ಕಾವ್ಯ ಸಂಗಾತಿ
ಕವಿತೆ
ರೇಖಾ ಭಟ್
ಬಿತ್ತಿದ ಬೀಜವೊಂದು
ಮನದೊಳಗೆ
ಮೊಳೆಮೊಳೆದು
ಆಗಾಗ
ಹೊಳೆಹೊಳೆದು
ಹಸಿರಾಗಿ ಎದೆ ಬಯಲಲಿ
ಹರಡಿ
ಹೂ ಬಿಟ್ಟು
ದುಂಬಿ ಪಾತರಗಿತ್ತಿಯರ
ಕರೆದು
ಹೂವ ಕಾಯಾಗಿಸಿ
ಕಾಯ್ಗಳು ತೂಗಾಡಿ
ಮಾಗಿ ಹಣ್ಣಾಗಿ
ತೊಟ್ಟು ಕಳಚಿಕೊಂಡು
ನಿಮ್ಮ ಅಂಗೈಲಿ ಬಿದ್ದಿದೆ
ಹುಳುಕೆಷ್ಟೋ
ಪಾಲು ಪಡೆದ ಹುಳವೆಷ್ಟೊ
ತಿರುಳ ಸವಿ
ನಿಮಗೊಗ್ಗುವುದೋ
ಇಷ್ಟವಾದರೆ ನಿಮಗೆ
ಅದು ನಿಮ್ಮದು
ಒಗ್ಗದೇ
ನೆಲ ಸೇರಿದರೆ
ಮತ್ತೆ ಬಸಿರಾಗುವ ಕಾಯ
ಭೂತಾಯಿಯದು
Very nice dear