ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಆಡುಭಾಷೆಯ ಸವಿ ಗೋದಾನ.

ಪುಸ್ತಕ ಸಂಗಾತಿ ಆಡುಭಾಷೆಯ ಸವಿ     ಗೋದಾನ. ಕನ್ನಡ ನುಡಿ’  ಯನ್ನು   ಮೂರು ರೀತಿಯಿಂದ ಅಭಿವ್ಯಕ್ತ    ಗೊಳಿಸಬಹುದೆಂದು ಗೊತ್ತಿರುವ ಸಂಗತಿ. ಅದು ಶಿಷ್ಟ, ಜಾನಪದ ಮತ್ತು ಆಡು ಭಾಷೆ.ನಾನು,ನೀವೂ ಸೇರಿದಂತೆ ಬರಹಗಾರ,ಬರಹಗಾರ್ತಿಯರು, ಅರಿತೋ ಅರಿಯದೆಯೋ,ಗ್ರಾಂಥಿಕ ಭಾಷೆಗೆ ಮರುಳಾಗಿಬಿಟ್ಟಿದ್ದೇವೆ.ಜನಪದ ಭಾಷೆಗೆ ಹತ್ತಿರ ವಾಗಿದ್ದ,ಅಡುಕನ್ನಡವನ್ನು ಜೀವಂತವಾಗಿಟ್ಟವರು ನಮ್ಮ ಗ್ರಾಮೀಣ ಜನಾಂಗ.ಅವರಿಗೆ ಶಿಷ್ಟ ಜನಗಳು ಮಾಡುತ್ತಿರುವ ಅನ್ಯಾಯ ಇದು ಎಂದೇ ಹೇಳಬಹುದು ಎಂದು ನಾನು ಇದೇ ಅಂಕಣದಲ್ಲಿ ಈ ‌ಮೊದಲೇ ಹೇಳಿದಂತೆ ನೆನಪು. ನಮ್ಮ ಓದು ,ಕತೆ,ವಸ್ತು,ಪಾತ್ರ,ವಾಕ್ಯ ರಚನೆ ಗಳ ಜೊತೆಗೆ ಭಾಷಾ ಸಂಪತ್ತಿನ ಕಡೆಗೂ ಜ್ಞಾನ ಹಾಯಿಸಿದಾಗ ಬಳಕೆಯಾದ ಭಾಷೆಯ ಪ್ರಭೇದ  ಗಮನಕ್ಕೆ ಬರುವಂತಾಗುತ್ತದೆ. ಆಗ ಮಾತ್ರ,ನಮ್ಮ ರಾಚನಿಕ ಕ್ರಿಯೆಯಲ್ಲಿ ಅದು ಪದ್ಯವೇಆಗಿರಲಿ,ಗದ್ಯವೇ ಆಗಿರಲಿ, ನಮ್ಮ ಆಯ್ಕೆಯ ಭಾಷೆ ಎಂತಹದು,  ಅದು ಎಷ್ಟು,ಹಿತ ಮತ್ತು  ಸಹ್ಯ  ಎನ್ನು ವುದರ ಕಡೆಗೆ ನಮ್ಮ ಒಲವು ಸಹಜವಾಗಿ ಬೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಶೀಕಾಂತ  ಕಕ್ಕೇರಿಯವರು ರಚಿಸಿದ, ಮುನ್ಷಿ ಪ್ರೇಮಚಂದ ಅವರ ಕಾದಂಬರಿ,’ಗೋದಾನ ‘ ಆಧಾರಿತ ಅದೇ ಶೀರ್ಷಿಕೆಯ ನಾಟಕವನ್ನು ನೋಡಬೇಕಾಗುತ್ತದೆ.ಅಚ್ಚ ಹೈದರಾಬಾದ್ ಕರ್ನಾಟಕದ ಭಾಷೆಯಲ್ಲಿ ರಚಿತವಾಗಿರುವ ಇದು ೩೯೦ ಪುಟಗಳ,೪೩ ಪಾತ್ರಗಳ,೩೪ ದೃಶ್ಯಗಳ ( ಅಂಕಗಳು ಎಂದು ವಿಭಜನೆಯಿಲ್ಲ) ಸುದೀರ್ಘಾವಧಿಯ ನಾಟಕ. ಇದು ನನಗೆ ಖುಷಿ ನೀಡಲು ಕಾರಣವಾದ ಎರಡು ಸಂಗತಿಗಳನ್ನು ಹೇಳಿ ವಿಷಯ ಪ್ರವೇಶಿಸಲು ಇಷ್ಟಪಡುತ್ತೇನೆ ೧. ಗೋದಾನ ನಾಟಕದ ಭಾಷೆ, (ಮೇಲೆ ಹೇಳಿದ ಆಡು ಭಾಷೆ) .೨. ಶ್ರೀಕಾಂತ ಕಕ್ಕೇರಿಯವರ ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದವರು. ಪ್ರತಿಷ್ಟಿತ ನೃಪತುಂಗ ಶಾಲೆಯ ವಿದ್ಯಾರ್ಥಿ ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವೀಧರರು. ರಾಯಚೂರು ಕಲಬುರ್ಗಿಗಳ ಇಂಜನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು.ಸಮುದಾಯ ಸಂಘಟನೆಯೊಂದಿಗೆ ಗುರುತಿಸಿ ಕೊಂಡವರು.ಉತ್ತಮ ನಾಟಕಕಾರರು,ನಟರೂ,ರಂಗತಜ್ಞರೂ ಹೌದು. ಇಷ್ಟೆಲ್ಲ ಹೇಳಿಯಾದ ಮೇಲೆ ಗೋದಾನ ನಾಟಕದ ವೈಶಿಷ್ಟ್ಯ ಕುರಿತು ಹೇಳಬೆಕಾಗಿಲ್ಲಎಂದು ಕೊಳ್ಳಲೇ ? ಆದರೂ ಪರಿಚಯಾತ್ಮಕ ವಾಗಿ ಒಂದೆರಡು ಮಾತು ಅಗತ್ಯ ಎನಿಸುತ್ತಿದೆ. ಹಾಗೆ ನೋಡಿದರೆ,  ನಮ್ಮಲ್ಲಿ   ದಲಿತ ಸಾಹಿತ್ಯ ತನ್ನದೇ ಆದ ನೆಲೆ ಕಂಡುಕೊಂಡಿದ್ದು ೧೯೭೦ ಸುಮಾರಿಗೆ ಎಂದು ಹೇಳಬಹುದು.ದಲಿತ ಜನಾಂಗದ ವಿರುದ್ದ ಆಗುತ್ತ ಬಂದಿರುವ, ಅನ್ಯಾಯ, ಅತ್ಯಾಚಾರದ ವಿರುದ್ಧ ಸಿಡಿದೆದ್ದು ನಡೆದ ಹೋರಾಟವನ್ನೇ ಕನ್ನಡ ಸಾಹಿತ್ಯ ಬಂಡಾಯ ಚಳುವಳಿ ಎಂದು ಗುರುತಿಸಲಾಯಿತು. ಮತ್ತು ಜನಾಂಗದ ವಿರುದ್ಧ ಉಂಟಾದ ದಬ್ಬಾಳಿಕೆಗಳು ಅಕ್ಷರರೂಪ ಪಡೆದುಬಂದ ಸಾಹಿತ್ಯವೇ ದಲಿತ ಸಾಹಿತ್ಯ ಎನಿಸಿಕೊಂಡಿತು.ಇನ್ನೂ ಹೇಳುವದಾದರೆ,ದಲಿತ ಸಾಹಿತ್ಯದ ಕುರುಹು ನಮಗೆ ೧೧ ನೆಯ ಶತಮಾನದಲ್ಲಿ ಸಿಗುತ್ತವೆ.ಕಲ್ಯಾಣ ಕ್ರಾಂತಿಯ ತಳಹದಿ,ದಲಿತ ಬಂಡಾಯ ಸಾಹಿತ್ಯದ ನಾಂದಿ ಎಂದೇ ಹೇಳಬಹುದು.ತೆಲುಗಿನ ವಿಪ್ಲವ ಸಂಘಟನಕಾರರಾದ,ಶ್ರೀ ವರವರರಾವ ಹೇಳಿದ ಮಾತೊಂದು ನೆನಪಿಗೆ ಬಂತು.” ವಿಪ್ಲವ ಸಂಘಟನೆಯ ಮೂಲ ಬೇರುಗಳನ್ನು ನಾವು  ಬಸವಣ್ಣನವರ ವಿಚಾರಧಾರೆ ಯಲ್ಲಿ ಕಾಣುತ್ತೇವೆ ” ಅಂದಿನ ದಿನಗಳಲ್ಲಿಯ ‘ಸಾಯುಧ ಪೋರಾಟ’ ವಿರಸಂ ಸ್ಥಾಪನೆ,ಜನನಾಟ್ಯಮಂಡಲಿ,ದಿಗಂಬರ ಕವಿಗಳು, ಹೀಗೆ ಎಲ್ಲವೂ ಆಂಧ್ರ-ತೆಲಂಗಾಣಗಳಲ್ಲಿ ನಡೆದ ಹೋರಾಟಗಳು ನೆನಪಿಗೆ ಬರುತ್ತವೆ..ಕನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ, ಕುವೆಂಪು,ಕಾರಂತ ಮುಂತಾದವರು ತಮ್ಮಕೃತಿಗಳಲ್ಲಿ ಈ ಶೋಷಣೆಯ ವಿರುದ್ದ ದನಿ ಎತ್ತಿ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಬರಗೂರು ರಾಮಚಂದ್ರಪ್ಪ,ದೇವನೂರು ಮಹದೇವ,ಚೆನ್ನಣ್ಣ ವಾಲಿಕಾರನಂತವರು ಇದಕ್ಕೆ ಒಳ್ಳೆಯ ತಿರುವು ನೀಡಿದರು.   ಬಂಡಾಯ ಸಾಹಿತ್ಯ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ,ದಲಿತರು ಬರೆದದ್ದೇ ದಲಿತ ಸಾಹಿತ್ಯ ಎನ್ನುವ ವಾದವೂ ಕೇಳಿ ಬಂದಿತು. ಅದಿಲ್ಲಿ ಬೇಡ. ಮುನ್ಷಿ ಪ್ರೇಮಚಂದರ ‘ಗೋದಾನ’ವೂ  ಇದೇ ವಿಷಯವನ್ನು ಪ್ರತಿಪಾದಿಸಿರುವುದು ನೋಡಿದಾಗ ಇಂತಹ ಬದುಕು ಮತ್ತದರ ವಿರುದ್ಧದ ದನಿ ದೇಶಾದ್ಯಂತ ಒಕ್ಕೊರಲಿನಿಂದ  ಸಾಗಿ ಬಂದಿದೆ ಇಂದಿಗೂ ಅದು ಕೇಳಿ ಬರುತ್ತಲೇ ಇದೆ. ಎಂದೇ ಹೇಳಬಹುದು ಕ್ರಿ.ಶ.೧೯೩೬ ರಲ್ಲಿದ್ದ ದೇಶದ ಪರಿಸ್ಥಿತಿಗಳಾದ,ಜಮೀನುದಾರಿ, ವಸಾಹತು ಶಾಹಿ,ಹೊಸದನ್ನು ಒಪ್ಪಿ ಕೊಳ್ಳದ, ಹಳೆಯದನ್ನೂ ಬಿಡಲಿಚ್ಛಿಸದ,ಹಮ್ಮಿನ ವಿಲಾಸೀ ಜೀವನಕ್ಕೆ ಒಗ್ಗಿಹೋದ,ಊರ ಜಹಗೀರದಾರರುಗಳಾದ, ರಾಜಾಸಾಬ್, ಬಾಪುಸಾಬ್, ಅವರಿಗೆ ಸಾಲಕೊಟ್ಟು ಆ ಹಣದಲ್ಲಿಯೇ,ಜಹಗೀರದಾರಗಳೊಂದಿಗೆ, ವಿಲಾಸಿ ಜೀವನ ನಡೆಸುವ ಪಟ್ಟಣವಾಸಿಗಳು. ಜಹಗೀರದಾರರರ  ಬಾಲ ಬಡುಕರಾಗಿ,ಅವರ ಹೆಸರಿನಲ್ಲ ರೈತಾಪಿ ಜನಗಳ ಶೋಷಣೆ ಮಾಡುತ್ತ ಸಿರಿವಂತ ರಾಗಿ ಬೆಂದ ಮನೆಯ ಗಳ ಹಿರಿದು ಕೊಳ್ಳಲು ಸದಾ ಅತೀ ದುಷ್ಟ ಮತ್ತು ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ,  ತಿಪ್ಪಣ್ಣಾಚಾರ,ವೆಂಕಪ್ಪ ಕುಲಕರ್ಣಿ,ಸೀನಪ್ಪ ಸೆಟ್ಟಿ ಹೀಗೆ  ಸ್ವಾತಂತ್ರ ಪೂರ್ವ ಬದುಕಿನ ಭರ್ಝರಿ  ವಸ್ತು ಮತ್ತು ಹಿನ್ನೆಲೆ ಗೋದಾನಕ್ಕಿದೆ. ನಾಟಕದ ಮುಖ್ಯ ಪಾತ್ರಧಾರಿ ನಿಂಗಪ್ಪನ ಸುತ್ತ ತಿರುಗುವ ಗೋದಾನ ನಾಟಕದ ಈ ನಾಯಕ ನನ್ನು ಶೋಷಿಸದವರೇ ಇಲ್ಲ ಎನ್ನುವುದು ಸರಿ .