ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂರು ಮತಗಳ ತಿಕ್ಕಾಟದಲಿ ಧರ್ಮದ ಹೆಸರಿನಲಿ ಗೆಲ್ಲುವವರು ಯಾರು ಇಲ್ಲಿ
ಹಮಾಸ್, ಹಿಜ್ಬುಲ್ಲಾ, ಶಿಯಾ, ಹೌಥಿಯ ಅಟ್ಟಹಾಸಗಳಿದ್ದು ಕ್ರೌರ್ಯ ಮೆರೆಯುವವರು ಯಾರು ಇಲ್ಲಿ

ಇಸ್ರೇಲ್ – ಪ್ಯಾಲೆಸ್ತೆನ್ ಸಂಘರ್ಷದಿ ಪಿತೂರಿ ಹೂಡಿದವವರು ಯಾರು ಇಲ್ಲಿ
ನರಳಾಟ, ನರಕಯಾತನೆ ಮಾರಣಹೋಮ ಮುಕ್ತಿ ಯಾಚಿಸುವವರು ಯಾರು ಇಲ್ಲಿ

ಹೆಂಗಳೆಯರು, ಮಕ್ಕಳೆನ್ನದೆ ಅದೆಷ್ಟೋ ಸೈನಿಕರ ಮೃತದೇಹಗಳು ಎಲ್ಲೆಲ್ಲೂ
ರಣಾಂಗಣ ನೆಲವಿಲ್ಲಿ ಪ್ರಾಣ ಭಯದಿ ಪರದಾಡುವವರು ಯಾರು ಇಲ್ಲಿ

ಯುದ್ಧ ಕಾರ್ಮೋಡದಲಿ ಗುಂಡುಗಳ ಭೋರ್ಗರೆತ ಬದುಕುಳಿದವರು ಯಾರು ಇಲ್ಲಿ
ತುತ್ತು ಅನ್ನ, ಗುಟುಕು ನೀರಿಗಾಗಿ ಹಪಹಪಿಸಿ ಮಣ್ಣ ತೊರೆಯುವವರು ಯಾರು ಇಲ್ಲಿ

ವೈಮಾನಿಕ ದಾಳಿ, ರಾಕೆಟುಗಳ ಹಾವಳಿ ಪ್ರತಿಕಾರದಿ ಬಿಗಡಾಯಿಸಿದೆ ಬದುಕು ಬವಣೆ
ಮಾತುಕತೆಗಳ ಸಂಧಾನ ಕೊನೆಗಾಣದ ಕದನವಿರಾಮ ಘೋಷಿಸುವವರು ಯಾರು ಇಲ್ಲಿ

ಮಹಾಯುದ್ಧವೇ ಮರುಕಳಿಸಿ ಬೀದಿ ಬೀದಿಯಲ್ಲಿ ರಕ್ತದೋಕುಳಿ ಹರಿಸುವವರು ಯಾರು ಇಲ್ಲಿ
ಆಕ್ರಂದನ, ರಣಘೋಷ, ರಣಕೇಕೆ ಮುಗಿಲು ಮುಟ್ಟಿವೆ  ಹರಸುವವರು ಯಾರು ಇಲ್ಲಿ

ಸತ್ತ, ಕೊಳೆತ ಜೀವರಾಶಿಗಳ ಕನಸು, ನನಸು ಮಾಡುವವರು ಯಾರು ಇಲ್ಲಿ
ಗಾಳಿಯಲ್ಲಿ ಲೀನವಾದ ಆತ್ಮದ ಮೌನರೋದನ ಆಲಿಸುವವರು ಯಾರು ಇಲ್ಲಿ

 ಶಿಷ್ಟತನ ಮರೆಯಾಗಿ ದ್ವೇಷ, ದರ್ಪ, ದೌರ್ಜನ್ಯ, ಅನಾಚಾರ ವಿಶ್ವದಿ ವ್ಯಾಪಿಸಿವೆ
ಕೊರಗಿ ಮರಗಿ ಮಿಡಿದಿದೆ  ಹೃದಯ ನಿಜವಾದ ಮಾನವೀಯತೆಯ ಅರ್ಥ ತಿಳಿಯುವವರು ಯಾರು ಇಲ್ಲಿ.

About The Author

4 thoughts on “ಇಂದಿರಾ ಕೆ. ಅವರ ಹೊಸ ಕವಿತೆ”

  1. ಎಲ್ಲ ವಿಶ್ವಮಾನವರು ಅರ್ಥಮಾಡಿಕೊಳ್ಳಬೇಕಾದ ಮಾನವೀಯ ಮೌಲ್ಯಗಳನ್ನು ಒಳಗೊಂಡಂತಹ ಒಂದು ಅದ್ಭುತವಾದ ಕಾವ್ಯ ರಚನೆ.

Leave a Reply

You cannot copy content of this page

Scroll to Top