ಮಹಿಳಾ ಸಂಗಾತಿ
ಜಯಶ್ರೀ.ಅಬ್ಬಿಗೇರಿ
“ಭಾವಜೀವಿಯ ನೋವಿಗೆ ನಲಿವಿನ ಮುಲಾಮು”

ಮಕ್ಕಳನ್ನು ಹೆತ್ತು ಹೊತ್ತು ಮನೆ ನಿಭಾಯಿಸುತ್ತಿದ್ದ ಹಿಂದಿನ ಕಾಲದ ಹೆಂಗಳೆಯರಿಗೆ ಹೋಲಿಸಿದರೆ. ಇಂದಿನ ಕಾಲದ ಮಹಿಳೆ ಆಧುನಿಕತೆಯ ಹೆಸರಿನಲ್ಲಿ ಎಲ್ಲೋ ಏನೋ ಹಾದಿ ತಪ್ಪುತ್ತಿದ್ದಾಳೆ. ಎಂದೆನಿಸುತ್ತಿದೆ ಎನ್ನುವ ಮಾತುಗಳು ಸಂಪ್ರದಾಯಸ್ಥ ಮನಸ್ಥಿತಿಯ ಮನಸ್ಸುಗಳಿಂದ ಕೇಳಿ ಬರುತ್ತವೆ. ಹೆಣ್ಣು ಮಕ್ಕಳು ಅವರಿಷ್ಟ ಬಂದ ಹಾಗೆ ಬೆಳೆಯಲಿ ಅಂತ ಬಿಟ್ಟಿದ್ದೇ ತಪ್ಪಾಯ್ತು. ದುಬಾರಿ ಕಾಲದಲ್ಲಿ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ನಾಲ್ಕು ಗೋಡೆಗಳಾಚೆ ಕಳಿಸಿದ್ದು ಇಂದು ನಮಗೇ ಮುಳುವಾಗುತ್ತಿದೆ. ಹೆಣ್ಣು ಮನೆಯಲಿದ್ದರೇನೆ ಲಕ್ಷಣ. ಬೆಳೆಯುವ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುವ ಮಹಿಳೆಯನ್ನು ಹೊರಗೆ ದುಡಿಯಲು ಕಳಿಸಿ ತಪ್ಪು ಮಾಡುತ್ತಿದ್ದೇವೆ ಎನ್ನುವ ಆತಂಕದ ನುಡಿಗಳು ಕೇಳಿ ಬರುತ್ತಿವೆ.
ಪುರುಷರಿಗಿಂತ ಹೆಚ್ಚು ಶ್ರದ್ಧೆ ವಹಿಸಿ ಅಚ್ಚುಕಟ್ಟಾಗಿ ದುಡಿಯುವ ಹೆಣ್ಣು ಮಕ್ಕಳಿಗೆ ಮಣೆ ಹಾಕುವ ಸೇವಾ ಕ್ಷೇತ್ರಗಳಲ್ಲಿ ಪುರುಷರಿಗೆ ಕೆಲಸದ ಅವಕಾಶಗಳು ಅಷ್ಟಕ್ಕಷ್ಟೆ ಆಗುತ್ತಿವೆ. ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತು ಅರ್ಥ ಕಳೆದುಕೊಂಡು, ಗಂಡಸರ ಉದ್ಯೋಗಕ್ಕೆ ಪೆಟ್ಟು ಬೀಳುತ್ತಿದೆ. ಗಂಡಸು ನಿರುದ್ಯೋಗದ ಭಯದ ನೆರಳಲ್ಲಿ ಕಾಲ ಕಳೆಯುವಂತಾಗಿದೆ. ಕುಟುಂಬದ ಹಳಿ ತಪ್ಪುತ್ತಿದೆ ಸಂತಸ ಸುಖಗಳು ದೂರ ಓಡುತ್ತಿವೆ ಇದೆಲ್ಲ ಸದೃಢ ಸಮಾಜ ನಿರ್ಮಾಣಕ್ಕೆ ಮಾರಕ ಎಂಬ ವಿಚಾರಗಳು, ಹೆಗಲ ಮೇಲೆ ಸಂಸಾರದ ನೊಗ ಹೊತ್ತು ಬೇಸತ್ತ ಪುರುಷರ ಬಾಯಿಂದ ಆಗಾಗ ಬರುತ್ತವೆ.
