ಒಂದು ನಿರ್ಧಾರದ ಸುತ್ತಾ-ಭಾರತಿ ಅಶೋಕ್

ಲೇಖನ ಸಂಗಾತಿ

ಭಾರತಿ ಅಶೋಕ್

ಒಂದು ನಿರ್ಧಾರದ ಸುತ್ತಾ………

ಯಾವುದಾದರೂ ಒಂದು ವಿಷಯದ ಬಗೆಗೆ ಆಳವಾಗಿ ಯೋಚಿಸದೇ ಅದರ  ಹರವಿನ ಬಗೆಗೆ ತಿಳಿಯದೇ  ದಿಡೀರ್ ಎಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗೆ ತೆಗೆದುಕೊಂಡ ನಿರ್ಧಾರದಿಂದ ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಈ ನಿರ್ಧಾರಗಳು ಕೌಟುಂಬಿಕ, ಸಾಂಸ್ಥಿಕವಾಗಿರಬಹುದು, ಸಾಮಾಜಿಕವಾಗಿರಬಹುದು. ಈ ಯಾವ ನೆಲೆಯಲ್ಲೂ ಅದು ಒಳ್ಳೆಯದಲ್ಲ. ಕೆಲವು ಸಲ ಅವುಗಳಿಂದ  ಅನಾಹುತ ಸಂಭವಿಸಬಹುದು. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಲು ಹತ್ತಾರು ಬಾರಿ ಯೋಚಿಸಿಬೇಕು. ಆ ನಿರ್ಧಾರದ ಸುತ್ತಲೂ  ಧನಾತ್ಮಕ, ಗುಣಾತ್ಮಕ ಫಲಿತಾಂಶದ ಬಗೆಗೆ ತಿಳುವಳಿಕೆ ಇರಬೇಕು. ಒಂದು ವೇಳೆ ಧನಾತ್ಮಕ ಪರಿಣಾಮವಾದರೆ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇರುತ್ತದೆ. ಅದು ಸರ್ವಕಾಲಿಕ ಸತ್ಯವಾಗಿದ್ದು, ಮತ್ತು ಅದು ಅನುಸರಿಸರಣೀಯಗಿರುತ್ತದೆ.

            ತೆಗೆದುಕೊಂಡ ನಿರ್ಧಾರದಿಂದ ವೈಪರೀತ್ಯ ಪರಿಣಾಮಗಳಾದರೆ  ಅದು ಕ್ಷಣಿಕ ನಿರ್ಧಾರ. ಚಿಂತನೆ ಇಲ್ಲದೇ ತೆಗೆದುಕೊಂಡುದರ ಪರಿಣಾಮವಾಗಿದ್ದು, ಅದು ಸಾರ್ವತ್ರಿಕವಾಗಿರದೆ, ಸರ್ವಕಾಲಿಕವೂ ಆಗಿರದೇ ಅಪಾಯಗಳಿಂದ ಕೂಡಿರುತ್ತದೆ. ಅದ್ದರಿಂದ ವ್ಯಕ್ತಿಗೆ, ಸಮಷ್ಟಿಗೆ ತತ್ ಕ್ಷಣವೇ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ಆಗುವ ಅನಾಹುತಕ್ಕೆ ಉದಾಹರಣೆಯಾಗುತ್ತದೆ, ಆಗ ಅಂತಹ ನಿರ್ಧಾರವನ್ನು ವರ್ಜಿಸಲ್ಪಡುತ್ತದೆ.

