ಮನುಷ್ಯ ಭೂಮಿ ಮೇಲೆ ಯಾವಾಗ ಜನ್ಮ ಪಡೆದನೋ; ಅವನ ಬದುಕು ಪ್ರಕೃತಿಯ ಜೊತೆಗೆ ಬೆಸೆದು ಹೊಸದೊಂದು ಬದುಕು ಪ್ರಾರಂಭವಾಯಿತು ಎಂಬುದು ಸತ್ಯ.ಇಲ್ಲಿ ಎಲ್ಲರಿಗೂ ಪ್ರಕೃತಿಯ ವಿರುದ್ದ ಜೀವಿಸುವ ಹಕ್ಕಿಲ್ಲವೆಂಬುದು ಅಷ್ಟೇ ಸತ್ಯ…ಜನಜೀವನ ನಿಂತಿರುವುದು ಮತ್ತು ನಂಬಿರುವುದು ತೋಳುಗಳ ಶಕ್ತಿ, ಬುದ್ದಿಬಲದ ಯುಕ್ತಿ, ಸಂಘ ಜೀವನ ಇವೆಲ್ಲ ಜೀವಿಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳು.ನಮಗೆಲ್ಲ‌ ಇದರ ಅರಿವು ಮೂಡಿಸುವ ಸಲುವಾಗಿ ಪ್ರತಿ ಹಂತದಲ್ಲಿ ಎಚ್ಚರಿಕೆಯ ಮುನ್ಸೂಚನೆ ನೀಡುತ್ತಿರುವುದು ಇದೆ ಕಾರಣಕ್ಕೆ.ಎಷ್ಟೊಂದು ವಿಚಿತ್ರ ನೋಡಿ…ಜಗತ್ತು ವಿಶಾಲವಾಗುತ್ತಿದೆ. ಆದರೆ ಮನುಷ್ಯನ ಮನಸ್ಥಿತಿ ಕುಬ್ಜವಾಗುತ್ತಿದೆ.ಸಂಕೋಲೆಗಳ ಸರಪಳಿಯಲ್ಲಿ ಚಿಗುರುವ ರೆಂಬೆಕೊಂಬೆಗಳು ಸೃಷ್ಟಿಯಾಗಬೇಕಿದೆ.

ಒಬ್ಬರನ್ನೊಬ್ಬರು ಕೊಂದು ಬದುಕುವ ಸಂಸ್ಕೃತಿಗಳ ಪ್ರಭಾವದಿಂದಾಗಿ ರಕ್ತಸಿಕ್ತ ಮನಸ್ಸುಗಳನ್ನು ಶುಚಿಯಾಗಿಸಬೇಕಿದೆ. ಶತಮಾನಗಳು ಕಳೆದಂತೆ ಮನುಷ್ಯನ ಚಿಂತನೆಗಳು ವಿಕಸಿತವಾಗಬೇಕಿದೆ.ಡೈನೋಸಾರ್ ನಂತಹ ಬೃಹತ್ ಗಾತ್ರದ ಪ್ರಾಣಿಗಳು ಈ ಭೂಮಿಯಲ್ಲಿ  ಆಗಿ ನಶಿಸಿ ಹೋಗಿವೆ.ರಾಜ ಮಹಾರಾಜರ ಆಡಳಿತಗಳು ಹಾಗೂ ಬ್ರಿಟೀಷರ ದಬ್ಬಾಳಿಕೆ,ಗುಲಾಮಗಿರಿಯ ವಿರುದ್ಧದ ಚಳುವಳಿಗಳು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೆ ಒಂದೇ ಉಸಿರಿನ ಹೋರಾಟದ ಫಲ ದೇಶ ಸ್ವತಂತ್ರವಾಯಿತು…ಎರಡು ಶತಮಾನಗಳ ಬಳಿಕ!..ಸಂವಿಧಾನದ ಕೃಪೆಯಿಂದ ಎಲ್ಲರೂ ಅವಕಾಶಗಳನ್ನು ಪಡೆಯುವಂತಾಗಿದ್ದು ಭಾರತೀಯರ ಅದೃಷ್ಟ ‌.ಜನಸಾಮಾನ್ಯನು ಸಾಮಾನ್ಯನಾಗಿ ಬದುಕುವ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುವ ಸ್ಥಿತಿಯಿಂದ ಮರಿಚೀಕೆಯ ಹಂತಕ್ಕೆ  ತಲುಪುತ್ತಿರುವುದು ವಿಪರ್ಯಾಸ!. ಕುಟುಂಬ ವ್ಯವಸ್ಥೆ, ಜನಜೀವನ ಅವ್ಯವಸ್ಥೆ, ಸಂಸ್ಕಾರ ಸಂಸ್ಕೃತಿಗಳ ಕೊರತೆ,ಮೊಬೈಲ್ ದುರ್ಬಳಕೆ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ‌.. ಪ್ರಕೃತಿಯ ವಿನಾಶದ ದುಷ್ಪರಿಣಾಮಗಳು, ಮಹಾಮಾರಿಗಳ ಅಬ್ಬರದ ಕೇಕೆಗಳು, ಅನಿರೀಕ್ಷಿತ ಹಾರ್ಟ್ ಅಟ್ಯಾಕ್ ಗಳು…..ಒಂದಾ‌ ಎರಡಾ?

