
ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ-16
ಆತ್ಮಾನುಸಂಧಾನ
ಗಂಗಾವಳಿಯಲ್ಲಿ ಮೂಲ್ಕಿ ಓದಿದ ದಿನಗಳು

ನಮ್ಮ ಊರಿನಲ್ಲಿ ಪೂರ್ಣ ಪ್ರಾಥಮಿಕ ಶಾಲೆ ಇರಲಿಲ್ಲ. ಮುಂದಿನ ತರಗತಿಗಳಿಗಾಗಿ ಗಂಗಾವಳಿ ಭಾಗದ “ಜೋಗಣೆ ಗುಡ್ಡ” ಎಂಬಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಸೇರಬೇಕಾಯಿತು. ಹಾರು ಮಾಸ್ಕೇರಿ ಶಾಲೆಯ ಕುಪ್ಪಯ್ಯ ಗೌಡ, ಗಣಪತಿ ಗೌಡ ಮುಂತಾದವರೊಡನೆ ಮಾಸ್ಕೇರಿಯ ದೇವರಾಯ ಇತ್ಯಾದಿ ಗೆಳೆಯರೊಂದಿಗೆ ಗಂಗಾವಳಿಯ ಶಾಲೆಗೆ ಸೇರಿಕೊಂಡೆವು.
ಅಲ್ಲಿ ಗಾಬಿತ ಸಮಾಜದ ರಾಧಾಕೃಷ್ಣ ಎಂಬುವವರು ಬಹುಶಃ ಮುಖ್ಯಾಧ್ಯಾಪಕರಾಗಿದ್ದರು ಎಂದು ನೆನಪು. ತುಂಬ ಶಾಂತ ಸ್ವಭಾವದ ಅವರು ಮಕ್ಕಳನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಶಾಲೆಯಲ್ಲಿ ನಮ್ಮ ಸಹಪಾಠಿಗಳಾಗಿದ್ದ ಗೋವಿಂದ ನಾಯ್ಕ, ಗಣಪತಿ ನಾಯ್ಕ, ವಿಶ್ವನಾಥ ನಾಯಕ, ಶಾರದಾ ನಾಯಕ, ಸರಸ್ವತಿ ಗುನಗಾ, ಉಲ್ಕಾ ನಾರ್ವೇಕರ್ ಮುಂತಾದವರು ಆತ್ಮೀಯ ಸ್ನೇಹಿತರಾಗಿ ದೊರೆತರು.
ಮೂಲ್ಕಿ (ಏಳನೆಯ ತರಗತಿ) ಓದುವ ಹೊತ್ತಿಗೆ ನಮಗೆ ತರಗತಿಯ ಶಿಕ್ಷಕರಾಗಿ ಅಬ್ದುಲ್ ಮಾಸ್ತರ್ ಎಂಬ ಮುಸ್ಲಿಂ ಯುವ ಅಧ್ಯಾಪಕರು ದೊರೆತರು. ಇನ್ನೂ ಅವಿವಾಹಿತರಾಗಿದ್ದ ಅವರು ಆಟ ವಿನೋದಗಳಲ್ಲಿ ಮಕ್ಕಳೊಡನೆ ಮಕ್ಕಳಂತೆ ಬೆರೆತು ವ್ಯವಹರಿಸುತ್ತಿದ್ದರಾದರೂ ತರಗತಿಯ ಪಾಠದಲ್ಲಿ ಕಟ್ಟುನಿಟ್ಟಿನ ಶಿಸ್ತುಪಾಲನೆ ಮಾಡುತ್ತಿದ್ದರು. ಅವರ ತಂದೆಯವರು ಊರಿನ ಗಣ್ಯ ವ್ಯಕ್ತಿಗಳೆನ್ನಿಸಿ ಹೆಸರು ಮಾಡಿದ್ದರು. ಬಹುಶಃ ಶಿಕ್ಷಕ ವೃತ್ತಿಯನ್ನೇ ಪೂರೈಸಿ ನಿವೃತ್ತಿ ಹೊಂದಿದವರಾಗಿರಬೇಕು. ಸಾಮಾನ್ಯವಾಗಿ ಊರಿನ ಎಲ್ಲರೂ ಮಾಸ್ತರ ಸಾಹೇಬರು