ವಾರದ ಕಥೆ

ಅರಿವು

ಮಧುರಾ ಕರ್ಣಮ್

 

            ಮೊದಲೇ  ಹೇಳಿಬಿಡುತ್ತೇನೆ.  ನಾನೊಬ್ಬ  ಗುಮಾಸ್ತ.  ಪ್ರೆöÊವೇಟ್  ಕಂಪನಿಯಲ್ಲಿ  ಕಾರಕೂನ.  ಮಧ್ಯಮ  ವರ್ಗದ  ಬದುಕು.  ತೀರಾ  ಕೆಳ  ಮಧ್ಯಮ  ವರ್ಗದ  ಜೀವನವನ್ನು  ಮಧ್ಯಮ ವರ್ಗದ ಸನಿಹಕ್ಕೆ ಅಪ್ಪ-ಅಮ್ಮ ಎಳೆದು ತಂದು ನಿಲ್ಲಿಸಿದರೆಂದರೂ  ತಪ್ಪಿಲ್ಲ. ಪುಟ್ಟ  ಗುಡಿಸಲಿನಂತಿದ್ದ ಮನೆಯಲ್ಲಿದ್ದು, ಪೈಸೆಗೆ ಪೈಸೆ ಲೆಕ್ಕ ಹಾಕಿ,  ತುತ್ತಿಗೆ ತಾತ್ವಾರ  ಮಾಡಿಕೊಂಡು  ಈ  ಮನೆ  ಕಟ್ಟಿ, ನನಗೆ ಶಿಕ್ಷಣ ಕೊಡಿಸಿ  ಒಂದು  ಮಟ್ಟಕ್ಕೆ ಬಂದರು.  ಹಾಗೆಂದು ಹೇಳಿಕೊಳ್ಳುವ ಹಾಗೆ ದೊಡ್ಡದಲ್ಲ ಮನೆ.  ಎರಡು  ಬೆಡ್ ರೂಮ್‌ಗಳೆಂದು  ಕರೆಸಿಕೊಳ್ಳುವ ಪುಟ್ಟ  ಕೋಣೆಗಳು, ಸುಮಾರಾದ ಹಾಲು, ಚಿಕ್ಕ ಅಡಿಗೆಮನೆ, ಪಕ್ಕದಲ್ಲೊಂದು ಬಾಥ್‌ರೂಮು. “ಇದೇನು ಮಹಾ?” ಎನ್ನಬಹುದು ನೀವು. ಆದರೆ ಪಟಾಕಿ ಕಾರಖಾನೆಯಲ್ಲಿ ನೂರು ರೂಪಾಯಿಯ ಸಂಬಳದಿAದ  ಕೆಲಸವನ್ನಾರಂಭಿಸಿದ ಅಪ್ಪನಿಗೆ, ಹುಳಿಪುಡಿ, ಸಾರಿನಪುಡಿ  ಮಾಡಿ ಮಾರುವ ಅಮ್ಮನಿಗೆ, ನನ್ನ ಪಾಲಿಗೆ ಅದು “ತಾಜ್ ಮಹಲ್” ಎಂದೇ ಹೇಳಬಹುದು. `ಒಂದೇ ಸಂತಾನ  ಸಾಕು’ ಎನ್ನುತ್ತ ನನ್ನನ್ನು ಯಾವುದಕ್ಕೂ ಕಡಿಮೆಯಾಗದಂತೆ  ಬೆಳೆಸಿ, ಜೋಪಾನ ಮಾಡಿ, ಜತನದಿಂದ ಕಾಯ್ದು…..ಹೀಗೆ  ಒಮ್ಮೆಲೆ……ನಡುನೀರಲ್ಲಿ ಕೈ ಬಿಟ್ಟು ಹೋಗಿಬಿಡುವುದೇ? ಅದೂ ಇಬ್ಬರೂ ಒಟ್ಟಿಗೆ……

     ಹೋಗಲು ಏನಾಗಿತ್ತು? ಒಂದು ಕಾಯಿಲೆಯಿಲ್ಲ. ಕಸಾಲೆಯಿಲ್ಲ. ಗಟ್ಟಿ ಮುಟ್ಟಾದ ದೇಹ. ಮುಪ್ಪು ಈಗ ಮೊದಲನೇ ಮೆಟ್ಟಿಲೇರತೊಡಗಿತ್ತು. ಅರವತ್ತೆöÊದೇನು ಸಾಯುವ ವಯಸ್ಸೇ? ಅದಾವ ಮಾಯದಲ್ಲಿ ಗಾಡಿ ಬಂದು ಹೊಡೆಯಿತೋ. ಮಾಮೂಲಿನಂತೆ ತರಕಾರಿ ತರಲು ಇಬ್ಬರೂ ಯಶವಂತಪುರದ ಮಾರ್ಕೆಟ್ಟಿಗೆ ಹೋಗಿದ್ದರು. ಮಕ್ಕಳು ಚಿಕ್ಕವರೆಂದು ನನ್ನ ಹೆಂಡತಿ ಸುಧಾ ಹೋಗಿರಲಿಲ್ಲ  ಬಿಡಿ. ನಾನಂತೂ ಫ್ಯಾಕ್ಟರಿ ತಪ್ಪಿದರೆ ಮನೆ ಅಂತಿದ್ದವ. ಹಾಗಿದ್ದರೂ ನಾನು ತಂದರೆ “ಎಷ್ಟು ದುಡ್ಡು ಕೊಟ್ಟೆ? ಸೊಪ್ಪಿನ ಕಟ್ಟು ಸಣ್ಣದು” ಎಂದೆಲ್ಲ ತಕರಾರು ಆರಂಭವಾಗುತ್ತಿತ್ತು.  ನನಗೆ ಕಿರಿಕಿರಿ. ಸುಧಾಳಿಗೂ ಸಹ. ಹೀಗಾಗಿ ಸಂತೆ-ಕೊAತೆಯೆಲ್ಲ ಅವರದೇ. ತರುವ ಬರುವ ವ್ಯವಹಾರವನ್ನೆಲ್ಲ ಅಪ್ಪನಿಗೇ ಬಿಟ್ಟಿದ್ದೆ. ಬೇಕಾದಷ್ಟು  ಚೌಕಾಸಿ ಮಾಡಿ ತರಕಾರಿಗಳನ್ನೆಲ್ಲ ಹೊತ್ತುಕೊಂಡು  ಬರುವಾಗ ಬೂದುಗುಂಬಳಕಾಯಿ ಹೊತ್ತಿದ್ದ ಮೋಟಾರು ವ್ಯಾನೊಂದು ಎದುರಿಗೆ ಬಂದಿತAತೆ. ಭಾರವಾದ ಚೀಲಗಳನ್ನು ಹೊತ್ತು ಇವರಿಬ್ಬರೂ ಅತ್ತಿತ್ತ ಸರಿದು ತಪ್ಪಿಸಿಕೊಳ್ಳುವಷ್ಟರಲ್ಲಿ ಮೈಮೇಲೆ  ಹರಿಯಿತಂತೆ. ಬ್ರೇಕ್ ಫೇಲಾಗಿತ್ತೋ ಏನೋ ಹಾಳಾದದ್ದು. ಅವರಿಬ್ಬರ ಪಾಲಿಗೆ ಯಮಸ್ವರೂಪಿಯಾಗಿತ್ತು. ಎಲ್ಲಾ ಕುಂಬಳಕಾಯಿಗಳೂ ಅಪ್ಪನ ಮೇಲೆ. ಇವರ ಕೈಚೀಲದಲ್ಲಿದ್ದ ತರಕಾರಿಗಳೆಲ್ಲ  ಕೆನ್ನೀರ ಹೊಳೆಯಲ್ಲಿ ಮಿಂದು ರಸ್ತೆ ಪಾಲಾದವಂತೆ. ಡ್ರೈವರ್ ಪರಾರಿಯಾದ.  ಮಾಲೀಕ ನಾಪತ್ತೆ. ಆಸ್ಪತ್ರೆಗೆ ಸೇರಿಸುವಷ್ಟೂ ವ್ಯವಧಾನವಿಲ್ಲದೆ  ಮೊದಲು ಅಮ್ಮ ಕಣ್ಮುಚ್ಚಿದಳಂತೆ. ಬಳಿಕ ಅಪ್ಪ. ನನಗೆ ಸುದ್ದಿ ಬಂದಾಗಲೇ ಮಧ್ಯಾಹ್ನವಾಗಿತ್ತು. ಆಕಾಶವೇ ಕಡಿದು ಬಿದ್ದಂತೆ ದಿಗ್ಮೂಢನಾಗಿ ನಿಂತೆ.