            ನಿರ್ಧಾರ ವೈಯುಕ್ತಿಕ ನೆಲೆಯಲ್ಲಿದ್ದರೆ ಅದಕ್ಕೆ ಉದಾಹರಣೆಯಾಗಿ : ಇಂದಿನ ಯುವ ಜನಾಂಗ ಮಾಡಿಕೊಳ್ಳುವ ಅನಾಹುತಗಳು ಒಂದೆ ಎರಡೇ… ನೋಡಿದಾಕ್ಷಣ ಆಕ಼ರ್ಷಣೆಗೆ ಒಳಗಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಿಕೋಳ್ಳುವುದು ಹೀಗೆಯೇ. ಯುವಕ ಯುವತಿಯರು  ಆಕರ್ಷಿತರಾಗುತ್ತಿದ್ದಂತೆಯೇ ಅದನ್ನು ಪ್ರೀತಿ ಎಂದು ನಂಬಿ ಸಮಾಜದ ಒಪ್ಪಿಗೆ ಎಂಬAತೆ ವಿವಾಹ ಬಂಧನಕ್ಕೆ ಒಳಗಾಗುವುದು ನಿಜಕ್ಕೂ ಅದು ಪ್ರೀತಿನಾ ಅದು ಕೊನೆಯವರೆಗೂ ಉಳಿಯುತ್ತಾ ಎಂದು ಯೋಚಿಸಲು ಸಹ ಅವಕಾಶವಿಲ್ಲದಂತೆ ತಮ್ಮನ್ನು ತಾವು ಬದುಕಿನ/ಪ್ರೀತಿಯ ಪರೀಕ್ಷೆಗೆ ಒಡ್ಡಿ ಕೊಳ್ಳುತ್ತಾರೆ. ಆಕರ್ಷಣೆ ಮುಗಿಯುತ್ತಿದ್ದಂತೆ ಬದುಕು ಅಸಹನೀಯವಾಗುತ್ತದೆ. ಯಾಕೆಂದರೆ ಅವರದು ವಯೋ ಸಹಜ ಆಕರ್ಷಣೆ. ಬದುಕಿಗೆ ಪ್ರೀತ ಬೇಕು ಪ್ರೀತಿಯೇ ಬದುಕಲ್ಲ ಎನ್ನುವುದರ ಅರಿವು ಇರುವುದಿಲ್ಲ. ಬದುಕಲು ಹಣ ಬೇಕು, ಹಣ ಬೇಕೆಂದರೆ ದುಡಿಯಬೇಕು, ದುಡಿಯುವ ಮಾರ್ಗವೇ ತಿಳಿದಿಲ್ಲ ಆಗಲೇ ಬದುಕು ಕಟ್ಟಿಕೊಳ್ಳುತ್ತೇವೆ ಜೊತೆಯಾಗಿ ಎಂದರೆ ಸಾಧ್ಯವಾಗದು. ತಾವು ಜೊತೆಯಾಗುತ್ತೇವೆ ಎಂದುಕೊಂಡು ಮನೆಯಿಂದ ಪೋಷಕರಿಂದ ದೂರ ಹೋಗುವಾಗ ಮನೆಯಿಂದ ಕೊಂಡ್ಯೊಯ್ದ ಪುಡಿಗಾಸು ಮುಗಿಯುತ್ತಿದ್ದಂತೆ. ಬದುಕು ಇಷ್ಟೇ ಎನ್ನಿಸಿಬಿಡುಂತ್ತದೆ. ಪ್ರೀತಿ ಎಂದುಕೊಂಡದ್ದು
ಅಸಹನೀಯವಾಗುತ್ತದೆ.  ಕಾರಣ ಬದುಕಿನ ಬಗೆಗೆ ಕಲ್ಪನೆಯೇ ಇಲ್ಲ. ಅದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಎಲ್ಲವೂ ಮುಗಿದೇ ಹೋಯ್ತು ಎನ್ನುವಂತಹ ಅನುಭವವಾಗುವುದು. ಆಗ ಆ ಬಂದ(ನ)ದಿಂದ ಮುಕ್ತಿಗಾಗಿ ವಿಚ್ಛೇದನ, ಆತ್ಮ ಹತ್ಯೆಯಂತಹ ಗಂಭೀರ ಸ್ವರೂಪದ ನಿರ್ಧಾರಕ್ಕೆ ಬರುತ್ತಾರೆ. “ಬದುಕು ಬದುಕಲಾರದಷ್ಟು ಭೀಕರವಲ್ಲ, ಅಂದುಕೊಂಡಷ್ಟು ಸರಳವೂ ಅಲ್ಲ” ಎನ್ನುವ ಸತ್ಯದ ಅರಿವಾಗಬೇಕು ಅಂಥ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ.  ಹೌದು ವಿವಾಹ ಅದರ ನಂತರದ ಬದುಕು ಅವುಗಳ ಬಗೆಗೆ ನಮ್ಮ ಯುವ ಜನಾಂಗಕ್ಕೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ನಮ್ಮಂಥ ಸಾಂಪ್ರದಾಯಿಕ ಸಮಾಜದಲ್ಲಿ ನಿರೀಕ್ಷೆಯೂ ಸರಿಯಲ್ಲ. ಇಷ್ಟು ಮಾತ್ರವಲ್ಲದೇ ಅವರ ನಿರ್ಧಾರಗಳಿಗೆ ಇಂಬು ದೊರೆಯಲು ಅವರ ಆರ್ಥಿಕ ಭದ್ರತೆಯೂ ಪೂರಕವಾಗಿರಬೇಕು. ಅದು ಸರಿಯಾಗಿದ್ದರೆ  ಕಷ್ಟದಲ್ಲೂ ಸೈರಿಣೆಯಿಂದ ಬದುಕುವ ಸಾಧ್ಯತೆಗಳನ್ನು ಒದಗಿಸಿದಂತಾಗುತ್ತದೆ. ಹಾಗಿದ್ದಾಗಲೂ ನಿರ್ಧಾರಗಳು ಚಿಂತನೆಯನ್ನು ನಿರೀಕ್ಷಿಸುತ್ತವೆ.

