ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಸೌಂದರ್ಯ ಲಹರಿ ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು.  ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ ಬಂದ ಅಪ್ಸರೆಯ ಮೋಹಕ ಹೆಜ್ಜೆಗಳ ಲಯ ಅದಕ್ಕೆ!. ಬರೆದೇ ಬಿಟ್ಟರು! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. ಈ ಕವನದತ್ತ ಚಿತ್ತ ಹರಿಸುವ ಮುನ್ನ, ಸೃಷ್ಟಿಯಲ್ಲಿ ಕಾಣ ಸಿಗುವ  ಪ್ರತಿಯೊಂದು ರೂಪದ ಹಿಂದಿನ ಸ್ವರೂಪದತ್ತ ದೃಷ್ಟಿ ಹರಿಸಿದರೆ ನಮಗೆ ಒಂದು ಅನೂಹ್ಯ ಸಾಮ್ಯತೆ ಕಾಣ ಸಿಗುತ್ತೆ. ಅದೇ ಸಿಮ್ಮೆಟ್ರಿ ( Symmetry). ನಿಮಗಿಷ್ಟವಾದ ಸಿನೆಮಾ ನಟಿ ಅಥವಾ ನಟನ ಮುಖ ಯಾಕೆ ಚಂದ. ಮುಖದ ಎಡ ಭಾಗ ಮತ್ತು ಬಲ ಭಾಗ ಒಂದಕ್ಕೊಂದು ಮಿರರ್ ಇಮೇಜ್ ಅಲ್ವಾ. ಎಡ ಬಲದಲ್ಲಿ ಕಣ್ಣುಗಳು, ಹುಬ್ಬುಗಳು  ಕಪೋಲಗಳು, ಕಿವಿಗಳು ಮೂಗಿನಲ್ಲೂ ಎರಡು ಹೊಳ್ಳೆಗಳು! ಹೀಗೆ ಸೃಷ್ಟಿಯ ಅದ್ಭುತ ಅಡಗಿದೆ ಮುಖಾರವಿಂದದ ಸಿಮ್ಮೆಟ್ರಿಯಲ್ಲಿ. ಈ ಸುಂದರ ಸಮರೂಪೀ ಚಿತ್ರಗಳು ಪರಸ್ಪರ ಕಣ್ಣು ಮಿಟುಕಿಸಿ “ಲವ್ ಅಟ್ ಫಸ್ಟ್ ಸೈಟ್” ಎಂಬ ಪ್ರೇಮ ಕಥೆ ಆರಂಭ. ಜಗದ ಸೌಂದರ್ಯದ ಹಿಂದೆ ಈ ಸಮರೂಪತ್ವ ಅಥವಾ ಸಿಮ್ಮೆಟ್ರೀ ಇದೆ. ಇದೊಂದು ಪ್ರಕೃತಿ ತತ್ವ. ನಾವು ನೀವು ಬಯಸಿ ರೂಪಿಸಿದ್ದಲ್ಲ. ದಾಸವಾಳ ಹೂವನ್ನು ಗಮನಿಸಿ. ಅದರ ದಳಗಳು ಒಂದರಂತೆ ಇನ್ನೊಂದು, ಒಂದು ಶಂಕುವಿಗೆ ಅಂಟಿಕೊಂಡಂತೆ ಹೊರಗಿಣುಕುತ್ತವೆ. ಅದರ ತೊಟ್ಟನ್ನು ಹಿಡಿದು ಸ್ವಲ್ಪ ಸ್ವಲ್ಪವೇ ದಳದಿಂದ ದಳಕ್ಕೆ ತಿರುಗಿಸಿದರೆ,  ಹೂವು ಒಂದೇ ಥರ ಕಾಣಿಸುತ್ತೆ.  ಇದೂ ಒಂದು ಸಿಮ್ಮಟ್ರೀ. ಅದೂ ಬೇಡ ಅಂದರೆ ಯಾವುದೇ ಗಿಡ ಬಳ್ಳಿಯ ಎಲೆಯನ್ನು ಗಮನಿಸಿ. ಎಲೆ ಮಧ್ಯದಲ್ಲಿ ಒಂದು ನಾರು ಅದು ಜೋಡಿಸಿ ಹಿಡಿದು ಇಕ್ಕೆಲಗಳಲ್ಲಿ ಎಡ ಬಲದ ಎಲೆ!. ಅದೂ ಸಿಮ್ಮೆಟ್ರೀ!. ದೇವದಾರು ಮರದ ಗೆಲ್ಲುಗಳು, ತೆಂಗಿನ ಮರದ ಮಡಲುಗಳು, ಎಷ್ಟೊಂದು ಸಿಮ್ಮೆಟ್ರಿಯಿಂದ ಸ್ವಾಲಂಕಾರ ಭೂಷಣೆಯರು ಅಲ್ಲವೇ. ನಾವು ನಿಂತ ಭೂಮಿ, ಆಕಾಶಕಾಯಗಳು ಸಾಧಾರಣವಾಗಿ ಗೋಲಾಕಾರ. ಅದು ಅತ್ಯಂತ ಹೆಚ್ಚು ಸಿಮ್ಮೆಟ್ರಿಕ್ ಅವಸ್ಥೆ. ಚಂದಮಾಮ ಹುಣ್ಣಿಮೆಯ ದಿನ ಎಷ್ಟು ಚಂದ ಕಾಣಿಸುತ್ತಾನೆ, ವೃತ್ತಾಕಾರದ ಬೆಳ್ಳಿ ತಟ್ಟೆಯ ಹಾಗೆ! ನೀವು ಸಸ್ಯದ ತುಣುಕನ್ನು ಮೈಕ್ರೋಸ್ಕೋಪ್ ನಲ್ಲಿ ಇಟ್ಟು ನೋಡಿದರೆ ಷಟ್ಕೋನಾಕೃತಿಯ  ಜೀವಕೋಶಗಳು ಸಿಮ್ಮೆಟ್ರಿಕ್ ಆಗಿ ಒಂದಕ್ಕೊಂದು ಹೆಗಲು ಜೋಡಿಸಿ ಸಾಲುಗಟ್ಟಿ ನಿಂತ ದೃಶ್ಯ ಕಾಣಿಸುತ್ತೆ. ಸಸ್ಯ ಮತ್ತು ಪ್ರಾಣಿಲೋಕದಿಂದ ಹೊರಬಂದರೆ, ಅದೋ, ಆ ಕಪ್ಪು ಕಲ್ಲು ಇದೆಯಲ್ಲ, ಅದನ್ನು ಒಡೆದೊಡೆದು ಅತ್ಯಂತ ಸಣ್ಣ, ಮೂಲ ಕಣವಾಗಿಸಿದರೆ ಅದು ಸ್ಪಟಿಕ ರೂಪಿಯಾಗಿರುತ್ತೆ. ಆ ಸ್ಫಟಿಕದ ಏಕಕಣ ಕೋಶ ಚಚ್ಚೌಕವೋ ಆಯತ ಘನವೋ, ಇತ್ಯಾದಿ ಹಲವು ರೀತಿಯ ಸಿಮ್ಮೆಟ್ರಿಕ್ ಆಕಾರ ಪಡೆದಿರುತ್ತವೆ. ಅದರ ಮೂಲೆಗಳಲ್ಲಿ ಮತ್ತು ಒಳಗೆ ನಾವು ಗೋಲಾಕಾರ ಎಂದು ನಂಬಿದ ಪರಮಾಣುಗಳು ಕುಳಿತಿರುತ್ತವೆ. ಪರಮಾಣುಗಳೂ ಸಮರೂಪೀ ಗೋಲಕಗಳೇ!. ನಾವು ಉಸಿರಾಡುವ ಆಕ್ಸೀಜನ್, ಕುಡಿಯುವ H2O ನೀರು, ಈ ಎಲ್ಲಾ ಮಾಲೆಕ್ಯೂಲ್ ಗಳೂ ತಮ್ಮದೇ ಆದ ಸಿಮ್ಮೆಟ್ರಿಯಿಂದಾಗಿ, ಸ್ವಭಾವವನ್ನೂ ಪಡೆದ ಅಂದಗಾತಿಯರು. ನಮ್ಮ ಮಿಲ್ಕೀ ವೇ ನಕ್ಷತ್ರ ಮಂಡಲದ ಚಿತ್ರ ನೋಡಿದರೆ ಅದರಲ್ಲೂ ಒಂದು ಸಿಮ್ಮೆಟ್ರಿ. ನಮ್ಮನ್ನು ಬಹಳಷ್ಟು ಕಾಡಿದ ಕರೋನಾ ವೈರಸ್ ನ ಚಿತ್ರವನ್ನು ಗಮನಿಸಿ, ಅದೂ ಸಿಮ್ಮೆಟ್ರಿಕ್ ಆದ ಗೋಲಕದ ಮೇಲ್ಮೈಯಲ್ಲಿ ವ್ಯವಸ್ತಿತ ದೂರದಲ್ಲಿ ಹತ್ತು ಹಲವು ಕಡ್ಡಿಗಳನ್ನು ಚುಚ್ಚಿದಂತೆ ಕಾಣಿಸುತ್ತೆ. ಈ ಸಿಮ್ಮೆಟ್ರಿಯಿಂದಾಗಿ ಆಕಾರಕ್ಕೆ ಸೌಂದರ್ಯವಲ್ಲದೇ ಅದರದ್ದೇ ಆದ ಸ್ಥಿರತೆ ಸಿಗುತ್ತೆ. ಚಿಟ್ಟೆಯ,ಹಕ್ಕಿಗಳ ದೇಹದ ಇಕ್ಕೆಲಗಳ ರೆಕ್ಕೆಗಳು ಅವುಗಳಿಗೆ ಹಾರಾಡುವಾಗ ಏರೋಡೈನಮಿಕ್ ಸ್ಥಿರತೆ ಕೊಡುತ್ತವೆ. ವಿಮಾನದ ಒಂದು ರೆಕ್ಕೆ ಮುರಿದರೆ ವಿಮಾನ ಕೆಳಗೆ ಬಿತ್ತು ಎಂದೇ ಲೆಕ್ಕ. ಕಟ್ಟಡಗಳು ಚಚ್ಚೌಕವೋ ಪಿರಮಿಡ್ ಥರವೋ, ಗುಂಬಜ್ ಆಗಿಯೋ ನಿರ್ಮಿಸಲು ಕಾರಣವೇ  ಸಿಮ್ಮಟ್ರಿಯ ಚಂದದ ಜತೆ ಜತೆಗೇ ಸಿಗುವ ದೃಡತೆ, ಸ್ಥಿರತೆ. ಮನುಷ್ಯ, ಪ್ರಾಣಿಗಳ ದೇಹದ ಸಂರಚನೆಯಲ್ಲಿ ಕಾಣುವ ಸಿಮ್ಮೆಟ್ರಿ, ಆಯಾ ಪ್ರಾಣಿಯ ಜೀವನ ಶೈಲಿಗೆ ಅನುಗುಣವಾದ ಚಲನೆಗೆ ಮತ್ತು ಅಸ್ತಿತ್ವಕ್ಕೆ ಸ್ಥಿರತೆ ದೊರಕಲೆಂದೇ. ಈ ಎಲ್ಲಾ ಪ್ರಕೃತಿ ಸಿದ್ಧ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸುವ ಸೂತ್ರ ಆ ವ್ಯವಸ್ಥೆಯ ಒಳಗಿನಿಂದಲೇ ಅದಕ್ಕೆ ಆ ರೂಪ ಕೊಡುತ್ತದೆ!. ದಾಸವಾಳ ಹೂವಿನ ಮೊಗ್ಗು ಅರಳಿ ಹೂವಾಗುತ್ತೆ ತಾನೇ!. ಯಾರೋ ತಮ್ಮ ಇಚ್ಛೆಗನುಸಾರ ದಾಸವಾಳದ ದಳಗಳನ್ನು ಒಂದಕ್ಕೊಂದು ಅಂಟಿಸಿದ್ದರಿಂದಾಗಿ,ಆ ಹೂ ಅರಳಿಲ್ಲ ಎಂಬುದು ಮುಖ್ಯ. ಅಂತಃಸತ್ವದ ಬಲದಿಂದ, ಅಂತಃಸೂತ್ರದ ಮಾರ್ಗದರ್ಶನದಿಂದ ಈ ರೂಪದ ಸಿಮ್ಮೆಟ್ರಿ, ಜತೆಜತೆಗೇ ಅದರ  ಸೌಂದರ್ಯ ಪ್ರಕಟವಾಗಿದೆ. ಒಂದು ಶಾಂತವಾದ ಕೊಳದ ಮಧ್ಯಕ್ಕೆ ಒಂದು ಕಲ್ಲೆಸೆದರೆ, ವೃತ್ತಾಕಾರದ ಅಲೆಗಳು ಬಿದ್ದ ಕಲ್ಲಿನ ಬಿಂದುವನ್ನು ಕೇಂದ್ರವಾಗಿಸಿ ಒಂದರ ಹಿಂದೆ ಒಂದರಂತೆ ಕೊಳದ ದಡದತ್ತ ಸರಿಯುತ್ತವೆ. ಈ ಅಲೆಗಳಲ್ಲಿಯೂ ಸಿಮ್ಮೆಟ್ರಿ ಇದೆ. ಅಲೆಗಳ ನಡೆಯಲ್ಲಿ ಲಯವೂ ಇದೆ. ಹಾಗಾಗಿ, ಯಾವುದೇ ಸಿಮ್ಮೆಟ್ರಿಯ ಜತೆಗೆ, ಲಹರಿಯಿದೆ, ಲಯವೂ ಇದೆ. ಈಗ ಕವಿತೆಗೆ ಬರೋಣ! ಕವಿತೆಯ ಸಾಲುಗಳ ರೂಪ  ಮತ್ತು ಅರ್ಥ ಕಟ್ಟುವ ಸ್ವರೂಪವೇ ಛಂದಸ್ಸು!. ಅದಕ್ಕೂ ಹತ್ತು ಹಲವು ಸಿಮ್ಮೆಟ್ರಿಗಳಿವೆ. ಪ್ರಕೃತಿಯ ಚಿತ್ತಾರಗಳ ಸಿಮ್ಮಟ್ರಿ ಹೇಗೆ  ಒಳಗಿನಿಂದಲೇ ಪ್ರಕಟವಾಗುತ್ತದೆಯೋ ಹಾಗೆಯೇ ಕವಿತೆಯ ಛಂದವನ್ನು, ಚಂದವನ್ನು ಮತ್ತು ಅರ್ಥ ವಾಸ್ತುವನ್ನು ಕವಿತೆಯ ಅಂತರಂಗದ ಬೀಜವೇ ನಿರ್ಧರಿಸುತ್ತದೆ. ಅದಕ್ಕೇ ಇರಬೇಕು, ಕವಿಯನ್ನೂ ಬ್ರಹ್ಮನಿಗೆ ಹೋಲಿಸಿದ್ದು. ಕವಿತೆಯ ಛಂದದ ಜತೆಗೂ ಲಹರಿಯಿದೆ. ಲಯವಿದೆ. ಆ ಲಯಕ್ಕೆ ಓದುಗನ ತನ್ಮಯ ಮನಸ್ಸನ್ನು ವಿಲಯನ ಮಾಡುವ ಕಸುವಿದೆ. ಬೇಂದ್ರೆ ಅವರ “ಪಾತರಗಿತ್ತಿ ಪಕ್ಕ” ಕವನದಲ್ಲಿ ಈ ಅಂತರಂಗಜನ್ಯ ಸಿಮ್ಮೆಟ್ರಿ ಮತ್ತು ಸೌಂದರ್ಯ ಲಹರಿ ಎರಡೂ ಎಷ್ಟು ಚೆಂದ!. ಹಾಗಿದ್ದರೆ ಈ ಛಂದದ ಗರ್ಭಕೋಶ ಯಾವುದು. ಅದರ ನೈಸರ್ಗಿಕ ಮತ್ತು ವ್ಯಾಕರಣಾತ್ಮಕ ವ್ಯಾಪ್ತಿ ಏನು?. ಮನುಷ್ಯ ಹೊರಗಿನಿಂದ ಲೇಪಿಸುವ ಛಂದ ಮುಖ್ಯವೇ ಅಥವಾ ಪ್ರಕೃತಿ,ಜನಪದ ಜನ್ಯ ಛಂದವಿಲ್ಲದ ಚಂದ ಮುಖ್ಯವೇ? ಈ ಪ್ರಶ್ನೆ ಹಾಕುವ ಕವಿತೆ, ಪೂರ್ಣಿಮಾ ಸುರೇಶ್ ಬರೆದ “ಛಂದವಿಲ್ಲದ ಚೆಂದ” ಕವಿತೆ. ಅಕ್ಷರರೂಪಿಯಾಗಿ ಹೀಗಿದೆ ನೋಡಿ. ಛಂದವಿಲ್ಲದ ಚೆಂದ *        *         * ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು ಅಡುಗೆ‌ ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿ; ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ! ಅಂಗಳದ ರಂಗೋಲಿಗೂ ಜ್ಯಾಮಿತಿಯ ಚುಕ್ಕಿ- ಗೆರೆಗಳು; ಚಿತ್ತಾರದ ಹುಮ್ಮಸ್ಸಿಗೆ ಕಂಠಪಾಠ ಆಗಲೇಬೇಕು ಸೂತ್ರ- ಪ್ರಮೇಯಗಳು ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು ಆಗ ಗೆರೆಗಳು  ಬೆರಳ ತುದಿಯಿಂದ ಇಳಿದು.. ಆದರೂ ಆಗೊಮ್ಮೆ ಈಗೊಮ್ಮೆ ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ… ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ .. ಸಲೀಸಾಗಿ ಬರೆದು  ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ *        *        * ಛಂದವಿಲ್ಲದ ಚೆಂದ ಅನ್ನುವಲ್ಲಿ ಛಂದ ಎಂದರೇನು?. ಅದು ಕಾವ್ಯದ ಅಂತರಾಳದಿಂದ ಸ್ವಯಂಭೂ ಆಗಿ ಸಂಭವಿಸಿದ, ಸಂಭವಿಸುತ್ತಲೇ ಇರುವ ನೈಸರ್ಗಿಕ ಕ್ರಿಯೆಯೇ? ಅಥವಾ ಬಾಹ್ಯಸ್ತರದಿಂದ ಅಂಕಣದ ಅಂಚುಗಳಿಗೆ ರೂಪ ಕಟ್ಟುವ ಛಂದವೇ?. “ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು” ‘ಗಣಿತ ಗುಣಿತ ಕಲಿತವರು’ ಎಂಬುದನ್ನು ಗಮನಿಸಬೇಕು. ಇದು ಕಲಿತ ಛಂದ. ಸ್ವಯಂ ಭೂ ಛಂದವಲ್ಲ.  ಹೀಗೆ ಕಲಿಸುವ ಕಲೆಸುವ, ಪಾಕ ಬರಿಸುವ, ತರ್ಕ ಶಾಸ್ತ್ರೀಯ, ಬಾಹ್ಯಜಗತ್ತಿನ ಕಾರ್ಯ ಕಾರಣ ಸಂಬಂಧಗಳ ಪದಬಂಧಕ್ಕೆ ಸಿಲುಕಿದ ಅಂತರ್ಮನ, ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿಯಾಗುತ್ತೆ. “ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ!” ಈ ಸಾಲುಗಳಲ್ಲಿ ‘ಅಂತರಂಗದ ಒಳದನಿ’ ಅಂತ ಬಳಸಿರುವುದು ಗಮನಾರ್ಹ. ಅದು ಅಂತರಾಳದ ನ್ಯಾಚುರಲ್ ಛಂದ. ಕವಿತೆಯುದ್ದಕ್ಕೂ ನಡೆಯುವ ತುಲನೆ, ಬಾಹ್ಯಜನ್ಯ ಛಂದದ ಲಿಪ್ ಸ್ಟಿಕ್ ಮತ್ತು ಎದೆಯೊಳಗಿನ ಪ್ರೀತಿಯ ಛಂದದ ಚೆಂದ ಗಳ ನಡುವೆ. “ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ.”  