ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚೆಗುವೆರ ಎಂಬ ಮುಗಿಯದ ಪಯಣ

ಕವಿತೆ ಚೆಗುವೆರ ಎಂಬ ಮುಗಿಯದ ಪಯಣ ಚೆ ಗುವೆರ ೧೯೨೮ ಲ್ಲಿ ರೊಸಾರಿಯೋ,ಅರ್ಜೆಂಟೀನದಲ್ಲಿ ಹುಟ್ಟಿದರು. ಇವರು ಜನಪ್ರಿಯವಾಗಿ ಚೇ ಗುವಾರ, ಎಲ್ ಚೇ ಅಥವ ಬರಿ ಚೇ ಎಂದು ಕರೆಯಲ್ಪಡುತ್ತಾರೆ. ಅರ್ಜೆಂಟೀನಾದಲ್ಲಿ ಹುಟ್ಟಿದ ಮಾರ್ಕ್ಸ್ ವಾದಿ, ಕ್ರಾಂತಿವಾದಿ, ರಾಜಕೀಯ ವ್ಯಕ್ತಿ, ಮತ್ತು ಕ್ಯೂಬ ಮತ್ತು ಅಂತರರಾಷ್ಟ್ರೀಯ ಗೆರಿಲ್ಲಾಗಳ ನಾಯಕ.  ಅವರು ಬ್ಯೂನಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪಡೆದರು. ವೈದ್ಯನಾಗಲು ಕನಸುಕಂಡಿದ್ದ ಆತ ತನ್ನ ರಜಾದಿನಗಳಲ್ಲಿ ಲ್ಯಾಟಿನ್ ಅಮೆರಿಕದ ಉದ್ದಕ್ಕೂ ಪ್ರವಾಸ ಕೈಗೊಂಡಿದ್ದ.  ಈ ಸಮಯದಲ್ಲಿ ಆತನಲ್ಲಿ ಆದ ಅನುಭವಗಳು ಮತ್ತು ವೀಕ್ಷಣೆಗಳು ಆತನಲ್ಲಿ ಒಂದು ಪ್ರಬಲವಾದ ನಿರ್ಣಯಕ್ಕೆ ಕಾರಣವಾಯಿತು ಅದೇನೆಂದರೆ ಆ ಪ್ರದೇಶದಲ್ಲಿ ಬೇರುಬಿಟ್ಟ ಆರ್ಥಿಕ ಅಸಮಾನತೆ ,ಬಂಡವಾಳಶಾಹಿ, ಏಕಸ್ವಾಮ್ಯತೆ, ತತ್ತ್ವ , ಸಾಮ್ರಾಜ್ಯಶಾಹಿ ಮತ್ತಿತರ ಆಂತರಿಕ ಬಿಕ್ಕಟ್ಟುಗಳು ತೊಲಗಬೇಕಾದರೆ ಇರುವ ಒಂದೇ ಒಂದು ಮಾರ್ಗವೆಂದರೆ ಅದೇ ಕ್ರಾಂತಿ. ಈ ನಂಬಿಕೆಯೇ ಅಧ್ಯಕ್ಷ ಜಾಕೋಬ್ ಅರ್ಬೆಂಜ್ನ ಗ್ವಾಟೆಮಾಲಾ ಸಾಮಾಜಿಕ ಸುಧಾರಣೆಯ ಪಕ್ಷ ಸೇರಲು ಪ್ರೇರೇಪಿಸಿತು. ನಂತರ, ಮೆಕ್ಸಿಕೋ ಸಿಟಿಯಲ್ಲಿ ವಾಸಿಸುತ್ತಿರುವಾಗಲೇ ರೌಲ್ ಮತ್ತು ಫಿಡೆಲ್ ಕ್ಯಾಸ್ಟ್ರೋರ ಭೇಟಿಯಾಗಿ ಅವರ ಜುಲೈ ೨೮ರ ಚಳುವಳಿಯನ್ನು ಸೇರಿದನು ನಂತರ US ಬೆಂಬಲಿತ ಕ್ಯೂಬಾದ ಸರ್ವಾಧಿಕಾರಿ ಫಲ್ಜೆಂಸಿಯೋ ಬಟಿಸ್ಟಾ ನನ್ನು ಅಧಿಕಾರದಿಂದ ಕಿತ್ತುಹಾಕುವ ಉದ್ದೇಶದಿಂದ ಗ್ರನ್ಮ ಎಂಬ ಹಡಗಿನಲ್ಲಿ ಕ್ಯೂಬಾ ತಲುಪಿದನು.  ಗುವೆರಾ ಅತೀ ಶೀಘ್ರದಲ್ಲೇ ಬಂಡುಕೋರರ ನಡುವೆ ಪ್ರಸಿದ್ಧಿಯನ್ನು ಪಡೆದಕಾರಣವಾಗಿ ಎರಡನೆಯ ಅಧಿಕಾರಿಯಾಗಿ ಬಡ್ತಿ ನೀಡಲಾಯಿತು ಮತ್ತು ಬಟಿಸ್ಟಾ ಆಡಳಿತ ಪದಚ್ಯುತಗೊಂಡನಂತರ ತನ್ನ ವಿಜಯದ ಎರಡು ವರ್ಷದ ಗೆರಿಲ್ಲಾ ಅಭಿಯಾನದಲ್ಲಿ ಪ್ರಮುಖ ಪಾತ್ರವಹಿಸಿದ್ದನು ,೧೯೬೪ರಲ್ಲಿ ಗುವೇರಾ ತನ್ನ ಕ್ರಾಂತಿಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ಯೂಬಾವನ್ನು ಬಿಟ್ಟು ವಿದೇಶ ಪ್ರವಾಸನ್ನು ಕೈಗೊಂಡಿದ್ದ. ಅಕ್ಟೋಬರ್ ೯, ೧೯೬೭ರಂದು CIA ನೆರವಿನಿಂದ ಬೊಲಿವಿಯದಲ್ಲಿ ಸೆರೆಹಿಡಿದು ಅಧಿಕಾರಿಗಳ ಕಟ್ಟಪ್ಪಣೆಯಿಂದ ಗುವೇರನನ್ನು ಗುಂಡುಹೊಡೆದು ಕೊಲ್ಲಲಾಯಿತು. ಗುವೇರ ಪ್ರಬಲ ಬರಹಗಾರ, ದಿನಚರಿಗಾರನೂ ಕೂಡ ಆಗಿದ್ದ ಆತನ ಗೆರಿಲ್ಲಾ ಸಮರ ಕೈಪಿಡಿ ಮತ್ತು ತನ್ನ ಲ್ಯಾಟಿನ್ ಅಮೆರಿಕಾದ ಪ್ರವಾಸದ ಘಟನಾವಳಿಗಳನ್ನು ಒಳಗೊಂಡ ದ ಮೋಟರ್ ಸೈಕಲ್ ಡೈರೀಸ್ ಉತ್ತಮವಾಗಿ ಮಾರಾಟಗೊಂಡ ಕೃತಿಗಳು.  ೨೦೦೪ರಲ್ಲಿ ಸ್ಪೇನ್ ಭಾ‌ಷೆಯಲ್ಲಿ ಚಲನಚಿತ್ರವಾದ ‘ದ ಮೋಟರ್ ಸೈಕಲ್ ಡೈರೀಸ್’ ವಿಮರ್ಶಕರಿಂದ ಉತ್ತಮ ವಿಮರ್ಶೆಯನ್ನು ಪಡೆದು ಯಶಸ್ವಿಚಿತ್ರವೆನಿಸಿತು. ಗುವೇರ ತನ್ನ ಹುತಾತ್ಮದ ಪರಿಣಾಮವಾಗಿ ಒಂದು ಐತಿಹಾಸಿಕ ಪಾತ್ರವಾಗಿ ಬಹುಸಂಖ್ಯೆಯ ಜೀವನಚರಿತ್ರೆ, ಪ್ರಬಂಧ, ಸಾಕ್ಷ್ಯಚಿತ್ರ, ಹಾಡುಗಳು, ಮತ್ತು ಚಿತ್ರಗಳಾಗಿ ಇನ್ನೂ ಬದುಕಿದ್ದಾನೆ. ಟೈಮ್ ನಿಯತಕಾಲಿಕವು ಈತನನ್ನು ೨೦ನೇ ಶತಮಾನದ ೧೦೦ ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಒಬ್ಬ ಎಂದು ಪ್ರಕಟಿಸಿತ್ತು. Guerrillero Heroico ಎಂಬ ಈತನ ಚಿತ್ರವನ್ನು ವಿಶ್ವದಲ್ಲೇ ಅತ್ಯಂತ ಪ್ರಸಿದ್ಧ ಛಾಯಾಚಿತ್ರ ಎಂದು ಕರೆಯಲಾಗುತ್ತದೆ. ಗುವೇರನನ್ನು ಎರ್ನೆಸ್ಟಿಲೋ ಎಂದೇ ಕರೆಯಲಾಗುತ್ತಿತ್ತು, ತೀವ್ರವಾದಿ ಪ್ರವೃತ್ತಿಗಳ ಕುಟುಂಬದಿಂದ ಬೆಳೆದುಬಂದಿದ್ದ ಗುವೇರನಿಗೆ ಬಾಲ್ಯದಿಂದಲೇ ರಾಜಕೀಯ ದೃಷ್ಠಿಕೋನಗಳು ಅಘಾಧವಾಗಿ ಬೆಳೆಯತೊಡಗಿತ್ತು. ಅವನ ತಂದೆ ಸ್ಪಾನಿಷ್ ಗಣರಾಜ್ಯದ ನಾಗರಿಕ ಯುದ್ಧದ ಧೃಡಬೆಂಬಲಿಗರಾಗಿದ್ದರು ಸಾಮಾನ್ಯವಾಗಿ ಅನೇಕ ಪರಿಣಿತರಿಗೆ ಗುವೇರನ ಮನೆಯಲ್ಲೆ ಔತಣಕೋಟದ ಆತಿಥ್ಯವನ್ನು ಏರ್ಪಡಿಸಲಾಗುತ್ತಿತ್ತು. ತನ್ನ ಜೀವನದುದ್ದಕ್ಕೂ ಅಸ್ತಮ ರೋಗದಿಂದ ಬಳಲುತ್ತಿದ್ದರೂ ಆತ ಒಬ್ಬ ಉತ್ತಮ ಕ್ರೀಡಾಪಟು,ಈಜುಗಾರ,ಫುಟ್ಬಾಲ್,ಗಾಲ್ಫ್ ಹಾಗು ಅತ್ಯುತ್ತಮ ಸೈಕಲ್ ಸವಾರನಾಗಿದ್ದ ಮತ್ತು ಅತ್ಯಾಸಕ್ತ ರಗ್ಬಿ ಯೂನಿಯನ್ ಆಟಗಾರನೂ ಆಗಿದ್ದ ಆತನ ಆಟದ ಶೈಲಿ ಅವನಿಗೆ Fuser(ಸಂಯೋಜಕ) ಎಂಬ ಅಡ್ಡಹೆಸರನ್ನು ತಂದಿತ್ತು. ೨೨ ವರ್ಷದ ಚೆ ಗುವೆರ,೧೯೫೧ ಗುವೇರ ತಂದೆಯಿಂದ ಚೆಸ್ ಆಡುವುದನ್ನು ಕಲಿತನು ತನ್ನ ೧೨ನೇ ವಯಸ್ಸಿನಲ್ಲೇ ಸ್ಥಳೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದನು. ಪ್ರೌಢಾವಸ್ಥೆಯಲ್ಲಿ ಮತ್ತು ಜೀವನದುದ್ದಕ್ಕೂ ಕಾವ್ಯದ ಬಗ್ಗೆ ಅಪಾರವಾದ ಅಭಿಮಾನ ಹೊಂದಿದ್ದನು,ವಿಶೇಷವಾಗಿ ಪಬ್ಲೊ ನೆರುಡ,ಜಾನ್ ಕೀಟ್ಸ್,ಆಂಟೋನಿಯೊ ಮಕಾಡೋ,ಫೆಡೆರಿಕೋ ಗಾರ್ಸಿಯಾ ಲೋರ್ಕಾ,ಗಾಬ್ರಿಯೆಲ ಮಿಸ್ಟ್ರಲ್,ಸೀಜರ್ ವ್ಯಾಲೆಜೊ, ಮತ್ತು ವಾಲ್ಟ್ ವಿಟ್ಮನ್ ಅವರ ಕಾವ್ಯಗಳು ಅತ್ಯಂತ ಇಷ್ಟವಾದವುಗಳು,ರುಡ್ಯಾರ್ಡ್ ಕಿಪ್ಲಿಂಗ್ ಅವರ “If—” ಹಾಡು ಬಾಯಿಪಾಟವಾಗಿ ಹೋಗಿತ್ತು. ಗುವೇರನ ಮನೆಯಲ್ಲಿ ೩೦೦೦ಕ್ಕಿಂತ ಹೆಚ್ಚು ಪುಸ್ತಕಗಳಿದ್ದವು ಇದೇ ಅವನನ್ನು ಉತ್ಸಾಹಿ ಮತ್ತು ವಿಶಾಲದೃಷ್ಟಿಯ ಓದುಗನನ್ನಾಗಿ ಮಾಡಿತ್ತು .ಕಾರ್ಲ್ ಮಾರ್ಕ್ಸ್, ವಿಲಿಯಂ ಫಾಲ್ಕ್ನರ್, ಆಂಡ್ರೆ ಗೈಡ್, ಎಮಿಲಿಯೊ ಸಲ್ಗಾರಿ ಮತ್ತು ಜೂಲ್ಸ್ ವರ್ನೆ ಜೊತೆಗೆ ಜವಾಹರಲಾಲ್ ನೆಹರು, ಫ್ರ್ಯಾನ್ಝ್ ಕಾಫ್ಕ, ಆಲ್ಬರ್ಟ್ ಕ್ಯಾಮಸ್, ವ್ಲಾಡಿಮಿರ್ ಲೆನಿನ್, ಮತ್ತು ಜೀನ್ ಪಾಲ್ ಸಾರ್ತ್ರೆ; ಹಾಗೆಯೇ ಅನಾಟೊಲೆ ಫ್ರಾನ್ಸ್, ಫ್ರೆಡ್ರಿಕ್ ಎಂಗೆಲ್ಸ್, HG ವೆಲ್ಸ್, ಮತ್ತು ರಾಬರ್ಟ್ ಫ್ರಾಸ್ಟ್ ಅವರ ಕೃತಿಗಳನ್ನು ಆನಂದಿಸಿ ಓದುತ್ತಿದ್ದ. ಬೆಳೆದಂತೆಲ್ಲಾ ಲ್ಯಾಟಿನ್ ಅಮೆರಿಕನ್ ಬರಹಗಾರರಾದ ಹೊರಾಸಿಯೊ ಕ್ವಿರೋಗಾ, ಸಿರೊ ಅಲ್ಜಿರಿಯಾ, ಜೋರ್ಜ್ ಇಖಾಜಾ, ರುಬೆನ್ ಡರಿಯೊ ಮತ್ತು ಮಿಗುಯೆಲ್ ಆಸ್ಟೂರಿಯಸ್ ರವರ ಬರಹಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡ ಈ ಲೇಖಕರ ಪರಿಕಲ್ಪನೆಗಳನ್ನು ಮತ್ತು ಸಿದ್ಧಾಂತಗಳನ್ನು ತನ್ನ ಕೈ ಬರಹದ ಪುಸ್ತಕದಲ್ಲಿ ದಾಖಲಿಸತೊಡಗಿದ. ಇವುಗಳಲ್ಲಿ ಬುದ್ಧ ಮತ್ತು ಅರಿಸ್ಟಾಟಲ್‌ನ ವಿಶ್ಲೇಷಣಾತ್ಮಕ ರೇಖಾಚಿತ್ರಗಳು ಬರ್ಟ್ರಾಂಡ್ ರಸ್ಸೆಲ್ ನ ಪ್ರೀತಿ ಮತ್ತು ದೇಶಭಕ್ತಿ, ಜಾಕ್ ಲಂಡನ್ ನ ಸಮಾಜದ ಮೇಲೆ, ನೀತ್ಸೆಯ ಸಾವಿನ ಕಲ್ಪನೆ ಸಿದ್ಧಾಂತಗಳನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸುವುದು ಒಳಗೊಂಡಿದ್ದವು. ಶಾಲೆಯಲ್ಲಿ ಈತನ ನೆಚ್ಚಿನ ವಿಷಯಗಳೆಂದರೆ ತತ್ವಶಾಸ್ತ್ರ,ಗಣಿತಶಾಸ್ತ್ರ,ರಾಜಕೀಯ ವಿಜ್ಞಾನ,ಸಮಾಜಶಾಸ್ತ್ರ,ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರ. ವರ್ಷಗಳ ನಂತರ, ಫೆಬ್ರವರಿ ೧೩, ೧೯೫೮ರಂದು ಬಹಿರಂಗಗೊಂಡ CIA ಜೀವನಚರಿತ್ರೆ ಮತ್ತು ವ್ಯಕ್ತಿತ್ವ ವರದಿ ಯಲ್ಲಿ ಅವನ ಶೈಕ್ಷಣಿಕ ಆಸಕ್ತಿಗಳನ್ನು ಮತ್ತು ಬುದ್ಧಿಶಕ್ತಿಯನ್ನು ಗಮನಿಸಿ ಆತನನ್ನು ಒಬ್ಬ ಬುದ್ದಿವಂತ ಲ್ಯಾಟಿನ್ ಅಮೇರಿಕದ ನಿವಾಸಿ ಎಂದು ಹೇಳಲಾಗಿದೆ. ೧೯೪೮ರಲ್ಲಿ ಗುವೇರ ಔಷಧ ಅಧ್ಯಯನಕ್ಕಾಗಿ ಬ್ಯೂನಸ್ ವಿಶ್ವವಿದ್ಯಾಲಯ ಪ್ರವೇಶಿಸಿದನು. ಜಗತ್ತನ್ನು ಅನ್ವೇಶಿಸುವ ತನ್ನ ಮಹದಾಸೆ ಮೂಲಭೂತವಾಗಿ ಲ್ಯಾಟಿನ್ ಅಮೆರಿಕಾದ ಸಮಕಾಲೀನ ಆರ್ಥಿಕ ಪರಿಸ್ಥಿತಿಗಳನ್ನು ಎರಡು ದೀರ್ಘ ಆತ್ಮಶೋಧಕ ಪ್ರಯಾಣದ ಜೊತೆಗೆ ಅನ್ವೇಷಿಸಿದರು. ೧೯೫೦ರಲ್ಲಿ ಮೊದಲ ದಂಡಯಾತ್ರೆ, ಒಂದು ಸಣ್ಣ ಮೋಟರ್ ಒಳಗೊಂಡಿರುವ ಸೈಕಲ್ ಮೇಲೆ ಉತ್ತರ ಅರ್ಜೆಂಟೀನಾ ಗ್ರಾಮೀಣ ಪ್ರಾಂತ್ಯಗಳಲ್ಲಿ ಒಂಟಿಯಾಗಿ ಪ್ರವಾಸಕೈಗೊಂಡನು ಪ್ರಯಾಣದ ಉದ್ದವು ೪,೫೦೦ ಕಿಲೋಮೀಟರ್ ಆಗಿತ್ತು. ನಂತರದ ಪ್ರವಾಸ ೧೯೫೧ರಲ್ಲಿ ದಕ್ಷಿಣ ಅಮೆರಿಕಾದಾದ್ಯಂತ, ಇದು ೯ ತಿಂಗಳು ಮತ್ತು ೮,೦೦೦ ಕಿಲೋಮೀಟರ್ ಒಳಗೊಂಡ ಯಾತ್ರೆಯಾಗಿತ್ತು. ಎರಡನೆಯದಕ್ಕೆ ಒಂದು ವರ್ಷಗಳ ಕಾಲ ವಿಧ್ಯಾಭ್ಯಾಸಕ್ಕೆ ವಿರಾಮ ತೆಗೆದುಕೊಂಡನು ತನ್ನ ಗೆಳೆಯ ಆಲ್ಬರ್ಟೊ ಗ್ರನಡೋ ಜೊತೆಗೂಡಿ ಅಮೆಜಾನ್ ನದಿಯ ಮೇಲೆ, ಪೆರುವಿನಲ್ಲಿ SAN PABLO ಕುಷ್ಠರೋಗಿಗಳ ಕಾಲೋನಿಯಲ್ಲಿ ಸ್ವಯಂ ಸೇವಕರಾಗಿ ಕೆಲವು ವಾರಗಳವರೆಗೆ ಸೇವೆಸಲ್ಲಿಸುವುದು ಅಂತಿಮ ಗುರಿಯಾಗಿತ್ತು. ಚಿಲಿಯಲ್ಲಿ ಅನಕೊಂಡಾದ ಚುಕ್ವಿಕೆಮೇಟಾ ತಾಮ್ರದ ಗಣಿಯಲ್ಲಿ ಗಣಿಗಾರರ ಕೆಲಸದ ಸ್ಥಿತಿಗತಿಗಳು ಗುವೇರನನ್ನು ಕೆರಳಿಸಿತು, ಅಟಾಕಾಮಾ ಮರುಭೂಮಿಯ ರಾತ್ರಿಯಲ್ಲಿ ಒಂದು ಹೊದಿಕೆಯನ್ನು ಸಹ ಹೊಂದಿರದ ಕಮ್ಯುನಿಸ್ಟ್ ದಂಪತಿಗಳ ಜೊತೆ ರಾತ್ರಿಯನ್ನು ಕಳೆದ ಮತ್ತವರನ್ನು ಬಂಡವಾಳಶಾಹಿ ಶೋಷಣೆಯ ಬಲಿಪಶುಗಳು ಎಂದು ಅವರ ನಿಜಸ್ಥಿತಿಯನ್ನು ವಿವರಿಸಿದ. ಮಚ್ಚು ಪಿಚ್ಚು ಗೆ ಹೋಗುವ ದಾರಿಯಲ್ಲಿ ಆಂಡ್ಸ್ ಪರ್ವತದ ಮೇಲ್ಭಾಗದಲ್ಲಿ ದೂರದ ಗ್ರಾಮೀಣ ಪ್ರದೇಶಗಳಲ್ಲಿ ಶ್ರೀಮಂತ ಭೂಮಾಲೀಕರು ತಮ್ಮ ಒಡೆತನದ ಭೂಮಿಯನ್ನು ಅಲ್ಲಿನ ಬಡರೈತರಿಂದ ಕೃಷಿಮಾಡಿಸುತ್ತಿರುವುದನ್ನು ಕಂಡನು. ನಂತರ ತನ್ನ ಪ್ರಯಾಣದಲ್ಲಿ ಕುಷ್ಠರೋಗದ ಕಾಲೋನಿಯಲ್ಲಿ ವಾಸಿಸುವ ಜನರ ನಡುವೆ ಇರುವ ನಿಕಟಸ್ನೇಹವನ್ನು ಕಂಡು ಪ್ರಭಾವಿತನಾದ, ಮಾನವ ಐಕಮತ್ಯ ಮತ್ತು ನಿಷ್ಠೆ ಅತ್ಯಧಿಕವಾಗಿ ಒಂಟಿಯಾಗಿರುವ ಮತ್ತು ಹತಾಶರಾದ ಜನರಲ್ಲಿ ಕಾಣಸಿಗುತ್ತದೆ ಎಂದು ಹೇಳಿಕೆ ನೀಡಿದ್ದ.  ಗುವೇರ ತನ್ನ ಪ್ರವಾಸದಲ್ಲಿ ಬಳಸಿದ್ದ ಟಿಪ್ಪಣಿಗಳು ‘ದ ಮೋಟರ್ ಸೈಕಲ್ ಡೈರೀಸ್’ ಎಂಬ ಹೆಸರಿನೊಂದಿಗೆ ಪ್ರಕಟವಾಯಿತು ನಂತರ ನ್ಯೂಯಾರ್ಕ್ ಟೈಮ್ಸ್ ನ ಉತ್ತಮ ಮಾರಾಟವಾದ ಪುಸ್ತಕವೂ ಆಯಿತು. ೨೦೦೪ರಲ್ಲಿ ಸ್ಪಾನಿಷ್ ಭಾಷೆಯಲ್ಲಿ ಅದೇ ಹೆಸರಿನ ಪ್ರಶಸ್ತಿ ವಿಜೇತ ಚಿತ್ರವಾಗಿ ಹೊರಹೊಮ್ಮಿತು. ತನ್ನ ಮನೆ ಬ್ಯೂನಸ್ ಏರ್ಸ್ಗೆ ಮರಳುವ ಮುನ್ನ ಗುವೇರ ಒಟ್ಟು ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನೆಜುವೆಲಾ, ಪನಾಮ ಮತ್ತು ಮಿಯಾಮಿಯೆಲ್ಲೆಡೆ ಸುತ್ತಾಡಿಬಂದಿದ್ದ, ಪ್ರವಾಸದ ಕೊನೆಯಲ್ಲಿ ಅವನ ಕಲ್ಪನೆಯಲ್ಲಿ ಲ್ಯಾಟಿನ್ ಅಮೇರಿಕವು ಮಿತಿಯಿಲ್ಲದ ಸಾಮಾನ್ಯ ಲ್ಯಾಟಿನ್ ಪರಂಪರೆಯನ್ನೊಳಗೊಂಡ ಪ್ರತ್ಯೇಕ ರಾಷ್ಟ್ರಗಳ ಸಂಗ್ರಹವಲ್ಲ ಬದಲಿಗೆ ವಿಮೋಚನೆಯಾಗಬೇಕಾಗಿರುವ ಭೂಖಂಡದ ವಿಶಾಲ ಘಟಕವೆಂಬಂತೆ ಕಾಣಿಸಿತು.  ಅರ್ಜೆಂಟೀನಾಗೆ ಮರಳಿದ ನಂತರ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ ಜೂನ್ ೧೯೫೩ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು ಮತ್ತು ಅಧಿಕೃತವಾಗಿ ಡಾ||ಎರ್ನೆಸ್ಟೋ ಗುವೇರನಾದರು. ನಂತರ ತನ್ನ ಪ್ರಯಾಣದ ಅನುಭವದಲ್ಲಿ ಲ್ಯಾಟಿನ್ ಅಮೇರಿಕಾವನ್ನು ಟೀಕಿಸಿದರು ಲ್ಯಾಟಿನ್ ಅಮೇರಿಕಾದಲ್ಲಿ ಬಡತನ, ಹಸಿವು ಮತ್ತು ರೋಗದ ಚಿಕಿತ್ಸೆಗೆ ಹಣದ ಕೊರತೆ, ನಿರಂತರ ಹಸಿವು ಮತ್ತು ಜಡ ಸ್ಥಿತಿ ಎದ್ದು ಕಾಣುತ್ತದೆ ಈ ಜನರಿಗೆ ಸಹಾಯ ಮಾಡಬೇಕಾದರೆ ವೈದ್ಯಕೀಯ ಪದವಿ ಬಿಟ್ಟು ಪರಿಪೂರ್ಣ ಸಶಸ್ತ್ರ ಹೋರಾಟದ ಅಗತ್ಯವಿದೆ ಎಂದು ಮನಗಂಡರು. ಜುಲೈ 7, 1953 ರಂದು, ಗುವೇರ ಸವಾರಿ ಮತ್ತೆ ಹೊರಟಿತು ಈ ಬಾರಿ ಬಲ್ಗೇರಿಯಾ, ಪೆರು, ಈಕ್ವೆಡಾರ್, ಪನಾಮ, ಕೋಸ್ಟಾ ರಿಕಾ, ನಿಕರಾಗುವಾ, ಹೊಂಡುರಸ್ ಮತ್ತು ಎಲ್ ಸಾಲ್ವಡಾರ್. ಡಿಸೆಂಬೆರ್ ೧೦ರಂದು ಗ್ವಾಟೆಮಾಲಾ ಬಿಟ್ಟು ಹೊರಡುವ ಮುನ್ನ ಸ್ಯಾನ್ ಜೋಸ್, ಕೋಸ್ಟ ರಿಕಾದಿಂದ ತನ್ನ ಚಿಕ್ಕಮ್ಮ ಬೀಟ್ರಿಜ್ಗೆ ಒಂದು ಸಂದೇಶವನ್ನು ಕಳುಹಿಸಿದ, ಆ ಪತ್ರದಲ್ಲಿ United Fruit Company ಆಡಳಿತದ ಬಗ್ಗೆ ಮತ್ತು ಬಂಡವಾಳಶಾಹಿಗಳ ಕ್ರೂರತನದ ಬಗ್ಗೆ ಮನವರಿಕೆಮಾಡಿದ್ದ . ಗ್ವಾಟೆಮಾಲಾ ನಗರದಲ್ಲಿ, ಗುವೇರ ಪೆರುವಿಯನ್ ಅರ್ಥಶಾಸ್ತ್ರಜ್ಞ “ಹಿಲ್ಡಾ ಗಡಿಯ ಅಕೋಸ್ಟಾ ಳನ್ನು” ಆಶ್ರಯಿಸಿದ್ದ, ಆತ “APRA, American Popular Revolutionary Alliance” ಸಂಗದ ಉತ್ತಮ ರಾಜಕೀಯ ಸದಸ್ಯನಾಗಿದ್ದಳು.ಆಕೆಯಿಂದ Arbenz ಸರ್ಕಾರದ ಉನ್ನತ ಮಟ್ಟದ ಹಲವಾರು ಅಧಿಕಾರಿಗಳ ಪರಿಚಯವಾಯಿತು. ನಂತರ ಕ್ಯೂಬಾದ ಬಹಿಷ್ಕೃತರ ಸಮೂಹ ಸಂಪರ್ಕದಿಂದ ಫಿಡೆಲ್ ಕ್ಯಾಸ್ಟ್ರೋನ ಪರಿಚಯವಾಯಿತು, ಈ ಅವಧಿಯಲ್ಲಿ ಗುವೇರ “ಚೆ” ಎಂಬ ಅಡ್ಡಹೆಸರಿನಿಂದ ಪ್ರಸಿದ್ಧಿಗಳಿಸಿದನು. ಈ ಅವಧಿಯಲ್ಲಿ ಸಶಸ್ತ್ರ ಹೋರಾಟ ಮತ್ತು ಶಿಕ್ಷೆಯ ಮೂಲಕವೇ ಮಾತ್ರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಜನಸಾಮಾನ್ಯರ ರಕ್ಷಣೆ ಮತ್ತು ಬಲಪಡಿಸುವುದು ಸಾಧ್ಯ ಎಂದು ಗುವೇರನಿಗೆ ಮನವರಿಕೆ ಮಾಡಿಕೊಟ್ಟಿದ್ದು ಗ್ವಾಟೆಮಾಲ ನಗರ ಎಂದು “ಗಡೆಯ” ತಾನು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ. ************************************ ಆಶಾ ಸಿದ್ದಲಿಂಗಯ್ಯ

