ಕಾಡಜ್ಜಿ ಮಂಜುನಾಥ ಕವಿತೆ-ಬುದ್ಧ ನಗುತ್ತಿದ್ದಾನೆ !!

ಕಾವ್ಯ ಸಂಗಾತಿ

ಬುದ್ಧ ನಗುತ್ತಿದ್ದಾನೆ !!

ಕಾಡಜ್ಜಿ ಮಂಜುನಾಥ

ಅಧಿಕಾರದ ಆಸೆಗೆ ಹಣವಂಚುವ
ಜನಗಳು ಮತದಾರರಿಗೆ ಬಾಗಿ
ಮುಂದೆ ಅವರನ್ನೆ ಬಗ್ಗಿಸುವವರ ಕಂಡು !
|ಬುದ್ಧ ನಗುತಿದ್ದಾನೆ |

ಕುರ್ಚಿಯ ಮೋಹಕೆ ಬಲಿಯಾಗಿ
ಆಳುವ ದೊರೆಗಳು ನೋವುಂಡರು
ಮುಸಿ ನಗುವುದನ್ನು ಕಂಡು!
|ಬುದ್ಧ ನಗುತ್ತಿದ್ದಾನೆ|

ಯಜಮಾನಿಕೆ ಪ್ರವೃತ್ತಿಯ ನರಿಗಳು
ಜಾತಿ ಧರ್ಮದ ಹೆಸರಲಿ ಅಧಿಕಾರವ
ಹುಡುಕುವುದನ್ನು ಕಂಡು!
|ಬುದ್ಧ ನಗುತ್ತಿದ್ದಾನೆ|

ಬಡವರ ಬರಿದಾದ ಒಡಲಿಗೆ
ಆಮಿಷಗಳ ಆಹಾರವಂಚಿ
ನಿತ್ಯ ಉಪವಾಸವಾಗಿಡುವವರನ್ನು ಕಂಡು !
|ಬುದ್ಧ ನಗುತ್ತಿದ್ದಾನೆ|

ರಾಜಕಾರಣೀಗಳು ಕೊಡುವ ಹಣ
ಹೆಂಡ,ವಸ್ತುಗಳ ಪಡೆದ ನರರು
ಸಂಕಟಕೆ ಅವರ ಮುಂದೆ ತಲೆಬಾಗಿ
ಬೇಡುವುದನು ಕಂಡು!
|ಬುದ್ಧ ನಗುತ್ತಿದ್ದಾನೆ|

ವೈಭೋಗವ ತೊರೆದಂತೆ ಕಾವಿಧಾರಿಗಳು
ವೇಷಧರಿಸಿ, ಕಾಮ ಪಿಶಾಚಿಗಳಾಗುತ್ತಿರುವುದನ್ನು
ಕಂಡು
|ಬುದ್ದ ನಗುತ್ತಿದ್ದಾನೆ|

ಉನ್ನತ ಶಿಕ್ಷಣ ಪಡೆದ ವಿದ್ವಾಂಸರು
ವಿದ್ಯಾರ್ಥಿಗಳ ತಲೆಯಲ್ಲಿ
ಜಾತಿಯ‌ ವಿಷ ಬೀಜವ ಬಿತ್ತುವುದನ್ನು
ಕಂಡು
|ಬುದ್ಧ ನಗುತ್ತಿದ್ದಾನೆ|

ದುರಾಸೆಗಳ ಪರಿಣಾಮದ ಅರಿವು
ಇದ್ದರೂ ಜನರು ಧನ, ಕನಕ,ಆಸ್ತಿ ,ಅಂತಸ್ತುಗಳ ಬಲಿಯಾಗುತ್ತಿರುವುದನ್ನು ಕಂಡು
|ಬುದ್ದ ನಗುತ್ತಿದ್ದಾನೆ|


One thought on “ಕಾಡಜ್ಜಿ ಮಂಜುನಾಥ ಕವಿತೆ-ಬುದ್ಧ ನಗುತ್ತಿದ್ದಾನೆ !!

  1. ಅದ್ಭುತವಾದ ಸಾಲುಗಳು ಸಾರ್

Leave a Reply

Back To Top