ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಯುಗಾದಿ ವಿಶೇಷ ಬರಹ ಯುಗಾದಿ ಯುಗಾದಿ        ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಒಂದು ಅತ್ಯುನ್ನತ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದಲೇ ಭಾರತೀಯರು ತಮ್ಮ ಹೊಸವರುಷದ ದಿನವೂ ಯುಗಾದಿಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಗ್ರಾಮೀಣರ ಆಡುಮಾತಿನ ಲ್ಲಿ ಹೇಳುವುದಾದರೆ ಯುಗಾದಿಯು ‘ಉಗಾದಿ’ ಎನಿಸಿಕೊಳ್ಳುತ್ತದೆ. ಯುಗಾದಿ ಹಬ್ಬ ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ ನವಮನ್ವಂತರ, ಅಲ್ಲದೆ ಇದು ಭಾರತೀಯರಾದ ನಮ್ಮ ಪಾಲಿಗೆ ಹೊಸ ವರುಷದ ಮೊದಲ ದಿನ.     ಯುಗಾದಿಯನ್ನು ಚಾಂದ್ರಮಾನ- ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿಯಿದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ದತಿಗೆ ಚಾಂದ್ರಮಾನ ಯುಗಾದಿ ಎನ್ನುವರು. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನ ವನ್ನು ಅನುಸರಿಸಿ ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುವರು.  ಬೇವು- ಬೆಲ್ಲ       ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.ಬೇವು ಬೆಲ್ಲವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ…  ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಅದರರ್ಥ ಹೀಗಿದೆ– “ನೂರು ವರುಷಗಳ ಆಯುಷ್ಯ, ಸದ್ರಢ ಆರೋಗ್ಯ ,ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ”.   ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ,ಸುಖ- ದು:ಖ, ನಲಿವು,ನೋವು ಎಂಬ ಮಾತಿನಂತೆ ಜೀವನದಲ್ಲಿ ಇವೆರಡರ ಇರುವಿಕೆ ಅಗತ್ಯ ವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ‌ಸಾಧ್ಯ. ಆದರೆ ಕಷ್ಟಕ್ಕಿಂತ ಸುಖವೆ ಬೇಕು‌ ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ ಜೀವನ ಎನ್ನುವುದು ಕಷ್ಟ ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ‌ ಇವೆರಡು ಒಂದನ್ನೊಂದು ಬಿಟ್ಟಿರಲಾರವು.        ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ.       ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ವರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುತ್ತದೆ.       ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳು ಆಚರಿಸುತ್ತಾರೆ. ರೈತರು ಎತ್ತುಗಳನ್ನು ಅಲಂಕರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ವನ್ನು ಭಾರತ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಗುಜರಾತ್,ಮಹಾರಾಷ್ಟ್ರದಲ್ಲಿ ಯುಗಾದಿಯ ದಿನ ಪ್ರತಿಯೊಂದು ಮನೆಯ ಮುಂದೆ ಗುಡಿಯನ್ನು ನಿಲ್ಲಿಸುವ ಪದ್ದತಿ ಇರುವುದರಿಂದ ಯುಗಾದಿಯನ್ನು ಗುಡಿಪಾಡ್ಯ ಎಂದು ಕರೆಯುವರು. ಗುಡಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟೆ ಏರಿಸಿ ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು‌ ಕಟ್ಡಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ.      ಸಿಹಿತಿನಿಸು……    ಒಬ್ಬಟ್ಟು ಅಥವಾ ಹೊಳಿಗೆ ಬಹಳ ದಿನ ಇರದೇ ಕೊಡುವುದೆಂದು ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುವರು. ಇದನ್ನೆ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆಯುತ್ತಾರೆ. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆವರು.  ಯುಗಾದಿಯ ಖಗೋಳ ಘಟನೆಗಳು     ಯುಗಾದಿಯ ಸಂದರ್ಭದಲ್ಲಿ ಭೂಮಿಯ ಆಕ್ಸೆಸ್ ವಾಲುತ್ತದೆ. ಉತ್ತರ ಗೋಳಾರ್ಧವು ಹೆಚ್ಚಿನ ಪ್ರಮಾಣದ ಸೂರ್ಯನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಸಮಯದಲ್ಲಿ ಭೂಮಿಯು ಹೆಚ್ಚು ಉಷ್ಣತೆಗೆ ಒಳಗಾಗುತ್ತದೆ. ಆದ್ದರಿಂದ ಮನುಷ್ಯರಿಗೆ ಹೆಚ್ಚು ಶಾಖದ ಅನುಭವಾಗುತ್ತದೆ. ಅದನ್ನು ಸಹಿಸುವ ಶಕ್ತಿಯನ್ನು ಯುಗಾದಿ ಆಚರಣೆ ನೀಡುತ್ತದೆ‌. ಖಗೋಳ ಶಾಸ್ತ್ರದ ಪ್ರಕಾರ ಯುಗಾದಿಯ ಹಿಂದಿನ ದಿನ ಅಮವಾಸ್ಯೆ ಯಾಗಿರುತ್ತದೆ.       ಹೊಸ ಸಂವತ್ಸರದ ಪ್ರಾರಂಭದ ದಿನ ಇದು. ವಸಂತ ಋತುವಿನ ಪ್ರಾರಂಭದ ದಿನ ಇದಾಗಿರುತ್ತದೆ. ಇನ್ನು‌ “ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು” ಎಂಬ ಹಾಡಿನಂತೆ ಪ್ರಕೃತಿಯೂ ಕೂಡ ಚಿಗುರೆಲೆಗಳಿಂದ‌ ಹೊಸ ಋತುವಿನ ಸ್ವಾಗತ ಕೋರಲು ಸಜ್ಜಾಗಿರುವ ಸಮಯ ಇದಾಗಿದೆ.       ಈ ಸಮಯದಲ್ಲಿ ಮರಗಳ ಎಲೆಗಳು ಉದುರುತ್ತದೆ, ಹೊಸ ಚಿಗುರು ಪ್ರಾರಂಭವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯೂ ಕೂಡ ನೀಡಲು ಪ್ರಾರಂಭಿಸುವ ಸುದಿನ ಇದು.  ಪಂಚಾಂಗದ ಪ್ರಕಾರ ಯುಗಾದಿಯ ದಿನದಂದು ಹೊಸ ಹಿಂದೂ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ.     ಹಿಂದೂ ಕ್ಯಾಲೆಂಡರ್ ಕೇವಲ ಸಾಂಪ್ರದಾಯಿಕವಾಗಿ ಮಾತ್ರವೇ ಮಹತ್ವಪೂರ್ಣ ವಾದುದಲ್ಲ. ಆದರೆ ಇದು ವೈಜ್ಞಾನಿಕವಾಗಿಯೂ ಮತ್ತು ಖಗೋಳ ಶಾಸ್ತ್ರದ ಪ್ರಕಾರವೂ ಕೂಡ ಹಲವು ಗ್ರಹಗಳ ಕ್ಷಣಗಳನ್ನು ವಿವರಿಸುವ ಸಂಪರ್ಕ ಸಾಧನವಾಗಿದೆ.      ನಮ್ಮ ಭಾರತೀಯ ಶ್ರೇಷ್ಠ ಗಣಿತಜ್ಞರೆನಿಸಿರುವ ಭಾಸ್ಕರಾಚಾರ್ಯರ ಪ್ರಕಾರ ಯುಗಾದಿಯ ಸೂರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆ ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.      ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ತವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲತೆಯನ್ನು ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ.      ಯುಗ ಯುಗಾದಿ ಕಳೆದರೂ      ಯುಗಾದಿ ಮರಳಿ ಬರುತಿದೆ      ಹೊಸವರುಷಕೆ ಹೊಸಹರುಷವ      ಹೊಸತು‌-ಹೊಸತು ತರುತಿದೆ…… ಎಂಬ ದ.ರಾ.ಬೇಂದ್ರೆ ಯವರ ಹಾಡಿನ ಸಾಲಿನಂತೆ ನಾವೆಲ್ಲರೂ ಯುಗಾದಿಯ ನಿಜ ಅರ್ಥ ಅರಿತು ಸಹಕಾರ, ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸೋಣ. ******************************************************           ಅಕ್ಷತಾ ಜಗದೀಶ.

Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿಯ ಸವಿ ಅಲ್ರಿ..ನನಗೊಂದು ಹೊಸ ಸೀರಿಬೇಕು.ಯಾಕಂದ್ರ ಹೊಸ ವರ್ಷದ ಸಂಭ್ರಮಕ ಎಲ್ಲವೂ ಹೊಸದಾಗಿರಬೇಕು ಅನ್ನು ತ್ತಿದ್ದರು ಅವನೇನು ತಲಿ ಕೆಡಸಿಕೊಂಡಿರಲಿಲ್ಲ. ಅಲ್ಲೆ ಕಪಾ ಟ ತುಂಬ ಇರೋ ಸಾರಿ ಮೊದಲ ಉಟ್ಟ ಹರಿ,ಆ ಮ್ಯಾಲೆ ಹೊಸಾದು ತಗೊಳಾಕಂತ. ಸುಮ್ಮನ ಯಾಕ ಖರ್ಚು ಎಷ್ಟ ರ ಜಿಪುಣ‌ ಅದಿರಿ ನೀವು? ನಾ ಎನಾರ ಬಂಗಾರ ಕೇಳಿನೇ ನು? ಅದನಂತೂ ಹಾಕ್ಕೊಂಡು ಅಡ್ಡಾಡೋ ಯೋಗ ಇಲ್ಲ ನನಗ.ಬರಿ ಸೀರಿವಳಗಾದ್ರೂ ಖುಷಿ ಪಡೋಣ‌ ಅಂದ್ರ ಅದಕೂ ಹಿಂಗ ಅಂತಿರಿ. ಗೆಳತೆರ ಮುಂದ ಮರ್ಯಾದಿ ತಗಿಬ್ಯಾಡ್ರಿ? ಹಾಂಗಲ್ಲ ಮಾರಾಯ್ತಿ, ನನ್ನ ಅಂಗಿ ಪ್ಯಾಂಟ್ ನಮ್ಮ ಮದವ್ಯಾಗಿಂದು. ಇನ್ನು  ಹಾಂಗ ಅದಾವ ನಾ ಎನ ರ ಹೊಸಾದು ಇಷ್ಟವರ್ಷದಾಗ ಹೊಲಸಿನೇನ? ಇದ್ದುದ ರಾಗ ಮಾಡಕೊಂಡ ಹೊಂಟಿಲ್ಲೆನ ಅದಕ ಎಲ್ಲ ಹಬ್ಬ, ಅಮಾಸಿ,ಹುಣ್ಣಮಿಗೆ ಅರಬಿ ತಗೊಳ್ಳೊದು ಕಡಮಿ ಮಾ ಡು ನನ್ನ ಕಿಸೆ ಮೊದಲ ಹರದೈತಿ. ಆತ ಬಿಡ್ರಿ? ಹೆಚ್ಚ ಮಾತ ಬೇಡ.ನಿಮಗ ಕೊಡಸಾಕ ಮನ ಸಿಲ್ಲ‌ ಅಂತ ಡೈರೆಕ್ಟ ಹೇಳಿಬಿಡ್ರಿ.ಎಲ್ಲರ ಮನಿಯಾಗ ಹಬ್ಬಕ್ಕ ಬಟ್ಟಿ,ಬಂಗಾರ ಹಾಕ್ಕೊಂಡು ಹಬ್ಬ ಮಾಡಿದ್ರ,ನಮ್ಮ ಮನಿ ಯಾಗ ಹಳೆ ಸೀರ್ಯಾಗ ಹೊಸವರ್ಷಾನ ಬರಮಾಡಕೋ ಭಾಗ್ಯ ಸಿಕ್ಕಿದ್ದು ನನ್ನ ಹಣೆಬರ ಇಷ್ಟ ಅಂತಾತು.ಉಡಾಂಗಿ ಲ್ಲ,ತೊಡಾಂಗಿಲ್ಲ ಎನ್ನುತ್ತ ಬಿರುಸಿಲೆ ಒಳನಡೆದೆ. ಹಬ್ಬ ಅಂದ ಮ್ಯಾಲೆ ಸ್ವಲ್ಪರ ತಯಾರಿಬೇಕು.ಬೆಲ್ಲ,ಬೇವು,ಕಬ್ಬು ಮಾವು ಹೊಸ ಫಲಗಳ ಪೂಜಿಸಾಕ ರೆಡಿ ಮಾಡತಿದ್ದೆ. ಅವನು ನಾನು ಬೆರೆತಿದ್ದು ಕಷ್ಟದ ಸಮಯದಾಗ. ಬದುಕಿಗೆ ಯಾರ ಆಶ್ರಯವಿಲ್ಲದೇ ಇರುವೆಯಂತೆ ಹಗುರಾದ ಆನೆ ಯಂತೆ ಭಾರವಾದ ಎಲ್ಲ ಸುಖವ ಸಮನಾಗಿ ಹಂಚಿಕೊಂ ಡು ಹೆಜ್ಹೆಯಿಟ್ಟವರು. ದೈವದ ಸಂಕಲ್ಪವೇ ಕೈ ಹಿಡಿದು ಮುನ್ನಡೆಸಿದೆ. ಕಷ್ಟ ಸುಖಗಳಿಗೆ ಸಮನಾಗಿ ಬೆರೆಯುವ ಮನೋಭಾವ ಎಲ್ಲರಲ್ಲಿ ಬರಲೆಂದು, ಚಾಂದ್ರಮಾನ ಯುಗಾದಿ ಹೊಸ ಸಂವತ್ಸರಕ್ಕೆ ಪಾದಾರ್ಪಣೆ  ಮಾಡುವಾ ಗ ನಮ್ಮಲ್ಲಾಗುವ ಬದಲಾವಣೆಗಳು ಇಡೀ ಜೀವನದ ಮೇಲೆ ಪರಿಣಾಮ ಬಿರುವಂತಹ ಸುಸಂದರ್ಭ.ಇದೆಲ್ಲ ಗೊತ್ತಿದ್ದು ಎಲ್ಲ ಬೇಡವೆನ್ನುವವನ ಕಂಡು ಮಾತಾಡಿ ಉಪಯೋಗವಿಲ್ಲವೆಂದು ಸುಮ್ಮನಾದೆ. ಮಕ್ಕಳು ಅಪ್ಪನೊಂದಿಗೆ ತಳಿರುತೋರಣ ಕಟ್ಟುವಲ್ಲಿ ಬ್ಯೂಜಿ.ನಾನು ಅಡಿಗೆ ತಯಾರಿಯಲ್ಲಿ ಮನೆಯೋ ನವ ಮದುಮಗಳಂತೆ ಶೃಂಗಾರ ಮಾಡಿದ್ದು ಖಷಿ ತಂದಿತ್ತು. ಎಲ್ಲವಿದ್ದರೂ ಅವನ ಪ್ರೇಮದ ಮಾತುಗಳು ಸುಳಿಯದಿ ದ್ದರೆ,ಬೇವು ಮಾತ್ರ ಒಡಲ ಸೇರಿ ಬೆಲ್ಲದ ಸವಿಯ ಇಲ್ಲವಾ ಗಿಸಿದಂತೆ. ಹೊಸ ಪಂಚಾಂಗದ ಮುನ್ನುಡಿ ನಂಬುವವರ ರಾಶಿಗಳ ಬಲಾಬಲದ ಪಠಣ.ನಲಿವೆಂಬುದು ನಮ್ಮಲ್ಲಿ ಸದಾ ಜೇನುಗೂಡು ಕಟ್ಟಿದಂತೆ. ಪೂಜೆಯ ಸಿದ್ದತೆ‌ ಮುಗಿದ ಮೇಲೆ ರೆಡಿಯಾಗಲು ಇದ್ದುದ ರಲ್ಲೆ ಸೀರೆಗಾಗಿ ಹುಡುಕಾಟ. ಎದುರಿಗೊಂದು ಪಾಕೀಟು. ಆಶ್ಚರ್ಯ ಇದೇನೆಂದು ಬಿಚ್ಚಿದರೆ ‘ಸೀರೆ’ನನಗಿಷ್ಟವಾದ “ತಿಳಿನೀಲಾಕಾಶ” ಆಗಿಂದ ಅಂದಿದ್ದೆಲ್ಲ ಬರಿ ತಮಾಷೆ, ರೇಗಿಸುವ..ಬುದ್ದಿ ಇನ್ನು ಹೋಗಿಲ್ಲ. ಅದೆಲ್ಲ ಸತ್ಯ ಅಂತ ಬೈದೆನಲ್ಲ ಎನ್ನುತ ಸೀರೆ ಕವರ್ ಸಮೇತ ರೀ…ಇದು ನನಗಾ? ಮತ್ತೆ ಹೇಳಲೇ ಇಲ್ಲ? ಅಯ್ಯೋ  ಗುಂಡಿ ನಿನ್ನ ಗುಣ ನನಗಲ್ಲದೆ ಇನ್ನಾರಿಗೆ ಗೊತ್ತಾಗೊದು? ಮನೆಯ ಮಹಾಲಕ್ಷ್ಮಿ ಕಣೇ ನೀನು.ಸದಾ ನಗುನಗುತಾ ಓಡಾಡಿಕೊಂಡಿದ್ದರೆ ಅದೇ ನನಗೆ ಸ್ವರ್ಗ. ಯುಗಾದಿಯು ಕಹಿ ನೆನಪುಗಳ ಮರೆಸಲಿ, ಸಿಹಿನೆನಪುಗಳನ್ನು ಹಚ್ಚಿಸಲಿ. ನಮ್ಮಿಬ್ಬರ ಬಾಳಲಿ ವಿರಸಗಳು ಸುಳಿಯದಿರಲಿ ಚಿನ್ನಾ. ಬೇವು-ಬೆಲ್ಲದಂತೆ ಎನ್ನುತ ಮುದ್ದಿಸಿದವನ ಪ್ರೀತಿಯಲಿ ಯುಗಾದಿಯ ಸವಿಯ ಮೆಲ್ಲುತ್ತಿದ್ದೆ…. ********* ಶಿವಲೀಲಾ ಹುಣಸಗಿ

