ಕಾವ್ಯಯಾನ

ಅರಿಯದ ಹಾಡು

ಡಾ.ವೈ.ಎಂ.ಯಾಕೊಳ್ಳಿ

ಗಜದಾಲಯದಲಿ ಮೂಡಿದ
ಸುಂದರ ರಾಗ. ತೇಲಿ ಬಂದಿತು
ಅಂತಪುರದ ಹಂಸತೂಲಿಕದೊಳಗೆ
ಬಗೆಯಿತು ರಾಣಿಯ ಎದೆಯನು
ಯಾರಿಗೂ ತಿಳಿಯದ ಹಾಗೆ

ತಡೆಯಲೇ ಇಲ್ಲ ಕಾವಲುಭಟರ ಸಾವಿರ
ಕಾಲಾಳುಗಳ ಪಡೆ
ಕೊಟ್ಟಳು ಮನವನು
ಎಂದೂ ನೋಡದ ದನಿಗೆ
ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ

ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ,
ಎಲ್ಲಿದೆ ವಿವೇಚನೆ ಒಲಿದ ಎದೆಗೆ
ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ

ಆಹಾ !ಲೋಕದ‌ ಕಣ್ಣಿಗೆ ಅಪಾತ್ರ ದಾನ!
ಹೇಳುವರಾರು,ಕೇಳುವರಾರು
ನಡೆದೆ ಬಿಟ್ಟಿತುಪ್ರೇಮದಯಾಣ
ಕಣ್ಣು‌ಮುಚ್ಚಿ,,ಕಣ್ಣು ತಪ್ಪಿಸಿ
ಸಿದ್ಧವಾಯಿತು ಇತಿಹಾಸದಿ
ದೊರಕದ‌ ಪುಟವೊಂದು

ಲೋಕವೆ ಕರುಬುವ ಗಂಡ,
ರಾಣಿಯ ಪಟ್ಟ
ಎಲ್ಲವೂ ಆಯಿತು ಕಾಲಿನ ಕಸ
ಬದಗನ ಎದೆಯೆ ಆಯಿತು
ಸ್ವರ್ಗ
ಕಾಣಲೇ ಇಲ್ಲ ಧರ್ಮ ,ಸಮಾಜ

ಒಲಿಯದ ಗಂಡನು ಎಸೆದ ಕುಸುಮ‌
ಮಾಡಿತು‌ ಮಾಯದ ಗಾಯ,
ಆನೆಯ ಚಬಕದ ಹೊಡೆತ
ಬಾಧಿಸಲಿಲ್ಲ ರಾಣಿಯ ಮೈಗೆ

ಅಂದಿನದೊಂದೇ ಕಥೆಯೆ ಇದು!
ನಡೆದಿದೆ ಎಂದಿಗೂ ಹೀಗೆ ,
ಆಡುವ ಬಾಯಿಗಳು ಆಡಿಕೊಳ್ಳುತಲೇ ಇವೆ
ಕೇಳದೆ ನಡೆದಿವೆ
ಅಮೃತಮತಿ ಬದಗರ‌ ಬೆಸುಗೆ

*********

2 thoughts on “ಕಾವ್ಯಯಾನ

Leave a Reply

Back To Top