ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ‘ಸ್ತ್ರೀ ಸಬಲೀಕರಣದ ಶಕ್ತಿಕೇಂದ್ರ ಹುಬ್ಬಳ್ಳಿಯ ಕಸ್ತೂರ ಬಾ ಹರಿಜನ ಬಾಲಿಕಾಶ್ರಮ ಮತ್ತು ಮಹಿಳಾ ವಿದ್ಯಾಪೀಠ’

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

‘ಸ್ತ್ರೀ ಸಬಲೀಕರಣದ ಶಕ್ತಿಕೇಂದ್ರ

ಹುಬ್ಬಳ್ಳಿಯ ಕಸ್ತೂರ ಬಾ ಹರಿಜನ

ಬಾಲಿಕಾಶ್ರಮ ಮತ್ತು ಮಹಿಳಾ ವಿದ್ಯಾಪೀಠ’

ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರ ಧರ್ಮಪತ್ನಿಯಾದ ಶ್ರೀಮತಿ ನಾಗಮ್ಮ ತಾಯಿ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ಆಗಿರುವ ವಿಶಿಷ್ಟ ಸೇವೆಯನ್ನು ಸಲ್ಲಿಸಿದವರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಉಪ್ಪಿನ ಸತ್ಯಾಗ್ರಹ ಚಲೇಜಾವ್ ಚಳುವಳಿಗಳಲ್ಲಿ ಪರೋಕ್ಷವಾಗಿ ಬೆಂಬಲಿಸಿ ಸ್ಥಳೀಯ ಪ್ರತಿಭಟನೆಗಳಲ್ಲಿ ಭಾಗವಹಿಸಿದವರು. ಗಾಂಧೀಜಿಯವರ ಕನಸಿನ ಕೂಸಾದ ವರ್ಧಾದ ಹರಿಜನ ಆಶ್ರಮದ ಸಾಧನೆ ಮತ್ತು ಗುರಿ ಉದ್ದೇಶದಿಂದ ಪ್ರಭಾವಿತರಾಗಿ ಹುಬ್ಬಳ್ಳಿಯಲ್ಲಿ ೧೯೩೪ರಲ್ಲಿ ಹರಿಜನ ಬಾಲಿಕಾಶ್ರಮವನ್ನು ಸ್ಥಾಪನೆ ಮಾಡುವುದರ ಮುಖಾಂತರ ಹಿಂದುಳಿದ ದಲಿತ ,ಅಲ್ಪಸಂಖ್ಯಾತ ಮತ್ತು ಬಡ ಮಕ್ಕಳಿಗೆ ಅನ್ನ ಅಕ್ಷರವನ್ನು ನೀಡಿ ಆಶ್ರಯವನ್ನು ನೀಡಿದ್ದು ಶ್ಲಾಘನೀಯವಾದದ್ದು.
      ಶತಮಾನಗಳ ಹಿಂದೆಯೂ ಸ್ವಾತಂತ್ರ್ಯ ಪೂರ್ವ ದಲ್ಲಿನ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದರೆ, ಹರಿಜನರನ್ನು  ಮುಟ್ಟಿಸಿಕೊಳ್ಳದೆ ಇರುವ ಅಂತಹ ಕಾಲದಲ್ಲಿ ಹರಿಜಮಕೇರಿಯ ಮಕ್ಕಳನ್ನು ತಮ್ಮಸಮಕ್ಕೆ ಕರೆದುಕೊಂಡು ಬಂದು ಅವರ ತಲೆ ಬಾಚಿ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಶಾಲೆಗೆ ಕಳಿಸುವ ಅತ್ಯಂತ  ಶ್ರೇಷ್ಠ ಕಾರ್ಯವನ್ನು ಕೈಗೊಂಡವರು ನಾಗಮ್ಮ ತಾಯಿ ಪಾಟೀಲ. ಗಾಂಧೀಜಿಯವರ ಚಲೆಜಾವ್ ಚಳುವಳಿ , ಹರಿಜನೋದ್ಧಾರ,ಗ್ರಾಮ ಸ್ವರಾಜ್ಯಗಳಂತಹ ಸೈದ್ದಾಂತಿಕ ಹೋರಾಟಗಳ ಪ್ರಭಾವಕ್ಕೆ ಒಳಗಾಗಿ ನಾಗಮ್ಮತಾಯಿಯವರು ಹುಬ್ಬಳ್ಳಿಯಲ್ಲಿ ಹರಿಜನ ಬಾಲಿಕಾಶ್ರಮವನ್ನು ಸ್ಥಾಪನೆ ಮಾಡುವ ಮೂಲಕ ಗಾಂಧೀಜಿಯವರ ಹೋರಾಟಗಳಿಗೆ ಬೆಂಬಲವನ್ನು ನೀಡಿದ್ದು ಇತಿಹಾಸದಲ್ಲಿ ಅಚ್ಚಳಿಯದ ಹೆಮ್ಮೆಯ ಸಂಗತಿಯಾಗಿದೆ.


        ನಾಗಮ್ಮ ತಾಯಿ ಪಾಟೀಲ್ ಅವರ ಪತಿಯವರಾದ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ್ಯಹೋರಾಟಗಾರರು ಅದರೊಂದಿಗೆ  ಶಿಕ್ಷಣಪ್ರೇಮಿಗಳು ಹೀಗಾಗಿ ಉತ್ತರಕರ್ನಾಟಕದ ಹಿಂದುಳಿದ ಭಾಗದಲ್ಲಿ ಮಹಿಳಾ ಸಬಲೀಕರಣದ ಮಹತ್ವ‍ಾಕಾಂಕ್ಷೆಯ ಉದ್ದೇಶದಿಂದ ಮಹಿಳಾ ವಿದ್ಯಾಪೀಠವನ್ನು ಸ್ಥಾಪಿಸಿ ಸಮಾಜೊಶೈಕ್ಷಣಿಕ ಸೇವಾಕಾರ್ಯ ಮಾಡಿದ್ದು ಉತ್ತರಕರ್ನಾಟಕ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲಾಗಿ ಪ್ರಶಂಸೆಗೆ ಪಾತ್ರವಾಗಿದೆ. ಇದರೊಂದಿಗೆ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿಯ ಸಂಸ್ಥಾಪನೆ ಮಾಡಿದ್ದು ಶ್ಲಾಘನೀಯವಾಗಿದೆ. ಕೆ.ಎಲ್.ಇ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಸರದಾರ ವೀರನಗೌಡರು ಒಬ್ಬರಾಗಿದ್ದಾರೆ.
             ಸ್ವಾತಂತ್ರ ಪೂರ್ವದಲ್ಲಿ ಕೈಗೊಂಡ ದೇಶಪ್ರೇಮದ ಅನೇಕ ಘಟನೆಗಳಿಗೆ ನಾಗಮ್ಮ ತಾಯಿ ಪಾಟೀಲ್ ಅವರು ತನು ಮನ ಧನದಿಂದ ಸೇವೆ ಸಲ್ಲಿಸಿದ್ದಾರೆ .ಸ್ವಾತಂತ್ರ್ಯ  ನಂತರವೂ ಶತಮಾನದ ಹೊಸ್ತಿಲಲ್ಲಿ ಬದುಕಿದ ನಾಗಮ್ಮ ತಾಯಿಯವರು ತಮ್ಮ ಜೀವಿತದ ಕೊನೆಯ ಅವಧಿಯವರೆಗೂ ಗಾಂಧಿವಾದದಲ್ಲಿಯೇ ಶ್ರದ್ಧೆಯಲ್ಲಿಟ್ಟು ಬದುಕಿದವರು. ಚರಕದಿಂದ ನೂಲನ್ನು ತೆಗೆಯುವದು, ಮಹಿಳಾ ಸಬಲೀಕರಣ ಮತ್ತು ಮಹಿಳಾ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುವದು ಇವರ ಪರಮ ಗುರಿಯಾಗಿತ್ತು. ಖಾದಿ ಬಟ್ಟೆಯನ್ನು ಧರಿಸುವುದರ ಮೂಲಕ ಸ್ವದೇಶಿ ಆಂದೋಲನಕ್ಕೆ ತಮ್ಮದೇಯಾಗಿರುವ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಕರೆ ಕೊಟ್ಟಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ತೊಡಗಿಸಿ ಕೊಂಡಾಗ ಅಂತಹ ವೀರಯೋಧರಿಗೆ ಊಟದ ವ್ಯವಸ್ಥೆಯನ್ನು ವಸತಿ ವ್ಯವಸ್ಥೆಯನ್ನು ಪಾಟೀಲ್ ದಂಪತಿಗಳು ಮಾಡಿದ್ದು ಅವಿಸ್ಮರಣೀಯವಾಗಿದೆ.


