ಪ್ರಸ್ತುತ

Image result for photos of swamy vivekananda

ವಿವೇಕಾನಂದರ ಆಶಯ

ಗಣೇಶಭಟ್ ಶಿರಸಿ

ಸ್ವಾಮಿ ವಿವೇಕಾನಂದರ ಆಶಯಗಳು ವಾಸ್ತವವಾಗುವ ಬಗೆ……


ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಅವರ ಫೋಟೊ ಇಟ್ಟು, ಹೂ ಹಾಕಿ, ಅವರ ಆದರ್ಶಗಳನ್ನು ಪಾಲಿಸಿ ಎಂದು ಭಾಷಣಗಳ ಸುರಿಮಳೆಯೂ ಆಯಿತು. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಾಸ್ತವವಾಗಿಸುವ ಬಗೆ ಹೇಗೆಂದು ಯಾವೊಬ್ಬ ಭಾಷಣಕಾರರೂ ಹೇಳಲಿಲ್ಲ. ಅವರ ಹೆಸರಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳುತ್ತಿರುವವರೂ ಸಹ ಸ್ವಾಮೀಜಿಯ ಉನ್ನತ ಆದರ್ಶಗಳನ್ನು ಭೂಮಿಗಿಳಿಸುವ ವ್ಯವಹಾರಿಕ ಚಿಂತನೆಯ ಕುರಿತಾಗಿ ಎಂದೂ ಹೇಳುವುದಿಲ್ಲ. ಯಾಕೆಂದರೆ, ವಿವೇಕಾನಂದರ ವಿಶ್ವೈಕ್ಯ ದೃಷ್ಟಿಕೋನವನ್ನು ಸಂಕುಚಿತ ರೂಪದಲ್ಲಿ ಪ್ರಸ್ತುತಪಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಹೆಚ್ಚು.
ಸ್ವಾಮಿ ವಿವೇಕಾನಂದ ಆಶಯಗಳು ಆಧ್ಯಾತ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವ್ಯಕ್ತಿ ಮತ್ತು ಸಮಷ್ಠಿಯ ಸರ್ವತೋಮುಖ ಅಭಿವೃದ್ಧಿಯ ಕುರಿತು ಅವರು ಹೇಳುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ ‘ನಾವು ಬೇಕಾದಷ್ಟು ಅತ್ತಿರುವೆವು, ಇನ್ನು ಸಾಕು. ನಿಮ್ಮಕಾಲಿನ ಮೇಲೆ ನಿಂತು ಪುರುಷ ಸಿಂಹರಾಗಿ. ಪುರುಷ ಸಿಂಹರನ್ನು ಮಾಡುವ ಧರ್ಮ, ಅಂತಹ ಸಿದ್ಧಾಂತ ನಮಗಿಂದು ಬೇಕಾಗಿದೆ. ಸರ್ವತೋಮುಖವಾದ ಪುರುಷ ಸಿಂಹರನ್ನು ಮಾಡುವ ವಿದ್ಯಾಭ್ಯಾಸ ಇಂದಿನ ಅಗತ್ಯತೆ’.
ಮುಂದುವರಿದು ಸ್ವಾಮೀಜಿ ಹೇಳುತ್ತಾರೆ. ‘ಗಿಳಿಯಂತೆ ಮಾತನಾಡುವುದೊಂದು ನಮ್ಮ ಬಾಳಿನ ಚಾಳಿಯಾಗಿದೆ. ಏನನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಶಾರೀರಿಕ ದುರ್ಬಲತೆಯೇ ಇದಕ್ಕೆ ಕಾರಣ. ಇಂತಹ ದುರ್ಬಲ ಮಿದುಳು ಏನನ್ನೂ ಸಾಧಿಸಲಾರದು. ನಾವು ಅದನ್ನು ಪುಷ್ಟಿಗೊಳಿಸಬೇಕು. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ನಿಮ್ಮಬಾಹುಗಳ ಮಾಂಸಖಂಡದಲ್ಲಿ ಸ್ವಲ್ಪ ಶಕ್ತಿಯಿದ್ದರೆ ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ’.
