ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಲಿತ ಪ್ರಬಂಧ

ಹಲಸಿನ ಕಡುಬು. ಶೀಲಾ ಭಂಡಾರ್ಕರ್ ನಮ್ಮೂರ ಕಡೆ ಹಲಸಿನ ಹಣ್ಣಿನ ಕಾಲದಲ್ಲಿ ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುತ್ತಾರೆ. ಹಪ್ಪಳ, ಚಿಪ್ಸ್, ದೋಸೆ, ಕಡುಬು, ಮುಳಕ, ಪಾಯಸ.. ಇನ್ನೂ ಎಷ್ಟೋ ಬಗೆ. ಅದರಲ್ಲಿ ಹಲಸಿನ ಕಡುಬು ನನಗೆ ಪಂಚಪ್ರಾಣ.ಅಕ್ಕಿಯನ್ನು ನೆನೆಸಿ, ತೆಂಗಿನ ತುರಿ, ಬೆಲ್ಲ, ಬಿಡಿಸಿದ ಹಲಸಿನ ತೊಳೆಯ ಜತೆ ತರಿ ತರಿಯಾಗಿ ರುಬ್ಬಿ ತೇಗದ ಎಲೆಯಲ್ಲಿ, ಕೆಂಡ ಸಂಪಿಗೆ ಎಲೆಯಲ್ಲಿ, ಅಥವಾ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿ ಮಾಡುವ ಕಡುಬು.. ಆಹಾ..!!! ಘಮ್ ಅಂತ ನಾಲ್ಕೂ ದಿಕ್ಕಿಗೆ ಪರಿಮಳ ಸೂಸಿ ಎಲ್ಲರ ಮೂಗು ಅರಳಿಸುತ್ತದೆ.ಬಿಸಿ ಬಿಸಿ ಹಲಸಿನ ಕಡುಬನ್ನು ತಾಜಾ ಬೆಣ್ಣೆ, ಅಥವಾ ತುಪ್ಪದ ಜತೆ ತಿಂದರೆ.. ಆಹ್… ಬಿಡಿ.. ಬಲ್ಲವರೇ ಬಲ್ಲರು ಅದರ ರುಚಿಯ. ನಾನು ಆಗ ಆರನೇ ಕ್ಲಾಸಿನಲ್ಲಿದ್ದೆ. ಆಗ ನಾವೊಂದು ಚಿಕ್ಕ ಹಳ್ಳಿಯಲ್ಲಿದ್ದೆವು ಒಂದು ವರ್ಷದ ಮಟ್ಟಿಗೆ. ಅಲ್ಲಿ ನಾವು ಇದ್ದ ಕಡೆ ಹತ್ತಿರದಲ್ಲೇ ಒಂದು ಅಂಗಡಿ, ಅದರ ಮಾಲೀಕ ಶೇಷಪ್ಪ ಅಂತ. ಅವನೊಂದು ದಿನ ಒಂದು ಹಲಸಿನ ಹಣ್ಣು ತಂದು ಕೊಟ್ಟ. ಅವನು ತಂದಿಟ್ಟ ತಕ್ಷಣ ನಮಗೆಲ್ಲ ಕಡುಬು ತಿನ್ನುವ ಆಸೆಯಾಯ್ತು. ಸರಿ ಆವತ್ತು ರಾತ್ರಿ ಯಾರಿಗೂ ಊಟ ಬೇಡ, ಕಡುಬೇ ಸಾಕು ಅಂತ ನಿರ್ಧಾರವಾಯಿತು. ಆಗ ಈಗಿನ ಹಾಗೆ ಮಿಕ್ಸಿ, ಗ್ರೈಂಡರ್ ಇರಲಿಲ್ಲ ನಮ್ಮ ಮನೆಯಲ್ಲಿ. ರುಬ್ಬುವ ಕಲ್ಲಿನಲ್ಲಿ ಕಡುಬಿನ ಹಿಟ್ಟನ್ನು ತಯಾರು ಮಾಡಿ ಎರಡು ದೊಡ್ಡ ದೊಡ್ಡ ತಟ್ಟೆಗಳಲ್ಲಿ ಅಮ್ಮ ಬೇಯಿಸಲಿಕ್ಕಿಟ್ಟರು.. ಇನ್ನು ಸರಿಯಾಗಿ ಅರ್ಧ ಘಂಟೆಯಾದರೂ ಬೇಯಬೇಕು ಅಂತ ಮನಸ್ಸಿನಲ್ಲೇ ಅಂದುಕೊಂಡು ಕಾಯುತ್ತ ಕೂತಿದ್ದೆವು. ಅಜ್ಜಿ ಬೆಣ್ಣೆಯನ್ನು 2-3 ಸಲ ನೀರಿನಿಂದ ತೊಳೆದು ಇಟ್ಟರು.ಅಮ್ಮ ಮುಚ್ಚಳ ತೆಗೆದು ಬೆಂದಿದೆ ಅಂತ ಖಾತ್ರಿ ಮಾಡಿಕೊಂಡು ತಟ್ಟೆಗಳನ್ನು ಹಬೆ ಪಾತ್ರೆಯಿಂದ ತೆಗೆದು ನೆಲದಲ್ಲಿ ಆರಲು ಇಟ್ಟರು.ಅಜ್ಜಿ ಬಂದು ನೋಡಿ.. “ಎಷ್ಟು ಚಂದ ಬಂದಿದೆ ರಂಗು. ಪರಿಮಳ ಕೂಡ ವಿಶೇಷವಾಗಿದೆ “ಅದಕ್ಕೆ ಅಮ್ಮ “ಹೌದು ಶೇಷಪ್ಪ ತಂದುಕೊಟ್ಟ ಹಣ್ಣಲ್ವಾ ಅದಕ್ಕೆ ವಿಶೇಷವಾಗೇ ಪರಿಮಳ” ಅಂತ ಹೇಳುತ್ತ.. ಅಜ್ಜಿಗೆ ಒಂದು ಚಿಕ್ಕ ತುಂಡು ಕಡುಬನ್ನು ತಟ್ಟೆಯಲ್ಲಿಟ್ಟು ಬೆಣ್ಣೆ ಹಾಕಿ ಕೊಟ್ಟರು “ರುಚಿ ನೋಡಿ” ಅಂತ.“ಎಲ್ಲರೂ ಒಟ್ಟಿಗೆ ತಿನ್ನೋಣ” ಎಂದು ಹೇಳಿದರೂ ಕೂಡ ಅಜ್ಜಿ ಕಡುಬು ತಿಂದು “ಭಾಳ ರುಚಿಯಾಗಿದೆ” ಅಂತ ಸರ್ಟಿಫಿಕೇಟ್ ಕೊಟ್ಟಾಯಿತು.ಹಾಗೆ ತಮ್ಮನನ್ನು ಕರೆದು ಅಜ್ಜಿ “ಏ.. ಹೌದಾ.. ಆ ಶೇಷಪ್ಪ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಬಂದು ಹೋಗಬೇಕಂತೆ ಅಂತ ಹೇಳಿ ಬಾ ಹೋಗು” ಅಂತ ಕಳುಹಿಸಿದರು.ಅವನು ಕಡುಬು ತಿನ್ನುವ ಆತುರದಲ್ಲಿ ಒಂದೇ ಏಟಿಗೆ ಓಡಿ ಹೋಗಿ ಶೇಷಪ್ಪನಿಗೆ ವಿಷಯ ಮುಟ್ಟಿಸಿ ಮನೆಗೆ ಬರುವುದರೊಳಗೆ ಹಿಂದೆಯೇ ಶೇಷಪ್ಪನೂ ಬಂದಾಯಿತು. ಅಲ್ಲೇ ಮೆಟ್ಟಲಲ್ಲಿ ಕೂತ ಅವನಿಗೆ ತಟ್ಟೆಯಲ್ಲಿ ಸಾಕಷ್ಟು ಕಡುಬು ಒಂದು ದೊಡ್ಡ ಬೆಣ್ಣೆ ಮುದ್ದೆ ಕೊಟ್ಟಾಯಿತು. ಅವನು ತಿಂದು ಹೋಗಲಿ ಆಮೇಲೆ ನಾವೆಲ್ಲ ತಿಂದ್ರಾಯ್ತು ಅಂತ ಅಮ್ಮ ಹೇಳಿದರು. ಹೂಂ … ಅಂತ ತಲೆ ಅಲ್ಲಾಡಿಸಿ ಕೂತೆವು. ಅಷ್ಟು ಒಳ್ಳೆಯ ಮಕ್ಕಳು ಆಗಿನವು. ಈಗಿನವಕ್ಕೆ ಫಿಜ್ಹಾ, ಬರ್ಗರ್, ಮುಂದೆ ಕಡುಬು ಎಲ್ಲಿ ಗಂಟಲಿಗಿಳಿಯುತ್ತದೆ.? “ಎಷ್ಟು ಒಳ್ಳೆಯ ಹಣ್ಣು..! ನಿಮ್ಮ ಮರದ್ದೇಯಾ? ತುಂಬಾ ಬಿಡ್ತದಾ ಹಣ್ಣು ? ಎಷ್ಟು ಮರ ಇವೆ..? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿ ಅಜ್ಜಿ “ಇನ್ನೊಂದು ಹಣ್ಣು ಬೇಕು , ಮಗಳ ಮನೆಗೆ ಹೋಗ್ತಾ ಇದ್ದೇನೆ ಬರುವ ವಾರ ” ಅಂತ ಬುಕ್ ಮಾಡಿಸಿಟ್ಟರು. ಅವನೂ ಮಾತಾಡುತ್ತ .. ಕಡುಬನ್ನು ಚಪ್ಪರಿಸಿ ತಿನ್ನುವಾಗ, ಕಾದು ಕೂತ ನಮಗೆ ಇವನು ಬೇಗ ಬೇಗ ತಿಂದು ಹೋಗಬಾರದಾ..? ಎಷ್ಟು ಪಂಚಾದಿಕೆ ಈ ಅಜ್ಜಿಗೂ ಅಂತ ಮನಸ್ಸಿನಲ್ಲೇ ಗೊಣಗಾಟ. ತಿಂದಾಯ್ತು.. ಅವನಿಗೆ ಕೈ ತೊಳೆಯಲು ನೀರು ಅಲ್ಲೇ ತಂದು ಕೊಟ್ಟರೆ.. ತಟ್ಟೆ ತೊಳೆದಿಟ್ಟು ಹೋಗುತ್ತೇನೆ ಈ ನೀರು ಸಾಲದು. ಅಂತ ಬೇಡ ಬೇಡ ಎಂದರೂ ಕೇಳದೆ , ನನ್ನನ್ನು ಕರೆದು ಹಿಂದಿನ ಬಾಗಿಲು ತೆಗೆದು ಸ್ವಲ್ಪ ನೀರು ಹಾಕಿ ಅಮ್ಮ ಅಂತ ಹೇಳಿದ. ನಾನು ಹೋಗಿ ಹಿಂದಿನ ಬಾಗಿಲು ತೆಗೆದು ಅವನಿಗೆ ನೀರು ಕೊಟ್ಟು ಬಂದೆ. ಆಯ, ಆಕಾರವಿಲ್ಲದ ದೊಡ್ಡ ಹಳ್ಳಿ ಮನೆ.. ಬಂದು ಕೂತರೆ.. ಶೇಷಪ್ಪ.. ಕಡುಬನ್ನು ವರ್ಣಿಸಲು ತೊಡಗಿದ. ಹಾಗೆ ಇನ್ನೂ ಸ್ವಲ್ಪ ಹೊತ್ತು ಅಪ್ಪ, ಅಜ್ಜಿ , ಅಮ್ಮ ಅಂತ ಒಬ್ಬೊಬ್ಬರದೂ ಅವನ ಜೊತೆ ಮಾತಾಗುತಿತ್ತು. ಒಳಗೆ ಏನೋ “ಢಂಯ್ ” ಎಂದು ಸದ್ದಾಯಿತು. ಹಾರಿ ಹೋಗಿ ಒಳಗೆ ನೋಡಿದರೆ ನಾಯಿಯೊಂದು ತೆರೆದಿಟ್ಟ ಹಿಂದಿನ ಬಾಗಿಲಿನಿಂದ ಒಳಗೆ ಬಂದು ಆರಲು ಇಟ್ಟಿದ್ದ ಕಡುಬಿನ ತಟ್ಟೆಗಳಲ್ಲಿ ಒಂದನ್ನು ಖಾಲಿ ಮಾಡಿ ಇನ್ನೊಂದಕ್ಕೆ ಬಾಯಿ ಹಾಕಿ ಚಪ್ಪರಿಸುತಿತ್ತು. ತಿಂದು ಮುಗಿಸಿದ ತಟ್ಟೆಯಲ್ಲಿ ನಾಯಿ ಕಾಲಿಟ್ಟಿದ್ದರಿಂದ ಆ ಸದ್ದು ಕೇಳಿಸಿದ್ದು ಹೊರಗೆ. ಬಂದ ಕೋಪಕ್ಕೆ ಅಮ್ಮ ಕೈಗೆ ಸಿಕ್ಕಿದ ದೊಣ್ಣೆಯಿಂದ ಒಂದು ಕೊಟ್ಟರು ನಾಯಿಯ ಬೆನ್ನಿಗೆ. ಅದು ಕೊಂಯ್ ಅಂತ ಒಂದೇ ಉಸಿರಿಗೆ ಮಾಯವಾಯ್ತು.ಇನ್ನೊಂದು ನನಗೆ ಗ್ಯಾರಂಟಿ ಎಂದು ನಾನು ಹೆದರಿ ಯಾವುದೋ ಒಂದು ಸಂಧಿಯಲ್ಲಿ ಅಡಗಿ ಕೂತುಕೊಂಡೆ. ಅಮ್ಮನಿಗೆ ಪಾಪ.. ಅಷ್ಟು ಕಷ್ಟ ಪಟ್ಟು ಮಾಡಿದ ಕಡುಬು ಎಲ್ಲಾ ನಾಯಿ ತಿಂದು ಹೋಯಿತು.. ಈಗ ಪುನಹ ಇವರಿಗೆಲ್ಲ ಏನು ಮಾಡಿ ಬಡಿಸಲಿ ಅನ್ನೋ ಯೋಚನೆ,ನನಗೆ.. ಛೆ!! ನಾನು ಮರೆತು ಬಾಗಿಲು ಹಾಕದಿದ್ದರಿಂದಲೇ ಇವತ್ತು ಕಡುಬು ನಾಯಿ ಪಾಲಾಯಿತು.. ಎಂಥ ಕೆಲಸವಾಯಿತು. ಅಂತ ಮನಸ್ಸಲ್ಲೇ ದುಃಖ.ಅಜ್ಜಿಗೆ ತಿಂದ ಆ ಚಿಕ್ಕ ಕಡುಬಿನ ತುಂಡಿನ ರುಚಿ ಇನ್ನೂ ಬಾಯಲ್ಲೇ ಇದೆ.. ಏನಾಗಿ ಹೋಯಿತು ಇದು ಅಂತ ಮನಸ್ಸೆಲ್ಲ ಚುರುಚುರು.ಅಪ್ಪ ಎಂದಿನಂತೆ ಸ್ಥಿತಪ್ರಜ್ಞ.. ತಮ್ಮ-ತಂಗಿ ಇಬ್ಬರೂ ಯಾವುದೋ ಆಟದಲ್ಲಿ ಮಗ್ನರಾಗಿದ್ದರು. ಈಗ ಶೇಷಪ್ಪನ ಗೋಳಾಟ ಶುರುವಾಯಿತು., “ನೀವು ಬೇಡ ಬೇಡ ಅಂದರೂ ನಾನು ಮಾಡಿದ ತಪ್ಪಿನಿಂದಲೇ ಹೀಗಾಯಿತು.. ನೀವು ಇಷ್ಟು ಕಷ್ಟ ಪಟ್ಟು ಮಾಡಿದ್ದು ನಿಮಗೆ ತಿನ್ನಲಿಕ್ಕಾಗದೇ ಹೋಯಿತು” ಅಂತ. ನಮ್ಮ ದುಃಖದ ನಡುವೆ ಅವನನ್ನು ಸಮಾಧಾನ ಮಾಡಿ ಕಳಿಸಿದರು ಅಮ್ಮ ಮತ್ತು ಅಜ್ಜಿ.ಆಮೇಲೆ ಅಮ್ಮನಿಗೆ ನನ್ನನ್ನು ಹೊಡೆಯದೆ ಬಿಟ್ಟದ್ದು ನೆನಪಾಗಿ.. ನನ್ನನ್ನು ಹುಡುಕುವುದಕ್ಕೆ ಶುರು ಮಾಡಿದರು. ಹೊರಗೆ ಬಂದರೆ ನನಗೆ ಸರಿಯಾದ ಪೂಜೆಯಾಗುತ್ತದೆ ಅಂತ ಗೊತ್ತಿತ್ತು ನನಗೆ. ಸುಮ್ಮನೆ ಉಸಿರು ಕೂಡ ಆಡದೆ ಕೂತೆ. ಅಮ್ಮನ ಕೋಪ ನೋಡಿ ಅಜ್ಜಿ.. ಅವಳನ್ನು ಹೊಡೆಯುವುದಿಲ್ಲ ಅಂತ ಭಾಷೆ ಕೊಡು ಅಂತ ಒಪ್ಪಿಸಿ ನನ್ನನ್ನು ಕರೆದರು.. “ಬಾ.. ನಿನಗೆ ಹೊಡೆಯುವುದಿಲ್ಲ” .. ನಾನು ಮೆತ್ತಗೆ ಹೊರಗೆ ಬಂದೆ.ಆಮೇಲೆ ಅದೇನು ತಿಂದು ಮಲಗಿದೆವೋ ಅದು ನೆನಪಿಲ್ಲ. ಮಾರನೆ ದಿನ ಶೇಷಪ್ಪ ಇನ್ನೂ ದೊಡ್ಡದಾದ ಹಣ್ಣನ್ನು ತಂದಿಟ್ಟರೂ ಯಾರಿಗೂ ಅಷ್ಟೊಂದು ಉತ್ಸಾಹವಿಲ್ಲ. ಕಡುಬನ್ನು ಮಾಡಿದರೂ ಶೇಷಪ್ಪನನ್ನು ಕರೆಯಲಿಲ್ಲ ಈ ಸಾರಿ. ಅಜ್ಜಿ ತಿಂದು ನೋಡಿ ನಿನ್ನೆಯಷ್ಟು ರುಚಿಯಾಗಿಲ್ಲ ಅಂದಾಗ ಇನ್ನೂ ಮನಸ್ಸು ಮುದುಡಿ ಹೋಯಿತು. ಅದಾದ ಮೇಲೆ ಏಷ್ಟೋ ಸಲ ಹಲಸಿನ ಹಣ್ಣಿನ ಕಡುಬು ಮಾಡಿ ತಿಂದರೂ ಆ ದಿನದ ನಾವು ತಿನ್ನದಿದ್ದ ಕಡುಬಿನಷ್ಟು ರುಚಿ ಅನ್ನಿಸಿದ್ದಿಲ್ಲ. ಮತ್ತು ಪ್ರತೀ ಸಲ ಕಡುಬು ಮಾಡಿದಾಗಲೂ ಶೇಷಪ್ಪನನ್ನು ಮತ್ತು ಆ ನಾಯಿಯನ್ನು ಇಂದಿಗೂ ನೆನಸುತ್ತೇನೆ. **********************************************

