ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—34 ಆತ್ಮಾನುಸಂಧಾನ ಹಾಸ್ಟೆಲ್ ಊಟದಲ್ಲಿ ಮೈತುಂಬಿಕೊಂಡೆ ‘ಶಾಲ್ಮಲಾ ಹಾಸ್ಟೆಲ್‌ನ ಊಟದ ವ್ಯವಸ್ಥೆ ತುಂಬ ಸೊಗಸಾಗಿತ್ತು. ದಿನವೂ ಒಂದೊಂದು ಬಗೆಯ ಕಾಳು-ಕಡಿಯ ಬಾಜಿ, ಸೊಪ್ಪಿನ ಪಲ್ಯ, ಹಸಿ ತರಕಾರಿಯ ಕೋಸಂಬರಿ, ದಿನಕ್ಕೊಂದು ವಿಧದ ಚಟ್ನಿ, ಕೆನೆ ಮೊಸರು, ರೊಟ್ಟಿ ಇಲ್ಲವೆ ಚಪಾತಿ, ಬಯಸಿದಷ್ಟೂ ಅನ್ನ…. ಇತ್ಯಾದಿಗಳಿಂದ ಊಟವು ಸಮೃದ್ಧವಾಗಿರುತ್ತಿತ್ತು. ರವಿವಾರದಂದು ವಿಶೇಷ ಸಿಹಿ ತಿನಿಸು ಪೂರೈಕೆಯಾಗುತ್ತಿತ್ತು.                 ಇತರ ವಿದ್ಯಾರ್ಥಿಗಳ ಮಾತು ಅಂತಿರಲಿ, ನನಗೂ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಇಲ್ಲಿನ ಊಟದ ವ್ಯವಸ್ಥೆ ಅದ್ಭುತವಾಗಿಯೇ ತೋರುತ್ತಿತ್ತು. ನಾನಂತೂ ಯಾವ ಸಂಕೋಚವೂ ಇಲ್ಲದೇ ಸಂತೃಪ್ತಿಯ ಊಟ ಮಾಡತೊಡಗಿದೆ. ಆರಂಭದ ಒಂದೆರಡು ತಿಂಗಳು ತರಗತಿಯ ಪಾಠಕ್ಕಿಂತ ಹಾಸ್ಟೆಲ್ಲಿನ ಊಟವೇ ನನ್ನ ಮೊದಲ ಆದ್ಯತೆಯಾಯಿತು. ಕೆಲಸವೇ ಇಲ್ಲದೇ ದುರ್ಬಲವಾಗಿದ್ದ ನನ್ನ ಜೀರ್ಣಾಂಗಗಳಿಗೆ ಪೂರ್ಣ ಪ್ರಮಾಣದ ಕೆಲಸ ದೊರೆತಂತಾಗಿ ಅವು ಚೇತರಿಸಿಕೊಂಡು ಕ್ರಿಯಾಶೀಲವಾದವು.                 ವಿಶ್ವವಿದ್ಯಾಲಯವು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ಸಾಮಾನ್ಯ ಅಭಿಪ್ರಾಯವು ನನ್ನ ಪಾಲಿಗೆ ಹುಸಿಯಾಗುತ್ತ ನನ್ನ ದೈಹಿಕ ಸಾಮರ್ಥ್ಯ ಮತ್ತು ಚಹರೆಗಳು ಸಂಪೂರ್ಣ ಬದಲಾಗಿ ತೇಜಸ್ವಿಯಾಗತೊಡಗಿದ್ದೆ. ವಿಶ್ವವಿದ್ಯಾಲಯಕ್ಕೆ ಬರುವಾಗ ಮುಖ, ಮೈಗಳಲ್ಲಿ ಮೂಳೆಗಳೇ ಎದ್ದು ಕಾಣುವ ಸ್ಥಿತಿಯಲ್ಲಿದ್ದ ನಾನು ಎರಡೇ ತಿಂಗಳಲ್ಲಿ ಮೈಕೈ ತುಂಬಿಕೊಂಡು ಚಂದವಾಗಿದ್ದೆ.                 ಮೊದಲ ಮೂರು ತಿಂಗಳ ಓದು ಮುಗಿಸಿ ಗಣೇಶ ಹಬ್ಬದ ರಜೆಯಲ್ಲಿ ನಾನು ಊರಿಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗುವಷ್ಟು ನನ್ನ ಆಳ್ತನದಲ್ಲಿ ಬದಲಾವಣೆ ಎದ್ದು ಕಾಣುತ್ತಿತ್ತು. ನನ್ನ ಗೆಳೆಯರು “ಧಾರವಾಡದ ಹವಾ ನಿನಗೆ ಹಿಡಿಸಿದೆ…” ಎಂದು ಅಲ್ಲಿಯ ಹವಾಮಾನವನ್ನು ಕೊಂಡಾಡಿದರು. ಸ್ವತಃ ನನ್ನ ಅವ್ವನ ಕಣ್ಣುಗಳಲ್ಲಿಯೂ ಒಂದು ಸಂತೃಪ್ತಿಯ ಮಿಂಚು ಹೊಳೆದದ್ದನ್ನು ನಾನು ಗಮನಿಸಿದ್ದೆ.                 ಎಂ.ಎ. ಮೊದಲ ವರ್ಷದ ಓದು ಮುಗಿಯುತ್ತ ಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ಅಂದಿನ ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಮಹತ್ವದ ಕಾರ್ಯಕ್ರಮವೊಂದು ನಿಗದಿಯಾಯಿತು. ಇಡಿಯ ವಿಶ್ವವಿದ್ಯಾಲಯವೂ ಸುಣ್ಣ ಬಣ್ಣಗಳಿಂದ ಅಲಂಕಾರಗೊಳ್ಳುವ ಕೆಲಸಗಳು ಭರದಿಂದ ನಡೆದವು. ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷಾ ವಿಭಾಗಗಳನ್ನು ಹೊಂದಿದ ವಿಶ್ವಚೇತನ ಕಟ್ಟಡವೂ ಇಂಥ ಅಲಂಕಾರ ಗಳಿಂದ ಸಿಂಗಾರ ಗೊಂಡಿತು.                 ಒಂದು ದಿನ ನಮ್ಮ ಗುರುಗಳಾದ ಡಾ. ಕಲ್ಬುರ್ಗಿಯವರು ತರಗತಿಗೆ ಬಂದವರು “ನಿಮ್ಮಲ್ಲಿ ಚಂದವಾಗಿ ಕನ್ನಡ ಅಕ್ಷರ ಬರೆಯಬಲ್ಲವರು ಯಾರಿದ್ದೀರಿ?” ಎಂದು ವಿಚಾರಿಸಿದರು. ಯಾರೋ ಒಂದಿಬ್ಬರು ಸಹಪಾಠಿಗಳು ನೇರವಾಗಿ ನನ್ನತ್ತ ಬೆರಳು ಮಾಡಿ ತೋರಿದರು. ಗುರುಗಳು “ಫಾಲೋ ಮಿ…” ಎಂದು ಅಪ್ಪಣೆ ಮಾಡಿ ತರಗತಿಯಿಂದ ಹೊರ ನಡೆದರು. ಅನ್ಯದಾರಿ ಕಾಣದೆ ನಾನು ಗುರುಗಳನ್ನು ಹಿಂಬಾಲಿಸಿದೆ.                 ಕನ್ನಡ ವಿಭಾಗದಲ್ಲಿ ಧಾರ್ಮಿಕ ಚಳುವಳಿಯ ಕಾರಣದಿಂದ ರಚನೆಗೊಂಡ ಸಾಹಿತ್ಯದ ಆಧಾರದಿಂದ “ಜೈನ ಸಾಹಿತ್ಯ”, “ವೀರಶೈವ ಸಾಹಿತ್ಯ”, “ವೈದಿಕ-ಸಾಹಿತ್ಯ” ಇತ್ಯಾದಿ ಶಾಖೆಗಳನ್ನು ಗುರುತಿಸಿದ್ದರು. ವಿವಿಧ ಶಾಖೆಗಳಿಗೆ ಪ್ರತ್ಯೇಕವಾದ ಪುಸ್ತಕ ಸಂಗ್ರಹ, ಅಧ್ಯಾಪಕರ ಕೋಣೆಗಳು ಇದ್ದವು. ಅವುಗಳನ್ನೆಲ್ಲ ಗುರುತಿಸುವಂತೆ ಎಲ್ಲ ಶಾಖೆಗಳ ವಿವರಗಳನ್ನು ಭಿತ್ತಿ ಪತ್ರದಲ್ಲಿ ಬರೆದು ಸಜ್ಜುಗೊಳಿಸುವ ಕಾರ್ಯಗಳನ್ನು ಕಲ್ಬುರ್ಗಿ ಸರ್ ಕೈಗೆತ್ತಿಕೊಂಡಿದ್ದರು.                 ನನ್ನನ್ನು ತಮ್ಮ ಕೋಣೆಗೆ ಕರೆದ ಕಲ್ಬುರ್ಗಿಯವರು ನಾನು ಬರೆದು ಸಿದ್ಧಪಡಿಸಬೇಕಾದ ಭಿತ್ತಿ ಪತ್ರಗಳ ವಿವರಗಳನ್ನು ನನಗೆ ನೀಡಿ, ಅದಕ್ಕೆ ಬೇಕಾದ ಡ್ರಾಯಿಂಗ್ ಪೇಪರ್ಸ  ,ಕಲರ್  ಮತ್ತು  ಬ್ರಶ್‌ಗಳನ್ನು ಪೂರೈಸಿ ನನಗಾಗಿ ಒಂದು ಪ್ರತ್ಯೇಕ ಕೋಣೆಯನ್ನು ಅಣಿಗೊಳಿಸಿ ಕಾರ್ಯಾರಂಭ ಮಾಡಲು ಅಪ್ಪಣೆ ಮಾಡಿದರು.                 ಮುಂದಿನವಾರದಲ್ಲಿ ಮಾನ್ಯ ಮಂತ್ರಿಗಳ ಆಗಮನದ ಮುನ್ನ ಎಲ್ಲವೂ ಸಿದ್ಧವಾಗಬೇಕೆಂಬ ಕರಾರಿನೊಂದಿಗೆ ನಾನು ಭಯ ಆತಂಕದಿಂದಲೇ ಭಿತ್ತಿ ಪತ್ರಗಳನ್ನು ಬರೆಯಲು ಆರಂಭಿಸಿದೆ. ಕಲ್ಬುರ್ಗಿ ಸರ್ ಸಮಯ ಸಿಕ್ಕಾಗ ನಡುನಡುವೆ ಬಂದು ಸಲಹೆ ಸೂಚನೆ ನೀಡಿ ಹೋಗುತ್ತಿದ್ದರು. ನಾನು ಬರೆದದ್ದು ಮೆಚ್ಚುಗೆಯಾದಾಗ ಇತರ ಅಧ್ಯಾಪಕರನ್ನೂ ಕರೆತಂದು ತೋರಿಸಿ ಅವರಿಂದಲೂ ಮೆಚ್ಚುಗೆ ಮತ್ತು ಅಗತ್ಯವಾದ ಸಲಹೆಯನ್ನು ಪಡೆಯುವ ಅವಕಾಶ ನನಗೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು.                 