ಸಾಮಾಜಿಕ ಸಂಗಾತಿ
ಡಾ.ಸುಮತಿ
“ಶಿಥಿಲವಾಗುತ್ತಿರುವ ಮಾನವ ಸಂಬಂಧಗಳು”

ಮಾನವ ಸಂಘ ಜೀವಿ,ಸಮಾಜ ಜೀವಿ. ತನ್ನ ಬದುಕಿನ ಅವಧಿಯಲ್ಲಿ ಸಾಕಷ್ಟು ರೀತಿಯ ಸಂಬಂಧಗಳನ್ನು ಹೊಂದಿರುತ್ತಾನೆ. ಅದು ತನ್ನ ಕುಟುಂಬದಲ್ಲಿ ಇರಬಹುದು, ಸಂಬಂಧಿಕರಲ್ಲಿರಬಹುದು ಅಥವಾ ಸಮಾಜದಲ್ಲಿ ಇರಬಹುದು. ಸಂಬಂಧಗಳು ಬೆಸೆಯಬೇಕಾದರೆ ಮಾನವೀಯತೆ ಬೇಕಾಗುತ್ತದೆ. ಅಲ್ಲದೆ ಸಂಬಂಧಗಳಲ್ಲಿ ಬದ್ಧತೆ ಇರಬೇಕಾಗುತ್ತದೆ.ಆದರೆ ಇತ್ತೀಚೆಗೆ ಈ ಸಂಬಂಧಗಳಲ್ಲಿ ಅಥವಾ ಸಮಾಜದಲ್ಲಿ ಬದ್ಧತೆಯ ಕೊರತೆಯಿಂದಾಗಿ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಮನುಷ್ಯನು ತನ್ನ ಸುಖ, ಹಣ, ಅಧಿಕಾರದ ಲಾಲಾಸೆಯಿಂದ ಸಂಬಂಧಗಳಿಗೆ ಬೆಲೆ ಕೊಡುತ್ತಾ ಇಲ್ಲ.ಬಾಂದವ್ಯ ಬೆಸೆದು,ಸಂಬಂಧ ಬೆಳೆದರೂ, ದಿನಗಳು ಕಳೆದಂತೆಲ್ಲ ಮಾನವ ಸಂಬಂಧಗಳು ಶಿಥಿಲಗೊಳ್ಳುತ್ತಾ ಬರುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿವೆ. ಮನುಷ್ಯ ಸಂಬಂಧಗಳಲ್ಲಿ ಬಿರುಕು ಮೂಡಿ ಮಾನವೀಯ ಸಂಬಂಧಗಳೇ ಮರೆಯಾಗುತ್ತಿವೆ.
ಭಾರತೀಯ ಸಂಸ್ಕೃತಿಯಲ್ಲಿ ಸಂಬಂಧ ಎನ್ನುವುದು ಸ್ವಾಭಾವಿಕವಾಗಿಯೇ ಹುಟ್ಟಿನಿಂದಲೇ ಬೆಸೆದು ಇರುವಂತದ್ದು.ನಮ್ಮವರು ಎಂಬ ಅಂತರಾಳದ ಭಾವ ನಮ್ಮಲ್ಲಿ ಒಳಗೊಂಡಿರುತ್ತದೆ.ಅವಿಭಕ್ತ ಕುಟುಂಬದಲ್ಲಿ ರಕ್ತ ಸಂಬಂಧಗಳಾದ ತಂದೆ,ತಾಯಿ, ಅಜ್ಜ, ಅಜ್ಜಿ,ಮಕ್ಕಳು, ಮೊಮ್ಮಕ್ಕಳು,ಚಿಕ್ಕಪ್ಪ, ದೊಡ್ಡಪ್ಪ ಮುಂತಾದ ಸಂಬಂಧಗಳು ಗಾಢವಾಗಿ ಬೆಳೆದು ಬಾಂಧವ್ಯ ಬೆಸೆದಿರುತ್ತಿತ್ತು.
