ದೂರವಾಣಿಯ ಮೂಲಕ ಸಾಹುಕಾರರು ತಮ್ಮ ಧರ್ಮಪತ್ನಿಗೆ ಸುಮತಿ ಹಾಗೂ ಮಗಳು ತನ್ನ ಜೊತೆಯಲ್ಲಿ ಬರುವ ವಿಷಯವನ್ನು ಹಾಗೂ ಸುಮತಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂಬುದನ್ನು ಕೂಡಾ ಮೊದಲೇ ತಿಳಿಸಿದ್ದರು. ಹಾಗಾಗಿ ಸಾಹುಕಾರರ ಧರ್ಮಪತ್ನಿ ಕಾರಿನ ಹಾರ್ನ್ ಕೇಳಿದ ಕೂಡಲೇ ಹೊರಗೆ ಬಂದಿದ್ದರು. ಅವರ ಮನೆಯಲ್ಲಿಯೇ ಸುಮತಿ ಹಾಗೂ ಮಗಳು ಉಳಿದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದರು. ಸಾಹುಕಾರರು ಹಾಗೂ ಸುಮತಿ ಮತ್ತು ಮಗಳು ಮಧ್ಯಾಹ್ನ ಬರುತ್ತಾರೆ ಎನ್ನುವುದನ್ನು ಅರಿತಿದ್ದ ಅವರು ರುಚಿಕರವಾದ ಅಡುಗೆಯನ್ನು ಮಾಡಿದ್ದರು. ಸುಮತಿ ಹಾಗೂ ಮಗಳಿಗೆ ಕೈ ಕಾಲು ಮುಖ ತೊಳೆದುಕೊಂಡು ಬಂದು ಊಟಕ್ಕೆ ಕುಳಿತುಕೊಳ್ಳಲು ಹೇಳಿದರು. ಮೂವರಿಗೂ ಊಟವನ್ನು ಬಡಿಸಿದ ನಂತರ ಅವರು ಊಟಕ್ಕೆ ಕುಳಿತರು. ಊಟದ ನಂತರ ವಿಶ್ರಾಂತಿ ಪಡೆಯಲು ತಾಯಿ ಹಾಗೂ ಮಗಳಿಗೆ ತಿಳಿಸಿದರು. ಮಾರನೇ ದಿನ ಕಣ್ಣಿನ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಂಡು ಚಿಕಿತ್ಸೆ ಕೊಡಿಸುವುದಾಗಿ ಸಾಹುಕಾರರು ತಿಳಿಸಿದರು. ಹಾಗೆಯೇ ಆಗಲಿ ಸರ್ ಎಂದು ಹೇಳಿ ಅವರಿಗಾಗಿ ಮೀಸಲಿಟ್ಟ ಕೊಠಡಿಗೆ ಸುಮತಿ ಮತ್ತು ಮಗಳು ಹೋದರು. ಒಂದು ಸುಂದರವಾದ ಕೊಠಡಿ ಅದಾಗಿತ್ತು. ಮಲಗಲು ಜೋಡಿ ಮಂಚ, ಕುಳಿತುಕೊಳ್ಳಲು ಎರಡು ಕುರ್ಚಿ ಇತ್ತು. ದೊಡ್ಡ ಕಿಟಕಿಯ ಹೊರಗೆ ಸುಂದರವಾದ ಹೂವಿನ ಗಿಡಗಳ ಪುಟ್ಟ ಉದ್ಯಾನವಿತ್ತು. ಟೇಬಲ್ ಮೇಲೆ ಹೂಜಿಯಲ್ಲಿ ಕುಡಿಯಲು ನೀರಿತ್ತು. ಬಟ್ಟೆಗಳನ್ನು ಇಡಲು ಚೆಂದದ ವಾರ್ಡ್ರೋಬ್ ಇತ್ತು. ಸುಮತಿಯ ಹಿಂದೆಯೇ ಸಾಹುಕಾರರ ಮನೆಯ ಕೆಲಸದ ಹುಡುಗಿ ಬಂದಿದ್ದಳು. ಸುಮತಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿ, ಸುಮತಿ ತಂದಿದ್ದ ಬಟ್ಟೆಯ ಚೀಲವನ್ನು ವಾರ್ಡ್ ರೋಬ್ ತೆರೆದು ಅದರ ಒಳಗೆ ಇಟ್ಟಳು.