ಇಂತಹುದರ ನಡುವೆ ಆತ್ಮಹತ್ಯೆಗಳು….ಮರ್ಯಾದಾ ಹತ್ಯೆಗಳು, ನಿಗೂಢ ಹತ್ಯೆಗಳು,’ಪ್ರೀಜ್’,ನಲ್ಲಿ ಕೋಳಿ ಕುರಿಯಂತೆ ಕೊಚ್ಚಿ ತುಂಬುವ ಪ್ರಕರಣಳು,ಗಂಡ ಹೆಂಡತಿಯನ್ನು; ಹೆಂಡತಿ ಗಂಡನನ್ನು ನಂಬಿಕೆಯ ಅಸ್ತ್ರ ಬಳಸಿ ಮರ್ಡರ್ ಮಾಡುವುದು ಈಗೀಗ ಭಯತರುವ ಮಟ್ಟಿಗೆ ಒಳಸಂಚುಗಳಾಗಿ ಬೆಳೆಯುತ್ತಿರುವುದು ಸಮಾಜ ಯಾವ ಹಂತಕ್ಕೆ ತಲುಪುತ್ತಿದೆ ಎಂಬುದನ್ನು ಉಹಿಸಲು ಸಾಧ್ಯವಿಲ್ಲ.ಯಾರನ್ನು ದೂರುವಂತಿಲ್ಲ..ಬಡವ,ಶ್ರೀಮಂತ ಇವರ ನಡುವೆ ಮಧ್ಯಮ ವರ್ಗದ ಜನರ ತುಮುಲಗಳು ಆರಕ್ಕೆ ಏರದೆ ಮೂರಕ್ಕೆ ಇಳಿಯದ‌ ಸ್ಥಿತಿಯಲ್ಲಿ..
ಆಡಂಬರದ ಜೀವನ ಶೈಲಿಯಲ್ಲಿ ಸಿಕ್ಕು ನರಳುವ ಕುಟುಂಬಗಳು ಎಷ್ಟೋ!. ಬೀದಿಗಳಲ್ಲಿ ಇಂದಿಗೂ ವಾಸ್ತವ್ಯ ಹೂಡಿರುವ ಕುಟುಂಬಗಳಿಗೆ ಲೆಕ್ಕವಿಲ್ಲ.ಬೆಳಿಗ್ಗೆ ಹೋದವರು ಸಂಜೆ ಮರಳುವರೆಂಬ ಖಾತ್ರಿಯಿಲ್ಲ. ಅನಿಶ್ಚಿತತೆಯ ಬದುಕು ನಮ್ಮದಾಗಿದೆ.