Read Post »

ಇತರೆ

ಯುಗಾದಿ ವಿಶೇಷ ಬರಹ ಕಹಿ ಜಾಸ್ತಿ ತಿಂದ್ರೆ ವರ್ಷ ಪೂರ್ತಿ ಸಿಹಿಯಂತೆ  ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ವರ್ಷದ ಆರಂಭ ಯುಗಾದಿ. ಸಂವತ್ಸರವೊಂದು ಮುಗಿದು ಮತ್ತೊಂದು ಸಂವತ್ಸರಕ್ಕೆ ಕಾಲಿಡುವ ಸಮಯ ಅರವತ್ತು ಸಂವತ್ಸರಗಳ  ಈ ಚಕ್ರದಲ್ಲಿ ಈಗ ನಾವು ೩೫ ರ ಪ್ಲವ ನಾಮ ಸಂವತ್ಸರದಲ್ಲಿ ಇದ್ದೇವೆ. ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಬಂದಮೇಲೆ ತಿಥಿ ನಕ್ಷತ್ರ ಸಂವತ್ಸರಗಳ ಲೆಕ್ಕಾಚಾರ ಅಷ್ಟಾಗಿ ನಮ್ಮ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿಲ್ಲ.  ಅದರಲ್ಲಿ ಯುಗಾದಿಯ ಆಚರಣೆ ಸ್ವಲ್ಪ ಮುಂಚೂಣಿಯಲ್ಲಿದೆ ಅನ್ನಬಹುದೇನೋ. ಯಾಕೆಂದರೆ ನಾವು ಹೊಸವರ್ಷವನ್ನು ಡಿಸೇಂಬರ್ 31ರಂದು ಸಂಪದ್ಭರಿತವಾಗಿ ಆಚರಿಸುತ್ತೇವೆ.  ಅದೇನೇ ಇದ್ದರೂ ವಾಸ್ತವದ ಲೆಕ್ಕಾಚಾರ ಕಾಲಮಾನ ಬದಲಾಗಲಾರದು. ಹೂ ಹೀಚು ಹಣ್ಣುಗಳಿಂದ  ಪ್ರಕೃತಿ ಹೊಸ ಹೊಸ ಬಗೆಯ ಉಡುಗೆ ತೊಟ್ಟು ಸಂಭ್ರಮಿಸುವ ಕಾಲ ಈಗಲೇ. ಇಯರ್ ಎಂಡ್ ಅಂತ ಈಗಲೂ ಲೆಕ್ಕಾಚಾರ ಮಾರ್ಚ್ ತಿಂಗಳನ್ನೇ ಹೇಳೋದು. ಯುಗಾದಿಯ ನಂತರ ವಿಪರೀತವಾಗುವ ತಾಪಮಾನ.  ಹಲವಾರು ರೋಗ ರುಜಿನಗಳನ್ನು ತರುತ್ತದೆ. ನೂರಕ್ಕೂ ಹೆಚ್ಚು ಔಷಧೀಯ ಗುಣವಿರುವ ಬೇವು, ಇದರ ಸೇವನೆಯಿಂದ, ಬರುವ ರೋಗಗಳನ್ನು ತಡೆಗಟ್ಟಬಹುದು. ಮತ್ತು ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಜೊತೆಗೆ ಬೆಲ್ಲವನ್ನೂ ತಿನ್ನುವ  ವೈಜ್ಞಾನಿಕ ಕಾರಣವೂ ನಮಗಿಲ್ಲಿ ಸಿಗುತ್ತದೆ. ಈಗಲೂ ಹಳ್ಳಿಗಳಲ್ಲಿ ಬೆಲ್ಲ ತಿಂದು ನೀರು ಕುಡಿಯುವ ಪದ್ಧತಿ ಇದೆ.  ಮಲೆನಾಡಿನ  ಜೋರು ಮಳೆಗೆ ಜೀವ ಉಳಿಸಿಕೊಳ್ಳಲು ಹೆಣಗಾಡುವ ಬೇವಿನಗಿಡ ಅಪರೂಪದ ಅತಿಥಿ. ಹಬ್ಬದ ಮುಂಚಿನ ದಿನವೇ ಯಾರ ಮನೆಯಲ್ಲಿ ಬೇವಿನ ಗಿಡವಿದೆ ಎನ್ನುವ ತಲಾಷ್. ಕಣ್ಣು ಉಜ್ಜುತ್ತಲೇ ಬೇವಿನ ಎಲೆ ಕಿತ್ತು ತರುವ ಕಾಯಕ. ಹೆಚ್ಚು ಎಲೆ ತಂದರೆ ಹೆಚ್ಚು ತಿನ್ನಿಸುತ್ತಾಳೆ ಅಮ್ಮ ಎಂದು ಚೂರೇಚೂರು ಹಿಡಿದು ಬರುವ ಹುಷಾರಿತನ.  ಇದೇನು ಇಷ್ಟು ಹನಿ ಇನ್ನೂ ಬೇಕು ಎನ್ನುವ ಅಮ್ಮ ಮತ್ತೆ ತರುವ ವರೆಗೂ ಬಿಡ್ತಿರಲಿಲ್ಲ.  ಅಮ್ಮ ಅದೆಷ್ಟು ಕಹಿ ತಿನ್ನಿಸುತ್ತಾಳೋ ಇಂದು  ಎಂದು ನಮ್ಮ ನಮ್ಮೊಳಗೆ ಚರ್ಚೆ ಹೇಗೆ ತಪ್ಪಿಸಿಕೊಳ್ಳುವದೆಂದು.  ಎಲ್ಲಾ ಹಬ್ಬಗಳಲ್ಲೂ ಸಂಭ್ರಮ ಸೂಸುವ ಮುಖದಲ್ಲಿ ಆವತ್ತು ಸ್ವಲ್ಪ ಮಂಕು. ತುಪ್ಪದಲ್ಲಿ ಹುರಿದು ಜೊತೆಗಿಷ್ಟು ಬೆಲ್ಲ ಇಟ್ಟು ದೇವರಿಗೆ ಕೈಮುಗಿದು ತಿನ್ನಿ ಎನ್ನುತಿದ್ದಳು.  ಈ ದಿನ ಕಹಿ ಜಾಸ್ತಿ ತಿಂದವರಿಗೆ  ಬದುಕಿನಲ್ಲಿ ಸಿಹಿ ಜಾಸ್ತಿ ಎನ್ನುವ ಅಮ್ಮನ ನುಡಿಗಟ್ಟಿಗೆ ಹೆದರಿ ತಟ್ಟೆಯಲ್ಲಿದ್ದ ಬೇವಿನ ಎಲೆಗಳೆಲ್ಲ ಖಾಲಿ. ಕಿವುಚಿದ ಮುಖದಲ್ಲಿ ಪೆಚ್ಚು ನಗು. ಅಪ್ಪ ಪೂಜೆಗೆ ಇಟ್ಟ ಪಂಚಾಂಗ ತೆಗೆದು ತಿಥಿ, ವಾರ,ನಕ್ಷತ್ರ,ವಾರ್ಷಿಕ ಹಬ್ಬಗಳನ್ನು ಓದುತ್ತಿದ್ದರು. ಆಗಲೇ ನಮಗೆ ವರ್ಷ ಭವಿಷ್ಯ ಓದಲು ಕಾತರ.  ಯಾರು ಮೊದಲು ಓದುವುದು  ಪೂರ್ಣ ವರ್ಷದ ಭವಿಷ್ಯವೀಗ ನಮ್ಮ ಕೈಯೊಳಗೆ ಇದೆ ಎನ್ನುವ  ಕೆಟ್ಟ ಕುತೂಹಲ. ಮತ್ತೆ ತಿಳಿದು ಕೊಳ್ಳುವ ಗಡಿಬಿಡಿ.  ಯಾರಾದರೂ ಒಬ್ಬರು ಎಲ್ಲರ ಭವಿಷ್ಯವನ್ನು ದೊಡ್ಡದಾಗಿ ಓದಬೇಕು ಎನ್ನುವಲ್ಲಿಗೆ ಅದಕ್ಕೊಂದು ಪರ್ಯಾಯ ವ್ಯವಸ್ಥೆ. ಅಪ್ಪನ ರಾಶಿಯಿಂದ ಶುರುವಾದ ಭವಿಷ್ಯ ಸುಮಾರು ಒಂದು ತಾಸುಗಳ ಕಾಲ ನಡೆಯುವ ಈ ಪ್ರಕ್ರಿಯೆಯಲ್ಲಿ ಇಡೀ ವರ್ಷದ ಬದುಕೇ ಕಣ್ಮುಂದೆ ನಿಂತು ಕುಣಿದ ಭಾವ. ಗೊತ್ತಿದ್ದವರದ್ದೆಲ್ಲ ಓದಿ ಎಲ್ಲರ ಹಣೆಬರಹ ಬಲ್ಲವರಂತೆ ಪೋಸು. ಕಲಹ,ಪ್ರೀತಿ, ಸಂತಾನ ಭಾಗ್ಯ,ಕಂಕಣ ಭಾಗ್ಯ, ಧನಹಾನಿ,ಮಾನ ಹಾನಿ. ಇದನ್ನೆಲ್ಲಾ ಪರಿಹರಿಸಲು ಸರಿದೂಗಿಸಲು ಅಲ್ಲೊಂದು ಸಣ್ಣ ತಯಾರಿ.  ಒಂದಕ್ಕೊಂದು ತಾಳೆಯಾಗದ ಭವಿಷ್ಯ ಫಲಕ್ಕೆ ಚಿಂತಿತ ಮನಸು,ಮುಸಿ ಮುಸಿ ನಗು.  ಒಟ್ಟಿನಲ್ಲಿ ಈ ವರ್ಷ ಮಿಶ್ರಫಲ ಎಂದಾಗ ಒಂತರ ಮಿಶ್ರಭಾವ.  ವರ್ಷಾರಂಭದ ವಾಸ್ತವ ಮತ್ತು ಕಲ್ಪನೆಗಳ ಬದುಕಿಗೆ, ಅಮ್ಮನ ಅಡುಗೆಯ ಹೋಳಿಗೆ ಸಿಹಿಯೊಡನೆ ಸಣ್ಣ ಆರಂಭ.  ಅಳು ನಗು ಕಿತ್ತಾಟ ಪ್ರೀತಿ ಇಂದು ನೀವು ಏನೇ ಮಾಡಿದರೂ  ವರ್ಷ ಪೂರ್ತಿ ಅದೇ ಇರುತ್ತೆ ನಿಮ್ ಪಾಲಿಗೆ ಎನ್ನುವ ವಾರ್ನಿಂಗ್ ಗೆ ಎಲ್ಲ ಮರೆತ ಭರಪೂರ ಪ್ರೀತಿ.  ಹಬ್ಬಗಳು ಯಾವುದೇ ಇರಲಿ ಆರೋಗ್ಯ,ಪ್ರೀತಿ, ನಿಷ್ಠೆ,ನಂಬಿಕೆಗಳ ಜೊತೆಗೆ ಬಂಧಗಳ ಬೆಸೆಯುವುದೇ ಎಲ್ಲ ಹಬ್ಬದ ಉದ್ದೇಶ ಎನ್ನುವುದು ನಾವು ಅರಿಯಬೇಕಾದ ಸತ್ಯ. ಯೇ ಕಹಿ ಜಾಸ್ತಿ ತಿನ್ನು ಇಲ್ಲ ಅಂದ್ರೆ ಬದುಕು ಸಿಹಿಯಾಗಿ ಇರಲ್ಲ ಅನ್ನೋದನ್ನ ಮಗನಿಗೆ ಹೇಳೋದನ್ನ ಮರೆತಿಲ್ಲ ನಾನು ಯಾಕೆಂದ್ರೆ ನಂಬಿಕೆಯೇ ಬದುಕು. ************************************** ಸ್ಮಿತಾ ಭಟ್

Read Post »