ಗೆರೆಗಳ  ಮೂಲಕ, ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು, ಶಿಷ್ಟ ಪದ್ಧತಿಯ ಕಂಠಪಾಠ ಮಾಡಿದ ‘ನುರಿತ’ ಬೆರಳುಗಳು ರಂಗವಲ್ಲಿ ಬರೆಯುವಾಗ ರೇಖೆಗಳಿಗೆ ಭಾವ ಬರದೇ ಇದ್ದಾಗ ಆ ಜನಪದೀಯ ಹುಡುಗಿ ಸರಸರನೆ ರಂಗೋಲಿ ಬರೆಯುತ್ತಾಳೆ. ಆಕೆಗೆ,  ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ  ಯಾವುದರ ಕಂಠಪಾಠವೂ ಇಲ್ಲ. ( ಕಂಠಪಾಠ ಎಂಬ ಪದ ಎಷ್ಟು ಮೆಕ್ಯಾನಿಕಲ್ ಎಂಬ ಭಾವ ಅಲ್ಲವೇ). ಹಾಗೆ ಆ ಕಾಡು ಹುಡುಗಿ ಸಲೀಸಾಗಿ ಬರೆದು,   “ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ” ರಂಗವಲ್ಲಿಯ ಪೂರ್ವನಿರ್ಧಾರಿತ ಶಿಷ್ಟ ಜ್ಞಾನದ ಗೆರೆಗಳು, ಮತ್ತು ಅಂತರಂಗದಿಂದ ಮೂಡಿ ಆವಿರ್ಭವಿಸಿ ತನ್ನಿಂದ ತಾನೇ ಬರೆಯಲ್ಪಟ್ಟ ರಂಗೋಲಿಯ ನಡುವೆ ಇದು ಸ್ಪರ್ಧೆಯಲ್ಲ. ಮೊದಲನೆಯದ್ದು  ಸೂತ್ರ ಕಗ್ಗಂಟುಗಳಲ್ಲಿ ಬಂದಿಯಾದರೆ, ಎರಡನೆಯದ್ದು ಛಂದವಿಲ್ಲದ ಚಂದವಾಗಿ, ಬಂಧನವಿಲ್ಲದ ಬಾಂಧವ್ಯವಾಗಿ, ಸರಸರನೆ ಬೆರಳುಗಳು ಸರಿದು ಮೂಡುವ ಸಿಮ್ಮೆಟ್ರಿಯಾಗಿ ಮೂಡಿ “ರಂಗೋಲಿಯಂತೆ ಅವಳೂ ನಿರಾಳವಾಗಿ ನಗುತ್ತಾಳೆ! “ ನಾನು ಈ ಮೊದಲು ಉದಾಹರಣೆಯಾಗಿ ಹೇಳಿದ ಪ್ರಕೃತಿಯ ಒಳಕೇಂದ್ರದಿಂದ ಹೊರಮುಖಿಯಾಗಿ ಆಯಾಮದ ಪರಿಧಿಯ ಹಂಗಿಲ್ಲದೆ ಹರಿದು ಮೂಡುವ ಸಿಮ್ಮೆಟ್ರಿಗೆ ಛಂದವಿಲ್ಲದ ಚೆಂದವಿದೆ. ಅದಕ್ಕೆ ಮನುಷ್ಯನಿರ್ಮಿತ ಛಂದಸ್ಸಿನ ಅಗತ್ಯವಿಲ್ಲ. ಅಲ್ಲವೇ ************************************************************ ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚುಕಾಡುವ ವಿಷಯ” ಈ ಸಲದ ಮುಖಾಮುಖಿ ಯಲ್ಲಿ ನಾಗರಾಜ್ ಹರಪನಹಳ್ಳಿ ಸಂದರ್ಶಿಸಿದ್ದಾರೆ ಕವಿ,ಕತೆಗಾರ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರನ್ನು.……….ಪರಿಚಯ :ಸಂಯುಕ್ತ ಕರ್ನಾಟಕ, ಉದಯವಾಣಿ, ಗೌರಿಲಂಕೇಶ್ ಪತ್ರಿಕೆಗಳು ಸೇರದಂತೆ ೧೪ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ, ಕನ್ನಡ ಎಂ.ಎ. ಪದವಿಧರ. ಸುಮಾರು ಎರಡು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರು. ಮಾದಪ್ಪನ ಸಾವುಅದೃಶ್ಯ ಲೋಕದ ಮಾಯೆ ನಿರ್ವಾಣಗಾಂಧಿ ವೃತ್ತದ ದಂಗೆ ಕಥಾ ಸಂಕಲನಗಳು, ಮನಸೆಂಬ ಮಾಯಾವಿ ಆಯ್ದ ಕತೆಗಳ ಸಂಕಲನ.ಜೋಗವ್ವ ತಲ್ಲಣನೆಲೆ `ದಾಳಿ ಕಾದಂಬರಿ ಸೇರದಂತೆ ಒಟ್ಟು ೧೦ ಕೃತಿಗಳು ಪ್ರಕಟವಾಗಿವೆ.ಜೋಗವ್ವ ಕಾದಂಬರಿಗೆ ಅಮೆರಿಕಾದಲ್ಲಿ ನಡೆದ ೨೦೦೬ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಪರ್ಧೆಯ ಪುರಸ್ಕಾರ ಹಾಗೂ ಕತೆಗಳಿಗೆ ಕ.ಸಾ.ಪ. ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಪತ್ನಿ ಅನುಪಮ ಮತ್ತು ಇಬ್ಬರು ಪುತ್ರರೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.…………………………………. ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಬರೆವಣಿಗೆ ಎಂಬುದು ನನಗೆ ಮಾಸಿಕ ಬಿಡುಗಡೆಯ ಒಂದು ಮಾರ್ಗ. ಹೊಟ್ಟೆ ಹಸಿದಾಗ ಹೇಗೆ ಊಟದ ಅಗತ್ಯವಿರುತ್ತದೋ ಹಾಗೆ, ಬರೆವಣಿಗೆ ಮನಸ್ಸಿನ ಹಸಿವು ನೀಗಿಸುವ ಒಂದು ಕ್ರಮ ಎಂದುಕೊಂಡಿದ್ದೇನೆ. ನನಗೆ ಕತೆಗಳಲ್ಲಿ ಹೆಚ್ಚು ಆಸಕ್ತಿ. ಅದು ಕನಸೋ, ಅನುಭವವೋ, ಹುಡುಕಾಟವೋ ಅಥವಾ ಇನ್ನೇನೋ ಆಗಿರಬಹುದು. ಅದನ್ನು ಅಕ್ಷರಗಳಲ್ಲಿ ತೆರೆದಿಟ್ಟು ನಿರಾಳವಾಗುವುದಕ್ಕೆ ಬರೆಯುತ್ತೇನೆ. ವಸ್ತುಸ್ಥಿತಿಯೊಂದರ ಬೆನ್ನುಬಿದ್ದು ಹೊರಟು ಧ್ಯಾನದ ಉತ್ತುಂಗದ ಸ್ಥಿತಿಯಲ್ಲಿ ದೊರೆತ ಅರಿವಿನ ಸಾಕ್ಷಾತ್ಕಾರದ ಫಲವೇ ಕಥನ ಎಂಬುದು ನನ್ನ ನಂಬಿಕೆ.  ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಆನಂದವಾಗಲಿ, ವಿಸ್ಮಯವಾಗಲಿ, ದುಃಖವಾಗಲಿ ಅಥವಾ ಶೋಧನೆಯ ಹಂಬಲವೇ ಇರಲಿ ಯಾವ ಒಂದು ಸಂಗತಿ ಮನಸ್ಸನ್ನು ತಟ್ಟುತ್ತದೋ; ಬಹಳ ದಿನ ಕಾಡುತ್ತದೋ, ಚಿಂತನೆ-ಜಿಜ್ಞಾಸೆಗೆ ಹಚ್ಚುತ್ತದೋ ಅದು ಕತೆ-ಕವಿತೆಯ ಸ್ವರೂಪದಲ್ಲಿ ರೂಪಗೊಂಡು ವ್ಯಕ್ತವಾಗುತ್ತದೆ. ಅದಕ್ಕೆ ಇಂತಹದೇ ಸಮಯ ಎಂಬುದು ಇಲ್ಲ. ಮನಸ್ಸಿಗೆ ಹತ್ತಿರವಾದದ್ದು, ನಾನೇ ಅರಿಯದ ನನ್ನ ಪ್ರಜ್ಞೆ ಯೊಂದನ್ನು ಜಾಗೃತಗೊಳಿಸುವ ಸಂಗತಿ, ಘಟನೆ, ವ್ಯಕ್ತಿ ಕತೆ ಹುಟ್ಟುವ ಕ್ಷಣಕ್ಕೆ ಮೂಲ.  ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಮನುಷ್ಯ ಸಂಬಂಧಗಳ ನಿಗೂಢ ನೆಲೆಗಳನ್ನು ಶೋಧಿಸುವುದು, ಆ ಮೂಲಕ ವಾಸ್ತವಿಕ ನೆಲೆಗಟ್ಟಿನಲ್ಲಿ ಬದುಕನ್ನು ನೋಡುವುದು ನನ್ನ ಹಲವು ಕತೆಗಳ ಗುಣ ಅಥವಾ ವಸ್ತು ಎನ್ನಬಹುದು. ನಾವು ಪರಂಪರೆಯನ್ನು ಒಪ್ಪಿಕೊಂಡು ಯಾವುದನ್ನು ಬದುಕು ಎಂದು ಕೊಂಡು ಕಣ್ಣುಮುಚ್ಚಿ ಜೀವಿಸುತ್ತಿದ್ದೇವೊ ಅದನ್ನು ಮೀರಿದ ಒಂದು ಬದುಕಿನ ಆಯಾಮವನ್ನು ಅನ್ವೇಷಿಸುವ, ದರ್ಶಿಸುವ ಕ್ರಮ ನನ್ನ ಕತೆಗಳಲ್ಲಿ ಹೆಚ್ಚಾಗಿ ವ್ಯಕ್ತವಾಗಿದೆ ಎಂದು ಭಾವಿಸಿದ್ದೇನೆ. ನಮ್ಮ ದೇಶದ ಜನರಿಗೆ ಅಂಟಿಕೊಂಡಿರುವ ಕರಾಳ ಮೌಢ್ಯ ಎಂಬುದು ೨೧ನೇ ಶತಮಾನದಲ್ಲೂ ವಿಮೋಚನೆಯಾಗಿಲ್ಲವಲ್ಲ ಎಂಬುದು ಮತ್ತು ಈ ಜನರು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚು ಕಾಡುವ ವಿಷಯ. ನಮ್ಮ ದೇಶದಲ್ಲಿ ಇದಕ್ಕೆ ಕೊನೆಯೇ ಇಲ್ಲವೇನೊ!? ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಸಾಮಾನ್ಯವಾಗಿ ಎಲ್ಲ ಲೇಖಕರ ಬರವಣಿಗೆಯಲ್ಲಿ ಬಾಲ್ಯ ಮತ್ತು ಹರೆಯದ ಕಾಲಘಟ್ಟದ ಸಗತಿಗಳು ವ್ಯಕ್ತವಾಗಿರುತ್ತವೆ. ಬಾಲ್ಯವೆಂಬುದು ನಮ್ಮ ಬದುಕಿನ ಅಡಿಪಾಯವಿದ್ದಂತೆ ಹಾಗಾಗಿ ವ್ಯಕ್ತಿ ಎಷ್ಟೇ ಪ್ರಬುದ್ಧನಾದರೂ ಬಾಲ್ಯವನ್ನು ಮರೆಯಲಾರ. ಅದರಂತೆ ಹರೆಯದ ಕಾಲಘಟ್ಟವನ್ನು ಒಂದು ಭಾವಗೀತೆಗೆ ಹೋಲಿಸಬಹುದು. ಅಲ್ಲಿ ವಾಸ್ತಕ್ಕಿಂತ ಹೆಚ್ಚು ಕನಸುಗಳೇ ಇರುತ್ತವೆ. ಹಾಗಾಗಿ ಕತೆ ಮತ್ತು ಕವಿತೆಗಳಲ್ಲಿ ಇವೆರಡೂ ಹಂತಗಳನ್ನು ದಾಟಿ ನಾನೀಗ ಬದುಕು, ಸಮಾಜ ಮತ್ತು ಜಗತ್ತನ್ನು ಒಂದು ಪ್ರಬುದ್ಧ ನೋಟದಿಂದ ನೋಡುವ ಹಂತಕ್ಕೆ ಬಂದಿದ್ದೇನೆ ಅನಿಸುತ್ತದೆ. ಹಾಗಾಗಿ ಹಿಂದೆ ಬರೆದದ್ದೆಲ್ಲ ಅಪೂರ್ಣ ಅನಿಸುತ್ತದೆ. ಇನ್ನುಮುಂದೆ ಬರೆಯುವುದೆಲ್ಲ ಇನ್ನೂ ಪಕ್ವವಾಗಿರಬೇಕು ಅನ್ನಿಸುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ರಾಕೀಜಯ ಸನ್ನಿವೇಶಗಳ ಬಗೆಗೆ ಮಾತನಾಡಿ ನಮ್ಮ ನೈತಿಕತೆ, ಬದ್ಧತೆಯನ್ನು ಮಲಿನ ಮಾಡಿಕೊಳ್ಳುವುದು ಬೇಡ ಅನ್ನಿಸುತ್ತದೆ. ನೈತಿಕತೆ ಮತ್ತು ಬದ್ಧತೆಯ ವಿಚಾರದಲ್ಲಿ ಇಂದು ರಾಜಕೀಯ ಆ ಮಟ್ಟಕ್ಕೆ ಅಧಃಪತನಗೊಂಡಿದೆ. ದೇಶದಲ್ಲಿ ಇಂದು ಪಕ್ಷ-ಸಿದ್ಧಾಂತಗಳು ಎಂಬುವವೇ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರ ಸಿಗುವುದಾದರೆ ಯಾವ ವ್ಯಕ್ತಿಯೇ ಆದರೂ ಯಾವುದೇ ಗುಂಪು-ವಿಷಯಗಳೊಂದಿಗೆ ರಾಜಿಯಾಗಬಲ್ಲ. ತನ್ನ ಬದ್ಧತೆಯನ್ನು ತಾನೇ ತುಳಿದು ಅದರ ಮೇಲೆ ಜನರ ಹಿತವನ್ನು ಸಮಾಧಿ ಮಾಡಬಲ್ಲ. ಒಟ್ಟಾರೆ, ಹಣ ಬಲ, ಪ್ರಭಾವ, ಶಕ್ತಿ ಇದ್ದವನೇ ಜನಪ್ರತಿನಿಧಿ ಎನ್ನುವಂತಹ ನೀಚ ಮಟ್ಟಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಾಂತರಗೊಂಡಿದೆ. ಜನ ಇದನ್ನು ಅರ್ಥ ಮಾಡಿಕೊಂಡು ಜಾಗೃತರಾಗುವವರೆಗೆ ಇದಕ್ಕೆ ಕೊನೆ ಇಲ್ಲ.  ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನನ್ನ ಪ್ರಕಾರ ಮನುಷ್ಯ ಮಾನವೀಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವಿಸುವುದೇ ಧರ್ಮ. ಧರ್ಮದ ವಿಚಾರದಲ್ಲಿ ಇದನ್ನು ಮೀರಿದ ಇತರ ಸಂಗತಿಗಳೆಲ್ಲ ವ್ಯವಹಾರ-ವ್ಯಾಪಾರಗಳಷ್ಟೇ. ಸಮಾಜದಲ್ಲಿ ಇಂದು ಧರ್ಮದ ವಿಷಯ ಬಂಡವಾಳವಾಗಿ ಮಾರ್ಪಟ್ಟಿದೆ. ತಮ್ಮ ಧರ್ಮವೇ ಹೆಚ್ಚು, ತಮ್ಮ ಧರ್ಮವೇ ಉಳಿಯಬೇಕು- ಬೆಳೆಯಬೇಕು, ವ್ಯಾಪಿಸಬೇಕು ಎಂಬ ಕ್ಷುದ್ರ ಉದ್ದೇಶಗಳು ಧರ್ಮದ ಅರ್ಥವನ್ನು ವಿರೂಪಗೊಳಿಸಿವೆ. ಅದ್ದರಿಂದ ನಾನು ಹೇಳುವುದೇನೆಂದರೆ ಸಮಾಜದಲ್ಲಿ ಸಮದಾಯಗಳು ಸಾವಿರಾರು ಇದ್ದರೂ ಧರ್ಮಕ್ಕೆ ಇರುವ ಅರ್ಥ ಒಂದೇ. ಎಲ್ಲ ಸಮುದಾಯಗಳು ಅದನ್ನು ಅರಿಯಬೇಕಿದೆ. ಸೃಷ್ಟಿಯಲ್ಲಿ ಧರ್ಮ ಮತ್ತು ದೇವರ ಪರಿಕಲ್ಪನೆಗಳು ಸಮನ್ವಯವಾದಂತಹವು. ನಾನು ಯಾವುದನ್ನು ಮಾನವೀಯ ಸಂಸ್ಕಾರ ಎಂದು ಹೇಳಿದೆನೊ ಮನುಷ್ಯನಲ್ಲಿ ಅದನ್ನು ಜಾಗೃತಗೊಳಿಸುವ ಪ್ರಜ್ಞೆಯೇ ದೇವರು. ಅದಕ್ಕೆ ಮೂರ್ತವಾದ ಆಕೃತಿ ಎಂಬುದು ಇಲ್ಲ. ಅದೊಂದು ಮನುಷ್ಯನಲ್ಲಿ ಇರಬೇಕಾದ ಸಕಾರಾತ್ಮಕ ಭಾವವಷ್ಟೇ. ಹಾಗಾಗಿ ದೇವರು ಇದ್ದಾನೋ-ಇಲ್ಲವೋ ಎಂಬುದರ ಕುರಿತು ಮಾತನಾಡುವ ಮೊದಲು `ದೇವರು ಎಂದರೆ ಏನು ಎಂಬುದನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ದೇವರು ಎಂಬ ಇಂತಹ ಶ್ರೇಷ್ಠ ಭಾವ ಇಂದು ಸಮಾಜದಲ್ಲಿ ಕೆಲವರಿಂದ ವ್ಯಾಪಾರೀಕರಣಗೊಂಡು, ರಾಜಕೀಯಕರಣಗೊಂಡು ಇಡೀ ಸಮಾಜವನ್ನೇ ಅಂಧಶ್ರದ್ಧೆಯ ಕೂಪಕ್ಕೆ ತಳ್ಳುವ ಚಟುವಟಿಕೆಯಾಗಿ ಬೆಳೆದಿದೆ. ಅದು ಈ ದೇಶದ ದುರಂತವೆಂದೇ ಹೇಳಬೇಕು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತಹ ದೇವರ ರೂಪಗಳನ್ನು ಸೃಷ್ಟಿಸಿಕೊಂಡು ಜನ ಆ ರೂಪಕ್ಕೆ ಹಾಲು-ತುಪ್ಪ, ಹಣ ಸುರಿದು, ಹಸಿದ ಹೊಟ್ಟೆಗಳನ್ನು ಹೊರಳಿಯೂ ನೋಡದಿರುವುದನ್ನು ಕಂಡರೆ `ಅಯ್ಯೋ ಅನಿಸುತ್ತದೆ. ಈ ದೇಶದಲ್ಲಿ ಬುದ್ಧ ಬಂದು ಹೋದ, ಬಸವಣ್ಣ ಬಂದು ಹೋದ, ಅಂಬೇಡ್ಕರ್ ಅವರಂತಹ ಮಹಾ ಜ್ಞಾನಿ ಬಂದು ಹೋದರೂ,  ಕ್ರೂರ ಮೌಢ್ಯದಿಂದ ಹೊರ ಬರದ ಈ ಜನರನ್ನು ಕಂಡಾಗಲೆಲ್ಲ ನನಗೆ ಆಕ್ರೋಶ, ಕೋಪ, ಕಡೆಗೆ ವಿಷಾದ ಮೂಡುತ್ತದೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಪ್ರಸ್ತುತ ಸಾಂಸ್ಕೃತಿಕ ಕ್ಷೇತ್ರ ತನ್ನ ಧ್ಯೇಯೋದ್ದೇಶಗಳನ್ನು ಕಳೆದುಕೊಂಡು ವ್ಯಾಪಾರಕ್ಕೆ ತಿರುಗಿದೆ ಎಂದು ಹೇಳಬಹುದು. ನಾವು ಯಾವುದನ್ನು ಸಂಸ್ಕೃತಿ ಎಂದು ಅಭಿಮಾನದಿಂದ ಪೋಷಿಸುತ್ತ ಬಂದಿದ್ದೇವೆಯೋ ಇಂದು ಅದು ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ. ಕಲೆ-ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಅದಕ್ಕೆ ಕಾರಣ ಜಾಗತೀಕರಣ, ತಂತ್ರಜ್ಞಾನ ಬೆಳವಣಿಗೆ ಮತ್ತು ರಾಜಕೀಯ ಶಕ್ತಿಗಳು. ಕಲೆ, ಸಾಹಿತ್ಯ, ಸಂಸ್ಕೃತಿ ಎಂಬವು ಆಯಾ ದೇಶದ ಸೌಂದರ್ಯದ ದ್ಯೋತಕವಾಗಿರುತ್ತವೆ. ಅವು ವಿರೂಪಗೊಂಡರೆ ದೇಶದ ಸೌಂದರ್ಯವೇ ವಿರೂಪಗೊಂಡತೆ. ಇವನ್ನು ಪೋಷಿಸಬೇಕಾದ ಸರ್ಕಾರಗಳು ಈ ವಿಚಾರವನ್ನು ನಿರ್ಲಕ್ಷಿಸುತ್ತಿವೆ. ಸಮಾಜದಲ್ಲಿ ಕ್ರೌರ್ಯ ಬೆಳೆಯಲು ಇದೂ ಒಂದು ಕಾರಣವಾಗಿರಬಹುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ರಾಜಕಾರಣವೆಂಬುದು ಇಂದು ಎಲ್ಲ ಕ್ಷೇತ್ರದಲ್ಲಿ ಇರುವಂತಹದೆ. ರಾಜಕಾರಣ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವುದರಿಂದಲೇ ಸತ್ಯ ಮತ್ತು ಮೌಲ್ಯಗಳು ನೆಲೆ ಕಳೆದುಕೊಂಡಿವೆ. ಅರ್ಹತೆ ಮತ್ತು ಪ್ರತಿಭೆ ಎಂಬುದು ಮೂಲೆಗುಂಪಾಗಿದೆ. ಆದ್ದರಿಂದ ರಾಜಕಾರಣದಲ್ಲಿ ಸಾಹಿತ್ಯ-ಸಂಸ್ಕೃತಿ ಇರಬೇಕೆ ಹೊರತು ಸಾಹಿತ್ಯ-ಸಂಸ್ಕೃತಿಯಲ್ಲಿ ರಾಜಕಾರಣವಿರಬಾರದು. ಇಂದು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ವಿಚಾದರಲ್ಲಿ ಕೆಲವು ಸಾಹಿತಿಗಳು ರಾಜಕಾರಣಿಗಳನ್ನೂ ಮೀರಿಸುವಂತೆ ರಾಜಕೀಯ ಮಾಡುತ್ತಿರುವುದನ್ನು ನೋಡಿದರೆ ಸಾಹಿತ್ಯದ ಮೌಲ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಅರ್ಥವಾಗುತ್ತದೆ. ಸಾಹಿತ್ಯವೆಂಬುದು ಜ್ಞಾನ-ಅರಿವಿನ ಮಾರ್ಗವೇ ಹೊರತು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ಹಪಾಹಪಿತನವಲ್ಲ. ಈ ಎಲ್ಲದರ ನಡುವೆಯೂ ಪ್ರಾಮಾಣಿಕ ಸಾಹಿತ್ಯ, ಸಾಹಿತಿಗಳು ನೇಪಥ್ಯದಲ್ಲೇ ಇದ್ದಾರೆ.  ಈ ದೇಶದ ಚಲನೆಯ ಬಗ್ಗೆ ನಿಮ್ಮ ನಮ್ಮ ಮನಸು ಏನು ಹೇಳುತ್ತಿದೆ? ಈ ವಿಷಯವಾಗಿ ನಾನು ಮಾತನಾಡುವ ಮೊದಲು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನನಗೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಿಗೂ ಅಧಿಕಾರ ಮುಖ್ಯ ಹೊರತೂ ಜನರ ಹಿತವಲ್ಲ. ಮಾನವೀಯ ಗುಣಗಳನ್ನು ಪ್ರತಿಪಾದಿಸುವ ರೀತಿ-ಸಿದ್ಧಾಂತಗಳಲ್ಲಿ ನಂಬಿಕೆ ಇದೆ. ಅದು ಎಲ್ಲಿದ್ದರೂ ಸ್ವೀಕಾರರ್ಹ. ಚುನಾಯಿತ ಯಾವುದೇ ವ್ಯಕ್ತಿ, ಮಂತ್ರಿ-ಸರ್ಕಾರವೇ ಇರಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮದೇ ಶಾಸನ ಸೃಷ್ಟಿಸುವ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನೇ ಪಲ್ಲಟಗೊಳಿಸಬಹುದಾದ ಹುನ್ನಾರಗಳನ್ನು ನಾನು ಒಪ್ಪಲಾರೆ. ಒಂದು ರಾಷ್ಟವೆಂದರೆ ಒಂದು ಸಮುದಾಯ, ಧರ್ಮ ಕೇಂದ್ರಿತ ಭೂಪ್ರದೇಶವಲ್ಲ. ಸರ್ವ ಸಮುದಾಯ, ಧರ್ಮ ಕೇಂದ್ರಿತ ಭಾರತದಂತಹ ರಾಷ್ಟ್ರವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ರೂಪಾಂತರಗೊಳಿಸುವ ಹುನ್ನಾರ ಸಲ್ಲದು. ದೇಶವನ್ನು ಮುನ್ನಡೆಸುವವರು ಇದನ್ನು ಅರಿಯಬೇಕು. ಓಟ್ ಬ್ಯಾಂಕ್‌ಗಾಗಿ ಸಮುದಾಯ, ಧರ್ಮದ ವಿಷಯಗಳನ್ನು ಅಸ್ತçವಾಗಿಸಿಕೊಂಡು ಜನರ ಮನಸ್ಸು ಒಡೆಯುವುದು ಯಾವ ಪಕ್ಷ-ಸಿದ್ಧಾಂತದ ಮೌಲ್ಯ?  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನನ್ನ ಅರಿವಿನಲ್ಲಿ ಹೇಳುವುದಾದರೆ ಸಾಹಿತ್ಯವೆಂಬುದು ಅಂತರಂಗದಲ್ಲಿ ಬೆಳಗುವ ಜ್ಯೋತಿ. ಅದಕ್ಕೆ ಯಾವುದೇ ತರಹದ ಆಡಂಬರ, ವೈಭವ, ಮೆರವಣಿಗೆಗಳ ಅಗತ್ಯವಿಲ್ಲ. ಬರವಣಿಗೆ ಎಂಬುದು ಆ ಜ್ಯೋತಿಯನ್ನು ಹೊತ್ತಿಸಿದರೆ, ಓದು ಎಂಬುದು ಅದನ್ನು ನಿರಂತರವಾಗಿ ಬೆಳಗಿಸುತ್ತದೆ. ಸಾವು ಕಣ್ಣೆದುರು ಬಂದರೂ ಈ ಅರಿವಿನ ಆನಂದ ವೆಂಬುದು ಅದರ ಭಯವನ್ನು ಮರೆಸುತ್ತದೆ. ಹಾಗಾಗಿ ನಾನು ಸಾಹಿತ್ಯದ ಈ ಪ್ರಕ್ರಿಯೆಯನ್ನು ನನ್ನ ಜೀವಿತಾವಧಿಯವರೆಗೂ ಜಾಗೃತವಾಗಿಟ್ಟುಕೊಳ್ಳಲು ಬಯಸುತ್ತೇನೆ. ಇಂದಿಗಿಂತ ನಾಳೆ ಇನ್ನೂ ಚೆನ್ನಾಗಿ ಬರೆಯಬೇಕು ಎಂಬ ಹಂಬಲದಲ್ಲಿರುತ್ತೇನೆ. ಇದು ಆತ್ಮೋದ್ಧಾರದ ಮಾರ್ಗ! ವ್ಯಾಪಾರವಾಗದೇ ಉಳಿಯಬೇಕು ಎಂಬುದು ನನ್ನ ಆಶಯ. ಆದರೆ ಲೇಖಕರು ಬಡವರಾಗಿಯೇ ಉಳಿದು, ಪ್ರಕಾಶಕರು ಮಾತ್ರ ಶ್ರೀಮಂತರಾಗುತ್ತಿರುವುದು ವಿಪರ್ಯಾಸ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಬೇರೆ ಬೇರೆ ಲೇಖಕರು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗುತ್ತಾರೆ. ಹಲವರಲ್ಲಿ ಹಲವು ಬಗೆಯ ವೈವಿಧ್ಯವಾದ ಗುಣಗಳು ಇಷ್ಟವಾಗಬಹುದು. ಆದಾಗ್ಯೂ ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತರು ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾನ್ಜ್ ಕಾಫ್ಕಾ, ಆಲ್ಬರ್ಟ್ ಕಮೂ ಅವರು ನನಗೆ ಹೆಚ್ಚು ಇಷ್ಟವಾಗುವ ಲೇಖಕರು. ಯಾವುದೇ ವರ್ಗಕ್ಕೂ ಸೇರಬಹುದಾದ ವಿಶಿಷ್ಟ ಪ್ರಬೇಧದ ಬರವಣಿಗೆ ಮೂಲಕ ತೇಜಸ್ವಿ ಇಷ್ಟವಾದರೆ, ಕಾರಂತರು ಪ್ರಖರ ವೈಚಾರಿಕ ನಿಲುವಿನಿಂದ ಇಷ್ಟವಾಗುತ್ತಾರೆ. `ಮೆಟಮಾರ್ಫಸಿಸ್ ನಂತಹ ಬೆರಗು ಮೂಡಿಸುವಂತಹ ಅಸಂಗತ ಕಾದಂಬರಿ ಮೂಲಕ ಪ್ರಾನ್ಜ್ ಕಾಫ್ಕಾ ಇಷ್ಟವಾಗುತ್ತಾನೆ.  ಈಚೆಗೆ ಓದಿದ ಕೃತಿಗಳಾವುವು? ಟಿ.ಪಿ. ಅಶೋಕ ಅವರ  ಕಥನ ಭಾರತಿ, ಅಮರೇಶ ನುಗಡೋಣಿ ಅವರ  ದಂದುಗ,  ವಸುಧೇಂದ್ರ ಅವರ  ತೇಜೋ ತುಂಗಭದ್ರಾ ಮತ್ತು ಇತರ ಕೃತಿಗಳು.  ನಿಮಗೆ ಇಷ್ಟವಾದ ಕೆಲಸ ಯಾವುದು? ಓದು, ಬರೆವಣಿಗೆಯಂತೆ ಪ್ರವಾಸ ಮತ್ತು ಕಾಡಿನಲ್ಲಿ ಚಾರಣ ಮಾಡುವುದು ಕೂಡ ಇಷ್ಟ. ಕಾಂಕ್ರಿಟ್ ಕಾಡಿನಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ಬೆರೆಯುವುದು ಎಂದಿಗೂ ನನಗೆ ಇಷ್ಟದ ಕೆಲಸ. ಅದೇ ರೀತಿ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….5 ಅಪ್ಪ ಅವ್ವನ ಅದ್ಧೂರಿ ಮದುವೆ             ಜೋಯ್ಡಾದಲ್ಲಿ ಶಾನುಭೋಗಿಕೆಯ ಕೆಲಸ ತುಂಬಾ ಅನುಕೂಲಕರವಾಗಿತ್ತು. ತಿಂಗಳ ಸಂಬಳದಲ್ಲಿ ಒಂದು ಪೈಸೆಯನ್ನೂ ಖರ್ಚುಮಾಡಗೊಡದೆ ಹಳ್ಳಿಯ ರೈತಾಪಿ ಜನ ದವಸ-ಧಾನ್ಯ ತರಕಾರಿಗಳನ್ನೆಲ್ಲ ತಂದುಕೊಟ್ಟು ಸಹಕರಿಸುತ್ತಿದ್ದರಂತೆ. ಚಾವಡಿಯ ಒಂದು ಮೂಲೆಯಲ್ಲಿಯೇ ವಾಸ್ತವ್ಯಕ್ಕೆ ಅವಕಾಶವೂ ಇತ್ತು. ಬೆಟ್ಟದ ಹಳ್ಳಿಗಾಡಿನ ಹಳೆಯ ಕಟ್ಟಡವಾದ್ದರಿಂದ ಸಹಜವಾಗಿಯೇ ಕೋಣೆ ತುಂಬಾ ಬಿಲಗಳಿದ್ದವು. ಆ ಬಿಲಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇಲಿ ಹೆಗ್ಗಣ ಮತ್ತು ಅವುಗಳ ವಾಸನೆ ಹಿಡಿದು ಅಲ್ಲಿಗೆ ಬಂದು ಹೋಗುವ ವಿವಿಧ ಜಾತಿಯ ಹಾವುಗಳ ಉಪದ್ರವ ಬಿಟ್ಟರೆ ಊರಿನ ಜನ ತುಂಬ ಗೌರವದಿಂದ ಸಹಕರಿಸುತ್ತಿದ್ದರಂತೆ. ಆದರೆ, ಗಣಪು ಮಾಸ್ತರನಾಗಬೇಕೆಂದು ಬಯಸಿದ್ದರಿಂದ ಈ ಉದ್ಯೋಗ ಅಷ್ಟೇನೂ ತೃಪ್ತಿ ನೀಡಿರಲಿಲ್ಲ.             ಎರಡು ತಿಂಗಳಲ್ಲೇ ಸರಕಾರಿ ಶಾಲೆಯೊಂದರಲ್ಲಿ ಮಾಸ್ತರಿಕೆಯ ಆದೇಶ ಬಂದಿದೆಯೆಂಬ ಸುದ್ದಿ ಊರಿಂದ ಬಂತು. ಗಣಪು ಹಿಂದೆಮುಂದೆ ನೋಡದೆ ಶಾನುಭೋಗ ಹುದ್ದೆಗೆ ರಾಜೀನಾಮೆ ನೀಡಿ ಊರಿಗೆ ಮರಳಿದ. ಆದರೆ ಈ ರಾಜೀನಾಮೆ ಪ್ರಕ್ರಿಯೆಯಲ್ಲಿ ಎಂಟುದಿನ ತಡವಾಗಿತ್ತು. ಗಣಪು ಊರಿಗೆ ಬಂದು ಆದೇಶವನ್ನು ಪಡೆಯುವಷ್ಟರಲ್ಲಿ ಶಿಕ್ಷಣ ಇಲಾಖೆ ತನ್ನ ಆದೇಶವನ್ನು ಬದಲಿಸಿ ಬೇರೊಬ್ಬ ಶಿಕ್ಷಕನನ್ನು ನೇಮಿಸಿಕೊಂಡಾಗಿತ್ತು.             ಆರು ತಿಂಗಳ ಕಾಲ ಕೈಗೆ ಸಿಕ್ಕ ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಯಾಗಿದ್ದ ಗಣಪುವಿನ ಚಡಪಡಿಕೆಯ ದಿನಗಳಲ್ಲಿ ನಾಡುಮಾಸ್ಕೇರಿಯ ರಾಕು ಬೆನ್ನಿಗೆ ನಿಂತು ಧೈರ್ಯ ತುಂಬುತ್ತಿದ್ದನಂತೆ. ಆರು ತಿಂಗಳ ಬಳಿಕ ಮತ್ತೆ ಮಾಸ್ತರಿಕೆಯ ಆದೇಶ ಬಂತು. ಹೆಗ್ರೆ ಗ್ರಾಮದ ಶಾಲೆಗೆ ಗಣಪು ಮಾಸ್ತರನಾದ.             ಮಾಸ್ತರಿಕೆ ದೊರೆತು ಜೀವನದ ದಾರಿ ಭದ್ರವಾದ ಬಳಿಕ ಗಣಪು ಮದುವೆಗೆ ಯೋಗ್ಯ ವರ’ ಎಂಬ ಭಾವನೆ ಜಾತಿ ಬಾಂಧವರಲ್ಲಿ ಮೂಡಿತು. ಈ ನಡುವೆ ಗುಂದಿಹಿತ್ತಲಿನ ಸಂಪರ್ಕದಿಂದ ದೂರವೇ ಉಳಿಯುತ್ತಿದ್ದ ಗಣಪು ತನ್ನ ಗೆಳೆಯ ರಾಕುವಿನ ಕುಟುಂಬಕ್ಕೆ ಸಹಜವಾಗಿಯೇ ಹತ್ತಿರವಾಗಿದ್ದ. ಹೀಗಾಗಿ ಗಣಪುವಿನ ಮದುವೆಯ ಜವಾಬ್ದಾರಿಯನ್ನು ರಾಕುವೇ ಕೈಗೆತ್ತಿಕೊಂಡು ಕನ್ಯಾ ಶೋಧಕ್ಕೆ ತೊಡಗಿದ.             