ನಾದಬೇಕು …ನಾದ ಬೇಕು !!
ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ
ನಾದಬೇಕು …ನಾದ ಬೇಕು !! Read Post »
ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ
ನಾದಬೇಕು …ನಾದ ಬೇಕು !! Read Post »
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್ಮಾನ್ಸೆ ಕ್ಯಾ ಆಪ್ಕೊ ಅಲ್ಲಾತಾಲಾ ನೆ ಜವಾಬ್ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************
” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »
ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ ಇಲ್ಲ..! ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು. ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು. ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ ಬೀದರ್ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ. ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್ಗನ್ ಹಿಡಿದು ಎನ್ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು. ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ. ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು. ಫಿರೋಜ್ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು. ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ. ಪ್ರತಿ ಹಬ್ಬಕ್ಕೆ ರಂಜಾನ್ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು. ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು. ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು. ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ. ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್ ಮೇಲಿತ್ತು. ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ… ಆಮೇನ್…! ***********************************************
ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್ ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ. ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ. ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,, ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,, ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************
ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ. ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ. “ಬಿಡು ಬಾಹ್ಯದೊಳು ಡಂಭವಮಾನಸದೊಳು ಎಡೆ ಬಿಡದಿರು ಶಂಭುವ/ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯಪಡೆದರೆ ಶಿವ ನಿನಗೊಲಿಯನು ಮರುಳೇ// ಜನಕಂಜಿ ನಡಕೊಂಡರೇನುಂಟು ಲೋಕದಿಮನಕಂಜಿ ನಡಕೊಂಬುದೇ ಚಂದ/ಜನರೇನು ಬಲ್ಲರು ಒಳಗಾಗೊ ಕೃತ್ಯವಮನವರಿಯದ ಕಳ್ಳತನವಿಲ್ಲವಲ್ಲ// ಮನದಲಿ ಶಿವ ತಾ ಮನೆ ಮಾಡಿಕೊಂಡಿಹಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/ಮನಕಂಜಿ ನಡೆಯದೆ ಜನಕಂಜಿ ನಡೆದರೆಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ// ‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!? ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು. ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ! ************************************