ಅಗತ್ಯ ವಸ್ತುಗಳು ಇನ್ನೇನಾದರೂ ಬೇಕಿದ್ದರೆ ತನಗೆ ತಿಳಿಸಳು ಹೇಳಿ ಕೋಣೆಯಿಂದ ಹೊರಟು ಹೋದಳು. 

ಸುಮತಿಯ ಮಗಳು ಕೊಠಡಿಯನ್ನು ಅರಳುಗಣ್ಣಿನಿಂದ

ನೋಡುತ್ತಿದ್ದಳು. ಅವಳಿಗೆ ತಾವು ಇರುವ ಮನೆ ನೆನಪಾಯಿತು….”ಅಮ್ಮಾ….ಈ ಮನೆ ಎಷ್ಟು ಚೆನ್ನಾಗಿದೆ ಅಲ್ಲವೇ” ಎಂದಳು…”ಹೌದು ಮಗಳೇ”… ಎಂದು ಮಗಳ ತಲೆ ಸವರುತ್ತಾ…ಬಾ ನಿದ್ರೆ ಮಾಡೋಣ….ನಂತರ ಮಾತನಾಡೋಣ ಎಂದಳು. ಸರಿ ಎನ್ನುತ್ತಾ ಅಮ್ಮನನ್ನು ಅಪ್ಪಿ ಮಲಗಿದಳು. ಮೆತ್ತನೆಯ ಹಾಸಿಗೆಯಲ್ಲಿ ಮಲಗಿದಾಗ ಸುಮತಿಗೆ ಹಾಯ್ ಎನಿಸಿತು. ಇಬ್ಬರಿಗೂ ಚೆನ್ನಾಗಿ ನಿದ್ರೆ ಹತ್ತಿತು. ಸಂಜೆ ಕೆಲಸದ ಹುಡುಗಿ ಬಂದು ಕರೆದಾಗಲೇ ಅವಳಿಗೆ ಎಚ್ಚರಿಕೆ ಆಗಿದ್ದು…. “ಅಮ್ಮ ಕಾಫಿ ಕುಡಿಯಲು ಕರೆಯುತ್ತಿದ್ದಾರೆ ಬನ್ನಿ”… ಎಂದು ಆ ಹುಡುಗಿ ಹೇಳಿದಳು. ( ಸಾಹುಕಾರರ ಧರ್ಮಪತ್ನಿಯನ್ನು ಅವರ ಮನೆಯಲ್ಲಿ ಕೆಲಸಕ್ಕೆ ಇದ್ದವರು ಹಾಗೂ ಡ್ರೈವರ್ ಎಲ್ಲರೂ ಅಮ್ಮ ಎಂದೇ ಕರೆಯುತ್ತಾರೆ) ಹುಡುಗಿಯ ಹೇಳಿದ್ದನ್ನು ಕೇಳಿದ ಸುಮತಿ ಎದ್ದು ಕೊಠಡಿಗೆ ಹೊಂದಿಕೊಂಡಂತೆ ಇದ್ದ ಸ್ನಾನದ ಕೋಣೆಗೆ ಹೋದಳು. ಕೈ ಕಾಲು ಮುಖ ತೊಳೆದುಕೊಂಡು ಮಗಳಿಗೂ ಕೈಕಾಲು ಮುಖ ತೊಳೆಯುವಂತೆ ಹೇಳಿ ಅಲ್ಲಿಯೇ ಅವರಿಗಾಗಿ ಇಟ್ಟಿದ್ದ ಟಾವೆಲ್ ನಿಂದ ಮಗಳ ಮುಖ ಕೈ ಕಾಲು ಒರೆಸಿ, ಇಬ್ಬರೂ ಕೋಣೆಯಿಂದ ಹೊರಗೆ ಬಂದರು. ಡೈನಿಂಗ್ ಹಾಲ್ ಗೆ ಹೊಂದಿಕೊಂಡಂತೆ ಇದ್ದ ಅಡುಗೆ ಮನೆಯಲ್ಲಿ ಅಮ್ಮ( ಸಾಹುಕಾರರ ಧರ್ಮಪತ್ನಿ)

