ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ

ಹಿಂಡು ಮೋಡದ ಗಾಳಿ ಸವಾರಿ -ಆಷಾಢ

    ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು ಮಳೆ ಆರಂಭದ ಮಾಸ. ಆದ್ದರಿಂದ ಮಳೆಗಿಂತಲೂ ಮೊದಲು ಬರುವ ಮೋಡದ ಮೆರವಣಿಗೆ, ಅದಕ್ಕೆ ಗಾಳಿಯ ಹಿಮ್ಮೇಳ ಜೋರಾಗಿರುತ್ತದೆ.

ಗಗನಂ ಕೆಟ್ಟದು ಚಂದ್ರಸೂರ್ಯರಳಿದರ್

ಆಲದೊಳ್ ಪೂಳ್ದಿತ್ತು ಧಾತ್ರೀತಳಂ

ಖಗಸಂಚಾರತೆ ಶೂನ್ಯಮಾದುದು ನಿರುದ್ಯೋಗಕ್ಕೆ ಪಕ್ಕಾದುದೀ

ಜಗಮೆಂದೆಂಬಿನಮೆಯ್ದೆ ಕಟ್ಟಿ ಕರೆದತ್ತಾಸಾರಮೀ ಲೋಕದೊಳ್ (ಕಾವ್ಯ ಸಾರಂ)

Selective Focus Photography of Brown Leaf Plant

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿದ ಮೋಹನ ರಾಕೇಶರ ನಾಟಕ “ಆಷಾಢದ ಒಂದು ದಿನ”

ಅದರ ಕತೆ ಕವಿಯಾದ ಕಾಳಿದಾಸ ರಾಜನಾಗುವ ಕುರಿತಾಗಿದ್ದು.   ಪ್ರಕೃತಿಯ ಮಡಿಲಿನಿಂದ ನಗರದೆಡೆಗೆ ಅವನಿಟ್ಟ ಹೆಜ್ಜೆಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಆತನ ಬಾಲ್ಯದ ಗೆಳತಿ ಆತನ ಒಳಿತಿಗಾಗಿ ಬಲಿಕೊಡುವ ಪ್ರೀತಿಯನ್ನು ಮತ್ತು ವಿರಹವನ್ನು ಕಟ್ಟಿಕೊಡುವುದಕ್ಕಾಗಿ ನಾಟಕಕಾರರು ಆಷಾಢದ ಪ್ರಕೃತಿಯ ಚಿತ್ರಣವನ್ನು ಬಳಸಿಕೊಂಡಿದ್ದಾರೆ. ದೂರದೂರದಿಂದ ಹಿಂಡುಗಟ್ಟಿ ಬರುವ ಕರಿಮೋಡಗಳು, ಕಿಟಕಿ ಬಾಗಿಲುಗಳನ್ನು ಮುರಿಯುವಂತೆ ಬೀಸುವ ಗಾಳಿ, ಆಗಾಗ ಆರ್ಭಟಿಸುವ ಗುಡುಗು-ಮಿಂಚು ಇವೆಲ್ಲ ಪಾತ್ರಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗುತ್ತವೆ. ಕವಿದ ಕಾರ್ಮೋಡ ನಾಯಕಿಯ ಆತಂಕವನ್ನು ಧ್ವನಿಸಿದರೆ, ಸುರಿಯುವ ಮಳೆ ಅವಳ ಉಕ್ಕುವ ದು:ಖಕ್ಕೆ ಕನ್ನಡಿ ಹಿಡಿಯುತ್ತದೆ. ತನ್ನೆಲ್ಲ ಭಾವನೆಗಳನ್ನು ಮನದೊಳಗೆ ಅದುಮಿಟ್ಟು ತ್ಯಾಗಿಯಾದ ನಾಯಕಿಯ ಮನೋಭೂಮಿಕೆಯಾಗಿ ಕಾಣುವ ಆಷಾಢ ಹಾಗೆ ನೋಡಿದರೆ ಈ ನಾಟಕದಲ್ಲಿ  ಒಂದು ಪಾತ್ರವೇ ಆಗಿದೆ.