ಚೆಗುವೆರ ಎಂಬ ಮುಗಿಯದ ಪಯಣ Read Post »

ಇತರೆ, ಜೀವನ

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ

ಲೇಖನ ಲಾಕ್ಡೌನ್ ಕಾಲಘಟ್ಟದ ದಾಂಪತ್ಯ ಅಂಜಲಿ ರಾಮಣ್ಣ ಬೆಳಗಿನಲ್ಲಿ ಅವನು ಬಲು ಸುಭಗ. ರಾತ್ರಿಯಾಯಿತೆಂದರೆ ಕೀಚಕನೇ ಮೈಯೇರಿದ್ದಾನೆ ಎನ್ನುವಂತೆ ಇರುತ್ತಿದ್ದ. ಅವಳ ಮೈಮೇಲಿನ ಹಲ್ಗುರುತು, ಉಗುರ್ಗೆರೆ, ಸಿಗರೇಟಿನ ಬೊಟ್ಟು ಕತ್ತಲಲ್ಲೂ ಮಿರಮಿರ ಉರಿಯುತ್ತಿತ್ತು. ಸಹಿಸುತ್ತಲೇ ಅವಳ ದಾಂಪತ್ಯಕ್ಕೆ ಮೂರು ವರ್ಷ ಕಳೆದುಹೋಗಿತ್ತು. ಸ್ನಾನದ ನೀರು ಬಿದ್ದರೆ ಧಗಧಗ ಎನ್ನುವ ದೇಹ ದಹನಕ್ಕೆ ಹೆದರಿದ್ದ ದಾಕ್ಶಾಯಣಿ  ಅವಳು ಅದೆಷ್ಟೋ ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಿದ್ದಳು. ಕತ್ತಲಲ್ಲಿ ಅವಳಾತ್ಮವನ್ನು ಹೀಗೆ ಚರ್ಮದಂತೆ ಸಂಸ್ಕರಿಸುತ್ತಿದ್ದವ ಬೆಳಕಿನಲ್ಲಿ ಬೆಕ್ಕಿನ ಮರಿಯಂತೆ ಆಗುತ್ತಿದ್ದ. ಆಫೀಸಿನಲ್ಲಿ ಬಹಳವೇ ಪ್ರಾಮಾಣಿಕ. ನೆಂಟರಿಷ್ಟರ ಗೋಷ್ಠಿಯಲ್ಲಿ ಇವನೇ ಗೋಪಾಲಕೃಷ್ಣ. ಸಹಿಸಿದಳು, ಸಹಿಸಿದಳು ಅವಳು. ಸಹನೆ ಖಾಲಿಯಾಯ್ತು. ಉಪಾಯ ಒಂದು ಯಮಗಂಡಕಾಲದಂತೆ ಅವಳ ತಲೆ ಹೊಕ್ಕಿತು.  ನಿತ್ಯವೂ ಅವನ ರಾತ್ರಿ ಊಟದಲ್ಲಿ ಬೇಧಿ ಮಾತ್ರೆ ಬೆರಸಿಕೊಡಲು ಶುರುವಿಟ್ಟಳು. ಆರು ತಿಂಗಳು ಮೈಯ್ಯಿನ ನೀರು ಆರಿ ಅವನು ಹೈರಾಣಾದ. ಸ್ಕ್ಯಾನಿಂಗ್ ಸೆಂಟರ್ಗಳಿಂದ ತಿಮ್ಮಪ್ಪನ ದರುಶನದವರೆಗೂ ಎಡುಕಾಡುತ್ತಾ ಮೆತ್ತಗಾದ. ಇವಳ ಮನಸ್ಸು ಉಸಿರಾಡಲು ಶುರುವಿಟ್ಟಿತು, ಶರೀರದ ಮೇಲಿನ ಗಾಯ ಒಣಗುವತ್ತ ಮುಖ ಮಾಡಿತ್ತು. ಅವಳು ಈ ಕಥೆಯನ್ನು ಮತ್ತ್ಯಾರದ್ದೋ ಜೀವನದ ಘಟನೆಯಂತೆ ಏರಿಳಿತವಿಲ್ಲದೆ ಹೇಳಿದಾಗ ಸಂಬಂಧಗಳ ನಡುವಿನ ಥಣ್ಣನೆಯ ಕ್ರೌರ್ಯಕ್ಕೆ ದಂಗಾಗಿ ಹೋಗಿದ್ದೆ. ದೌರ್ಜನ್ಯಕ್ಕೆ ದಶಕಂಠ ಎಂದರಿವಿದ್ದವಳಿಗೆ ಅದು ಮುಖವಿಹೀನ ಎನ್ನುವುದು ಅರಿವಿಗೆ ಬಂದಿತ್ತು. ಹೀಗೆ ಗಂಡಹೆಂಡಿರು ಅವರ ಸಮಸ್ಯೆಗಳನ್ನು ಹೇಳಿಕೊಂಡಾಗಲೆಲ್ಲಾ ಟೆಬಲ್‍ನ ಈ ಬದಿಯಲ್ಲಿ ಕುಳಿತ ನನ್ನದು ಸಾಧಾರಣವಾಗಿ ಒಂದು ಸಿದ್ಧ ಉತ್ತರ ಇರುತ್ತಿತ್ತು  “ಒಟ್ಟಿಗೆ ಕುಳಿತು ಮಾತನಾಡಿ” ಅಥವಾ “ಹೆಚ್ಚು ಸಮಯವನ್ನು ಒಬ್ಬರ ಜೊತೆ ಒಬ್ಬರು ಕಳೆಯಿರಿ” ಎನ್ನುತ್ತಿದ್ದೆ.   ಉದ್ಯೋಗ, ಹಣ ಇವುಗಳ ಬೆನ್ನ ಮೇಲೆ ತಮ್ಮ ವಿಳಾಸವನ್ನು ಕೆತ್ತಿಡಬೇಕು ಎನ್ನುವ ಧಾವಂತದಲ್ಲಿಯೇ ಶ್ವಾಸಕೋಶ ತುಂಬಿಕೊಳ್ಳುವ ಅವನು-ಅವಳು ಇವರ ಮಧ್ಯೆ ಸಮಯ ಮತ್ತು ಮಾತು ಇವುಗಳನ್ನುಳಿದು ಇನ್ನೆಲವೂ ಇರುವುದನ್ನು ಕಂಡಿದ್ದರಿಂದ, ಬಂದವರಿಗೆಲ್ಲಾ “ಟೈಮ್ ಕೊಟ್ಟು ಟೈಮ್ ಕೊಳ್ಳಿ” ಎನ್ನುತ್ತಿದ್ದೆ. ಇದನ್ನು ಕೇಳಿಸಿಕೊಂಡಿತೇನೋ ಎನ್ನುವ ಹಾಗೆ ಬಂದು ಬಿಟ್ಟಿತು ಕರೋನ ಸಾಂಕ್ರಾಮಿಕ ಪಿಡುಗು. ನಾನೊಂದು ತೀರ ನೀನೊಂದು ತೀರ ಎಂದು ಹಾಡುತ್ತಿದ್ದವರೆಲ್ಲಾ, ನೀನೆಲ್ಲೋ ನಾನಲ್ಲೇ ರಾಗವಾಗುವಂತೆ ಆಯಿತು. ಆಹಾ, ಇನ್ನು ಎಲ್ಲರ ದಾಂಪತ್ಯ ಕೆ.ಎಸ್.ನ ಅವರ ಕವಿತೆಗಳಂತೆ ಎಂದು ಭಾವಿಸುವ ಹೊತ್ತಿನಲ್ಲಿ ವಿಶ್ವಸಂಸ್ಥೆಯಾದಿಯಾಗಿ, ಸಚಿವಾಲಯ ಮತ್ತು ಪ್ರಪಂಚದಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು “ ಲಾಕ್ಡೌನ್ ಸಮಯದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಗಣನೀಯ ಏರಿಕೆ” ಎನ್ನುವ ಕ್ಷಾರ ಸತ್ಯವನ್ನು ಒಮ್ಮೆಲೆ ಅಂಕಿಅಂಶಗಳ ಸಹಿತ ಹೊರಹಾಕಿರುವುದು ದಾಂಪತ್ಯ ಎನ್ನುವ ಪರಿಕಲ್ಪನೆಯನ್ನು ಮೂಕವಾಗಿಸಿದೆ. ಮನೆಯಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಹೆಚ್ಚಿದೆ. ಅದೆಷ್ಟೋ ಮನೆಗಳಲ್ಲಿ ನಿರುದ್ಯೋಗ ಎನ್ನುವ ವೈರಸ್ ಕಣ್ಣೀರಾಗಿ ಹರಿಯುತ್ತಿದೆ. ಶಾಲೆಗಳಿಲ್ಲದೆ ಮಕ್ಕಳು ಬಳ್ಳಿಗೆ ಭಾರ ಎನ್ನುವಂತಾಗಿದೆ. ಹೆಣ್ಣು-ಗಂಡಿನ ನಡುವಲ್ಲಿ ಮಾಧುರ್ಯ ಕುರುಡಾಗಿದೆ, ಸಂಯಮ ಮನೆಬಿಟ್ಟು ಹೊರಟಿದೆ. ಅಹಂ ಅಸಹನೆಯಲ್ಲಿ ಮಾತಾಗುತ್ತಿದೆ. ಮೌನ ನೋವು ನುಂಗುತ್ತಿದೆ. “ಮೇಡಂ ನಿಮ್ಮನ್ನು ಮೀಟ್ ಮಾಡಬೇಕು” ಎಂದು ಫೋನ್‍ನಲ್ಲಿದ್ದವಳು ಕೇಳಿದಾಗ “ಈಗ ಕಷ್ಟ, ಲಾಕ್ದೌನ್ ಇದೆಯಲ್ಲ” ಎಂದೆ. “ನೀವೇ ಏನಾದರೂ ಸಲಹೆ ಕೊಡಿ, ನನ್ನಿಂದ ಇನ್ನು ಈ ಮದುವೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ” ಎಂದವಳ ಮದುವೆಗೆ ಮೂವತ್ತಾರು ತಿಂಗಳಷ್ಟೇ. “ಏನಾಯ್ತು?” ಎನ್ನುವ ಚುಟುಕು ಪ್ರಶ್ನೆಗೆ ಅವಳು “ ಮೇಡಂ ಆಫೀಸಿಗೆ ಹೋಗುತ್ತಿದ್ದಾಗ ಹೇಗೊ ಎರಡೆರಡು ಶಿಫ್ಟ್ ಹಾಕಿಸಿಕೊಂಡು ಮ್ಯಾನೇಜ್ ಮಾಡ್ತಿದ್ದೆ. ಆದರೆ ಈಗ ನಮ್ಮ ಆಫೀಸಿನಲ್ಲಿ ಇನ್ನೊಂದು ವರ್ಷ ಮನೆಯಿಂದಲೇ ಕೆಲಸ ಮಾಡಿ ಎಂದು ಬಿಟ್ಟಿದ್ದಾರೆ. ನನ್ನ ಗಂಡನಿಗೂ ಮನೆಯಿಂದಲೇ ಕೆಲಸ. ಜೊತೆಲಿರೋದು ಬಹಳ ಕಿರಿಕಿರಿ” ಎಂದು ಮುಂದುವರೆದಳು. “ ಹತ್ತು ನಿಮಿಷಕೊಮ್ಮೆ ನನ್ನ ಅತ್ತೆ ಊರಿನಿಂದ ಮಗನಿಗೆ ಫೋನ್ ಮಾಡ್ತಾರೆ. ಅವರಿಗೆ ನಾವಿಬ್ಬರು ಮನೆಲಿದ್ದೀವಿ ಒಟ್ಟಿಗೆ ಎಂದರೆ ಏನೋ ಇನ್ಸೆಕ್ಯುರಿಟಿ. ಏನೇನೋ ಮಗನ ಕಿವಿಗೆ ಊದುತ್ತಾರೆ. ಅದನ್ನು ಕೇಳಿಕೊಂಡು ನನ್ನ ಗಂಡ ಇಲ್ಲಸಲ್ಲದ್ದಕ್ಕೆ ಜಗಳ ಮಾಡ್ತಾನೆ. ಪ್ಲೀಸ್ ಏನಾದರು ಲೀಗಲ್ ರೆಮಿಡಿ ಹೇಳಿ ಮೇಡಂ” ಎಂದು ನನ್ನ ಕಿವಿ ತುಂಬಿಸಿದಳು. ಒಳ್ಳೆ ಅಡುಗೆ ಮಾಡಿಕೊಂಡು ತಿನ್ನಿ, ಪುಸ್ತಕ ಓದಿ, ಒಟ್ಟಿಗೆ ಟಿವಿ ನೋಡಿ, ರಾತ್ರಿಗಳನ್ನು ರಂಗಾಗಿಸಿಕೊಳ್ಳಿ ವಗೈರೆ ವಗೈರೆ ಸಲಹೆಗಳು ಲಾಕ್ಡೌನ್ ಕಾಲಘಟ್ಟದ ದಾಂಪತ್ಯಕ್ಕೆ ಅದೆಷ್ಟು ಪೇಲವ. ಒಂದೇ ಮುಖವನ್ನು ಸದೊಂಭತ್ತು ಕಾಲವೂ  ನೋಡುತ್ತಿದ್ದರೆ ಆಕ್ಸಿಟೋಸಿನ್ ಹಾರ್ಮೋನ್ ತನ್ನ ಫ್ಯಾಕ್ಟರಿಯನ್ನು ಬಂದು ಮಾಡಿಬಿಡುತ್ತದೆ ಎನ್ನಿಸುತ್ತೆ. ಅಥವಾ ಸೈರಣೆಗೂ ಕೋವಿಡ್-19 ಆಕ್ರಮಣ ಮಾಡಿದೆಯೇನು? ಪರಸ್ಪರ ವಿಶ್ವಾಸ , ಗೌರವಗಳು ಆಷಾಢಕ್ಕೆ ತವರಿಗೆ ಹೋದವೇನು?! ಮನೆವಾರ್ತೆ ಸಹಾಯಕಿಯ ಹೆಸರು ರಾತ್ರಿ ಹತ್ತು ಗಂಟೆಗೆ ಮೊಬೈಲ್‍ನಲ್ಲಿ ಸದ್ದಾದಾಗ “ಓಹೋ ನಾಳೆ ಪಾತ್ರೆ ತೊಳೆಯಬೇಕಲ್ಲಪ್ಪಾ” ಎಂದು ಗೊಣಗಿಕೊಂಡು “ಏನು” ಎಂದೆ.  ಅವಳು ಜೋರಾಗಿ ಅಳುತ್ತಾ “ಅಕ್ಕಾ ನಂಗೆ ಜೀವ್ನ ಸಾಕಾಯ್ತಕ್ಕ, ಏನಾರಾ ಮಾಡ್ಕೊಳವಾ ಅನ್ದ್ರೆ ಮಕ್ಕ್ಳ್ಮುಕ ಅಡ್ಡ ಬತ್ತದೆ” ಎಂದು ಗೋಳಾದಳು. “ ಮೊದ್ನಾಗಿದ್ದ್ರೆ ಬೆಳಗೆಲ್ಲಾ ಗಾರೆ ಕೆಲ್ಸುಕ್ಕ್ ಓಗಿ ಎನ್ಗೋ ಸನ್ಜೆಗೆ ಬಾಟ್ಲೀ ತಂದು ಕುಡ್ಕೊಂಡು, ಉಣ್ಣಕ್ಕಿಕ್ದಾಗಾ ಉಣ್ಣ್ಕೊಂಡು ಮನೀಕೊಳೋನು. ಈಗ ಮನೇಲೆ ಇರ್ತಾನೆ ಅಕ್ಕ. ಕುಡ್ಯಕ್ಕೂ ಸಿಂಕ್ತಿಲ್ಲ. ಸುಮ್ಕೆ ಇಲ್ಲ್ದಕೆಲ್ಲಾ ಕ್ಯಾತೆ ತಗ್ದು ಒಡಿತಾನೆ ಅಕ್ಕ. ಮೈಯಲ್ಲಾ ಬಾಸುಂಡೆ ಬಂದೈತೆ” ಅವಳು ಅಳುತ್ತಿದ್ದಳು. “ಅಳ್ಬೇಡ ಸುಮ್ಮ್ನಿರು. ಪೋಲಿಸ್ ಕಂಪ್ಲೇಂಟ್ ಕೊಡ್ತೀನಿ ಅನ್ನು” ಎನ್ನುವ ಸಲಹೆ ಕೊಟ್ಟೆ. “ ಉಂ, ಅಕ್ಕ ಅಂಗೇ ಏಳ್ದೆ ಅದ್ಕೆ ಈಗ ಲಾಕ್ಡೋನು ಯಾವ ಪೋಲೀಸು ಏನು ಮಾಡಲ್ಲ. ಅದೇನ್ ಕಿತ್ಕೋತೀಯೋ ಕಿತ್ಕೋ ಓಗು ಅಂದ ಕಣಕ್ಕ” ಎಂದು ಮುಸುಗುಟ್ಟಿದಳು. ಕರೋನಾದ ಕರಾಳ ಮುಖ ಕಾಣುತ್ತಿರುವುದು ಬರೀ ಆಸ್ಪತ್ರೆಗಳಲ್ಲಿ ಅಲ್ಲ ಅದೆಷ್ಟು ಗುಡಿಸಲು, ಶೆಡ್ಡುಗಳಲ್ಲೂ ವೆಂಟಿಲೇಟರ್ಗಳನ್ನು ಬಯಸುತ್ತಿದೆ ಬದುಕು. ವಿವಾಹ ಆಪ್ತಸಮಾಲೋಚನೆ ಎನ್ನುವ ವಿಷಯವನ್ನೇ ವಿದೇಶದ  ಕಾಲೇಜುಗಳಲ್ಲಿ ಕಲಿಸಲಾಗುತ್ತದೆ. ಮದುವೆಗೆ ಮೊದಲೇ ವಧು-ವರ ಇಬ್ಬರಿಗೂ ಸಂಸಾರ ಎಂದರೆ ಏನು ಎಂದು ಹೇಳಿಕೊಡುವ, ಹೊಂದಾಣಿಕೆಯ ಪಾಠ ಮಾಡುವ ತರಬೇತಿ ಶಿಬಿರಗಳು ಈಗ ನಮ್ಮ ದೇಶದಲ್ಲೂ ವ್ಯಾಪಾರ ಮಾಡುತ್ತಿವೆ. ಮದುವೆಯಾದವಳಿಗೆ ಸ್ತ್ರೀಧನ ಹಕ್ಕು ತಿಳಿ ಹೇಳುತ್ತೆ ಕಾನೂನು. ದೇಹಗಳ ಸಮಾಗಮದ ಬಗ್ಗೆ, ಲೈಂಗಿಕ ಆರೋಗ್ಯದ ಬಗ್ಗೆ ಖುಲ್ಲಂಖುಲ್ಲಾ ವಿವರಿಸಲು ತಜ್ಞರಿದ್ದಾರೆ. ಗಂಡಹೆಂಡತಿಯರ ಜಗಳ ಉಂಡು ಮಲಗುವ ತನಕ ಎಂದು ಕಂಡುಕೊಂಡಿದ್ದ ಮನೆ ಹಿರೀಕರೂ ’ಸಲಹೆಕೋರ’ರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯ ಇದೆ, ಸಹಾಯವಾಣಿ ಕೆಲಸ ಮಾಡುತ್ತಿದೆ. ಸ್ನೇಹಿತರಿದ್ದಾರೆ. ಮನೆ ಕಟ್ಟುವವರಿದ್ದಾರೆ. ಮನಮುರುಕಿದ್ದಾರೆ. ಹಳೆ ಹುಡುಗಿ ನೆನಪೂ ಇದೆ ಹೊಸಗೂಸ ತೊಟ್ಟಿಲು ತೂಗುತ್ತಿದೆ. ಇಬ್ಬರಿಗೂ ಆಸ್ತಿ ಜಗಳವಿದೆ, ಮುನಿಸು ಕದನವೂ ಇದೆ. ಶಾಂತಿ ನೆಮ್ಮದಿ ಕುಂಟಿದರೂ ಮನೆ ಮೂಲೆಯಲ್ಲಿ ಇನ್ನೂ ಇದೆ. ಹೀಗೆ ’ಇರುವ’ ಇವರುಗಳು ಯಾರೂ ಊಹೆ ಮಾಡಿದ್ದಿರದ ಒಂದೇ ವಿಷಯ  “ ಗಂಡ ಹೆಂಡತಿ ಹೆಚ್ಚು ಸಮಯ ಜೊತೆಯಲ್ಲಿ ಇದ್ದರೆ ಕೌಟುಂಬಿಕ ದೌರ್ಜನ್ಯ ಹೆಚ್ಚುತ್ತದೆ” ಎನ್ನುವುದು.  ಮುಂದಿನ ವರ್ಷ ತಮ್ಮ ಮದುವೆಯ ಅರವತ್ತನೆಯ ವಾರ್ಷಿಕೋತ್ಸವಕ್ಕೆ ಖುಷಿಯಿಂದಲೇ ತಯಾರಿ ಮಾಡಿಕೊಳ್ಳುತ್ತಿದ ಆ ಯಜಮಾನನಿಗೆ ನಿತ್ಯವೂ ಕ್ಲಬ್‍ಗೆ ಹೋಗಿ ಒಂದು ಪೆಗ್ ಜೊತೆ ನಾಲ್ಕು ಸುತ್ತು ಇಸ್ಪೀಟಾಟ ಮುಗಿಸಿ ಸ್ನೇಹಿತರ ಜೊತೆ ಹರಟಿ ಬರುವುದು, ಮೂವತ್ತು ವರ್ಷಗಳಿಂದ ರೂಢಿಸಿಕೊಂಡಿದ್ದ ಹವ್ಯಾಸ. ಈಗಾತ ಹಿರಿಯ ನಾಗರೀಕ. ಕರೋನ ಹೊಸಿಲಲ್ಲೇ ಕುಳಿತಿದೆ. ಕ್ಲಬ್‍ಗೆ ಹೋಗುವುದು ಇನ್ನು ಕನಸಿನಂತೆಯೇ. ಯಜಮಾನನಿಗೆ ಈಗ ಜುಗುಪ್ಸೆ. ಸಿಟ್ಟು ತೋರಿಸಲು ಮನೆಯಲ್ಲಿ ಇರುವುದು ಎಂಭತ್ತರ ಹೆಂಡತಿ ಮಾತ್ರ. ಆಕೆ ಈಗ ದೂರದೇಶದ ಮಗಳು ಅಳಿಯನಿಗೆ ನಿತ್ಯವೂ ಫೋನ್ ಮಾಡಿಕೊಂಡು ಅಳುತ್ತಾರೆ. “ಇವರ ಬೈಗುಳ ತಡೆಯಕ್ಕಾಗ್ತಿಲ್ಲ” ಎಂದು ಗೋಳಿಡುತ್ತಾರೆ. ವಯಸ್ಸು ನಡೆದಂತೆ ಮನಸ್ಸು ಕೂರುವುದು ಎಂನ್ನುವ ನಂಬಿಕೆ ಇದ್ದ ದಾಂಪತ್ಯಗಳಲ್ಲಿ ಈಗ ಕರೋನ ಮಾಗುವಿಕೆಯನ್ನು ಅನಿರ್ಧಿಷ್ಟ ಕಾಲಕ್ಕೆ ಮುಂದೂಡಿದೆ.  ಅದೆಷ್ಟೋ ವರ್ಷಗಳ ಹಿಂದೆಯೇ ಹಳ್ಳಿ ಬಿಟ್ಟು ಪಟ್ಟಣ ಸೇರಿದ ಇವನು ಈ ಊರಿನಲ್ಲಿಯೇ ಟ್ಯಾಕ್ಸಿ ಓಡಿಸುತ್ತಲೇ ಒಂದು ಸೈಟು, ವಾಸಕ್ಕೆ ಮನೆ ಮತ್ತು ಮದುವೆಯನ್ನೂ ಮಾಡಿಕೊಂಡ. ಈಗ ಒಂದು ವರ್ಷದಲ್ಲಿ ತಮ್ಮನನ್ನು ಅವನಾಕೆಯನ್ನೂ ಕರೆಸಿಕೊಂಡು ತನ್ನ ಬಳಿಯೇ ಇರಿಸಿ ಕೊಂಡಿದ್ದಾನೆ. ತಮ್ಮನಿಗೆ ಅಪಾರ್ಟ್‍ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಕೆಲಸ ನಾದಿನಿಗೆ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಕೊಡಿಸಿ ನೆಮ್ಮದಿಯ ಮೀಸೆ ತಿರುವುತ್ತಾ ಸುಖದಿಂದ ಇದ್ದ.  ಬಸುರಿ ಹೆಂಡತಿ ಮೊದಲ ಮಗುವಿನೊಡನೆ ಊರಿಗೆ ಹೋದೊಡನೆ ಲಾಕ್ಡೌನ್ ಬಂತು. ಮನೆಯಲ್ಲಿನ ಮೂವರೂ ಈಗ ಬರಿಗೈಯಾಗಿದ್ದಾರೆ. ಹತ್ತಿದ ಜಗಳ ಹರಿಯುತ್ತಿಲ್ಲ. ಅಣ್ಣತಮ್ಮರ ಜಗಳದ ನಡುವೆ ಬಿಡಿಸಲು ಹೋದವಳ ತಲೆಗೆ ಹಾರೆಯೇಟು ಬಿದ್ದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಜ್ಞಾವಸ್ಥೆಯಲ್ಲಿ ಬಿದ್ದಿದ್ದಾಳೆ.  ಮದುವೆ ಇಲ್ಲದ ಮೂವರು ಅಕ್ಕಂದಿರು ಅವರ ಹಾಸಿಗೆ ಹಿಡಿದ ತಾಯ್ತಂದೆಯರು ನಡುವೆ ಮನೆಗೊಬ್ಬನೇ ಕುಲೋದ್ಧಾರಕ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾನೆ. ಬಾಲ್ಯದಿಂದಲೂ ಅಕ್ಕಂದಿರ ಮಾತಿಗೆ, ಬಿರುಸಿಗೆ ನಲುಗಿದ್ದವ ಒಂದ್ನಾಲ್ಕು ವರ್ಷವಾದರೂ ಎದೆ ಪೂರ್ತಿ ಉಸಿರು ತುಂಬಿಕೊಳ್ಳಲು ಬಯಸಿದ್ದ. ಮೊನ್ನೆ ಜನವರಿಯಲ್ಲಿ ಅವನ ಕಂಪನಿಯವರು ಒಂದು ಪ್ರಾಜೆಕ್ಟಿಗೆ ಇವನನ್ನು ಮುಖ್ಯಸ್ಥನನ್ನಾಗಿಸಿ ಸಿಂಗಾಪೂರಿಗೆ ವರ್ಗಾವಣೆ ನೀಡಿದ್ದರು. ಉತ್ಸಾಹದಲ್ಲಿ ಹೊರಟಿದ್ದವನೀಗ ವರ್ಗಾವಣೆಯ ರದ್ದತಿ ಪತ್ರ ಮಾತ್ರ ಹಿಡಿದಿಲ್ಲ, ಕೆಲಸ ಕಳೆದುಕೊಳ್ಳುವ ಭಯವನ್ನೂ ಹೊತ್ತು ಕುಳಿತಿದ್ದಾನೆ. ಹೌದು, ಕುಟುಂಬ ಎಂದರೆ ಕೇವಲ ಗಂಡ ಹೆಂಡಿರಲ್ಲ ಅದಕ್ಕೇ ದೌರ್ಜನ್ಯ ಎಂದರೂ ಅವರಿಬ್ಬರ ನಡುವಿನದ್ದು ಮಾತ್ರವಲ್ಲ. ಭೂಗೋಳದ ಈ ಭಾಗ “ಸಂಬಂಧಗಳು ಋಣದಿಂದ ಆಗುವುದು” ಎಂದು ನಂಬಿದ್ದರೆ ಆ ಭಾಗ “ಮದುವೆಗಳು ಸ್ವರ್ಗದಲ್ಲಿ ನಿರ್ಧಾರವಾಗುತ್ತವೆ” ಎಂದು ನೆಚ್ಚಿದೆ. ಆದರೆ ಬಂದೆರಗಿರುವ ವೈರಸ್ ಮಾತ್ರ ಜಗತ್ತು ದುಂಡಗಿದೆ ಮತ್ತು ಮನುಷ್ಯ ಮೂಲಭೂತವಾಗಿ ಒಂದು ಪ್ರಾಣಿ ಮಾತ್ರ ಎನ್ನುವ ಸತ್ಯವನ್ನು ಬೇಧವಿಲ್ಲದೆ  ಪುನಃಪ್ರಸಾರ ಮಾಡುತ್ತಿದೆ. ಅರ್ಥಶಾಸ್ತ್ರಜ್ಞರು ಕೋವಿಡ್-19ಗಾಗಿಯೇ ಇನ್ಸ್ಯೂರೆನ್ಸ್ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಸೀಲ್‍ಡೌನ್ ಆಗಿರುವ ಸಂಬಂಧಗಳು ಕೌಟುಂಬಿಕ ದೌರ್ಜನ್ಯದಲ್ಲಿ ನೊಂದವರಿಗೆ ಯಾವುದಾದರೂ ವಿಮೆ ಇದೆಯೇ ಎಂದು ಹುಡುಕುತ್ತಿವೆ. ಅವಳಿಗೆ ಹದಿಮೂರುಹದಿನಾಲ್ಕು ವರ್ಷ ವಯಸ್ಸಿರಬೇಕು. ಮೂಕಿ ಕಿವುಡಿ ಹುಡುಗಿ. ಸಣ್ಣ ಕೋಣೆಯ ಮನೆಯಲ್ಲಿ ಕೆಲಸ ಕಳೆದುಕೊಂಡ ಹನ್ನೊಂದು ಜನ ಇರಬೇಕಾದ ಪ್ರಸ್ತುತತೆ. ಭಾರ ಕಳಚಿಕೊಳ್ಳಲು ಇವಳ ಕೈಮೇಲೆ ಹೆಸರು, ಊರಿನ ಹಚ್ಚೆ ಹಾಕಿಸಿ ಯಾವುದೋ ರೈಲು ಹತ್ತಿಸಿ ಮನೆಯವರೇ ಕಳುಹಿಸಿಬಿಟ್ಟಿದ್ದಾರೆ. ಪ್ರೀತಿ, ಸಾಹಚರ್ಯ ಎಲ್ಲಾ ಅನಿವಾರ್ಯದ ಕೈಗೆ ಸಿಕ್ಕಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣ ಬೆಳಿಸಿವೆ. ಮೊದಲೆಲ್ಲಾ ಇವುಗಳಿಗೆ ಯಾರೋ ತುತ್ತುಣಿಸಿ ಮತ್ತ್ಯಾರೋ ನೀರು ಹನಿಸುತ್ತಿದ್ದರು. ಆದರೀಗ ಸಹಾಯ ಹಸ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದೆ. ಅಮ್ಮನಿಗೆ ಅಪ್ಪ ಬೇಡವಾಗಿದ್ದಾನೆ, ಅವನಿಂದ ಮಕ್ಕಳು ದೂರವಾಗಿದ್ದಾರೆ, ಅಣ್ಣತಮ್ಮಂದಿರ ಫೋನ್ ಕರೆನ್ಸಿ ಖಾಲಿಯಾಗಿದೆ. ವಾರೆಗಿತ್ತಿ ನಾದಿನಿಯರು ತಮ್ಮತಮ್ಮ ಸ್ಥಿತಿಗಳನ್ನು ತಕ್ಕಡಿಯಲ್ಲಿ ತೂಗುತ್ತಿದ್ದಾರೆ. ಸಚಿವ, ವೈದ್ಯ, ಉಪಾಧ್ಯಾಯ, ಪೋಲೀಸ್, ಪುರೋಹಿತ ಯಾರನ್ನೂ ಬಿಟ್ಟಿಲ್ಲ ಎಂದು ಕೂಗುತ್ತಿದ್ದ ಮಾಧ್ಯಮಗಳಿಗೂ ಕರೋನ ಆಸ್ಪತ್ರೆಯಲ್ಲಿ ವಾರ್ಡ್ ಖಾಲಿ ಇಲ್ಲ ಎನ್ನುವ ಬೋರ್ಡ್ ಎದುರಾಗುತ್ತಿದೆ. ಇವರೆಲ್ಲರಿಗೂ ಕುಟುಂಬ ಇದೆ. ನಾಲ್ಕು ಗೋಡೆಗಳ ಮಧ್ಯೆ ದೌರ್ಜನ್ಯ ವಲಸೆ ಹೋಗಲೂ ಆಗದೆ ಕಾರ್ಮಿಕನಂತೆ ನೋಯುತ್ತಿದೆ, ನೋಯಿಸುತ್ತಿದೆ. ಆದರೂ ಪ್ರಪಂಚ ಕುಟುಂಬವನ್ನು ಹಿಡಿದಿಡುವ ಪ್ರಯತ್ನ ಬಿಟ್ಟಿಲ್ಲ. ಅದಕ್ಕೇ ಮಾನಸಿಕ ತಜ್ಞರು ತಾವು ಸಹಾಯ ಮಾಡಲು ತಯಾರಿದ್ದೇವೆ ಎಂದು ಸಹಾಯವಾಣಿಗಳ ಮೂಲಕ ಕೂಗಿ ಹೇಳುತ್ತಿದ್ದಾರೆ. ಸಹಾಯ ಬೇಕಿದ್ದವರು ನೆವ ಹೇಳದೆ ಪಡೆಯಬೇಕಿದೆ ಅಷ್ಟೆ.  ******************************** ಲೇಖನ ಕೃಪೆ:ಮೈಸೂರಿನ ಆಂದೋಲನ ಪತ್ರಿಕೆ ಮತ್ತು ಅಸ್ಥಿತ್ವ ಲೀಗಲ್ ಬ್ಲಾಗ್