ಆದರೂ ಅವನು ತಾನು ನಂಬಿದ ಒಳ್ಳೆಯ ಗುಣಗಳನ್ನು ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದ ಉಸಿರಿರುವತನಕ ಮರ್ಯಾದೆಗೆ ಮಹತ್ವಕೊಟ್ಟ ವ್ಯಕ್ತಿ ನಿಂಗಪ್ಪ. ಅಂಕದ ಪರದೆ ಮೇಲೇರುತ್ತಿದ್ದಂತೆ ,ನಿಂಗಪ್ಪನ ಸಂಭಾಷಣೆಯೊಂದಿಗೇನೆ ನಾಟಕ ಆರಂಭವಾಗುತ್ತದೆ. ‘ನಿಂಗ ತಿಳಿಲಾರದ್ರಾಗ ತಲೀ ಹಾಕಾಕ ಬರಬ್ಯಾಡ,ಸುಮ್ಕ ನನ ಕೋಲು ಕೊಡು,ನಿನ್ನ ಕೆಲಸಾ ಏನೈತಿ ಆಟು ಮಾಡು,ನಾನು ನಾಕ ಮಂದ್ಯಾಗ ಓಡ್ಯಾಡತೀನಿ ಅಂತ ಜೀವಂತ ಅದೀನಿ.ಇಲ್ಲಾಂದ್ರ ನಮ್ಮ ಗತಿ ಏನಾಕ್ಕಿತ್ತೋ ಅಂತ ಆ ಶಿವಗss ಗೊತ್ತು.ಊರಾಗ ಇಷ್ಟು ಜನ ಅದಾರು,ಒಬ್ಬರ ಮ್ಯಾಗ ಜೋರು ಜಬರ ದಸ್ತಿ ಇಲ್ಲ. ಒಬ್ಬರ ಮ್ಯಾಗ ಯಾವ ಖಟ್ಲೇನೂ ಇಲ್ಲ.ಒಬ್ಬರ ಕೈ ಕೆಳಗ ದುಡಿತೀವಿ ಅಂದಮ್ಯಾಕ ಅವ್ರ ಕಾಲ ಹಿಡ್ಕೊಂಡು ಬದಕೊದೆ ಪಾಡss” ಇದು ಕಕ್ಕೇರಿಯವರಿಗೆ ಭಾಷೆಯ ಮೇಲಿರುವ ಬಿಸುಪು.ಇಡೀ 390 ಪುಟಗಳುದ್ದಕ್ಕೂ ಒಂದೇ ಹದ ಒಂದೇ ಸಂಯಮ. ಆಕಳ ಹೊಟ್ಟೆಯಲ್ಲಿ ಅಚ್ಛೇರು ಬಂಗಾರ ಎನ್ನುವ ಮಾತಿನಂತೆ, ಆಕಳ ಮಹತ್ವವನ್ನು ಪ್ರಾರಂಭದ ದೃಶ್ಯವೇ ನಮಗೆ ಮನನ ಮಾಡಿಕೊಡುತ್ತದೆ.ಹೆಚ್ಚು ಹಣ ಬರುವದೆಂದು ತಿಳಿದರೂ ಸವ್ಕಾರನಿಗೆ ಅದನ್ನು ಮಾರಲು,ನಿರಾಕರಿಸುವ ಲಕ್ಷ್ಮಣ ನಲ್ಲಿ ಗೋಸಂಪತ್ತಿನ ಮಹತ್ವತೆಯ  ಅರಿವಿದೆ. ‘ ಅಂವಗೆಲ್ಲಿ ಆಕಳಾ ಬೇಕಾಗೇತಿ,ಅದನ್ನ ಒಯ್ದು,ಯಾರೆರೆ ಆಫಿಸರರ್ಗೊಳಿಗೆ ಕಾಣಿಕಿ ಕೊಡತಾನ.ಅವ್ರಿಗೆ ಗೋ ಸೇವಾ ಮಾಡೋದೆಲ್ಲಿ ಬೇಕಾಗೇತಿ ? ಅವ್ರಿಗೆ ರಕ್ತ ಹೀರೊದೊಂದು ಗೊತ್ತೈತಿ.’………..ನಮಗೂ ಧರ್ಮ ಕರ್ಮ ಅನ್ನೋದು ಐತಿ……..ಅದರ ಸೇವಾ ಮಾಡತಿss,ಅದಕ್ಕ ಪ್ರೀತಿ ತೊರುಸ್ತಿss ಆಗ ಗೋಮಾತ ನಮಗ ಆಸೀರ್ವಾದ ಮಾಡ್ಯಾಳು’.ಗೋದಾನ ಶೀರ್ಷಿಕೆಗೆ ಶಿಖರ ಪ್ರಾಯದಂತಿರುವ ಈ ಮಾತಿನ ಸುತ್ತಮುತ್ತ ನಾಟಕ ದ ವಸ್ತು ತಿರುಗುತ್ತದೆ. ನಿಂಗಪ್ಪ, ಒಕ್ಜಲುತನ,ಗೇಣಿ,ಕಂದಾಯ,ಸಾಲ,ಜಮೀನು ಒತ್ತೆ,ಊರ ಜಹಗೀರದಾರ,ಮುಂತಾದವುಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯುತ್ತ ತನ್ನ ಬಡತನದಲ್ಲಿ ಬೆಂದು ಬಸವಳಿದರೂ,ಮರ್ಯಾದೆಯನ್ನು,ರಕ್ಷಸಿಕೊಳ್ಲುತ್ತ,ಬೇರೆಯವರ ಕಷ್ಟ ಕೋಟಲೆಗಳನ್ನು,ತನ್ನದೆಂದೇ ತಿಳಿದು ಅವರಿಗೆ ಸಹಾಯ ಹಸ್ತ ಚಾಚುತ್ತ, ಸುಖವನ್ನು ಕಾಣದೆ ಕೊನೆಯುಸಿರೆಳೆಯುತ್ತಾನೆ ಅವನ ಕ್ಷಮೆ ಗುಣಕ್ಕೆ ಅನೇಕ ದೃಷ್ಟಾಂತಗಳು ನಾಟಕದ ಉದ್ದಕ್ಕೂ ಸಿಗುತ್ತವೆ . ತನ್ನ ಆಕಳಿಗೆ ಒಡಹುಟ್ಟಿದ ತಮ್ಮನೇ ವಿಷಹಾಕಿ ಕೊಂದರೂ ಅವನನ್ನು  ಕ್ಷಮಿಸುವ ದೊಡ್ಡ ಗುಣ,ಅಪರಾಧಿ ಭಾವನೆಯಿಂದ ಊರಿನಿಂದ ಪರಾರಿಯಾದ ತಮ್ಮನ ಹೆಂಡತಿ ದಯನೀಯ ಸ್ಥಿತಿ ಹೊಂದಿದಾಗ ಅವಳನ್ನು ರಕ್ಷಿಸುವುದು, ಸ್ವಂತ ಮಗನೇ ಪರರ ಹೆಣ್ಣನ್ನು.  