ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾಡಿ ಮಿಡಿತದ ದಾರಿ

ಪುಸ್ತಕಪರಿಚಯ ಪುಸ್ತಕ : ನಾಡಿ ಮಿಡಿತದ ದಾರಿ 🩺(ವೈದ್ಯಲೋಕದ ಅನುಭವ ಕಥನಗಳು) ಲೇಖಕರು: ಡಾ|| ಶಿವಾನಂದ ಕುಬಸದಪ್ರಕಾಶನ: ನೀಲಿಮಾ ಪ್ರಕಾಶನಬೆಂಗಳೂರುಪುಟಗಳು: 160ಬೆಲೆ: ರೂ. 130/-ಪ್ರಕಟಿತ ವರ್ಷ: 2019ಲೇಖಕರ ದೂರವಾಣಿ: 9448012767 ವೃತ್ತಿಯಿಂದ ಪರಿಣತ ಶಸ್ತ್ರ ಚಿಕಿತ್ಸಕರಾಗಿ, ಜನಾನುರಾಗಿ ವೈದ್ಯರಾಗಿ, ವಿವಿಧ ವ್ಯಾಧಿಗಳ ಕುರಿತು ಜನತೆಗೆ ಮಾಹಿತಿ ನೀಡುವ ವಕ್ತಾರರಾಗಿ, ಗ್ರಾಮೀಣರ ಮೂಡನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಮೂಡಿಸುವ ಆಪ್ತ ಬಂಧುವಾಗಿ, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಕಾಯಕ ಯೋಗಿಯಾಗಿ, ಸೃಜನಶೀಲ ಕವಿ, ಲೇಖಕರಾಗಿ ಒಂದು ಪ್ರದೇಶದ ಒಂದು ಕಾಲಗಟ್ಟದ ಇತಿಹಾಸಕಾರರಾಗಿ, ಎಲ್ಲರನ್ನು ಪ್ರೀತಿ, ಗೌರವ, ವಿಶ್ವಾಸದಿಂದ ಕಾಣುವ ವೈದ್ಯ ಸಾಹಿತಿಯಾಗಿರುವ ಮುಧೋಳದ ಡಾ|| ಶಿವಾನಂದ ಕುಬಸದ ಅವರು ಕಳೆದ ವರ್ಷ ಪ್ರಕಟಿಸಿದ “ನಾಡಿ ಮಿಡಿತದ ದಾರಿ” ಇಂದಿನ ಕೃತಿ ಪರಿಚಯ. ವೈದ್ಯಲೋಕದ ಜೀವನಾನುಭವಗಳ ಸುಂದರ ಇಪ್ಪತ್ನಾಲ್ಕು ಕಥನಗಳು ಇಲ್ಲಿ ದೃಶ್ಯಕಾವ್ಯಗಳಾಗಿವೆ. ಸಂವೇದನಾಶೀಲತೆ, ಮಾನವೀಯತೆ, ಸಾಮಾಜಿಕ ಜಾಡ್ಯಗಳಿಗೆ ಪರಿಹಾರೋಪಾಯ ಇಲ್ಲಿನ ವಿಷಯ ವಸ್ತು. ಲೇಖಕಿ ವೀಣಾ ಬನ್ನಂಜೆ ಅವರ ಅನುಭಾವದ ಮುನ್ನುಡಿ ಹಾಗೂ ಖ್ಯಾತ ಕಥೆಗಾರರಾದ ಕುಂ. ವೀರಭದ್ರಪ್ಪ ಅವರ ಆತ್ಮೀಯತೆಯ ಮಾತುಗಳು ಇಲ್ಲಿ ಮನೋಜ್ಞವಾಗಿ ಮೂಡಿ ಬಂದಿವೆ. ಇಲ್ಲಿರುವ ಎಲ್ಲ ಅನುಭವಾಮೃತದ ಕಥೆಗಳು ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿವೆ. ವರ್ತಮಾನದ ಸಾಂದರ್ಭಿಕ ಸಮಸ್ಯೆಗಳ ಮೇಲೆ ಸ್ಟೆಥಸ್ಕೋಪ್ ಆಡಿಸಿ, ಸಮಾಜದ ಸಾಕ್ಷಿಪ್ರಜ್ಞೆಯನ್ನು ಪೋಷಿಸಿ ರೋಗಿಗಳ ಮನೋಜ್ಞ ಚಿತ್ರಣ ನೀಡಿದ್ದಾರೆ. ಇಲ್ಲಿನ ಅಂಕಣ ಬರಹಗಳಿಗೆ ಕಥೆಗಳ ಜೀವದ್ರವ್ಯವಿದೆ. ಜಾತಕ, ಕುಂಡಲಿ ನಕ್ಷತ್ರಗಳಿಗಿಂತಲೂ ಆಸ್ತಿಕನಾಗಿ ರಕ್ತಪರೀಕ್ಷೆ, ನಾಡಿ ಮಿಡಿತ ಹಾಗೂ ಸೂಕ್ತ ಚುಚ್ಚು ಮದ್ದಿನ ಮೂಲಕ ರೋಗಿಯನ್ನು ಗುಣಪಡಿಸಬೇಕು ಎಂಬುದು ವೈದ್ಯರ ಆಶಯ. ವೃತ್ತಿ ಧರ್ಮದಲ್ಲಿ ದೇವರನ್ನು ಕಾಣುವ ಇವರು ‘ದಯವೇ ಧರ್ಮದ ಮೂಲ’ ಎನ್ನುತ್ತಾರೆ. ಇಲ್ಲಿನ ಕಥೆಗಳು ನೈಜ ಬದುಕಿನ ಅಭಿವ್ಯಕ್ತಿಯಾಗಿದ್ದು ಯಾವುದೂ ಸಹ ಕಾಲ್ಪನಿಕವಾಗಿಲ್ಲ. ‘ವೃತ್ತಿ ಸಾರ್ಥಕ್ಯದ ಆ ದಿನ’ ಎಂಬ ಬರಹ ಹೃದಯಸ್ಪರ್ಶಿಯಾಗಿದ್ದು ಹೆರಿಗೆ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಜೀವನ್ಮರಣದೊಡನೆ ಹೋರಾಡುತ್ತಿರುವಾಗ ವೈದ್ಯರೇ ಸ್ವತಃ ರಕ್ತದಾನ ನೀಡಿ, ನಿರಂತರ ಒಂದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಅವಳ ಪ್ರಾಣ ಉಳಿಸಿದ ರೋಚಕ ಅನುಭವಗಾಥೆ ಓದುಗರಲ್ಲಿ ಧನ್ಯತಾ ಭಾವ ಮೂಡಿಸುತ್ತದೆ. ‘ಅವ್ವನೆಂಬ ಆಧಾರಸ್ತಂಭಕ್ಕೆ ಆಸರೆಯಾಗಿ’ ಎಂಬ ಲೇಖನದಲ್ಲಿ ತಾಯಿಯೇ ಸರ್ವಸ್ವ ಎಂದು ನಂಬಿದ ವೈದ್ಯಮಿತ್ರರೊಬ್ಬರು ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾದ ತಾಯಿಯನ್ನು ಏಳು ವರ್ಷಗಳ ಕಾಲ ಮಗುವಿನಂತೆ ಉಪಚರಿಸಿದ ಸಂಗತಿ ಎಲ್ಲರಿಗೂ ಆದರ್ಶಪ್ರಾಯ ಹಾಗೂ ಅನುಕರಣಿಯ. ‘ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ’ ಎನ್ನುವ ಕವಿವಾಣಿಯಂತೆ ಇಲ್ಲಿ ರೋಗಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದ್ದರೂ ಸಹ ಮನೆಯವರಿಗೆ ಹೇಳದೆ ತಾನೇ ಅನುಭವಿಸುವ ಸ್ಥಿತಿ ಕಂಡ ವೈದ್ಯರು ಅವನಲ್ಲಿ ಯೋಗಿಯ ಗುಣವನ್ನು ಕಾಣುತ್ತಾರೆ. ‘ಗುಟಕಾ ಎಂಬ ಹೊಗೆಯಿಲ್ಲದ ಬೆಂಕಿ’ ಎಂಬ ಕಥೆಯಲ್ಲಿ ಇಂದಿನ ಸಮಾಜದಲ್ಲಿ ಯುವಜನಾಂಗ ದುಶ್ಚಟಗಳಿಗೆ ದಾಸರಾಗುವುದನ್ನು ಕಂಡು ಖೇದ ವ್ಯಕ್ತಪಡಿಸುತ್ತಾರೆ. ಒಂದು ದಿನ ವೈದ್ಯರು ಆಸ್ಪತ್ರೆಗೆ ಬರದೇ ಮರುದಿನ ಬಂದಾಗ ಸಿರಿವಂತ ರೋಗಿ ಒಬ್ಬ ಕೋಪಗೊಂಡು ಬೈದಾಗಲೂ ಸಹ ಸ್ಥಿತಪ್ರಜ್ಞರಾಗಿ ಉಪಚರಿಸಿದ್ದು ಶ್ಲಾಘನೀಯ. ನೇಣು ಹಾಕಿಕೊಂಡು ಬದುಕುಳಿದವನ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಆಪ್ತ ಗೆಳೆಯನಂತೆ ತಿಳಿಸಿದ್ದಾರೆ. “ಮಡದಿ ಎಂಬ ಮಹಾಗುರು” ಎಂಬ ಅಧ್ಯಾಯದಲ್ಲಿ ಮದ್ಯಪಾನ ವ್ಯಸನಕ್ಕೆ ಒಳಗಾದ ಗಂಡನನ್ನು ಪತ್ನಿಯೊಬ್ಬಳು ಮದ್ಯವ್ಯಸನದಿಂದ ಮುಕ್ತನಾಗಿ ಮಾಡಿದ ಕಥೆ ಮಾರ್ಮಿಕವಾಗಿದೆ. ಮದ್ಯ ಸೇವನೆಯಿಂದ ಶರೀರದ ಮೇಲಾಗುವ ದುಷ್ಪರಿನಾಮಗಳ ಬಗ್ಗೆ ವಿವರಿಸುವಾಗ ಇಲ್ಲಿ ವೈದ್ಯರು ಶಾಲಾ ಅಧ್ಯಾಪಕನಂತೆ ಗೋಚರಿಸುತ್ತಾರೆ. ಅಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಪಿಯುಸಿಯಲ್ಲಿ ರಾಜ್ಯಕ್ಕೆ ಹತ್ತನೇ ಸ್ಥಾನ ಪಡೆದಾಗ ಅಪ್ಪನ ಮೊಗದಲ್ಲಿ ಮೂಡುವ ಗೆಲುವಿನ ಗೆರೆ, ಮಗ ವೈದ್ಯನಾದಾಗ ಕಣ್ಣಂಚಲ್ಲಿ ಹೊಮ್ಮಿದ ಸಾರ್ಥಕತೆ, ಕೈಬೆರಳು ಹಿಡಿದು ನಡೆಸಿದ ಅಪ್ಪ ಕೈಬಿಟ್ಟು ಹೋದಾಗ ಉಂಟಾಗುವ ಶೂನ್ಯತೆ. ಇವೆಲ್ಲವೂ “ಅಪ್ಪ ನೆನಪಾಗುತ್ತಾನೆ” ಎಂಬ ಅಧ್ಯಾಯದಲ್ಲಿ ಸಿನಿಮಾ ರೀಲಿನಂತೆ ಅಪ್ಪನ ನೆನಪುಗಳು ಬಿಚ್ಚಿಕೊಳ್ಳುತ್ತವೆ. ಹೀಗೆ ಇಲ್ಲಿರುವ ಎಲ್ಲ ಬರಹಗಳ ಹಿಂದೆ ಸ್ವಾರಸ್ಯಕರ ಅನುಭವ ಅವಿಸ್ಮರಣೀಯ ಸಂಗತಿಗಳು ಕಥಾವಸ್ತುಗಳಾಗಿವೆ. ವಾಸ್ತವ ಸಮಾಜಕ್ಕೆ ಕೈಗನ್ನಡಿಯಾಗಿ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ನಿಲ್ಲುವ ಈ ಕೃತಿ ಸಾರಸ್ವತ ಲೋಕಕ್ಕೆ ಒಂದು ಅಮೂಲ್ಯ ಕೊಡುಗೆ. ಈಗಾಗಲೇ “ಇಷ್ಟು ಮಾಡಿದ್ದೇನೆ” ಎಂಬ ಕವಿತಾ ಸಂಕಲನ ಹಾಗೂ “ಗಿಲೋಟಿನ್” ಎನ್ನುವ ಯುರೋಪ್ ಪ್ರವಾಸ ಕಥನ ಪ್ರಕಟಿಸಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಮೂಡಿ ಬರಲಿ ಎಂಬುದು ನಮ್ಮೆಲ್ಲರ ಬಯಕೆ. **** ಬಾಪು ಖಾಡೆ