ಲಾಕ್ಡೌನ್ ಕಾಲಘಟ್ಟದ ದಾಂಪತ್ಯ Read Post »

ಇತರೆ

ಪರಿಣಾಮ

ಲೇಖನ ಪರಿಣಾಮ ಡಾ. ಅರಕಲಗೂಡು ನೀಲಕಂಠ ಮೂರ್ತಿ ಮನುಷ್ಯ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಬೇಕಾದರೆ, ಅಥವ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು, ಅದರ ಪರಿಣಾಮದ ಬಗ್ಗೆ ಖಂಡಿತ ಕೂಲಂಕುಷವಾಗಿ ಚಿಂತಿಸುತ್ತಾನೆ. ಆದರೆ ಎಂಥ ಸಂದರ್ಭಗಳಲ್ಲೂ ಸಹ ಕೆಲವರು, ಉಡಾಫೆ ಬದುಕಿನವರು, ಪ್ರಪ್ರಥಮವಾಗಿ ಆಳವನ್ನೂ ಅಂದಾಜಿಸದೆ, ನೇರ ಭಾವಿಗೇ ದಿಢೀರಂತ ಧುಮಿಕಿಬಿಡುತ್ತಾರೆ. ನಂತರ ಪರಿಣಾಮದತ್ತ ಗಮನ ಹರಿಸಿದ ಹಾಗೆ, ಕೈಕಾಲುಗಳನ್ನು ಆತುರಾತುರವಾಗಿ ಬಡಿಯತೊಡಗುತ್ತಾರೆ. ಆಗ ತುಂಬ ತಡವಾಗಿ ಪಶ್ಚಾತ್ತಾಪ ಪಟ್ಟು ಸಂಕಟದ ಕೆಸರೊಳಗೆ ಒದ್ದಾಡುತ್ತಾರೆ. ಬಹಳ ಒಳ್ಳೆಯ, ಆದರೆ ದಿನನಿತ್ಯದ ನಮ್ಮನಿಮ್ಮೆಲ್ಲರ ನಿದರ್ಶನದಿಂದಲೇ ಆರಂಭಿಸೋಣ. ನಾವೆಲ್ಲ ಆಗಾಗ್ಗೆ ಕ್ಷೌರಕ್ಕಾಗಿ ಹೋಗುತ್ತೇವೆ. ತನ್ನ ಕಾಯಕದಲ್ಲಿ ನೈಪುಣ್ಯ ಇಲ್ಲದ ಯಡವಟ್ಟನ ಹತ್ತಿರ   ಅಕಸ್ಮಾತ್ ಹೋದರೆ, ನಿಮ್ಮ ಕೂದಲನ್ನು ಕುರಿಯ ಉಣ್ಣೆ ಕೆರೆದಂತೆ, ಜೋಕರ್ ಕಟಾವು ಮಾಡಿ ಎಲ್ಲರೆದುರು  ನಗೆಪಾಟಲಿಗೆ ಕಾರಣ ಮಾಡುತ್ತಾನೆ. ಏಕೆ? ನೀವು ಅಂಥ ಕಡೆ ಹೋದ ಪರಿಣಾಮ! ಆದ್ದರಿಂದ ಈ ಪರಿಣಾಮ ಎಂಬುದು ಯಕಃಶ್ಚಿತ್ ಪದವೇ ಆಗಿದ್ದರೂ, ಅದರ ಪ್ರಭಾವ ಮಾತ್ರ ಅಗಾಧ. ಎಂಥ ಅಲ್ಲೋಲಕಲ್ಲೋಲ ಸೃಷ್ಟಿಸಿ ಮುಜುಗರಕ್ಕೆ ನೂಕುತ್ತದೆ ಅಲ್ಲವೇ? ಅಲ್ಲಾರೀ, ಅದು ನೀವೇ ದಿನ ಶೇವ್ ಮಾಡುವಾಗ, ಸೈಡ್ ಬರ್ನ್ಸ್ ಅಕಸ್ಮಾತ್ ವ್ಯತ್ಯಾಸ ಆದರೆ ನಿಮಗೇ ಹಿಂಸೆ ಅಲ್ಲವೇ, ಹಾಗೆ…”Patriotism is the last refuge of a scoundrel”. “ದೇಶಭಕ್ತಿ ಅಥವ ರಾಷ್ಟ್ರಪ್ರೇಮ ಎಂಬುದು ಒಬ್ಬ ದುಷ್ಟ ಮನುಷ್ಯನ ಅಂತಿಮ ಆಶ್ರಯ”.(Scoundrel = ನೀಚ, ಲುಚ್ಚ, ದುಷ್ಟ, ದಗಾಕೋರ, ದಗಲ್ಬಾಜಿ…New Modern Dictionary; Eglish-English-Kannada)  ಎಂಬ ಪ್ರಸಿದ್ಧವಾದ ಹೇಳಿಕೆ ಘೋಷಿಸಿದ್ದು ಡಾ. ಸ್ಯಾಮ್ಯುಯಲ್ ಜಾನ್ಸನ್ ಅವರು. ಅಂತಹ ವ್ಯಕ್ತಿ ಹೇಳಿದ್ದರ ಪರಿಣಾಮ ಜಗತ್ತಿನಾದ್ಯಂತ ದೇಶಭಕ್ತರು ಇಲ್ಲವೇ ಇಲ್ಲವಾಗಿಬಿಟ್ಟರೆ? ಹಾಗೇನೂ ಖಂಡಿತ ಇಲ್ಲವಲ್ಲ! ವಾಸ್ತವ ಏನೆಂದರೆ ಇನ್ನೂ ವಿಪುಲ, ಬಣ್ಣಬಣ್ಣದ ಭಕ್ತ ಶಿರೋಮಣಿಗಳೇ ಜನ್ಮ ತಾಳಿದ್ದಾರೆ; ಈಗಲೂ ಸಹ ದಿಢೀರನೆ ಕಂಡಕಂಡಲ್ಲೆಲ್ಲ ಪ್ರತ್ಯಕ್ಷ ಆಗುತ್ತಲೇ ಇದ್ದಾರೆ/ಇರುತ್ತಾರೆ. ಎಲ್ಲೆಲ್ಲೂ  ಭಕ್ತಿಯ ಹೆಸರಿನ ನಾಮ ಹಚ್ಚಿಕೊಂಡ ಭಾರಿ ಭಕ್ತಿಯ  “ಭುಕ್ತ”ರೂ ಅನಂತವಾಗಿದ್ದಾರೆ. ಮುಂದೂ ಇದ್ದೇ ಇರುತ್ತಾರೆ — ಭಕ್ತಿ ಅಲ್ಲವೇ? ಅದೂ ದೇಶಕ್ಕಾಗಿ! ಪರಿಣಾಮ…?ಆ ಪ್ರಸಿದ್ಧ ಡಾ. ಜಾನ್ಸನ್ ಅವರು  ಹಾಗೆ ಹೇಳಿದ್ದು ಉಪಯೋಗ ಇಲ್ಲ ಅಂತಲೇ ಅಥವ ಅಂಥ ಕೆಲಸಕ್ಕೆ ಬಾರದ ಹೇಳಿಕೆಗಳು ಯಾರಿಗೆ ಬೇಕು; ಉಪ್ಪು ಕಾರ ಹುಳಿ ಇಲ್ಲದ ಮೇಲೆ ಅಂತಲೇ? ಹಾಗಾದರೆ ಅವರ ನಂತರ ಬಂದ ಇನ್ನೊಬ್ಬ ಮಹನೀಯರಾದ ಜಾರ್ಜ್ ಬರ್ನಾರ್ಡ್ ಷಾ ಅವರು ಜಾನ್ಸನ್ ಹೇಳಿದ್ದನ್ನೇ ಇನ್ನೂ ಉತ್ತಮ ಪಡಸಿ,”Politics is the last refuge of a scroundrel” ಅಂತ, ಅಂದರೆ, “ಒಬ್ಬ ದಗಾಕೋರನ ಅಂತಿಮ ಆಶ್ರಯ ರಾಜಕೀಯ” ಅಂದಿದ್ದರು. ಪರಿಣಾಮ! ಬರ್ನಾರ್ಡ ಷಾ ಅಂತಹ ಮಹಾನ್ ವ್ಯಕ್ತಿಯ ಉವಾಚ, ರಾಜಕೀಯಕ್ಕೇ ಯಾರೂ ಬರದ ಹಾಗೇನೂ ಮಾಡಿಲ್ಲವಲ್ಲ! ಬದಲಿಗೆ ಸ್ಕೌಂಡ್ರೆಲ್ ಗಳಿಗಾಗಿಯೇ ಮತ್ತೊಂದು ನವೀನ ನಮೂನೆಯ ಶ್ರೇಣಿಯನ್ನೇ ಸೃಷ್ಟಿಸಲಾಗಿದೆ, ಬಹುಷಃ! ಅದರಲ್ಲಿಯೂ ಅತ್ಯಂತ ಕೆಳ ಸ್ತರದ, ಅಂದರೆ ಸ್ಕೌಂಡ್ರೆಲ್ ಗಳಲ್ಲೇ ಅತ್ಯಂತ ಕೊನೆ ಬೆಂಚಿನ   ಹಂತದಲ್ಲೇ ಕೂರುವ  ಸ್ಕೌಂಡ್ರೆಲ್ ಅಂಥವರೇ ಈಗ ಅಧಿಕ!                ಕೌರವರೊಳ್ ಕೆಳದರ್ಜೆ ಕೌರವರಾಗಿ, ಇನ್ನೂ ಭಯಂಕರ ಆಯುಧಗಳನ್ನು ಹೆಗಲುಗಳಲ್ಲಿ ಹೊತ್ತುಕೊಂಡೇ ರಾಜಕೀಯ ಎಂಬ ಕುರುಕ್ಷೇತ್ರಕ್ಕೆ ಧುಮುಕುತ್ತಿಲ್ಲವೇ? ಪರಿಣಾಮ? ಪಾಪ ನೊಬೆಲ್ ಪಾರಿತೋಷಕ ಪಡೆದೂ ಬರ್ನಾರ್ಡ್ ಷಾ ಅವರ ಬೆಲೆ ಕುಲಗೆಟ್ಟ ನೀರಿನಲ್ಲಿ ಅದ್ದಿ ಬಿಸಾಡಿದ ಕಳಪೆ ಡಿಗ್ರಿಗಳ ಹಾಗೇನು? ಖಂಡಿತ ಇಲ್ಲ.ಅಂದಮೇಲೆ ಈ ಪರಿಣಾಮ ಎಂಬ ಮಹಾನ್ ಮಾಂತ್ರಿಕ ‘ದಂಡ’ಕ್ಕೆ ಬೆಲೆ ಕಿಂಚಿತ್ತೂ ಇಲ್ಲ ಅಂತಲೇ? ಇದ್ದರೆ ಅದಕ್ಕೂ ಒಂದು ‘ಪರಿಮಾಣ’ ಅಂತ ಇರಬೇಕಲ್ಲವೇ?ಇಂದಿನ ಕಾಲಖಂಡದಿಂದ ಏಕದಂ ಅಂದಿನ ಮಹಾಭಾರತ ಸಂದರ್ಭದ ಶಕುನಿ ಮಹಾಶಯನ ಕೃತ್ರಿಮ ಮಾಯಾದಂಡ ಎಂಬ ಆ ಪಗಡೆ ಮತ್ತು ಅದರ ಆಟದ ಕಡೆ ಸ್ವಲ್ಪ ಹೊರಳೋಣ. ದುರ್ಯೋಧನ ತನ್ನ ಸಾಮ್ರಾಜ್ಯದ ಮತ್ತು ಚಕ್ರಾಧಿಪತ್ಯದ ದುರಾಸೆಗೆ, ಮತ್ತದನ್ನು ಪೋಷಿಸುವ ತನ್ನ ಮಾವನ ಕುಟಿಲ ಮಾತಿಗೆ ಬದ್ಧನಾಗಿ ಪಗಡೆ ಆಟ ಆಡಲು ಪಾಂಡವರಿಗೆ ಆಹ್ವಾನ ಕಳಿಸಿದ. ಅದನ್ನು ತಿರಸ್ಕರಿಸುವ ಅಧಿಕಾರ ಸಾಮ್ರಾಟನಾಗಿದ್ದ ಧರ್ಮರಾಯನಿಗೆ ಖಂಡಿತ ಇತ್ತು. ಹಾಗಾಗಿದ್ದರೆ, ಆ ‘ಪರಿಣಾಮ’ವೇ ಬೇರೆ ಆಗುತ್ತಿತ್ತು. ಬಹುಷಃ ಯುದ್ಧ ಇಲ್ಲದೇ ಇದ್ದಿದ್ದರೆ ಆಗ ಅದು ಮಹಾಭಾರತ ಹಾಗಿರಲಿ, ಬದಲಿಗೆ ಒಂದು ಸಣ್ಣ ಭಾರತ ಕತೆಯೂ ಆಗುತ್ತಿರಲಿಲ್ಲ, ಅಲ್ಲವೇ?  ಜನ ಈಗ ಹೇಗೆ ಕಪ್ಪುಬಿಳುಪು ಸಿನಿಮಾ ನೋಡಲು ನಿರಾಕರಿಸುತ್ತಾರೋ, ಹಾಗೆ ಯಾರೂ ಅದನ್ನು ರಾತ್ರಿಯೆಲ್ಲ ಕಣ್ಣಿಗೆ ಎಣ್ಣೆ ಸುರಿದುಕೊಂಡು ನೋಡುತ್ತಿರಲಿಲ್ಲ ಅಲ್ಲವೇ. ಅಷ್ಟೇ ಅಲ್ಲ; ಫೈಟಿಂಗೇ ಇಲ್ಲ ಅಂದಮೇಲೆ ಅಂಥ ಸಿನಿಮಾ ತಾನೆ ಯಾರು ಮೂಸುತ್ತಾರೆ ಅನ್ನುವ ಹಾಗೆ (ಅದು ಕನ್ನಡ ಸಿನಿಮಾದ ನಿರ್ಮಾಪಕರ ತರ್ಕ ಅನ್ನುವುದೇ ವಿಪರ್ಯಾಸ!); ಅದೇ ನೋಡಿ ಆ ಪಗಡೆಯ ‘ಮಹಾಪರಿಣಾಮ’! ಶಕುನಿಮಾವ, ದುರ್ಯೋಧನ, ದೃತರಾಷ್ಟ್ರ ಮುಂತಾದ  ಇನ್ನೂ ಅನೇಕರೆಲ್ಲ ಪರಿಣಾಮಗಳ ಒಡೆಯರು! ಕುರುಕ್ಷೇತ್ರ ಯುದ್ಧದ ಫಲಿತಾಂಶವೇ ಒಡೆತನ! ಅದೇ ರೀತಿಯ ಒಡೆಯರು/ಒಡೆತನಗಳು ಪುಂಖಾನುಪುಂಖವಾಗಿ ಕಾಲಕಾಲಕ್ಕೆ ಜನುಮ ಅಂತ ತಳೆದರೆ ತಾನೆ ಇತಿಹಾಸದ ಸೃಷ್ಟಿ! ಅನೇಕ ಬಾರಿ ಅಂತಹ ಇತಿಹಾಸ ‘ಮಹಾಹಾಸ್ಯ’ ಆಗುವುದೂ ಅಥವಾ ಸುಳ್ಳುಗಳನ್ನೇ ಪೋಣಿಸಿದ ಸರಪಟಾಕಿ ಕೂಡ ಆಗುವುದು ಇರಬಹುದು… ಪರಿಣಾಮ ಅನ್ನೋದು ಬಹುಷಃ ಮಾಯಾಚಾಪೆ ಥರ. ಮೇಲಕ್ಕೆ ಏರಿಸಲೂಬಹುದು, ಕೆಳಕ್ಕೆ ಧೊಪ್ಪಂತ ಎತ್ತಿ ಹಾಕಲೂಬಹುದು. ಹಾಗಾಗಿ ಪ್ರತಿ ಕೆಲಸದಲ್ಲೂ, ಪ್ರತಿ ಹಂತದಲ್ಲೂ ಒಂದೊಂದು ರೀತಿ ಪರಿಣಾಮದ ಪರಿಮಾಣ ಇದ್ದೇ ಇರುತ್ತದೆ. ಹಾಗಾಗಿ ಈ ಪರಿಣಾಮದ ತಕ್ಕಡಿಯಲ್ಲಿ ಯಾವುದಾದರೂ ಒಂದು ಕಡೆಗೆ ಯಕಃಶ್ಚಿತ್ ಜಾಸ್ತಿ ಆದರೂ ಆ ತಕ್ಕಡಿಯ ಪರಿಮಾಣ ವ್ಯತ್ಯಾಸವಾಗಿ ಆ ಒಂದು ಕಡೆಯ ತಟ್ಟೆ ಅಷ್ಟು ಕೆಳಕ್ಕೆ ಕುಸಿಯುತ್ತದೆ. ಆದರೆ ಅಲ್ಲಿ, ಅಂದರೆ ಆ ತಕ್ಕಡಿಯ ವಿಷಯದಲ್ಲಿ ಅದು ಕೆಳಕ್ಕಿಳಿದಷ್ಟೂ ಬೆಲೆ! “ಬೇಡ ಬೇಡ ಅಂದರೂ ಕೇಳಲಿಲ್ಲ. ನಿಮ್ಮಂಥ ಗಂಡಸರೇ ಹಾಗೆ. ಎಲ್ಲಿ ಹೆಂಡತಿ ಮಾತು ಕೇಳಿ ಬಿಟ್ಟರೆ ತಮ್ಮ ತಲೆಮೇಲಿರೋ ಕೋಡಿಗೆ ಧಕ್ಕೆ ಆಗುತ್ತೋ ಅಂತ. ಜೊತೆಗೆ ದುರಾಸೆ ಬೇರೆ. ಹಣ ಹಣ ಹಣ ಅಂತ ಮತ್ತು ಹತ್ತಿರದ ನಂಟುಕಣೇ ಅಂತೆಲ್ಲಾ ಒಗ್ಗರಣೆ ಹಾಕಿ, ಮಗನಿಗೆ ಈ ಬೊಂಬಾಯಿ ತಂದು ಕಟ್ಟಿದಿರಿ. ಪರಿಣಾಮ ನೀವೇ ಉಣ್ಣುತ್ತಾ ಇದ್ದೀರಿ…!” ಇದು ಒಂದು ಮನೆಯ ಕಥೆ ಪರಿಣಾಮ. ಇನ್ನೊಬ್ಬರ ಮನೇಲಿ: “ಕನ್ನಡ ಕನ್ನಡ ಅಂತ ಕನ್ನಡ ಭಕ್ತರ ಥರ ಮೇಲೆ ಕೆಳಗೆ ಕುಣಿದಿರಿ; ಈ ಸರ್ಕಾರಿ ಸ್ಕೂಲಿಗೆ ಅಷ್ಟು ಚನ್ನಾಗಿ ಓದೋ ಮಗೂನ ಸೇರಿಸಿದಿರಿ. ಪರಿಣಾಮ ನಿಮ್ಮೆದುರಿಗೇ ನರ್ತನ ಮಾಡ್ತಾ ಇದೆ ಕಣ್ತುಂಬ ನೋಡ್ಕೊಳಿ! ಕಾನ್ವೆಂಟಿಗೆ ಸೇರಿಸಿದರೆ ದುಡ್ಡು ಖರ್ಚು ಅಂದರಿ. ನೀವು ದುಡಿಯೋದಾದರೂ ಯಾರಿಗಾಗಿ…ಛೆ!” ಮತ್ತೊಂದು ಕಡೆ: “ಸ್ವಲ್ಪ ಲಂಚ ಅಂತ ಕೊಟ್ಟರೂ ಪರವಾಗಿಲ್ಲ, ಮಗನಿಗೆ ಒಳ್ಳೆ ಕೆಲಸ ಕೊಡಿಸಿ ಅಂತ ಬೇಡ್ಕೊಂಡೆ. ಕೇಳಿದ್ರಾ, ಊಹ್ಞು! ಹರಿಶ್ಚಂದ್ರನ ಮೊಮ್ಮಗನ ಥರ ಒಂದೇ ಒಂದು ಗೆರೆ ಅಷ್ಟೂ ಮುಂದುವರೀಲಿಲ್ಲ. ಪರಿಣಾಮ ನೋಡಿ ನಿಮಗೇನೂ ಹೊಟ್ಟೇನೇ ಉರಿಯೋಲ್ಲವೆ? ಎಲ್ಲೆಲ್ಲಿಯೋ ಕೆಲಸ ಕೆಲಸ ಅಂತ ಅಲೆದೂ ಅಲೆದೂ ಸೋತು ಹೋದ ಮಗ. ನಿಮ್ಮ ಮಗಾನೇ ರೀ ಅವನು…!” ಇಂತಹ ಪರಿಣಾಮಗಳಿಂದಾದ ಅನಂತ ವಿಧವಿಧದ ಪ್ರಭಾವಗಳು ಎಲ್ಲರ ಬದುಕಿನಲ್ಲೂ ಯಥೇಚ್ಛ! ಈಗ ಸ್ವಲ್ಪ ವಿರುದ್ಧ ದಿಕ್ಕಿನತ್ತಲೂ ಹೊರಳೋಣ. ಅಕಸ್ಮಾತ್ ಗಂಡಸರ  ಬದಲು ಹೆಂಗಸರು ದುಡಿಯುತ್ತಿದ್ದರೆ ಮತ್ತು ಮನೆಯ ರಥ ಉರುಳಿಸುವ ಕಾಯಕ ಅವರ ಕೈಲಿ ಇದ್ದಿದ್ದರೆ…ರೆ? ಆಗ! ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಗುತ್ತಿತ್ತು; ಬಹುಷಃ. ಮೊದಲಿಗೆ ದಿನದಿನವೂ ‘ಬಾರ್’ ಗಾಗಿ ಅಂತ ಅಥವ ಒಂದೆರಡು ಪೆಗ್ಗು, ಗಡಂಗಿಂದ ತಂದು ಮನೆಯಲ್ಲೇ ಅಂತಲೋ, ಆ ಗಂಡು ಎಂಬ ದೈನಾಸ ಹೇಗೆ ತಾನೆ ಕುಗ್ಗಿ ಕುಗ್ಗಿ ಹೆಂಡತಿಯನ್ನ     ಬೇಡುವುದು?  ಮತ್ತು ಬೀಡಿ ಸಿಗರೇಟು ಮುಂತಾದ ಗತಿ? ಪೆಗ್ಗೇ ಭಿಕ್ಷೆ; ಇನ್ನು ಅದರ ಮೇಲೆ ದಮ್ಮು ಅಂತ ಬೇರೆ! ಯಾವ ಯಜಮಾನಿ ತಾನೆ ಕೊಟ್ಟುಬಿಡ್ತಾಳೆ? ಪರಿಣಾಮ ಅಲ್ಲಿ ಆಗಾಗ ಉಳಿತಾಯ – ಅದು ಎಷ್ಟೇ ಕನಿಷ್ಠ ಇರಲಿ. ಅಷ್ಟೇ ಅಲ್ಲ; ಕಳಸಪ್ರಾಯದಂತೆ ಯಾವ ಯಜಮಾನಿ ಹೆಣ್ಣು ತಾನೆ ಬಾರಿಗೆ ಹೋಗುವಳು? ಅಲ್ಲೂ ಉಳಿತಾಯ! ಇತ್ತೀಚೆಗೆ ಈ ಸ್ತರದಲ್ಲಿ ಸಹ ವಿಮೋಚನೆಯ ಹವಾ ಬೀಸಿ ಬೀಸಿ  ಆನಂದ ಆಗ್ತಾ ಇದೆ! ಅದು ಬೇರೆ ಮಾತು; ಲಿಬರೇಷನ್ ಕಾಂಡ! ಆದರೆ…ಹೌದು, ಹಾಗಂತ  ಅವರೇನೂ ಅವರ ಗಂಡುಮಕ್ಕಳ ಮದುವೆಯ ವರದಕ್ಷಿಣೆಗೆ ಕೈ ಒಡ್ಡುತ್ತಿರಲಿಲ್ಲವೇ? ಮಿಲಿಯನ್ ಡಾಲರ್ ಪ್ರಶ್ನೆ! ಹೆಣ್ಣಾದರೇನು ಗಂಡಾದರೇನು ದುಡ್ಡು ಇಬ್ಬರಿಗೂ ದೊಡ್ಡ ಡ್ಯಾಡೀನೇ ತಾನೇ! ಅಂತೆಯೇ ಮಕ್ಕಳ ಕೆಲಸಕ್ಕೆ ಲಂಚ, ಪ್ರೈವೇಟ್ ಶಾಲೆ ಫೀಸು, ಮುಂತಾಗಿಯೂ ಖಂಡಿತ ಇದ್ದರೂ ಇರಬಹುದು. ಉತ್ತಮತೆಗಾಗಿ ಈಗ ಹೆಂಗಸು ಸದಾ ಸನ್ನದ್ಧ!          ಹಾಗಂತ ಅವರಿಗಾಗಿ ಒಳ್ಳೊಳ್ಳೆ ಬಟ್ಟೆ, ಚಿನ್ನಗಿನ್ನ, ವೈನಾದ ಲಿಪ್ ಸ್ಟಿಕ್ಕು, ಅತ್ಯುತ್ತಮ ವಾಸನೆಯ ಇಂಪೋರ್ಟೆಡ್ ಪರ್ಫ್ಯೂಮ್, ಸಾಕಷ್ಟು ಎತ್ತರಕ್ಕೆ ಎತ್ತುವ ಹೈ ಹೀಲ್ಡ್  ಎಕ್ಕಡಗಳು ಇನ್ನೂ ಮುಂತಾಗಿ ಕೊಳ್ಳುತ್ತಿರಲಿಲ್ಲವೇ… ಮನೆ ಯಜಮಾನಿ ಬೇರೆ, ಅಲ್ಲದೆ ಹೊರಗೆ ದುಡಿಯೋ ಹಂಗಸು ಅಂದಮೇಲೆ ಎದ್ದು ಕಾಣೋ ಥರ, ಬೇರೆ ಬೇರೆ ಭುಜಗಳ ಮೀರಿ ನಡೆಯೋ ಥರ ಇರಲಿಲ್ಲ ಅಂದರೆ ಆ ಮನೆಯ ಗಂಡಸಿಗೇ ಅವಮಾನ ಅಲ್ಲವೇ…? ನೋಡಿ ಇಲ್ಲೂ ಸಹ ಪರಿಣಾಮ ಎಂಥದ್ದು ಅಂತ ತೋರಿಸಿಕೊಟ್ಟಿದೆ. ಇಲ್ಲಿ ಸಹ ತಮ್ಮ ಗಂಡಸರ ಮರ್ಯಾದೆ ಬಗ್ಗೆ ಕಾಳಜಿ! ಹ್ಞಾ, ಇನ್ನೊಂದು ಮಾತು; ಮಕ್ಕಳ ಬಟ್ಟೆ ಮತ್ತು ಅವರ ಮೇಕಪ್ ಕಡೆ ಕೂಡ ಹೆಂಗಸರದೇ ಮಿತಿಮೀರಿದ  ಮುತುವರ್ಜಿ…!ಕೊನೆಯಲ್ಲಿ ಪರಿಣಾಮ ಎಂಬ ನಾಣ್ಯದ ಮತ್ತೊಂದು, ಕಾರಾಳ ಹಾಗೂ ರಕ್ಕಸ ಮುಖದತ್ತ: ಹೌದು ನಮ್ಮ ನಮ್ಮ ಬದುಕಿನಲ್ಲಿ ಬಂದೊದಗುವ ನತದೃಷ್ಟ  ದುಷ್ಪರಿಣಾಮಗಳ ಹಾಗೆಯೇ ಜಗತ್ತಿಗೂ, ಹಾಗಾಗಿ ಆ ಮೂಲಕ ಜಗದೆಲ್ಲ ಜೀವಿಗಳ ಮೇಲೂ, ಸಸ್ಯ, ಮತ್ತಿತರ ಪ್ರಾಣಿ, ಜಂತುಗಳ ಮೇಲೂ, ದುರ್ಘಟನೆಗಳಿಂದ ಅಸಂಖ್ಯ ರೀತಿಯಲ್ಲಿ ಹಾನಿಕಾರಕ ಪರಿಣಾಮಗಳು ಆಗಾಗ ಜರುಗುತ್ತಲೇ ಬಂದಿವೆ…ಸಾವಿರದ ಒಂಭೈನೂರ ಹದಿನೆಂಟರಿಂದ ಇಪ್ಪತ್ತರಲ್ಲಿ ಜಗತ್ತನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಸರಿಸುಮಾರು ಐದು ಕೋಟಿಯಷ್ಟು  ಜನರ ಬಲಿ ತೆಗೆದುಕೊಂಡಿತ್ತು ಎಂದು ಅಂದಾಜಿಸಲಾಗಿದೆ. ಎಂಥ ಸಂಕಷ್ಟದ ಪರಿಣಾಮವನ್ನು ಅಂದಿನ ಜನ ಅನುಭವಿಸಿರಬಹುದು! ಹೀಗೆಯೇ ಪ್ಲೇಗ್ ಮಹಾಮಾರಿಗಳು, ಪಶ್ಚಿಮ ಆಫ್ರಿಕಾದ ಎಬೋಲೋ ವೈರಸ್, ನಂತರದ ಜೀಕಾ ವೈರಸ್! ಇವುಗಳ ಜೊತೆಜೊತೆಗೇ ಆಳುವವರ ದರ್ಪದ ಕಠಿಣ ಶಿಕ್ಷೆಗಳು, ಯುದ್ಧಗಳು, ಒಂದ ಎರಡ… ಮಹಾಯುದ್ಧಗಳಲ್ಲದೆ ಇನ್ನೂ ಅನೇಕ!  ಇದೀಗ ನಮ್ಮನ್ನು ಅರೆಯುತ್ತಿರುವ ಈ ಕರೋನ ಮಹಾಮಾರಿ! ಅದರ ಪರಿಣಾಮ ನಾವು ದಿನನಿತ್ಯ ಕಾಣುತ್ತಿರುವ ಈ ಸಾವು ನೋವು. ಈಗ ಶವಗಳೂ ಕ್ಯೂ ನಲ್ಲಿ ಮಲಗಿ ಅಂತಿಮ ಘಳಿಗೆಗಾಗಿ ಕಾಯುವ ವಿಪರ್ಯಾಸ! ಇಷ್ಟಾದರೂ ಯಾವ ಪರಿಣಾಮಕ್ಕೂ ತಲೆ ಕೆಡಿಸಿಕೊಳ್ಳದೆ ಮಾಸ್ಕ್ ಇಲ್ಲದೇ ಓಡಾಡುವ ಅನಂತ ಬೇಜವಾಬ್ದಾರಿ ಜನ! ಇಂಥವರಿಗೆ ಆಸ್ಪತ್ರೆಗಳ, ಮಸಣಗಳ ದರ್ಶನ ಮಾಡಿಸಬೇಕು; ಅಮೆರಿಕದಲ್ಲಿ ದೊಡ್ಡದೊಂದು ಗುಂಡಿ ಅಗೆದು ಹೆಣಗಳ ರಾಶಿ ರಾಶಿ ಬಿಸಾಡಿದ ಕಂಡರಿಯದಿದ್ದಂತಹ ದೃಷ್ಯ ತೋರಿಸಬೇಕು…ಕನಿಷ್ಠ ತಮ್ಮ ಸಹಜೀವಿಗಳ ಇರುವಿಕೆಯ ಕಾಳಜಿಗಾಗಿ! ಇಂಥವರ ಮಧ್ಯೆ ಬದುಕು ಎಷ್ಟು