ಲಲಿತ ಪ್ರಬಂಧ Read Post »

ಇತರೆ

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ ಕಾಲಿಟ್ಟಾಯಿತು. ಇನ್ನು ಮಾತಾಡುವುದು ಕಷ್ಟ ಇವರೆದುರಿಗೆ , ನಿಮ್ಮದು ಯಾವಾಗಲೂ ಇದ್ದದ್ದೆ ಪಿಟಕಾಯಣ ಅನ್ನುತ್ತಾರೆ ಅಂತ,  ಅವಳಿಗೆ ಅಂದೆ ” ನಾಳೆ ಮಾತಾಡ್ತೇನೆ ಆಯ್ತಾ”. “ಯಾರದು ರತ್ನಾಕರ?” ಇವರು ಕೇಳಿದರು. ನಾನು ಮನಸ್ಸಿನಲ್ಲೇ,. ರತ್ನಾಕರನ ಬಗ್ಗೆ ಅಂದಿದ್ದು ನನ್ನ ತಂಗಿಗೆ ಕೇಳಿಸಿತ್ತೋ ಇಲ್ಲವೋ ಆದರೆ ಇವರಿಗೆ ಹೇಗೆ ಕೇಳಿಸಿತಪ್ಪ..? ಅಂದುಕೊಂಡು.. ಹಿಹಿ ಇಲ್ಲಪ್ಪ ರತ್ನಕ್ಕ ಅಂತ ಅಂದಿದ್ದು  ಅಂದೆ. ಏನೋ ಸುಮ್ಮನಾದರು. ನಾನು ಮಾತ್ರ ಆವತ್ತು ಇಲ್ಲಿರಲಿಲ್ಲ.. ಮನಸ್ಸೆಲ್ಲ ಸಾಲೆತ್ತೂರೆಂಬ ಚಂದದ ಊರು .. ರತ್ನಾಕರ , ಅವನ ಮುಗ್ಧ ನಗು, ಅವನ ಒಡನಾಟ ಇದನ್ನೇ ಯೋಚಿಸುತ್ತಿತ್ತು. ರತ್ನಾಕರ ನನಗಿಂತ ಒಂದು ವರ್ಷ ಚಿಕ್ಕವನು.. ತುಂಬ ಒಳ್ಳೆಯ ಪಾಪದ ಹುಡುಗ. ಆ ಊರಲ್ಲಿದ್ದ ಒಂದೇ ಶಾಲೆಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ಹೋಗುವುದು ಬರುವುದು. ಕುಂಟಲ ಹಣ್ಣು, ಕೇಪಳ ಹಣ್ಣು  ತಿನ್ನಲು ಕಲಿಸಿದ್ದೇ ರತ್ನಾಕರ. ಹಸಿ ಗೇರುಬೀಜಗಳನ್ನು ಒಟ್ಟು ಮಾಡಿ ಒಣಗಿದ ಎಲೆಗಳ ನಡುವೆ ಇಟ್ಟು ಬೆಂಕಿ ಹಾಕಿ ಸುಟ್ಟು ತಿನ್ನೋಣ ಎಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದ, ಏನೋ ಸಾಧಿಸುವವರಂತೆ ನಾವೆಲ್ಲ ಸೇರಿ ಸಾಹಸ ಮಾಡುವಾಗ ಗೇರುಬೀಜವೊಂದು ಸಿಡಿದು ಅದರ ಎಣ್ಣೆ ನನ್ನ ಕೈಗೆ ಹಾರಿ ಕಪ್ಪನೆಯ ಬೊಬ್ಬೆ ಬಂದಿದ್ದು.. ಅದರ ಕಲೆ ಇನ್ನೂ ಇದೆ. ಸಾಲೆತ್ತೂರಿನಲ್ಲಿ ನಾವಿದ್ದದ್ದು ಒಂದೇ ವರುಷವಾದರೂ ಈ ಇಡೀ ಜನ್ಮಕ್ಕಾಗುವಷ್ಟು ನೆನಪುಗಳು ಮೆರವಣಿಗೆ ಕಟ್ಟಿಕೊಂಡು ಧಾಪುಗಾಲು ಹಾಕುತ್ತ ಬರುತ್ತವೆ. ಸವಿ ಸವಿ ನೆನಪುಗಳು. ಅಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ, ಬಾವಿಯಿಂದಲೇ ಸೇದಿ ತರಬೇಕು. ಅದಕ್ಕಾಗಿ ಒಬ್ಬ ಆಳನ್ನು ಗೊತ್ತು ಮಾಡಿದ್ದರು ಅಪ್ಪ. ಆದರೆ ಅಮ್ಮನಿಗೆ ಅಡುಗೆಗೆ ಮತ್ತು ಕುಡಿಯಲು ತಾನೇ ಸೇದಿ ತರಬೇಕಿತ್ತು. ನಾನೂ ಅಮ್ಮನ ಹಿಂದೆ ಮುಂದೆ ಸುತ್ತುತ್ತಿದ್ದೆ ಬಾವಿಯ ಹತ್ತಿರ. ನನಗೆ ಬರಿಯ ಹನ್ನೊಂದು ವರ್ಷ ಆವಾಗ. ಹಾಗೊಂದು ದಿನ ಯಾರೋ ನೆಂಟರು ಬಂದಿದ್ದರು ಅಮ್ಮ ಅವರಿಗೆ ಕುಡಿಯಲು ನೀರು ಕೊಡುತ್ತ ನಮ್ಮ ಬಾವಿಯ ನೀರು ತುಂಬ ರುಚಿ., ಬಾವಿಯಿಂದ ಸೇದಿದ ಕೂಡಲೇ ಕುಡಿಯಬೇಕು ಅಮೃತವೇ ಅಂತೆಲ್ಲ ಹೊಗಳುವಾಗ.., ನಾನು ಯಾಕೆ ಈಗ ಹೋಗಿ ಬಾವಿಯಿಂದ ನೀರು ತರಬಾರದು..? ಅಮ್ಮ ಹೇಗೂ ಅವರ ಹತ್ತಿರ ಮಾತಾಡುತಿದ್ದಾರಲ್ಲ ಎಂದುಕೊಂಡು ಮೆತ್ತಗೆ ಕೊಡಪಾನ (ಬಿಂದಿಗೆ) ತೆಗೆದುಕೊಂಡು ಬಾವಿಯ ಹತ್ತಿರ ಹೋದೆ. ಅಮ್ಮ ಮಾಡಿದ ಹಾಗೆ ಹಗ್ಗದ ಕುಣಿಕೆಯನ್ನು ಕೊಡದ ಕತ್ತಿಗೆ ಸುತ್ತಿ ಎಳೆದೆ. ಅಮ್ಮನ ಜತೆ ಬಂದಾಗ ಒಂದೊಂದು ಸಲ ಇಷ್ಟು ಮಾಡಿ ನಿಧಾನಕ್ಕೆ ಬಾವಿಯೊಳಗೆ ಕೊಡವನ್ನು ಇಳಿಸುವ ಕೆಲಸ ಮಾಡುತ್ತಾ ಇದ್ದೆ. ಹಾಗಾಗಿ ಆ ಕೆಲಸ ಸುಲಭವಾಗಿ ನಡೆಯಿತು. ಕೊಡ ತುಂಬಿತು. ಇನ್ನೇನು ಎಳೆದರೆ ಆಯಿತು ಎಂದುಕೊಂಡು ಬಾವಿಕಟ್ಟೆಯಲ್ಲಿ ಕಾಲಿಡುವ ತ್ರಿಕೋಣಾಕಾರದ ಸಂಧಿಯಲ್ಲಿ ಕಾಲಿಟ್ಟು ಹಗ್ಗವನ್ನು ಎಳೆಯಲು ನೋಡಿದರೆ.. ಯ್ಯಪ್ಪಾ….!!! ಈಗೇನು ಮಾಡುವುದು…? ಹಗ್ಗ ಬಿಟ್ಟರೆ ಸೊಂಯ್ಯೆಂದು ಸೀದಾ ಬಾವಿಯೊಳಗೆ ಎಂಬುದು ಗೊತ್ತಿತ್ತು. ಏನು ಮಾಡುವುದಪ್ಪ ಈಗ…..??? ಅಲ್ಲಿಯೇ ಬಾವಿಯ ಪಕ್ಕದ ತಗ್ಗಿನಲ್ಲಿ ಮನೆ ರತ್ನಾಕರನದ್ದು… ಯೇ ರತ್ನಾಕರ ಅಂತ ಕೂಗಿದ್ದು ನನಗೇ ಕೇಳಿಸಲಿಲ್ಲ. ಪುನಹ ಜೋರಾಗಿ “ರತ್ನಾಕರ ……….” ಅಂದಾಗ “ಏನು?” ಅಂದಿದ್ದು ಕೇಳಿಸಿತು. “ಇಲ್ಲಿ ಬಾರಾ ಸ್ವಲ್ಪ” ಅಂದೆ. “ಎಲ್ಲಿಯಾ?” ಅಂದ. ಬಾವಿಯ ಹತ್ತಿರ ಅನ್ನುವುದರೊಳಗೆ.. ಒಂದೇ ಹಾರಿಗೆ ಬಂದ ರತ್ನಾಕರ ..ಪಾಪ! ಅವನಿಗೆ ನನ್ನನ್ನು ನೋಡಿ ನಗು. ಅವನ ನಗು ನೋಡಿ ನಂಗೆ ಕೋಪ ಬಂತು ..”ಬಾ ಹಗ್ಗ ಎಳಿ” ಅಂದೆ. “ನೀ ಯಾಕೆ ದೊಡ್ಡ ಜನದ ಹಾಗೆ ಬಂದದ್ದು? ” ಅಂದ. “ಯಾರಿಗೂ ಗೊತ್ತಿಲ್ಲ ನಾನು ಬಂದದ್ದು” ನಾನು ಹೇಳಿದೆ. ಸರಿ.. ಆದರೆ ನಂಗೆ ಕೂಡ ಒಬ್ಬನಿಗೆ ಹಗ್ಗ ಎಳೆಯುವುದಕ್ಕೆ ಆಗ್ಲಿಕ್ಕಿಲ್ಲ .. ಒಂದು ಕೆಲಸ ಮಾಡುವ.. ನೀನು ಹಗ್ಗ ಗಟ್ಟಿ ಹಿಡಕೊಂಡು ನಿಲ್ತಿಯಾ? ಅಂದ. ಹೂಂ… ಅಂದೆ. ಅವನು ಎಳೆದ, ನಾನು ಹಿಡಿದೆ… ಹಾಗಂತ ಅಂದುಕೊಂಡೆ..!! ಆದರೆ ಹಗ್ಗ ಸುಂಯ್…. ಎಂದು ಪುನಹ ಹಿಂದಕ್ಕೆ ಹೋಯಿತು. ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ದೊಡ್ಡವರನ್ನು ಕರೆಯೋಣ ಎಂದರೆ ಅವರಿಂದ ಬಯ್ಯಿಸಿಕೊಳ್ಳುವುದು ಯಾರು? ರತ್ನಾಕರನಿಗೆ ಒಂದು ಪ್ಲಾನ್ ಹೊಳೆಯಿತು ಎಂದು ಕಾಣುತ್ತದೆ… ಹಹ್ಹಹ್ಹಾ ಅಂತ ನಗುತಿದ್ದ. ನಾವಿಬ್ಬರೂ ಹಗ್ಗ ಹಿಡಿದುಕೊಂಡೇ ನಿಂತಿದ್ದೆವಲ್ಲ..? “ಏನು?” ಅಂದೆ. “ನೋಡು ನಾನು ಹಗ್ಗ ಎಳೆದುಕೊಂಡೇ ಅಲ್ಲಿವರೆಗೆ ಹೋಗ್ತಾ ಇರುತ್ತೇನೆ. ಕೊಡ ಮೇಲೆ ಬಂದಾಗ ಅದನ್ನು ಎತ್ತಿ ಕಟ್ಟೆ ಮೇಲೆ ಇಡುವುದು ನಿನ್ನ ಕೆಲಸ. ಆಗಬಹುದಾ?” ಎಂದ. ಆಗಬಹುದು ಅಂದೆ. ಅವನು ಗತ್ತಿನಿಂದ ಕಳೆದ ವಾರವಷ್ಟೇ ಸಾಲೆತ್ತೂರಿನ ಮೈದಾನದಲ್ಲಿ ನಡೆದ ಬಯಲಾಟದಲ್ಲಿ ಬಂದ ಭೀಮ ಗದೆಯನ್ನು ಹಿಡಿದುಕೊಂಡ ಹಾಗೆ ಬಾವಿಯ ಹಗ್ಗವನ್ನು ಹೆಗಲ ಮೇಲೆ ಇಟ್ಟುಕೊಂಡು ಆ ಕಡೆ ತಿರುಗಿ ಬೀಮನ ಹಾಗೆಯೇ ನಡೆದುಕೊಂಡು ಹೋಗುತಿದ್ದ. ನಾನು ಖುಷಿಯಿಂದ ಅವನನ್ನೇ ನೋಡುತ್ತ ನಗುತ್ತ ನಿಂತುಬಿಟ್ಟೆ. ಅವನು ಅಲ್ಲಿಂದಲೇ “ಬಂತಾ?” ಅಂತ ಕೇಳಿದ ಜೋರಾಗಿ. ನಾನು ತಿರುಗಿ ನೋಡುವಾಗ ಬಿಂದಿಗೆ ರಾಟೆಯ ಹತ್ತಿರ ಇದೆ.. ಹೇಯ್ ಎಂದೆ.. ಅವನು ಗಾಬರಿಯಾಗಿ ತಿರುಗುವುದರೊಳಗೆ.. ಹಗ್ಗ ಸರಸರನೇ ಸೀದಾ ಬಾವಿಯ ಒಳಗೆ.. ಈಗ ಹಗ್ಗದ ಈ ತುದಿಯ ಗಂಟು ರಾಟೆಯ ಹತ್ತಿರ. ಕಷ್ಟ ಪಟ್ಟು ಆ ಗಂಟನ್ನು ಹಿಡಿದು ಎಳೆಯಲು ನೋಡಿದರೆ ಹಗ್ಗ ಸಲೀಸಾಗಿ ಬರ್ತಾ ಇದೆ… ಬಾವಿಯ ಒಳಗೆ ಇಣುಕಿದೆವು ಇಬ್ಬರೂ…. ಕೊಡವಿಲ್ಲ ..!! ದೇವರೇ ಏನಪ್ಪ ಮಾಡುವುದು ಈಗ…? ನಂಗೆ ಭಯ, ಇವನೇನಾದರೂ ಓಡಿ ಹೋದರೆ ನಾನೊಬ್ಬಳೇ ಬಯ್ಯಿಸಿಕೊಳ್ಳಬೇಕಲ್ಲ. ಅವನೂ ಸ್ವಲ್ಪ ಭಯ , ಸ್ವಲ್ಪ ಕೋಪದಲ್ಲಿ “ನಿಂಗೆ ಹೇಳಿದೆ ನಾನು ದೊಡ್ಡವರನ್ನು ಕರೆಯೋಣ ಅಂತ.” … ” ನೀನ್ಯಾವಾಗ ಅಂದೆ ಹಾಗಂತ?” ಸ್ವಲ್ಪ ಜೋರಾಗೇ ಕೇಳಿದೆ. ನಮ್ಮ ಮಾತುಕತೆ ಕೇಳಿಯೋ ಏನೋ ರತ್ನಾಕರನ ಅಮ್ಮ ಬಾವಿಯ ಹತ್ತಿರ ಬಂದರು. “ಸತ್ತೇ….” ಅಂತ ಒಂದೇ ಉಸಿರಿಗೆ ರತ್ನಾಕರ ಎಲ್ಲಿ ಹಾರಿ ಹೋದನೋ ಗೊತ್ತಾಗಲಿಲ್ಲ. ನಾನು ನಡುಗುತ್ತ ಹೆದರುತ್ತ ಅವರ ಹತ್ತಿರ ಹೇಳಿದೆ.. ಹೀಗೆ ಹೀಗೆ ಮಾಡಿದೆವು.. ಹೀಗೆ ಹೀಗೆ ಆಯಿತು ಅಂತ. ಅವರು “ನಿಂಗೆ ಉಂಟು ಇವತ್ತು ಅಮ್ಮನಿಂದ ಪೂಜೆ” ಅಂತ ನಗುತ್ತ ಹೇಳುವಾಗ.. ನನಗೆ ಅಳು ತಡೆಯದೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಅವರ ಗಂಡ ಆಚಾರಿಯನ್ನು ಕರೆದು… “ಇಗಾ… ಆ ಗರುಡ ಪಾತಾಳ (ಪಾತಾಳ ಗರಡಿ) ತೆಗೆದುಕೊಂಡು ಬನ್ನಿ ಇಲ್ಲಿ ಸ್ವಲ್ಪ” ಅಂದರು. ಅವರು ಆದಷ್ಟು ನಿಧಾನವಾಗಿ  ಕೈಯಲ್ಲಿ ಏನೋ ಹಿಡಿದುಕೊಂಡು ಬರುತಿದ್ದರು. ನಂಗೆ “ಅವರು ಏನು ತರಲು ಹೇಳಿದ್ದಿರಬಹುದು…? ಈಗ ಕೊಡವನ್ನು ಹೇಗೆ ತೆಗೆಯುತ್ತಾರಪ್ಪ? ಆದಷ್ಟು ಬೇಗ ಮನೆಯಲ್ಲಿ ಗೊತ್ತಾಗುವ ಮೊದಲೇ ತೆಗೆಯಬಾರದಾ? ” ಅಂತೆಲ್ಲ ಅನಿಸಲಿಕ್ಕೆ ಶುರುವಾಯಿತು. ಆಚಾರಿಯವರು ಕೂಡ.. “ಏನು ಅಮ್ಮ…. ಸಧ್ಯ ನೀವೆ ಬಾವಿಯೊಳಗೆ ಬೀಳಲಿಲ್ಲವಲ್ಲ ” ಅಂತ ಕೇಳುತ್ತ.. 3-4 ಕೊಕ್ಕೆಗಳಿರುವ ಒಂದು ಸಾಧನವನ್ನು ನಿಧಾನವಾಗಿ ಬಾವಿಕಟ್ಟೆ ಮೇಲಿಟ್ಟು ಹಗ್ಗವನ್ನು ಅದಕ್ಕೆ ಗಟ್ಟಿಯಾಗಿ ಕಟ್ಟಿ ಬಾವಿಯೊಳಗೆ ಬಿಟ್ಟರು. ಠಣ್… ಎಂದು ಸದ್ದಾಯಿತು. ಸ್ವಲ್ಪ ಪ್ರಯತ್ನದ ನಂತರ ಆಚಾರಿಯವರು ಹಗ್ಗ ಮೇಲೆ ಎಳೆದಾಗ ಆ ಕೊಕ್ಕೆಗಳು ಕೊಡದ ಬಾಯಿಯ ಒಳಗೆ ಸಿಕ್ಕಿಕೊಂಡಿದ್ದವು.  ಕೊಡವನ್ನು ಮೇಲಕ್ಕೆ ಎಳೆದು ತೆಗೆದುಕೊಟ್ಟು ಇನ್ನೊಂದು ಸಲ ಬರ್ತೀರಾ ಅಮ್ಮ ನೀರು ಸೇದಲಿಕ್ಕೆ? ಅಂತ ರತ್ನಾಕರನ ಅಮ್ಮ ತಮಾಷೆ ಮಾಡಿದರು. “ಈಗ ನೀವೆ ಒಂದು ಸಲ ನೀರು ಎಳೆದು ಕೊಡಿ” ಎಂದೆ. ಅವರು ಮನೆಯವರೆಗೆ ತಂದು ಕೊಡುತ್ತೇನೆ ಅಂತ ಹೇಳಿದರೂ ಕೇಳದೆ ನಾನೇ ಕಷ್ಟಪಟ್ಟು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಹೋದೆ. ಅಮ್ಮನಿಗೆ ಆಶ್ಚರ್ಯ… ಜತೆಗೆ ಖುಷಿ. “ಓ… ನನ್ನ ಮಗಳು ಭಾರಿ ಜಾಣೆ ” ಎಂದರು. ನನಗಷ್ಟೆ ಸಾಕು. ಎಲ್ಲ ಮರೆತು ಹೋಯಿತು. ಹೀಗೆ ಇನ್ನೂ ತುಂಬಾ ನೆನಪುಗಳು ದಬದಬನೇ ಬಂದು ಬಿದ್ದಾಗ.. ಯಾವಾಗ ದಸರಾ ರಜ ಬರುತ್ತದೋ… ಯಾವಾಗ ಊರಿಗೆ ಹೋಗ್ತೇವೋ ಅನ್ನಿಸಲಿಕ್ಕೆ ಶುರುವಾಯ್ತು. ಮಕ್ಕಳ ಪರೀಕ್ಷೆಗಳು ಮುಗಿದು, ರಜ ಶುರುವಾದಕೂಡಲೇ ೪-೫ ದಿನದ ಮಟ್ಟಿಗೆ ಊರಿಗೆ ಹೊರಟೆವು. ಎರಡನೇ ದಿನವೇ ನಮ್ಮ ಪ್ಲಾನ್ ಪ್ರಕಾರ ಸಾಲೆತ್ತೂರಿಗೆ ಪ್ರಯಾಣ..  ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತ ದಾರಿ ಸಾಗುತಿತ್ತು. ಮಂಚಿ, ಕುಕ್ಕಾಜೆ ದಾಟಿ ಸಾಲೆತ್ತೂರಿನ ಮೈದಾನವೂ ಬಂತು. ಅಲ್ಲಿಂದ ಕೆಳಗೆ ಇಳಿದರೆ ನಾವಿದ್ದ ರೋಡು. ಎಲ್ಲವೂ ಬದಲಾಗಿದೆ. ಒಂದರದ್ದೂ ಗುರುತು ಸಹ ಸಿಗುತ್ತಿಲ್ಲ. ಬ್ಯಾಂಕ್ ಕಟ್ಟಡವೂ ಬೇರೆಯಾಗಿದೆ. ನಾವಿದ್ದ ಮನೆಯ ಜಾಗದಲ್ಲಿ ಎರಡು ಮಹಡಿಗಳ ತಾರಸಿ ಮನೆ. ಶಾಲೆಯ ಹತ್ತಿರ ಹೋದರೆ ಚಿಕ್ಕದಾಗಿದ್ದ ನಮ್ಮ ಶಾಲೆ ಈಗ ತುಂಬ ದೊಡ್ಡದಾಗಿ ಚಂದದ ತೋಟ ಎಲ್ಲವೂ ಇತ್ತು.. ಆದರೆ ನಮ್ಮ ನೆನಪಿನ ಗುರುತುಗಳು ಒಂದೂ ಇಲ್ಲದೆ ಬಹಳ ಬೇಜಾರಾಯ್ತು. ಸರಿ … ರತ್ನಾಕರನೂ ಬದಲಾಗಿರಬಹುದು ಅನಿಸಿತು. ಹಾಗೆ ಪುನಹ ನಾವಿದ್ದ ಮನೆಯ ಹತ್ತಿರ ಬಂದು ರತ್ನಾಕರನ ಮನೆಯ ಹತ್ತಿರ ಕಾರು ನಿಲ್ಲಿಸಿದ ಕೂಡಲೇ ಅಲ್ಲಿಯೇ ಇದ್ದ ವಯಸ್ಸಾಗಿದ್ದ ಗಂಡಸು ಕಣ್ಣಿಗೆ ಕೈ ಅಡ್ಡ ಇಟ್ಟು ಯಾರು….. ? ಅನ್ನುವ ಹಾಗೆ ನಮ್ಮನ್ನು ನೋಡುತ್ತಾ ನಿಂತರು. ನಮ್ಮ ಗುರುತು ಹೇಳಿದ ಕೂಡಲೆ ಅವರಿಗಾದ ಸಂತಸ ಅವರ ಮುಖದಲ್ಲಿ ಕಂಡು .. ಇವರಾದರೂ ಹಾಗೇ ಇದ್ದಾರಲ್ಲ.. ಎಂದು ಮನಸ್ಸಿಗೆ ಹಾಯೆನಿಸಿತು. ಅವರು ರತ್ನಾಕರನ ಅಪ್ಪ. ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದರು.. ಅವರಿಗೂ ಸ್ವಲ್ಪ ವಯಸ್ಸಾಗಿತ್ತು. ನಮ್ಮನ್ನೆಲ್ಲ ನೋಡಿ ಅವರಿಗೆ ಖುಷಿಯೊ ಖುಷಿ. ಅಮ್ಮ ಹೋದರೆಂದು ಕೇಳಿ ತುಂಬಾ ದುಃಖ ಪಟ್ಟರು. ರತ್ನಾಕರನ ಬಗ್ಗೆ ವಿಚಾರಿಸಿದಾಗ ಅವನು ವಿಶ್ವಕರ್ಮ ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದಾನೆ ಎಂದು ಕೇಳಿ ನಮಗೂ ಖುಷಿ ಆಯ್ತು. ಅವನಿಗೆ ಒಳ್ಳೆಯ ಹೆಂಡತಿ ಮತ್ತು ಮುದ್ದಾದ 2 ಮಕ್ಕಳು. ಮನಸ್ಸಿಗೆ ನೆಮ್ಮದಿ ಅನಿಸಿತು. ಹಾಗೆ ಹೀಗೆ ಮಾತಾಡಿ, ಅವರು ಪ್ರೀತಿಯಿಂದ ಕೊಟ್ಟಿದನ್ನು ತಿಂದು ಹೊರಟೆವು. ಅರ್ಧ ದಾರಿಗೆ ಬಂದ ಮೇಲೆ ನೆನಪು….. ಛೆ!!!!!! ಅವನ ಫೋನ್ ನಂಬರ್ ಆದ್ರೂ ಕೇಳಬೇಕಿತ್ತಲ್ಲ… ಅಥವ ನಮ್ಮ ನಂಬರ್ ಆದ್ರೂ ಕೊಟ್ಟು ಬರಬೇಕಿತ್ತು. ನನ್ನ ತಲೆ ಎಲ್ಲಿ ಬಾಡಿಗೆಗೆ ಕೊಟ್ಟಿದ್ದೆನೋ ಇನ್ನೂ ನೆನಪಿಗೆ ಬರುತ್ತಿಲ್ಲ.