ಹಸಿದ ಹೊಟ್ಟೆಗೆ ಧರ್ಮೋಪದೇಶ ಮಾಡುವುದನ್ನು ವಿವೇಕಾನಂದರು ಒಪ್ಪುವುದಿಲ್ಲ. ಭಾರತದ ಉದ್ದಗಲಕ್ಕೂ ಓಡಾಡಿದ, ಪ್ರಪಂಚದ ಹಲವು ದೇಶಗಳನ್ನು ನೋಡಿದ ಸ್ವಾಮೀಜಿಯವರು ಹೇಳುತ್ತಿದ್ದುದು, ‘ಶಕ್ತಿಯೇ ಪ್ರಪಂಚದ ಮಹಾ ವ್ಯಾಧಿಗೆ ದಿವ್ಯೌಷಧ. ಶ್ರೀಮಂತರ ದಬ್ಬಾಳಿಗೆಗ ತುತ್ತಾದಾಗ ದೀನರಿಗೆ ಬೇಕಾಗಿರುವುದೇ ಶಕ್ತಿ ಸಂಜೀವಿನಿ. ಜ್ಞಾನಿಗಳ ಉಪಟಳಕ್ಕೆ ತುತ್ತಾದಾಗ ಅಜ್ಞಾನಿಗಳಿಗೆ ಬೇಕಾಗಿರುವುದು ಶಕ್ತಿ ಸಂಜೀವಿನಿ’.
ವಿವೇಕಾನಂದರು ಹೇಳುತ್ತಾರೆ ‘ಬಡವರ ಗೋಳಿಗೆ ಯಾರ ಹೃದಯ ರಕ್ತಸುರಿಸುವುದೋ ಅವನನ್ನು ಮಹಾತ್ಮನೆಂದು ಕರೆಯುತ್ತೇನೆ. ಇಲ್ಲದೇ ಇದ್ದರೆ ಅವನು ದುರಾತ್ಮ. ಎಲ್ಲಿಯವರೆಗೆ ಉಪವಾಸದಲ್ಲಿ, ಅಜ್ಞಾನದಲ್ಲಿ ಕೊಟ್ಯಾನುಕೋಟಿ ಭಾರತೀಯರು ನರಳುತ್ತಿರುತ್ತಾರೋ ಅಲ್ಲಿಯವರೆಗೂ , ದೀನದ ದುಡಿತದಿಂದ ಕೃತವಿದ್ಯನಾದ ಪ್ರತಿಯೊಬ್ಬ ಭಾರತೀಯನೂ ಕುಲಘಾತುಕನೆಂದು ಹೇಳುತ್ತೇನೆ’ ಸ್ವಾಮೀಜಿಯವರ ಈ ಮಾತನ್ನು ಇಂದಿನ ನೇತಾರರು, ಮಠಾಧೀಶರು, ಉದ್ಯಮಪತಿಗಳು ಗಮನಿಸಬೇಕಿದೆ.
ಸಮಾಜದಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆಗೆ ನಾವು ಅನುಸರಿಸುತ್ತಿರುವ ಬಂಡವಾಳವಾದಿ ವ್ಯವಸ್ಥೆಯೇ ಕಾರಣ. ಬಂಡವಾಳಶಾಹಿಗಳಿಗೇ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸುತ್ತಿರುವ, ಹೂಡಿಕೆದಾರರಿಂದಲೇ ದೇಶದ ಉದ್ದಾರವೆಂಬಂತೆ ವರ್ತಿಸುವ ನೇತಾರರಿಗೆ ಈ ವಿಷಯ ಅರ್ಥವಾದರೂ, ಅವರ ಸ್ವಾರ್ಥ ಮನೋಭಾವದಿಂದಾಗಿ ಜನಪರ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಹಿಂದಿನ ಜನ್ಮದ ಪಾಪ, ಪುಣ್ಯಗಳಿಂದಲೇ ಬಡವ, ಶ್ರೀಮಂತರಾಗುತ್ತಾರೆಂಬ ತಪ್ಪು ಕಲ್ಪನೆಯನ್ನು ಮಠಾಧೀಶರು, ಪುರೋಹಿತಶಾಹಿಗಳು ಪ್ರಚಾರ ಮಾಡಿ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿದ್ದಾರೆ. ದೇಶದ ಭೌಗೋಳಿಕ ಗಡಿಯ ಕುರಿತಾದ ಘೋಷಣೆಗಳೇ ದೇಶಭಕ್ತಿಯೆಂದು ಪ್ರಚಾರಮಾಡುವ ಹುಸಿ ರಾಷ್ಟ್ರಾಭಿಮಾನಿಗಳು ದೇಶವಾಸಿಗಳನ್ನು ಪ್ರೀತಿಸಲಾರದೇ ಜಾತಿ, ಮತ, ಪಂಥಗಳ ಆಧಾರದಲ್ಲಿ ದ್ವೇಷ ಹಬ್ಬಿಸಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ವಿವೇಕಾನಂದರ ಉಪನ್ಯಾಸಗಳನ್ನು ಓದಿ, ಸರಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ ಹುಸಿ ದೇಶ ಭಕ್ತರ ಅಂದಾಭಿಮಾನಿಗಳ ಕಣ್ತೆರೆಯಬಲ್ಲದು.
ಸ್ವಾಮೀಜಿ ಹೇಳುತ್ತಾರೆ, ‘ಮಗು ! ಯಾವ ದೇಶವಾಗಲಿ, ವ್ಯಕ್ತಿಯಾಗಲಿ ಮತ್ತೊಬ್ಬನನ್ನು ದ್ವೇಷಿಸಿ ಬಾಳಲಾರದು. ಮ್ಲೇಚ್ಛರೆಂಬ ಪದವನ್ನು ಕಂಡು ಹಿಡಿದು ಹೊರಗಿನವರೊಂದಿಗೆ ಸಂಪರ್ಕವನ್ನು ನಿಲ್ಲಿಸಿದ ದಿನದಿಂದಲೇ ಭಾರತದ ಭಾಗ್ಯ ಅವನತಿಗೆ ಇಳಿಯಿತು’. ಮತೀಯ ದ್ವೇಷದ ಭಾವೋನ್ಮಾದದಲ್ಲಿ ನರಳುತ್ತಿರುವವರು ಗಮನಿಸಲೇಬೇಕಾದ ಹೇಳಿಕೆ ಇದು.

Image result for photos of swamy vivekananda


ಆಧ್ಯಾತ್ಮವೆಂದರೆ ವಿಕಾಸವೆಂದು ಸ್ವಾಮೀಜಿ ಹೇಳುತ್ತಿದ್ದರು. ಗುಡಿ, ಮಸೀದಿ, ಚರ್ಚುಗಳಲ್ಲೇ ಭಗವಂತನನ್ನು ಹುಡುಕುವವರಿಗಾಗಿ ಅವರು ಎಚ್ಚರಿಸಿದ ಪರಿ, ‘ಮನುಷ್ಯನು ಒಂದು ಚೈತನ್ಯ ಎಂದು ತಿಳಿಯುವ, ಅನುಭವಿಸುವ ಧೈರ್ಯ ನಮಗೆ ಬೇಕು… ನಾವೇ ಜಗದೀಶ್ವರ ಸ್ವರೂಪಿಗಳೆಂದು ತಿಳಿದು ದೇವರಿಗಾಗಿ ಅಲ್ಲಿ, ಇಲ್ಲಿ ಹುಚ್ಚರÀಂತೆ ಹುಡುಕಾಡುವುದನ್ನು ಬಿಟ್ಟು ಬಿಡುವುದು ಒಳ್ಳೆಯದು…ಹುಚ್ಚು ಹುಡುಕಾಟಗಳನ್ನು ಕೈ ಬಿಟ್ಟು ನಾಟಕದ ಪಾತ್ರಧಾರಿಯಂತೆ ಈ ವಿಶ್ವ ನಾಟಕದಲ್ಲಿ ನಿಮ್ಮ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿರಿ’.
‘ಎಲ್ಲವನ್ನೂ ಭಗವಂತನೆಂದೇ ತಿಳಿದು, ಎಲ್ಲರಲ್ಲೂ ಭಗವಂತನನ್ನೇ ಕಾಣುತ್ತಾ ನಿಮ್ಮ ಕರ್ತವ್ಯಗಳನ್ನು ಮಾಡಬೇಕು.. ಎಲ್ಲದರಲ್ಲೂ ಭಗವಂತನೇ ತುಂಬಿರುವಾಗ ಆತನನ್ನು ಪ್ರತ್ಯೇಕವಾಗಿ ಕಾಣಲು ನಾವೆಲ್ಲಿಗೆ ಹೋಗಬೇಕು?… ಪ್ರತಿಯೊಬ್ಬ ಜೀವಿಯಲ್ಲೂ ದೇವನಿದ್ದಾನೆ.. ಈ ಜೀವ ಸೇವೆಯೇ ದೇವ ಸೇವೆ.”
ಆಧ್ಯಾತ್ಮದ ಬದುಕೇ ಮಾನವ ಧರ್ಮವೆಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಅವರ ಉಪನ್ಯಾಸಗಳಲ್ಲಿ ಅವರು ಬಳಸುತ್ತಿದ್ದ ಧರ್ಮ ಶಬ್ದದ ಅರ್ಥವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ, ಸ್ವಾರ್ಥಿಗಳು, ಧರ್ಮ ಶಬ್ದವನ್ನು ಮತ ಅರ್ಥಾತ್ ನಂಬಿಕೆ, ಆಚರಣೆಗಳಿಗೇ ಸೀಮಿತಗೊಳಿಸಿ ವ್ಯಾಖ್ಯಾನಿಸುತ್ತಿದ್ದಾರೆ.
ಬದುಕಿನ ಸರ್ವಸ್ತರಗಳನ್ನು, ದೃಷ್ಟಿಕೋನವನ್ನು ಆಧ್ಯಾತ್ಮೀಕರಣಗೊಳಿಸಬೇಕೆಂದು ಸ್ವಾಮೀಜಿ ಬಯಸಿದ್ದರು. ‘ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಂದ ಭರತಖಂಡವನ್ನು ತುಂಬುವುದಕ್ಕಿಂತ ಮುಂಚೆ ಆಧ್ಯಾತ್ಮಿಕ ಭಾವನೆಯ ಮಳೆಗರೆಯಿರಿ.. ಮಠಗಳಿಂದ , ಕಾನನಗಳಿಂದ, ತಮಗೆ ಮೀಸಲಾಗಿವೆ ಎಂದು ಭಾವಿಸಿದ ಕೆಲವು ಜನರಿಂದ ಆಧ್ಯಾತ್ಮ ಜ್ಞಾನವನ್ನು ಹೊರಗೆ ತಂದು ಎಲ್ಲರಿಗೂ ಪ್ರಚಾರ ಮಾಡಬೇಕು ಎಂಬುದು ಅವರ ಹೇಳಿಕೆ.
ಆರ್ಥಿಕ ಕ್ಷೇತ್ರವೇ ಇರಲಿ, ಸಾಮಾಜಿಕ ಕ್ಷೇತ್ರವೇ ಆಗಿರಲಿ. ಎಲ್ಲವೂ ಆಧ್ಯಾತ್ಮೀಕರಣಗೊಳ್ಳಬೇಕೆಂಬುದು ಅಂದರೆ ಎಲ್ಲವೂ ಪರಮಾತ್ಮನ ಅಭಿವ್ಯಕ್ತಿ ಎಂಬ ಭಾವನೆ ಮೂಡುವಂತಾಗಬೇಕು. ಸ್ವಾಮಿ ವಿವೇಕಾನಂದರ ಆಶಯ. ಸಮಾಜ ಸುಧಾರಣೆ ರಾಜಕೀಯವನ್ನೂ ಅವುಗಳ ಮೂಲಕ ಹೇಗೆ ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ಹೆಚ್ಚಿಸಬೇಕೆಂಬುದನ್ನು ಲಕ್ಷದಲ್ಲಿಟ್ಟುಕೊಂಡು ಬೋಧಿಸಬೇಕೆಂದು ಅವರು ಹೇಳುತ್ತಿದ್ದರು.