ಪರಿಣಾಮ Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-12 ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ ಪ್ರಾಣಿಯಂತೆ ವಿನಯದ ಮುಖವಾಡ ತೊಟ್ಟು ಬದುಕುತ್ತಿದ್ದನೇ ಹೊರತು ಅಸಾಮಾನ್ಯ ಧೈರ್ಯ ಕ್ರೌರ್ಯಗಳು ಅವನ ರಕ್ತದಲ್ಲೇ ಮಡುಗಟ್ಟಿದ್ದವು ಎಂಬ ಸಂಗತಿಯನ್ನು ತಿಳಿಯುವ ಚಾತುರ್ಯ ಶಂಕರನಲ್ಲಿರಲಿಲ್ಲ. ಒಬ್ಬಿಬ್ಬರು ಗಟ್ಟಿಯಾಳುಗಳಿಂದ ಸದೆಬಡಿಯಲಾಗದಷ್ಟು ಬಲಿಷ್ಠ ಆಸಾಮಿಯಾಗಿದ್ದ ಸಂತಾನಪ್ಪನಿಗೆ ತನ್ನ ಶಕ್ತಿ ಸಾಮಥ್ರ್ಯದ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಹಾಗಾಗಿಯೇ ಇಂದು ಒಬ್ಬಂಟಿಯಾಗಿ ಶಂಕರನ ಹುಟ್ಟಡಗಿಸಲು ಹೊರಟಿದ್ದ. ಅದಕ್ಕೆ ಸರಿಯಾಗಿ ಅಂದು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ತನ್ನಿಬ್ಬರು ಆಳುಗಳಿಂದ, ‘ಶಂಕರಣ್ಣ, ಅವನ ಒಬ್ಬ ಸ್ನೇಹಿತನೊಂದಿಗೆ ಸಿಟಿ ಬಸ್ಸು ನಿಲ್ದಾಣ ಸಮೀಪದ ಪಾಳು ಬಿಲ್ಡಿಂಗ್‍ನ ಅಡ್ಡಾವೊಂದರಲ್ಲಿ ಕುಳಿತು ಸಾರಾಯಿ ಕುಡಿಯುತ್ತಿದ್ದಾನೆ!’ ಎಂಬ ಸಿಹಿ ಸುದ್ದಿಯೂ ಸಿಕ್ಕಿದ್ದರಿಂದ ಅವನು ತಟ್ಟನೆ ಚುರುಕಾದ. ‘ಅವ್ನೊಂದಿಗೆ ಒಟ್ಟು ಎಷ್ಟು ಮಂದಿ ಅದಾರಾ ಅಂತ ಸರಿಯಾಗಿ ನೋಡಿದ್ರಲಾ…?’ ಎಂದು ಆಳುಗಳನ್ನು ಗದರಿಸಿಯೇ ವಿಚಾರಿಸಿದ. ‘ಹೌದು ಧಣೇರಾ, ಅವ್ನ್ ಕೋಣೆಯಾಗ ಅವ್ನ್ ಕೂಡಿ ನಮಗಾ ಇಬ್ರೇ ಕಂಡವ್ರೀ…!’ ಎಂದರು ಅವರು. ಸಂತಾನಪ್ಪ ಮತ್ತೆ ತಡಮಾಡಲಿಲ್ಲ. ಕೂಡಲೇ ಶಂಕರನ ಅಡ್ಡಾಕ್ಕೆ ಧಾವಿಸಿದ. ಆ ಹೊತ್ತು ಬಸ್ಸು ನಿಲ್ದಾಣದಲ್ಲಿ ಒಂದೆರಡು ಸಿಟಿ ಬಸ್ಸುಗಳು ಕೊನೆಯ ಟ್ರಿಪ್ಪಿನ ಪ್ರಯಾಣಿಕರನ್ನು ಕಾಯುತ್ತ ನಿಂತಿದ್ದವು. ವಿದ್ಯುತ್ ಕಂಬಗಳ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಗೂಡಂಗಡಿಗಳು ಆಮ್ಲೇಟ್, ಬ್ರೆಡ್ ಮಸಾಲೆಗಳಂಥ ತಿಂಡಿ ತಿನಿಸುಗಳನ್ನು ತಯಾರಿಸಲು ಮೊಟ್ಟೆ ಕಲಕುವ ಮತ್ತು ಬಾಣಲಿಯ ಠಣಠಣ ಸದ್ದು, ಗದ್ದಲಗಳು ಹಗಲಿಡೀ ಕರ್ಕಶ ಶಬ್ದ ಮಾಲಿನ್ಯದಿಂದಲೂ, ವಾಯು ಮಾಲಿನ್ಯದಿಂದಲೂ ಬೆಂದು ಬಸವಳಿದು ಈಗಷ್ಟೇ ವಿರಮಿಸಲು ಹವಣಿಸುತ್ತಿದ್ದ ಆ ಇಡೀ ಪ್ರದೇಶದ ನೀರವ ಮೌನವನ್ನು ಕದಡುತ್ತಿದ್ದವು. ಸಂತಾನಪ್ಪ ಬಸ್ಸು ನಿಲ್ದಾಣದ ಮೇಲೆ ಎಡಭಾಗದಲ್ಲಿರುವ ಪ್ರೇಮ ಬೇಕರಿಯ ಎದುರು ಬಂದು ಕಾರು ನಿಲ್ಲಿಸಿದ. ಥಳಥಳ ಹೊಳೆಯುವ ಅಗಲವಾದ ಮಚ್ಚನ್ನು ಪೇಪರಿನಿಂದ ಸುತ್ತಿ ಬೆನ್ನ ಹಿಂದೆ ಪ್ಯಾಂಟಿನೊಳಗೆ ತುರುಕಿಸಿ ಮರೆಮಾಚಿದ. ಶಂಕರನ ರಹಸ್ಯ ತಾಣಕ್ಕೆ ತಾನು ಸಾಕಷ್ಟು ಬಾರಿ ಬಂದು ಕೆಲಸಕಾರ್ಯಗಳ ಬಗ್ಗೆ ಚರ್ಚಿಸುತ್ತ ಪೆಗ್ಗು ಹೀರುತ್ತ ಕುಳಿತಿರುತ್ತಿದ್ದವನಿಗೆ ಆ ಜಾಗವು ಚಿರಪರಿಚಿತವಿತ್ತು . ಹಾಗಾಗಿ ಧೈರ್ಯದಿಂದ ಅಡ್ಡಾದ ಹತ್ತಿರ ಹೋದ. ಶಂಕರನ ಕೋಣೆಯ ಬಾಗಿಲು ಮುಚ್ಚಿತ್ತು. ನಿಶ್ಶಬ್ದವಾಗಿ ನಿಂತು ಒಳಗಿನ ಶಬ್ದವನ್ನು ಆಲಿಸಿದ. ಯಾರದೋ ಗುಸುಗುಸು ಮೆಲುಧ್ವನಿ ಅಸ್ಪಷ್ಟವಾಗಿ ಕೇಳುತ್ತಿತ್ತು. ಹೌದು, ತನ್ನ ಕಡೆಯವರು ಹೇಳಿದ್ದು ನಿಜ. ಒಳಗೆ ಇಬ್ಬರೇ ಇರುವುದು ಎಂದುಕೊಂಡು ಬಾಗಿಲು ತಟ್ಟಿದ. ಕೆಲಕ್ಷಣದಲ್ಲಿ ಚಿಲಕ ತೆಗೆದ ಸದ್ದಾಯಿತು. ಶಂಕರನೇ ಬಾಗಿಲು ತೆರೆದ. ಆದರೆ ಸಂತಾನಪ್ಪ ಅವಕ್ಕಾದ. ಏಕೆಂದರೆ ಶಂಕರ ಇನ್ನೂ ಮತ್ತನಾಗಿರಲಿಲ್ಲ ಮಾತ್ರವಲ್ಲದೇ ಒಳಗೆ ಇನ್ನಿಬ್ಬರು ವಿಲಕ್ಷಣ ಗಡ್ಡಾಧಾರಿಗಳೂ ಇದ್ದುದು ಅವನಿಗೆ ಕಾಣಿಸಿತು. ಕೋಣೆಯ ಮಂದ ಬೆಳಕಿನಲ್ಲಿ ಆ ಆಗಂತುಕರು ತನ್ನನ್ನು ಕ್ರೂರವಾಗಿ ದಿಟ್ಟಿಸುತ್ತಿರುವಂತೆ ಅವನಿಗೆ ಭಾಸವಾಯಿತು. ಕೆಲವುಕ್ಷಣ ಏನೂ ತೋಚದೆ ನಿಂತುಬಿಟ್ಟ. ಆದರೆ ಶಂಕರ ಏನೂ ನಡೆದಿಲ್ಲವೆಂಬಂತೆ ನಗುತ್ತ, ‘ಓಹೋ…ಏನೋ ಸಂತಾನಪ್ಪ ಇಷ್ಟೊತ್ನಲ್ಲಿ…?’ ಎನ್ನುತ್ತ ಸ್ನೇಹದಿಂದ ಆಹ್ವಾನಿಸಿದ. ಅಷ್ಟೊತ್ತಿಗೆ ಸಂತಾನಪ್ಪನೂ ಹತೋಟಿಗೆ ಬಂದಿದ್ದವನು ಶಂಕರನ ಕುಟಿಲ ಆತ್ಮೀಯತೆಯನ್ನು ಕಂಡು ಕೋಪದಿಂದ ಕುದಿದ. ‘ನೋಡ್ ಶಂಕರಣ್ಣ, ನನ್ನ ಜೊತೆ ಹುಡುಗಾಟ ಆಡ್ ಬ್ಯಾಡ. ನೀನೆಣಿಸಿದಷ್ಟು ಛಲೋ ಮನ್ಷ ನಾನಲ್ಲ ತಿಳ್ಕೋ!’ ಎಂದ ಒರಟಾಗಿ. ‘ಅದು ನನಗೂ ಗೊತ್ತಿದೆ ಮಾರಾಯಾ. ಅದಿರಲಿ ನೀನೀಗ ಇಷ್ಟೊಂದು ಸಿಟ್ಟಾಗುವಂಥದ್ದು ಏನಾಯ್ತು ಅಂತ ಹೇಳಬೇಕಲ್ವಾ…?’ ಎಂದು ಶಂಕರ ವ್ಯಂಗ್ಯವಾಗಿ ನಗುತ್ತ ಪ್ರಶ್ನಿಸಿದ. ಸಂತಾನಪ್ಪನಿಗೆ ಉರಿದು ಹೋಯಿತು. ‘ಏನಲೇ ಹೈವಾನ್! ಮೊನ್ನೆ ನನ್ನಿಂದ ಹೆಬ್ಬೆಟ್ ಒತ್ತುಸ್ಕೊಂಡು ಓಡ್ ಬಂದಿಯಲ್ಲ ಆ ಪತ್ರಗಳು ಎಲ್ಲದಾವಂತ ತೋರ್ಸಲೇ…?’ ಎಂದು ಗುಡುಗಿದ. ‘ಯಾಕೆ ಮಾರಾಯಾ, ಅದರಿಂದೇನಾಯ್ತು? ಅಚ್ಚಡಪಾಡಿಯಲ್ಲಿ ಖರೀದಿಸಿದ ಜಮೀನಿನ ಪತ್ರಗಳೆಂದು ಹೇಳಿದ್ದೆನಲ್ಲಾ!’ ಎಂದ ಶಂಕರ ಅಸಡ್ಡೆಯಿಂದ. ಆದರೀಗ ಸಂತಾನಪ್ಪ ಅದನ್ನು ನಂಬುವಷ್ಟು ಮೂರ್ಖನಾಗಲಿಲ್ಲ. ‘ಓಹೋ, ಹೌದಾ? ಸರಿ ಹಂಗಾದ್ರೆ ನಾನೂ ಅದ್ನ ನೋಡಬೇಕಲೇ?’  ‘ಅರೇ, ಅದೀಗ ಇಲ್ಲೆಲ್ಲಿದೆ ಮಾರಾಯಾ! ಕನ್ವರ್ಶನ್‍ಗೆ ಕೊಟ್ಟಾಯಿತು. ಬೇಕಿದ್ದರೆ ನಾಳೆ ಬೆಳಿಗ್ಗೆ ಫ್ಲಾಟ್‍ಗೆ ಬಾ ಝೆರಾಕ್ಸ್ ಕಾಪಿಗಳಿವೆ, ತೋರಿಸುತ್ತೇನೆ’ ಎಂದ ಶಂಕರ ಉಡಾಫೆಯಿಂದ.    ಆಗ ಸಂತಾನಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಆ ಸಂಪತ್ತು ತಾನು ಬೆವರು ಸುರಿಸಿ ಸಂಪಾದಿಸಿದ್ದಲ್ಲವಾದರೂ ತನ್ನ ಅದೃಷ್ಟದಿಂದಲೇ ತನಗೆ ದಕ್ಕಿದ್ದು. ತನ್ನ ಎರಡು ಸಂಸಾರಗಳೂ ಅದನ್ನೇ ನಂಬಿಕೊಂಡಿವೆ ಮತ್ತು ಅದರಿಂದಾಗಿಯೇ ತನ್ನ ಊರಲ್ಲೂ ತಾನು ಭಾರಿದೊಡ್ಡ ಕುಳವೆಂಬ ಹೆಗ್ಗಳಿಕೆಗೆ ಪಾತ್ರನಾಗಿರುವುದು. ಹೀಗಿರುವಾಗ ಅಂಥ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಎಂಥ ಎಡವಟ್ಟು ಮಾಡಿಕೊಂಡೆನಲ್ಲ! ಈ ಹಾದರಕ್ ಹುಟ್ಟಿದ ನನ್ಮಗ ಖಂಡಿತವಾಗಿಯೂ ಅವೇ ಪತ್ರಗಳಿಗೆ ತನ್ನಿಂದ ರುಜು ಹಾಕಿಸಿಕೊಂಡು ಮಸಲತ್ತು ಮಾಡ್ತಿದ್ದಾನೆ ಎಂದು ಯೋಚಿಸಿದವನ ಆತಂಕ ಇಮ್ಮಡಿಯಾಯಿತು. ‘ನಾಳೆಯವರೆಗೆ ಕಾಯಲು ಸಾಧ್ಯವಿಲ್ಲ ಶಂಕರಣ್ಣಾ. ನಡೆ, ಈಗಲೇ ಫ್ಲಾಟಿಗೆ ಹೋಗೋಣ!’ ಎಂದ ಸಿಡುಕಿನಿಂದ. ಅದಕ್ಕೆ ಶಂಕರ ವ್ಯಂಗ್ಯವಾಗಿ ನಗುತ್ತ ತನ್ನ ಗೆಳೆಯರತ್ತ ದಿಟ್ಟಿಸಿದವನು ಅವರಿಗೇನೋ ಕಣ್ಸನ್ನೆ ಮಾಡಿದ. ಆ ಮುಖಗಳು ಕೂಡಲೇ ಕಠೋರವಾದವು. ‘ಆಯ್ತು ಮಾರಾಯಾ ನಡೆ. ಯಾರೋ ದರವೇಶಿಗಳು ನನ್ನ ಬಗ್ಗೆ ನಿನ್ನಲ್ಲಿ ಸಂಶಯ ಹುಟ್ಟಿಸಿದ್ದಾರೆಂದು ಕಾಣುತ್ತದೆ. ಪರ್ವಾಗಿಲ್ಲ ನಿನ್ನ ಅನುಮಾನ ನಿವಾರಿಸುವ!’ ಎಂದು ಅದೇ ವ್ಯಂಗ್ಯ ನಗುವಿನೊಂದಿಗೆ ಹೇಳಿದವನು ಗೆಳೆಯರತ್ತ ತಿರುಗಿ, ‘ಇವರು ನನ್ನ ಸ್ನೇಹಿತರು. ಅಪರೂಪಕ್ಕೆ ಬಂದಿದ್ದಾರೆ ಮಾರಾಯಾ. ಅವರೊಂದಿಗೆ ಸ್ವಲ್ಪ ಡ್ರಿಂಕ್ಸ್ ಮಾಡುತ್ತ ಮಾತಾಡುವುದಿದೆ. ಬೇಕಿದ್ದರೆ ನಮ್ಮೊಂದಿಗೆ ನೀನೂ ಸೇರಿಕೋ. ನಂತರ ಹೊರಡುವ’ ಎಂದ ಶಂಕರ ನಯವಾಗಿ. ಸಂತಾನಪ್ಪನಿಗೆ ಅವನ ಮಾತು ನಂಬಬೇಕೋ ಬಿಡಬೇಕೋ ಎಂದು ಗೊಂದಲವಾಯಿತು. ಹಾಗಾಗಿ ಶಂಕರ ತೋರಿಸಿದ ಕುರ್ಚಿಯಲ್ಲಿ ಕುಳಿತುಕೊಂಡ. ಶಂಕರನೂ ಗಂಭೀರವಾಗಿ ಸಾರಾಯಿ ಸುರಿದು ಸ್ನೇಹಿತರೊಂದಿಗೆ ಇವನಿಗೂ ಕೊಟ್ಟ. ಸಂತಾನಪ್ಪ ಒಲ್ಲದ ಮನಸ್ಸಿನಿಂದ ಕುಡಿಯತೊಡಗಿದ. ಎರಡು ಪೆಗ್ಗು ಹೊಟ್ಟೆಗಿಳಿಯುವ ಹೊತ್ತಿಗೆ ಅವನ ದೇಹ, ಮನಸ್ಸುಗಳೆರಡೂ ಹುಗುರವಾಗಿ ಬಿಗುಮಾನ ಮಾಯವಾಯಿತು. ಆದರೂ ಯಾರೊಡನೆಯೂ ಮಾತಾಡದೆ ಮೌನವಾಗಿ ಸಾರಾಯಿ ಹೀರತೊಡಗಿದ. ಶಂಕರ ಮಾತ್ರ ಬೇಕೆಂದೇ ಇವನ ಇರುವನ್ನು ಕಡೆಗಣಿಸಿ ಇವನಿಗೆ ಅರ್ಥವಾಗದ ವಿಷಯಗಳನ್ನೆತ್ತಿ ಸ್ನೇಹಿತರೊಂದಿಗೆ ಚರ್ಚಿಸುತ್ತ, ಸೂರು ಕಿತ್ತು ಹೋಗುವಂತೆ ನಗುತ್ತ ಬಾಟಲಿ ಖಾಲಿ ಮಾಡುತ್ತಿದ್ದ. ಇತ್ತ ಸ್ವಲ್ಪಹೊತ್ತಿನಲ್ಲಿ ಐದನೆಯ ಪೆಗ್ಗು ಸಂತಾನಪ್ಪನ ಹೊಟ್ಟೆ ಸೇರುತ್ತಲೇ ಶಂಕರನ ಮೇಲಿನ ಶಂಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಜೊತೆಗೆ ತಾನು ಮೊನ್ನೆಯೂ ಇವನ ಇಂಥ ಮೋಡಿಯ ಮಾತುಗಳಿಗೆ ಮೋಸ ಹೋಗಿ ಅನಾಹುತ ಮಾಡಿಕೊಂಡಿದ್ದು ಎಂದನ್ನಿಸುತ್ತಲೇ ಮರಳಿ ಅವನ ತಾಳ್ಮೆ ಕುಸಿಯಿತು. ‘ನಡೆ ಶಂಕರಣ್ಣ ಹೋಗೋಣ. ನನಗೀಗಲೇ ಆ ಪತ್ರಗಳನ್ನು ನೋಡಬೇಕು!’ ಎಂದು ಎದ್ದು ನಿಂತ. ಶಂಕರ ಆಗಲೂ ಅವನ್ನು ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆಗ ಮಾತ್ರ ಸಂತಾನಪ್ಪನ ಕೋಪ ನೆತ್ತಿಗೇರಿತು. ‘ಲೇ, ಹಡಿ ಸೂಳೀಮಗನಾ…ನಿನ್ ದಗಲ್ಬಾಜಿನೆಲ್ಲ ನನ್ ಹತ್ರ ಬಿಚ್ಬೇಡಲೇ…! ಪತ್ರಗಳ್ನ ಈಗ್ಲೇ ತಂದೊಪ್ಪಿಸಿದ್ದಿಯೋ ಬಚಾವಾದಿ ಮಗನಾ! ಇಲ್ಲಾ, ನಿನ್ನನ್ ಕಂಬಿ ಎಣಿಸುವಂತೆ ಮಾಡದೆ ಬಿಡಕ್ಕಿಲ್ವೋ ಹೈವಾನ್!’ ಎಂದು ಗುಡುಗಿದ. ಆದರೆ ಆಗ ಶಂಕರನೂ ಹದವಾದ ಮತ್ತಿನಲ್ಲಿದ್ದ. ಅವನ ಮುಖದಲ್ಲೂ ತೀಕ್ಷ್ಣ ಕೋಪ ವಿಜೃಂಭಿಸಿತು. ‘ಓಹೋ ಹೌದಾ ಮಗನೇ…! ಪರ್ವಾಗಿಲ್ಲವಾ ನೀನೂ ಭಾರೀ ಅರ್ಜೆಂಟಿನಲ್ಲಿದ್ದಿ. ಹಾಗಾಗಿ ಇನ್ನು ಟೈಮ್‍ವೇಸ್ಟ್ ಮಾಡುವುದು ನನಗೂ ಸರಿ ಕಾಣುವುದಿಲ್ಲ. ಆಯ್ತು ಹೋಗುವ!’ ಎಂದು ದಢಕ್ಕನೆದ್ದವನು ಗೆಳೆಯರತ್ತ ತಿರುಗಿ ಮತ್ತೇನೋ ಸಂಜ್ಞೆ ಮಾಡಿ ಧುರಧುರನೇ ಹೊರಗೆ ನಡೆದ. ಸಂತಾನಪ್ಪನೂ ಬಿರುಸಿನಿಂದ ಅವನನ್ನು ಹಿಂಬಾಲಿಸಿದ. ಆದರೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನೊಮ್ಮೆ ಮೆಲ್ಲನೆ ಸ್ಪರ್ಶಿಸಿ ನೋಡಿ ಸೆಟೆದುಕೊಂಡು ಮುನ್ನಡೆದ. ಶಂಕರ, ಸಂತಾನಪ್ಪನಿಗೆ ಏನೂ ಹೇಳದೆ ಮೂತ್ರ ವಿಸರ್ಜಿಸಲೆಂಬಂತೆ ಸಮೀಪದ ಸಾರ್ವಜನಿಕ ಶೌಚಾಲಯದತ್ತ ಹೊರಟ. ಸಂತಾನಪ್ಪನಿಗೆ ಅನುಮಾನವಾಯಿತು. ‘ಆ ಕಡೆ ಎಲ್ಲಿಗೇ…?’ ಎಂದ ಜೋರಿನಿಂದ.   ‘ಮೂತ್ರ ಹುಯ್ಯಬೇಕು ಮಾರಾಯಾ…!’  ಎಂದ ಶಂಕರ ನಗುತ್ತ.  ‘ನಾನೂ ಬರುತ್ತೇನೆ!’ ಎಂದ ಸಂತಾನಪ್ಪ ಅವನ ಬೆನ್ನು ಹತ್ತಿದ. ಶಂಕರನೂ ಅದನ್ನೇ ನಿರೀಕ್ಷಿಸಿದ್ದವನು ಸಂತಾನಪ್ಪನ ಹುಂಬತನವನ್ನು ನೆನೆದು ಕತ್ತಲಲ್ಲಿ ಭುಜ ಕುಣಿಸಿ ನಗುತ್ತ ನಡೆದ. ಆದರೆ ಶೌಚಾಲಯಕ್ಕೆ ಹೋಗದೆ ಕಟ್ಟಡದ ಹಿಂದೆ ಕುರುಚಲು ಪೊದೆಗಳು ತುಂಬಿದ್ದ ಪಾಳು ಜಾಗವೊಂದಕ್ಕೆ ಹೋದ. ಸಂತಾನಪ್ಪ ಅಲ್ಲಿಗೂ ಹಿಂಬಾಲಿಸಿದ. ಆ ಪ್ರದೇಶದಲ್ಲಿ ದಟ್ಟ ಕತ್ತಲೆ ಗೌವ್ವ್ ಗುಡುತ್ತಿತ್ತು. ಸಂತಾನಪ್ಪನ ಹಿಂದುಗಡೆ ಮತ್ತೆರಡು ಆಕೃತಿಗಳು ಮೆತ್ತಗೆ ಬಂದು ನಿಂತಿದ್ದನ್ನು ಅವನ ಸಾರಾಯಿ ಪ್ರಜ್ಞೆಯು ಗ್ರಹಿಸಲಿಲ್ಲ. ಅತ್ತ ಶಂಕರ ಮೂತ್ರ ಹುಯ್ಯಲು ನಿಂತಂತೆ ನಟಿಸಿದ. ಅಷ್ಟರಲ್ಲಿ ಸಂತಾನಪ್ಪನ ಹಿಂದಿದ್ದವನೊಬ್ಬ ಅವನ ಕೊರಳಿಗೆ ಬಲವಾಗಿ ಹೊಡೆದ. ಸಂತಾನಪ್ಪ, ‘ಯಾವ್ವಾ…!’ ಎಂದು ಚೀರಿ ಧೊಪ್ಪನೆ ಕುಸಿದ. ‘ಏನಲೇ ಬೇವರ್ಸಿ… ನಮ್ಮೂರಿಗೆ ಕೂಲಿಗೆ ಬಂದಂಥ ನಾಯಿ ನೀನು! ನಮ್ಮವರ ಆಸ್ತಿಯನ್ನೇ ಲಪಟಾಯಿಸಿ ಮಜಾ ಉಡಾಯಿಸಬೇಕೆಂದಿದ್ದಿಯೇನೋ…? ಅದನ್ನು ನೋಡಿಯೂ ನನ್ನಂಥವನು ಸುಮ್ಮನಿರುತ್ತಾನೆಂದು ಅದ್ಹೇಗೆ ಭಾವಿಸಿದೆಯೋ? ಮರ್ಯಾದೆಯಿಂದ ನಾಳೆ ಬೆಳಗಾಗುವುದರೊಳಗೆ ನಿನ್ನ ಎರಡು ಸಂಸಾರಗಳನ್ನು ಕಟ್ಟಿಕೊಂಡು ಇಲ್ಲಿಂದ ಜಾಗ ಖಾಲಿ ಮಾಡಿದೆಯೋ ಬಚಾವಾದೆ. ಇಲ್ಲಾ, ನಿನ್ನ ಹೆಣ ಮಸಣದ ಗುಡ್ಡೆಯಲ್ಲೇ ಸುಟ್ಟು ಬೂದಿಯಾಗುವುದು ಗ್ಯಾರಂಟಿ ಬೋಳಿಮಗನೇ!’ ಎಂದು ಕೋಪದಿಂದ ಗುಡುಗಿದ ಶಂಕರ, ಸಂತಾನಪ್ಪನಿಗೆ ಬೀಸಿ ಬೀಸಿ ಒದೆಯತೊಡಗಿದ. ಆದರೆ ಒಂದೆರಡು ಒದೆತಗಳು ಬೀಳುತ್ತಿದ್ದಂತೆಯೇ ಸಂತಾನಪ್ಪನೂ ಗೂಳಿಯಂತೆ ಉಸಿರುದಬ್ಬುತ್ತ ಎದ್ದು ನಿಂತ.    ಅವನ ಬಲಗೈ ರಪ್ಪನೆ ಬೆನ್ನ ಹಿಂದೆ ಸರಿದು ಮಚ್ಚನ್ನು ಎಳೆದುಕೊಂಡಿತು. ಸಂತಾನಪ್ಪನ ರೌದ್ರಾವತಾರವನ್ನೂ ಮತ್ತು ಆ ಕತ್ತಲನ್ನೂ ಮೀರಿ ಮಿರಮಿರನೇ ಮಿಂಚುತ್ತಿದ್ದ ಮಚ್ಚನ್ನೂ ಕಂಡ ಶಂಕರ ದಿಗ್ಭ್ರಾಂತನಾದ. ಅದೇ ಹೊತ್ತಿಗೆ ಸಂತಾನಪ್ಪ ಶಂಕರನ ಕೊರಳಿಗೆ ಗುರಿಯಿಟ್ಟು ಮಚ್ಚು ಬೀಸಿದ. ಆದರೆ ಶಂಕರ ನೂಲಿನೆಳೆಯಷ್ಟು ಅಂತರದಲ್ಲಿ ತಪ್ಪಿಸಿಕೊಂಡ. ಅದರ ಬೆನ್ನಿಗೆ ಸಂತಾನಪ್ಪ ಅವನ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ. ಶಂಕರ, ‘ಅಯ್ಯಮ್ಮಾ…!’ ಎಂದು ಕಿರುಚುತ್ತ ಅಷ್ಟು ದೂರಕ್ಕೆ ಎಗರಿ ಬಿದ್ದ. ಮರುಕ್ಷಣ ಸಂತಾನಪ್ಪ ಮಿಂಚಿನವೇಗದಲ್ಲಿ ಅತ್ತ ನೆಗೆದವನು ಶಂಕರನ ಕೊರಳನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಂಕರನ ಬಾಡಿಗೆ ಗೂಂಡಾಗಳು ಕ್ಷಣದಲ್ಲಿ ಮುನ್ನುಗ್ಗಿ ಸಂತಾನಪ್ಪನನ್ನು ಮಿಸುಕಾಡದಂತೆ ಬಲವಾಗಿ ಹಿಡಿದುಕೊಂಡರು. ಶಂಕರ ತನ್ನ ಜೀವವಮಾನದಲ್ಲಿ ಅಂಥದ್ದೊಂದು ಒದೆತವನ್ನು ಯಾರಿಂದಲೂ ತಿಂದವನಲ್ಲ. ಆದರೆ ಇಂದು ತನ್ನ ಕೂಲಿಯಾಳಿನಿಂದಲೇ ಅಂಥ ದುರ್ದುಸೆ ತನಗೆ ಬಂದುದನ್ನು ನೆನೆದವನಿಗೆ ಅವಮಾನದಿಂದ ಸತ್ತಂತಾಯಿತು. ಎದ್ದು ನಿಲ್ಲಲಾಗದಷ್ಟು ನೋವಿದ್ದರೂ ಕಷ್ಟಪಟ್ಟು ಎದ್ದು ನಿಂತ. ಅವನ ರಕ್ತದ ಕಣಕಣದಲ್ಲೂ ಕ್ರೋಧವು ಪ್ರಜ್ವಲಿಸಿತು. ಸಂತಾನಪ್ಪನ ಕತ್ತಿನ ಪಟ್ಟಿಯನ್ನು ಒರಟಾಗಿ ಎಳೆದು ಹಿಡಿದವನು, ‘ಹಲ್ಕಟ್ ನನ್ಮಗನೇ… ನನ್ನ ಮೇಲೆಯೇ ಕೈಮಾಡುವಷ್ಟು ಸೊಕ್ಕಾ ನಿಂಗೆ…!?’ ಎಂದು ಕ್ಯಾಕರಿಸಿ ಅವನ ಮುಖಕ್ಕೆ ಉಗಿದವನು, ಕಾಲ ಮೊಣಗಂಟಿನಿಂದ ಅವನ ಮರ್ಮಾಂಗಕ್ಕೆ ಬೀಸಿ ಬೀಸಿ ನಾಲ್ಕೈದೇಟು ಜಾಡಿಸಿ ಒದ್ದುಬಿಟ್ಟ. ‘ಯಾವ್ವಾ ಸತ್ತೆನವ್ವಾ…!’ ಎಂದು ಉಸಿರುಗಟ್ಟಿ ಅರಚಿದ ಸಂತಾನಪ್ಪ ಕಡಿದ ಬಾಳೆಯಂತೆ ನೆಲಕ್ಕುರುಳಿದ. ಅವನ ಕೈಯಿಂದ ಮಚ್ಚು ತನ್ನಿಂದ ತಾನೇ ಕಳಚಿಬಿತ್ತು.                                                       *** ಮರುದಿನ ಮುಂಜಾನೆ, ‘ಈಶ್ವರಪುರದ ಸಾರ್ವಜನಿಕ ಶೌಚಾಲಯದಲ್ಲಿ ಉತ್ತರ

