ಲಕ್ಷ್ಮೀದೇವಿ ಪತ್ತಾರ ಕವಿತೆ-ಶೂನ್ಯ ಪೀಠ

ಕಾವ್ಯ ಸಂಗಾತಿ

ಶೂನ್ಯ ಪೀಠ

ಲಕ್ಷ್ಮೀದೇವಿ ಪತ್ತಾರ

ತಿಳಿಯದೆ ಬಸವಕಲ್ಯಾಣವೆಲ್ಲಾ ಹುಡುಕಿದ್ದೆ
ಶರಣರ ಶೂನ್ಯ ಪೀಠವ
ಹೇಗಿರುವುದು, ಎಲ್ಲಿಹುದು
ಎಂದು ತಲೆ ಕೆಡಿಸಿಕೊಂಡೆದ್ದೆ

ಶೂನ್ಯ ಪೀಠವೆಂಬುದು ಭೌತಿಕ ವಸ್ತು
ಎಂದು ನಾನಾಗ ತಿಳಿದಿದ್ದೆ

ಚಾಮರಸರ ಪ್ರಭುಲಿಂಗ ಅರಿತ ಮೇಲೆ
ವೇಧ್ಯವಾಯಿತು
ಅಲ್ಲಮನ ಬರುವಿಗಾಗಿ
ಭಕ್ತಿ ಭಂಡಾರಿ ಬಸವಣ್ಣ ಸಿದ್ಧ ಪಡಿಸಿದ ಹದಗೊಂಡ ಹೃದಯ ಕಮಲವೇ
ಆ ದಿವ್ಯ ಪೀಠ ಎಂದು

ನಿಜ ಶರಣರಿಗೆ ಮಾತ್ರ ತೋರುವ
ಬಯಲು ಮಂದಿರದಿ ನೆಲೆ ನಿಂತ ಜಂಗಮಪೀಠವದು

ಅನುಭವ ಮಂಟಪವೇ ಧರೆಗಿಳಿದ ಕೈಲಾಸ
ಅಕ್ಕ ಮಹಾದೇವಿಯೆ ಮಾಯೆ
ಅಲ್ಲಮ ಪ್ರಭುವೇ ಮಹಾದೇವ
ಸತ್ಯ ಪಥದಿ ನಡೆದ ಶರಣರೆಲ್ಲರು
ಶಿವಗಣ

ಶರಣರ ಸತ್ಸಂಗವೆ ಪರಶಿವನ ಆಭರಣ
ವಚನಗಳೆ ಹರಿಯುವ ಗಂಗಾಜಲ
ಅರಗಿಸಿಕೊಂಡು ನಡೆದರೆ ಮೋಕ್ಷಕ್ಕೆ ಸಾಧನ


2 thoughts on “ಲಕ್ಷ್ಮೀದೇವಿ ಪತ್ತಾರ ಕವಿತೆ-ಶೂನ್ಯ ಪೀಠ

Leave a Reply

Back To Top