ಆಷಾಢದ ರಾತ್ರಿಗಳು ಎನ್ನುವ ಒಂದು ಪತ್ತೆದಾರಿ ಕಾದಂಬರಿಯ ಉದ್ದಕ್ಕೂ ಕೊಲೆ ಇತ್ಯಾದಿ ಘಟನೆಗಳು ನಡೆಯುವುದು ಆಷಾಢದ ರಾತ್ರಿಗಳಲ್ಲಿ. ಕಾಫಿ ತೋಟ, ಜರ‍್ರನೆಯ ಮಳೆ, ಊಳಿಡುವ ಗಾಳಿ ಇವೆಲ್ಲವುಗಳು ಸೇರಿಕೊಂಡು ಈ ಕಾದಂಬರಿ ತುಂಬ ರೋಚಕವಾದ ಅವಿಸ್ಮರಣೀಯ ಅನುಭವವನ್ನು ಕಟ್ಟಿ ಕೊಡುತ್ತದೆ.

ವರಕವಿ ಬೇಂದ್ರೆಯವರು ಸಖಿಗೀತದಲ್ಲಿ ಆಷಾಢವನ್ನು ವರ್ಣಿಸುವುದು ಹೀಗೆ

ಆಷಾಢದಾ ಮುಗಿಲು ಬೀಸಾಡಿ ಬಂದವು

ಈಸಾಡಿ ಬಂದಂಥ ಆನೆಗಳೆ

ರೋಷದ ತೋಷದ ಬೆಡಗು ಬಿನ್ನಾಣವಂ

ಬೀರುವ ಬಿಂಕದಿ ಮೆರೆಯುವೊಲೆ

ಹೌದು ಆಷಾಢವೇ ಹಾಗೆ. ಚೈತ್ರ-ವೈಶಾಖಗಳಲ್ಲಿ ಗಿಡಗಳು ಚಿಗುರಿ ಹೊಸದಾಗಿ ಪಡೆದದ್ದನ್ನು ಬೀಸುಗಾಳಿಯಿಂದ ಆಷಾಢ ಅಲುಗಾಡಿಸುತ್ತದೆ. ಎಷ್ಟೊ ವರ್ಷಗಳ ನಿಷ್ಟೆಯ ಬೇರುಗಳನಿಳಿಬಿಟ್ಟು ನಿಂತ ಮರಗಳನ್ನೂ ಜೋರಾಗಿ ತಳ್ಳುತ್ತ “ಗಟ್ಟಿಯಾ, ನೀನು ಗಟ್ಟಿಯಾ” ಅಂತ ಪರೀಕ್ಷಿಸುತ್ತದೆ. ತನಗೆ ತಾನೇ ಗಟ್ಟಿಯಾಗದಿರುವುದನ್ನು ಉರುಳಿಸಿ ಬಿಡುತ್ತದೆ. ಸುಳ್ಳು -ಪೊಳ್ಳುಗಳು ಆಷಾಢ ಗಾಳಿಯೆದುರು ಉಳಿಯುವುದು ಕಷ್ಟ. ಹಾಗೊಮ್ಮೆ ಎದುರಿಸಿ ಉಳಿದ ಸತ್ಯಗಳು ಹಚ್ಚಗೆ ಅರಳಿ ಶ್ರಾವಣದಲ್ಲಿ ನಳನಳಿಸುತ್ತವೆ.

ಉಗುಳುತ್ತುಂ ಸಿಡಿಲೆಂಬ ತೋರಗಿಂಡಿಯಂ ಕಾಲೂರಿ ಭೂಭಾಗದೊಳ್

ಗಗನಭೋಗಮನೆಯ್ದಿ ನೀಳ್ದ ಘನವೇಣೀಬಂದನಂಗೆಯ್ದು  (ಪಂಪ ರಾಮಾಯಣ)