            ಇಂಥ ಕ್ಷಣಿಕ ನಿರ್ಧಾರಗನ್ನುನಮ್ಮ ಯುವ ಜನತೆ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಭಾವಿಸುವುದು ಸಹ ನಮ್ಮ ಕ್ಷಣಿಕ ನಿರ್ಧಾರವಾದೀತು. ಏಕೆಂದರೆ ನಮಗೆ ಇತಿಹಾಸವಿದೆ. ಅದರ ಪರಿಪಾಠ ನಮ್ಮಲ್ಲೂ ಮೈಗೂಡಿದೆ. ‘ನಭೂತೋ ನಭವಿಷ್ಯತಿ’ಎನ್ನುವಂತೆ ನಮ್ಮ ಭೂತ ನಮ್ಮನ್ನು ಬೆನ್ನಟ್ಟಿ ಭವಿಷ್ಯದಲ್ಲೂ ಜೊತೆಗಿರುತ್ತದೆ.  ಹೇಗೆ ಎನ್ನುವುದನ್ನು ನೋಡೋಣ ನಮ್ಮ ಬಾದಷಹ ‘ಮೊಹಮ್ಮದ್ ಬೀನ್ ತುಘಲಕ್’  ತೆಗೆದುಕೊಳ್ಳುತ್ತಿದ್ದ ತಕ್ಷಣದ ನಿರ್ಧಾರಗಳಿಂದ ಜನತೆ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ರಾಜಧಾನಿಯನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ(ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ)ಸ್ಥಳಾಂತರಿಸಿದಾಗ ಜನ, ದನ, ಪಶು, ಪಕ್ಷಿಗಳು ಅನುಭವಿಸಿದ ನೋವಿನ ತೀವ್ರತೆಯನ್ನು ಹೇಳಿದರೆ ಪರಿಮಕಾರಿಯಾಗಿರುವುದಿಲ್ಲ. ಅನುಭವಿಸಿದವರೇ ಬಲ್ಲರು. ಸುಲ್ತಾನನಿಗೆ ಬುದ್ಧಿ ಇರಲಿಲ್ಲ ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ಆತನೋ ಭಯಂಕರ ಮೇಧಾವಿ. ಪರ್ಷಿಯನ್ ಅರೇಬಿಕ್ ಭಾಷೆಗಳಲ್ಲಿ ಪಂಡಿತ. ಸಾಹಿತ್ಯ ಧರ್ಮ ಖಗೋಳ ಶಾಸ್ತ್ರ ತರ್ಕಶಾಸ್ತ್ರ,ತತ್ವಶಾಸ್ತ್ರ ಗಣಿತಶಾಸ್ತ್ರಗಳಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದನು. ಆತನ ಜ್ಞಾನ ನಾಲ್ಕು ಐದು ಶತಮಾನದಷ್ಟು ಮುಂದಿತ್ತು ಎಂದರು ಸರಿಯೆ. ಅಂಥಹ ಚಾಣಾಕ್ಷ.