ಚಲನಶೀಲತೆಯ ಕೊರತೆ
ಈ ಎಲ್ಲ ವಿಚಾರಗಳ ಮಧ್ಯೆಯೂ ವಿಭಿನ್ನ ಅಭಿರುಚಿ ಆಸಕ್ತಿಯುಳ್ಳ ಸ್ತ್ರೀ ಯ ದೇಹಕ್ಕೆ ಕನಸಿನ ರೆಕ್ಕೆಗಳನ್ನು ಕಟ್ಟಿಕೊಂಡು ಸ್ವತಂತ್ರವಾಗಿ ಅಂಬರವನೇರಿ ಹಾರುವಾಸೆ ತೋರುತ್ತಿದ್ದಾಳೆ. ಪ್ರತಿ ಮಹಿಳೆಯಲ್ಲೂ ಅಂತಿಂಥ ಕನಸುಗಳಿಲ್ಲ. ಬೆಟ್ಟ, ಸಮುದ್ರ, ಕಾಡು,ಉದ್ಯಮ, ಸಿನಿಮಾ, ಉದ್ಯೋಗ, ಹಳ್ಳಿ ಪಟ್ಟಣ ನಗರ ಎಲ್ಲೆಂದರಲ್ಲಿ ಎಲ್ಲವನ್ನೂ ಸುತ್ತು ಹೊಡೆದರೂ ಆಯಾಸವಿಲ್ಲದ ಮನಸ್ಥಿತಿ ಮಹಿಳೆಯದು.
ಕುಸ್ತಿ ಕಬಡ್ಡಿ ಡ್ರೈವಿಂಗ್ ನಲ್ಲೂ ಮಿಂಚುತ್ತಿದ್ದಾಳೆ. ಆಕೆ ಮಿಂಚದ ರಂಗಗಳೇ ಇಲ್ಲ ಎಂದರೆ ತಪ್ಪಾಗಲಿಕ್ಕಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಊಹಿಸಿದ, ಕಲ್ಪಿಸಿದ ಯೋಚನೆಗಳನ್ನು ನನಸು ಮಾಡಿಕೊಳ್ಳುತ್ತಿರುವ ಹೆಂಗಳೆಯರು ಸಮಾಜದ ಗಮನ ಸೆಳೆಯುತ್ತಿರುವುದು ಗಮನಾರ್ಹವೇ ಸರಿ. ಆದರೆ ಅದು ಇನ್ನೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಬೇಕಿದೆ. ಏನೆಲ್ಲ ಸಾಧಿಸುತ್ತಿದ್ದರೂ ಕತ್ತಲೆಯ ಕೋಣೆಯಲ್ಲಿ ಕಣ್ಣೀರಿನ ಕೋಡಿಗೆ ಬರವಿಲ್ಲ.ಉಸಿರು ಕಟ್ಟಿದ ವಾತಾವರಣಕ್ಕೆ ಧೈರ್ಯ ಒಗ್ಗೂಡಿಸುವ ಮನೋಸ್ಥೈರ್ಯವನ್ನು ನೀಡಬೇಕಿದೆ.
ಹಳ್ಳಿಯ ಪೂರ್ವ ದಿಗಂತಗಳಲ್ಲಿ ಹೊಸ ಶಕ್ತಿಯ ಅರುಣೋದಯ ಆಗಬೇಕಿದೆ. ದಿನಂಪ್ರತಿ ಅಲ್ಲಲ್ಲಿ ಆಧುನಿಕ ಮಹಿಳೆಯರ ಜೀವನದ ಸಮಸ್ಯೆಗಳ ಕುರಿತು ಎತ್ತಲಾದ ಪ್ರಶ್ನೆಗಳಿಗೆ ಹೊಸ ತಲೆಮಾರಿನ ಸಮಾಜ ಸ್ಪಂದಿಸುತ್ತಿರುವುರಾದರೂ ನಿರೀಕ್ಷಿತ ಮಟ್ಟದ ಫಲ ಇನ್ನೂ ದೊರೆಯುತ್ತಿಲ್ಲ. ಅದಕ್ಕೆ ಬೇಕಿರುವ ನಿರಂತರ ಚಿಂತನೆಯ ಚಲನಶೀಲತೆ.ಕೊರತೆ ಕಾಡುತ್ತಿದೆ.
