ಕಥೆ ಯಾರ ಜೀವನವೆಲ್ಲೋ… ಟಿ.ಎಸ್.ಶ್ರವಣಕುಮಾರಿ ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಿತ್ತು, ತೆಗೆದುಕೊಂಡದ್ದಾಗಿದೆ, ಈಗ ವ್ಯವಸ್ಥೆ ಮಾಡಿ ಬರಬೇಕು. ನೂರನೆಯ ಬಾರಿಗೆ ಇನ್ನಾದರೂ ಎಲ್ಲರ ಮನಸ್ಸಿಗೆ ನೆಮ್ಮದಿ ಸಿಕ್ಕರೆ ಸಾಕು ಅಂದುಕೊಂಡಳು ವನಜಾಕ್ಷಿ. ಅವರಿಬ್ಬರೂ ದೇವಪುರಿಗೆ ಹೋಗಿ ಇಪ್ಪತ್ತು ವರ್ಷಗಳ ಮೇಲೇ ಆಗಿತ್ತೇನೋ. ಅಲ್ಲಿದ್ದ ಕೃಷ್ಣಮೂರ್ತಿಯ ತಾತ ಭುಜಂಗ ಶಾಸ್ತ್ರಿಗಳು ದೈವಾದೀನರಾದ ನಂತರ ಅಲ್ಲಿಗೆ ಹೋಗುವ ಪ್ರಮೇಯವೂ ಇರಲಿಲ್ಲ. ವರ್ಷಾಂತಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ಮುಗಿಸಿ ತಾತನ ಮನೆಯನ್ನು ಸಂಸ್ಕೃತ ಪಾಠಶಾಲೆ ಮಾಡಲು ಬಿಟ್ಟುಕೊಟ್ಟು ಬಂದದ್ದಾಗಿತ್ತು. ಒಂದೊಳ್ಳೆಯ ಉದ್ದೇಶಕ್ಕಾಗಿ ತಾವೆಲ್ಲಾ ಹುಟ್ಟಿಬೆಳೆದ ಮನೆಯನ್ನು ಕೊಟ್ಟಿದ್ದೇನೆ ಎನ್ನುವ ಸಮಾಧಾನ ಕೃಷ್ಣಮೂರ್ತಿಗಳಿಗಿತ್ತು. ಅಲ್ಲಿದ್ದ ಒಬ್ಬಿಬ್ಬರು ದೂರದ ಬಂಧುಗಳು ಯಾವಾಗಾದರೂ ಫೋನ್ ಮಾಡಿದಾಗ ಅಲ್ಲಿನ ಸಮಾಚಾರಗಳು ತಿಳಿಯುತ್ತಿದ್ದವು. ಅವರಿಗಿದ್ದ ಅಸ್ಥೆಗೆ ಅದೂ ಹೆಚ್ಚೇ. ಹೀಗೆ ಹೆಚ್ಚುಕಡಿಮೆ ಸಂಪರ್ಕ ಬಿಟ್ಟೇಹೋಗಿದ್ದ ಊರಿಗೆ ಇಂತಹ ಒಂದು ಕಾರಣಕ್ಕಾಗಿ ಮುಂದೊಂದು ದಿನ ಬರಬೇಕಾಗಬಹುದೆಂಬ ಊಹೆಯೂ ಅವರಿಗಿರಲಿಲ್ಲ. ಯೋಚನೆಗೆ ಬಿದ್ದಿದ್ದವರು ಪ್ರಸಾದಿಯ ಮುಖವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟರು. ಅವನು ತನ್ನ ಪಾಡಿಗೆ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಅವನ ಮನಸ್ಸಿನಲ್ಲಿ ಅದೇನು ನಡೆಯುತ್ತಿತ್ತೋ! ಪಕ್ಕದಲ್ಲಿ ಕುಳಿತಿದ್ದ ವನಜಾಕ್ಷಿ ʻಏನು?