ಎಲ್ಲರಿಗಾಗಿ ಕಾಫಿಯನ್ನು ತಯಾರು ಮಾಡುತ್ತಿದ್ದರು. ಕೋಣೆಯಿಂದ ಹೊರಗೆ ಬಂದ ತಾಯಿ ಮತ್ತು ಮಗಳನ್ನು ಕಂಡು ಅಮ್ಮ ಅಡುಗೆ ಮನೆಯಿಂದಲೇ…”ಇಬ್ಬರೂ ಕುಳಿತುಕೊಳ್ಳಿ…. ಕಾಫಿ ತಯಾರಾಗುತ್ತಿದೆ…. ಇದೋ ಈಗ ಬಂದೆ”…. ಎಂದರು ಮುಗುಳ್ನಗುತ್ತಾ. ಆಗಲಿ ಎನ್ನುತ್ತಾ ತಲೆಯಾಡಿಸಿ ಸುಮತಿ ಮತ್ತು ಮಗಳು ಕುರ್ಚಿಯಲ್ಲಿ ಕುಳಿತುಕೊಂಡರು. 

ಕೆಲಸದ ಹುಡುಗಿಯನ್ನು ಉದ್ದೇಶಿಸಿ…”ಹೋಗಿ ಡಾಕ್ಟರ್ ರನ್ನು ( ಅಂದರೆ ಅವರ ಪತಿಯನ್ನು) ಕಾಫಿಗೆ ಬರಲು ಹೇಳು”…. ಎಂದರು ಅಮ್ಮ. ಕೆಲಸದ ಹುಡುಗಿ ಹೋಗಿ ಕರೆದ ಕೆಲವು ನಿಮಿಷಗಳಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್ ತೊಟ್ಟ ಕನ್ನಡಕಧಾರಿಯಾದ ಡಾಕ್ಟರ್ ಹೊರಗೆ ಬಂದರು. 

ಅವರ ಉಡುಗೆ ತೊಡುಗೆ ಬಹಳ ಸರಳ. ಹೊರಗೆ ಹೋಗುವಾಗ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಶುಭ್ರವಾದ ಬಿಳಿಯ ಶರ್ಟ್ ತೊಡುತ್ತಿದ್ದರು. ಬೇರೆ ಯಾವುದೇ ಬಣ್ಣದ ಬಟ್ಟೆಗಳನ್ನು ಅವರು ತೊಡುತ್ತಿರಲಿಲ್ಲ. ಮನೆಯಲ್ಲಿ ಇರುವಾಗ ಹತ್ತಿಯ ಬಿಳೀ ಪಂಚೆ ಹಾಗೂ ಶರ್ಟ್ ತೊಡುತ್ತಿದ್ದರು. ಸುಮತಿ ಮತ್ತು ಮಗಳನ್ನು ಕಂಡು…”ನಿದ್ರೆ ಸರಿಯಾಗಿ ಬಂತೇ….ನಿಮಗೂ ಮಗಳಿಗೂ?…. ಎಂದು ನಸುನಗುತ್ತಾ ಕೇಳಿದರು. ಪತಿ ಪತ್ನಿ ಇಬ್ಬರ ಮುಖದಲ್ಲಿ ಸದಾ ಮಾಸದ ಮಂದಹಾಸವಿರುತ್ತಿತ್ತು. ಎಲ್ಲರನ್ನೂ ಬಹಳ ಪ್ರೀತಿಯಿಂದ ಇಬ್ಬರೂ ಮಾತನಾಡಿಸುತ್ತಿದ್ದರು. ಡಾಕ್ಟರ್ ಹಾಗೂ ಅಮ್ಮ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು.