           ಬೆಳಗಾವಿ ಜಿಲ್ಲೆಯ ಹುದುಲಿಗೆ ಗಾಂಧೀಜಿಯವರು ಬಂದಾಗ ಅಲ್ಲಿ ನಡೆದ ಶಿಬಿರದಲ್ಲಿ ಧಾರವಾಡ ಜಿಲ್ಲೆಯ ಅನೇಕ ಸ್ವಾತಂತ್ರ್ಯ ಯೋಧರು ಭಾಗವಹಿಸಿದ್ದರು. ಮುಂಜಾನೆ ಪ್ರಭಾತ ಪೇರಿಯಲ್ಲಿ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳು ಸಕ್ರಿಯವಾಗಿ ಭಾಗವಹಿಸಿ ಮುಂದಾಳತ್ವವನ್ನು ವಹಿಸಿಕೊಂಡು ಗಾಂಧೀಜಿಯವರ ಯೋಜನೆಯಂತೆ ಶಿಬಿರವನ್ನು ಯಶಸ್ವಿಗೊಳಿಸುವಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು ನಾಗಮ್ಮ ತಾಯಿ ಮತ್ತು ವೀರನಗೌಡರು ತಮ್ಮ ಮಗಳಿಗೆ ಮಹಾತ್ಮ ಗಾಂಧೀಜಿಯವರ ಕಡೆಯಿಂದ ಅಮಲಾ ಎಂದು  ಹೆಸರನ್ನು ಇಡಿಸಿದ್ದು  ಇಡಿಸಿದ್ದು ನಿಜಕ್ಕೂ ಅವಿಸ್ಮರಣೀಯ.
       ಇಂದು ಮಹಿಳಾ ವಿದ್ಯಾಪೀಠ ಸಂಸ್ಥೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಅಮಲಕ್ಕ ಕಡಗದವರು ಗಾಂಧೀಜಿಯವರ ಕಡೆಯಿಂದ ತಮ್ಮ ನಾಮಕರಣವನ್ನು ಮಾಡಿಕೊಂಡ ಹೆಗ್ಗಳಿಕೆ ಭಾಜನರಾಗಿದ್ದಾರೆ.ಚಲೇಜಾವ್ ಚಳುವಳಿಯ ಸಂದರ್ಭದಲ್ಲಿ ತಮ್ಮ ಪತಿಯೊಂದಿಗೆ ಕ್ರಾಂತಿಯಲ್ಲಿ ಧುಮುಕಿದ ನಾಗಮ್ಮ ತಾಯಿಯವರು ಜೈಲುವಾಸವನ್ನು ಕೂಡ ಅನುಭವಿಸಿದ್ದಾರೆ. ಹುಬ್ಬಳ್ಳಿ ಧಾರವಾಡ,  ಹಾವೇರಿ, ಹಾನಗಲ್ಲ, ನರಗುಂದ,  ಭಾಗದ ಅನೇಕ ಸ್ವಾತಂತ್ರ್ಯ ಯೋಧರ ಪತ್ನಿಯರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು ಗಾಂಧೀಜಿಯವರು ಕರೆ ನೀಡಿವ ಎಲ್ಲ ಹೋರಾಟಗಳಿಗೆ ಶಕ್ತಿಯಾಗಿ ನಿಂತುಕೊಂಡ ಮಹಿಳಾ ವೀರಮಣಿಗಳಲ್ಲಿ ನಾಗಮ್ಮ ತಾಯಿ ಪಾಟೀಲ್ ಅವರು ಮುಂಚೂಣಿಯಲ್ಲಿದ್ದರೂ .