     ನಾನೇನು ತೀರ ಚಿಕ್ಕವನಲ್ಲ. ಮದುವೆಯಾಗಿ ಎರಡು ಮಕ್ಕಳಿರೋನೆ. ಆದರೆ ಅಪ್ಪ-ಅಮ್ಮನ ಶ್ರೀರಕ್ಷೆಯಲ್ಲಿ ಗೂಡಿನಲ್ಲಿದ್ದ ಮರಿಯಂತೆ ಬೆಚ್ಚಗಿದ್ದೆ. ಹೊರಗಿನ ವ್ಯವಹಾರ ಒಂದೂ ಗೊತ್ತಿಲ್ಲ. ಜಗತ್ತಿನ ಕಪಟ, ಮೋಸಗಳ ಮುಖವಾಡದ ಬದುಕು ಸ್ವಲ್ಪ ದೂರವೇ. ಉದ್ಯೋಗದಲ್ಲೂ ಅಷ್ಟೇ. ಕೆಲಸವೇ ಮಾತಿಗಿಂತ ಮುಖ್ಯ. ಹೀಗಾಗಿ ಮಾಲೀಕರು ನನ್ನ ಮೇಲೆ ವಿಶ್ವಾಸವನ್ನಿಟ್ಟಿದ್ದರು. ಉಳಿದವರ ಹೊಟ್ಟೆ ಉರಿದು ಹೋದರೂ  ನನ್ನ ಪಾಡಿಗೆ ನಾನಿರುತ್ತಿದ್ದೆ. ಈಗ ಏಕಾಏಕಿ ಬಯಲಿಗೆ ತಂದು ಬಿಟ್ಟಂಥ ಸ್ಥಿತಿ. ಗೂಡಂತೂ ದೂರ, ಮೇಲೆ ಚಪ್ಪರವೂ ಇಲ್ಲ. ಕೆಳಗಡೆ ಭೂಮಿಯೂ ಇಲ್ಲ.

    ಸುದ್ದಿ ತಿಳಿದದ್ದೇ ತಡ, ಎಲ್ಲೆಲ್ಲಿಂದಲೋ ನೆಂಟರು ಬಂದಿಳಿದರು. ಸೋದರತ್ತೆ, ದೊಡ್ಡಮ್ಮ ಎಂದೂ ಬರದವರು “ಅಯ್ಯೋ! ಸಾವಿಗಾದ್ರೂ ಬರದಿದ್ರೆ ಹ್ಯಾಗೆ?” ಎನ್ನುತ್ತ ಬಂದಿದ್ದರು. ನನಗೋ, ಜವಾಬ್ದಾರಿ ಒಮ್ಮೆಲೆ ಮೈಮೇಲೆ ಬಿದ್ದಂಥ ಪರಿಸ್ಥಿತಿ. ಏನು ಹೇಳಲೂ ಬಾಯಿಲ್ಲ. ಏನೂ ಮಾಡಲೂ ತೋಚುತ್ತಿಲ್ಲ. ದು:ಖ ಇಡಿಯಾಗಿ ಆವರಿಸಿಬಿಟ್ಟಿತ್ತು. ಮುಖ್ಯ ನಿಧಿಗಳಂತಿದ್ದ ಅಪ್ಪ-ಅಮ್ಮರನ್ನೇ ಕಳೆದುಕೊಂಡ ಮೇಲೆ ಉಳಿದಿದ್ದು ಇದ್ದರೆಷ್ಟು? ಬಿಟ್ಟರೆಷ್ಟು? ಎನ್ನುವ ವೈರಾಗ್ಯ ಮನವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಯಾರೋ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅದು ಎಳ್ಳಷ್ಟೂ  ಉಪಯೋಗವಾಗಲಿಲ್ಲವೆಂಬುದು ಬೇರೆ ಮಾತು.

    “ಗೋಪಿ, ಅನಾಥನಾದೆ ಅನ್ಕೋಬೇಡ. ನಾವೆಲ್ಲ ಹಿರೀಕರಿದ್ದೀವಿ ಇನ್ನೂ. ಈ ಸಮಯದಲ್ಲಿ ಅವರಿಗೆ ಉತ್ತಮ ಗತಿ ಪ್ರಾಪ್ತಿಯಾಗಲು ಬೇಕಾದದ್ದನ್ನೆಲ್ಲ ಸರಿಯಾಗಿ ಮಾಡಬೇಕಪ್ಪ. ಒಮ್ಮೊಮ್ಮೆ ಮಾಡೋದಿರುತ್ತೆ. ಅಂತ್ಯಕಾಲದ ಎಲ್ಲಾ ಶಾಸ್ತ್ರಗಳನ್ನು…….”ಎನ್ನುತ್ತ ಬಿಕ್ಕಳಿಸಿದರು  ಸೋದರತ್ತೆ. “ಇರುವಾಗ ಕಾಸಿಗೆ ಕಾಸು ಲೆಕ್ಕ ಹಾಕಿದ ಪುಣ್ಯಾತ್ಮ. ನಿನ್ನನ್ನು ಈ ಸ್ಥಿತಿಗೆ  ತಂದ. ಅವಳಂತೂ ಮುತ್ತೆöÊದೆಯಾಗಿ ಹೋದಳು. ಪುಣ್ಯವಂತೆ. ಅವರಿಬ್ಬರಿಗೂ ಸರಿ ದಾರಿ ತೋರಿಸು.”ಎಂದು ಕಣ್ಣೊರೆಸಿಕೊಂಡರು ದೊಡ್ಡಮ್ಮ. ಇಂಥ ಸಮಯದಲ್ಲಿ `ಇಲ್ಲ’ವೆನ್ನಲಾದೀತೆ? ಇನ್ನು ಸುಧಾಳ ತಾಯಿ ನನ್ನತ್ತೆ ಕೂಡ ಪರಮ ಆಸ್ತಿಕಳು. “ಒಮ್ಮೊಮ್ಮೆ ಮಾಡೋದೆಲ್ಲ ವಿಧಿವತ್ತಾಗಿ ಮಾಡಿ. ಖರ್ಚಿನ ಚಿಂತೆ ಮಾಡಬೇಡಿ” ಎಂದು ಸೆರಗು ಬಾಯಿಗೆ ತುಂಬಿದರು. ಅಮ್ಮ ಹಾಕಿದ ಗೆರೆ ದಾಟದ ನನ್ನವಳು ಅದನ್ನು ಯಥಾವತ್ ಅನುಮೋದಿಸಿದಳು. ಮಾವ, ಸೋದರಮಾವ ಮೋಹನ, ಅಪ್ಪನ ಗೆಳೆಯ ಗೋವಿಂದ ರಾಜು ಸೂಕ್ಷö್ಮವಾಗಿ “ನೋಡಿಕೊಂಡು ಮಾಡು. ಸುಮ್ಮನೆ ಅತೀ ಖರ್ಚು ಮಾಡಬೇಡ”ಎಂದು ಹೇಳಿದ್ದೂ ಇತ್ತು. ಯಾರ ಮಾತು ಕೇಳಬೇಕೆನ್ನುವುದೇ ಧರ್ಮಸಂಕಟ. ಆದರೆ ಅಪ್ಪನಿಗಿತ್ತಿದ್ದ”ಜಿಪುಣ”ಎಂಬ ಬಿರುದು ನನಗೂ ಬರಬಾರದೆಂಬ ಆಸೆ ಪ್ರಬಲವಾಗಿತ್ತೋ ಅಥವಾ ಅಮಾಯಕನಾಗಿದ್ದೆನೋ  ಗೊತ್ತಿಲ್ಲ. ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆಯಾಡಿಸಿದ್ದೆ. ಕಾಮಾಕ್ಷತ್ತೆಯ ಭಾವಮೈದನೇ ಇವೆಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದನಂತೆ. “ಕರೆಸಲೇ”ಎಂದಾಗ ಯಾರು  ಹಿತವರು ತಿಳಿಯದೇ “ಹ್ಞೂಂ” ಎಂದಿದ್ದೆ. ಇವುಗಳ ಬಗ್ಗೆ ನನ್ನ ಜ್ಞಾನವೂ ಅಷ್ಟಕ್ಕಷ್ಟೆ. ಯಾರೋ ಎಲ್ಲ ನೋಡಿಕೊಂಡರೆ ಒಳಿತು ಅನ್ನಿಸಿದ್ದುಂಟು. ದಿನಕರ್ಮಗಳಿಗೆ ಪುರೋಹಿತರನ್ನು ಗೊತ್ತು ಮಾಡುವುದರಿಂದ ಹಿಡಿದು ಪ್ರಣತಿ ತಂದು   ದೀಪವಿಡುವದು, ನೀರಿಡುವದು, ಬೆಳೆ ಹಾಕುವದೂ ಇತ್ಯಾದಿ ಇತ್ಯಾದಿಗಳನ್ನೆಲ್ಲ ಕಾಮಾಕ್ಷತ್ತೆಯ ಭಾಮೈದ ಅಣ್ಣಯ್ಯ ನೋಡಿಕೊಂಡಿದ್ದ. ನಾನು ಬರೀ ಅವನ ಹಿಂಬಾಲಕನಷ್ಟೇ. “ನೀನು ಸುಮ್ಮನಿದ್ದು ಬಿಡಪ್ಪ. ಏನೇನು ಮಾಡಬೇಕೋ, ಎಲ್ಲೆಲ್ಲಿ ಹೋಗಬೇಕೋ ಎಲ್ಲಾ ಹೇಳಿ ಮಾಡಿಸ್ತೇನೆ.”ಎಂದಿದ್ದ. ಅಮ್ಮನಿಗೆ ಮುತತ್ತತೈದೆಯ, ಬಳೆ, ಕರಿಮಣಿ, ಮೊರದ ಬಾಗಿನ ತೌರಿನವರೇ ತಂದಿದ್ದರು. ಇವೆಲ್ಲ ರೀತಿಗಳನ್ನು ನೋಡರಿಯದಲ್ಲ, ಕೇಳೂ ಅರಿಯದವ ಮೂಕನಾಗಿದ್ದೆ. ಅವರೇನೇನು ಹೇಳುತ್ತಾರೋ ಮಾಡುತ್ತ ಗಡಿಗೆ ಹಿಡಿದು ಮುಂದೆ ಹೋಗಿದ್ದೆ.