ಊಟ ಉಪಹಾರಗಳನ್ನು ಹೊರತು ಪಡಿಸಿ ನಾನು ನನ್ನ ತರಗತಿಯ ಪಾಠಕ್ಕಾಗಿಯೂ ಮತ್ತೆ ಹೊರಗೆ ಹೋಗುವಂತೆ ಇರಲಿಲ್ಲ. ಸಂಜೆ ಕತ್ತಲಾಗುವ ಹೊತ್ತಿನಲ್ಲಿ ಗುರುಗಳು ಸ್ವತಃ ಬಂದು ನೋಡಿ ಅಂದು ಸಿದ್ಧಗೊಂಡ ಭಿತ್ತಿಪತ್ರಗಳನ್ನು ಪರಿಶೀಲಿಸಿ ಒಪ್ಪಿತವಾದ ಬಳಿಕವೇ ನಾನು ಹಾಸ್ಟೆಲ್ಲಿಗೆ ಹೋಗಲು ಅನುಮತಿ ನೀಡುತ್ತಿದ್ದರು.                 ಹೀಗೆಯೇ ಎರಡು ದಿನಗಳು ನಾನು ಭಿತ್ತಿ ಪತ್ರ ಬರಹದಲ್ಲಿ ಸಂಪೂರ್ಣವಾಗಿಯೇ ತೊಡಗಿಕೊಂಡಿದ್ದೆ.                 ಮೂರನೆಯದಿನ ನನ್ನ ವೈಯಕ್ತಿಕವಾದ ಸಮಸ್ಯೆಯೊಂದು ಎದುರಾಯಿತು. ಅದು ನನ್ನ ವಾರ್ಷಿಕ ಪರೀಕ್ಷೆಯ ಫಾರ್ಮ್ ತುಂಬಿ ನಿಗದಿತ ಶುಲ್ಕದೊಂದಿಗೆ ಪರೀಕ್ಷಾ ವಿಭಾಗಕ್ಕೆ ಸಲ್ಲಿಸಬೇಕಾದ ಕೊನೆಯದಿನ. ದಂಡ ಸಹಿತವಾಗಿ ಮತ್ತೆ ಕೆಲವು ದಿನಗಳ ಅವಕಾಶವಿದೆಯಾದರೂ ದಂಡದ ಹೊರೆ ಹೊರುವುದು ಬೇಡವೆಂದು ನಾನು ಅಂತಿಮ ದಿನದ ಕಾಲಾವಕಾಶದಲ್ಲಿ ಫಾರ್ಮ್ ತುಂಬಿಕೊಂಡು ಸಂಬಂಧಿಸಿದ ದಾಖಲೆಗಳೊಂದಿಗೆ ಫೀ ತುಂಬಲೆಂದು ಅಕೌಂಟ್ ಸೆಕ್ಶನ್ನಿನಲ್ಲಿ ಸರತಿಯ ಸಾಲಿನಲ್ಲಿ ಸೇರಿಕೊಂಡು ನಿಂತೆ.                 ಒಂದರ್ಧ ಗಂಟೆಯಲ್ಲಿ ಮುಗಿಸಬಹುದಾದ ಕೆಲಸವೆಂಬ ನಂಬಿಕೆಯಲ್ಲಿ ಗುರುಗಳಿಗಾಗಲೀ, ನನ್ನ ಸಹಪಾಠಿಗಳಿಗಾಗಲೀ ನಾನು ವಿಷಯ ತಿಳಿಸಿರಲಿಲ್ಲ. ಆದರೆ ನನ್ನ ದುರ್ದೈವದಿಂದ ನನ್ನಂತೆಯೇ ಕೊನೆಯ ದಿನವೇ ಈ ಕೆಲಸ ಪೂರೈಸಿಕೊಳ್ಳಲು ಬಂದ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿ ಸರತಿಯ ಸಾಲಿನಲ್ಲಿದ್ದ ನನಗೆ ಅವಕಾಶ ದೊರೆವ ಮುನ್ನವೇ ಮುಂಜಾನೆಯ ಕಾಲಾವಧಿ ಮುಗಿದು ಹೋಯಿತು!                 ಮಧ್ಯಾಹ್ನದ ಊಟದ ಬಿಡುವಿನ ಬಳಿಕ ಕೌಂಟರ್ ಮತ್ತೆ ಆರಂಭವಾಗುವ ಮುನ್ನ ಸರತಿಯಲ್ಲಿ ಸೇರಿಕೊಳ್ಳುವ ಉದ್ದೇಶದಿಂದ ಬೇಗ ಊಟ ಮುಗಿಸಿ ಬರಲೆಂದು ಸಮೀಪದ “ಮೆಸ್” ಕಡೆ ನಡೆಯತೊಡಗಿದೆ.                 ಅಷ್ಟರಲ್ಲೇ ಓಡೋಡಿ ಬಂದ ನನ್ನ ಸಹಪಾಠಿಗಳಿಬ್ಬರು ಆಚೀಚೆ ನಿಂತು ನನ್ನ ಕೈ ಹಿಡಿದುಕೊಳ್ಳುತ್ತ “ಏ ಮಹಾರಾಯ… ಇಲ್ಲಿದ್ದೀಯೇನ್ಲೆ….. ಮುಂಜಾನಿಂದ ಕಲ್ಬುರ್ಗಿ ಸರ್ ನಿನ್ನ ಹುಡುಕ್ಲಾಕ ಹತ್ಯಾರ ನಡೀಲೇ…” ಎನ್ನುತ್ತ ಅಕ್ಷರಶಃ ನನ್ನನ್ನು ಎಳೆದೊಯ್ಯುವವರಂತೆಯೇ ಕನ್ನಡ ವಿಭಾಗದತ್ತ ಕರೆದೊಯ್ದರು.                 ನಾನು ಯಾರಿಗೂ ತಿಳಿಸದೆ ಬಂದು ತಪ್ಪು ಮಾಡಿ ಈಗ ಸಿಕ್ಕಿಹಾಕಿಕೊಂಡಿದ್ದೆ. ಕಲ್ಬುರ್ಗಿ ಸರ್ ಮುಂಜಾನೆ ಹನ್ನೊಂದರಿಂದಲೇ ನನ್ನನ್ನು ಹುಡುಕಲು ಆರಂಭಿಸಿದ್ದಾರೆ. ಹಾಸ್ಟೆಲ್ ಕೋಣೆಯಲ್ಲೂ ನಾನಿಲ್ಲವೆಂಬುದು ತಿಳಿದ ಮೇಲೆ ಒಂದಿಬ್ಬರನ್ನು ಸಿನಿಮಾ ಟಾಕೀಸನತ್ತಲೂ ಕಳುಹಿಸಿ ಯಾವುದಾದರೂ ಸಿನಿಮಾ ನೋಡಲು ಹೋದನೇನೋ ಎಂದು ಪರಿಶೀಲನೆ ಮಾಡಿಸಿದ್ದಾರೆ. ಅಲ್ಲಿಯೂ ಕಾಣಸಿಕ್ಕದ ಬಳಿಕ ಸಹಜವಾಗಿಯೇ ಮತ್ತಿಬ್ಬರು ಕ್ಯಾಂಪಸ್ಸಿನಲ್ಲಿಯೇ ಬೇರೆ ಬೇರೆ ವಿಭಾಗಗಳತ್ತ ಅಲೆದಲೆದು ಹುಡುಕಿ ಬಂದಿದ್ದಾರೆ. ಕೊನೆಗೂ ನಾನು ವಿಶ್ವವಿದ್ಯಾಲಯದ ಅಕೌಂಟ್ ಸೆಕ್ಶನ್ನಿನಲ್ಲಿ ಇಬ್ಬರ ಕೈಗೆ ಸಿಕ್ಕು ಬಿದ್ದು ಗುರುಗಳ ಕೋಪವನ್ನು ಹೇಗೆ ಎದುರಿಸುವುದೆಂಬ ಆತಂಕದಲ್ಲಿ ಕನ್ನಡ ವಿಭಾಗದತ್ತ ಹೆಜ್ಜೆ ಹಾಕುತ್ತಿದ್ದೆ.                 ಕಲ್ಬುರ್ಗಿ ಸರ್ ಕೊಠಡಿಯನ್ನು ನಾನು ಪ್ರವೇಶಿಸಿದಾಗ ನಾನು ನಿರೀಕ್ಷಿಸಿದಂತೆ ಅವರು ನನ್ನ ಮೇಲೆ ಸಿಡಿಮಿಡಿಗೊಳ್ಳಲಿಲ್ಲ. ಶಾಂತರಾಗಿಯೇ ನನ್ನನ್ನು ವಿಚಾರಿಸಿಕೊಂಡರು. ನಾನು ಪರೀಕ್ಷೆಯ ಫೀ ಕಟ್ಟಲೆಂದು ‘ಕ್ಯೂ’ ನಿಂತ ವಿವರಗಳನ್ನು ಕೇಳಿದ ಬಳಿಕ “ನೀನು ನನಗೆ ತಿಳಿಸಿದ್ದರೆ ಅದಕ್ಕೆ ನಾನು ಬೇರೆ ವ್ಯವಸ್ಥೆ ಮಾಡುತ್ತಿದ್ದೇನಲ್ಲ….” ಎಂದಷ್ಟೇ ನುಡಿದು ಕೆಲಸ ಮುಂದುವರಿಸಿ ಆದಷ್ಟು ಬೇಗ ಮುಗಿಸುವಂತೆ ಸೂಚನೆ ನೀಡಿ ಕಳುಹಿಸಿದರು.                 ನಾನು ಮತ್ತದೇ ಕೊಠಡಿಗೆ ಹೊರಟು ಬರೆಯಲು ಆರಂಭಿಸಿದೆ. ಹಸಿವು ಹಿಂಸೆ ನೀಡುತ್ತಿತ್ತು. ಉಪಾಯ ಕಾಣದೆ ಕೆಲಸ ಮುಂದುವರಿಸಿದ್ದೆ. ಒಂದು ಅರ್ಧಗಂಟೆ ಕಳೆಯುವುದರಲ್ಲಿ ನನ್ನನ್ನು ಕ್ಯಾಂಪಸ್ಸಿನಲ್ಲಿ ಪತ್ತೆ ಹಚ್ಚಿ ಗುರುಗಳ ಬಳಿಗೆ ಕರೆತಂದ ನನ್ನ ಸಹಪಾಠಿಗಳಿಬ್ಬರೂ ನನಗಾಗಿ ಊಟ ತೆಗೆದುಕೊಂಡು ಬಂದರು. ಗುರುಗಳೇ ಈ ವ್ಯವಸ್ಥೆ ಮಾಡಿದ್ದು ತಿಳಿದು ಅಚ್ಚರಿಯಾಯಿತು.                 ಊಟ ಆರಂಭಿಸಿದೆ ಗುರುಗಳು ಕೊಠಡಿಗೆ ಬಂದರು. ನನ್ನ ಊಟ ಮುಗಿಯುವವರೆಗೂ ನಿಂತುಕೊಂಡೇ ಮಾತನಾಡಿದರು….                 ಅವರ ಮಾತಿನುದ್ದಕ್ಕೂ ಇದ್ದ ಉಪದೇಶವೆಂದರೆ, ಕರ್ತವ್ಯ ನಿಷ್ಠೆ ಮತ್ತು ಅದಕ್ಕಾಗಿ ನಾವು ಬೆಳೆಸಿಕೊಳ್ಳಬೇಕಾದ ಶೃದ್ಧೆಯ ಕುರಿತಾದ ವ್ಯಾಖ್ಯಾನಗಳು ಮಾತ್ರ!                 