ಅಪ್ಪು ನೆನಪಲ್ಲಿಷ್ಟು ಕವಿತೆಗಳು

ಅಪ್ಪು ನೆನಪಲ್ಲಿಷ್ಟು ಕವಿತೆಗಳು

ಗಜಲ್

ನಾನೊಂದು ಪ್ರಶ್ನೆ ಕೇಳುವೆ ಸರಿ ಉತ್ತರ ಹೇಳುವೆಯೇನು ವಿಧಿಯೇ
ಅನ್ಯಾಯದ ಪರಮಾವಧಿ ಮೀರಿದ ಕಾರಣ ತಿಳಿಸುವೆಯೇನು ವಿಧಿಯೇ

ಎಲ್ಲಿಂದ ಕಲಿತಿರುವೆ ಗಾಜಿನ ಮನೆಗೆ ಕಲ್ಲು ಹೊಡೆಯುವ ಕೆಟ್ಟ ಕಸುಬು
ಜೀವ ಜೀವನದ ಜೊತೆಗಿನ ನಿನ್ನ ಚೆಲ್ಲಾಟಕೆ ಕೊನೆಯಿಲ್ಲವೇನು ವಿಧಿಯೇ

ದೊಡ್ಡ ಮನೆಯ ಬೆಳಕಿನದೇನು ತಪ್ಪು ಹೇಳು ನಿನ್ನ ದುಷ್ಟ ಕಣ್ಣು ಕುಕ್ಕಿದರೆ
ತಪ್ಪು ಒಪ್ಪು ಒರೆಗೆ ಹಚ್ಚಿ ನಿನ್ನ ನೀನು ಸಂತೈಸಿ ಕೊಳ್ಳಬಾರದಿತ್ತೇನು ವಿಧಿಯೇ

ಗೊತ್ತಲ್ಲ ಒಂದಗುಳೂ ಹೆಚ್ಚು ಕಡಿಮೆ ಇಲ್ಲದಂತೆ ತೀರುತ್ತದೊಮ್ಮೆ ಈ ಮಣ್ಣ ಋಣ
ಹಚ್ಚ ಹಸಿರೆಲೆಗೆ ಕಫನ್ ಹೊದಿಸಿ ಬಿಟ್ಟೆಯಲ್ಲ ಈ ಆತುರ ತರವೇನು ವಿಧಿಯೇ

ಕಾಲಮಿಂಚಿದ ದಾರಿಯಲ್ಲಿ ಕನಸ ಗೋರಿಯ ಸುತ್ತ ಉಮ್ಮಳಗಳೇ ಬಿಕ್ಕುತ್ತಿವೆ
ಶೋಕ ಗೀತೆ ಮೊರೆಯುತ್ತ ಸಂತೈಸಲಾದರೂ ನೀ ಬರಬಾರದೇನು ವಿಧಿಯೇ

********************

ಡಾ.ಗೀತಾ ಪಾಟೀಲ


ನೀ ಅಜರಾಮರ

ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವು
ನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವು
ಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು?

ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನು
ಈಗ ನಮ್ಮನ್ನಗಲಿ ಮನ ಭಾರಗೊಳಿಸಿ
ಎಲ್ಲಿ ಮರೆಯಾದೆ ನೀನು
ದುಃಖದಿಂದ ಮಾತು ಮೌನ ತಾಳಿದೆ
ಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ

ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂ
ಮುದ ನೀಡಿದೆ
ಪರದೆ ಮುಂದೆ,ಪರದೆ ಹಿಂದೆಯೂ
ಮೇರು ನಾಯಕ ನೀನಾದೆ

ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾ
ಬೇರೆ ಪಾತ್ರ ಮಾಡಲು ದೌಡಾಯಿಸಿ
ಹೋದಿಯಾ

ನಿನ್ನ ಸ್ಥಾನವ ತುಂಬುವರಾರು ರಾಜಕುವರ
ಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರ
ವಿನೀತ, ಪುನೀತ್ ನೀ ಅಜರಾಮರ

ನಿನ್ನ ನಟನೆ ನೋಡುತ್ತಲೆ ಹಿಗ್ಗಿ ನಲಿದವರು ನಾವು
ನಿನ್ನ ಸಿನಿಮಾ ನೋಡಿ ತಿದ್ದಿಕೊಂಡವರು ನಾವು
ಸುದ್ದಿ ಮಾಡದೆ ತಟ್ಟನೆ ಎದ್ದು ಹೋಗಿದ್ದು ತರವೇನು,ಅಪ್ಪು?