     ಹುಬ್ಬಳ್ಳಿಯ ನರಸಿಂಹ ದಾಬಡೆ. ಮೈಲಾರ್ ಮಹದೇವಪ್ಪ ಮತ್ತು ಮೈಲಾರ ಮಹಾದೇವಮ್ಮ ದಂಪತಿಗಳ ಜೊತೆಗೆ ಹಳ್ಳಿಕೇರಿ ಗುದ್ಲಪ್ಪ ದಂಪತಿಗಳ ಜೊತೆಗೆ ಅನನ್ಯತೆಯನ್ನು ಬೆಳೆಸಿಕೊಂಡ ನಾಗಮ್ಮ ತಾಯಿಯವರು ಹುಬ್ಬಳ್ಳಿಯ ಚನ್ನಬಸಮ್ಮ ರತ್ನಕಟ್ಟಿ ಮುಂತಾದ ಸ್ವಾತಂತ್ರ್ಯ ಯೋಧರೊಂದಿಗೆ ಮಹಿಳಾ ಪರಧ್ವನಿಯನ್ನು ಗಟ್ಟಿಗಿತ್ತಿಯಾಗಿ ನಿಭಾಯಿಸಿದ್ದು ಇತಿಹಾಸದ ಪುಟಗಳಲ್ಲಿ ಸ್ಮರಣೀಯವಾಗಿದೆ. ಸ್ವಾತಂತ್ರ್ಯ ನಂತರದಲ್ಲಿ ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರಿಂದ ಮುಖ್ಯಮಂತ್ರಿಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಂದ ಅನೇಕ ಪ್ರಶಸ್ತಿ ಪುರಸ್ಕಾರ ಮತ್ತು ಗೌರವ ಸನ್ಮಾನಗಳಿಗೆ ನಾಗಮ್ಮ ತಾಯಿಯವರು ಪಾತ್ರರಾಗಿದ್ದಾರೆ ಸ್ವಾತಂತ್ರ ಪೂರ್ವದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ಥಾಪಿತಗೊಂಡ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಮಹಿಳಾ ವಿದ್ಯಾಪೀಠ ಸಂಸ್ಥೆಯು ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳ ಕನಸಿನ ಕೂಸಾಗಿದ್ದು 21ನೇ ಶತಮಾನ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲಿ ತನ್ನ ಇಚ್ಚಿತ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
        ಕೆಜಿಯಿಂದ ಪಿಜಿಯವರೆಗೆ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಮಹಿಳಾ ವಿದ್ಯಾಪೀಠ ಸಂಸ್ಥೆಯು ನಮ್ಮ ನಾಡಿನ ಹೆಮ್ಮೆಯ ಮಹಿಳಾ ಸಂಸ್ಥೆಯಾಗಿ ರೂಪಗೊಂಡಿದೆ. ಗಾಂಧಿ ಪ್ರಾರ್ಥನಾ ಮಂದಿರದಲ್ಲಿ ಗಾಂಧೀಜಿಯವರ ಚಿತಾಬಸ್ಮವನ್ನು ಇರಿಸಲಾಗಿದ್ದು ಈವರೆಗೂ ಕೂಡ ಅಗಸ್ಟ್ 15 ಹಾಗೂ ಜನವರಿ 26ರಂದು ಗಾಂಧೀಜಿ ಪ್ರಾರ್ಥನಾ ಭವನದ ಮುಂದೆ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯ ಯೋಧರಿಗೆ ನಮನವನ್ನು ಸಲ್ಲಿಸುವ ಪರಂಪರೆ ಶತಮಾನಗಳಿಂದ ಮುಂದುವರಿದುಕೊಂಡು ಬಂದಿದೆ .ಇಂದಿಗೂ ಮಹಿಳಾ ವಿದ್ಯಾಪೀಠದಲ್ಲಿ ನಾಗಮ್ಮ ತಾಯಿ ಆಶ್ರಮವಿದ್ದು ಅಲ್ಲಿ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಹಾಗೂ ಅವರು ಬಳಸಿದ ವಿಶಿಷ್ಟ ವಸ್ತುಗಳ ಪ್ರದರ್ಶನವನ್ನು ಕೂಡ ಕಾಣಬಹುದು ಮಹಿಳಾ ವಸತಿ ನಿಲಯಗಳು ಮಹಿಳಾ ಮಹಾವಿದ್ಯಾಲಯ ,ಮಹಿಳಾ ಸ್ನಾತಕೋತ್ತರ ಪಿಜಿ ಸೆಂಟರ್ , ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯ, ಮಹಿಳಾ ಡಿಎಡ್ ಶಿಕ್ಷಣ ಸಂಸ್ಥೆ, ಮಹಿಳಾ ವೃತ್ತಿಪರ ಕೋರ್ಸಗಳು, ಮಹಿಳಾ ಎನ್ ಟಿ ಸಿ ಕಾಲೇಜ್ ಹಾಗೂ ವೃತ್ತಿಪರ ಬ್ಯೂಟಿಷಿಯನ್ ಕೋರ್ಸಗಳು ಹಾಗೂ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಒಳಗೊಂಡ ಬೃಹತ್ ಸಂಸ್ಥೆಯಾಗಿ ಇಂದು ಬೆಳೆದುದು ಪಾಟೀಲ ದಂಪತಿಗಳ ಕನಸು  ನನಸಾದಂತಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ನಂತರದಲ್ಲಿ  ಒಂಬತ್ತು ದಶಕಗಳಿಂದ ನಿರಂತರವಾಗಿ ಮಹಿಳಾ ವಿದ್ಯಾಪೀಠ ಮತ್ತು ಕಸ್ತೂರ ಬಾ ಹರಿಜನ ಬಾಲಿಕಾಶ್ರಮವು ಸ್ತ್ರೀ  ಸಬಲೀಕರಣದ ಶಕ್ತಿಕೇಂದ್ರವಾಗಿ ತನ್ನ ಹಿರಿಮೆ ಗರಿಮೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದದ್ದು ಶ್ಲಾಘನೀಯವಾಗಿದೆ
     ತಿಲದ ಮರೆಯ ತೈಲದಂತೆ ಅವಿರತವಾಗಿ ಶ್ರಮಿಸಿ ನಾಡಿನ ಸರ್ವತೋಮುಖ ಏಳಿಗೆ ಕನಸು ಕಂಡವರು ವೀರನಗೌಡ ಮತ್ತು ನಾಗಮ್ಮ ದಂಪತಿಗಳು. ಸ್ವಾತಂತ್ರ್ಯ  ಪೂರ್ವದಲ್ಲಿ ಅವರು ನೆಟ್ಟ ಚಿಕ್ಕ ಸಸಿ ಇಂದು ಹೆಮ್ಮರವಾಗಿ ಬೆಳೆದು ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ಮಹಿಳಾ ವಿದ್ಯಾಪೀಠವಾಗಿ ಬೆಳೆದು ಲಕ್ಷಾಂತರ ವಿದ್ಯಾರ್ಥಿನಿಯರ ಬದುಕನ್ನು ರೂಪಿಸಿದೆ.


        ಈ ಸಂಸ್ಥೆಯ ಸಂಸ್ಥಾಪಕರಾದ ಸರ್ದಾರ್ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.ಗಾಂಧೀಜಿಯವರ ಕಟ್ಟಾ ಅಭಿಮಾನಿಗಳು ಅನುಯಾಯಿಗಳಾದ ಇವರ ದೇಶಸೇವೆ ಚಿರಸ್ಮರಣೀಯವಾಗಿದೆ. ಇದೇ ಕಾರಣಕ್ಕಾಗಿ ಅವರಿಗೆ ಸರದಾರದ ಎಂಬ ಬಿರುದನ್ನು ನೀಡಲಾಗಿತ್ತು. ಶ್ರೀ ವೀರನಗೌಡರ ಸಾಮಾಜಿಕ, ಶೈಕ್ಷಣಿಕ ಸೇವೆಗೆ ಮನ್ನಣೆ ನೀಡಿ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಾಂಧೀಜಿಯವರ ಸೇವಾ ಕಾರ್ಯದಿಂದ ಹುರುಪುಗೊಂಡು ಹುಬ್ಬಳ್ಳಿಯಲ್ಲಿ ಕಸ್ತೂರಿ ಬಾ ಹರಿಜನ ಬಾಲಿಕಾಶ್ರಮವನ್ನು ಪ್ರಾರಂಭಿಸಿದರು
      ಉತ್ತರಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇದೊಂದು ಹೊಸ ಪ್ರಯೋಗವಾಗಿತ್ತು. ವೀರನಗೌಡರ ಧರ್ಮಪತ್ನಿಯಾದ ನಾಗಮ್ಮ ತಾಯಿಯವರ ಕಾಳಜಿ ಅವರ ಕರ್ತೃತ್ವ ಶಕ್ತಿ ಈ ಹರಿಜನ ಬಾಲಿಕಾಶ್ರಮಕ್ಕೆ  ಉಸಿರನ್ನು ತುಂಬಿ ಪೋಷಣೆ ನೀಡಿತು.
         ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧೀಜಿಯವರ ಹರಿಜನೋದ್ಧಾರದ  ಆಶಯವನ್ನು ಈಡೇರಿಸುವಲ್ಲಿ ಶಕ್ತಿಕೇಂದ್ರವಾಗಿ ಹುಬ್ಬಳ್ಳಿಯ ಕಸ್ತೂರ ಬಾ ಹರಿಜನ ಬಾಲಿಕಾಶ್ರಮ ಅಮೂಲ್ಯವಾದ ಸೇವೆಯನ್ನು  ಸಲ್ಲಿಸಿದ್ದನ್ನು ಸ್ಮರಿಸಬಹುದು . ನಾಗಮ್ಮ ತಾಯಿಯವರ ಕಾಳಜಿ, ಕರ್ತೃತ್ವ ಶಕ್ತಿ ಈ ಸಂಸ್ಥೆಯ ಹಿಂದೆ ಅಡಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯ ಭಾಗ್ಯ ಕಂಡ ಈ ಆಶ್ರಮದಲ್ಲಿ ವಿದ್ಯೆಯನ್ನು ಕಲಿತ ಲಕ್ಷಾಂತರ ಹೆಣ್ಣುಮಕ್ಕಳು  ಅನೇಕರು ಇಂದು ಅತ್ಯಂತ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಪ್ರಪಂಚದಾದ್ಯಂತ ಸೇವೆ ಸಲ್ಲಿಸುತ್ತಿದ್ದಾರೆ .ಹುಬ್ಬಳ್ಳಿಯಲ್ಲಿ ನೆಲೆ ಕಂಡ ಈ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯನ್ನು ಹಾಗೂ ದಂಪತಿಗಳ ಸೇವೆಯನ್ನು ಸಮಾಜವು ಕೊಂಡಾಡಿತು ಶ್ಲಾಘಿಸಿತು.