ಸಂದರ್ಭ ಸುಖ್ಯಾಂತವಾಗುವುದರೊಂದಿಗೆ ನನಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂಥ ದೃಷ್ಟಾಂತಗಳನ್ನು ಗುರುಗಳಿಂದ ಕೇಳಿದಾಗ ಇದು ನನಗೊದಗಿ ಬಂದ ಭಾಗ್ಯವೆಂದೇ ಭಾವಿಸಿದೆ.                 ಅಲ್ಲಿಂದ ಗುರುಗಳು ಹೊರಗೆ ಹೋದರೂ ನನ್ನ ಕಾರ್ಯಗಾರ ಕೊಠಡಿಗೆ ಹೊರಗಿನಿಂದ ಬೀಗ ಹಾಕುವ ಹೊಸ ವ್ಯವಸ್ಥೆ ಜಾರಿಯಾಯಿತು. ಮುಂದಿನ ಎರಡು ದಿನಗಳೂ ಇದೇ ವ್ಯವಸ್ಥೆ ಮುಂದುವರಿಯಿತು. ಕಾಲಕಾಲಕ್ಕೆ ನನ್ನ ಊಟ ತಿಂಡಿಯ ವ್ಯವಸ್ಥೆಯಾಗುತ್ತಿದ್ದರೂ ನಾನು ಬಯಸಿದಾಗ ಹೊರಗೆ ಹೋಗುವ ಸ್ವಾತಂತ್ರ್ಯವಿರಲಿಲ್ಲ.                 ಹೀಗೆ ಮತ್ತೆ  ಎರಡು ದಿನಗಳ ಕಾಲ ನಿಷ್ಠೆಯಿಂದ ಭಿತ್ತಿಪತ್ರ ಬರಹಳನ್ನು ಮುಗಿಸಿದೆ. ಕಲ್ಬುರ್ಗಿ ಗುರುಗಳು “ಅಂದು ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ” ಕಾಯಕ ನಿಷ್ಠೆಯ ಅರಿವು ಮೂಡಿಸಿದ ಪರಿ ಅದ್ಭುತವೆಂದೇ ಈಗಲೂ ಅನಿಸುತ್ತದೆ. ********************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಇದ್ದ ಬದ್ದ ವಸ್ತ್ರ, ಪುಸ್ತಕಗಳಿಂದ ತುಂಬಿದ ನನ್ನ ಸೂಟ್‌ಕೇಸ್ ತುಂಬಾ ಭಾರವಾಗಿತ್ತು. ಪ್ರಯಾಸದಿಂದ ಅದನ್ನು ಹೇಗೂ ಬಳಸಿಕೊಂಡು ಸುಧಾರಿಸಿಕೊಳ್ಳುತ್ತ ಬಸ್‌ಸ್ಟಾಫಿನಲ್ಲಿ ನಿಂತು ನಾನು ಹೋಗಿ ಸೇರಿಕೊಳ್ಳಬೇಕಾದ ಮೊದಲ ವರ್ಷದ ವಿದ್ಯಾರ್ಥಿಗಳ ವಸತಿ ನಿಲಯ “ಶಾಲ್ಮಲಾ ಹಾಸ್ಟೆಲ್” ಯಾವ ದಿಕ್ಕಿನಲ್ಲಿದೆ? ಎಂಬುದನ್ನು ಅಲ್ಲಿಯೇ ನಿಂತಿರುವ ವಿದ್ಯಾರ್ಥಿಗಳ್ಲಿ ಕೇಳಿ ತಿಳಿದುಕೊಂಡೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಇದೀಗ ನಾನು ಓದುವುದಕ್ಕಾಗಿ ದೂರದ ಧಾರವಾಡಕ್ಕೆ ಹೊರಟಿದ್ದೇನೆ ಎನ್ನುವಾಗ ಅವನಿಗೆ ಅದು ಅಮೇರಿಕೆಗೋ ಇಂಗ್ಲೆಂಡಿಗೋ ಹೊರಟಂತೆ ದೂರ ಪ್ರಯಾಣವಾಗಿ ಕಂಡಿದೆ. ಆತ ನಾನು ಧಾರವಾಡಕ್ಕೆ ಹೋಗಲೇ ಬಾರದೆಂದು ಹಠ ಹಿಡಿದ. ಎರಡು ಮೂರು ದಿನ ಮನೆಯಲ್ಲಿ ಈ ವಿಷಯದ ಕುರಿತಾಗಿಯೇ ವಾದ-ವಿವಾದಗಳು ನಡೆದವು. ಇದು ಎಂತಹ ವಿಕೋಪಕ್ಕೆ ಹೋಯಿತೆಂದರೆ ಅಂತಿಮವಾಗಿ ಗ್ರಾಮದೇವರಲ್ಲಿ ಪ್ರಸಾದ ಕೇಳುವುದೆಂದೇ ತೀರ್ಮಾನವಾಯಿತು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ವಿಶ್ವನಾಥ ನಾಯಕ ಬಿ.ಎ. ಮುಗಿಯುತ್ತಿದ್ದಂತೆ ಎಂ.ಎ. ವ್ಯಾಸಂಗ ಮಾಡಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಅವನ ಮೂಲಕವೇ ನನಗೆ ವಿಶ್ವವಿದ್ಯಾಲಯ ಮತ್ತು ಎಂ.ಎ ವ್ಯಾಸಂಗದ ಕುರಿತು ಅಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ದೊರೆಯುವ ಹಾಸ್ಟೆಲ್ ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳ ಕುರಿತು ಮಾಹಿತಿ ದೊರೆಯಿತು. ಮತ್ತು ನನ್ನ ಎಂ.ಎ ಓದಿನ ಆಸೆಯೂ ಜಾಗೃತವಾಯಿತು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಊಟ ಮುಗಿಸಿದ ನಮ್ಮಿಬ್ಬರ ಕೈಯಲ್ಲಿಯೂ ಮನೆಗೆ ಮುಟ್ಟಿಸುವಂತೆ ನೀಡಿದ ಕೋಳಿ ಮಸಾಲೆ ಡಬ್ಬಗಳ ಚೀಲ ಹಿಡಿದು ಮತ್ತೆ ಮಂಜಗುಣಿ ತಾರಿಯತ್ತ ಸಂತೃಪ್ತಿಯ ಹೆಜ್ಜೆ ಹಾಕಿದೆವು. ದಾರಿಯುದ್ಧದ ನಮ್ಮ ಚರ್ಚೆಯಲ್ಲಿ ಬಿ.ಎ. ಓದು ಮುಗಿಸಿದ ಬಳಿಕ ನಾವು ನೌಕರಿ ಸೇರುವುದಿದ್ದರೆ ಅದು ಸಾಲೆಯ ತಪಾಸಣಾಧಿಕಾರಿಯಾಗಿಯೇ ತೀರಬೇಕು ಎಂದು ಮನದಲ್ಲಿಯೇ ಸಂಕಲ್ಪ ಮಾಡಿಕೊಂಡಿದ್ದೆವು!

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—29 ಆತ್ಮಾನುಸಂಧಾನ ಯಕ್ಷಗಾನದ ಹುಚ್ಚು ಹಿಡಿಸಿದ ದಿನಗಳು ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಆಯ್ದುಕೊಂಡ ಮುಖ್ಯ ಐಚ್ಛಿಕ ವಿಷಯ ಕನ್ನಡ, ಆಗ ನಮಗೆ ಕನ್ನಡ ಕಲಿಸಲು ಕಾಲೇಜಿನಲ್ಲಿ ಪ್ರೊ. ವಿ.ಏ, ಜೋಶಿ ಮತ್ತು ಪ್ರೊ. ಕೇ.ವಿ. ನಾಯಕ ಎಂಬ ಇಬ್ಬರು ಉಪನ್ಯಾಸಕರಿದ್ದರು. ಇಬ್ಬರೂ ಕನ್ನಡ ವಿಷಯ ಬೋಧನೆಯಲ್ಲಿ ಪರಿಣಿತರಾಗಿದ್ದರು. ಹಳಗನ್ನಡ – ಹೊಸಗನ್ನಡ ಕಾವ್ಯಗಳನ್ನು ಜೋಶಿಯವರು ಲೀಲಾಜಾಲವಾಗಿ ಪಾಠ ಮಾಡುತ್ತಿದ್ದರೆ, ನಡುಗನ್ನಡ ಕಾವ್ಯಗಳನ್ನು, ಗದ್ಯ ಮತ್ತು ವ್ಯಾಕರಣಗಳನ್ನು ಅತ್ಯಂತ ಸುಲಲಿತವಾಗಿ ಪ್ರೊ. ಕೇ.ವಿ. ನಾಯಕ ಕಲಿಸುತ್ತಿದ್ದರು. ನಿಜವಾಗಿ ನನಗೂ, ನನ್ನಂಥ ಅನೇಕ ಗೆಳೆಯರಿಗೂ ಕನ್ನಡ ಕಲಿಕೆಯ ಸಾಕ್ಷಾತ್ಕಾರವಾದದ್ದೇ ಇಲ್ಲಿಂದ ಎಂದು ಹೇಳಬಹುದು. ಹಳೆಗನ್ನಡ ಕಾವ್ಯವನ್ನು ಓದುವ ಕ್ರಮ ಮತ್ತು ಗ್ರಹಿಕೆಯ ರೀತಿಯನ್ನು ಮೊದಲ ಬಾರಿಗೆ ಜೋಶಿಯವರಿಂದ ಕಲಿತೆವು. ಕನ್ನಡ ಛಂದಸ್ಸು ಮತ್ತು ಕೇಶಿರಾಜನ ಶಬ್ದಮಣಿದರ್ಪಣ ಎಂಬ ಶುಷ್ಕ ವ್ಯಾಕರಣ ಶಾಸ್ತ್ರ ಗ್ರಂಥವನ್ನು ನಾವೆಲ್ಲ ತಲೆ ತಿನ್ನುವ ವಿಷಯಗಳೆಂದೇ ಭಾವಿಸಿ ಅವುಗಳಿಂದ ಸಾಧ್ಯವಾದಷ್ಟು ದೂರವೇ ಇರುತಿದ್ದೆವು. ಆದರೆ ವ್ಯಾಕರಣದ ಈ ಶುಷ್ಕ ವಿಷಯಗಳನ್ನೂ ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ನಾಯಕರು ನಮ್ಮ ಅಭಿರುಚಿ, ಆಸಕ್ತಿಗಳು ವೃದ್ಧಿಸುವ ರೀತಿಯಲ್ಲಿ ನಮಗೆ ಪಾಠ ಮಾಡಿದರು. ಈ ಉಭಯ ವಿಭಾಗಗಳ ಕಲಿಕೆ ನನ್ನಲ್ಲಿ ಯಕ್ಷಗಾನ ಪ್ರಸಂಗ ರಚನೆಗೆ ಪ್ರೇರಣೆಯಾಯಿತು. ಬಿ.