ಅಣ್ಣಾ ಐ ಲವ್ ಯೂ

ಅಣ್ಣಾ ಐ ಲವ್ ಯೂ

ಸುಜಾತಾ ರವೀಶ್

ನಮ್ಮ ತಂದೆಯನ್ನು ನಾವು ಕರೆಯುತ್ತಿದ್ದುದು ಅಣ್ಣ ಎಂದು.ಅವರ ಬಗ್ಗೆ ಬರೆಯಬೇಕೆಂದರೆ ಏನು ಬರೆಯುವುದು. ಎಷ್ಟು ಬರೆದರೂ ಅದು ಸಾಗರದಲ್ಲಿನ ಬೊಗಸೆ ನೀರಿನಷ್ಟೇ.ಕಣ ಕಣದಲ್ಲೂ ಅಣು ಅಣುವಿನಲ್ಲೂ ಅವರದೇ ನೆನಪು ತುಂಬಿರುವಾಗ ಏನನ್ನಾದರೂ ಬರೆಯುತ್ತೇನೆ ಅಂದುಕೊಂಡರೆ ಅದು ಬರೀ ಕ್ಲೀಷೆಯಾಗಬಹುದೇನೋ ಎಂಬ ಭಯ.ಪ್ರತಿ ಹೆಣ್ಣು ಮಗುವಿಗೂ ಅವಳ ಅಪ್ಪನೇ ಬದುಕಿನ ಹೀರೋ ಎಂದರೆ ತಪ್ಪಾಗಲಾರದು. ನನಗೂ
ಹಾಗೇ. ಚಿಕ್ಕಂದಿನಿಂದ ಅಪ್ಪ ಎಂಬ ಈ ಅದ್ಭುತ ನನ್ನ ಕಣ್ಣ ಮುಂದೆ ಮಾಯಾ ಲೋಕವನ್ನೇ ಬಿಚ್ಚಿಟ್ಟ ಮಾಂತ್ರಿಕ.ಅ ಆ ಇ ಈ A B C D ಯಿಂದ ಹಿಡಿದು ಬಾಳಿನೆಲ್ಲಾ ಗಹನ ವಿಷಯಗಳಿಗೆಲ್ಲಾ ಅವರೇ ನನ್ನ ಶಿಕ್ಷಕˌಬೀಜಗಣಿತದಿಂದ ಹಿಡಿದು ಬೈರಪ್ಪರವರೆಗೂˌಕುವೆಂಪು ರಾಮಾಯಣ ದರ್ಶನಂ ನಿಂದ ಹಿಡಿದು ಗುಲ್ಜಾರರ ಗಜಲ್ ವರೆಗಿನ ದಾರಿಯ ಮಾರ್ಗದರ್ಶಕ.ಜೀವನದ ಪ್ರತಿಯೊಂದು ವಿಷಯಗಳನ್ನು ಆಸ್ವಾದಿಸುತ್ತಿದ್ದ ಪರಿˌಮತ್ತದೇ ಕಲೆಯನ್ನು ನಾವು ಮೂವರು
ಜನ ಅಕ್ಕ ತಂಗಿಯರಲ್ಲೂ ಬೆಳೆಸಿದ ರೀತಿ ಅನನ್ಯ.ಮೂರೂ ಹೆಣ್ಣೇ?ಎಂದು ಮೂಗು ಮುರಿದವರ ಮುಂದೆ ನನ್ನ ಮೂರೂ ಮಕ್ಕಳು ಮೂರು ಮುತ್ತುಗಳು ಎಂದು ಹೇಳಿ ಅಂತೇ ಬೆಳೆಸಿದ ಮಹಾನ್ ವ್ಯಕ್ತಿ ನನ್ನಪ್ಪ.