ಪಿ.ವೆಂಕಟಾಚಲಯ್ಯ ಅವರ ಕವಿತೆ- ಹೂವು

ನಿ:ಸ್ವಾರ್ಥ ಜೀವನವು,
ನಿನದಲ್ಲವೆ ಚೆಲುವೆ!
ಆ ಮರಗಿಡಬಳ್ಳಿಯ ಮುಕುಟದಲಿ,
ಅರಳುತ ನಗುತಿರುವೆ.

ತರು ಲತಾ ಗುಲ್ಮದೊಳು,
ಚಿಗುರು ಒಡೆದಿದೆ ಚೆಲುವೆ.
ಮುದಗೊಳಿಸುವ ತಳಿರುನ ನಡುವೆ,
ನಿನ್ನಿರುವಿಕೆಯ ಕಾಣುವೆ.

ಮಂಜಿನ ಪದರ ಹೊತ್ತು,
ಬೀಸೊ ಮಂದ ಸಮೀರ.
ಶೋಭಿತ ನಿನ್ನ ಪಕಳೆಗಳ ಸುತ್ತ
ಭೃಂಗನಾದ ಝೇಂಕಾರ.

ಸ್ವಾಭಿಮಾನಿಯು ನೀನು,
ರಂಜಿತ ಗುಣಶೀಲನು.
ನಿಜ ನಿರ್ಮಲ, ನಿರ್ಗುಣ ಸಂಪನ್ನ.
ಅಂತೂ ಪರಾಧೀನ.

ಪೆಣ್ಗಳ ಮುಡಿಯನೇರಿ,
ಅಂದವಿಮ್ಮಡಿಗೊಳಿಸಿ,
ದೈವದ ಮುಡಿಯಿಂದ, ಅಡಿಯವರಿಗೆ,
ಭಕ್ತಿಯಿಂ ಸಿಂಗರಿಸಿ.

ಘಮಘಮ ಸುಗಂಧವನು
ಎಲ್ಲೆಡೆಗೂ ಪಸರಿಸಿ,
ಹುಟ್ಟು- ಸಾವು ಜೀವನ ಪರ್ಯಂತ,
ನೀ ಸದಾ ಸಮರ್ಪಿತ.

ಉಷೋದಯ ಕಾಲದಲಿ,
ಹೊಂಗಿರಣ ಬೆಳಕಿನಲಿ,
ಫಳಫಳಿಸುವ ನಿನ್ನ ಮುಖದ ಬಿಂಬ,
ಎನಗೆ,ನಯನಾನಂದ.


Leave a Reply

Back To Top