ಎಂದೇ ಕರೆಯುವ ವಾಡಿಕೆ ಇತ್ತು. ಹೀಗಾಗಿ ಅವರ ನಿಜವಾದ ಹೆಸರು ಏನೆಂಬುದು ನಮಗೆ ತಿಳಿಯಲೇ ಇಲ್ಲ. ಮಾಸ್ತರ ಸಾಹೇಬರು ಊರಿನ ಮಸೀದಿಯ ಮೇಲ್ವಿಚಾರಣೆಗೆ ನೋಡಿಕೊಂಡು ಮಂತ್ರ ತಂತ್ರಗಳಿಗೂ ಖ್ಯಾತರಾಗಿದ್ದರು. ಭೂತ ಪಿಶಾಚಿ ಕಾಟದಿಂದ ಬಳಲುವವರಿಗೆ ಮಂತ್ರಿಸಿದ ಅಕ್ಷತೆ ಮತ್ತು ವಿಭೂತಿಯನ್ನು ನೀಡಿ ಗುಣಪಡಿಸುತ್ತಿದ್ದರು. ನಾಗರ ಹಾವುಗಳಿಗೆ ತಡೆ ಹಾಕುವುದರಲ್ಲಿಯೂ ಪರಿಣಿತರಾಗಿದ್ದರು. ನಾಗರ ಹಾವುಗಳಿಗೆ ಗಾಯ ಮಾಡಿದವರು, ನಾಗ ದೋಷಕ್ಕೆ ಗುರಿಯಾದವರು ಮಾಸ್ತರ ಸಾಹೇಬರ ಬಳಿಗೆ ಬಂದು ಅಕ್ಷತೆ ಪಡೆದು ತಡೆ ಹಾಕಿಸಿ ಪರಿಹಾರ ಕಾಣುತ್ತಿದ್ದರು. ಊರಿನಲ್ಲಿ ಮಾತ್ರವಲ್ಲದೆ ನೆರೆಯ ಅಂಕೋಲಾ, ಕುಮಟಾ, ಹೊನ್ನಾವರ ಇತ್ಯಾದಿ ಜಿಲ್ಲೆಯ ಬೇರೆ ಕಡೆಯಿಂದ ಜನರು ಇವರ ಬಳಿಗೆ ಬರುತ್ತಿದ್ದರಲ್ಲದೇ ಬೇರೆ ಬೇರೆ ಊರುಗಳಿಗೂ ಸಾಹೇಬರನ್ನು ಕರೆಸಿಕೊಳ್ಳುತ್ತಿದ್ದರು. ಇದರಿಂದಾಗಿ ಮಾಸ್ತರ ಸಾಹೇಬರ ಕುರಿತು ಆಗಲೇ ಎಳೆಯರಾಗಿರುವ ನಮ್ಮ ಮನಸ್ಸಿನಲ್ಲಿಯೂ ಗೌರವದ ಭಾವನೆ ಇತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಧರ್ಮಿಯರಿಗೂ ಅವರು ಪ್ರಿಯರಾಗಿದ್ದರು. ಅಬ್ದುಲ್ ಮಾಸ್ತರರು ಇಂಥವರ ಮಗನೆಂಬುದಕ್ಕಾಗಿ ಅವರ ಒಡನಾಟಕ್ಕೆ ಮುನ್ನವೇ ನಮ್ಮೆಲ್ಲರ ಪ್ರೀತಿಗೆ ಪಾತ್ರರಾದುದು ಸಹಜವೇ ಆಗಿತ್ತು.
ಅಬ್ದುಲ್ ಮಾಸ್ತರರು ನಮ್ಮ ವರ್ಗಶಿಕ್ಷಕರಾಗಿ ದೊರೆತಮೇಲೆ ಅವರ ಪಾಠದ ಶಿಸ್ತು, ಆಟದ ಅಕ್ಕರೆ ಇತ್ಯಾದಿಗಳು ಪರಿಚಯವಾಗುತ್ತ ಅವರ ವ್ಯಕ್ತಿತ್ವವು ಅಸಾಧಾರಣವೆಂಬುದು ನಮ್ಮ ಅರಿವಿಗೆ ಬರುತ್ತ ಬಹುಶಃ ನಮ್ಮೆಲ್ಲರ ಬದುಕಿನಲ್ಲಿ ಮರೆಯಲಾಗದ ಅವಿಸ್ಮರಣೀಯ ವ್ಯಕ್ತಿಯಾಗಿಯೇ ಸೃತಿಪಟಲದಲ್ಲಿ ನೆಲೆಗೊಂಡಿದ್ದಾರೆ.