ನಗು ನಗುತ್ತಲೆ, ನಗಿಸಿ ಮನ ಹಗುರಗೊಳಿಸಿದವ ನೀನು
ಈಗ ನಮ್ಮನ್ನಗಲಿ ಮನ ಭಾರಗೊಳಿಸಿ
ಎಲ್ಲಿ ಮರೆಯಾದೆ ನೀನು
ದುಃಖದಿಂದ ಮಾತು ಮೌನ ತಾಳಿದೆ
ಕ್ರೂರ ವಿಧಿ ಯ ಹಳಿಯವದೊಂದೆ ಉಳಿದಿದೆ

ಹುಟ್ಟುತಲೆ ಅಭಿನಯಿಸಿ ಅಬಾಲವೃದ್ದರಿಗೂ
ಮುದ ನೀಡಿದೆ
ಪರದೆ ಮುಂದೆ,ಪರದೆ ಹಿಂದೆಯೂ
ಮೇರು ನಾಯಕ ನೀನಾದೆ

ಮೇಲಿರುವ ನಿರ್ದೇಶಕನಿಗೂ ನೀನೇ ಬೇಕಾದಿಯಾ
ಬೇರೆ ಪಾತ್ರ ಮಾಡಲು ದೌಡಾಯಿಸಿ
ಹೋದಿಯಾ

ನಿನ್ನ ಸ್ಥಾನವ ತುಂಬುವರಾರು ರಾಜಕುವರ
ಸುಸಂಸ್ಕೃತ, ಸದಾ ಹಸನ್ಮುಖಿ ಅಪ್ಪುಬಂಗಾರ
ವಿನೀತ, ಪುನೀತ್ ನೀ ಅಜರಾಮರ

*****************

ಲಕ್ಷ್ಮೀದೇವಿ ಪತ್ತಾರ

——————————————

ಕಾಯುತಿದೆ

ಸಾವನ್ನಪ್ಪಲು
ಕೈ ಚಾಚಿ ಕಾದವರು ಎಷ್ಟೋ ಮಂದಿ
ಎಲ್ಲರನ್ನು ದಾಟಿ
ಪುನೀತನನ್ನು ಅಪ್ಪಿದೆಯ ವಿಧಿ

ನಲ್ವತ್ತಾರರ ಹೃದಯ
ಕೊಂಡೊಯ್ಯುವ ಕ್ರೂರತೆ ನಿನಗೇಕೆ
ಆಟವಾಡಲು ಹರೆಯದ
ಜೀವವೇ ಬೇಕೇ

ತಪ್ಪಾಗಿದ್ದರೆ ತಿದ್ದಿಕೊ
ತಿರುಗಿ ಕಳಿಸಿಬಿಡು
ಕಾಯುತ್ತಿದೆ ಕನ್ನಡ ನಾಡು


*********************

ನಾಗರತ್ನ ಎಂ.ಜಿ

———————————————

ಈ ಸಾವು ನ್ಯಾಯವೇ

ಕನ್ನಡ ನಾಡಿನ
ವೀರ ಕನ್ನಡಿಗ.
ಯುವ ರತ್ನನ
ದಿಡೀರ್ ನಿರ್ಗಮನ|

ಕನ್ನಡಿಗರ ಮನಗೆದ್ದ
ರಾಜಕುಮಾರ. ನಟನೆಯಲ್ಲಿ
ನಟ ಸಾರ್ವಭೌಮ.
ಅಗಲಿಕೆ ನ್ಯಾಯವೇ?

ಕನ್ನಡ ಚಿತ್ರರಂಗದ ಅರಸು
ಕನ್ನಡದ ಪವರ್ ಸ್ಟಾರ್
ಕಣ್ಣೀರು ಕೋಡಿಯಾಗಿದೆ
ನಿಮ್ಮ ಅಕಾಲಿಕ ನಿಧನ.

ದೊಡ್ಮನೆ ಹುಡುಗ
ನಿನಗೆ ನೀನೇ ಸಾಟಿ.
ಯಾವ ಚಕ್ರವ್ಯೂಹದಲ್ಲಿ
ಸಿಲುಕಿದೆಯೋ ಅಪ್ಪು.

ಮತ್ತೊಮ್ಮೆ ಜನಿಸಿ ಬಾ
ಅಂಜನಿಪುತ್ರ
ನಿನ್ನಿಂದಲೇ ಪಾವನವಾಗಲಿ
ಕನ್ನಡ ನಾಡು.

************

ನಾಗರಾಜ ಎಮ್ ಹುಡೇದ

—————————————————-














One thought on “ಅಪ್ಪು ನೆನಪಲ್ಲಿಷ್ಟು ಕವಿತೆಗಳು

  1. ದೊಡ್ಡ ಮನೆಯ ಬೆಳಕಿನದೇನು ತಪ್ಪು ಹೇಳು ನಿನ್ನ ದುಷ್ಟ ಕಣ್ಣು ಕುಕ್ಕಿದರೆ
    ತಪ್ಪು ಒಪ್ಪು ಒರೆಗೆ ಹಚ್ಚಿ ನಿನ್ನ ನೀನು ಸಂತೈಸಿ ಕೊಳ್ಳಬಾರದಿತ್ತೇನು ವಿಧಿಯೇ

Leave a Reply

Back To Top