ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ಜಯಂತಿ ವಿಶೇಷ

ಮಗುವಾಗಿ ಬಿಟ್ಟ

ಗಾಂಧಿ ಅಜ್ಜನ ಫೋಟೋ ಅಲ್ಲಿ
ಇಟ್ಟಿದ್ರಪ್ಪ ಹಾಗೆ
ಹೂಗಳ ಮಾಲೆ ಎಲ್ಲ ತಂದು
ತುಂಬಿದ್ರಪ್ಪ ಹೀಗೆ

ಹಣ್ಣು ಬೆಲ್ಲ ಇಟ್ಟಿದ್ರಲ್ಲಿ
ಘಮ ಘಮ ಕಡ್ಡಿಯ ಕಂಪು
ಪುಟ್ಟ ಹಾಗೇ ನೋಡ್ತಾ ಇದ್ದ
ಹತ್ತಿತು ಅವನಿಗೆ ಜೊಂಪು

ಹಣ್ಣು ಹೂವು ಯಾವುದು ಮುಟ್ಟದೆ
ಗಾಂಧಿ ತಾತ ಬಂದ
ಪುಟ್ಟನ ಹತ್ತಿರ ಏನೋ ಹೇಳುತ
ಬಾರೋ ಜೊತೆಯಲಿ ಎಂದ

ತಾತನ ನಡಿಗೆ ಎಷ್ಟು ಜೋರು
ಪುಟ್ಟುಗೆ ಓಡುವ ಆಟ
ಅನಾತ ಅಜ್ಜಿಯ ಜೋಪಡಿ ಹೊಕ್ಕು
ಕುಡಿದನು ನೀರಿನ ಲೋಟ

ಅಲ್ಲಿಂದಿಲ್ಲಿಗು ಕೇಳುತ ಬಂದ
ಗಿಡಗಳ ಬೆಳೆಸಿಲ್ಲೇನು
ಹೀಗೇ ಗಿಡಗಳ ಕಡಿಯುತ ಉಳಿದರೆ
ನರಕವ ಕಟ್ಟುವ ಪ್ಲ್ಯಾನು

ತಟ್ಟನೆ ಪುಟ್ಟುವ ನಿಲ್ಲಿಸಿ ಗಾಂಧಿ
ಹೊರಟೇ ಬಿಟ್ಟ ಅತ್ತ
ಕೆಸರಲಿ ಬಿದ್ದ ನಾಯಿಯ ಎತ್ತಿ
ಬಿಸ್ಕೀಟ ಎರಡು ಇತ್ತ

ಅಯ್ಯೋ ಅಯ್ಯೋ ಎಷ್ಟು ಹೊಲಸು
ಕಸದ ಗುಂಡಿ ರಸ್ತೆ
ಕಸವನು ಹೆರಕಲು ಹೊರಟೇ ಬಿಟ್ಟ
ಪುಟ್ಟನ ನಿಲ್ಲಿಸಿ ಮತ್ತೆ

ಶಾಲೆಯ ವರೆಗೂ ಬಂದಿದ್ದಾಯ್ತು
ಹೋದ ಎಲ್ಲಿ ಈತ
ಮಕ್ಕಳು ನೆಟ್ಟ ಗಿಡಗಳ ಮಧ್ಯ
ಬಿಳಿಯ ಉಡುಗೆಯ ತಾತ

ಮಕ್ಕಳ ಪ್ರೀತಿಯ ಗುರುಗಳು ಬಂದ್ರು
ಮಕ್ಕಳೇ ಅವರ ನೀತಿ
ತಾತನೂ ಈಗ ಮಗುವಾಗಿ ಬಿಟ್ಟ
ಅವನಿಗೂ ಅದುವೇ ಪ್ರೀತಿ.

——————

                ತಮ್ಮಣ್ಣ ಬೀಗಾರ.

About The Author

2 thoughts on “”

Leave a Reply

You cannot copy content of this page

Scroll to Top