ಕಥಾಯಾನ

ಸುನಂದಾಬಾಯಿ ಕೊಡ

Blog - Repair a Broken Clay Pot with Super Glue

ಮಲ್ಲಿಕಾರ್ಜುನ ಕಡಕೋಳ

ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ  ಬಡತನ ಪ್ರಸಿದ್ದವಾಗಿತ್ತು.  ತಲೆಮಾರುಗಳಿಂದ ಶೀಲವಂತರ  ಸುನಂದಾಬಾಯಿ ಭಗವಂತ್ರಾಯ  ದಂಪತಿಗಳು ಪಡೆದುಕೊಂಡ  ಆಸ್ತಿಯೆಂದರೆ ಕಿತ್ತುತಿನ್ನುವ ಬಡತನ.  ಅದನ್ನೇ ಹಾಸುಂಡು ಬೀಸಿ  ಒಗೆಯುವಂತಿತ್ತು. ಅವರೂರು  ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ  ಮಾತಾಡುವಾಗ ಶೀಲವಂತರ ಭಗಂತ್ರಾಯರ ಬಡತನ ಉಲ್ಲೇಖಿಸದೇ ಇರಲಿಕ್ಕೆ  ಸಾಧ್ಯವಿರುತ್ತಿರಲಿಲ್ಲ.  

ಅವರು ಉಪವಾಸದ ದಿನಗಳನ್ನು  ನೆನಪಿಡುತ್ತಿರಲಿಲ್ಲ., ಅಂಬಲಿ ಕುಡಿದ  ದಿನಗಳನ್ನು ನೆನಪಿಡುತ್ತಿದ್ದರು. ಈ  ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ  ಗಂಜಿಗೆ ರುಚಿ ಬರಲೆಂದು ಸೇರಿಸಲು  ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು.  ಅಂತೆಯೇ ಉಪವಾಸದ ದಿನಗಳೇ  ಹೇರಳ. ಗಂಜಿ ಕುಡಿದ ದಿನಗಳೇ ವಿರಳ.

ಸುನಂದಾಬಾಯಿಗೆ ಜಾಂಬಳ ಬಣ್ಣದ  ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ  ಆ ಒಂದು ಸೀರೆಯನ್ನು ಜಳಕ  ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಆಕೆ ಹೊಲಕ್ಕೆ ಹೋದಾಗ ನಿರ್ಜನ ಕರ್ಮನಹಳ್ಳದಲ್ಲಿ ಜಳಕ ಮಾಡುತ್ತಿದ್ದಳು. ಕೂಲಿನಾಲಿ ಮಾಡುವಾಗ ಸೀರೆ, ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ  ಜಿಗಿಸತ್ತ ಸೀರೆ ಟಸಕ್ಕನೆ ಹರಿದು  ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು.

ತನ್ನ ಮಾನಮರ್ಯಾದೆ ಕಾಪಾಡುವ  ಏಕೈಕ ಸೀರೆ ಅದಾಗಿತ್ತು. ಹೋದ  ವರುಷ ಕುಂಡೀಪದರಲ್ಲಿ ಅದು ಹರಿದು  ಹೋದುದಕ್ಕೆ ಹರಿದುಹೋದ  ಭಾಗವನ್ನು ಕುಡುಗೋಲಿನಿಂದ  ಕೊಯ್ದು ತೆಗೆದು ಸೂಜಿ ದಾರಗಳಿಂದ  ಉದ್ದಕ್ಕೂ ದಿಂಡು ಹಾಕಿದ್ದಳು. ಹಾಗೆ  ಮಾಡುವಾಗ ಮೈ ತುಂಬಾ ಕೌದಿ ಹೊದ್ದುಕೊಂಡಿದ್ದಳು.ತನ್ನ ಮಾನರಕ್ಷಕ ಸೀರೆಯನ್ನು ಹೊಲಿದು ದುರಸ್ತಿಗೊಳಿಸಿದಮೇಲೆ ಕೌದಿ ತೆಗೆದಿಟ್ಟು ಸೀರೆ ಉಟ್ಟು ಕೊಂಡಿದ್ದಳೆಂಬುದು ನಾನು  ಸಣ್ಣವನಿದ್ದಾಗ ಕೇಳಿದ ನೆನಪು ಹಚ್ಚ ಹಸಿರಾಗಿದೆ. ಆಕೆಯ ಕುಪ್ಪಸದ್ದು  ಇಂತಹದ್ದೇ ಕರುಣಾಜನಕ ಕತೆ.

ಭಗವಂತ್ರಾಯನ ಧೋತರ ಮತ್ತು  ಅಂಗಿಯ ಕತೆಗಳು ಇದಕ್ಕಿಂತ  ಭಿನ್ನವಾಗಿರದೇ ಕರುಳು  ಚುರುಗುಟ್ಟಿಸುವಂತಹದ್ದೇ ಆಗಿದ್ದವು.  ಆತ ಯಾವತ್ತೂ ತೊಡೆಯಿಂದ ಈಚೆ  ಮೊಳಕಾಲ ಕೆಳಗೆ ಧೋತರ ಇಳಿ ಬಿಟ್ಟಿದ್ದನ್ನೇ ನನ್ನ ಕಣ್ಣುಗಳು ಕಂಡಿಲ್ಲ.  ಕಾರಣ ಆತನ ಧೋತರದ ಮೈತುಂಬಾ  ಹರಿದ ಗಾಯಗಳೇ ತುಂಬಿದ್ದವು.  ಗಾಯಗಳನ್ನೆಲ್ಲ ಗಂಟು  ಹಾಕಿರುತ್ತಿದ್ದನಾದ್ದರಿಂದ ಆತನ ಮಾನದ  “ಹಿಂದು ಮುಂದು”ಗಳನ್ನು ಆ ಎಲ್ಲ  ಗಾಯಗಂಟುಗಳ ಧೋತರ ಮುಚ್ಚಿ ಕೊಂಡಿರುತ್ತಿತ್ತು.

ಆತನಿಗೊಂದು ಪಟಗವಿತ್ತು. ಅವರಪ್ಪ  ತೀರಿಕೊಂಡಾಗ ರುದ್ರಭೂಮಿಯ  ಕುಣಿಯ ಮೇಲೆಯೇ ಆತನಿಗೆ  ವಾರಸುದಾರಿಕೆಯಾಗಿ ಬಂದ ಏಕೈಕ  ಆಸ್ತಿ ಅದಾಗಿತ್ತು. ಭಗವಂತ್ರಾಯನಿಗೆ  ಅಪ್ಪನಿಂದ ಬಂದ ಆ ಆಸ್ತಿಯನ್ನು ಜಾತ್ರೆ,  ದೀವಳಿಗೆ, ಉಗಾದಿ ಹಬ್ಬಗಳಲ್ಲಿ ತಲೆಗೆ  ಕಟ್ಟು ಹೊಡೆದು ಸುತ್ತಿಕೊಂಡು ಸಂಭ್ರಮಿಸುತ್ತಲೇ ಅದನ್ನು ಜೋಪಾನ  ಮಾಡಿಟ್ಟು ಕೊಂಡಿದ್ದ.

ಮುಡ್ಡೀಚಾಟಿಯಂತಹ ಅಂಗಿ ಹರಿದು,  ಸವೆದು ಹೋಗಿತ್ತು. ಅವನ ಅಪ್ಪನ  ಅಪ್ಪನಿಂದ ಬಂದ ಮತ್ತೊಂದು  ಆಸ್ತಿಯೆಂದರೆ ಗುದ್ದಲಿ. ನಟ್ಟು ಕಡಿದು, ಮಣ್ಣಿನ ಕೆಲಸದಿಂದ ಕುಟುಂಬಜೀವಕ್ಕೆ ಗಂಜಿ ದೊರಕಿಸಿ ಕೊಡುತ್ತಿದ್ದುದೇ ಈ  ಗುದ್ದಲಿ. ಅಂತೆಯೇ ಗುದ್ದಲಿಯನ್ನು  ತಮ್ಮ ಜೀವದಷ್ಟೇ ಜೋಪಾನ  ಮಾಡುತ್ತಿದ್ದರು. ಅಮವಾಸ್ಯೆಗೊಮ್ಮೆ ಗುದ್ದಲಿ, ಕುರ್ಪಿ, ಕುಡುಗೋಲುಗಳಿಗೆ  ಪೂಜೆ ಸಲ್ಲಿಸುತ್ತಿದ್ದರು.