    ಯಾವ ಊರಿನ ನೆಂಟರೋ ನನಗೇ ಗೊತ್ತಿಲ್ಲ. ಅವರನ್ನು ಒಮ್ಮೆಯೂ ನೋಡಿದ ನೆನಪಿಲ್ಲ. ತಂಡೋಪತಂಡವಾಗಿ ಸಂತಾಪ ಸೂಚಿಸಲು ಬಂದಿಳಿದರು. ಅಪ್ಪ-ಅಮ್ಮನ  ಗುಣಗಾನ ನಡೆಯುತ್ತಿತ್ತು. ಇದ್ದಾಗ ಕವಡೆ ಕಿಮ್ಮತ್ತಿಲ್ಲದಿದ್ದರೂ ಸರಿಯೇ. ಸತ್ತ ಎಮ್ಮೆಗೆ ಸೇರು ತುಪ್ಪವಂತೆ. ಕಾಮಾಕ್ಷತ್ತೆಯ ಪತಿ, ಇಬ್ಬರು ಹೆಣ್ಣು ಮಕ್ಕಳು ಲಲಿತಾ, ಸುವರ್ಣಾ, ದೊಡ್ಡಮ್ಮನ ಮಗ, ಸೊಸೆ, ಚಿಕ್ಕಮ್ಮ ಹೀಗೆ ಪಟ್ಟಿ ಬೆಳೆಯುತ್ತಾ ಹೋಗಿ ಮೂವತ್ತೆöÊದು ಜನರಾಗಿದ್ದರು. ಬಂದ ಗಂಡಸರೆಲ್ಲ ಸಂತಾಪ ಸೂಚಿಸಿ ಹೊರಟು ಬಿಟ್ಟರೆ ಹೆಂಗಳೆಯರನ್ನು ಅತ್ತೆ, ದೊಡ್ಡಮ್ಮ ಉಳಿಸಿಕೊಳ್ಳುತ್ತಿದ್ದರು. “ಎಳೆ ಮಕ್ಕಳನ್ನಿಟ್ಟುಕೊಂಡು ಬರೋದು, ಹೋಗೋದು ಮಾಡಕ್ಕಾಗುತ್ತಾ? ಈ ದು:ಖದ ಸಮಯದಲ್ಲಿ ನಮ್ಮೋರು ತಮ್ಮೋರೂಂತ ಬ್ಯಾಡ್ವ? ಇರಿ, ಕರ್ಮಾಂತರ ಮುಗಿಸಿಕೊಂಡೇ ಹೊರಟು ಬಿಡೋಣ” ಎಂದು ಹೇಳಿದಾಗಲೆಲ್ಲ ಸುಧಾ”ಹ್ಞೂಂ”ಗುಟ್ಟುತ್ತ ಕಣ್ಣೀರು ಹಾಕುತ್ತಿದ್ದಳು. ಮೊದಲನೇ ದಿನ ಸುಧಾಳ ತೌರಿನಿಂದ ಊಟ, ತಿಂಡಿ ಎಲ್ಲಾ ಬಂತು. ಮುಂದೆರಡು ದಿನಗಳೂ ನೆರೆಕೆರೆಯವರೇ ನೋಡಿಕೊಂಡಿದ್ದರು.

                                                                                                        

ಮೂರನೇ ದಿನ ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆಯಾದ ನಂತರ ಅಣ್ಣಯ್ಯ “ಇಲ್ನೋಡಪ, ನೀವಂತೂ ಮೈಲಿಗೆಯವರು. ಒಳಗೆ ಮುಟ್ಟುವಂತಿಲ್ಲ. ಇಷ್ಟು ಜನರಿಗೆ ಅಡಿಗೆ,ಪಡಿಗೆ ಹೇಗೇಂತ? ನಮ್ಮೋರೊಬ್ರಿದ್ದಾರೆ. ಅಡಿಗೆ, ತಿಂಡಿ ಮಾಡಿ ತಂದು ಬಡಿಸಿ ತೊಗೊಂಡ್ಹೋಗ್ತಾರೆ. ನೆಂಟರಿಗೆಲ್ಲ “ಮಾಡಿ” ಎನ್ನುವದಕ್ಕಿಂತ  ಸುಮ್ನೆ ಒಂದು ಹುಳಿಯನ್ನ, ಮೊಸರನ್ನ….ಅಲ್ಲವಾ?” ಎಂದಾಗ `ಸರಿ’ ಎನಿಸಿತ್ತು. ಸಲಿಗೆ ಇಲ್ಲದ ನೆಂಟರಿಗೆ “ಅಡಿಗೆ ಮಾಡಿ” ಅಂತ ಹೇಳಕ್ಕಾಗುತ್ತಾ? ಆದರೆ ಬರೀ ಸಾರನ್ನ, ಮೊಸರನ್ನದಿಂದ ಆರಂಭವಾದದ್ದು  ಪುಳಿಯೋಗರೆ, ವಾಂಗೀಭಾತು, ಚಿತ್ರ‍್ರಾನ್ನ, ಹಪ್ಪಳ, ಪಕೋಡ ಎಂದು ಬೆಳೆಯುತ್ತಲೇ ಹೋಯಿತು. ‘ಬೇಡ ಎನ್ನಲಾರದ ಸ್ಥಿತಿಯಲ್ಲಿ ನಾನಿದ್ದೆನಲ್ಲ….ಎಲ್ಲವನ್ನೂ ಅಣ್ಣಯ್ಯನಿಗೊಪ್ಪಿಸಿ…. ಮೋಹನ ಮಾವ ಸೂಕ್ಷö್ಮವಾಗಿ “ಬೇಡ ಗೋಪಿ, ಖರ್ಚು ವಿಪರೀತ ಬರುತ್ತೆ. ಕೂತು ಉಣ್ಣುವವರಿಗೇನು? ಬಂದವರೂ ಮನೆಯವರೇ. ಅಡಿಗೆ ಮಾಡ್ತಾರೆ ಬಿಡು” ಎಂದಾಗ “ಛೆ”ಎನ್ನುತ್ತ ತಲೆ ಕೊಡವಿದ್ದೆ. ಅಮ್ಮನ  ಹಿರಿಯಕ್ಕ “ನಾನು ಮಾಡುತ್ತೇನೆ” ಎಂದು ಹೊರಟವಳನ್ನೂ ಸುಮ್ಮನಾಗಿಸಿದ್ದಾಯಿತು. ಮುಂದೆ ಮೋಹನ ಮಾವ ಮಾತಾಡಲೇ ಇಲ್ಲ.”ಇಂಥ ಸಮಯದಲ್ಲಿ ದುಡ್ಡಿನ ಮುಖ ನೋಡೋಕಾಗುತ್ತಾ?” ಎಂದು ಯಾರೋ ಹೇಳಿದ್ದನ್ನು ಅನುಮೋದಿಸಿದ್ದೆ.