ಇತರೆ

ಯುಗಾದಿ ವಿಶೇಷ ಬರಹ ಹೊಸ ವರುಷವು ಬರಲಿ, ಸುಖ ಸಾವಿರ ತರಲಿ… ಅದೇನೋ ಬೇರೆ ಎಲ್ಲಾ ಹಬ್ಬಗಳಿಗಿರುವ ಒಂದು ಆಕರ್ಷಣೆ, ಆಚರಣೆ ಯುಗಾದಿ ಹಬ್ಬಕ್ಕಿಲ್ಲ. ಹಿಂದೂ ಚಾಂದ್ರಮಾನ ಪಂಚಾಗದ ಪ್ರಕಾರ ಚೈತ್ರ ಶುದ್ಧ ಪಾಡ್ಯಮಿಯನ್ನು ಯುಗಾದಿ ಹಬ್ಬವೆಂದು, ವರ್ಷದ ಮೊದಲ ದಿನವೆಂದು ಆಚರಿಸುತ್ತೇವೆ. ಸೌರಮಾನದವರು ಪ್ರತಿವರ್ಷ ಏಪ್ರಿಲ್‌ 14ರಂದು ಯುಗಾದಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಮಾರ್ಚ್‌ ತಿಂಗಳ ಕೊನೆಯಿಂದ ಏಪ್ರಿಲ್‌ ನಡುವಿನೊಳಗೆ ಹೊಸವರ್ಷದ ಆರಂಭವಾಗುವುದು ಆಚರಣೆಯಲ್ಲಿದೆ. ಚಿಕ್ಕಂದಿನಿಂದಲೂ ಈ ಹಬ್ಬದ ಬಗ್ಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವಿನ ಟೊಂಗೆಯನ್ನು ಸಿಕ್ಕಿಸಿ ಸಿಂಗರಿಸುತ್ತಿದ್ದೆವು. ಎಂದಿನಂತೆ ಅಂದೂ ನಮ್ಮಪ್ಪ ದೇವರಪೂಜೆ ಮಾಡುತ್ತಿದ್ದರು. ಆ ವರ್ಷದ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅದಕ್ಕೂ ಪೂಜೆ ಸಲ್ಲಿಸುತ್ತಿದ್ದರು. ನಂತರ ಬೇವಿನ ಹೂವು ಮತ್ತು ಬೆಲ್ಲದ ಮಿಶ್ರಣವನ್ನು ಪ್ರಸಾದವಾಗಿ ಕೊಡುತ್ತಿದ್ದರು. ಇದನ್ನು ಬೇಡವೆನ್ನುವಂತೆಯೇ ಇಲ್ಲ. ಜೀವನದಲ್ಲಿ ಎದುರಿಸುವ ಸಿಹಿ ಕಹಿಗಳ ಸಂಕೇತವಂತೆ ಇದು. ಎರಡನ್ನೂ ಸಮಭಾವದಿಂದ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಆಶಯವಿದೆ ಈ ಆಚರಣೆಯ ಹಿಂದೆ. ಒಟ್ಟಿನಲ್ಲಿ ಹೇಗೋ ನುಂಗಿಬಿಡುತ್ತಿದ್ದೆವು. ಆಮೇಲೆ ನಮ್ಮ ತಂದೆ ಪಂಚಾಗ ಶ್ರವಣ ಮಾಡುತ್ತಿದ್ದರು. ನಾವೇನು ಎಂದೂ ಕೇಳಿಸಿಕೊಂಡಿರಲಿಲ್ಲ ಬಿಡಿ. ಸ್ಕೂಲಿಗೆ ಹೋಗುವ ಯಾವ ಮಕ್ಕಳಿಗೂ ಯುಗಾದಿಯ ಬಗ್ಗೆ ವಿಶೇಷವಾದ ಅಸ್ಥೆಯಿರುವುದಿಲ್ಲ. ಯಾಕೆನ್ನಿ, ಎಲ್ಲರಿಗೂ ಪರೀಕ್ಷೆಯ ಸಮಯ. ವರ್ಷವಿಡೀ ಆರಾಮಾಗಿ ಕಾಲಕಳೆದು ʻಯುದ್ಧಕಾಲೇ ಶಸ್ತ್ರಾಭ್ಯಾಸʼದ ತರಹ ಆಗ ಪುಸ್ತಕ ಹಿಡಿದು ಕೂರುವವರದು ಒಂದು ರೀತಿಯ ಸಂಕಟವಾದರೆ, ವರ್ಷಾರಂಭದಿಂದಲೂ ಓದಿ ಓದಿ ಗುಡ್ಡೆಹಾಕಿ ಪರೀಕ್ಷೆಯಲ್ಲಿ ಏನು ಕೇಳಿಬಿಡುವರೋ ಎಂಬ ಆತಂಕದಿಂದಲೇ ಇರುವ ಬುದ್ಧಿವಂತ ವಿದ್ಯಾರ್ಥಿಗಳ ಸಂಕಟವೇ ಬೇರೆ. ಒಬ್ಬರಿಗೆ ಹೇಗೋ ಪಾಸಾಗುವಷ್ಟು ಅಂಕಗಳನ್ನು ಗಳಿಸಿಕೊಂಡು ಈ ವರ್ಷ ದಾಟಿಕೊಂಡರೆ ಸಾಕು, ಮುಂದಿನ ವರ್ಷ ನೋಡಿಕೊಂಡರಾಯಿತು ಎನ್ನುವ ಮನೋಭಾವವಿದ್ದರೆ, ಇನ್ನೊಬ್ಬರಿಗೆ ಯಾವ ಗೊಂದಲದಲ್ಲಿ ಎಷ್ಟು ಅಂಕ ಕಳೆದುಹೋಗುವುದೋ, ಭವಿಷ್ಯದ ಗತಿಯೇನು ಎನ್ನುವ ಚಿಂತೆ. ಹೇಗಿದೆ ನೋಡಿ, ದಡ್ಡರಿಗೆ ಗಳಿಸಿಕೊಳ್ಳುವ ಉಮೇದು; ಜಾಣರಿಗೆ ಕಳೆದುಕೊಳ್ಳುವ ಭಯ. ನಾನಂತೂ ಪ್ರತಿವರ್ಷವೂ ʻಮುಂದಿನ ವರ್ಷ ಹೀಗೆ ಕಡೆಯ ಘಳಿಗೆಯಲ್ಲಿ ಒದ್ದಾಡದೆ, ಅಂದಂದಿನ ಪಾಠಗಳನ್ನು ಅಂದಂದೇ ಓದುತ್ತೇನೆಂದುʼ ಒಂದು ಘೋರ ಪ್ರತಿಜ್ಞೆ ಮಾಡುತ್ತಿದ್ದೆ. ಆದರೆ ಅದನ್ನು ಪೂರೈಸಿಬಿಟ್ಟರೆ ಮುಂದಿನ ವರ್ಷ ಮಾಡಲು ಪ್ರತಿಜ್ಞೆಗಳೇ ಇರುವುದಿಲ್ಲವಲ್ಲ; ಹಾಗಾಗಿ ಅದನ್ನೆಂದೂ ಪೂರೈಸುತ್ತಿರಲಿಲ್ಲ. ಹೀಗೆ ಅವರವರದೇ ತಲ್ಲಣಗಳಲ್ಲಿ ಮುಳುಗಿರುವ ಕಾಲದಲ್ಲಿ ಹಬ್ಬ ಬಂದರೆ ಮಕ್ಕಳಿಗೆ ಅದಿನ್ಯಾವ ಖುಷಿಯಿದ್ದೀತು ಹೇಳಿ. ಆಗ ನಮಗಿದ್ದ ಒಂದೇ ಖುಷಿಯೆಂದರೆ ವರ್ಷದಲ್ಲಿ ಎರಡೇ ಹಬ್ಬಕ್ಕೆ ಹೊಸಬಟ್ಟೆ ಸಿಗುತ್ತಿದ್ದುದು, ಅದು ಯುಗಾದಿ ಮತ್ತು ದೀಪಾವಳಿಯಲ್ಲಿ ಮಾತ್ರಾ. ಮದುವೆಯ ಜವಳಿ ಕೊಳ್ಳುವಂತಹ ಉಮೇದಿನಿಂದ ಊರೆಲ್ಲಾ ಪರ್ಯಟನೆ ಮಾಡಿ, ಜೊತೆಯವರು ಕೊಂಡ ಬಟ್ಟೆಗಳ ಎಲ್ಲಾ ವಿವರಗಳನ್ನೂ ತಿಳಿದುಕೊಂಡು, ಅಂಥದೇ ಬೇಕೆಂದು ಅಪ್ಪ, ಅಮ್ಮರಲ್ಲಿ ಬೇಡಿಕೆಯಿಟ್ಟರೂ, ಅವಾವುದೂ ಹಬ್ಬದ ಬಜೆಟ್‌ನಲ್ಲಿ ಪಾಸಾಗದೆ ಕಡೆಗೆ ಅಮ್ಮ ತಂದ ಯಾವುದೋ ಒಂದು ಬಟ್ಟೆಗೆ ಸಮಾಧಾನ ಮಾಡಿಕೊಳ್ಳಬೇಕಿತ್ತು, ಮಾಡಿಕೊಳ್ಳುತ್ತಿದ್ದೆವು. ಹಬ್ಬದಡುಗೆಯಲ್ಲಿ ಹೆಚ್ಚಾಗಿ ಮಾವಿನಕಾಯಿ ಚಿತ್ರಾನ್ನ, ಹೋಳಿಗೆ ಇರುತ್ತಿತ್ತು. ಹೋಳಿಗೆಗಿಂತಾ ವರ್ಷದ ಹೊಸಫಸಲು ಮಾವಿನಕಾಯಿ ಚಿತ್ರಾನ್ನದ ಬಗ್ಗೆಯೇ ಹೆಚ್ಚಿಗೆ ಒಲವು. ವರ್ಷಾರಂಭವಾಗಿ ಮೂರು ತಿಂಗಳ ನಂತರ ಬರುವ ಯುಗಾದಿಗೆ ವರ್ಷದ ಮೊದಲು ಎಂದೇಕೆ ಹೇಳುತ್ತಾರೆಂದು ಆಗೆಲ್ಲಾ ಅನ್ನಿಸುತ್ತಿತ್ತು. ಸಂಕ್ರಾಂತಿ ಸುಗ್ಗಿಯ ಹಬ್ಬವಾದರೂ, ಅದು ಮರಗಳೆಲ್ಲಾ ಎಲೆಯುದುರಿಸಿ ಬೋಳಾಗಿರುವ ಕಾಲ. ಚಳಿ ಕಳೆದು ಬಿಸಿಲು ಹುಟ್ಟಿದಾಗಲೇ ಸುತ್ತಲಿನ ಪ್ರಕೃತಿಯಲ್ಲೂ ಎಂತಹ ಸುಂದರ ಬದಲಾವಣೆ. ಬೋಳುಮರಗಳ ಗೆಲ್ಲು ಗೆಲ್ಲುಗಳೂ ಜೀವರಸ ತಳೆದು ಮೆಲ್ಲಗೆ ಕುಡಿಯೊಡೆದು, ಎಲೆಗಳೆಲ್ಲಾ ನಸುಗೆಂಪಾಗಿ ಚಿಗುರೊಡೆದು, ಎಳೆಹಸಿರು, ಎಲೆಹಸಿರು, ಕಡುಹಸಿರು ಬಣ್ಣಕ್ಕೆ ತಿರುಗಿ, ಮೈತುಂಬಾ ಬಣ್ಣಬಣ್ಣದ ಹೂತಳೆದು ರಸ್ತೆಯುದ್ದಕ್ಕೂ ಹಾಸಿ ವಸಂತರಾಜನ ಆಗಮನಕ್ಕೆಂದು ಸಿದ್ಧವಾಗಿ ಸಿಂಗರಿಸಿಕೊಂಡು ನಿಂತಿರುವಾಗ ಅದೆಂಥ ಸೊಬಗು! ʻಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ; ಚಳಿಯನು ಕೊಂದ ಹಕ್ಕಿಗಲುಳಿಗಳೆ ಚಂದʼ ಎಂದು ಬಿ.ಎಂ.ಶ್ರೀಯವರು ಹಾಡಿದಂತೆ ಎಲ್ಲ ಜಡತ್ವವನ್ನೂ ಹೊಡೆದೋಡಿಸಿ ಹೊಸ ಚಿಗುರು, ಹೊಸ ಹೂವು, ಹಣ್ಣುಗಳನ್ನು ತರುವ ಯುಗಾದಿ ಚಂದವೇ ಅಲ್ಲವೇ. ʻಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ; ಎಲ್ಲಿಯದೀ ಅನುಬಂಧ!ʼ ಜೊತೆಗೇ ಹಿಮ್ಮೇಳದವರಂತೆ ಅದೆಷ್ಟೊಂದು ಹಾಡುವ ಹಕ್ಕಿಗಳು ಈ ಕಾಲದಲ್ಲಿ! ನೆತ್ತಿ ಸುಡುವಷ್ಟು ಬಿಸಿಲಿರುವಾಗ ತಂಪಾಗುವಂತೆ ಬೇವನ್ನು, ಹೊಂಗೆಯನ್ನೂ ಅರಳಿಸುವ ಪ್ರಕೃತಿಯ ಮಾಯೆ ಅದೆಂಥದು! ಸೃಷ್ಟಿಯ ಸಮತೋಲನವೆಂದರೆ ಇದೇ ಅಲ್ಲವೇ. ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಾಗಲೀ, ಹೂವಿನ ರಾಣಿ ಎನಿಸಿಕೊಂಡಿರುವ ಮಲ್ಲಿಗೆಯಾಗಲೀ ಮೊಗತೋರುವುದು ಈ ಕಾಲದಲ್ಲೇ. ನಮ್ಮಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು – “ಮಾವಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಇಷ್ಟ ಪಡದಿರುವವರೇ ಇಲ್ಲ. ಹಾಗೂ ಇದ್ದಾರೆಂದರೆ ಅದವರ ರುಚಿಯ ದೋಷ; ಮಾವು ಮಲ್ಲಿಗೆಯದಲ್ಲ” ಎಂದು. ನಿಜವಲ್ಲವೇ? ಮಾವು ಎಂದಾಕ್ಷಣ ನನ್ನ ನೆನಪು ನಮ್ಮ ಶಾಲೆಯ ದಿನಗಳಿಗೆ ಓಡಿಹೋಗುತ್ತದೆ. ಆಗೆಲ್ಲಾ ಹಲವು ಮುದುಕ, ಮುದುಕಿಯರು ಸ್ಕೂಲಿನ ಮುಂದೆ ಕಿತ್ತಳೆ, ಪರಗಿ, ನೇರಳೆ, ಬೋರೆಯಂತಹ ಹಣ್ಣುಗಳನ್ನು, ನೆಲ್ಲಿಕಾಯಿ, ಮಾವಿನಕಾಯಿ ಇಂತಹ ಹುಳಿಯಾದ ಕಾಯಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು, ಮುಂದೆ ಸುರಿದುಕೊಂಡು ಮಾರುತ್ತಿದ್ದರು. ಹಣ್ಣು ತೊಳೆದು ತಿನ್ನುವುದೆಲ್ಲಾ ಈ ಕಾಲಕ್ಕೆ, ಅಂದು ಅಂತಹ ರಿವಾಜುಗಳಾಗಲೀ, ಸ್ನಾನ ಸಂಸ್ಕಾರಗಳಾಗಲೀ ಇರಲಿಲ್ಲ. ಬೀದಿಯಲ್ಲಿಟ್ಟುಕೊಂಡಿದ್ದು ಸೀದಾ ಹೊಟ್ಟೆಯಲ್ಲಿರುತ್ತಿತ್ತು. ಎರಡು ಪೈಸೆಗೂ ನಾಲ್ಕಾರು ಪುಟ್ಟ ಹಣ್ಣುಗಳನ್ನು, ಕಾಯಿಗಳನ್ನು ಕೈಗಿಡುತ್ತಿದ್ದರು. ನಾವು ಕೊಂಡ ಹಣ್ಣುಗಳನ್ನು ಒಂದು ಪುಟ್ಟ ಅಲ್ಯುಮಿನಿಯಮ್ ಪಾತ್ರೆಗೆ ಸುರಿದುಕೊಂಡು ಅದಕ್ಕಷ್ಟು ಉಪ್ಪು ಖಾರ ಬೆರಸಿ, ಎಗರಿಸಿ ಎಗರಿಸಿ ಚೆನ್ನಾಗಿ ಹೊಂದಿಸಿ ಒಂದು ಕಾಗದದ ಪೊಟ್ಟಣಕ್ಕೆ ಹಾಕಿಕೊಟ್ಟರೆ… ಅಬ್ಭಾ! ಯಾವ ಅಮೃತದ ರುಚಿಯೂ ಅದರ ಮುಂದಿಲ್ಲ. ಪುಟ್ಟ ಕಿತ್ತಳೇ ಹಣ್ಣನ್ನು ಅರ್ಧಕ್ಕೆ ಹೆಚ್ಚಿ ಅದಕ್ಕೆ ಉಪ್ಪುಖಾರದ ಪುಡಿಯನ್ನು ಬೆರೆಸಿ ನಾಲಿಗೆಗೆ ಸವರಿಕೊಳ್ಳುತ್ತಿದ್ದರೆ, ಎಂತಹ ಬಾಯಿಕೆಟ್ಟು ರುಚಿ ಕೆಟ್ಟಿದ್ದರೂ ಓಡಿಹೋಗಬೇಕು! ಈ ಸರಕಲ್ಲೆಲ್ಲಾ ಹೆಚ್ಚಿನ ಬೆಲೆ ಎಂದರೆ ಗಿಣಿಮೂತಿ ಮಾವಿನಕಾಯಿಗೆ. ಪುಟ್ಟವಕ್ಕೆ ಐದು ಪೈಸೆಯಿಂದ ಹಿಡಿದು ದೊಡ್ಡ ಕಾಯಿಗಳು ಗರಿಷ್ಟವೆಂದರೆ ಇಪ್ಪತ್ತೈದು ಪೈಸೆ. ನಮ್ಮ ರೇಂಜ್‌ ಯಾವಾಗಲೂ ಐದರಿಂದ ಹತ್ತು ಪೈಸೆ ಮಾತ್ರಾ. ಅದೂ ಪರೀಕ್ಷೆ ಮುಗಿಯುವ ತನಕ ಏನೇ ಆದರೂ ಮಾವಿನಕಾಯನ್ನು ತಿನ್ನಲೇಬಾರದು ಎಂದು ಮನೆಯಲ್ಲಿ ಕಟ್ಟಪ್ಪಣೆ. ತಿಂದು ಜ್ವರ ಕೆಮ್ಮು ಬಂದು ಪರೀಕ್ಷೆಗೇ ಚಕ್ಕರ್‌ ಕೊಡುವಂತಾದರೆ ಎನ್ನುವ ಕಾಳಜಿ. ಅಪ್ಪಣೆಗಳನ್ನು ಮೀರುವುದರಲ್ಲಿರುವ ಖುಷಿ, ಪಾಲಿಸುವುದರಲ್ಲಿದೆಯೇ! ಹೇಗೋ ಅತ್ತೂ, ಕರೆದೂ ಎಂದೋ ಒಂದೊಂದು ದಿನವಾದರೂ ಕಾಸು ಗಿಟ್ಟಿಸಿಕೊಳ್ಳುತ್ತಿದ್ದೆವು. ಈ ತ್ಯಾಗಕ್ಕೆ ಪ್ರತಿಫಲವಾಗಿ ಕಡೆಯ ಪರೀಕ್ಷೆಯ ದಿನ ಹಟಮಾಡಿ ಒಂದಿಡೀ ಹತ್ತುಪೈಸೆಯ ಮಾವಿನಕಾಯನ್ನು ಕೊಂಡು ತಿಂದರೆ ಭೂತಬಲಿ ಹಾಕಿದಂತೆ! ಆಮೇಲೆ ಶಾಲೆಯ ಕಡೆ ಹೋಗುವಂತೆಯೂ ಇಲ್ಲ; ಹಣ್ಣುಕಾಯಿನ ಅಜ್ಜಿಯರೂ ಇಲ್ಲ. ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಕಾನ್ವೆಂಟಿನಲ್ಲಿ ದೊಡ್ಡ ಮಾವಿನ ಮರದ ತೋಪು ಇತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ತಂತಮ್ಮ ಗುಂಪಿನೊಡನೆ ಹೋಗಿ ನಿಗದಿ ಮಾಡಿಕೊಂಡಿದ್ದ ಮಾವಿನ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ಅಲ್ಲಿನ ಸಿಸ್ಟರ್‌ಗಳು ಅದೆಷ್ಟು ಶಿಸ್ತನ್ನು ಪಾಲಿಸುತ್ತಿದ್ದರೆಂದರೆ ಆ ಸಮಯಕ್ಕೆ ಮುಂಚೆಯೇ ಆಳುಗಳನ್ನು ಬಿಟ್ಟು ಉದುರಿದ ಕಾಯಿಗಳೆಲ್ಲವನ್ನೂ ಹುಡುಕಿ ಹುಡುಕಿ ಆರಿಸಿಕೊಂಡು ಹೋಗಿರುತ್ತಿದ್ದರು. ಮತ್ತು ಊಟದ ಸಮಯದ ಉದ್ದಕ್ಕೂ ತೋಪಿನ ಬಾಗಿಲಲ್ಲೇ ನಿಂತು ಯಾರಾದರೂ ಕಲ್ಲೆಸೆಯುತ್ತಿದ್ದಾರೆಯೇ, ಹತ್ತಿ ಕಿತ್ತುತ್ತಿದ್ದಾರೆಯೇ ಎನ್ನುವ ಕಣ್ಗಾವಲನ್ನು ಇರಿಸಿಕೊಂಡು ನಿಂತಿರುತ್ತಿದ್ದರು. ಟೊಂಗೆಟೊಂಗೆಯಲ್ಲೂ ಜಿಗಿಯುತ್ತಿರುವ ಎಳೆಯ ಮಾವಿನಕಾಯಿಗಳು… ಕಣ್ಣೋಟಕ್ಕಷ್ಟೇ, ಕೈಗಿಲ್ಲ! ನಾವು ಕುಳಿತಿರುವಾಗಲೇ, ನಮ್ಮ ಅದೃಷ್ಟ ಖುಲಾಯಿಸಿ ಯಾವುದಾದರೂ ಕಾಯಿ ಬಿದ್ದರೆ ಅದು ನಮ್ಮ ಪುಣ್ಯ. ಅದು ಹೇಗೋ ಟಿಫಿನ್‌ ಬಾಕ್ಸಿನ ಮುಚ್ಚಳದಿಂದಲೇ ಕತ್ತರಿಸಿ ಹಂಚಿಕೊಂಡು ತಿಂದಾಗ ಅದೆಂಥ ಆನಂದ. ಕದ್ದ ಮಾಲಿಗಿರುವ ರುಚಿ ಕೊಂಡದ್ದಕ್ಕಿದೆಯೇ? ನೆತ್ತಿಗೇರಿ ಜುಟ್ಟು ನಿಮಿರಿಸುತ್ತಿದ್ದ ಹುಳಿ ಅದೆಷ್ಟು ರುಚಿ! ಅಂತೂ ಅಂತಹ ಅದೃಷ್ಟವೂ ಎಂದಾದರೊಮ್ಮೆ ಒದಗಿ ಬರುತ್ತಿತ್ತು. ಈಗ ಮತ್ತೆ ಯುಗಾದಿ ಹಬ್ಬಕ್ಕೆ ಬರೋಣ. ಹಬ್ಬದ ದಿನ ಸಂಜೆ ನಾವೆಲ್ಲರೂ ಹೊಸ ಬಟ್ಟೆ ತೊಡುತ್ತಿದ್ದೆವು. ಹೊಸ ಸೀರೆಯುಟ್ಟ ಅಮ್ಮ ಪಂಚಾಂಗದಲ್ಲಿ ಈ ವರ್ಷದ ಭವಿಷ್ಯ ಹೇಗಿದೆಯೆಂದು ಓದುತ್ತಿದ್ದರು. ಮಳೆ, ಬೆಳೆ, ರಾಜಕೀಯ ಪಲ್ಲಟಗಳು ಎಲ್ಲವೂ ಮುಗಿದ ನಂತರ ಪ್ರತಿಯೊಬ್ಬರ ರಾಶಿಯ ಕಂದಾಯ ಫಲವನ್ನು ನೋಡುತ್ತಿದ್ದರು. ಕಂದಾಯ ಫಲವೆಂದರೆ ಆಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜಪೂಜ-ರಾಜಕೋಪ ಹೀಗೆ ವರ್ಷದ ಮೂರೂ ಭಾಗಗಳಲ್ಲಿ ಒಬ್ಬೊಬ್ಬರ ಫಲವೂ ಹೇಗಿದೆ ಎಂದು ನೋಡುವುದು. ʻಮನೆಗಿರುವ ಆದಾಯ ಅಪ್ಪ ಒಬ್ಬರದೇ ಆಗಿರುವಾಗ ಬೇರೆ ಬೇರೆಯವರಿಗೆ ಬೇರೆ ಬೇರೆ ಆದಾಯ ಹೇಗಿರುತ್ತದೆ?ʼ ಎನ್ನುವ ಸಂಶಯ ನನಗೆ ಯಾವಾಗಲೂ. ಇದಾದ ಮೇಲೆ ಪ್ರತಿಯೊಬ್ಬರ ರಾಶಿಫಲವನ್ನೂ ಓದುತ್ತಿದ್ದರು. ಏನೋ ಚೆನ್ನಾಗಿರುವುದು ಬಂದರೆ ಓದು ಮುಂದುವರೆಯುತ್ತಿತ್ತು; ಇಲ್ಲವಾದರೆ “ಅಯ್ಯೋ ಇದ್ರಲ್ಲಿ ಬರ‍್ದಿರೋದೆಲ್ಲಾ ಆಗೋ ಹಂಗಿದ್ರೆ ಇನ್ಯಾಕೆ? ಬಂದಾಗ ಅನುಭವಿಸೋದು ಇದ್ದೇ ಇದೆ. ಸಾಕಿಷ್ಟು ತಿಳ್ಕೊಂಡಿದ್ದು” ಎನ್ನುತ್ತಾ ಪುಸ್ತಕ ಮುಚ್ಚುತ್ತಿದ್ದರು. ಎಷ್ಟೊಂದು ಆರೋಗ್ಯಕರ ಮನೋಭಾವವಲ್ಲವೇ?! ಈಗಂತೂ ಬಿಡಿ, ಪ್ರತಿ ವಾಹಿನಿಯಲ್ಲೂ ನೂರಾರು ಜ್ಯೋತಿಷ್ಯ ಹೇಳುವವರು ಉದ್ಭವಿಸಿ ದೊಡ್ಡ ಕಾರ್ಯಕ್ರಮವನ್ನೇ ನಡೆಸಿಬಿಡುತ್ತಾರೆ. ಕೆಲವು ಸಲವಂತೂ ಇಬ್ಬರು, ಮೂವರು ಒಟ್ಟಿಗೇ ಕುಳಿತು ಅದರ ಬಗ್ಗೆ ಚರ್ಚೆ, ವಾದ-ವಿವಾದಗಳು ಬೇರೆ. ಹಲವು ಕಂಟಕಗಳಿಗೆ ಅವರು ಹೇಳುವ ಪರಿಹಾರಗಳನ್ನು ಮಾಡಹೊರಟರೆ ಗಂಟು ಮುಳುಗಿ ಜನಸಾಮಾನ್ಯರು ಮಖಾಡೆ ಮಲಗುವುದೇ ಸರಿ. ಹೋಗಲಿ ಬಿಡಿ, ಅದು ಅವರವರ ವೃತ್ತಿ ಧರ್ಮ, ಕೇಳುವವರ ಕರ್ಮ. ಯುಗಾದಿಯಂದು ಎಲ್ಲರಿಗೂ ಒಳ್ಳೆಯದನ್ನು ಹಾರೈಸೋಣ. ಮುಂದೆ ಬರುವ ದಿನಗಳು ಚೆನ್ನಾಗಿರುತ್ತವೆ ಎಂದು ಭಾವಿಸೋಣ. ನಮ್ಮಮ್ಮ ಹೇಳಿದಂತೆ ʻಬಂದರೆ ಅನುಭವಿಸುವುದು ಇದ್ದೇ ಇದೆʼ. ಈಗಿಂದಲೇ ಏಕೆ ಚಿಂತೆ? ಮನೆಯಲ್ಲಿ ಮಾಡಲು ಬರದಿದ್ದರೆ ಹೋಳಿಗೆ ಮನೆಯಿಂದಾದರೂ ತಂದು ಮಧುಮೇಹವಿಲ್ಲದಿದ್ದರೆ ಹಾಲು, ತುಪ್ಪದೊಂದಿಗೆ ಸಂಭ್ರಮಿಸುತ್ತಾ ತಿನ್ನೋಣ. ಎಲ್ಲೆಲ್ಲೂ ಮಾವಿನಕಾಯಿ ಸುರಿಯುತ್ತಿದೆ. ಚಿತ್ರಾನ್ನಕ್ಕಂತೂ ಮೋಸವಿಲ್ಲ. ನೆನಪಿಸಿಕೊಂಡರೇ ಬಾಯಲ್ಲಿ ನೀರೂರುತ್ತಿದೆ. ಕೊರೋನಾ ಕಾವಳದಲ್ಲೂ ಇಂತಹ ಸಣ್ಣ ಪುಟ್ಟ ಸಂಭ್ರಮಗಳನ್ನು ಮನಸಾರೆ ಅನುಭವಿಸೋಣ. ********************************************* ಟಿ. ಎಸ್. ಶ್ರವಣ ಕುಮಾರಿ.