ಲಲಿತ ಪ್ರಬಂಧ Read Post »

ಇತರೆ

ಲೀಲಾ ಕಲಕೋಟಿ ಎರಡು ಬರಹಗಳು

ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ ಕುಂತು ಕಣ್ಣುಗಳಿಂದ ಮಾತಿಗಿಳಿದಿದ್ದೆ …..! ಸುಮ್ಮನೆ ಏಳು ಸುತ್ತಿನ ಸುರಳಿಯಬಿಚ್ಚುತ ಮೆಲ್ಲನೆಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ….?ಹಸಿರೆಲೆ ರಾಶಿಯಲಿಹುದುಗಿದಿ ಕಡೆದಬೆಣ್ಣೆಯಂತೆ….ಮುದ್ದಾಗಿ ಎದ್ದವಳೇಕುಂತೀಯಾಕ ಸುಮ್ಮನೆ?ಓ….! ನನ್ನ ಮಲ್ಲಿಗೆ…?ಬೀಗುತ ಬಿಮ್ಮನೆಘಮ್ಮಂತ ಸೂಸುತಕಂಪನು ಹರಡುತಸೊಂಪಾಗಿ,ಗುಂಪಾಗಿಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ……?ಬೀಸುವ ತಂಗಾಳಿಗೆಕುಲಕುತ ಬಳಕುತಮುದನೀಡಿ ಮನಕೆಮಂದಗಮನಿಯಂತೆಕುಂತೀಯಾಕ ಸುಮ್ಮನೆ?ಓ….!ನನ್ನ ಮಲ್ಲಿಗೆ….? ****************************

ಲೀಲಾ ಕಲಕೋಟಿ ಎರಡು ಬರಹಗಳು Read Post »