ಎಲ್ಲರ ಕಷ್ಟ ಮತ್ತು ನೋವಿಗೆ ಸ್ಪಂದಿಸುವ ಸಹೃದಯ ಅವರಿಬ್ಬರದೂ. ಸುಮತಿ ಬಹಳ ಅಪರೂಪಕ್ಕೆ ಸಣ್ಣ ಸಾಹುಕಾರರ ಧರ್ಮಪತಿಯನ್ನು ನೋಡಿದ್ದಳು. ಆದರೆ ಅವರ ಜೊತೆ ಮಾತನಾಡಿರಲಿಲ್ಲ. ಎಲ್ಲರೂ ಅವರ ಗುಣಗಾನ ಮಾಡುವುದನ್ನು ಕೇಳಿದ್ದಳು. ಆದರೆ ಅಮ್ಮನ ಪರಿಚಯ ಇರಲಿಲ್ಲ. ಇಂದು ಸುಂದರಿ ಹಾಗೂ ಸದ್ಗುಣ ಸಂಪನ್ನೆಯಾದ ಅಮ್ಮನನ್ನು ಕಂಡು ಸುಮತಿಗೆ ಬಹಳ ಆನಂದವಾಯಿತು. ಒಂದು ತಟ್ಟೆಯ ತುಂಬಾ ಫಲಹಾರಗಳನ್ನು ತುಂಬಿಕೊಂಡು ಘಮ ಘಮಿಸುವ ಕಾಫಿಯನ್ನು ತಂದು ಸುಮತಿಯ ಮುಂದೆ ಹಿಡಿದು…”ಸುಮತಿ ಕಾಫಿ ಕುಡಿಯಿರಿ….ಮಗಳಿಗೆ ಹಾಲು ಇದೆ ಆರಿಸಿ ಕೊಡಿ”….ಜೊತೆಗೆ ಈ ಪಲಹಾರಗಳನ್ನೂ ತಿನ್ನಿ”… ಎಂದರು. ಅಮ್ಮನ ಮಾತುಗಳನ್ನು ಕೇಳಿದ ಸುಮತಿ ಅವರಿಗೆ ವಂದಿಸುತ್ತಾ ಕಾಫಿ ಹಾಗೂ ಪಲಹಾರ ತುಂಬಿದ ಪಿಂಗಾಣಿ ತಟ್ಟೆಯನ್ನು ತೆಗೆದುಕೊಂಡಳು. 

ಸುಮತಿ ಹಾಗೂ ಮಗಳು ಕಾಫಿ ಮತ್ತು ಹಾಲು ಜೊತೆಗೆ ಫಲಹಾರಗಳನ್ನು ಸೇವಿಸಿದ ನಂತರ ಕೆಲಸದ ಹುಡುಗಿ ಲೋಟ ತಟ್ಟೆಯನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ತೊಳೆದಿಟ್ಟಳು. ಅಮ್ಮ ಇವರಿಬ್ಬರನ್ನೂ ಮನೆಯ ಮುಂದಿನ ತಮ್ಮ ಪುಟ್ಟ ಉದ್ಯಾನವನಕ್ಕೆ ಕರೆದುಕೊಂಡು ಹೋದರು. 