         ಜಾತಿ ಮತ ಭೇದ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ನಾಗಮ್ಮ ತಾಯಿಯವರು ತಮ್ಮ ಪತಿ ವೀರನಗೌಡರು ಒಟ್ಟಿಗೆ ಹರಿಜನ ಬಾಲಿಕಾಶ್ರಮದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಎಂತಹವರಿಗೂ ಕೂಡಾ ಸ್ಪೂರ್ತಿದಾಯಕ ಆದರ್ಶಪ್ರಾಯ ಮತ್ತು ಅನುಕರಣೆಯ ಸೇವೆಯಾಗಿತ್ತು.

     ದಲಿತೋದ್ಧಾರ ಮತ್ತು ಸಮಾಜೋದ್ಧಾರವೇ ತಮ್ಮ ಜೀವನದ ಉಸಿರು ಎಂಬುದನ್ನು ಅರಿತುಕೊಂಡಿದ್ದ ವೀರನಗೌಡ ದಂಪತಿಗಳ ಸೇವೆಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ನೆನೆಯುವದು ನಾವು ಆ ದಂಪತಿಗಳ ಸೇವೆಗೆ  ನೀಡುವ ಗೌರವವಾಗಿದೆ.
      ಹುಬ್ಬಳ್ಳಿ ನೆಲೆಯಲ್ಲಿ ಸ್ಥಾಪನೆ ಗೊಂಡ ಹೆಮ್ಮೆಯ ಸಂಸ್ಥೆಗಳೆಂದರೆ, 1934ರಲ್ಲಿ ಕಸ್ತೂರ ಬಾ ಹರಿಜನ ಬಾಲಿಕಾಶ್ರಮ, 1934ರಲ್ಲಿ ಸುಧಾತಾಯಿ ಶೆಟ್ಟಿ ಪ್ರಾಥಮಿಕ ಶಾಲೆ, 1949ರಲ್ಲಿ ಅಕ್ಕಮಹಾದೇವಿ ಪ್ರಾಥಮಿಕ ಶಿಕ್ಷಕರ ತರಬೇತಿ ಸಂಸ್ಥೆ, 1949ರಲ್ಲಿ ಮಹಾತ್ಮ ಗಾಂಧಿ ಪ್ರಾರ್ಥನಾ ಮಂದಿರ, 1955 ರಲ್ಲಿ ಸುಂದರಬಾಯಿ ಶಿಶುವಿಹಾರ 1959ರಲ್ಲಿ ಬಾಲಕಿಯರ ಪ್ರೌಢಶಾಲೆ ,1960ರಲ್ಲಿ ಬಾಲಕಿಯರ ಪ್ರಾಥಮಿಕ ಶಾಲೆ, 1961 ರಲ್ಲಿ  ವಸತಿ ಶಾಲೆ, 1992ರಲ್ಲಿ ವೃತ್ತಿಪರ ತರಬೇತಿ ಕೇಂದ್ರ, 1998ರಲ್ಲಿ ನರ್ಸಿಂಗ್ ಸ್ಕೂಲ್’ 1999 ರಲ್ಲಿ ಮಹಿಳೆಯರ ವಸತಿ ನಿಲಯ ಹಾಗೂ ಪದವಿ ಮಹಾವಿದ್ಯಾಲಯ ನಂತರ ಪದವಿ ಪೂರ್ವ ಮಹಾವಿದ್ಯಾಲಯ ನಂತರ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ  ಕೇಂದ್ರ ಹೀಗೆ ಕೆಜಿಯಿಂದ ಪಿಜಿಯವರೆಗೆ ಹಲವಾರು ಸಂಸ್ಥೆಗಳನ್ನು ಸರ್ದಾರ್ ವೀರನಗೌಡ ಪಾಟೀಲ್ ಪಾಟೀಲ್ ದಂಪತಿಗಳು ಉತ್ತರ ಕರ್ನಾಟಕದ ಶೈಕ್ಷಣಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಗಾಂಧೀಜಿಯವರ ಆಂದೋಲನದಿಂದ ಸ್ಪೂರ್ತಿ , ಪ್ರೇರಣೆಯನ್ನು ಪಡೆದು ಈ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಈ ಭಾಗದ ಮಹಿಳೆಯರ ಸಬಲೀಕರಣಕ್ಕೆ ತಮ್ಮದೆಯಾಗಿರುವ ಕೊಡುಗೆಯನ್ನು ಸಲ್ಲಿಸಿದ್ದಾರೆ.
       ಮಹಿಳೆಯರ ಬಾಳಿಗೆ ಜ್ಞಾನದ ಬೆಳಕನ್ನು ನೀಡಿದ ದಂಪತಿಗಳ ಕಾರ್ಯ ಇಂದು ಈ ಬೃಹತ್ ಸಂಸ್ಥೆ ಶತಮಾನೋತ್ಸವದ ಹೊಸ್ತಿಲಲ್ಲಿದೆ. ನಾಗಮ್ಮ ತಾಯಿಯವರ ಜನ್ಮಶತಾಬ್ದಿಯನ್ನು ಕೂಡ ಆಚರಿಸಿದ್ದು ಆ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಟಿ.ಎನ್ ಚತುರ್ವೇದಿಯವರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಪದವಿ ಮಹಾವಿದ್ಯಾಲಯಕ್ಕೆ ಹೊಸ ಕಟ್ಟಡವನ್ನು ಕಟ್ಟಿಸುವದಲ್ಲದೆ ಶತಮಾನದ ಹಿಂದೆ ಸ್ಥಾಪಿತಗೊಂಡ ಎಲ್ಲ ಕಟ್ಟಡಗಳಿಗೆ ಹೊಸ ಹೊಸ ರೂಪ ವಿನ್ಯಾಸಗಳನ್ನು ನೀಡುವ ಮೂಲಕ ಈಗ ಉತ್ತರ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿ ವ್ಯಾಪಾರ ವಾಣಿಜ್ಯ ಕೇಂದ್ರ ಚೋಟಾ ಮುಂಬೈ ಎಂದು ಪ್ರಸಿದ್ದಿಪಡೆದ ಹುಬ್ಬಳ್ಳಿಯಲ್ಲಿ  ಮಹಿಳಾ ವಿದ್ಯಾಪೀಠ ತಲೆಯೆತ್ತಿ ನಿಂತಿದೆ.