ಹಗಲಿನ ತರಗತಿಯ ಪಾಠವಲ್ಲದೆ “ರಾತ್ರಿ ಶಾಲೆ”ಯ ಪದ್ಧತಿಯನ್ನು ಅವರು ಆರಂಭಿಸಿದ್ದರು. ಅಂದಿನ ದಿನಗಳಲ್ಲಿ ಶಾಲೆಯ ಬಹುತೇಕ ಮಕ್ಕಳು ತೀರ ಬಡ ಕುಟುಂಬದಿಂದ ಬರುತ್ತಿದ್ದರು. ಯಾರ ಮನೆಯಲ್ಲೂ ವಿದ್ಯುತ್ ಸಂಪರ್ಕವಾಗಲೀ ರಾತ್ರಿ ಓದಿಗೆ ಸಮರ್ಪಕ ಬೆಳಕಿನ ವ್ಯವಸ್ಥೆಯಾಗಲೀ ಇರಲಿಲ್ಲ. ಇದನ್ನು ಗೃಹಿಸಿದ ಅಬ್ದುಲ್ ಮಾಸ್ತರರು ಮೂಲ್ಕಿ ಪರೀಕ್ಷೆಗೆ ಕೂಡ್ರುವ ಎಲ್ಲ ಮಕ್ಕಳಿಗಾಗಿ ಶಾಲೆಯಲ್ಲಿಯೇ ಸಾಮೂಹಿಕ ಓದಿನ ಅನುಕೂಲ ಕಲ್ಪಿಸಿ ಬೆಳಕಿನ ವ್ಯವಸ್ಥೆ ಮಾಡಿದ್ದರು. ಸರಿರಾತ್ರಿಯ ಹೊತ್ತಿಗೆ ನಮ್ಮ ನಮ್ಮ ಪಾಲಕರು ಬಂದು ನಮ್ಮನ್ನು ಮನೆಗೆ ಕರೆದೊಯ್ದು ಸಹಕಾರ ನೀಡುತ್ತಿದ್ದರು.
ಮೂಲ್ಕಿ ಪರೀಕ್ಷೆ ನಡೆಯುವ ಗೋಕರ್ಣಕಡೆಯ ಪರೀಕ್ಷೆ ಕೇಂದ್ರಕ್ಕೆ ನಮ್ಮನ್ನು ಕರೆದೊಯ್ಯುವವರೆಗಿನ ಕಾಳಜಿಯನ್ನು ತೋರಿದ ಅಬ್ದುಲ್ ಮಾಸ್ತರರ ಕರ್ತವ್ಯ ದಕ್ಷತೆ ಎಲ್ಲ ಮಕ್ಕಳ ಮನಸ್ಸನ್ನು ಗೆದ್ದುಕೊಂಡಿತ್ತು. ನಮ್ಮ ಪರೀಕ್ಷೆಯ ಸಮಯದಲ್ಲಿಯೇ ನಡೆಯಬೇಕಿದ್ದ ತಮ್ಮ ವಿವಾಹ ಸಮಾರಂಭವನ್ನೇ ಮುಂದೆ ಹಾಕಿದ ಮಾಸ್ತರರು ನಮ್ಮ ಪರೀಕ್ಷೆಗಳು ಮುಗಿದ ಮರುದಿನ ಎಲ್ಲ ವಿದ್ಯಾರ್ಥಿಗಳನ್ನು ಮದುವೆಗೆ ಆಮಂತ್ರಿಸಿ ಮದುವೆ ಮಾಡಿಕೊಂಡದ್ದು ಇನ್ನೊಂದು ವಿಶೇಷವೇ ಆಗಿದೆ!
ಗಂಗಾವಳಿ ಶಾಲೆಯ ಅಂದಿನ ದಿನಗಳು ನಮಗೆ ಅತ್ಯಂತ ಪ್ರೀತಿಯ ದಿನಗಳಾಗಿದುದ್ದಕ್ಕೆ ಮತ್ತೊಂದು ಪ್ರಬಲ ಕಾರಣವಿದೆ. ಅದು ಶಾಲೆಯಲ್ಲಿ ದೊರೆಯುವ ಉಪ್ಪಿಟ್ಟು-ಹಾಲು!