      ಯಾಕೆ ನಾನು ಇತಿಹಾಸದಿಂದ ಇಂಥ ಮೇಧಾವಿಯನ್ನು ಉದಾಹರಿಸಿದೆ ಎಂದರೆ ಆತನ ನಿರ್ಧಾರಗಳು, ಯೋಜನೆಗಳನ್ನು ಜಾರಿಗೊಳಿಸುವ ಕ್ರಮ, ಅಂದಿನ ಪರಿಸ್ಥಿತಿಯ ಕುರಿತು ಕುಳಿತು ಸರಿಯಾದ ರೀತಿಯಲ್ಲಿ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ  ಆತನಲ್ಲಿ ಇರಲಿಲ್ಲ. ಬುದ್ಧಿವಂತಿಕೆ ವ್ಯವಹಾರ ನೈಪುಣ್ಯತೆಯ ಕೊರತೆಯಿಂದಾಗಿ  ಏಕಾಏಕೀ ನಿರ್ಧಾರ ಕೈಕೊಳ್ಳುತ್ತಿದ್ದುದರ ಪರಿಣಾಮವಾಗಿತ್ತು. ಅದರೆ ಅಂದಿನ ರಾಜಕೀಯ ಸ್ಥಿತಿಗತಿಗಳಿಗೆ  ಅದು ಅನಿವಾರ್ಯವಾಗಿತ್ರು, ಬದಲಾವಣೆ ಪೂರ್ವನಿರ್ಧಾರಿತವಾಗಿದ್ದರೆ,ವ್ಯವಸ್ಥಿತವಾಗಿದ್ದರೆ..‌..
ಉತ್ತಮ ಆಡಳಿತ ವ್ಯವಸ್ಥೆಯನ್ನು ಕೊಟ್ಟ ಕೀರ್ತಿ ಆತನದಾಗಿರುತ್ತಿತ್ತು
      ಅಂದರೆ ಒಂದು ನಿರ್ಧಾರ ಅದು ಬಹುಮುಖ ಚಿಂತನೆಯಿಂದ
ಕೂಡಿರಬೇಕು. ಅದರಿಂದ ವಿರುದ್ಧ ಪರಿಣಾಮಗಳಾದರೂ ಅವು ಆಶಾಶ್ವತವಾಗಿದ್ದು ವೈರುದ್ಯಗಳಿಗೂ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವಂತಹ ನಿರ್ಧಾರಗಳನ್ನು ಮೊದಲೆ  ಮಾಡಿಕೊಂಡರೆ ಅದು ಯಶಸ್ವಿಯಾಗುತ್ತದೆ. ಹಾಗೆ ಅದರ  ಬಗೆಗೆ ವಿವರವಾದ ಆಲೋಚನೆಗಳು  ವಿಭಿನ್ನ ಆಯಾಮಗಳಿಂದ ನಡೆದು ಅದಕ್ಕೆ ತಕ್ಕುದಾದ ಅನುಸರಣೀಯ  ಮಾರ್ಗೋಪಾಯಗಳನ್ನು ಕಂಡುಕೊಂಡೇ  ನಿರ್ಧಾರ ಕೈಕೊಂಡರೆ, ಅಂದರೆ , ಒಂದು ನಿರ್ಧಾರದ ಹಿಂದೆ ಅದರ ಒಳಿತು ಕೆಡುಕುಗಳನ್ನು ನಾವು ಸ್ವೀಕರಿಸುವ  ಪರಿಸ್ಥಿತಿಯನ್ನು ಸಹ ಅರಿತುಕೊಂಡು  ನಿರ್ಧರಿಸಿದಾಗ  ಅದು ಸಹಜವಾದ ನಿರ್ಧಾರವಾಗುತ್ತದೆ. ಪರಿಣಾಮ ಯಾವಾಗಲೂ ಒಳ್ಳೆಯವೆ ಆಗಿರುತ್ತವೆ.  ಯೋಚಿಸಿ ಕೈಕೊಂಡಿದ್ದರಿಂದ ಅದಕ್ಕೆ  ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿರುತ್ತದೆ, ಇದು ಕಷ್ಟವೆನಿಸದು. ಇನ್ನು ರಾಜಕೀಯ ಕ್ಷೇತ್ರದಲ್ಲಂತು ಇದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.

            ಇಂದಿನ ತಾಂತ್ರಿಕ ಯುಗದಲ್ಲಿ ಇದು ಅತ್ಯಗತ್ಯ.. ಕಾರಣ  ನಿರ್ಧಾರಗಳು ಸಾರ್ವತ್ರಿಕವಾಗಿರುವುದರಿಂದ  ಅದರ ಪರಿಣಾಮಗಳು ಇನ್ನು ಭೀಕರವಾಗಿರುವುದರಿಂದ  ನಿರ್ಧಾರದ ಹಿಂದಿನ ಪರಿಣಾಮಗಳ ಆಳವಾದ ಜ್ಞಾನ ಮುಖ್ಯ.


ಭಾರತಿ ಅಶೋಕ್

One thought on “ಒಂದು ನಿರ್ಧಾರದ ಸುತ್ತಾ-ಭಾರತಿ ಅಶೋಕ್

Leave a Reply

Back To Top