   ಕೆ.ಎಲ್.ಇ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಒಬ್ಬರಾದ ಸರ್ದಾರ್ ವೀರನಗೌಡ ಪಾಟೀಲ್ ಅವರ ಕನಸು ಮತ್ತು ಆಶಯಕ್ಕೆ ತಕ್ಕಂತೆ ಧರ್ಮಪತ್ನಿ ನಾಗಮ್ಮ ತಾಯಿ ಪಾಟೀಲ್ ಅವರು ಇಡೀ ತಮ್ಮ ಬದುಕನ್ನು ದಲಿತೋದ್ಧಾರ ಮತ್ತು  ಸಮಾಜ ಸೇವೆಗೆ ಸಮರ್ಪಿಸಿಕೊಂಡು ಅವಿಸ್ಮರಣೀಯವಾಗಿದೆ.
      ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಮಾರ್ಪಾಡುಗಳನ್ನು ಹುಬ್ಬಳ್ಳಿ ಅಂತಹ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿಯಲ್ಲಿ ಹೆಣ್ಣು ಮಕ್ಕಳ ವಿದ್ಯೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಮಹಿಳಾ ಸಬಲೀಕರಣಕ್ಕೆ ಹೊಸ ವೇದಿಕೆಯನ್ನು ಒದಗಿಸಿ ಕೊಟ್ಟಿರುವುದನ್ನು ನಾಗಮ್ಮ ತಾಯಿ ಪಾಟೀಲ್ ಅವರ ಈ ಜನಪರ ಸೇವೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಮಹಿಳಾ ವಿದ್ಯಾಪೀಠದ ಸಂಸ್ಥಾಪಕರಾದ ದಿವಂಗತ ನಾಗಮ್ಮ ವೀರನಗೌಡ ಪಾಟೀಲ್ ಅವರ ಹಾಗೂ ಮಹಿಳಾ ವಿದ್ಯಾಪೀಠದ 70ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪದವಿ ಮಹಾವಿದ್ಯಾಲಯಕ್ಕೆ ಹೊಸ ಕಟ್ಟಡವನ್ನು ಕಟ್ಟಿ ಮನೋರಮಾದೇವಿ, ಜುಗಲ್ ಕಿಶೋರ್ ಸೋಮಾನಿ ಎಂದು ನಾಮಕರಣ ಮಾಡುವಾಗ ಅಂದಿನ ರಾಜ್ಯಪಾಲರಾದ ಟಿ. ಏನ್ ಚತುರ್ವೇದಿ ಯವರು ಹಾಗೂ ಕಂದಾಯ ಸಚಿವರಾದ ಜಗದೀಶ್ ಶೆಟ್ಟರ್ ಅವರು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವರಾದ ಬಸವರಾಜ್ ಹೊರಟ್ಟಿ ಅವರು ಇದೇ ಸಂದರ್ಭದಲ್ಲಿ ಅವ್ವ ಎಂಬ ಸ್ಮರಣ  ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ನಾಗಮ್ಮ ತಾಯಿ ಮತ್ತು ವೀರನಗೌಡರ ಸಮಾಜಮುಖಿ ಸೇವೆಯನ್ನು ಸಂಸ್ಮರಣೆ ಗೈದುದು ಹೆಮ್ಮೆ ಯ ಸಂಗತಿಯಾಗಿದೆ.
     ಕಾಲ ಗರ್ಭದಲ್ಲಿ ಅಡಗಿದವರು ಮತ್ತೆಂದು ಬಾರದವರು,ನೆನಪಿಸಿದಂತೆ  ಬದುಕ ಪುಟದಿಂದ ದೂರವಾಗದವರು, ನೆನೆದಂತೆ ನೆನಪಿನ ಆಳದಲ್ಲಿ ಇಳಿದವರು ..ಅವರೇ ನಮ್ಮ ಹಿರಿಯರು.. ನಾಡುಕಟ್ಟಿ ಉತ್ತುಂಗ ಶಿಖರವೇರಿದವರು,ಬಾನ ಬೆಳ್ಳಿ ಚುಕ್ಕಿಯಾಗಿ ನಾಡು-ನುಡಿಯ ಭವ್ಯತೆಯನ್ನು ಸಾರಿದವರು, ಸ್ತ್ರೀ  ಸಬಲೀಕರಣದ ಹರಿಕಾರರು ವೀರನಗೌಡ ನಾಗಮ್ಮ ತಾಯಿ ಪಾಟೀಲ್ ಪುಣ್ಯಜೀವಿಗಳು .ಶತಮಾನಗಳ ಹಿಂದೆ ಸ್ವಾತಂತ್ರ್ಯ ಯೋಧರ ಕನಸಿನ ಕೂಸಾಗಿದ್ದ ಹರಿಜನ ಬಾಲಿಕಾಶ್ರಮ  ಎಂಬ ಸಣ್ಣ ಸಂಸ್ಥೆ ಇಂದು ಅನೇಕ ಉಪಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಉತ್ತರ ಕರ್ನಾಟಕದ ಪ್ರತಿಷ್ಠಿತ  ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದೆ.
         ಈ ಆಲದ ಮರದ ನೆರಳಿನಲ್ಲಿ ನೂರಾರು ಸಂಸ್ಥೆ ಗಳು ಹುಟ್ಟಿಕೊಂಡು ಹೆಣ್ಣು ಮಕ್ಕಳ ಶೈಕ್ಷಣಿಕ ಹಸಿವನ್ನು ನೀಗಿಸುವಲ್ಲಿ ಯಶಸ್ವಿಯಾಗಿವೆ. ನೂರಾರು ಹೆಣ್ಣು ಮಕ್ಕಳು, ಸಾವಿರಾರು  ಅನಾಥೆಯರು  ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.ಲಕ್ಷಾಂತರ ಮಹಿಳೆಯರು ಈ ಸಂಸ್ಥೆಯಲ್ಲಿ ಓದಿ ಅಧಿಕಾರಿಗಳಾಗಿದ್ದಾರೆ ಸುಶಿಕ್ಷಿತರಾಗಿದ್ದಾರೆ.ಇದು ಸ್ವಾತಂತ್ರ್ಯೋತ್ತರ ಭಾರತೀಯ ಮಹಿಳಾ ಸಬಲೀಕರಣಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯಸ್ಸು ಈ ದಂಪತಿಗಳಿಗೆ ಸಲ್ಲುತ್ತದೆ.