ದ್ವಿತೀಯ ದರ್ಜೆ
ಜೀವನದ ಸುಖ ಸಾಗರಕೆ ಮೂಲ ಹೆಣ್ಣು. ಆಕೆಯೇ ಮನೆಯ ಜ್ಯೋತಿ. ಎನ್ನುವ ಸಮಾಜ ಆಕೆಗೆ ಸರಿ ಸಮಾನವಾದ ಸ್ಥಾನ ನೀಡಲು ಇನ್ನೂ ಸಮರ್ಥವಾಗಿಲ್ಲ. ವಿದ್ಯೆಯಲ್ಲೂ ಮುಂದು. ಸಂಬಳದ ಎಣಿಕೆಯಲ್ಲೂ ಮೇಲುಗೈ ಸಾಧಿಸಿದವಳಿಗೆ ಪುರುಷ ಸಮಾನ ಸ್ವಾತಂತ್ರ್ಯ ದೊರೆತಿಲ್ಲ. ಶೋಷಣೆ ದೌರ್ಜನ್ಯಗಳಿಂದ ಮುಕ್ತಳಾಗಿಲ್ಲ. ಮನೆಯಲ್ಲಷ್ಟೇ ಅಲ್ಲ ಹೋದಲೆಲ್ಲ ಹೆಣ್ಣು ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಬಾಳುವ ಸ್ಥಿತಿ ಇದೆ. ಆರ್ಥಿಕವಾಗಿ ಸಬಲಳಾಗಿದ್ದರೂ ಖರ್ಚಿನ ವಿಷಯದಲ್ಲಿ ಮನೆಯ ಇತರ ಸದಸ್ಯರ ನಿರ್ಣಯಗಳ ಮೇಲೆಯೇ ಅವಲಂಬಿತಳಾಗಿದ್ದಾಳೆ. ಮೂಗಿಗೆ ದಾರ ಕಟ್ಟಿಕೊಂಡು ಮನೆಯ ಒಳಗೆ ಹೊರಗೆ ಅದೆಷ್ಟೇ ದುಡಿದರೂ ಸಂಪೂರ್ಣ ನೆಮ್ಮದಿಯ ಬದುಕು ಗಗನ ಕುಸುಮವಾಗಿದೆ.
ಏನೇ ಸಾಧಿಸಿದರೂ ಗಂಡಿನ ಮೂದಲಿಕೆಯ ಮಾತುಗಳು ತಪ್ಪಿದ್ದಲ್ಲ. ತನ್ನನ್ನು ತಾತ್ಸಾರದಿಂದ ಕಾಣುವ ಮನೋಭಾವ ಬದಲಾಗುವುದಿಲ್ಲ ಎಂಬ ಚಿಂತೆ ಮನದ ಮೂಲೆಯಲ್ಲಿಟ್ಟುಕೊಂಡು ಕೊರಗುವುದು ಸತ್ಯ.
ಕಾಮುಕ ದೃಷ್ಟಿ
ಸಾರ್ವಜನಿಕ ಸ್ಥಳಗಳಲ್ಲಿ ಆಕೆಯ ಉಡುಪುಗಳ, ಸಹಜ ವೈಯ್ಯಾರ, ಸೌಂದರ್ಯ, ಲಾಲಿತ್ಯ ಕಂಡು ಜೊಲ್ಲು ಸುರಿಸುವ ಪ್ರವೃತಿಗೆ ಪೂರ್ಣ ವಿರಾಮ ಬಿದ್ದಿಲ್ಲ. ತನ್ನನ್ನು ಕಾಮುಕ ದೃಷ್ಟಿಯವರಿಂದ ರಕ್ಷಿಸಿಕೊಂಡು ಮನೆ ಸೇರುವಷ್ಟರಲ್ಲಿ ಸಾಕು ಸಾಕಾಗುತ್ತದೆ. ಕೆಲವು ಪರಿಚಿತ ಗಂಡಸರು ಬೇಕು ಬೇಕಂತಲೇ ಅದು ಇದು ಎಂದು ಮಾತನಾಡಿಸುತ್ತಾರೆ. ಆಪ್ತವಾಗಿ ಹತ್ತಿರ ಸುಳಿದು ಸಲುಗೆ ಬೆಳೆಸಲು ನೋಡುತ್ತಾರೆ.
ಇದನ್ನೆಲ್ಲ ಮನೆಯಲ್ಲಿ ಹಂಚಿಕೊಂಡರೆ, ಸಮಸ್ಯೆಗೆ ಇನ್ನಷ್ಟು ರೆಕ್ಕೆ ಪುಕ್ಕಗಳು ಹೆಚ್ಚಾಗಿ ಮನೆಯಾಚೆ ಕಾಲಿಡುವುದು ಅಸಾಧ್ಯವೆಂದು ನೋವನ್ನು ಒಳಗೊಳಗೆ ನುಂಗಿಕೊಳ್ಳುತ್ತಾಳೆ. ಇಂಥ ಅಸಂಬದ್ಧ ವರ್ತನೆಗಳು ಆಕೆಯ ಉತ್ಸಾಹಿತ ಕಂಗಳನ್ನು ಬಲಹೀನಗೊಳಿಸುತ್ತವೆ. ಪುರಷರನ್ನು ವಿರೋಧಿಸಿ ತನ್ನ ಹಕ್ಕುಗಳಿಗಾಗಿ ಮಾತನಾಡಬೇಕೆನ್ನುವ ಮಾತುಗಳು ಗಂಟಲಲ್ಲೇ ಉಳಿಯುವವು
.
