ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿತೆ

ಅನಸೂಯ ಜಹಗೀರದಾರ

ಒಂಟಿ ಗುಬ್ಬಿ ಚಿಂತಿಸುತ್ತಿತ್ತು
ಇಂದು ಸಿಕ್ಕ ಚಿಗುರು
ನಾಳೆಯೂ ದೊರಕಬಹುದೆ

ಗೂಡಿನಲಿ ಮೊಟ್ಟೆಗಳಿವೆ
ಕಾವು ಕೊಡಬೇಕಿದೆ
ಇನ್ನೇನು
ಮೊಟ್ಟೆಯೊಡೆದು
ಮರಿ ಜೀವ ತಳೆಯುತ್ತವೆ
ಗುಟುಕ ಕೊಡಲು
ಮತ್ತೂ ಹಸಿರು ಉಳಿಯಬಹುದೆ

ಏಕಾಂಗಿ ನಾನಿಲ್ಲಿ
ಜೊತೆಗಾರ ದೂರದಲ್ಲಿ
ಮತ್ತೊಂದು ಜಲಾಶಯ
ಹುಡುಕುತ್ತ
ಪಯಣಿಸಿರಬಹುದು

ಮತ್ತೆ ಬರಬಹುದೆ
ಮರಿ ಕಣ್ಬಿಟ್ಟಾಗ
ಅವುಗಳ ಕಾಣಲು

ಮತ್ತೆ ಸಿಗಬಹುದೆ
ರೆಕ್ಕೆ ಬಡಿದು ಪುಕ್ಕ ಉದುರಿಸಿ
ಜೊತೆಗೂಡಿದ
ಆ ದಿನಗಳು

ಇದೆಲ್ಲ ಇಲ್ಲಿ ಚಿಂತಿಸುತ್ತಿರುವಂತೆ
ಎಲ್ಲ ನೆನಪನು
ಮೆಲುಕು ಹಾಕುವಂತೆ
ಅಲ್ಲಿಯೂ ಮಿಡಿದಿರಬಹುದೆ
ಜೊತೆಗಾರನೆದೆಯಲ್ಲಿ

ಕಾವಿಕ್ಕಿ ಮೇವುಣಿಸಿ
ಬೆಳಸಬೇಕಲ್ಲ ಮರಿಗಳ
ರೆಕ್ಕ ಪುಕ್ಕ ಬಂದು
ಹಾರಿ ಹೋಗುವತನಕ

ಈ ಎಲ್ಲ ಹೊಣೆ
ತನ್ನದೇ ಮಾತ್ರವೇಕೆ..??

ಜೊತೆಗಾರ ಬಂದಾನೆ
ಜೊತೆಯಲ್ಲಿ ನಿಂದಾನೆ..!!

ಗುಬ್ಬಿ ಚಿಂತಿಸುತ್ತಿತ್ತು
ಮತ್ತೆ ಮತ್ತೆ ನೆನಪ
ಮೆಲುಕು ಹಾಕುತ್ತಿತ್ತು


About The Author

Leave a Reply

You cannot copy content of this page

Scroll to Top