ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ
ಯಶೋಧರೆಯ ಅಳಲು
ಪೋಟೊ ಕೃಪೆ-ಗೂಗಲ್
ಎತ್ತ ಹೋದಿರಿ ನೀವು
ಆ ಸರಿ ರಾತ್ರಿಯಲಿ
ಕತ್ತಲೊಡಲಿನ ಹಾದಿ ಸೀಳಿ
ನಾಳೆ ಬೆಳಕ ಅರಸುತ
ಯಾವ ಮೋಹವೂ ತಡೆಯಲಿಲ್ಲವೆ!
ನಿಮ್ಮನು ಆ ಹೊತ್ತಿನಲಿ
ಕರುಳ ಕುಡಿಯ ನಗುವ ದಾಟಿ
ಯಾವ ಸುಖವ ಕಾಣುತ
ಬದುಕ ಜಂಜಡ ಸಾಕಾಯಿತೆ
ಭವಬಂಧನದಿ ನನ್ನ ಸಿಲುಕಿಸಿ
ಸಂಸಾರ ಸಂಬಂಧಗಳ ತ್ಯಜಿಸಿ
ಮೋಕ್ಷ ಮೋಹದ ಬೆಳಕಲಿ
ಅರಮನೆ ಅಂತ:ಪುರವಿದೆ ನಿಜ
ನೀವಿರದ ಅವೆಲ್ಲ ನೆಪ ಮಾತ್ರ
ನಿತ್ಯವೂ ನಿಮ್ಮ ನೆನಪಿನ ಹಳವಂಡ
ಕಾಯುವೆ ರಾಹುಲನ ಬೆಳಕಿಗೆ
ರಾಜ ಸುಖವ ಸುಖಿಸಲಿಲ್ಲ
ನಿಮ್ಮದೇ ದಾರಿ ಸರಿಯೆಂದು
ಬಹುದೂರ ಹೊರಟಿರಲ್ಲ
ಬಯಲ ಬೆಳಕಿಗೆ ಮುಖಮಾಡಿ
ಧ್ಯಾನ ನೆರಳಲ್ಲಿ ನೀವು
ಭವದ ಚಿಂತೆಯಲಿ ನಾವು
ಬರುವ ಹಾದಿ ದಿಟ್ಟಿಸುತ
ಕಾಯುವೆವು ಆಸೆ ಕಂಗಳಲಿ
.————-
ಎಸ್ಕೆ ಕೊನೆಸಾಗರ
ಮನಮುಟ್ಟುವ ಕವಿತೆ ಸರ್
ಮಾರ್ಮಿಕ,ಹೃದಯಸ್ಪರ್ಶಿ ಕವಿತೆ ಸರ್.