‘ಸಮಾಜದ ಸರ್ವ ಸದಸ್ಯರಿಗೂ ಸಂಪತ್ತು, ವಿದ್ಯಾಭ್ಯಾಸ ಅಥವಾ ಜ್ಞಾನ ಸಂಪಾದನೆಗೆ ಏಕ ಪ್ರಕಾರದ ಅವಕಾಶಗಳಿರಬೇಕು. ಎಲ್ಲ ವಿಷಯಗಳಲ್ಲಿ ಸ್ವಾತಂತ್ರ್ಯವಿರಬೇಕು. ಎಲ್ಲರೂ ಮೋಕ್ಷದ ಕಡೆಗೆ ನಡೆಯುವಂತಾಗಬೇಕು’ ಎನ್ನುತ್ತಿದ್ದರು ಸ್ವಾಮೀಜಿ.
‘ಮನುಷ್ಯರಿಗೆ ದೈಹಿಕವಾಗಿ ಮತ್ತು ವಸ್ತು ಮೂಲಕವಾಗಿ ನೆರವು ನೀಡಿ ಅವರ ಭೌತಿಕ ಅವಶ್ಯಕತೆಗಳನ್ನು ಪರಿಹರಿಸುವುದು ನಿಜವಾಗಿಯೂ ದೊಡ್ಡ ಕೆಲಸ’À.. ನಮ್ಮ ಎಲ್ಲಾ ರೀತಿಯ ಕ್ರಿಯೆಗಳಿಗೂ ಆಧ್ಯಾತ್ಮಿಕತೆಯೇ ಭದ್ರವಾದ ನೈಜ ತಳಪಾಯ…ಆಧ್ಯಾತ್ಮಿಕ ಶಕ್ತಿಯಿಲ್ಲದ ಮನುಷ್ಯನ ಭೌತಿಕ ಅವಶ್ಯಕತೆಗಳು ಸರಿಯಾಗಿ ಪೂರೈಸಲ್ಪಡಲಾರವು’ ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ.
ವಿವೇಕಾನಂದರು ವೇದಾಂತದ ಒಣ ಉಪದೇಶವನ್ನು ನೀಡುತ್ತಿರಲಿಲ್ಲ. ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದರು. ‘ಮೋಕ್ಷವನ್ನು ಪಡೆಯುವುದು ಪ್ರತಿಯೋರ್ವ ಮನುಷ್ಯನ ಹಕ್ಕು. ಈ ವಿಕಾಸ ಪಥದ ಸ್ವಾತಂತ್ರ್ಯವನ್ನು ತಡೆಯುವ ಎಲ್ಲ ರೀತಿಯ ಸಾಮಾಜಿಕ ಕಟ್ಟುಪಾಡುಗಳು ಹಾನಿಕಾರಕ. ಅಂತಹ ಕಟ್ಟುಪಾಡುಗಳನ್ನು ಆದಷ್ಟು ಬೇಗ ಕಿತ್ತೆಸೆಯಬೇಕು. ವಿಕಾಸ ಪಥದಲ್ಲಿ ಮುನ್ನಡೆಯಲು ಸಹಕಾರಿಯಾದ ಎಲ್ಲ ರೀತಿಯ ಸಾಮಾಜಿಕ ವ್ಯವಸ್ಥೆಗಳನ್ನೂ, ಸಂಸ್ಥೆಗಳನ್ನೂ ಬಲಪಡಿಸಬೇಕು’ ಎನ್ನುವುದು ಅವರ ವಿಚಾರಧಾರೆ.