ಆಷಾಢಕ್ಕೆ ಅದರ ರುದ್ರ ರಮಣೀಯ ಪ್ರಾಕೃತಿಕ ಲಕ್ಷಣಕ್ಕೆ ಎಲ್ಲವನ್ನೂ ನೆನಪಿಸುವ ಅಸೀಮ ಬಲವಿದೆ. ಸುಯ್ಯನೆ ಶೃತಿ ಹಿಡಿದ ಹಳೆಯ ವಾದ್ಯದಂತೆ ಬೀಸುವ ಗಾಳಿ, ಅದರ ಮುನ್ನುಡಿಯ ಜೊತೆಗೆ ಧಾಂಗುಡಿಯಿಡುವ ಮಳೆ ಇವುಗಳ ಜುಗಲಬಂದಿಯ ಕಚೇರಿ ಹಳೆಯ ನೆನಪುಗಳನ್ನು ನಿಧಾನವಾಗಿ ಮೀಟುತ್ತ ಮರೆತ ರಾಗವೊಂದನ್ನು ಎಳೆದು ತರುತ್ತವೆ. ಮತ್ತೀಗ ಎದೆಯ ಬೀದಿಗಳಲ್ಲಿ ಹಳೆಯ ಕತೆಗಳ ಮೆರವಣಿಗೆ. ಒಂಥರ ಖುಷಿಯ ಇರಚಲು, ಒಂಥರ ನೋವಿನ ತುಂತುರು. ಮನಸ್ಸು ಎಷ್ಟೇ ಒಳ ಸರಿದು ಅಡಗಲು ಯತ್ನಿಸಿದರೂ ಗಾಳಿಯ ರಭಸಕ್ಕೆ ಹನಿಗಳು ತೊಯ್ಯಿಸಿಯೇ ಬಿಡುತ್ತವೆ. ನೆನಯದೆ ಉಳಿಗಾಲವಿಲ್ಲ.

ಅರೆ ನಾನು ಇದನ್ನು ಮರೆತಿದ್ದೆನಾ? ಹಳೆಯ ರಾಗದ ಆಲಾಪಕ್ಕೆ ಶೃತಿಗೊಳ್ಳುವ ಹೃದಯ ಮತ್ತೊಂದು ರಿಯಾಜಿಗೆ ಸಿದ್ಧಗೊಂಡಿತಾ? ಒದ್ದೆ ಮನಸ್ಸಿನ ತುಂಬ ಜುಳುಜುಳು ಮೌನ.

ಆಷಾಢದ ಮಡುಗಟ್ಟಿದ ಮುಗಿಲು ಏನೋ ಮಬ್ಬು ಕವಿಸುತ್ತದೆ. ಎಂಥದೊ ಆಲಸ್ಯ, ಮುಜುಗರ, ನಿರುತ್ಸಾಹ. ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆಯುತ್ತಾರೆ

ಏನು ಹೊಳೆಯದ ಮನಸಿನಾಗಸಕೆ ಆಷಾಢ

ಆಕ್ರಮಿಸಿ ಬೆಳಕನು ಬದಿಗೆ ಸರಿಸಿ ಈಸತೊಡ

ಗಿದವು ಗಾಸಿಕೊಳ್ಳುತ ಯಕ್ಷ ಯಾಚಿಸಿದ ಮೋಡ

ಆಷಾಢವೆಂದರೆ- ವಿಷಮಗೊಂಡಿರುವ ಪ್ರಕೃತಿ, ಅಸಮತೋಲನದಲ್ಲಿರುವ ನಿಸರ್ಗ. ಆದ್ದರಿಂದ ಈ ಬದಲಾದ ವಾತಾವರಣಕ್ಕೆ ದೇಹ ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು  ನಿಷೇಧಗೊಳಿಸಿದರು. ಪಕ್ವಾನ್ನಗಳನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಕಷ್ಟ, ಬಂಧು-ಬಳಗ ಸೇರಲಿಕ್ಕೆ ಸಂಚಾರವೂ ಕಷ್ಟ ಎಂಬುದು ಅವರ ದೂರಾಲೋಚನೆ ಇರಬಹುದು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ- ದಕ್ಷಿಣಾಯನ ಕಾಲ. ಅಂದರೆ ಸೂರ್ಯ ದಕ್ಷಿಣಾಭಿಮುಖನಾಗುತ್ತಾನೆ. ಕರ್ಕಾಟಕ ವೃತ್ತವನ್ನು ಪ್ರವೇಶಿಸುತ್ತಾನೆ. ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾನೆಂಬ ಪ್ರತೀತಿ. ಆದ್ದರಿಂದ ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಾರೆ.

