿಗೆ ಬರುವುದೇ ಅವರಿಗೆ ಹೊಸ ಆಲೋಚನೆ. ಆದರೆ ಅಲ್ಲಿಯ ಗಂಡಸೊಬ್ಬ ನಿಮ್ಮೊಂದಿಗೆ ಹರಟೆ ಹೊಡೆಯಲು ತುಂಬಾ ಉತ್ಸಾಹ ಬರುತ್ತದೆ. ಆದರೆ ನಾನು ಲಗ್ನವಾದರೆ ನಿಮ್ಮಂಥವರನ್ನು ಅಲ್ಲಪ್ಪ. ಹೆಂಡತಿ ಹೇಗಿರಬೇಕೆಂದರೆ, ಸಂತೋಷದಿಂದ ಮನೆಯಲ್ಲೇ ಕುಳಿತಿರಬೇಕು. ಎನ್ನುತ್ತಾನೆ. ಅಂದರೆ ಜಗತ್ತಿನ ಸುಖಗಳೆಲ್ಲವನ್ನೂ ಸೂರೆ ಹೊಡೆಯುವುದು ಗಂಡಸರ ಕೆಲಸ. ಆದರೆ ಹೆಣ್ಣು ಮಾತ್ರ ಮನೆಯೊಳಗೇ ಜಗದ ಸುಖವನ್ನೆಲ್ಲ ಕಲ್ಪಿಸಿಕೊಂಡು ಸಂತೃಪ್ತರಾಗಬೇಕು. ಆದರೆ ತೆರೂವೋದಲ್ಲಿ ಕಾದಂಬರಿಕಾರ್ತಿ ತುಂಬಾ ಮುಕ್ತವಾಗಿ ಹೆಣ್ಣಿನ ಬಾಯಿಂದ ಲೈಂಗಿಕ ಸ್ವಾತಂತ್ರ್ಯದ ಕುರಿತು ಹೇಳಿಸುತ್ತಾರೆ. ಕಾದಂಬರಿಯ ನಾಯಕಿಗೆ ಓಡಾಡುವ ಹೊಸ ಹೊಸ ದೇಶಗಳಿಗೆ ಪಯಣಿಸುವ ಮಹತ್ವಾಕಾಂಕ್ಷೆ. ಎಲ್ಲಿಗಾದರೂ ಪ್ರವಾಸ ಹೋಗುವುದನ್ನು ನಿರಾಕರಿಸುವುದೆಂದರೆ ಅದು ಮುದಿತನ ಆವರಿಸಿದಂತೆ ಎಂದೇ ಭಾವಿಸುವ ಸ್ವಚ್ಛಂದ ಮನಸ್ಸಿನ ಹೆಣ್ಣು. ಸ್ವತಃ ಆಕೆಯ ಗಂಡ ಒಂದೆಡೆ ತಮಾಷೆಯಿಂದ ‘ಅವಳು ಯಾರ ಯಾರ ಪ್ರೇಮದಲ್ಲಿ ಬಿದ್ದಿದ್ದಾಳೆ ಎಂಬ ಪಟ್ಟಿಯ ಆಧಾರದಿಂದ ಅವಳು ಯಾವ ಯಾವ ಸ್ಥಳ ನೋಡಿದ್ದಾಳೆಂದು ಪರೀಕ್ಷಿಸಬೇಕಾಗುತ್ತದೆ! ಟೋನಿ, ಯೊಹಾನ್, ಯೆಆಕಿಮ್ ಕುರ್ಟ, ಎಂಜೆಲೋ, ಪಾವುಲೋ, ನಿಕೋಣ, ಇವಾನ್. ಅಸಂಖ್ಯ ಪ್ರಾಣಿಗಳು ಅವರ ಜೊತೆಗೆ ಹಿಂದುಸ್ಥಾನದ ಜನರನ್ನು ಸೇರಿಸಿದರಂತೂ ನೋಡುವುದೇ ಬೇಡ! ಸಿಕ್ಕ ಸಿಕ್ಕವರನ್ನು ಪ್ರೀತಿಸುವ ಚಟವೇ ಬಿದ್ದಿದೆ ಅವಳಿಗೆ.’ ಎನ್ನುತ್ತಾನೆ. ಭಾರತೀಯ ಗಂಡನೊಬ್ಬ ಹೀಗೆ ಮುಕ್ತವಾಗಿ ಹೇಳಿಕೊಳ್ಳುವುದು ಅಸಂಭವವೇ ಆಗಿದ್ದಾಗಲೂ ಕೂಡ ಇದೊಂದು ತಮಾಷೆಯ ದಾಖಲಾತಿಯಾಗಿದ್ದರಿರಬಹುದೆಂದು ಕೊಂಡರೂ ಸ್ವತಃ ಕಥಾನಾಯಕಿ ಕೂಡ ಬೇರೆ ಬೇರೆ ದೇಶಗಳ ಗಂಡಸರ ಬಗ್ಗೆ ಮಾತನಾಡುತ್ತಾಳೆ. ಅದರಲ್ಲೂ ಆಕೆ ಜಪಾನಿನ ತೆರೂವೋ ಎನ್ನುವ ಯಾಮಾಹಾಸಾನನ ಪ್ರೀತಿಯಲ್ಲಿ ತೊಡಗಿಸಿ ಕೊಂಡಿದ್ದರ ಚಿತ್ರಣವಂತೂ ಅತ್ಯಪೂರ್ವ. ಅದಷ್ಟೇ ಆಗಿದ್ದರೆ ಅದೊಂದು ಅಪೂರ್ಣ ಚಿತ್ರಣವಾಗುತ್ತಿತ್ತು. ಅವಳು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ತೆರೂವೋ ಪ್ರೀತಿಸುವುದಿದೆಯಲ್ಲ ಅದು ಅತ್ಯದ್ಭುತ. ತೆರೂವೋ ಎನ್ನುವ ನಲವತ್ತೈದು ಐವತ್ತು ವರ್ಷದ ಮಧ್ಯವಯಸ್ಸನ್ನೂ ದಾಟಿದ ಪುರುಷನೊಂದಿಗೆ ನಲವತ್ತೈದರ ಕಥಾನಾಯಕಿಯ ಪ್ರೇಮ ನಮ್ಮೆಲ್ಲ ಹೊಸ ಪ್ರೇಮಕಥೆಗಳನ್ನೂ ನಾಚಿಸುವಂತಿದೆ. ತೆರೂವೊನ ದೇಹದ ಕಣಕಣವನ್ನೂ ಹೀರಿ ಒಂದು ತುತ್ತನ್ನು ಮಾಡಿ ನುಂಗಿ ಬಿಡಬೇಕು ಎನ್ನುವ ಆಕೆಯ ಮಾತು ಒಂದು ಕ್ಷಣ ಓದುಗನನ್ನು ಪ್ರೇಮದ ಕಡಲಲ್ಲಿ ಮುಳುಗಿ ಹೋಗುವಂತೆ ಮಾಡದಿರಲು ಸಾಧ್ಯವೇ ಇಲ್ಲ. ಹೀಗಾಗಿಯೇ Drink to me only with thine Eyes and I will pledge with mine Or leave a kiss within the cup And I’ll not look for wine ಎನ್ನುವ ಸಾಲುಗಳು ಅವಳಿಗಿಷ್ಟ. ಮತ್ತು ಅದನ್ನೆಲ್ಲ ತಿಳಿದ ನಂತರವೂ ತೆರೂವೋ ಅವಳನ್ನೆಷ್ಟು ಪ್ರೀತಿಸುತ್ತಾನೆಂದರೆ ಜಪಾನಿ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುತ್ತಾನೆ, ಜಪಾನಿನ ಸಾಮಾಜಿಕ ನಿಯಮಗಳನ್ನು ಮೀರಿ ನಡುಮಧ್ಯಾಹ್ನವೇ ಕುಡಿದು ಮತ್ತೇರುವಷ್ಟು ಅವಳನ್ನು ಪ್ರೇಮಿಸುತ್ತಾನೆ. ಅಂತಹ ಪ್ರೇಮದಲ್ಲಿ ದೇಹ ಸಂಪರ್ಕವೆಂಬುದು ಅಷ್ಟೊಂದು ಪ್ರಧಾನವಾದ ವಿಷಯವೇ ಆಗುವುದಿಲ್ಲ. ಹಾಗೆಂದು ದೇಹದ ಮಿಲನವಾಗದೇ ಪ್ರೇಮ ಫಲಿಸುವುದೂ ಇಲ್ಲ. ಹೀಗಾಗಿಯೇ ಕಥಾನಾಯಕಿ ‘ಪರಸ್ಪರರ ಬಗೆಗಿನ ಭಾವವು ಅದೆಷ್ಟು ಸಂಪೂರ್ಣ ಮತ್ತು ಸರ್ವವ್ಯಾಪಿಯಾಗಿರುತ್ತದೆ ಎಂದರೆ ಪ್ರಣಯಕ್ರಿಯೆಯೂ ಸಹ ಅದರದ್ದೇ ಒಂದು ಭಾಗವಾಗಿ ಬಿಡುತ್ತದೆ. ಅದನ್ನು ಮಾಡುವುದಾಗಲಿ ಮಾಡದೇ ಇರುವುದಾಗಲಿ ಅಷ್ಟೊಂದು ಮಹತ್ವದ್ದಾಗಿ ಉಳಿಯುವುದಿಲ್ಲ. ಒಬ್ಬರು ಮತ್ತೊಬ್ಬರಿಂದ ಪಡೆಯುವುದು ಒಂದು ಬಗೆಯ ಅನುಭವವಾದರೆ, ಒಬ್ಬರು ಮತ್ತೊಬ್ಬರಿಗೆ ನೀಡುವುದು ಮತ್ತೊಂದು ಬಗೆಯ ಸುಖ.’ ಎನ್ನುತ್ತಾಳೆ. ಹೀಗೆಂದೆ ತನ್ನ ಮತ್ತು ಅವಳ ಪ್ರೇಮದ ಕುರಿತಾಗಿ ಅವಳ ಗಂಡನಿಗೆ ತಿಳಿದರೆ ಏನಾಗಬಹುದು ಎಂದು ತೆರೂವೋ ಕೇಳಿದಾಗ ‘ಅದಕ್ಕೂ ಜನಕನಿಗೂ ಏನು ಸಂಬಂಧ?’ ಎನ್ನುತ್ತಾಳೆ. ‘ಮದುವೆ ಮಾಡಿಕೊಂಡಿಲ್ಲವೇ?’ ಎಂದರೆ ‘ಮಾಡಿಕೊಂಡರೇನಾಯಿತು? ಇಂಥ ಭಾವನೆ, ಇಂಥ ಅನುಭವ, ಇಂಥ ಕೃತಿಯು ಅವನ ಮಾಲಿಕತ್ವದ್ದು ಆಗಿ ಬಿಡುತ್ತದೆಯೇ?’ ಎನ್ನುವ ಮಾತುಗಳು ಅವಳೆಷ್ಟು ಸ್ವತಂತ್ರ ಮನೋಭಾವದವಳು ಎಂಬುದನ್ನು ತೋರಿಸುತ್ತದೆ. ತನ್ನ ಪ್ರೇಮ, ತನ್ನ ಕಾಮ ತನ್ನ ವೈಯಕ್ತಿಕ ಮಾತ್ರ ಎನ್ನುವ ಅವಳ ಭಾವನೆ ನಿಜಕ್ಕೂ ಒಮ್ಮೆ ನಿಟ್ಟುಸಿರಿಡುವಂತೆ ಮಾಡುತ್ತದೆ. ಇದೆಲ್ಲದರ ನಡುವೆಯೂ ಅವಳ ಅಪ್ಪನ ಸ್ನೇಹಿತನಾದ ‘ಜಿ’ ಯನ್ನು ಆಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವೇ ಅಚ್ಚರಿ ಹುಟ್ಟಿಸುವಂತಹುದ್ದು. ಅವಳ ಎಲ್ಲ ಪ್ರೇಮ ಸಂಬಂಧಗಳ ಬಗೆಗೆ ಅರಿವಿರುವ ಜಿ ಕೂಡ ಅವಳನ್ನು ಆಳವಾಗಿ ಪ್ರೀತಿಸುವುದು ಅವಳ ಮಾತುಗಳಿಂದಲೇ ಅರಿವಾಗುತ್ತದೆ. ‘ನಾನೇನಾದರೂ ದೂರದ ದೇಶಕ್ಕೆ ಹೋದರೆ ಅದರಿಂದ ಕಂದಕವುಂಟಾಗುವುದು ಜಿ ಜೀವನದಲ್ಲಿ ಮಾತ್ರ’ ಎನ್ನುವ ಅವಳ ಮಾತುಗಳು ಈ ಸತ್ಯವನ್ನೇ ಹೇಳುತ್ತದೆಯಾದರೂ ಜಪಾನಿಗೆ ಹೋದ ಮೇಲೆ ಆಕೆ ತೆರೂವೋನ ಕುರಿತಾಗಿ ‘ಜಿ’ಯಲ್ಲಿ ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ತೆರೂವೋ ಜೊತೆಗಿನ ಪ್ರೇಮವನ್ನು ಎದೆಯೊಳಗೇ ಮುಚ್ಚಿಟ್ಟುಕೊಂಡು, ಜೀವನಪೂರ್ತಿ ಒಬ್ಬಳೇ ಆಸ್ವಾದಿಸುವ ಆಸೆ
ಗುಂಡಪ್ಪೆಯ ಮಳೆಗಾಲ ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ. ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು ಆವರಿಸಿಕೊಂಡು ಹೃದಯವನ್ನು ಹಗುರಾಗಿಸುವ ಕ್ಷಣವೊಂದು ಎಲ್ಲರ ಜೀವನದಲ್ಲೂ ಇರುತ್ತದೆ. ಮುಂಗಾರು ನಮ್ಮೊಳಗೆ ಹುಟ್ಟಿಸುವ ಸಂಚಲನ ಎಷ್ಟೋ ಸಲ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಹವಾಮಾನದ ವರದಿಗಳನ್ನೆಲ್ಲ ನಿರುಮ್ಮಳವಾಗಿ ಬದಿಗೊತ್ತಿ ಮೊದಲಮಳೆಗೆ ಕಾಯತೊಡಗುತ್ತೇವೆ. ಅಂಗೈಯನ್ನೋ, ಮುಖವನ್ನೋ ಅಥವಾ ಕೊನೆಪಕ್ಷ ದೃಷ್ಟಿಯನ್ನೋ ಮಳೆಗೊಡ್ಡಿ ನಿಲ್ಲುವ ಬಯಕೆಯೊಂದು ಎಲ್ಲರ ಎದೆಯೊಳಗೂ ಸದಾ ಜೀವಂತ. ಈಗಿನ್ನೂ ಪ್ರಪಂಚ ನೋಡುತ್ತಿರುವ ಮಗುವಿಗೆ ಮಳೆಯೊಂದು ವಿಸ್ಮಯವೆನ್ನಿಸಿದರೆ, ಪ್ರೀತಿ ತುಂಬಿದ ಹೃದಯವೊಂದು ಮಳೆಗೆ ಕವಿತೆಯಾಗಿ ಅರಳುತ್ತದೆ; ರೈತನೊಬ್ಬ ಭತ್ತವೊಂದು ಮೊಳಕೆಯೊಡೆವ ಕನಸ ಕಾಣತೊಡಗಿದರೆ, ಹಪ್ಪಳ-ಸಂಡಿಗೆಗಳೆಲ್ಲ ಸರತಿಯಲ್ಲಿ ಅಟ್ಟ ಹತ್ತಿ ಬೆಚ್ಚಗೆ ಕೂರುತ್ತವೆ; ಹಳೆಯ ಪಾರ್ಕೊಂದರಿಂದ ತೇಲಿಬಂದ ನೇರಳೆಹಣ್ಣಿನ ಬೀಜವೊಂದು ಬೇರುಬಿಡಲು ತವಕಿಸುತ್ತಿರುವಾಗ, ಪಾರ್ಕಿನ ಪಕ್ಕದ ಶಾಲೆಯೊಂದರಲ್ಲಿ ಕನಸುಗಳು ಅರಳುತ್ತವೆ. ಶಾಲೆ ಎನ್ನುವ ಜಾಗವೊಂದು ಜೀವನಕ್ಕೆ ಕಟ್ಟಿಕೊಡುವ ಮೌಲ್ಯಗಳು, ನೆನಪುಗಳು ಅಗಾಧ. ಜಗತ್ತನೆಲ್ಲ ಸುತ್ತಿ ಬಂದರೂ ಬಾಲ್ಯದ ನೆನಪುಗಳಿಗಾಗಿ ಹಂಬಲಿಸಿದಾಗಲೋ, ಹಳೆಯ ಕಾದಂಬರಿಯೊಂದನ್ನು ಓದಿದಾಗಲೋ ಅಥವಾ ಫೇಸ್ ಬುಕ್ ನಲ್ಲೆಲ್ಲೋ ಬಾಲ್ಯದ ಗೆಳತಿಯೊಬ್ಬಳು ಅಚಾನಕ್ಕಾಗಿ ಮಾತಿಗೆ ಸಿಕ್ಕಾಗಲೋ ಶಾಲೆ ಎನ್ನುವ ನಮ್ಮದೇ ಮುಗ್ಧ ಪ್ರಪಂಚವೊಂದನ್ನು ಆವಾಹಿಸಿಕೊಳ್ಳುತ್ತೇವೆ. ಆ ಪ್ರಪಂಚದಲ್ಲೊಂದಿಷ್ಟು ಬೆಟ್ಟದ ನೆಲ್ಲಿಕಾಯಿಗಳು ಬಾಯಲ್ಲಿ ನೀರೂರಿಸಿದರೆ, ಬಣ್ಣದ ರಿಬ್ಬನ್ನುಗಳು ಹೂವುಗಳಾಗಿ ಅರಳುತ್ತವೆ; ಬಾವಿಯ ಸಿಹಿನೀರು ತೆಂಗಿನಬುಡವನ್ನು ತಂಪಾಗಿಸಿದರೆ, ಮೇ ಫ್ಲವರ್ ಗಿಡವೊಂದು ಹೂವಿನ ಭಾರಕ್ಕೆ ಬಳುಕುತ್ತಿರುತ್ತದೆ; ಮಳೆಗಾಲವೊಂದು ಪಠಾಣ್ಸಿನ ಜೊತೆ ಕೊಡೆಯೊಂದಿಗೆ ಅಂಗಳಕ್ಕಿಳಿಯುತ್ತದೆ. ಮೊದಲಮಳೆಯೊಂದು ಮೊದಲಪ್ರೇಮದಂತೆ ಹೃದಯವನ್ನು ಅರಳಿಸಿದರೆ, ಮಳೆಗಾಲವೊಂದು ಮರೆತೂ ಮರೆಯದಂತಿರುವ ನೆನಪುಗಳನ್ನೆಲ್ಲ ತಂದು ಮಡಿಲಿಗೆ ಸುರಿಯುತ್ತದೆ. ಈ ಪಠಾಣ್ಸಿನ ಕಥೆ ಶುರುವಾಗುವುದು ಹೀಗೆ. ನಾನು ನಾಲ್ಕನೇ ಕ್ಲಾಸು ಮುಗಿಸಿ ಐದನೇ ಕ್ಲಾಸಿಗೆ ಕಾಲಿಟ್ಟ ಗರ್ವದ ಜೂನ್ ತಿಂಗಳು ಅದು. ಐದನೇ ಕ್ಲಾಸು ಎಂದರೆ ಅದರ ಗತ್ತು-ಗೈರತ್ತುಗಳೇ ಬೇರೆ. ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳ ಎದುರಿಗೆ ಹೀರೋಗಳ ಚಮಕ್ಕನ್ನು ತೋರಿಸುತ್ತ, ಆರು ಮತ್ತು ಏಳನೇ ಕ್ಲಾಸಿನವರೆದುರಿಗೆ ಚಿಕ್ಕವರಂತೆ ಪೋಸ್ ಕೊಡುತ್ತ ಒಳ್ಳೆಯವರಾಗಿಬಿಡುವ ಜಾಣತನ ಐದನೇ ಕ್ಲಾಸಿಗೆ ಸಿದ್ಧಿಸಿರುತ್ತಿತ್ತು. ಗಾರ್ಡನ್ನಿಗೆಂದು ಅಂಗಳ ಹದಗೊಳಿಸುವ, ಬೆಳಿಗ್ಗೆ ಬೇಗ ಬಂದು ಕಸ ಗುಡಿಸಿ ಒರಸುವಂತಹ ಕೆಲಸವನ್ನೆಲ್ಲ ಆರು-ಏಳನೇ ಕ್ಲಾಸಿನವರು ವಹಿಸಿಕೊಳ್ಳುತ್ತಿದ್ದರು. ಗಾರ್ಡನ್ನಿನ ಕಳೆ ತೆಗೆಯುವುದು, ಕ್ಲಾಸ್ ರೂಮಿನ ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಚಪ್ಪಲಿಗಳನ್ನು ಜೋಡಿಸುವುದು ಇಂತಹ ಕೆಲಸಗಳೆಲ್ಲ ಮೂರು-ನಾಲ್ಕನೇ ಕ್ಲಾಸಿನ ಮಕ್ಕಳ ಜವಾಬ್ದಾರಿಗಳಾಗುತ್ತಿದ್ದವು. ಐದನೇ ಕ್ಲಾಸು ಮಾತ್ರ ಕ್ಲಾಸು ತಪ್ಪಿದರೆ ಆಟದ ಮೈದಾನಕ್ಕೆ ಇಳಿಯುತ್ತಿತ್ತು. ಇಂಥ ಸೌಕರ್ಯಕರ ಐದನೇ ಕ್ಲಾಸು ಶುರುವಾದ ಜೂನ್ ನಲ್ಲಿ ಮಳೆಗಾಲವೂ ಶುರುವಾಗಿತ್ತು. ಪುಟ್ಟಪುಟ್ಟ ಮಕ್ಕಳ ಬಣ್ಣದ ರೇನ್ ಕೋಟ್ ಗಳು, ಹೊಸಹೊಸ ಹಸಿರು-ನೀಲಿ ಸ್ಕರ್ಟ್ ಗಳು, ಆಗಷ್ಟೇ ಹಳ್ಳಿಗಳಿಗೆ ಕಾಲಿಟ್ಟಿದ್ದ ಬಟನ್ ಛತ್ರಿಗಳು ಎಲ್ಲದರ ಮಧ್ಯೆ ಇಡೀ ಶಾಲೆಯ ಗಮನ ಸೆಳೆದದ್ದು ಏಳನೇ ಕ್ಲಾಸಿನ ಹುಡುಗಿಯೊಬ್ಬಳ ಪಠಾಣ್ಸು. ಕಪ್ಪು ಬಣ್ಣದಲ್ಲಿ ಮಿರಮಿರ ಮಿಂಚುತ್ತಿದ್ದ ಆ ರಬ್ಬರಿನ ಚಪ್ಪಲಿಯೊಳಗೆ ಅವಳ ಇಡೀ ಪಾದ ಮುಳುಗಿಹೋಗಿ ನಾಲ್ಕು ಬೆರಳುಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು, ಹೊರಗಿನಿಂದ ನೋಡುವವರಿಗೆ ಉಸಿರುಗಟ್ಟಿ ಒದ್ದಾಡುತ್ತಿರುವಂತೆ ಕಾಣಿಸುತ್ತಿದ್ದವು. ಮಳೆಗಾಲಕ್ಕೆಂದೇ ವಿಶೇಷವಾಗಿ ತಯಾರಾಗಿದ್ದ ಆ ಚಪ್ಪಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಅವಳ ಸ್ಕರ್ಟಿಗೆ ಸಿಡಿದಿರಲಿಲ್ಲ. ಬೆನ್ನಿನವರೆಗೂ ಮಳೆಯ ನೀರು ಸಿಡಿದು ಸ್ಕರ್ಟಿನ ತುಂಬಾ ರಂಗೋಲಿಯ ಚುಕ್ಕಿಯಂತಹ ಮಣ್ಣಿನ ಕಲೆಗಳಾಗಿ ನೊಂದಿರುತ್ತಿದ್ದ ನಮಗೆಲ್ಲ ಪಠಾಣ್ಸಿನ ಮೇಲೆ ವಿಪರೀತ ಪ್ರೇಮ ಹುಟ್ಟಿಕೊಂಡಿತು. ಆ ಪ್ರೇಮದ ತೀವ್ರತೆ ಎಷ್ಟಿತ್ತೆಂದರೆ ಮಳೆಗಾಲ ಮುಗಿಯುವುದರೊಳಗೆ ನನ್ನ ಹಠಕ್ಕೆ ಮಣಿದು ಅಪ್ಪ ನನಗೂ ಒಂದು ಮಣ್ಣಿನ ಬಣ್ಣದ ಪಠಾಣ್ಸು ತಂದುಕೊಟ್ಟ. ಹೀಗೆ ಪಠಾಣಿ ಚಪ್ಪಲಿಯೊಂದು ಪಠಾಣ್ಸಾಗಿ ಮನೆಗೆ ಆಗಮಿಸಿ ಮಳೆಗಾಲದ ಮಜಾ ಇನ್ನಷ್ಟು ಹೆಚ್ಚಿತು; ನೀಲಿ, ಹಸಿರು ಸ್ಕರ್ಟುಗಳೆಲ್ಲ ಖುಷಿಯಿಂದ ಕುಣಿದಾಡಿದಂತೆನ್ನಿಸಿತು. ಪ್ರತೀವರ್ಷ ಮಳೆಗಾಲ ಮುಗಿದೊಡನೆ ಪ್ಲಾಸ್ಟಿಕ್ ಕವರಿನೊಳಗೆ ಸೇರಿದ ಪಠಾಣ್ಸು ಭದ್ರವಾಗಿ ಜಗಲಿಯ ಮೇಲಿನ ಗೂಡೊಂದನ್ನು ಸೇರಿಕೊಳ್ಳುತ್ತಿತ್ತು. ಹೀಗೆ ಹೈಸ್ಕೂಲು ಮುಗಿಯುವವರೆಗೂ ಪಾದದ ಬೆಳವಣಿಗೆಗನುಗುಣವಾಗಿ ಹಿಗ್ಗುತ್ತಾ, ನನ್ನ ಮಳೆಗಾಲದ ಚಟುವಟಿಕೆಗಳನ್ನೆಲ್ಲ ತಕರಾರಿಲ್ಲದೇ ಸಹಿಸಿಕೊಂಡ ಪಠಾಣ್ಸು ನೆನಪಿನ ಶೂ ರ್ಯಾಕ್ ನಲ್ಲಿ ಈಗಲೂ ಭದ್ರವಾಗಿದೆ. ಪಠಾಣ್ಸಿನ ಸಂಭ್ರಮದೊಂದಿಗೆ ಮಳೆಗಾಲದ ಇನ್ನೊಂದು ಮಜವೆಂದರೆ ಮಾವಿನಹಣ್ಣಿನದು. ಕೇರಿಯ ತುದಿಯಿಂದ ಶುರುವಾಗುವ ವಿಸ್ತಾರವಾದ ಗದ್ದೆಬಯಲಿನ ತುದಿಯಲ್ಲಿ ಮಾವಿನಮರಗಳ ಸಾಲೊಂದಿತ್ತು. ಆ ಮಾವಿನಮರಗಳ ವಿಶೇಷತೆಯೆಂದರೆ ಅವು ಮಳೆಗಾಲದಲ್ಲಿ ಉದುರಿಸುತ್ತಿದ್ದ ಅಪ್ಪೆಹಣ್ಣುಗಳು. ಅತ್ತ ಹುಳಿಯೂ ಅಲ್ಲದ, ಪೂರ್ತಿ ಸಿಹಿಯೂ ಅಲ್ಲದ ಪುಟ್ಟಪುಟ್ಟ ಮಾವಿನಹಣ್ಣುಗಳಿಗೆ ವಿಶಿಷ್ಟವಾದ ರುಚಿಯಿರುತ್ತಿತ್ತು. ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಕೇರಿಯ ಮಕ್ಕಳ ಗ್ಯಾಂಗೊಂದು ಮಾವಿನಮರದ ಬುಡವನ್ನು ತಲುಪುತ್ತಿತ್ತು. ಆ ಮರಗಳ ಸಾಲಿನಲ್ಲಿ ನಮ್ಮೆಲ್ಲರ ಪ್ರೀತಿಯ ಗುಂಡಪ್ಪೆಯ ಮರವಿತ್ತು. ನೋಡಲು ಗುಂಡುಗುಂಡಾಗಿ ಅಚ್ಚಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದ ಗುಂಡಪ್ಪೆಯನ್ನು ಹುಲ್ಲುಗಳ ಮಧ್ಯದಿಂದ ಹೆಕ್ಕಿ ಸ್ಕರ್ಟಿನ ಜೇಬಿಗೆ ಸೇರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಉಳಿದ ಹಣ್ಣುಗಳೆಲ್ಲ ಮಾವಿನಹಣ್ಣು ಹೆಕ್ಕಲೆಂದೇ ಸ್ಕರ್ಟಿನ ಜೇಬಿನಲ್ಲಿರುತ್ತಿದ್ದ ಪ್ಲಾಸ್ಟಿಕ್ ಕವರನ್ನು ಸೇರಿದರೆ, ಗುಂಡಪ್ಪೆ ಮಾತ್ರ ವಿಶೇಷ ಅಕ್ಕರೆಯಿಂದ ಜೇಬನ್ನು ಸೇರುತ್ತಿತ್ತು. ಮನೆಗೆ ಬಂದು ಪಠಾಣ್ಸನ್ನು ಉಜ್ಜಿ ತೊಳೆದು ಜಗಲಿಯ ಮೂಲೆಯಲ್ಲಿಟ್ಟು, ಅಪ್ಪೆಹಣ್ಣುಗಳನ್ನು ತೊಳೆಯುವ ಕಾಯಕ ಶುರುವಾಗುತ್ತಿತ್ತು. ಯಾರ ಅಪ್ಪಣೆಗೂ ಕಾಯದೇ ಗುಂಡಪ್ಪೆಗಳೆಲ್ಲ ನಿರಾತಂಕವಾಗಿ ಹೊಟ್ಟೆ ಸೇರಿದರೆ, ಉಳಿದವು ಅಡುಗೆಮನೆಯಲ್ಲಿ ಜಾಗ ಕಂಡುಕೊಳ್ಳುತ್ತಿದ್ದವು. ಹೀಗೆ ಪಠಾಣ್ಸೆನ್ನುವ ಸಂಭ್ರಮದಿಂದ ಶುರುವಾಗುವ ಮಳೆಗಾಲವೊಂದು ಗುಂಡಪ್ಪೆಯನ್ನು ಜೀರ್ಣಿಸಿಕೊಳ್ಳುವ ಸಮಾರಂಭದಲ್ಲಿ ಮುಗಿಯುತ್ತಿತ್ತು. ಆಸ್ತಿ, ಹಣ, ಅಂತಸ್ತು ಯಾವ ಹಂಗೂ ಇಲ್ಲದ ಮಳೆಗಾಲವೆಂಬ ಸೃಷ್ಟಿಯ ಸಡಗರ ನೆನಪುಗಳಿಗೆ ಹೊಸ ಜೀವ ತುಂಬಲಿ; ಬದುಕಿಗೊಂದಿಷ್ಟು ಕನಸು ದೊರಕಿ ಗುಂಡಪ್ಪೆಯಂತೆಯೇ ಹಸಿರಾಗಿ ಹೊಳೆಯುತ್ತಿರಲಿ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ದಿಕ್ಸೂಚಿ
ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಜಯಶ್ರೀ ಅಬ್ಬಿಗೇರಿ ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ ತಾಳಿ ಜೀವ ತಿನ್ನುತ್ತವೆ. ಬದುಕು ಬದಲಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಅದೃಷ್ಟ ಹಳಿಯುವುದನ್ನು ಬಿಟ್ಟು ನಾನೇಕೆ ಸೋಲುತ್ತಿದ್ದೇನೆ? ಎಲ್ಲಿ ಎಡುವುತ್ತಿದ್ದೇನೆ ಎಂದು ಕೊಂಚ ಆತ್ಮಾವಲೋಕನ ಮಾಡಿಕೊಂಡರೂ ಸರಿ, ನಮ್ಮ ತಪ್ಪುಗಳು ನಮ್ಮ ಕಣ್ಣಿಗೆ ರಾಚದೇ ಇರವು. ಸೋಲೊಪ್ಪಿಕೊಳ್ಳುವ ಮುನ್ನ ಈ ಸಂಗತಿಗಳತ್ತ ಗಮನ ಹರಿಸಿ. ಕೊಂಚ ಪ್ರಶ್ನಿಸಿಕೊಳ್ಳಿ . ನಿಮ್ಮ ಇಷ್ಟವೇ ಗುರಿ ಆಗಿದೆಯೇ? ನೀವಿಟ್ಟುಕೊಂಡ ಗುರಿ ನಿಮಗೆ ಇಷ್ಟವಾಗಿದೆಯೇ? ನಮ್ಮ ಮನೆಯಲ್ಲಿ ಎಲ್ಲರೂ ಇಂಜಿನೀಯರ್ ಆಗಿದಾರೆ. ನಾನು ಬೇರೆ ಕ್ಷೇತ್ರದಲ್ಲಿ ಮಿಂಚುವ ಅವಕಾಶ ಕಮ್ಮಿ . ನನಗೆ ಸಾಮರ್ಥ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಟೀಚರ್ ಆಗೋಕೆ ಇಷ್ಟ. ಆದರೆ ಅಪ್ಪನ ಆಸೆ ಈಡೇರಿಸೋಕೆ ಇಂಜನೀಯರಿಂಗ್ ಸೇರಿಕೊಂಡಿದಿನಿ. ನನ್ನ ಗೆಳತಿಯರು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದಾರೆ. ನನಗೆ ಲೆಕ್ಕಶಾಸ್ತ್ರ ಅಂದ್ರೆ ಪಂಚ ಪ್ರಾಣ. ಆದರೆ ಇಷ್ಟು ದಿನ ಕೂಡಿ ಕಲಿತ ಗೆಳತಿಯರ ಬಿಟ್ಟು ಹೊಸ ಪರಿಸರ ಹೊಸ ಸ್ನೇಹಿತರ ಜೊತೆ ಹೊಂದಿಕೊಳ್ಳುವುದು ಕಷ್ಟ ಹೀಗಾಗಿ ನಾನೂ ಇದನ್ನೇ ಮಾಡುವೆ ಎಂದು ನಿಮಗಿಷ್ಟವಿಲ್ಲದ ಓದಿಗೆ ಸೇರಿಕೊಳ್ಳುವುದು ಎಷ್ಟು ಸರಿ. ಯಾರಿಗಾಗಿಯೋ ನಿಮ್ಮ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡುವುದು ಸರಿಯಲ್ಲ. ಅಲ್ಲದೇ ನೀವು ಆಯ್ಕೆ ಮಾಡಿಕೊಂಡಿರುವ ದಾರಿ ನಿಮ್ಮ ಇಷ್ಟದ ದಾರಿ ಅಲ್ಲವೇ ಅಲ್ಲ ಎಂದಾಗ ಮುನ್ನಡೆಯುವುದಾದರೂ ಹೇಗೆ? ನಿಮ್ಮ ಶಕ್ತಿ ಸಾಮರ್ಥ್ಯ ಯಾವುದಿದೆಯೋ ನಿಮ್ಮ ಮನಸ್ಸು ಯಾವುದಕ್ಕೆ ಬಲವಾಗಿ ಮಿಡಿಯುತ್ತಿದೆಯೋ ಅದನ್ನೇ ಗುರಿಯಾಗಿಸಿಕೊಳ್ಳಿ. ಇಚ್ಛಾ ಶಕ್ತಿ ಬಲಪಡಿಸಿಕೊಳ್ಳಿ. ‘ಇಚ್ಛಾ ಶಕ್ತಿ ಎಲ್ಲಕ್ಕಿಂತ ಬಲಶಾಲಿಯಾದದ್ದು. ಅದರ ಮುಂದೆ ಎಲ್ಲವೂ ನಡು ಬಗ್ಗಿಸಬೇಕು.’ ಎಂಬ ಪ್ರೇರಣಾತ್ಮಕ ನುಡಿ ಸ್ವಾಮಿ ವಿವೇಕಾನಂದರದು. ಅದು ಸಾರ್ವಕಾಲಿಕ ಸತ್ಯವೂ ಕೂಡ. ಯೋಜನೆಗಳನ್ನು ಹಾಕಿಕೊಂಡಿದ್ದೀರಾ? ನಿರ್ದಿಷ್ಟ ಗುರಿ ನಿರ್ಧರಿಸಿಯಾದ ಮೇಲೆ, ಗುರಿ ಸಾಧಿಸಲು ಯೋಜನೆಗಳನ್ನು ಹಾಕಿಕೊಳ್ಳಿ. ಯೋಜನೆ ಎನ್ನುವುದು ಮಾನಸಿಕ ದೃಶ್ಯ. ನಾನು ನನ್ನ ಗುರಿಯ ಬಗ್ಗೆ ಸದಾ ಯೋಚಿಸುತ್ತಲೇ ಇರುತ್ತೇನೆ ಆದರೆ ಅದನ್ನು ಇನ್ನೂ ತಲುಪಲಾಗುತ್ತಿಲ್ಲ ಎಂದು ಹಳ ಹಳಿಸಿದರೆ ಪ್ರಯೋಜನವಿಲ್ಲ. ನೀವು ಸದಾ ಯಾವುದರ ಬಗ್ಗೆ ಆಲೋಚಿಸುತ್ತಿದ್ದೀರೋ ಅದೇ ಆಗುವ ಸಂಭವನೀಯತೆ ಹೆಚ್ಚಿದೆ. ಅಂದುಕೊಂಡದ್ದನ್ನು ಸಾಧಿಸಲು ಒಂದು ದಾರಿ ಬೇಕಲ್ಲ ಅದುವೇ ಯೋಜನೆ. ಯೋಜನೆ ಇರದಿದ್ದರೆ ಗಾಳಿ ಬೀಸಿದ ಕಡೆ ಗಂಧ ತೇಲುವಂತೆ ನಿಮ್ಮ ಗುರಿಯ ಪಯಣವೂ ಎಲ್ಲೆಲ್ಲೋ ದಾರಿ ತಪ್ಪಿ ಬಿಡುತ್ತದೆ ಅಲನ್ ಲಕೀನ್ ಹೇಳಿದಂತೆ,’ಯೋಜಿಸಲು ವಿಫಲರಾದರೆ, ವಿಫಲರಾಗಲು ಯೋಜಿಸಿದಂತೆ.’ ಆದ್ದರಿಂದ ದಿನಕ್ಕಿಷ್ಟು ತಿಂಗಳಿಗಿಷ್ಟು ವರ್ಷಕ್ಕಿಷ್ಟು ಸಾಧಿಸ್ತೀನಿ ಎಂದು ಯೋಜನೆ ಹಾಕಿಕೊಂಡು ಅದರಂತೆ ಜಾರಿಗೊಳಿಸಬೇಕು. ಫಲ ಸಿಗುವವರೆಗೆ ತಾಳ್ಮೆ ಇದೆಯಾ? ಗೆಲುವಿಗಾಗಿ ಕೆಲಸ ಮಾಡುವುದೆನೋ ಸರಿ. ಆದರೆ ಅದಕ್ಕಾಗಿ ಅದೆಷ್ಟು ದಿನ ಇನ್ನೂ ಕಾಯಬೇಕು.? ಕಾಯುವುದಕ್ಕೆ ಒಂದು ಮಿತಿ ಇಲ್ಲವೇ? ಎಂದು ಬೇಸರಿಸಿಕೊಳ್ಳದಿರಿ. ಗೆಲುವು ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ವರ್ಷಗಳವರೆಗೆ ತಪಸ್ಸನ್ನಾಚರಿಸಿದಂತೆ. ಧಿಡೀರ್ ಗೆಲುವು ಕಾಣಿಸಿಕೊಳ್ಳಲು ಅದೇನು ನಮ್ಮ ಕೈಯಲ್ಲಿ ಗೆಲುವಿನ ಮಂತ್ರದಂಡ ಇದೆಯೇ? ಕೊನೆ ಕ್ಷಣದಲ್ಲಿ ಸಹನೆ ಕಳೆದುಕೊಳ್ಳುವುದು ಸೋಲಿಗೆ ಕಾರಣವಾಗುತ್ತದೆ. ಅದಕ್ಕೆ ತಾಳ್ಮೆಗೆ ಬೇಲಿ ಹಾಕದೇ ಪ್ರಯತ್ನಿಸಿ. ಕವಿ ರುಡ್ಯಾರ್ಡ್ ಕಿಪ್ಲಿಂಗ್ ರ ಅನುಭವೋಕ್ತಿಯಲ್ಲಿ,’ ಮರೆಯಲಾರದ ನಿಮಿಷವನ್ನು ಅರವತ್ತು ಸೆಕೆಂಡುಗಳ ಬೆಲೆಯ ಓಟದ ದೂರದೊಂದಿಗೆ ತುಂಬಿದರೆ ಭೂಮಿಯೂ ನಿಮ್ಮದಾಗುತ್ತದೆ. ಮತ್ತು ಅದರೊಳಗಿರುವ ಎಲ್ಲವೂ ಸಹ.’ ಕಾರ್ಯಕ್ಷಮತೆ ಕೊನೆಯವರೆಗೂ ಇರಲಿದೆಯೇ? ಗುರಿ ನಿರ್ಧರಿಸಿ, ಯೋಜನೆಗಳನ್ನು ಸಿದ್ದ ಪಡಿಸಿದ ನಂತರ ಅತ್ಯುತ್ಸಾಹದಿಂದ ಆತ್ಮವಿಶ್ವಾಸವನ್ನಿಟ್ಟುಕೊಂಡು ಬಹಳ ದಿನಗಳವರೆಗೆ ತೊಡಗಿಸಿಕೊಂಡು, ಆಮೇಲೆ ಇದ್ಯಾಕೋ ಸರಿ ಹೋಗುತ್ತಿಲ್ಲವೆಂದು ಇಟ್ಟ ದಿಟ್ಟ ಹೆಜ್ಜೆಯನ್ನು ಮುಂದುವರೆಸಲು ಅನುಮಾನ ವ್ಯಕ್ತ ಪಡಿಸದಿರಿ. ಏಕೆಂದರೆ ಇನ್ನೇನು ಗೆಲ್ಲುವುದಕ್ಕೆ ಕೆಲವೇ ಹೆಜ್ಜೆಗಳಿರುತ್ತವೆ. ಅಂಥ ಸಮಯದಲ್ಲಿ ಹಿಂದಡಿ ಇಟ್ಟರೆ ಗೆಲುವು ಮರೀಚಿಕೆಯಾಗುವುದು ಖಚಿತ. ಒತ್ತಡದ ಒಂದು ಕ್ಷಣದಲ್ಲಿ ಶಾಂತತೆಯನ್ನು ಕಾಯ್ದಿರಿಸಿಕೊಂಡರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಕಾರಾತ್ಮಕ ಪ್ರೇರಣಾತ್ಮಕ ಅಂಶಗಳತ್ತ ಮಾತ್ರ ಗಮನ ಹರಿಸಿದರೆ ದಣಿವಿನ ಸಮಯದಲ್ಲೂ ಪುಟಿದೇಳುವ ಉತ್ಸಾಹವನ್ನು ಪಡೆಯುತ್ತೀರಿ. ಮಾಂಟ್ವೇನ್ ಹೇಳಿದರು.’ ಮನುಷ್ಯರ ಶ್ರೇಷ್ಠ ಮತ್ತು ಭವ್ಯ ಕಲೆಯೆಂದರೆ ಅಂದುಕೊಂಡದ್ದಕ್ಕೆ ತಕ್ಕಂತೆ ಬದುಕುವುದು.’ ಅಂದುಕೊಂಡಂತೆ ಗುರಿ ಸಾಧನೆಗೆ ಕಾರ್ಯಕ್ಷಮತೆ ಪ್ರಮಾಣ ಕುಗ್ಗದಿರಲಿ. ಪರರ ಮಾತಿಗೆ ಕಿವಿಗೊಡುತ್ತಿದ್ದಿರಾ? ಯಶಸ್ಸಿಗಾಗಿ ನೀವು ಪಡುವ ಶ್ರಮವನ್ನು ಕಂಡ ನಿಮ್ಮ ಆಪ್ತರು ಸ್ನೇಹಿತರು ಕುಟುಂಬ ಸದಸ್ಯರು ನಾವೂ ನಿಮ್ಮ ಹಿತವನ್ನೇ ಬಯಸುತ್ತೇವೆ. ಗೆಲುವಿಗಾಗಿ ಪಡುತ್ತಿರುವ ಕಷ್ಟವನ್ನು ನಮ್ಮಿಂದ ನೋಡಲಾಗುತ್ತಿಲ್ಲ. ಇದರಲ್ಲಿ ನಿನಗೆ ಗೆಲವು ಗೋಚರಿಸುತ್ತಿಲ್ಲವೆಂದು ತಿಳಿ ಹೇಳಿ, ನೀವು ಹಿಡಿದ ದಾರಿ ಬದಲಿಸಲು ಸಲಹೆ ನೀಡುತ್ತಾರೆ. ಕೆಲವೊಮ್ಮೆ ಒತ್ತಾಯಿಸುತ್ತಾರೆ. ಇದೇ ಪ್ರಯತ್ನವನ್ನು ಬೇರೆಡೆಗೆ ಹಾಕಿದರೆ ಇಷ್ಟೊತ್ತಿಗಾಗಲೇ ಗೆಲುವಿನ ದಡ ತಲುಪಿರುತ್ತಿದ್ದಿ ಎಂಬ ಮಾತುಗಳನ್ನು ಕೇಳುತ್ತೀರಿ. ನಿಮ್ಮ ಹಿತೈಷಿಗಳು, ಹತ್ತಿರದವರೂ ಇದೇ ಮಾತನ್ನು ಆಡಬಹುದು. ಆಗ ನಿಮ್ಮ ಮನಸ್ಥಿತಿ ಬದಲಿಸದಿರಿ. ಗುರಿಯತ್ತ ಇಟ್ಟ ಹೆಜ್ಜೆ ಕದಲಿಸದಿರಿ. ಬದ್ಧತೆ ಸಡಿಲಿಸುತ್ತಿದ್ದೀರಾ? ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಅಪರೂಪದ ಸಾಧನೆಗೈದ, ಇತಿಹಾಸದ ಪುಟದಲ್ಲಿ ಮಿಂಚುತ್ತಿರುವ ಮಹಿಳೆಯೆಂದರೆ ಮೇಡಮ್ ಕ್ಯೂರಿ. ಪತಿಯನ್ನು ಕಳೆದುಕೊಂಡ ದುಃಖದ ನಂತರವೂ ಸಂಶೋಧನೆಯನ್ನು ಮುಂದುವರೆಸಿದರು.ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯಂ ಉಪಯೋಗಗಳನ್ನು ಪ್ರತಿಪಾದಿಸಿದ್ದಕ್ಕಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಇದು ಕ್ಯಾನ್ಸರ್ ರೋಗಿಗಳಿಗೆ ವರದಾನವಾಯಿತು. ಸ್ವಲ್ಪ ಯೋಚಿಸಿ, ಒಂದು ವೇಳೆ ಪತಿಯ ಮರಣದ ದುಃಖದಲ್ಲಿ ಸಂಶೋಧನೆಯ ಬಗೆಗೆ ಇರುವ ಬದ್ಧತೆಯನ್ನು ಬದಿಗೊತ್ತಿದ್ದರೆ ಆಕೆಯ ಸಂಶೋಧನೆಯ ಫಲ ಜನ ಸಮುದಾಯಕ್ಕೆ ಲಭಿಸುತ್ತಿತ್ತೇ? ಬದ್ಧತೆ ಇದ್ದರೆ ಯಾವ ನೋವು ಸಂಕಟಗಳೂ ನಮ್ಮನ್ನು ಬಾಧಿಸವು. ನಿಮ್ಮೊಂದಿಗಿದ್ದವರು ಈಗಾಗಲೇ ಗೆಲುವಿನ ದಡ ಸೇರಿದ್ದಾರೆ ಎಂಬ ಭಯದಲ್ಲಿ ನಿಮ್ಮ ಬದ್ಧತೆಯನ್ನು ಸಡಿಲಿಸಬೇಡಿ. ಅಡ್ಡ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಗೆಲುವು ಸಾಧಿಸಲು ಯಾವುದೇ ಅಡ್ಡ ದಾರಿಗಳಿಲ್ಲ. ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳದೇ ಇದ್ದರೆ ಸೋಲಿಗೆ ಆಹಾರವಾಗಿಸುತ್ತದೆ. ಯಶಸ್ಸು ಧುತ್ತನೇ ದೊರೆಯಬೇಕೆಂದು ಅಡ್ಡದಾರಿಗಳ ಬೆನ್ನು ಹತ್ತದಿರಿ. ಎಲ್ಲರೆದರೂ ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ವಿಜಯ ಪಥ ಧೀರ್ಘವಾಗಿರುತ್ತದೆ. ಧೀರೂಬಾಯಿ ಅಂಬಾನಿಯವರು ಕಟ್ಟಿದ ೬೫ ಸಾವಿರ ಕೋಟಿ ರೂಪಾಯಿಯ ದೊಡ್ಡ ರಿಲಾಯನ್ಸ್ ಕಂಪನಿ ರಾತ್ರೋ ರಾತ್ರಿ ಎದ್ದು ನಿಂತಿಲ್ಲ. ಧೀರೂಬಾಯಿಯವರ ಹಲವಾರು ವರ್ಷಗಳ ಅವಿರತ ಶ್ರಮವೇ ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ನಿಲ್ಲಲು ಕಾರಣವಾಯಿತು. .ಹಾಲಿನಲ್ಲಿ ಕರಗಿಸಿದ ಸಕ್ಕರೆಯಂತೆ ಗೆಲುವಿಗೆ ಬೇಕಾದ ಅಂಶಗಳೆಲ್ಲವೂ ನಮ್ಮೊಳಗೇ ಇವೆ. ಅವುಗಳನ್ನು. ಸೋಲು ಒಪ್ಪಿಕೊಳ್ಳುವ ಮುನ್ನ ತಪ್ಪದೇ ಪಾಲಿಸಿದರೆ ಗೆಲುವಿನ ರುಚಿ ನೋಡಲು ಖಂಡಿತ ಸಾಧ್ಯ. *************** .