Read Post »

ಇತರೆ

ಯುಗಾದಿ ವಿಶೇಷ ಬರಹ ಚಿಗುರಿದಚೈತ್ರ ನಾಳೆ ಚೈತ್ರಮಾಸದ ಮೊದಲನೆ ದಿನ,  ನಮಗೆ ಹೊಸ ವರುಷ.  ತೊರಣ ಕಟ್ಟಬೇಕು, ಮಾವಿನ ಎಲೆ, ಬೇವಿನ ಸೊಪ್ಪು ತರಬೇಕಾಗಿದೆ, ಮಗನಿಗೆ ಹೇಳಲೇ! ಪ್ರತಿವರ್ಷವೂ ಇದೇ ಗೊಳು, ಮಗನು ಪ್ರಾಯಕ್ಕೆ ಬಂದಾಗಿಂದಾ ಹಬ್ಬದ ದಿನಗಳಲ್ಲಿ ಮಗನಾಗಲಿ, ಗಂಡನಾಗಲೀ ಸ್ವಲ್ಪವೂ ಆಸಕ್ತಿಯನ್ನು ತೋರುವುದೇ ಇಲ್ಲ.  ನಾನೊಬ್ಬಳೇ ಎಲ್ಲಾ ಹಬ್ಬದ ಕೆಲಸಗಳನ್ನು ಮಾಡಬೇಕು. ಎಲ್ಲರೂ ಆಸಕ್ತಿಯಿಂದ ಜೊತೆಗೂಡಿ ಹಬ್ಬಗಳನ್ನು ಆಚರಿಸಿದರೆ ಬಲು ಚೆಂದ.  ಏನು ಮಾಡುವುದಕೂ ಬೆಸರ, ಮನಸಿಗೆ ಉಲ್ಲಾಸವೇ ಇಲ್ಲವಾಗುತ್ತಿದೆಯಲ್ಲ! ಜೀವನದಲ್ಲಿ ಸಾರವೇ ಇಲ್ಲ. ಮೌನವಾಯಿತು ಮನ.  “ಏ ವೀಣಾ ಎಣ್ಣೆ ಸ್ನಾನ ಮುಗಿಸಿ, ಹೂಗಳ ಹಾರವನ್ನು ಕಟ್ಟಿ ಕೊಡು” ಅಮ್ಮನ ಕೂಗಿಗೆ ಎದ್ದು, ಬೇಗ ಬೇಗನೆ ಸಿದ್ಧಳಾದೆ.  ಅಕ್ಕನ ಜೊತೆ ಸೇರಿ ಮನೆಯ ಅಂಗಳದಲ್ಲಿ, ಪ್ರೀತಿಯಿಂದ ಆರೈಕೆಮಾಡಿ ಬೆಳೆದ, ಬಣ್ಣ ಬಣ್ಣದ ಸ್ಪಟಿಕ ಹೂ, ಮಲ್ಲಿಗೆ, ಗುಲಾಬಿ, ಸಂಪಿಗೆ, ಕಾಕಡ, ಮಾಚಿ ಪತ್ರೆ, ಗರಿಕೆ, ದಾಳಿಂಬ್ರೆ ಪತ್ರೆ, ಸೀಬೆಗಿಡದ ಒಂದೆರಡು ಕುಡಿಗಳನ್ನು ಕಿತ್ತು, ಅಕ್ಕನ ಜೊತೆ ಕೂಡಿ ಹೂವಿನ ಹಾರವನ್ನು ಕಟ್ಟಿ, ಪೂಜೆಯ ಸಿದ್ಧತೆಗಳನ್ನು ಮಾಡಿಮುಗಿಸಿದೆ.  ಅಣ್ಣ ಮಾವಿನ ಸೊಪ್ಪು, ಹೂಗಳಿದ್ದ ಬೇವಿನ ಚಿಗುರುಗಳನ್ನು ತಂದು, ಮಾವಿನ ತೊರಣವನ್ನು ಕಟ್ಟಿ, ಬೇವಿನ ಕುಡಿ, ಹೂವ, ಬೆಲ್ಲ, ಸ್ವಲ್ಪ ತುಪ್ಪ ಹಾಕಿ ಕುಟ್ಟಿ ದೇವರ ನೈವೇದ್ಯಕೆಂದು ಒಂದು ಬಟ್ಟಲಲ್ಲಿ ಹಾಕಿ ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದ್ದ ಅಪ್ಪನಿಗೆ ಕೊಟ್ಟನು, ತಾನೂ ಪೂಜೆಗೆ ಕುಳಿತನು. ಅಮ್ಮ ಬೇಗ ಬೇಗನೆ ಒಂದೆರಡು ಬೇಳೆ ಹೋಳಿಗೆಯನ್ನು ಮಾಡಿ, ತುಪ್ಪ ಹಾಕಿ ನೈವೇದ್ಯದ ಸಮಯಕ್ಕೆ ತಂದು ಕೊಟ್ಟು, ತಾನೂ ಮಹಾಮಂಗಳಾರತಿಯನ್ನು ತೆಗೆದುಕೊಂಡು, ಮತ್ತೆ ಹೊಳಿಗೆಯನ್ನು ಮಾಡಲು ಅಡುಗೆ ಮನೆಯತ್ತ ಹೋದಳು.  ಅಪ್ಪ ಎಲ್ಲರಿಗೂ ಬೇವುಬೆಲ್ಲದ ಮಿಶ್ರಣವನ್ನು ಕೊಟ್ಟರು.  ಕಹಿ ಇದ್ದರೂ ಸಹ ನಾವೆಲ್ಲ ಶ್ರದ್ಧೆಇಂದ ತಿಂದು, ಹೊಳಿಗೆಗಾಗಿ ಕಾತರದಿಂದ ಕೈ ಚಾಚಿದೆವು.  ಅಣ್ಣ ಆ ಎರಡು ಹೊಳಿಗೆಯನ್ನು ತುಂಡುಗಳನ್ನಾಗಿ ಮಾಡಿ ಎಲ್ಲರಿಗೂ ಕೊಟ್ಟು ತಾನೂ ತಿಂದನು. ಅಕ್ಕ ಮಾವಿನಕಾಯಿಯನ್ನು ಸಣ್ಣಗೆ ಹಚ್ಚುತ್ತಿದ್ದಳು, ನಾನೂ ಸಹ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯನ್ನು ತೊಳೆದು, ಹೆಸರಬೇಳೆ ಕೋಸಂಬ್ರಿ, ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ, ಅಮ್ಮನಿಗೆ ಸಹಾಯಮಾಡಿದೆವು.  ಮನೆಯೆಲ್ಲಾ ಮಲ್ಲಿಗೆ ಹೂವಿನ ಪರಿಮಳದಿಂದ ಕೂಡಿತ್ತು.  ಹೋಳಿಗೆ, ಬೊಂಡದ ವಾಸನೆಯು ನಮ್ಮ ಹಸಿವನ್ನು ಹೆಚ್ಚಿಸಿತ್ತು. ಅಣ್ಣ ಎಲ್ಲರಿಗೂ ಬಾಳೆ ಎಲೆ ಹಾಕಿ, ನೀರಿಟ್ಟು ಊಟಕ್ಕೆ ಎಲ್ಲರನ್ನೂ ಕರೆದು, ತಾನು ನಮ್ಮಜೊತೆ ಸೇರಿ ಪಾಯಸ, ಪಲ್ಯ, ಕೊಸಂಬರಿಯನ್ನು ಬಡಿಸಿದನು. ಅಪ್ಪ, ಅಮ್ಮರ ಜೊತೆ ಕುಳಿತು ನಾವೆಲ್ಲರೂ ನಗುನಗುತ್ತ ಹಬ್ಬದ ಊಟವನ್ನು ಮುಗಿಸಿದೆವು. “ಅಣ್ಣ ಯಾರೋ ಗೇಟ್ ತೆಗೆದಹಾಗಾಯಿತು”, “ನೊಡು, ಯಾರೋ ಬಂದಿರಬೇಕು” ನನ್ನಕ್ಕ ಹೇಳಿದಂತೆ, ಅಣ್ಣ ಬಾಗಿಲನ್ನು ತೆಗೆದನು.  ನಾನು ಓಡಿಹೋಗಿ, ಯಾರಿರಬೇಕೆಂದು ತೊಂಗಿ ನೋಡಿದೆ, ಅರೆ ಮೊಹನ, ಜ್ಯೊತಿ ಎಲ್ಲರೂ ಬಂದಿದ್ದಾರೆ, “ಅಮ್ಮ ಅಮ್ಮ ಮಾಮನ ಮಕ್ಕಳು ಬಂದಿದ್ದಾರೆ”, “ಹೌದೆನೆ!, ಅಮ್ಮ ಕೊಣೆಯಿಂದ ಹೊರಗೆ ಬಂದು, ತನ್ನ ಆಣ್ಣನ ಮಕ್ಕಳನ್ನು ಸ್ವಾಗತಿಸಿದಳು. ನಮ್ಮೆಲ್ಲರಿಗೂ ಖುಷಿಯೋ ಖುಷಿ.  ನಾವೆಲ್ಲರೂ ಹರಟೆಹೊಡೆಯುತ್ತ, ಕೇರಂ ಆಟವನ್ನು ಆಡಿ, ಅಂತಾಕ್ಷರಿಯಲ್ಲಿ ಕನ್ನಡ, ಹಿಂದಿ ಹಾಡುಗಳನ್ನು ಹಾಡುತ್ತ, ಹಾಡುತ್ತಾ, ಅಮ್ಮ ತಂದುಕೊಟ್ಟ ನಿಂಬೆಹಣ್ಣಿನ ಪಾನಕವನ್ನು ಕುಡಿಯುತ್ತ ಅಂತಾಕ್ಷರಿಯನ್ನು ಮುಗಿಸಿದೆವು. ಸಮಯ ಕಳೆದದ್ದೇ ತಿಳಿಯಲಿಲ್ಲ. ಮನೆಯ ಗಿಡದಲ್ಲಿ ಬಿಟ್ಟ ಸೀಬೆಹಣ್ಣನ್ನು ಕಿತ್ತು ಅವರಿಗೆ ಕೊಟ್ಟು, ನಾವೆಲ್ಲರೂ, ಮೊಹನ, ಜ್ಯೊತಿಯನ್ನು ಅವರ ಮನೆಯ  ಅರ್ಧ ದಾರಿಯವರೆಗೆ ಬೀಳ್ಕೊಟ್ಟು ಮನೆಗೆ ಬಂದೆವು.  ಎಲ್ಲರ ಮನದಲ್ಲೂ ಎನೋ ಒಂದು ತೃಪ್ತಿ ತುಂಬಿ ಕುಣಿಯುತಿತ್ತು. ಹೆಜ್ಜೆಯ ಸದ್ದಿಗೆ, ನೆನಪುಗಳಿಂದ ಹೊರಬಂದು, ತಲೆ ಎತ್ತಿ ನೋಡಿದೆ.  ಮಗ ಸೊಸೆಯ ಕೈಹಿಡಿದು ನನ್ನ ಸಮೀಪ ಬಂದು ಕುಳಿತನು.  “ಅಮ್ಮ ಒಂದು ಚೀಟಿಯಲ್ಲಿ ನಾಳೆ ಹಬ್ಬಕ್ಕೆ ಏನೇನು ತರಬೇಕೆಂದು ಬರೆದು ಕೊಡು, ನಾನು, ಇವಳು ಇಬ್ಬರೂ ಹೋಗಿ ತರುತ್ತೇವೆ. ನಾಳೆ ಬೇಳೆ ಹೋಳಿಗೆ ಮಾಡು, ಕೋಸಂಬ್ರಿಗೆ ಮಾವಿನಕಾಯಿ ಹಾಕು. ಮಸಾಲವಡೆ ಮಾಡು, ನಾವು ನಿನಗೆ ಸಹಾಯ ಮಾಡ್ತಿವಿ”. ಮಗನ ಮಾತನ್ನು ನಂಬಲಾಗಲಿಲ್ಲ, ಆದರೂ ಸಂತೊಷದಿಂದ ಎದ್ದು, ಚೀಟಿಯನ್ನು ಬರೆದು ಕೊಟ್ಟೆ.  ಇಬ್ಬರೂ ಹೊರಟರು. ಏನಿದು ಆಶ್ಚರ್ಯ!! ಮಗ ಮೊದುವೆ ಆದಮೇಲೆ ಬದಲಾದನೇ!, ಪೂಜೆ, ಹಬ್ಬಗಳೆಂದರೆ ಆಸಕ್ತಿಯನ್ನು ತೋರದ ಮಗ, ಇಂದು ಹೀಗೆಲ್ಲಾ ಹೇಳಿದನೇ! ಇದೆಲ್ಲಾ ಸೊಸೆಯ ಪ್ರಭಾವವಿರಬೇಕು! ಸದ್ಯ ನಮ್ಮ ಆಚರಣೆಗಳಲ್ಲಿ ಆಸಕ್ತಿಯನ್ನು ತೋರಿದನಲ್ಲ, ಅಷ್ಟೇ ಸಾಕು.  ಸೊಸೆಯ ಮೇಲೆ ಪ್ರೀತಿ ಹೆಚ್ಚಿತು. ಬೇಗ ಬೇಗನೆ ಮನೆಯನ್ನು ಸ್ವಚಗೊಳಿಸಿ, ಮಗ, ಸೊಸೆ ಬರುವದರೊಳಗೆ ಹಬ್ಬದ ತಯಾರಿಯನ್ನು ಮಾಡಿದೆನು.  ಪೂಜೆಯ ಸಾಮಗ್ರಿಗಳನ್ನು ಒರೆಸುತ್ತಾ ಕುಳಿತ ನನಗೆ, ಮತ್ತೆ ತವರುಮನೆಯ ನೆನಪಾಯಿತು. ಎಲ್ಲರೂ ಬೆಳೆದು ದೊಡ್ಡವರಾದೆವು, ಆದರೆ ಬುದ್ಧಿ ಬೆಳೆಯಲಿಲ್ಲ.  ಸಂಸಾರದಲ್ಲಿ ಮನಸ್ತಾಪಗಳು ಹುಟ್ಟಿ, ಅಣ್ಣ ತಂಗಿಯರೆಲ್ಲಾ ದೂರ ಸರಿದೆವು. ಅಪ್ಪ ಅಮ್ಮರ ಸಾವಿನನಂತರ ತವರುಮನೆ ಇಲ್ಲದೇ ಹೋಯಿತಲ್ಲಾ. ನಾನೇ ಪೂಜೆಯನ್ನು ಮಾಡಿ ಎಲ್ಲರಿಗೂ ಬೇವು,ಬೆಲ್ಲದ ಚೂರ್ಣವನ್ನು ಕೊಟ್ಟು, ಹೋಳಿಗೆ ಮಾಡಲು ಅಡುಗೆ ಮನೆಗೆ ಹೋದೆನು. ಗಂಡ ದಿನಪತ್ರಿಕೆಯನ್ನು ಓದುವುದರಲ್ಲಿ ಮುಳುಗಿಹೋಗಿದ್ದರು. ಅವರಿಗೇ ದಿನನಿತ್ಯ ಅದೇ ಪ್ರಪಂಚವಾಗಿತ್ತು. ಬದಲಾಗದ ಜೀವಿ. “ಹಹ….ಬನ್ನಿ..ಬನ್ನಿ…” ಪಕ್ಕದ ಮನೆಯವರ ದ್ವನಿ ಕೇಳಿಸಿತು,  ಮನಸ್ಸು ಒಲ್ಲದಿದ್ದರೂ, ಕುತೂಹಲದಿಂದ ಕಿಟಕಿಇಂದ ಇಣುಕಿ ನೋಡಿದೆ. ಪ್ರಕಾಶ್ ರವರ ತಮ್ಮ, ಅಕ್ಕ ಬಂದಿದ್ದರು ಹಬ್ಬಕ್ಕಾಗಿ. ಪ್ರಕಾಶ್ ರವರ ಪತ್ನಿ ಶೊಭಾಳೊ ರೇಶಿಮೆ ಸೀರೆ ಉಟ್ಟಿದ್ದರು, ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು, ಹಬ್ಬದ ಸವಿಯಲ್ಲಿ ಮುಳುಗಿದ್ದರು.  ಅವರ ಸಂಭ್ರಮವನ್ನು ನೋಡಿ ಒಂದು ಷಣ ಅಲ್ಲೇ ಸುಮ್ಮನೆ ನಿಂತುಬಿಟ್ಟೆ. ಸಂಸಾರವೆಂದರೆ ಹಾಗಿರಬೇಕೆಂದೆನಿಸಿತು.  ಬಂಧುಗಳ ಒಡನಾಟದ ಮಹತ್ವದ ಅರಿವಾಯಿತು. ಯೊವ್ವನದಲ್ಲಿ ಯಾರೂ ಬೇಕಾಗುವುದಿಲ್ಲ, ಅದೇ ವಯಸ್ಸಾಗುತ್ತಾ.. ಆಗುತ್ತಾ..ಒಂಟಿತನವು ಕಾಡುವುದು, ಮಕ್ಕಳು ಅವರ ಪಾಡಿಗೆ, ಅವರ ಇಷ್ಟದಂತೆ ಜೊತೆಯಲಿ ಇದ್ದರೂ ಇಲ್ಲದವರಂತಿರುತ್ತಾರೆ, ಇಲ್ಲವೇ ಹೊರ ರಾಜ್ಯಗಳಲ್ಲೋ, ದೇಶಗಳಲ್ಲೋ  ಕೆಲಸದ ಕಾರಣಕ್ಕೆ ಇದ್ದುಬಿಡುತ್ತಾರೆ.  ಆಗ ನಮಗೆ ನಮ್ಮ ನೆಂಟರ, ಸ್ನೇಹಿತರ ಒಡನಾಟ ಬೇಕೆಂದೆನಿಸುವುದು. ಅಣ್ಣ ಮೊದುವೆಯಾದ ನಂತರ ಬದಲಾಗಿಬಿಟ್ಟ, ನಾವು ಅಮ್ಮನ ಮನೆಗೆ ಉಗಾದಿ ಹಬ್ಬಕೆಂದು ಹೋದಾಗೆಲ್ಲಾ, ಅಣ್ಣ ಅತ್ತಿಗೆಯ ನಡವಳಿಕೆ ಬದಲಾದಂತೆನಿಸುತಿತ್ತು. ವ್ಯಂಗವಾದ ಮಾತುಗಳು ಕಿವಿಗೆ ಬೀಳುತಿದ್ದವು. ಕ್ರಮೇಣ ಅಪ್ಪ, ಅಮ್ಮರ ಸಾವಿನ ನಂತರ ತವರುಮನೆಇಂದ ದೂರವಾಗಿಯೇಬಿಟ್ಟೆವು.  ಅತ್ತೆ ಮನೆಯಲ್ಲಂತೂ ನನ್ನದೆಂಬುದು ಏನೂ, ಯಾರೂ ಇಲ್ಲವೆಂದೆನಿಸಿತು.  ಹಬ್ಬ ಹರಿದಿನಗಳಲ್ಲಿ ಮನೆಗೆ ನೆಂಟರು ಬಂದು ಹೋಗಿ ಮಾಡಿದರೆ, ನಮ್ಮ ಹಾಗೂ ಅವರ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುವುದು.  ಗಂಡನಾದರೋ ಒಂಟಿಯಾಗಿರುವುದನ್ನೇ ಇಷ್ಟ ಪಡುತ್ತಿದ್ದರು.  ಆದರೆ ನನಗೆ ಎಲ್ಲರ ಸಂಬಂಧವು ಬೇಕೆನಿಸುತ್ತಿತ್ತು.  ಮನೆ, ಮನಸ್ಸು ಖಾಲಿ ಖಾಲಿ ಎಂದೆನಿಸಿತು.  ಅಮ್ಮ, ಅಪ್ಪ ನೆನಪಾಗಿ ಹೃದಯ ಭಾರವೆನಿಸಿತು. “ಮಗ, ಸೊಸೆ  ಹೊರಗೆ ಹೋಗದೆ, ಹಬ್ಬಕ್ಕೆ ಮನೆಯಲ್ಲಿ ನಮ್ಮಜೊತೆ ಇದ್ದಾರೆ, ಇದು ಸಂತೋಷದ ಷಣ,  ಸುಮ್ಮನೆ ಹಳೆಯ ನೆನಪುಗಳೋಂದಿಗೆ ಈ ದಿನವೇಕೆ ಬೇಸರಗೊಳ್ಳಬೇಕು”. ಮುಖವನ್ನು ತೊಳೆದು ಅಡುಗೆ ಮನೆಯತ್ತ ಹೆಜ್ಜೆ ಇಟ್ಟೆ, ಅಲ್ಲಿ ಮಗ ಮಾವಿನ ಕಾಯಿಯನ್ನು ಹಚ್ಚುತಿದ್ದ, ಸೊಸೆಯೋ ತನ್ನ ಪುಟ್ಟ ಪುಟ್ಟ ಕೈಯಲ್ಲಿ ನಾನು ಮಾಡಿಟ್ಟ ಹೂರ್ಣದ ಉಂಡೆಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಡುತ್ತಿದ್ದಳು. ಅವರಿಬ್ಬರೂ  ಎನೋ ಮಾತನಾಡುತ್ತ ನಗು ನಗುತ್ತ ನನಗೆ ಸಹಾಯವನ್ನು ಮಾಡುತಿದ್ದರು.  ತಕ್ಷಣ ಅವರಿಬ್ಬರನ್ನು ಪ್ರೀತಿಇಂದಪ್ಪಿಕೊಂಡು, ಇಬ್ಬರಿಗೂ ಹಬ್ಬದ ಶುಭಾಶಯಗಳನ್ನು ಹೇಳಿ ಹೋಳಿಗೆಯನ್ನು ಮಾಡಿ ಮುಗಿಸಿದೆ. ನಗುನಗುತ ಎಲ್ಲರಿಗೂ ಬಾಳೆ ಎಲೆಯ ಊಟ ಬಡಿಸಿ, ಅಡುಗೆಮನೆಗೆ ಬಂದು ಒಂದೆರಡು ಡಬ್ಬಗಳಲ್ಲಿ, ಹೋಳಿಗೆ, ಮಾವಿನಕಾಯಿ ಚಿತ್ರಾನ್ನ, ಒಂದೆರಡು ಮಸಾಲವಡೆಯನ್ನು ತುಂಬಿಸಿಕೊಂಡು, ರೌಕೆಕಣ, ತಾಂಬೂಲವನ್ನು ಚೀಲದಲ್ಲಿ ಇಟ್ಟು, ಮೂಲೆ ಮನೆಯಲ್ಲಿದ್ದ ಪಾರ್ವತಮ್ಮ-ನಾಗರಾಜ ವೃದ್ಧದಂಪತಿಗಳ ಮನೆಗೆ ಬಂದು, ಅವರಿಗೆ ಹಬ್ಬದ ತಿಂಡಿಯನ್ನು ಕೊಟ್ಟು, ಅವರ ಆಶೀರ್ವಾದವನ್ನು ಪಡೆದು, ಮನೆಗೆ ಬಂದು, ತಾನೂ ಊಟ ಮಾಡಿ, ಮಗ, ಸೊಸೆಯೊಂದಿಗೆ ಆ ದಿನ ಬೆರೆತು ಮನತುಂಬುವ ತನಕ ಮಾತನಾಡಿ, ಮಿಕ್ಕ ಕೆಲಸವನ್ನೆಲ್ಲ ಮಾಡಿ ಮುಗಿಸಿದೆನು.  ಮನಸು ತೃಪ್ತಿ ಇಂದ ತುಂಬಿತ್ತು. ಅಂದು ಅರಿವಾಯಿತು ನನಗೆ. ಬಿರುಕು ಬಿಟ್ಟ ಸಂಬಂಧಗಳನ್ನು ಮತ್ತೆ ಮತ್ತೆ ನೆನೆಯುತ್ತ, ವಿನಾಕಾರಣ ಕೊರಗುವುದಕಿಂತ, ನಮ್ಮ ಅಕ್ಕ ಪಕ್ಕದವರೋಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವುದೇ ಸರಿ ಎನಿಸಿತು.  ಪಾರ್ವತಮ್ಮನ ಮಕ್ಕಳು ಅವರಜೊತೆ ಇಲ್ಲ. ಬೇರೆ ಊರಿನಲ್ಲಿದ್ದಾರೆ,  ಅವರಿಬ್ಬರೇ ಜೀವನವನ್ನು ನಡೆಸುತಿಲ್ಲವೇ?  ಪಾರ್ವತಮ್ಮ-ನಾಗರಾಜ ದಂಪತಿಗಳು ನನ್ನ ತಂದೆ-ತಾಯಿ ಅಥವ ಅಣ್ಣ ಅತ್ತಿಗೆಯಾಗಬಹುದಲ್ಲವೇ? ಈ ದಿನ ಅವರಿಬ್ಬರೇ ಹಬ್ಬವನ್ನು ಆಚರಿಸುತಿಲ್ಲವೇ? ಸಾಯಂಕಾಲ ಮಗ, ಸೊಸೆಯನ್ನು ತನ್ನ ಸ್ನೇಹಿತನ ಮನೆಗೆಂದು ಬಸವನಗುಡಿಯತ್ತ ಹೊರಟನು. ಸೊಸೆ ಸುಂದರವಾಗಿ ಅಲಂಕರಿಸಿಕೊಂಡು, ನಗುನಗುತ್ತ ಮಗನ ಕೈ ಹಿಡಿದು ಹೊರಟಳು. ಅಂದು ನನ್ನ ಮನಸು “ಮಾವಿನ ಚಿಗುರಿನಂತೆ ಚಿಗುರಿ, ಬೇವಿನ ಹೂವಿನಂತೆ ಅರಳಿ, ಬೆಲ್ಲದ ಸಿಹಿಯು ಚೈತ್ರ ಮಾಸದ ಮಳೆಹನಿಯೊಂದಿಗೆ ಸೇರಿ, ಅ ಸಿಹಿಯ ಹನಿಯು ನನ್ನ ಹೃದಯವನ್ನು ಪ್ರೀತಿಯಿಂದ  ಪಸರಿಸಿತು.  ಎಲ್ಲೆಲ್ಲಿಯೂ ಹೊಸ ತನ, ಹೊಸ ಭರವಸೆಯೊಂದಿಗೆ ಹೊಸ ಹೊಸ ಸ್ನೇಹಗಳ ಬಂಧನದಲ್ಲಿ ಬೆಸೆಯಬೇಕೆನಿಸಿತು”. “ಉಗಾದಿ ಮರಳಿ ಮರಳಿ ಬರಲೆಂದು ಮನಸು ಹಾಡಿತು”. **************************************************************** ಮೀನಾಕ್ಷಿಹರೀಶ್.