ಆದರೆ ಈಗ “ಹಂಗಿನ ಅರಮನೆಗಿಂತ ಇಂಗಡದ ಗುಡಿ ಲೇಸು”ಎಂಬಂತೆ ಮನುಜ ಯಾವುದೇ ನೋವು ಅವಮಾನವನ್ನು ಸಹಿಸುವ ಸಹನೀಯ ಗುಣ ಕಡಿಮೆ ಇದ್ದ ಕಾರಣ ಅವಿಭಕ್ತ ಕುಟುಂಬ ಒಡೆದು ವಿಭಕ್ತ ಕುಟುಂಬಗಳಾಗಿ ಬೆಳೆದು ಅವಿಭಕ್ತ ಕುಟುಂಬದಲ್ಲಿದ್ದ ರಕ್ತ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಎಂಬುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತಾಗಿದೆ
ಇನ್ನೂ ಸಾಮಾಜಿಕ ಜೀವನದತ್ತ ಗಮನ ಹರಿಸಿದರೆ ಗೆಳೆತನ, ಗ್ರಾಹಕ,ಮಾಲೀಕ, ಸಹ ಪ್ರಯಾಣಿಕ, ಜೊತೆ ಕೆಲಸಗಾರ , ಬಾಡಿಗೆದಾರ, ಮುಂತಾದ ನಮ್ಮ ನಡುವಿನ ಎಲ್ಲಾ ಸಂಬಂಧಗಳು ನಮ್ಮ ಆಯ್ಕೆಗಳು ಮತ್ತು ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ.ನಮ್ಮ ಅವಶ್ಯಕತೆ ಮುಗಿದಂತೆ ಶಿಥಿಲ ಗೊಂಡು ಮಾಯವಾಗುತ್ತವೆ. ಇಂತಹ ಸಂಬಂಧಗಳಲ್ಲಿ ಸೌಹಾರ್ದ, ಸಾಮರಸ್ಯ, ನಂಬಿಕೆ, ವಿಶ್ವಾಸ, ಆತ್ಮೀಯತೆ ಬೆಳೆದರೆ, ವ್ಯವಹಾರದಿಂದ ಹಿಡಿದು ಎಲ್ಲವೂ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಆದರೆ ನಮ್ಮ ಈಗಿನ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ,ನಂಬಿಕೆ ಗೌರವ ಇವೆಲ್ಲವೂ ಕಡಿಮೆಯಾಗುತ್ತಾ ಬಂದು ಯಾರನ್ನೂ ನಂಬುವಂತಹ ಪರಿಸ್ಥಿತಿ ಇಲ್ಲದ ಹಾಗೆ ಆಗಿದೆ. ಪ್ರತಿಯೊಬ್ಬರನ್ನು ಸಂಶಯದೃಷ್ಟಿಯಿಂದಲೇ ನೋಡುವ ಪರಿಸ್ಥಿತಿ ನಮ್ಮದಾಗಿದೆ. ಸಂಶಯ ಎನ್ನುವುದು ಬದುಕಿನ ದೊಡ್ಡ ಶತ್ರು ಇದ್ದಹಾಗೆ. ಸಂಶಯವಿದ್ದಲ್ಲಿ ಸಂಬಂಧಗಳು ಬೆಸೆಯುವುದಾದರೂ ಹೇಗೆ? ಒಂದು ವೇಳೆ ಮುಗ್ಧನೊಬ್ಬ ವಿಶ್ವಾಸವಿಟ್ಟು ಸಂಬಂಧಗಳಿಗೆ ಬೆಲೆ ಕೊಟ್ಟರೆ ಅವನು ಮೋಸ ಹೋಗುವುದೇ ಹೆಚ್ಚು.
