ಮಣ್ಣು ,ಅನ್ನ ಮತ್ತು ಪ್ರಭು

ಕವಿತೆ

ಮಣ್ಣು ,ಅನ್ನ ಮತ್ತು ಪ್ರಭು

ಬಿ.ಶ್ರೀನಿವಾಸ

Home gardening - young rucola - top view

ನೆಲಕೆ ಬಿದ್ದರೆ ಅನ್ನದಾತ
ದಂಗೆಯೇಳುತ್ತದೆ ಅನ್ನ

*

ಮಕ್ಕಳ ಮುಂದೆ ಅಪ್ಪ ಅಳಬಾರದು

ಅಪ್ಪನ ಮುಂದೆ ಮಕ್ಕಳು ಸಾಯಬಾರದು

ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು

ಸುಳ್ಳಾಯಿತು
ಲೋಕರೂಢಿಯ ಮಾತು.

*

ಮಣ್ಣಿನೆದೆಯ ಮೇಲೆಯೆ ಇದ್ದವು ಪಾದಗಳು
ನೆಲದ ಮೇಲಿರುವ ತನಕ

ಅದೇ ಮಣ್ಣಿನ ಮೃದು ಪಾದಗಳು
ನೆಲದಡಿಗೆ ಸೇರಿದವನ ಎದೆಯ ಮೇಲೆ

*

ಮಣ್ಣಿಗೂ
ಅಪ್ಪನಿಗೂ ಸಂಬಂಧ ಕೇಳುವಿರಿ ನೀವು

ಇದೆ
ಅಜ್ಜ-ಮೊಮ್ಮಗನ ಸಂಬಂಧ!

*

ಉಣ್ಣುವ ಅನ್ನದ ಕಣ್ಣು
ಎದುರಿಸಲಾಗದ ಕೊಲೆಗಾರ

ಹೇಡಿ
ಹೇಡಿಯೆಂದು ಕಿರುಚಾಡುತ್ತಾನೆ

*

ಕಳಚಿ ಬಿದ್ದಿವೆ
ಪದವಿಗಳು,ಪುರಸ್ಕಾರಗಳು
ಅಕ್ಷರಗಳು….ಬೀದಿಯ ತುಂಬಾ

ನಾನೀಗ
ಲೋಕದ ಸಾಲಿಯ ಪಾಲಿನ ಬೆತ್ತಲೆ ಅಪರಾಧಿ

*

ಮಾತು
ಮಾತು…ಬರೀ ಮಾತೂ
ಮಾತಾಡುತ್ತಲೇ ಇದ್ದಾನೆ ಪ್ರಭು

ದಯವಿಟ್ಟು ಯಾರಾದರೂ ಸುಮ್ಮನಿರಿಸಿ
ನಾವು ಉಸಿರಾಡಬೇಕಿದೆ.

*********************

Leave a Reply

Back To Top