ವೈಜ್ಞಾನಿಕವಾಗಿ ನೋಡಿದಾಗ ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಗರ್ಭಾಂಕುರವಾದರೆ ನವಮಾಸಗಳು ತುಂಬಿ ಶಿಶು ಜನನವಾಗುವುದು ಬೇಸಿಗೆಯಲ್ಲಾಗುತ್ತದೆ. ಆ ಬಿರು ಬಿಸಿಲಿನಲ್ಲಿ ಪ್ರಥಮ ಹೆರಿಗೆ ಎಂದರೆ ಮಗು-ಬಾಣಂತಿ ಇಬ್ಬರಿಗೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ರಕ್ತಸ್ರಾವ ನಿಲ್ಲಿಸುವುದೂ ಕಷ್ಟ ಎಂಬಿತ್ಯಾದಿ ಕಾರಣಗಳಿಂದ ಹಿಂದಿನ ಜನರು ಆಗಿನ ಆಧುನಿಕ ವೈದ್ಯಕೀಯ ಬೆಳೆಯದಿದ್ದ ಕಾಲದಲ್ಲಿ ನವ ದಂಪತಿಗಳನ್ನು ಆಷಾಢದಲ್ಲಿ ದೂರ ಇಡುತ್ತಿದ್ದರು. ಹೊಸ ಸೊಸೆ ಗಾಳಿ-ಮಳೆಯ ಪ್ರತಾಪಕ್ಕೆ ಹೊಂದಿಕೊಳ್ಳುವುದು ಕಷ್ಟ ಎಂದೋ ಏನೋ ತೌರಿಗೆ ಕರೆತರುತ್ತಿದ್ದರು. ಶ್ರಾವಣ ಆರಂಭ ಆದೊಡನೆ ಗೌರಿಪೂಜೆ ಮಾಡಿಸಿ ನಾಗರ ಪಂಚಮಿಯ ಉಂಡಿಗಳನ್ನು ಬುಟ್ಟಿ ತುಂಬಿಸಿ ಕಳಿಸಿ ಕೊಡುತ್ತಿದ್ದರು. ಈಗಲೂ ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಯಲುಸೀಮೆಯ ಹೆಣ್ಣು ಮಕ್ಕಳು ತಮ್ಮ ಪ್ರೀತಿಯ ತೌರು ಸೇರಿ, ತಾಯಿ-ತಂದೆ-ಸೋದರ ಪ್ರೀತಿಯ ಕಡಲಿನಲ್ಲಿ ಮೀಯುವ ಘಳಿಗೆಗಳನ್ನು ಕಾತುರತೆಯಿಂದ ಕಾಯುತ್ತಾರೆ. ಇಲ್ಲಿನ ಜನಪ್ರಿಯ ಜಾನಪದ ಗೀತೆ- “ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಕರಿಯಾಕ” ಅದರಲ್ಲಿ ಕರೆದುಕೊಂಡು ಹೋಗಲು ಬರುವ ಅಣ್ಣನನ್ನು ಕಾಯುವ ನಾರಿ ಮುಂದುವರಿದು ಹೀಗೆ ಕನವರಿಸುತ್ತಾಳೆ “ರೊಟ್ಟಿ ಬುತ್ತಿ ಮಾಡಿಕೊಂಡು

                           ಎತ್ತಿನ ಬಂಡಿ ಹೂಡಿಕೊಂಡು

                           ಎಂದು ಹೋಗೇನ ತವರಿಗೆ

ಇಂದಿನ ಹೊತ್ತು ಹಿಂದೇ ಇರಲಿ

ಮುಂದಿನ ಹೊತ್ತು ಇಂದೇ ಬರಲಿ

ಎಂದು ನೋಡೇನ ತಾಯಿಯ ಮೋರೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಮಿಥುನ ರಾಶಿಯಲ್ಲಿ ಶಿವನಿರುತ್ತಾನೆ. ಅಂದರೆ ಆತ ಕಾಮಾರಿ. ದುಷ್ಟ ಕಾಮವನ್ನು ಸಂಹರಿಸುತ್ತಾನೆ. ಆದ್ದರಿಂದ ಈ ಮಾಸವು ಶೃಂಗಾರ ವಿರೋಧಿ ಮಾಸ ಎಂದು ಪರಿಗಣಿಸುತ್ತಾರೆ.