    ಒಂಬತ್ತನೇ ದಿನದಿಂದ ಕರ್ಮಗಳು ಆರಂಭವಾದವು. ಅಣ್ಣಯ್ಯ ಎಲ್ಲಿ ಹೇಗಂತಾನೋ ಹಾಗೆ. ಹತ್ತನೇ ದಿನ `ಮಲ್ಲೇಶ್ವರಂ’ನ ವೈದಿಕ ಸಭೆಯಲ್ಲಿ ಧರ್ಮೋದಕ ಬಿಟ್ಟು ಐವತ್ತು ಜನ ಊಟ ಮಾಡಿ ಬಂದೆವು. ಕಾಯಿಪಿಂಡ ಏನೂ ತೊಂದರೆ ಇಲ್ಲದೆ ಆಗಿತ್ತು. ಅವರಿಗೇನು ಆಸೆಯಿತ್ತೋ, ಇಲ್ಲವೋ ಬ್ರಹ್ಮನೇ ಬಲ್ಲ. “ಎಷ್ಟಾಯಿತು ಅಣ್ಣಯ್ಯ?” ಎಂದು ಕೇಳಿದ್ದೇ ತಡ “ನೀನು….ಒಂಚೂರೂ ಚಿಂತೆ ಮಾಡ್ಬೇಡ ಮಹಾರಾಯ. ಒಂದು ದಮ್ಮಡೀನೂ ಬಿಚ್ಚಬೇಡ. ನಾನೆಲ್ಲ ನೋಡ್ಕೋತೇನೆ. ಆಮೇಲೆ ಎಷ್ಟೂಂತ ಹೇಳಿ ಲೆಕ್ಕ ಕೊಡ್ತೀನಿ.”ಎಂದ. ಸುಧಾ “ನಿಮ್ಮಂತವರು ಸಿಕ್ಕದ್ದು ನಮ್ಮ ಪುಣ್ಯ” ಎನ್ನುತ್ತ ಹನಿಗಂಗಳಾಗಿದ್ದಳು. ಹನ್ನೆರಡನೇ ದಿನ ಎಲ್ಲ ಸಾಂಗವಾಗಿ ನಡೆಯಿತು. ಕಾಮಾಕ್ಷತ್ತೆಯ ನಿರ್ದೇಶನದಂತೆ ಪೂರ್ವ ಪಂಕ್ತಿಗೆ ಊಟಕ್ಕೆ ಕುಳಿತ ಮೂವರು ಬ್ರಾಹ್ಮಣರಿಗೆ ಬೆಳ್ಳಿ ದೀಪ, ಚೊಂಬು, ಲೋಟ ನೀಡಲಾಯಿತು. ಖರೀದಿಯೆಲ್ಲ ಅಣ್ಣಯ್ಯನದೇ. ಉಳಿದ ಬ್ರಾಹ್ಮಣರಿಗೆ ಪಂಚೆ, ಉತ್ತರೀಯ ಜೊತೆಗೆ ದಕ್ಷಿಣೆ. “ನಿಮ್ಮ ತಂದೆ, ತಾಯಿ ಬಂದು ಕುಳಿತಿದ್ದಾರೆ. ಅವರಿಗೆ ಆಸನ ಕೊಡಿ. ಅರ್ಘ್ಯ, ಪಾದ್ಯ ಕೊಡಿ. ಹಾರ ಹಾಕಿ. ಹೊಸ ವಸ್ತç ಕೊಡಿ. ಗಾಳಿ ಹಾಕಿ, ಸೇವೆ ಮಾಡಿ.”ಎಂದು ಹೇಳುತ್ತ ಹೋದಂತೆ  ನಾನು ಮಾಡುತ್ತ ಹೋದೆ. “ಜಗನ್ನಾಥ  ನಾಮೇಣ…..ವಸು ರೂಪೇಣ….”ಎಂದು ಹೇಳುತ್ತಿದ್ದಂತೆ ಮತ್ತೆ ಮತ್ತೆ ಕಣ್ಣು ತುಂಬುತ್ತಿದ್ದವು. ಅಣ್ಣಯ್ಯ ಮನೆಯಲ್ಲೇ ಮಡಿಯಲ್ಲಿ ಅಡಿಗೆ ಮಾಡಿಸಿ ಬಡಿಸಲು ಸುಧಾಳನ್ನೂ, ದೊಡ್ಡಮ್ಮನನ್ನೂ, ಕರೆದಿದ್ದ. ಏನೇನೋ ಪಕ್ವಾನ್ನಗಳು. ಭಟ್ಟರಿಗೆ ದಕ್ಷಿಣೆಗಳನ್ನೂ  ಅವನೇ ನನ್ನ ಕೈಯಿಂದ ಕೊಡಿಸಿದ.  ಅಮ್ಮನ ಸ್ಥಾನಕ್ಕೆ ಕುಳಿತ ಮುತ್ತತೈದೆಗೆ ಸೀರೆ ಸಹಿತ ಮೊರದ ಬಾಗಿನ ನೀಡಲಾಯಿತು. ನೂರು ಜನರ ಊಟವಾಗಿತ್ತು.