ಮರ್ಯಾದೆ ಪ್ರಶ್ನೆ
ಅತ್ತೆ ಮಾವ ನಾದಿನಿ ಮೈದುನ ಭಾವಂದಿರು ಇರುವ ಮನೆಯಲ್ಲಿ ಎಲ್ಲರಿಗೂ ಹೊಂದಿಕೊಂಡು ಎಲ್ಲವನ್ನೂ ಸುಧಾರಿಸಿಕೊಂಡು ಮುನ್ನಡೆದರೂ ಚುಚ್ಚು ಮಾತುಗಳು ಕಿವಿಗೆ ಬೀಳುತ್ತಲೇ ಇರುತ್ತವೆ.
ದೈಹಿಕವಾಗಿ ಮಾನಸಿಕವಾಗಿ ಬಳಲುವ ಆಕೆಯ ನೊಂದ ದನಿಗೆ ಎಲ್ಲೋ ಒಂದೆಡೆ ಕಿವಿಗಳು ಸಿಕ್ಕರೂ ಮನೆಯ ಮರ್ಯಾದೆ ಪ್ರಶ್ನೆ ಎಂದು ಹಂಚಿಕೊಳ್ಳದೇ ಹಿಂಜರಿಯುತ್ತಾಳೆ. ನಾಗಾಲೋಟದಿಂದ ಓಡುವ ಕ್ರೌರ್ಯದ ರಭಸಕ್ಕೆ ಸಿಕ್ಕು ಒದ್ದಾಡುತ್ತಿದ್ದರೂ ಬಾಯಿ ಬಿಡಲು ಭಯಗೊಳ್ಳುತ್ತಾಳೆ. ಕಾನೂನಿನ ಅರಿವಿದ್ದರೂ ಎಲ್ಲ ತಿಳಿದಿದ್ದರೂ ತಿಳಿಗೇಡಿತನದ ಮುಖವಾಡ ಧರಿಸಿ ಬಿಕ್ಕಳಿಸುತ್ತ ದಿನ ದೂಡುತ್ತಾಳೆ.
ಬೆನ್ನಿಗೆ ನಿಲ್ಲುವ ಮನಸ್ಸುಗಳಿಲ್ಲ
ಸುಶೀಕ್ಷಿತಳಾದ ಉದ್ಯೋಗಸ್ಥ ಮಹಿಳೆಯರಿಗೆ ದೈಹಿಕ ಹೊಡೆತ ಬಡಿತದ ಪೆಟ್ಟುಗಳಿಲ್ಲವಾದರೂ ಆಕೆಯ ಭಾವ ಲೋಕದ ಬೆನ್ನೆಲುಬು ಮುರಿಯುವಂಥ ಪ್ರಹಾರ ಮಾತ್ರ ದಿನವೂ ಆಗುತ್ತಿದೆ.
ಹೊರಗೆ ಕಂಡಷ್ಟು ಮನದಾಳದಲ್ಲಿ ಆಕೆ ಸುಖವಾಗಿಲ್ಲ. ಆಕೆಯ ಮನದ ನೋವು ಮನೆ ಮಂದಿಗೆ ಗೊತ್ತಿಲ್ಲವೆಂದೇನಿಲ್ಲ. ಎಲ್ಲವೂ ಜಾಣ ಕುರುಡತನ ಚಾಣಾಕ್ಷ ಕಿವುಡತನ. ಆಕೆಯ ಬೆನ್ನಿಗೆ ನಿಲ್ಲಲು ಅದೆಷ್ಟೋ ಅವಕಾಶಗಳ ಮಹಪೂರವಿದ್ದರೂ ಮನಸ್ಸು ಮಾಡುವ ಮನಸ್ಸುಗಳೇ ಇಲ್ಲವಾಗಿವೆ.
