ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಇತಿಹಾಸ ಮರುಕಳಿಸುತ್ತದೆ

ನಮ್ಮ ಇತಿಹಾಸವನ್ನು ಒಮ್ಮೆ ಹಿಂದಿರುಗಿ ನೋಡಿದಾಗ ಹಿಸ್ಟರಿ ರಿಪೀಟ್ ಎಂಬ ಪದಗಳು ಮತ್ತೆ ಮತ್ತೆ ನಮ್ಮನ್ನು ಕೆಣಕುತ್ತಿರುತ್ತವೆ. ಅದೇ ಹಿಂದಿನ ಐತಿಹಾಸಿಕ ಬಟ್ಟೆಗಳು, ಉಡುಗೆ ತೊಡುಗೆ, ಆಚರಣೆಗಳು, ಬಳಕೆಯ ವಸ್ತುಗಳು, ಹಬ್ಬಗಳು ಎಲ್ಲವೂ ಮತ್ತೆ ಮತ್ತೆ ತಿರುಗಿ ತಿರುಗಿ ಬಂದು ಅದನ್ನೇ ಜನ ಬಳಸುವುದು ಕಾಣುತ್ತದೆ. ಎಲ್ಲಾ ಜನರೂ ವಿವಿಧ ತರಹದ, ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸಿದರೂ ಕೂಡ ಅವು ಒಂದಲ್ಲ ಒಂದು ಕಾಲದಲ್ಲಿ ರಾಜಮಹಾರಾಜರು ಧರಿಸಿದ ಧಿರಿಸುಗಳ ವಿಧ, ಉಣ್ಣೆ,ಹತ್ತಿ ಬಟ್ಟೆ, ನಾರು, ರೇಷ್ಮೆ, ಚಿನ್ನ, ಬೆಳ್ಳಿಯ ದಾರದಿಂದ ಹೆಣೆದ ಬಟ್ಟೆಗಳು ಇವುಗಳನ್ನು ಕಾಣುತ್ತೇವೆ. ಇದರ ಜೊತೆ ಜೊತೆಗೇ ಆಧುನಿಕ ವೈಜ್ಞಾನಿಕ ತಾಂತ್ರಿಕ ಬಟ್ಟೆಗಳ ಸಮಾಗಮ ಬೆರೆತು ಹೋಗಿದೆ. ಒಟ್ಟಿನಲ್ಲಿ ಹಿಂದಿನ ಯಾವುದೇ ವಸ್ತುಗಳು ಇಂದು ಪುರಾತನವಾದ ಜೊತೆಗೆ ಅಲ್ಪ ಸ್ವಲ್ಪ ಬದಲಾವಣೆ ಹೊಂದಿ ಹೊಸದಾಗಿ ಮಾರ್ಪಟ್ಟು, ಬಳಕೆ ಆಗುತ್ತಿದೆ ಎಂದರೆ ತಪ್ಪಲ್ಲ ಅಲ್ಲವೇ?

ಬದುಕು ಹಾಗೆಯೇ. ಹೊಸತೇನಿದೆ ಅಂತ ಕೇಳುವವರಿಗೆ ಹಳತು ಬಾಟಲಿಯಲ್ಲಿ ಹೊಸ ವೈನ್ ಎಂಬ ಹಾಗೆ! ಮತ್ತೆ ತಿರುಗಿ ಬಂದ ಹೊಸ ವಸಂತ. ಪಾಶ್ಚಾತ್ಯರ ಅನುಕರಣೆಯಿಂದ ಆದಂತಹ ಹುಟ್ಟು ಸಾವುಗಳ, ಮದುವೆ , ಪೂಜೆ ಮೊದಲಾದ ಆಚರಣೆಗಳು ಸುಲಭದ ವಿಧಾನವನ್ನು ಅನುಸರಿಸಿ ಅದನ್ನು ಸಮಯದ ಅಭಾವದ ಕಾರಣ ಏಳು ದಿನಗಳ ಆಚರಣೆ ಒಂದೆರಡು ದಿನಗಳಿಗೆ ಸೀಮಿತಗೊಂಡಿದೆ. ಒಂದು ದಿನದ ಪೂಜೆ ಒಂದು ಹೊತ್ತಿನ ಊಟದ ಜೊತೆಗೆ ಮುಗಿಯುತ್ತದೆ. ಅಲ್ಲದೆ ಆಚರಣೆಗಳ ಹಂತವೂ ಬದಲಾಗಿದೆ. ದನದ ಬದಲು ಬೆಳ್ಳಿಯ, ಚಿನ್ನದ ಇಲ್ಲವೇ ತಾಮ್ರದ ದನದ ಪುತ್ತಳಿ ಬಳಸುವ ಕಾಲ ಬಂದಿದೆ. ಎಲ್ಲವೂ ಕಡಿಮೆ ಖರ್ಚಿನಲ್ಲಿ ಬೇಗ ಮುಗಿದು ಹೋಗುವ ಕಾರ್ಯಕ್ರಮಗಳೇ ಎಲ್ಲಾ.

ಆಚರಣೆ, ಹಬ್ಬ ಹರಿದಿನ ಹಾಗಾದರೆ, ಇನ್ನೂ ಉಳಿದ ಪ್ರವಾಸ, ಕಾರ್ಯಕ್ರಮಗಳಿಗೆ ಹೊಸ ತಿರುವು ಸಿಕ್ಕಿದೆ ಅಷ್ಟೇ. ಬಸ್ಸು, ಕಾರು, ರೈಲು, ವಿಮಾನ, ತಮ್ಮದೇ ಸ್ವಂತ ವಾಹನಗಳಲ್ಲಿ ಒದಾಡುವ ನಾವು ಮಜವಾಗಿ ಆಗೊಮ್ಮೆ ಈಗೊಮ್ಮೆ ಹಳ್ಳಿಯಲ್ಲಿ ಬಳಸುತ್ತಿದ್ದ ಕುದುರೆಗಾಡಿ, ಎತ್ತಿನಗಾಡಿಯಲ್ಲಿ ಓಡಾಡಿ ಸಂತಸ ಪಡುತ್ತೇವೆ ಅಲ್ಲವೇ?
ಒಟ್ಟಿನಲ್ಲಿ ಹಳೆ ಬೇರು ಹೊಸ ಚಿಗುರು. ಬದುಕು ಇಷ್ಟೇ. ಒಂದಿಷ್ಟು ಚೇಂಜ್. ಒಂದಿಷ್ಟು ರಿಲ್ಯಾಕ್ಸ್ ಅಲ್ಲವೇ? ಏನಂತೀರಿ?

————————————–

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top