ಯಾರೋ ಜೋರಾಗಿ ತಳ್ಳಿದಂತೆ ಸುಂಯ್ಗುಡುತ್ತದೆ

ಗೂಳಿಯಂತೆ ಗಾಳಿ ಬಡಿದುಕೊಳ್ಳುವ ಕಿಡಕಿ ಕದ

ಗಂಡನ ಖಾಲಿಯೆದೆಯ ಹಾಗೆ ಪಟಪಟ

ದಿನಕ್ಕೆ ಹತ್ತು ಸಲ ಎಂದು ಬರುತ್ತಿ ಎಂಬ ಫೋನು

ಕಿವಿಗಾನಿಸಿ ನಗುತ್ತಾಳೆ ಹೊಸ ವಧು ಕಿಲಕಿಲ

ಆದರೆ ಈ ಪದ್ಧತಿಯನ್ನು ಶಿಕ್ಷೆ ಎಂದು ಭಾವಿಸುವ ದಂಪತಿಗಳು ಗಮನಿಸಬೇಕಾದ ಅಂಶವೊಂದಿದೆ.

ವರಕವಿ ಬೇಂದ್ರೆ ಹೇಳುತ್ತಾರೆ –

ಗಾಳಿ ಗೋಳಿಡುವಂತೆ ಭೋರಾಡುತಿಹುದು

                      ಬಾಳುವೆಯೆ ಹೊಸತೊಂದು ಒಗಟವಾಗಿಹುದು

ಅದೇ ಆಗ ಹೊಸ ಬಾಳುವೆಯ ಒಗಟು ಬಿಡಿಸಲಾರಂಭಿಸಿದ ಜೋಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಒಂದು ತಿಂಗಳ ವಿರಹ ಸಹಾಯಕವಾಗಬಹುದು. ಏಕೆಂದರೆ ಬದುಕಿನ ಪ್ರಯಾಣದಲ್ಲಿ ದೈಹಿಕ ಸಾಮಿಪ್ಯವೇ ಎಲ್ಲವೂ ಅಲ್ಲ. ಮನಸ್ಸುಗಳು ಬೆರೆತು, ಕಲೆತು, ನೆನಪುಗಳಲ್ಲಿ ಪರಸ್ಪರರನ್ನು ಮೂಡಿಸಿಕೊಳ್ಳುತ್ತ ರೂಪಿಸಿಕೊಳ್ಳುತ್ತ ಧ್ಯಾನಿಸುತ್ತ ತನ್ಮೂಲಕ ಒಂದು ಸಾಮಿಪ್ಯವನ್ನು ಖುದ್ದು ಸೃಷ್ಟಿಸಿಕೊಳ್ಳುವುದಿದೆಯಲ್ಲ ಅದು ನಿಜವಾಗಿ ಆಗಬೇಕಿರುವ ಮಿಲನ. ಇಂತಹ ದೈಹಿಕ ದೂರದ ಮಿಲನದಲ್ಲಿ ಆತ್ಮಗಾನವೊಂದು ಹುಟ್ಟಿ ಬರುತ್ತದೆ. ಮತ್ತದು ಬದುಕಿಡೀ ಕೂಡಿ ಹಾಡುವ ಯುಗಳಗೀತೆಗೆ ಸೂಕ್ತ ರಾಗ-ಪ್ರಸ್ತಾರವಾಗುತ್ತದೆ. ಮದುವೆಯ ನಂತರ ಒಟ್ಟಿಗಿದ್ದು ಪರಸ್ಪರರಿಗೆ ಕಲಿಸಿದ್ದನ್ನು ದೂರ ಕೂತು ರಿವಿಜನ್ ಮಾಡಿಕೊಂಡು ಬಂದರೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗಬಹುದೊ ಏನೊ.