ಇತರೆ

ಮುನಿಸೇತಕೆ ಈ ಬಗೆ

ಮುನಿಸೇತಕೆ ಈ ಬಗೆ ಸ್ಮಿತಾ ರಾಘವೇಂದ್ರ ಮಳೆ ಇಲ್ಲದೇ ಬದುಕು ಸಾಗುತ್ತದಾ ಜೀವ ಉಳಿಯುತ್ತದಾ, ಬೆಳೆ ಬೆಳೆಯುತ್ತದಾ? ಇವೆಲ್ಲ ಕಾಲ ಕಾಲಕ್ಕೆ ತಕ್ಕಂತೆ ಆಗುತ್ತಿದ್ದರೇ ಚಂದ. ಕೋಪ ಯಾಕೆ ಬರುತ್ತದೆ ಹೇಳು ತಪ್ಪು ಮಾಡಿದಾಗ ತಾನೇ. ಪ್ರಕೃತಿ ಕೋಪಿಸಿಕೊಳ್ಳಲೂ ಸಕಾರಣವಿರುತ್ತದೆ. ನೀರು, ವಾಯು,ಅಗ್ನಿ, ಶಿವನ ಮೂರು ಕಣ್ಣುಗಳು.  ಎಲ್ಲಿ ಯಾವುದು ಬೇಕು ಹೇಗೆ ತರೆದು ಕೊಳ್ಳಬೇಕು ಎಂಬುದು ಆ ಶಿವನೇ ನಿರ್ಧರಿಸುತ್ತಾನೆ. ಪ್ರಕೃತಿ ಮಾತೆ ಎಷ್ಟೊಂದು ನೋವಿಗೆ ಒಳಗಾಗಿದ್ದಾಳೆ. ಕ್ರೂರ ಕೈಗಳ ನಡುವೆ ನುಲುಗಿ ಹೋಗಿದ್ದಾಳೆ. ಕಿತ್ತು ತಿನ್ನುವ ದುರುಳರು ಇಂಚಿಚೂ ಬಿಡೆದೇ ಕಬಳಿಸಿ ಬಿಟ್ಟಿದ್ದಾರೆ. ನಮ್ಮದಲ್ಲದ ಭೂಮಿಯಲ್ಲಿ ನಮ್ಮದೇ ಮಹಲು ಕಟ್ಟಿ ಬೀಗುವಾಗ, ಸಾಕು ಸಹನೆ ಎಂದು ಸ್ವಲ್ಪವೇ ಸ್ವಲ್ಪ ಕೊಸರಾಡುತ್ತಾಳೆ ಭೂಮಿ ತಾಯಿ ಅಷ್ಟೇ.. ಪ್ರಕೃತಿ ಮಾತೆಗೆ  ನಿನ್ನ ಸಮತೋಲನವನ್ನು ನೀನೇ ಕಾಪಾಡಿಕೋ ಎಂದು ಆ ಶಿವ ಸೃಷ್ಟಿಯ ಆರಂಭದಲ್ಲೇ ಹೇಳಿಬಿಟ್ಟಿದ್ದಾನೆ, ಹೆಣ್ಣಿಗೂ ಅಷ್ಟೇ…  ನಿ‌ನ್ನಿಂದಲೂ ಅಗದೇ ಹೋದಾಗ ನಾನು ನಿನ್ನ ಸಹಾಯಕನಾಗಿ ಬರುತ್ತೇನೆ ಯಾವುದಾದರೂ ರೂಪದಲ್ಲಿ ಎಂದಿದ್ದಾನೆ.  ಇವೆಲ್ಲ ದೈವ ಸೃಷ್ಟಿಯ ಗುಟ್ಟು. ಎಂದು ತಾತ ತನ್ನ ಪುಟ್ಟ ಮೊಮ್ಮಗಳನ್ನು ಎದುರು ಕುಳ್ಳಿರಿಸಿಕೊಂಡು ಪಾಠದಂತೆ ಹೇಳುತ್ತಿದ್ದರು. ಅವಳಿಗೆ ಎಷ್ಟು ಅರ್ಥವಾಯಿತೋ ಬಿಟ್ಟಿತೋ, ತನ್ನ ಪುಟಾಣಿ ತಲೆಯಲ್ಲಿ ಕಟ್ಟಿದ ಎರಡು ಚೋಟು ಜಡೆಗಳನ್ನು ಅಲ್ಲಾಡಿಸುತ್ತಾ ಹೌದಾ ತಾತಾ,,,ಮಳೆ ನನ್ನ ಪ್ರೀತಿಯ ಗೆಳತಿ ಎನ್ನುತ್ತ ಛಂಗನೇ ಜಿಗಿದು ತನ್ನ ಆಟದ ಮೈದಾನದತ್ತ ಸಾಗಿಯೇ ಬಿಟ್ಟಳು. ಆಗಷ್ಟೇ ದೊಡ್ಡ ಪ್ರವಾಹ ವೊಂದರಲಿ ಮಿಂದೆದ್ದ ನನಗೆ ಅವರ ಮಾತು ಬಹಳವೇ ಕಾಡ ತೊಡಗಿತು. ಎಷ್ಟು ಚಂದಗೆ ಹಾಸಿಕೊಂಡ ಹಚ್ಚ ಹಸಿರಿನ ಊರು ಮೈದುಂಬಿ ನಿಂತ ಇಳೆಯೊಡಲ ಬೆಳೆಗಳು. ಪ್ರಕೃತಿಯೇ ದೇವರೆಂದು ಪೂಜಿಸುವ ಮುಗ್ಧ ಜನರು. ಭೂಮಿ ತಾಯಿಯ ಸೇವೆಯಲ್ಲಿ ಸದಾ ಸನ್ನದ್ದರು. ಆಧುನಿಕ ಬದುಕಿನ ಗೊಡವೆಯೇ ಬೇಡವೆಂದು ತಮ್ಮದೇ ಗೂಡಿನ ಬೆಚ್ಚಗಿನ ಭಾವದಲಿ ಜೀವಿಸುತ್ತ ಕಾಯಕವೇ ಕೈಲಾಸವೆಂದವರು. ಆ ಒಂದು ದಿನ ಬಾರದೇ ಹೋಗಿದ್ದರೆ,? ಇಂದು ಆ  ಕೈಗಳಿಂದ ಸಾವಿರಾರು ಜನರ ತಟ್ಟೆ ತುಂಬುತಿತ್ತಲ್ಲ, ಯಾರದ್ದು ವಿಕೃತಿ ಯಾರದ್ದು ಸಂಸ್ಕೃತಿ ,ಯಾವುದು ಪಾಪ ಯಾವುದು ಪುಣ್ಯ. ಆದಿನಗಳು ನನ್ನ ಮನದೊಳಗೆ ಮೆಲ್ಲನೇ ಚಲಿಸ ತೊಡಗಿದವು. ದಿನದಿನಕ್ಕೂ ಧಾರಾಕಾರವಾಗಿ ಸುರಿದ ಮಳೆ  ಜನ ಜೀವನವನ್ನು ಅಸ್ತವ್ಯಸ್ತ ಗೊಳಿಸುವಲ್ಲಿ ದಾಪುಗಾಲಿಡುತ್ತ ಸಾಗಿತ್ತು. ಊರು ಅಕ್ಷರಶಃ ಜಲಸಮಾಧಿ ಸ್ಥಿತಿಯಲ್ಲಿ ಇತ್ತು. ಯಾವಾಗ ಏನು ಸಂಭವಿಸಬಹುದು ಎಂಬ ಭಯ, ಜೀವ ಉಳಿಸಿಕೊಳ್ಳುವ ಬಗೆ ಹೇಗೆಂಬುದೇ ಯೋಚನೆ. ಸಹಾಯ ಹಸ್ತ ಎಲ್ಲರಿಗೂ ಬೇಕು. ಕೈ ಚಾಚುವವರು ಯಾರು!? ಎಲ್ಲೆಲ್ಲಿಂದಲೋ ಚಾಚಿದ ಕೈಗಳು ಕೈ ಕೈ ಸೇರಿ ಒಂದು ಸಂಕವಾಗಿ ಮಾನವೀಯತೆ ಮೆರೆಯುತ್ತಿದ್ದರೆ. ಜನ ಮಾನಸದಲ್ಲಿ ಕಲ್ಪಿಸದ ಪ್ರವಾಹವೊಂದು ಅಗಾಧ ಗುರುತು ಉಳಿಸಿ ನಡೆದೇ ಬಿಟ್ಟಿತ್ತು . ರಾತ್ರಿ ಬೆಳಗಾಗುವದರೊಳಗೆ ತನ್ನ ಕದಂಬಬಾಹುವನ್ನು ಚಾಚಿ ತನ್ನ ಕಾರ್ಯವ್ಯಾಪ್ತಿಯ ಪ್ರದೇಶಗಳನ್ನು ಪ್ರತೀ ನದಿಗಳೂ ತೋರಿಸಿದ್ದು ನಿಜ. ಆವತ್ತು ಬೆಳಕು ಹರಿಯುವ ಹೊತ್ತಿಗೆ ಬದುಕು ಮೂರಾಬಟ್ಟೆಯಾಗಿದ್ದೂ ನಿಜ. ಹರಗಿಕೊಂಡ ಬೆಳೆಗಳು ಪೇರಿಸಿಟ್ಟ ಬದುಕಿನ ಉಳಿಕೆಗಳು,ಕ್ಷಣ ಮಾತ್ರದಲ್ಲಿ ಪಳೆಯುಳಿಕೆಗಳಾಗಿದ್ದವು. ಅಲ್ಲೆಲ್ಲೋ ಸಿಕ್ಕಿ ಕೊಂಡ ನಾಯಿ ಮರಿಯೊಂದು ತನ್ನ ಒಡೆಯನಿಗಾಗಿ ಆಕ್ರಂದಿಸುತ್ತಲೇ ಇತ್ತು. ಯಾವುದೋ ಮರವೇರಿ ಕುಳಿತ ಬೆಕ್ಕು ಕಕ್ಕಾಬಿಕ್ಕಿಯಾಗಿತ್ತು. ಹಾಲನಿತ್ತು ಸಲಹಿದ ಹಸುಗಳಿಗೆ ಹಾಲಾಹಲವನೇ ಇತ್ತ ನೋವು. ಏನು ಅಂತ ಬಾಚಿ ಕೊಳ್ಳುವದು. ಇಷ್ಟು ದಿನದ ಬದುಕಿಗೆ ಜೊತೆಯಾದ ಒಂದೇ ಒಂದು ವಸ್ತುವನ್ನೂ ನಾನು ಬಿಟ್ಟು ಬರಲಾರೆ ಎಂದು ಎಪ್ಪತ್ತರ ಹರೆಯದ ವ್ಯಕ್ತಿಯೊಬ್ಬ ಮನೆಯ ಬಿಟ್ಟು ಕದಲದೇ ಕುಳಿತು ಕೊಂಡಿದ್ದನೆಂದರೆ ಅವನೊಳಗಿನ ವೇದನೆ ಊಹಿಸಲಾಗಲಿ ಧಾಖಲಿಸಲಾಗಲೀ ಆದೀತೆ? ಪುಟ್ಟ ಮಗುವೊಂದು ತನ್ನ ಆಟಿಕೆಯನ್ನು ತನ್ನ ಮನೆಯಿರುವ ಜಾಗಕ್ಕೆ ಹೋಗಿ  ಮಣ್ಣಿನಲ್ಲಿ ಕೆದರಿ ಕೆದರಿ ಹುಡುಕುತ್ತಿತ್ತು. ಶಾಲೆಯ ಅಳಿಸಿಹೋದ ಅಕ್ಷರಗಳ ಪುಸ್ತಕ ಎತ್ತಿಕೊಂಡ ಎಳೆಯ ಮುಖದೊಳಗೆ ಬದುಕೇ ಅಳಿಸಿ ಹೋದ ವೇದನೆ. ಯುದ್ದ ಮುಗಿದ ಸ್ಮಶಾನ ಮೌನ. ನದಿ ಹೊತ್ತುತಂದ ರಾಶಿ ರಾಶಿ ಕಸಗಳು, ಸೇಡು ತೀರಿಸಿಕೊಳ್ಳಲು, ಮುರಿ ತೀರಿಸಲು ಮನೆ ಬಾಗಿಲಿಗೇ ಬಂದು ಸುಂಕ ಕೇಳಿ ಹೋದಂತೆ ಭಾಸವಾಗುತ್ತಿತ್ತು. ಅದೊಂದು ದಟ್ಟವಾದ ಕಾಡು ಯಾವ ರಸ್ತೆಯೂ ಇಲ್ಲದ ನಡೆದು ನಡೆದೇ ಸವೆದ ಕಾಲುದಾರಿ.ಪ್ರಮುಖ ರಸ್ತೆಯಿಂದ ಸುಮಾರು ನಾಲ್ಕೈದು ಕಿಲೋಮೀಟರ್ ಚಲಿಸಿದ ನಂತರ ಮೂರು ನಾಲ್ಕು ಗುಡಿಸಲು ಅವರು ಆದುನಿಕ ಪ್ರಪಂಚದಿಂದ ಬಹಳ ದೂರ. ಕಾಡೇ ಅವರ ಜೀವನಾಧಾರ  ಕಾಡೇ ಭಕ್ತಿ,ಕಾಡೇ ಪ್ರೀತಿ,ಭೂತಾಯಿಗಾಗಲೀ ಪ್ರಕೃತಿ ಮಾತೆಗಾಗಲೀ ನೋವು ಮಾಡುವದು ಅಂದರೆ ಅವರಿಗೆ ಗೊತ್ತೇ ಇಲ್ಲ,ಭೂತಾಯಿಯನ್ನು ದೇವರಂತೆ ಮಕ್ಕಳಂತೆ ಸಲಹುವ ನಿರ್ಮೋಹ ಮನಸಿನವರು. ಪಕ್ಕದಲ್ಲೇ ಹರಿಯುವ ತೊರೆ ಇತ್ತು. ಇದ್ದಕ್ಕಿದ್ದಂತೆ ಬಂದ ಮಳೆಯ ಆರ್ಭಟ ಪ್ರವಾಹದಿಂದ ಎಲ್ಲ ಮನೆಗಳೂ ಜಲಸಮಾಧಿ ಯಾಗತೊಡಗಿತ್ತು. ಜೀವ ಉಳುಸಿಕೊಳ್ಳಲು ಎಲ್ಲೆಲ್ಲಿಯೋ ಬೆಟ್ಟ ಗುಡ್ಡಗಳನ್ನು ಅಲೆದು ಒಂದೆರಡು ದಿನಗಳ ನಂತರ ಒಂದು ಆಶ್ರಯಕೇಂದ್ರಕ್ಕೆ ಬಂದು ಸೇರಿಕೊಂಡರು. ಅದರಲ್ಲೊಂದು ಕುಟುಂಬ.  ಮೂರು ಮಕ್ಕಳು, ತಂದೆ,ತಾಯಿ. ಸುಮಾರು ತಿಂಗಳಿಗೂ ಹೆಚ್ಚುಕಾಲ ಆಶ್ರಯ ಕೇಂದ್ರದಲ್ಲೇ ಇರಬೇಕಾಗಿ ಬಂತು.  ಒಂದೇ ಸಮನೆ ಸುರಿವ ಮಳೆ ಯಾರ ಕಣ್ಣೀರಿಗೂ ನಿಲ್ಲಲೇ ಇಲ್ಲ. ಕಣ್ಣೀರು ಸುರಿಸುತ್ತ, ಪ್ರವಾಹ ತಗ್ಗಿದ ಮೇಲೆ ಮನೆಯ ಅವಶೇಷಗಳತ್ತ ಸಾಗಿದ ಆ ಮೂರು ಮಕ್ಕಳ ಅಸಹಾಯಕ ತಂದೆ.  ತನ್ನ ಧರ್ಪ ನಿನ್ನ ಮೇಲಿನ ಪ್ರಹಾರ ಇನ್ನೂ ಮುಗಿದಿಲ್ಲವೆಂದು,ಯುದ್ಧ ಭೂಮಿಯಲ್ಲಿ ಸೋತು ಶರಣಾಗಿ ಶಸ್ತ್ರಾಸ್ತ್ರ ತ್ಯಜಿಸಿದ ಮೇಲೂ ಹಿಂದಿನಿಂದ ಬಂದು ಆಕ್ರಮಣ ಮಾಡಿದ ದ್ರುಷ್ಟದ್ಯುಮ್ನ ನಂತೆ, ಮನೆಯ ಉಳಿದ ಅರ್ಧ ಗೋಡೆ ಅವನ ಮೈ ಮೇಲೆ ದೊಪ್ಪನೇ ಬಿತ್ತು. ಅಷ್ಟೇ ಮತ್ತೆ ಅವನು ಕಣ್ಣೀರು ಹಾಕಲೇ ಇಲ್ಲ. ಆ ಮಕ್ಕಳು ತಮ್ಮ ಅಪ್ಪನ ಹೊರಗೆ ತನ್ನಿ ಬದುಕಿಸಿ ಕೊಡಿ ಎಂದು ಕಂಡ ಕಂಡವರ ಹತ್ತಿರ ಮೌನ ಭಾಷೆಯಲ್ಲಿ ಅಂಗಲಾಚುತ್ತಿದ್ದರು. ಆಗಲೇ ಗೊತ್ತಾಗಿದ್ದು ಆ ಮಕ್ಕಳಿಗೆ ಮಾತು ಬಾರದು ಎಂದು. ಈ ದೃಷ್ಯವನ್ನು  ನೋಡಲಾಗದೇ ನಾನು ಅಲ್ಲಿಂದ ಹೊರಟೇ ಹೋದೆ.  ಒಂದಿನ ಪೇಪರ್ ನಲ್ಲಿ ಸುದ್ದಿ ಪ್ರಕಟವಾಗಿತ್ತು ಆಶ್ರಯ ಕೇಂದ್ರದಲ್ಲಿ ವಾಸವಾಗಿದ್ದ  ಮಾತು ಬಾರದ ಮಕ್ಕಳ ತಾಯಿ ಕಾಯಿಲೆಗೆ ತುತ್ತಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೇ ಸಾವನ್ನಪ್ಪಿದಳು ಎಂದು .ತಕ್ಷಣ ಆ ಊರಿನ ನನ್ನ ಪರಿಚಯದವರಿಗೆ ಪೋನಾಯಿಸಿ ಕೇಳಿದೆ . ಹೌದು ತಂದೆ ಕಳೆದು ಕೊಂಡ ಅದೇ ಕುಟುಂಬ. ಮಕ್ಕಳು!?? ಎಂದೆ.   ಮಿಡಿಯಾದವರು ಊರ ಜನ ಎಲ್ಲ ಬಹಳ ಮಂದಿ ಬಂದಿದ್ರು,ಯಾರೋ ಕರ್ಕೊಂಡು ಹೋದರು. ಮಕ್ಕಳನ್ನು ನಾವು ನೋಡಿಕೊಳ್ತೀವಿ ಅಂತ ಅಂದರು. ಏನು ಮಾಡ್ತಾರೋ ಗೊತ್ತಿಲ್ಲ ಪಾಪ,, ಅವನ ಮಾತಲ್ಲಿ ದುಗುಡವಿತ್ತು.ಮಾತು ಒಬ್ಬರಿಗೂ ಬರಲ್ಲ ಮೆಡಮ್ ಅನ್ನುತ್ತಿದ್ದರೆ, ಭಾರವಾದ ಮನಸಿಂದ ಪೋನ್ ಇಟ್ಟೆ,  ಯಾರ ಪಾಪಕ್ಕೆ ಯಾರಿಗೆ ಶಿಕ್ಷೆ.  ನೇರವಾಗಿ ತಪ್ಪಿತಸ್ತನಿಗೇ ಶಿಕ್ಷೆ ಕೊಡುವ, ಅಧರ್ಮ ಸಂಭವಿಸುವಲ್ಲೇ ಧರ್ಮ ಎತ್ತಿಹಿಡಿಯುವ ಕೆಲಸ  ಆ ದೇವರು ಎಂದು ಮಾಡುತ್ತಾನೋ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ನೀಡುವುದು ದೇವರ ಕಟಕಟೆಯಲ್ಲೂ ಮುಗಿದು ಹೋಗಲಿ.  ಮತ್ತೆ ಆ ದೇವರಲ್ಲೇ ಪ್ರಾರ್ಥಿಸಿದೆ.. ಯಾಕೋ ಆ ಪುಟ್ಟ ಮಗುವಿಗೆ ತಾತ ಹೇಳುತ್ತಿದ್ದ ವೇದಾಂತ ಬರೀ ವೇದಾಂತವಾಗಿಯೇ ಕಂಡಿತು.  ಆ ಕ್ಷಣಕ್ಕೆ..