    ಒಂಬತ್ತು ದಶಕಗಳ ಉಜ್ವಲ ಇತಿಹಾಸ ಹೊಂದಿರುವ ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಮಹಿಳಾ ಸಮುದಾಯದ ಅಶೋತ್ತರಗಳನ್ನು ಎತ್ತಿ ಹಿಡಿದ ಮಹಿಳಾ ವಿದ್ಯಾಪೀಠ ಕೇಂದ್ರ ಸರ್ದಾರ್ ವೀರನಗೌಡ ಪಾಟೀಲ್ ಪೀಠವಾಗಿದೆ ಇದರ ನಿರ್ಮಾತೃಗಳಾದ ಸ್ವಾತಂತ್ರ್ಯ  ಸೇನಾನಿ ಪದ್ಮಶ್ರೀ  ಪುರಸ್ಕೃತ ಸರ್ದಾರ ವೀರನಗೌಡ ಪಾಟೀಲರು 1888 ರಿಂದ 1979ರ ವರೆಗೆ   ಜೀವಿಸಿದ್ದ ಶ್ರೀಯುತರು ಆ ಕಾಲದಲ್ಲಿ   ಬ್ರಿಟಿಷರ ಪಾಲಿಗೆ ಸಿಂಹಸಪ್ನವಾಗಿದ್ದರು. ಗಾಂಧೀಜಿಯವರ ಕಟ್ಟಾ ಅನುಯಾಯಿಗಳಾಗಿ ಅಸ್ಪೃಶ್ಯತೆ ನಿವಾರಣೆಗಾಗಿ ಹಗಲಿರುಳು ದುಡಿದರು. ನಾಡಿನ ಶ್ರೇಷ್ಠ ವಿದ್ಯಾಸಂಸ್ಥೆ ಕೆ.ಎಲ್ ಇ  ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಲ್ಲಿ ಇವರು ಗಣ್ಯರಾಗಿದ್ದಾರೆ.
     ಗಾಂಧೀಜಿಯವರು ಬೆಳಗಾವಿಯ ಕಾಂಗ್ರೆಸ್  ಅಧಿವೇಶನಕ್ಕೆ ಬಂದಾಗ ಈ ಭಾಗದಲ್ಲಿ ಗಾಂಧೀಜಿಯವರ ಬಲಗೈಯಾಗಿ ಸ್ವಾತಂತ್ರ್ಯ ಸಂಗ್ರಾಮ ಚಳುವಳಿ ,ಚಲೇಜಾವ್ ಚಳುವಳಿ, ಸ್ವದೇಶಿ ಆಂದೋಲನ, ಭಾರತ ಬಿಟ್ಟು ತೊಲಗಿ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಬೆಳಗಾವಿ ಜಿಲ್ಲೆಯ  ಹುದಲಿ ಗ್ರಾಮದಲ್ಲಿ  ಖಾದಿಗ್ರಾಮೋದ್ಯೋಗ ಕೇಂದ್ರದಲ್ಲಿ  ಗಾಂಧೀಜಿಯವರ ಜೊತೆಗೆ ಮುಂಜಾನೆ ಪ್ರಭಾತ ಪೇರಿ .ಪ್ರಾರ್ಥನಾಸಭೆಗಳನ್ನು ನಡೆಸುವುದರಲ್ಲಿ ಮುಂಚೂಣಿಯಲ್ಲಿ ನಿಂತು ಗಾಂಧೀಜಿಯವರ ಒಡನಾಡಿಯಾಗಿ ಉತ್ತರ ಕರ್ನಾಟಕದ ಭಾಗದ ಪ್ರತಿನಿಧಿಯಾಗಿ ಸೇವೆಯನ್ನು ಸಲ್ಲಿಸಿದರು. ಮೈಲಾರ ಮಹದೇವಮ್ಮ ಮತ್ತು  ಮೈಲಾರ ಮಹಾದೇವಪ್ಪ , ಗುದ್ಲೆಪ್ಪನವರ ಜೊತೆಗೆ ಗಾಂಧೀಜಿಯವರೊಂದಿಗೆ ನಿಕಟವರ್ತಿಗಳಾಗಿ ವೀರನಗೌಡ ಪಾಟೀಲ್ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಿದ್ದಾರೆ.  ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಗಾಂಧೀಜಿಯವರ ತೊಡೆಯ ಮೇಲೆ ತಮ್ಮ ಕೂಸನ್ನು ಹಾಕಿ ಗಾಂಧೀಜಿಯವರಿಂದ ಅಮಲ ಎಂದು ತಮ್ಮ ಮಗಳಿಗೆ ನಾಮಕರಣವನ್ನು ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
       ಸಮಸಮಾಜದ ಕನಸುಗಾರರಾದ ಹಾಗೂ ಸಮಾಜೋ ಧಾರ್ಮಿಕ ಕ್ರಾಂತಿಯ ನೇತಾರರಾದ ಬಸವಣ್ಣನವರು ಮತ್ತು  ಗಾಂಧೀಜಿಯವರ ಸಾಮಾಜಿಕ ಶೈಕ್ಷಣಿಕ ಕಳಕಳಿ ವೀರನಗೌಡ ಅವರಲ್ಲಿ ಮೇಳವಿಸಿತ್ತು. ಸ್ತ್ರೀ ಶಿಕ್ಷಣದ ಮಹತ್ವ ಹಾಗೂ ಮಹಿಳಾ ಸಬಲೀಕರಣದ ಹರಿಕಾರರಾದ ವೀರನಗೌಡ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನಾಗಮ್ಮ ತಾಯಿ ಪಾಟೀಲರು ಅಲ್ಪಸಂಖ್ಯಾತ ಹಿಂದುಳಿದ ಮತ್ತು ದಲಿತ  ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ದಲಿತರಿಗೆ ಸಾಮಾಜಿಕ ಸಮಾನ ಅವಕಾಶವನ್ನು ಕಲ್ಪಿಸಿ ಮುಖ್ಯ ವಾಹಿನಿಗೆ ತರುವ ಬಗ್ಗೆ ಕ್ರಿಯಾಶೀಲರಾಗಿ’ ಸಮಾಜೋ ಶೈಕ್ಷಣಿಕ ಸೇವೆಯನ್ನು ತಮ್ಮ ಜೀವನದ ಸೇವಾಮೃತವನ್ನೇ ತಮ್ಮ ಗುರಿಯಾಗಿಸಿಕೊಂಡರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದ ದಂಪತಿಗಳು ಹರಿಜನರಿಗೆ ಮನೆಯಲ್ಲಿ ಆಶ್ರಯವನ್ನು ನೀಡಿದರು. 1934ರಲ್ಲಿ ಹರಿಜನ ಬಾಲಿಕಾಶ್ರಮ ಸ್ಥಾಪನೆಗೆ ಶ್ರೀಕಾರ ಹಾಕಿದರು. ಇಂದು ಅದು ಕಸ್ತೂರ ಬಾ ಹರಿಜನ ಬಾಲಿಕಾಶ್ರಮವೆಂದು ಹೆಸರನ್ನು ಪಡೆದುಕೊಂಡಿದೆ. ಗಾಂಧೀಜಿಯವರು ವರ್ದಾದಲ್ಲಿ ಸ್ಥಾಪಿಸಿದ್ದ ಹರಿಜನ ಬಾಲಿಕಾಶ್ರಮದ ಮಾದರಿಯಲ್ಲಿಯೇ ಉತ್ತರ ಕರ್ನಾಟಕ ಭಾಗದಲ್ಲಿ ಏಕೈಕ ಮಹಿಳಾ ಕಲಿಕಾ ಆಶ್ರಮವಾಗಿ ನೆಲೆ ನಿಂತಿದ್ದು ರೋಚಕ ಕಥಾನಕವಾಗಿದೆ.  ಸಮಾಜೋ ಶೈಕ್ಷಣಿಕ ಹೋರಾಟಕ್ಕೆ ಸ್ತ್ರೀ ಸಮುದಾಯದ ಸಬಲೀಕರಣಕ್ಕೆ ಬಹುದೊಡ್ಡ ಯಶೋಗಾಥೆಯನ್ನು ಈ ಸಂಸ್ಥೆ ಹೊಂದಿರುವದನ್ನು ಕಾಣುತ್ತೇವೆ. ಅಂದು ಹಿರಿಯರು ಕಂಡ ಕನಸು ಇಂದು 90 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿ ಸ್ತ್ರೀ ಶಿಕ್ಷಣದ ಮುಕುಟಮಣಿಯಾಗಿ ಅಳಲಿನಲ್ಲಿ ಬಳಲುವವರ ಕರುಳ ಸಾಂತ್ವನಗೊಳಿಸಿ ಜಪತಪಗಳಿಗಿಂತ ಶಿಕ್ಷಣ ದಾಸೋಹವೇ ಮೇಲೆಂದು ಸ್ತ್ರೀ ಸಶಕ್ತಿಕರಣಕ್ಕಾಗಿ  ಉತ್ತರ ಕರ್ನಾಟಕದ ಮಹಿಳಾ ವಿದ್ಯಾಪೀಠವೂ ಶಿಕ್ಷಣಕ್ಕೆ ಬಹುದೊಡ್ಡ ಮೈಲಿಗಲ್ಲನ್ನು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ.