ಸುನಂದಾಬಾಯಿ ಭಗವಂತ್ರಾಯರ ಲಗ್ನವಾದ ವರುಷ ಮೋಟಗಿ ಸಂತೆಯಲ್ಲಿ ದೀಡು ರುಪಾಯಿ ಕೊಟ್ಟುತಂದ ಮಣ್ಣಿನ ಕೊಡವನ್ನು ಅವರು ತಮ್ಮ ಜೀವದಷ್ಟೇ ಜೋಪಾನ ಮಾಡಿಕೊಂಡು ಬರುತ್ತಿದ್ದುದು ಅವರ ಬದುಕಿನ  ದಾಖಲೆಯಷ್ಟೇ ಅಲ್ಲ, ಅವರ  ಬಡತನದಷ್ಟೇ ಖ್ಯಾತಿಯನ್ನು ಆ ಮಣ್ಣಿನ  ಕೊಡ ಪಡಕೊಂಡಿತ್ತು. ಗಬಸಾವಳಗಿಯ  ಕುಂಬಾರರು ಗಟ್ಟಿಮುಟ್ಟಾಗಿ ಸುಟ್ಟುಮಾಡಿದ ಮಣ್ಣಿನ  ಕೊಡ ಅದಾಗಿತ್ತು. 

ಆ ಮಣ್ಣಿನ ಕೊಡವನ್ನು ಅದೆಷ್ಟು  ಜಾಗರೂಕತೆಯಿಂದ ಬಳಕೆ ಮಾಡುತ್ತಿದ್ದರೆಂದರೆ ತಮ್ಮ ಪ್ರಾಣವನ್ನೂ ಅವರು  ಎಂದೂ ಅಷ್ಟೊಂದು ಎಚ್ಚರದಿಂದ  ಸಲಹಿಕೊಂಡ ನೆನಪು ಖಂಡಿತಾ ಅವರಿಗಿಲ್ಲ. ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ಹಳ್ಳದ ನೀರು ತರಲು ಹೋದಾಗ ಸಮನಾದ  ಸಮಚಿತ್ತದ ಎಚ್ಚರ ವಹಿಸುತ್ತಿದ್ದರು. ವರತಿನೀರನ್ನು  ಕೊಡಕ್ಕೆ ತುಂಬುವಾಗ  ಅಪ್ಪೀತಪ್ಪಿಯೂ ತಂಬಿಗೆಯನ್ನು  ಕೊಡದ ಕಂಠಕ್ಕೆ ಮುಟ್ಟಿಸುತ್ತಿರಲಿಲ್ಲ. ಒಮ್ಮೊಮ್ಮೆ  ಚೆರಿಗೆಯನ್ನು ದೂರವಿಟ್ಟು ಬೊಗಸೆಯಿಂದಲೇ ಕೊಡ ತುಂಬಿಸುತ್ತಿದ್ದರು.

ಅವರ ಮನೆಯಲ್ಲಿ ಮಣ್ಣಿನ ಹರವಿ ಇತ್ತು. ಅದಕ್ಕೊಂದು ಮಣ್ಣಿನ ಮುಚ್ಚಳ.  ಹರವಿಗೆ ಕೊಡದಿಂದ ನೀರು ಬರಕುವಾಗ  ಅಷ್ಟೇ ಎಚ್ಚರ. ಅಪ್ಪೀತಪ್ಪಿಯೂ ಹರವಿ  ಮತ್ತು ಕೊಡದ ಕಂಠಗಳು ಮುತ್ತಿಕ್ಕುತ್ತಿರಲಿಲ್ಲ. ಅಂತಹ ಕಟ್ಟೆಚ್ಚರ ಅವರಿಬ್ಬರದು.

ಅವರಿಗೊಬ್ಬ ಮಗಳು ಹುಟ್ಟಿದಳು. ಚಂದ್ರಭಾಗಿ ಅವಳ ಹೆಸರು. ನಾಕೈದು  ವರುಷದ ಬೆಳೆದುನಿಂತ ಆ ಹುಡುಗಿಗೆ  ಹೋಳಿಗೆ ಅನ್ನಸಾರುಗಳೆಂಬ  ಹೆಸರುಗಳನ್ನು ಕೇಳಿ ಗೊತ್ತಿತ್ತೇ ಹೊರತು  ಅವನ್ನು ಕಂಡುಂಡ ಅನುಭವ  ಖಂಡಿತಾ ಇರಲಿಲ್ಲ. ಅದೇನಿದ್ದರೂ  ಅಂಬಲಿಯೇ ಅವರ ಪಾಲಿನ ಮೃಷ್ಟಾನ್ನ.