ಭಾರತದ ಬಡತನವನ್ನು ಗೃಹಿಸಿದ ಅಮೇರಿಕೆಯ ಸಂಸ್ಥೆಯೊಂದು ಶಾಲಾ ಮಕ್ಕಳಿಗಾಗಿ ಗೋವಿನ ಜೋಳದ ರವೆ ಮತ್ತು ಹಾಲಿನ ಪೌಡರ್ ಪಾಕೇಟ್ಗಳನ್ನು ಉಚಿತವಾಗಿ ಪೂರೈಸಿ ಮಕ್ಕಳಿಗೆ ಮಧ್ಯಾಹ್ನದ ಹೊತ್ತು ಉಪ್ಪಿಟ್ಟು-ಹಾಲು ಸೇವಿಸುವ ಅವಕಾಶ ಕಲ್ಪಿಸಿತ್ತು. ಈ ಸೌಲಭ್ಯವು ನಮ್ಮ ಗಂಗಾವಳಿಯ ಶಾಲೆಗೂ ದೊರೆತಿತ್ತು. ಅಂದು ಅಲ್ಲಿ ಓದುವ ಬಹುತೇಕ ಮಕ್ಕಳು ಬಡ ರೈತರ, ಕೂಲಿ ಕಾರ್ಮಿಕರ ಕುಟುಂಬದಿಂದಲೇ ಬಂದವರಾದುದರಿಂದ ಎಲ್ಲರಿಗೂ ಇದು ಅರ್ಧ ಹಸಿವು ಹಿಂಗಿಸಿಕೊಳ್ಳುವ ಸದವಕಾಶವೇ ಎನಿಸಿತ್ತು.!
ಉಪ್ಪಿಟ್ಟು – ಹಾಲು ಸಿದ್ಧ ಪಡಿಸುವುದಕ್ಕಾಗಿ ಪ್ರತಿದಿನವೂ ಮೈದಿನ್ ಸಾಬ್ ಎಂಬ ಮುಸ್ಲಿಂ ಗ್ರಹಸ್ಥರೊಬ್ಬರು ಬರುತ್ತಿದ್ದರು. ಶಿಕ್ಷಕರ ಅನುಮತಿಯಿಂದಲೇ ನಾಲ್ಕು ಜನ ವಿದ್ಯಾರ್ಥಿಗಳು ಪಾಳಿಯ ಪ್ರಕಾರ ಮೈದಿನ್ ಸಾಬರಿಗೆ ನೆರವಿಗೆ ನಿಲ್ಲುತ್ತಿದ್ದರು. ಹೀಗೆ ಸಹಕರಿಸುವ ನಾಲ್ವರಿಗೆ ಉಪ್ಪಿಟ್ಟಿನ ಒಂದು ವಿಶೇಷ ಹೆಚ್ಚುವರಿ ಪಾಲು ಲಭಿಸುತ್ತಿತ್ತು. ಆದರೆ ಈ ಹೆಚ್ಚುವರಿ ಪಾಲಿನ ಆಸೆಯಿಂದ ಈ ಕೆಲಸಕ್ಕೆ ತಾ ಮುಂದೆ ನಾ ಮುಂದೆ ಎಂದು ಪೈಪೋಟಿ ನಡೆಸುವ ನಮ್ಮ ಸ್ನೇಹಿತರು ಹೇಗೆ ಮೇಲಾಟ ನಡೆಸುತ್ತಿದ್ದರು ಎಂಬುದನ್ನು ಇಂದು ನೆನೆಯುವಾಗ ನಗುವೇ ಬರುತ್ತದೆ. ಆದರೆ ಅಂದಿನ ಆ ದಿನಗಳ ಹಸಿವಿನ ತೀವೃತೆಯ ಕುರಿತು ವಿಷಾದವೂ ಎನಿಸುತ್ತದೆ.
ಗಂಗಾವಳಿ ಶಾಲೆಯ ಓದಿನ ದಿನಗಳು ನಮ್ಮೆಲ್ಲರ ಮನಸ್ಸಿನ ಪುಟಗಳಲ್ಲಿ ಅವಿಸ್ಮರಣೀಯವಾಗಿರುವುದಕ್ಕೆ ಅಲ್ಲಿನ ಶಿಕ್ಷಕರು, ಸಹಪಾಠಿಗಳು, ಕಾರಣರಾಗಿದ್ದಾರೆ. ಅಂದು ಪರೀಕ್ಷೆ ಮುಗಿಸಿ ಶಾಲೆಯಿಂದ ನಿರ್ಗಮಿಸುವ ದಿನ ಅಪಾರವಾದ ನೋವು ನಮ್ಮೆಲ್ಲರ ಎದೆ ತುಂಬಿತ್ತು. ಇದಕ್ಕಿಂತ ಮುನ್ನ ಮತ್ತು ನಂತರವೂ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮತ್ತು ಓದು ಮುಗಿಸಿ ನಿರ್ಗಮಿಸುವ ಸನ್ನಿವೇಶಗಳು ಎದುರಾಗಿವೆ. ಆದರೆ ಗಂಗಾವಳಿಯ ಹಿರಿಯ ಪ್ರಾಥಮಿಕ ಶಾಲೆಯ ಅಗಲುವಿಕೆಯಲ್ಲಿ ಉಂಟಾದ ನೋವಿನ ಅನುಭವ ಮತ್ತೆಂದೂ ನಮ್ಮನ್ನು ಬಾಧಿಸಲಿಲ್ಲ
******************************************************************
ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಗುರೂಜಿ,
ನಾವು ಆವಾಗ ಅಧ್ಯಾಪಕರನ್ನು ಗುರೂಜಿ ಎಂದು ಕರೆಯುವ ರೂಢಿವಿತ್ತು. ಹೆಚ್ಚೂಕಡಿಮೆ ನನ್ನ ಪ್ರಾಥಮಿಕ ಶಾಲಾ ಜೀವನ ನಿಮ್ಮನ್ನೆ ಹೋಲುತ್ತದೆ.