ಬಣ್ಣ-ರೇಖೆಗಳ ಜೊತೆಯಾಟ ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’ ಎಂ.ಎಲ್.ಸೋಮವರದ ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, ಮೈಸೂರು, ಶ್ರೀರಂಗ ಪಟ್ಟಣ, ಕಾರವಾರ ಸೇರಿದಂತೆ ಹತ್ತು ಹಲವು ಕಡೆ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಚಿತ್ರಗಳನ್ನು ಶಿಬಿರಗಳಲ್ಲಿ ಬಿಡಿಸಿದ್ದಾರೆ. ಕಲಾ ಜಾತ್ರೆ, ಚಿತ್ರ ಸಂತೆ, ಜಪಾನ್ ಮಾದರಿ ಗದ್ದೆಚಿತ್ರ, ಬಹುರೂಪಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಟ್ಯಾಗೋರ್ ಚಿತ್ರ ಕಲಾಶಾಲೆ ಕಾರವಾರದಲ್ಲಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಗುಟ್ಟು ಹೇಳಿಕೊಟ್ಟಿದ್ದಾರೆ. 2019ರಲ್ಲಿ ಲಲಿತಾ ಕಲಾ ಅಕಾಡೆಮಿ ಏರ್ಪಡಿಸಿದ್ದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸೋಮವರದ ಇಲ್ಯುಸ್ಟ್ರೈಷನ್ ,ಅಕ್ಷರ ವಿನ್ಯಾಸ ಮಾಡುವುದರಲ್ಲಿ, ರೇಖಾಚಿತ್ರ ಬಿಡಿಸುವುದರಲ್ಲಿ ಪಳಗಿದವರು. ಇವರ ಚಿತ್ರಗಳು ಮಯೂರದಲ್ಲಿ ಕತೆ, ಕವಿತೆ. ಲೇಖಕರ ಪರಿಚಯದ ವಿಭಾಗಗಳಲ್ಲಿ ಪ್ರಕಟವಾಗಿವೆ. ಅಲ್ಲದೇ ಪ್ರಜಾವಾಣಿ, ಭಾವನಾ, ಸುಧಾ, ಕಸ್ತೂರಿ, ಅನ್ವೇಷಣೆ,ಪೈರು ಪಚ್ಚೆ, ವಿಜಯಕರ್ನಾಟಕ, ಚಂದ್ರಿಕೆ ಹೀಗೆ ಹಲವು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ, ತ್ರೈಮಾಸಿಕ ಪತ್ರಿಕೆಗಳಲ್ಲಿ ಅವರ ಚಿತ್ರಗಳು ಪ್ರಕಟವಾಗಿವೆ. ಸೋಮವರದ ವೈಚಾರಿಕ ಪ್ರಜ್ಞೆಗೆ ಚಿತ್ರಕಲೆಯನ್ನು ಬಳಸಿದ ಕಲಾವಿದರೂ ಹೌದು. ನಾಡಿನ ವಿವಿಧ ಲೇಖಕರ ಕಥಾ, ಕವಿತಾ, ಪ್ರಬಂಧ ಸಂಕಲನಗಳಿಗೆ ಮುಖಪುಟ ರಚಿಸಿದ್ದಾರೆ. “ಕಡಲ ದಂಡೆಗೆ ಬಂದ ಬಯಲು” ಕಥಾ ಸಂಕಲನ ಹಾಗೂ “ಬಿಸಿಲ ಬಯಲ ಕಡಲು” ಕವನ ಸಂಕಲನಕ್ಕೆ ಮುಖಪುಟವನ್ನು ಸಹ ಕಲಾವಿದ ಎಂ.ಎಲ್.ಸೋಮವರದ ಮಾಡಿದ್ದಾರೆ. ಅಮೆರಿಕಾದಲ್ಲಿನ ಕೆಲ ಕನ್ನಡಿಗರು ಸೋಮವರದ ಅವರ ಚಿತ್ರಗಳನ್ನು ಕೊಂಡು ಅವರ ಮನೆಗಳನ್ನು ಅಲಂಕರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಾವಯವ ಸಮ್ಮೇಳನಕ್ಕೆ ಬಂದಿದ್ದ ಮಲೇಷಿಯಾದ ಓರ್ವ ಮಹಿಳೆ, ಇವರು ಸೀರೆ ಮೇಲೆ ರೂಪಿಸಿದ ವಿನ್ಯಾಸ ಇಷ್ಟಪಟ್ಟು ಖರೀದಿಸಿದ್ದರು. ಜರ್ಮನಿಯ ಪ್ರಜೆ ಇವರ ಒಂದು ಕಲಾಕೃತಿಯನ್ನು ಸಹ ಕೊಂಡುಕೊಂಡಿದ್ದರು.…………………………………………………………………….. ಪ್ರಶ್ನೆ : ನೀವು ಚಿತ್ರಗಳನ್ನು ಏಕೆ ಬರೆಯುತ್ತೀರಿ? ಉತ್ತರ : ನನ್ನ ಮತ್ತು ನನ್ನಕುಟುಂಬದ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚಿತ್ರ ಮತ್ತು ಬಣ್ಣಗಳ ಜೊತೆ ಆಟವಾಡಿ ಹಣ ಸಂಪಾದಿಸುತ್ತೇನೆ. ಪ್ರಶ್ನೆ :ಚಿತ್ರ ಹುಟ್ಟುವ ಕ್ಷಣಯಾವುದು? ಉತ್ತರ: ಕಲೆ ಮತ್ತು ಚಿತ್ರ ಗ್ರಾಹಕರ , ಚಿತ್ರಗಳ ಖರೀದಿಸುವವರ ಅವಶ್ಯಕತೆಯ ಅಪೇಕ್ಷೆಯ ವಿನ್ಯಾಸಗಳಾದುದರಿಂದ , ಹೆಚ್ಚಿನ ಪಾಲು ಹಣ ಸಂಪಾದನೆಯ ಕ್ಷಣವಾಗಿರುತ್ತದೆ. ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ನನ್ನ ಚಿತ್ರಗಳ ವಸ್ತು ಹೆಚ್ಚಿನ ಪಾಲು ಗ್ರಾಹಕರ ಇಚ್ಛೆಗನುಸಾರವಾಗಿರುತ್ತದೆ. ವೈಯಕ್ತಿಕ ಕಲಾಪ್ರದರ್ಶನದ ಉದ್ದೇಶದ ಸಂದರ್ಭದಲ್ಲಿ ನನ್ನ ಸುತ್ತಲಿನ ಜಗತ್ತಿನ ಅನುಭವಗಳನ್ನು ನನ್ನದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತೇನೆ. ಪದೇ ಪದೇ ಕಾಡುವ ವಿಷಯ ಮನುಷ್ಯನ ಸ್ವಾರ್ಥ ಮತ್ತು ಭ್ರಷ್ಟಾಚಾರ. ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ,ಹರಯಇಣುಕಿದೆಯೇ? ಉತ್ತರ : ನನ್ನರೇಖಾ ಚಿತ್ರಗಳಲ್ಲಿ ಬಾಲ್ಯಕ್ಕಿಂತ ಹೆಚ್ಚಾಗಿ ಹರೆಯ ಇಣುಕಿದೆ. ಪ್ರಶ್ನೆ : ರೇಖೆಗಳು ಕಲೆಯ ಶಾಸ್ತ್ರೀಯ ನೆಲೆ ಅಂತಾರೆ , ಈ ಬಗ್ಗೆ ಏನು ಹೇಳುವಿರಿ ? ಉತ್ತರ : ರೇಖೆಗಳು ಚಿತ್ರಕಲೆಯ ಜೀವಾಳ. ಒಟ್ಟು ಚಿತ್ರಕಲೆಯೇ ಶಾಸ್ತ್ರೀಯ. ಪ್ರಶ್ನೆ : ಬೇಲೂರು ಹಳೇಬೀಡು ಮತ್ತು ಬಾದಾಮಿ, ಪಟ್ಟದಕಲ್ಲಿನ ಶಿಲ್ಪಗಳಲ್ಲಿನ ವಿಶೇಷತೆ ಏನು ? ಉತ್ತರ : ಬೇಲೂರು, ಹಳೇಬೀಡಿನ ಶಿಲಾಬಾಲಕಿಯರಲ್ಲಿ ಬೆಡಗು, ಬಿನ್ನಾಣ, ಸೂಕ್ಷ್ಮಕುಸುರಿ ಇದ್ದು ಕೌಶಲ್ಯವೇ ಮೇಲುಗೈ ಸಾಧಿಸಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಶಿಲಾಬಾಲಿಕೆಯರಲ್ಲಿ ಕಲಾತ್ಮಕತೆ ಮೇಲುಗೈ ಸಾಧಿಸಿದೆ. ಪ್ರಶ್ನೆ: ಪ್ರಸ್ತುತರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ಪ್ರಜಾಪ್ರಭುತ್ವದ ಬೇರುಗಳನ್ನು ಕತ್ತರಿಸುತ್ತಾ ಸಮಾಜ ಸುಧಾರಣೆಯ ಮುಖವಾಡತೊಟ್ಟು ಕೇಕೆ ಹಾಕಿ ವಿಜೃಂಭಿಸುತ್ತಿದೆ. ಪ್ರಶ್ನೆ: ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವು ಏನು? ಉತ್ತರ :ಧರ್ಮ ಬೇಕಿಲ್ಲ. ದೇವರೂ ಬೇಕಿಲ್ಲ. ಮನುಷ್ಯತ್ವವಿರುವ ಮನುಷ್ಯರು ಬೇಕು. ಪ್ರಕೃತಿ ಸಹಜವಾಗಿರಬೇಕು. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಭ್ರಷ್ಟಾಚಾರದಿಂದ ಬದುಕುತ್ತಿದೆ. ನಿಜವಾದ ಸಂಸ್ಕೃತಿ ಕೊನೆಯುಸಿರೆಳೆಯುತ್ತಿದೆ. ಪ್ರಶ್ನೆ: ಚಿತ್ರಕಲಾ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಉತ್ತರ :ಚಿತ್ರ, ಕಲಾಲೋಕವೇ ರಾಜಕಾರಣದಲ್ಲಿ ಮುಳುಗಿ ತೇಲುತ್ತಿದೆ. ಯಾವ ಪಕ್ಷಕ್ಕೆ ಯಾವ್ಯಾವ ಕಲಾವಿದರು ಎಷ್ಟೆಷ್ಟು ನಿಷ್ಠರೋ , ಅಷ್ಟರ ಮಟ್ಟಿಗೆ ಫಲಾನುಭವಿಗಳು.ಪಕ್ಷಾತೀತ ಕಲಾವಿದ ಮಾತ್ರ ಅನಾಥ ಶಿಶುವಿನಂತೆ. ಪ್ರಶ್ನೆ: ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಉತ್ತರ : ದೇಶದ ಚಲನೆ ಬುಲ್ಡೋಜರ್ ನಂತಾಗಿದೆ. ಪ್ರಶ್ನೆ: ಚಿತ್ರಕಲೆಯ ಬಗ್ಗೆ ನಿಮ್ಮ ಕನಸುಗಳು ಏನು? ಉತ್ತರ :ಆರ್ಟ್ ಪೈಂಟಿಂಗ್ಸ್ ನನ್ನನ್ನು ಪೋಷಿಸುವುದರ ಜೊತೆಗೆ ನನ್ನ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿ ದೃಶ್ಯ ಸಂಪುಟವಾಗಬೇಕು. ಪ್ರಶ್ನೆ: ನಿಮ್ಮಇಷ್ಟದ ಸ್ವದೇಶಿ ಚಿತ್ರಕಲಾವಿದರು ಯಾರು ? ಉತ್ತರ :ಕರ್ನಾಟಕದ ಆರ್.ಎಂ.ಹಡಪದ್, ಎಂ.ಬಿ.ಪಾಟೀಲ್, ವಿ.ಬಿ.ಹಿರೇಗೌಡರ್, ಯೂಸುಫ್ ಅರಕ್ಕಲ್, ಕೆ.ಕೆ.ಹೆಬ್ಬಾರ್ ಹಾಗೆಯೇ ದೇಶದ ಹೆಸರಾಂತ ಕಲಾವಿದರಾದ ಎಂ.ಎಫ್.ಹುಸೇನ್, ಜಾಮಿನಿರಾಯ್, ಕೆ.ಜಿ.ಸುಬ್ರಹ್ಮಣ್ಯಮ್, ರವಿವರ್ಮ ಇವರು ನನ್ನ ಕಾಡಿದ ಕಲಾವಿದರು. ಪ್ರಶ್ನೆ: ನಿಮ್ಮಇಷ್ಟದ ವಿದೇಶಿ ಚಿತ್ರಕಲಾವಿದರು ಯಾರು ? ಉತ್ತರ : ವಿದೇಶದ ಕಲಾವಿದರಾದ ಮೈಕೆಲ್ ಏಂಜೆಲೋ, ಲಿಯೋನಾರ್ಡ್ ಡಾವಿಂಚಿ, ರೆಂಬ್ರಾಂಟ್, ಸಾಲ್ವೆಡರ್ಡಾಲಿ, ವ್ಯಾನ್ಗಾಗ್, ಪಿಕಾಸೋ. ———–. ಕಲಾವಿದರ ಕೃತಿಗಳ ಫೋಟೊ ಆಲ್ಬಂ *********** ನಾಗರಾಜ ಹರಪನಹಳ್ಳಿ ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.