ಮುನಿಸೇತಕೆ ಈ ಬಗೆ Read Post »

ಇತರೆ

ಇತರೆ

ಎಚ್ ಎನ್ ರವರ ಸರಳತೆ ಮತ್ತು ಸಾಮಾಜಿಕ ಚಿಂತನೆ. ನಾಡು ಕಂಡ ಅಪರೂಪದ ಧೀಮಂತ ಸಜ್ಜನ ವ್ಯಕ್ತಿ,ಅಧ್ಯಾಪಕ, ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ಪ್ರಗತಿಪರವಿಚಾರವಾದಿ, ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ,ರಾಷ್ಟ್ರೀಯವಾದಿ,ಖಾದಿ ಬಟ್ಟೆಯನ್ನೇ ಕೊನೆಯವರೆಗೂ ಧರಿಸುತ್ತಿದ ಮೇಧಾವಿ,ಬದುಕಿನೂದ್ದಕ್ಕೂ ಸರಳತೆ ಜೀವನಸಾಗಿಸಿದ ಸಾಧಕ. ಕಡು ಬಡತನದ ನಡುವೆಯೂ ಬದುಕನ್ನು ತಮ್ಮ ಇಷ್ಟದಂತೆ ಕಟ್ಟಿಕೊಂಡು ಬೆಳೆದಕರುಣಾಮೂರ್ತಿ ಡಾ.ಎಚ್.ನರಸಿಂಹಯ್ಯನವರು. ದಟ್ಟ ದಾರಿದ್ರ್ಯದ ಮಧ್ಯೆಯೂ ತನ್ನಲ್ಲಿ ಅಂತರ್ಗತವಾಗಿದ್ದ ಪ್ರತಿಭೆಯ ಮೂಲಕ ವ್ಯಕ್ತಿಯೋರ್ವ ಎಂಥ ಎತ್ತರಕ್ಕೆ ಬೆಳೆದು ನಿಲ್ಲಬಹುದೆನ್ನುವುದನ್ನು ಜಾಗತಿಕ ಪ್ರಪಂಚಕ್ಕೆ ತೋರಿಸಿಕೊಟ್ಟ ಮಾಹಾಪುರುಷ.ಹಾಗಾಗಿಶಿಸ್ತು ಮತ್ತು ಸರಳತೆಗೆ ಎಚ್ಚೆನ್ ರವರು ಹೆಚ್ಚು ಆದ್ಯತೆ ನೀಡಿದವರು.ಜೊತೆಗೆ ಕರ್ನಾಟಕದ ಮೂಡಲಸೀಮೆಯ ಹುಡುಗನೊಬ್ಬ ಅಮೆರಿಕ್ಕೆ ಹೋದರೂ ಉಪ್ಪಿಟ್ಟು ತಿನ್ನುವ, ಗಾಂಧಿಟೊಪ್ಪಿಯನ್ನೇ ತೊಡುವ ಮೂಲಕ ಭಾರತದ ಹಿರಿಮೆಯನ್ನು ಕಾಪಾಡಿಕೊಂಡು ಬಂದ ಶಿಕ್ಷಣಪ್ರೇಮಿ ಎನ್ನುವುದು ನಾವ್ಯಾರು ಮರೆಯುವಂತಿಲ್ಲ.ಸರಳತೆ, ಪ್ರಾಮಾಣಿಕತೆ, ಸಮಾಜಿಕ ಚಿಂತನೆ, ಪರಿಶುದ್ಧತೆಯನ್ನು ತಮ್ಮ ಬಾಳಿನುದ್ದಕ್ಕೂ ಒಂದು ವ್ರತದಂತೆ ಕಾಯ್ದುಕೊಂಡು ಬಂದ ಎಚ್ಚೆನ್‍ರ ಬದುಕು ಇಂದಿನ ಸಮಾಜಕ್ಕೆ ಆದರ್ಶ ಮತ್ತು ಮಾರ್ಗದರ್ಶನ ಎಂಬುವುದರಲ್ಲಿ ಎರಡು ಮಾತಿಲ್ಲ ಬಂಧುಗಳೆ. ಡಾ.ಎಚ್ ಎನ್ ರವರ ಸರಳತೆ:ಡಾ.ಎಚ್ ಎನ್ ರವರ ಬದುಕಿನಲ್ಲಿ ಅವರು ಕಂಡ ನೋವು, ಸಂಕಟ, ಅನುಭವಿಸಿದ ಬಡತನ, ತಂದೆಯ ಸಾವು, ಓದಿಗಾಗಿ ಊರೂರು ಅಲೆದದ್ದು, ಬರಿಗಾಲಿನಲ್ಲಿ ನಡೆದುಕೊಂಡೆ ಬೆಂಗಳೂರು ತಲುಪಿದ್ದು, ಬದುಕಿಗೊಂದು ಹೊಸ ತಿರುವು ನೀಡಿದ ನ್ಯಾಷನಲ್ ಹೈಸ್ಕೂಲು, ಉಚಿತ ಪ್ರಸಾದ ನಿಲಯದಲ್ಲಿ ಪ್ರವೇಶ ಪಡೆಯಲು ಮಾಡಿದ ಹೋರಾಟ, ಬರೀ ನೀರು ಕುಡಿದೇ ದಿನಗಳನ್ನು ನೂಕಿದ್ದು, ಫೇಲಾದರೆ ಮತ್ತೆ ಮರಳಿ ಊರಿಗೆ ಹೋಗಬೇಕಲ್ಲ ಎನ್ನುವ ಭೀತಿಯಿಂದ ಓದಿದ್ದು, ಪ್ರತಿ ತರಗತಿಯಲ್ಲೂ ಪಟ್ಟಣದ ಹುಡುಗರಿಗೆ ಸ್ಪರ್ಧೆ ಒಡಿದ್ದು ಹೀಗೆ ಹತ್ತು ಹಲವು ಸಂಗತಿಗಳು ಅವರ ಸರಳತೆಗೆ ಸಾಕ್ಷಿಯಾಗಿದೆ. ಅವರು ಬಾಲ್ಯದಲ್ಲಿ ಅನುಭವಿಸಿದ ಕಡು ಬಡತನ ಮತ್ತು ವಿದ್ಯಾಭ್ಯಾಸಕ್ಕಾಗಿ ಮಾಡಿದ ಹೋರಾಟ ನಂತರದ ಪ್ರಾಮಾಣಿಕ ಸರಳತೆಯ ಬದುಕಿಗೆ ಗಟ್ಟಿ ಅಡಿಪಾಯ ಒದಗಿಸಿತು ಎನ್ನುವುದು ಸುಳ್ಳಲ್ಲ.ನಂತರದ ಭಾಗ ಶಿಕ್ಷಕರಾಗಿ ಎಚ್.ನರಸಿಂಹಯ್ಯನವರು ಮಾಡಿದ ಸಾಧನೆಗಳು ಅದ್ಭುತ. ತಮ್ಮ ಇಡೀ ಬದುಕನ್ನು ಶಿಕ್ಷಕ ವೃತ್ತಿಗಾಗಿ ಮುಡಿಪಾಗಿಟ್ಟ ನರಸಿಂಹಯ್ಯನವರ ಸರಳ ಬದುಕು ಇಂದಿನ ಜನರಿಗೆ ಪ್ರೇರಣೆ ನೀಡುತ್ತದೆ. ಅಮೇರಿಕಾದಂಥ ಆಕರ್ಷಕ ರಾಷ್ಟ್ರದಲ್ಲಿ ಅಧ್ಯಯನ ಮಾಡಿಯೂ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆನ್ನುವ ಅವರ ಹಂಬಲ, ವಿದ್ಯೆ ಕೊಟ್ಟು ಬದುಕು ರೂಪಿಸಿದ ನ್ಯಾಷನಲ್ ಶಿಕ್ಷಣ ಸಂಸ್ಥೆಯಲ್ಲೆ ಕೆಲಸ ಮಾಡಬೇಕೆನ್ನುವ ಅವರ ತುಡಿತ, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನಿವೃತ್ತಿಯ ನಂತರ ನ್ಯಾಷನಲ್ ಕಾಲೇಜಿಗೆ ಮರಳಿ ಬಂದ ಅವರ ಸರಳತೆಯ ನಿಷ್ಠೆ, ದೊಡ್ಡ ಹುದ್ಧೆಯಲ್ಲಿದ್ದೂ ವಿದ್ಯಾರ್ಥಿಗಳ ವಸತಿ ಗೃಹದ ಸಣ್ಣ ಕೋಣೆಯಲ್ಲಿ ವಾಸಿಸುತ್ತಿದ್ದ ಅವರ ಸರಳತೆ, ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಬದುಕಿನುದ್ದಕ್ಕೂ ಶ್ರಮಿಸಿದ್ದು, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆಗಳು, ಪವಾಡಗಳ ದುರುಪಯೋಗವನ್ನು ವಿರೋಧಿಸಿದ ಅವರ ವೈಚಾರಿಕ ಕ್ರಾಂತಿ, ತಮ್ಮ ಅಂತ್ಯಕ್ರಿಯೆಯನ್ನು ಅತ್ಯಂತ ಸರಳವಾಗಿ ಮಾಡಬೇಕೆಂದು ಅವರು ಬರೆದಿಟ್ಟ ಉಯಿಲು ಹೀಗೆ ಅನೇಕ ಸಂಗತಿಗಳ ಮೂಲಕ ಎಚ್ಚೆನ್ ಅವರ ಅಗಾಧ ಸರಳ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ ಎನ್ನಬಹುದು. ಅತ್ಯಂತ ಪ್ರಜ್ಞಾಪೂರ್ವಕವಾಗಿ ಅವರು ರೂಢಿಸಿಕೊಂಡಿದ್ದ ಸರಳ ಬದುಕು ಎಚ್ಚೆನ್ ಯವರು ಇಂದಿನ ಆಧುನಿಕ ಸಮಾಜಕ್ಕೆ ಇಷ್ಟವಾಗಲು ಮುಖ್ಯಕಾರಣವಾಗುತ್ತದೆ. ಸರಳತೆಗೆ ಇನ್ನೊಂದು ಹೆಸರೇ ಎಚ್.ನರಸಿಂಹಯ್ಯನವರು ಎನ್ನುವಂತೆ ಅವರು ಬದುಕಿ ಬಾಳಿದರು. ಧರಿಸುವ ಬಟ್ಟೆ, ಸೇವಿಸುವ ಆಹಾರ, ವಾಸಿಸುವ ಕೋಣೆ ಹೀಗೆ ಪ್ರತಿಯೊಂದು ಅವರ ಸರಳ ಬದುಕಿಗೆ ಸಾಕ್ಷಿಯಾಗಿದ್ದವು. ಸರಳತೆಗೂ ಮತ್ತು ಅವರ ಬದುಕಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದಾಗಲೂ ಅವರು ತಮ್ಮ ವೇಶ ಭೂಷಣಗಳಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಒಂದು ಹಂತದಲ್ಲಿ ಅಂಥದ್ದೊಂದು ಒತ್ತಡ ಬಂದಾಗ ಹುದ್ದೆಯನ್ನು ತ್ಯಜಿಸಲು ಮುಂದಾದರೆ ವಿನಹ ಸರಳತೆಯನ್ನು ಬಿಟ್ಟುಕೊಡಲು ಸ್ವಲ್ಪವೂ ಯೋಚಿಸಲಿಲ್ಲ. ಅನೇಕ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯೋರ್ವ ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಗಳ ವಸತಿ ನಿಲಯದ ಸಣ್ಣ ಕೋಣೆಯಲ್ಲಿ ವಾಸವಾಗಿದ್ದರೆನ್ನುವುದು ಕಲ್ಪನೆಗೂ ನಿಲುಕದ ಸಂಗತಿ. ಆ ಕೋಣೆಯಲ್ಲಾದರೂ ಏನಿತ್ತು ಮಲಗಲು ಒಂದೆರಡು ಹಾಸಿಗೆಗಳು, ಬರೆಯಲು ಸಣ್ಣ ಮೇಜು, ಅತಿಥಿಗಳಿಗಾಗಿ ಕೂಡಲು ಎರಡು ಕುರ್ಚಿಗಳು. ವಿಲಾಸಿ ಜೀವನವನ್ನು ನಡೆಸುತ್ತ ಸರಳತೆಯನ್ನು ಕೇವಲ ಉಪದೇಶವಾಗಿಟ್ಟುಕೊಂಡವರಿಗೆ ಎಚ್ಚೆನ್ ಅವರ ಸರಳ ಬದುಕು ಒಂದು ನೀತಿ ಪಾಠವಾಗುತ್ತದೆ. ಡಾ.ಎಚ್ ಎನ್ ರವರ ಸಮಾಜಿಕ ಚಿಂತನೆ :ಏನನ್ನೂ ಪ್ರಶ್ನಿಸದೇಒಪ್ಪದಿರು ಎಂದು ಘಂಟಾ ಘೋಷವಾಗಿ ಹೇಳುತ್ತಿದ್ದರು ಹಾಗೆ ಮಾತನಾಡುತ್ತಿದ್ದರು ವಿಚಾರವಾದಿ,ಸಮಾಜಿಕ ಚಿಂತನೆಯ ಹರಿಕಾರ ಶಿಕ್ಷಣ ತಜ್ಞ ಎಚ್‌. ನರಸಿಂಹಯ್ಯನವರು. ವೈಜ್ಞಾನಿಕ ಮನೋಧರ್ಮ, ಜೀವಪರತೆ, ಜಾತ್ಯತೀತತೆ ಸಮಾಜಸೇವೆಯಂತಹ ಅನೇಕ ಸಮಾಜಿಕ ಸೇವೆಗಳನ್ನು ಈ ನಾಡಿಗಾಗಿ ಮಾಡಿದ್ದಾರೆ.ನಿಖರತೆ, ನಿಷ್ಠುರತೆಯಿಂದ ವೈಚಾರಿಕತೆಯ ಸಮಾಜಿಕ ಚಿಂತನೆಗಳನ್ನು ಈ ಸಮಾಜದಲ್ಲಿ ಬಿತ್ತಿರುವುದು ಇವರ ಬಹುದೊಡ್ಡ ಗುಣ.ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಕ್ರಾಂತಿ ಕಾರಿ ಸಮಾಜಿಕ ಚಿಂತನೆಗಳಿಗೆ ಆದ್ಯತೆ ನೀಡಿದ್ದಾರೆ. ಇದರ ಜೊತೆಗೆ ಇವರಿಗೆ ವಿಜ್ಞಾನದಲ್ಲಿ ಅಚಲವಾದ ನಂಬಿಕೆ ಇತ್ತು. ಶೂನ್ಯದಿಂದ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಮೌಢ್ಯದ ವಿರುದ್ಧ ಸತತ ಹೋರಾಟ ಅಗತ್ಯ. ಜನರ ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಶೋಷಣೆ ಮಾಡುವವರ ವಿರುದ್ಧ ಹೋರಾಟ ಮಾತ್ರವಲ್ಲ ಅಂಥವರ ಪೊಳ್ಳುತನವನ್ನು ಬಯಲಿಗೆಳೆಯಬೇಕು ಹಾಗೂ ಅವರ ಹಿಡಿತದಿಂದ ಮುಗ್ಧ ಜನತೆಯನ್ನು ರಕ್ಷಿಸಬೇಕೆಂದು ಯಾವಾಗಲೂ ಹೇಳುತ್ತಿದ್ದರು. ಅಂದರಂತೆ ಚಾಚೂ ತಪ್ಪದೇ ನಡೆದುಕೊಂಡು ಹೋಗಿದ್ದಾರೆ. ಸ್ವಾತಂತ್ಯ್ರ ಹೋರಾಟಗಾರ ಎಚ್. ನರಸಿಂಹಯ್ಯ ಅವರು ನಂಬಿದ ತತ್ವಕ್ಕಾಗಿ ಕುಲಪತಿ ಹುದ್ದೆಯನ್ನೇ ಬಿಟ್ಟು ನ್ಯಾಷನಲ್ ಕಾಲೇಜಿಗೆ ಹಿಂದಿರುಗಿದ ಧೀರೋದಾತ್ತ ವ್ಯಕ್ತಿತ್ವ ಹೊಂದಿದ್ದವರು. ತಮ್ಮ ಬದುಕಿನಲ್ಲಿ ನ್ಯಾಯವಾದ ಆಯ್ಕೆಯ ಪ್ರಶ್ನೆ ಎದುರಾದಾಗಲೂ ಅಂಜದೆ ಅಳುಕದೆ ಸ್ಪಷ್ಟ ದಾರಿಯಲ್ಲಿ ನಡೆಯಬಲ್ಲ ದೃಢವಾದ ಮನಸ್ಸು ಅವರಿಗಿತ್ತು. ಅವರು ದೇವರ ಇರುವಿಕೆಯ ಬಗೆಗೆ ನಂಬಿಕೆ ಕಳೆದುಕೊಂಡಿರಲಿಲ್ಲ. ಆದರೆ ಸಾಂಸ್ಥಿಕವಾಗಿರುವ ಧರ್ಮ, ಜಾತಿಗಳ ಬಗೆಗೆ ಅವರಿಗೆ ಸಂದೇಹವಿತ್ತು. ಜಾತಿ, ಧರ್ಮಗಳು ಬದುಕನ್ನು ಸ್ಥಗಿತಗೊಳಿಸುತ್ತಿವೆಯೆಂಬ ನೋವು ಅವರಲ್ಲಿ ಕಾಣುತ್ತಿತ್ತು.ಹಾಗೂ ಜಾತೀಯತೆ ಇದ್ದ ಕಡೆ ಧರ್ಮವಿಲ್ಲ. ಪೂಜಾರಿಯಿದ್ದ ಕಡೆ ದೇವರಿಲ್ಲ, ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಧರ್ಮವು ನಿಂತ ನೀರಾಗಿದ್ದರೆ, ವಿಜ್ಞಾನ ಹರಿಯುವ ನದಿ ಎಂದು ತಿಳಿದಿದ್ದರು. ಮೂಢನಂಬಿಕೆ, ಕಂಧಾಚಾರ, ಬೃಷ್ಟಚಾರ ಹಾಗೂ ನೈತಿಕ ವಲ್ಲದ ವಿಚಾರಗಳಿಗೆ ಎಂದು ಅವರು ಆಸ್ವದ ಕೊಡಲಿಲ್ಲ. ಸ್ವತಃ ಗಾಂಧಿವಾದಿಯಾಗಿದ್ದ ಅವರು ಸಮಾಜಿಕ ವಿಚಾರವಾದಕ್ಕೆ ಅಡ್ಡಿಯಾಗುವುದಿದ್ದರೆ, ಗಾಂಧೀಜಿಯವರ ಸಿದ್ದಾಂತ್ ವನ್ನು ಬದಿಗೆ ಸರಿಸಿ ಮುನ್ನಡೆಯುವ ಬದ್ಧತೆ ತೋರಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.ನಮ್ಮ ತಿಳುವಳಿಕೆಯಲ್ಲಿ ಎಷ್ಟೆ ಕಂದರಗಳಿದ್ದರೂ, ವಿಜ್ಞಾನಕ್ಕೆ ತನ್ನದೆ ಆದ ಮಿತಿಗಳಿದ್ದರೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳವಲ್ಲಿ ವಿಜ್ಞಾನದ ವಿಧಾನಗಳೇ ಹೆಚ್ಚು ಸಮರ್ಪಕ. ಯಾವುದೇ ಹೇಳಿಕೆ ಅಥವಾ ಸೂಕ್ತಿಯನ್ನು ಒಪ್ಪಿಕೊಳ್ಳವುದು ಸರಿಯಲ್ಲ. ಸಾಧ್ಯವಾದಷ್ಟರಮಟ್ಟಿಗೆ ಅವುಗಳನ್ನು ಪ್ರಯೋಗಗಳ ಮೂಲಕ ಪರಿಕ್ಷೀಸಬೇಕು. ಎಲ್ಲ ಪರಿಶೀಲನ ಮಾರ್ಗಗಳಲ್ಲೂ ವಿಚಾರವು ಅಡಿಪಾಯವಾಗಬೇಕು ಎಂದು ತಿಳುವಳಿಕ ನೀಡುತ್ತಿದರು. ವಿಶ್ವವಿದ್ಯಾಲಯಗಳು ಉನ್ನತ ಧ್ಯೇಯಗಳನ್ನು ಹೊಂದಿ ಮನುಷ್ಯನ ಪ್ರಗತಿಯಲ್ಲಿ ಮುನ್ನುಗ್ಗಬೇಕು. ಅವು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜನಗಳಿಗೆ ಹಾಗೂ ದೇಶಕ್ಕೆ ಒಳ್ಳೆಯದನ್ನು ಮಾಡಿದಂತೆ ಆಗುತ್ತದೆಂದು ಎಚ್ಎನ್ ರವರು ಯಾವಾಗಲೂ ಹೇಳುತ್ತಿದ್ದರು .1980 ರಿಂದ 1986 ರವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್‌ನಲ್ಲಿ ( ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ) ನಾಮಕರಣ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಹೀಗೆ ವಿವಿಧ ಹಂತಗಳಲ್ಲಿ ಸಮಾಜಿಕ ಚಿಂತನೆಯನ್ನು ಜನಸಾಮಾನ್ಯರ ಜೀವನದಲ್ಲಿ ಬಿತ್ತುವ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಾ ,ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಹುದಾಗಿದೆ. ಡಾ.ಎಚ್ ಎನ್ ರವರಿಗೆ ಸಂಧಪ್ರಶಸ್ತಿ/ಗೌರವಗಳು:ಅವರ ಸರಳತೇಯ ಹೋರಾಟ, ಸಮಾಜಿಕ ಚಿಂತನೆಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1968),ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ನೀಡಿದ ತಾಮ್ರಪತ್ರ ಪ್ರಶಸ್ತಿ (1973), ಭಾರತ ಸರ್ಕಾರದಪದ್ಮಭೂಷಣ ಪ್ರಶಸ್ತಿ (1984),ಕಲ್ಬುರ್ಗಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ(1988), ದೇವರಾಜ ಅರಸು ಪ್ರಶಸ್ತಿ (1994) ಗಳು ದೊರೆಕಿವೆ. ಮತ್ತುಫೆಲೋಗಳಾಗಿರುವ ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯು ಭಾರತದ ಏಕೈಕ ಫೆಲೋ ಎಂಬ ಗೌರವಕ್ಕೆ ಎಚ್ ಎನ್ ರವರು ಪಾತ್ರರಾಗಿದ್ದಾರೆ. 2004ರ ದಸರಾ ಮಹೋತ್ಸವದ ಉದ್ಘಾಟನೆ ಮಾಡುವ ಹಿರಿಮೆಗೆ ಭಾಜನರಾಗಿದ್ದಾರೆ . ಹೀಗೆ ಹತ್ತು ಹಲವು ಪ್ರಶಸ್ತಿ, ಗೌರವ, ಸನ್ಮಾನಗಳು ಸಂಧಿವೆ. ಕೊನೆಯ ಮಾತು: ಎಚ್ಚೆನ್ ರವರ ನಿರ್ಮಲ ವ್ಯಕ್ತಿತ್ವ ಅದ್ಭುತ ಗುಣಗಳ ಒಂದು ಗಣಿ. ಕುಗ್ರಾಮವೊಂದರ ಅತ್ಯಂತ ಬಡತನದ ಕುಟುಂಬದಲ್ಲಿ ಹುಟ್ಟಿ ಬಂದ ಹಳ್ಳಿಯ ಹುಡುಗನೊಬ್ಬ ನಿರಂತರವಾದ ಸರಳತೆಯ,ಸಮಾಜಿಕ ಚಿಂತನೆಯ ಶ್ರಮದಿಂದ ಜೊತೆಗೆ ಅಚಲವಾದ ವಿಶ್ವಾಸದಿಂದ, ತನ್ನ ವೈಚಾರಿಕ ಮನೋಭಾವದಿಂದ ಅತ್ಯಂತ ಪ್ರತಿಭಾವಂತನಾಗಿ ಬೆಳೆದು ನಿಂತು ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿದ ಅಪ್ರತಿಮ ಸಾಧನೆ ನಮ್ಮಗೆಲ್ಲರಿಗೂ ಬೆರಗು ಹುಟ್ಟಿಸುತ್ತದೆ. ಜೊತೆಗೆ ಅವರ ಸರಳತೆಯ ಬದುಕು ಅನೇಕರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ. ಮನುಷ್ಯ ಹೇಗೆ ಬದುಕಬೇಕೆನ್ನುವುದಕ್ಕೆ ಎಚ್ಚೆನ್ ಸದಾಕಾಲ ಮಾದರಿಯಾಗಿ ನಿಲ್ಲುತ್ತಾರೆ. ಎಚ್ಚೆನ್ ನಮಗೆಲ್ಲ ಇಷ್ಟವಾಗಲು ಅನೇಕ ಸಂಗತಿಗಳು ಕಾರಣವಾಗುತ್ತವೆ. ಅವರ ಸರಳ ಜೀವನ ಶೈಲಿ, ಅನನ್ಯ ರಾಷ್ಟ್ರ ಪ್ರೇಮ, ಬದುಕು ರೂಪಿಸಿದ ಶಿಕ್ಷಣ ಸಂಸ್ಥೆಯ ಮೇಲಿನ ನಿಷ್ಠೆ, ಕಡು ಬಡತನದ ಬದುಕಿನೊಂದಿಗಿನ ಹೋರಾಟ, ಅವರಲ್ಲಿನ ಅಚಲವಾದ ಆತ್ಮವಿಶ್ವಾಸ, ವೈಚಾರಿಕ ಮನೋಭಾವ, ಬದುಕಿನ ಒಂದು ಭಾಗ ಎನ್ನುವಂತೆ ಬೆಳೆಸಿಕೊಂಡು ಬಂದ ನಿಷ್ಟೂರತೆ ಹೀಗೆ ಅನೇಕ ಕಾರಣಗಳಿಂದ ನರಸಿಂಹಯ್ಯನವರ ವ್ಯಕ್ತಿತ್ವ ನಮಗೆ ಆಪ್ತವಾಗುತ್ತದೆ.ಹಳ್ಳಿಯಿಂದ ಬಂದ ಅನಾಥ ಬಾಲಕ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರವೇಶ ಪಡೆದು ತನ್ನ ಸ್ವಂತ ಪರಿಶ್ರಮದಿಂದ ಆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆರಿದ್ದು ಅವರ ಬದುಕಿನ ಮಹತ್ವದ ಸಾಧನೆಗಳಲ್ಲೊಂದು. ವಿಶ್ವವಿದ್ಯಾಲಯದ ಉಪಕುಲಪತಿ, ಮೇಲ್ಮನೆಯ ಶಾಸಕ ಸ್ಥಾನ, ಕನ್ನಡ ಪ್ರಾಧಿಕಾರದ ಅಧ್ಯಕ್ಷತೆ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್ ಈ ಎಲ್ಲವು ಎಚ್ಚೆನ್ ಅವರ ಪ್ರತಿಭೆಗೆ ಸಂದ ಗೌರವಗಳು. ಯಾವುದನ್ನೂ ಅವರು ಅಪೇಕ್ಷಿಸಿದವರಲ್ಲ. ಯಾವ ಪ್ರಶಸ್ತಿ, ಗೌರವಗಳ ಹಿಂದೆ ಬಿದ್ದವರಲ್ಲ. ಒಂದು ಪ್ರಶಸ್ತಿ, ಉನ್ನತ ಹುದ್ದೆ ದೊರೆತಾಗಲೂ ಅವರದು ನಿರ್ವಿಕಾರ ಭಾವ. ತನ್ನದು ಎನ್ನುವ ಒಂದು ಕೌಟಂಬಿಕ ಚೌಕಟ್ಟನ್ನೂ ಕಟ್ಟಿ ಕೊಳ್ಳದ ವ್ಯಕ್ತಿಗೆ ಅನೇಕ ಸ್ಥಾನ ಮಾನಗಳು ಹುಡುಕಿಕೊಂಡು ಬಂದವು. ಪ್ರತಿಭೆ, ನಿರಂತರ ಪರಿಶ್ರಮ, ಪ್ರಾಮಾಣಿಕತೆ ಈ ಗುಣಗಳಿಂದ ಮನುಷ್ಯನೋರ್ವನ ಜೀವನದಲ್ಲಿ ಏನೆಲ್ಲ ಪವಾಡಗಳಾಗಬಹುದೆನ್ನುವುದಕ್ಕೆ ಎಚ್.ನರಸಿಂಹಯ್ಯನವರ ಸರಳತೆ ಬದುಕು, ಸಮಾಜಿಕ ಚಿಂತನೆಗಳು ಸಾಕ್ಷಿ ಹಾಗೂ ನಮಗೆಲ್ಲರಿಗೂ ಪ್ರೇರಣೆಯಾಗಿವೆ. ಸಂಗಮೇಶ ಎನ್ ಜವಾದಿ,