ಕಾಳಿದಾಸನ ಪ್ರಸಿದ್ಧ ಕಾವ್ಯ ಮೇಘದೂತದಲ್ಲಿ ಶಾಪಗ್ರಸ್ತನಾದ ಯಕ್ಷ ತನ್ನ ಸಂದೇಶ ರವಾನೆಗಾಗಿ ಮೋಡಗಳು ಬರುವ ಆಷಾಢ ಮಾಸವನ್ನು ಬಹಳ ಕಾತುರನಾಗಿ ಕಾಯುತ್ತಾನೆ. ಅವನಿಗೆ ಬಂಧು ಸ್ವರೂಪಿ ಮೇಘದೂತನ ಭೆಟ್ಟಿಯಾಗುವುದು “ಆಷಾಢಸ್ಯ ಪ್ರಥಮ ದಿವಸೆ ” ಬೇಂದ್ರೆಯವರು ಕನ್ನಡ ಮೇಘದೂತದಲ್ಲಿ ಬರೆಯುವಂತೆ

“ಗಾಳಿ ಬೀಸುವುದು ನಿನ್ನ ನೂಕಿಸುತ ಮಂದ ಮಂದವಾಗಿ

          ಚೂಚು ಚಾಚಿ ಚಾದಗೆಯು, ಎಡಕೆ ಕೂಗುವುದು ಚೆಂದವಾಗಿ

ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ

ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ

ಹೀಗೆ ಮಂಕು ಕವಿದ ಪ್ರಕೃತಿ, ವಿರಹದುರಿಯ ತೊಳಲಾಟದ ನವ ಜೋಡಿ, ಹಬ್ಬ ಹುಣ್ಣಿಮೆ ಕಾಣದ ದೇವರು ಎಲ್ಲರನ್ನೂ ಬೆದರಿಸಿ ತೆಪ್ಪಗೆ ಕೂರಿಸುವ ಗಾಳಿಯೆದುರು ನಿರುತ್ತರರಾಗುತ್ತಾರೆ.

ಹೆಪ್ಪುಗಟ್ಟಿದ ಕಪ್ಪು ರಾತ್ರಿಗಳಲ್ಲಿ ನೆನಪಾದ ಹಳೆ

ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ

ಜರ‍್ರನೆ ಸುರಿಯುತ್ತದೆ ಅಬ್ಬರದ ಮಳೆ

ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ

ಅಗಲಿದ ಗಂಡ-ಹೆಂಡಿರು ಮತ್ತು ದೇವರು

ಆದರೆ ಈಗ ನಾವು ನೋಡುತ್ತಿರುವ ಆಷಾಢ ತನ್ನ ಮೊದಲಿನ ವಿಲಾಸ ವಿಭ್ರಮದಿಂದ ವಿಜೃಂಭಿಸುತ್ತಿಲ್ಲ. ನಾವು ಬರಿದಾಗಿಸಿದ ಪ್ರಕೃತಿಯ ಒಡಲು ನೋವಿನ ಮಡಿಲಾಗಿ ಋತುಮಾನಗಳು ಅಸ್ತವ್ಯಸ್ತಗೊಂಡು ಉದ್ವಸ್ಥಗೊಂಡಿವೆ.

ಕುವೆಂಪು ಅವರು ತಾವು ಕಂಡ ಆಷಾಢದ ವೈಭವವನ್ನು ಚಿತ್ರಿಸಿದ ರೀತಿಗೆ ಈಗ ಪ್ರತ್ಯಕ್ಷವಾಗಿ ಕಾಣಬೇಕೆನ್ನುವ ಹಂಬಲ ಹುಸಿಹೋಗುತ್ತಿದೆ