Read Post »

ಇತರೆ

ಮಕ್ಕಳಿಗಾಗಿ ಅನುಭವ ಕಥನ ಕಾಡಂಚಿನಊರಿನಲ್ಲಿ….. ವಿಜಯಶ್ರೀ ಹಾಲಾಡಿ ವಿಜಿ ಸಣ್ಣವಳಿರುವಾಗ, ಅಜ್ಜಿ ಅಂದಿಗೆ ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದೆ (ಅಂದರೆ ಇವತ್ತಿಗೆ ತೊಂಬತ್ತು-ತೊಂಬತ್ತೈದು ವರ್ಷಗಳ ಹಿಂದೆ) ನಡೆದ ಘಟನೆಯನ್ನು ಹೇಳುತ್ತಿದ್ದರು. ಅಜ್ಜಿಯ ಮಾವ ಮುಂತಾದ ಹಿರಿಯರಿದ್ದ ಸಮಯವದು. ಆಗ ನಮ್ಮೂರು `ಮುದೂರಿ’ಯ ಸುತ್ತಲಿನ ಕಾಡುಗಳಲ್ಲಿ ಹುಲಿಯಿತ್ತಂತೆ! ಎಷ್ಟು ಹುಲಿಗಳಿದ್ದವೋ, ತಿಳಿಯದು, ಆದರೆ ಊರಿಗೆ ಬಂದು ದನಗಳನ್ನು ಕೊಂಡೊಯ್ದ ಅನೇಕ ಪ್ರಸಂಗಗಳಿದ್ದವು. ಹಟ್ಟಿಯ ಗೋಡೆಯನ್ನು ಮಣ್ಣಿನಿಂದ ಗಟ್ಟಿಯಾಗಿ ನಿರ್ಮಿಸಿ ಬಂದೋಬಸ್ತು ಮಾಡಿದ್ದರೂ ಬಾಗಿಲು ಸ್ವಲ್ಪ ಸದರ ಇದ್ದರೆ ಅದರ ಮೂಲಕ ಹಟ್ಟಿಗೆ ನುಗ್ಗಿ ರಾತ್ರೋರಾತ್ರಿ ದನಗಳನ್ನು ಹೊತ್ತೊಯ್ಯುತ್ತಿತ್ತು.  ಹಾಗೊಂದು ಸಲ ಹತ್ತಿರದಲ್ಲೇ ಹುಲಿಯ ಭೀಕರ ಘರ್ಜನೆ ಕೇಳಿ ಮನೆಯವರೆಲ್ಲ ನಡುಗಿ ಕುಳಿತಿದ್ದಾಗ ಹಟ್ಟಿಯಿಂದ ಒಂದು ದನವನ್ನು ಕೊಂಡೊಯ್ದಿತ್ತು ಎಂಬ ಭೀಕರ ಘಟನೆಯನ್ನುಅಜ್ಜಿ ಹೇಳಿದರು. ಮೇಯಲು ಬಿಟ್ಟಾಗಲೂ ದನಕರುಗಳನ್ನು ಕದ್ದುಕೊಂಡು ಹೋಗುತ್ತಿತ್ತು ಎಂದರು. ಈ ಘಟನೆಗಳನ್ನು ಕೇಳಿದ ನಂತರ ವಿಜಿಗೆ ಸುಮಾರು ಸಲ ಹುಲಿ ಬಂದು ತಮ್ಮ ದನಗಳನ್ನು ತೆಗೆದುಕೊಂಡು ಹೋದಂತೆ; ತಡೆಯಲು ಹೋದ ಊರಿನವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದಂತೆ ಕನಸು ಬೀಳುತ್ತಿತ್ತು! ಅಜ್ಜಿ ಹೇಳಿದ ಹಳೆಯ ಕಾಲದಲ್ಲಿ ಹುಲಿಗಳು ಜನರಿಗೆ ಬಹಳಷ್ಟು ಕಾಟ ಕೊಟ್ಟಿದ್ದರೂ ವಿಜಿ ಸಣ್ಣವಳಿರುವಾಗ ಅಂತದ್ದೇನೂ ಇರಲಿಲ್ಲ. ಆದರೆ ಹುಲಿಯ ಬದಲಿಗೆ `ಕುರ್ಕ’ ಎಂದು ಕರೆಯುವ ಸಣ್ಣ ಚಿರತೆ ಇತ್ತು. ಇದು ನಾಯಿಗಳನ್ನು ಕದ್ದೊಯ್ಯುತ್ತಿತ್ತು. ಕಾಡಿನೊಳಗೇ ಇರುವ ಕೆಲ ಮನೆಗಳ ನಾಯಿಗಳನ್ನು ಕೊಂಡೊಯ್ಯುತ್ತಿತ್ತು. ಪ್ರೀತಿಯ ನಾಯಿಗಳನ್ನು ಕಳೆದುಕೊಂಡ ಅಂತಹ ಮನೆ ಜನರ ನೋವಿನ ಪ್ರಕರಣಗಳನ್ನು ರುಕ್ಮಿಣಿಬಾಯಿ ಆಗಾಗ ಹೇಳುತ್ತಿದ್ದರು. ಆದರೆ ವಿಜಿಯ ಮನೆ ಕಾಡಿನಿಂದ ಹೊರಗೆ ತೋಟದ ಪಕ್ಕದಲ್ಲಿದ್ದುದರಿಂದ ಇಂತಹ ಅನುಭವ ಆಗಿರಲಿಲ್ಲ. ಅವರೂರಿಗೆ ಸಮೀಪದಲ್ಲೇ ಇದ್ದ `ಹರಿನ್‌ಗುಡ್ಡೆ’ ಎಂಬ ದೊಡ್ಡ  ಬೆಟ್ಟದಲ್ಲಿ ಹುಲಿ ಇದೆ ಎಂದು ಜನ ಹೇಳುತ್ತಿದ್ದರು. ಅದು ಸುತ್ತಮುತ್ತಲಿನ ದಟ್ಟ ಕಾಡುಗಳಲ್ಲಿ ರಾತ್ರಿ ತಿರುಗುತ್ತದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ರಾತ್ರಿ ಹೊತ್ತುಅಂತಹ ಜಾಗಗಳಿಗೆ ಯಾರೂ ಕಾಲು ಹಾಕುತ್ತಿರಲಿಲ್ಲ. ಮುದೂರಿನಲ್ಲಿಕಬ್ಬಿನಾಲೆ (ಅಲೆಮನೆ) ಪ್ರತೀ ವರ್ಷ ನಡೆಯುತ್ತಿತ್ತು. ಸುತ್ತಮುತ್ತ ಕಬ್ಬು ಬೆಳೆದವರು ಅಲೆಮನೆಗೆ ಸಾಗಿಸಿ ಬೆಲ್ಲ ಮಾಡುತ್ತಿದ್ದರು. ಈ ಕಬ್ಬಿನಾಲೆ ಆಗುತ್ತಿದ್ದುದು ಚಳಿಗಾಲದಲ್ಲಿ. ಆಗ ರಾತ್ರಿಯೆಲ್ಲ ಆಲೆಮನೆಯಲ್ಲಿ ಕೋಣಗಳನ್ನು ಓಡಿಸುತ್ತ ಹಾಡುತ್ತಿದ್ದ ಹಾಡು ಕಿವಿಗೆ ಬೀಳುತ್ತಿತ್ತು. ಇಂತಹ ಸಿಹಿ ಕಬ್ಬಿನಗದ್ದೆಗೆ ನರಿಗಳು ಬರುತ್ತಿದ್ದವು. ರಾತ್ರಿ ಬಂದು ಕಬ್ಬು ತಿಂದು ಹೋಗುತ್ತಿದ್ದವು. ಬಹುಶಃ ಕಬ್ಬು ತಿಂದ ಖುಷಿಯಲ್ಲೋ ಏನೋ ಕೂಕೂಕೂ ಎಂದು ಜೋರಾಗಿ ಊಳಿಡುತ್ತಿದ್ದವು. ಈ ಕೂಗಂತೂ ಮನುಷ್ಯರದ್ದೇ ಸ್ವರ ಎಂಬಷ್ಟರಮಟ್ಟಿಗೆ ಹೋಲಿಕೆಯಾಗುತ್ತದೆ! ಮನೆಯಲ್ಲಿ ಬೆಚ್ಚಗೆ ಮಲಗಿದ ವಿಜಿಗೆ ಈ ಕೂಗು ಕೇಳಿದೊಡನೆ ಕಬ್ಬು, ಸೌತೆಕಾಯಿ ತಿನ್ನುವ ವಿಚಿತ್ರ ಪ್ರಾಣಿ ನರಿ ಇಷ್ಟವೆನಿಸಿ ಅದನ್ನು ನೋಡಬೇಕೆನಿಸುತ್ತಿತ್ತು. ಆದರೆ ಅದನ್ನು ಕಾಡಿನಲ್ಲಿ ನೋಡಿದ್ದು ಒಂದೇ ಸಲ. ಉಳಿದಂತೆ ಝೂಗಳಲ್ಲಿ ನೋಡಿದ್ದಷ್ಟೇ. ಕತೆಗಳಲ್ಲಿ ಓದಿದಂತೆ ನರಿ ಮೋಸ ಮಾಡುವ ಪ್ರಾಣಿ ಎಂದು ಒಪ್ಪಿಕೊಳ್ಳಲು ಅವಳಿಗೆಂದೂ ಸಾಧ್ಯವಾಗಲೇಇಲ್ಲ. “ಮೋಸ ಮಾಡುವುದು ಮನುಷ್ಯರು ಮಾತ್ರ, ಪ್ರಾಣಿಗಳಲ್ಲ” ಎನಿಸುತ್ತಿತ್ತು. ನರಿಗಳ ಕುರಿತು ಅವರೂರಿನ ಜನರು ಒಂದು ಮಾತು ಹೇಳುತ್ತಿದ್ದರು. ಅದು ತಮಾಷೆಯಾಗಿ ಕಂಡರೂ ಜನಕ್ಕೆ ಅದು ನಿಜವೆಂದೇ ನಂಬಿಕೆಯಿತ್ತು. ಕಬ್ಬು ತಿನ್ನುವಾಗ ನಡುನಡುವೆ ಕೆಲಭಾಗ ಕೆಂಪಾಗಿ ಬಿರುಕುಬಿಟ್ಟು ಹಾಳಾಗಿರುತ್ತದಲ್ಲ; `ನರಿ ಪೂಂಕಿ ಬಿಟ್ಟು ಹಾಗಾದದ್ದು’ ಎಂದು ಜನ ಹೇಳುತ್ತಿದ್ದರು! ರಾತ್ರಿ ಕಬ್ಬಿನಗದ್ದೆಗೆ ಇಳಿದು ಚೆನ್ನಾಗಿ ತಿಂದು ಆಮೇಲೆ ಹೀಗೆ ಕಿಡಿಗೇಡಿತನ ಮಾಡಿ ನರಿಗಳು ವಾಪಸ್ಸಾಗುತ್ತವಂತೆ! ವಿಜಿ ಕೂಡಾ ಇದು ನಿಜವೆಂದೇ ತಿಳಿದುಕೊಂಡಿದ್ದಳು. ಆಮೇಲೆ ಸ್ವಲ್ಪ ದೊಡ್ಡವಳಾದ ನಂತರ ಅದು ಕಬ್ಬಿಗೆ ಬರುವ ಎಂತದೋ ರೋಗ ಎಂದು ಗೊತ್ತಾಯಿತು. ಆದರೂ ಪ್ರತೀ ಸಲ ಕಬ್ಬು ತಿನ್ನುವಾಗ ಹಾಳಾದ ಭಾಗವನ್ನು ನೋಡಿದಾಗ ನರಿಯ ಈ ಪ್ರಕರಣ ನೆನಪಾಗದೇ ಹೋಗುವುದಿಲ್ಲ! ಬಿಸಿಲು-ಮಳೆ ಒಟ್ಟಾಗಿ ಬಂದರೆ “ಹಾ ನರಿಯಣ್ಣನ್ ಮದಿ ಆತ್ತ್ಕಾಣಿ ಮಕ್ಳೇ ಈಗ” ಎನ್ನುತ್ತಿದ್ದರು ಅಜ್ಜಿ ಮತ್ತು ಆಚೆಮನೆ ದೊಡ್ಡಮ್ಮ. ಬಿಸಿಲು-ಮಳೆ ಬಂದಾಗಷ್ಟೇ ನರಿಗಳ ಮದುವೆ ನಡೆಯುತ್ತದೆ ಎಂದು ವಿಜಿಯಂತಹಾ ಮಕ್ಕಳು ಕಲ್ಪಿಸಿಕೊಂಡೂ ಇದ್ದರು! ನರಿಗಳು ‘ಕೂಕೂಕೂ’ ಎಂದು ಗುಂಪಾಗಿ ಕೂಗುತ್ತವಲ್ಲ; ಅದು ರಾತ್ರಿ ಹೊತ್ತು ಮಾತ್ರ. ಕಗ್ಗತ್ತಲಲ್ಲಿ ಕೇಳುವ ಆ ವಿಚಿತ್ರ ಕೂಗು ಬಾಲ್ಯದ ಸಿಹಿನೆನಪುಗಳಲ್ಲಿ ಒಂದು. ವಿಶೇಷವೆಂದರೆ ದೀಪಾವಳಿ ಹಬ್ಬದ ದಿನ ಗದ್ದೆಗೆ ದೀಪವಿಟ್ಟ ನಂತರ ಮನುಷ್ಯರೂ ನರಿಗಳಂತೆ ಕೂಕೂಕೂ ಎಂದು ಕೂಗು ಹಾಕುತ್ತಿದ್ದರು! ಇದಾದರೆ ಭೂಮಿಯ ರಾಜ ಬಲೀಂದ್ರನನ್ನು ಕರೆಯುವ ಸಲುವಾಗಿ ವರ್ಷಕ್ಕೊಮ್ಮೆ ಹಬ್ಬ ಮಾಡಿ ಕರೆಯುವುದು.  ಆದರೆ ನರಿಗಳು ಯಾರನ್ನು ಕರೆಯಲು ಕೂಗುತ್ತವೋ ವಿಜಿಗೆ ಗೊತ್ತಿರಲಿಲ್ಲ. ಕಬ್ಬು ತಿಂದ ಖುಷಿಯಲ್ಲಿ ಅವು `ದಿಗಣ’ ಹಾರಿ ಕೂಗುವುದು ಎನ್ನುತ್ತಿದ್ದರು ಅಜ್ಜಿ! ಅದೇ ನಿಜವೆಂದು ಅವಳೂ ನಂಬಿದ್ದಳು. ಆದರೆ ಕತೆಗಳಲ್ಲಿ ಓದಿದ ಕಳ್ಳನರಿ, ಸುಳ್ಳನರಿ, ಕುತಂತ್ರಿ ನರಿ, ಮೋಸಗಾರ ನರಿಯ ಪಾತ್ರ ಎಂದೂ ವಿಜಿಯೊಳಗೆ ಇಳಿಯಲೇ ಇಲ್ಲ. ನರಿಯೆಂದರೆ ಮುದ್ದಿನಪ್ರಾಣಿ ಅವಳಿಗೆ! ಗಾಢ ರಾತ್ರಿಗಳಲ್ಲಿ ಕಬ್ಬು, ಸೌತೆ ತಿಂದು ಹಾಡು ಹೇಳುವ ಜೀವನಪ್ರೀತಿಯ ನರಿ ಅವಳಿಗೆ ಸದಾ ಇಷ್ಟ. ಮನೆ ಎದುರಿನ ಗದ್ದೆಯಲ್ಲಿ ಬಸಳೆ ಚಪ್ಪರವನ್ನು ಹಾಕುತ್ತಿದ್ದರು. ಮಳೆಗಾಲದ ಮೂರ್ನಾಲ್ಕು ತಿಂಗಳುಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಬಸಳೆ ಚಪ್ಪರ ಇದ್ದೇ ಇರುತ್ತಿತ್ತು. ಉಳಿದ ತರಕಾರಿಗಳೂ ಇರುತ್ತಿದ್ದವು. ಕಾಡುಹಂದಿ ರಾತ್ರಿ ಬಂದು ಈ ಗಿಡಗಳ ಬುಡವನ್ನು ಒಕ್ಕಿ ಹೋಗುತ್ತಿತ್ತು. ಬೆಳಿಗ್ಗೆ ಹೋಗಿ ನೋಡುವಾಗ ಅಗೆದು ಹಾಕಿದ ಮಣ್ಣು; ಕೆಲವು ಗಿಡಗಳು ಬುಡಮೇಲಾಗಿ ಬಿದ್ದದ್ದು ಕಾಣುತ್ತಿತ್ತು. ರಾತ್ರಿ ಯಾವ ಮಾಯಕದಲ್ಲೋ ಬಂದು ಹೀಗೆಲ್ಲ ಕರಾಮತ್ತು ಮಾಡಿಹೋದ ಆ ಹಂದಿಗೆ ಅಜ್ಜಿ ಬಯ್ಯುತ್ತಿದ್ದರು. ಕಾಡುಹಂದಿ ಹೀಗೆ ಅಗೆದು ಹೋಗುವುದು ಯಾಕೆ ಎಂದು ವಿಜಿ ಕೇಳಿದಾಗ ಅದು ಗಿಡದ ಗಡ್ಡೆ ಹುಡುಕುವುದುಎಂದು ಅಜ್ಜಿ ಹೇಳುತ್ತಿದ್ದರು. ಅಂದರೆ ಬಸಳೆಯನ್ನು ಗೆಣಸೋ, ಮರಸಣಿಗೆಯೋ, ಕೆಸವೋ, ಮರಗೆಣಸೋ ಎಂದು ಭ್ರಮಿಸಿ, ಅಗೆದು ನೋಡುತ್ತಿತ್ತೇನೋ ಪಾಪದ್ದು! ‘ಕಾಡುಹಂದಿಗೆ ದೊಡ್ಡ ಕೊಂಬಿದೆ, ಅದರಿಂದ ನೆಲ ಅಗೆಯುತ್ತದೆ’ ಎಂದು ವಿಜಿ ಕಲ್ಪಿಸಿಕೊಂಡಿದ್ದಳು. ಆದರೆ ಮತ್ತೆ ಗೊತ್ತಾಯಿತು; ಕೊಂಬಲ್ಲ, ಅದಕ್ಕಿರುವುದು ಬಾಯಿಂದ ಹೊರಹೊರಟ ಬಲಿಷ್ಠ ಹಲ್ಲು ಎಂದು. ಕೆಲವೊಮ್ಮೆ ಸುಮ್ಮ ಸುಮ್ಮನೆ ಗದ್ದೆಯಕಂಟ(ಬದು)ಗಳನ್ನೆಲ್ಲ ಅಗೆದುಹಾಕಿ ಹೋಗುತ್ತಿತ್ತು. ಅಲ್ಲಿ ಹುಳಗಳನ್ನು ಹುಡುಕುತ್ತಿತ್ತೋ ಏನೋ! “ಈ ಹಂದಿಯಿಂದ ಇರಸ್ತಿಕೆ ಇಲ್ಲ” ಎಂದು ಅಜ್ಜಿ ಗೊಣಗುತ್ತಿದ್ದರು. ಇಂತಹ ಹಂದಿ ಮತ್ತು ಇತರ ಪ್ರಾಣಿಗಳ ಬೇಟೆಗಾಗಿ ಅವರೂರಿನ ಜನ ವರ್ಷಕ್ಕೊಂದು ಸಲ  ಹೋಗುತ್ತಿದ್ದರು. ನಾಯಿಗಳನ್ನು ಕರೆದುಕೊಂಡು ವಿವಿಧ ರೀತಿಯ ಬಲೆಗಳನ್ನೆಲ್ಲ ಹಿಡಿದು ಹುರುಪಿನಿಂದ ಅವರೆಲ್ಲ ಬೇಟೆಗೆ ಹೋಗುವುದನ್ನು ನೋಡಿ ಅದೇನೋ ಸಂಭ್ರಮವಿರಬೇಕು ಎಂದು ವಿಜಿ ಮೊದಮೊದಲು ಊಹಿಸಿದ್ದಳು. ನಾಯಿಗಳಂತೂ ಕಿವಿಗೆ ಗಾಳಿ ಹೊಗ್ಗಿದಂತೆ ಹತ್ತು ದಿಕ್ಕಿಗೆ ಮೂಗುಗಾಳಿ ಹಿಡಿಯುತ್ತಾ ನೆಗೆದು ಬಿಡುತ್ತಿದ್ದವು. ಅವುಗಳ ಕಾತುರ, ಉದ್ವೇಗ, ಚುರುಕುತನ ವರ್ಣಿಸಲಸಾಧ್ಯ. ಆದರೆ ಬೇಟೆ ಎಂದರೆ ಹೇಗಿರುತ್ತದೆಂದು ವಿಜಿಗೆ ಗೊತ್ತಿರಲಿಲ್ಲ. ಕ್ರಮೇಣ, ಜನರು ಹೆಗಲ ಮೇಲೆ ತೂಗುಹಾಕಿಕೊಂಡು ಬರುವ ಮೊಲ, ಹಂದಿ ಮತ್ತಿತರ ಸತ್ತ ಪ್ರಾಣಿಗಳನ್ನು ನೋಡಿ ಬೇಟೆಯೆಂದರೆ ಏನೆಂದು ತಿಳಿಯಿತು. ವಿಜಿಯ ಮನೆ ಮೆಟ್ಟಿಲಿನಿಂದ ಮುಂದಿನ ಹೆಜ್ಜೆ ಇಟ್ಟರೆ ಅದೇ ಗದ್ದೆ! ಮಳೆಗಾಲದಲ್ಲಂತೂ ನೀರು, ಕೆಸರು ಅಥವಾ ಬತ್ತದ ಸಸಿಗಳನ್ನು ಒಳಗೊಂಡ ಈ ಗದ್ದೆ ಹಲವು ರೂಪಗಳಲ್ಲಿ ಕಾಣಿಸುತ್ತಿತ್ತು. ಗದ್ದೆಯಲ್ಲಿದ್ದ ಕಪ್ಪೆಗಳೆಲ್ಲ ಮಳೆಗಾಲದ ರಾತ್ರಿ ಕೂಗುತ್ತಾ ಅದೇ ಒಂದು ದೊಡ್ಡ ಶ್ರುತಿ ಹಿಡಿದ ಸಂಗೀತ ಸಭೆಯಂತೆ ಕೇಳುತ್ತಿತ್ತು. ಈ ಕಪ್ಪೆಗಳಿಗೂ ವಿಜಿಯ ಮನೆ ಸದಸ್ಯರಿಗೂ ಹತ್ತಿರದ ಸಂಬಂಧ!  ‘ಗೋಂಕ್ರಕಪ್ಪೆ’ ಎಂದು ಕರೆಯುವ ದೊಡ್ಡ ಕಪ್ಪೆಯನ್ನು ಕಂಡರಂತೂ ವಿಜಿಯಂತಹ ಮಕ್ಕಳು ಎರಡು ಹೆಜ್ಜೆ ಹಿಂದೆ ಹಾರಿ ಹೆದರಿಕೊಳ್ಳುತ್ತಿದ್ದವು. ದೊಡ್ಡ, ಉರುಟು ಕಣ್ಣಿನ ಗ್ವಾಂಕ್ರ ಕಪ್ಪೆಗಳು ತೆಂಗಿನಕಟ್ಟೆಯಲ್ಲಿ, ಹೂವಿನ ಗಿಡಗಳ ಅಡಿಯಲ್ಲಿ ಹುಲ್‌ಕುತ್ರೆಯ ಅಡಿಯಲ್ಲಿ ಎಲ್ಲೆಲ್ಲೋ ಕುಳಿತುಕೊಳ್ಳುತ್ತಿದ್ದವು. ಕೆಸರಿನ ಬಣ್ಣಕ್ಕಿರುವ ಅವು ಫಕ್ಕನೆ ಕಾಣುತ್ತಿರಲಿಲ್ಲ. ಹತ್ತಿರ ಹೋದಾಗ ಚಂಗನೆ ಹಾರಿ ಹೆದರಿಸುತ್ತಿದ್ದವು! ಅವು ಕೂಗುವುದೂ ‘ಗ್ವಾಂಕ್ರ್  ಗ್ವಾಂಕ್ರ್ ‘ ಎಂಬ ದೊಡ್ಡ ಶಬ್ದದಲ್ಲಿ! ಬೇಸಗೆ ಕಳೆದು ಮೊದಲ ಮಳೆ ಬೀಳುವ ಸಮಯದಲ್ಲಿ ಸೂಚನೆ ಕೊಡುವುದು ಈ ಗ್ವಾಂಕ್ರ ಕಪ್ಪೆಗಳೇ! ಎಲ್ಲೋ ದೂರದಲ್ಲಿ ಮಳೆ ಬರುವಾಗಲೇ ಅಥವಾ ಮಳೆ ಬರುವ ವಾತಾವರಣ ಉಂಟಾದಾಗಲೇ ಇವುಗಳಿಗೆ ಗೊತ್ತಾಗುತ್ತೆಂದು ಕಾಣುತ್ತದೆ. ಒಂದೇ ಸಮನೆ ಕೂಗಲು ಶುರು ಮಾಡುತ್ತಿದ್ದವು. ಹಾಗೆ ಕಪ್ಪೆಗಳು ಕೂಗಿದಾಗ ‘ಹೋ ಮಳೆ ಬರುತ್ತದೆ’ ಎಂಬ ಖುಷಿ ಜನರಲ್ಲಿ ಮೂಡುತ್ತಿತ್ತು. ಇವಲ್ಲದೆ ಇತರ ಸಣ್ಣ ಸಣ್ಣ ಕಪ್ಪೆಗಳೂ ಇದ್ದವು. ಇವು ಆಗಾಗ ನೇರ ಮನೆಯೊಳಗೇ ಪ್ರವೇಶಿಸುತ್ತಿದ್ದವು. ಹಿಡಿಕಟ್ಟಿನಲ್ಲಿ ಓಡಿಸಿ ಹೊರಹಾಕಲು ಪ್ರಯತ್ನಿಸಿದರೆ ಛಲಬಿಡದೆ ಜಗಲಿಯಿಂದ ಚಾವಡಿಗೆ, ಪಡಸಾಲೆಗೆ, ಅಲ್ಲಿಂದ ಒಳಕೋಣೆಗೆ ಹೀಗೆ ಮನೆಯೊಳಗೇ ಹಾರುತ್ತ ಪಜೀತಿ ಮಾಡುತ್ತಿದ್ದವು. ಹಾಗಾಗಿ ರಾತ್ರಿ ಇವು ಒಳಗೆ ಬಂದಾಗ ಹಾರದಂತೆ ಒಂದು ಪಾತ್ರೆ ಮುಚ್ಚಿಟ್ಟು ಮರುದಿನ ಬೆಳಿಗ್ಗೆ ಹೊರಗೆ ಓಡಿಸುತ್ತಿದ್ದುದೂ ಇದೆ. ಈ ಕಪ್ಪೆಗಳ ಒಂದು ದುರ್ಗುಣವೆಂದರೆ ಉಚ್ಚೆ ಹಾರಿಸುವುದು. ಓಡಿಸಲು ಹೋದ ಕೂಡಲೇ ಉಚ್ಚೆ ಹಾರಿಸಿ ತಪ್ಪಿಸಿಕೊಳ್ಳುತ್ತಿದ್ದವು! ಬೆಕ್ಕು ನಾಯಿಗಳು ಇವನ್ನು ಮುಟ್ಟಲು ಹೋದರೆ ಕಣ್ಣಿಗೋ, ಮೂಗಿಗೋ, ಬಾಯಿಗೋ ಇವು ಹಾರಿಸಿದ ಉಚ್ಚೆ ಕುಡಿದುಕೊಂಡು ಸಪ್ಪೆ ಮುಖ ಹಾಕಿ ವಾಪಸ್ಸು ಬರುತ್ತಿದ್ದವು! ಆದರೆ ಇವು ಎಷ್ಟೇ ಉಪದ್ರ ಕೊಟ್ಟರೂ ಯಾರೂ ಕೊಲ್ಲುತ್ತಿರಲಿಲ್ಲ. “ಕಪ್ಪೆಕೊಂದ್ರೆ ಪಾಪ” ಎಂಬ ಆಡುಮಾತನ್ನುಎಲ್ಲರೂ ನಂಬುತ್ತಿದ್ದರು. ವಿಜಿಯ ಮನೆಯಲ್ಲಿ ಯಾರೂ ಯಾವತ್ತೂ ಒಂದೇ ಒಂದು ಕಪ್ಪೆಯನ್ನು ಹೊಡೆದದ್ದು, ಕೊಂದದ್ದನ್ನು ಅವಳು ನೋಡಿಲ್ಲ, ಇನ್ನು ಮರಕಪ್ಪೆಗಳೆಂದರೆ ವಿಜಿಗೆ ಭಾರೀ ಹೆದರಿಕೆ. ಇವು ಒಳಗೆ ಬಂದರೆ ಹೊರಹಾಕಲು ಸಾಧ್ಯವೇ ಇಲ್ಲ! ಕಡ್ಡಿಯಲ್ಲಿ ಮುಟ್ಟಲು ಹೋದರೆ ತಿರುಗಿ ಮುಖದ ಕಡೆಗೇ ಹಾರುತ್ತವೆ. ಇವುಗಳಿಗೆ ಮನುಷ್ಯರಂತೆ ಬುದ್ಧಿ ಗಿದ್ದಿ ಇದೆಯೇನೋ ಎಂದು ಸಂಶಯವಾಗುತ್ತಿತ್ತು ಅವಳಿಗೆ! ವಿಚಿತ್ರವಾಗಿ ವರ್ತಿಸುವ ಇವುಗಳು ಮೈಮೇಲೆ ಹಾರಿ ಕುಳಿತುಕೊಳ್ಳಲು ಮನುಷ್ಯನ ಕಡೆಗೇ ಹಾರುತ್ತವೆ. ಅದಲ್ಲದೆ ಮನೆಯ ಆಯಕಟ್ಟಿನ ಯಾವುದಾದರೂ ಜಾಗದಲ್ಲಿ ಕುಳಿತು ಅಶರೀರವಾಣಿ ಹೊರಡಿಸುತ್ತವೆ. ಮನೆಯೊಳಗೇ ಅವಿತುಕೊಂಡಿದ್ದರೂ ಇವುಗಳನ್ನು ಹುಡುಕುವುದು ಕಷ್ಟ. ಕಾಲುಗಳನ್ನು ಅಗಲವಾಗಿ ಹರಡಿಕೊಂಡು ಗೋಡೆಯ ಮೇಲೆ ಚಲಿಸುವ ಮರಕಪ್ಪೆಯನ್ನು ಕಂಡರೆ ಭಯವಾಗಿ ಆ ಜಾಗದಿಂದಲೇ ದೂರ ಓಡಿಹೋಗುತ್ತಿದ್ದಳು ವಿಜಿ. ಒಮ್ಮೊಮ್ಮೆ ಬಚ್ಚಲು ಮನೆಯೊಳಗೆ, ಕೋಣೆಯೊಳಗೆ ಕುಳಿತು ಇವು ಅಣಕಿಸುವಾಗ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ! ಆವಾಗೆಲ್ಲ ಎಷ್ಟೊಂದು ಗ್ವಾಂಕ್ರ ಕಪ್ಪೆ, ಮರಕಪ್ಪೆ, ಸಣ್ಣ ಚಿಲ್ಟಾರಿ ಕಪ್ಪೆಗಳು ಇದ್ದವು! ವಿಜಿ ಹೈಸ್ಕೂಲಿಗೆ ಹೋಗುತ್ತಿದ್ದ ಎಂಬತ್ತು-ತೊಂಬತ್ತರ ದಶಕದಲ್ಲಿ ಹಾವು-ಕಪ್ಪೆ ಹಿಡಿಯುವವರು ಬರಲಾರಂಭಿಸಿದರು. ಗದ್ದೆ ಬದಿ, ತೋಡಿನ ಬದಿ ಚೀಲಗಳನ್ನು ಹಿಡಿದುಕೊಂಡು ಅವರು ತಿರುಗಾಡುತ್ತಿದ್ದರು. `ಗೋಂಕ್ರಕಪ್ಪೆ ಮತ್ತು ಹಾವಿನ ಚರ್ಮಕ್ಕಾಗಿ ಅವುಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಯಾವುದೋ ಕಂಪನಿಯವರು ಇದನ್ನೆಲ್ಲ ಮಾಡಿಸುತ್ತಾರೆ’ ಎಂದು ಅಣ್ಣ ಹೇಳುತ್ತಿದ್ದ. ಹಳ್ಳಿಯ ಜನ ಎಷ್ಟು ಅಮಾಯಕರಾಗಿದ್ದರೆ, ತಮ್ಮಗದ್ದೆ ಬಯಲುಗಳಿಂದ ಅವುಗಳನ್ನು ಹಿಡಿದೊಯ್ಯಬಾರದೆಂದು ಗುರುತು ಪರಿಚಯವಿಲ್ಲದ ಆ ಮನುಷ್ಯರಿಗೆ ತಾಕೀತು ಮಾಡಬೇಕೆಂದೂ ಅವರಿಗೆ ತಿಳಿದಿರಲಿಲ್ಲ…!  ಹೀಗೆ ಹಾವು, ಕಪ್ಪೆಗಳನ್ನು ಹಿಡಿದು ಕೊಂದ ಅಂದಿನ ಆ ಕೆಲಸ ಪರಿಸರಕ್ಕೆ ದೊಡ್ಡ ನಷ್ಟ. ಆಮೇಲೆ ಗ್ವಾಂಕ್ರ ಕಪ್ಪೆಗಳು ಮೊದಲಿನಷ್ಟು ಕಾಣ ಸಿಗಲೇ ಇಲ್ಲ! ಓತಿಕ್ಯಾತಕ್ಕೆ ವಿಜಿಯ ಊರಿನಲ್ಲಿ  ‘ಕಾಯ್ಕಳ್ಳ’ ಎಂದು ಕರೆಯುತ್ತಿದ್ದರು. ಈ ಹೆಸರು