       ನಾಗಮ್ಮ ತಾಯಿ ಪಾಟೀಲ್ ಅವರ ಸೊಸೆಯಾದ ಲಿಂಗೈಕ್ಯ ಡಾ.ಲಕ್ಷ್ಮೀಭಾಯಿ ಪ್ರೇಮಾನಂದ ಪಾಟೀಲರು ಅವರ ತರುವಾಯ ಸತ್ಯ, ನ್ಯಾಯ, ನಿಷ್ಠೆಯಿಂದ ಮಹಿಳಾ ವಿದ್ಯಾಪೀಠದ ಅಧ್ಯಕ್ಷರಾಗಿ ಅಮೂಲ್ಯ ಸೇವೆಯನ್ನು ಸಲ್ಲಿಸಿದರು. ಪಾಟೀಲ್ ದಂಪತಿಗಳ ದೂರ ದೃಷ್ಟಿಯ ಫಲವಾಗಿ ಶತಮಾನದ ಹೊಸ್ತಿಲಲ್ಲಿರುವ ವಿದ್ಯಾಪೀಠ  ಸಂಸ್ಥೆಯು ದಿನದಿಂದ ದಿನಕ್ಕೆ ಶೈಕ್ಷಣಿಕ ಅಭಿವೃದ್ಧಿಯ ಉತ್ತುಂಗವನ್ನು ಏರಿದೆ. ಈ ಕಾರ್ಯ ಸಾಧನೆಗೆ ಜೀವಂತ ಸಾಕ್ಷಿ ಎಂಬಂತೆ ಶೈಕ್ಷಣಿಕ ಸಾಂಸ್ಕೃತಿಕ  ಪ್ರಗತಿಯೊಂದಿಗೆ ಸಮಾಜಕ್ಕೆ ಶ್ರೇಷ್ಠ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾಣಿಕೆ ನೀಡಿರುವದು ಹಾಗೂ ಲಕ್ಷಾಂತರ ಹೆಣ್ಣುಮಕ್ಕಳು  ವಿದ್ಯೆಯ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿರುವದು ಮಹಿಳಾ ವಿದ್ಯಾಪೀಠದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ .
    ಕಾಯಕ ಮತ್ತು ದಾಸೋಹಗಳ ಶರಣ ಸಂಸ್ಕೃತಿ ಹಾಗೂ ಸ್ವಾತಂತ್ರ್ಯ  ಸಂಗ್ರಾಮದ ದಲಿತೋದ್ಧಾರ ಮತ್ತು ಗ್ರಾಮೋದ್ಧಾರ ಎರಡು ದೃಷ್ಟಿ ಕೋನಗಳನ್ನು ಸಾಕಾರಗೊಳಿಸಿದ ಉತ್ತರ ಕರ್ನಾಟಕದ ಏಕೈಕ ಹೆಮ್ಮೆಯ ಸಂಸ್ಥೆ ಎಂದರೆ ಸರ್ದಾರ್  ವೀರನಗೌಡ ಪಾಟೀಲ್ ಮಹಿಳಾ ವಿದ್ಯಾಪೀಠವಾಗಿದೆ.
       ಸರ್ದಾರ್ ವೀರನಗೌಡ ಪಾಟೀಲ್  ದಂಪತಿಗಳ ಉದ್ದೇಶಿತ  ಸಮಾಜೋಶೈಕ್ಷಣಿಕ ಸೇವಾಕಾರ್ಯವನ್ನು ಮಗಳಾದ ಶ್ರೀಮತಿ ಅಮಲಕ್ಕ ಕಡಗದವರು ಅವರ ಆಶಯದಂತೆ ಮಹಿಳೆಯರಿಗಾಗಿ ಹಾಗೂ ಹಿಂದುಳಿದ ವರ್ಗದ ಸ್ತ್ರೀಯರ ಶಿಕ್ಷಣಕ್ಕೆ ಹಗಲಿರುಳು ಶ್ರಮಿಸುತ್ತಿರುವದನ್ನು ಕಾಣಬಹುದು. ಅಂದು ತಂದೆ-ತಾಯಿಗಳು ಹಾಕಿಕೊಟ್ಟ ಮಾರ್ಗದಂತೆ ಸೊಸೆ ಡಾ.ಲಕ್ಷ್ಮೀಬಾಯಿ ಪಾಟೀಲ್ ಮಗಳು ಅಮಲಕ್ಕ ಕಡೆಗದ. ಶ್ರೀ ಕೆ.ಟಿ ಪಾಟೀಲ.ಶ್ರೀ ಬಸಂತಕುಮಾರ ಪಾಟೀಲ ಇವರುಗಳ ಕಟ್ಟುನಿಟ್ಟಿನ ನಿಯಮಗಳು ಇವರ ಕಾರ್ಯವೈಕರಿಗಳು ತತ್ವಪರಿಪಾಲನೆ ಇದೆಲ್ಲದರ ಫಲವಾಗಿ ಇಂದು ಮಹಿಳಾ ವಿದ್ಯಾಪೀಠ ಉತ್ತರ ಕರ್ನಾಟಕದ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ನಿಂತಿದೆ.
        1968ರಲ್ಲಿ ಈ ಸಂಸ್ಥೆಗೆ ಧರ್ಮದರ್ಶಿಗಳನ್ನು ನೇಮಕ ಮಾಡಲಾಯಿತು ಸ್ವಾತಂತ್ರ್ಯ ನಂತರದ ಭಾರತದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಳಿಗೆ ಅನುಗುಣವಾಗಿ ಈ ಸಂಸ್ಥೆ ಕಾಲ ಕಾಲಕ್ಕೆ ಮಾರ್ಪಾಟುಗೊಂಡು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಅಧ್ಯಕ್ಷರು, ಖಜಾಂಚಿ, ಕಾರ್ಯದರ್ಶಿ, ಮತ್ತು ಧರ್ಮದರ್ಶಿಗಳ ಮತ್ತು ಪದಾಧಿಕಾರಿಗಳನ್ನು ಹೊಂದಿ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. 19991ರಲ್ಲಿ ಹಣಕಾಸಿನ ತೊಂದರೆಯಿಂದ ಈ ಸಂಸ್ಥೆ ಬಳಲುತ್ತಿದ್ದಾಗಲೂ ಕೂಡ ಅಂದಿನ ಅಧ್ಯಕ್ಷರಾದ ಲಕ್ಷ್ಮಿಬಾಯಿ ಪಾಟೀಲ್ ಅವರ ಮಗ ಪ್ರೇಮಾನಂದ ಪಾಟೀಲ್ ಅವರು ಸಮಚಿತ್ತದಿಂದ ಶಿಕ್ಷಣ ಸಂಸ್ಥೆಯನ್ನು ಯಶಸ್ವಿಯಾಗಿ  ಮುನ್ನಡೆಸಿಕೊಂಡು ಬಂದಿದ್ದಾರೆ.