ಮದುವೆಯಾಗಿ ತಂದು ಮನೆಯಲ್ಲಿ ಬಿಟ್ಟು ಓಡಿ ಹೋದಾಗ ಅರ್ಧ ಊರಿನ ಜನವೇ ಎದುರು ನಿಂತರೂ ಅವಳಿಗೆ ಆಶ್ರಯ ನೀಡಿ ರಕ್ಷಿಸುವುದು,  ಸಂಗತಿಗಳು ಬಹಳ ಪರಿಣಾಮಕಾರಿಯಾಗಿವೆ. ಇಡೀ ಊರು ಒಂದಾಗಿ ನಿಂಗಪ್ಪ ನನ್ನು ಶೊಷಿಸಿ ಅವನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದರೂ ,ಎದೆ ಕೊಟ್ಟು ನಿಲ್ಲುವ ದೃಶ್ಯ ಮನ ಮಿಡಿಯುವಂತಿದೆ.ಹಾಗೆಯೇ ದಾನವ್ವನ ಪಾತ್ರ ಸಹ,ಇಡೀನಾಟಕದ ಜೀವಾಳವೆನ್ನುವಂತಿದೆ.ನಿಂಗಪ್ಪನನ್ನು ಪ್ರತಿ ಕಷ್ಟದ ಸಂದರ್ಭದಲ್ಲಿ ಅವನಿಗೆ ಹೆಗಲುಕೊಟ್ಟು ನಿಲ್ಲುವ ಮತ್ತು ಅವನಿಗೆ ಮೋಸ ಮಾಡಿದವರ ಜೊತೆ ಅವರು ಯಾರೇ ಇರಲಿ ಅವರೊಂದಿಗೆ ಜಗಳ ಕಾಯುವ ದಾನವ್ವನ ಪಾತ್ರವೂ ನಮ್ಮ ಮನ ಗೆಲ್ಕುವಂತೆ ಚಿತ್ರಿತವಾಗಿದೆ. ಅವಳ ಹೇಳುವ ಸಂಭಾಷಣೆಯನ್ನು ನಾಟಕಕಾರರು ಅಷ್ಟೇ ಹರಿತವಾಗಿ ರಚಿಸಿದ್ದಾರೆ.ಒಂದು ತುಣುಕು: ” ನಾ ಒಂದು ಕಾಳೂ ಕೊಡಾಂಗಿಲ್ಲ.ಒಂದು ಪೈ ದಂಡಾ ಕೊಡಾಂಗಿಲ್ಲ.ದಮ್ಮಿದ್ದವರು ಬಂದು ನನ್ನ ಕಡಿಂದ ವಸೂಲ ಮಾಡಲಿ.ಛಲೋ ಆಟಾ ಹೂಡ್ಯಾರss ದಂಡದ ನೆವಾ ಮಾಡಿss ನಮ್ಮ ಆಸ್ತಿನೆಲ್ಲಾ ಕಸಗೊಂಡು ಬ್ಯಾರೋರಿಗೆ ಕೊಟ್ಟ ಬಿಡಬೌದು ಅಂತ ವಿಚಾರ ಮಾಡಿರೇನೋ ? ನಮ್ಮ ಹೊಲಾ ತ್ವಾಟಾ ಎಲ್ಲ ಮಾರಿ ಮಸ್ತಿ ಮಾಡಬೌದ ಅನಕೊಂಡೀರೆನೋ ? ಆದ್ರ ಈ ದಾನವ್ವ ಜೀವಂತ ಇರೋತನ ಅದ್ಯಾವ್ದೂ ನಡಗುಡಾಂಗಿಲ್ಲ……” ಎನ್ಉವ ದಾನವ್ವ ನಮಗೆ ಹೋರಾಟದ ಬದುಕಿನ ಮಹಾನ ಮಹಿಳೆ ಎನಿಸುತ್ತಾಳೆ.  ಉಳಿದೆಲ್ಲ ಪಾತ್ರಗಳು ಪೂರಕ ಪಾತ್ರಗಳಾಗಿ ಶಹರಿನ ವಿಲಾಸೀ ಜೀವನವನ್ನು  ಆದಷ್ಟೂ ಬೇರೆಯವರ ಹಣದಲ್ಲಿ ಚೈನಿ ಮಾಡುವ ಪಾತ್ರಗಳಾಗಿ ,ಒಂದು ರೀತಿಯ ಒಣಹಮ್ಮಿನಲ್ಲಿ ಬದುಕುವಂತೆ ಕಾಣುತ್ತವೆ. ಕಕ್ಕೇರಿವರ ಒಂದು ವಿಶೇಷತೆ ಎಂದರೆ ಇಡೀ ನಾಟಕ,ಮತ್ತು ಮೂಲ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಒಂದು ಚೂರೂ ಮೂಲಕ್ಕೇ ಚ್ಯತಿ ಬಾರದಂತೆ ಮತ್ತು ನಮ್ಮ ಗ್ರಾಮೀಣ ಸಂಸ್ಕೃತಿಗೆ ಸರಿದೂಗುವಂತೆ ಮಾರ್ಪಾಟು ಮಾಡಿಕೊಂಡಿದ್ದು.ನಾಟಕದ ಎಲ್ಲಾ ವ್ಯವಹಾರಗಳು,  ಮತ್ತು ಘಟನೆಗಳು  ನಮ್ಮ ಊರಿನ ನಮ್ಮ ಕಣ್ಣೆದುರೇ ನಡೆಯತ್ತವೆ ಎಂಬಂತೆ ಹೆಣೆಯಲ್ಲಟ್ಟಿವೆ. ಅದಕ್ಕಾಗಿ ಅವರು ಪಟ್ಟ ಶ್ರಮ,ಭಾಷೆಯ ಬಳಕೆಯಲ್ಲಿ ಕಾಪಡಿಕೊಂಡು ಬಂದಿರುವ ಸಂಯಮ ಅಚ್ಚರಿ ಪಡುವಂತದ್ದು.ಅಚ್ಚುಕಟ್ಟಾದ ಮತ್ತು ದೀರ್ಘವಾಗಿದ್ದರೂ ಓದಿಸಿಕೊಂಡು ಹೋಗುವ ಶಕ್ತಿ ತುಂಬಿರುವ ನಾಟಕಕಾರರು ,ಓದುಗರ ಮನಸ್ಸಿನ ಮೇಲೆ  ದಟ್ಟ ಪರಿಣಾಮ ಬೀರುವ ಸಂವೇದನಾ ಶೀಲ ನಾಟಕವಾಗಿದೆ.