ನನ್ನಲ್ಲಿನ ಸಾಹಿತ್ಯಾಸಕ್ತಿ ನನ್ನಪ್ಪನಿತ್ತ ವರವೇ. ಇಂದು ಅವರಿದ್ದಿದ್ದರೆ ಈ ಸಾಹಿತ್ಯಿಕ ಬಳಗಗಳಲ್ಲಿ ಮತ್ತು ಅಡುಗೆ ಗುಂಪುಗಳಲ್ಲಿ ಆಸಕ್ತಿ ವಹಿಸಿ ಹೆಚ್ಚಿನ ಮಟ್ಟದಲ್ಲಿ ಗುರುತಿಸಿ ಕೊಳ್ಳುತ್ತಿದ್ದರೇನೋ. ಪದಬಂಧಗಳನ್ನು ಬಿಡಿಸಲೆಂದೇ ಭಾನುವಾರದ ದಿನ ಹೆಚ್ಚಿನ ಪತ್ರಿಕೆಗಳನ್ನು ತರಿಸಿ ನಮ್ಮಲ್ಲಿ ಆ ಹುಚ್ಚನ್ನು ತುಂಬಿದರು. ಬದುಕಿನಲ್ಲಿ ಹಣವೊಂದೇ ಮುಖ್ಯವಲ್ಲˌ ಸಂಬಂಧಗಳು ಮೌಲ್ಯಗಳು ಆದರ್ಶಗಳು ಮುಖ್ಯ ಎಂದು ನಂಬಿˌ ನಡೆದು ನಮ್ಮಲ್ಲೂ ಅದೇ ಮನೋಭಾವ ತುಂಬಿದರು. ಇಂದು ಜೀವನದಲ್ಲಿ ನಾವೇನಾದರೂ ಯಶಸ್ಸು ಕಂಡಿದ್ದರೆ ಅದಕ್ಕೆಲ್ಲಾ ನನ್ನ ಅಪ್ಪ ಚಿಕ್ಕಂದಿನಲ್ಲಿ ಕಲಿಸಿದ ಪಾಠಗಳೇ ಕಾರಣ.ಇಂದಿನ ವ್ಯಕ್ತಿತ್ವ ವಿಕಸನ ಲೇಖನಗಳಲ್ಲಿ ಬರಹಗಳಲ್ಲಿ ಕಾಣಬರುವ ಎಷ್ಟೋ ವಿಷಯಗಳನ್ನು (ಉದಾಹರಣೆಗೆ think out of box concept) ನಮ್ಮಪ್ಪ ಚಿಕ್ಕಂದಿನಲ್ಲೇ ಹೇಳಿದ್ದ ನೆನಪು. ಇನ್ನು ಅವರ ನಳಪಾಕವಂತೂ ಮರೆಯಲೇ ಸಾಧ್ಯವಿಲ್ಲ. ಪ್ರೀತಿಯಿಂದ ನಮ್ಮಿಷ್ಪದ ತಿಂಡಿಗಳನ್ನು ಮಾಡಿಕೊಡುತ್ತಿದ್ದ ಮಮತೆ ಮರೆಯಲು ಸಾಧ್ಯವೇ?ಮಂಗಳೂರು ಬಜ್ಜಿಯಂತೂ ಅವರ signature dish ಆಗಿ ಆಪ್ತವಲಯದಲ್ಲೆಲ್ಲಾ ಪ್ರಖ್ಯಾತಿ ಹೊಂದಿತ್ತು.

ನಮ್ಮ ಬಾಳೊಂದು ಕಾದಂಬರಿ ಎಂದುಕೊಂಡರೆ ಅದರ ಕತೃಗಳು ಮತ್ತು ಮೂಲಪಾತ್ರಗಳು ತಾಯಿ ತಂದೆ ತಾನೇ? ಅವರಿಲ್ಲದ ಜೀವನ ನೆನೆಸಿಕೊಳ್ಳುವಂತೆಯೇ ಇಲ್ಲ. ಅಪ್ಪ ಎಂಬ ಆಲದ ಮರದ ನೆರಳಿನಲ್ಲಿ ನಾವು ನಿಶ್ಚಿಂತ ನಿರಮ್ಮಳ ನಿರ್ಭೀತ . ಹಾಗಾಗಿಯೇ ಜಾನಪದರು ಹೇಳಿದ್ದು

ತಂದೀಯ ನೆನೆದಾರೆ ತಂಗಳ ಬಿಸಿಯಾಯ್ತು
ಹಡದವ್ವ ನನತಾಯಿ ಗಂಗವ್ವ ನೆನೆದರೆ ಮಾಸಿದ ತಲೆಯು ಮಡಿಯಾಯ್ತು .

ಸಾಮಾನ್ಯ ಭಾವನೆ ಏನಪ್ಪಾ ಅಂದರೆ ಅಮ್ಮನೆಂದರೆ ವಾತ್ಸಲ್ಯದ ಕಡಲು. ಅಪ್ಪ ಶಿಸ್ತು ಜಾಸ್ತಿ ಸಲಿಗೆ ಕಡಿಮೆ ಅಂತ. ಆದರೆ ನನ್ನಪ್ಪನೊಡನೆ ಒಡನಾಟ ಜಾಸ್ತಿ ನನಗೆ. ಭಯವಿತ್ತು ಆದರೆ ತಪ್ಪು ಮಾಡಿದಾಗ ಮಾತ್ರ . ಕೋಪ ಬಂದಾಗ ಎಷ್ಟು ಕಠಿಣವಾಗಿ ವರ್ತಿಸುತ್ತಿದ್ದರೋ ಅಷ್ಟೇ ನಂತರ ಕಾರುಣ್ಯದ ಮೂರ್ತಿ ಸಹ. ಹೆಚ್ಚು ಸಿಟ್ಟು ಬರಿಸದೇ ವಿಧೇಯಳಾಗಿರುತ್ತಿದ್ದ ನನಗೆ ಹೆದರುವ ಪ್ರಸಂಗಾನೂ ಕಮ್ಮಿ ಮತ್ತೆ ತುಂಬಾ ಸೂಕ್ಷ್ಮ ಸಂವೇದಿ ನನ್ನ ಅಣ್ಣ. ಹೆಂಗರಳು ಸಹ .ಅದಕ್ಕೆ ಪೂರಕವಾಗಿ ಈ ಸಂದರ್ಭಗಳನ್ನು ನೆನಪಿಸಿಕೊಳ್ಳಬೇಕು .

ನಾನು ಐದಾರು ವರ್ಷದವಳು. ಅಣ್ಣಾ ಮದರಾಸಿಗೆ ಆಗಾಗ ಕೆಲಸದ ಪ್ರಯುಕ್ತ ಹೋಗುತ್ತಿದ್ದರು. ಅಲ್ಲಿ ಚಿಕ್ಕ ಮಕ್ಕಳು ಉಡುವ ಪುಟ್ಟ ಸೀರೆ ದೊರೆಯುತ್ತಿತ್ತು. ಪಕ್ಕದ ಮನೆಯವರ ನನ್ನದೇ ವಯಸ್ಸಿನ ಅವರ ಮಗಳಿಗೆ ಅದನ್ನು ತಂದು ಕೊಡಿ ಎಂದಾಗ ಈ ಬಾರಿ ಆ ಕಡೆ ಹೋಗಲ್ಲ ಮುಂದಿನ ಸಾರಿ ತಂದು ಕೊಡುವೆ ಎಂದರು. ಯಾಕೆ ಹೀಗೆ ನೆಪ ಹೇಳಿದರು ಎಂದು ಅಮ್ಮನಿಗೆ ಅರ್ಥವಾಗಲಿಲ್ಲ. ಅಣ್ಣನ ಕೇಳಿದಾಗ “ಅವರ ಮಗಳಿಗೆ ತಂದುಕೊಟ್ಟು ಸುಜಾತಂಗೆ ತರದಿದ್ರೆ ಪಾಪ ಅವಳಿಗೆ ಎಷ್ಟು ಬೇಸರವಾಗಬಹುದು ಊಹಿಸಿದ್ದೀಯಾ? ಮುಂದಿನ ಬಾರಿಯಷ್ಟು ಹೊತ್ತಿಗೆ ದುಡ್ಡು ಹೊಂದಿಸಿಕೊಂಡು ಇಬ್ಬರಿಗೂ ತರ್ತೀನಿ” ಅಂದಿದ್ದನ್ನ ನಾನೇ ಕೇಳಿಸಿಕೊಂಡಿದ್ದೆ. ಅವರು ದುಡ್ಡು ಕೊಟ್ಟು ತರಿಸಿಕೊಂಡರು ನಮ್ಮ ಅಣ್ಣನ ಬಳಿ ದುಡ್ಡಿಲ್ಲ ಅದಕ್ಕೆ ತರಲಿಲ್ಲ ಎಂದು ಅರ್ಥ ಮಾಡಿಕೊಳ್ಳುವ ವಯಸ್ಸು ಖಂಡಿತ ಅದಾಗಿರಲಿಲ್ಲ. ನಂತರ ಸ್ವಲ್ಪ ದೊಡ್ಡವಳಾದ ಮೇಲೆ ಅವರ ಆ ಸೂಕ್ಷ್ಮ ಅರ್ಥೈಸುವಿಕೆ ಪರಾನುಭೂತಿ ಮತ್ತು ಅದರ ಹಿಂದಿನ ನನ್ನ ಬಗೆಯ ಪ್ರೀತಿಯ ಆಳ ಅರ್ಥವಾಗಿತ್ತು.
ಅದಕ್ಕೇ ನನ್ನ ಅಣ್ಣ ಯಾವಾಗಲೂ ಗ್ರೇಟ್ ಅನ್ನೋದು ನಾನು.

ಮತ್ತೊಂದು ಸಂದರ್ಭ ನನ್ನ ಮೊದಲನೆಯ ತಂಗಿಯ ಮದುವೆ ಆಗಷ್ಟೇ ಮುಗಿದಿತ್ತು. ನಾವಾಗ ಸಕಲೇಶಪುರದಲ್ಲಿ ಉದ್ಯೋಗನಿಮಿತ್ತ ಇದ್ದೆವು. ಮದುವೆಯಾಗಿ
೪_ ೫ ದಿನಗಳ ನಂತರ ಹಿಂದಿರುಗಿದ್ದು. ಮದುವೆಯ ತಿಂಡಿಗಳ ಒಂದು ದೊಡ್ಡ ಬ್ಯಾಗ್ ಅಣ್ಣನೇ ಪ್ಯಾಕ್ ಮಾಡಿದ್ದರು. ಬೆಳಗಿನ ಜಾವ ಹೊರಡುವಾಗ ಆ ಬ್ಯಾಗ್ ಮರೆತುಹೋಯಿತು. ಕಚೇರಿಯಿಂದ ಸಂಜೆ ಮನೆಗೆ ಹಿಂದಿರುಗಿದಾಗಲೇನಮಗೆ ಇದು ತಿಳಿದದ್ದು. ತಕ್ಷಣ ಮನೆಗೆ ಮೈಸೂರಿಗೆ ಫೋನಾಯಿಸಿ “ಇನ್ನೆರಡು ದಿನದಲ್ಲಿ ಮತ್ತೆ ಬರಬೇಕು ಆಗ ಕೊಂಡೊಯ್ಯುವೆ “ಎಂದರೆ ಅಷ್ಟರಲ್ಲಾಗಲೇ ಬ್ಯಾಗ್ ನನಗೆ ತಲುಪಿಸಲು ಅಣ್ಣ ಸಕಲೇಶಪುರಕ್ಕೆ ಹೊರಟಾಗಿತ್ತು . ಮದುವೆಯ ಆಯಾಸ ಇನ್ನೂ ಕಡಿಮೆಯಾಗಿರಲಿಲ್ಲ. ಆದರೂ ನಾನು ತಿನ್ನಲಿ ಎಂಬ ಮಮತೆ ಈ ಕಾಳಜಿ ಕಕ್ಕುಲಾತಿ ಹೆಂಗರುಳಿನ ನನ್ನ ಅಣ್ಣನಿಗಲ್ಲದೆ ಇನ್ನಾರಿಗೆ ಇರಲು ಸಾಧ್ಯ? ಅದಕ್ಕೆ ಅಪ್ಪಾ ಅಪ್ಪಾ ನಂಗೆ ನೀನು ಬೇಕಪ್ಪಾ ಅನ್ನಿಸ್ತಾನೇ ಇರೋದು.

ಮೊಗೆಯುತ್ತಾ ಹೋದರೆ ಬತ್ತದ ಒರತೆ ಅಣ್ಣನೊಡನಿನ ಆ ಸವಿ ಮಧುರ ಗಳಿಗೆಗಳು. ಈಗ ಬರೀ ಮೆಲಕು ಹಾಕುವುದಷ್ಟೇ ನನಗೆ ಉಳಿದಿರುವುದು.

