ಗಾಂಧಿ ಜಯಂತಿ ವಿಶೇಷ

ಗಜಲ್

ಕನ್ನಡಕ ಕೋಲು ಹಿಡಿಸಿ ಬೆದರು ಗೊಂಬೆ ಮಾಡಿದರು ನೋಡು
ಸತ್ಯ ಅಹಿಂಸೆಗಳು ಶಬ್ದ ಕೋಶದಲಿ ಉಳಿಸಿದರು ನೋಡು

ಜನಕೆ ಸ್ವಾವಲಂಬಿ ಬದುಕು ನಡೆಸಲು ಮಾರ್ಗ ಸೂಚಿಸಿದೆ
ನೀ ತಿರುಗಿಸಿದ ಚರಕಾ ಪ್ರದರ್ಶಕೆ ಇಟ್ಟಿರುವರು ನೋಡು

ಆದರ್ಶಗಳನು ಗಾಳಿಗೆ ತೂರಿ ಕುಡಿದು ತೂರಾಡುವರು
ಮಹಾತ್ಮ ರಾಷ್ಟ್ರಪಿತ ಎಂದು ಪಟಕೆ ಪೂಜಿಸಿದರು ನೋಡು

ಇರುಳೆಲ್ಲಾ ಮೋಜು ಮಸ್ತಿಮಾಡಿ ನಶೆಯಲಿ ಹೊರಳಾಡುವರು
ಹಗಲು ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡರು ನೋಡು

ಬುವಿಯಲಿ ಅಹಿಂಸ ಬೀಜಬಿತ್ತಿದೆ ಮಳೆಯಿಲ್ಲದೆ ಒಣಗಿತು
ಕಸತಿಂದು ಅಮಲಿನಲಿ ನೆತ್ತರ ಕಾಲುವೆ ಹರಿಸಿದರು ನೋಡು

ರಾಮ ರಹೀಮ ಭಾರತಾಂಬೆಯ ಎಡ ಬಲ ಭುಜಗಳೆಂದೆ
ಎಡ ಬಲ ಬೇರಾಗಿ ಕತ್ತಿ ಹಿಡಿದು ಬಡದಾಡಿದರು ನೋಡು

ಸೃಷ್ಟಿಸಿದ ಮೂರು ಮಂಗಗಳು ಇಂದು ನಿಜೀ೯ವವಾಗಿವೆ
ವಿಶ್ವಕೆ ನೀಡಿದ ಆದರ್ಶ “ಪ್ರಭೆ” ನಂದಿಸಿದರು ನೋಡು


ಪ್ರಭಾವತಿ ಎಸ್ ದೇಸಾಯಿ

One thought on “

Leave a Reply

Back To Top