    ಮರುದಿನ ವೈಕುಂಠ ಸಮಾರಾಧನೆಗೆ ಇನ್ನೂ ಜನ ಹೆಚ್ಚಾಗಿದ್ದರು. ನೆರೆ ಕೆರೆಯವರೂ ಸೇರಿದ್ದರು. ಮುತ್ತೈದೆಗೆ ಸಂತೃಪ್ತಿಯಾಗಲೆಂಂದು ಕಾಮಾಕ್ಷತ್ತೆಯ ಸಲಹೆಯಂತೆ ಹನ್ನೆರೆಡು ಜೊತೆ ಅರಿಸಿಣ ಕುಂಕುಮದ ಬಟ್ಟಲುಗಳು, ಬಂದ ನೆಂಟರಿಷ್ಟರಿಗೆಲ್ಲ ಸೀರೆ ಅಣ್ಣಯ್ಯನೇ ತಂದಿದ್ದ. ನೆಂಟರೆಲ್ಲ ನಾಮುಂದು, ತಾಮುಂದು ಎಂದು ಬಣ್ಣಗಳನ್ನಾರಿಸಿದರು. ಬಂದ ಹೆಂಗಳೆಯರಿಗೆಲ್ಲ ಕವರಿನಲ್ಲಿ ಪ್ರಸಾದದ ರವೆಯುಂಡೆ,ಬಳೆ, ರವಿಕೆ ಬಟ್ಟೆ ನೀಡಲಾಯಿತು. ಯಥಾಶಕ್ತಿ ಸುವರ್ಣದಾನ, ಬೆಳ್ಳಿ, ಗೋದಾನ, ಭೂದಾನ, ಶಯ್ಯಾದಾನ, ದೀಪದಾನ, ಉದಕ ಕುಂಭ, ಚಪ್ಪಲಿ, ಛತ್ರಿ, ಪುಸ್ತಕ, ರುದ್ರಾಕ್ಷಿ ಮಣಿ, ವಸನ ಇತ್ಯಾದಿಗಳನ್ನೆಲ್ಲ ಅತ್ತೆ, ದೊಡ್ಡಮ್ಮನ ನಿರ್ದೇಶನದಂತೆ ಕೊಟ್ಟು ಕೃತಾರ್ಥನಾದೆ. ಎಲ್ಲರ ಬಾಯಲ್ಲಿ “ಮಗ ಇದ್ದರೆ ಹೀಗಿರಬೇಕು. ಎಲ್ಲ ಸಾಂಗ, ಸಾಂಪ್ರತವಾಗಿ ಮಾಡ್ದ. ಪುಣ್ಯಾತ್ಮರಿಬ್ಬರೂ ಉತ್ತಮ ಲೋಕ ಸೇರಿದ್ರು.”ಎಂಬ ಹೊಗಳಿಕೆ ಕೇಳಿ ಉಬ್ಬಿದೆ. ಬಂದವರೆಲ್ಲ ಅಮ್ಮ, ಅಪ್ಪನ ಗುಣಗಳನ್ನು ಹೊಗಳುತ್ತ ತೃಪ್ತರಾದರು. ನನ್ನ ಮಾವ ಆಗಲೇ ಹತ್ತಿರ ಬಂದು “ಇಷ್ಟು ವೈಭವ ಬೇಕಿರಲಿಲ್ಲ  ಅನ್ಸುತ್ತೆ. ನಿಮ್ಮ ತಂದೆ, ತಾಯಿ ಬಹಳ ಸರಳ ಮನುಷ್ಯರು.” ಎಂದಾಗ ಸುಧಾಳ ತಾಯಿ “ಎಲ್ಲಾ ಮಾಡ್ಬೇಕಾದ ಶಾಸ್ತçಗಳೇ. ಸುಮ್ನಿರಿ” ಎಂದವರ ಬಾಯಿ ಮುಚ್ಚಿಸಿದರು. ಕಾಮಾಕ್ಷತ್ತೆ”ಇವರಪ್ಪ ನಮ್ಮಪ್ಪನ ತಿಥೀನೆ ಸರಿಯಾಗಿ ಮಾಡ್ಲಿಲ್ಲ. ಲೆಕ್ಕ ಹಾಕಿದ್ದೂ ಹಾಕಿದ್ದೆ. ಏನ್ ಕೇಳಿದ್ರೂ `ಇದ್ದಾಗ ಚೆನ್ನಾಗಿ ನೋಡ್ಕೊಂಡು ಬೇಕಾದಷ್ಟು ಸೇವೆ ಮಾಡಿದೀನಿ ಬಿಡು.’ ಅಂತ ನನ್ನ ಬಾಯಿ ಬಡಿದ. ಸದ್ಯ! ಮಗ ಹಾಗ್ಮಾಡ್ದೆ  ನನ್ಮಾತು ಕೇಳಿ ಎಲ್ಲ ಸಾಂಗವಾಗಿ ಮಾಡ್ದ.”ಎಂದಾಗ ನನಗೆ    ಜಿಪುಣನೆಂಬ ಬಿರುದು ಕೊಡಲಿಲ್ಲವಲ್ಲ ಎಂದು ಉಬ್ಬಿದ ಮನ ಅಪ್ಪನ ತೆಗಳಿಕೆ ಕೇಳಿ ನೊಂದಿತು. ಮೈಲಿಗೆ ಬಿಡಿಸಿದ ಎಲ್ಲರನ್ನೂ ಕಂಬನಿ ತುಂಬಿ ಬೀಳ್ಕೊಟ್ಟೆವು. ಅಂತೂ ಎಲ್ಲ ಸರಿಯಾಗಿ ಆಯಿತೆಂದು ಸಮಾಧಾನವಾಯಿತು.

     ಚಕ್ರ ತಿರುಗುತ್ತಿತ್ತು. ಅವರಿಬ್ಬರೂ ಇಲ್ಲದ ಜೀವನ ಆರಂಭವಾಗಿತ್ತು. ಇಡೀ ಮನೆ ಭಣಗುಟ್ಟುತ್ತಿತ್ತು. ದು:ಖ ಮನವನ್ನು ಹಿಂಡುತ್ತಿತ್ತು. ಮುಂದೆರಡೇ ದಿನಗಳಲ್ಲಿ ಅಣ್ಣಯ್ಯ ಪ್ರತ್ಯಕ್ಷನಾದ. “ಬಾರಪ್ಪಾ ಬಾ, ನಾನೇ ನಿಮ್ಮನೆಗೆ ಬರಬೇಕೂಂತಿದ್ದೆ. ಲೆಕ್ಕ ಎಷ್ಟಾಯಿತೂಂತ ಕೇಳೋಕೆ. ಅಂತೂ ಎಲ್ಲ ತುಂಬಾ ಚೆನ್ನಾಗಿ ಮಾಡಿಸಿಕೊಟ್ಟೆ ಬಿಡು. ತಲೆಗೆ ಒಂಚೂರೂ ತಾಪತ್ರಯವಿಲ್ಲದಂತೆ. “ಎನ್ನುತ್ತ ಬರಮಾಡಿಕೊಂಡೆವು. “ಅದೇನ್ಬಿಡು ಗೋಪಿ, ನಮ್ಮೋರಲ್ಲವೆ? ದುಡ್ಡು ಎಲ್ಲಿ ಹೋಗುತ್ತೆ?…..ಆದರೂ ನೀನು ಲೆಕ್ಕ ಅಂತಿದ್ದಕ್ಕೆ ಹೇಳ್ತಿದೀನಪ್ಪ. ನಿಂದು ಒಟ್ಟು ಎರಡು ದಾಟಿದೆ.” ಎಂದ. “ಎರಡು ಎಂದರೆ?” ಎಂಬ ಪ್ರಶ್ನೆಯನ್ನೆಸೆದೆ. ಅವ ನಗುತ್ತ”ಎರಡು ಲಕ್ಷ, ಇಪ್ಪತ್ತು ಸಾವಿರವಾಗಿದೆ”ಎಂದ. “ಆಂ”ಎAದು ಬಾಯಿ ತೆರೆದು ಬಟಾಟೆಯಾಗಿದ್ದ ತಲೆ ಮೇಲೆ ಕೈ ಹೊತ್ತೆ. “ಅಷ್ಟು ಆಶ್ರ‍್ಯವೇಕಪ್ಪಾ? ಎಲ್ಲದಕ್ಕೂ ಲೆಕ್ಕವಿದೆ. ಬೆಂಗಳೂರಿದು. ಒಂದೊAದು ಸಾಮಾನಿನ ಬೆಲೆ ಎಷ್ಟೂಂತ ಗೊತ್ತಾ?ಇದು ನೋಡು, ಮೂವತ್ತೆöÊದು ಜನರ ಎರಡು ಹೊತ್ತಿನ ಊಟ, ಧರ್ಮೋದಕದ್ದು, ಹನ್ನೆರಡನೇ ದಿನ ಬೆಳ್ಳಿ ಸಾಮಾನು, ನೂರು ಊಟ, ವೈಕುಂಠದ ದಿನ ಇನ್ನೂರು ಜನರ  ಊಟ, ದಾನಗಳು, ಸೀರೆ……ಬಾಳೆ ಎಲೆಯಿಂದ ಹಿಡಿದು ವಿಳೇದೆಲೆಯವರೆಗೆ. ಎಲ್ಲ ಲಿಸ್ಟೂ ಇಲ್ಲಿದೆ ನೋಡು” ಎನ್ನುತ್ತ ಅಂದAದಿನ ದಿನಗಳಿಗನುಗುಣವಾಗಿ ಮಾಡಿದ ಪಟ್ಟಿಯನ್ನೇ ಕೈಗಿತ್ತ.   