Read Post »

ಇತರೆ

ಯುಗಾದಿ ವಿಶೇಷ ಲೇಖನ ನವಚೈತನ್ಯಕ್ಕೆ ಮುನ್ನುಡಿ ಯುಗಾದಿ ಸಂಗಾತಿ ಸಾಹಿತ್ಯ ಪತ್ರಿಕೆ: ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಸಂಚಲನ ಮೂಡುತ್ತದೆ ಎಲ್ಲಾ ಕಡೆಗೂ ಹಸಿರುತೋರಣ ಹೂವಿನ ಶೃಂಗಾರ ಮಾಡಿದಂತೆ ಗಿಡದ ತುಂಬಾ ಹೂಗಳು ಅರಳಿ ಚಿಗುರು ಮೂಡಿ ಸಂಭ್ರಮದ ವಾತಾವರಣ ಏರ್ಪಡಿಸುತ್ತವೆ.ಇದು ನಾವು ಹೊಸವರ್ಷದ ಎಂದು ಸಂಭ್ರಮಪಡುವ ಯುಗದ ಆದಿ ಯುಗಾದಿಯ ವಿಶೇಷತೆ.        ಹೊಸವರ್ಷವೆಂದರೆ ಇದುವೇ ಎಂದು ಸಾಧಿಸುವಂತೆ ಎಲ್ಲಾ ಕಡೆಗೂ ಹಸಿರು ಉಸಿರಾಡುವುದು. ಬಣ್ಣ ಬಣ್ಣದ ಹೂವುಗಳು ಗಿಡದ ತುಂಬೆಲ್ಲಾ ಅರಳಿ ಪರಿಸರವೆಲ್ಲಾ ಶೃಂಗಾರ. ವರ್ಷದ ಆರಂಭದ ಸಂಕೇತವನ್ನು, ಹೊಸತನದ ಕಳೆಯನ್ನು ಪ್ರಕೃತಿ ಎಲ್ಲೆಡೆ ಪಸರಿಸುತ್ತದೆ.       ಅದೇ ಇಡೀ ಜಗತ್ತು ಹೊಸ ವರ್ಷವೆಂದು ಆಚರಿಸುವ ಜನವರಿ ಒಂದು, ಮಧ್ಯರಾತ್ರಿಯಲ್ಲಿ ನಿಶಾಚರಗಳು ಹೋರಾಡುವ ಸಮಯದಲ್ಲಿ ಪ್ರಾರಂಭವಾಗುವುದು . ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಬೇಕರಿ ತಿನಿಸುಗಳು , ಕೇಕ್ ,ಡ್ರಿಂಕ್ಸ್ ಕೂಲಡ್ರಿಂಕ್ಸ್, ಮೋಜು-ಮಸ್ತಿ ಮಾಡುತ್ತಾರಾತ್ರಿಯೆಲ್ಲಾ ನಿದ್ದೆಗೆಟ್ಟು ಅನಾಹುತಕ್ಕೆ ಕಾರಣ ಮಾಡಿಕೊಳ್ಳುವ ಇದು ಹೊಸವರ್ಷವೇ? ಅದೇ ಭಾರತೀಯ ಪದ್ದತಿಯಂತೆ ಯುಗಾದಿಯಂದು  ನಾವು ಆಚರಿಸುವ ಹೊಸ ವರ್ಷವು ಮುಂಜಾವಿನ ಬ್ರಾಹ್ಮಿ   ಮುಹೂರ್ತದಲ್ಲಿ ಪ್ರಾರಂಭವಾಗುವುದು.ಅಂದು ಮೊದಲೇ ಶುಚಿಗೊಳಿಸಿದ ಮನೆಯಲ್ಲಿ  ಬಾಗಿಲಿಗೆ ಮಾವಿನ ತೋರಣ ಕಟ್ಟಿ , ಹೂವಿನ ಅಲಂಕಾರ ಮಾಡಿ , ಅಂಗಳದಲ್ಲಿ ಸುಂದರ ರಂಗೋಲಿಗೆ ಬಣ್ಣದ ಮೆರಗು . ಎಲ್ಲರೂ ಬೇವು ಬೆರೆಸಿದ ಬಿಸಿ ನೀರಿನಲ್ಲಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಲ್ಲೇ ಮಾಡಿದ ಹೋಳಿಗೆ,ಕಡುಬು, ಅನ್ನ ಸಾರು ಸಂಡಿಗೆ, ಹಪ್ಪಳ ,ಉಪ್ಪಿನಕಾಯಿ, ಮೊಸರು ಮುಂತಾದ ಬಗೆಬಗೆಯ ಅಮೃತದಂತಹ ಸವಿಭೋಜನ ಜೊತೆಗೆ ಜೀವನದ ಮರ್ಮ ಸಾರುವ ಬೇವು-ಬೆಲ್ಲವನ್ನು ಮನೆಮಂದಿಯಲ್ಲಾ ಸೇರಿ ಸವಿದು ಸಂಭ್ರಮಿಸುವ ನಮ್ಮ ಹಬ್ಬ ತನುಮನಕ್ಕೆ ಹಿತಕರ. ಪ್ರಕೃತಿಗೆ ಹತ್ತಿರ. ಇಡೀ ವರ್ಷ ಉತ್ಸಾಹ ಸಂಭ್ರಮದಿಂದ ಕಳೆಯುವಂತೆ ಚೈತನ್ಯ, ಬರವಸೆ ಮೂಡಿಸುವ ಈ ನಮ್ಮ ಯುಗಾದಿ ನಿಜವಾದ ಹೊಸ ವರ್ಷ.      ನಮ್ಮ ಮನೆಯಲ್ಲಂತೂ ಯುಗಾದಿ ಬಂದರೆ ಸಾಕು ವಾರದ ಮೊದಲೇ ಸ್ವಚ್ಛತಾ ಕಾರ್ಯ ನಡೆಯುವುದು. ಮನೆಯಲ್ಲಾ ಶುಚಿಗೊಳಿಸಿ , ಹಾಸಿಗೆ ಬಟ್ಟೆ, ಪಾತ್ರೆಗಳನ್ನು ಶುಭ್ರಗೊಳಿಸುತ್ತೇವೆ. ಅಮಾವಾಸ್ಯೆ ದಿನದಂದೇ ನಮ್ಮ ಮನೆಯಲ್ಲಿ ಹಬ್ಬ ಪ್ರಾರಂಭವಾಗುವುದು. ಮನೆಗೆ ತಳಿರು ತೋರಣ ಹೂಗಳಿಂದ ಸಿಂಗರಿಸಿ, ಆ ದಿನದಂದೇ ಘಟಸ್ಥಾಪನೆ ಮಾಡಿ ಐದು ದಿನಗಳ ಕಾಲ ನಂದಾದೀಪವನ್ನು ಹಗಲು-ಇರುಳು ಕಾಯುತ್ತೇವೆ. ಅಂದು ಹೋಸ ಗೋಧಿ,ನೆನೆಸಿದ ಕಡಲೆಕಾಳು,ಉಡಕ್ಕಿ ಸಾಮಾನು ಇಟ್ಟು ಕಾಳಿಕಾ ದೇವಿಯನ್ನು ಪೂಜಿಸುತ್ತೇವೆ.  ಹೋಳಿಗೆ ಅನ್ನ ,ಸಾರು ,ಕೋಸಂಬರಿ, ಪಲ್ಯ ಮುಂತಾದವುಗಳನ್ನು ನೈವೇದ್ಯ ಮಾಡುತ್ತೇವೆ .ಅಮವಾಸ್ಯೆ ಮರುದಿನ ಪಾಡ್ಯದಂದು ಬೇವು ಹಾಕಿದ ನೀರಿನಿಂದ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ.ಅಂದು ಗೋಧಿ ಹುಗ್ಗಿ, ಬೇವು ಬೆಲ್ಲ ವನ್ನು ನೈವೇದ್ಯಕ್ಕೆ ವಿಶೇಷವಾಗಿ ಮಾಡಿರುತ್ತೇವೆ.ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾಗುತ್ತೇವೆ.         ಹೀಗೆ ಯುಗಾದಿ ಮನೆ ಒಳಗೂ ಹೊರಗೂ ಸಂಭ್ರಮ ಸಡಗರದ ವಾತಾವರಣವನ್ನು ಏರ್ಪಡಿಸುತ್ತದೆ.ಮಾನವರ ದೇಹ ಮನಸ್ಸುಗಳಿಗೆ,ಸಸ್ಯ ಜೀವ ಸಂಕೂಲಕ್ಕೆನವಚೈತನ್ಯ, ನವೋಲ್ಲಾಸ ಹೊತ್ತು ತರುತ್ತದೆ. ****** ಲಕ್ಷ್ಮೀದೇವಿ ಪತ್ತಾರ

Read Post »

ಇತರೆ

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ

ಜನ್ಮದಿನಾಚರಣೆ 11/04/2021 ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ [01:48, 11/04/2021] +91 95382 66593: ಭಾರತದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು ಜ್ಯೋತಿಬಾ ಪುಲೆ.ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಧರ್ಮ, ಪಂಥ, ಸಂಪ್ರದಾಯ ಈ ರೀತಿಯ ಕಟ್ಟುಪಾಡುಗಳಿಗೆ ಜೋತುಬೀಳದೆ,ಮಾನವ ಧರ್ಮವನ್ನು ಆಧರಿಸಿ ನಡೆಯಬೇಕೆಂದು ಅಪೇಕ್ಷೆ ಪಟ್ಟವರು. ಜ್ಯೋತಿಬಾ ಪುಲೆ ಅವರು 11/04/1827 ರಂದು ಮಹಾರಾಷ್ಟ್ರದ ‘ಕಟಗುಣ’ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ಗೋವಿಂದರಾವ್,ತಾಯಿ ಚಿಮಣಾಬಾಯಿ. ಜ್ಯೋತಿಬಾ ಅವರು ಇನ್ನೂ ಚಿಕ್ಕವರಿದಾಗಲೇ ತಾಯಿ ಚಿಮಣಾಬಾಯಿ ಅವರು ಸ್ವರ್ಗಸ್ತರಾಗುತ್ತಾರೆ.ನಂತರ ಜ್ಯೋತಿಬಾ ಅವರನ್ನು ಸಾಕಿ ಸಲುಹಿದ್ದು ತಾಯಿ ಚಿಮಣಾಬಾಯಿ ಅವರ ಸೋದರಿ ಸಗುಣಾಬಾಯಿ ಅವರು.ಸಗುಣಾಬಾಯಿ ಅವರು ಚಿಕ್ಕವಯಸ್ಸಿನಿಂದಲೇ ಜ್ಯೋತಿಬಾ ಅವರ ಮನಸ್ಸಿನಲ್ಲಿ ಸಮಾಜಸೇವೆ ಎಂಬ ಬೆಳಕಿನ ಜ್ಞಾನವನ್ನು ಬಿತ್ತುತ್ತಾರೆ. ಜಾತಿಯ ಕಟ್ಟಲೆಗಳಿಂದ ಮಡುಗಟ್ಟಿದ್ದ ಸಮಾಜದಲ್ಲಿ ಶಿಕ್ಷಣವೆಂಬ ಸೇವೆಯ ಮೂಲಕ ಸಂಪೂರ್ಣ ಭಾರತದಲ್ಲಿ ಪ್ರಗತಿಪರ ನಡೆಯನ್ನು ಹುಟ್ಟುಹಾಕಿದ ಜ್ಯೋತಿಬಾ ಫುಲೆ ಅವರು,ಅಂಬೇಡ್ಕರರವರಿಗೂ ಹಲವು ವಿಚಾರಗಳಲ್ಲಿ ಆದರ್ಶವಾಗಿದ್ದರು.ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪ್ರದಾಯದ ಹೆಸರಿನಲ್ಲಿ ನಿಷೇಧಿಸಿದ್ದ ಕಾಲದಲ್ಲಿ ಜ್ಯೋತಿಬಾರವರು ತನ್ನ ಪತ್ನಿ ಸಾವಿತ್ರಿಭಾಯಿ ಪುಲೆ ರವರಿಗೆ ಅಕ್ಷರ ಕಲಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ರೂಪಿಸಿದ ಮಹಾನ್ ಚೇತನ. ಆ ಕಾಲದಲ್ಲಿ ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವೆಂಬ ಅನಿಷ್ಟ ಪದ್ಧತಿ ಇತ್ತು.ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಶಾಲೆಗಳಿದ್ದವು.ಆದರೆ ಆ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಮಾತ್ರ ಕಲಿಯುವ ಅವಕಾಶ ಇತ್ತು, ಆ ಎಲ್ಲಾ ಕಟ್ಟಲೆಗಳನ್ನು ಮೀರಿ 1848 ರಲ್ಲಿ ಪುಣೆಯಲ್ಲಿ ಶ್ರೀ ಬಿಡೇಯವರ ಭವನದಲ್ಲಿ ಹೆಣ್ಣು ಮಕ್ಕಳ ಶಾಲೆ ಆರಂಭಿಸಿ ಭಾರತದಲ್ಲಿ ಪ್ರಪ್ರಥಮ ಹೆಣ್ಣು ಮಕ್ಕಳ ಶಾಲೆ ಆರಂಭಿಸಿದ ಕೀರ್ತಿಯನ್ನು ಪುಲೆ ದಂಪತಿ ಪಡೆದರು.ಬಡವ,ಶ್ರೀಮಂತ, ಜಾತಿ ಧರ್ಮಗಳ ಬೇಧ ಮಾಡದೇ ಸಕಲ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿದರು ಪುಲೆ ದಂಪತಿಗಳು,ಆ ಕಾಲದಲ್ಲಿ ಜ್ಯೋತಿಬಾ ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಗೆ ಹೋಗಬಹುದಿತ್ತು.ಆದರೆ ಅವರ ಇಚ್ಛೆ,ಗುರಿ ಒಂದೇ ಆಗಿತ್ತು ಸಮಾಜ ಸೇವೆ.ಶಿಕ್ಷಣದ ಕ್ರಾಂತಿಯ ಜೊತೆಗೆ ಜ್ಯೋತಿಬಾ ಪುಲೆ ಅವರು ವಿಧವೆಯರ ಮಕ್ಕಳಿಗಾಗಿ ಅನಾಥ ಶಾಲೆ,ವಿಧವಾ ವಿವಾಹ, ಸತ್ಯಶೋದಕ ಸಮಾಜದ ಸ್ಥಾಪನೆ ಮಾಡಿ ಬಸವ ಮಾರ್ಗದಲ್ಲಿ ಸಾಗಿದ ಮಹಾನ ಚೇತನ ಜ್ಯೋತಿಬಾ ಪುಲೆ. ಇಂದಿನ ಯುವ ಸಮಾಜ ಪುಲೆ ದಂಪತಿಗಳ ಆದರ್ಶಗಳನ್ನ ಪಾಲಿಸಿಕೊಂಡು ಹೋಗಬೇಕಾಗಿದೆ.ನಟ ನಟಿಯರ ಜನ್ಮದಿನದವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಕಾರ್ಯದಲ್ಲಿ ಬಹುತೇಕ ಇಂದಿನ ಯುವ ಸಮಾಜ ಮುಳುಗಿದೆ.ಆದರೆ ಈ ರೀತಿಯ ಮಹಾನ ಚೇತನಗಳು ಯುವ ಸಮಾಜಕ್ಕೆ ನೆನಪಾಗದೆ ಇರುವುದು ವಿಪರ್ಯಾಸ,ಪುಲೆ ದಂಪತಿಗಳ ಜನ್ಮದಿನವನ್ನು ಅದ್ದೂರಿಯಾಗಿ ಮಾಡದೇ ಇದ್ದರೂ ಅವರ ಜೀವನದ ಕುರಿತು ತಿಳಿದುಕೊಂಡು ಅವರು ಸಾಗಿದ ಮಾರ್ಗದಲ್ಲಿ ಒಂದಿಷ್ಟಾದರೂ ಸಾಗುವ ಮನಸ್ಸು ನಾವುಗಳು ಮಾಡಬೇಕಿದೆ. ************************************** ಹೊರನಾಡ ಕನ್ನಡಿಗ ಪ್ರಕಾಶ (ಇಂದೋರ್- ಮಧ್ಯಪ್ರದೇಶ)