ಏ. ಅಂತಿಮ ವರ್ಷದ ಓದಿನವರೆಗೂ ನಾನು ಯಕ್ಷಗಾನ ಬಯಲಾಟಗಳನ್ನು ನೋಡುತ್ತಿದ್ದೆನಾದರೂ ಅಲ್ಲಿ ಅಭಿನಯಿಸುವ ಆಸೆ ಎಂದೋ ಕಮರಿ ಹೋಗಿತ್ತು. ಕಾಲೇಜಿನಲ್ಲಿ ಕನ್ನಡ ಓದಿನ ಪ್ರಭಾವದಿಂದ ಛಂದಸ್ಸಿಗೆ ಅನುಗುಣವಾಗಿ ಪ್ರಸಂಗ ಪದ್ಯವನ್ನು ಬರೆಯುವ ಗೀಳು ಹುಟ್ಟಿಕೊಂಡಿತು. ಭಾಮಿನಿ, ವಾರ್ಧಕ, ಷಟ್ಪದಿಗಳನ್ನು ಮಾತ್ರೆಗಳೂ, ಗಣಗಳ ಆಧಾರದಿಂದ ಬರೆಯುವುದು, ಪ್ರಾಸಕ್ಕೆ ತಕ್ಕ ಪದಗಳನ್ನು ಹುಡುಕಿ ಹೊಂದಿಸಿ ಬರೆಯುವುದು ಒಂದು ಆಟದಂತೆ ನನ್ನ ಮನಸ್ಸನ್ನು ಆವರಿಸಿತು. ಜೊತೆಯಲ್ಲಿ ನಮ್ಮ ಊರಿನ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುವ ಧರ್ಮಸ್ಥಳ, ಮಂಗಳೂರು, ಕೊಲ್ಲೂರು, ಕೊಳಗಿಬೀಸ್ ಮುಂತಾದ ಯಕ್ಷಗಾನ ಮೇಳದ ಆಟಗಳು ನನಗೆ ಪರೋಕ್ಷವಾಗಿ ರಂಗ ಪ್ರಯೋಗದ ತಂತ್ರಗಳನ್ನು ಕಲಿಸಿದವು.. ಶ್ರೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ, ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಕೊಳ್ಳೂರು ರಾಮಚಂದ್ರ ಮೊದಲಾದ ತೆಂಕು ತಿಟ್ಟಿನ ಕಲಾವಿದರ ವಾಗ್ವಿಲಾಸ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಜಲವಳ್ಳಿ, ಎಕ್ಟರ್ ಜೋಷಿ, ಗಜಾನನ ಭಂಡಾರಿ, ಆರಾಟೆ ಮಂಜುನಾಥ, ಎಂ.ಏ. ನಾಯ್ಕ, ಮುರೂರು ದೇವರು ಹೆಗಡೆ, ಈಶ್ವರ ಹೆಗಡೆ ಮುಂತಾದ ಬಡಕು ತಿಟ್ಟಿನ ಕಲಾವಿದರ ನೃತ್ಯಾಭಿನಯದ ಚೆಲುವು ನನಗೆ ಯಕ್ಷಗಾನದ ಹುಚ್ಚು ಹಿಡಿಸಿದಂತೆ ಪ್ರಭಾವಿಸಿದವು. ನಮ್ಮ ಊರಿನಲ್ಲಿ ಎಲ್ಲಾ ಜಾತಿಯ ಜನರೂ ತಮ್ಮದೇ ಆದ ಬಯಲಾಟ ಮೇಳ ಕಟ್ಟಿಕೊಂಡು ವರ್ಷಕ್ಕೊಮ್ಮೆಯಾದರೂ ಬಯಲಾಟ ಪ್ರದರ್ಶನ ಏರ್ಪಡಿಸುವ ಕಾಲ ಅದು. ನಮ್ಮ ಕೇರಿಯಲ್ಲೂ ನಮ್ಮ ತಂದೆ ಗಣಪು ಮಾಸ್ತರರಿಂದ ತರಬೇತಿ ಪಡೆದು ವಾರ್ಷಿಕ ಹರಕೆ ಬಯಲಾಟ ನಡೆಯುತ್ತಿತ್ತು. ನಾನು ಬಿ.ಏ. ಅಂತಿಮ ವರ್ಷದಲ್ಲಿ ಓದುವ ಸಂದರ್ಭ ಡಾ. ರಾಜಕುಮಾರ – ಕಲ್ಪನಾ ಅಭಿನಯಿಸಿದ ‘ಮಹಾಸತಿ ಅರುಂಧತಿ’ ಎಂಬ ಚಲನ ಚಿತ್ರವೊಂದು ತುಂಬ ಜನಪ್ರಿಯವಾಗಿತ್ತು. ಅದರ ಸೊಗಸಾದ ಕಥಾವಸ್ತು ಯಕ್ಷಗಾನಕ್ಕೆ ತುಂಬ ಹೊಂದಿಕೆಯಾಗುವಂತೆ ಕಂಡು ಅದೇ ಕಥೆಯನ್ನು ಆಯ್ದುಕೊಂಡು ನಾನು ‘ಗೌತಮಿ ಮಹಾತ್ಮೆ’ ಎಂಬ ಹೆಸರಿನಲ್ಲಿ ಪ್ರಸಂಗ ರಚನೆ ಮಾಡಿದೆ. ನಮ್ಮ ತಂದೆಯವರು ಅದನ್ನು ತಿದ್ದಿ ಪರಿಷ್ಕರಿಸಿ ನಮ್ಮ ಊರಿನ ಹುಡುಗರು-ಹಿರಿಯರಿಗೆ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದರು. ನನ್ನ ಗೆಳೆಯರೊಂದಿಗೆ ನಾನೇ ಇಲ್ಲಿಯ ಮುಖ್ಯ ಪಾತ್ರ ನಿರ್ವಹಿಸಿ ಪ್ರದರ್ಶನ ನೀಡಿದೆವು. ತುಂಬ ಯಶಸ್ವಿಯಾಗುವುದರೊಂದಿಗೆ ನೆರೆ ಹೊರೆಯ ಕೆಲವು ಊರುಗಳಿಂದಲೂ ಪ್ರದರ್ಶನದ ಬೇಡಿಕೆಗಳು ಬಂದವು. ನಾನು ಪ್ರಸಂಗ ಕರ್ತನಾಗಿ ಸಣ್ಣದೊಂದು ಹೆಸರು ಸಂಪಾದಿಸುವ ಅವಕಾಶ ಪಡೆದೆ, ಮಾತ್ರವಲ್ಲ ಯಕ್ಷಗಾನ ನಟನಾಗಿ ಯಶಸ್ಸು ಪಡೆದ ಮೊದಲ ಹೆಜ್ಜೆಯಾಯಿತು. ಅದೇ ವರ್ಷ ಅಂಕೋಲೆಯ ‘ನೀಲಂಪುರ’ ಎಂಬ ಗ್ರಾಮದ ವಾರ್ಷಿಕ ಹರಕೆ ಆಟದಲ್ಲಿ ಒಂದು ಪಾತ್ರ ನಿರ್ವಹಿಸುವಂತೆ ಅಲ್ಲಿಯ ಸಂಘಟಕ ರಿಂದ ಆಹ್ವಾನ ಬಂದಿತು. ಧೈರ್ಯ ಮಾಡಿ ಈ ಆಹ್ವಾನವನ್ನು ಒಪ್ಪಿಕೊಂಡು ಅಲ್ಲಿ ‘ಚಂದ್ರಹಾಸ ಚರಿತ್ರೆ ಆಖ್ಯಾನದಲ್ಲಿ ಚಂದ್ರಹಾಸ ಪಾತ್ರ ಮಾಡಿದೆ. ನನ್ನ ಕಲ್ಪನೆಗೂ ಮೀರಿ ನಾನು ಪಾತ್ರ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೆ. ಇದರ ಪರಿಣಾಮದಿಂದ ಮರು ವರ್ಷದಿಂದಲೇ ಅಂಕೋಲಾ ತಾಲೂಕಿನ ಹಳ್ಳಿ ಹಳ್ಳಿಗಳಿಂದ ನನಗೆ ಆಹ್ವಾನಗಳು. ಬರಲಾರಂಭಿಸಿದವು. ಬಂದ ಆಹ್ವಾನಗಳನ್ನು ಒಪ್ಪಿಕೊಳ್ಳುತ್ತ, ವಿವಿಧ ಪಾತ್ರಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತ ತನ್ಮಯತೆಯಿಂದ ಎಲ್ಲ ಪಾತ್ರಗಳನ್ನು ನಿರ್ವಹಿಸತೊಡಗಿದೆ. ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳು, ಸಂಘಟಕರ ಪ್ರೀತಿ-ಆದರಗಳು, ಕೈಗೆ ಸಿಗುವ ಸಂಭಾವನೆಗಳಿಂದ ನನಗೆ ಯಕ್ಷಗಾನದ ಹುಚ್ಚು ಹೆಚ್ಚತೊಡಗಿತು. ನಂತರ ಎಂ.ಏ. ಓದಲು ನಿರ್ಧರಿಸಿ ಎರಡು ವರ್ಷ ಧಾರವಾಡದಲ್ಲಿ ಕಳೆಯಬೇಕಾದ್ದರಿಂದ ನನ್ನ ವೇಷಗಾರಿಕೆಗೆ ಕಡಿವಾಣ ಹಾಕಲೇ ಬೇಕಾಯಿತು. ಆದರೂ ಆ ಎರಡು ವರ್ಷಗಳ ಅವಧಿಯಲ್ಲಿ ರಾಮಾಯಣದ ವಾಲಿಯ ಸಮಗ್ರ ಬದುಕಿನ ಕತೆಯನ್ನು ಆಯ್ದುಕೊಂಡು ‘ವೀರ ವಾಲಿ’ ಎಂಬ ಪ್ರಸಂಗವನ್ನು, ಒಂದು ಜನಪದ ಕತೆಯನ್ನು ಆಧರಿಸಿ ‘ನಾಗ ಲೋಕ ವಿಜಯ’ ಎಂಬ ಪ್ರಸಂಗವನ್ನು ಬರೆದು ಸಿದ್ಧಪಡಿಸಿದೆ. ಎರಡೂ ಪ್ರಸಂಗಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದೆ. ಎರಡೂ ಪ್ರಸಂಗಗಳ ಯಶಸ್ಸಿನಲ್ಲಿ ನಮ್ಮ ತಂದೆಯವರು, ಚಿಕ್ಕಪ್ಪಂದಿರು, ಭಾವ ಹೊನ್ನಪ್ಪ ಮಾಸ್ತರ, ಸಹೋದರ ನಾಗೇಶ ಗುಂದಿ ಮುಂತಾದವರ ಪಾತ್ರ ನಿರ್ವಹಣೆ, ಕೃಷ್ಣ ಮಾಸ್ಕೇರಿ, ಸಿದ್ದಾಪುರದ ಹೆಮ್ಮನಬೈಲು ಮತ್ತು ಸತೀಶ ಹೆಗಡೆ ದಂಟಕಲ್, ನನ್ನ ಸೋದರ ಮಾವ ಹಿಲ್ಲೂರಿನ ಗೋಯ್ದು ಆಗೇರ ಮುಂತಾದವರ ಭಾಗವತಿಕೆಯೂ ಪೂರಕವಾಯಿತು ಎಂಬುದು ನಿಸ್ಸಂದೇಹ. ನನ್ನ ಯಕ್ಷರಂಗದ ಯಾತ್ರೆ ಆರಂಭವಾದದ್ದು ಹೀಗೆ. ರಂಗದ ಬದುಕಿನ ಏಳುಬೀಳುಗಳನ್ನು ಮುಂದೆ ಪ್ರಸ್ತಾಪಿಸುವೆ. *************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—28 ಆತ್ಮಾನುಸಂಧಾನ ಬಹುಮುಖೀ ವ್ಯಕ್ತಿತ್ವದ ರಾಕಜ್ಜ ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ. ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ ಮುದ್ದು ಮಾಡಿ ಬೆಳೆಸಿದವನು. ನಾನು ಬೆಳೆದಂತೆ ಕಾರಣಾಂತರಗಳಿಂದ ದೂರವಿರಬೇಕಾದಾಗಲೆಲ್ಲ ಹೆಂಗಸರಂತೆ ಬಿಕ್ಕಿ ಬಿಕ್ಕಿ ಅಳುತ್ತಲೇ ಬೀಳ್ಕೊಡುವ ಅಜ್ಜನ ಅಪಾರವಾದ ಅಕ್ಕರೆಯ ನಡುವೆಯೇ ನನಗೆ ಬುದ್ಧಿ ಬೆಳೆದಂತೆ ಅವನ ವ್ಯಕ್ತಿತ್ವದ ವಿವಿಧ ಮುಖಗಳು ಬಿಚ್ಚಿಕೊಳ್ಳುತ್ತ ವಿಸ್ಮಯವುಂಟುಮಾಡಿದವು. ಅಜ್ಜನ ಕೈ ಹಿಡಿದವಳು ನಾನು ಹುಟ್ಟುವ ಮೊದಲೇ  ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ್ದಳು. ಅಜ್ಜ ಇನ್ನೊಂದು ಮದುವೆ ಮಾಡಿಕೊಂಡಿದ್ದ ನಂತೆ. ಆದರೆ ಅವಳು ಅಜ್ಜನೊಟ್ಟಿಗೆ ಬಹುಕಾಲದ ನಿಲ್ಲದೆ ಅಂಕೋಲೆ ಕಡೆಯ ತೌರುಮನೆಗೆ ಹೊರಟು ಹೋದವಳು ಮತ್ತೆ ತಿರುಗಿ ಬರಲಿಲ್ಲ. ಹಾಗಾಗಿ ನನಗೆ ಬುದ್ಧಿ ಬಲಿತ ಕಾಲದಿಂದಲೂ ಅಜ್ಜ ಒಂಟಿಯಾಗಿರುವುದನ್ನು ಮಾತ್ರ ನಾನು ಕಂಡಿದ್ದೇನೆ. ಮೊದಲ ಹೆಂಡತಿ ಯಿಂದ ಪಡೆದ ಮಗಳನ್ನು ಪ್ರೀತಿಯಿಂದಲೇ ಬೆಳೆಸಿದ ಅಜ್ಜ, ಅವಳು ಹರೆಯಕ್ಕೆ ಬಂದಾಗ ಗುಂಡಬಾಳೆಯ ಕಡೆಯ ಹುಡುಗನೊಬ್ಬನಿಗೆ ಮದುವೆ ಮಾಡಿ ಕೊಟ್ಟವನು ಮಗಳು ಅಳಿಯನೆಂದು ವರ್ಷಕ್ಕೆ ಒಮ್ಮೆ ಅಥವಾ ಅನಿವಾರ್ಯವಾದ ಸಂದರ್ಭದ ಭೇಟಿಯಲ್ಲದೆ ಹೆಚ್ಚಿನ ಒಡನಾಟದ ಸಂಬಂಧ ಉಳಿಸಿಕೊಂಡಿರಲಿಲ್ಲ. ತಂದೆ-ತಾಯಿ ಇಬ್ಬರೂ ಇಲ್ಲದ ತಬ್ಬಲಿ ಎಂಬ ಕಾರಣದಿಂದಲೋ ಅವ್ವನನ್ನೇ ಪ್ರೀತಿಯ ಮಗಳು ಎಂದು ಮಮಕಾರ ತೋರುತ್ತಿದ್ದ. ನಮ್ಮ ಮನೆಯ ಸನಿಹದಲ್ಲಿಯೇ ಅಜ್ಜನಿಗೆ ಸರಕಾರ ನೀಡಿದ ಐದು ಗುಂಟೆ ಭೂಮಿ, ಒಂದು ಜನತಾ ಮನೆಯಿತ್ತು. ಕೃಷಿ ಕೂಲಿ, ತೆಂಗು ಅಡಿಕೆ ಮರ ಹತ್ತಿ ಕೊಯ್ಲು ಮಾಡುವ ಕೌಶಲ್ಯ ರಾಕಜ್ಜನಿಗಿತ್ತು. ಕೂಲಿ ಕೆಲಸದ ಆಳುಗಳಿಗೆ ತಾನೇ ಮುಂದಾಳಾಗಿ ನಾಯಕತ್ವ ವಹಿಸುವ ಅವನ ಮಾತಿಗೆ ಸಮಾಜ ಬಾಂಧವರೂ ಮನ್ನಣೆ ನೀಡಿ ಗೌರವಿಸುತ್ತಿದ್ದರು. ಇದಕ್ಕೆ ಅಜ್ಜನ ಬಹುಮುಖೀ ವ್ಯಕ್ತಿತ್ವವೇ ಕಾರಣವಾಗಿದ್ದಿರಬೇಕೆಂದು ಅನ್ನಿಸುತ್ತದೆ. ಅಜ್ಜನ ಮನಯ ಮುಂದೆ ಒಂದು ಬೃಹತ್ತಾದ ತುಳಸಿ ಕಟ್ಟೆಯಿತ್ತು. ತಲೆ ತಲಾತಂತರಗಳಿಂದ ಬಂದ ಈ ತುಳಸಿ ಕಟ್ಟೆಗೆ ಅಜ್ಜನೇ ಪೂಜಾರಿ. ನಮ್ಮ ಕೇರಿಯಲ್ಲಿ ಇರುವುದು ಇದೊಂದೇ ತುಳಸಿ ಕಟ್ಟೆಯಾದ್ದರಿಂದ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಕಾರ್ತಿಕ ಮಾಸದ ತುಳಸಿ ವಿವಾಹ ಸಂಭ್ರಮದ ಪೂಜೆಯಲ್ಲಿ ಕೇರಿಯ ಎಲ್ಲರೂ ಬಂದು ಭಾಗವಹಿಸುತ್ತಿದ್ದರು. ಇಂಥ ಪೂಜಾ ಸಮಯದಲ್ಲಿ ಮಂಗಳಾರತಿ ಮುಗಿಯುತ್ತಿದ್ದಂತೆ ಅಕ್ಷತೆಯನ್ನು ಹಿಡಿದು ಕುಟುಂಬದ ಮತ್ತು ಊರಿನ ಎಲ್ಲರ ಕ್ಷೇಮದ ಕುರಿತು ಅಜ್ಜ ಪ್ರಾರ್ಥಿಸುತ್ತಿದ್ದ. ಇದೇ ಸಂದರ್ಭದಲ್ಲಿ ಅಜ್ಜನಿಗೆ ದೇವರು ಮೈಮೇಲೆ ಬರುವುದೂ, ಭಕ್ತಾದಿಗಳು ಪ್ರಶ್ನಿಸಿ ಪರಿಹಾರ ಕೇಳುವುದೂ ನಡೆಯುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು. ಕೇರಿಯ ಹಲವರು ಬೇರೆಬೇರೆ ಬೇಡಿಕೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಿದ್ದರು. ಬರುವ ವರ್ಷ ಅದೇ ಹಬ್ಬದ ಪೂಜೆಯಲ್ಲಿ ಹರಕೆಯೊಪ್ಪಿಸಿ ಕೃತಾರ್ಥರಾಗುತ್ತಿದ್ದರು. ಇಂಥ ಪೂಜೆಯ ವಿಶೇಷ ದಿನಗಳಲ್ಲಿ ಅಜ್ಜ ಪೂಜೆ ಮುಗಿಯುವವರೆಗೆ ನಿರಾಹಾರಿಯಾಗಿಯೇ ಇರುತ್ತಿದ್ದ. ಪೂಜೆಯ ಬಳಿಕ ಮಾಡಿದ ಅಡುಗೆಯನ್ನು ದೇವರಿಗೆ, ಪಿತೃಗಳಿಗೆ ಮೀಸಲು ಒಪ್ಪಿಸಿದ ಬಳಿಕವೇ ಊಟ ಮಾಡುತ್ತಿದ್ದ. ಬಹುಶಃ ಇದೇ ಕಾರಣದಿಂದ ಕೇರಿಯ ಎಲ್ಲರೂ ಅಜ್ಜನನ್ನು ಗೌರವ ಭಾವದಿಂದ ಕಾಣುತ್ತಿರಬೇಕು. ನಮ್ಮ ಸಮುದಾಯದ ಸಂಪ್ರದಾಯದಂತೆ ಸಮಾಜದ ಮದುವೆ, ನಾಮಕರಣ, ಅಂತ್ಯಸಂಸ್ಕಾರ ಇತ್ಯಾದಿ ಕರ್ಮಗಳಲ್ಲಿ ಬುಧವಂತ ಮತ್ತು ಕೋಲಕಾರರೆಂಬ ಇಬ್ಬರು ಹಿರಿಯರು ಕಾರ್ಯನಿರ್ವಹಣೆಯ ಸೂತ್ರಧಾರರಾಗಿ ಇರುತ್ತಿದ್ದರು. ಅಜ್ಜನಿಗೆ ಇಂಥ ನಿರ್ದಿಷ್ಟ ಸಾಮಾಜಿಕ ಅಧಿಕಾರವೇನೂ ಇರಲಿಲ್ಲ. ಆದರೆ ಜಾತಿಯ ವಿವಾಹ ಸಂಬಂಧ ಕುದುರಿಸುವ ಮತ್ತು ವಿವಾಹ ಮುಂತಾದ ಮಂಗಳ ಕಾರ್ಯಗಳ ನಿರ್ವಹಣೆಯಲ್ಲಿ ಊರಿನ ಬುಧವಂತ ಕೋಲಕಾರರೂ ಅಜ್ಜನನ್ನೆ ಮುಂದಿಟ್ಟುಕೊಂಡು ಅವನ ಸಲಹೆ-ಸಹಕಾರದಿಂದಲೇತಮ್ಮ ಜವಾಬ್ದಾರಿಯನ್ನು ಪೂರೈಸುವುದು ಅಜ್ಜನ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆಯೆಂದೇ ತೋರುತ್ತಿತ್ತು. ರಾಕಜ್ಜನ ವ್ಯಕ್ತಿತ್ವದ ಬಹುಮುಖ್ಯವಾದ ಭಾಗವೆಂದರೆ ಯಕ್ಷಗಾನ. ಮಾಸ್ಕೇರಿಯ ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ತರೂ, ವಿದ್ವಾಂಸರೂ ಆದ ತಿಮ್ಮಣ್ಣ ಗಾಂವಕಾರ ಎಂಬವರು ನಮ್ಮ ಸಮಾಜದ ಯುವಕರನ್ನು ಸಂಘಟಿಸಿ ಯಕ್ಷಗಾನ ತರಬೇತಿ ನೀಡುತ್ತಿದ್ದರೆಂದೂ, ಇದೇ ಕಾರಣದಿಂದ ಅವರು ತಮ್ಮ ಜಾತಿ ಬಾಂಧವರಿಂದ ಬಹಿಷ್ಕಾರದ ಶಿಕ್ಷೆ ಅನುಭವಿಸಿದ್ದರಂದೂ ನಾನು ನನ್ನ ಹಿಂದಿನ ಬರಹಗಳಲ್ಲಿ ಉಲ್ಲೇಖಿಸಿದ್ದೇನೆ. ಇದೇ ತಿಮ್ಮಣ್ಣ ಗಾಂವಕರರ ಶಿಷ್ಯ ಬಳಗದಲ್ಲಿ ತರಬೇತಿ ಪಡೆದ ನಮ್ಮ ರಾಮಕಜ್ಜನು ಉತ್ತಮ ಯಕ್ಷ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿದ್ದ. ವಿಶೇಷವಾಗಿ ಸ್ತ್ರೀ ಪಾತ್ರದಲ್ಲಿ ಪರಿಣಿತಿ ಹೊಂದಿದ್ದ ರಾಕಜ್ಜನು ದಕ್ಷಿಣದ ಕಡೆಯ ಯಕ್ಷಗಾನ ಕಲಾವಿದರಂತೆ (ಸ್ತ್ರೀ ಪಾತ್ರಗಳಿಗೆ ಅನುಕೂಲಕರವಾಗಿ) ಉದ್ದ ತಲೆಗೂದಲು ಬಿಟ್ಟುಕೊಂಡೇ ಇದ್ದ. ಅವನ ಮೂಗಿನಲ್ಲಿ ಮೂಗುತಿಯ ಗುರುತುಗಾಯ, ಕಿವಿಯಲ್ಲಿ ಕಿವಿಯೋಲೆ ಚುಚ್ಚುವ ಗಾಯಗಳನ್ನು ನಾನು ದೊಡ್ಡವನಾದ ಮೇಲೆಯೂ ಗಮನಿಸಿದ್ದೇನೆ. ಆದರೆ ನಾನು ಯಕ್ಷಗಾನ ಪಾತ್ರ ಮಾಡಲಾರಂಭಿಸಿದಾಗ ರಾಕಜ್ಜ ವಯೋ ಸಹಜ ಕಾರಣಗಳಿಂದ ಸ್ತ್ರೀ ಪಾತ್ರ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದ. ತೀರ ಅಪರೂಪವಾಗಿ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಒಂದು ತಾಮ್ರಧ್ವಜ ಕಾಳಗ ಯಕ್ಷಗಾನ ಬಯಲಾಟದಲ್ಲಿ ಅಜ್ಜನೇ ಅರ್ಜುನನಾಗಿ ಪಾತ್ರ ವಹಿಸಿದ್ದರೆ ನಾನು ಕೃಷ್ಣನ ಪಾತ್ರ ಮಾಡಿದ್ದೆ. ಅದೇ ಪ್ರಸಂಗದಲ್ಲಿ ನಾನು ಬಲಗೈಯಲ್ಲಿ ಬಿಲ್ಲು ಹಿಡಿದು ಎಡಗೈಯಲ್ಲಿ ಬಾಣ ಪ್ರಯೋಗಿಸುವಂತೆ ತಪ್ಪಾಗಿ ಅಭಿನಯಿಸಿದೆನೆಂದು ಆಟದ ಮರುದಿನ ಎಲ್ಲರೆದುರು ಅಜ್ಜ ಅಪಹಾಸ್ಯ ಮಾಡಿ ನಕ್ಕಿದ್ದು ಅಜ್ಜನ ರಂಗಪ್ರಜ್ಞೆಯ ವಿವೇಕವೇ ಆಗಿತ್ತು ಎಂಬುದು ನಿಧಾನವಾಗಿ ನನಗೆ ಅರಿವಾಯಿತು. ಅಜ್ಜನಿಗೆ ಅಕ್ಷರಾಭ್ಯಾಸವಿರಲಿಲ್ಲ. ಯಕ್ಷಗಾನ ಕಲೆಯ ಆರಾಧಕನಂತೆ ಅದನ್ನು ಹಚ್ಚಿಕೊಂಡಿದ್ದ ಆತನಿಗೆ ಮಹಾಭಾರತಗಳು ಕಂಠಪಾಠದಂತೆ ಅವನ ಸ್ಮೃತಿಯಲ್ಲಿ ನೆಲೆಸಿದ್ದವು. ಭಾರತದ ಹದಿನೆಂಟು ಪರ್ವಗಳಲ್ಲಿ ಯಾವ  ಏನಿದೆ? ಎಂಬುದನ್ನು ತಪ್ಪಿಲ್ಲದೆ ಹೇಳುತ್ತಿದ್ದ. ಯಾವುದೇ ಹೊಸ ಪ್ರಸಂಗವಿದ್ದರೂ ಅದರ ಪದ್ಯವನ್ನು ಕೇಳುತ್ತಲೇ ಅರ್ಥ ವಿವರಿಸುವ ಪ್ರಾಜ್ಞತೆ ಅವನಿಗೆ ಲೋಕಾನುಭವದಿಂದಲೇ ಸಾಧ್ಯವಾಗಿತ್ತು. ನಾನು ನಮ್ಮೂರಿನ ಬಯಲಾಟ ಪ್ರದರ್ಶನಗಳಿಗಾಗಿ ನನ್ನ ಬಿ.ಎ. ದ್ವಿತೀಯವರ್ಷದ ಕಲಿಕೆಯ ಹಂತದಲ್ಲಿಯೇ ಯಕ್ಷಗಾನ ಪ್ರಸಂಗ ರಚನೆಗೆ ತೊಡಗಿದ್ದೆ. ಆಗ ನಮ್ಮ ತಂದೆಯವರೂ ಸಮರ್ಥ ಕಲಾವಿದರೂ, ಭಾಗವತರೂ ಆಗಿ ಸುತ್ತೆಲ್ಲ ಪ್ರಸಿದ್ಧಿ ಪಡೆದಿದ್ದರು. ನಾನು ರಚಿಸಿದ ಪದ್ಯಗಳನ್ನು ಅವರಿಗೆ ತೋರಿಸಿ ಸರಿಪಡಿಸಿಕೊಳ್ಳಲು ಧೈರ್ಯವಿಲ್ಲದೆ ನಾನು ರಾಕಜ್ಜನನ್ನೇ ಅವಲಂಬಿಸಿದ್ದೆ. ನಾಲ್ಕಾರು ಭಾಮಿನಿ-ವಾರ್ಧಕ ಷಟ್ಪದಿಗಳನ್ನು, ವಿವಿಧ ತಾಳಗಳ ಪದ್ಯಗಳನ್ನು ಬರೆದಾದ ಬಳಿಕ ಅಜ್ಜನ ಮುಂದೆ ಹಾಡಿ ತೋರಿಸುತ್ತಿದ್ದೆ. ಅದರ ಅರ್ಥ ಹೇಳುವುದರೊಂದಿಗೆ ಹಾಡಲು ಸರಿಹೊಂದದಿದ್ದರೆ ಛಂದೋ ದೋಷವಿದೆಯೆಂದೂ ಅಜ್ಜ ಸಲಹೆ ನೀಡುತ್ತಿದ್ದ. ತನಗೆ ಲಭ್ಯವಾದ ಸಂಕುಚಿತ ಪರಿಸರದಲ್ಲಿಯೇ ತನ್ನ ಅದ್ಭುತ ವ್ಯಕ್ತಿತ್ವಕ್ಕೆ ಸಾಣೆ ಹಿಡಿಸಿಕೊಂಡು ಬೆಳೆದು-ಬೆಳಗಿ ಮರೆಯಾದ ರಾಕಜ್ಜ ಇಂದಿನ ಆಧುನಿ ಪ್ರಪಂಚದಲ್ಲಿ ಬದುಕಿ ಇದ್ದಿದ್ದರೆ?…… ಎಂದು ಹಲವು ಬಾರಿ ನನಗನಿಸಿದೆ ******************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ನಮ್ಮ ಪೂರ್ವಜರು ನೆಲೆಸಿದ್ದ ‘ಗುಂದಿ ಹಿತ್ತಲು’ ನಮ್ಮ ಮನೆಯಿಂದ ಕೂಗಳತೆ ದೂರಮದಲ್ಲಿಯೇ ಇತ್ತಾದರೂ ಇತ್ತೀಚೆಗೆ ಅಲ್ಲಿ ನೆಲೆಸಿದ ಕುಟುಂಬಗಳು ಮಾಸ್ಕೇರಿ ಮತ್ತು ಅಗ್ಗರಗೋಣದ ಕಡೆಗೆ ವಲಸೆ ಹೋಗಿ ಸರಕಾರಿ ಭೂಮಿ ಪಡೆದು ನೆಲೆ ಕಂಡುಕೊಂಡಿದ್ದವು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25 ಆತ್ಮಾನುಸಂಧಾನ ತುಂಬ ಪ್ರಭಾವ ಬೀರಿದ ಪ್ರಾಚಾರ್ಯರು ಪ್ರಾಧ್ಯಾಪಕರು ಪದವಿ ಶಿಕ್ಷಣದ ಕಾಲೇಜು ಜೀವನದಲ್ಲಿ ಪ್ರಾಮಾಣಿಕ ನಿಷ್ಠೆ ತೋರಿದ್ದರೆ ಅಪಾರವಾದ ಜ್ಞಾನನಿಧಿ ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆಯ ಕೊರತೆಯಿಂದಾಗಿ ಕೇವಲ ಹರೆಯದ ಹುಡುಗಾಟಿಕೆಯಲ್ಲಿ ಪದವಿ ಶಿಕ್ಷಣದ ಮೂರು ವರ್ಷಗಳು ತೀರ ಹಗುರವಾಗಿ ಕಳೆದು ಹೋದವು. ಆದರೂ ತಮ್ಮ ಪಾಠ ಕ್ರಮದ ವಿಶಿಷ್ಠತೆ, ವೇಷಭೂಷಣ, ನಡೆನುಡಿಗಳಿಂದಲೇ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಅಧ್ಯಾಪಕರು ಮತ್ತಿತರ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲದಂತೆ ನೆನಪಾಗಿ ಉಳಿದಿದ್ದಾರೆ. ಕಾಲೇಜಿಗೆ ತಮ್ಮ ದಕ್ಷತೆ ಮತ್ತು ಶಿಸ್ತಿನಿಂದಲೇ ಘನತೆಯನ್ನು ತಂದುಕೊಟ್ಟವರು ಪ್ರಾಚಾರ್ಯರಾದ ಕೆ.