      ಸ್ವಾತಂತ್ರ್ಯ  ಪೂರ್ವದಲ್ಲಿ ಹರಿಜನ ಬಾಲಿಕಾಶ್ರಮದಿಂದ ಪ್ರಾರಂಭವಾದ ಈ ಸಂಸ್ಥೆ  ಶಿಶು ವಿಹಾರ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ , ಎನ್ ಟಿ ಸಿ ತರಬೇತಿ, ಕಾರ್ಯನಿರತ ಮಹಿಳಾ ಸಾಮಾನ್ಯ ವಸತಿಗೃಹಗಳು, ವೃತ್ತಿ ಪರ ತರಬೇತಿ ಕೋರ್ಸುಗಳು ಐಟಿಐ ತರಬೇತಿ, ಕಸೂತಿ ಹೊಲಿಗೆ  ಕೋರ್ಸ್ ಗಳನ್ನು ಕೂಡ ಹೊಂದಿದೆ. 1992ರಲ್ಲಿ ಎನ್. ಸಿ .ಐ .ಟಿ ಯ ಮಾನ್ಯತೆಯನ್ನು ಪಡೆದುಕೊಂಡ ಕರ್ನಾಟಕದ ಪ್ರಥಮ ಮಹಿಳಾ ಐಟಿಐ ತರಬೇತಿ ಕೇಂದ್ರ  ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪದವಿ ಮಹಾವಿದ್ಯಾಲಯ,ಪದವಿ ಪೂರ್ವ ಮಹಾವಿದ್ಯಾಲಯ ಕರಾಅಮವಿವಿ ವಿಜಾಪುರದ ಸ್ನಾತಕೋತ್ತರ  ಶಿಕ್ಷಣ ಕೇಂದ್ರ, ಮಹಿಳೆಯರ ಶೈಕ್ಷಣಿಕ ಆರ್ಥಿಕ ಸಾಮಾಜಿಕ ಪ್ರಗತಿಗೆ ಅವಶ್ಯಕತೆ ಇರುವ ಎಲ್ಲ ವೇದಿಕೆಗಳನ್ನು ಒಂದೇ ಸೂರಿನಡಿ ಒದಗಿಸಿಕೊಟ್ಟು ಜಾಗತೀಕರಣೋತ್ತರದ ಈ ಸಂದರ್ಭದಲ್ಲಿಯೂ ಪ್ರಗತಿಯನ್ನು ಸಾಧಿಸುತ್ತಿರುವದು ಪ್ರಶಂಸನೀಯ ಸಂಗತಿ. ಸದ್ಯ ಸರ್ದಾರ್ ವೀರನಗೌಡ ಪಾಟೀಲ್ ಮಹಿಳಾ ವಿದ್ಯಾಪೀಠದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಜ್ಞಾನಾರ್ಜನೆಯನ್ನು ಮಾಡುತ್ತಿದ್ದಾರೆ. ಐದನೂರಕ್ಕೂ ಹೆಚ್ಚು ಮಹಿಳೆಯರು, ವಿದ್ಯಾರ್ಥಿನಿಯರು ವಸತಿ ಗ್ರಹದಲ್ಲಿ ಆಶ್ರಯವನ್ನು ಪಡೆದುಕೊಂಡಿದ್ದಾರೆ. ನೂರಕ್ಕೂ  ಅಧಿಕ ಬೋಧಕ ಬೋಧಕೇತರ ಸಿಬ್ಬಂದಿಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧೀಜಿಯವರಿಂದ ಪ್ರಭಾವ ಹಾಗೂ ಪ್ರೇರಣೆಗೆ ಒಳಗಾದ ವೀರನಗೌಡ ಪಾಟೀಲ್ ಮತ್ತು ನಾಗಮ್ಮ ತಾಯಿ ಪಾಟೀಲ್ ದಂಪತಿಗಳು ಸಮಾಜಮುಖಿಯಾಗುವುದರೊಂದಿಗೆ ಶೈಕ್ಷಣಿಕ ಸೇವೆಯನ್ನು ದಲಿತೋದ್ಧಾರ ಮತ್ತು ಹರಿಜನೋದ್ಧಾರ ಸೇವೆಯನ್ನು ಗೈದ ಫಲವಾಗಿ ಇಂದು 90 ವರ್ಷಗಳು ದಾಟಿದರು ತನ್ನದೇ ಆದ ಹೆಚ್ಚುಗಾರಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ರವೀಂದ್ರನಾಥ್ ಟಾಗೋರ್ ಅವರ ಶಾಂತಿನಿಕೇತನದ  ಮಾದರಿ ಹಾಗೂ ಗಾಂಧೀಜಿಯವರ ವರ್ಧಾ ಶಿಕ್ಷಣ ಪದ್ದತಿಯಂತೆ ರೂಪಗೊಂಡ ಹರಿಜನ ಬಾಲಿಕಾಶ್ರಮವು 21ನೇ ಶತಮಾನದ ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಸಮರ್ಥ ವೇದಿಕೆಯನ್ನು ಒದಗಿಸಿ ಕೊಟ್ಟಿರುವದು ಅವಿಸ್ಮರಣೀಯವಾಗಿದೆ.
         ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪದ್ಮಶ್ರೀ ಸರ್ದಾರ್ ವೀರನಗೌಡ ಪಾಟೀಲ್ ಹಾಗೂ ನಾಗಮ್ಮ ತಾಯಿ ಪಾಟೀಲ್ ದಂಪತಿಗಳ ಈ ಅಮೃತಸೇವೆಯನ್ನು ಸ್ಮರಿಸುವ ಮೂಲಕ ನಾಡಿನ ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿದ ತನ್ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮವನ್ನು ಒದಗಿಸಿದ ಈ ದಂಪತಿಗಳ ಸೇವೆಯನ್ನು  ಸ್ಮರಿಸುವುದು ಅಭಿಮಾನದ ಸಂಗತಿಯಾಗಿದೆ.
         ಮಹಿಳಾ ವಿದ್ಯಾಪೀಠದಲ್ಲಿ ದೊಡ್ಡದಾದ  ಗಾಂಧೀಜಿ  ಪ್ರಾರ್ಥನಾ ಮಂದಿರವಿದ್ದು  ಅಲ್ಲಿ ಗಾಂಧೀಜಿಯವರ ಚಿತಾಭಸ್ಮವನ್ನು ಇರಿಸಲಾಗಿದೆ.ಬಹುತೇಕ ಕರ್ನಾಟಕದಲ್ಲಿ  ಗಾಂಧೀಜಿಯವರ ಚಿತಾಭಸ್ಮವನ್ನು ಹುಬ್ಬಳ್ಳಿ, ಬಳ್ಳಾರಿ’ ಮತ್ತು ಮಡಿಕೇರಿಯಲ್ಲಿ ಇರಿಸಿದ್ದು, ಇಂದಿನ ಕಿತ್ತೂರು ಕರ್ನಾಟಕ ಭಾಗದಲ್ಲಿ ಗಾಂಧೀಜಿಯವರ ಚಿತಾಭಸ್ಮವನ್ನು ಇರಿಸಿದ  ಏಕೈಕ  ಪ್ರಾರ್ಥನಾ ಮಂದಿರ ಇದಾಗಿದೆ.
       ಜಾಗತೀಕರಣೋತ್ತರ ೨೧ನೇ ಶತಮಾನದ ಇಂದಿನ ಭಾರತದ ಅಭಿವೃದ್ಧಿಗೆ ಶತಮಾನಗಳ ಹಿಂದೇಯೇ ಆಂಗ್ಲರ ಆಳ್ವಿಕೆಯ ವಿರುದ್ಧವಾಗಿ ಬಂಡಾಯದ ಮತ್ತು ಕ್ರಾಂತಿಕಾರಿ ಚಳುವಳಿಯ ಮೂಲಕ ನಮ್ಮ  ದೇಶವನ್ನು  ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ಸ್ವಾತಂತ್ರ್ಯ ಪಡೆದು ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮತ್ತು ಬಲಿದಾನಗೈದ ಎಲ್ಲ ಹುತಾತ್ಮರನ್ನು ಮಹಾತ್ಮರನ್ನು .ಸ್ವಾತಂತ್ರ್ಯವೀರರನ್ನು ಸ್ಮರಣೆಮಾಡುವುದು ಪ್ರತಿಯೊಬ್ಬ ಭಾರತೀಯನ ಆಧ್ಯ ಕರ್ತವ್ಯ . ಭಾರತದ ನೆಲ, ಜಲ, ಮಣ್ಣಿನ ಕಣ ಕಣಗಳಲ್ಲಿ ಭಾರತೀಯರ ಹೃದಯ ಮತ್ತು ಮನಗಳಲ್ಲಿ, ಭಾರತದ ಸ್ವಾತಂತ್ರ್ಯ ಸಂಗ್ರಾಮವು  ಜಾಗತಿಕ ಇತಿಹಾಸದಲ್ಲಿ ಆಚಂದ್ರಾರ್ಕವಾಗಿ ಅಜರಾಮರವಾಗಿದೆ.


ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

Leave a Reply

Back To Top