ಶಶಿಕಲಾ ಪಿ. ಕವಿತೆ-ಬಾಬಾಸಾಹೇಬ

ಕಾವ್ಯ ಸಂಗಾತಿ

ಶಶಿಕಲಾ ಪಿ.

ಬಾಬಾಸಾಹೇಬ

ಕತ್ತಲೆಯ ಮನೆಗೆ ಬೆಳಕ ಕೊಟ್ಟವ,
ಜ್ಞಾನದ ಬೆಳಕ..!
ಬೆಳಕ ಕೊಟ್ಟು
ಬೆಳಕಿನಿಂದ ಬೆಳಕಿಗೆ ನಡೆಸಿದವ.

ನನ್ನ ಜನಕೆ ಹಾರಲು ರೆಕ್ಕೆ ಕಟ್ಟಿದವ,
ಸ್ವಾಭಿಮಾನದ ರೆಕ್ಕೆ..!
ಸ್ವಾಭಿಮಾನಕ್ಕೆ ಧಕ್ಕೆ
ಬಂದಕಡೆ ನಿನ್ನ ಚಪ್ಪಲಿಯನ್ನು..
ಬಿಡಬೇಡ ಎಂದವ.

ಪೊರಕೆ ಹಿಡಿದ ಕೈಗೆ
ಪುಸ್ತಕ ಕೊಟ್ಟವ,
ಪುಸ್ತಕ ಕೊಟ್ಟು
ಮಸ್ತಕವ ಬೆಳಗಿಸಿದವ..!

ಇತಿಹಾಸ ಕಲಿತವ,
ಇತಿಹಾಸ ಕಲಿಸಿದವ,
ಇತಿಹಾಸ ಮರೆತವ
ಇತಿಹಾಸ ಸೃಷ್ಟಿಸಲಾರ ಎಂದವ..
ಇತಿಹಾಸ ಸೃಷ್ಟಿಸಿದವ..!

ಆದಿಯಿಂದ ಅಂತ್ಯಕ್ಕಲ್ಲ,
ಅಂತ್ಯದಿಂದ ಆದಿಗೆ
ನಮ್ಮ ಕರೆದೊಯ್ದವ,
ಈ ನೆಲದ ನಿವಾಸಿಗಳ
ಮೂಲ ತೋರಿದವ..!

ಓದಿದವ
ಓದುವುದಕ್ಕಾಗಿ ಅತ್ತವ
ಓದಿ ಓದಿ ಓದಿ
ಓದಿದ್ದನ್ನೆಲ್ಲ ಬರೆದವ

ತಾ ಬರೆದಿದ್ದನ್ನೆಲ್ಲ
ಜಗ ಓದಲೆಂದು ಬಿಟ್ಟು
ಹೊರಟವ

ನನ್ನ ದೇಶಕೆ
ಸಂವಿಧಾನವ ಕೊಟ್ಟವ..


ಶಶಿಕಲಾ ಪಿ., ಚಾಮರಾಜನಗರ

3 thoughts on “ಶಶಿಕಲಾ ಪಿ. ಕವಿತೆ-ಬಾಬಾಸಾಹೇಬ

Leave a Reply

Back To Top