    

     ನನ್ನೆದೆ ಒಡೆದು ಹೋಗದಿದ್ದುದೇ ಪುಣ್ಯ. ಸುಧಾ ಕೂಡ ಬಾಯಿಯ ಮೇಲೆ ಬೆರಳಿಟ್ಟಳು. ಅವ ಕೊಟ್ಟ ಪಟ್ಟಿಯಲ್ಲಿ ಸುಳ್ಳೇನೂ ಇರಲಿಲ್ಲ. ಬೇಕಾದಷ್ಟು ಹೆಚ್ಚುಗಾರಿಕೆ ಇತ್ತು. “ಬೇಗ ಕೊಟ್ಟು ಬಿಡಪ. ನಾನು ಅವರಿಗೆಲ್ಲ ಬಿಲ್ ಕೊಡಬೇಕು.” ಎನ್ನುತ್ತ ಹೊರಟೇ ಹೋದ. ಅವರಿಬ್ಬರೂ ಸತ್ತು ಹೋದಾಗಿನಕ್ಕಿಂತ ಹೆಚ್ಚಿನ ಆಘಾತವಾಗಿತ್ತು. ಎಲ್ಲಿಂದ ತರಲಿ ಇಷ್ಟೊಂದು  ದುಡ್ಡು?  ಮಾವ ಮುಂದೆ ಬಂದು “ಅದಕ್ಕೇ ನಾನು ನಿಮಗೆ ಸೂಕ್ಷö್ಮವಾಗಿ ನೋಡಿಕೊಂಡು ಮಾಡೀಂತ ಹೇಳ್ತಾನೇ ಇದ್ದೆ. ಎಲ್ಲಾ ಸೇರಿ ನನ್ನನ್ನೇ ಹುಚ್ಚನನ್ನಾಗಿ ಮಾಡಿದ್ರಿ.” ಎಂದು ಕೂಗಾಡಿದರು. ಅತ್ತೆ ಮೆಲ್ಲಗೆ “ಇವೆಲ್ಲ ಮಾಡಬೇಕಾಗುತ್ತಲ್ಲ….”ಎಂದಾಗ ಎಗರಿ ಬಿದ್ದವರೇ “”ನೋಡಪ್ಪ, ಯಾವ ಧರ್ಮವೂ ಒದ್ದಾಡ್ಕೊಂಡು, ಸಾಲ ಮಾಡ್ಕೊಂಡು, ದುಡ್ಡು ಖರ್ಚು ಮಾಡಿ ಕರ‍್ಯ ಮಾಡಿ ಅಂತ ಹೇಳೋದೆ ಇಲ್ಲ. ಎಲ್ಲ ಶಾಸ್ತçಗಳೂ `ಯಥಾಶಕ್ತಿ, ಯಥಾಯೋಗ್ಯ’ ಎಂಬ ಒಕ್ಕಣೆಯಿಟ್ಟೇ ಹೇಳೋದು. ಅಲ್ಲದೇ ಶ್ರಾಧ್ಧ ಎಂದರೆ ಮುಖ್ಯವಾಗಿ ಶ್ರಧ್ಧೆಯಿಂದ ಮಾಡುವದು. “ಶ್ರಧ್ಧೆಯಾ ತೀಯತೆ ಇತಿ ಶ್ರಾಧ್ಧಂ”ಅಂತ ಶಾಸ್ತ್ರಗಳೇ ಹೇಳುತ್ತವೆ. ಅರ‍್ಹೇಳ್ತಾರೆ, ಇವರು ಮಾಡ್ತಾರೆ ಅಂತ ಕೇಳಿ, ಪೈಪೋಟಿ ಬಿದ್ದು ಮಾಡ್ತಾ ಹೋದರೆ ಹೀಗೆ ಆಗೋದು.”ಎಂದು ಮುಖ ಕೆಂಪಾಗಿಸುತ್ತ ನುಡಿದರು. ನನಗೆ ನಿಜಕ್ಕೂ ಈಗ ದೊಡ್ಡ ಬೆಟ್ಟ ತಲೆ ಮೇಲಿತ್ತು. `ಎರಡು ಲಕ್ಷ ಇಪ್ಪತ್ತು ಸಾವಿರ’ ಎಲ್ಲಿಂದ ತರುವುದು?

ಫ್ಯಾಕ್ಟರಿಯಲ್ಲಿ ಸಾಲ ಕೇಳಿದೆ. ಮಾಲೀಕರು ನನ್ನ ಪಾಲಿಗೆ ಬಲು ಒಳ್ಳೆಯವರೇ. ಆದರೆ “ಎರಡು ಲಕ್ಷ ಆಗಲ್ಲ ಗೋಪಾಲ್, ಒಂದು ಲಕ್ಷ ಕೊಟ್ಟು ಸಂಬಳದಲ್ಲಿ ಹಿಡೀತೇನೆ.”ಎಂದಿದ್ದರು. ಏನು ಮಹಾ ಸಂಬಳ ನಂದು. ಹಿಡಿದರೆ  ಮನೆ ನಡೆಯುವ ಗತಿ? ಬ್ಯಾಂಕಿನಲ್ಲಿ ಇದ್ದದ್ದೆಲ್ಲ ಪೊರಕೆ ಹಾಕಿ ಗುಡಿಸಿದರೆ ಇಪ್ಪತ್ತು ಸಾವಿರವಾದೀತು. ಇನ್ನೊಂದು ಲಕ್ಷ ಎಲ್ಲಿ ಹೊಂಚುವುದು? ಚಿಂತೆ ಕಿತ್ತು ತಿನ್ನುತ್ತಿರುವಾಗಲೇ ಮೋಹನ ಮಾವ ಮತ್ತು ಅಪ್ಪನ ಖಾಸಾ ಗೆಳೆಯರಾದ ಗೋವಿಂದ ರಾಜು ಬಂದಿದ್ದರು. “ನಿಮ್ಮ ಅಪ್ಪ-ಅಮ್ಮನಿಗೆ ಇಷ್ಟೆಲ್ಲ ವೈಭವ, ಆಡಂಬರ ಬೇಕಿರಲಿಲ್ಲ ಗೋಪಿ. ಬಹಳ ಕಷ್ಟ ಪಟ್ಟು ಹನಿ ಹನಿ ಕೂಡಿಸಿ ಇಲ್ಲೀವರೆಗೂ ಬಂದಿದ್ದರು”ಎAದು ನೊಂದುಕೊAಡರು. ಮೋಹನ ಮಾವನ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿದ್ದೆ. ಅವನು ಸಮಾಧಾನ ಮಾಡುತ್ತ “ಆದದ್ದಾಯಿತು. ಚಿಂತೆ ಮಾಡ್ಬೇಡ. ಈ ಮನೇನ ಲೀಸಿಗ್ಹಾಕು. ಮೂರು ವರ್ಷವೋ, ಐದು ವರ್ಷವೋ. ಎರಡು ಲಕ್ಷ ಸಿಕ್ಕೇ ಸಿಗುತ್ತೆ. ಅಲ್ಲೀವರ್ಗೂ ಸಣ್ಣ ಮನೇಲಿ ಮಿತವಾಗಿ ಸಂಸಾರ ಮಾಡ್ಕೊ. ನಾನೂ ಕೈಲಾದಷ್ಟು ಸಹಾಯ ಮಾಡ್ತೇನೆ. ನಿನಗೇನೂ ತೊಂದರೆ ಆಗ್ಬಾರ್ದೂಂತ ಅಕ್ಕ, ಭಾವ ಈ ಮಟ್ಟಕ್ಕೆ ತಂದಿಟ್ಟಿದ್ರು. ಆದರೆ ನಿನ್ನ ದೈವ. ಅವರಿಗಾಗಿಯೇ ಅದನ್ನು ಖರ್ಚು ಮಾಡಿದೆ. ಇನ್ನು ಅವರಂತೆಯೇ ಕಷ್ಟ ಬಿದ್ದು ಮೇಲೆ ಬಾ”ಎಂದ. ಸಮಾಧಾನವಾದರೂ ಸಂಕಟ ಕಿಬ್ಬೊಟ್ಟೆಯಿಂದ ಎದ್ದು ಬಂತು.