ಪ್ರತಿಮೆಯೂ ಕನ್ನಡಿಯೂ.. Read Post »
ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು ಹೇಳಿ ಯಾರೇ ಬಂದರೂ ಮುಖದಭಾವಕ್ಕೆ ಬೇರೆಯದೇ ಕಳೆಗಟ್ಟುತ್ತದೆ. “ನಿನ್ನ ತವರು ಮನೆಗೆ ಹೋಗಿದ್ದೆ ತಂಗೀ” ನಿನ್ನ ಅಮ್ಮನಿಗೂ ಈತರದ್ದು ಎರಡು ಡಜನ್ ಬಳೆ ಕೊಟ್ಟು ಬಂದಿದ್ದೀನಿ, ಅನ್ನುವಾಗ ನನಗೂ ಅದೇ ಇರಲಿ ಎನ್ನುವ ಮಾತು ಅರಿವಿಲ್ಲದೆ ಬರುತ್ತದೆ. ಅಲ್ಲಿಂದ ಬರುವ ಕೆಲಸದ ಆಳುಗಳೇ ಇರಲಿ, ನೆಂಟರೇ ಇರಲಿ, ಹಿಂದೊಂದು ತವರೂರಿನ ಹೆಸರು ಸೇರಿಕೊಂಡರೆ ವಿಶೇಷ ಅಕ್ಕರೆ, ಹಾಗಂತ ಅದು ಬೇದ ಭಾವದ್ದಲ್ಲ. ರಕ್ತಗತವಾಗಿ ಬಂದದ್ದು. ದಾರಿಯಲ್ಲಿ ತವರೂರಿಗೆ ಹೊರಟ ಬಸ್ಸಿನ ಬೋರ್ಡ ಕಂಡರೂ ಸಾಕು ಆ ಬಸ್ಸಿನ ಮೇಲೆ ಡ್ರೈವರ್ ನ ಮೇಲೆ ಎಲ್ಲ ಪ್ರೀತಿ ಉಕ್ಕತ್ತದೆ. ತುಪ್ಪ ಬಡಿಸುವಾಗ ತವರ ಸುದ್ದಿ ಕೇಳಿದರೆ ಎರಡ್ಹುಟ್ಟು ತುಪ್ಪ ಹೆಚ್ಚಿಗೆ ಬೀಳುವದು. ಎಂದು ಛೇಡಿಸುವಿಕೆಯಾದರೂ ಸತ್ಯವೇ, ಸ್ವಲ್ಪ ನಕ್ಕರೂ ,ಅಡುಗೆಯಲ್ಲಿ ವೀಶೇಷವಾದದನ್ನು ಸಜ್ಜು ಗೊಳಿಸುತ್ತಿದ್ದರೂ ಏನಿದು !!ಇಂದು ತವರಿಂದ ಏನಾದರೂ ವಿಶೇಷ ಸುದ್ದಿ ಇದೆಯಾ? ಯಾರಾದರೂ ಬರುತ್ತಿದ್ದಾರಾ? ಎಂದು ಕಾಲೆಳೆಯುವ ಪತಿರಾಯರಿಗೇನೂ ಕಡಿಮೆಯಿಲ್ಲ. ಆದರೆ ತಕರಾರು ಅದರದ್ದಲ್ಲ. ಇಷ್ಟೆಲ್ಲ ಬದುಕಿನ ಜೊತೆಗೇ ಅಂಟಿಕೊಂಡು ಬಂದಿರುವ ಭಾವವನ್ನು ಸಂಬಂಧವನ್ನು ಮದುವೆಯಾಗುತ್ತಿದ್ದಂತೆ ಬಿಡಲಾಗಲಿ ಆ ಭಾವದೊಳಗೆ ಬದಲಾವಣೆ ತಂದುಕೊಳ್ಳಲಾಗಲಿ ಸಾಧ್ಯವೇ!? ತವರು ಹೆಣ್ಣಿನ ಹಕ್ಕು ಮತ್ತು ಆಸ್ತೆಯ ವಿಷಯ. ತವರಿನ ಬಗ್ಗೆ ಸ್ವಲ್ಪವೇ ಸ್ವಲ್ಪ ಮೂಗು ಮುರಿದರೂ ಆಗುವ ಯಾತನೆ ಹೇಳತೀರದ್ದು. ತವರು ನಗುತಿದ್ದರೆ,ಮನೆಯಾಕೆಯೂ ನಗುತ್ತಿರುತ್ತಾಳೆ ಎನ್ನುವ ಅರಿವಿದ್ದೂ ಅಹಂಕಾರದಿಂದ ಅದೆಷ್ಟೋ ಗಂಡಸರು ಹೂಂಕರಿಸುವದನ್ನು ನೋಡಿದ್ದೇನೆ. ಸುಕಾ ಸುಮ್ಮನೇ ತವರ ದೂರುವುದು. ಅಪ್ಪ, ಅಮ್ಮ, ಅಣ್ಣ,ತಮ್ಮ ,ಯಾರೇ ಇದ್ದರೂ ಅವರಡೆಗೊಂದು ಅಸಡ್ಡೆಯ ಮಾತೊಗೆಯುವದು. ಗೊತ್ತಿದೆ ಬಿಡೆ ನಿನ್ನ ತವರು ಎನ್ನುವ ಅನಾಧರ. ಈಗೇನು ನಿನ್ನ ತವರಿನ ದೊಡ್ಡಸ್ತಿಕೆ,ಒಂದು ನಯಾ ಪೈಸಾ ತಗೊಳ್ದೆ ನಿನ್ನ ಮದುವೆ ಮಾಡ್ಕೊಂಡು ಬಂದಿದ್ದೀನಿ. ಆಗ ಬಡತನವಿತ್ತು ಬಿಡು,ಈಗ ಹಬ್ಬಕ್ಕೆ ಏನು ಕೊಟ್ರೋ!? ಕರೆಯುವಲ್ಲಿ, ಕೇಳುವಲ್ಲಿ,ಹೇಳುವಲ್ಲಿ, ಕೊಂಚ ವ್ಯತ್ಯಾಸ ವಾದರೂ, ಕೃಷ್ಣ ಕದ್ದನೆಂದ ಶ್ಯಮಂತಕಮಣಿಯಂತೆ ಅಪವಾದ ಹೆಗಲೇರುತ್ತದೆ. ಹೇಗೆ ತೊರೆಯುವದು ಹೇಳಿ ತವರಿನ ಸೆಳೆತವ. ನೋವುಂಡು ನಗುವ ಮೂರ್ತಿಯನ್ನು ಮಾಡಿದ ಒಲವ. ಅಲ್ಲಿ ಮುಗಿಯದ ನಗುವಿದೆ, ಆಗಾದ ನೆನಪಿದೆ,ಅಪ್ಯಾಯ ಭಾವವಿದೆ, ತೀರದ ಬಂಧವಿದೆ. ನಿನಗೆ ನನಗಿಂತ ತವರೇ ಹೆಚ್ಚು ಎಂದು ಮೂದಲುಸುವಿಕೆಗಾದರೂ ಒಂದು ಅರ್ಥ ಬೇಡವೇ? ಇಲ್ಲಿ ಹೆಚ್ಚು ಕಡಿಮೆ ಏನಿದೆ!? ಜತನವಾಗಿ ಸಾಕಿದ ಪ್ರೀತಿಯನ್ನು ,ಜೀವವನ್ನೇ ಎರಡು ಭಾಗ ಮಾಡಿಕೊಟ್ಟ ವೇದನೆಯಲ್ಲಿ ಕೈ ಹಿಡುದು ಇನ್ನೊಂದು ಕೈಗೆ ಕೊಡುವಾಗ ಅಸಹಾಯಕ ತಂದೆ ಕಣ್ಣೊಳಗೆ ಉಕ್ಕಿದ ಭಾವಕ್ಕೆ ವಿವರಣೆ ಕೊಡಲು ಸಾಧ್ಯವೇ? ತುಟಿ ಕಚ್ಚಿ ತಡೆದ ಅಮ್ಮನ ಕಣ್ಣ ಹನಿಗೆ ಋಣದ ಮಾತಾಡಲು ಸಾಧ್ಯವೇ? ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವುದಕ್ಕೆ ವಿವರಣೆ ಏನು ಕೊಟ್ಟು ಸಮರ್ಥಿಸುತ್ತಾರೋ ಅರಿಯೆ. ಆದರೆ ಎಂದಿಗೂ ಸಮ್ಮತವಲ್ಲದ ವಿಷಯ ಇದು ಹೆಣ್ಮನಸಿಗೆ. ಹಾಗೆ ನೋಡಿದರೆ ಗಂಡು ಕೂಡಾ ಹೆಣ್ಣು ಕೊಟ್ಟ ಮನೆಗೆ ಸದಾ ಋಣಿಯಾಗಿರಬೇಕು. ತವರಬಗ್ಗೆ ಸದಾ ತಕರಾರೆತ್ತುವ ಗಂಡನಮನೆಯಲ್ಲಿ ಹೆಣ್ಣು ತುಟಿ ಕಚ್ಚಿ ನಗುತ್ತಿರುತ್ತಾಳಷ್ಟೇ. ಗಂಡ ತನ್ನ ತವರನ್ನು ಗೌರವಿಸಲಿ. ಪ್ರೀತಿಸಲಿ,ಎನ್ನುವದು ಹೆಣ್ಣಿನ ಸಹಜ ಬಯಕೆ, ಗಂಡನಾದವ ಹೆಂಡತಿ ತನ್ನ ಮನೆಯವರನ್ನೆಲ್ಲ ಪ್ರೀತಿ ಆದರಗಳಿಂದ ಕಾಣಲಿ ಎಂದು ಬಯಸುತ್ತಾನೋ ಹಾಗೇ, ತನ್ನ ಅಕ್ಕ ತಂಗಿಯರು ತವರನ್ನು ಪ್ರೀತಿಸುವದರ ಬಗ್ಗೆ ಖುಷಿ ಪಡುವವ, ತನ್ನ ಹೆಂಡತಿ ತವರನ್ನು ಪ್ರೀತಿಸತೊಡಗಿದರೆ ಸಿಡಿದೇಳುವ ವರ್ತನೆಗೆ ಅರ್ಥವುಂಟೇ!? ಅದೇನೆ ಹೊಂದಾಣಿಕೆಯ ಕೊರತೆ ಇದ್ದರೂ ತವರಿನೆಡೆಗಿನ ಹೆಣ್ಮನಸಿನ ಭಾವ ಅರಿತ ಗಂಡಸಿನೊಳಗೆ ಹೆಚ್ಚು ಯಶಸ್ಸಿದೆ. ಅದೆಷ್ಟೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಗಂಡ ತನ್ನ ತವರನ್ನು ಪ್ರೀತಿಸುತ್ತಾನೆಂದರೆ, ಹೆಂಡತಿ ಗಂಡನ ಮನೆ ಕುರಿತು ತಕರಾರು ಎತ್ತುವದೇ ಇಲ್ಲ. ಎಲ್ಲಿ ತವರಿಗೆ ಬೆಲೆ ಇದೆಯೋ ಅಲ್ಲೇ ತನ್ನ ಅಸ್ತಿತ್ವ ಎನ್ನುವದನ್ನು ಅವಳು ಎಂದೋ ನಿರ್ಧರಿಸಿದ್ದಾಳೆ. ಅದು ಪ್ರಕೃತಿ ಮಾತೆ ಪಾರ್ವತಿದೇವಿಯಿಂದಲೇ ಒಲಿದು ಬಂದ ಬಳುವಳಿ ಹೆಣ್ಣಿಗೆ. ಪರಮ ಅಹಂಕಾರಿ,ಕಠೋರ ಸ್ವರೂಪಿ ದಕ್ಷ , ಶಿವನನ್ನು ಅವಮಾನಿಸಿದ ನಿದರ್ಶನಗಳಿಗೆ ಲೆಕ್ಕವೇ ಇಲ್ಲ, ಆದರೆ ಶಿವ, ಅರ್ಧಾಂಗಿನಿಯಾದ ಸತಿಯ ತವರಿನ ಗೌರವದ ಬಗ್ಗೇಯೇ ಸದಾ ಯೋಚಿಸುತ್ತಿದ್ದ.ಮತ್ತಿ ಕಾಪಾಡುತ್ತಿದ್ದ. ಸಕಲ ಅವಮಾನಗಳನ್ನು ಸತಿಗಾಗಿ ಸಹಿಸಿದ. ಮನಸು ಮಾಡಿದರೆ ಪರಶಿವನಿಗೆ ದಕ್ಷನ ಅಹಂಕಾರ ಮುರಿಯುವುದು ಕ್ಷಣದ ಕೆಲಸವಾಗಿತ್ತು, ಅಪಾರವಾಗಿ ತಂದೆಯನ್ನು ಪ್ರೀತಿಸುವ ಸತಿಗೆ ಎಲ್ಲಿಯೂ ನೋವಾಗಬಾರದೆಂದು,ಅವಳ ಭಾವಕ್ಕೆ ಧಕ್ಕೆಯಾಗಬಾರದೆಂದು ನೊಂದ, ಬೆಂದ,ಪರಿತಪಿಸಿದ. ತಂದೆಯ ತಪ್ಪುಗಳು ಸತಿಗೆ ಅರಿವಾಗಲೆಂದು ವರುಷಗಳೇ ಕಾದ. ಕೊನೆಗೆ ತವರನ್ನೇ ತೊರೆಯಲು ನಿರ್ಧಸಿದ ಸತಿಯ ಕುರಿತು ಹೇಳುತ್ತಾನೆ. ಹೆಣ್ಮಕ್ಕಳಿಗೆ ತವರು ಎಂದರೆ ದೇಹದ ಉಸಿರು. ಅದನ್ನು ನೀನು ತೊರೆದು ಬದುಕಲಾಗದು. ನಿನ್ನ ಅಂತರಂಗದ ನೋವು ವೇದನೆ ನಾನು ಸಹಿಸಲಾರೆ. ಅಲ್ಲದೇ ಉಸಿರು ತೊರೆದು ಬಂದ ನಿನ್ನ ದೇಹಕ್ಕೆ ಲಕ್ಷಣವಿರಲಾರದು. ತಂದೆಯನ್ನು ತಿದ್ದುವ ಪ್ರಯತ್ನಮಾಡುವದಾಗಿ ವಚನವನ್ನೂ ಕೊಡುತ್ತಾನೆ. ಇದೇ ಕಾರಣಕ್ಕಾಗಿ ಸತಿ ದೇಹತ್ಯಾಗವನ್ನೂ ಮಾಡುತ್ತಾಳೆ. ಶಿವ ತನ್ನ ಬದುಕಿನುದ್ದಕ್ಕೂ ಅರ್ಧಾಂಗಿನಿಯ ಮುಖಾಂತರ ತವರು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಲೇ ಬಂದಿದ್ದಾನೆ. ಪರ್ವತ ರಾಜನ ಮಗಳು ಪಾರ್ವತಿಯಾಗಿ ಶಿವನ ವರಿಸಿದಮೇಲೂ ತನ್ನ ಹಿಂದಿನ ಜನ್ಮದ ತಂದೆ ತಾಯಿಯಿದ್ದಲ್ಲಿ ಹೋಗಿ ಶಿವನ ಕೋಪಕ್ಕೆ ಬಲಿಯಾದ ದಕ್ಷನ ತಲೆಗೆ ಮೊದಲಿನ ರೂಪ ನೀಡಲು ಶಿವನನ್ನು ಕೇಳಿಕೊಳ್ಳುತ್ತಾಳೆ. ಆಗ ಶಿವ ಹೇಳುತ್ತಾನೆ. ನೋಡಿದೆಯಾ ದೇವೀ.. ಹೆಣ್ಮಕ್ಕಳ ಈ ಮನಸ್ಥಿತಿಯೇ ಸದಾ ತವರು ನಗುತ್ತಿರಲು ಸುಖವಾಗಿರಲು ಕಾರಣ. ಜಗತ್ತಿನ ಎಲ್ಲ ಹೆಣ್ಮಕ್ಕಳೂ ನಿನ್ನ ಗುಣವನ್ನೇ ಹೊಂದಲಿ ಎಂದು ವರ ನೀಡುತ್ತಾನೆ. ಶಿವನ ಹಾರೈಕೆಯ ಪರಿಣಾಮವೋ ಏನೋ ಪ್ರಕೃತಿಯ ಈ ಸ್ವರೂಪವೇ ಮುಂದುವರಿದು ಪ್ರತೀ ಹೆಣ್ಣು ಪಾರ್ವತಿಯೇ ಆಗಿದ್ದಾಳೆ. ಆದರೆ ಸಹನಾಮೂರ್ತಿ ಶಿವ ಯಾವ ಗಂಡಸಿನೊಳಗೂ ಇಲ್ಲವೇನೋ!? ಅಕಸ್ಮಾತ್ ಇದ್ದರೆ ಆ ಹೆಣ್ಣು ಪಾರ್ವತಿದೇವಿ ಯಷ್ಟೇ ಖುಷಿಯಾಗಿ ಬದುಕುತ್ತಿದ್ದಾಳೆ ಎಂದೇ ಅರ್ಥ.
ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ Read Post »
ಲಹರಿ ಹರಟೆ ಕಟ್ಟೆ ಮಾಲಾ ಕಮಲಾಪುರ್ ನಾನು ಹೇಳುವ ಮಾತು ಇದು ಮೂವತ್ತು ವರ್ಷ ಗಳ ಹಿಂದು ಮುಂದಿನ ಮಾತು ಆಗಿನ ಜನರು ಗಂಡಾಗಲಿ ಹೆಣ್ಣಾಗಲಿ ಭೇದ ಭಾವ ಇಲ್ಲದೆ ತನ್ನವರು ನನ್ನವರು ಎನ್ನುವ ಭಾವನೆ ಯೊಂದಿಗೆ ಬೆರೆತು ಹರಟೆ ಹೊಡಿಯುತ್ತಿದ್ದರು. ತಮಗೆ ಬಿಡುವಾದಾಗ ಒಬ್ಬರಿಗೊಬ್ಬರು ಸಂಜೆಗೆ ಹರಟೆ ಕಟ್ಟೆಗೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ಅಷ್ಟೇ ಅಲ್ಲ ಸುಖ ದುಃಖ ದಲ್ಲಿ ಪಾಲ್ಗೊಂಡು ತಮ್ಮ ಮನೆಯವರಂತೆ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮನೆಯ ಯಜಮಾನಿಯಂತೂ ತನ್ನ ಊಟ ಕೆಲಸ ವಾದಮೇಲೆ ಹೊಟ್ಟಿಯೊಳಗಿನ ಮಾತು ತನಗೆ ಬೇಕಾದವರೊಡನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆದು ಮನಸು ಹಗುರ ಮಾಡಿಕೊಳ್ಳುತ್ತಿದ್ದರು.