ಆಗಾಗ ಆ ಹುಡುಗಿ ಕೆಮ್ಮು, ನೆಗಡಿ, ಜ್ವರ ಜಡ್ಡು ಜಾಪತ್ರಿಗಳಿಂದ ನರಳುತ್ತಿದ್ದರೆ ಲಕ್ಕಿ ತಪ್ಪಲು ತಲೆಗೆ ಕಟ್ಟಿ ಮಲಗಿಸುವುವುದು ಇಲ್ಲವೇ ದ್ಯಾಮವ್ವನ ಗುಡಿಯ ಬೂದಿ,  ಗಿರಿಮಲ್ಲಯ್ಯ ಸ್ವಾಮಿಗಳು  ಕಟ್ಚುವ  ಚೀಟಿ ಚಿಪಾಟಿಗಳೇ ಅವರಿಗಿರುವ  ಆಧಾರ. ಅವರೆಂದೂ ದವಾಖಾನೆಗೆ  ಹೋದವರಲ್ಲ. ಹೋಗಲು ರೊಕ್ಕ  ಬೇಕಲ್ಲ..!

ಇಷ್ಟೆಲ್ಲ ಕ್ರೂರ ಬಡತನವಿದ್ದರೂ  ಅವರು ಯಾರೊಬ್ಬರ ಮನೆಗೆ ಹೋಗಿ  ದೈನೇಸಿ ಎಂದು ಕೈಯೊಡ್ಡಿದವರಲ್ಲ.  ಹಾಗೇ ಹಸಿವಿನಿಂದ, ನೋವಿನಿಂದ  ಸತ್ತಾರೇ ಹೊರತು ಅವರಿವರ ಮನೆಗೆ  ಹೋದವರಲ್ಲ. ಬೇರೆಯವರ ಮನೆಯಲ್ಲಿ ಊಟದ  ಮಾತು ದೂರವೇ. ಬಡತನ ಬಿಟ್ಟು  ಬದುಕಿದ್ದು ಅವರಿಗೆ ಗೊತ್ತಿಲ್ಲ. ನನಗಂತೂ ಅವರ ಮನೆಯ ಮಿರಿ ಮಿರಿ  ಮಿಂಚುವ ಮಣ್ಣಿನಕೊಡ ಅವರ  ಬಡತನಕ್ಕಿಂತ  ಹೆಚ್ಚು ಪ್ರಿಯವಾಗಿ  ಕಾಣುತ್ತಿತ್ತು. ಅವರು ಹಳ್ಳಕ್ಕೆ ನೀರಿಗೆ  ಬಂದಾಗೆಲ್ಲ ನಾನು ಆ ಕೊಡವನ್ನು  ಕಣ್ತುಂಬಿಸಿ ಕೊಳ್ಳುತ್ತಿದ್ದೆ. ಅದಕ್ಕೆ  ಮುತ್ತಿಕ್ಕ ಬೇಕೆನ್ನುವಷ್ಟು ಆ ಕೊಡದ  ಮೇಲೆ ನನ್ನ ಅದಮ್ಯ ಪ್ರೀತಿ. ಅರ್ಧಮೈಲಿ ದೂರದ ಲಂಡೇನಹಳ್ಳಕ್ಕೆ ನೀರು ತರಲು ಎಂದಿನಂತೆ ನಾನೂ ಹೋದೆ. ಕಡುಬೇಸಿಗೆಯಾದ್ದರಿಂದ ಹಳ್ಳದಲ್ಲಿ ನೀರು ಹರಿಯುತ್ತಿರಲಿಲ್ಲ. ಉಸುಕಿನಲ್ಲಿ ತೋಡಿದ ವರತೆಯಿಂದ ನೀರು ಕೊಡಕ್ಕೆ ತುಂಬಿಸಿಕೊಳ್ಳಬೇಕಿತ್ತು.  