ವಸ್ತುಗಳನ್ನು ಖರೀದಿಸುವಾಗಲೇ ಇರಬಹುದು, ಮದುವೆ ಸಂಬಂಧವೇ ಇರಬಹುದು, ಸ್ನೇಹವೇ ಇರಬಹುದು, ಪ್ರೀತಿ ಪ್ರೇಮಗಳೇ ಇರಬಹುದು, ರಾಜಕೀಯವೇ ಇರಬಹುದು ಎಲ್ಲವೂ ಇಂದು ಅಸಹಜ ವಾತಾವರಣ ನಿರ್ಮಿಸಿವೆ. “ಹೇಗೋ ಏನೋ ಯಾವುದಕ್ಕೂ ಎಚ್ಚರಿಕೆಯಿಂದ ಇರೋಣ” ಎಂಬ ಭಾವನೆ ಎಲ್ಲರಲ್ಲಿಯೂ ಮೂಡುವಂತಹ ಪರಿಸ್ಥಿತಿ ಇದೆ.ಎಲ್ಲೋ ಕೆಲವರು ಪ್ರಾಣಕ್ಕಿಂತ ಹೆಚ್ಚಾದ ಆತ್ಮೀಯ ಗೆಳೆಯರು, ತ್ಯಾಗದ ಸಂಬಂಧಗಳು ಕಾಣಸಿಗಬಹುದೇ ಹೊರತು ,ಎಲ್ಲರೂ ಅಥವಾ ಎಲ್ಲವೂ ಆ ರೀತಿಯಲ್ಲಿ ಇರಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಹಾಗಾಗಿ ಶಿಥಿಲಗೊಂಡ ಶಿಥಿಲಗೊಳ್ಳುತ್ತಿರುವ ಸಂಬಂಧಗಳನ್ನು ಮತ್ತೆ ಬೆಸೆದು ಗಟ್ಟಿಗೊಳಿಸುವ ಪ್ರಯತ್ನಗಳು ನಡೆದರೆ ಮಾತ್ರ ಮನುಷ್ಯನ ಬದುಕು ಸಾರ್ಥಕ ಆಗಲು ಸಾಧ್ಯ.
ಇದು ಬದಲಾವಣೆಯ ಯುಗ ಬದಲಾವಣೆಯ ಸಮಯದಲ್ಲಿ ಅದಕ್ಕೆ ತಕ್ಕಂತೆ ನಾವು ಕೂಡ ಬದಲಾಗಬೇಕು ನಿಜ. ಆದರೆ ಎಲ್ಲದಕ್ಕೂ ಒಂದು ಮಿತಿ ಎಂಬುದಿರುತ್ತದೆ. ನಮ್ಮ ಸಂಸ್ಕಾರ, ಸಂಬಂಧಗಳನ್ನು ಉಳಿಸಿಕೊಂಡು ಬದಲಾವಣೆಗೆ ಒಗ್ಗಿಕೊಂಡು, ಸಾಗುವಂತಹ ಜೀವನ ವಿಧಾನಗಳನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಣ ಸಂಪಾದನೆಯ ಕಡೆಗೆ ಮಾತ್ರ ಗಮನಹರಿಸದೆ,ಕುಟುಂಬ ,ಮಕ್ಕಳು, ಹಿರಿಯರು,ಮನೆ ಇವರ ಕಡೆಗೂ ಗಮನಹರಿಸಿ, ಅವರಿಗೊಂದಿಷ್ಟು ಸಮಯವನ್ನು ಮೀಸಲಾಗಿಟ್ಟು, ಸಂಬಂಧಗಳನ್ನು ಬೆಸೆದು ಜೀವನವನ್ನು ಹೊಸೆದು ಬದುಕಿದರೆ ಮಾತ್ರ ಬದುಕೆಂಬುದು ಸಾರ್ಥಕವಾಗುತ್ತದೆ.