ಇಂತಹುದರ ನಡುವೆ ವಿದ್ಯಾವಂತರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕಾದ; ಮಕ್ಕಳು ಅಡ್ಡ ಹಾದಿಯನ್ನು ಆಯ್ಕೆಮಾಡುತ್ತಿರುವುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಪಾಲಕರ ಪೋಷಕರ ಮಾತುಗಳಿಗೆ ಗೌರವ ಸೂಚಿಸುತ್ತಿಲ್ಲ,ಬದಲಾಗಿ ಹಿರಿಯರ ಶ್ರಮಕ್ಕೆ ಎಳ್ಳು ನೀರು ಬಿಡುತ್ತಿರುವುದು ಗಮನಿಸಿದರೆ ಮುಂದ್ಯಾವ ಗಂಡಾಂತರ ಕಾದಿದೆಯೋ ಹಿರಿಜೀವಗಳಿಗೆ?. ಎಲ್ಲೊ ಒಂದು ಕಡೆ ಮಗ,ಮಗಳು ತೆಗೆದುಕೊಳ್ಳುವ‌
ನಿರ್ಧಾರಗಳು ಹೆತ್ತವರನ್ನು ನಡು ರಸ್ತೆಯಲ್ಲಿ ನಿಲ್ಲುವ ಸ್ಥಿತಿ ತಂದ ಉದಾ.ಗಳಿಗೆ ಲೆಕ್ಕವಿಲ್ಲ…ನೂರಾರು ಕನಸುಗಳು ಹೆತ್ತವರಿಗೆ ತಮ್ಮ ಮಕ್ಕಳ ಮೇಲೆ.ಗಂಡಾದರೆ ಮಗನನ್ನು ಡಾಕ್ಟರ್, ಇಂಜಿನಿಯರ್ ಮಾಡಲು ಮಾಡಿದ ಎಲ್ಲ ಖರ್ಚನ್ನು ಮದುವೆಯಲ್ಲಿ ವಧುವಿನ ಜೊತೆ ಬಳುವಳಿಯಾಗಿ ಪಡೆಯುವುದು…ವರೋಪಚಾರಕ್ಕೆ ಒಂದು ಸೈಟು,ಬೈಕ್, ಕಾರು,ಹೀಗೆ ಹಲವಾರು ಡಿಮ್ಯಾಂಡ್ಗಳ ಕನಸುಗಳನ್ನು ನನಸು ಮಾಡಲು ಹರಸಾಹಸ ಪಡುವ ಪಾಲಕರಿಗೇನು ಕೊರತೆಯಿಲ್ಲ.
ಆದರೆ ಹೆಣ್ಣು ಹೆತ್ತವರ ಪರದಾಟ, ಕಲಿಸಿ ನೌಕರಿ ಇದ್ದರೂ ಸಾಲಸೋಲ ಮಾಡಿ ಗಂಡಿನ ಮನೆಯವರ ಬೇಡಿಕೆಗಳನ್ನು ಈಡೇರಿಸಲು ತಮ್ಮ ಜೀವನ ಒತ್ತೆಯಿಟ್ಟು  ಮಗಳ ಮದುವೆ ಆದರೆ ಸಾಕೆಂದು ಜೀವ ಕೈಯಲಿ ಹಿಡಿದು ಬದುಕುವ ಪಾಲಕರಿಗೂ ಕೊರತೆಯಿಲ್ಲ…ಆದರೆ ಪ್ರಜ್ಞಾವಂತ, ವಿದ್ಯಾವಂತ ಯುವ‌ಸಮುದಾಯ ವರದಕ್ಷಿಣೆ ಹೆಸರಿನಲ್ಲಿ ವರೋಪಚಾರ ಮಾಡುವ ಕ್ರಮದ ವಿರುದ್ದ ಧ್ವನಿಯೆತ್ತುತ್ತಿಲ್ಲ.ಒಂದು ವೇಳೆ ಏನು ಬೇಡಿಕೆಯಿಡದ ವರನನ್ನು ಸಂಶಯದಿಂದ‌ ನೋಡಿ ಹೆಣ್ಣು ಕೊಡದ ಕುಟುಂಬಗಳು ಇವೆ.ಸೌಹಾರ್ದವಾಗಿ ಸರಳವಿವಾಹದತ್ತ ಮುಖಮಾಡುವ ಸಮುದಾಯ ಬೆರಳೆಣಿಕೆಯಷ್ಟು ಮಾತ್ರ!.

ಮೊದಲು ಪ್ರೀತಿ ಮಾಡಿ ಮದುವೆಯಾದವರ ಜೀವನಕ್ಕೆ ಶುಭಹಾರೈಸುವುದಿರಲಿ‌ ಅವರನ್ನು ಗೌರವದಿಂದ ನೋಡುವುದು ಕೂಡ ಇರಲಿಲ್ಲ.ಆ ಕುಟುಂಬವನ್ನು ಹೀಯಾಳಿಸಿ ಮುಖಯೆತ್ತಿ ಓಡಾಡದಂತೆ ಮಾಡುವ‌ ಅಥವಾ ನಡೆದುಕೊಳ್ಳುವ ಸಮಯದಲ್ಲಿ ಕೆಲವೇ ಕೆಲವು ಪ್ರಕರಣಗಳು ಯಶಸ್ಸು ಕಂಡಂತಿತ್ತು.ಇನ್ನು ಕೆಲವು ಪ್ರಕರಣಗಳಲ್ಲಿ ಓಡಿ ಹೋಗಿ ಮದುವೆಯಾದ ಹುಡುಗಿ/ಹುಡುಗನನ್ನು ಬೇರೆ ಮಾಡಿ ಸ್ವಯಂ ವಿಚ್ಛೇದನ ಪಡೆಯುವಂತೆ ಒತ್ತಡ ಹೇರಿ,ದುಡ್ಡು ಕೊಟ್ಟು ಮದುವೆ ಮುರಿದು ಆ ಸಮಯದಲ್ಲಿ ಆಕೆಗೆ ಮಗುವಿದ್ದರೂ ಕರೆತಂದು ಇನ್ನೊಬ್ಬರಿಗೆ ಬಲವಂತವಾಗಿ,ಹೆದರಿಸಿ,ಒತ್ತಡ ಹೇರಿ ಅನಿವಾರ್ಯವಾಗಿ ಮದುವೆ ಮಾಡಿಸುವ ಪರಿಪಾಠ ಒಳಗೊಳಗೆ ಈಗಲೂ ಇದೆ.ಇದು ಸರಿ,ತಪ್ಪು ಎಂಬ ಚಾದಗಳು ಅವರವರ ಸ್ಥಾನದಲ್ಲಿ ಸಮನಾದರೂ, ಸಮಾಜದ ಲೆಕ್ಕಾಚಾರ ಎತ್ತ ಸಾಗಿದೆ ಎಂಬ ಉತ್ತರ ಸಮಂಜಸವಾಗಿ ಕೊಡ ಬಲ್ಲ ವಿದ್ಯಾವಂತರು ಸಿಗಬಹುದಾ? ಪ್ರಶ್ನೆ ಏಳುತ್ತದೆ!.ಶಿಕ್ಷಣ ಮನಸ್ಸಿನ ಪಕ್ವತೆಯನ್ನು ಹೊಂದುತ್ತದೆ.ಸುಸಂಸ್ಕೃತ ಸಮಾಜದ ಕೊಡುಗೆ ಶಿಕ್ಷಣ ಎಂಬುದನ್ನು ಹೇಗೆ ಅರ್ಥೈಸಲು ಸಾಧ್ಯ!.ಅನುಭವ ಮತ್ತು ಅನುಭಾವ ಮೇಳೈಸಲು ಇನ್ನೆಷ್ಟು ಸಮಯ ಬೇಕು?

ಹೆಣ್ಣಿರಲಿ,ಗಂಡಿರಲಿ ಮನೆಮನೆತದ ಅರಿವಿನೊಂದಿಗೆ ಬಾಳಬೇಕಾಗಿದ್ದು ಹಿಂದಿಗಿಂತ ಇಂದಿಗೆ ಪ್ರಸ್ತುತ,!.ಯಾರು ಅಯೋಗ್ಯರಲ್ಲ!…ಪ್ರೀತಿ ಪ್ರೇಮಗಳು ಅಂಗಡಿಯಲ್ಲಿ ಮಾರಾಟಕ್ಕಿಟ್ಟ ವಸ್ತುವಲ್ಲ.ಯಾಕೆಂದರೆ ಪುಕ್ಕಟ್ಟೆಯಾಗಿ ಸಿಗುವ‌ ಸರಕಲ್ಲ.”ಪ್ರೀತಿ” ಯಾವಾಗ ಹೇಗೆ ಹುಟ್ಟುತ್ತದೆ ಎಂಬ ಮೂಲ ಕಂಡುಹಿಡಿಯಲು ಯಾರಿಂದಲೂ ಸಾಧ್ಯವಿಲ್ಲ. ಅದು ನೈಸರ್ಗಿಕ ನಿಯಮ. ಪ್ರಕೃತಿಯ ಅನುಭಾವ…ನಮ್ಮಲ್ಲಿ ತಿಳುವಳಿಕೆ ಇಲ್ಲದ ವಯಸ್ಸಿನ ಪ್ರೀತಿಗೆ ಬೆಲೆ ಕಡಿಮೆ.