ರಾಕುವಿನ ಅಣ್ಣನ ಮಗಳು ತುಳಸಿ ಹನ್ನೆರಡರ ಎಳೆಯ ಮಗು. ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಳೆ. ರಾಕುವಿಗೆ ಅದೇ ವಯಸ್ಸಿನ ಸ್ವಂತ ಮಗಳೊಬ್ಬಳಿದ್ದಾಳೆ. ಅವಳು ಶಾಲೆ ಕಲಿಯುತ್ತಿಲ್ಲ. ಹಾಗಾಗಿ ರಾಕು ಅಣ್ಣನ ಮಗಳು ತುಳಸಿಯನ್ನು ಗಣಪುವಿಗೆ ಮದುವೆ ಮಾಡಲು ಸಂಕಲ್ಪ ಮಾಡಿದ. ಜಾತಿ ಬಾಂಧವರು ಕೂಡ “ಕಲಿತ ಹುಡುಗಿ ಯೋಗ್ಯವಧು” ಎಂದು ಅನುಮೋದನೆ ನೀಡಿದರು. ಹುಡುಗಿಯ ವಯಸ್ಸು ಚಿಕ್ಕದು ಎಂಬ ಸಣ್ಣ ಅಪಸ್ವರವೊಂದು ಕೇಳಿ ಬಂತಾದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಗಣಪು ಮತ್ತು ತುಳಸಿಯರ ಮದುವೆ ನಿಶ್ಚಯವಾಯಿತು.             ಎಲ್ಲರಿಗಿಂತ ಹೆಚ್ಚು ಸಂತಸ ಸಂಭ್ರಮ ಪಟ್ಟವಳು ತುಳಸಿಯ ಅವ್ವ ನಾಗಮ್ಮಜ್ಜಿ. ಮಾಸ್ತರಿಕೆಯಲ್ಲಿರುವ ಅಳಿಯ ದೊರೆತಿರುವುದು ಅಂದಿನ ಕಾಲಕ್ಕೆ, ಅದರಲ್ಲಿಯೂ ಅಪರೂಪವಾಗಿ ಶಿಕ್ಷಣ ಸಂಸ್ಕಾರ ಪಡೆಯುತ್ತಿರುವ ಆಗೇರ ಜನಾಂಗದಲ್ಲಿ ಸಾಮಾನ್ಯ ಸಂಗತಿಯಾಗಿರಲಿಲ್ಲ. ಗಂಡ ಗತಿಸಿದ ಬಳಿಕ ಮಗಳ ಭವಿಷ್ಯವೊಂದನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಹಿಲ್ಲೂರಿಗೆ ಹೊರಟು ಬೇಸಾಯಕ್ಕೆ ಬಯಸಿದ ನಾಗಮ್ಮಜ್ಜಿ ಅಲ್ಲಿಯ ವೈಫಲ್ಯದಿಂದಾಗಿ ಮರಳಿ ನಾಡುಮಾಸ್ಕೇರಿಗೆ ಬಂದಿದ್ದಳು. ಇಲ್ಲಿ ಕೂಲಿ ಮಾಡುತ್ತ ಮಗಳನ್ನು ಮತ್ತೆ ಶಾಲೆಗೆ ಸೇರಿಸಿದ್ದಳು. ಅಂಥ ಛಲಗಾರ್ತಿಯಾದ ಹೆಂಗಸಿಗೆ ಮಾಸ್ತರನೊಬ್ಬ ಅಳಿಯನಾಗುತ್ತಾನೆ ಎಂಬುದೇ ಸ್ವರ್ಗದಂಥ ಖುಷಿಯ ಸಂಗತಿ. ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದೇ ಸಂಕಲ್ಪ ಮಾಡಿದಳು.             ಲಂಕೇಶರು ಹೇಳಿದ ಹಾಗೆ ಬನದ ಕರಡಿಯಂತೆ ನಾಗಮ್ಮಜ್ಜಿ ಅಕ್ಕಿ, ಬೆಲ್ಲ, ಬಾಳೆ, ಹಲಸು, ಬಾಳೆಲೆಗಳನ್ನೆಲ್ಲಾ ಸಂಗ್ರಹಿಸತೊಡಗಿದಳು. ಹಿಲ್ಲೂರಿನಂಥ ಬೆಟ್ಟದಲ್ಲಿ ಬೇಸಾಯ ಮಾಡಿ ಬಂದ ದುಡಿಮೆಯ ಅನುಭವ ಅವಳದು. ಅದಾಗಲೇ ಅಲ್ಲಿಯ ನೆಂಟರೆಲ್ಲ ಭತ್ತ, ಕಬ್ಬು ಬೆಳೆಯುತ್ತ, ಬೆಲ್ಲದ ಕೊಡಗಳನ್ನೂ, ಅಕ್ಕಿಮೂಡೆಗಳನ್ನು ದಾಸ್ತಾನು ಮಾಡುವ ಹಂತ ತಲುಪಿದ್ದರು. ನಾಗಮ್ಮಜ್ಜಿ ಸ್ವತಃ ಹಿಲ್ಲೂರಿಗೆ ಹೋಗಿ ಅಕ್ಕಿ, ಬೆಲ್ಲ, ಬಾಳಿಗೊನೆ, ಹಲಸು ಇತ್ಯಾದಿಗಳನ್ನು ಸಾಕು ಸಾಕೆಂಬಂತೆ ಸಂಗ್ರಹಿಸಿ ಅವುಗಳನ್ನು ದೋಣಿಯಲ್ಲಿ ತುಂಬಿ ಗಂಗಾವಳಿ ನದಿಯ ಮೂಲಕವೇ ಊರಿಗೆ ಸಾಗಿಸಿದಳು. ಹಿಲ್ಲೂರಿನ ಎಲ್ಲ ಜಾತಿಬಂಧುಗಳಿಗೆ ಮದುವೆಗೆ ತಪ್ಪದೇ ಬರುವಂತೆ ವೀಳ್ಯ ನೀಡಿದ್ದಲ್ಲದೆ, ಊರಿಗೆ ಬರುತ್ತ ನದಿಯ ದಂಡೆಗುಂಟ ಇರುವ ಗುಂಡಬಾಳಾ, ಮೊಗಟಾ, ಸಗಡಗೇರಿ, ಅಗ್ಗರಗೋಣ ಮುಂತಾದ ಊರುಗಳ ಒಳಹೊಕ್ಕು ನೆಂಟರಿಷ್ಟರ ಪ್ರತಿಯೊಂದು ಮನೆಯಲ್ಲೂ ಅಳಿಯ ಮಾಸ್ತರನಿದ್ದಾನೆ’ ಎಂದು ಅಭಿಮಾನದಿಂದ ಹೇಳಿಕೊಂಡು ವೀಳ್ಯ ನೀಡಿ ಬಂದಳು.             ನಾಡುಮಾಸ್ಕೇರಿ ಮತ್ತು ಆಸುಪಾಸಿನ ಎಲ್ಲ ಜಾತಿ ಬಂಧುಗಳನ್ನು, ಪರಜಾತಿಯ ಹಿತೈಷಿಗಳನ್ನು ಕರೆಸಿಕೊಂಡು ಅದ್ದೂರಿಯಾದ ಹಂದರದಲ್ಲಿ ಮಗಳನ್ನು ಗಣಪು ಮಾಸ್ತರನಿಗೆ ಧಾರೆಯೆರೆದ ನಾಗಮ್ಮಜ್ಜಿ, ತಂದೆಯಿಲ್ಲದ ಕೊರತೆಯನ್ನೇ ತೋರಗೊಡದ ಚಿಕ್ಕಪ್ಪ ರಾಕು, ತುಳಸಿಯನ್ನು ದಾಂಪತ್ಯಜೀವನದ ಹೊಸ್ತಿಲಲ್ಲಿ ನಿಲ್ಲಿಸಿದರು. ಹಿರಿಯರ ಸಂಭ್ರಮ ಸಡಗರಗಳನ್ನು ಬೆರಗುಗಣ್ಣುಗಳಿಂದ ನೋಡುವುದನ್ನು ಬಿಟ್ಟರೆ ಹನ್ನೆರಡರ ಹರೆಯದ ಮುಗ್ಧ ತುಳಸಿಗೆ “ವಿವಾಹ ಏನು? ಏಕೆ?” ಎಂಬ ಅರ್ಥವೂ ತಿಳಿದಿರಲಿಲ್ಲ.             ನಾಡುಮಾಸ್ಕೇರಿಯಿಂದ ಗದ್ದೆ ಬಯಲಿಗೆ ಇಳಿದರೆ ಮಾರು ದೂರದಲ್ಲಿ ಸಿಗಬಹುದಾದ ವರನ ಮನೆಯಿರುವ ಗುಂದಿಹಿತ್ತಲಿಗೆ ಸೇರಬೇಕಾದ ದಿಬ್ಬಣ ನಾಗಮ್ಮಜ್ಜಿಯ ಸೂಚನೆಯ ಮೇರೆಗೆ ಹನೇಹಳ್ಳಿಯ ರಾಜಮಾರ್ಗದಲ್ಲಿ ಮೆರವಣಿಗೆ ಹೊರಟು ಬಾವಿಕೊಡ್ಲ, ಬಂಕಿಕೊಡ್ಲ, ಹನೇಹಳ್ಳಿ, ಹೆಗ್ರೆಗಳಲ್ಲಿ ಹಾದು ನಡುವೆ ಸಿಕ್ಕ ಬಂಧುಗಳ ಮನೆಯಲ್ಲಿ ಆರತಿ ಆಶೀರ್ವಾದ ಸ್ವೀಕರಿಸುತ್ತಾ ಗುಂದಿಹಿತ್ತಲಿನ ವರನ ಮನೆಯನ್ನು ಪ್ರವೇಶಿಸುವಾಗ ನಡುರಾತ್ರಿ ಸಮೀಪಿಸಿತ್ತಂತೆ.             ಹೀಗೆ ನಡೆಯಿತು ನಮ್ಮ ಅಪ್ಪ ಅಮ್ಮನ ಅದ್ದೂರಿ ಮದುವೆ. ********************************

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗರಂಗೋಲಿ-5 ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು ಪೂರ್ಣ… ಪೂ..ರ್ಣ.. ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು. ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು. ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.  ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. ಪುಟ್ಟ ಆಮ್ಲೇಟಿನ ತುಂಡು ಆ ಕಿಟಕಿಯ ಸಂದಿನಿಂದ ಹೊರಬರುತ್ತಿತ್ತು. ತಾನು ಬಾಯಿ ತೆರೆದು ನನಗೆ “ಆಂ..” ಎನ್ನುತ್ತಿದ್ದರು. ನನ್ನ ಬಾಯಿಗೆ ಅವರ ಪಾಲಿನ ಆಹಾರ. ನಿನ್ನ ಅಜ್ಜಿಗೆ ಹೇಳಬೇಡ. ಇದೆಲ್ಲ ತಿಂದರೆ ಅವಳು ಬಯ್ಯಬಹುದು. ನಾನು ಬಾಯಿ ಒರೆಸಿ ಆ ಹೊಸ ರುಚಿಗೆ ತವಕಿಸುತ್ತಿದ್ದೆ. ಒಂದು- ಎರಡು ತುಂಡು ನನಗೆ. ಉಳಿದದ್ದು ಅವರಿಗೆ. ಜೊತೆಗೆ ಅವರ ಬಳಿ ಒಂದು ಪಾರದರ್ಶಕ ಗ್ಲಾಸ್. ಅದರಲ್ಲಿ ಎಂತದೋ ಪಾನೀಯ. ತುಸು ಘಾಟು ವಾಸನೆ. ಸಂಜೆಗೆ ಅವರ ಆಹಾರ ಅಷ್ಟೆ ಇದ್ದ ಹಾಗೆ ನೆನಪು. ಮತ್ತೆ ಮೌನಿಯಾಗಿ ತನ್ನ ಕೊಠಡಿ ಸೇರುತ್ತಿದ್ದರು. ಅಜ್ಜಮ್ಮನ ವಠಾರದ ಮತ್ತೊರ್ವ ಅಜ್ಜಿಯೇ ಅವರು. ನನ್ನ ಪ್ರೀತಿಯ ಸಣ್ಣಜ್ಜಿ. ಬಾಲ್ಯದಲ್ಲಿ ಸಿಹಿ ಅನುಬಂಧಗಳನ್ನು ಜೋಡಿಸಿದ ಹಿರಿ ಮನಸ್ಸುಗಳು ಅದೆಷ್ಟೋ ಇದ್ದವು. ಅವರಲ್ಲಿ ಈ ಸಣ್ಣಜ್ಜಿಯೂ ಒಬ್ಬರು. ಆ ವಠಾರ ನನ್ನ ನಾಟಕದ ಅವ್ಯಕ್ತ ಪಾಠಶಾಲೆಯಾಗಿತ್ತು. ಅಜ್ಜಮ್ಮ ಅನ್ನುತ್ತಿದ್ದರು: ನನ್ನ ಖಾಸ ತಂಗಿಯಲ್ಲ,ಆದರೆ ಅವಳು ತಂಗಿ. ಅವಳ ಜವಾಬ್ದಾರಿ ನನ್ನದು”  ಈ ಸಣ್ಣಜ್ಜಿ ಅಜ್ಜಮ್ಮನಷ್ಟು ಮಾತನಾಡುವವರಲ್ಲ. ಮೌನಿ. ಆ ಉದ್ದದ ಮನೆಯ ಮುಕ್ತಾಯ ಹಂತದಲ್ಲಿ ಇರುವ ಕೋಣೆಯಲ್ಲಿ ವಾಸ. ಎದುರು ಭಾಗಕ್ಕೆ ಬರುವುದೇ ಕಮ್ಮಿ. ಹಿತ್ತಲ ಬದಿ ಇರುವ ಬಾಗಿಲಿನ ಸಮೀಪ ಮನೆಯ ಒಳಗಡೆ ಒಂದು ಸಿಮೆಂಟಿನ ಕುರ್ಚಿಯ ತರಹ ಇತ್ತು ಅದಕ್ಕೆ ಹೊಂದಿಕೊಂಡಂತೆ ಮರಗಳ ದಳಿ ಇರುವ ಉದ್ದನೆಯ ಕಿಟಕಿ. ಅಲ್ಲಿ ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಹೊತ್ತಿಗೆ  ಬಂದು ಕೂರುತ್ತಿದ್ದರು. ಕೈಯಲ್ಲಿ ಒಂದು ಪುಸ್ತಕ. ಯಾವ ಪುಸ್ತಕ, ಯಾವ ವಿಷಯಗಳ ಬಗ್ಗೆ ಅವರ ಆಸಕ್ತಿ ನನಗೆ ತಿಳಿಯುತ್ತಿರಲಿಲ್ಲ. ಬಹುಶಃ ಯಾರಿಗೂ ತಿಳಿದಿರಲಿಲ್ಲ. ಆ ಪುಸ್ತಕಗಳು ಅವರ ಕೋಣೆಯೊಳಗೆ ಇರುತ್ತಿದ್ದವು. ಆ ಕೋಣೆ ಆ ದೊಡ್ಡ ಮನೆಯೊಳಗಿನ ಅವರ ಮನೆ. ಅಜ್ಜಮ್ಮನ ಪ್ರತಿಯೊಂದು ಚರ್ಯೆ ಅನಾವರಣಗೊಂಡು ಕಣ್ಣೆದುರು ಕಾಣುತ್ತಿದ್ದರೆ ಇವರು ಎಲ್ಲ ವಿಷಯಗಳಲ್ಲೂ ಅಂತರ್ಮುಖಿ. ಸಣ್ಣಜ್ಜಿಯ ಕೋಣೆಯೊಳಗೆ ಹಗಲಲ್ಲೂ ಮಂದ ಬೆಳಕು. ನಾನು ಅಂಜಿಕೊಂಡು ಒಳಗೆ ಇಣುಕುತ್ತಿದ್ದೆ.  ಅವರು ಆ ಅರೆಕತ್ತಲಿನ ಕೋಣೆಗೆ ಇರುವ ಒಂದು ಕಿಟಕಿಯ ಬಳಿ ಕೂತಿರುತ್ತಿದ್ದರು. ತಿಂಡಿ,ಊಟ ಅಲ್ಲೇ. ತಟ್ಟೆಯಲ್ಲಿ ನೀರು ಕೊಡಬೇಕು. ಅಲ್ಲೇ ಕೈ ತೊಳೆಯುವುದು. ನಾನು ಅಡಗಿಕೊಂಡು ಅವರ ಚರ್ಯೆಗಳನ್ನು ಗಮನಿಸುತ್ತಿದ್ದೆ.  ಏನೋ ಯೋಚನೆ ಮಾಡುವ ರೀತಿ ಕೂತಿರುತ್ತಿದ್ದರು. ನಂತರ ಅಲ್ಲೇ ಓದು. ಪುಟ್ಟದೊಂದು ಗೋಡೆಗೆ ಹೊಂದಿಕೊಂಡ ಕಪಾಟು. ಅದರಲ್ಲೇ ಅವರ ಪುಸ್ತಕ,ಪೌಡರ್ ಡಬ್ಬ, ಬಿಳೀ ಪುಟ್ಟ ಡಬ್ಬದಲ್ಲಿ ಪೊಂಡ್ಸ ಕ್ರೀಂ.  ಯಾವುದೂ ಹೊರ ಬಾರದು. ಅವರ ಊಟವೂ ಅಷ್ಟೆ ಮಾತಿಗಿಂತಲೂ ಮಿತ. ಬರೀ ಒಂದು ಮುಷ್ಠಿ ಅನ್ನ,ಒಂದು ಲೋಟ ಹಾಲು,ಒಂದಿಷ್ಟು ಪಲ್ಯ. ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಅವರಾಗಿ ಊಟದ ಬಗ್ಗೆ ವಿಚಾರಿಸಿದ್ದು ಕಂಡಿಲ್ಲ. ಬೆಳಗ್ಗೆ ಬೇಗನೆ ಸ್ನಾನ. ಅವರ ದೇವರ ಪೂಜೆಯೂ ಬಹಿರಂಗವಾಗಿ ಕಾಣುತ್ತಿರಲಿಲ್ಲ. ಭಜನೆ,ಹಾಡು ಹಾಡಿದವರಲ್ಲ. ಅವರ ಮನೆಗೆ ಬಹಳಷ್ಟು ಜನ ಬರುತ್ತಿದ್ದರು. ಅಜ್ಜಮ್ಮ ಅವರೊಡನೆ, ಮಾತು ಚರ್ಚೆ ನಡೆಸುತ್ತಿದ್ದರು. ಸಣ್ಣಜ್ಜಿ ಯಾವುದರಲ್ಲೂ ಪಾಲ್ಗೊಂಡ ನೆನಪಿಲ್ಲ. ಭೇಟಿಗೆ ಬಂದವರೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು. ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ. ಅಜ್ಜಮ್ಮನ ಜೊತೆ ಮಾತು ಮೀರಿ ನಾನು ಸಣ್ಣಜ್ಜಿ ಬಳಿ ಹೋಗಲು ಎದ್ದರೆ ಗದರುತ್ತಿದ್ದರು. ಅವಳು ಯಾಕೆ? ಅವಳಿಗೆ ಗಂಡೂ ಬೇಡ,ಹೆಣ್ಣೂ ಬೇಡ.  