Read Post »

ಇತರೆ

ಅಂಬೇಡ್ಕರ್ ವಿಶೇಷ ಬರಹ ಭಾರತದ ಸಂವಿಧಾನದ ಪೀಠಿಕೆಯೂ..! ಭಾರತದ ಸಂವಿಧಾನದ ಪೀಠಿಕೆಯೂ..! ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ (೧೯೭೬ರಲ್ಲಿ ಇಂದಿರಾಗಾಂಧಿಯವರಿಂದ ಸೇರಿಸಲ್ಪಟ್ಟದ್ದು). ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ– ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ; ಗಳನ್ನು ದೊರಕಿಸಿ, ವೈಯುಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆಯನ್ನು ಪ್ರೋತ್ನಾಹಿಸಲು ನಿರ್ಧರಿಸಿ; ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗೆ ವಿಧಿಸಿಕೊಂಡೆವು. …… ಸಾಂವಿಧಾನಿಕ ಸ್ಥಾನಮಾನ– ಪೀಠಿಕೆಯು ಭಾರತದ ಸಂವಿಧಾನದ ಒಂದು ಅಂಗವಲ್ಲ; ಏಕೆಂದರೆ ಇದನ್ನು ನ್ಯಾಯಾಲಯದಲ್ಲಿ ಪ್ರಯೋಗಿಸಲು ಸಾಧ್ಯವಿಲ್ಲ. ಹಾಗಿದ್ದರೂ, ಸಂವಿಧಾನದಲ್ಲಿ ದ್ವಂದ್ವ ಇರುವಂತೆ ಕಂಡುಬರುವಲ್ಲಿ ಪೀಠಿಕೆಯನ್ನು ಉಪಯೋಗಿಸಿ ದ್ವಂದ್ವ ನಿವಾರಿಸಬಹುದಾದ ಕಾರಣ ಸರ್ವೋಚ್ಛ ನ್ಯಾಯಾಲಯವು ಪೀಠಿಕೆಯನ್ನು ಸಂವಿಧಾನದ ಒಂದು ಅಂಗವಾಗಿ ಪರಿಗಣಿಸಿದೆ. ಇದಕ್ಕೆ ಉದಾಹರಣೆ, ‘ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರ’ ಪ್ರಕರಣ. ಅದಾಗ್ಯೂ, ಪೀಠಿಕೆಯನ್ನು ಸಂವಿಧಾನದ ಲೇಖನದಲ್ಲಿ ದ್ವಂದ್ವ ಇದ್ದಾಗ ಮಾತ್ರ, ಮತ್ತಷ್ಟು ಅರ್ಥವತ್ತಾಗಿಸುವ ಸಾಧನವನ್ನಾಗಿ ಬಳಸಬಹುದೇ ಹೊರತು, ಹಕ್ಕು ಸಾಧಿಸುವ ಸಂವಿಧಾನದ ಒಂದು ಪ್ರತ್ಯೇಕ ವಿಭಾಗವೆಂದು ಪರಿಗಣಿಸಲಾಗದು. ಪೀಠಿಕೆಯ ಮೂಲಪ್ರತಿಯಲ್ಲಿ “ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ” ಎಂದಿತ್ತು. ಎರಡು ಹೆಚ್ಚಿನ ಪದಗಳಾದ “ಸಮಾಜವಾದಿ” ಮತ್ತು “ಜಾತ್ಯಾತೀತ” ಪದಗಳನ್ನು ೧೯೭೬ ರಲ್ಲಿ ಸಂವಿಧಾನದ ೪೨ ನೆಯ ತಿದ್ದುಪಡಿಯಲ್ಲಿ ಸೇರಿಸಲಾಯಿತು. ಆ ಸಮಯದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಿದ್ದರಿಂದ, ಸಂವಿಧಾನಕ್ಕೆ ತಿದ್ದುಪಡಿ ತರಲು ಸಾಧ್ಯವೇ ಎಂಬುದನ್ನು ಹಿಂದಿನ ಅನುಭವದ ಆಧಾರದಲ್ಲಿ ಪರಿಶೀಲಿಸಿ, ಸರ್ದಾರ್ ಸ್ವರಣ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ಈ ತಿದ್ದುಪಡಿಯನ್ನು ಕಾರ್ಯಗತಗೊಳಿಸಬಹುದೆಂದು ಶಿಫಾರಸು ಮಾಡಿತು. ಪೀಠಿಕೆಯ ಮಹತ್ವ– ಪೀಠಿಕೆಯಲ್ಲಿರುವ ಕೆಲವು ವಾಕ್ಯಗಳು, ಭಾರತದ ಸಂವಿಧಾನವು ರಚಿತವಾಗಿರುವ ಕೆಲವು ಮೂಲಭೂತ ಮೌಲ್ಯಗಳು ಮತ್ತು ಸಾತ್ವಿಕ ಸೂಚಿಗಳನ್ನು ಎತ್ತಿ ತೋರಿಸುತ್ತದೆ. ಈ ಪೀಠಿಕೆಯು ನಮ್ಮ ಸಂವಿಧಾನದ ದಿಕ್ಸೂಚಿಯಂತೆ ಕೆಲಸ ಮಾಡುತ್ತದೆ ಮತ್ತು ನ್ಯಾಯಾಧೀಶರು ಸಂವಿಧಾನವನ್ನು ಇದೇ ದಾರಿಯಲ್ಲಿ ವ್ಯಾಖ್ಯಾನಿಸಿ ಮುನ್ನಡೆಸುತ್ತಾರೆ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಪಡಿಸಿರುವ ಹಾಗು ತಿದ್ದುಪಡಿ ಮಾಡಲು ಸಾದ್ಯವಿಲ್ಲದ ಆಶಯಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಪೀಠಿಕೆಯು ಸಂವಿಧಾನದ ಒಂದು ಭಾಗವಾದರೂ ಅದನ್ನು ಅಥವಾ ಅದರ ಯಾವುದೇ ಅಂಶವನ್ನು ಕಾನೂನಿಗನುಸಾರವಾಗಿ ಜಾರಿ(ಹೇರು) ಮಾಡುವಂತಿಲ್ಲ. ಪೀಠಿಕೆಯ ಮೊದಲ ಪದಗಳು – “ನಾವು, ಜನಗಳು ” – ಭಾರತಲ್ಲಿ ಅಧಿಕಾರ ಜನಗಳ ಕೈನಲ್ಲಿದೆ ಎಂಬ ಅಂಶದ ಪ್ರಾಮುಖ್ಯತೆಯನ್ನು ಹೇಳುತ್ತದೆ. ಪೀಠಿಕೆಯು, ಭಾರತದ ಪ್ರತಿಯೂಬ್ಬ ನಾಗರೀಕ ಹಾಗೂ ಸರ್ಕಾರ ಅನುಸರಿಸಬೇಕಾದ ಮತ್ತು ಸಾಧಿಸಬೇಕಾದ ಬಹು ಮುಖ್ಯ ರಾಷ್ಟ್ರೀಯ ಧ್ಯೇಯಗಳನ್ನು ಬಿಡಿಸಿ ಹೇಳುತ್ತದೆ. ಅವುಗಳೆಂದರೆ ಸಮಾಜವಾದ, ಜಾತಿ ನಿರಪೇಕ್ಷತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ. ಕೊನೆಯದಾಗಿ ಅದರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ದಿನಾಂಕ – ನವೆಂಬರ್ ೨೬ ೧೯೪೯ ಎಂದು ಹೇಳುತ್ತದೆ. ಪೀಠಿಕೆಯ ಕೆಲವು ಪದಗಳ ನಿರೂಪಣೆ ಸಂಪಾದಿಸಿ ಸಾರ್ವಭೌಮ– ಸಾರ್ವಭೌಮ ಎಂಬ ಪದದ ಅರ್ಥ ಪರಮಾಧಿಕಾರ ಅಥವಾ ಸ್ವತಂತ್ರ ಎಂದು. ಭಾರತವು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಸಾರ್ವಭೌಮ. ಬಾಹ್ಯವಾಗಿ ಯಾವುದೇ ವಿದೇಶೀ ಶಕ್ತಿಯ ಅಧೀನದಲ್ಲಿ ಭಾರತ ಇಲ್ಲ ಹಾಗೂ ಆಂತರಿಕವಾಗಿ ಒಂದು ಮುಕ್ತ, ಜನರಿಂದ ಆರಿಸಲ್ಪಟ್ಟ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ. ಭಾರತ ಕಾಮನ್ವೆಲ್ತ್ ರಾಷ್ಟ್ರಗಳ ಒಕ್ಕೂಟದಲ್ಲಿ ಸದಸ್ಯ ಸ್ಥಾನ ಪಡೆದಿದೆ. ಹಾಗಂತ ಬ್ರಿಟೀಷರ ಅಡಿಯಾಳಲ್ಲ. ವಿಶ್ವದಲ್ಲಿ ಉತ್ತಮವಾದ ಸ್ಥಾನಮಾನ ಪಡೆಯಲು ಇದು ಅವಶ್ಯಕ. ಅಂತರರಾಷ್ಟ್ರೀಯ ವ್ಯಾಪಾರವನ್ನು ಕೈಗೊಂಡು ದೇಶದ ಆರ್ಥಿಕ ಭದ್ರತೆಗೆ ಈ ರೀತಿಯ ಸದಸ್ಯತ್ವ ಅವಶ್ಯಕವಾಗಿದೆ. ಸಮಾಜವಾದಿ– ಸಮಾಜವಾದಿ ಪದವು ಪೀಠಿಕೆಗೆ ೧೯೭೬ರಲ್ಲಿ ೪೨ನೇ ತಿದ್ದುಪಡಿಯಿಂದ ಸೇರಿಸಲ್ಪಟ್ಟಿತು. ಇದರ ಅರ್ಥ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ. ಸಾಮಾಜಿಕ ಸಮಾನತೆಯ ಅರ್ಥ ಧರ್ಮ, ಜಾತಿ, ಲಿಂಗ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು. ಸಾಮಾಜಿಕ ಸಮಾನತೆಯ ಅಡಿಯಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ಮತ್ತು ಅವಕಾಶಗಳಿವೆ. ಆರ್ಥಿಕ ಸಮಾನತೆಯ ಅರ್ಥ ಭಾರತ ಸರಕಾರ ಎಲ್ಲರಿಗೂ ಸಮಾನ ಆರ್ಥಿಕ ಅವಕಾಶಗಳನ್ನು ಹಾಗೂ ಎಲ್ಲರಿಗೂ ಯೋಗ್ಯವಾದ ಜೀವನಮಟ್ಟವನ್ನು ಕಲ್ಪಿಸಲು ಯತ್ನಿಸುತ್ತದೆ. ಇದರ ತತ್ತ್ವಾರ್ಥ ಒಂದು ಸುಖೀ ರಾಜ್ಯದ ನಿರ್ಮಾಣಕ್ಕೆ ಬದ್ಧರಾಗುವುದಾಗಿದೆ. ಭಾರತವು ಮಿಶ್ರ ಅರ್ಥವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರಕಾರವು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಬಹಳಷ್ಟು ಕಾನೂನುಗಳನ್ನು ಮಾಡಿದೆ. ಇವುಗಳಲ್ಲಿ ಅಸ್ಪೃಶ್ಯತೆ ಮತ್ತು ಜೀತಪದ್ಧತಿ ನಿವಾರಣೆ, ಸಮಾನ ಭತ್ಯೆ ಮಸೂದೆ ಮತ್ತು ಬಾಲಕಾರ್ಮಿಕ ನಿಷೇಧ ಮಸೂದೆ ಸೇರಿವೆ. ಜಾತ್ಯತೀತ– ಜಾತ್ಯತೀತ ಎಂಬ ಪದವನ್ನು ಪೀಠಿಕೆಗೆ ೧೯೭೬ರ ೪೨ನೇ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಇದರ ಅರ್ಥ ಎಲ್ಲ ಧರ್ಮಗಳ ಸಮಾನತೆ ಮತ್ತು ಧಾರ್ಮಿಕ ಸಹನೆ. ಭಾರತವು ಯಾವುದೇ ಅಧಿಕೃತ ಧರ್ಮವನ್ನು ಹೊಂದಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಧರ್ಮದ ಪ್ರಚಾರವನ್ನು ಮಾಡುವ ಹಾಗೂ ಆಚರಿಸುವ ಹಕ್ಕಿದೆ. ಸರಕಾರವು ಯಾವುದೇ ಧರ್ಮದ ಪರ ಅಥವಾ ವಿರುದ್ಧ ನಿಲುವನ್ನು ತಳೆಯುವಂತಿಲ್ಲ. ಎಲ್ಲ ಪ್ರಜೆಗಳು ತಮ್ಮ ಧಾರ್ಮಿಕ ಭಾವನೆಗಳ ಹೊರತಾಗಿಯೂ ಕಾನೂನಿನ ಕಣ್ಣಿನಲ್ಲಿ ಸಮಾನರಾಗಿದ್ದಾರೆ. ಸರಕಾರೀ ಅನುದಾನಿತ ಶಾಲೆಗಳಲ್ಲಿ ಯಾವುದೇ ಧರ್ಮದ ಆಚಾರ-ಪ್ರಚಾರ ನಡೆಯುವಂತಿಲ್ಲ. ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ. ಪ್ರಜಾಸತ್ತಾತ್ಮಕ– ಪ್ರಜಾಸತ್ತಾತ್ಮಕವಾದ ಭಾರತ ದೇಶದ ಪ್ರಜೆಗಳು ಕೇಂದ್ರ, ರಾಜ್ಯ ಹಾಗೂ ಪ್ರಾದೇಶಿಕ ವಿಭಾಗಗಳಲ್ಲಿ ತಮ್ಮ ಸರಕಾರವನ್ನು ಸಾರ್ವತ್ರಿಕ ಮತಾಧಿಕಾರದ ಪದ್ಧತಿಯ ಮೂಲಕ ಆರಿಸುತ್ತಾರೆ. ಭಾರತದ ಎಲ್ಲ ೧೮ ವರ್ಷಗಳ ವಯೋಮಿತಿಯ ಮೇಲಿರುವ ಕಾನೂನುಬದ್ಧ ಮತ ಚಲಾಯಿಸುವ ಅಧಿಕಾರ ಹೊಂದಿರುವ ಪ್ರಜೆಗಳು ಧರ್ಮ, ಜಾತಿ, ಮತ, ಲಿಂಗ ಅಥವಾ ಶಿಕ್ಷಣ ಮಟ್ಟದ ಭೇದವಿಲ್ಲದೇ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಗಣತಂತ್ರ– ಗಣತಂತ್ರವು ರಾಜಪ್ರಭುತ್ವಕ್ಕೆ ವಿರುದ್ದವಾದದ್ದು. ರಾಜಪ್ರಭುತ್ವದಲ್ಲಿ ಒಂದು ರಾಜ್ಯದ ಮುಖ್ಯಸ್ತರು ವಂಶ ಪಾರಂಪರೆಯ ಆಧಾರದ ಮೇಲೆ ಜೀವಮಾನದವರೆಗೆ ಅಥವಾ ಸಿಂಹಾಸನವನ್ನು ತ್ಯಜಿಸುವವರೆಗೆ ನೇಮಿತಗೊಳ್ಳುತ್ತಾರೆ. ಪ್ರಜಾಪ್ರಭುತ್ವದ ಗಣತಂತ್ರದಲ್ಲಿ, ಆ ರಾಜ್ಯದ ಮುಖ್ಯಸ್ತನನ್ನು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಆರಿಸಲಾಗುವುದು. ರಾಷ್ಟ್ರಪತಿಯನ್ನು ೫ ವರ್ಷಗಳ ಒಂದು ನಿರ್ಧಿಷ್ಟ ಅವಧಿಗೆ ಚುನಾಯಿಸಲಾಗುವುದು..! ******************************************* ಕೆ.ಶಿವು.ಲಕ್ಕಣ್ಣವರ

Read Post »

ಇತರೆ

ಅಂಬೇಡ್ಕರ್ ಜಯಂತಿ ವಿಶೇಷ ಬರಹ ಅಸ್ಪೃಶ್ಯತೆಯ ವಿರುದ್ದ ಅಂಬೇಡ್ಕರ್ ರವರ ಹೋರಾಟ ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ ‘ಮನುಸ್ಮೃತಿ’ ಎಂದು ಅಂಬೇಡ್ಕರ್ ನಂಬಿದ್ದರು. ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ. ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು. ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು. ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, “ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು”ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು: ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ. ಅಂಬೇಡ್ಕರ್ ರವರು ಈ ಭೂಮಿ ಮೇಲೆ ಜನಿಸದಿದ್ದರೆ ಇಂದು ಅನೇಕ ಅಸ್ಪೃಷರ ಸ್ಥಿತಿ ಊಹಿಸಲೂ ಅಸಾಧ್ಯ. ಅಸ್ಪೃಶ್ಯ ರಿಗೆ ನ್ಯಾಯ ಒದಗಿಸಲು ಅವರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಅವರ ನಡೆ ನುಡಿ ಆದರ್ಶ ಪ್ರತಿಯೊಬ್ಬರಿಗೂ ಆದರ್ಶಪ್ರಾಯ. *************************** ಆಶಾ ಸಿದ್ದಲಿಂಗಯ್ಯ .