ಜಿ.  ನಾಯ್ಕ  ಅವರು  ನೀಳಕಾಯದ, ಗಂಭೀರ ನಿಲುವಿನ ಪ್ರಾಚಾರ್ಯರನ್ನು ವಿದ್ಯಾರ್ಥಿಗಳು ಭೇಟಿಯಾಗುವ ಅವಕಾಶಗಳು ಅಪರೂಪವಾಗಿರುತ್ತಿದ್ದವು. ಆದರೆ ಒಮ್ಮೆ ವರಾಂಡದಲ್ಲಿ ಕಾಣಿಸಿಕೊಂಡರೂ ಎಲ್ಲವೂ ಸ್ಥಬ್ದವಾಗಿ ಬಿಡುವ ಪ್ರಭಾವಶಾಲಿಯಾದ ವ್ಯಕ್ತಿತ್ವ ಅವರದ್ದಾಗಿತ್ತು. ಕಾಲೇಜು ಹೊಸದಾಗಿ ಆರಂಭಗೊಳ್ಳುವ ಕಾರಣ ಮಾನ್ಯ ದಿನಕರ ದೇಸಾಯಿಯವರು ಹಲವು ದಿಕ್ಕುಗಳಿಂದ ಯೋಚಿಸಿ ಶಿಕ್ಷಣ ತಜ್ಞರೊಡನೆ ಸಮಾಲೋಚಿಸಿ ಕೆ.ಜಿ. ನಾಯ್ಕರಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ಆಯ್ಕೆಯಾಗುವ ಮುನ್ನ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾಗಿದ್ದ ಕೆ.ಜಿ. ನಾಯ್ಕ ಅವರು ಅಂದು ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದು ಅಂದಿನ ಕುಲಪತಿಗಳಾಗಿದ್ದ ‘ಅಡಕೆ’, ರಜಿಸ್ಟ್ರಾರ್ ಆಗಿದ್ದ ‘ಒಡಿಯರ್’ ಅವರ ಅಭಿಮಾನಕ್ಕೆ ಪಾತ್ರರಾಗಿದ್ದವರು. ಕೆ.ಜಿ. ನಾಯ್ಕ ಅವರ ಅಪೂರ್ವ ಕಾಳಜಿಯಲ್ಲಿ ಕಾಲೇಜು ಸ್ಥಾಪನೆಗೊಂಡ ಅಲ್ಪಾವಧಿಯಲ್ಲಿಯೇ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆಯುವುದು ಸಾಧ್ಯವಾಯಿತು. ಮುಂದೆ ಇದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಬಳಿಕ ಕೆ.ಜಿ. ನಾಯ್ಕರ ವ್ಯಕ್ತಿ ವಿಶೇಷದ ಗಾಢ ಅನುಭವಗಳು ಆದವು. ಮತ್ತು ಅವುಗಳಿಂದಲೇ ನನ್ನ ವ್ಯಕ್ತಿತ್ವ ವಿಕಸನಕ್ಕೆ ಹಲವು ಮುಖದ ಪ್ರಯೋಜನಗಳೂ ಆಗಿವೆ. ಅದನ್ನು ಮುಂದೆ ದೀರ್ಘವಾಗಿ ಪ್ರಸ್ತಾಪಿಸುವೆ. ನಾನು ಐಚ್ಛಿಕವಾಗಿ ಕನ್ನಡ, ಪೂರಕ ವಿಷಯಗಳಲ್ಲಿ ಇತಿಹಾಸ ಸಂಸ್ಕೃತಗಳನ್ನು ಆಯ್ದುಕೊಂಡೆ. ಸಹಜವಾಗಿಯೇ ಈ ಮೂರು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಪಕರು ಮಾತ್ರ ಹೆಚ್ಚಿನ ಒಡನಾಟಕ್ಕೆ ದೊರೆಯುತ್ತ ವಿಶೇಷ ಪ್ರಭಾವಕ್ಕೆ ಪಾತ್ರನಾದೆ. ಅಂದು ನನಗೂ, ನನ್ನ ಅನೇಕ ಸಹಪಾಠಿಗಳಿಗೂ ಬಹು ನೆಚ್ಚಿನ ಗುರುಗಳೆಂದರೆ ಪ್ರೊ. ವಿ.ಎ. ಜೋಷಿಯವರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಡೆಯವರಾದ ಜೋಷಿಯವರು ಸೊಗಸಾಗಿ ಬಯಲು ಸೀಮೆಯ ಕನ್ನಡ ಮಾತನಾಡುವ ವ್ಯಕ್ತಿ. ತಮ್ಮ ಉಪನ್ಯಾಸದುದ್ದಕ್ಕೂ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು ಆಗಾಗ ಗುರುತಿಸಿ ಮಾತನಾಡುವ ತಮ್ಮ ಸರಳತೆ ಹಾಸ್ಯಭರಿತವಾದ ಮಾತಿನ ಶೈಲಿಯಿಂದ ಇಡಿಯ ತರಗತಿಯೂ ಚೇತೋಹಾರಿಯಾಗಿ ಇರುವಂತೆ ನೋಡಿಕೊಳ್ಳುವ ಅವರ ಕಲಿಸುವಿಕೆಯೇ ನಮಗೆ ಕನ್ನಡವನ್ನು ಪ್ರೀತಿಸುವಂತೆ ಪ್ರೇರೆಪಿಸಿದ್ದವು. ಪಾಠದ ನಡುವೆ ವಿದ್ಯಾರ್ಥಿ ಸಮುದಾಯದಲ್ಲಿ ಏನಾದರೊಂದು ಬೇಡದ ಸದ್ದು ಕೇಳಿ ಬಂದರೂ ಕೇವಲ ತಮ್ಮ ಬಾಲ್‌ಪೆನ್‌ನಿಂದ ಟಿಕ್… ಟಿಕ್…” ಸದ್ದು ಹೊರಡಿಸಿ ಶಾಂತಗೊಳಿಸುವ ಕಲೆಗಾರಿಕೆ ಅವರಿಗೆ ವಿಶಿಷ್ಟವಾಗಿತ್ತು. ಯಾವುದಾದರೂ ವಿದ್ಯಾರ್ಥಿ ಅಗತ್ಯಕ್ಕಿಂತಲೂ ಅಧಿಕ ಪ್ರತಿಕ್ರಿಯೆ ತೋರಿದರೆ, ಬಾಳ ಶಾಣ್ಯ, ಆಗಾಕ ಹೋಗಬ್ಯಾಡ… ಇದು ನಿನಗೆ ಕೊನೆಯ ವಾರ್ನಿಂಗ್… ಮತ್ತದೇ ಮುಂದುವರಿಸಿದ ಅಂದ್ರ ಒದ್ದು ಹೊರಗ ಕಳಿಸಬೇಕಾಗ್ತದ…” ಎಂದು ಎಚ್ಚರಿಸುತ್ತಿದ್ದರು. ಆದರೆ ತಮ್ಮ ವೃತ್ತಿಯುದ್ದಕ್ಕೂ ಯಾರೊಬ್ಬರನ್ನೂ ತರಗತಿಯಿಂದ ಹೊರಗೆ ಹಾಕದ ಗುರುಶ್ರೇಷ್ಠರಾಗಿಯೇ ಉಳಿದರು. ಅವರ ಸೌಜನ್ಯಶೀಲತೆ, ಪಾಠ ಹೇಳುವ ವಿಶಿಷ್ಟ ಶೈಲಿಯಿಂದಲೇ ನಮ್ಮೆಲ್ಲರನ್ನು ಪ್ರಭಾವಿಸಿದವರು ಪ್ರೊ. ವಿ.ಎ. ಜೋಷಿ. ನಮಗೆ ಕನ್ನಡ ಪಾಠ ಹೇಳಿದ ಇನ್ನೋರ್ವ ಗುರುಗಳು ಪ್ರೊ. ಕೆ.ವಿ. ನಾಯಕ. ಶ್ವೇತ ವರ್ಣದ ಎತ್ತರದ ನಿಲುವಿನ ಸ್ಪುರದ್ರೂಪಿ ತರುಣ ಉಪನ್ಯಾಸಕರಾದ ಕೆ.ವಿ. ನಾಯಕ ನಡುಗನ್ನಡ ಕಾವ್ಯಗಳನ್ನು ಕನ್ನಡ ವ್ಯಾಕರಣ ಛಂದಸ್ಸುಗಳನ್ನು ಪಾಠ ಮಾಡುತ್ತಿದ್ದರು. ಅವರ ಚಂದದ ವ್ಯಕ್ತಿತ್ವ ಮತ್ತು ನಿತ್ಯನೂತನವಾದ ವೇಷಭೂಷಣಗಳು ತುಂಬಾ ಆಕರ್ಷಕವಾಗಿ ಇರುತ್ತಿದ್ದವು. ಜೋಷಿಯವರ ಹಳೆಗನ್ನಡ ಕಾವ್ಯಾಬೋಧನೆ ಕೆ.ವಿ.ನಾಯಕರ ವ್ಯಾಕರಣ ಪಾಠಗಳು ಕನ್ನಡ ವಿಭಾಗದ ವಿದ್ಯಾರ್ಥಿ ಪ್ರೀತಿಗೆ ತುಂಬ ಪ್ರೇರಕವಾಗಿರುತ್ತಿದ್ದವು. ಅಂದು ನಮಗೆ ಸಂಸ್ಕೃತ ಕಲಿಸುತ್ತಿದ್ದವರು. ಪ್ರೊ. ಎಂ.ಪಿ. ಭಟ್ ಎಂಬ ವಿದ್ವಾಂಸರು ಇಂಗ್ಲಿಷ್ ಕನ್ನಡ ಸಂಸ್ಕೃತ ಇತ್ಯಾದಿ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿದ್ದ ಎಂ.ಪಿ. ಭಟ್ ಅವರು ರಾಮಾಯಣ ಭಾರತಾದಿ ಕಾವ್ಯಗಳಲ್ಲದೆ ಸಂಸ್ಕೃತದ ‘ಮೇಘದೂತ’ ‘ಪ್ರತಿಜ್ಞಾ ಯೌಗಂಧರಾಯಣ’ ‘ಮೃಚ್ಛಕಟಿಕ’ ಮೊದಲಾದ ಪಠ್ಯಗಳನ್ನು ತುಂಬ ಪ್ರಭಾವಶಾಲಿಯಾಗಿ ಪಾಠ ಮಾಡುತ್ತಿದ್ದರು. ಅವರು ತಮ್ಮ ಉಪನ್ಯಾಸ ನೀಡಿದ ಬಳಿಕ ಮತ್ತೆ ನಾವು ಸಂಸ್ಕೃತ ಪಠ್ಯಗಳನ್ನು ಬಿಡಿಸಿ ಓದುವ ಕಷ್ಟವನ್ನೆ ತೆಗೆದುಕೊಳ್ಳುತ್ತಿರಲಿಲ್ಲ ಆದರೂ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯ ಅಂಕಕಗಳು ಸುಲಭವಾಗಿ ದಕ್ಕುತ್ತಿದ್ದವು ಅಂದರೆ ಪ್ರೊ. ಎಂ.