ಬಾಜು ಮನೆಯವರಿಗೆ ಯಾವತ್ತೂ ಹೆಸರು ಹಿಡಿದು ಕರೆಯದೆ ಮಾಮಾ, ಮಾಮಿ, ಕಾಕಾ, ಕಾಕು , ವೈನಿ ಅಂತ ಸಂಬೋಧಿಸುವ ವಾಡಿಕೆಯೂ ಇತ್ತು ಇದರಿಂದ ಅನ್ನ್ಯೋನ್ಯತೆ ಬೆಳೆಯುತ್ತಿತ್ತು. ಒಬ್ಬರಿಗೊಬ್ಬರು ಸಹಾಯ ಮಾಡೋದು ಮತ್ತು ಕಡಾ ಕೇಳೋದು ಜೋಳದ ಹಿಟ್ಟು ಮುಗಿದರೆ ಕೇಳಿ ತಂದು ಬೀಸಿ ಕೊಡೋದು ಮತ್ತ ತಿರುಗಿ ಹೀಗೆಲ್ಲ ನಡೆಯೋದರಲ್ಲಿ ಭಾಂದವ್ಯ ಇತ್ತು. ಒಬ್ಬರಿಗೊಬ್ಬರು ಬೆಳದಿಂಗಳಲ್ಲಿ ಪಂಕ್ತಿ ಊಟ ಮಾಡೋದು ಹಂಚಿ ತಿನ್ನೋದು ಒಂದು ತರಹ ಮಜಾನೇ ಇತ್ತು. ದೀಪಾವಳಿಯಲ್ಲಿ ಪಗಡೆ ಆಟ ಅಂತೂ ಬಹಳ ವಿಶೇಷ ಅದರಲ್ಲೂ ಬಳಗದವರಿಗಿಂತ ಓಣಿ ಮಂದಿ ಗಂಡಸರು ಮತ್ತು ಹೆಣ್ಣು ಮಕ್ಕಳು ಕೂಡಿ ಪಗಡಿ ಆಟ ಆಡಿ ಅದರಲ್ಲಿ ನಡುವ ಬ್ರೇಕ್ ಚಹಾ ಆಹ ಅದೆಂಥ ದಿನ ಅಂತೀರಾ ಈಗ ನೆನಿಸಿದರೆ ಗತ ಕಾಲದ ನೆನಪು ಮಾತ್ರ ಸಂಡಗಿ, ಹಪ್ಪಳ, ಶಾವಗಿ, ಉಪ್ಪಿನಕಾಯಿ ಮಾಡೋದು ಓಣಿ ಜನ ಸೇರಿ. ಅದೆಂಥ ಸಹಾಯ, ಪ್ರೀತಿ ನೆನೆಸುವುದಾಗಿದೆ ಆಗಿನ ಜನರ ಅನ್ನ್ಯೋನ್ಯ ವಿಚಾರಗಳು ನಗೆ ಮಾತುಗಳು. ಹರಟೆ ಕೇವಲ ಹರಟೆಯಾಗದೆ ಅದ್ದ್ಭುತ ವಿಚಾರಗಳನ್ನು ಹಂಚಿಕೊಳ್ಳುವುದು. ಯಾರದೇಮನೆಯಲ್ಲಿ ಕಾರ್ಯಕ್ರಮ ಆದರೂ ಮನೆಯಲ್ಲಿ ಓಡಾಡಿ ಸಹಾಯ ಮಾಡುವುದು ಇದು ಒಂದು ತರಹ ನಾವೆಲ್ಲರೂ ಒಂದು ಅನ್ನುವ ವಿಚಾರ ತೋರಿಸುತ್ತಿತ್ತು ಕಷ್ಟದಲ್ಲಿ ಸುಖದಲ್ಲಿ ಭಾಗಿಯಾಗಿ ತಮ್ಮ ಹಿರಿಮೆಯನ್ನು ತೋರಿಸುತ್ತಿದ್ದರು. ಇದೆಲ್ಲ ಈಗಿನ ಕಾಲದಲ್ಲಿ ಶೇಕಡಾ 99ರಷ್ಟು ಇಲ್ಲ. ತಾವಾಯಿತು ತಮ್ಮ ಮನೆ ಆಯಿತು ಎಲ್ಲ ಹಾಯ್ ಬಾಯ್ ಅಷ್ಟೇ ಯಾರಿಗೂ ಇದರ ಅವಶ್ಯಕತೆ ಇಲ್ಲ ಎಲ್ಲರದ್ದೂ ಬ್ಯುಸಿ ಲೈಫ್. ಬಾಜು ಮನೆಯಲ್ಲಿ ಏನು ಆದ್ರೂ ಗೊತ್ತಾಗದೆ ಇರುವ ಪರಿಸ್ಥಿತಿ ಈಗ. ಯಾಕೆಂದರೆ ಆ ನಂಬಿಕೆ ವಿಶ್ವಾಸವು ಯಾರಲ್ಲೂ ಉಳಿದಿಲ್ಲ ಉಳಿದವರು ಬೆರಳೆಣಿಕೆ ಯಲ್ಲಿ. ಮನೆಯಲ್ಲಿ ಹಿರಿಯರು ಮಕ್ಕಳು ಹೇಳಿದಂತೆ ಮೌನ ತಾಳಿ ಹೊಂದಿಕೊಂಡು ಮನೆಯಲ್ಲಿಯೇ ಉಳಿಯುತ್ತಾರೆ ಈಗಿರುವ ಪರಿಸ್ಥಿತಿ ಹೀಗೆ. ಈಗ ಪ್ರತಿಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಅತ್ತಿ ಮಾವ ಇಷ್ಟು ಮಾತ್ರ. ಹೀಗೆ ಕಾಲಮಾನ ವಿಚಾರ ಆಚಾರ ಕೆಲಸದ ಒತ್ತಡ ಅಂತಾನೆ ಇಟ್ಟುಕೊಳ್ಳರಿ ಆದರ ಆಗಿನ ಜನರ ರೀತಿನೀತಿ ಹಂಚಿಕೊಳ್ಳುವ ಮಾತು ತೀರಾ ಕಡಿಮೆ. ಎಲ್ಲವೂ ತೋರಿಕೆಯ ಜೀವನ ಈಗಿನದು ಯಾವುದರಲ್ಲಿಯೂ ಸಮಾಧಾನವು ಇಲ್ಲ ಎಲ್ಲವೂ ಇದೆ ಆದ್ರೆ ಮನ್ಸಿಗೆ ನೆಮ್ಮದಿ ಇಲ್ಲ ಯಾಕೆಂದರೆ ಎಲ್ರಿಗೂ ಒಂದಿಲ್ಲ ಒಂದು ಒತ್ತಡ ಟೆನ್ಷನ್. ಜೀವನವೇ ಟೆನ್ಷನ್. ಆಗ ಈ ಟೆನ್ಷನ್ ಪದಬಳಿಕೆ ಇರಲಿಲ್ಲ ಹಾಗಂತ ಅವರು ತುಂಬಾ ಕಾಲ ಬದುಕಿ ಬಾಳಿದರು. ನಾವು ಸಹ ಸ್ವಲ್ಪ ನಮ್ಮ ಹತ್ತಿರದವರೊಡನೆ ಒಂದು ಘಳಿಗೆ ಪ್ರೀತಿಯ ಮಾತುಗಳನ್ನು ಹಂಚಿಕೊಂಡು ನಮ್ಮ ಒತ್ತಡ ಕಡಿಮೆಮಾಡಿಕೊಳ್ಳೋಣ ಇದು ವಾಟ್ಸಪ್ ಯುಗ ಯಾರಿಗೂ ಮಾತು ಬೇಡ ಕಣ್ಣಿಗೆ ಕೆಲಸ, ಮತ್ತು ಕೈ ಕೆಲಸ ಅಷ್ಟೇ. ಮನಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಬಿಡುವಿನ ವೇಳೆಯಲ್ಲಿ ನಮ್ಮ ಹಿತೈಷಿ ಗಳೊಂದಿಗೆ ಹಾಸ್ಸ್ಯ ಹರಟೆ, ಸಂಗೀತ, ಆಧ್ಯಾತ್ಮ ವಿಚಾರ, ಸಾಹಿತಿಕ ವಿಚಾರ ಚಿಂತನೆ ಮಾಡಿದಾಗ ನಮ್ಮ ಮನಸು ಪ್ರಫುಲ್ಲ ವಾಗುವುದಲ್ಲವ *******************************************
ಲಹರಿ ಏಕೀ ಏಕತಾನತೆ ಸ್ಮಿತಾ ಭಟ್ ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ. ನನಗೋ ಅಳುವೇ ತುಟಿಗೆ ಬಂದ ಅನುಭವ. ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು ಯಾರದ್ದಾದರೂ ಮನೆಯಲ್ಲಿ, ಹೋಟೆಲ್ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ ನನಗೆ ಕೊಟ್ಟ ಸರ್ಟಿಫಿಕೇಟ್ ನ ಲೆಕ್ಕವೇ ಇಲ್ಲ. ಇದೇನು ಇದ್ದಕ್ಕಿದ್ದಂತೆ ಈ ಪರಿ ಬದಲಾವಣೆ!? ನಿರಿಕ್ಷೆಗೂ ಮೀರಿದ ಪ್ರತಿಕ್ರಿಯೆ ಅಡುಗೆಯೆಂಬ ಅರಮನೆಯಲ್ಲಿ ನನ್ನ ಜಂಗಾಬಲವೇ ಉಡುಗಿಹೋಗಿತ್ತು. ಎದ್ದು ಹೊರಟವನ ಹಿಂದಿಂದೇ ಹೋಗಿ ಯಾಕೋ ಏನಾಯ್ತು ಹೇಳು. ಮತ್ತೆ ಇಷ್ಟು ದಿನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿಂತಾ ಇದ್ದೆ ಈಗೆನಾಯ್ತು ಅಂತದ್ದು. ಸೋತ ಭಾವದೊಳಗೆ ಅವನ ಪರಿ ಪರಿಯಾಗಿ ಕೇಳುತ್ತಿದ್ದೆ. ಅದು ಆವಾಗ ಆಗಿತ್ತು,ಈಗ ಅಲ್ಲ. ಈಗಂತೂ ನಿನ್ನ ಫಲಾವ್ ಯಾಕೋ ಮೊದಲಿನ ರುಚಿ ಬರೋದೇ ಇಲ್ಲ. ಮರೆತೇ ಹೋಗಿದೆ ಅಮ್ಮಾ ನಿಂಗೆ ಆವತ್ತಿನ ರುಚಿ ಎನ್ನುತ್ತ, ಯಾವ ಪ್ರತಿಕ್ರಿಯೆಗೂ ಕಾಯದೇ ಹೊರಟೇ ಹೋಗಿದ್ದ. ಮನೆಯ ಎಲ್ಲ ಸದಸ್ಯರಿಂದ ಇಂತಹದ್ದೊಂದು ತಕರಾರು ಸದಾ ಸ್ವೀಕರಿಸುವ ನನಗೆ,ರೂಡಿಯಾದ ವಿಚಾರವೇ ಆದರೂ ಮಗನಿಂದ ಬಂದ ಪ್ರತಿಕ್ರಿಯೆಗೆ ಬೆರಗಾಗಿದ್ದೆ. ಮತ್ತದರ ನಿರೀಕ್ಷೆಯೂ ಇರಲಿಲ್ಲ. ಇಲ್ಲ ಕಣೋ ಬಹಳ ದಿನದಿಂದ ಒಂದೇ ತೆರನಾದ ರುಚಿ, ಕೈ ಅಡುಗೆ ತಿಂತಾ ಇದ್ದೀಯಲ್ಲ.