ವಿವೇಕಾನಂದರು ಯಾವುದೇ ನಿರ್ದಿಷ್ಟವಾದ ಆರ್ಥಿಕ ಸಿದ್ಧಾಂತವನ್ನು ಅಥವಾ ಆರ್ಥಿಕ ನೀತಿಯನ್ನು ನೀಡಲಿಲ್ಲವಾದರೂ ಅವರ ಆಶಯಗಳನ್ನು ಆಧ್ಯಾತ್ಮಿಕ ಸಮಾಜವಾದವೆಂದು ಹೇಳುತ್ತಾರೆ.
ಇಂದು ಪ್ರಚಲಿತವಿರುವ ಆರ್ಥಿಕ ಚಿಂತನೆಗಳು ಮತ್ತು ವಾದಗಳು ವಿವೇಕಾನಂದರ ಆಶಯಗಳನ್ನು ಪೂರ್ತಿಗೊಳಿಸುವ ಸಾಮಥ್ರ್ಯ ಹೊಂದಿವೆಯೇ ಎಂದು ಗಮನಿಸಬೇಕಿದೆ. ಕಮ್ಯುನಿಸಂ ವಿಚಾರಧಾರೆಯಲ್ಲಿ ಆಧ್ಯಾತ್ಮಿಕತೆಗೆ ಸ್ಥಾನವೇ ಇಲ್ಲ. ಮಾನವನನ್ನು ಹೆಚ್ಚು ಕಡಿಮೆ ಆರ್ಥಿಕ ಪಶುವೆಂಬ ಗ್ರಹಿಕೆಯ ಆಧಾರದ ಮೇಲೆ ರೂಪಿತವಾದ ಸಿದ್ಧಾಂತವದು. ಮಾನವನ ಭೌತಿಕ ಅಸ್ತಿತ್ವವನ್ನೇ ಸರ್ವಸ್ವವೆಂದು ಪರಿಗಣಿಸಿದ ಕಮ್ಯುನಿಸಂ , ಮಾನವರ ಕನಿಷ್ಠ ಅಗತ್ಯತೆಗಳನ್ನೂ ಪೂರೈಸಲಾರದೇ ವಿಫಲಗೊಂಡು, ತಿರಸ್ಕøತಗೊಂಡಿರುವುದು ಇತಿಹಾಸ.
ಬಂಡವಾಳವಾದಿ ಚಿಂತನೆಗಳ ಆಧಾರವೇ ಮಾನವನ ಸ್ವಾರ್ಥ ಮತ್ತು ಲಾಭಗಳಿಕೆಯ ಹೆಚ್ಚಳ. ಆಧ್ಯಾತ್ಮವನ್ನು ಮತ, ಪಂಥಗಳ ಚೌಕಟ್ಟಿಗೆ ಬಂಧಿಸಿ, ಸ್ವಾರ್ಥ ಸಾಧನೆಯಲ್ಲಿ ಬೆಂಬಲಿಸುವ ವಿಚಾರಧಾರೆಯಿದು. ಮಾನವನ ಸೃಷ್ಟಿಯಲ್ಲದ, ಎಲ್ಲರಿಗೂ ಸಲ್ಲಬೇಕಾದ ಭೌತಿಕ ಸಂಪತ್ತನ್ನು ಕೆಲವರದೇ ಹಕ್ಕು ಎಂದು ಸಾಧಿಸುವ ಚಿಂತನೆಯ ಬಂಡವಾಳವಾದ ಆಧ್ಯಾತ್ಮಿಕ ಬದುಕಿಗೆ ಬಹುದೂರ. ಜನರಲ್ಲಿ ಸುಖಲೋಲುಪತೆಯನ್ನು ಹೆಚ್ಚಿಸಿ ಉನ್ನತ ಆದರ್ಶಗಳಿಂದ ವಿಮುಖರನ್ನಾಗಿಸಿ, ಪ್ರತಿಭಟನೆ ಮನೋಭಾವವನ್ನೇ ಚಿವುಟಿ ಹಾಕುವ, ಬಂಡವಾಳವಾದೀ ವ್ಯವಸ್ಥೆಯಿಂದ ಆಧ್ಯಾತ್ಮಿಕ ಸ್ವಾತಂತ್ರ್ಯದ ಹರಣವಾಗುತ್ತಿರುವುದು ಜನಸಾಮಾನ್ಯರ ಗಮನಕ್ಕೂ ಬರುತ್ತಿಲ್ಲ. ಸಂಪತ್ತಿನ ಗಳಿಕೆ ಮತ್ತು ಸಂಗ್ರಹಣೆಯೇ ಬದುಕಿನ ಪರಮ ಧ್ಯೇಯವೆಂಬ ಮಿಥ್ಯೆಯನ್ನೇ ಪ್ರಚಾರ ಮಾಡಿ ನಂಬಿಸಿ, ಮಾನವರ ಸೂಕ್ಷ್ಮ ಅಸ್ತಿತ್ವದ ಅಭಿವ್ಯಕ್ತಿಗಳಿಗೆ ಅವಕಾಶ ನೀಡದ ಬಂಡವಾಳವಾದ ವಾಸ್ತವದಲ್ಲಿ ಮಾನವ ವಿರೋಧಿ.
ಬಂಡವಾಳಶಾಹಿಗಳು ನಡೆಸುವ ಮತೀಯ ಆಚರಣೆ, ನೀಡುವ ಧನ, ದೇಣಿಗೆಗಳು ತಾವು ಮಾಡುತ್ತಿರುವ ಶೋಷಣೆಯನ್ನು ಮುಚ್ಚಿಕೊಂಡು, ಜನರನ್ನು ದಾರಿ ತಪ್ಪಿಸುವ ಕುತಂತ್ರಗಳು ಜನರನ್ನು ಮತೀಯ ಉನ್ಮಾದಕ್ಕೊಳಪಡಿಸಿ ಪರಸ್ಪರರು ಹೊಡೆದಾಡಿಕೊಂಡಿರುವಂತೆ ಮಾಡಲು ರಾಜಕಾರಣಿಗಳಿಗೆ ಧನ ಬೆಂಬಲ ನೀಡುತ್ತಿರುವವರೂ ಇದೇ ಬಂಡವಾಳಶಾಹಿಗಳು. ಬುದ್ಧಿಜೀವಿಗಳನ್ನು ಹಣದಿಂದ ಖರೀದಿಸಿ, ತಮ್ಮ ಕಾರ್ಯವೈಖರಿಗೆ, ಬೌದ್ಧಿಕ ಸಮರ್ಥನೆ ಪಡೆದು ಜನರು ತಾವು ಒಳಗಾಗಿರುವ ಶೋಷಣೆಯ ಅರಿವಾಗದಂತೆ ಮಾಡುತ್ತಿರುವ ಬಂಡವಾಳವಾದದಿಂದ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ಮಾರಕವಾಗುತ್ತಿದೆ.
ಇನ್ನುಳಿದಂತೆ ಸಮಾಜವಾದ, ಮಿಶ್ರ ಆರ್ಥಿಕನೀತಿ ಮುಂತಾದವು ಎಡಬಿಡಂಗಿ ಚಿಂತನೆಗಳು. ಇವೆಲ್ಲವೂ ಬಂಡವಾಳವಾದಿ ಚಿಂತನೆಯ ವಿವಿಧ ರೂಪಗಳು ಮಾತ್ರ. ಈ ಎಲ್ಲಾ ಸಿದ್ಧಾಂತಗಳು ಪ್ರತಿಪಾದಿಸುವದು ಜನಾಧಿಕಾರ ಮೊಟಕುಗೊಳಿಸುವ ಕೇಂದ್ರೀಕೃತ ಅರ್ಥವ್ಯವಸ್ಥೆಯನ್ನು.
ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶವಿರಬೇಕು. ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಅವಕಾಶವಿರಲೇಬೇಕು. ಇದು ಸಾಧ್ಯವಾಗುವುದು ಸಹಕಾರಿ ರಂಗದ ಜನಾಧಿಕಾರದ ವಿಕೇಂದ್ರೀಕೃತ ಅರ್ಥನೀತಿಯಿಂದ ಮಾತ್ರ. ಅಂತಹ ಆರ್ಥಿಕ ಸಿದ್ಧಾಂತವೇ ಶ್ರೀ ಪ್ರಭಾತ್ ರಂಜನ್ ಸರ್ಕಾರರಿಂದ 1959ರಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಗತಿಶೀಲ ಉಪಯೋಗ ತತ್ವ – ಸಂಕ್ಷಿಪ್ತದಲ್ಲಿ ಪ್ರಉತ.
ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯನ್ನು ಖರೀದಿ ಶಕ್ತಿಯ ಮೂಲಕ ನೀಡಲೇಬೇಕೆಂಬ ಉದ್ದೇಶವೆಂದರೆ ಪ್ರತಿಯೋರ್ವನೂ/ಳೂ ತನ್ನ ಜೀವನದ ಗುರಿಯಾದ ಪೂರ್ಣತ್ವವನ್ನು ಪಡೆಯಲು ಅವಕಾಶ ನೀಡುವದಾಗಿದೆÀಯೆಂದು ಪ್ರಉತ ಹೇಳುತ್ತಿದೆ. ಪ್ರಉತದ ಆಧಾರವೇ ಆಧ್ಯಾತ್ಮಿಕತೆ.
ಪ್ರಉತವೆಂದರೆ ಬರೀ ವಿಚಾರಧಾರೆ ಅಥವಾ ಒಣ ಸಿದ್ಧಾಂತವಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣದೊಂದಿಗೆ ಅದನ್ನು ಕಾರ್ಯಾನುಷ್ಠಾನಗೊಳಿಸುವ ವಿಧಿ, ವಿಧಾನಗಳನ್ನು ಅದು ಒಳಗೊಂಡಿದೆ.
‘ಪವಿತ್ರ ಭಾವನೆಯಿಂದ ಜ್ವಲಿಸುತ್ತಾ, ಜಗದೀಶ್ವರನಲ್ಲಿ ಅಚಲ ಶೃದ್ಧೆಯಿಂದ, ಕಲ್ಲಿನ ಕೋಟೆಯಂತೆ ದೃಢರಾಗಿ, ಶೋಷಿತರ , ಪತಿತರ, ದೀನದರಿದ್ರರ ಬಗೆಗೆ ದಯಾ ಭಾವನೆಯಿಂದ , ಸಿಂಹದಂತೆ ಧೈರ್ಯಸ್ಥರಾಗಿ ಸಾವಿರಾರು ಮಂದಿ ಸ್ತ್ರೀ ಪುರುಷರು ಸರ್ವಮೋಕ್ಷದ, ಸರ್ವ ಸಹಾಯದ ಸಿದ್ಧಾಂತವನ್ನು, ಸರ್ವೋಧ್ಧಾರದ, ಸರ್ವಸಮಾನತೆಯ ವಿಚಾರಗಳನ್ನು ಸಾರುತ್ತಾ ಈ ದೇಶದ ಉದ್ದಗಲಗಳಲ್ಲಿ ಸಂಚಾರ ಮಾಡಲಿದ್ದಾರೆ’ ಎಂಬ ವಿವೇಕಾನಂದರ ಆಶಯವನ್ನು ಸಾಕಾರಗೊಳಿಸುವ ಶಕ್ತಿ ಪ್ರಉತ ಸಿದ್ಧಾಂತಕ್ಕಿರುವುದನ್ನು ನಾನು ಮನಗೊಂಡಿದ್ದೇನೆ.

***********

Leave a Reply

Back To Top