ಈ ಮನೆ ಕಟ್ಟಲು, ಒಂದು ಮಟ್ಟಕ್ಕೆ ಬರಲು ಎಷ್ಟೆಲ್ಲ ಕಷ್ಟ ಬಿದ್ದಿದ್ದರು ಅಪ್ಪ, ಅಮ್ಮ. ನಾನಾಗ ತೀರಾ ಚಿಕ್ಕವನು. ಆದರೂ ನೆನಪು ಚೆನ್ನಾಗಿದೆ. ಆ ಚಿಕ್ಕ ಗುಡಿಸಲಿನಂಥ ಮನೆ. ಸುತ್ತೆಲ್ಲ ಹೂವು, ಹಣ್ಣು ಮಾರುವವರ, ಮನೆಕೆಲಸದವರ ಮನೆಗಳು. ಸಂಜೆಯಾದರೆ ಸರಾಯಿ ವಾಸನೆ ಹೊತ್ತು ತೂರಾಡುತ್ತ ಬರುವ ಗಂಡಸರು. ಒಂದೇ ರೂಮಿನಲ್ಲಿ ಪಾರ್ಟಿಷನ್, ಮಧ್ಯೆ ಒಂದೇ ದೀಪ, ಅದರ ಬೆಳಕಲ್ಲೇ ಅಮ್ಮ ಅಡಿಗೆ ಮಾಡಬೇಕು. ನಾನು ಓದಬೇಕು. ಅಪ್ಪ ಬೀಡಿ ಸುತ್ತಬೇಕು. ಅವರಿಬ್ಬರ ಕೈಗಳಿಗೆ ಕೆಲಸವಿಲ್ಲದ ನೆನಪೇ ಇಲ್ಲ. ಹೂ ಕಟ್ಟುವುದು, ಬೀಡಿ ಸುತ್ತುವುದು, ಚಾಕಲೇಟ್ ಸುತ್ತುವುದು, ಗಂಧದ ಕಡ್ಡಿ ಹೊಸೆಯುವುದು, ಹುಳಿಪುಡಿ, ಸಾರಿನ ಪುಡಿ, ಹಪ್ಪಳ, ಸಂಡಿಗೆ ಮಾಡುವುದು, ಒಂದೇ ಎರಡೇ. ಒಂದು ತುತ್ತನ್ನು ಎಂದೂ ಚೆಲ್ಲಿದವರಲ್ಲ. ಮೊದಲು ತಂಗಳು ಬಡಿಸಿಕೊಂಡು ತಿಂದು ನಂತರ ಬಿಸಿ ಅಡಿಗೆ. ನನಗೆ ಮಾತ್ರ ವಿನಾಯತಿ ಇತ್ತು. ಓದುವ, ಬೆಳೆಯುವ ಹುಡುಗನಲ್ಲವೇ. ಒಂದು ದಿನಕ್ಕೆ ಒಂದೇ ಪದಾರ್ಥ. ಹುಳಿಯೋ, ಗೊಜ್ಜೋ. ತಿಳಿ ಸಾರಿದ್ದಾಗ ಮಾತ್ರ ಯಾವಾಗಲಾದರೂ ಚಟ್ಣಿ ಮಾಡಿದ ನೆನಪು ಇನ್ನೂ ಹಸಿ ಹಸಿಯಾಗೇ ಇದೆ. ಇಷ್ಟಾದರೂ ಸಾಲ ಮಾಡಿಯೇ ಅಪ್ಪ ಅಂಗೈ ಅಗಲದ ಈ ಸೈಟನ್ನು ಕೊಂಡಿದ್ದ. ನಾಲ್ಕು ಗೋಡೆಗಳ ಮೇಲೆ ಶೀಟ್ ಹಾಕಿಕೊಂಡು ಅನೇಕ ವರ್ಷ ದೂಡಿದೆವು. ನಿಧಾನಕ್ಕೆ ಮನೆಗೆ ಈಗಿನ ರೂಪ ಕೊಟ್ಟೆವು. ಇತ್ತೀಚೆಗೆ ಸೈಕಲ್ ಬಿಟ್ಟು ಲೂನಾ ಕೊಡಿಸಿದ್ದರು.

ನನ್ನ ಮದುವೆಯೂ ಸಹ ಇತಿಮಿತಿಯಲ್ಲೇ ಆಗಿತ್ತು. ದೇವಸ್ಥಾನದ ಪಕ್ಕದ ಪುಟ್ಟ ಹಾಲಿಗೆ ಕಲ್ಯಾಣ ಮಂಟಪದ ರೂಪ ಕೊಟ್ಟಿದ್ದರು. ಈ ಕಾಮಾಕ್ಷತ್ತೆ, ದೊಡ್ಡಮ್ಮ ಎಲ್ಲ ಅಲ್ಲಿಗೇ ಬಂದು, ಮದುವೆ ಮುಗಿಸಿಕೊಂಡು `ಜಿಪುಣ’ ಎನ್ನುತ್ತ ಹಾಗೆಯೇ ಹೊರಟು ಹೋಗಿದ್ದರು. ಸುಧಾ ಬಂದ ಮೇಲೆ ಪರಿಸ್ಥಿತಿ ಕೊಂಚ ಸುಧಾರಿಸಿತ್ತು. ನನ್ನ ಸಂಬಳವೂ ಬರುತ್ತಿತ್ತಲ್ಲ. ಮೊಮ್ಮಕ್ಕಳಾದ ಮೇಲೆ ಇನ್ನೂ ಉದಾರವಾದರು. ಅವರಿಗೆ ಆಟದ ಸಾಮಾನುಗಳು, ತಿಂಡಿ, ಚಾಕೊಲೇಟು ಹೇಳದೆ ಕೇಳದೆ ಬರುತ್ತಿದ್ದವು. ಸಾರಿನ ಪುಡಿ, ಹುಳಿ ಪುಡಿಯ ವ್ಯಾಪಾರ ಇನ್ನೂ ನಡೆದೇ ಇತ್ತು. ಆದರೀಗ….ಎರಡು ಲಕ್ಷದ ಸಾಲ ತೀರಿಸುವ ಬಗೆ…..

