ಬರಿದಾಯಿತು ಬಾಳೆಲ್ಲ..!

ಕಾವ್ಯ ಸಂಗಾತಿ

ಬರಿದಾಯಿತು ಬಾಳೆಲ್ಲ..!

ಶಂಕರಾನಂದ ಹೆಬ್ಬಾಳ

ನಿನ್ನ ಪ್ರೇಮ ಪತ್ರಗಳು
ಲೆಕ್ಕವಿಲ್ಲದಷ್ಟು ಬಿದ್ದಿವೆ
ಹೃದಯ ಹಾಳು ಗುಜರಿ
ಅಂಗಡಿಯಾಗಿದೆ,
ಹಾಳೆಗಳಲ್ಲ ಗೆದ್ದಲು
ಹತ್ತಿಹೋಗಿವೆ
ಉಳಿದಿದ್ದೇನು..?
ಮನವೆ ಖಾಲಿಯಾಗಿದೆ..

ನೀನು ಮಾತ್ರ ಜೀವಂತ
ಎದೆಯೊಳಗೆ ನೀ ಹಚ್ಚಿದ
ಜ್ಯೋತಿ ಉರಿಯುತ್ತಿದೆ
ನೋಟದೊಳಗೆ ಚುಚ್ಚಿ
ಅನುಕ್ಷಣವು ಬೆಂಬಿಡದೆ
ಒಳಗೊಳಗೆ ಕೊಲ್ಲುತ್ತಿದೆ..

ಅತೃಪ್ತ ನೋವುಗಳು
ಅವ್ಯಕ್ತ ಭಾವಗಳು
ಭುಗಿಲೆದ್ದು ಉದ್ವಿಗ್ನಭಾವದಿ
ರಣಕೇಕೆ ಹಾಕುತ್ತಿವೆ..
ಜೀವ ಹಿಂಡುವ
ಹಣಹದ್ದುಗಳಾಗಿ
ಎದೆಯನ್ನು
ನೋಯಿಸುತ್ತಿವೆ…!

ಮನವು ಗೆದ್ದಲಿನ ಗೂಡಾಗಿತೇ..?
ಕನಸುಗಳ ತೇರು ಮುರಿಯಿತೇ..?
ಜೀವನದ ದೋಣಿ
ದಡಸೇರದಾಯಿತೇ..?
ವಿಧಿಯ ಶಪಿಸಿದೆ…
ಅಯ್ಯೋ..!
ಒಳಗಿನ ಪ್ರೇಮದ ಬೇಗುದಿ
ಆರದಾಯಿತೇ..?

ಭಗ್ನಗೊಂಡ ಕನಸುಗಳ ಹೊತ್ತೆ
ನನಸಾಗದ ಸ್ವಪ್ನಲೋಕದಲ್ಲಿ
ತೇಲಲೂ ಇಲ್ಲ…!
ಮುಳುಗಲೂ ಇಲ್ಲ..!
ಅವಳಿದ್ದರೆ ಇದೆಲ್ಲ…
ಬರಿದಾಯಿತು ಬಾಳೆಲ್ಲ…!


ಶಂಕರಾನಂದ ಹೆಬ್ಬಾಳ

Leave a Reply

Back To Top