ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ಬೆವರ ಬೆಲೆ
ಬೆವರನು ಹರಿಸುತ ದಿವಸವು ದುಡಿಯುತ
ಭವದಲಿ ಸುಖವನನುಭವಿಸು..
ಮಾಡುತ ಕಾಯಕ ನೋಡುವೆ ಗೆಲುವನು
ಬಾಡದು ಸಿರಿಯು ಬದುಕಿನಲಿ..
ಕೆಲಸದಿ ತರತಮ ಮಲಿನವ ಕಾಣದೆ
ತಿಳಿಯಲು ಬೇಕು ಸಮರಸವ ..
ಹೊಟ್ಟೆಯ ಹೊರೆಯಲು ರಟ್ಟೆಗೆ ಬಲವಿದೆ
ಗಟ್ಟಿಗನಾಗು ದುಡಿಯುತಲಿ..
ಕೆಸರಲಿ ಕಳವೆಯು ಹಸಿರನು ತೋರುತ
ಹಸಿವೆಗೆ ಮದ್ದು ನೀಡುವುದು..
ಬಿತ್ತಲು ಹೊಲದಲಿ ಬತ್ತವು ಬೆಳೆಗಳು
ಸುತ್ತಲು ಕಣ್ಣ ತುಂಬುವವು🌾
ಮೇಟಿಯ ಕಾರ್ಯವು ಕೋಟಿಯ ತರುವುದು
ತೋಟದಿ ಬದುಕು ಚಿಗುರುವುದು.🌱
ಮೇಟಿ = ಕೃಷಿ ವಿದ್ಯೆ,ಕಳವೆ=ಬತ್ತ;ತರತಮ = ಭೇದ ಭಾವ .
ಗುಣಾಜೆ ರಾಮಚಂದ್ರ ಭಟ್
Very nice