“ಅಯ್ಯೋ ದೇವ್ರೆ, ಸಾಲವಾ? ಇವನಿಗಿಷ್ಟೂ ಯೋಗ್ಯತೆ ಇಲ್ಲಾಂತ ನನಗೇನು ಗೊತ್ತು? ಏನೋ, ಧರ್ಮ ಕರ್ಮಕ್ಕನುಗುಣವಾಗಿ ಸಂಪ್ರದಾಯ, ಪಧ್ಧತಿ, ರೀತಿ ಹೇಳಿ ಮಾಡಿಸ್ದೆ. ಸಂಬAಧಾAತ ಹೋದೆ. ಇಲ್ಲವಾದರೆ ನನಗೇಕೆ  ಬೇಕಿತ್ತು?” ಎಂದು ಮೂಗು ಮುರಿದಳಂತೆ ಕಾಮಾಕ್ಷತ್ತೆ. ಅವರ ಮಗಳು ಸುವರ್ಣ ಅಂದು”ಬರೀ ಅನ್ನ, ಸಾರು ತಿಂದು ಬಾಯಿ ಜಡ್ಡುಗಟ್ಟಿದೆ ಅಣ್ಣಯ್ಯ. ಒಂದಷ್ಟು ಬೋಂಡ, ಆಂಬಡೆ ಮಾಡಿಸ್ಕೊಂಡು ಬಾ” ಎಂದವಳು ಇಂದು “ದುಡ್ಡು ಕಮ್ಮಿ ಇದೇಂತ ಹೇಳಿದ್ರೆ ನಾವೇ ಅಡಿಗೆ ಮಾಡ್ತಿದ್ವಪ್ಪ.” ಎಂದಳAತೆ. ಎಲ್ಲ ಅಣ್ಣಯ್ಯನ ಸುದ್ದಿಗಳು. ಇಂಥವರನ್ನು ಸುಪ್ರೀತಗೊಳಿಸಿ, ಹೊಗಳಿಕೆ ಪಡೆಯಲು ಬೆಟ್ಟದಂಥ ಸಾಲವನ್ನು ತಲೆಯ ಮೇಲೆ ಹೊತ್ತೆನೆ? ಅಪ್ಪ,ಅಮ್ಮನೇ ಸರಿ, ಇವರ ಯೋಗ್ಯತೆಯನ್ನು ಕಂಡು ಹತ್ತಿರ ಸೇರಿಸಿರಲಿಲ್ಲ. ಬಂದಾಗ ಒಪ್ಪೊತ್ತು ಊಟ, ಒಂದು ರವಿಕೆ ಬಟ್ಟೆ, ವ್ಯಂಗ್ಯ ಕಟು ನುಡಿಗಳಿಗಿಷ್ಟು         ಖಾರವಾದ ಜವಾಬುಗಳು. ಇವರ ಯೋಗ್ಯತೆಯನ್ನರಿಯಬೇಕೆಂದರೆ ಅವರ ಅನುಭವ ಅದೆಷ್ಟು ಪಕ್ವವಾಗಿರಬೇಕು. ಅವರೆಷ್ಟು ನೊಂದಿರಬೇಕು? ಅವರನ್ನೇ ಅನುಮಾನಿಸಿ ನಾನು ಇಂಥವರೊAದಿಗೆ ಸಂಬAಧ ಸುಧಾರಿಸಲು ಹೊರಟೆನೆ? ಏನೆಲ್ಲ ಯೋಚನೆಗಳ ಮಧ್ಯೆ ಅರಿವು ಮೂಡಿದಂತೆನಿಸಿತ್ತು. ನಾನು, ಸುಧಾ ಈ ವ್ಯವಸ್ಥೆ, ವ್ಯವಹಾರಗಳಲ್ಲಿ ಇನ್ನೂ ಪಳಗಬೇಕು. ಅಮ್ಮ, ಅಪ್ಪನ ಸತ್ವಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಇಬ್ಬರಲ್ಲಿ ಒಬ್ಬರಾದರೂ ಉಳಿದಿದ್ದರೆ ನನಗೀ ಗತಿ ಬರುತ್ತಿರಲಿಲ್ಲ.  ಆದರೂ….ಮತ್ತೆ ಛಲದಿಂದ ಅಪ್ಪ ಅಮ್ಮನ ರೀತಿಯಲ್ಲಿ ತಲೆ ಎತ್ತಿ ನಿಲ್ಲಬೇಕು ಎಂದು ನಿರ್ಧರಿಸಿದಾಗ ಮನ ನಿರಾಳವಾಯಿತು. ಪೂರ್ವದಿಂದ ಬರುತ್ತಿದ್ದ ಎಳೆ ಕಿರಣಗಳು ಆಹ್ಲಾದಕರವಾಗಿ ಆತ್ಮವಿಶ್ವಾಸ ತುಂಬುತ್ತ ಅರಿವಿಗೆ ಹೊಳಪಿತ್ತವು.

ಯಾರೋ ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡರು. ಹಿಂದೆ ಹಿತ್ತಲಲ್ಲಿದ್ದ ತೆಂಗು, ಮಲ್ಲಿಗೆ, ಕನಕಾಂಬರ, ನಿಂಬೆ, ಕರಿಬೇವಿನ ಗಿಡಗಳಿಗೆಲ್ಲ ಮನೆಯೊಂದಿಗೆ ವಿದಾಯ ಹೇಳುವಾಗ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಆದರೂ ಬೇಗ ತಿರುಗಿ ಬರಬೇಕೆಂಬ ಗುರಿ ದೊಡ್ಡದಾಗಿತ್ತು. ನಮ್ಮ ಪುಟ್ಟ ಬಜೆಟ್ಟಿಗೆ ಮನೆ ಸಿಕ್ಕದ್ದೆಲ್ಲಿ ಗೊತ್ತೆ? ಅದೇ ನಾನು ಮಗುವಾಗಿದ್ದಾಗ ವಾಸವಾಗಿದ್ದ ಹಳೇ ಮನೆ ಒಂದಿಷ್ಟು ರಿಪೇರಿಯೊಂದಿಗೆ.  ಎಲ್ಲರಿಗೂ ಹೊರಗೆ ಒಂದೇ ನಲ್ಲಿ, ಸಾಲಾಗಿದ್ದ ನಾಲ್ಕು ಕಕ್ಕಸ್ಸುಗಳೊಡನೆ ಹೊಂದಿಕೊಳ್ಳಬೇಕಾಗಿದೆ. ನಾನು ಸಂಜೆ ನನ್ನ ಮಕ್ಕಳೊಡನೆ ಅಕ್ಕಪಕ್ಕದ ಮಕ್ಕಳಿಗೂ ಟ್ಯೂಶನ್ ಹೇಳುತ್ತೇನೆ. ಸುಧಾ ಹೊಲಿಗೆ ಮಿಶನ್ ತೌರಿನಿಂದ ತಂದು ಹೊಲಿಯುತ್ತಿದ್ದಾಳೆ. ಹುಳಿಪುಡಿ, ಸಾರಿನ ಪುಡಿ     ವ್ಯಾಪಾರವೂ ಇದೆ. ಮಕ್ಕಳು ನಾವೆಲ್ಲ ಒಂದೇ ಟ್ಯೂಬ್‌ಲೈಟಿನ ಬೆಳಕಲ್ಲಿ ಓದಲು ಕೂರುತ್ತೇವೆ. ಸುತ್ತಲೂ ಸಾರಾಯಿಯ ವಾಸನೆ ಇಲ್ಲ ಎಂಬುದೇ ಸಮಾಧಾನದ ಸಂಗತಿ. ಈಗ ನೆಂಟರಿಷ್ಟರೂ ಕಡಿಮೆ. ಮೊದಲಿನಿಂದ ಬರುತ್ತಿದ್ದ   ಮೋಹನ ಮಾವ, ಗೋವಿಂದ ರಾಜುವಿನಂಥ ಆಯ್ದ ಕೆಲವರು ಮಾತ್ರ ಈಗಲೂ ಬರುತ್ತಾರೆ. ಕಾಮಾಕ್ಷತ್ತೆ, ದೊಡ್ಡಮ್ಮ ಮುಂತಾದವರು ಒಮ್ಮೆಯೂ ಬಂದಿಲ್ಲ. ಅಪ್ಪ,ಅಮ್ಮ ಸತ್ತರೂ ಫೋಟೋದಲ್ಲಿ ನಮ್ಮ ಮನದಾಳದಲ್ಲಿ ಇನ್ನೂ ಜೀವಂತವಾಗಿದ್ದಾರೆ. ನಾನು ಮಾತ್ರ ಸಾಲದ ಸುಳಿಯಲ್ಲಿ ಬದುಕಿಯೂ ಸಾಯುತ್ತಿದ್ದೇನೆ. ಇಷ್ಟು ಅರಿವು ನನ್ನಲ್ಲಿ ಮೂಡಿಸಲು ಜವರಾಯ ಅವರನ್ನು ಕೊಂಡೊಯ್ದನೇ? ಎನಿಸುತ್ತದೆ. ಆಗಾಗ ಕನಸಿನಲ್ಲಿ ಅಮ್ಮನ ಕೆಂಪಾದ ಕಣ್ಗಳ ಮುಂದೆ ನಿಂತು ಅಪ್ಪ ನನ್ನನ್ನು ಝಾಡಿಸಿ ಒದ್ದಂತಾಗುತ್ತದೆ.

************************************************

ಮಧುರಾ ಕರ್ಣಮ್

.

One thought on “

  1. ನಮಸ್ನಿತೆ, ಮ್ಮ ಬಹಳ ಬರಹಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಓದಿರುವೆನು. ನೀವು ಬರೆಯುವ ಕತೆಗಳು ತುಂಬಾ ಚೆನ್ನಾಗಿರುತ್ತವೆ. ಈ ಕತೆಯೂ ಇಷ್ಟವಾಯ್ತು. ನಿಮ್ಮ ಬರಹಗಳ ಅಭಿಮಾನಿ ನಾನು.

Leave a Reply

Back To Top