ಅದೂ ಅಲ್ಲದೇ ನಿತ್ಯ ಫಲಾವ್ ಬೇಕು ಅಂತೀಯಲ್ಲ,ಅದಕ್ಕೆ ನಿನಗೆ ಬೇಜಾರು ಬಂದಿದೆ. ಎಂದು ವಾಸ್ತವದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೆ. ಇರಬಹುದು ಬಿಡು ಅಮ್ಮಾ,, ಆದ್ರೂ ನೀನ್ಯಾಕೆ ಮೊದಲಿನಂತೆ ಅಡುಗೆ ಮಾಡೋದಿಲ್ಲ ಈಗ, ಎನ್ನುತ್ತಲೇ ಎದ್ದು ನಡೆದಿದ್ದ. ಅಡುಗೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಬೇಸಿನ್ ಒಳಗೆ ಇದ್ದ ಪಾತ್ರೆಗಳು. ಅಲ್ಲಲ್ಲೇ ತಿಂದು ಎದ್ದು ಹೋದ ತಟ್ಟೆಗಳು. ಒರೆಸಿ ಇಡಬೇಕಾದ ಪಿಂಗಾಣಿಗಳು. ಪಿಲ್ಟರ್ ಕೆಳಗೆ ಚೆಲ್ಲಿದ ನೀರು. ತುಂಬಿಟ್ಟ ತರಕಾರಿಳ ದಂಡು. ಜಾಗ ತಪ್ಪಿದ ಡಬ್ಬಿಗಳು. ಮಾಡಬೇಕಾದ ನಿತ್ಯದ ಏಕತಾನತೆಯ ನೋವನ್ನು ನೆನಪಿಸುತ್ತಿತ್ತು. ಸ್ವಲ್ಪ ಯೋಚಿಸಿ ಊಟ ಮಾಡುವವರಿಗೇ ಏಕತಾನತೆ ಕಾಡುವಾಗ ಅಡುಗೆ ಮಾಡುವರಿಗೆ ಇನ್ನೆಂತ ಏಕತಾನತೆ ಕಾಡುತ್ತದೆ ಎಂದು. ಕೇವಲ ಊಟ, ಅಡುಗೆ ವಿಷಯ ಮಾತ್ರವಲ್ಲ, ಪ್ರತೀ ಕೆಲಸದಲ್ಲೂ ಅಷ್ಟೇ ಮಾಡುವ ಕಷ್ಟ ಆಡುವವನಿಗೆ ಎಂದೂ ಅರ್ಥವಾಗುವದಿಲ್ಲ. ಅದಕ್ಕೇ ಹೇಳೋದು ಮಾತೊಗೆದು ಹೋಗುವಾಗಿನ ಅಹಂಕಾರ ಮೈ ಮುರಿದ ದುಡಿಯುವಾಗ ಇರೋದಿಲ್ಲ ಎಂದು. ಈಗ ಐದಾರು ತಿಂಗಳಿನಿಂದ ಕರೋನಾ ಕಾರಣದಿಂದಾಗಿ, ಕಾಲ ಎಲ್ಲರನ್ನೂ ಬದಿಗೆ ಸರಿಸಿ ತಾನು ಮಾತ್ರ ಓಡುತ್ತಿದೆಯೇ ಅನ್ನಿಸುತ್ತಿದೆ. ಅದೆಷ್ಟೋ ಜನರ ಮನದೊಳಗೆ ಏಕತಾನತೆ ರೇಜಿಗೆ ಹುಟ್ಟಿಸುವಷ್ಟು ಹರಡಿಕೊಂಡಿದೆ. ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಪದ್ದತಿಗೆ ಪುಲ್ ಸ್ಟಾಪ್ ಇಟ್ಟು ನಗುತ್ತಿದೆ. ಕರೋನಾ. ಇಂದು ಸರಿ ಹೋಗುತ್ತದೆ, ನಾಳೆ ಸರಿ ಹೋಗುತ್ತದೆ, ಎಂದು ಕಾದು ಕಾದು ಸುಸ್ತಾದ ಭಾವಗಳಿಗೆ ವಾಸ್ತವದ ಅರಿವು ಮೂಡಿಸಲು ಶತ ಪ್ರಯತ್ನ ಪಡುತ್ತಿದ್ದೇವೆ. ಒಂದೇ ಊಟ, ಒಂದೇ ನೋಟ, ಒಂದೇ ಮಾತು,ಕುಳಿತಲ್ಲೇ ಕೆಲಸ,ಪಿಳಿ ಪಿಳಿ ಕಣ್ಣು ಅದೇ ಮುಖ,ಅದೇ ಭಾವ,ಎಲ್ಲಿಯೂ ಹೋಗೋದು ಬರೋದು ಅಂತೂ ಇಲ್ವೇ ಇಲ್ಲ.ಕೇವಲ ಭಯ ಭಯ. ಕಪಾಟಿನಲ್ಲಿ ಡ್ರೆಸ್ಸುಗಳಂತೆ ಬದುಕು ಬಣ್ಣ ಮಾಸುತ್ತಿದೆ ದುಬಾರಿ ಮೇಕಪ್ ಕಿಟ್ಗಳಂತೆ ಭಾವಗಳು ಡೇಟ್ ಬಾರ ಆಗುತ್ತಿವೆ. ಒಂದಿನ ರಜೆ ಸಿಕ್ಕಿದ್ರೆ ಸಾಕಪ್ಪ ಅಂತಿದ್ದವರು ಯಾವಾಗಪ್ಪ ಕೆಲಸಕ್ಕೆ ಹೋಗೋದು ಎಂದು ಒದ್ದಾಡುತ್ತಿದ್ದಾರೆ. ಮಾಡಬೇಕಾದ ಕೆಲಸಗಳೆಲ್ಲ ಮಕಾಡೆ ಮಲಗಿವೆ. ಆದರೆ ರಾತ್ರಿ ಬೆಳಗು ಮಾತ್ರ ಆಗುತ್ತಲೇ ಇದೆ, ನಾವು ಮಾತ್ರವೇ ನಿಂತ ನೀರಾಗಿದ್ದೇವೆ ಎಂದು ಅಲವತ್ತು ಕೊಳ್ಳುತ್ತ, ಆವಾಹನೆ ಮಾಡದೇ ಹೋದರೂ ಬರುವ ಬೇಸರದ ಬೂತಕ್ಕೆ ಬಸವಳಿದು ಹೋಗಿದ್ದೇವೆ. ಆರಂಭದ ಬದಲಾವಣೆಯನ್ನು ನಗು ನಗುತ್ತಲೇ ಸ್ವೀಕರಿಸಿದ ನಾವು,ಹೊಸ ಮಾರ್ಪಾಡಾಗಿ ಬದಲಾಯಿಸಿಕೊಳ್ಳಬೇಕೆಂದುಕೊಂಡ ನಾವು, ಈಗ ಮುಗುಮ್ಮಾಗಿ ಕುಳಿತಿದ್ದೇವೆ. ಉತ್ಸಾಹ ಕುಂದಿದೆ.ಅಯ್ಯೋ ಏನಾದರೂ ಆಗಲಿ, ಒಂದು ಬದಲಾವಣೆ ಬರಲಿ, ಎಂದು ಬಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಬಂದಿಸಿಟ್ಟ ಸಮಯವನ್ನೂ ಸಂಯಮದಿಂದ ಕಳೆಯಬೇಕು. ಹೊಸತೇನ್ನೋ ಕಂಡುಕೊಳ್ಳಬೇಕು,ಎಂದು ಮನಸಿನಲ್ಲಿ ಲೆಕ್ಕ ಹಾಕಿದ ಸರಕುಗಳೆಲ್ಲ ಮುಗಿದು ಹೋಗಿವೆ. ಏನನ್ನೇ ಆದರೂ ಎದುರಿಸುವ ಛಲ ಕಳ್ಳಬೆಕ್ಕಿನಂತೆ ಓಡಾಡುತ್ತಿದೆ. ಯಾವ ಏಕತಾನತೆಯೇ ಆದರೂ ಬೇಸರ ತರಿಸುವುದು ಮನುಷ್ಯನ ಸ್ವಾಭಾವಿಕ ಗುಣಲಕ್ಷಣ,ಬಂಗಲೆಯಲ್ಲಿ ಬದುಕುವವಗೆ ಗುಡಿಸಲು ಆಕರ್ಷಿಸುವಂತೆ, ಗುಡಿಸಲು ಅರಮನೆಯ ಕನಸು ಕಾಣುವಂತೆ, ನಿರಂತರವಾದ ಸುಖ, ಪ್ರೀತಿ,ನೋವು, ಕಷ್ಟಗಳೂ, ಬದಲಾವಣೆಯನ್ನು ಬಯಸುತ್ತವೆ ಮತ್ತು ಬದಲಾವಣೆಯ ಮಾರ್ಗವನ್ನೂ ಕಂಡುಕೊಳ್ಳುತ್ತವೆ. ಯಾಕೆಂದರೆ ಮನುಷ್ಯ ಸದಾ ಚಲನೆಯನ್ನು ಇಷ್ಟಪಡುತ್ತಾನೆ. ನಿಂತ ನೀರಾದರೆ ಅಸಾಧ್ಯ ಅಸಹನೆಯಿಂದ ಗಬ್ಬುನಾರಲು ಶುರುವಾಗುತ್ತಾನೆ. ಓಡುವ ಮೋಡ,ಹರಿಯುವ ನದಿ. ಬೀಸುವ ಗಾಳಿ,ಕೊನೆಗೆ ಭೂಮಿ ಸೂರ್ಯ ಚಂದ್ರ ಸಕಲ ಗ್ರಹಗಳೂ ಚಲನೆಯ ಪ್ರತೀಕವೇ.