ಸಣ್ಣಜ್ಜಿಯ ಪುಸ್ತಕಗಳು, ಅವರ ಕಣ್ಣಲ್ಲಿ ಒಸರುವ ವಾತ್ಸಲ್ಯ ಅದೊಂದು ಅಮೂರ್ತ ಭಾವ ನಿಧಿಯನ್ನು ದೇಣಿಗೆ ನೀಡಿತ್ತು. ಮುಂದೆ ನಾಟಕಗಳಲ್ಲಿ ರಾಮಾಯಣದ ಶಬರಿ, ರಾಮಾಶ್ವಮೇಧದ ಊರ್ಮಿಳಾ, ಮಂದಾರ ರಾಮಾಯಣದ ಅಹಲ್ಯೆ ಪಾತ್ರಗಳು ಮನಸ್ಸಿನಲ್ಲಿ ಚಿತ್ರಿತಗೊಂಡಾಗ ಆ ಪಾತ್ರದ ಮೂರ್ತ ರೂಪದಂತೆ ಅಯಾಚಿತವಾಗಿ ಸಣ್ಣಜ್ಜಿಯ ಕಾಯ ನಿಲ್ಲುತ್ತಿತ್ತು. ಅವರೂ ಯಾರದ್ದೋ ನಿರೀಕ್ಷೆಯಲ್ಲಿದ್ದರೇ ಎಂಬ ಪ್ರಶ್ನೆಯಿಂದ ಈಗಲೂ ಮನಸ್ಸು ತಳಮಳಿಸುತ್ತದೆ. ಈಗ ಅನಿಸುತ್ತದೆ. ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ. ತಪಸ್ವಿನಿಯಂತೆ ಬದುಕಿದರು. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ. ನನ್ನ ಬಾಳ ರಂಗಸ್ಥಳದಲ್ಲಿ ಕಂಡ ಅಪರೂಪದ ಪಾತ್ರ. ಅದೊಂದು ದಿನ ಮಲಗಿದ್ದಲ್ಲಿಯೇ ಕಾಯ ತೊರೆದಿದ್ದರು. ನಂತರದ ದಿನಗಳಲ್ಲಿ ನನ್ನೊಳಗೊಂದು ಭಯ ಹುಟ್ಟಿಕೊಂಡಿತ್ತು. ಅಡುಗೆ ಮನೆ ಹೋಗಬೇಕಾದರೆ ಅವರ ಕೊಠಡಿ ದಾಟಿ ಹೋಗಬೇಕಿತ್ತು. ಬೇಡವೆಂದರೂ ದೃಷ್ಟಿ ತೆರೆದ ಆ ಕೊಠಡಿಯತ್ತ ಓಡುತ್ತಿತ್ತು. ಆ ಪುಟ್ಟ ದೇಹ ಅಲ್ಲಿ ಇದ್ದ ಹಾಗೆ ಅನಿಸಿ ಗಾಬರಿಗೊಳ್ಳುತ್ತಿದ್ದೆ. ಅಜ್ಜಮ್ಮ ಏನಾದರೂ ತರಲು ಹೇಳಿದರೆ ಅಲ್ಲಿಯವರೆಗೆ ಸಹಜವಾಗಿ ಬಂದರೆ ನಡಿಗೆ ನಿಲ್ಲುತ್ತಿತ್ತು. ಮನಸ್ಸಿನಲ್ಲಿ ದೇವರ ನಾಮಸ್ಮರಣೆಯೊಂದಿಗೆ ಕಣ್ಣುಮುಚ್ಚಿ ಓಟದ ನಡಿಗೆಯಲ್ಲಿ  ಆ ಕೊಠಡಿ ದಾಟುತ್ತಿದ್ದೆ.  ಆ ಮನೆಯಲ್ಲಿದ್ದ ಮೂರನೆಯವರೇ ಹೆಣ್ಣು ರೂಪದ ಗಂಡು ಪಾತ್ರದ ವತ್ಸಲ ಚಿಕ್ಕಿ. ಅವರು ನಡೆದಾಡುವ ಶೈಲಿಯೂ ಹಾಗೆ. ಉದ್ದಕ್ಕಿದ್ದರು. ಎದೆಸೆಟೆಸಿ ನಡೆದಂತೆ ನಡೆಯುತ್ತಿದ್ದರು. ದಪ್ಪ ಸ್ವರ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಮ್ಮ ಬಳಿ ಇದ್ದ ಕೆಜಿಗಟ್ಟಲೆ ಬಂಗಾರ, ನಗದು ಎಲ್ಲ ಗಂಟು ಕಟ್ಟಿ ಗಾಂಧೀಜಿಯವರನ್ನು ಭೇಟಿ ಮಾಡಿ ಅವರಿಗೆ ಒಪ್ಪಿಸಿದ್ದರಂತೆ. ತನಗಿಷ್ಟವಾದಾಗ ತಿಂಡಿ, ಇಷ್ಟವಾದರೆ ಊಟ. ಯಾರನ್ನೂ ಕೇಳಿ ಉಪಚರಿಸಿಕೊಂಡವರಲ್ಲ. ಬೇಕಾದಾಗ ಅಡುಗೆ ಮನೆಗೆ ನುಗ್ಗಿ ಪಟಪಟ ಸದ್ದು ಮಾಡಿ ತನಗಿಷ್ಟವಾದುದ್ದನ್ನು ತಯಾರಿಸಿ ಉಣ್ಣುತ್ತಿದ್ದರು. ಮನೆಯೊಳಗೂ ಸ್ಲಿಪ್ಪರ್ ಚಪ್ಪಲು ಹಾಕಿ ಓಡಾಟ. ದಿನದಲ್ಲಿ ಮೂರು ನಾಲ್ಕು ಸಲ ಉಡುಪು ಬದಲಿಸುತ್ತಿದ್ದರು. ಎಲ್ಲವೂ ಶಿಸ್ತುಬದ್ಧ. ಬೆಳಗ್ಗೆದ್ದು ಎಲ್ಲಿಗೋ ಹೋಗುತ್ತಿದ್ದರು. ಥಟ್ಟೆಂದು ಪ್ರತ್ಯಕ್ಷವಾಗುತ್ತಿದ್ದರು. ಏನನ್ನೋ ಹೇಳಲಿರುವಂತೆ ಸದಾ ತುಟಿಗಳ ಚಲನೆ. ಖಾದಿ ಉಡುತ್ತಿದ್ದರು. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಮನಸ್ಸಾದರೆ  ದೇವಾಲಯಕ್ಕೆ ಹೊರಡುತ್ತಿದ್ದರು. ಅಗೆಲ್ಲ ನನ್ನ ಕರೆದುಕೊಂಡು ಹೋಗುವುದು. ಎದುರಾದ ಗಿಡ, ಮರ, ಕಲ್ಲು ಎಲ್ಲದಕ್ಕೂ ನಮಸ್ಕರಿಸುತ್ತಿದ್ದರು. ಕಾಲಿಗೆ ಕಲ್ಲು ಎಡವಿದರೆ ಆ ಕಲ್ಲಿಗೆ ಎರಡೂ ಕೈಗಳನ್ನು ಬಾಗಿಸಿ ನಮಸ್ಕರಿಸುತ್ತಿದ್ದರು.  “ಎಲ್ಲದರೊಳಗೂ ದೇವರಿದ್ದಾನೆ” ಸ್ವಗತದಂತೆ ಮಾತನಾಡುತ್ತಿದ್ದರು. ನನ್ನ ಕೈ ಹಿಡಿದೇ ಇರುತ್ತಿದ್ದರು. ಪ್ರಹ್ಲಾದ ಕಥೆ ಇವರೊಳಗಿಂದಲೇ ಚಿಗುರಿದಂತೆ.  ನಾನು ಬಹಳ ಕಾಲ ಅವರ ಈ ಅಭ್ಯಾಸ, ಹವ್ಯಾಸ ನನ್ನೊಳಗೆ ಇಳಿಸಿಕೊಂಡು ಅನುಸರಿಸುತ್ತಿದ್ದೆ. ವ್ಯಕ್ತಿಯ ಹಾವ ಭಾವದ ಅನುಕರಣೆ, ಸ್ವಭಾವದ ಅನುಕರಣೆ ಅಭಿನಯ ಮಂಟಪದ ಕಂಭಗಳು ತಾನೇ. ರಂಗದ ರಂಗೋಲಿಯೇ ಪ್ರೀತಿ,ತನ್ನಯತೆಯಿಂದ ನಮ್ಮನ್ನು ಸಮೀಕರಿಸಿ ಸಮರ್ಪಿಸಿಕೊಳ್ಳುವ ದೈವೀಕತೆ. ಪ್ರತೀ ಒಂದರ ಸೂಕ್ಷ್ಮತೆ, ಆಗುಹೋಗುಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ಎದೆಗಿಳಿಸಿಕೊಳ್ಳುವ ಜಾದೂ. ಅದರ ಮೊದಲ ಅಕ್ಷರಾಭ್ಯಾಸ ಬಾಲ್ಯ.  ನೆನಪಿಗೆ ತಾಲೀಮು, ಉಸಿರಿಗೆ ರಾಗ, ಮಾತಿಗೆ ಕೌಶಲ್ಯ, ದೇಹದ ಚಲನೆ, ಚೈತನ್ಯ ಎಲ್ಲವನ್ನೂ ನಿರಾಳತೆಯಿಂದ ಸ್ವೀಕರಿಸಲು ವೇದಿಕೆ ಕಟ್ಟಿದ್ದರು ಆ ಮೂವರು ದೇವಕನ್ನಿಕೆಯರು. ಅಜ್ಜಮ್ಮ ಹಾಡಿಸಿದ ಹಾಡುಗಳು, ಪ್ರಶ್ನೋತ್ತರಗಳು, ನೃತ್ಯ, ವ್ಯಕ್ತಿಗಳ ಮಾತು, ನಡೆಯ ಅನುಕರಣೆ ಎಲ್ಲವೂ ನನ್ನೊಳಗೆ ಒಬ್ಬ ಕಲಾವಿದೆ ಅಂಕುರಿಸಲು,ರಂಗದಲ್ಲಿ ಕಾಣಿಸಲು ದೀವಿಗೆಯಾಗಿ ಕಂಡಿದೆ.  ಬದುಕಿನ ಹಲವು ಅವಸ್ಥೆಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆ ಮತ್ತು ಪ್ರತಿಯೊಂದು ಪಾತ್ರಗಳಲ್ಲಿ ಅನುಭವಿಸುವ ತಾದಾತ್ಮ್ಯ ಭಾವ ಮನಸ್ಸಿನೊಳಗೆ ಸದಾ ಹಸಿರಾಗಿದೆ. *********************************************************************** ಪೂರ್ಣಿಮಾಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ ಸಿಗುತ್ತದೆ. ಆದರೆ ಅಸಂಖ್ಯ ಮಕ್ಕಳಿಗೆ ಅದೂ ಇಲ್ಲ. ಆ ಮಕ್ಕಳನ್ನು ನೆನೆದು ನಾವಿಲ್ಲಿ ದುಃಖಿಸಿ ದುಃಖಿಸಿ ಅಳುತ್ತೇವೆ. ಪ್ರಾರ್ಥಿಸುತ್ತೇವೆ. ನ್ಯಾಯಕ್ಕಾಗು ಕೂಗುತ್ತೇವೆ. ದೀಪ ಹಚ್ಚಿ ಅವರ ಆತ್ಮಕ್ಕಾಗಿ ನಾವಿಲ್ಲಿ ಶಾಂತಿ ಕೋರುತ್ತೇವೆ. ಹೀಗೇ ಯಾರೋ ಎಂಥದೋ ಸಂಕಟದಲ್ಲಿರುತ್ತಾರೆ, ಮತ್ಯಾರೋ ತುಂಬಾ ಕಷ್ಟಪಡುತ್ತಿರುತ್ತಾರೆ. ಯಾರು ಏನು ಎತ್ತ ಎಂದು ತಿಳಿಯದ ಅವರ ಬಗ್ಗೆ ನಾವಿಲ್ಲಿ ಮರುಗತೊಡಗುತ್ತೇವೆ. ಸಧ್ಯ ಅವರು ಅದರಿಂದ ಹೊರಬಂದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಕೈಲಾದಷ್ಟು ಸಹಾಯ ಮಾಡಲು ಹೊರಡುತ್ತೇವೆ. ಅದು ನಮ್ಮೊಳಗಿನ ಮನುಷ್ಯತ್ವ. ಅದಕ್ಕೆ ಯಾವ ಭೇದವೂ ಇಲ್ಲ, ಬೇಲಿಯೂ ಇಲ್ಲ. ಅದಕ್ಕೆ ನಾವೆಲ್ಲ ಮನುಷ್ಯರು ಎನ್ನುವ ಒಂದೇ ಕಾರಣ ಸಾಕು. ನಮ್ಮ ಅದೆಷ್ಟೋ ಇಂತಹ ನಿಸ್ವಾರ್ಥ ಪ್ರಾರ್ಥನೆಗಳು ಅದೆಷ್ಟೋ ಜನರ ಬದುಕಿನ ಹಿಂದಿರುತ್ತವೆ ಎನ್ನುವುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಅಪ್ಪ, ಅಮ್ಮ, ಸಂಬಂಧಿಕರು, ಸ್ನೇಹಿತರು, ಪರಿಚಯದವರಷ್ಟೇ ಅಲ್ಲದೆ ಕೆಲವೊಮ್ಮೆ ಅಪರಿಚಿತರೂ ಆಪದ್ಭಾಂದವರಾಗಿ ಬರುತ್ತಾರೆ. ನಮ್ಮ ಹೊಗಳಿಕೆ, ಗಮನ ಯಾವೊಂದನ್ನೂ ನಿರೀಕ್ಷಿಸದೆ ಪ್ರಾರ್ಥಿಸುವ ಆ ಕೈಗಳು ನಿಜಕ್ಕೂ ಭಗವಂತನ ಆಶೀರ್ವಾದವೇ ಇರಬೇಕು. ಮತ್ತೆ ನಾವು ಸುಖಾ ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೂ ನಮ್ಮನ್ನು ಪ್ರೀತಿಸುವವರೊಂದಿಗೆ ಮುನಿಸಿಕೊಳ್ಳುತ್ತೇವೆ, ದೂರವಾಗಿಬಿಡುತ್ತೇವೆ. ಆದರೆ ಅವರ ಮನಸಿನಲ್ಲಿ ಉಳಿದಿರುವ ನಮ್ಮ ಬಗ್ಗೆ ನಮಗೇ ಅರಿವಿರುವುದಿಲ್ಲ. ನಮ್ಮ ಕಷ್ಟ ಸುಖಕ್ಕೆ ಅವರದೊಂದು ಪ್ರಾರ್ಥನೆ ಸದಾ ಸಲ್ಲುತ್ತಿರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅವಳು ನನ್ನ ಗೆಳತಿ. ಆದರೆ ಬಹಳ ವರ್ಷಗಳಿಂದ ನಮ್ಮಿಬ್ಬರ ನಡುವೆ ಸಂಪರ್ಕವಿಲ್ಲ. ಜಗಳ ಮನಸ್ಥಾಪ ಎಂತದ್ದೂ ಇಲ್ಲ. ಆದರೆ ಸುಮ್ಮನೇ ಅದು ಹೇಗೋ ಸೃಷ್ಟಿಯಾದ ನಿರ್ವಾತವದು. ಅವಳಿಗೆ ಮಕ್ಕಳೆಂದರೆ ಪ್ರಾಣ. ಆದರೆ ಅವಳ ಮಮತೆಯ ಮಡಿಲು ಮಾತ್ರ ಇನ್ನು ತುಂಬಿರಲಿಲ್ಲ. ಎರೆಡು ಮಕ್ಕಳನ್ನು ಕಳೆದುಕೊಂಡಿದ್ದಳು. ದಿನ ತುಂಬಿದ್ದರೂ ಗರ್ಭದಲ್ಲೇ ಮರಣಿಸಿಬಿಟ್ಟಿದ್ದವು. ಮತ್ತೆರೆಡು ಬಾರಿ ಆದ ಗರ್ಭಪಾತಗಳು ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅದು ತಿಳಿದಾಗಿನಿಂದಲೂ ಸದಾ ಒಂದು ಪ್ರಾರ್ಥನೆ ಅವಳಿಗಾಗಿ.ಪ್ರತಿದಿನ ದೇವರ ಮುಂದೆ ಕೂತಾಗಲೂ, ಅವಳೇ ಕಣ್ಮುಂದೆ ಬರುತ್ತಾಳೆ, ಒಂದು ಪ್ರಾರ್ಥನೆ ದೇವರ ಪಾದದ ಮೇಲೆ ಬೀಳುತ್ತದೆ, “ಭಗವಂತಾ ಇದೊಂದು ಮಗು ಅವಳ ಮಮತೆಯ ಮಡಿಲಿಗಿಳಿದು ಅವಳ ಮಡಿಲು ಜೀವಂತವಾಗಿಬಿಡಲಿ…” ಎಂದು ಒಂದು ನಿಮಿಷ ಕಣ್ಮುಚ್ಚಿ ಕೈಮುಗಿದು ಕುಳಿತುಬಿಡುತ್ತೇನೆ. ನಾನು ಅವಳಿಗಾಗಿ ಇಲ್ಲಿ ಪ್ರಾರ್ಥಿಸುತ್ತಿದ್ದೇನೆ ಎನ್ನುವ ಸುದ್ದಿಯೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ನಾನು ಪ್ರಾರ್ಥಿಸುತ್ತಲೂ ಇಲ್ಲ. ಆದರೆ ಒಂದು ಮಾತ್ರ ನನಗೂ ಆಶ್ಚರ್ಯ! ಅವಳಿಗೇ ಗೊತ್ತಿಲ್ಲದ ನನ್ನ ಪ್ರಾರ್ಥನೆಯೊಂದು ಅವಳ ಬದುಕಿಗಾಗಿ ಸಲ್ಲುತ್ತಿದೆ.. ಹಾಗೆಯೇ ನಮ್ಮ ಬದುಕಿಗೂ ನಮಗೇ ಗೊತ್ತಿಲ್ಲದ ಅದೆಷ್ಟು ಜನರ ಅದೆಷ್ಟು ಪ್ರಾರ್ಥನೆಗಳು ಸಲ್ಲಿಸಲ್ಪಟ್ಟಿರಬಹುದು! ಇಲ್ಲದ ಇರುವ ಕೊರತೆಗಳನ್ನು ದೊಡ್ಡದು ಮಾಡಿಕೊಂಡು ಬದುಕನ್ನು ಹಳಿಯುವ ಮೊದಲು ನಾವ್ಯಾಕೆ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ಎನ್ನುವುದು ಅರ್ಥವಾದರೆ ಖಂಡಿತ ನಾವು ಇರುವುದರಲ್ಲೆ ಸಂತೋಷವಾಗಿ ಬದುಕಬಲ್ಲೆವು. ನಮಗೆ ಸಿಕ್ಕಿರುವ ಈ ಬದುಕಿನ ಅದೆಷ್ಟೋ ಕಾಣದ ಕೈಗಳ ಪ್ರಾರ್ಥನೆ ಇರುವುದು ತಿಳಿದರೆ ನಮ್ಮ ದುರಾಸೆಯ ಬಗ್ಗೆ ನಮಗೆ ಅಂಜಿಕೆ, ಮುಜುಗರವಾಗಬಹುದು. ಬಹಳ ವರ್ಷಗಳ ನಂತರ ಗೆಳತಿಯೊಬ್ಬಳು ಸಿಕ್ಕಿದಳು. ಆಡಿದ ಮಾತುಗಳು ಸಾವಿರ. ನಕ್ಕಿದ್ದೆಷ್ಟೋ… ಅತ್ತಿದ್ದೆಷ್ಟೋ… ಕೊನೆಗೆ ಅವಳು ಮೆಲ್ಲಗೆ, “ನಿನ್ನ ಮೊದಲ ಹೆರಿಗೆಯಲ್ಲಿ ಏನೋ ತೊಂದರೆ ಆಗಿತ್ತಂತೆ ಹೌದಾ..?” ಎಂದು ಕೇಳಿದಳು. ನಾನು ನಗುತ್ತಾ “ಎಂಟು ವರ್ಷಗಳೇ ಕಳೆದು ಹೋದವು… ಈಗ್ಯಾಕೆ ಮಾರಾಯ್ತಿ ಆ ಮಾತೆಲ್ಲ…?” ಎಂದೆ. ಅದಕ್ಕವಳು, “ಏನಿಲ್ಲ ಅವತ್ತು ಯಾರೋ ನನಗೆ ಸುದ್ದಿ ಮುಟ್ಟಿಸಿದ್ದರು. ನನಗಾದ ಗಾಬರಿ ಅಷ್ಟಿಷ್ಟಲ್ಲ, ಹೋಗಿ ದೇವರ ಮುಂದೆ ದೀಪ ಹಚ್ಚಿಟ್ಟು, ದೇವರೇ ಎಲ್ಲ ಸಸೂತ್ರ ಆಗಿ ಅವಳು ಆರೋಗ್ಯವಾಗಿ ಮಗುವಿನೊಟ್ಟಿಗೆ ಮನೆಗೆ ಬಂದುಬಿಡಲಪ್ಪಾ… ” ಎಂದು ಹರಸಿಕೊಂಡಿದ್ದೆ. ಮತ್ತೆ ನೀ ಮನೆಗೆ ಬಂದದ್ದು ತಿಳಿದ ಮೇಲೆ ದೇವರಿಗೆ ಹೋಗಿ ಹರಕೆ ತೀರಿಸಿ ಬಂದಿದ್ದೆ ಎಂದಳು. ನನ್ನ ಕಣ್ಣು ತುಂಬಿಬಿಟ್ಟಿದ್ದವು. ಗಂಟಲು ಕಟ್ಟಿಬಿಟ್ಟಿತ್ತು. ಸುಮ್ಮನೇ ಅವಳನ್ನು ತಬ್ಬಿಕೊಂಡೆ. ಕಣ್ಣೀರು ಅವಳ ಭುಜವನ್ನು ತೋಯಿಸುತ್ತಿತ್ತು. ಇಂಥದೊದು ಹರಕೆ ನನ್ನನ್ನು ಕಾಯುತ್ತಿದೆ ಎನ್ನುವ ಕಲ್ಪನೆಯೂ ಇಲ್ಲದೆಯೇ ಇಷ್ಟು ವರ್ಷ ಬದುಕಿದೆನಲ್ಲ ಅನಿಸಿ ಅಂತಃಕರಣದ ಎಳೆಗಳು  ನಮ್ಮನ್ನು  ಸುತ್ತಿಕೊಂಡು ಪೊರೆಯುವ ರೀತಿಗೆ ಸೋತುಹೋದೆ. ಹೀಗೆ ಬದುಕು ನಮ್ಮ ಹುಂಬ ನಡವಳಿಕೆಗಳನ್ನು ಸುಳ್ಳು ಮಾಡುತ್ತಾ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ನಾವು ಎನ್ನುವುದನ್ನು ಮತ್ತೆ ಮತ್ತೆ ಪ್ರಾಮಾಣೀಕರಿಸಿ ತೋರಿಸಿಕೊಡುತ್ತಿರುತ್ತದೆ… **************************************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ” ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ “ ಇಂದುಮತಿ ಲಮಾಣಿ ಪರಿಚಯ; ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.‌ ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ‌ ಶ್ರಮಿಸುತ್ತಿದ್ದಾರೆ.ಇವರ ಮಗ ಬಸವರಾಜು ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ. ಈ ಸಲದ ಮುಖಾಮುಖಿಯಲ್ಲಿ ಕತೆಗಾರ್ತಿ, ಕವಿ ಇಂದುಮತಿ ಲಮಾಣಿ  ಇವರನ್ನು ಮಾತಾಡಿಸಿದ್ದಾರೆ ನಾಗರಾಜ್ ಹರಪನಹಳ್ಳಿ  ಕತೆಗಳನ್ನು ಯಾಕೆ ಬರೆಯುತ್ತೀರಿ ? ಮನಸ್ಸಿಗೆ ಕಾಡುವ ಕೆಲ ವಿಷಯಗಳು, ಎನಾದರೂ ಬರೆಯಲು ಪ್ರೇರೇಪಿಸುತ್ತವೆ. ಆಗ ಸಹಜ ಕಥೆಯ ರೂಪದಲ್ಲಿ ಬರಹ ಆರಂಭವಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲೂ  ನನ್ನ ಬರಹ ಕಾರಣವಾಗಿದೆ. ಕತೆ ಹುಟ್ಟುವ ಕ್ಷಣ ಯಾವುದು ? ನನ್ನ ಸುತ್ತ ಮುತ್ತ ಘಟಿಸುವ ಆಗುಹೋಗುಗಳು ಮನಸಿನ ಮೇಲೆ ಘಾಡ ಪರಿಣಾಮ ಬೀರಿದಾಗ, ಒಂಟಿಯಾಗಿ ಇರುವಾಗ  ಅವು ಕಥೆ ರೂಪದಲ್ಲಿ ಹೊರ ಹೊಮ್ಮುತ್ತವೆ. ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯನ್ನು ಕತ್ತು ಹಿಸುಕುವಂಥಹ ಸನ್ನಿವೇಶ, ಮತ್ತು, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ ,ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ಆಕೆಯ   ಜೀವನ ಪಥ, ಜಾತಿ ಭೇದತೆ, ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ.  ಕತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಖಂಡಿತಾ. ಎರಡೂ ಇರುತ್ತವೆ.ಆ ಎರಡೂ ಇದ್ದಾಗಲೇ ಕಥೆಗೆ ಇಂಬು ಮೂಡುತ್ತದೆ.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕೀಯ ಇವತ್ತು ಸ್ವಾರ್ಥದ ಅಂಗಿ ತೊಟ್ಟು, ಮುಖವಾಡ ಧರಸಿ ತಿರುಗುತ್ತಿದೆ. ಅಂದಿನ ಜನನಾಯಕರ ನಡೆ, ನುಡಿ, ನಿಸ್ವಾರ್ಥ ಈಗ ಇಲ್ಲ. ಮುಖ ನೋಡಿ ಮಣೆ ಹಾಕುವುದೇ ಜನ್ಮ ಸಿದ್ದ ಹಕ್ಕು ಎಂಬಂತಾಗಿದೆ. ಜನರಿಗಾಗಿ ಅಂದು ಅವರು ದುಡಿದರು,ಮಡಿದು ಹೆಸರಾದರು. ಇವತ್ತು ಜನರೇ ಇವರಿಗಾಗಿ ಹೋರಾಡಿ ಹಾರಾಡಿ  ಮಡಿಯುತ್ತಿದ್ದಾರಷ್ಟೆ.  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಮಾತಾಪಿತರ ಕಾಳಜಿ, ಮಹಿಳೆ ಮತ್ತು  ಹಿರಿಯರಲ್ಲಿ ಗೌರವ, ಇರುವಲ್ಲಿ ಮತ್ತು, ಎಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೋ ಅದೇ ಧರ್ಮ. ಕಷ್ಕಕ್ಕಾದವರೇ ಪರಮ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಂಸ್ಕೃತಿ ಜೀವಂತ ಇರೋತನಕಾ ಸಾಂಸ್ಕೃತಿಕ ಬದುಕು  ಸದಾ ಇರುತ್ತದೆ. ಇವತ್ತು ಸಂಸ್ಕೃತಿ ಮುಸುಕಾಗಿದೆ. ಫ್ಯಾಷನ್ ಯುಗ ಎಲ್ಲೆಲ್ಲೂ ಕುಣಿಯುತ್ತಿದೆ. ಕೇವಲ ಸಿನೇಮಾ,ಧಾರಾವಾಹಿ,  ವೇದಿಕೆಯಲ್ಲಿ  ಸಂಸ್ಕೃತಿ ತೋರಿಸುವದಲ್ಲ. ನಮ್ಮ ನಿಮ್ಮ  ನಡೆ,ನುಡಿಯಲ್ಲಿ ಅದು ಪಕ್ಕಾ ಇರಬೇಕು. ಸಂಸ್ಕೃತಿ  ನಶಿಸುವುದಕ್ಕೆ  ಸಾಕಷ್ಟು  ಉದಾಹರಣೆಗಳಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಈಗ ಈ  ವಿಷಯ ಅತ್ಯಂತ ಬೇಸರ ತರಿಸುವಂಥಹದ್ದು. ಸಾಹಿತ್ಯದಲ್ಲಿ ರಾಜಕೀಯ ಇವತ್ತು ಕೈಯಾಡಿಸದೆ ನಡಿಯೋದೇ ಇಲ್ಲವೆನ್ನುವಂತಾಗಿದೆ. ಸಾಹಿತ್ಯದ ಯಾವ ಗಂಧ ಗಾಳಿಯೂ ಇಲ್ಲದವರನ್ನು ತಂದು ಮೆರೆಸುವದು, ಸಾಹಿತ್ಯ ಪ್ರತಿಭೆಗೆ ಸಿಗಬೇಕಾದ ಮನ್ನಣೆಗೆ ಕತ್ತರಿ ಹಾಕುವುದು, ಲಾಭಿ ಮಾಡುವವರನ್ನು ದೊಡ್ಡ ವೇದಿಕೆಯಲ್ಲಿ ಕೂಡಿಸುವದು ಇತ್ತೀಚೆಗೆ ತೀರಾ ಸಾಮಾನ್ಯ ಆಗಿದೆ. ಸಾಹಿತಿಗಳಿಗೆ ಸಿಗದ ಪರಿಷತ್ತಿನ ಅಧಿಕಾರ, ರಾಜಕೀಯ ವ್ಯಕ್ತಿಗಳು ಅಲಂಕರಿಸುವದು ಕೂಡ ಸಹಜವಾಗಿಯೇ ಇದೆಯೆಂದು ಖಾತ್ರಿ ಅನಿಸುತಿದೆ. ಸಾಹಿತ್ಯಕ್ಕೆ ಮಾನ ಮನ್ನಣೆ ಸಿಗಬೇಕು ಅಂದರೆ ಮುಂದಾಳತ್ವ ನುರಿತ ಸಾಹಿತಿಯಿಂದ ಮಾತ್ರ ಅರಿವು ಬರೋದು.  ಇಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಮ್ಮ ದೇಶವೀಗ ಬಲಿಷ್ಠತೆಯಲ್ಲಿ ಯಾವ ದೇಶಗಳಿಗಿಂತಲೂ ಕಮ್ಮಿ ಎನಿಲ್ಲ.ಬಡತನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದನ್ನು ಕಾಣುತ್ತಿದ್ದೆವೆ. ಈಗ ಮೊದಲಿಗೆ ಇದ್ದ ಬಡತನ ಇಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂಧನಭಾಗ್ಯ ಹೀಗೆ ಹಲವಾರು ಉಪಕೃತ ಯೋಜನೆಗಳನ್ನು ಕಾಣುತ್ತಿದ್ದೆವೆ.ಆಗಿನಂತೆ ಈಗ ಹಸಿವಿನಿಂದ ಸಾವು ಇಲ್ಲ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ  ಇವತ್ತು ಇತರ ದೇಶಕ್ಕಿಂತ ಹೆಚ್ಚಿನ ಪ್ರಗತಿಯಲ್ಲಿ ಸಾಗಿದೆ.  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯದಲ್ಲಿ ನಾನು ಇನ್ನೂ ಬೆಳೆಯಬೇಕು,  ಕಲಿಯಬೇಕು. ತಿಳಿದುಕೊಳ್ಳಬೇಕು. ಕನ್ನಡ   ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ಕನ್ನಡದ ಕವಿ  ನಿಸಾರ್ ಅಮಹ್ಮದ .  ಈಚೆಗೆ ಓದಿದ ಕೃತಿಗಳಾವವು? ನಾಗೇಶ್ ಜೆ, ನಾಯಕರ ಓಲವ ತುಂತುರು ಮತ್ತು ವಿಶ್ವೇಶ್ವರ ಮೇಟಿ ಅವರ ಸೋಲಾಪುರ ಜಿಲ್ಲೆಯ ಇತಿಹಾಸದತ್ತ ಒಂದು ನೋಟ ನಿಮಗೆ ಇಷ್ಟವಾದ ಕೆಲಸ ಯಾವುದು? ಬರವಣಿಗೆ ನಿಮಗೆ ಇಷ್ಟವಾದ ಸ್ಥಳ ಯಾವುದು ? ಬಾಗೇವಾಡಿ ತೋಟದ ಮನೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ಶರಪಂಜರ ನೀವು ಮರೆಯಲಾರದ‌ ಘಟನೆ‌ ಯಾವುದು? ಪತಿಯ ಅಗಲಿಕೆ ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ……. ಇವತ್ತು ನಾವು ಮಹಾತ್ಮಾ ಗಾಂಧೀಜಿಯವರ ಕುರಿತು ಹೊಗಳಿಕೆಯ ಭಾಷಣ ಮಾಡುತ್ತೆವೆ, ಅದೇ ರೀತಿ ಜಗತ್ತಿನಲ್ಲಿ  ಮಹಾ ಮಹಾನ್ ರಾಗಿ ಆಗಿ ಹೋದವರ ಕುರಿತು ಹಾಡಿ ಅಭಿಮಾನ ತೋರುತ್ತೆವೆ. ದುರಂತವೆಂದರೆ,  ನಾವು ಅವರಾಗುವದಿಲ್ಲ. ಅವರನ್ನೇ ಹುಟ್ಟಿ ಬರಬೇಕು ಅಂತ ಬಯಸುತ್ತೆವೆ. ಹುಟ್ಟಿರುವ ನಾವೇಕೆ ಅವರ ದಾರಿಯಲ್ಲಿ ನಡಿಯೋದಿಲ್ಲ?          ಅತ್ತೆಯೊಬ್ಬಳು, ವೇದಿಕೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ,ದ ಕುರಿತು, ಅವಳಿಗೆ ಬೇಕಾದ ಸ್ವಾತಂತ್ರ್ಯದ ಕುರಿತು  ಭಾಷಣ ಮಾಡುತ್ತಾಳೆ, ಆದರೆ ಮನೆಯಲ್ಲಿ ಸೊಸೆಗೆ ಸ್ವಾತಂತ್ರ್ಯ ಏಕೆ ಬೆಕೆಂದು  ಅವಾಜು ಹಾಕುತ್ತಾಳೆ.          ಇದಕ್ಕೆ ತದ್ವಿರುಧ್ಧವಾಗಿ ಅತ್ತೆಯು, ಸೊಸೆಯನ್ನು ಮಗಳಾಗಿ ಪ್ರೀತಿಸಿದರೂ ಸೊಸೆ ಪರಕೀಯತೆಯಿಂದ ಹೊರ ಬಾರದೆ ಪತಿ ಸಹಿತ ಬೇರೆ ಹೋಗಿ, ಅತ್ತೆಯನ್ನು ಕತ್ತೆ ಸಮಾನವಾಗಿ ಕಾಣುತ್ತಾಳೆ.    ಮಕ್ಕಳು ಇದ್ದರೂ ಭಿಕಾರಿಯಾಗಿ ತಿರಗುವ ಹೆತ್ತವರ ಪಡಿಪಾಲು ನೋವು ನೀಡುತ್ತವೆ. ಇವೆಲ್ಲ ನೋಡುತ್ತಾ ಇರುವಾಗ ಅನಿಸಿದ್ದೆನೆಂದರೇ, ನಾವೆಕೆ ಮನುಷ್ಯರಾದೆವು!! ನಾವೂ ಉಳಿದ ಜೀವಜಂತುಗಳಂತೆ ಇರಬಹುದಿತ್ತಲ್ಲವೆ! ದೇವರು ತನ್ನ ಆಟಕ್ಕೆ ಮನುಷ್ಯರನ್ನೇ  ತನ್ನಾಟದ ದಾಳವೆಂದೆಕೆ ಆಯ್ಕೆ ಮಾಡಿಕೊಂಡ ಅಂತ!! ಇಂಥಹ ವೈಪ್ಯರೀತತೆಗಳು ಬಹಳ ಕಾಡುತ್ತವೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಇಂತಹ ಅಗಾಧತೆಯಲ್ಲಿ ಸೂಜಿ ಮೊನೆಯ ಮಿದುಳಿನ ಮನುಷ್ಯ ಮತ್ತು ಆತನ ಮನಸ್ಸು, ತಾನು ಮಾತ್ರ ಜೀವಿ, ಇನ್ನುಳಿದ ಕಲ್ಲು, ಭೂಮಿ, ನಕ್ಷತ್ರ, ಆಕಾಶಗಳು ನಿರ್ಜೀವಿ ಎಂದು ನಿರ್ಧರಿಸುವಾಗ, ಆ ಪ್ರಜ್ಞೆ ಎಷ್ಟು ಸ್ವಕೇಂದ್ರಿತವಲ್ಲವೇ?.