ಮನೆಯಿಂದ ಹೊರಗೆ ಇಳಿದಾಗ ಇವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದ ಕಾರಿನ ಡ್ರೈವರ್ ಇದ್ದರು. ಅಮ್ಮ ಹಾಗೂ ಸುಮತಿ ಟೀಚರ್ ಇಬ್ಬರಿಗೂ ವಂದಿಸಿ ಮುಗುಳ್ನಕ್ಕರು. ಅವರಿಗೆ ಪ್ರತಿ ವಂದಿಸಿ ಅಮ್ಮ ಸುಮತಿಯ ಬಗ್ಗೆ ಹಾಗೂ ಅವಳ ಆರೋಗ್ಯದ ಬಗ್ಗೆ ವಿಚಾರಿಸುತ್ತಾ ಉದ್ಯಾನದಲ್ಲಿ ಜೊತೆಗೆ ಹೆಜ್ಜೆ ಹಾಕಿದರು. ಸುಮತಿಗೆ ಕಣ್ಣು ದೃಷ್ಟಿ ಮಂದವಾಗಿದ್ದ ಕಾರಣ ಹೂವುಗಳ ಬಣ್ಣಗಳು ಕಂಡರೂ ಹೂವಿನ ಆಕೃತಿ ಮಸುಕಾಗಿ ಕಾಣುತ್ತಿತ್ತು. ಆದರೂ ಮನೆಯೊಡತಿಯು ತನಗೆ ಪ್ರೀತಿಯಿಂದ ತೋರಿಸುತ್ತಿದ್ದ ಉದ್ಯಾನವು ಬಹಳ ಸುಂದರವಾಗಿ ಕಂಡಿತು. ಎಲ್ಲರೂ ಗುಣಗಾನ ಮಾಡುವ ಹಾಗೆಯೇ ಅಮ್ಮನ ಸುಶೀಲ ಗುಣ ಇದೆಯೆಂದು ಮನಸ್ಸಲ್ಲೇ ಅಂದುಕೊಂಡಳು. ಅಷ್ಟು ಹೊತ್ತಿಗೆ ಕೆಲಸದ ಹುಡುಗಿ ಬಂದು… ಅಮ್ಮಾ…ನಿಮಗೆ ಟೆಲಿಫೋನ್ ಕರೆ ಬಂದಿದೆ ಎಂದು ಕರೆದಳು. ಆಗ ಅಲ್ಲಿಯೇ ನಿಂತಿದ್ದ ಡ್ರೈವರ್ ರನ್ನು ಕರೆದು…”ಇವರಿಗೆ ಉದ್ಯಾನವನ್ನು ತೋರಿಸಿ, ಒಳಗೆ ಕರೆದುಕೊಂಡು ಬಾ”….ಎಂದು ಹೇಳಿ ಸುಮತಿಯನ್ನು ಉದ್ದೇಶಿಸಿ….”ಇವರ ಜೊತೆಗೆ ಬನ್ನಿ…ನಾನು ಹೋಗುತ್ತೇನೆ”… ಎನ್ನುತ್ತಾ ಲಗುಬಗೆಯಿಂದ ಓಡು ನಡಿಗೆಯಲ್ಲಿ ಒಳಗೆ ನಡೆದರು. ಅಮ್ಮ ಬಹಳ ಉತ್ಸಾಹ ತುಂಬಿದ ಚಿಲುಮೆಯಾಗಿ ಸುಮತಿಗೆ ಕಂಡರು. 

ಉದ್ಯಾನದಲ್ಲಿ ಬೆಳೆದಿರುವ ಹೂವುಗಳನ್ನು ಕಂಡಾಗ ಮಗಳು ಸುಮತಿಯನ್ನು ಕೂಗಿ …. “ಅಮ್ಮಾ ಈ ಹೂವು ಅಲ್ಲಿ ತೋಟದ ಬಂಗಲೆಯಲ್ಲಿ ಇದೆ….ನಾನು ನೋಡಿದ್ದೆ”… ಎಂದಳು. …”ಹೌದಾ”… ಎನ್ನುತ್ತಾ ಮಗಳನ್ನು ಹತ್ತಿರ ಕರೆದು ದೂರ ಹೋಗದಂತೆ ತಾಕೀತು ಮಾಡಿದಳು. ಸಂಜೆಯಾಗುತ್ತಾ ಬಂದಂತೆ ಇಲ್ಲಿಯೂ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಸುತ್ತಿತ್ತು. ಆದರೆ ನಾಳೆ ಆಸ್ಪತ್ರೆಗೆ ಹೋಗುವ ಬಗ್ಗೆ ಯೋಚಿಸುತ್ತಾ ಸ್ವಲ್ಪ ಹೊತ್ತು ಅಲ್ಲೇ ಕಳೆದಳು ಸುಮತಿ. 


Leave a Reply

Back To Top