ಗುರೂಜಿ ನಿಮಗೆ ಒಂದು ಸಲಹೆ ನೀಡುತ್ತೇನೆ, ಯಾವ ಯಾವ ವರ್ಷದಲ್ಲಿ ನಡೆದವು ಎಂದು ವರ್ಷದ ಹೆಸರು ಬರೆದರೆ ಇನ್ನೂ ಚೆನ್ನಾಗಿರುತ್ತದೆ. ಇವನ್ನು ಓದುವಾಗ ನನ್ನ ಕಿರಿಯ / ಹಿರಿಯ ಪ್ರಾಥಮಿಕ ಶಾಲೆಯ ನೆನಪು ಬಂತು (1967 ಇಂದ 1974). ನಮ್ಮ ಊರಿನಲ್ಲಿ ಕೂಡ ಕಿರಿಯ ಪ್ರಾಥಮಿಕ ಶಾಲೆವಿತ್ತು, ಹಿರಿಯ ಪ್ರಾಥಮಿಕ ಶಾಲೆ ಬೇರೆ ಹಳ್ಳಿಗೆ ಬೆಳಿಗ್ಗೆ ಹೋಗಿ ಸಾಯಂಕಾಲ ಮನೆಗೆ ಬರುವ ರೂಢಿ. ದಿನಾಲು 3 ಕಿಲೊ ಮೀಟರ್ ಕಾಡು ದಾರಿಯಲ್ಲಿ ಹೋಗಿ ಬರುವವುದು.
ನಿಮ್ಮ ಲೇಖನ ಓದಿ ನನ್ನ ಹಳೆಯ ನೆನಪುಗಳು ಬರುತ್ತಿದೆ.
ಗುರೂಜಿ ನಿಮ್ಮ ಈ ಬರಹಕ್ಕೆ ನನ್ನ ಗಳು.
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ
ಶಾಲಾದಿನಗಳ ಸುಂದರ ನೆನಪುಗಳು ಚೆಂದವಾಗಿ ಬಂದಿದೆ.
ಹಾವುಗಳಿಗೆ ತಡ ಕುಟ್ಟುವ ಕೆಲಸ ಮಾಸ್ತರಸಾಬರ ಹೆಸರು ಗಳಿಸಿದ್ದು ನಾನು ಕೇಳಿದ್ದೇನೆ. ಧನ್ಯವಾದಗಳು ಸರ್
ಧನ್ಯವಾದಗಳು
ಗಂಗಾವಳಿಯ ಪ್ರಾಥಮಿಕ ಶಾಲೆಯ ನೆನಪಿನ ಸುರುಳಿ ನೈಜಚಿತ್ರಣವನ್ನು ತೆರೆದಿಟ್ಟ ಅನುಭವವಾಯಿತು.
ಧನ್ಯವಾದಗಳುಸರ್
ಸರ,
ಗಂಗಾವಳಿ ಶಾಲೆಯ ನೆನಪುಗಳು ಅವಿಸಂರ್ಣಿಯ ನಾನುಸಣ್ಣವನಿರುವಾಗ ಹಾವಿಗೆ ತಡೆಯ ಕುರಿತು ಮಾಸ್ತರ ಸಾಹೇಬರ ಹತ್ತಿರ ಹೋಗಿದ್ದೆ. ತಮ್ಮ ಮುಲ್ಕಿ ಶಿಕ್ಷಣದ ನೈಜ ಚಿತ್ರಣ ಮೂಡಿಬಂದಿದೆ.
ಧನ್ಯವಾದಗಳು ಬೋರ್ಕರ್