ಮನ್ನಣೆ ನೀಡುವವರಿಲ್ಲ
ಸಂಸ್ಕೃತಿ, ಆಚಾರ ವಿಚಾರಗಳು, ಹಬ್ಬ ಹರಿದಿನಗಳು, ವ್ರತಾಚರಣೆಗಳು,ಪರಂಪರೆಗಳು, ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುವುದು, ಮುಂದಿನ ಪೀಳಿಗೆಗೆ ಸಾಗಿಸುವುದು ಮಹಿಳೆಯ ಕೊರಳಿಗಷ್ಟೇ ಜೋತು ಬಿದ್ದಿದೆ.ಸನಾತನ ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣು ತನ್ನನ್ನು ತಾನು ಬದಲಾವಣೆಗೆ ಒಡ್ಡಿಕೊಳ್ಳದಂತೆ ಸಮಾಜದ ವಿರುದ್ಧ ದನಿ ಎತ್ತದಂತೆ ಎಚ್ಚರವಹಿಸಲಾಗುತ್ತದೆ.
ಗಂಡಿನಂತೆ ಕುಡಿತ ಇಸ್ಪೀಟ್ ಮೋಜು ಮಸ್ತಿಗಳಲ್ಲಿ ಹಣ ಖರ್ಚು ಮಾಡುವ ಪ್ರಮೇಯವೇ ಇಲ್ಲ. ದುಡಿದ ದುಡ್ಡೆಲ್ಲ ಮಕ್ಕಳ ಭವಿಷ್ಯಕ್ಕೆಂದು, ಮನೆಯ ಉದ್ದಾರಕ್ಕೆಂದು ಸುರಿಯುತ್ತಿದ್ದರೂ ಆಕೆಯ ಚಿಕ್ಕ ಪುಟ್ಟ ಸಂತಸಗಳಿಗೆ ಮನ್ನಣೆ ನೀಡುವ ಮನಸ್ಸುಗಳಿಲ್ಲ. ಶಿಕ್ಷಣ ಪಡೆದ ವಿಚಾರವಂತ ಮಹಿಳೆಯರೂ ವಿವೇಕ ಕಳೆದುಕೊಂಡು ಬದುಕುವ ಸ್ಥಿತಿ ಎದುರಿಸಬೇಕಾಗಿದೆ. ಜಾಗತೀಕರಣದ ದಾಳಿ ಆಕೆಗೆ ಭಾರಿ ಸವಾಲುಗಳನ್ನು ತಂದೊಡ್ಡಿವೆಕುಶಾಗ್ರಮತಿಯಾದ ಆಕೆಯನ್ನು ವಿಸ್ಮೃತಿಗೆ ಒಳಪಡಿಸುತ್ತಿವೆ.
ಧೋರಣೆ ಬದಲಾಗಲಿ
ದೊಡ್ಡ ದೊಡ್ಡ ವಿಚಾರಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ದಾಖಲಾಗುತ್ತಿದ್ದರೂ ಮಹಿಳೆಯ ಮಾನಸಿಕ ಮತ್ತು ಭಾವನಾತ್ಮಕ ಜೀವನದ ಸುಧಾರಣೆಗೆ ಸಮಾಜ ಮನಸ್ಸು ಮಾಡಬೇಕಿದೆ. ಪುರುಷ ತನ್ನ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ. ಸ್ವತಃ ಸ್ತ್ರೀಯೂ ಕೆಲ ಮಟ್ಟಿಗೆ. ತನ್ನ ಸುತ್ತಲೂ ಕಟ್ಟಿಕೊಂಡಿರುವ ರೇಷ್ಮೆ ಗೂಡನು ತೊರೆದು ಸ್ವತಂತ್ರವಾಗಿ ತನ್ನ ಜಾಣ್ಮೆಯಿಂದ ವಿವೇಕದಿಂದ ಬಾಳು ಬೆಳಗಿಕೊಳ್ಳಬೇಕಿದೆ. ಇಂದಿನ ಭಾವಜೀವಿಯ ಭಾವಲೋಕದ ಬದುಕಿನ ನೋವುಗಳಿಗೆ ಕೇವಲ ಪುರುಷನಷ್ಟೇ ಸಮಾಜವಷ್ಟೇ ಕಾರಣವಲ್ಲ. ಆದರೂ ಪುರುಷರು ಮತ್ತು ಸಮಾಜ ಮಹಿಳೆಯ ಕಣ್ಣೀರಿಗೆ ಬೆರಳಾಗಬೇಕಿದೆ..ಆಕೆಯ ನೋವಿಗೆ ತುಂಬಬೇಕಿದೆ. ನಲಿವಿನ ಮುಲಾಮು
ಜಯಶ್ರೀ.ಅಬ್ಬಿಗೇರಿ

VERY. NICE. CONGARATULATIONS
T. P. M.