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….4 ” ಪರಾವಲಂಬನೆಯ ಕಠಿಣ ದಿನಗಳು…” “ಆತ್ಮಾನುಸಂಧಾನ “             ಸಾಣೆಕಟ್ಟೆಯಲ್ಲಿ ದೊಡ್ಡಮ್ಮನ ಆಶ್ರಯ ಗಣಪುವಿನ ಎರಡು ಹೊತ್ತಿನ ಊಟ ತಿಂಡಿಯ ಚಿಂತೆ ಬಗೆಹರಿಸಿತು. ಆದರೆ ಗಣಪು ಬಯಸಿದ್ದು ಅಕ್ಷರಾಭ್ಯಾಸ. ಆಕಸ್ಮಿಕವಾಗಿ ಸಾಣೆಕಟ್ಟೆಗೆ ಬಂದ ನಾಡುಮಾಸ್ಕೇರಿಯ ಬೇಲೆ ಹಿತ್ತಲ ರಾಕು ಎಂಬ ತರುಣ ಹಮ್ಮಜ್ಜಿಯ ಮನೆಯಲ್ಲಿದ್ದ ಗಣಪುವಿನ ಯೋಗಕ್ಷೇಮ ವಿಚಾರಿಸುತ್ತ ಆತನ ಕಲಿಯುವ ಆಸೆಯನ್ನು ಗ್ರಹಿಸಿದ. ಊರಿಗೆ ಮರಳಿದವನು ಗಣಪುವಿಗೆ ಮತ್ತೆ ಹನೇಹಳ್ಳಿ ಹಾಸ್ಟೇಲಿನಲ್ಲಿ ಅವಕಾಶ ದೊರೆಯುವಂತೆ ಪ್ರಯತ್ನಿಸಿ ಆತನನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ. ಕನಿಷ್ಟ ಹದಿನೈದು ದಿನಗಳಿಗೊಮ್ಮೆಯಾದರೂ ಒಮ್ಮೆ ಗಣಪುವನ್ನು ಕಂಡು ಕೈಲಾದ ಹಣಕಾಸಿನ ನೆರವು ನೀಡಿ ಚೆನ್ನಾಗಿ ಓದುವಂತೆ ಹುರುಪು ತುಂಬುತ್ತಿದ್ದ. ರಜೆಯ ದಿನಗಳಲ್ಲಿ ತನ್ನ ಮನೆಗೂ ಕರೆದೊಯ್ದು ಊಟ ತಿಂಡಿ ನೀಡಿ ಉಪಚಾರ ಮಾಡುತ್ತಿದ್ದ.             ರಾಕುವಿನ ಅಣ್ಣನೆ ಕೃಷ್ಣ ಆಗೇರ. ಆಗಿನ ಕಾಲದಲ್ಲಿ ಹೆಸರಾಂತ ಯಕ್ಷಗಾನ ಕಲಾವಿದ. ಬೇರೆ ಬೇರೆ ಊರುಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಲು ಹೋಗಿಬರುತ್ತಿದ್ದ. ಆತನೊಂದಿಗೆ ಗಣಪು ಯಕ್ಷಗಾನ ನೋಡುವ ಕುತೂಹಲದಲ್ಲಿ ಜೊತೆ ನೀಡುತ್ತ ಮೆಲ್ಲ ಮೆಲ್ಲನೆ ಯಕ್ಷಗಾನ ಭಾಗವತಿಕೆ, ಅರ್ಥ ಹೇಳುವುದು, ಕುಣಿತ ಇತ್ಯಾದಿಗಳನ್ನು ಅಭ್ಯಾಸ ಮಾಡಿಕೊಂಡ. ಈ ನಡುವೆ ಹನೇಹಳ್ಳಿಯ ಶಾಲೆಯ ವಿದ್ಯಾಭ್ಯಾಸವೂ ನಡೆಯುತ್ತಿತ್ತು. ಗಣಪು ಮತ್ತೆ ಗುಂದಿಹಿತ್ತಲ ಪರಿವಾರದ ಕುರಿತು ಚಿಂತೆಮಾಡುವ ಪ್ರಮೇಯವೇ ಬರಲಿಲ್ಲ.             ೧೯೩೦ ರ ಹೊತ್ತಿಗೆ ಅಂಕೋಲೆಯ ವಂದಿಗೆ ಗ್ರಾಮದಲ್ಲಿ ಸುಕ್ರು ಮಾಸ್ತರ್ ಎಂಬುವವರು ತಮ್ಮ ಆಗೇರ ಸಮಾಜದ ಮಕ್ಕಳ ಕಲಿಕೆಗಾಗಿ ಕ್ರೈಸ್ತ ಮಿಶನರಿ ಸಂಸ್ಥೆಯ ನೆರವಿನಿಂದ ವಂದಿಗೆ ಗ್ರಾಮದ ಆಗೇರ ಕಾಲನಿಯಲ್ಲಿ ಶಾಲೆಯೊಂದನ್ನು ತೆರೆದು ಅಲ್ಲಿ ತಾವೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಸ್ಪೃಶ್ಯತೆ ಆಚರಣೆಯಲ್ಲಿರುವ ಅಂದಿನ ಕಾಲದಲ್ಲಿ ಆಗೇರರ ಮಕ್ಕಳು ಇತರ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಸಾಧ್ಯವಾದ ಸಂದರ್ಭದಲ್ಲಿ ಸುಕ್ರು ಮಾಸ್ತರರ ಶಾಲೆ ಕಲಿಕೆಯ ಆಸಕ್ತಿಯುಳ್ಳ ಆಗೇರರ ಮಕ್ಕಳಿಗೆ ವರದಾನವಾಗಿತ್ತು.             ೧೯೩೪ ರಲ್ಲಿ ಗಾಂಧೀಜಿ ಹರಿಜನೋದ್ಧಾರ ನಿಧಿ ಸಂಗ್ರಹಣೆಗಾಗಿ ದೇಶಾದ್ಯಂತ ತಿರುಗಾಟ ಮಾಡುವಾಗ ಅಂಕೋಲೆಗೆ ಬಂದವರು ಸುಕ್ರು ಮಾಸ್ತರರ ಶಾಲೆಗೂ ಭೇಟಿ ನೀಡಿದ್ದು ಒಂದು ಚಾರಿತ್ರಿಕ ಮಹತ್ವದ ಸಂಗತಿಯಾಗಿದೆ. ಮುಂದೆ ಭಾರತಸೇವಾ ಸಮಾಜದ ಆಜೀವ ಸಭಾಸದರೂ,  ಅಖಿಲ ಭಾರತೀಯ ಹರಿಜನ ಸೇವಕ ಸಂಘದ ಮಾನ್ಯ ಕಾರ್ಯದರ್ಶಿಗಳೂ ಆಗಿರುವ ಶ್ರೀಮಾನ್ ಥಕ್ಕರ್ ಬಾಪಾ ಅವರು ೧೯೪೦ ರಲ್ಲಿ ಅಂಕೋಲೆಗೆ ಭೇಟಿ ನೀಡಿದಾಗ ಆಗೇರ ಸಮಾಜದ ಶಿಕ್ಷಣದ ಕುರಿತು ವಿಶೇಷ ಕಾಳಜಿ ವಹಿಸಲು ಚಿಂತನೆ ನಡೆಸಿ ಅಂಕೋಲೆಯಲ್ಲಿ ಒಂದು ವಸತಿ ಶಾಲೆಯನ್ನು ಆರಂಭಿಸಲು ವ್ಯವಸ್ಥೆ ಮಾಡಿದರು. ಇದರ ಪರಿಣಾಮವಾಗಿ ಸುಮಾರು ಇಪ್ಪತ್ನಾಲ್ಕು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಸತಿ ಶಾಲೆಯನ್ನು ತೆರೆಯಲು ಯೋಜನೆಯನ್ನು ರೂಪಿಸಲಾಯಿತು.             ೧೯೪೧ ರಲ್ಲಿ ಶ್ರೀ ಎಸ್.ಎನ್. ಕೇಶವಾನ್, ಕೃಷ್ಣರಾವ್ ಹಳದೀಪುರ, ಬಿ.ಎಮ್. ಬಸ್ರೂರ, ಹರಿ ಅನಂತ ಪೈ, ಎಸ್.ಎಸ್.ಶಾಸ್ತ್ರೀ,  ಸುಂದರರಾವ್ ಪಂಡಿತ್, ಶ್ರೀ ನಾಯಕ, ಡಿ.ಎಂ.ನಾಡಕರ್ಣಿ ಮುಂತಾದ ಮಹನೀಯರ ಸಮಿತಿಯೊಂದು ರಚನೆಗೊಂಡು ವಂದಿಗೆ ಸುಕ್ರು ಮಾಸ್ತರರ ಶಾಲೆಗೆ ಹೊಂದಿಕೊಂಡಂತೆ ತಾತ್ಕಾಲಿಕವಾಗಿ ತೆಂಗಿನ ಗರಿಗಳ ವಸತಿ ಶಾಲೆಯೊಂದನ್ನು ಆರಂಭಿಸಲಾಯಿತು.             ಬೇರೆ ಬೇರೆ ಊರುಗಳಿಂದ ಆಗೇರರ ಮಕ್ಕಳು ಇಲ್ಲಿಗೆ ಬಂದು ಸೇರಿಕೊಂಡು ಕಲಿಯಲು ಆರಂಭಿಸಿದರು. ಇಷ್ಟು ಹೊತ್ತಿಗೆ ಹನೇಹಳ್ಳಿ ಶಾಲೆಯಲ್ಲಿ ಆರನೇಯ ಇಯತ್ತೆ ಮುಗಿಸಿದ ಗಣಪು ಮುಲ್ಕಿ ಪರೀಕ್ಷೆಯ ಗಂಭೀರ ಓದಿನ ಅವಕಾಶ ಬಯಸಿ ಸುಕ್ರು ಮಾಸ್ತರರ ವಸತಿ ಶಾಲೆಗೆ ಬಂದು ಸೇರಿದ. ಮೊದಲ ತಂಡದಲ್ಲಿ ಅಂಕೋಲೆಯವರೇ ಆದ ಬಂಟ ಕೃಷ್ಣಮಕ್ಕಿ, ಬುದ್ದು ಆಗೇರ, ಮೊಗಟಾ ಗ್ರಾಮದ ಜಟ್ಟಿ ಆಗೇರ, ಶೇಡಗೇರಿಯ ಬೀರಾ ಆಗೇರ, ನಾಡು ಮಾಸ್ಕೇರಿಯ ಗಣಪು ಆಗೇರ, ಗೋಕರ್ಣದ ಅಮಾಸ್ಯಾ ಆಗೇರ ಮುಂತಾದವರು ಮುಲ್ಕೀ ಪರೀಕ್ಷೆ ಕಟ್ಟಿದರು. ಇವರಲ್ಲಿ ಗಣಪು ಮತ್ತು ಅಮಾಸ್ಯಾ ಆಗೇರ ಇಬ್ಬರು ಮುಲ್ಕಿ ಪರೀಕ್ಷೆ ಪಾಸುಮಾಡಿ ಆಗೇರ ಸಮಾಜದ ಹೆಮ್ಮೆಯ ವಿದ್ಯಾರ್ಥಿಗಳೆಂಬ ಗೌರವಕ್ಕೆ ಪಾತ್ರರಾದರು.             ನಾಡುಮಾಸ್ಕೇರಿಯ ಕೃಷ್ಣ ಮತ್ತು ರಾಕು ಸಹೋದರರ ಸಹಕಾರದಿಂದ ವಂದಿಗೆಯ ಸುಕ್ರುಮಾಸ್ತರ್ ವಸತಿ ಶಾಲೆಯ ಆಶ್ರಯದಲ್ಲಿ ಗಣಪು ಮುಲ್ಕಿ ಪಾಸು ಮಾಡಿದ ಬಳಿಕ ಉದ್ಯೋಗ ದೊರೆಯುವುದು ಕಠಿಣವಾಗಲಿಲ್ಲ. ನಾಲ್ಕಾರು ತಿಂಗಳ ಅಂತರದಲ್ಲಿಯೇ ಸರಕಾರಿ ಶಾನಭೋಗ ಹುದ್ದೆ ದೊರೆಯಿತು. ಜೋಯ್ಡಾ ಎಂಬ ಬೆಟ್ಟ ಪ್ರದೇಶದಲ್ಲಿ ಗಣಪು ಶಾನಭೋಗ ವೃತ್ತಿಗೆ ಹಾಜರಾದ. ದಟ್ಟ ಕಾಡಿನ ಹಳ್ಳಿಗಾಡು ಎಂಬುದನ್ನು ಬಿಟ್ಟರೆ ಊರ ಜನರ ಸಹಕಾರ ಇತ್ಯಾದಿ ತುಂಬಾ ಅನುಕೂಲಕರ ಪರಿಸರವೇ ದೊರೆಯಿತು. ಆದರೆ ಗಣಪು ತಾನು ಓದುವ ಹಂತದಲ್ಲಿಯೇ ಶಿಕ್ಷಕನಾಗಬೇಕೆಂದು ಕನಸು ಕಾಣುತ್ತಿದ್ದ. ಬಯಸಿದ ಉದ್ಯೋಗವೊಂದು ದೊರೆಯಲಿಲ್ಲ ಎಂಬ ಆತಂಕವೊಂದು ಅವನನ್ನು ಕಾಡುತ್ತಲೇ ಇತ್ತು. ******************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ – ೪ ಚಾವಡಿಯಲ್ಲಿ ರಂಗ ಗೀತೆ ಎಂಟನೇ ತರಗತಿಯ ಕ್ಲಾಸಿನಲ್ಲಿ ಪುಟ್ಟ ಗುಬ್ಬಚ್ಚಿ ದೇಹದ ನಾನು ಮೊದಲನೇ ಬೆಂಚಿನಲ್ಲಿ ಮುದುಡಿ ಕುಳಿತಿದ್ದೆ. ” ದೇವದಾಸಿ ಪದ್ದತಿ,ಬಸವಿ ಪದ್ದತಿ,ಗೆಜ್ಜೆಪೂಜೆ ನಿಷೇಧಿಸಿದರು” ತರಗತಿಯಲ್ಲಿ ಕನ್ನಡದ  ಬಾಲಕೃಷ್ಣ  ಮೇಷ್ಟ್ರು ಕರ್ನಾಟಕದ ಇತಿಹಾಸದ ಬಗ್ಗೆ ಬಿಡುವಿನಲ್ಲಿ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಮೈಸೂರಿನ ಕರ್ತೃ. ಜಾರಿಗೆ ತಂದ ಈ ಕಾನೂನುಗಳು ಹೊಸದಾದ ಮನ್ವಂತರಕ್ಕೆ ನಾಂದಿ ಹಾಡಿತ್ತು. ಥಟ್ಟನೆ ನನ್ನ ಕಣ್ಣೆದುರು, ಆ ದೊಡ್ಡ ಸುಂದರ ಮನೆ, ಒಳಗೆ ಗೋಡೆಗೆ ತೂಗುಹಾಕಿದ ಗೆಜ್ಜೆ, ಹಾಡುತ್ತಿದ್ದ ಭಜನೆ, ಜೊತೆಗೆ ಅವರ ಮುಖಗಳು ಸ್ಥಿರವಾಗಿ ಯಾವುದೋ ತಳಮಳಕ್ಕೊಳಕ್ಕಾಗಿ ಅಂತರ್ಮುಖಿಯಾಗುತ್ತಿದ್ದೆ. ಕಲೆಯ ಬಗೆಗಿನ ಕನಸಿಗೆ ಸೇತುವೆ ಕಟ್ಟಲು ಇವರ ದೇಣಿಗೆ ಚಿಕ್ಕದೇನು?. ಶಾಲೆಯ ಮೈದಾನದಲ್ಲಿ  ಗೆಳತಿಯರು ಥ್ರೋಬಾಲ್, ಓಟ, ಎಂದು ಆಟದ ಹುಮ್ಮಸ್ಸಿನಲ್ಲಿದ್ದರೆ  ಬದಿಯಲ್ಲಿ ಸಾಲಾಗಿದ್ದ ಮರಗಳಲ್ಲಿ ಒಂದರ ನೆರಳಿಗೆ ಆತುಕೊಂಡು ಆಗಾಗ ಬಾಲ್ಯದಲ್ಲಿ ಆ ಮನೆಯ ಇಂಚು ಇಂಚುಗಳಲ್ಲಿ ಹುದುಗಿಸಿಟ್ಟ ನೆನಪುಗಳನ್ನು ಬೊಗಸೆಗಿಳಿಸಿ ತಾಜಾಗೊಳಿಸುತ್ತಿದ್ದೆ. ಎಂತದೋ ಸುಪ್ತ ನೆನಪುಗಳ ಗುಂಗಿನ ಸುಖ. ಅದು  ಮುಗ್ಧತೆ ಆವರಿಸಿದ್ದ  ಎಲ್ಲವನ್ನೂ ಕುತೂಹಲದ ಮನಸ್ಸಿನಿಂದ ನೋಡಿ ಅದನ್ನು ಅನುಕರಿಸಿ ಅಭಿನಯಿಸುವ ಬಾಲ್ಯ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರದ ಕಥೆಗಳ ಓದು. ಅಲ್ಲಿ ಕಾಣ ಸಿಕ್ಕಂತಹ ರಾಜಕುಮಾರಿಯರು ನನ್ನ ಕಣ್ಮುಂದೆ ಗೆಜ್ಜೆ ಕಟ್ಟಿ ತಿರುಗುತ್ತಿದ್ದರು. ನಾಯಕಿಯರೆಂದರೆ ದೊಡ್ಡ ಅರಮನೆಯಲ್ಲಿ ಇರುವವರು..ಹಿಂದೆ ಮುಂದೆ ಸಖಿಯರು ಇರಬೇಕು. ಅವರು ನಾಯಕಿಯ ಹಿಂದೆ ಸುತ್ತುವವರು. ಶಾಲೆಯಲ್ಲಿ ನನ್ನ ಗೆಳತಿಯರಿಗೆ ನಾನು ಓದಿದ,ಮರು ಸೃಷ್ಟಿಸಿದ,  ಕಟ್ಟಿದ ಕಥೆಗಳನ್ನು ಹೇಳಿ,ಅದನ್ನು ನಾನೂ ಅನುಭವಿಸುತ್ತಿದ್ದೆ.  ಅಂತರಂಗದಲ್ಲೊಬ್ಬಳು ರಾಜಕುಮಾರಿ. ನಾನು ಒಬ್ಬಳೇ ಇರುವಾಗ ಒಳಲೋಕದ ಭ್ರಮರ ಹೊರಗೂ ಹಾರಿ ನನ್ನ ಹೆಜ್ಜೆಗಳು ರಾಜಕುಮಾರಿಯ ಹೆಜ್ಜೆಗಳೇ ಆಗಿ ರೂಪಾಂತರಗೊಳ್ಳುತ್ತಿತ್ತು. ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ. ರಂಗು ರಂಗಾದ ರಂಗ ನನ್ನೊಳಗೆ ಪ್ರವೇಶಿಸಿದಾಗ  ನಾಟಕದ ಪಾತ್ರದೊಳಗೆ ಮಾಡುವ ಪರಕಾಯ ಪ್ರವೇಶದ  ಮೊದಲ ಪಾಠ ನನಗರಿವಿಲ್ಲದೇ ಬದುಕು ಕಲಿಸುತ್ತಿತ್ತು.  ನಾನು ಇದ್ದ ಮನೆ ಹಳೆಯಮನೆ, ಚಿಕ್ಕ ಮನೆ. ನಮ್ಮ ಈ ಮನೆಯ ಹತ್ತಿರವೇ ನನ್ನ ಕನಸಿನ ಅರಮನೆ ಒಂದಿತ್ತು. ಎದುರು ಉದ್ದದ ಚಾವಡಿ, ಸುಂದರ ಕೆತ್ತನೆಯ ಬಾಗಿಲು, ಆಗಿನ ಕಾಲಕ್ಕೆ ಬಲು ಅಪರೂಪದ ಟೇರೆಸ್ ಹೊದ್ದ ಮನೆಯದು. ಮನೆ ಎದುರು ಹೂವಿನ ಗಿಡಗಳು. ಗಿಡಗಳನ್ನು ಸಿಂಗರಿಸಿದ ಬಗೆಬಗೆಯ ಹೂವುಗಳು. ಬಟನ್ ಸೇವಂತಿಗೆ, ಗುಲಾಬಿ ಬಣ್ಣದ ಗುಲಾಬಿ, ಗಿಡ್ಡ ದೇಹದ ಮಲ್ಲಿಗೆ,  ನಂದಿಬಟ್ಟಲು, ದೇವರಿಗೆ ಏಕಾಂತದಲ್ಲಿ ಶಂಖ ಊದಿ ಎಬ್ಬಿಸುವ ಶಂಖಪುಷ್ಪ ಹೂಗಳು ಎತ್ತರದ ದೇವಮಂದಾರ ಮರಕ್ಕೆ ಸುತ್ತಿ ಹತ್ತಿದ ಬಳ್ಳಿಯಲ್ಲಿ ಅರಳಿದ್ದವು. ಇನ್ನೂ ಅದೆಷ್ಟೋ ಬಣ್ಣಗಳು ಅಲ್ಲಿ ಹೂವಿನ ರೂಪದಲ್ಲಿ ಆ ಮನೆಯ ಅಂದ ಹೆಚ್ಚಿಸಿತ್ತು. ಆ ಹೂವಿನ ಗಿಡಗಳ ಮುಂದೆ ಅದರ ರಕ್ಷಣೆಗೇ ನಿಂತ, ಕಾದು ಕಪ್ಪಾದ ಕಲ್ಲಿನ ಕಾಂಪೌಂಡ್. ದೊಡ್ಡಬೀಗದ ಗೇಟು.  ಮುಖ್ಯ ರಸ್ತೆಯ ಬಳಿಯಲ್ಲೇ ಇರುವ ನಮ್ಮ ಮನೆಯ ಎದುರು  ನನ್ನ ಗೆಳತಿಯರು ಆಗಾಗ ತಿರುಗಾಡುವುದಿತ್ತು.  