ಮೊಳಕಾಲುದ್ದದೊಳಗಿನ ವರತೆಯಿಂದ  ಸುನಂದಾಬಾಯಿ ತನ್ನ ಮಣ್ಣಿನ ಕೊಡಕ್ಕೆ  ಚೆರಿಗೆಯಿಂದ ನೀರು ತುಂಬಿಸಿಕೊಳ್ಳುತ್ತಿದ್ದಳು. ನನಗೋ ಆ  ಮಣ್ಣಿನ ಕೊಡವನ್ನು ಕೈಗೆಟಕುವ  ಸನಿಹದಿಂದ ನೋಡುವ ಭುವನದ ಭಾಗ್ಯ. ಹತ್ತತ್ತಿರ ಅದಕ್ಕೆ ಇಪ್ಪತ್ತರ  ಪ್ರಾಯವಿದ್ದೀತು. ಸವೆದು ಸವೆದು ಮಣ್ಣಿನಕೊಡ ಮಿರಿಮಿರಿ ಮಿಂಚುತ್ತಿತ್ತು.ಮನೆಯಲ್ಲಿ ನೀರು ತುಂಬಿಟ್ಟಾಗ ಚೇಳೊಂದು ಕೊಡಕ್ಕೆ  ಕುಟುಕಿ ಸಣ್ಣದೊಂದು ತೂತಾಗಿ ಆ ತೂತಿಗೆ ಸರಿಯಾಗಿ ಹರಕು ಬಟ್ಟೆಯ ಬತ್ತಿ ಸುತ್ತಿ ತುರುಕಿದ್ದರಿಂದ ಕೊಡಕ್ಕೊಂದು ಕಪ್ಪುಚಿಕ್ಕೆ ಬಿದ್ದಂಗಿತ್ತು.

ಅದೆಷ್ಟೋ ವರುಷಗಳಿಂದ ಕೊಡವನ್ನು ದೂರದಿಂದಲೇ ನೋಡುತ್ತಾಬಂದ ನನಗವತ್ತು ಅಷ್ಟು ಸನಿಹದಿಂದ ನೋಡುವ ಜೀವಮಾನದ ಸದವಕಾಶ. ಆ ಕೊಡ ಕುರಿತು ಅದರ ಆಯಸ್ಸು ಕುರಿತು ಜನರಾಡುತ್ತಿದ್ದ ಮಾತುಕತೆಗಳು ನನಗೆದಂತಕತೆಗಳಾಗಿ ಕೇಳಿಸ ತೊಡಗಿದವು. ಅದೇಕೋ ಕೊಡವನ್ನು ನನ್ನ ಸುಕೋಮಲ ಎಳೆಯ ಕೈಗಳಿಂದ ಮುಟ್ಟಬೇಕೆನಿಸಿತು. ನೇರವಾಗಿ ಹೇಗೆ  ಮುಟ್ಟುವುದೆಂತು ಧೇನಿಸಿ, ಧೇನಿಸಿ ಧೈರ್ಯತಾಳದೇ… ಅಚಾತುರ್ಯದಲ್ಲೆಂಬಂತೆ ವರತಿಯ ಹತ್ತಿರ ಸರಿದಂತೆ ನಟಿಸಿ, ನನ್ನೆರಡೂ ಅಂಗೈಗಳಿಂದ ಸುನಂದಾಬಾಯಿಯ ಕೊಡ ಮುಟ್ಟಿದೆ. ನನ್ನ ಒಡಲಾಳದ ಬಯಕೆ ಈಡೇರಿಸಿಕೊಂಡೆ. ನನ್ನ ಸಂತಸಕ್ಕೆ ಎಣೆಯೇ ಇಲ್ಲವೆನಿಸಿತು.