Read Post »

ಇತರೆ

ಯುಗ ಯುಗಾದಿ ಕಳೆದರೂ..!

ಯುಗಾದಿ ವಿಶೇಷ ಬರಹ ಯುಗ ಯುಗಾದಿ ಕಳೆದರೂ..! ಯುಗ ಯುಗಾದಿ ಕಳೆದರೂ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.                     ಹೊಂಗೆ ಹೂವ ತೊಂಗಳಲಿ,                     ಭೃಂಗದ ಸಂಗೀತ ಕೇಳಿ                     ಮತ್ತೆ ಕೇಳ ಬರುತಿದೆ.                     ಬೇವಿನ ಕಹಿ ಬಾಳಿನಲಿ                     ಹೂವಿನ ನಸುಗಂಪು ಸೂಸಿ                     ಜೀವಕಳೆಯ ತರುತಿದೆ. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ.                     ನಿದ್ದೆಗೊಮ್ಮೆ ನಿತ್ಯ ಮರಣ,                     ಎದ್ದ ಸಲ ನವೀನ ಜನನ,                     ನಮಗೆ ಏಕೆ ಬಾರದು?                     ಎಲೆ ಸನತ್ಕುಮಾರ ದೇವ,                     ಎಲೆ ಸಾಹಸಿ ಚಿರಂಜೀವ,                     ನಿನಗೆ ಲೀಲೆ ಸೇರದೂ. ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.               # ಅಂಬಿಕಾತನಯದತ್ತ ……………………………………………. ಯುಗಾದಿ ಹಬ್ಬದ ಮಹತ್ವವೂ..! ಯುಗಾದಿ ಹಬ್ಬ ಆಗಲೇ ಬಂದಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ… ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಿಸುವ ವಿಧಾನ..! ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಯುಗಾದಿ ಆಚರಣೆ ಎದುರಿಗಿದೆ. ಮುಂಬರುವ ಮಂಗಳವಾರ ಏಪ್ರಿಲ್​ 13 ನೇ ತಾರೀಕಿನಂದು ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.  ತಮಿಳುನಾಡು ಮತ್ತು ಕೇರಳದಲ್ಲಿ ವಿಷು ಎಂದು ಈ ಹಬ್ಬವನ್ನು ಕರೆಯಲಾಗುತ್ತದೆ. ಇನ್ನು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದರೆ, ಪಾಡ್ಯಮಿ ದಿವಸ ಗುಡಿ ಏರಿಸುವುದು ಎಂದರ್ಥ. ಅಂದರೆ, ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವ ಸಂಪ್ರದಾಯವಿದೆ. ಇದು ಹೊಸ ವರ್ಷದ ಆಗಮಕ್ಕೆ ಸಂಕೇತವಾಗಿದೆ. ಜೊತೆಗೆ ಮನೆಯಲ್ಲಿ ವೀಶೆಷ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ. ಪೂಜೆ ಅಂದರೆ ಬೇರೇನೂ ಅಲ್ಲ. ನಮ್ಮ ಬದುಕಿನ ಹೊಸ ಜೀವನದ ಮುಖ್ಯ ವಿಚಾರಗಳು ಹೇಗಿರಬೇಕೆಂಬ ವಿಧಾನದ ಕ್ಯಾಲೆಂಡರ್ ಅಷ್ಟೇ. ಯುಗಾದಿ ಹಬ್ಬ ಅಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ. ಹೊಸ ವರ್ಷದ ಜೊತೆಗೆ ಹೊಸ ಭರವಸೆ ಮತ್ತು ಹೊಸ ಚೈತನ್ಯ ತುಂಬುವ ದಿನ. ಯುಗ, ಅಂದರೆ ವಯಸ್ಸು ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿ ‘ಯುಗಾದಿ’ ಎಂಬ ಹೆಸರೂ ಬಂದಿದೆ. ಯುಗಾದಿ ಆಚರಣೆ– ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಮೊದಲ ದಿನವೂ ಹೌದು. ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭದಲ್ಲಿ ಯುಗಾದಿ ಹಬ್ಬ ಬರುವುದು. ಚಂದ್ರಮನ ಯುಗಾದಿ 2021 ದಿನಾಂಕ ಮತ್ತು ಮುಹೂರ್ತ ಸಮಯವೂ– ಯುಗಾದಿ ಹಬ್ಬ 2021 ರ ಏಪ್ರಿಲ್ 12 ನೇ ತಾರೀಕು ಪ್ರತಿಪದ ತಿಥಿಯಂದು ಬೆಳಿಗ್ಗೆ 7:59 ಕ್ಕೆ ಆರಂಭಗೊಳ್ಳುತ್ತದೆ. ಮರುದಿನ ಏಪ್ರಿಲ್​ 13 ನೇ ತಾರೀಕು ಬೆಳಿಗ್ಗೆ 10.16 ರ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ ಹಿಂದೂ ಸಾಂಪ್ರದಾಯದಂತೆ. ಈ ಆಚರಣೆ ಗೊಡ್ಡು ಆಚರಣೆ ಆದರೆ ಯಾವ ಫಲವೂ ಇಲ್ಲ. ಸರ್ವವಿಧದ, ಸರ್ವ ಜಾತಿ ಜನಾಂಗದ ಜನರ ಒಗೂಡಿಕೆವೊಂದೆಗೇ ಆಚರಣೆ ಆಗಬೇಕು. ಹಬ್ಬಕ್ಕೆ ಸಿದ್ಧತೆಗಳು– ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಹಬ್ಬಕ್ಕೆ ಬೆಳಿಗ್ಗೆಯಿಂದಲೇ ಮೆರಗುಗೊಳಿಸಲಾಗುತ್ತದೆ. ಯುಗಾದಿಯಂದು ಹೊಸ ಬಟ್ಟೆ, ಹೊಸ ವಿಚಾರ ಹೊಸ ಭರವಸೆಯತ್ತ ಇಡೀ ವರ್ಷ ಸಾಗಲಿ ಎಂಬ ನಂಬಿಕೆಯ ಜೊತೆ ಮುನ್ನಡೆಯವ ಹೆಜ್ಜೆಯಾಗಿರುತ್ತದೆ ಯುಗಾದಿ. ಯುಗಾದಿ ಹಬ್ಬದ ಆಚರಣೆ ಹೇಗೆ?– ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸಡಗರ, ಸಂಭ್ರಮ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗಿನ ರಂಗೋಲಿ ಬಿಡಿಸುತ್ತಾರೆ. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆಯ ಎದುರಿನ ಬಾಗಿಲು, ದೇವಾಲಯದ ಬಾಗಿಲಿಗೆ ಮಾವಿನ ಎಲೆಗಳ ಹಾರ (ತಳಿರು ತೋರಣ) ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದವಾಗಿ ಸೇವಿಸುತ್ತಾರೆ. ಇದಿಷ್ಟೇ ಆದರೆ ಸಾಲದು ಹೊಸ ಸವಂತವನು ಹೊಸ ಜೀವನದ ಭರವಸೆಯೊಂದಿಗೆ ಆಚರಣೆಯಾಗಬೇಕು. ಸರ್ವರಳೊಂದುಗೂಡಿ ಬದುಕಿನ ಆಚರಣೆ ಆಗಬೇಕು. ಆ ಮಾತ್ರ ಈ ಯುಗಾದಿ ಆಚರಣೆಗೆ ಮಹತ್ವ ಬರುವುದು..! ************************ ಕೆ.ಶಿವು.ಲಕ್ಕಣ್ಣವರ

ಯುಗ ಯುಗಾದಿ ಕಳೆದರೂ..! Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿಯೆಂಬ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ಹೇಳುವುದು ಪ್ರಮುಖವಾಗಿ ಭಾಷೆ,  ಆಚರಣೆ-ಸಂಪ್ರದಾಯಗಳು, ಉಡುಗೆ-ತೊಡುಗೆ, ಆಹಾರ ಮೊದಲಾದವುಗಳಿಗೆ ಸಂಬಂಧಿಸಿದಂತೆ . ಇಲ್ಲಿನ  ವೈವಿಧ್ಯತೆ ಎಷ್ಟೆಂದರೆ  ರಾಜ್ಯ ರಾಜ್ಯಗಳ ನಡುವಿನ ಮಾತಿರಲಿ, ಅಕ್ಕಪಕ್ಕದ ತಾಲೂಕುಗಳಲ್ಲಿ, ಊರುಗಳಲ್ಲೇ ಭಿನ್ನತೆಯನ್ನು ಕಾಣಬಹುದು.   ಆದರೆ ಕಳೆದ 2 ದಶಕಗಳಿಂದ ಇಂಥ ಪ್ರಾದೇಶಿಕ ಭಿನ್ನತೆಗಳು ಬದಲಾಗುತ್ತಿವೆ  ಅಥವಾ  ಕೆಲವು  ಇಲ್ಲವಾಗಿವೆ. ಇದಕ್ಕೆ ಬಹುಮುಖ್ಯ ಕಾರಣ ದೊಡ್ಡ ಪಟ್ಟಣ ಹಾಗೂ ಶಹರಗಳಿಗೆ ಉದ್ಯೋಗ ಹಾಗೂ  ಜೀವನ ನಿರ್ವಹಣೆಯ ದಾರಿಗಳನ್ನು ಅರಸುತ್ತ ನಡೆದಿರುವ  ನಿರಂತರ ವಲಸೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತದ ಮಹಾನಗರಗಳಿಗೆ ಲಗ್ಗೆ ಇಟ್ಟ ಐಟಿಬಿಟಿ ಕಂಪನಿಗಳು ಈ ನಗರಗಳ ಬದುಕನ್ನು ಅನಾಮತ್ತಾಗಿ ಎತ್ತಿ ಪಲ್ಟಿ ಮಾಡಿದವು.  ವಿದೇಶಿ ಮೂಲದ ಕಂಪನಿಗಳ ಮೂಲಕ  ಹಣದ ಹೊಳೆ  ಇಲ್ಲಿ ಹರಿಯಲಾರಂಭಿಸಿದಂತೆ ಅದರ ಉಪ ಉತ್ಪನ್ನವಾಗಿ ಹಳ್ಳಿಯ, ಸಣ್ಣ ಪಟ್ಟಣಗಳ ಯುವಜನತೆ ನಗರಗಳಿಗೆ ಗುಳೆ ಬಂದಿತು. ಅವರ ಮೂಲ ಊರುಗಳಲ್ಲಿ ಮಧ್ಯವಯಸ್ಸು ಮೀರಿದವರಷ್ಟೇ ಇರುವುದು ಅಂದಿನ ವಾಸ್ತವವಾಗಿತ್ತು.  ಇದರಿಂದ ದೊಡ್ಡ ಪ್ರಮಾಣದಲ್ಲಿ  ಆರ್ಥಿಕ, ರಾಜಕೀಯ ಬದಲಾವಣೆಗಳಾದರೆ, ಅದಕ್ಕಿಂತ ತೀವೃ ಪರಿಣಾಮಗಳು ಸಾಮಾಜಿಕವಾಗಿ ಕಂಡು ಬಂದವು. ಅದರಲ್ಲಿ ವಿಶೇಷವಾಗಿ  ನಮ್ಮ ಹಬ್ಬ- ಹರಿದಿನಗಳ ಆಚರಣೆಯಲ್ಲಾದ ಬದಲಾವಣೆಗಳು. ನಮ್ಮ ಬಹುತೇಕ ಹಬ್ಬಗಳನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತ ಈಗ ದಶಕಗಳೇ ಕಳೆದಿವೆ. ನಗರಗಳಲ್ಲಿ   ಒದಗುವಿಕೆ, ಸಮಯಾವಕಾಶ, ರಜೆ, ಬಿಡುವು ಮೊದಲಾದ ವೈಯುಕ್ತಿಕವಾಗಿ ಮನೆಯ ಸದಸ್ಯರ ಅನುಕೂಲತೆಗಳಿಗೆ ತಕ್ಕಂತೆ ಹಿಗ್ಗುವ, ಕುಗ್ಗುವ ಅಥವಾ ಇಲ್ಲವಾಗುವ ಒಂದು ವಿಶೇಷ ದಿನ ಹಬ್ಬದ ದಿನ.  ಗ್ರಾಮೀಣ ಭಾಗಗಳಲ್ಲಿ ಅದು ಕಟ್ಟುನಿಟ್ಟಿನ  ಆಚರಣೆ , ಸಂಪ್ರದಾಯ, ರೀತಿ-ರಿವಾಜು, ಪರಂಪರೆಗಳ ಒಟ್ಟೂ ಮೊತ್ತ. ಅನೇಕ ಬಾರಿ  ಊರಿಗೆ ಊರೇ ಭಾಗವಹಿಸಿ ಸಂಭ್ರಮಿಸುವ ಊರ  ಹಬ್ಬ.         ನಮ್ಮ ಸಂವಿಧಾನ  ‘ ಇಂಡಿಯಾ ದಟ್ ಈಸ್ ಭಾರತ್ ‘ ಎಂದು ನಮ್ಮ ದೇಶವನ್ನು ಗುರುತಿಸಿದೆಯಷ್ಟೇ. ಅದರಂತೆ ಇಂಡಿಯಾ ಆಧುನಿಕ, ನಗರ ಕೇಂದ್ರಿತ  ದೇಶವನ್ನು ಪ್ರತಿನಿಧಿಸಿದರೆ ಭಾರತ ಅದಕ್ಕೆ ತದ್ವಿರುದ್ಧವಾದ ಹಿಂದುಳಿದ, ಗ್ರಾಮೀಣ ದೇಶವನ್ನು ಪ್ರತಿನಿಧಿಸುತ್ತದೆಯೋ ಎಂಬಷ್ಟು ಕಂದಕ ಈ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಇತ್ತೀಚೆಗೆ  ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನಗರಗಳಲ್ಲಿ ಹಬ್ಬಗಳೆಂದರೆ ಜೋರಾದ ಹೂ-ಹಣ್ಣುಗಳ ಮಾರಾಟ, ಬೇಕರಿಗಳಲ್ಲಿ ತರಹೆವಾರು ಸಿಹಿತಿನಿಸುಗಳ ಜೋಡಣೆ, ಅಂಗಡಿಗಳಲ್ಲಿ ಭರಾಟೆಯ ಸೇಲ್, ಡಿಸ್ಕೌಂಟುಗಳ ಆಕರ್ಷಣೆ, ಹೊಟೆಲ್ಲುಗಳಲ್ಲಿ ಹಬ್ಬದಡಿಗೆಯ ಊಟ…ಎಲ್ಲವೂ ದುಬಾರಿ.  ಇಲ್ಲಿಗೆ ನಿಲ್ಲದೆ ಈ ಹಬ್ಬಗಳ ಸಡಗರ ದೇವಾಲಯಗಳಿಗೂ ವಿಸ್ತರಿಸಿದೆ. ಮೊದಲಾದರೆ ಕೆಲ ಹಬ್ಬಗಳಲ್ಲಿ ಮಾತ್ರ   ಅಭಿಷೇಕ, ಹೋಮಗಳು   ದೇವಾಲಯಗಳಲ್ಲಿ ನಡೆಯುತ್ತಿದ್ದವು. ಇಂದು ಹೆಚ್ಚವರಿ  ಗಳಿಕೆಗಾಗಿ  ಎಲ್ಲ ಹಬ್ಬಗಳಿಗೂ ಅವು ನಡೆಯುತ್ತವೆ.  ನಗರಗಳ ಹಬ್ಬಗಳೆಂದರೆ ದುಂದು, ಖರ್ಚು, ಹೆಚ್ಚು ಕಸ, ಮಾಲಿನ್ಯ ಎಂಬಂತಾಗಿದೆ  ಪರಿಸ್ಥಿತಿ. ಇದಕ್ಕೆ ಹಬ್ಬಗಳ ಮಾರನೇ ದಿನ ಬೀದಿಗಳನ್ನು  ಸ್ವಚ್ಛಗೊಳಿಸಲು ಹೆಣಗುವ  ಪೌರಕಾರ್ಮಿಕರ ಬವಣೆಯೇ ಸಾಕ್ಷಿ. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ಸರಳ,  ನೆಲಮೂಲ ಸಂಸ್ಕೃತಿಯ. ಆಚರಣೆಯಾದ,  ಪರಿಸರ ಸ್ನೇಹಿ ಹಬ್ಬಗಳು ನನಗಿಷ್ಟ.    ಭಾರತೀಯ ಋತುಮಾನಕ್ಕೆ ಅನುಗುಣವಾಗಿ ಬರುವ ಯುಗಾದಿ  ವರ್ಷದ ಮೊದಲ ಹಬ್ಬ. ಪ್ರಕೃತಿಯ ನಲಿವಿನಲ್ಲಿ  ನಾವೂ ಜೊತೆಯಾಗುವ ಹಬ್ಬ. ನಮ್ಮ ಎಲ್ಲ ಹಬ್ಬಗಳೂ ಪ್ರಕೃತಿಗೆ ಪೂರಕವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.  ಇದಕ್ಕೆ ಯುಗಾದಿಯೂ ಹೊರತಲ್ಲ. ವಸಂತನ ಆಗಮನವನ್ನು ಪ್ರಕೃತಿಯು ಹೊಸ ಹೂ-ಹಣ್ಣುಗಳನ್ನು ಒದಗಿಸುವುದರ ಮೂಲಕ ಸಂಭ್ರಮಿಸಿದರೆ,  ಅವುಗಳನ್ನು ಬಳಸಿ,  ವ್ಯಂಜನಗಳನ್ನು ತಯಾರಿಸಿ ಮನೆ-ಮಂದಿ, ಊರು-ಕೇರಿ ಸವಿದು ಸಂಭ್ರಮ ಪಡುತ್ತವೆ. ಅಂದು ತಯಾರಾಗುವ ಪದಾರ್ಥಗಳಾದರೂ ಎಂಥವು!   ನಾವು ಚಿಕ್ಕವರಿದ್ದಾಗ  ಮಾವಿನಕಾಯಿ ಚಿತ್ರಾನ್ನ,  ಮಾವಿನ ಉಪ್ಪಿನಕಾಯಿ, ಅಮಟೆಕಾಯಿಯ ಹುಳಿಸಿಹಿಪಲ್ಯ,  ಹೋಳಿಗೆ, ಕಡಲೆ ಬೇಳೆಯ ಸಿಹಿತಿನಿಸು ಮಾಲ್ದಿ, ಉದ್ದಿನ ಕಾಳಿನ ಷಂಡಿಗೆ ಇತ್ಯಾದಿ. ಜೊತೆಗೆ ಹದಮಜ್ಜಿಗೆ ಎಂದು ಕರೆಯಲ್ಪಡುವ ಮಸಾಲೆ ಮಜ್ಜಿಗೆ ಇವು ಮುಖ್ಯವಾದ ಕೆಲವು. ಇವನ್ನೆಲ್ಲ ಸಾಂಪ್ರದಾಯಿಕ ರುಚಿಕಟ್ಟಿನಲ್ಲೇ ಮಾಡುತ್ತಿದ್ದ ಅಮ್ಮನ ಕೈ ಅಡುಗೆಯ ರುಚಿಯೇ ರುಚಿ. ಇದನ್ನು ಅಪ್ಪ-ಅಮ್ಮ, ಅಕ್ಕ-ಅಣ್ಣಂದಿರೊಂದಿಗೆ  ಜೊತೆಯಾಗಿ  ನೆಲದ ಮೇಲೆ ಮಣೆಯಲ್ಲಿ ಕೂತು  ಹಿತ್ತಲ  ಬಾಳೆ ಎಲೆಯಲ್ಲಿ  ಉಂಡರೆ ಹಬ್ಬದ ಮಜವೇ ಬೇರೆ.     ಯುಗಾದಿ  ಹಬ್ಬದಲ್ಲಿ  ಮೊದಲು ಮನೆಯಲ್ಲಿ ಮಾಡುತ್ತಿದ್ದುದು ಹಿರಿಯರ ಪೂಜೆ. ಇದೊಂದು ಭಾವನಾತ್ಮಕ ಸಂದರ್ಭ. ನಾವು ಕಾಣದ ನಮ್ಮ ಅಜ್ಜ, ಮುತ್ತಜ್ಜಂದಿರನ್ನು ಸಾಂಕೇತಿಕವಾಗಿ ಹೊಸ ಬಟ್ಟೆ ಇಟ್ಟು, ಅವರಿಗೆ ದೊಡ್ಡ ಬಾಳೆ ಎಲೆಯಲ್ಲಿ ಎಡೆ ಇಟ್ಟು ಮನೆಯ ಎಲ್ಲರೂ ಆರತಿ ಮಾಡಿ ಕೈಮುಗಿಯುವಾಗ ಗಂಟಲುಬ್ಬಿ ಬರುವಂತೆ ದುಃಖ. ಕಣ್ಣರಿಯದಿದ್ದರೂ ಕರುಳು ಅರಿಯುವ ಬಾಂಧವ್ಯ. ಆ ಕ್ಷಣಕ್ಕೆ ಸಂಭ್ರಮವೆಲ್ಲ  ಮರೆಯಾಗಿ ಅಲ್ಲಿ ನೆಲೆಸುತ್ತಿದ್ದುದು ಗಂಭೀರ ಮೌನ.  ಇಂಥ ಆಚರಣೆಗಳು ನನ್ನನ್ನು ಸೋಲಿಸುತ್ತವೆ. ಬದುಕಿನ ವಿರಾಟ್ ದರ್ಶನವಾಗುವುದು ಇಂಥ ನಾಜೂಕಿನ ಸಂದರ್ಭದಲ್ಲಿ. ಆಗ ಚಿಕ್ಕವರಾದ ನಾವು ಧರಿಸುತ್ತಿದ್ದ ಹೊಸ ಬಟ್ಟೆಯ ಮೋಹಕ್ಕೂ ಮೀರಿ ಕಾಣದ ಹಿರಿಯರ ಅವ್ಯಕ್ತ ಇರುವು ನಮ್ಮನ್ನು ಹಿಡಿದು ಕಂಪಿಸುತ್ತಿತ್ತು. ಅಂದಿನ ದಿನವಿಡೀ ಕೆಲಸದ ಹೈರಾಣು ಬದುಕಿನಲ್ಲಿ ಇಂಥ ಒಂದು ದಿನ ಮರೆಯದೇ ಹಿರಿಯರನ್ನು ನೆನೆಯುವ ಆ ನಿರಾಡಂಬರ ಸಂಪ್ರದಾಯದಲ್ಲಿ  ನನಗೆ ಅಳಿದ ಮೇಲೂ ಉಳಿದ, ಉಳಿಯಲೇಬೇಕಾದ ಪ್ರೀತಿಯ  ದ್ಯೋತಕವಷ್ಟೇ ಕಾಣುತ್ತದೆ.  ದೇವರ  ಕೋಣೆಯಲ್ಲಿ  ಇಷ್ಟು ನಡೆದು ಬಾಗಿಲಾಚೆ ದಾಟಿದರೆ ಮತ್ತೆ ನಾವು ಚಿಮ್ಮುವ ನಡಿಗೆಯ ಮಕ್ಕಳೇ. ನನ್ನ ಅಮ್ಮ,” ಅಜ್ಜ- ಅಮ್ಮನಿಗೆ ಪೂಜೆ ಮಾಡ್ರಿ” ಎಂದು ಮೆಲುದನಿಯಲ್ಲಿ ನೀಡುತ್ತಿದ್ದ ಹುಕುಂ ಹಿಂದೆ ಅವರ ಬಗ್ಗೆ ಇದ್ದ ಗೌರವಾದರಗಳ ಭಾವ ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ.  ಇಂಥ ಅಮ್ಮ ನಮಗೆಂದೂ ಕಹಿ ಬೇವನ್ನು ತಿನ್ನಿಸಿಯೇ ಇರಲಿಲ್ಲ. ಮಾಲ್ದಿಯಲ್ಲಿ ಬೇವಿನ ಹೂಗಳನ್ನು ಹಾಕಿ ತಿನ್ನಲು ಕೊಡುತ್ತಿದ್ದರು. ಮಕ್ಕಳ  ಬದುಕಲ್ಲಿ ಸಿಹಿಯ ಪಾಲೇ ಹೆಚ್ಚಿರಲಿ ಎಂಬುದು ಎಲ್ಲ ತಾಯಂದಿರ ಹಾರೈಕೆಯಲ್ಲವೇ? ಅತ್ತೆಯ ಮನೆಯಲ್ಲಿ ಹಬ್ಬದ ಆರಂಭ ಕಹಿಬೇವು- ಬೆಲ್ಲವನ್ನು ತಿನ್ನುವುದರೊಂದಿಗೆ! ಇದನ್ನು ವಿಧಿಯೆನ್ನಿ ಬೇಕಾದರೆ. ಬದುಕಲ್ಲಿ ಕಹಿ- ಸಿಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ತತ್ವದ ಈ ಆಚರಣೆ ನನಗೆ ಇಷ್ಟವಾಗಿ ಮುಂದುವರೆಸಿದೆ. ಪ್ರತಿ ವರ್ಷ ಬೇವಿನ ಎಲೆಯ ಚಿಕ್ಕ ತುಣುಕನ್ನು ತಿಂದು ಮೈ ಮುಖ ಹಿಸುಕುವ ಮಗನಿಗೆ ಜೀವನ ಹೀಗೆ. ಕಹಿಯನ್ನು ಅನುಭವಿಸಲೇಬೇಕು ಎಂದು ಹೆಳುತ್ತೇನೆ. ಈ ಸಂಪ್ರದಾಯ ಬಿಟ್ಟರೆ ಅಂಥ ಮುತ್ತಿನಂಥ ಮಾತು ಹೇಳುವ ಪ್ರಮೇಯವೆ ಬರದಲ್ಲ!  ನಮಗೆ ಯುಗಾದಿಯ ಇನ್ನೊಂದು    ವಿಶೇಷವೆಂದರೆ ಸಂಜೆಯ  ಚಂದ್ರದರ್ಶನ. ನಮ್ಮ ಮನೆಯಿದ್ದ ಉದ್ದನೆಯ ಮುಖ್ಯ ರಸ್ತೆಯ ಉದ್ದಕ್ಕೂ ಕೈಯಲ್ಲಿ ಊದಿನಕಡ್ಡಿ ಹಚ್ಚಿ ಹಿಡಿದುಕೊಂಡು ಪೂರ್ವ ಆಗಸದತ್ತ ಮುಖ ಮಾಡಿ ನಿಂತ ಸಾಲು ಸಾಲು ಜನ. ಪಾಡ್ಯದಂದು ತೆಳು ಗೆರೆಯಂತಿರುವ ಚಂದ್ರ ಸುಲಭವಾಗಿ ಗೋಚರಿಸಲಾರ. ಶುಭ್ರ ಆಕಾಶವಿದ್ದರೆ ಚುರುಕು ಕಣ್ಣುಗಳು ಬೆಳ್ಳಿಯ ಕೂದಲೆಳೆಯನ್ನು  ಗುರುತಿಸಿದಾಕ್ಷಣ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಲ್ಲಿ ಮಿಂಚಿನ ಸಂಚಾರ ವಾಗುತ್ತಿತ್ತು. ಆಗ ಎಲ್ಲರ ತೋರು ಬೆರಳುಗಳೂ ಅದೇ ದಿಕ್ಕಿಗೆ ಚಾಚಿರುತ್ತಿದ್ದವು. ಕಂಡವರ ಮುಖದಲ್ಲಿ ಅರಳುತ್ತಿದ್ದ ಸಂತಸಕ್ಕೆ ಪಾರವಿರಲಿಲ್ಲ. ಕಾಣದಿದ್ದವರಲ್ಲಿ ಕೆಲವರು ಸಪ್ಪಗಾಗಿ ಒಪ್ಪಿಕೊಂಡರೂ ಕೆಲವರಿಗೆ ಕಾಣದಿದ್ದನ್ನು ಒಪ್ಪಿಕೊಳ್ಳಲಾಗದ ಬಿಗುಮಾನ. ಬೀದಿಯಲ್ಲಿ ಪರಸ್ಪರ  ಮಾತನಾಡದವರೂ ಚಂದ್ರನ  ಕಾಣಲು, ಕಾಣಿಸಲು ಒಂದಾಗುತ್ತಿದ್ದ ಅಪರೂಪದ ಕ್ಷಣವದು. ಬಹಳ ಹೊತ್ತಿನವರೆಗೂ ಅಲ್ಲಿ ಚಂದ್ರದರ್ಶನದ ಸುತ್ತಲೇ ಮಾತುಕತೆಗಳು ನಡೆಯುತ್ತಿದ್ದವು. ಕಳೆದ ಕೆಲ ವರ್ಷಗಳ ಚಂದ್ರದರ್ಶನದ ನೆನಪುಗಳು ತಾಜಾ ಆಗುತ್ತಿದ್ದವು. ಮತ್ತೆ ಇಂಥ ಭೇಟಿಗೆ ಒಂದು ವರ್ಷ ಕಾಯಬೇಕಲ್ಲ ಎಂಬ ಕಾರಣಕ್ಕೋ ಏನೋ ಯಾರಿಗೂ ಬೇಗನೇ ಅಲ್ಲಿಂದ ಕದಲಲು ಆಗುತ್ತಿರಲಿಲ್ಲ. ಕೊನೆಗೆ ಹಿರಿಯರೊಬ್ಬರು ನಡೀರಿ ದೇವರಿಗೆ ದೀಪ ಹಚ್ಚಬೇಕು ಎಂದಾಗ ಮತ್ತೊಮ್ಮೆ ಗಡಿಬಿಡಿ ಶುರುವಾಗುತ್ತಿತ್ತು. ಹಕ್ಕಿಗಳು ಗೂಡು ಸೇರುವಾಗಿನ ಕಲಕಲ  ಮನೆಯವರೆಗೂ ಸಂಚರಿಸಿ ನಿಧಾನಕ್ಕೆ ಬೀದಿ ಮೊದಲಿನಂತಾಗುತ್ತಿತ್ತು. ಸಂಜೆ ಮನೆಯ ಹಿರಿಯರಿಗೆ ನಮಸ್ಕರಿಸುವುದರೊಂದಿಗೆ  ಹಬ್ಬ ಮುಗಿಯುತ್ತಿತ್ತು.  ಈ ಒಂದು ದಿನಕ್ಕಾಗಿ ವಾರಗಳಿಂದ ಆರಂಭವಾಗುತ್ತಿದ್ದ ಮನೆಯ ಸ್ವಚ್ಛತೆ, ಅಟ್ಟದ ಧೂಳು ಕೊಡವುವುದು, ತಿಂಡಿ- ತಿನಿಸುಗಳನ್ನು ಮಾಡಲು, ತುಂಬಲು ಬೇಕಾದ ಪಾತ್ರೆಗಳನ್ನು ತೊಳೆಯುವುದು, ಸಾಮಾನುಗಳನ್ನು ಪಟ್ಟಿ ಮಾಡಿಕೊಂಡು ಶಾನಭಾಗರ ಅಂಗಡಿಗೆ ಹೋಗಿ ಕೊಟ್ಟು ಬರುವುದು, ನಸುಕಿನಲ್ಲೇ ಬಂದು ಬಾಗಿಲಿಗೆ ಹೂ ಸಿಕ್ಕಿಸಿ ಅದೃಶ್ಯವಾಗುವ   ವರ್ತನೆಯ ಹೂ ಮಾರುವವಳಿಗೆ ಹಬ್ಬಕ್ಕೆ ಎಲ್ಲರಿಗೂ ಒಂದೊಂದು ದಂಡೆ ಮಲ್ಲಿಗೆ ಹೂ ಇರಬೇಕು ಎಂದು ಹೇಳಲು  ಹಬ್ಬಕ್ಕೆ ಎರಡು ದಿನ ಮೊದಲು ಬೇಗ ಎದ್ದು  ಕಾದು ಕುಳಿತುಕೊಳ್ಳುವುದು, ಮನೆಯ ಮುಂಭಾಗದ ಅಂಗಳ ಸಾರಿಸಿ ಯಾವ ರಂಗೋಲಿ ಇಡಬೇಕು ಎಂದು ರಂಗೋಲಿ  ಬಿಡಿಸಿ ಸಂಗ್ರಹಿಸಿಟ್ಟುಕೊಂಡ ಪುಸ್ತಕವನ್ನು ಗಣಿತವೋ, ವಿಜ್ಞಾನವೋ ಅಭ್ಯಾಸ ಮಾಡಿದಂತೆ ಬಿಡಿಸಿ ಬಿಡಿಸಿ ಕಲಿತುಕೊಳ್ಳುವುದು….ಮುಂತಾಗಿ ಮನೆಯ ಎಲ್ಲರಿಗೂ ಕೆಲಸವೋ ಕೆಲಸ !!  ಹಬ್ಬದ ದಿನ  ಬೆಳಿಗ್ಗೆ ಬೇಗನೇ ಎದ್ದು   ಕೊಟ್ಟಿಗೆಯಲ್ಲಿದ್ದ ಸಗಣಿಯನ್ನು ಬಾಚಿ  ಹಳೆಯ ಬಕೀಟಿಗೆ ತುಂಬಿ ನೀರು ಸುರುವಿ ಕೈಯಾಡಿಸುತ್ತ ಅಂಗಳ ಸಾರಣೆಗೆ ಬೇಕಾಗುವ ಹದಕ್ಕೆ ಗಂಜಲ ತಯಾರಿಸುವುದನ್ನು ನಿಷ್ಠೆಯಿಂದಲೇ ಮಾಡುವುದು. ಅದರ ವಾಸನೆಗೆ ಯಾವತ್ತೂ ‘ ಇಶ್ಯಿ’  ಎನಿಸಲೇ ಇಲ್ಲ. ಅಂಗಳದ ಒಂದು ತುದಿಯಿಂದ ತಂಬಿಗೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕುತ್ತ ಕಡ್ಡಿಹಿಡಿಯಲ್ಲಿ  ನಯವಾಗಿ ಕಸಬರಿಗೆಯ ಒಂದು ಕಡ್ಡಿಯ ಗುರುತೂ ಬರದಂತೆ  ಹರಡುತ್ತ ಅಂಗಳ ಪೂರ್ತಿ ಬಳಿದರೆ ನನಗೂ, ಅಮ್ಮನಿಗೂ ಖುಷಿ. ಇವೆಲ್ಲ ನಾವು ನೋಡಿ ಕಲಿತ ಪುಟ್ಟ ಜವಾಬ್ದಾರಿಗಳು. ಅದಕ್ಕಾಗಿ ಅಮ್ಮನ ಮುಖದಲ್ಲಿ ಆ ಸಂತಸದ ನಗು ಉಕ್ಕುತ್ತಿತ್ತು ಎಂದು ಈ ತಾಯಿಗೆ ಈಗ  ಅರಿವಾಗಿದೆ.  ಅದೆಂಥ ತುಂಬು ಬದುಕು!! ಈಗ ಬದಲಾಗಿದೆ ಎಂದೆನಲ್ಲವೇ? ಅಡುಗೆಗಳು ಬಹುತೇಕ  ಹಾಗೇ ಇವೆ. ಮಾಲ್ದಿ ಹೆಚ್ಚು ಇಷ್ಟ ಪಡದ ಕಾರಣ ಮೆನುವಿನಿಂದ ಕಣ್ಮರೆಯಾಗಿದೆ. ಹೊಸತಾಗಿ ಕೆಲವು ಸೇರ್ಪಡೆಯಾಗಿವೆ.  ಈಗಲೂ ಸಂಜೆ ಊದಿನಕಡ್ಡಿ ಹಚ್ಚಿಕೊಂಡು  ಟೆರೇಸಿನ ಮೇಲೆ ಹೋಗಿ ಚಂದ್ರನನ್ನು ಹುಡುಕುತ್ತೇನೆ. ಕಂಡರೆ ಎಲ್ಲ ಮೊದಲಿನಂತೆ..ಮಗ ಅಣಕಿಸಿದಾಗ ಹೇಳುತ್ತೇನೆ. ಇದು ನಮ್ಮ ಪರಂಪರೆಯ ಭಾಗ. ಬಿಟ್ಟರೆ ಕಳೆದು ಹೋಗಿಬಿಡುತ್ತದೆ. ಅನುಸರಿಸಿದರೆ ಕಳೆದ ಕಾಲವನ್ನು ಕಟ್ಟಿ ಹಾಕಿದ ಸಂತೋಷ ಆ ಕ್ಷಣಕ್ಕೆ ಆಗುತ್ತದೆ.  ಹೆಚ್ಚೇನಿಲ್ಲ.  ಇದನ್ನು ವ್ಯಾಮೋಹವೆನ್ನಿ. ಗೊಡ್ಡು ಎಂದು ಮೂಗು ಮುರಿಯಿರಿ. ಬೇಸರವಿಲ್ಲ. ಹೊಟೆಲ್ಲುಗಳಲ್ಲಿ ದುಬಾರಿ ಬಿಲ್ ತೆತ್ತು ಬೀಗುವ ಹಬ್ಬಕ್ಕಿಂತ ಇಂಥ ಬಾಗುವ ಹಬ್ಬವೇ ನನಗೆ ಪ್ರಿಯ.  ಅಡುಗೆಯನ್ನು ಹಂಚಿ ತಿನ್ನುವುದು ಹಳ್ಳಿಗಳ, ಸಣ್ಣ ಪಟ್ಟಣಗಳ ಸುಂದರ ಅಭ್ಯಾಸ. ಅದೇ ನೆವದಲ್ಲಿ ಹಾಲು- ಹೈನು ಸಮೃದ್ಧವಾಗಿ ನೀಡುವ ಆಕಳಿಗೆ ಒಂದು ಎಡೆ, ಮನೆ ದೇವರಿಗೆ ಒಂದು, ಹಿತ್ತಲಲ್ಲಿರುವ ಭೂತನ/ ಚೌಡಿ ಕಟ್ಟೆಗೆ ಒಂದು, ಊರು ದೇವರಿಗೆ ಒಂದು, ಹಿರಿಯರಿಗೆ ಒಂದು, ಹೊಸ್ತಿಲುಗಳಿಗೆ ಒಂದು..ಹೀಗೆ ಎಲ್ಲರನ್ನೂ- ಎಲ್ಲವನ್ನೂ ನೆನೆಯುವ ಸತ್ಸಂಪ್ರದಾಯವನ್ನು ಅಮ್ಮ ಅನುಸರಿಸಿಕೊಂಡು ಬಂದಿದ್ದರು.. ಇದನ್ನು ಬಿಡಲಾರದ ನಾನು ಮನೆಗೆ ಹಾಲು ಕೊಡುವವರಿಗೆ, ಅವರ ಮನೆಯ ಆಕಳಿಗೆ, ಎದುರು ಇರುವ ದೇವಸ್ಥಾನಕ್ಕೆ ಕೊಡುತ್ತೇನೆ. ಅಂದು ದೇವಾಲಯ ತುಂಬಿ ತುಳುಕುವುದರಿಂದ ಪಾಪ ಭಟ್ಟರಿಗೆ ಮನೆಗೆ ಹೋಗಲೂ ಪುರಸೊತ್ತಿರುವುದಿಲ್ಲ. ಪ್ರತಿ ಹಬ್ಬದಲ್ಲೂ ಅವರಿಗೆ ನಮ್ಮ ಮನೆಯದೇ ಊಟ. ಜೊತೆಗೆ ದೇವಾಲಯದ ಸುತ್ತಲೂ ಇರುವ ಉದ್ಯಾನ ನೋಡಿಕೊಳ್ಳುವ ಮಾಲಿಗಳಿಗೂ.  ಸಂಪ್ರದಾಯ ಗೊಡ್ಡಲ್ಲ. ಅದನ್ನು ನಾವು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗಬಹುದು. ಹಬ್ಬದ ನೆವದಲ್ಲಿ ಇಷ್ಟೆಲ್ಲ ನೆನಪಾಗಿ ಮನಸ್ಸು ಒದ್ದೆಯಾಯಿತು. ಹೊಸ ವರ್ಷ ದುಡಿಯುವ ಕೈಗಳಿಗೆ ಬಲವನ್ನೂ,