ಸಾಮಾಜಿಕಕ್ರಾಂತಿಸೂರ್ಯಜ್ಯೋತಿಬಾ_ಪುಲೆ Read Post »

ಇತರೆ

ನುಡಿ ಕಾರಣ

ಧನ ಸಂಪತ್ತು ಕೆಲವರಿಗೆ ಇರಬಹುದು,ಕೆಲವರಿಗೆ ಇರಲಿಕ್ಕಿಲ್ಲ.ಒಬ್ಬನು ಸಿರಿವಂತ ನಾಗಬೇಕಾದರೆ ಒಬ್ಬ ಬಡವನಾಗುತ್ತಾನೆ.( ರಾಜಕಾರಣಿ ಶ್ರೀಮಂತನಾದಾಗ,ಆದಾಯ ಕರ ಸಲ್ಲಿಸುವವನು ಬಡವನಾಗುವುದು

ನುಡಿ ಕಾರಣ Read Post »

ಇತರೆ

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ ಚೀಟಿ ಮಾಡಿಸಿಕೊಟ್ಟರು ನನ್ನ ತಂದೆ. ಇದೊಂದೇ  ಗುರುತಿಗಾಗಿ 18 ಆಗುವುದನ್ನೇ ಕಾಯುತ್ತಿದ್ದೆ. ಆಗ ತಿಳಿದೇ ಇರಲಿಲ್ಲ ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಎಂದು ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಎಂದು. ಕೈಯಲ್ಲಿ ವೋಟರ್ಸ್ ಐಡಿ ಇತ್ತು, ಮತ ಹಾಕಲೇ ಬೇಕು ಎನ್ನುವ ಹಠವೂ ಜೊತೆಯಾಗಿತ್ತು. ಆದರೇನು ಮಾಡುವುದು ಆಗ ಮೈಸೂರಿನಲ್ಲಿ ಕಾರ್ಪೊರೇಷನ್ ಚುನಾವಣೆಯೂ ಇರಲಿಲ್ಲ. ಅಂದು ಈಗಿನಷ್ಟು ಸರಾಗವಾಗಿ ಸರ್ಕಾರ ಬೀಳುವ ಭಯವಾಗಲೀ, ಪದ್ದತಿಯಾಗಲೀ ಇರಲಿಲ್ಲ. ಹಾಗಾಗಿ ಮತ್ತೆರಡು ವರ್ಷ ಕಾದೆ ಬೆರಳು ಮಸಿ ಮಾಡಿಕೊಳ್ಳಲು. ನಂತರದ ಒಂದು ಅವಕಾಶವನ್ನೂ ಬಿಡದೆಯೇ ಮತ ಚಲಾಯಿಸಿದ್ದೇನೆ ಎನ್ನುವ ಹೆಮ್ಮೆಯೊಂದಿಗೇ ವಯಸ್ಸು ರಾಜಕೀಯ ನಿಲುವುಗಳಷ್ಟೇ ಅತಂತ್ರದಿಂದ ಓಡುತ್ತಿದೆ. ಮೊನ್ನೆಮೊನ್ನೆಯವರೆಗೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಓಡಿ ಬರುತ್ತಿದ್ದೆ ಮೈಸೂರಿಗೆ, ನನ್ನೂರಿಗೆ ಅವಳಾತ್ಮದ ಒಂದು  ತುಣುಕೇ ಆದ ನಾನು ಮತಹಾಕಲು. ಈಗ ಬದುಕು ಕಲಿಸಿದೆ ತವರು ನೆಲದಲ್ಲೋ, ಅನ್ನ ಕೊಡುತ್ತಿರುವ ಭೂಮಿಯಲ್ಲೋ ರಾಜಕಾರಣಿಗಳೆಲ್ಲಾ ಒಂದೇ ಎಂದು ಹಾಗಾಗಿ ಮತಗುರುತಿನ ಚೀಟಿಯನ್ನು ಈ ಊರಿನ ವಿಳಾಸಕ್ಕೆ ಬದಲಾಯಿಸಿಕೊಂಡಿದ್ದೇನೆ ಆದರೆ ತಪ್ಪದ ಮತ ಹಾಕುವ ನನ್ನ ಚಾಳಿಯನ್ನಲ್ಲ. ಅನುಸರಿಸಿಕೊಂಡು ಬಂದ ಪದ್ದತಿಯನ್ನು ಮೊದಲ ಬಾರಿಗೆ ಮುರಿದು ಈ ಬಾರಿ  11 ಗಂಟೆಗೆ ಮತ ಚಲಾವಣೆಗೆ ಹೊರಟೆ. ಚಾಲೀಸಾ ಪಠಣೆ ಮುಗಿದರೂ ಹನುಮಂತ ಪ್ರತ್ಯಕ್ಷ ಆದರೂ ಮುಗಿಯದಷ್ಟು ಬಾಲದಷ್ಟುದ್ದದ ಸಾಲಿತ್ತು. ಬರೋಬರಿ 1 ಗಂಟೆ ನಲವತ್ತು ನಿಮಿಷದ ನಂತರ ಮತಹಾಕುವ ಕೋಣೆಯ  ಎದುರು ಸಾಲಿನಲ್ಲಿ ನಿಂತಿದ್ದೆ .ಪೊಲೀಸಪ್ಪನೊಬ್ಬ ಸರಬರ ಬಂದು ಬಾಗಿಲಲ್ಲಿ ನಿಂತ . ಐದು ನಿಮಿಷಕ್ಕೆ ತಂದೆಯೊಬ್ಬ ಮಗಳನ್ನು ಕರೆದುಕೊಂಡು ಬಂದು ಅದೇ ಪೊಲೀಸ್ಗೆ “ನೋಡಿ ತಪ್ಪು ಸಾಲಲ್ಲಿ ನಿಂತಿದ್ದ್ವಿ ಈಗ ಗೊತ್ತಾಯ್ತು ಇದು ನಮ್ಮ ಸಾಲು ಅಂತ” ಎಂದು ಹೇಳುತ್ತಾ ನಡುವೆ ಮಗಳನ್ನು ತೂರಿಸಲು ಪ್ರಯತ್ನ ಪಡುತ್ತಿದ್ದನ್ನು ಕಂಡು ತುಂಬಾ ಮೇಲು ದನಿಯಲ್ಲಿ ಆ ಹುಡುಗಿಗೆ ಸರತಿಯಲ್ಲಿಯೇ ಬರಲು ಹೇಳಿದೆ. ಅವರಿಗೆ ಅಲ್ಲಿದ್ದ ಪೊಲೀಸಪ್ಪನೇ ನೆಂಟನಾದ್ದರಿಂದ ಅವರುಗಳನ್ನು ಒಳ ತೂರಿಸಲು ಆತನೂ ತನ್ನ ಕೈಲಾದ ಸೇವೆ ಸಲ್ಲಿಸುತ್ತಿದ್ದ. ನನ್ನ ಕೋರಿಕೆಗೆ ಅವರುಗಳ ಮಾತು , ಹುಡುಗಿಯ ದಡ್ಡ ಮೌನ ಎಲ್ಲವೂ ಸೇರಿತ್ತು. ಆತ “ಆಯ್ತು ಬಿಡಿ ನೀವೇ ವೋಟ್ ಆಕೋಳಿ ನನಗೆ ವೋಟ್ ಆಕದಿದ್ದರೆ ಪ್ರಾಣ ಓಗಲ್ಲ” ಎಂದ. “ಅಪ್ಪ ತಂದೆ ವೋಟ್ ಹಾಕದಿದ್ದರೆ ನಿನ್ನ ಪ್ರಾಣ ಹೋಗಲ್ಲ ಆದರೆ ನನ್ನದು  ಹೋಗತ್ತಪ್ಪಾ” ಎಂದು ಹೇಳಿ ಅಂತೂ ಸರತಿ ಸಾಲಿನ ಕೊನೆ ಸೇರಿಸಿದೆ ಆ ಅಪ್ಪ ಮಗಳನ್ನು. ಇದು ಹೆಚ್ಚುಗಾರಿಕೆಯಲ್ಲ . ಆದರೆ ನಾ ವಿರೋಧ ವ್ಯಕ್ತ ಪಡಿಸಿ ಗೆದ್ದ ಮೇಲೆ ಅಲ್ಲಿದ್ದ ಒಂದಷ್ಟು ಹೆಂಗಸರು Thank you  ಎಂದದ್ದು ಒಂದು ಪಾಠ. ದನಿ ಎತ್ತಬೇಕು ಎನ್ನುವ ಮೆದುಳಿದ್ದರೂ “ಶ್ ಸೈಲೆನ್ಸ್” ಎನ್ನುವ ಗುಡುಗಿಗೆ ಬಲಿಯಾಗುವ ಹೆಂಗಸರ ಪರವಾಗಿ ಮಾತಾಗಲಾದರೂ ಮತ ಹಾಕಬೇಕು. ಬಾಲ್ಯ ಕಳೆಯುತ್ತಿದ್ದ ಕಾಲದಲ್ಲಿ ನನ್ನ ಅಜ್ಜಿ ತಾತನ ತಲೆ ಮಾರಿನವರು ನಮ್ಮ ಹಾಗೆ ಕೈಕೈ ಹಿಡಿದುಕೊಂಡು ಮುಸಿಮುಸಿ ನಗುತ್ತಾ, ಕಣ್ಣಲ್ಲೇ ಕಾಮಿಸುತ್ತಾ, ಮಾತುಗಳಲ್ಲಿ ಪ್ರೇಮಿಸುತ್ತಿದ್ದವರಲ್ಲ. ಯಾರು ಗಂಡ ಆತನ ಹೆಂಡತಿ ಯಾರು ಎನ್ನುವುದು ಕೇವಲ ಹೆಸರುಗಳ ಮೂಲಕವೇ ಕಂಡುಕೊಳ್ಳ ಬೇಕಿತ್ತು. ಆದರೆ ಅಂತಹ ಮಡಿವಂತರುಗಳು ಜೋಡಿಯಾಗಿ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದದ್ದು ಚುನಾವಣೆಯ ದಿನ, ಮತಗಟ್ಟೆಗಳ ಮುಂದಿನ ಸಾಲುಗಳಲ್ಲಿ ಮಾತ್ರ. ಗಂಡನ ಇತರೆ ಸಂಬಂಧಗಳು, ಹೆಂಡತಿಯ ಮೂದಲಿಕೆ, ಮನೆ ಭರ್ತಿ ಮಕ್ಕಳು, ನೆಂಟರು ಇಷ್ಟರುಗಳ ಕದಲಿಕೆ, ಹಣ-ಕಾಸಿನ ಅಗಲಿಕೆ ಯಾವುದಕ್ಕೂ ಆ ದಿನ ಮಾತ್ರ ಜಗ್ಗದೆಯೇ ಬಂದು ಮತ ಚಲಾಯಿಸುತ್ತಿದ್ದರು ವೃದ್ಧ ದಂಪತಿಗಳು ಅದು ಒಂದೇ ಕಾರಣಕ್ಕೆ ಸೊಗಸಾಗಿ ಕಾಣಿಸುತ್ತಿದ್ದರು ಕೂಡ. ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರರ, ವಿದ್ಯಾವಂತ ಕುಟುಂಬ ನಮ್ಮದು. ಊಟವನ್ನಾದರೂ ಬಿಟ್ಟೇವು ಪ್ರತಿಷ್ಠೆ, ನಿಷ್ಠೆಯಿಂದ ಕದಲೆವು ಎನ್ನುವ ಪಾಠವನ್ನು ಮನೆಯ ಪ್ರತಿ ಅಮ್ಮನೂ ಮಕ್ಕಳಿಗೆ ತುತ್ತಿಡುವಾಗಲೇ ಜೀರ್ಣಿಸಿಕೊಡುತ್ತಿದ್ದ ಮನೆತನ. ಅಂದಮೇಲೆ ಚುನಾವಣೆ ದಿನ ದಸರೆಯ ದಿನಗಳ ಸಂಭ್ರಮಕ್ಕಿಂತ ಭಿನ್ನ ಎನಿಸುತ್ತಿರಲಿಲ್ಲ. ಕೂಡು ಕುಟುಂಬದ ಪ್ರತೀ ಗಂಡಸರು ಹೆಂಗಸರು ವಯಸ್ಕ ಮಕ್ಕಳು ತಮ್ಮ ನಿತ್ಯ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7.30 ಗಂಟೆಗೆ ಮತಗಟ್ಟೆಯ ಮುಂದೆ ನಿಂತಿರಬೇಕು ಎನ್ನುವ ಅಲಿಖಿತ ನಿಯಮ. ಮತಗಟ್ಟೆಯ ಸಿಬ್ಬಂದಿಗಳು ಇನ್ನೂ ಬೆಳಗಿನ ಕಾಫಿ ಕುಡಿದು ಮುಗಿಸುವುದರ ಮೊದಲೇ ಕೆ.ರಾಮಣ್ಣ (ನನ್ನ ತಂದ) ಇವರ ಕುಟುಂಬದವರು ಹನುಮಂತನ ಬಾಲದಂತೆ ಮತಗಟ್ಟೇಯ ಮುಂದೆ ನಿಂತಿರುತ್ತಿದ್ದರು. ಆ ದಿನಗಳಲ್ಲಿ ದೇಶ ಭಕ್ತಿ ಮತ್ತು ಕರ್ತವ್ಯ ಎನ್ನುವ ಪರಿಕಲ್ಪನೆಗಳ ವ್ಯಾಖ್ಯಾನವನ್ನು ಸುಪ್ರೀಮ್ ಕೋರ್ಟ್ ಕೊಟ್ಟೀರಲಿಲ್ಲ ಬದಲಿಗೆ ದೇಹದಲ್ಲಿರುವ ಪ್ರತೀ ಜೀವಕೋಶಗಳು ಉತ್ಪಾದನೆ ಮಾಡುತ್ತಿದ್ದವು ಅದಕ್ಕೇ ವಯಸ್ಸು, ಅಂತಸ್ತುಗಳ ವ್ಯತ್ಯಾಸವಿಲ್ಲದೆ ಮತಗಳು ನೊಂದಾಯಿತವಾಗುತ್ತಿತ್ತು. ಈ ಬಾರಿಯೂ ನಾನು ಮತ್ತು ಹಾಕಿದ್ದು ಅಭ್ಯರ್ಥಿಯ ಬಗ್ಗೆ ನನಗಿರುವ ವಿಶ್ವಾಸಕ್ಕಾಗಲೀ, ರಾಜಕೀಯದಲ್ಲಿ ಉಳಿದುಕೊಂಡಿರುವ ಅಲ್ಪ ಆಸಕ್ತಿಯಿಂದಾಗಲೀ ಅಲ್ಲ. ನನ್ನ ಮನೆತನದ ಹೆಮ್ಮೆಯ ಧ್ಯೋತಕವಾಗಿ. ನನ್ನ ಪಪ್ಪ-ಅಮ್ಮ ನಮ್ಮೆಲ್ಲರನ್ನು ಬೆಳಿಸಿದ ಪರಿಗೆ ಸಲ್ಲಿಸುವ ಗೌರವಕ್ಕಾಗಿ. ಈ ನೆಲಕ್ಕೆ ಸ್ವಾತಂತ್ರ್ಯದ ಗಾಳಿಯನ್ನು ಸರಾಗವಾಗಿಸಿಕೊಟ್ಟ ನನ್ನ ಪಪ್ಪನಂತಹ ಹೋರಾಟಗಾರರಿಗೆ ಧನ್ಯವಾದ ಹೇಳುವುದಕ್ಕಾಗಿ. ಮೈ ಮನ ಮಸಿಯಾಗಿಸದೆಯೇ ಬೆರಳನ್ನು ಮಾತ್ರ ಕರೆ ಮಾಡಿಕೊಳ್ಳುವ ಸೋಜಿಗದ ಪ್ರತೀಕದಂತೆ ಕಾಣುತ್ತದೆ ನನಗೆ ಮತ ಚಲಾವಣೆ. ಒಂದು ಕಪ್ಪು ಕಲೆ ವಿಕಾರ ರೂಪದಲ್ಲಿ ಹುಟ್ಟಿ ದಿನಗಳೆದಂತೆ ಗಾಢವಾಗುತ್ತಾ, ಆಕಾರ ಪಡೆಯುತ್ತಾ, ಕ್ರೋಢಿಕರಣಗೊಂಡು, ಉಗುರ ತುದಿಯಲ್ಲಿ ಸಾಂಧ್ರವಾಗಿ, ಮತ್ತೆ ಬರುತ್ತೇನೆ ಎಂದು ಹೇಳುತ್ತಾ ದೂರಾಗುವ ಪರಿಯನ್ನು ನೋಡುವುದು ಮತ್ತು ಅದರಿಂದ ಕಲಿಯುವುದು, ಈ ರೊಮ್ಯಾಂಟಿಕ್ ಪ್ರಕ್ರಿಯೆಯಲ್ಲಿ ದೇಶ ಎನ್ನುವ ಚಿರಯೌವ್ವನೆ ಅರಳುವುದ ಕಾಣಲು ಮತ ಹಾಕಿದ್ದೇನೆ. ಹಾಂ ಹಿಂದಿರುಗಿ ಬರುವ ದಾರಿಯಲ್ಲಿ ಮೆಡಿಕಲ್ ಶಾಪ್ ತೆಗೆದಿತ್ತು . ಹೊಸ ಮುಖ ಚಿಗುರು ಮೀಸೆ ಹೊತ್ತು ಗಿರಾಕಿಗಳ ಕೈಯಿಂದ ಚೀಟಿ ತೊಗೊಂಡು ಚುರುಕಾಗಿ ಔಷಧಿ ಬಟವಾಡೆ ಮಾಡುತ್ತಿತ್ತು. ಬೆರಳು ನೋಡಿದೆ ಮಸಿ ಇಲ್ಲ. ‘ ವೋಟ್ ಮಾಡಲಿಲ್ಲವಾ ಮಗಾ’ ಎಂದೆ . ‘ಇಲ್ಲಾ ಮೇಡಂ ಊರಿಗೆ ಹೋಗಿ ವೋಟ್ ಹಾಕಕ್ಕೆ ಓನರ್ ರಜಾ ಕೊಡಲಿಲ್ಲ ‘ ಎಂದ. ಓನರ್ಗೆ ಫೋನ್ ಮಾಡಿದೆ. ಆತ ಕುಟುಂಬ ಸಮೇತ ಮತಗಟ್ಟೆಯ ಸಾಲಿನಲ್ಲಿ ನಿಂತಿದ್ರು. ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು ಸಾರೀಮೇಡಮ್ ಎಂದರಷ್ಟೇ. ಆ ಕೊನೆಘಳಿಗೆಯಲ್ಲಿ ನಾ ಏನೂ ಮಾಡಲಾಗಲಿಲ್ಲ. ಆದರೆ ಮುಂದಿನ ಚುನಾವಣೆಗೆ ಹುಡುಗ ರಜೆ ಪಡೆದು ವೋಟ್ ಹಾಕುತ್ತೇನೆ ಎನ್ನುವಷ್ಟು ಸಬಲನಾದರೆ ಚಲಾವಣೆಯಾದ ನನ್ನ ಮತಕ್ಕೂ ಹೆಮ್ಮೆ. ನನ್ನ ಮೈಸೂರಿನ ದಿನಗಳಲ್ಲಿ ’ಅಮ್ಮ ಎಲ್ಲಿ?’ ಎನ್ನುವ ಯಾರದ್ದೇ ಪ್ರಶ್ನೆಗೂ ಉತ್ತರ ಇರುತ್ತಿದ್ದದ್ದು ಅಡುಗೆ ಮನೆಯಲ್ಲಿ, ಪೂಜಾ ಕೋಣೆಯಲ್ಲಿ, ಬಟ್ಟೆ ಒಣಗುವಲ್ಲಿ, ಪಾತ್ರೆ ತೊಳೆಸಿಕೊಳ್ಳುವ ಹಿತ್ತಲಲ್ಲಿ, ದಾಸವಾಳಕ್ಕೆ ನೀರು ಹಾಕುವ ಕಾಂಪೌಂಡ್‍ನಲ್ಲಿ, ಗಂಡನ ಕೇಳಿ ಬರುವ ದೂರವಾಣಿ ಕರೆಗಳಿಗೆ ನೀಡುತ್ತಿದ್ದ ಮಾಹಿತಿಗಳಲ್ಲಿ, ನೆಂಟರಲ್ಲಿ-ನೆರೆಹೊರಯವರಲ್ಲಿ, ಪುಸ್ತಕದ ಓದಿನಲ್ಲಿ, ವೀಣೆ ನುಡಿಸುವುದರಲ್ಲಿ, ಯೋಗಾಭ್ಯಾಸ ಮಾಡುವಲ್ಲಿ, ಲೇಖನಗಳನ್ನು ಬರೆಯುವಲ್ಲಿ ಎಂದಾಗಿತ್ತು. ಇಷ್ಟೆಲ್ಲವೂ ಆಗಿಹೋಗಿದ್ದ ನನ್ನಮ್ಮ ಚುನಾವಣೆ ದಿನದಲ್ಲಿ ಕೇವಲ ಮತದಾರಮಾತ್ರ ಆಗಿರುತ್ತಿದ್ದಳು. ಸ್ವತಂತ್ರ್ಯ ಭಾರತಕ್ಕೆ ಎರಡೇ ವರ್ಷ ಚಿಕ್ಕವಳು ಅವಳು. ಈಗಲೂ ಬದಲಾವಣೆ ಆಗದ ಅವಳ ಒಂದೇ ಸ್ವಭಾವ ಎಂದರೆ ಮತ ಹಾಕುವುದು. ಒಮ್ಮೆ ಮೈಸೂರಿನ ಸ್ಥಳೀಯ ಚುನಾವಣೆಯ ಸಮಯ. ಕಾಲು ಫ್ರ್ಯಾಕ್ಚರ್ ಆಗಿ ಇವಳು ಬೆಂಗಳೂರಿನ ಆಸ್ಪತ್ರೆ ವಾಸಿ. “ಇನ್ನು ಎರಡು ವಾರ ರೆಸ್ಟ್ ನಲ್ಲಿ  ಇರಬೇಕು” ಡಾಕ್ಟರ್ ಹೇಳಿಯಾಗಿತ್ತು. ಬಿಡುವಳೇ ಇವಳು, ’ಸಾಧ್ಯವೇ ಇಲ್ಲ ಮತ ಹಾಕಲೇ ಬೇಕು” ಎಂದು ಶೂರ್ಪಣಕಿಯ ಹಠದಲ್ಲಿ ಮೈಸೂರಿಗೆ ನೇರವಾಗಿ ಮತಗಟ್ಟೆಗೇ ಬಂದವಳು. ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ಮತ ಹಾಕಲು ತಪ್ಪಿಸಿಕೊಳ್ಳದವಳು. ಯಾವ ಚುನಾವಣೆಯ ದಿನದ ಹಿಂದಿನ ರಾತ್ರಿಯೇ ಫೋನ್ ಮಾಡಿ ಬೆಳಗ್ಗೆ ಬೇಗ ಹೋಗಿ ಮತ ಹಾಕಿಬಿಡು ಎಂದು ಎಚ್ಚರಿಸಿ ಮಲಗುವವಳು ಅಷ್ಟೇ ಅಲ್ಲ ,  ಮತ ಹಾಕಿ ಬರುವವರೆಗೂ ಪ್ರಾಣ ತಿನ್ನುವ ನನ್ನ ಅಮ್ಮ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯದ ಸದ್ಬಳಕೆ ಕಲಿಸಿಕೊಟ್ಟವಳು. ನಾ ಮತ ಹಾಕುವುದು ಅವಳೆಡೆಗೆ ನನ್ನ ಒಂದು ಮುಷ್ಟಿ ಋಣ ಸಂದಾಯದಂತೆ. ಪಪ್ಪ ಇರುವವರೆಗೂ ಅವರೊಂದಿಗೇ ಹೋಗಿ ಮತ ಹಾಕಿ ಬರುತ್ತಿದ್ದ ಅಮ್ಮನ ಕಾಲುಗಳು ಈಗ ಊರುಗೋಲಿನ ಸಾಂಗತ್ಯಕ್ಕೆ ಜೋತು ಬಿದ್ದಿವೆ. ಚಾಮುಂಡಿ ತಾಯಿ ನೀಡುತ್ತಿರುವ ಬೇಸಿಗೆ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ. ಹೊಸಿಲು ದಾಟಲು ಯಾರದ್ದಾದರೂ ಕೈ ಹಿಡಿದುಕೊಳ್ಳಲೇ ಬೇಕು ಎನ್ನುವ ಸ್ಥಿತಿ ಆದರೂ ಚುನಾವಣಾ ದಿನಕ್ಕೆ ಉಡಬೇಕಾದ ಸೀರೆ ರವಿಕೆಗೆ ಇಸ್ತ್ರಿ ಮಾಡಿರಿಸಿಕೊಂಡಿದ್ದಳು. ಈಗಂತೂ ಮತ ಚಲಾವಣೆ ಅವಳ ಪಾತಿರ್ವ್ರತ್ಯದ ಒಂದು ಭಾಗವಾಗಿದೆ. ಅದನ್ನು ಅವಳು ತನ್ನ ಗಂಡನಿಗೆ ತೋರುವ ಪ್ರೀತಿ, ಕಾಳಜಿ ನಿಷ್ಠೆ ಎಂದುಕೊಂಡಿರುವಂತಿದೆ. “ಅಮ್ಮ ನೀ ಕಳೆದ ಬಾರಿ ಮತ ಹಾಕಿದವರು ಗೆಲ್ಲಲಿಲ್ಲ, ಸುಮ್ಮನೆ ಯಾಕೆ ಶ್ರಮ ಪಡ್ತೀಯ, ಮನೇಲಿರು” ಎನ್ನುವ ಮಗಳ ಉಪದೇಶದ ಒಂದು ವಾಕ್ಯಕ್ಕೆ , ಪ್ಯಾರಾಗ್ರಾಫ್‍ನಲ್ಲಿ ಸಿಟ್ಟಾಗುತ್ತಾಳೆ. “ಹೌದು ಈ ಬಾರಿಯೂ ನನ್ನ ಅಭ್ಯರ್ಥಿ ಗೆಲ್ಲುವ ಸಂಭವ ಕಡಿಮೆ , ಆದರ ನಾನು ಅವನಿಗೇ ವೋಟ್ ಹಾಕೋದು” ಎನ್ನುತ್ತಾಳೆ. “ಇಷ್ಟೆಲ್ಲಾ ಮೈಕೈ ನೋಯಿಸಕೊಂಡು ಹೋಗ್ತಿದ್ದೀಯ ಗೆಲ್ಲುವ ಅಭ್ಯರ್ಥಿಗೇ ಹಾಕು ನಿನ್ನ ಮತ ಉಪಯೋಗಕ್ಕೆ ಬರಲಿ” ಎನ್ನುವ ನನ್ನೆಡೆಗೆ ಅನುಮಾನದ ನೋಟ ತೂರುತ್ತಾ ಹೇಳುತ್ತಾಳೆ  “ನಿನ್ನ ಪಪ್ಪ ಇದ್ದಿದ್ದರೆ ಅವರು ನೀ ಹೇಳುವ ಅಭ್ಯರ್ಥಿಗೆ ವೋಟ್ ಹಾಕ್ತಿದ್ದ್ರಾ? ಇದು ನನ್ನ ಮತ ಅಲ್ಲ ನನ್ನ ಗಂಡನ ವೋಟ್ ನಾನು ಹಾಕುತ್ತಿದ್ದೇನೆ” ಬೇಗ ಹೋಗಲು ಉಸಿರು ಸಾಲದೆ ನಡು ಮಧ್ಯಾಹ್ನದಲ್ಲಿಯಾದರೂ ಮತ ಹಾಕಿದ್ದು ಅವಳ ಪಾಲಿಗೆ ಜೀವದ್ರವದಂತೆ. ಆ ತಲೆಮಾರಿಗೆ ನಿಷ್ಠೆ ಕಲಿಸಿಕೊಟ್ಟ ಚುನಾವಣೆಗಳು ನನ್ನ ತಲೆಮಾರಿಗೆ ಬದಲಾವಣೆಯನ್ನು “ಬಯಸು, ಆರಿಸು, ಒಪ್ಪಿಕೊ”  ಎನ್ನುವುದನ್ನು ಕಲಿಸಿಕೊಟ್ಟಿದೆ. ಆದರೆ ಈ ದೇಶ ನನ್ನದು ಎನ್ನುವ ಸ್ವಾರ್ಥವನ್ನು ಮಾತ್ರ ಕಡಿಮೆ ಮಾಡಿಲ್ಲ ರಾಜಕೀಯ. ಅದಕ್ಕಾಗಿಯಾದರೂ ಮತ ಹಾಕಲು ತಪ್ಪಿಸುವುದಿಲ್ಲ.  ಹೌದು, ಕಾಲ ಮತ್ತು ಹರೆಯ ಇಬ್ಬರದ್ದೂ ಗಳಸ್ಯ ಕಂಠಸ್ಯ ಜೋಡಿ ಮತ್ತು ಅವರುಗಳ ಬಂಡಿಗೆ ರಿವರ್ಸ ಗೇರ್ ಇರುವುದಿಲ್ಲ ಥೇಟ್ ಅಮ್ಮನ ವಾತ್ಸಲ್ಯ ಮತ್ತು ಅಪ್ಪನ ಅಭಯದಂತೆ. ಇದೇ ಆಸ್ಥೆಯೊಂದಿಗೆ ಈ ಬಾರಿಯೂ ಮತ ಹಾಕಿ ಬಂದೆ. ********************************* (ಲೇಖನ ಕೃಪೆ: ಆಂದೋಲನ ಪತ್ರಿಕೆ ಮೈಸೂರು-ಏಪ್ರಿಲ್-2019) ಮತ್ತು ಅಸ್ಥಿತ್ವ ಲೀಗಲ್ ಬ್ಲಾಗಸ್ಪಾಟ್.ಕಾಮ್

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!    ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು. ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.    ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.    ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ. ‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.    ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.    ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.   ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.                                                          *** ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ

Read Post »

You cannot copy content of this page

Scroll to Top