ಅಣ್ಣಾ ನೀವು ತೋರಿಸಿದ ಪರಾನುಭೂತಿ ಪರರ ಕಷ್ಟದ ಕಡೆಗೆ ಸಂಕಟದ ಕಡೆಗೆ ಮಿಡಿಯುವ ಮನಸ್ಸು ಜೀವನದುದ್ದಕ್ಕೂ ನಮಗೆ ಬೆಂಗಾವಲಾಗಿ ಕಾದಿದೆ. ನೀವು ಬಿತ್ತಿದ ಅಕ್ಷರ ಪ್ರೀತಿಯ ಬೀಜ ಈಗ ಹೆಮ್ಮರವಾಗಿದೆ ಆದರೆ ಫಲ ಕಾಣುವ ಮೊದಲೇ ಕಾಲನ ಕರೆಗೆ ನೀವು ಹೋಗುತ್ತಿದ್ದು ಮಾತ್ರ ಎಂದಿಗೂ ಅಳಿಸಲಾಗದ ವಿಷಾದದ ಬರಹ.

ನಿಮ್ಮ ಬಗ್ಗೆ ಏನೆಂದು ಬರೆಯಲಿ ಹೇಗೆಂದು ಬರೆಯಲಿ ಬರೆಯುವಾಗಲೆಲ್ಲಾ ಕಣ್ಣಂಚು ಆರ್ದ್ರವಾಗುತ್ತದೆ, ಕಣ್ಣೀರ ಹನಿಗಳಲ್ಲಿ ಅಕ್ಷರಗಳು ಮಂಜಾಗುತ್ತವೆ . ಅಕ್ಷರ ತಿದ್ದಿಸಿದಾಗಿನಿಂದ ಹಿಡಿದು ಆಧ್ಯಾತ್ಮದ ಬೋಧೆಯವರೆಗಿನ ಗುರುವೆಂದೇ ಜೀವನದ ಪ್ರತಿ ಹೆಜ್ಜೆಯಲ್ಲೂ ಕೈಹಿಡಿದು ನಡೆಸಿದ ಮಾರ್ಗದರ್ಶಿಯೆಂದೇ ಈಗಲೂ ಮೇಲಿಂದ ನಮ್ಮ ಕಷ್ಟ ಸುಖಗಳನ್ನು ನೋಡಿ ನಲಿವಲ್ಲಿ ಸಂತೋಷಿಸಿ ನೋವಿಗೆ ಧೈರ್ಯತುಂಬಿ ದಾರಿ ತೋರುತ್ತಿರುವ ಆ ದೇವರ ಪ್ರತಿರೂಪವೆಂದೇ …..ಶಬ್ದಗಳು ಅಸಮರ್ಥ ಪದಗಳು ಅಸಹಾಯಕ
ಭಾವವೊಂದೇ ಪ್ರಾಧಾನ್ಯ ಅನುಭಾವವಷ್ಟೇ ಶಾಶ್ವತ .

ಅಣ್ಣˌ ನೀವಿಂದು ನಮ್ಮೊಂದಿಗೆ ಭೌತಿಕವಾಗಿ ಇರದಿದ್ದರೂ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿದ್ದೀರಿ. ಸಂತಸದ ಸಂಧರ್ಭಗಳಲ್ಲಿ ನಿಮ್ಮ ನೆನೆದು ಕಣ್ಣಂಚು ಆರ್ದ್ರ. ದುಃಖದ ವಿಷಯಗಳನ್ನಂತೂ ನಿಮ್ಮೊಡನೆ ಹಂಚಿಕೊಳ್ಳುತ್ತಾ ಕಂಬನಿ.ಮುಂದೆಲ್ಲಾ ಜನ್ಮಗಳಲ್ಲೂ ನೀವೇ ನನ್ನ ಅಪ್ಪನಾಗಬೇಕು.
ಇಲ್ಲವೇ ನಾ ನಿಮಗೆ ಅಮ್ಮನಾಗಿ ಈ ಜನ್ಮದ ಋಣಭಾರ ಕಡಿಮೆ
ಮಾಡಿಕೊಳ್ಳಬೇಕು.ಅದಕ್ಕೇ ಅಣ್ಣಾˌ ಸಾವೆಂದರೆ ನನಗೆ ಅಂಜಿಕೆಯಿಲ್ಲ. ಏಕೆಂದರೆ ಆಗ ನಾನು ಮತ್ತೆ ನಿಮ್ಮನ್ನು ಭೇಟಿ ಆಗಬಹುದಲ್ಲಾ!

-[—–

Leave a Reply

Back To Top