ಅದು‌ ಆಕರ್ಷಣೆ ಮಾತ್ರ ಸಮಯ ಕಳೆದಂತೆ ಅದು ಶಾಶ್ವತವಾಗಿ ಮರೆಯಾಗುತ್ತದೆ.ಆದರೆ,ಕೆಲವು ಜಿದ್ದಾಜಿದ್ದಿಗೆ ಬಿದ್ದು ಪ್ರೀತಿ ಪ್ರೇಮದ ಹೆಸರಿನಲ್ಲಿ ನಾಟಕವಾಡಿ ಮೋಸ ಮಾಡುವ ಯುವಕ/ ಯುವತಿಯರಿಂದ ದೂರವಿರಬೇಕು. ಮೂರತಿಂಗಳು‌,ಆರತಿಂಗಳು,ಒಂದ ವರ್ಷದೊಳಗೆ ಹುಡುಗಿಯರು ಸಾವು ಕಂಡ ಘಟನೆಗಳಿಗೆ ಹೆತ್ತವರು ತತ್ತರಿಸಬೇಕಾಗಿದೆ.ಹೀಗೆಲ್ಲ ಆಗುತ್ತಿದ್ದರು ತಮ್ಮ ನಿರ್ಧಾರವನ್ನು ಪಾಲಕರಿಗೆ ತಿಳಿಸದೆ ಮದುವೆ ಮುರಿದು ಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಿ ಮದುವೆ ಮಂಟಪ ಬಿಟ್ಟು ಹೋಗುವ‌ ಸಮಯದಲ್ಲಿ ಹೆತ್ತವರ ಪಾಡು ನಾಯಿ ಪಾಡು.. ಯಾರಿಗೆ ಸಮಜಾಯಿಸಿಕೊಡಬೇಕು?. ಮೊದಲೇ ಬೇಡವೆಂದಿದ್ದರೆ ಖರ್ಚಾದರು ಉಳಿಸಬಹುದಿತ್ತು,ಮರ್ಯಾದೆ ಮನೆಯಲ್ಲೆ ಹೋಗುತ್ತಿತ್ತು.ಬೀದಿಗೆ ಬಂದು ಹರಾಜು ಹಾಕಿದ ಮೇಲೆ ಏನು ಮಾಡುವುದು? ತಲೆ ಮೇಲೆ ಕೈಹೊತ್ತು ಮರಗುವ ಸ್ಥಿತಿ ಯಾರಿಗೆ?.”ಆತ್ಮಹತ್ಯೆ” ಯೇ ಅದಕೆ ಪರಿಹಾರವಾ? ಜೀವನ ಅಂತ್ಯ ಗೊಳಿಸುವ ನಿರ್ಣಯ ಸರಿನಾ? ಯಾರೋ ದುಡುಕಿ ಮಾಡಿದ ತಪ್ಪಿಗೆ ಇಡೀ ಕುಟುಂಬ ಸಾವಿಗೆ ಶರಣಾದರೆ ಅದಕ್ಕಾವ ಬೆಲೆ?.. ಅಷ್ಟು ಮಾನಸಿಕವಾಗಿ ಕುಗ್ಗುವುದರಿಂದ ಸಾವೇ ಕೊನೆಯೆಂಬ ಪಾಠ ಮನದಲ್ಲಿ ಅಚ್ಚಾಗುವುದಾ? ಉತ್ತರವಿಲ್ಲ!.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರೀತಿ, ಪ್ರೇಮದ ಹೆಸರಲ್ಲಿ ಆಗುತ್ತಿರುವ ನಾಟಕೀಯ ಬೆಳವಣಿಗೆಗಳು ಇಂತಹುದೇ ಜಾತಿ,ಧರ್ಮಕ್ಕೆ ಸೀಮಿತವಾಗಿಲ್ಲ.ಹಾಗಂತ ಪ್ರೀತಿಸಿ ಮದುವೆಯಾದ ಎಷ್ಟೋ ಕುಟುಂಬಗಳು ಅನ್ಯೋನ್ಯ ಸಂಬಂಧವನ್ನು ಹೊಂದಿ ಮಾದರಿಯಾಗಿ ಬದುಕುತ್ತಿವೆ.ಹಾಗೆ ಬದುಕಬಾರದೆಂಬ ಒತ್ತಡ ಹೇರುವ ಜನಾಂಗದ ಮನಸ್ಥಿತಿ ಹಣ,ಅಂತಸ್ತು,ಸರಕಾರಿ ನೌಕರಿಯನ್ನು ಅವಲಂಬಿಸಿದರೆ  ಮಾತ್ರ ಎಲ್ಲವೂ ಗೌಣ.