ಆಗೆಲ್ಲ ಮನೆಗಳಲ್ಲಿ ಕಠಿಣ ನಿರ್ಬಂಧಗಳು ಇರುತ್ತಿರಲಿಲ್ಲ. ಊರಿಡೀ ಸುತ್ತುವ ಸ್ಚಾತಂತ್ರ್ಯ ನಮಗಿತ್ತು. ಈ ಗೆಳತಿಯರು ಬರುವ ವಿಷಯ ನನಗೆ ತಿಳಿದರೆ, ಎಲ್ಲಿದ್ದರೂ ಓಡಿಹೋಗಿ ಆ ಅರಮನೆಯ ಹೊರಗಿನ ಎತ್ತರದ ಚಾವಡಿ ಹತ್ತಿ ಗಿಡಗಳ ನಡುವಿನಿಂದ ನುಸುಳಿಕೊಂಡು ಆ ಗೇಟಿನ ಒಳಗಡೆ ಗೋಣು ಎತ್ತರಿಸಿ ಗೆಳತಿಯರಿಗೆ ಕಾಣುವಂತೆ  ವಿಶಿಷ್ಟ ಭಂಗಿಯಲ್ಲಿ ನಿಂತಿರುತ್ತಿದ್ದೆ. ಒಂದು ಕೈ ಗೇಟಿನ ಮೇಲಿರಿಸಿ ರಸ್ತೆಯ ಮೇಲೆ ದೃಷ್ಟಿ ಗಟ್ಟಿ ಮಾಡಿ  ಕಾಯುತ್ತಿದ್ದೆ. ಒಮ್ಮೆ ಈ ಹುಡುಗಿಯರ ದಂಡು ಆ ರಸ್ತೆಯಲ್ಲಿ ಮನೆಯೆದುರಿಂದ ಹಾದು ಮರೆಯಾಯಿತೋ  ನಾನು ರಾಜಕುಮಾರಿಯ ಪಾತ್ರದ ಜಂಭದಿಂದ ಅರೆನಕ್ಕು  ನನ್ನ ಗುಡಿಸಲಲ್ಲಿ ಬಂದು  ಹುದುಗಿ ಕೊಳ್ಳುತ್ತಿದ್ದೆ. ಅಂತಹ ವಿಶೇಷ, ವಿಶಿಷ್ಟ ಅನುಭೂತಿಯನ್ನು ನೀಡಿದಂತಹ ಆ ಮನೆ ಹಾಗೂ ಅದರ ಒಳಗಿರುವ ರಾಣಿಯರು ನನ್ನ  ರಂಗೋಲಿಗೆ ಚುಕ್ಕಿ ಬರೆದವರು. ಹೀಗಾಗಿ ಕನ್ನಡದ ಮೇಷ್ಟ್ರು ಇತಿಹಾಸದ ಕಥೆ ಕಲಿಸಿ ಕೊಟ್ಟಾಗಲೂ ನಿರ್ಧಿಷ್ಟ ವಿಷಯಗಳು ಎದುರು ಸಿಕ್ಕಾಗ ಅವರ ಪಾಶ ಸೆಳೆಯುತ್ತಿತ್ತು. ನಿಮಗೀಗ ಅವರನ್ನು ಪರಿಚಯಿಸುವೆ. ಅವರು ನಾವು ಇದ್ದ ಬಾಡಿಗೆ ಮನೆಯ ಮಾಲೀಕರು.  ಹೆಂಗಸರು. ಅವರದ್ದು ನಮ್ಮ ಪಕ್ಕದ ಮನೆ. ದೊಡ್ಡ ಮನೆ. ಅಲ್ಲಿ ಮೂವರು ಮಹಿಳೆಯರು, ಊರಿನ ಅವಿಭಾಜ್ಯ ಪಾತ್ರದಂತಿದ್ದರು. ನಂತರದಲ್ಲಿ ಇಬ್ಬರು. ಅವರನ್ನು ಅಜ್ಜಮ್ಮ, ಸಣ್ಣಜ್ಜಿ, ವತ್ಸಲ ಚಿಕ್ಕಿ ಎಂದು ಕರೆಯುತ್ತಿದ್ದೆ. ಹಾಗೆ ಕರೆಯಲು ಅವರೇ ನನಗೆ ಕಲಿಸಿ ಕೊಟ್ಟದ್ದು. ಅಲ್ಲಿ ಕಾಣುತ್ತಿದ್ದುದು ಶ್ರೀಮಂತ ಬದುಕು. ಗಂಡಸರು ಬಂದು ಹೋದರೂ  ವಾಸ ಇರಲಿಲ್ಲ. ಅಜ್ಜಿ ಪಿಸಪಿಸ ಅಂದಿದ್ದು ಕೇಳಿದ್ದೆ..’ ಅವರಿಗೆ ಮದುವೆ ಇಲ್ಲ’ ಆ ಮನೆ ನನ್ನ ಬಾಲ್ಯಕ್ಕೆ ಅನೂಹ್ಯ ಹಾಸು ಹೊದಿಸಿತ್ತು. ಅಂಬೆಗಾಲಿನಿಂದ ಬಡ್ತಿಹೊಂದಿ ತಪ್ಪು ಹೆಜ್ಜೆ ಇರಿಸಿ ನಡೆಯಲು ಕಲಿತಾಗ ಆ ಕೆಂಪು ಸಿಮೆಂಟಿನ ತಂಪು ಪಾದಕ್ಕೆ ಅಪ್ತ ಬಂಧ ಬೆಸೆದಿತ್ತು.  ಅಜ್ಜಿಯಿಂದ ಜೋರು, ಮತ್ತು ಪೆಟ್ಟಿನಿಂದ ತಪ್ಪಿಸಿಕೊಂಡು ಓಡಲು ಸಿಗುತ್ತಿದ್ದ ಸುರಕ್ಷಿತ ತಾಣವೂ ಹೌದು. ” ಅಜ್ಜಮ್ಮ” ಅಲ್ಲಿನ ಯಜಮಾನಿ. ಆಗಲೇ ಅವರಿಗೆ ಇಳಿ ವಯಸ್ಸು. ಆದರೂ ರಾಣಿಯ ಗಾಂಭೀರ್ಯ,ಗತ್ತು. ಮಿತ ಮಾತು. ಅವರು ಯಾವಾಗಲೂ  ಹೂಗಳಿದ್ದ ಬಿಳೀ ತೆಳ್ಳಗಿನ ಹತ್ತಿಯ ಸೀರೆ ಉಡುತ್ತಿದ್ದರು. ಅವರ ಹತ್ತಿರ ಹೋದರೆ ಎಂತದೋ ಸುವಾಸನೆ. ನಾನು ವಿನಾ ಕಾರಣ ಅವರ ಬಳಿ ಹೋಗಿ  ನಾಸಿಕ ಅರಳಿಸಿ ಉಸಿರಿಗೆ ತಾಲೀಮು ನೀಡಿ ಸಂಭ್ರಮಿಸುತ್ತಿದ್ದೆ. ನನಗೆ ಅವರನ್ನು ಮುಟ್ಟುವುದೆಂದರೆ ಎಂತದೋ ಪುಳಕ. ಅದು ರೇಶಿಮೆಯಂತಹ ನುಣುಪು ಸ್ಪರ್ಶ, ಸ್ವಚ್ಛ ಬಿಳಿ ಮೈ ಬಣ್ಣ, ಹದ ಎತ್ತರದ, ತುಸು ದಪ್ಪನೆಯ ಮೈಕಟ್ಟು. ಅಗಲ ಮುಖ.ನನಗೆ ಅವರೆಂದರೆ ಏಕೋ ಕಾಣೆ, ಅಚ್ಚರಿ, ಹೆಮ್ಮೆ, ಪ್ರೀತಿ.  ಅವರು  ಪ್ರೀತಿಯಿಂದ ಕರೆಯುತ್ತಿದ್ದರು. ತಾವು ತಿಂಡಿ ತಿನ್ನುವಾಗ,ಊಟದ ಸಮಯ ನನ್ನ ಕರೆದು ಹತ್ತಿರ ಕುಳ್ಳಿರಿಸುತ್ತಿದ್ದರು. ದೊಡ್ಡ ಊಟದ ಬಟ್ಟಲು. ತರತರಹದ ವ್ಯಂಜನಗಳು, ಬೆಳ್ಳಿಯ ಲೋಟದಲ್ಲಿ ಹದಬಿಸಿ ಹಾಲು. ಪಕ್ಕದಲ್ಲಿ ಒಂದು ತಂಬಿಗೆ ನೀರು. ಅವರು ಊಟಕ್ಕೆ ಬರುವಾಗ ಇಷ್ಟೂ ತಯಾರು ಮಾಡಿ ಇಡುತ್ತಿದ್ದರು. ಅವರು ನಿಧಾನವಾಗಿ ಅಡುಗೆ ಮನೆಗೆ ಬರುತ್ತಿದ್ದರು. ಮನೆಯ ಹಜಾರದಿಂದ ಅಡುಗೆ ಮನೆ ಒಂದಷ್ಟು ದೂರ. ಅದು ಉದ್ದನೆಯ ಮನೆ. ನಾನು ಅವರ ಹೆಜ್ಜೆಗಳನ್ನು ಅನುಕರಿಸುತ್ತ ಅವರ ಹಿಂದೆ ಹಿಂದೆ ನಡೆಯುತ್ತಿದ್ದೆ.  ಪ್ರತಿಸಲವೂ ಅಷ್ಟೇ ಅಚ್ಚರಿಯಿಂದ ಅವರ ಊಟವನ್ನು ನೋಡುವಾಗ ನನಗೆ ಅದರಲ್ಲಿ ಆಸೆಯಿರುತ್ತಿರಲಿಲ್ಲ. ಆದರೆ ಅದನ್ನು ಕಾಣುವುದು ದೊಡ್ಡ ಸಂಭ್ರಮ. ಬೆಳಗ್ಗೆ ಸ್ನಾನ ಮಾಡಿ ದೇವರ ಕೋಣೆ ಸೇರುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಹರಿವಾಣದ ತುಂಬ ಹೂಗಳು, ಬಗೆಬಗೆಯ ಆರತಿ ತಟ್ಟೆಗಳು, ಗಂಧ, ಊದುಬತ್ತಿ, ಅದೆಷ್ಟು ದೇವರ ಪಟಗಳು, ತಾಳೆಗರಿಯ ಕಟ್ಟುಗಳು. ಆ ಸಮಯ ಮಾತ್ರ ಅವರು ಮಣೆ ಇಟ್ಟು ನೆಲದಲ್ಲಿ ಕೂರುವುದು. ಅವರೇ ಪ್ರಾರ್ಥನೆಯನ್ನು ನನಗೆ ಕಲಿಸಿದ್ದು. ಅದೆಷ್ಟು ಕೀರ್ತನೆಗಳು, ಹಾಡುಗಳು ಅವರಿಗೆ ತಿಳಿದಿತ್ತು.  ಅವರ “ಜೊತೆಗೆ ಕುಳಿತುಕೋ” ಎಂಬ ಮೃದುವಾದ ಅಪ್ಪಣೆ ನನಗೆ ತುಂಬಾ ಪ್ರಿಯ. ನಾನು ಆ ವಯಸ್ಸಿಗೆ ಸಹಜ ಕುತೂಹಲದಿಂದ ನೋಡುತ್ತಿದ್ದೆ. ಅವರು ಒಳಹೋದೊಡನೆ ಆ ಕೋಣೆಯೆಲ್ಲವೂ ಊದುಬತ್ತಿಯ ಸುವಾಸನೆ, ಕರ್ಪೂರದ ಪರಿಮಳ, ಬಗೆಬಗೆಯ ಆರತಿಗಳು, ಯಾವುದೋ ಮಂತ್ರ ಪಠನೆ ಗಳಿಂದ ತುಂಬುತ್ತಿತ್ತು. ಅವರು ಎಲ್ಲವನ್ನೂ ಮುಗಿಸಿ ಅಡ್ಡಬಿದ್ದು ಹೊರಬರುತ್ತಿದ್ದರು. ಅಲ್ಲಿಗೆ ಆ ಕೋಣೆಯ ಬಾಗಿಲು ಮುಚ್ಚುತ್ತಿತ್ತು. ನಂತರ ಅಲ್ಲಿ ಸಂಜೆ ಭಜನೆ. ಭಜನೆ ಮುಗಿದ ತಕ್ಷಣ ರಾತ್ರಿಯ ಊಟ.  ಇವರಿಂದ ಸಾಲುಸಾಲು ಭಜನೆ ಹಾಡುಗಳು ನನಗೆ ಕಂಠಪಾಠವಾದವು. ನನ್ನಿಂದ ಅವರು ಹಾಡಿಸುತ್ತಿದ್ದರು. ಅವರ ಮನೆಗೆ ಬಂದವರ ಎದುರು ನನ್ನ ಸಂಗೀತ ಕಛೇರಿ ನಡೆಯುತ್ತಿತ್ತು. ಹೆಚ್ಚಾಗಿ ಅವರ ನೆಂಟರು, ಹೆಂಗಸರೇ ಹೆಚ್ಚಾಗಿ ಬರುತ್ತಿದ್ದುದು. ಬರುವವರು ಕಾರಿನಲ್ಲಿ. ನಾನು ತಕ್ಷಣ ಪ್ರಸ್ತುತಿಗೆ ಅನುವಾಗಿ ಕಾಯುತ್ತಿದ್ದೆ. ಅವರು ಜೋರಾಗಿ ನನ್ನ ಕೂಗುತ್ತಿದ್ದರು. ಥಟ್ಟನೆ ನಾನು ಹಾರಿ ಜಿಗಿದು ಹೋಗಿ ದೊಡ್ಡ ಹಜಾರದ ಮೂಲೆಯಲ್ಲಿ ನಿಲ್ಲುತ್ತಿದ್ದೆ. ಅವರು ನನ್ನ ಪರಿಚಯವನ್ನು ಸೊಗಸಾಗಿ ಮಾಡುತ್ತಿದ್ದರು. ಬಂದವರು ಕಣ್ಣರಳಿಸಿ ನನ್ನ ನೋಡುವುದು. ನಂತರ ಅಜ್ಜಮ್ಮನ ಅಪ್ಪಣೆಯಾಗುತ್ತಿತ್ತು. “ಹಾಡು..ನಾರಾಯಣತೇ ನಮೋನಮೋ..” ಅಪರೂಪಕ್ಕೆ ಕೆಲವೊಮ್ಮೆ ಅತಿಥಿ ಗಳ ಮುಖಚರ್ಯೆಯ ಭಾವಕ್ಕೆ ಹೆದರಿ  ನಾನು ಮತ್ತು  ಹಾಡು  ಬೇರೆಯಾಗುವುದೂ ಇತ್ತು. ಆಗಲೂ ನಡುವೆ ಅವರು ಸರಿಪಡಿಸಿ ನನ್ನ ಪರಾಕುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಸ್ಪಷ್ಟ ಉಚ್ಛಾರಣೆ, ಗಾಯನ, ಹಾಡಿನ ಸಾಲುಗಳನ್ನು ಉರು ಹಚ್ಚಿ ಕಂಠಪಾಠ ಮಾಡುವ ಕಲೆ ಇತ್ಯಾದಿಗಳನ್ನು, ಕಲಿಸಿದ ಚಾವಡಿಯಲ್ಲಿ ನನಗರಿವಿಲ್ಲದೆಯೇ ಕಲಿಸಿದ ಗುರುಮಾತೆ ಅವರು. ಅಲ್ಲಿ ಹೊಸದೊಂದು ನಂಟು ಬೆಸೆದಿತ್ತು. ಯಾರೂ ಇರದಿದ್ದಾಗ  ಪ್ಲಾಸ್ಟಿಕ್‌ ನ ಬಳ್ಳಿ ಹೆಣೆದ ಮರದ ಚೌಕಟ್ಟಿದ್ದ ಕುರ್ಚಿಯಲ್ಲಿ ಅವರು ಕೂತರೆ ನಾನು ಅವರ ಪಾದದ ಬಳಿ. ತಲೆ ಎತ್ತಿದ್ದರೆ ಬಹಳ ಎತ್ತರಕ್ಕೆ ಅವರು ಇದ್ದಂತೆ ಕಾಣುತ್ತಿತ್ತು. ಅವರ ಜೊತೆಗೆ ಮಾತು. “ಮೊನ್ನೆ ಬಂದವರ ಹೆಸರು ಹೇಳು” ” ಕಳೆದ ವಾರ ಬಂದವರು”  “ನಿನ್ನೆ ಊಟಕ್ಕೆ ಏನೆಲ್ಲ ಇತ್ತು” ನನ್ನ ಉತ್ತರಕ್ಕೆ  ಅವರದ್ದು ಸುಂದರ ನಗು. ನನಗೆ ಅದೇ ದೊಡ್ಡ ಬಹುಮಾನ. ಅಜ್ಜಮ್ಮನ ಮಲಗುವ ಕೊಠಡಿ ವಿಶಾಲವಾಗಿತ್ತು. ಮಂಚದ ಬಳಿ ಪುಟ್ಟ ಕೆತ್ತನೆ ಇದ್ದ ಸ್ಟೂಲ್ ರೀತಿಯ ಉಪಕರಣ.  ಒಬ್ಬರೇ ಕೂತಿದ್ದರೆ ಮೆಲ್ಲನೆ ದೇವರ ಹಾಡು ಮಣಮಣಿಸುತ್ತಿದ್ದರು. ನಾನು ಅಡಗಿಕೊಂಡು ಕೇಳಲು ಯತ್ನಿಸುತ್ತಿದ್ದೆ. ನನ್ನ ಮುಖ ಕಂಡರೆ ಅವರ ಹಾಡು ನಿಲ್ಲುತ್ತಿತ್ತು. ” ಬಾ ಎದುರು” ಅಪ್ಪಣೆಯಾಗುತ್ತಿತ್ತು. ಇಲ್ಲಿ ಕೂತುಕೋ. “ನನಗೀಗ ನಿನ್ನ ಅಜ್ಜಿ ಹೇಳಿದ ಒಂದು ಕಥೆ ಹೇಳು” ಉಳಿದವರಿಗೆ ಹೇಳಿದಷ್ಟು ಸಲೀಸಾಗಿ ಕಥೆ ಅವರೆದುರು ತೆರೆದುಕೊಳ್ಳುತ್ತಿರಲಿಲ್ಲ. ಒಂದಿಷ್ಟು ಯೋಚನೆ, ಲಜ್ಜೆ, ಸಂಕೋಚ ಪ್ರದರ್ಶನದ ನಂತರ ಕಥೆ ಆರಂಭ. ಅವರದ್ದು ಚೆಂದದಲ್ಲಿ ಗಟ್ಟಿಯಾಗಿ,ಒಂದು ಲಾಲಿತ್ಯದಲ್ಲಿ ಹೂಂಗುಟ್ಟುವಿಕೆ. .ಜಾತ್ರೆ ಹತ್ತಿರ ಬಂದಾಗ ಅವರು ಹೇಳುತ್ತಿದ್ದರು: ” ನಾಳೆ ಹೋಗುತ್ತೀಯಲ್ವಾ, ದೇವರು ಜಾತ್ರೆಯಲ್ಲಿ ಹೋಗುವಾಗ ದೇವರ ಎದುರು ಝರಿ ಸೀರೆ ಕಚ್ಚೆಹಾಕಿ ಉಟ್ಟ ಹೆಂಗಸು ಇರಬಹುದು. ನೋಡಿ ಬಾ. ಮೊದಲೆಲ್ಲ ನೃತ್ಯದ ಹೆಜ್ಜೆ ಹಾಕುತ್ತ ಹೋಗುತ್ತಿದ್ದೆವು . ದೇವರ “ಬಲಿ” ಹೋಗುತ್ತಿರುವಾಗ ದೇವರ ಎದುರಿನಿಂದ ಚಾಮರ ದೇವರಿಗೆ ಬೀಸುತ್ತ ಹೋಗುವುದು. ಅದು ನನ್ನ ಹಕ್ಕಾಗಿತ್ತು. ಅದು ನನಗೆ ಸಿಕ್ಕಿದ ಸೌಭಾಗ್ಯವಾಗಿತ್ತು. ದೇವರ ಬಲಬದಿಯ ಹೆಣ್ಣು ನಾನು.” ನನಗೆ ಏನೊಂದು ಅರ್ಥ ಆಗುತ್ತಿರಲಿಲ್ಲ. ಮನೆಗೆ ಬಂದು ನನ್ನ ಅಜ್ಜಿಯ ಬಳಿ ಕೇಳುತ್ತಿದ್ದೆ. “ಅಮ್ಮಾ..ಬಲಬದಿ ಅಂದರೇನು”  ಆಕೆ ತನ್ನ ಬಲ ಕೈ ತೋರಿಸಿದರೆ ನಾನು ಪೆಚ್ಚಾಗುತ್ತಿದ್ದೆ. ಅಜ್ಜಿ ಅನ್ನುತ್ತಿದ್ದಳು. “ಜಾತ್ರೆಯಲ್ಲಿ ನೃತ್ಯ ಮಾಡುವುದು ದೇವದಾಸೀ   ಸಂಪ್ರದಾಯವಾಗಿತ್ತು. ಈಗ ಅದೆಲ್ಲ ನಿಷೇಧ. ಆದರೂ ಹರಕೆ ತೀರಿಸುವಂತೆ ಬಂದು ಹೋಗುತ್ತಾರೆ. ಅವರು ಮದುವೆಯಾಗುವುದೂ ಇಲ್ಲ. ದೇವಾಲಯದಿಂದ ಅವರಿಗೆ ಕುಂಕುಮ,ತಾಳಿ ಶಾಸ್ತ್ರ ಬದ್ದವಾಗಿ ನೀಡಲಾಗುತ್ತಿತ್ತು. ಈಗ ಅದೆಲ್ಲ ನಿಂತಿದೆ.” ದೇವರಿಗೇ ಸಮರ್ಪಣೆ ಮಾಡಿಕೊಂಡ ಈ ಮಾತೃ ಪಾತ್ರಗಳು ನನ್ನನ್ನು ಪ್ರೀತಿಸಿದ್ದು,  ಸಮರ್ಪಣಾ ಭಾವದಿಂದ ಬದುಕನ್ನು ಪ್ರೀತಿಸಲು ನನಗೆ ಕಲಿಸಿದ್ದು  ರಂಗೋಲಿಗೆ ಜೀವ, ಭಾವ, ಬಣ್ಣ ತುಂಬಿವೆ. ************************************************************** ರಂಗಭೂಮಿ ಹಾಗೂ

Read Post »

You cannot copy content of this page

Scroll to Top