ʼ ಎನ್ನುವಂತೆ ನೋಡಿದಳು. ʻಏನಿಲ್ಲʼ ಎನ್ನುವಂತೆ ತಲೆಯಾಡಿಸಿ ಮತ್ತೆ ಯೋಚನೆಯಲ್ಲಿ ಮುಳುಗಿದರು. ʻರಾಘವನಾಗಲೀ, ರಾಜೀವನಾಗಲೀ ತಮ್ಮ ಹೆಂಡತಿಯರೊಂದಿಗೆ ಇವನ ಬಗ್ಗೆ ಸ್ವಲ್ಪ ಅಭಿಮಾನ ತೋರಿದ್ದರೆ ಈ ಸಮಸ್ಯೆ ಇಷ್ಟು ಬೇಗ ಬರುತ್ತಿರಲಿಲ್ಲವೇನೋ. ಗಂಡುಮಕ್ಕಳೇ ಹೀಗಾದ ಮೇಲೆ ಸೊಸೆಯರನ್ನೇಕೆ ಅನ್ನಬೇಕು? ಅವರಿಬ್ಬರೂ ಜಾಣರು, ಸ್ವಂತ ಶಕ್ತಿಯಲ್ಲೇ ಕೆಲಸ ಗಿಟ್ಟಿಸಿಕೊಂಡು ಬದುಕಿನಲ್ಲಿ ಮುಂದೆ ಬಂದರು ಎನ್ನುವ ಹೆಮ್ಮೆ ನಮಗಿಲ್ಲವೇ. ಆದರೆ ಪ್ರಪಂಚದವರೆಲ್ಲರೂ ತಮಗೆ ಸರಿಸಾಟಿಯಾಗೇ ಇರಬೇಕು, ಇಲ್ಲದಿರುವವರು ಜೀವಿಸುವುದೇ ವ್ಯರ್ಥ ಅನ್ನುವ ಹಾಗೇಕೆ ಆಡಬೇಕು? ಸ್ವಂತ ತಮ್ಮನನ್ನೇ ಹೆಂಡತಿಯರೆದುರು ಸದಾ ಹಂಗಿಸಿ, ಬೈದು ಮಾತಾಡಿಸುತ್ತಿದ್ದರೆ ಹೊರಗಿಂದ ಬಂದವರಿಗೆ ಏಕೆ ಮಮತೆ ಹುಟ್ಟುತ್ತದೆ? ಗಂಡನಿಗೇ ಬೇಕಿಲ್ಲದ್ದನ್ನು ತಾವೇಕೆ ಹಚ್ಚಿಕೊಳ್ಳುತ್ತಾರೆ. ಅವರ ದೂರಿಗೆ ತಮ್ಮ ಉಪ್ಪುಖಾರವನ್ನೂ ಸೇರಿಸುತ್ತಾರಷ್ಟೇ. ನಮಗಾದರೆ ಮಗ; ಹೇಗಿದ್ದರೂ ಬೇಕು. ಅವರೇಕೆ ಜೀವಮಾನ ಪೂರ್ತಿ ಮೈದುನನನ್ನು ಸಾಕುವ ಹೊಣೆಹೊರುತ್ತಾರೆ? ನೂರೊಂದು ಸಲ ಅಂದುಕೊಂಡಿದ್ದನ್ನೇ ಮತ್ತೊಂದು ಬಾರಿ ಅಂದುಕೊಂಡರು. ಏನೋ ಅವರವರು ಗಂಡ ಹೆಂಡತಿಯ ಮಧ್ಯೆ ಇನ್ನು ಮುಂದಾದರೂ, ಇವನ ದೆಸೆಯಿಂದ ಆಗುತ್ತಿದ್ದ ಜಗಳಗಳು ನಿಂತರೆ ಸಾಕು. ಎಲ್ಲಕ್ಕೂ ಮೊದಲು ಈಗ ಹೋಗುತ್ತಿರುವ ಕೆಲಸ ಅಂದುಕೊಂಡಂತೆ ಸುರಳೀತವಾಗಿ ಆದರೆ ಸಾಕುʼ ಎಂದುಕೊಳ್ಳುತ್ತಿರುವಾಗ ಬಸ್ಸು ಅರಸೀಕೆರೆಯನ್ನು ಮುಟ್ಟಿತು. ಇನ್ನೂ ಎರಡು ಗಂಟೆಯ ಪ್ರಯಾಣ. ಕಾಫಿಗೆ ನಿಲ್ಲಿಸಿದರು. “ಕಾಫಿ ಕುಡಿಯೋಣ್ವಾ” ವನಜಾಕ್ಷಿಯನ್ನು ಕೇಳಿದರು. “ನಂಗೆ ಬೇಡ, ನೀವಿಬ್ರೂ ಕುಡಿದ್ಬನ್ನಿ” ಎಂದಳು ವನಜಾಕ್ಷಿ. ಅಪ್ಪ ಮಗ ಇಬ್ಬರೂ ಕೆಳಗಿಳಿದು ಹೋದರು. ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಅಳು ನುಗ್ಗಿಬಂದಂತಾಗಿ ವನಜಾಕ್ಷಿ ಸೆರಗನ್ನು ಮುಖಕ್ಕೊತ್ತಿಕೊಂಡು ಬಿಕ್ಕಿದಳು. ತಮಗಿಬ್ಬರಿಗೂ ವಯಸ್ಸಾಗಿದೆ. ತನಗಾಗಲೇ ಅರವತ್ಮೂರು ವರ್ಷ. ಇವರಿಗೆ ಎಪ್ಪತ್ತು ದಾಟಿದೆ. ಬ್ಯಾಂಕಿನಲ್ಲಿರುವ ದುಡ್ಡಿಗೆ ಬರುವ ಬಡ್ಡಿ ಐದಾರು ಸಾವಿರ ಬಿಟ್ಟರೆ ತಮಗೆ ಬೇರೇನೂ ಆದಾಯವಿಲ್ಲ. ದುಡಿದದ್ದೆಲ್ಲಾ ಮಕ್ಕಳಿಗಾಗೇ ಖರ್ಚಾಗಿ ಉಳಿದದ್ದಷ್ಟೇ. ಬೇರೆ ಮನೆ ಮಾಡಿಕೊಂಡು ಪ್ರಸಾದಿಯನ್ನು ಜೊತೆಗಿಟ್ಟುಕೊಳ್ಳುವ ಯೋಚನೆಯನ್ನು ಮಾಡಲೂ ಸಾಧ್ಯವಿಲ್ಲ. ಇನ್ನೆಷ್ಟು ಕಾಲ ನಾವಿಬ್ಬರೂ ಇರಬಹುದು! ಇನ್ನೂ ಮೂವತ್ತು ವರ್ಷದ ಪ್ರಸಾದಿಯ ಮುಂದೆ ಇಡೀ ಜೀವನ ಬಿದ್ದಿದೆ. ಈಗಲೇ ಅಣ್ಣಂದಿರ ಕಣ್ಣಲ್ಲಿ ಕಸವಾಗಿದ್ದಾನೆ. ತಾವು ಹೋದಮೇಲೆ ಅವನ ಗತಿ ಏನು. ಏನಾದರೂ ವ್ಯವಸ್ಥೆ ಆಗಲೇಬೇಕಲ್ಲವೆ? ಏನೋ… ಈಗ ಅಂದುಕೊಂಡಿರುವ ಹಾಗೆ ಸಾಧ್ಯವಾದರೆ ನಮ್ಮ ಮನಸ್ಸಿಗೂ ಸ್ವಲ್ಪ ನಿಶ್ಚಿಂತೆ ಸಿಗಬಹುದೇನೋ. ಅವರಿಬ್ಬರೂ ಅವಳಿ ಮಕ್ಕಳು, ಇವನಿಗಿಂತ ಮೂರುವರ್ಷಕ್ಕೆ ದೊಡ್ಡವರು, ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಗಳಿಸಿಕೊಂಡು, ಮದುವೆಯಾಗಿ, ಜೀವನದಲ್ಲಿ ಚೆನ್ನಾಗಿಯೇ ಸೆಟಲ್ ಆಗಿದ್ದಾರೆ. ಇವನೊಬ್ಬನು ಏನೋ ಸಣ್ಣಪುಟ್ಟ ಕೆಲಸವನ್ನಾದರೂ ಮಾಡಿ, ಅಷ್ಟೋಇಷ್ಟೋ ದುಡಿದುಕೊಂಡು ತಕ್ಕಮಟ್ಟಿಗಿದ್ದಿದ್ದರೆ… ಎಷ್ಟುಸಲ ಅಂದುಕೊಂಡರೂ ಅಷ್ಟೇ. ಅಷ್ಟು ಚೆನ್ನಾಗಿ ದೃಷ್ಟಿ ತಾಗುವಂತೆ ಇದ್ದವನಿಗೆ ಐದು ವರ್ಷದವನಿದ್ದಾಗ ಬಂದ ಆ ಹಾಳು ಜ್ವರವೇ ಮುಳುವಾಯಿತು. ತಿಂಗಳುಗಟ್ಟಲೇ ಕಾದ ಜ್ವರ ಅವನು ಉಳಿದಿದ್ದೇ ಹೆಚ್ಚಾಯಿತು. ತುಂಬಾ ದುರ್ಬಲನಾದ. ಫಿಟ್ಸ್ ಬರಲು ಆರಂಭವಾಗಿ ಅದೆಷ್ಟು ದೇವರಿಗೆ ಹರಕೆ ಹೊತ್ತದ್ದೋ. ಕಡೆಗೆ ಬದುಕಿದ್ದೇ ಒಂದು ಪವಾಡವೇನೋ ಅನ್ನಿಸಿಬಿಟ್ಟಿತು. ಉಗ್ಗು ಶುರುವಾಯಿತು. ಕಲಿತದ್ದು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹೇಗೋ ಹೈಸ್ಕೂಲಿನ ತನಕ ತಳ್ಳಿದರು. ಆಮೇಲೆ ಎಂಟನೇ ಕ್ಲಾಸು ಕೂಡಾ ದಾಟಲಿಲ್ಲ. ಬೇರೆ ಯಾವುದಾದರೂ ಟ್ರೈನಿಂಗ್ಗೆ ಕಳಿಸಲು ಶ್ರಮದ ಕೆಲಸಗಳಿಗೆ ಬೇಕಾಗುವಷ್ಟು ಶಕ್ತಿಯಿಲ್ಲ. ಕಲಿಯುವ ಕೆಲಸಗಳಿಗೆ ಬುದ್ಧಿ ಸಾಲದು. ಮನೆಯಲ್ಲೇ ತಮ್ಮಿಬ್ಬರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿರುತ್ತಾನೆ. ಅದಕ್ಕೂ ನೂರೆಂಟು ಆಕ್ಷೇಪಣೆಗಳು ಅಣ್ಣಂದಿರಿಂದ. ಮೊದಮೊದಲಿಗೆ ಪ್ರೀತಿ ಅಂತಃಕರಣವೇ ಇತ್ತು. ಇತ್ತೀಚೆಗೆ ಹೀಗೆ ಅಸಡ್ಡೆ ತೋರುತ್ತಿದ್ದಾರೆ. ಅವರಿಬ್ಬರಿಗೆ ಹೆಣ್ಣು ನೋಡುವಾಗಲೂ ಎಷ್ಟೋ ಸಂಬಂಧಗಳು ಇವನ ಕಾರಣದಿಂದಲೇ ಮುರಿದುಬಿದ್ದಿದ್ದವು. ಕಡೆಗೆ, ʻಮುಂದೆʼ ಇವನಿಗೊಂದು ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ತಾವು ಹೊತ್ತುಕೊಂಡ ಮೇಲೇ ಅವರಿಬ್ಬರಿಗೂ ಮದುವೆಗಳು ಕುದುರಿದ್ದು. ʻಮುಂದೆಂದೋʼ ಎಂದುಕೊಂಡಿದ್ದನ್ನು ಇಷ್ಟು ಬೇಗನೇ, ಈ ರೀತಿಯಲ್ಲಿ ಮಾಡುವಂತಾಯಿತಲ್ಲ ಎಂದು ಮತ್ತೊಮ್ಮೆ ಕಣ್ಣೊರಸಿಕೊಂಡಳು. ಡ್ರೈವರ್ ಸೀಟಿನಲ್ಲಿ ಕುಳಿತು ಹಾರ್ನ್ ಮಾಡಿದ. ಎಲ್ಲರೂ ಬಸ್ಸು ಹತ್ತಿದರು… ಅಂತೂ ಶಿವಮೊಗ್ಗ ಬಂತು. ಹತ್ತು ನಿಮಿಷದಲ್ಲೇ ತೀರ್ಥಳ್ಳಿಯ ಕಡೆಗೆ ಹೋಗುವ ಮಿನಿ ಬಸ್ಸು ಸಿಕ್ಕಿ ಒಂದು ಗಂಟೆಗೆಲ್ಲಾ ದೇವಪುರಿ ತಲುಪಿದರು. ಹೆಚ್ಚೇನೂ ಬದಲಾವಣೆಯಾಗಿಲ್ಲ. ಆಗಿದ್ದ ಮಣ್ಣಿನ ರಸ್ತೆಗಳಿಗೆ ಒಂದಷ್ಟು ಫುಟ್ಪಾತ್ ಟೈಲ್ಸ್ ಬಂದಿವೆಯಷ್ಟೇ. ಎಲ್ಲೋ ಒಂದೆರಡು ಮನೆಗಳು ಹೊಸದಾಗಿ ಕಟ್ಟಿರುವುದನ್ನು ಬಿಟ್ಟರೆ ಮಿಕ್ಕವೆಲ್ಲಾ ಆ ಕಾಲದ ನಾಡಹೆಂಚಿನ, ಮಂಗಳೂರು ಹೆಂಚಿನ ಮನೆಗಳೇ. ಊರಿಗೆಲ್ಲಾ ನಾಲ್ಕು ರಸ್ತೆಗಳು. ಊರಿನ ಹಿಂಬಾಗದಲ್ಲಿ ಎಂದಿನಿಂದಲೋ ತುಂಗೆ ಹರಿಯುತ್ತಲೇ ಇದ್ದಾಳೆ. ನದಿ ದಡದಲ್ಲಿ ಒಂದಷ್ಟು ಗಾರೆ ಕೆಲಸಮಾಡಿ ಯಾಗಶಾಲೆಯನ್ನು ಕಟ್ಟಿದ್ದಾರೆ. ಹಿಂದಿನಂತೆಯೇ ದೇವಪುರಿಗೂ ಆಕಡೆಯ ದಡದಲ್ಲಿರುವ ವಿಷ್ಣುಪುರಿಗೂ ಮಧ್ಯೆ ಉಕ್ಕಡ ಓಡಾಡುತ್ತದೆ. ಸಂಗೀತ ಶಾಲೆ ಆರಂಭವಾಗಿದೆ. ಇನ್ನೊಂದು ದೊಡ್ಡ ಮನೆ, ಪ್ರಾಯಶಃ ರಾಂಭಟ್ಟರದಿರಬೇಕು, ಈಗ ಗ್ರಂಥಾಲಯವಾಗಿದೆ. ತಮ್ಮ ಮನೆಯಲ್ಲಿ ಸಂಸ್ಕೃತ ಮತ್ತು ವೇದ ಪಾಠಶಾಲೆ ಅಂದಿನಂತೆಯೇ ನಡೆಯುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ಸ್ವಲ್ಪ ರಿಪೇರಿ, ಮಾರ್ಪಾಟುಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಬಸ್ಸಿನಿಂದಿಳಿದು ಎಲ್ಲವನ್ನೂ ಗಮನಿಸುತ್ತಾ ಊರೊಳಗೆ ನಡೆದು ಬಂದರು. ಈಶ್ವರನ ದೇವಸ್ಥಾನದ ಪಕ್ಕದ ಮನೆಯೇ ಗಣಪತಿ ಘನಪಾಠಿಗಳದ್ದು. ಆವರಿಗೆ ಎಂಭತ್ತೈದರ ಹತ್ತಿರವೇನೋ. ತಾತ ಅಲ್ಲಿದ್ದಾಗ ಕೃಷ್ಣಮೂರ್ತಿಗಳೂ ಘನಪಾಠಿಗಳಿಂದ ಸಂಸ್ಕೃತವನ್ನೂ, ಸ್ವಲ್ಪ ಮಟ್ಟಿಗೆ ವೇದ ಪಾಠವನ್ನೂ ಒಂದಷ್ಟು ಕಾಲ ಕಲಿತಿದ್ದರು. ಮನೆಗೆ ಮಂಗಳೂರು ಹೆಂಚನ್ನು ಹೊದಿಸಿರುವುದನ್ನು ಬಿಟ್ಟರೆ ಹೆಚ್ಚೇನೂ ಬದಲಾವಣೆಯಾಗಿಲ್ಲ. ಅವರು ಜಗಲಿಯ ಮೇಲೇ ಯಾವುದೋ ಗ್ರಂಥವನ್ನಿಟ್ಟುಕೊಂಡು ಓದುತ್ತಾ ಕುಳಿತಿದ್ದರು. ವಯಸ್ಸಾಗಿರುವುದು ಕಾಣುತ್ತದೆ. ಸ್ವಲ್ಪ ಬಾಗಿದ್ದಾರೆ. ಇವರನ್ನು ಕಂಡೊಡನೆಯೇ ಸಂಭ್ರಮದಿಂದೆದ್ದು ಶಲ್ಯವನ್ನು ಸರಿಯಾಗಿ ಹೊದ್ದುಕೊಂಡು “ಬನ್ನಿ ಬನ್ನಿ…” ಎನ್ನುತ್ತಾ ತಮ್ಮ ಕೈಯಲ್ಲಿದ್ದ ಗ್ರಂಥವನ್ನು ಮಡಿಚಿಟ್ಟು ಎದ್ದರು. “ಬೆಳಗ್ಗೆ ಆರು ಗಂಟೆ ಹೊತ್ತಿಗೆ ಮನೆ ಬಿಟ್ಟದ್ದೇನೋ, ಅಲ್ವೇ… ಆರೇಳು ಗಂಟೆ ಪ್ರಯಾಣ, ಆಯಾಸವಲ್ವೇ” ಮಾತನಾಡಿಸುತ್ತಲೇ ಮನೆಯ ಒಳಹೊಕ್ಕರು. “ಲೇ… ಇವ್ಳೇ… ಅವ್ರೆಲ್ಲಾ ಬಂದಾಯ್ತು ಕಂಡ್ಯಾ… ಮಜ್ಜಿಗೆಯೋ, ಪಾನಕವೋ ಎಂತಾದ್ರೂ ಕೊಡ್ತೀಯಾ ನೋಡು” ಎಂದು ಹೆಂಡತಿಯನ್ನು ಕರೆದರು. ಇವರ ಕಡೆ ತಿರುಗಿ “ಕೈಕಾಲು ತೊಳೆದು ಬನ್ನಿ. ಸ್ವಲ್ಪ ಆಸರಿಗೆ ಕುಡ್ದು ನಂತ್ರ ಊಟ ಮಾಡೋಣ” ಎನ್ನುತ್ತಾ ಬಚ್ಚಲಮನೆಯ ಕಡೆಗೆ ಕೈತೋರಿದರು. ಎಲ್ಲರೂ ಕೈಕಾಲು ತೊಳೆದು ಬರುವ ವೇಳೆಗೆ ತೊಟ್ಟಿಯ ಚೌಕಿಗೆ ಬೇಲದ ಹಣ್ಣಿನ ಬೆಲ್ಲದ ಪಾನಕವನ್ನು ತಂದರು ರತ್ನಮ್ಮ. ಆಕೆಯ ಬೆನ್ನೂ ಬಾಗಿಹೋಗಿದೆ. ಅವರಿಗೂ ಎಂಭತ್ತಕ್ಕೆ ಹತ್ತಿರವಾಯ್ತಲ್ವೇ. ಏನೋ ಹಳೇಕಾಲದವರು ಆರೋಗ್ಯವಂತರೆಂದೇ ಹೇಳಬೇಕು. ಏಲಕ್ಕಿ ಹಾಕಿದ ತಣ್ಣಗಿನ ಪಾನಕ ನಿಜಕ್ಕೂ ಹಿತವಾಗಿತ್ತು. ದೊಡ್ಡ ಲೋಟದ ತುಂಬಾ ಕುಡಿದರೂ, ಇನ್ನೊಂದು ಸಲ ಹಾಕಿದಾಗ ಬೇಡವೆನ್ನದೆ ಹಾಕಿಸಿಕೊಂಡು ಕುಡಿದರು. ವನಜಾಕ್ಷಿ ಕುಡಿದ ಲೋಟಗಳನ್ನು ಹಿತ್ತಲಿಗೆ ತೆಗೆದುಕೊಂಡು ಹೋಗಿ ತೊಳೆದು ಬಾರಲು ಹಾಕಿ ಬಂದಳು. ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತರು. ಇನ್ನಿಬ್ಬರು ಮಕ್ಕಳ, ಸೊಸೆಯರ ಬಗ್ಗೆ ವಿಚಾರಿಸಿಕೊಂಡರು. ತಮ್ಮ ಮಗ ಸುಬ್ರಹ್ಮಣ್ಯನೇ ಈಗ ಸಂಸ್ಕೃತ ಶಾಲೆಯನ್ನು ನಡೆಸುತ್ತಿರುವ ಬಗ್ಗೆ ಹೇಳಿದರು. ಅವನ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವುದನ್ನೂ, ಇನ್ನೊಬ್ಬ ವೇದಾದ್ಯಯನದಲ್ಲೇ ಆಸಕ್ತಿ ತೋರಿ ಅದರಲ್ಲೇ ಮುಂದುವರಿಯುತ್ತಿರುವುದನ್ನೂ ಹೇಳಿದರು. ಇನ್ನೂ ಏನು ಮಾತು ಮುಂದುವರೆಸುತ್ತಿದ್ದರೋ… “ಪಾಪ ಅವ್ರು ಅಷ್ಟೊತ್ತಿಗೇ ಊರು ಬಿಟ್ಟೋರು. ಹಸಿವಾಗಿರುತ್ತೆ. ಎಲೆ ಹಾಕ್ತಿನಿ” ಎನ್ನುತ್ತಾ ರತ್ನಮ್ಮನವರು ಎದ್ದರು. ವನಜಾಕ್ಷಿಯೂ ಸಹಾಯಕ್ಕೆಂದು ಎದ್ದಳು. ಎಲ್ಲರಿಗೂ ಎಲೆ ಹಾಕಿದರು. ಮಿಡಿ ಉಪ್ಪಿನಕಾಯಿ, ಸಾರು, ಹುಳಿ, ಚಟ್ನಿಯ ಜೊತೆಗೆ ಮನೆಯ ಮೊಸರಿನ ಹಿತವಾದ ಊಟ. ಪ್ರಯಾಣದ ಆಯಾಸಕ್ಕೂ, ಬಿಸಿಬಿಸಿಯಾದ ಸೊಗಸಾದ ಊಟ ಮಾಡಿದ್ದಕ್ಕೂ ಹೊಂದಿಕೆಯಾಗಿ ಕಣ್ಣು ಎಳೆಯತೊಡಗಿತು. ಗಂಡಸರಿಗೆಲ್ಲಾ ಚೌಕಿಯಲ್ಲಿ ಚಾಪೆ ಹಾಸಿ ತಮ್ಮಿಬ್ಬರಿಗೂ ಒಳಗಿನ ಕೋಣೆಯಲ್ಲಿ ಚಾಪೆ ಹಾಸಿದರು ರತ್ನಮ್ಮ. ಹೆಚ್ಚು ಉಪಚಾರ ಬೇಕಿಲ್ಲದೆ ಮೂವರೂ ನಿದ್ರೆಗೆ ಜಾರಿದರು. ಎಚ್ಚರವಾದ ಮೇಲೆ ಬಿಸಿ ಬಿಸಿ ಕಾಫಿ ಜೊತೆಗೆ ಕೋಡುಬಳೆ, ಚಕ್ಕುಲಿಗಳು ಬಂದವು. ನಂತರ ಒಂದಷ್ಟು ಹೊತ್ತು ಊರಿಗೆ ಹೊಸದಾಗಿ ಬಂದವರು, ಹೊರ ಹೋದವರು, ಇತ್ತೀಚೆಗೆ ಶುರುವಾದ ಗ್ರಂಥಾಲಯ, ಹೊರಭಾಗದಲ್ಲಿ ತಲೆಎತ್ತಿರುವ ಗೃಹ ಕೈಗಾರಿಕೆಗಳು, ಹಿಂದೂಸ್ಥಾನಿ ಸಂಗೀತವನ್ನು ಕಲಿಸಲು ಬಂದಿರುವ ಹುಬ್ಬಳ್ಳಿಯ ಗವಾಯಿಗಳು, ಯಾಗಶಾಲೆಯಲ್ಲಿ ಎಲ್ಲೆಂಲ್ಲಿಂದಲೋ ಜನ ಬಂದು ಹೋಮಗಳನ್ನು, ಯಜ್ಞ ಯಾಗಾದಿಗಳನ್ನು ನಡೆಸಲು ಅಪೇಕ್ಷಿಸುತ್ತಿರುವುದು, ಅವರಿಗಾಗಿ ಮಾಡಿರುವ ವಸತಿ, ಊಟದ ವ್ಯವಸ್ಥೆ ಎಲ್ಲದರ ಬಗ್ಗೆ ಒಂದು ಗಂಟೆಯ ಕಾಲಕ್ಷೇಪವಾಯಿತು. ನಂತರ ನದಿ ತೀರಕ್ಕೆ ಹೋಗಿಬರುತ್ತೇವೆಂದು ಮೂವರೂ ಹೊರಟರು. ಮುಸ್ಸಂಜೆಯಾಗಿದ್ದರಿಂದ ಅಲ್ಲಲ್ಲಿ ತೀರದ ಬಂಡೆಗಳ ಮೇಲೆ ಕೂತು ಕೆಲವರು ಸಂಧ್ಯಾವಂದನೆಯಲ್ಲಿ ನಿರತರಾಗಿದ್ದರು. ಮುಳುಗುತ್ತಿರುವ ಸೂರ್ಯ, ಹರಿಯುತ್ತಿರುವ ನದಿಯಲ್ಲಿ ತೇಲುತ್ತಿರುವ ಉಕ್ಕಡ, ಹಕ್ಕಿಗಳ ಚಿಲಿಪಿಲಿ, ಪಕ್ಕದಲ್ಲಿದ್ದ ವೇದ ಶಾಲೆಯಿಂದ ಕೇಳುತ್ತಿದ್ದ ವೇದ ಪಠಣ, ಅರಳೀಮರದ ಮರ್ಮರ, ದೇವಸ್ಥಾನದಿಂದ ಆಗಾಗ ಕೇಳುತ್ತಿದ್ದ ಗಂಟಾನಾದ ಎಲ್ಲವೂ ಒಂದು ಅಲೌಕಿಕ ವಾತಾವರಣವನ್ನೇ ನಿರ್ಮಿಸಿದ್ದವು. ಅರಳೀಮರದ ಕಟ್ಟೆಯಲ್ಲಿ ಕುಳಿತು ಇಬ್ಬರೂ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರು. ಪ್ರಸಾದಿ ಸ್ವಲ್ಪ ದೂರ ನಡೆದು ನದಿ ದಂಡೆಯ ಮೇಲೆ ಕಾಲನ್ನು ನೀರಲ್ಲಿ ಬಿಟ್ಟು ಕುಳಿತ. “ನಾವೇನೋ ವಯಸ್ಸಾದವರು, ಚಿಕ್ಕಂದಿನಲ್ಲಿ ಇಂತಹ ಜೀವನ ಕಂಡವರು, ಇದೆಲ್ಲಾ ಚೆನ್ನಾಗಿದೆ ಅಂತನ್ಸತ್ತೆ. ಪ್ರಸಾದಿ ಹುಟ್ಟಿದಾಗಿನಿಂದ ಸಿಟೀಲೇ ಬೆಳೆದವನು. ಇಂಥಾಲ್ಲಿ ಹೇಗಿರ್ತಾನೆ. ಒಂದು ಸಿನಿಮಾ, ಹೋಟ್ಲು, ಅಂಗಡಿ, ಒಂದೂ ಇಲ್ವಲ್ಲ. ಅವರ ಮನೇಲಿ ಟೀವಿ ಕೂಡಾ ಇದ್ಯೋ, ಇಲ್ವೋ ಗೊತ್ತಾಗ್ಲಿಲ್ಲ” ಅಂದಳು ವನಜಾಕ್ಷಿ ಚಿಂತೆಯಿಂದ. ಕೃಷ್ಣಮೂರ್ತಿಯೂ “ನಾನೂ ಅದನ್ನೇ ಯೋಚಿಸ್ತಿದ್ದೆ” ಅಂದರು. “ಅದಷ್ಟೇ ಅಲ್ಲ, ಅಲ್ಲಾದ್ರೆ ಅವನವರೂ ಅಂತ ನಾವಿಬ್ರಾದ್ರೂ ಇದ್ವಿ; ಇಲ್ಲೆಲ್ರೂ ಹೊಸಬರೇ. ಹೇಗೆ ಹೊಂದಿಕೊಳ್ತಾನೋ” ವನಜಾಕ್ಷಿಗೆ ಇನ್ನೊಂದು ಚಿಂತೆ. “ಅದೂ ನಿಜವೇ. ಆದ್ರೇನ್ಮಾಡೋದು. ದಿನವೂ ರಾಮಾಯ್ಣ, ಮಹಾಭಾರ್ತ ನೋಡ್ನೋಡಿ ಸಾಕಾಗಿದೆ. ಅನ್ನೋಂಗಿಲ್ಲ, ಅನುಭವಿಸಕ್ಕಾಗಲ್ಲ. ನಾವೂ ಅವ್ನಿಗೆ ಒಂಥರಾ ಪರಕೀಯರೇ