ಅವುಗಳನ್ನೆಲ್ಲ ಹೇಗೆ ತಡೆದು ಹಿಡಿಯಲು ಸಾಧ್ಯವಿಲ್ಲವೋ , ತಡೆದರೂ ಅನಾಹುತವಾಗುವದೋ, ಮನುಷ್ಯನ ಚಲನೆಯನ್ನು ತಡೆದರೂ ಅದೇ ಸಂಭವಿಸುತ್ತದೆ. ಇನ್ನು ಪುಟ್ಟ ಪುಟ್ಟ ಮಕ್ಕಳನ್ನು ಹೇಗೆ ಒಂದೇ ಗತಿಯಲ್ಲಿ ಇಡಲು ಸಾಧ್ಯ. ಬಹಳವೇ ಖಿನ್ನರಾಗುತ್ತಿದ್ದಾರೆ ಅವರು. ಶಾಲೆ ಎನ್ನುವುದು ಮಕ್ಕಳಿಗೆ ಬೇಸರಕ್ಕಿಂತ ಹೆಚ್ಚು ಆಪ್ತಸಂಗತಿ. ಮನೆಯಲ್ಲಿ ಇದ್ದೂ ಇದ್ದೂ ಏನೂ ಘಟಿಸದ ಬದುಕಿನಿಂದ ಬೇಸತ್ತ ಭಾವ ಹಲವು ಮಕ್ಕಳಲ್ಲಿ ವ್ಯಕ್ತವಾಗುತ್ತಿದೆ. ಸ್ವಚ್ಚಂದ ಹಕ್ಕಿಗಳ ಗೂಡಿನಲ್ಲಿ ತುಂಬಿದರೆ ಏನಾದೀತು ಅಲ್ಲವೇ!? ಎನನ್ನೇ ಆದರೂ ಸ್ವಲ್ಪ ದಿನ ಸಹಿಸಿಕೊಳ್ಳುತ್ತದೆ. ಮನಸು. ಬಹಳ ಧೀರ್ಘಕಾಲದವರೆಗಿನ ಏಕತಾನತೆಗೆ ಒಳಗಾಗಲಾರದು. ಬದಲಾವಣೆ ಬಯಸುತ್ತಲೇ ಇರುತ್ತದೆ. ಆಗಲೇ ಅಲ್ಲವೇ? ನಾವು ಪ್ರವಾಸ, ಶಾಪಿಂಗ್,ಸಂಬಂಧಿಕರಮನೆ,ಅಂತೆಲ್ಲ ತಾತ್ಕಾಲಿಕ ಗ್ಯಾಪ್ ತೆಗೆದುಕೊಂಡು ಮತ್ತೆ ಸ್ವಕ್ಷೇತ್ರಕ್ಕೆ ಮರಳುವದು. ಜೀವನದ ಪರ್ಯಂತ ನಾವು ಹೀಗೆ ಮನಸ್ಸನ್ನು, ಬದುಕನ್ನು, ರಿಪ್ರೆಷ್ ಆಗುವ ಕಾರ್ಯ ಮಾಡುತ್ತಲೇ ಇರುತ್ತೇವೆ,ಏಕೆಂದರೆ ಆಗಾಗ ಬರುವ ಏಕತಾನತೆಯಿಂದ ಮಕ್ತಿಪಡೆಯಲು,ಅದು ಸರಿಕೂಡಾ. ಆದರೆ ಈಗ !? ಬದಲಾವಣೆಗಳನ್ನು ಬರಮಾಡಿಕೊಳ್ಳಲಾಗದೇ ಅಸಹಾಯಕರಾಗಿ ಪರ ಪರ ಕೆರೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಅಪರೂಪಕ್ಕೆ ಹೊರಗೆ ಕಾಲಿಟ್ಟ ಗಳಿಗೆಯನ್ನೇ ಭಯಂಕರ ಖುಷಿಯಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ಬದಲಾವಣೆಗಳನ್ನು ಮನಸು ಬಯಸುವಾಗ, ಇನ್ನೆಷ್ಟು ದಿನ ಒಂದೇ ರುಚಿಯ ಫಲಾವ್ ಅನ್ನೇ ಹೊಗಳಿ ಹೊಗಳಿ ತಿನ್ನಲು ಸಾಧ್ಯ!? ಅವನ ಏಕತಾನತೆಗೂ ಅರ್ಥವಿದೆ ಅಂತನ್ನಿಸಿತು ನನಗೂ. ಮತ್ತೆ ನನ್ನೆದುರು ಬಂದು ಅಮ್ಮಾ ಶಾಲೆ ಶುರುವಾದರೆ ಎಲ್ಲ ಸರಿಯಾಗುತ್ತೆ ಅಂದ. ಹೌದು ಕಣೋ ಶಾಲೆಗೆ ಹೋಗಿ ಬಿಸಿಯೂಟ ಉಂಡು ಸ್ನೇಹಿತರ ಜೊತೆ ಕಳೆದು ಓದು ಬರಹ ತಲೆ ತುಂಬಾ ಹೊದ್ದು ಹೈರಾಣಾದಾಗ. ಖಂಡಿತವಾಗಿ ಮತ್ತದೇ ಫಲಾವ್ ಗೆ ಬಾಯಿ ಚಪ್ಪರಿಸುತ್ತೀಯಾ. ಬದುಕೂ ಹಾಗೆ ಸಂಪೂರ್ಣವಾಗಿ ನಿರಂತರ ಬದಲಾವಣೆಯೊಂದಿಗೇ ಅನುಭವಿಸುತ್ತಿರಬೇಕು ಆಗಲೇ ಲವಲವಿಕೆ. ಕಾಲ ಚಕ್ರದ ಗತಿಯಲ್ಲಿ ಏಳುಬೀಳುಗಳ ಸರಿದೂಗಿಸಿ ಹೋರಾಡುತ್ತಿದ್ದರೇ ಬದುಕಿಗೊಂದು ಅರ್ಥ ಎಂದೆ. ಬೇಗ ಶಾಲೆ ಶುರುವಾಗಲಿ ಎಂದು ಪ್ರಾರ್ಥಿಸುತ್ತಿದ್ದ. *******************************************************
ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ… ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ ಥಟ್ ಎಂದು ಏಕಾಂತ ವಾಸಕ್ಕೆ ಹೋಗಿ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ.!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸದ ನರಕವೆಂದು. ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಹೀಗೆ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು. ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ… ಇಷ್ಟಯೇ… ಸಾಕೇ..?! ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾವೇನು ಹಳೆಯ ಕಾಲದವರೇ? ಹೊಲ -ಮನೆ ತೋಟ-ತುಡಿಕೆ ಎಂದು ದಿನ ಮುಗಿಸಲು? ನಗರದಲ್ಲಿ ವಾಸಿಸಲು ಬಂದ ಮೇಲೆ ಗದ್ದೆ ತೋಟಗಳ ಮಾತಾದರೂ ಎಲ್ಲಿಂದ ಬರಬೇಕು? ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವರು ನಾವು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ? ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು? ಅವರಿಗೂ ಬೇಸರವೇ… ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ತವರು, ನೆಂಟರಿಷ್ಟರ ಮನೆ, ಕಾರ್ಯಕ್ರಮ, ಸಂಭ್ರಮ ನಲಿವು , ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ, ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು. ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು? ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ. ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ. ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ನಿಜ, ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ. *******************************************
ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ Read Post »
ನೀ ಒಂದು ಸಾರಿ ನನ್ನ ಮನ್ನಿಸು ಜಯಶ್ರೀ ಜೆ.ಅಬ್ಬಿಗೇರಿ ಪ್ರೀತಿ ಪ್ರೇಮದ ವಿಷಯದಲ್ಲಿ ತಿರಸ್ಕರಿಸಲ್ಪಟ್ಟರೆ ಅದೆಂಥ ಭಯಂಕರ ನೋವು ಆಗುತ್ತದೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಅದೊಂಥರ ಹಲ್ಲು ನೋವಿದ್ದ ಹಾಗೆ. ಎಂಥ ಹುಲಿಯಂಥ ಮನುಷ್ಯನನ್ನೂ ನರಮ್ ಮಾಡಿಬಿಡುತ್ತದೆ. ಈ ಸಾಲುಗಳು ನಿನ್ನ ಭಾವ ಪ್ರಪಂಚವನ್ನು ತಟ್ಟುತ್ತವೆ ಅಂದುಕೊಂಡಿದೀನಿ. ಇವು ಕೇವಲ ಪದಗಳಲ್ಲ. ನಿನಗಾಗಿ ಬರೆದ ಮೌನ ಮಿಲನದ ಮುದ್ದು ಮನವಿ ಪತ್ರ. ಪ್ರೀತಿಯ ಭಾವದಲ್ಲಿ ವಿರಹದ ಉರಿ ಸಣ್ಣಗೆ ಮನಸ್ಸನ್ನು ಸುಡುತ್ತಿದೆ. ಒಂದೇ ಒಂದು ಸಾರಿ ಎದೆಗವಚಿಕೊಂಡು ಸಾಲು ಸಾಲು ಮುತ್ತಿಕ್ಕಿದರೆ ಸಾಕು. ಹೃದಯದಲ್ಲಿ ನೀ ಮಾಡಿದ ಆಳವಾದ ಗಾಯ ಮಾಯ. ಹರಿಯುವ ನೀರಿನಂತೆ ಸುಡುವ ಬೆಂಕಿಯಂತೆ ಅರಳಿದ ಪ್ರೀತಿಯನ್ನು ಬಚ್ಚಿಡುವುದು ಅಸಾಧ್ಯ. ಪ್ರೀತಿಯಲ್ಲಿ ಸಾವು ಬಂದರೂ ಲೆಕ್ಕಕ್ಕಿಲ್ಲ. ಸಾವಿನ ಭಯವೂ ನನಗಿಲ್ಲ.ಭಯದ ನೆರಳಲ್ಲಿ ಬದುಕುವುದು ಒಂದು ಬದುಕೇ? ಪ್ರೀತಿಯಿಲ್ಲದ ಜೀವನ, ಜೀವನವೂ ಅಲ್ಲ. ನೀನು ಒಲಿದಾಗ ಇಷ್ಟಿಷ್ಟೇ ಬದಲಾಗಿದ್ದೆ. ತಡೆ ಹಿಡಿದ ಮನದ ಎಲ್ಲ ಬಯಕೆಗಳನು ಮೆರವಣಿಗೆಗೆ ಸಜ್ಜುಗೊಳಿಸಿದ್ದೆ. ನಾನು ಮಾತಿನಲ್ಲಿ ಒರಟ ಎಂದು ಎಲ್ಲರಿಗೂ ಗೊತ್ತು ಆದರೆ ಹೃದಯ ಮೆತ್ತನೆಯ ಹತ್ತಿಯಂತೆ ಬಲು ಮೃದುವಾಗಿದೆ ಕಣೆ. ಕಾವ್ಯ ಸಾಲಿನಲಿ ಧುಮ್ಮಿಕ್ಕಿ ಹರಿಯುವ ಜಲಧಾರೆಯಂತೆ. ನನ್ನ ಪ್ರೀತಿಗೆ ಮನಸೋತು ನನ್ನ ಬಲಿಷ್ಟ ತೋಳುಗಳಲ್ಲಿ ನಿನ್ನ ನೀನೇ ಬಂಧಿಸಿಕೊಂಡು ಸುಖಿಸಿದ ಪರಿಯನು ಬಣ್ಣಿಸಲು ಪದಕೋಶದ ಪದಗಳು ಸಾಲವು. ನಾನು ನೀನು ಜೊತೆ ಸೇರಿ ಓಡಾಡುತ್ತಿದ್ದಾಗ ಕ್ಷಣ ಕ್ಷಣವೂ ಲವ ಲವಿಕೆ ಪುಟಿದೇಳುತ್ತಿತ್ತು. ಎದೆ ಸೇರಿದ ಹಿತಾನುಭವ ಗುಪ್ತವಾಗಿ ಇರುಳಿನಲ್ಲಿ ಎದ್ದು ನಲಿಯುತ್ತಿತ್ತು. ಅದರಲ್ಲೇ ಮೈ ಮರೆಯುತ್ತಿದ್ದೆ. ಈಗ ನಿನ್ನ ಮುಂದೆ ನನ್ನ ಮನದ ತೊಳಲಾಟ ಹೇಳದಿದ್ದರೆ ಉಳಿಗಾಲವಿಲ್ಲವೆಂದು ಈ ಓಲೆ ಬರೆಯುತಿರುವೆ. ಪ್ರೇಮ ನಿವೇದನೆಯ ಸಂದರ್ಭದಲ್ಲಿ ನಾನು ಒರಟಾಗಿ ನಡೆದುಕೊಂಡೆ ಎಂಬುದು ನನಗೂ ಅನ್ನಿಸಿದೆ ಗೆಳತಿ. ಅಷ್ಟೊಂದು ಆಪ್ತಳಾದ ನಿನ್ನ ಮುಂದೆ ಇನ್ನೇನು ಮುಚ್ಚು ಮರೆ ಎಂದು ಹಾಗೆ ನಡೆದುಕೊಂಡೆ ಹೊರತು, ಮತ್ತೆ ಬೇರೆ ಯಾವ ಕಾರಣಗಳೂ ಇಲ್ಲ. ಪ್ರೇಮ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿ ನಡೆದದ್ದು ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಿನ್ನನ್ನು ನನ್ನ ಜೀವದಂತೆ ಕಂಡ ನನಗೆ ಈ ರೀತಿ ಶಿಕ್ಷಿಸುವುದು ತರವೇ? ನೀನೇ ಪ್ರಶ್ನಿಸಿಕೋ ಗೆಳತಿ. ನನ್ನುಸಿರಲ್ಲಿ ಉಸಿರಾಗಿ ನೀನಿರುವಾಗ, ಉಸಿರಿನ ಕೊನೆಯವರೆಗೂ ಜೊತೆಯಲ್ಲೇ ಜೊತೆಗಿರುವೆ. ಈಗಷ್ಟೇ ಕಲೆತಿರುವ ನವಿರಾದ ಮನವನು ಒರಟಾದ ಮಾತುಗಳಿಂದ ಘಾಸಿಗೊಳಿಸಿರುವೆ. ನಿನ್ನೆದೆಯ ಮೃದು ಭಾವಗಳ ಸಂತೈಸಬೇಕು. ಹೃದಯಾಳದಿಂದ ಆರಾಧಿಸುವ ನಿನ್ನನು ನೆನೆದರೆ ಸಾಕು ಭಾವ ಕೋಶವೆಲ್ಲ ಬೆಚ್ಚಗಾಗುವುದು. ನೀನೇ ನಿನ್ನ ಕೈಯಾರೆ ಹೆಣೆದ ಸ್ವೆಟರ್ನ್ನು ನನ್ನ ಜನುಮ ದಿನದಂದು ಉಡುಗೊರೆಯಾಗಿ ನೀಡಿದೆ. ಅದರ ಮೇಲಿರುವ ಕೆಂಗುಲಾಬಿ ನನ್ನನ್ನು ಮುದ್ದಿಸಲು ಕೆದಕಿ ಕರೆಯುತ್ತದೆ. ಈ ಬಿರು ಬೇಸಿಗೆಯಲ್ಲೂ ನಿನ್ನೊಲವಿನ ಉಡುಗೊರೆ ಮೈಗಂಟಿಸಿಕೊಂಡೇ ಹೊರ ಬೀಳುವೆ. ಗೆಳೆಯರೆಲ್ಲ ಕಾಲೆಳೆದರೂ ಕಿವಿಗೊಡುವುದಿಲ್ಲ. ನೀನೇ ನನ್ನನ್ನು ಗಟ್ಟಿಯಾಗಿ ತಬ್ಬಿದ ಭಾವ ನನ್ನನ್ನು ಸಣ್ಣನೆಯ ನಶೆಗೊಳಗಾದವನಂತೆ ಆಡಿಸುತ್ತದೆ. ಅದೊಮ್ಮೆ ಇಡೀ ದಿನ ಕಾಡು ಮೇಡು ಬೆಟ್ಟ ಗುಡ್ಡ ಕೈ ಕೈ ಹಿಡಿದು ತಿರುಗಿ ಇಬ್ಬರಿಗೂ ಸುಸ್ತಾಗಿತ್ತು. ಸುಂದರ ಹೂದೋಟದ ಪುಟ್ಟ ಗುಡಿಲಿನ ಮುಂದೆ ಸಂಜೆ ಬಾನಿನ ರಂಗಿಗೆ ಮೈ ಮರೆತಿದ್ದೆ. ಹೃದಯದಲ್ಲಿ ಅವಿತಿದ್ದ ಪ್ರೇಮವು ಕಾರ್ಮೋಡಗಳ ನಡುವೆ ಝಗ್ಗನೇ ಬೆಳಗುವ ಮಿಂಚಂತೆ ನಿನ್ನ ಕಂಗಳಲ್ಲಿ ಮಿಂಚಿದ್ದನ್ನು ಕಂಡೆ. ಜಗದ ಪ್ರೇಮವನ್ನೆಲ್ಲ ನಿನ್ನ ಹೃದಯಕ್ಕಿಳಿಸಿಹರೇನೋ ಎನ್ನುವಂತೆ ಮುಖಭಾವ. ಅಲ್ಲಿರುವ ಕಲ್ಲು ಬಂಡೆಯ ಮೇಲೆ ಸುಖಾಸೀನನಾದೆ. ನನ್ನ ಬೆರಳುಗಳನು ನವಿರಾಗಿ ಸವರಿದೆ. ಮೊದಲ ಸಲ ಇಂಥ ಒಲವ ಪರಿ ಕಂಡು ಅಚ್ಚರಿಗೊಂಡೆ. ಒಲುಮೆಯಿಂದ ನನ್ನ ಬೆನ್ನಿಗೆ ನಿನ್ನ ಎದೆಯನು ತಾಗಿಸಿದೆ. ಮೈ ನರ ನಾಡಿಗಳೆಲ್ಲ ಒಮ್ಮೆಲೇ ರೋಮಾಂಚನಗೊಂಡವು. ನನ್ನ ಭುಜದ ಮೇಲೊರಗಿ ಕೆನ್ನೆಗೆ ಮುತ್ತಿಕ್ಕಿದೆ.ಅದ್ಯಾವಾಗ ನಿನ್ನ ಕೋಮಲ ಬೆರಳುಗಳ ಸಂದುಗಳನು ನನ್ನ ಒರಟಾದ ಬೆರಳುಗಳು ತುಂಬಿದವೋ ಅರಿವಿಗೆ ಬರಲೇ ಇಲ್ಲ. ಆಲಿಂಗನದಲ್ಲಿ ತುಟಿಗೆ ತುಟಿ ಸೇರಿಸಿ ದೀರ್ಘವಾಗಿ ಚುಂಬಿಸಿದ ಹಿತ ಒಂದು ಅದ್ಭುತ ಕಾವ್ಯ ಓದಿದ ರೀತಿಯಂತಿತ್ತು. ಬಲು ಹುಮ್ಮಸ್ಸಿನಿಂದ ಕಾಮದ ಕುದುರೆಯನು ಓಡಿಸಲು ಉತ್ಸುಕನಾದೆ. ಪ್ರೇಮೋತ್ಸವದ ಸಂಭ್ರಮದಲ್ಲಿ ಮೀಯಲು ಅಣಿಯಾಗಿದ್ದೆ. ಪ್ರೀತಿಯ ಮಳೆಗರೆದು ದಾಹ ತೀರಿಸಲು ಮುಂದಾಗಿದ್ದೆ ಎಷ್ಟಾದರೂ ಹೆಣ್ಣು ಜೀವವಲ್ಲವೇ? ಬಯಲಲ್ಲಿ ಬೆತ್ತಲಾದರೆ ಮುಂದಾಗುವ ಆಗು ಹೋಗುಗಳಿಗೆ ಈ ಮಿಲನವೇ ಮುಳುವಾಗುವ ಯೋಚನೆ ಕಾಡಿದಾಕ್ಷಣ ನಿನ್ನ ನಡುವಲ್ಲಿ ಸಣ್ಣಗೆ ನಡುಕ ಶುರುವಾಯಿತು. ಗುಡಿಸಲಿನಿಂದಾಚೆ ಹೆಜ್ಜೆಯಿಟ್ಟು ಹುಲಿಯಿಂದ ತಪ್ಪಿಸಿಕೊಂಡ ಹರಿಣಿಯಂತೆ ಕಾಡನ್ನು ದಾಟಿ ಊರು ತಲುಪಿದೆ.ಅಂದಿನಿಂದ ನನ್ನ ಈ ಬದುಕಿಗೆ ಮಳೆ ಚಳಿ ಬಿಸಿಲಿನ ಲೆಕ್ಕವೇ ಇಲ್ಲ. ದೇಹ ಸಮೀಪಿಸಿದರೂ ಮನಸ್ಸು ಗೆಲ್ಲಲಾಗಲಿಲ್ಲ ಎನ್ನುವ ನೋವು ಕಾಡುತ್ತಿದೆ. ಅರಿಯದೇ ಮಾಡುತ್ತಿದ್ದ ತಪ್ಪಿಗೆ ತೆರೆ ಎಳೆದು ದೊಡ್ಡ ತಪ್ಪನು ತಪ್ಪಿಸಿದೆ. ನಿನಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನೀನು ನನ್ನಿಂದ ದೂರವಾದ ಮೇಲೆ ಬದುಕು ಅದೆಷ್ಟೋ ಅನುಭವಗಳನು ಹೇಳಿ ಕೊಟ್ಟಿದೆ. ಬಯಲಲ್ಲಿ ಬೆತ್ತಲೆಯ ಕೋಟೆ ಏರಿದ್ದರೆ ಬದುಕಿನ ಹಳಿ ತಪ್ಪಿ ಹೋಗುತ್ತಿತ್ತು ಎನ್ನುವ ಅರಿವು ಬಂದಿದೆ. ಹೀಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿಕೊಂಡು ನಿನಗೆ ನೀನು ಶಿಕ್ಷಿಸಿಕೊಳ್ಳದಿರು. ರಾಜ ಬೀದಿಯಲ್ಲಿ ನನ್ನ ಪಟ್ಟದ ರಾಣಿಯಾಗಿ ನಿನ್ನ ಸ್ವೀಕರಿಸುವ ಕಾಲ ಬಂದಿದೆ. ‘ನೀ ಒಂದು ಸಾರಿ ನನ್ನ ಮನ್ನಿಸು. ನನ್ನ ಮೇಲೆ ದಯೆ ತೋರಿಸು ಓ ಚಿನ್ನ ರನ್ನ ನನ್ನ ಪ್ರೀತಿಸು.’ ಎಂದು ಹಾಡುತ್ತ ಅದೇ ಗುಡಿಸಲಿನ ಮುಂದೆ ಕಾದು ಕುಳಿತಿರುವೆ. ನಮ್ಮೀರ್ವರ ಹೆತ್ತವರನೂ ಒಪ್ಪಿಸಿರುವೆ. ನನ್ನೊಂದಿಗೆ ಜೀವನ ಪಯಣ ಬೆಳೆಸಲೋ ಬೇಡವೋ ಎನ್ನುವ ಹೊಯ್ದಾಟದಲ್ಲಿ ಬೀಳಬೇಡ. ನಿನ್ನ ಮನಸ್ಸನ್ನು ಗೆದ್ದ ಮೇಲೆಯೇ ಮೈಗೆ ಮೈ ತಾಗಿಸುವೆ ಗೆಳತಿ. ಮೋಡ, ಮಳೆ, ಹಗಲು, ರಾತ್ರಿ, ಮುಸ್ಸಂಜೆ, ಮುಂಜಾವು, ಸಾಗರ, ನದಿ, ತೊರೆ, ಹಳ್ಳ, ಕೊಳ್ಳದ ದಂಡೆಗಳು ಇನ್ನು ಮೇಲೆ ನಮ್ಮ ಪ್ರೀತಿ ತುಳುಕಾಡಿ ಹೊರಚೆಲ್ಲುವುದಕ್ಕೆ ಸಾಕ್ಷಿಯಾಗಿಸೋಣ. ***************************************
ನೀ ಒಂದು ಸಾರಿ ನನ್ನ ಮನ್ನಿಸು Read Post »
You cannot copy content of this page