ಕದ್ದಿಂಗಳು ಕಗ್ಗತ್ತಲು

ಕಾರ್ಗಾಲದ ರಾತ್ರಿ

ಸಿಡಿಲ್ಮಿಂಚಿಗೆ ನಡುಗುತ್ತಿದೆ

ಪರ್ವತ ವನಧಾತ್ರಿ

 ಉತ್ತು ಬಿತ್ತು ನೆಲದ ಕರುಣೆಯ ಧ್ವನಿಯಂತೆ ಕುಡಿಯೊಡೆವ ಮೊಳಕೆಯ ನಿರೀಕ್ಷೆಯಲ್ಲಿರುವ ರೈತ ಆಷಾಢದ ಮಳೆಗಾಗಿ ತೀವೃವಾಗಿ ಹಂಬಲಿಸುತ್ತಾನೆ. ಪುನರ್ವಸು ಮಳೆಗೆ ಪುಳಕಗೊಳ್ಳುವ ಇಳೆ ದಳದಳವರಳಿ ಬೆಳೆಗಳ ಕಣ್ಣು ಹೊಳೆಸುತ್ತದೆ. ಆದರೆ ಈಗೀಗ ಮಳೆ ಹುಸಿ ಹೋಗುತ್ತಿದೆ. ಬೇಂದ್ರೆಯವರ ಓ ಆಷಾಢ ಪದ್ಯದಲ್ಲಿ ಈ ಬೇಡಿಕೆ ದೈನ್ಯದಿಂದ ಮಂಡಿಸಲ್ಪಟ್ಟಿದೆ.

ಓ ಆಷಾಢಾ ಆಷಾಢಾ

ಆಡಿಸ್ಯಾಡಬೇಡಾ

ದುರುರ‍್ಹಾಂಗ | ನೆರಳು ಚಲ್ಲಿ

ಆಸೀ ಹಚ್ಚೀ | ಕಸಕೊಂಢಾಂಗ

ಬಂತು ಮೋಡಾ | ಹೋತು ಮೋಡಾ

ನೋಡಾ ನೋಡಾ

ಈಗೀಗ ಆತ್ಮಹತ್ಯೆಗಿಳಿದಿರುವ ರೈತರ ಗೋಳನ್ನು ಕಂಡಾಗ ಬೇಂದ್ರೆಯವರ ಪದ್ಯದ ಮುಂದುವರಿದ ಭಾಗ ನೆನಪಾಗುತ್ತದೆ

ಮೊದಲ ಬಿತ್ತಿಗೀ ಮೊಳಕೀ ಗೋಣು ಚೆಲ್ಯಾವ

ತೂಕ ತಪ್ಪಿದ ಮೂಕ ಪ್ರಾರ್ಥನೀ ಮುಗಿಲಿಗೆ ಸಲ್ಲಾö್ಯವ

ಎಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಮೋಡಾ

ಮಣ್ಣೆತ್ತೂನೂ ನೀರಡಿಸ್ಯಾವ

ಒಕ್ಕಲಿಗನ ಕಣ್ ಬಿಡಿಸ್ಯಾವ ಓ ಆಷಾಢಾ

ಎಂತೆಂತಹ ಆಧುನಿಕ ಆವಿಷ್ಕಾರಗಳಾಗಿವೆ ಎಂದರೂ ಕೂಡ ಮನುಜನ ಬಾಳು ಸೃಷ್ಟಿಯ ಸಮಷ್ಟಿಯ ಒಟ್ಟಂದದ ಹಂದರದಲ್ಲಿಯೇ ಅರಳಬೇಕಾದ ಹೂವು. ಹಾಗಲ್ಲದಿದ್ದರೆ ಹಾಹಾಕಾರದ ಗೋಳಿನ ಬಾಳು ನಮ್ಮದಾಗುತ್ತದೆ. ನಿಸರ್ಗದ ಜೊತೆಗೆ ಅನುಸಂಧಾನ ನಡೆಸುವ ರೀತಿಯಲ್ಲಿ ಬದುಕಲು ಕಲಿತ ದಿನ ಮಾನವ ನಿಜವಾದ ಜಾಣನಾಗುತ್ತಾನೆ. ಆಯಾ ಋತುಗಳು, ಆಯಾ ಮಾಸಗಳು ತಮ್ಮ ಸಹಜ ಗುಣ-ಲಕ್ಷಣಗಳೊಂದಿಗೆ ಮೈದೋರಿ ನಮ್ಮ ಬದುಕನ್ನು ಹಸನುಗೊಳಿಸುತ್ತವೆ.

*********

One thought on “ಹಿಂಡು ಮೋಡದ ಗಾಳಿ ಸವಾರಿ

  1. ❤️ಸುಂದರವಾದ ಪೂರ್ಣತೃಪ್ತಿ ನೀಡುವ ಲೇಖನ…ಹಿಂದೆ ಎಲ್ಲೋ ಬರೆದಿದ್ದಾ?

Leave a Reply

Back To Top