ಇದರಿಂದಾಗಿ  ಸರ್ವ ರೀತಿಯಿಂದ  ಅಭಿನಂದನಾರ್ಹರಾಗುತ್ತಾರೆ. ಕೃತಿಗೆ ಬಹುಮೌಲಿಕ ಮುನ್ನುಡಿ ಬರೆದ ಸಿ.ಬಸವಲಿಂಗಯ್ಯ ನವರು ಒಂದು‌ಮಾತು ಹೇಳುತ್ತಾರೆ.’ ಮೂರು ನೆಲೆಯಲ್ಲಿ ಪಾತ್ರಗಳು,ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ನಡಾವಳಿಗಳಲ್ಲಿ ವಿಭಜನೆಗೊಂಡಿರುವುದು,……ಉತ್ತರ ಕರ್ನಾಟಕದಲ್ಲಿಯೇ ಹುಟ್ಟಿದೆ’ ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನೆ.. ಅವರೇ ಹೇಳುವಂತೆ ” ರಂಗ ಪ್ರಯೋಗಕ್ಕೆ ಅಳವಡಿಸುವಾಗ,ಕೆಲವು ದೀರ್ಘ ದೃಶ್ಯಗಳನ್ನು ಸಂಕ್ಷಿಪ್ತ ಗೊಳಿಸಿಕೊಳ್ಳುವುದು ಪ್ರೇಕ್ಷಕರ ಸಹನೆಯ ದೃಷ್ಟಿಯಿಂದ ಅವಶ್ಯಕವಾಗಿದೆ. ” ಎನ್ನುವ ವಿಚಾರಕ್ಕೆ ಎರಡು ಮಾತಿಲ್ಲ ಅದರ ರಂಗಪ್ರಯೋಗ ನೋಡುವ ಕುತೂಹಲ ನನಗೂ ಇದೆ. **************************************************************                         ಗೋನವಾರ ಕಿಶನ್ ರಾವ್

ಆಡುಭಾಷೆಯ ಸವಿ ಗೋದಾನ. Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ-9 ಆತ್ಮಾನುಸಂಧಾನ ಪಂಪನ ಬನವಾಸಿಗೆ ಪಯಣ             ನಾನು ಎರಡನೆ ಇಯತ್ತೆ ಮುಗಿಸುವಾಗ ನಮ್ಮ ತಂದೆಯವರಿಗೆ ಶಿರ್ಶಿ ತಾಲೂಕಿನ ಬನವಾಸಿಗೆ ವರ್ಗವಾಯಿತು. ನಮ್ಮ ಕುಟುಂಬದಲ್ಲಿ ಮಾತ್ರವಲ್ಲ, ನಮ್ಮ ಇಡಿಯ ಕೇರಿಯೇ ದಿಗಿಲುಗೊಂಡಿತು. ಅಂದಿನ ದಿನಮಾನಗಳಲ್ಲಿ ನಮಗೆಲ್ಲ ಬನವಾಸಿಯೆಂಬುದು ವಿದೇಶ ಪ್ರವಾಸದಷ್ಟೇ ದೂರದ ಅನುಭವವನ್ನುಂಟು ಮಾಡುವಂತಿತ್ತು. ಭಯಾನಕವಾದ ಪರ್ವತ ಶ್ರೇಣಿಗಳ ಆಚೆಗಿನ ಘಟ್ಟ ಪ್ರದೇಶ ಎಂಬುದು ಒಂದು ಕಾರಣವಾದರೆ, ನಮ್ಮೂರ ಪಕ್ಕದ ಹನೇಹಳ್ಳಿಯಿಂದ ಶಿರ್ಶಿಗೆ ಹೊರಡುವ ಒಂದೇ ಒಂದು ಬಸ್ಸು ನಸುಕಿನಲ್ಲಿ ಹನೇಹಳ್ಳಿಯನ್ನು ಬಿಟ್ಟರೂ ಗೋಕರ್ಣದ ಮೂಲಕ ಮಿರ್ಜಾನಿನಲ್ಲಿ ಜಂಗಲ್ ನೆರವಿನಿಂದ ಅಘನಾಶಿನಿ ನದಿಯನ್ನು ದಾಟಿ, ಕತಗಾಲ್ ಇತ್ಯಾದಿ ಮುನ್ನಡೆದು ಭಯಂಕರ ತಿರುವುಗಳುಳ್ಳ ದೇವಿಮನೆ ಘಟ್ಟವನ್ನು ಹತ್ತಿಳಿದು ಶಿರ್ಶಿಗೆ ತಲುಪುವಾಗ ಮಧ್ಯಾಹ್ನ ದಾಟಿ ಹೋಗುತ್ತಿತ್ತು. ಮತ್ತೆ ಅಲ್ಲಿಂದ ಬನವಾಸಿಯ ಬಸ್ಸು ಹಿಡಿದು ಅಲ್ಲಿಗೆ ತಲುಪುವಾಗ ರಾತ್ರಿಯೇ ಆಗುತ್ತಿತ್ತು. ನಾನು ನನ್ನ ತಮ್ಮ ತಂಗಿಯರೆಲ್ಲ ಬಸ್ ಪ್ರಯಾಣದ ತಲೆಸುತ್ತು, ವಾಂತಿ ಇತ್ಯಾದಿಗಳಿಂದ ಬಳಲಿ ನಮ್ಮನ್ನು ಯಾರಾದರೂ ಎತ್ತಿಕೊಂಡೆ ಮನೆಗೆ ತಲುಪಿಸಬೇಕಾದ ಹಂತಕ್ಕೆ ಬಂದಿರುತ್ತಿದ್ದೆವು. ಈ ದ್ರಾವಿಡ ಪ್ರಾಣಾಯಾಮದ ಕಾರಣದಿಂದಲೂ ಬನವಾಸಿಯೆಂಬುದು ನಮ್ಮ ಕಣ್ಣಳತೆಗೆ ಮೀರಿದ ಊರು ಎಂಬ ಭಾವನೆ ನಮ್ಮವರಲ್ಲಿ ಬೆಳೆದು ನಿಂತಿತ್ತು. ಹೀಗಾಗಿಯೇ ಅಪ್ಪ ಕುಟುಂಬ ಸಹಿತ ಬನವಾಸಿಗೆ ಹೊರಟು ನಿಂತಾಗ ಬಂಧುಗಳು ಆತಂಕಗೊಂಡಿದ್ದು ಸಹಜ. ನನಗೋ ಈ ಎರಡು ವರ್ಷಗಳಲ್ಲಿಯೇ ಗಾಢ ಸ್ನೇಹಿತರಾಗಿ ಹಚ್ಚಿಕೊಂಡಿದ್ದ ಕುಪ್ಪಯ್ಯ ಗೌಡ, ಚಹಾದಂಗಡಿಯ ಗಣಪತಿಗೌಡ, ಮುಕುಂದ ಪ್ರಭು, ಇತ್ಯಾದಿ ಗೆಳೆಯರನ್ನು ಬಿಟ್ಟು ಹೋಗಬೇಕಲ್ಲ? ಎಂಬ ಚಿಂತೆ ಕಾಡಿತು.             