ಹೆತ್ತವರ ಕಳಕಳಿ ಮಕ್ಕಳ ಜೀವನ ಹಾಳು ಮಾಡುವುದಲ್ಲ..ಮಕ್ಕಳ ಅವಲಂಬನೆ ಗೊತ್ತಿರದ ಸಂಬಂಧದೊಂದಿಗೆ ಹೇಗೆ ಬಾಳುವುದು? ಪಾಲಕರು ಮತ್ತು ಮಕ್ಕಳು ಪರಸ್ಪರ ಬಿಚ್ಚು ಮನಸ್ಸಿನ ಸ್ನೇಹಿತರಾದರೆ ಮಗ ಅಥವಾ ಮಗಳ ಆಶಯವೇನು ಎಂಬುದನ್ನು ಅರಿತರೆ ಮುಂದಾಗುವ ಅನಾಹುತವನ್ನು ತಪ್ಪಿಸಲು ಸಾಧ್ಯ…ಬಿಗಿಯಾದ ಕಟ್ಟುಪಾಡು,ತಾನು ತನ್ನದೇ ಹಠ ಸಾಧನೆಯ ಅಸ್ತ್ರ ಹಾಗೂ ಹೆಣ್ಣು ಗಂಡೆಂಬ ಭೇದ ಭಾವ ಪ್ರೀತಿ,ವಿಶ್ವಾಸ, ನಂಬಿಕೆಯನ್ನು ಹೊಂದಿರದ ಸಂದರ್ಭದಲ್ಲಿ ತನಗಿಷ್ಟವಾದ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ ಎಂಬ ಭಯವು…ಯಾರೋ ತೋರಿಸುವ ಪ್ರೀತಿ ನಿಜವೆಂದು ಹೆತ್ತವರ ಧಿಕ್ಕರಿಸಿ ಓಡಿಹೋದ ಮಕ್ಕಳು ಎಲ್ಲವನ್ನೂ ಕಳಕೊಂಡು ಬೀದಿಯಲ್ಲಿ ಕಂಗಾಲಾಗಿ ನಿಂತಾಗ ಅದೇ ಹೆತ್ತವರು ಪುನಃ ಕೈಹಿಡಿದು ಕರೆತಂದ ಘಟನೆಗಳು ಸಾಕಷ್ಟು. ಮನುಷ್ಯ ಸಂಘಜೀವಿಯೆನ್ನುವುದನ್ನು ಮರೆಯಬಾರದು.ಒಂಟಿಯಾಗಿ ಬದುಕಲಾರ.ಕಟ್ಟುಪಾಡುಗಳು ಏನೇ ಇರಲಿ,ಮಕ್ಕಳ ನಡುವೆ ಸೌಹಾರ್ದತೆ ಏರ್ಪಾಡಲಿ.”ತಾಳಿ ಕಟ್ಟುವ ಸಮಯದಲ್ಲೂ ಪರಸ್ಪರ ಒಪ್ಪಿಗೆಯಿದ್ದರೆ ಮಾತ್ರ ಕಟ್ಟಬೇಕು!. ಎಲ್ಲ ಹಂತ ದಾಟಿದರೂ ಮುರಿದುಬೀಳುವ ಮದುವೆಗೆ ಕಾರಣಗಳು ನೂರಾರು!.ಗಂಡಿನ ನಡೆ,ಹೆಣ್ಣಿನ ನಡೆ ಮದುವೆಯಾದರೂ ಆತಂಕ ಮನೆ ಮಾಡಿರುವುದು ಇತ್ತೀಚೆಗಿನ ಪ್ಯಾಶನ್ ಅಂದರೆ ತಪ್ಪಾಗದು…
ಬದಲಾಗಬೇಕಾಗಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಬೇಕಿದೆ.


7 thoughts on “

  1. ಪ್ರಸ್ತುತ ದ ಸಂದಿಗ್ಧ ಚಿತ್ರಣವನ್ನು ಸುಂದರವಾಗಿ ಬಿಂಬಿಸಿದ್ದಿರೀ ಮೇಡಂ.

  2. ಲೇಖನ ಅರ್ಥಪೂರ್ಣವಾಗಿದೆ ಶಿವಲೀಲಾ. ಅಭಿನಂದನೆಗಳು.ಗ

Leave a Reply

Back To Top