ವಿಲಿಯಂ ವರ್ಡ್ಸವರ್ತ್ ಅವರ ಕವಿತೆ consolation ಯ ಕನ್ನಡಾನುವಾದ ವಂದಗದ್ದೆ ಗಣೇಶ

ಅಂದು ನಾ ನೋವಿನಲಿ ವಿಧಿಯ ಹಳಿಯುತ
ಅದರಾಟಕೆ ಬಲಿಯಾಗಿ ನಾಚುತಲಿದ್ದೆ
ಕುರುಡು ದೈವವ ನಂಬಿ ಅದನು ಪ್ರಾರ್ಥಿಸುತ
ಹಳಿತಪ್ಪಿದಂತವನಾಗಿ ನರಳಾಡುತಿದ್ದೆ

ನನ್ನ ಜೊತೆಯವರೆಲ್ಲ ತಮ್ಮ ಬರಹಗಳಲಿ
ನಗುನಗುತ ಜಯಭೇರಿ ಬಾರಿಸುತಿರಲು
ನನ್ನ ಕವಿಮತಿಗಂದು ಗರವು ಬಡಿದಿತ್ತೇನೋ
ಮಂಕುಮಂಕಾಗಿ ಮಲಗಿತ್ತು ಮೌನವಾಗಿ

ಏಕಾಕಿ ಭಾವವೋ ಅಳುಕು ಅಂಜಿಕೆ ನೆಳಲೋ
ಅಸಹಾಯಕತೆ ಅಳಲೋ ಹೇಳಲಾರೆ
ಯತ್ನಯತ್ನಗಳಲ್ಲಿ ಸೋಲುಗಳ ವಿಕ್ರಮವು
ಗೆಲವು ಮರೀಚಿಕೆಯಾಗಿ ಓಡುತಿತ್ತು

ನಾರಣಪ್ಪನಿಗಂದು ಹರಿಯೊದಗಿ ಬಂದಂತೆ
ನೀವು ಬಂದಿರಿ ಗುರುವೆ ನನ್ನ ಬಳಿಗೆ
ನಿಮ್ಮ ನುಡಿ ಸಲಹೆಗಳು ನಿಮ್ಮ ಮಾಂತ್ರಿಕ ಸ್ಪರ್ಶ
ಪುಳಕಗೊಳಿಸಿದವೆನ್ನ ಮತಿಯ ಮಸೆದು

ನಿಮ್ಮ ನಿರ್ಮಲ ಹೃದಯದೊಂದೊಂದು ನುಡಿಯು

ಸವಿಜೇನು ಆಣಿಮುತ್ತು ಅಪರಂಜಿಯು
ನೀವಿತ್ತ ಪ್ರೋತ್ಸಾಹ ಆ ನಿಮ್ಮ ವಿಶ್ವಾಸ (
ಛಲವಾಗಿ ನನ್ನಲ್ಲಿ ಬೆಳಯುತಿಹವು

“ನಿಮ್ಮ ಜ್ಞಾನದ ಹರಹು ವಿಸ್ತಾರವಾಗಿಹುದು
ಮಂಕು ಬಡಿಯಿತೆ ನಿಮಗೆ ಏಳಿ ಮೇಲೇಳಿ
ಬರೆಯತೊಡಗಿರಿ ನೀವು ಅಳುಕುಗಳ ಬದಿಗಿಟ್ಟು
ಪೊರೆಕಳೆದ ಹಾವಂತೆ ಪುಟಿದು ನಿಲ್ಲಿ’

ಎಂದು ಬೆನ್ನನು ತಟ್ಟಿ ಹುರಿದುಂಬಿಸುತ ನನ್ನ
ಕಾವ್ಯರಂಗಕೆ ಮೆಲ್ಲನಡಿಯೆರಿಸಿದಿರಿ
ಬಾಡಿದ್ದ ಎಳಲತೆಯು ನಿರ್ಮಲದ ನೀರುಂಡು
ಚೇತನವ ಪಡೆವಂತೆ ಬೆಳೆಯಿಸಿದಿರಿ

ನಿಮ್ಮೆದೆಯ ಮಂದಿರದ ಕಾವ್ಯ ದೀವಿಗೆ ಬೆಳಕ
ನನ್ನೆದೆಗೆ ಹರಿಸುತ್ತ ಬೆಳಸಿದಿರಿ.
ಇಂದು ನಾ ಕವನ ಕುಸುಮಗಳ ಮಾಲೆಯ ಕೋದು
ಕವಿವರರ ಜೊತೆ ನಿಲುವಂತೆ ಮಾಡಿದಿರಿ.

ನಿಮ್ಮ ಈ ಋಣವನ್ನು ತೀರಿಸಲು ನಾನಿಂದು
ನೀವಿತ್ತ ದೀವಿಗೆಯ ಬೆಳಕಿನಲಿ
ಕವನಗಳ ಮಾಲೆಯನು ಬರೆದು ನಿಮಗರ್ಪಿಸುತ
ನಿಮ್ಮ ಕಾವ್ಯದ ಬೆಳಕ ಜಗಕೆಲ್ಲ ಹರಿಸುವೆನು


Leave a Reply

Back To Top