ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಜಿ.ಎಸ್. ಶರಣು

ಯಾತಕ್ಕಾಗಿ? ಯಾರಿಗಾಗಿ?.

ಮನುಷ್ಯನಿಂದ ಮನುಷ್ಯನ
ನೆತ್ತರ ಹರಿಯುತ್ತಿದೆ
ಯಾತಕ್ಕಾಗಿ? ಯಾರಿಗಾಗಿ?
ಈ ಪ್ರಶ್ನೆಗಳಿಗೆ ಉತ್ತರವಿಲ್ಲದೆ

ಅವನು ಅಲ್ಲಾಹನ ಆರಾಧಕ
ಎನ್ನುವನು
ಇವನು ಶ್ರೀರಾಮನ ಭಕ್ತ
ಅನ್ನುವನು
ಇವರಿಬ್ಬರ ಜಗಳಕ್ಕೆ ಮತ್ತೊಬ್ಬನ
ನೆತ್ತರ ಹರಿಯುತ್ತಿದೆ

ಅವನು ಮುಸ್ಲಿಂ ಧರ್ಮದ
ಬೆಳವಣಿಗೆಗಾಗಿ ಎನ್ನುವನು
ಇವನು ಹಿಂದೂ ಧರ್ಮದ
ರಕ್ಷಣೆಗಾಗಿ ಅನ್ನುವನು
ಇವರಿಬ್ಬರ ಕಾದಾಟಕ್ಕೆ ಅಲ್ಲೊಬ್ಬನ
ನೆತ್ತರ ಹರಿಯುತ್ತಿದೆ

ಅವನು ಮಾತು ಎತ್ತಿದ್ರೆ
ಕುರಾನ್ ಅಂತಾನೆ
ಇವನು ಬಾಯ್ಬುಟ್ರೆ
ಭಗವದ್ಗೀತೆ ಅಂತಾನೆ
ಅವೇನು ಹೇಳ್ತಾವೇ? ಹೇಳ್ರೋ ಅಂದ್ರೇ
ಗೊತ್ತಿಲ್ಲ ಅಂತಾರೆ
ಗುಂಪು ಕಟ್ಕೊಂಡು
ನಡುಬೀದಿಯಲ್ಲಿ ಹೊಡೆದಾಡಿ
ನೆತ್ತರ ಹರಿಸ್ತಾರೆ

ದೇವರು ಧರ್ಮ ಗ್ರಂಥ
ಯಾತಕ್ಕಾಗಿ? ಯಾರಿಗಾಗಿ?
ಇವೆಲ್ಲವೂ ಮನುಷ್ಯನ ರಕ್ಷಣೆಗಾದರೆ
ಮನುಷ್ಯತ್ವದಿಂದ ಬದುಕಿ
ಅದನ್ನೆಲ್ಲವೂ ಬಿಟ್ಟು
ರಕ್ಷಣೆ ರಕ್ಷಣೆ ಅನ್ನುತ್ತ
ಮನುಷ್ಯನ ನೆತ್ತರ ಹರಿಸಬೇಡಿ

ಇಂದು ನೀವು ನೂರು ಜನ
ಮುಸಲ್ಮಾನರನ್ನ ಹುಟ್ಟು ಹಾಕಿ
ನಾಳೆ ಅವರು ಸಾವಿರ ಜನ
ಹಿಂದೂಗಳನ್ನ ತಯಾರಿಸಲಿ
ಒಂದಿನ ನಾನು ಲಕ್ಷ ಜನರನ್ನ
ಮನುಷ್ಯರನ್ನಾಗಿ ಬದಲಾಯಿಸುತ್ತೇನೆ


ಜಿ.ಎಸ್. ಶರಣು

Leave a Reply

Back To Top