Read Post »

ಇತರೆ

ಯುಗಾದಿ ವಿಶೇಷ ಬರಹ ಕೊನೆಗೂ ಸಿಕ್ಕ ಸದ್ಗುರು 1993 – 94 ರ ಮಾತದು. ನಾವಾಗ ಖಾಸಗಿ ಪ್ರೌಢಶಾಲೆಯೊಂದರಲ್ಲಿ 9ನೇ ತರಗತಿ ಓದುತ್ತಿದ್ದಾಗ ವಿಜ್ಞಾನ ವಿಷಯ ಬೋಧಿಸಲು ಹೊಸ ಶಿಕ್ಷಕರೊಬ್ಬರ ಆಗಮನವಾಯಿತು. ಹಳ್ಳಿ ಶಾಲೆ. ಹಳ್ಳಿ ಹುಡುಗರಾಗಿದ್ದ ನಮಗೆ ಅವರ ಮಾತು – ಕತೆ, ರೀತಿ – ನೀತಿ & ಎಲ್ಲಕ್ಕೂ ಮಿಗಿಲಾಗಿ ಅವರ ಸ್ಟೈಲ್ ಅತ್ಯಾಕರ್ಷಿಸಿತು. ಮೊದಲ ನೋಟದಲ್ಲೇ ವಿದ್ಯಾರ್ಥಿಗಳ ಮನ ಗೆದ್ದ ಅವರು ನಮ್ಮ ಪಾಲಿಗೆ ಸ್ಟೂಡೆಂಟ್ ಐಕಾನ್ ಎನಿಸಿದರು.  ಅವರು ಪಾಠ ಹೇಳುತ್ತಿದ್ದ ರೀತಿ, ಬೋಧಿಸುವ ಪರಿ, ಸದಾ ಹಸನ್ಮುಖತೆಯಿಂದಲೇ ಮನವರಿಕೆ ಮಾಡಿಸುತ್ತಿದ್ದ ಅವರ ತಾಳ್ಮೆ, ತಪ್ಪು ಮಾಡಿದಾಗ ಹೊಡೆಯದೆ – ಬೈಯದೇ, ಯಾರೊಬ್ಬರ ಮನಸ್ಸಿಗೂ ನೋವಾಗದಂತೆ ನಯವಾಗಿ ತಿದ್ದಿ – ತೀಡುತ್ತಿದ್ದ ತಾಯ್ಮಮತೆಯ ಅವರ ಅಂತಃಕರಣ, ಬೋರ್ ಎನಿಸಿದಾಗ ಹಾಡು ಹೇಳಿ ರಂಜಿಸಿ ಪಾಠ ಮುಂದುವರೆಸುತ್ತಿದ್ದ ಕ್ರಮ … ಥೇಟ್ ರಾಜ್ ಕುಮಾರ್ ವಾಯ್ಸಲ್ಲೂ ಒಮ್ಮೊಮ್ಮೆ ಮಾತಾಡಿ, ಹಾಡ್ಹೇಳಿ, ಜೋಕ್ಸೇಳಿ ನಕ್ಕು ನಗಿಸಿ ಬೋಧಿಸುತ್ತಿದ್ದ ಅವರ ಬತ್ತದ ಉತ್ಸಾಹ, ಯಾವುದೇ ಕ್ರೀಡೆ – ಆಟೋಟದಲ್ಲೂ ವಿದ್ಯಾರ್ಥಿಗಳೊಂದಿಗೆ ತಾವೂ ಭಾಗವಹಿಸಿ ಹುರಿದುಂಬಿಸುತ್ತಿದ್ದ ಉತ್ಸುಕತೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಸಂದರ್ಭದಲ್ಲಿ ತಾವೇ ನೃತ್ಯ ನಿರ್ದೇಶನ ಮಾಡಿ ವಿದ್ಯಾರ್ಥಿಗಳೊಂದಿಗೆ ವೇದಿಕೆಯಲ್ಲಿ ತಾವೂ ಕೂಡ ಒಂದು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಅವರ ಬಹುಮುಖಿ ಪ್ರತಿಭೆ … ಹೀಗೆ ಒಂದೇ ಎರಡೇ ಎಲ್ಲವೂ ಅದ್ಭುತ – ಅಮೋಘ.         ಅವರ ವ್ಯಕ್ತಿತ್ವವೇ ಅಂಥದ್ದು. ಎಂಥಾ ವಿದ್ಯಾರ್ಥಿಗಾದರೂ ಎಷ್ಟೇ ವರುಷಗಳಾದರೂ ಮರೆಯಲಾಗದಂತಹ ಛಾಪು ಮೂಡಿಸುವಂಥದ್ದು.   ಹಾಗಾಗಿಯೇ ನಾವು ಅವರನ್ನ ಸದಾ ಸ್ಮರಿಸುತ್ತಲೇ ಇರುತ್ತಿದ್ದೆವು.  ನಮ್ಮ  SSLC ಪರೀಕ್ಷೆ ಮುಗಿಯುತ್ತಿದ್ದಂತೆಯೇ  ಅವರು ಆ ಶಾಲೆಯಿಂದ ನಿರ್ಗಮಿಸಿ ಬಿಟ್ಟಿದ್ದರು. ಎಲ್ಲಿಗೆ ಹೋದರು, ಯಾವ ಊರಿನಲ್ಲಿ ಜಾಬ್ ಮಾಡುತ್ತಿದ್ದಾರೆ ಎಂಬ ಕುರಿತು ಆ ಶಾಲೆಯ ಸಿಬ್ಬಂದಿಯವರಿಗಾಗಲಿ ಅಥವಾ ಯಾವೊಬ್ಬ ವಿದ್ಯಾರ್ಥಿಗಾಗಲಿ ಮಾಹಿತಿ ಇರಲಿ ಸುಳಿವು ಸಹ ಸಿಗಲಿಲ್ಲ . ಫೋನ್ ಮೂಲಕವಾದರೂ ಪತ್ತೆ ಹಚ್ಚೋಣವೆಂದರೆ ನಮ್ಮದು ಆಗ ಫೋನೇ ಇಲ್ಲದ ಕಾಲ, ನಮ್ಮೂರಲ್ಲಿ ಆಗ ಯಾರ ಮನೆಯಲ್ಲೂ ಲ್ಯಾಂಡ್ ಲೈನ್ ಕೂಡ ಇರಲಿಲ್ಲ . ಅಂತೆಯೇ ನಮ್ಮ ಆ ಗುರುಗಳ ಬಳಿ ಕೂಡ .. ಹಾಗಾಗಿ Long Period  Communication Gap ಆಯ್ತು …     ಹೈಸ್ಕೂಲ್ ಮತ್ತು M.Phil ವಿದ್ಯಾಭ್ಯಾಸದ ನಡುವಣ ಪಯಣದಲ್ಲಿ ಹತ್ತು ಹಲವು ಮೇರು ಶಿಕ್ಷಕರ ದಿಗ್ದರ್ಶನವೂ ಆಯ್ತು. ಆದರೂ, ಸುಮಾರು 25 ವರ್ಷಗಳೇ ಕಳೆದರೂ ಅವರನ್ನು ಕಾಣುವ ತವಕ ಮಾತ್ರ ಮನದಲ್ಲಿ ಮನೆ ಮಾಡಿತ್ತು.  ಅದೂ ಕೂಡ ಒಂದು ಅಚ್ಚರಿಯ ಸಂಗತಿಯಾಗಿ ಮನವ ಕಾಡಿತ್ತು … ಮರೆಯಲಾಗದ ಯುಗಾದಿ :    ಆ ತವಕಕ್ಕೆ ಪ್ರತಿಯಾಗಿ ಕಿಂಚಿತ್ತು ಫಲ ಎಂಬಂತೆ ಆ ಯುಗಾದಿಯ ದಿನದಂದು ಒಂದಷ್ಟು ಆ ಮಹನೀಯರ ಇರುವಿಕೆಯ ಮೂಲದ ಮಾಹಿತಿ ಲಭಿಸಿತ್ತು. 2018 ರ  ಯುಗಾದಿಯಂದು ಹಂಪಿ – ಹೊಸಪೇಟೆಯ ಕಡೆ ಸ್ನೇಹಿತರೊಂದಿಗೆ ಪ್ರಯಾಣ ಬೆಳೆಸಿದ್ದೆ. 2 ದಿನ ಅಲ್ಲಿಯೇ ತಂಗಿದ್ದ ನಾವು ವಾಪಸ್ ಊರಿಗೆ ಬರುತ್ತಿದ್ದಾಗ ನಮ್ಮ ಮಿತ್ರರೊಬ್ಬರ ಬಳಿ ಆಕಸ್ಮಾತ್ ಆಗಿ ನಮ್ಮ ಆ ಗುರುವಿನ ಬಗ್ಗೆ ಪ್ರಸ್ತಾಪಿಸಿದೆ. ಅದಕ್ಕವರು – ಅಯ್ಯೋ ನೀವು ಇಷ್ಟು ದಿನ ಹುಡುಕುತಿದ್ದ ನಿಮ್ಮ ಗುರುಗಳು ಅಲ್ಲೇ ಹಗರಿಬೊಮ್ಮನ ಹಳ್ಳಿಯ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಇದಾರಂತೆ, ಅಷ್ಟು ಮಾತ್ರ ನನಗೆ ಗೊತ್ತು. ಆದರೆ ಪಕ್ಕಾ ಅಡ್ರೆಸ್ ಆಗಲಿ ಅಥವಾ ಫೋನ್ ನಂಬರ್ ಆಗಲಿ ನಂಗೊತ್ತಿಲ್ಲ … ಆನ್ ದಿ ವೇ ಬರ್ತಾ ಪತ್ತೆ ಹಚ್ಕೊಂಡು ಬನ್ನಿ ಎಂದರು….     ಅದೇ ಜಾಡು ಹಿಡಿದು ಅಲ್ಲಿಗೆ ಹೋದ್ವಿ . ಕೆಲವರನ್ನು ಕೇಳಲಾಗಿ ಗೊತ್ತಿಲ್ಲ ಎಂಬ ಉತ್ತರ. ಇನ್ನೇನು ನಿರಾಸೆಯಿಂದ ಹೊರಡುವ ಹೊತ್ತಿಗೆ ಕೊನೆಯ ಪ್ರಯತ್ನವೆಂಬಂತೆ ಒಂದು ಪ್ರಾವಿಜನಲ್ ಸ್ಟೋರ್ನಲ್ಲಿ ವಿಚಾರಿಸಿದಾಗ – ” ಮೊದಲು 1 ವರ್ಷದ ಹಿಂದೆ ಅವರು ಇಲ್ಲೇ ಪಕ್ಕದ ಕೇರಿಯಲ್ಲಿ ಇದ್ರು. ಈಗ ಎಲ್ಲಿದ್ದಾರೋ ಗೊತ್ತಿಲ್ಲ ” ಅಂದು ಬಿಟ್ಟಾಗ ನಿಜಕ್ಕೂ ಒಂದಿಷ್ಟು ಖುಷಿ ಮತ್ತಿಷ್ಟು ಬೇಸರವೆನಿಸಿತು. ಅವರ ಫೋನ್ ನಂಬರ್ ಏನಾದ್ರೂ ಇದ್ರೆ ಕೊಡ್ತಿರಾ ಸರ್ ಎಂದೆವು. ಇಲ್ಲ ಎಂದ ಅವರು ಕೊಂಚ ಬಳಿಕ … ಅವರ ಅಳಿಯ ಒಬ್ರ ನಂಬರ್ ಇದೆ ಕೊಡ್ತಿನಿ, ಬೇಕಾದ್ರೆ ಅವರ ಬಳಿ ವಿಚಾರಿಸಿ ನೋಡಿ ಎಂದರು. ನಿಟ್ಟುಸಿರು ಬಿಟ್ಟ ನಾವು ಕೂಡಲೇ ನಂಬರ್ ಪಡೆದು ಫೋನಾಯಿಸಿದರೆ ಅವರೊಡನೆಯೇ ನಮ್ಮ ಗುರುಗಳೂ ಸಹ ಇದ್ದರು … ಸಂತಸಕ್ಕೆ ಪಾರವೇ ಇರಲಿಲ್ಲ. ಪರಿಚಯ ಹೇಳಿಕೊಂಡೆ …ಒಂದಷ್ಟು ಕುಶಲೋಪರಿಯೂ ಆಯಿತು.. “ಎಂಥಾ ಕೆಲಸ ಆಯ್ತಲ್ಲ, ನಾವು ಹಗರಿಬೊಮ್ಮನಹಳ್ಳಿಯಲ್ಲೇ ವಾಸವಿದ್ದೇವೆ. ಇನ್ನೊಮ್ಮೆ ಈ ಕಡೆ ಬಂದಾಗ ಮನೆಗೆ ಬಾ. ಖುದ್ದು ಭೇಟಿಯಾಗೋಣ ಗಂಗಾಧರ್, ನಾವೀಗ ಸಂಕ್ರಾಂತಿ ಪ್ರಯುಕ್ತ ಹೊಸಪೇಟೆ ಹತ್ತಿರದ ಹುಲಿಗಿ ಗ್ರಾಮಕ್ಕೆ ಬಂದಿದ್ದೇವೆ. ಮತ್ತೊಮ್ಮೆ ಖಂಡಿತಾ ಭೇಟಿ ಆಗೋಣ ” ಎಂದ್ಹೇಳಿ ತಮ್ಮ ಮೊಬೈಲ್ ನಂಬರ್ ಕೊಟ್ಟು ಅಡ್ರೆಸ್ ಹೇಳಿ ಫೋನ್ ಮೂಲಕವೇ ಬೀಳ್ಕೊಟ್ಟರು…. ಅಂತೂ.. , ಮುಖಭೇಟಿಯಾಗದಿದ್ದರೂ ಮತ್ತೊಮ್ಮೆ ಸಿಗುವ ಭರವಸೆಯೊಂದಿಗೆ ಅಲ್ಲಿಂದ ಸೀದಾ ಊರಿಗೆ ತೆರಳಿದೆವು … ಈಗ ನೆನಪಾದಲೆಲ್ಲಾ ಫೋನ್ ಮಾಡುತ್ತೇನೆ. ಆ ದಾರಿಯಲ್ಲಿ ಪ್ರಯಾಣಿಸಿದಾಗಲೆಲ್ಲಾ ಅವರ ಮನೆಗೆ ಹೋಗಿ ಬರುತ್ತೇನೆ.     ಆ ನಮ್ಮ ಮನೋ ಮಂದಿರದ ಗುರುಗಳ ಹೆಸರು ” ಶ್ರೀಯುತ ಕುಮಾರ್ ಸ್ವಾಮಿ ಹಿರೇಮಠದ್ “   ವೃತ್ತಿ ಪ್ರೇಮವೊಂದನ್ನೇ ಗುರಿಯಾಗಿಸಿಕೊಂಡು ಬೋಧಿಸುವ ಇಂತಹ ಶಿಕ್ಷಕರ ಸಂಖ್ಯೆ & ಸೇವೆ ಈಗ ವಿರಳವೇ ಸರಿ …     ಇಂತಹ ವಿರಳ ಗುರು ಮರಳಿ ಸಿಕ್ಕ 2018 ರ ಯುಗಾದಿಯ ಎಂದಿಗೂ ಮರೆಯಲಾಗದು. ಪ್ರತಿ ಯುಗಾದಿಗೂ ಅವ್ಯಾಹತ ಆ ಗುರುವಿನ ಸ್ಮರಣೆ. ತಸ್ಮೈ ಶ್ರೀ ಗುರುವೇ ನಮಃ … ********************************** ಗಂಗಾಧರ್ ಬಿ.ಎಲ್ ನಿಟ್ಟೂರ್

Read Post »

You cannot copy content of this page

Scroll to Top