ಇತರೆ Read Post »

ಇತರೆ

ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ.               –  ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ ಸಂಯೋಜಿಸಿ ರಾತ್ರೋರಾತ್ರಿ ನೆಯ್ಯಿಸಿದ ಮೀನು ಕಿವುರಿಗಿಂತಲೂ ನವುರಾದ ರೇಸಿಮೆಗೆ ಮೀನ ಕಣ್ಣಂತಕುಸುರಿ ಕೆಲಸ ಉಟ್ಟು ಬಂದಳೋ ಬಂದಳೋ ಇಡೀ ಗಂಡಸಕುಲವೇ ತಿರುಗಿ ನೋಡುವಂತೆ ನಿಂದಳೋ ನಿಂದಳೋ ನಡುಬಳಕನ್ನು ಗತ್ತಲ್ಲೇ ಸ್ಥಿರಗೊಳಿಸಿ ಏಕಾಗ್ನಿಯಂತೆ ಅಂದೇ ತೀರ್ಮಾನಿಸಿಬಿಟ್ಟ ಅವನು ಇಂಥವಳನ್ನಾಳುವದು ನನ್ನಯೋಗ್ಯತೆಗೆ ಮೀರಿದ್ದು ಏನಿದ್ದರೂ ಕಾಲುಗಳ ಬಳಿ ಕುಳಿತು ಬೇಡಬಹುದಷ್ಟೇ ಅವಳಪ್ಪಣೆಯ ಅವಳೊಳು ಹೋಗಲು ಅಷ್ಟಕ್ಕೂ ಆಸ್ಪದದಕ್ಕಲಿಲ್ಲ ಅವನಿಗೆ, ಬೇಡಹೋಗಲಿ ವೀರಾಧಿ ವೀರಅವರಣ್ಣನಿಗೂ ಪಿಶಾಚನೀಚನ ನೈಚ್ಯಾನುಸಂಧಾನ ಕೊನೆಗೂ ಆಸೆ ತೀರಿಸಿಕೊಂಡಿದ್ದು ಸಭೆಯಲ್ಲಿ ಸೆರಗೆಳೆದು *********************** ಕವಿತೆಯ ಶೀರ್ಷಿಕೆಯೇ ಮೊದಲ ಸೆಳೆತ,ಲವ್ ಅಟ್ ಫಸ್ಟ ಸೈಟ್‌ಅನ್ನೋ ಹಾಗೆ. ಬಹುತೇಕಎಲ್ಲ ಹೆಣ್ಣುಮಕ್ಕಳ ಸಹಜಗುಣವೋ ಏನೋ “ಸೀರೆ”ಎಂದಾಕ್ಷಣ ಕಿವಿನಿಮಿರುವುದು,ಕಣ್ಣರಳುವದು.ಕಪಾಟಿನ ತುಂಬ ಸೀರೆಗಳಿದ್ದರೂ ಅದೇನೋ ಮೋಹ ಹೊಸ ಟ್ರೆಂಡ್ ಸೀರೆ ಬಂತೆಂದರೆ ಈ ಥರದ್ದು ನನ್ನಹತ್ರಇಲ್ಲ ,ಈ ಬಣ್ಣಕ್ಕೆ ಆ  ಬಣ್ಣದಅಂಚಿನ ಕಾಂಬಿನೇಷನ್‌ ಚೆಂದವಿದೆಯೆಂದು ಮತ್ತೆ ಕೊಂಡುಕೊಳ್ಳುತ್ತೇವೆ. ಹೀಗೆ ಅಂದುಕೊಳ್ಳುವದರಲ್ಲಿ ತಪ್ಪೇನಿಲ್ಲ ಅನಾದಿಕಾಲದಿಂದ ಇದು ನಡೆದುಬಂದಿದೆಎನ್ನುತ್ತಾರೆ ಹಿರಿಯ ಸಾಹಿತಿ ಲಲಿತಾ ಸಿದ್ಧಬಸವಯ್ಯಾ.  ಸದ್ಯ ಸೀರೆ ಆಯ್ಕೆಯಲ್ಲಾದರೂ ಇಚ್ಛೆಯಂತೆ ಆರಿಸಿಕೊಳ್ಳಬಹುದು ! ಕವಯತ್ರಿ ಲಲಿತಾ ಸಿದ್ಧಬಸವಯ್ಯಾಅವರು ಮೀನಕಣ್ಣಿನ ಸೀರೆಯ ಮೂಲಕ ಅದ್ಭುತವಾಗಿ ಸ್ತಿç ಸಂವೇದನೆಯನ್ನು ಹಿಡಿದಿಟ್ಟಿದ್ದಾರೆ. ಮೀನ ಕಣ್ಣುಅನ್ನುವ ಶಬ್ದ ತುಂಬ ವಿಶೇಷವಾಗಿ ಅರ್ಥೈಸುತ್ತದೆ. ಜೀವಶಾಸ್ತ್ರೀಯವಾಗಿ ಮನುಷ್ಯನಿಗಿಂತಲೂ ಮೀನು ಕೆಳಮಟ್ಟದ ಪ್ರಾಣಿ, ವಿಸ್ಮಯವೇನೆಂದರೆ ಮೀನಿನ ಕಣ್ಣು ಮನುಷ್ಯನಷ್ಟೇಅಥವಾ ಮನುಷ್ಯನಿಗಿಂತ ಹೆಚ್ಚು ಬೆಳವಣಿಗೆ ಹೊಂದಿದೆಯೆನ್ನಬಹುದು. ಮೀನು ಸದಾ ನೀರಿನಲ್ಲಿರುವ ಪ್ರಾಣಿ. ನಿರಂತರವಾಗಿಅದಕ್ಕೆಆಪತ್ತುತಪ್ಪಿದ್ದಲ್ಲ. ಸುತ್ತಲಿರುವ ವೈರಿಗಳಿಂದ ತನ್ನನ್ನುತಾನು ಕಾಪಾಡಿಕೊಳ್ಳಬೇಕಾಗುವದು ಎಂಬ ಮುನ್ಸೂಚನೆಯ ಸಂಕೇತವೂ ಕವಯಿತ್ರಿಯ ಮನದಲ್ಲಿರಬಹುದು. ಮೀನ ಕಣ್ಣಿನರಚನೆ ಅಕ್ಷರಶಃ ದೂರದರ್ಶಕಅಂದರೆ  ಬೈನಾಕ್ಯುಲರ್‌ತರಹವೇಇದೆ. ಇನ್ನೂ ಒಂದು ಅಡಕವಾಗಿದೆ. ವೈಜ್ಞಾನಿಕ ಮೂಲಗಳ ಪ್ರಕಾರ ಮೀನಕಣ್ಣಿನ ರೆಟಿನಾ ಭಾಗಕ್ಕೆಏನಾದರೂ ಆಘಾತವಾದರೆ ಅದುತನ್ನಷ್ಟಕ್ಕೆತಾನೆ ಗಾಯವನ್ನು ಸರಿಪಡಿಸಿಕೊಳ್ಳುವ ತಂತ್ರೌಷಧಗುಣವಿದೆ. ಈ ಒಳಮರ್ಮವನ್ನು ಯೋಚಿಸಿಯೇ ನಮ್ಮ ಕವಿಯಿತ್ರಿ  ಮೀನಕಣ್ಣನ್ನೇರೂಪಕವಾಗಿ ಬಳಸಿಕೊಂಡಿದ್ದಾರೆ ಎಂದೆಣಿಸಬಹುದು.             ಮುಂದೆಕವನದ ಸಾಲುಗಳನ್ನು ಓದುತ್ತಾ,ಕವಯತ್ರಿಇಲ್ಲಿ ಉಪಯೋಗಿಸಿದ ಕೆಲವು ಶಬ್ದಗಳು ನಮ್ಮನ್ನುಆಕರ್ಷಿಸುತ್ತವೆ ಅವುಗಳೆಂದರೆ ಮುತುವರ್ಜಿ,ಒಡ್ಡೋಲಗ,ಏಕಾಗ್ನಿ….. ಮುಂತಾದವು. ಭೂಲೋಕದಅಪ್ರತಿಮ ಸುಂದರಿಯಂದೇ ಕರೆಯಲ್ಪಡುತ್ತಿದ್ದ ದ್ರೌಪದಿಯ ಸ್ವಯಂವರದ ಪೂರ್ವಸಿದ್ಧತೆಯನ್ನು ಅತ್ಯಂತ ಸೊಗಸಾಗಿ ಹಾಗೂ ರಾಜಕುಮಾರಿಯ ಅದೇ ಗತ್ತುಗಾಂಭೀರ‍್ಯ ಭಾಸವಾಗುವಂತೆ ಬಣ್ಣಿಸಿದ್ದಾರೆ.ಇಡೀ ಗಂಡಸುಕುಲವೇ ಮಾರುಹೋಗುವಂಥ ಸೃಷ್ಟಿಸೌಂದರ‍್ಯವೇ ಅವಳಲ್ಲಿತ್ತು ಎಂದು ಹೊಗಳುತ್ತಾ  ನಂತರದ ಸಾಲುಗಳಲ್ಲಿ ದುಶ್ಯಾಸನನ ಮನದ ಭಾವನೆಗಳೂ ಮಾತಾಡಿವೆ. ಸ್ವಯಂವರದಲ್ಲಿ ಇವಳ ರೂಪರಾಶಿಗೆ ಮನಸೋತ ದುಶ್ಯಾಸನ ತಾನು ದ್ರೌಪದಿಗೆ ತಕ್ಕವನಲ್ಲ, ಏನಿದ್ದರೂ ಅವಳ ಕಾಲಬಳಿಯೇ ತನ್ನಜಾಗಎನ್ನುತ್ತದೆ ಅವನ ಸ್ವಗತ. ಹೋಗಲಿ ತನ್ನಣ್ಣನಿಗೂ ದ್ರೌಪದಿ ದಕ್ಕುವದು ಅಸಾಧ್ಯವೆಂದೆನಿಸುತ್ತದೆ. ಮನದೊಳಗಣ ನೀಚ ತಮಸ್ಸು ಆ ಸೌಂದರ‍್ಯವನ್ನುಒಮ್ಮೆ ಮುಟ್ಟಬೇಕೆಂಬ ಉತ್ಕಟತೆಯೊಂದಿಗೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕೊನೆಗೆ ಸಭೆಯಲ್ಲಿ ಸೆರಗಿಗೆ ಕೈಹಾಕುತ್ತಾನೆ ಎಂಬುದಾಗಿ ದುಶ್ಯಾಸನನ ಸ್ವಗತವನ್ನು ಚಿತ್ರಿಸಿದ್ದಾರೆ. ಇದಿಷ್ಟು ಕವಿತೆಯ ಹೊರಮೈಯೆಂದಾದರೆ …….. ಇನ್ನುಕವಿತೆಯಆಂತರ್ಯಕ್ಕೆಇಣುಕೋಣ,             ಇಲ್ಲಿದ್ರೌಪದಿ ಇಡೀ ಸ್ತಿçಸಂಕುಲವನ್ನೇ ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಹೆಣ್ಣಿನ ಅಳಲು,ನೋವು,ತೊಳಲಾಟದ ಕುರಿತಾಗಿ ಬರೆದಿರುತ್ತಾರೆ,ಆದರೆಇಲ್ಲಿ ಹೆಣ್ಣಿನ ಆಯ್ಕೆ ಕುರಿತಾಗಿ ಮಾತನಾಡಿದ್ದಾರೆ. ಸೀರೆ ಆಯ್ದುಕೊಳ್ಳುವ ಸ್ವಾತಂತ್ರವನ್ನು ಸಂಭ್ರಮಿಸುತ್ತಿರುವ ಚಿತ್ರಣವಿದೆ. ಇದರಲ್ಲಿನ ಧ್ವನಿ ವಿಶೇಷವೆನಿಸುತ್ತದೆ. ಕವಯಿತ್ರಿಯ ವಿಭಿನ್ನ ವಿಚಾರಲಹರಿಯು ಈ ಕವಿತೆಗೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಮುಂದೆ ಸ್ವಯಂವರದಲ್ಲಿಯೂ ಈ ಹಕ್ಕು ಅವಳಿಗಿದೆಯೆಂದು ಸೂಚನೆ ಕಾಣುತ್ತದೆ.  ಮೀನಕಣ್ಣುಎಂದಿದ್ದಾರೆ,ನವಿಲು,ನರಿ.ಕುದುರೆಅಥವಾ ಹಕ್ಕಿ,ಹುಲಿಗಳಕಣ್ಣು ಎನ್ನಬಹುದಿತ್ತು ಎಂಬ ಪ್ರಶ್ನೆಕಾಡುತ್ತದೆ, ಅಂತೇಯೇ ಮೀನಕಣ್ಣಿನ ವೈಜ್ಞಾನಿಕ ಸಂರಚನೆಯ ಸತ್ಯಾಸತ್ಯತೆಯು ಅವಳ ಬದುಕಿನಂತೆ ಬೆರಗುಗೊಳಿಸುವಂಥದ್ದು.ಮೀನ ಕಿವಿರುಗಳಿಗಿಂತ ನವಿರಾದರೇಷಿಮೆ ಎಂದು ವರ್ಣಿಸುವಾಗ ಸುಕೋಮಲೆ ಮೃದುಭಾವದ ಹೆಣ್ಣು ಭವಿಷ್ಯದಲ್ಲಿಎದುರಾಗಲಿರುವ ಭೀಕರ ಕಠೋರಗಳನ್ನೂ ದಾಟಬಲ್ಲಳು. ದ್ರೌಪದಿಯು ಮುಂದೆ ನಡೆಯಲಿರುವಯುದ್ಧಕ್ಕೆ ಸನ್ನದ್ಧಳಾಗುವ ದೂರದೃಷ್ಟಿ ಹೊಂದಿದವಳಾಗಿದ್ದಳೆಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಲೇಖಕಿ. ಹೆಜ್ಜೆ ಹೆಜ್ಜೆಗೂ ಅವಳು ಸಂಕಟವನ್ನುಭವಿಸಲಿದ್ದಾಳೆ,ಆದ್ದರಿಂದ ಅವಳು ಮೈಯಲ್ಲಾಕಣ್ಣಾಗಿರಬೇಕೆಂಬುದರಉದ್ದೇಶವೂ ಬಿಂಬಿತವಾಗುತ್ತದೆ, ಅರ್ಥಾಥ ಮೀನಕಣ್ಣು ಬಹಿರಂಗವಾಗಿ ಸೀರೆ ಮೇಲಿನ ಆಕೃತಿ ಮಾತ್ರವಲ್ಲ, ಸದಾ ಅಂತರಂಗದ ಒಳಗಣ್ಣು ತೆರೆದು ಸುತ್ತಲು ನಡೆಯುತ್ತಿರುವದನ್ನು ಬಹು ಎಚ್ಚರದಿಂದ ಗಮನಿಸಬೇಕೆಂಬ ಮುನ್ಸೂಚನೆ ನೀಡುತ್ತದೆ.ದುಶ್ಯಾಸನನಂತ ನೀಚರು ಮನೆಯ ಒಳಗೂ ಮನೆಯ ಹೊರಗೂಎಲ್ಲಿಯೂಇರಬಹುದು.ಅದಕ್ಕಾಗಿ ಹೆಣ್ಣು ಸದಾಕಾಲ ಜಾಗೃತರಾಗಿರಬೇಕೆಂಬ ಸಂದೇಶವನ್ನೂಕೂಡಾ ಸಾರುವದರಿಂದ ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ************************* ವಿಭಾ ಪುರೋಹಿತ್

ನನ್ನಿಷ್ಟದ ಕವಿತೆ Read Post »