ಆದರೆ ಬನವಾಸಿಯಲ್ಲಿ ನೆಲೆನಿಂತ ಬಳಿಕ ಹೊಸತೊಂದು ಲೋಕವೇ ನಮ್ಮೆದುರು ತೆರೆದುಕೊಂಡ ಅನುಭವವಾಯಿತು. ಬಹಳ ಮುಖ್ಯವಾಗಿ ನಾಡುಮಾಸ್ಕೇರಿಯಲ್ಲಿನ ಜಾತೀಯತೆಯ ಕಹಿ ಅನುಭವಗಳಾಗಲಿ, ಕೀಳರಿಮೆಯಾಗಲೀ ನಮ್ಮನ್ನು ಎಂದಿಗೂ ಬಾಧಿಸಲಿಲ್ಲ. ನಾನು, ನನ್ನ ತಮ್ಮ ತಂಗಿಯರೆಲ್ಲ ಮಧುಕೇಶ್ವರ ದೇವಾಲಯದ ಆವರಣದಲ್ಲಿಯೇ ಯಾವ ಮುಜುಗರವೂ ಇಲ್ಲದೇ ಆಡಬಹುದಿತ್ತು. ಹನೇಹಳ್ಳಿಯವರೇ ಆಗಿದ್ದ ಕುಚಿನಾಡ ವೆಂಕಟ್ರಮಣ ಶಾನುಭೋಗರ ಕುಟುಂಬ, ಗಾಂವಕಾರ ಮಾಸ್ತರರು, ಅಗ್ಗರಗೋಣದ ಮೋಹನ ಮಾಸ್ತರರು, ರಾಮಚಂದ್ರ ಮಾಸ್ತರರು ಮೊದಲಾದವರ ಕುಟುಂಬಗಳು ಊರಿನವರೆಂಬ ಕಾರಣದಿಂದ ಸಹಜವಾಗಿಯೇ ಆಪ್ತವಾಗಿದ್ದವು. ಕುಚಿನಾಡ ಶಾನುಭೋಗರ ಮಕ್ಕಳೂ ನಮ್ಮ ಆಪ್ತ ಸ್ನೇಹಿತರಾಗಿಯೇ ದೊರೆತುದರಿಂದ ಅವರ ಕುಟುಂಬದೊಡನೆ ನಾವು ಅತಿ ಸಲಿಗೆ ಹೊಂದಿದ್ದೆವು. ಅಪ್ಪ ಬನವಾಸಿಯ ಒಡಿಯರ್’ ಮುಳಗುಂದ’ ಮುಂತಾದ ಶ್ರೀಮಂತ ಕುಟುಂಬದ ಮಕ್ಕಳಿಗೆ ರಾತ್ರಿಯ ಮನೆಪಾಠ ಹೇಳಲಾರಂಭಿಸಿದ ಬಳಿಕ ಅಂಥ ಮಕ್ಕಳ ಒಡನಾಟವೂ ನಮಗೆ ಸೌಹಾರ್ದಯುತವಾಗಿತ್ತು.                      ಬನವಾಸಿಯಲ್ಲಿ ನೆಲೆಸಿದ ಕೆಲವೇ ದಿನಗಳಲ್ಲಿ ಅಪ್ಪನ ಕೆಲವು ವಿಶಿಷ್ಟ ಪ್ರತಿಭೆಯಿಂದಾಗಿ ಅಲ್ಲಿನ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸದಸ್ಯತ್ವ ಪಡೆಯುವ ಅವಕಾಶ ದೊರಕಿಸಿಕೊಂಡ. ಬನವಾಸಿಯ ಹವ್ಯಾಸಿ ನಾಟಕ ಮಂಡಳಿಯಲ್ಲಿ ಪ್ರಮುಖ ಸ್ತ್ರೀಪಾತ್ರಧಾರಿಯಾಗಿ ನಟಿಸುವ ಅವಕಾಶ ಪಡೆದು ಅಂದಿನ ದಿನಗಳಲ್ಲಿ ಮಹಿಳೆಯರು ರಂಗಪ್ರವೇಶಕ್ಕೆ ಹಿಂದೇಟು ಹಾಕುವುದರಿಂದ ಪುರುಷರೇ ಸ್ತ್ರೀಯರಪಾತ್ರ ನಿರ್ವಹಿಸಬೇಕಿತ್ತು. ಸಿನಿಮಾ ನಟರಂತೆ ಆಕರ್ಷಕ ವ್ಯಕ್ತಿತ್ವದ ಪಿ.ಜಿ. ಪ್ರಾತಃಕಾಲ ಎಂಬ ನಮ್ಮ ಹಿಂದಿ ಮೇಷ್ಟ್ರು ಯಾವುದೇ ನಾಟಕದ ಕಥಾ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದರೆ ಅಪ್ಪ ಕಥಾನಾಯಕಿಯಾಗಿ ಪಾತ್ರ ನಿರ್ವಹಿಸಿ ಅವರಿಗೆ ಸರಿಜೋಡಿಯೆನಿಸುತ್ತಿದ್ದ.             ಅಪ್ಪನಿಗೆ ಉತ್ತಮ ಬರಹದ ಕೌಶಲ್ಯವೂ ಇದ್ದಿತ್ತು. ಬನವಾಸಿಯ ಅನೇಕ ಅಂಗಡಿ ಮುಂಗಟ್ಟುಗಳಿಗೆ ನಾಮಫಲಕಗಳನ್ನು ಬರೆದುಕೊಟ್ಟು ಎಲ್ಲರಿಗೂ ಬೇಕಾದವನಾದ. ಮಧುಕೇಶ್ವರ ದೇವಾಲಯದ ಆವರಣದೊಳಗೆ ಇರುವ ಎಲ್ಲ ಸಣ್ಣ ಪುಟ್ಟ ಗುಡಿಗಳಿಗೆ, ಕಲ್ಲಿನ ಮಂಟಪ ಇತ್ಯಾದಿಗಳಿಗೆ ಆಕರ್ಷಕವಾದ ನಾಮಫಲಕಗಳನ್ನು ಬರೆದು ಅಂಟಿಸಿ ದೇವಾಲಯದ ಆಡಳಿತ ಮಂಡಳಿಯ ಗೌರವಕ್ಕೂ ಪಾತ್ರನಾಗಿದ್ದ. ಹೀಗೆ ಅಪ್ಪ ಬನವಾಸಿಯಲ್ಲಿ ಪರಿಚಿತನಾಗುತ್ತಿದ್ದುದು ನಮಗೆಲ್ಲ ತುಂಬಾ ಅನುಕೂಲವಾಯಿತು. ಇಂಥವರ ಮಕ್ಕಳು ಎಂದು ಬಹುತೇಕ ಜನ ನಮ್ಮನ್ನು ಅಕ್ಕರೆಯಿಂದಲೇ ಕಾಣುತ್ತಿದ್ದರು.             