ಕುಟುಂಬದ ಪ್ರತಿಯೊಬ್ಬರ ಜೀವನದಲ್ಲಿ ಸಂಬಂಧಗಳು ಬಹಳ ಪ್ರಮುಖವಾದ ಪಾತ್ರ ವಹಿಸುತ್ತವೆ, ಸಂಬಂಧಗಳಲ್ಲಿ ಒಡಕು ಅಥವಾ ಬಿರುಕು ಬಿಟ್ಟರೆ, ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬಿರುತ್ತದೆ. ಅದರಲ್ಲಿ ಕೆಲವೊಮ್ಮೆ ಪತಿ-ಪತ್ನಿಯವರ ಸಂಬಂಧಗಳಲ್ಲಿ ಮೂಡಿದಂತಹ ಬಿರುಕು ವಿಚ್ಚೇದನವರೆಗೂ ಹೋಗುತ್ತದೆ, ಇದರ ಪರಿಣಾಮ ಆ ದಂಪತಿಗಳ ಮಕ್ಕಳ ಮೇಲೆ ಬಿರುತ್ತದೆ. ಹಾಗಾಗಿ ಇಂದಿನ ಬದಲಾವಣೆಗೆ ತಕ್ಕಂತೆ ವಿಭಕ್ತ ಕುಟುಂಬದಲ್ಲಿ ಬದುಕುತ್ತಿದ್ದರೂ, ಆಗಾಗ ಹಿರಿಯರ ಮನೆಗೆ ಭೇಟಿ ಕೊಡುವುದು, ಮಕ್ಕಳಿಗೆ ಮೊಮ್ಮಕ್ಕಳಿಗೆ ಸಂಬಂಧಗಳ ಅನಿವಾರ್ಯತೆಯನ್ನು ತಿಳಿಸಿ ಕೊಡುವುದು, ಸಾಮರಸ್ಯದ ಬಂಧವನ್ನು ಬೆಸೆಯುವುದು ,ರಕ್ತ ಸಂಬಂಧವನ್ನು ಉಳಿಸಿಕೊಳ್ಳುವುದರ ಮಹತ್ವವನ್ನು ತಿಳಿಸಿ ಕೊಡುವುದು ಮುಂತಾದ ವಿಧಾನಗಳನ್ನು ಅಳವಡಿಸುವುದರಿಂದ ನಮ್ಮ ಮಕ್ಕಳಲ್ಲಿ ಸಾಮರಸ್ಯದ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬಹುದು.
"ತಂದೆಯಂತೆ ಮಗ ಗುರುವಿನಂತೆ ಶಿಷ್ಯ" ಎಂಬ ಮಾತಿನಂತೆ ನಾವು ಹಿರಿಯರು ಸಾಮರಸ್ಯದ ಸಂಬಂಧಗಳನ್ನು ಬೆಸೆದುಕೊಂಡಿದ್ದರೆ ಅದನ್ನು ನೋಡಿದಂತಹ ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳೂ ಸಹ ಅದನ್ನು ಮುಂದುವರಿಸಿಕೊಂಡು ಸಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಇಂದು ಶಿಥಿಲಗೊಳ್ಳುತ್ತಿರುವಂತಹ ಮಾನವ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಹಿರಿಯರಾದ ನಮ್ಮ ಪಾತ್ರ ಬಹಳಷ್ಟಿರುತ್ತದೆ .ಶಿಥಿಲಗೊಂಡ ಸಂಬಂಧಗಳನ್ನು ಬೆಸೆಯಬೇಕಾದರೆ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸು ನಮ್ಮಲ್ಲಿರಬೇಕು.ಅಲ್ಲದೆ ನಮ್ಮಲ್ಲಿ ತ್ಯಾಗ, ಸಹನೆ, ಸಹಕಾರ, ತಾಳ್ಮೆ, ಸಾಮರಸ್ಯ ಎಲ್ಲವೂ ಬೇಕಾಗುತ್ತದೆ ಮೊದಲನೆಯದಾಗಿ ಇಂತಹ ಗುಣಗಳನ್ನು ನಾವು ಹೊಂದುವುದರ ಮೂಲಕ, ನಮ್ಮ ಮಕ್ಕಳಲ್ಲೂ ಬೆಳೆಸಿದರೆ ಮಾನವೀಯತೆ ಉಳಿಯಬಹುದು. ಮಾನವೀಯ ಸಂಬಂಧಗಳು ಬೆಳೆಯಬಹುದು.
----------------------------------------------------------------------------
ಡಾ.ಸುಮತಿ ಪಿ