ಇತರೆ

ಇತರೆ

ಓಲೆ ಮರೆತರೆ ನಿನ್ನ ಮಡಿವೆನು ಚಿನ್ನ!                                                    ಜಯಶ್ರೀ.ಜೆ. ಅಬ್ಬಿಗೇರಿ ಬೆಳದಿಂಗಳ ರಾತ್ರಿಯ ಪೂರ್ಣ ಚಂದಿರನ ಮೊಗ ನೋಡಿದಾಗೊಮ್ಮೆ ನಿನ್ನ ಮುಖವನ್ನೇ ನೋಡಿದಂತೆ ಅನಿಸುತ್ತದೆ. ನೀನೇನು ಚಂದಿರನ ಮಗಳಾ ಎನ್ನುವ ಸಂಶಯ ಮನದಲ್ಲಿ ಕಾಡುತ್ತದೆ. ನಿನ್ನ ಹತ್ತಿರ ಅದೇನೋ ಮಾಯಾ ಶಕ್ತಿ ಇದೆ ನಿನ್ನನ್ನೇ ನೋಡೋಕೆ ಮನಸ್ಸು ಕಾತರಿಸುತ್ತದೆ. ಈ ಹಿಂದೆ ನೂರು ನೂರು ಸುಂದರಿಯರನ್ನು ಕಂಡ ಕಣ್ಣು ಹೀಗೆ ಹಟ ಹಿಡಿದಿರಲಿಲ್ಲ. ಸ್ವಭಾವದಲ್ಲಿ ತುಂಬಾ ಮೌನಿ ನಾನು. ಮರುಭೂಮಿಯಲ್ಲಿ ಗುಲಾಬಿ ಹೂ ಅರಳಿದಂತೆ ಅರಳಿದ ನಿನ್ನ ಕೆಂದುಟಿಗಳ ಕಂಡಾಗಿನಿಂದ ಅರಳು ಹುರಿದಂತೆ ಮಾತಾಡ್ತಿದೀನಿ. ಇದನ್ನು ಕಂಡು ನನ್ನ ಗೆಳೆಯರೆಲ್ಲ ನನಗೆ ಏನೋ ಆಗಿದೆ ಅಂತ ಚುಡಾಯಿಸ್ತಿದಾರೆ. ನೀನು ಕೈಗೆ ಸಿಗುತ್ತಿಯೋ ಇಲ್ಲವೋ ಎನ್ನುವ ಚಿಂತೆಯ ನೂರಾರು ಹಕ್ಕಿಗಳು ಮೊಟ್ಟೆಯಿಡತೊಡಗಿವೆ. ಪ್ರೀತಿಯ ಗಾಳಕ್ಕೆ ಬಿದ್ದಿದ್ದೇನೆ. ಹಾಗಂತ ಮೊದಲ ಪ್ರಯತ್ನದಲ್ಲೇ ಪ್ರೀತಿ ಫಲಿಸುತ್ತದೆ ಅನ್ನೋ ಖಾತ್ರಿ ಇರಲಿಲ್ಲ. ಎಷ್ಟು ಕೋಟಿ ಕ್ಷಣಗಳನ್ನು ನಿನ್ನ ಒಲವಿನ ಕೊಳದಲ್ಲಿ ಎಸೆಯಬೇಕೋ ಗೊತ್ತಿಲ್ಲ. ನಾನೀಗ ಮತ್ತಷ್ಟು ಒಲವಿನ ಬಲೆಯಲ್ಲಿ ಬೀಳಲಿದ್ದೇನೆ ಎನ್ನುವುದಷ್ಟೇ ಸದ್ಯಕ್ಕೆ ಖಾತ್ರಿಯಿರುವ ಏಕ ಮಾತ್ರ ಸಂಗತಿ. ನಿನಗಾಗಿ ಕಾಯುವ ಈ ಸಮಯದಲ್ಲಿ ಗಡಿಯಾರ ಯಾರು ಕಂಡು ಹಿಡಿದರು ಅಂತ ಕೋಪಿಸಿಕೊಳ್ಳುತ್ತೇನೆ. ಅದಾವುದೋ ಗಳಿಗೆಯಲ್ಲಿ ಸೋಕಿದ ನಿನ್ನ ನವಿರಾದ ಬೆರಳುಗಳ, ತಾಕಿದ ಭುಜಗಳ ದೃಶ್ಯ ಕಣ್ರಪ್ಪೆಯಲ್ಲಿ ಜೋಕಾಲಿಯಂತೆ ಇಂದಿಗೂ ಓಲಾಡುತ್ತಿದೆ.      ಮಳೆಗಾಲದ ಒಂದು ದಿನ ತುಂಬಾ ಚಳಿಯಿತ್ತು. ಚಿಕ್ಕ ಮಲ್ಲಿಗೆ ಮಾಲೆಯ ನೀಳ ಜಡೆಯೊಡತಿ ನೀನು ಎದುರಾಗಿ ಕಾಲೇಜಿನ ಪಾರ‍್ಕಿನಲ್ಲಿ ಕುಳಿತಿದ್ದೆ. ಮೊದಲ ನೋಟದಲ್ಲೇ ನಿನ್ನ ಮೇಲೆ ಒಲವಿನ ಭಾವಕೋಶದ ಅಂಶವೊಂದು ಅಂಕುರಿಸಿತು. ಕಲ್ಪನೆಯ ಸುಂದರಿ ಒಮ್ಮೆಲೇ ಎದುರಾದರೆ ಈ ಬಡ ಹೃದಯದ ಗತಿ ಏನಾಗಬೇಡ?  ಜಡಿ ಮಳೆಯ ಮುನ್ಸೂಚನೆಯಂತೆ ಒಂದೊಂದೇ ತುಂತುರು ಹನಿ ಶುರುವಾಗಿತ್ತು.ಪಕ್ಕದಲ್ಲಿಯೇ ಇದ್ದ ಗೆಳೆಯನನ್ನು ಆತುರದಿಂದ ತಿವಿಯ ತೊಡಗಿದೆ. ನಾನು ತುಂಬಾ ತಳಮಳಕ್ಕೆ ದುಗುಡಕ್ಕೆ ಯೋಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಗೆಳೆಯ,’ಈ ಹಿಂದೆ ಎಂದೂ ನೀ ಹೀಗೆ ಆಡಿರಲಿಲ್ಲ. ನಿನಗೂ.. . . .’ ಎಂದು ಕಿಚಾಯಿಸಿ ಅಲ್ಲಿಂದ ಕಾಲ್ಕಿತ್ತ. ಮಲ್ಲಿಗೆ ಗಂಧ ಒಂದೆಡೆ ಬೆರೆಯಲು ಸಿಹಿ ಜೇನು ಮನಸ್ಸುಗಳು ಮಿಡಿಯಲು ಅನುವು ಮಾಡಿ ಹೋದನೇನೋ ಎನಿಸಿತು.ಈಗಲೇ ವಯಸ್ಸು ಇಪ್ಪತ್ತೈದಕ್ಕೆ ಮೂರು ಮೆಟ್ಟಿಲು ದೂರದಲ್ಲಿದೆ. ಇದೇ ಒಲವಿನ ಗಾನಕೆ ತಲೆದೂಗುವ ವಸಂತಕಾಲ ಎಂದು ನಕ್ಕಿತು ಒಳ ಮನಸ್ಸು. ಮೊದ ಮೊದಲು ನೋಟ್ಸ್ಗಾಗಿ ಮಾತು ಕತೆ ನಡೆಯುತ್ತಿತ್ತು. ನಂತರ ಅದು ಇದು ಮಾತು ಬೆಳೆಯಿತು. ಸಂಕೋಚವಿಲ್ಲದ ಮಾತುಗಳು ಶುರುವಾದವು. ಗೆಳತನವಾದ ಮೇಲೆ ಇಬ್ಬರೂ ಸಾಕಷ್ಟು ಆತ್ಮೀಯರಾಗ ತೊಡಗಿದೆವು. ತಂಪಾದ ದಿನವೊಂದರಲ್ಲಿ ಅನುರಾಗದ ಕೋರಿಕೆ ಮುಂದಿತ್ತಾಗ ನಗುವಿನಲ್ಲೇ ಒಪ್ಪಿಗೆ ಸೂಚಿಸಿದ್ದೆ. ಮನವು ಒಲವಿನ ಕಡಲಲ್ಲಿ ತೇಲಿದಂತೆನಿಸಿತು. ಬಾನೆತ್ತರಕ್ಕೆ ಹೃದಯ. ಹಾರಿತು ಆನಂದ ಕಂಬನಿ ಸುರಿಯಿತು. ‘ಬಿಡದಿರು ಎಂದೆಂದೂ ಈ ಕೈಯನು ಹೃದಯದ ಹಸಿರು ತೋಟದಲ್ಲಿ ಒಲವಿನ ವಿನಿಮಯಕೆ  ಕಾಯುವೆ.’ ಎಂದೆ ನೀನು. ಯಾವ ಕೋನದಲ್ಲೂ ನೀನಾಡಿದ ಮಾತು ನಾಟಕೀಯ ಅನಿಸಲೇ ಇಲ್ಲ. ಅಂದಿನಿಂದ  ನನ್ನೆದೆಯ ತೋಟದ ಹೂವಾದೆ. ಉಸಿರನು ನಿನ್ನ ಹೆಸರಿಗೆ ಬರೆದೆ.    ಅಕ್ಕನ ಮದುವೆಗಾಗಿ ಅಪ್ಪ ಮಾಡಿಟ್ಟ ಸಾಲ ತೀರಿಸುವುದು ನನ್ನ ತಲೆ ಮೇಲೆ ಬಿದ್ದಿತ್ತು. ಯಾರನ್ನು ಕೇಳುವುದು? ಗೆಳೆಯರ‍್ಯಾರು ಅಷ್ಟು ಹಣ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತ ಬಂಧುಗಳನ್ನು ಕೇಳಬೇಕೆಂದರೆ ಹಣಕ್ಕಾಗಿ ಹಲ್ಲು ಗಿಂಜುತ್ತಾನೆ ಎನ್ನುತ್ತಾರೇನೋ ಎಂಬ ಸ್ವಾಭಿಮಾನ. ಬಾಯ್ತೆರೆದು ಕೇಳುವಂಥ ಆತ್ಮೀಯರೆದರು ನಿಲ್ಲಲು ಧರ‍್ಯ ಸಾಲುತ್ತಿಲ್ಲ.ಇನ್ನು ಬ್ಯಾಂಕ್ ಕೌಂಟರ್‌ಗಳಿಗೋ ಇಲ್ಲ ಫೈನಾನ್ಸ್ ಬಾಗಿಲಿಗೆ ಎಡತಾಕೋಣವೆಂದರೆ ಆ ಪಾಟಿ ಬಡ್ಡಿ ನನ್ನಿಂದ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಚಿಂತೆಯ ಹೊದಿಕೆಯನ್ನು ಸರಿಸಿ ಹೊರ ಬರುವುದು ಹೇಗೆ ಎಂಬುದು ತಲೆಯಲ್ಲಿ ಕಟ್ಟಿಗೆ ಹುಳುವಿನಂತೆ ಕೊರೆಯುತ್ತಿತ್ತು. ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ದಿನಗಳಿಗೆ ಕೊನೆಗೊಂಡು ಪೈಸೆ ಪೈಸೆಗೂ ಲೆಕ್ಕಾಚಾರ ಹಾಕುವ ಬದುಕು ಕಣ್ಮುಂದಿತ್ತು.ಕಾಡಿನಲ್ಲಿ ಕಳೆದು ಹೋದ ಒಂಟಿ ಸಣ್ಣ ಮಗುವಿನಂತಾಗಿತ್ತು ನನ್ನ ಸ್ಥಿತಿ. ಇದನ್ನೆಲ್ಲ ಸಣ್ಣನೆಯ ದನಿಯಲ್ಲಿ ಪರಿಹಾರಕ್ಕಾಗಿ ಕೊನೆಯ ಪ್ರಯತ್ನವೆಂಬಂತೆ ನಿನ್ನ ಮುಂದೆ ಒಂದೇ ಉಸಿರಲ್ಲಿ ಉಸಿರಿದೆ.  ‘ಸಂಯಮ ಮೀರಿದವನು ಜಡ ವಸ್ತುವಿಗೆ ಸಮ.’ ನನ್ನ ಮಾತಿನಿಂದ ನಿನಗೆ ಕೊಂಚ ನೋವಾಗಬಹುದು. ಅದನ್ನು ಭರಿಸುವ ಶಕ್ತಿ ನಿನ್ನಲ್ಲಿದೆ ಎಂದು ನನಗೆ ಗೊತ್ತು. ಆರ‍್ಥಿಕವಾಗಿ ಸುಭದ್ರವಾಗಿದ್ದರೆ ಸಂತಸದಲ್ಲಿರುತ್ತೇವೆ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕು. ‘ಕಷ್ಟಗಳೇ ಮನುಷ್ಯನನ್ನು ಸಂತಸದ ಕಡಲಿಗೆ ನೂಕುತ್ತವೆ.’ಆರ‍್ಥಿಕ ಸಮಸ್ಯೆಗಳಿಗೆ ದುಡಿಮೆ ಬಿಟ್ಟು ಬೇರೆ ದಾರಿ ಯಾವುದೂ ಫಲಿಸುವುದಿಲ್ಲ. ಕಾಲೇಜು ಹೇಗಿದ್ದರೂ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ.ಅದರಾಚೆಗೆ ಅಲ್ಲಿ ಇಲ್ಲಿ ಹಾಳು ಹರಟೆ ಬಿಟ್ಟು ಪಾರ‍್ಟ್ ಟೈಂ ಕೆಲಸಕ್ಕೆ ಸೇರಿಕೋ.ನಿನ್ನಲ್ಲಿರೋ ಬುದ್ಧಿವಂತಿಕೆಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆಂದು ನನ್ನ ಮನಸ್ಸಿನ ಗೊಂಬೆಗೆ ಕೀಲಿ ಕೊಟ್ಟೆ. ಕೆಲಸ ಹುಡುಕುವ ಕೆಲ ಪ್ರಯತ್ನಗಳು ವಿಫಲವಾದಾಗ ಧೈರ‍್ಯವನ್ನೂ ತುಂಬಿದೆ.ಒಂದು ಶುಭ ದಿನ ಕೆಲಸ ಕೈಯಲ್ಲಿತ್ತು. ಪ್ರತಿಷ್ಟಿತ ಸಂಸ್ಥೆಯಾದ್ದರಿಂದ ಸಂಬಳವೂ ಚೆನ್ನಾಗಿಯೇ ಇತ್ತು. ಸಾಲ ಬರಬರುತ್ತ ಕರಗತೊಡಗಿತು. ನನ್ನ ಶ್ರದ್ಧೆಯ ದುಡಿಮೆಗೆ ಸಂಸ್ಥೆಯ ಯಜಮಾನರು ನೌಕರಿ ಖಾಯಂಗೊಳಿಸಿದರು. ಪ್ರೀತಿಸಿದವಳು ಬರೆದ ಜೀವನದ ಕಥೆಯಲ್ಲಿ ಮೂರು ವರ‍್ಷದಲ್ಲಿ ಬದುಕು ನಡೆಸುವ ನಾವಿಕನಾದೆ ಎನ್ನೋದೇ ಹೆಮ್ಮೆ.ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಿದ್ದೇನೆ. ಬಾಳ ದೀವಿಗೆ ಹಚ್ಚಿದ ಪ್ರೀತಿ ದೇವತೆ ನೀನು ಎಂದು ಉಲಿಯುತ್ತಿದ್ದೇನೆ.                  ಆ ಮೊಹಕ ಮುಸ್ಸಂಜೆ ನನಗಿನ್ನೂ ನೆನಪಿದೆ. ನಮ್ಮ ಮಾಮೂಲಿ ಪಾರ‍್ಕಿನಲ್ಲಿ ನಿನಗಾಗಿ ಕಾಯುತ್ತಿದ್ದೆ. ಕರಿ ಮೋಡಗಳು ವಿಚಿತ್ರ ಶಾಖದಲ್ಲಿ ಹನಿ ಹನಿ ಮಳೆ ಸುರಿಸತೊಡಗಿದ್ದವು.ಇದ್ದಕ್ಕಿದ್ದಂತೆ ಸುಮಧುರ ಘಮ ಸೂಸುತಿರುವಂತೆ ಭಾಸವಾಯಿತು.ಗಿಡದಂಚಿನಲ್ಲಿ ಮೈಬಿರಿಯಲು ಸಿದ್ಧವಾಗಿರುವ ಮೊಗ್ಗಿನಂತೆ ದೂರದಲ್ಲೇ ನಿಂತಿದ್ದ ನಿನ್ನ ಪಕ್ಕ ಬಂದು ನಿಂತೆ. ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ನನಗಷ್ಟೇ ಕೇಳುವಂತೆ ‘ಮನೆಯಲ್ಲಿ ನನಗೆ ಗಂಡು ನೋಡುತ್ತಿದ್ದಾರೆ.’ ಎಂದು ಪಿಸುಗುಟ್ಟಿ  ನನ್ನ ಕೈ ಹಿಡಿದೆ. ನಿನ್ನ ಹಿತವಾದ ಸ್ಪರ್ಶ ಮೈಗೆ ವಿದ್ಯತ್ ಪುಳಕವನ್ನು ಕೊಟ್ಟಿತು.  ಸಟ್ಟನೆ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ಬಳಸಿದೆ. ಕೊರಳಿಗೆ ಎರಡೂ ಕೈಗಳನ್ನು ಜೋತು ಹಾಕಿದೆ. ಸ್ನೇಹದಿ ಸಮ್ಮೋಹಿಸಲು ಮುದ್ದಾಡಲು ಮುಂದಾದಾಗ ‘ತಂಟೆ ಮಾಡುವ ತುಂಟ ನೀನು.’ ಮನಸ್ಸು ಹೇಗೇಗೋ ಜಾರುವುದು ಅದರ ಕೈಗೊಂಬೆ ಆಗುವುದು ಬೇಡ ಚೆಲುವ. ಆತುರ ಬೇಡ ಅವಸರ ಬೇಡ ಪ್ರೀತಿಗೆ. ತುಟಿಗಳೆರಡು ಭಯದಲ್ಲಿ ನಿಂತು ಹೆಚ್ಚಿಸಲಿ ಹೃದಯಗಳ ವೇಗ ಎಂಬ ಕನಸಿನ ಚಿಗುರು ನನ್ನಲ್ಲೂ ಇದೆ. ಒಲವಿನ ಹೊನ್ನ ಹೊಳೆ ನನ್ನೆದೆಯಲ್ಲೂ ಹರಿಯುತಿದೆ. ಎನ್ನುತ್ತ ಕೈ ಬಿಡಿಸಿಕೊಂಡು ಓಡಿದೆ. ‘ಎಷ್ಟಾದರೂ ಹೆಣ್ಣು ಜೀವವಲ್ಲವೇ ನಾಚಿಕೆಯೇ ಆಭರಣ ಈ ಜೀವಕೆ.’ ಎಂದುಕೊಂಡೆ. ದೇವರ ಕೃಪೆಯಿರಬಹುದು ನೀ ನನಗಾಗಿ ಮೀಸಲಿರುವೆ. ನನ್ನತ್ತೆ ಮಾವನೊಂದಿಗೆ ಮಾತು ಕತೆ ಆಗಿದೆ. ಹಸಿರು ನಿಶಾನೆಯೂ ದೊರೆತಾಗಿದೆ. ಸಿಗುವೆ ಮದುವೆ ಮಂಟಪದಲ್ಲೇ ‘ಜನುಮದ ಗೆಳತಿ ಉಸಿರಿನಾ ಒಡತಿ ಮರೆತರೆ ನಿನ್ನ ಮಡಿವೆನು ಚಿನ್ನ.’ ಎಂಬುದು ಮನದ ಹಾಡಾಗಿದೆ. ನಿನ್ನ ಸ್ನಿಗ್ದ ಸೌಂದರ‍್ಯದ ಸುಮಧುರ ಪರಿಮಳದ ತನುವಿನೊಂದಿಗೆ ಪ್ರತಿ ಇರುಳು ಬಿಡದೇ ಒಲವಿನಾಟದಲಿ ಬೆರೆಯುವೆ.ಆ ಖುಷಿಯಲಿ ಒಂದಾಗಲು ನೀನೂ ಸಿದ್ಧಳಾಗಿರು ಚೆಲ್ವಿ.                                           ****************************************

ಇತರೆ Read Post »

ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ದ.ರಾ.ಬೇಂದ್ರೆ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ೧) ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨) ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ ೩) ಇರು ಅಂದರ ಬರತೇನಂತ ಎದ್ದು ಹೊರಡಾಂವಾ ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ ಇನ್ನೂ ಯಾಕ………. ೫) ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ ಇನ್ನೂ (೬)   ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ? ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ? ಇನ್ನೂ ಯಾಕ ಬರಲಿಲ್ಲಾ ? ಇನ್ನೂ ಯಾಕೆ ಬರಲಿಲ್ಲಾವಾ ಹುಬ್ಬಳ್ಳಿಯಂವಾ ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ  ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರಿಕಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ  ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ  ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ.  ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ.  ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ.  ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ.  ಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ.  ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ   ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿ್ರು ಅದಕ್ಕೂ ಮೇಲಿನದ್ದು ಜೋಗತಿಯರು.  ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ.  ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ  ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ.  ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ. ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು?  (ನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ ಪ್ರತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ.  ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ.  ಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದವನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ** ಸುಜಾತಾ ರವೀಶ್

ನನ್ನ ಇಷ್ಟದ ಕವಿತೆ Read Post »

You cannot copy content of this page

Scroll to Top