ಕೊಡಕ್ಕೆ ನನ್ನ ಕೈತಾಗಿಸಿದ ಮಿಂಚಿನ ಕ್ಷಣಗಳಲ್ಲೇ ಸುನಂದಾಬಾಯಿ ಕೊಡ ಬಿಟ್ಟು ದೂರಕ್ಕೆ ಹೋಗಿ ತಲೆಮೇಲೆ ಕೈ ಹೊತ್ತು ಕುಂತು ಒಂದೇಸಮನೆ “ಗೊಳೋ” ಅಂತ ಪ್ರಾಣ ಕಳಕೊಂಡವರಂತೆ ಅಳತೊಡಗಿದಳು.  ನಮ್ಮಕುಲದ ಶೀಲವೇ ಹಾಳಾಯಿತೆಂದು ಸತ್ತವರ ಮನೆಯಲ್ಲಿ ಅಳುವಂತೆ ಹಾಡಾಡಿಕೊಂಡು ಮುಖಕ್ಕೆ ಸೆರಗು ಮುಚಗೊಂಡು ಬೋರ್ಯಾಡಿ ಅಳತೊಡಗಿದಳು. ಅದನ್ನು ಕಣ್ಣಾರೆಕಂಡ ಬಡಿಗೇರ ಇಮ್ಮಣ್ಣ ನನಗೆ ಹುಚ್ಚುನಾಯಿಗೆ ಹೊಡೆಯುವಂತೆ, ಜನ್ಮ ಜನ್ಮಕು  ನೆನಪಿಡುವ ಹಾಗೆ ಥಳಿಸಿದ. ನಾವು ಶೂದ್ರರು ಶೀಲವಂತರ ಕೊಡ ಮುಟ್ಟಿಸಿ ಕೊಳ್ಳಬಾರದೆಂಬುದು ನನಗೆ  ಗೊತ್ತಿರಲಿಲ್ಲ. ಸುನಂದಾಬಾಯಿ ಆ  ಕೊಡವನ್ನು ಅಲ್ಲೇ ಒಡೆದು ಹಾಕಿದಳು. ಹಾಗೆ ಒಡೆಯುವಾಗ ನನ್ನ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತಿದ್ದವು. ಒಡೆದ ಕೊಡದ ಒಂದೊಂದೇ ಬೋಕಿ ಚೂರುಗಳನ್ನು ನನ್ನ ಕೈಗಳಿಗೆ ತುಂಬಿ ಕೊಳ್ಳಬೇಕೆನಿಸಿತು. ಆದರೆ ಬೋಕಿಯ ಚೂರುಗಳನ್ನು ಮುಟ್ಟುವ ಧೈರ್ಯ ನನಗೆ ಬರಲಿಲ್ಲ. ಏಕೆಂದರೆ ಇಮ್ಮಣ್ಣ ಮಾವ ಅಲ್ಲೇ ಇದ್ದ..

ಆದರೆ ನನಗೆ ಮಾತ್ರ ಶೀಲವಂತರ ಸುನಂದಾಬಾಯಿಯ ಮಣ್ಣಿನ ಕೊಡವನ್ನು ನಾನೇ  ಕೊಂದು ಹಾಕಿದೆನೆಂಬ ” ಪಾಪಪ್ರಜ್ಞೆ ” ಅವಳ ಮಡಿವಂತಿಕೆಯ ಮನಸಿಗಿಂತ, ನನ್ನನ್ನು ಮತ್ತೆ ಮತ್ತೆ ಇವತ್ತಿಗೂ ಘೋರವಾಗಿ ಕಾಡುತ್ತಲೇ ಇದೆ.

*******

One thought on “ಕಥಾಯಾನ

  1. ನಾನು ತಲ್ಲಣಿಸಿ ಹೋದೆ. ಮನಸ್ಸು ಕದಡೋಯಿತು. ಎದೆ ಭಾರವಾಯಿತು. ಬಡತನದ ದರಿದ್ರವನ್ನ ರೂಪಕಗಳಲ್ಲಿ ಇನ್ನಿಲ್ಲದಂತೆ ಕಟ್ಟಿಕೊಟ್ಟಿದ್ದೀರಿ. ಬರಹದ ಉದ್ದಕ್ಕೂ ಇರುವ ಓಘ, ಓಟ ಎಲ್ಲವೂ ಶ್ಲಾಘನೀಯ. ಕೊನೆಯಲ್ಲಿ ಎಲ್ಲ ದರಿದ್ರವನ್ನೂ ಮೀರಿಸುವ ಮಡಿವಂತಿಕೆಯ ದಾರಿದ್ರ್ಯದ ತಾಂಡವ ಕಂಡು ಮತ್ತಷ್ಟು ನೋವಾಯಿತು. ನಿಮ್ಮೀ ಬರಹಕ್ಕೆ ನಾನಿಂದು ಬೆರಗಾದೆ. ಧನ್ಯವಾದಗಳು.
    – ಡಿ. ಹೊಸಳ್ಳಿಶಿವು

Leave a Reply

Back To Top