ಪಿ. ಭಟ್ ಅಂತವರಿಂದ ಸಂಸ್ಕೃತ ಕಲಿಯುವುದೇ ಒಂದು ಸೌಭಾಗ್ಯವೆಂದು ನಾವು ಬಹುತೇಕರು ಭಾವಿಸಿದ್ದೆವು. ನಮಗೆ ಇತಿಹಾಸ ಪಾಠ ಹೇಳಿದವರು ಪ್ರೊ.ಎ.ಎಚ್.ನಾಯಕ ಮತ್ತು ಟಿ.ಟಿ. ತಾಂಡೇಲ್ ಅವರು. ಪ್ರೊ. ಎ.ಎಚ್. ನಾಯ್ಕ ಅವರು ಪದವಿ ಶಿಕ್ಷಣದ ಮೊದಲ ವರ್ಷದಲ್ಲಿ ನಮಗೆ ಕೆಲವು ಕಾಲ ಇಂಗ್ಲಿಷ್ ವಿಷಯದ ಪಾಠ ಹೇಳಿದಂತೆ ನೆನಪು. ತುಂಬ ಕರ್ತವ್ಯ ದಕ್ಷ ಅಧ್ಯಾಪಕರೆಂದೇ ಗುರುತಿಸಿಕೊಂಡ ಎ.ಎಚ್. ನಾಯ್ಕ ಅವರು ತಮ್ಮ ಪಾಠದೊಂದಿಗೆ ವಿದ್ಯಾರ್ಥಿ ಕ್ಷೇಮ ಚಿಂತನೆಯನ್ನು ನಿರ್ವಹಿಸುತ್ತಿದ್ದರು. ತರಗತಿಗಳನ್ನು ತಪ್ಪಿಸುವ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಕರೆದು ಬುದ್ಧಿ ಹೇಳುವ ಎಚ್ಚರಿಕೆ ನೀಡುವ ಹೆಚ್ಚಿನ ಕೆಲಸವನ್ನು ಎ.ಎಚ್. ನಾಯ್ಕ ಅವರಂತೆ ನಿರ್ವಹಿಸಿದ ಅಧ್ಯಾಪಕರು ಕಡಿಮೆ.ಅವರ ವ್ಯಕ್ತಿತ್ವದ ಇನ್ನೊಂದು ವಿಶೇಷತೆ ಅಂದರೆ ದೈವ ಭಕ್ತಿ! ಅಧ್ಯಾತ್ಮಿಕ ಒಲವು!ಕಾಲೇಜು ಪಕ್ಕದಲ್ಲೇ ಇರುವ ಹೊನ್ನಾರಾಕಾ ನಾಗದೇವತಾ ಮಂದಿರವನ್ನು ಪ್ರವೇಶಿಸಿ ಅಲ್ಲಿರುವ ಎಲ್ಲ ಗಂಟೆಗಳನ್ನು ಬಾರಿಸಿ ದೇವರಿಗೆ ಕೈಮುಗಿದು ಗಂಧ ಪ್ರಸಾದ ಪಡೆಯದೆ ಅವರು ಎಂದೂ ಕಾಲೇಜು ಆವರಣಕ್ಕೆ ಬರುತ್ತಿರಲಿಲ್ಲ. ಅವರ ಈ ನಡೆಯನ್ನು ವಿದ್ಯಾರ್ಥಿಗಳು ಮೋಜಿನಿಂದ ಗಮನಿಸುತ್ತಾರೆ ಎಂಬುದು ಅವರಿಗೆ ಅರಿವಾದರೂ ತಮ್ಮ ನಿಷ್ಠೆಯನ್ನು ಎಂದು ತಪ್ಪಿ ನಡೆಯುತ್ತಿರಲಿಲ್ಲ. ಅವರ ಈ ಭಗವದ್ಭಕ್ತಿಯನ್ನೇ ವಿದ್ಯಾರ್ಥಿಗಳು ಹಲವು ಬಾರಿ ಗೇಲಿ ಮಾಡುತ್ತಿದ್ದರು. ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳನ್ನು ಮುಂದಿನ ತರಗತಿಯಲ್ಲಿ ವಿಚಾರಿಸಿಕೊಳ್ಳುವುದು ಅವರ ಕ್ರಮವೇ ಆಗಿತ್ತು. ಹನೇಹಳ್ಳಿಯ ಕಡೆಯಿಂದ ಬರುವ ಪ್ರಸನ್ನ ಎಂಬ ನಮ್ಮ ಸಹಪಾಠಿಯೊಬ್ಬ ಗುರುಗಳ ದೈವ ಭಕ್ತಿಯ ನಿಷ್ಠೆಯನ್ನು ಅರಿತವನಾಗಿ ಗುರುಗಳು “ನಿನ್ನೆ ಏಕೆ ನೀನು ತರಗತಿಗೆ ಬರಲಿಲ್ಲ?” ಎಂದು ಕೇಳಿದಾಗಲೆಲ್ಲ “ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು ಸರ್” ಎಂದೇ ಕಥೆ ಹೇಳುತ್ತಿದ್ದ. ಅಷ್ಟಕ್ಕೆ ಅವನನ್ನು ಕ್ಷಮಿಸಿಯೇ ಬಿಡುವ ಪ್ರೊ.ನಾಯ್ಕರ ರೀತಿಯು, ನಮಗೆಲ್ಲ ಮೋಜಿನ ಸಂಗತಿಯಾಗಿ ಮನರಂಜನೆ ನೀಡುತ್ತಿತ್ತು.ದೈವ ನಿಂದನೆ, ಆತ್ಮವಂಚನೆ, ಸುಳ್ಳು ಇತ್ಯಾದಿ ಸನಿಹವೂ ಬರದಂತೆ ಬಾಳಬೇಕೆಂದು ತಮ್ಮ ಉಪನ್ಯಾಸದ ನಡುವೆ ಮತ್ತೆ ಮತ್ತೆ ಉಪದೇಶಿಸುವ ಪ್ರೊ. ಎ.ಎಚ್. ನಾಯ್ಕ ಅದಕ್ಕೆ ವಿರುದ್ಧವಾಗಿ ವರ್ತಿಸುವರನ್ನು ಕಂಡರೆ ಕೆಂಡಾಮಂಡಲರಾಗಿ ಬೈಯುವ ಅಂಥ ವ್ಯಕ್ತಿಗಳಿಂದ ದೂರವೇ ಇರುತ್ತಿದ್ದರು. ಅವರಿಂದ ಇತಿಹಾಸ ಪಾಠಕೇಳಿದಕ್ಕಿಂತಲೂ ನೈತಿಕ ಶಿಕ್ಷಣದ ಪಾಠ ಕೇಳಿದುದೇ ಅಧಿಕವೆಂಬಂತೆ ಎ.ಎಚ್. ನಾಯ್ಕ ಅವರು ವಿದ್ಯಾರ್ಥಿಗಳ ಚಿತ್ತ ಬಿತ್ತಿಯಲ್ಲಿ ನೈತಿಕ ಮೌಲ್ಯ ಪ್ರತಿಪಾದಕ ಪೂಜನೀಯರಾಗಿಯೇ ನೆಲೆ ನಿಂತಿದ್ದಾರೆ.ಇತಿಹಾಸ ಪಾಠ ಹೇಳಿದ ಇನ್ನೊಬ್ಬ ಗುರು ಪ್ರೊ. ಟಿ.ಟಿ. ತಾಂಡೇಲ್ ಅವರು. ಯುವ ಅಧ್ಯಾಪಕರಾಗಿದ್ದ ತಾಂಡೇಲ್ ಸೂಟು ಬೂಟುಗಳಲ್ಲಿ ಆಕರ್ಷಣೀಯವಾಗಿ ತರಗತಿಯನ್ನು ಪ್ರವೇಶಿಸುತ್ತಿದ್ದರು. ಅಷ್ಟೇ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ತಮ್ಮ ಪಾಠ ಆರಂಭಿಸುತ್ತಿದ್ದುದ್ದು ಅವರ ನಡೆ-ನುಡಿಯ ಶೈಲಿ ಯುವ ಮನಸ್ಸುಗಳನ್ನು ಗಾಢವಾಗಿಯೇ ತಟ್ಟುತ್ತಿತ್ತು. ತಾಂಡೇಲ್ ಸರ್ ಅವರ ವೇಷಭೂಷಣಗಳ ಕಾಳಜಿ, ಉಪನ್ಯಾಸದ ವಿಶಿಷ್ಟ ಸ್ಟೈಲ್ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿತ್ತು.ಬಹುಶಃ ಮೀನುಗಾರರಂಥ ಹಿಂದುಳಿದ ಸಮಾಜದಿಂದ ಬಂದು ಇಂಥದೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗುವುದು ವಿದ್ಯಾರ್ಥಿಗಳ ಮನಸ್ಸು ಗೆಲ್ಲುವುದೆಂದರೆ ಸುಲಭದ ಸಂಗತಿಯೇನೂ ಆಗಿರಲಿಲ್ಲ. ನನ್ನಂತ ದಲಿತ ವಿದ್ಯಾರ್ಥಿಯೊಬ್ಬನ ಮನಸ್ಸಿನಲ್ಲಿ ಇಂಥದೊಂದು ಸಾಧ್ಯ…” ಎಂಬ ಆಸೆಯ ಹೊಳಪೊಂದು ಮಿಂಚುವಂತೆ ಮಾಡಿದ ನನ್ನ ಆದರ್ಶ ಗುರು ಟಿ.ಟಿ. ತಾಂಡೇಲ್ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಬಸ್ಸು ಅಂಕೋಲೆಯ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಸುತ್ತಲಿನ ಬೇಲೇಕೇರಿ, ಭಾವಿಕೇರಿ, ಕಣಗಿಲ ಮುಂತಾದ ಊರುಗಳಿಂದಲೂ ಬಸ್ಸುಗಳು ಬಂದು ನಿಲ್ಲುತ್ತಿದ್ದವು. ಎಲ್ಲ ಬಸ್ಸುಗಳಲ್ಲಿಯೂ ಅಷ್ಟಿಷ್ಟು ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು. ಎಲ್ಲರೂ ಕೂಡಿಯೇ ಕಾಲೇಜಿನವರೆಗೆ ಕಾಲ್ನಡಿಗೆಯಲ್ಲಿ ನಡೆಯುವಾಗ ಇಂದಿನ ‘ದಿನಕರ ದೇಸಾಯಿ ರಸ್ತೆ’ ಅಕ್ಷರಶಃ ಜಾತ್ರೆ ಹೊರಟಂತೆ ಕಾಣುತ್ತಿತ್ತು

Read Post »

You cannot copy content of this page

Scroll to Top