ಬನವಾಸಿಯ ಮಧುಕೇಶ್ವರ ದೇವರ ರಥೋತ್ಸವ, ದಸರಾ ಉತ್ಸವ, ನೆರೆಯ ಗುಡ್ನಾಪುರ ಜಾತ್ರೆ, ಬಂಕಸಾಣ ಜಾತ್ರೆಗಳು ಇತ್ಯಾದಿ ಮರೆಯಲಾಗದಂಥಹ ಸಾಂಸ್ಕೃತಿಕ ಸಂದರ್ಭಗಳು ನಮ್ಮ ಅನುಭವಕ್ಕೆ ದಕ್ಕಿದುದು ಬನವಾಸಿಯ ವಾಸ್ತವ್ಯದಲ್ಲಿಯೇ ಶೈಕ್ಷಣಿಕವಾಗಿ ಕೂಡಾ ನಮಗೆ ಉತ್ತಮ ತಳಪಾಯ ದೊರೆತುದು ಇದೇ ಊರಿನಲ್ಲಿ. ಬನವಾಸಿಯ ಹಿರಿಯ ಪ್ರಾಥಮಿಕ ಶಾಲೆ ಸುತ್ತಲಿನ ಪರಿಸರದಲ್ಲಿ “ಉತ್ತಮ ಶಾಲೆ” ಎಂಬ ಕೀರ್ತಿಗೆ ಪಾತ್ರವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳಿಂದ ಹಲವು ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಳ್ಳುತ್ತಿದ್ದರು. ಶಾಲೆಗೆ ಸಮೀಪವೇ ಇದ್ದ ಸರಕಾರಿ ವಸತಿ ನಿಲಯದಲ್ಲಿ ಉಳಿದುಕೊಂಡು ಅಭ್ಯಾಸ ಮಾಡುತ್ತಿದ್ದರು.             ಶಿಕ್ಷಣ ಕ್ರಮ ಮತ್ತು ಆಡಳಿತ ಶಿಸ್ತಿಗೆ ಬಹುಮುಖ್ಯ ಕಾರಣರೆನಿಸಿದವರು ಈ ಶಾಲೆಯ ಮುಖ್ಯಾಧ್ಯಾಪಕರಾದ ಖಾಜಿ ಮಾಸ್ತರರು. ವೈಯಕ್ತಿಕವಾಗಿಯೂ ತುಂಬಾ ಕಟ್ಟುನಿಟ್ಟಾದ ಶಿಸ್ತಿನ ಮನುಷ್ಯ. ಸ್ವಲ್ಪ ಕುಳ್ಳನೆಯ ವ್ಯಕ್ತಿಯಾದರೂ ಬಿಳಿಯ ಪಾಯಿಜಾಮಾ, ಬಿಳಿಯ ಶರ್ಟು, ಅದರಮೇಲೋಂದು ಕಪ್ಪನೆಯ ಓವರ್ ಕೋಟ್, ತಲೆಯ ಮೇಲೊಂದು ಕರಿಯ ಟೊಪ್ಪಿಗೆ, ಕಾಲಲ್ಲಿ ಚರಮರಿ ಜೋಡು ಮೆಟ್ಟ ಬಂದರೆಂದರೆ ಕಟೆದು ನಿಲ್ಲಿಸಿದಂಥ ಪರಸನ್ಯಾಲಿಟಿ. ಸದಾ ಘನ ಗಾಂಭೀರ್ಯದಲ್ಲಿ ಮುಖವನ್ನು ಗಂಟು ಹಾಕಿಕೊಂಡಂತಿರುವ ಖಾಜಿ ಮಾಸ್ತರರು ತಮ್ಮ ಕಣ್ಣುಗಳಿಂದಲೇ ಎಲ್ಲರನ್ನೂ ಕಂಟ್ರೋಲು ಮಾಡುವ ರೀತಿಯೇ ಅದ್ಭುತವಾಗಿತ್ತು!. ಎಲ್ಲ ಅಧ್ಯಾಪಕರನ್ನು ಹದ್ದು ಬಸ್ತನಲ್ಲಿಟ್ಟು ನಡೆಸುವ ಮಾಸ್ತರರ ಆಡಳಿತ ವ್ಯವಸ್ಥೆಯೇ ಶಾಲೆಯನ್ನು ಶಿಸ್ತು ದಕ್ಷತೆಗೆ ಹೆಸರುವಾಸಿಯಾಗುವಂತೆ ಮಾಡಿತ್ತು.             ಶಾಲೆಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಸದಾ ಗಂಭೀರ ನಿಲುವಿನಲ್ಲಿರುವ ಖಾಜಿ ಮಾಸ್ತರರು ಅಂತರಂಗದಲ್ಲಿ ಅಪಾರವಾದ ಪ್ರೀತಿ-ಅಂತಃಕರಣವುಳ್ಳವರಾಗಿದ್ದರೆಂಬುದು ನನಗೆ ಮುಂದಿನ ದಿನಗಳಲ್ಲಿ ವೇದ್ಯವಾಯಿತು.             ನಾನು ನಾಲ್ಕನೆಯ ತರಗತಿ ಓದುತ್ತಿರುವಾಗ ಬನವಾಸಿಯ ತುಂಬ ಭಯಂಕರವಾದ ಸಿಡುಬು ರೋಗ ವ್ಯಾಪಿಸಿತ್ತು. ನಮ್ಮ ಮನೆಯಲ್ಲೂ ನಮ್ಮ ತಾಯಿಯೊಬ್ಬಳನ್ನುಳಿದು ನಾನು, ಅಪ್ಪ ಮತ್ತು ತಮ್ಮ ತಂಗಿಯರೆಲ್ಲ ಸಿಡುಬು ರೋಗದಿಂದ ಹಾಸಿಗೆ ಹಿಡಿದಿದ್ದೆವು. ಮೈತುಂಬ ಸಿಡುಬಿನ ನೀರುಗುಳ್ಳೆಗಳೆದ್ದು ಬಾಳೆಎಲೆ ಹಾಸಿಗೆಯ ಮೇಲೆ ನಮ್ಮನ್ನೆಲ್ಲ ಮಲಗಿಸಿದ್ದರು. ಅತಿಯಾದ ನಿಶ್ಯಕ್ತಿ ಮತ್ತು ಮೈ ಉರಿಯಿಂದ ನಾವು ನರಳುತ್ತಿದ್ದರೆ ಅವ್ವ ನಮ್ಮ ಯಾತನೆಗೆ ಸಂಕಟ ಪಡುತ್ತಾ ಉಪಚರಿಸುತ್ತಾ ಓಡಾಡುತ್ತಿದ್ದಳು. ಅಪ್ಪನ ಸಹೋದ್ಯೋಗಿ ಶಿಕ್ಷಕರೆಲ್ಲಾ ಬಂದು ಸಾಂತ್ವನ ಹೇಳಿ ಹೋಗುತ್ತಿದ್ದರು. ಈ ಸಮಯದಲ್ಲಿ ಖಾಜಿ ಮಾಸ್ತರರು ತೋರಿದ ಕಾಳಜಿ, ಮಾಡಿದ ಉಪಕಾರ ಇನ್ನೂ ನನ್ನ ಕಣ್ಣಮುಂದೆ ಕಟ್ಟಿದಂತೆಯೇ ಇದೆ. ನಿತ್ಯವೂ ನಮಗೆ ಗಂಜಿ ಮತ್ತು ಹಣ್ಣು ಹಂಪಲುಗಳ ವ್ಯವಸ್ಥೆ ಮಾಡಿ ನಾವು ಸಂಪೂರ್ಣ ಗುಣಮುಖರಾಗುವವರೆಗೆ ತುಂಬಾ ಕಳಕಳಿಯಿಂದ ನೋಡಿಕೊಂಡರು. ಅವರು ಮತ್ತು ಅವರ ಸಹೋದ್ಯೋಗಿ ಶಿಕ್ಷಕರು ತೋರಿದ ಪ್ರೀತ್ಯಾದರಗಳೇ ನಮ್ಮನ್ನು ಖಾಯಿಲೆಗೆ ಬಲಿಯಾಗದಂತೆ ಬದುಕಿಸಿದ್ದವು ಅಂದರೆ ಉತ್ಪೆಕ್ಷೆಯಲ್ಲ!             ಬಹುಶಃ ಖಾಜಿ ಮಾಸ್ತರರಂಥ ಮಹನಿಯರೇ  ಸಮಾಜದಲ್ಲಿ ಮನುಷ್ಯರಾಗಿ ಮುಖವೆತ್ತಿ ಬಾಳಲು ಪೋಷಕ ದೃವ್ಯವಾಗಿ ಹೊರತೆರೆಂದು ನಾನೀಗಲೂ ದೃಢವಾಗಿ ನಂಬಿದ್ದೇನೆ *********************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಪುಸ್ತಕ ಸಂಗಾತಿ

ಇ-ಬುಕ್ ಬಿಡುಗಡೆ

ಇ-ಬುಕ್ ಬಿಡುಗಡೆ ಮೂಚಿಮ್ಮ” ಕಥಾಸಂಕಲನ ಬಿಡುಗಡೆಯ ಕಾರ್ಯಕ್ರಮ ಕನ್ನಡದ ಯುವ ತಲೆಮಾರಿನ ಭರವಸೆಯ ಕಥೆಗಾರರಾಗಿ ಹೊರಹೊಮ್ಮುತ್ತಿರುವ ಡಾ.ಅಜಿತ್ ಹರೀಶಿ ಅವರ “ಮೂಚಿಮ್ಮ” ಕಥಾ ಸಂಕಲನ ಇಬುಕ್, ಆಡಿಯೋ ಬುಕ್ ಹಾಗೂ ಮುದ್ರಿತ ರೂಪದಲ್ಲಿ ಮೈಲ್ಯಾಂಗ್ ಪ್ರಕಾಶನ ಹೊರ ತಂದಿದೆ. ಅದರ ಬಿಡುಗಡೆ ಕಾರ್ಯಕ್ರಮ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ.ರವೀಂದ್ರ ಭಟ್ಟರು ಕನ್ನಡಕ್ಕೆ ಅಜಿತ್ ಒಬ್ಬ ಸೂಕ್ಷ್ಮ ಬರಹಗಾರರಾಗಿ ದಕ್ಕುತ್ತಿದ್ದಾರೆ. ಅವರ ಕೃತಿಗಳು ಇನ್ನಷ್ಟು ಸಮಾಜಮುಖಿಯಾದ ತಲ್ಲಣಗಳಿಗೆ ಕನ್ನಡಿ ಹಿಡಿಯುವಂತೆ ರೂಪುಗೊಳ್ಳಲಿ ಅನ್ನುವ ಆಶಯ ವ್ಯಕ್ತಪಡಿಸಿದರು. ಇನ್ನೊಬ್ಬ ಅತಿಥಿ ಸಾಹಿತಿ ಶ್ರೀ ಜೋಗಿಯವರು ಮಾತನಾಡಿ ಕನ್ನಡಕ್ಕೆ ಹೊಸ ಓದುಗರನ್ನು ಕರೆತರುವ ಯುವ ಬರಹಗಾರರು ಹೆಚ್ಚಬೇಕು. ಅಜಿತ್ ಅವರ ಕೃತಿಗಳಲ್ಲಿ ಆ ಸತ್ತ್ವವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ಅಜಿತ್ ಹರೀಶಿ ಹಾಗೂ ಮೈಲ್ಯಾಂಗ್ ಸಂಸ್ಥೆಯ ಮುಖ್ಯಸ್ಥರಾದ ಪವಮಾನ್ ಅಥಣಿ ಅವರು ಹಾಜರಿದ್ದರು. ಮೂಚಿಮ್ಮ ಪುಸ್ತಕ ಇಬುಕ್, ಆಡಿಯೋ ಮತ್ತು ಪ್ರಿಂಟ್ ಮೂರೂ ಆವೃತ್ತಿಯಲ್ಲಿ www.mylang.in ಮೂಲಕ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ,ವಸಂತ ಶೆಟ್ಟಿ,ಮೈಲ್ಯಾಂಗ್ ಬುಕ್ಸ್ ಪರವಾಗಿಬೆಂಗಳೂರು+91-9986026994vasant@mylang.in ********************************************************

ಇ-ಬುಕ್ ಬಿಡುಗಡೆ Read Post »

You cannot copy content of this page

Scroll to Top