ನಾಡಿ ಮಿಡಿತದ ದಾರಿ Read Post »

ಕಾವ್ಯಯಾನ

ಮಾರುವವಳು

ಕವಿತೆ ಮಾಂತೇಶ ಬಂಜೇನಹಳ್ಳಿ ಮೂರನೇ ತಿರುವಿನ ಬಾನೆತ್ತರದ ದೀಪದ ಕಂಬದ ಅಡಿ ನಿಂತ ಆಗಸದಗಲ ಛತ್ರಿಯ ಕೆಳ ಮಲ್ಲಿಗೆ ತುರುಬಿನ ಎಳವೆ ಮಲ್ಲೆಗೆ, ರಾಶಿಯೋಪಾದಿ ಕೋರೈಸುವ ಹೂಗಳ ಸ್ಪರ್ಶ ಗೆಳೆತನ. ಉದುರಿದ ದಿನಗಳು ಈಗೀಗ ಒಗ್ಗುತ್ತಿವೆ, ಬಿರಿದ ಚೆಂಗುಲಾಬಿ ಮುಡಿದು, ಸೂರ್ಯನಿಳಿವ ಹೊತ್ತಿಗೆ ಮುದುಡಿದ ದೇಹ, ಕತ್ತಲೆಯಾಗುತ್ತಲೇ ಹೊರಡುವ ತರಾತುರಿ.. ಒಣಗಿ ಮಬ್ಬೇರಿದ ಕಂದು ಹೂಗಳ ನೆತ್ತಿಯಿಂದೆ ಸುತ್ತಿದಾಕೆ, ತಾನು ಒಪ್ಪದ ವರನ ವರಿಸದ್ದಕ್ಕೆ, ಹಿಂದೆ ಬಿದ್ದವರ ಸಲಹಲು, ಭವಿಷ್ಯ ಪಕ್ಕಕ್ಕೆ ಎತ್ತಿಟ್ಟವಳು. ಈಗೀಗ ಮುಂಜಾನೆ ಅರಳಿ, ಸಂಜೆಗೂ ನಳನಳಿಸೋ ಹೂವಂತೆ ದಿನವೂ ಅರಳುವ ಮತ್ತು ಮನದಲ್ಲೇ ಮರುಗುವ, ನಿತ್ಯ ಒಳ ನರಳಿಗೆ ಕುಗ್ಗಿದ ಸುಕ್ಕು ಕುಸುರಿ ದೇಹ. ಬದುಕು ಬಯಸಿದಂತೆ ನಡೆದಿದ್ದರೆ, ಹೀಗೆ ಗಿರಾಕಿ ಬಯಸುವ ಬಣ್ಣದ, ಭಿನ್ನ ಅಳತೆಯ ಜಡೆ ಹಾರ ಕಟ್ಟುವ ಮಾರುವ,‌ ಕೂಗುವ ಮತ್ತೆ ಮೌನವಾಗುವ, ಅಂತರಂಗದ ಒಂಟೀ ತುಳಿತಕ್ಕೆ ಅಡಿಯಾಗುತ್ತಿರಲಿಲ್ಲವೇನೋ!?.. ಹೂವ ಚೌಕಾಸಿ ಕೇಳುವವರ ಬಳಿ, ಅರಿವಿರದೆ ಅಡ್ಡಿಗೊಳಿಸಿಕೊಂಡ, ಗತದ ಬಗ್ಗೆ ಈಗೀಗ ಅಲವತ್ತುಕೊಳ್ಳುತ್ತಾಳೆ. *************

ಮಾರುವವಳು Read Post »

ಪುಸ್ತಕ ಸಂಗಾತಿ

ಪ್ರೀತಿ ಮತ್ತು ಪ್ರೀತಿ ಮಾತ್ರ

ಪ್ರೀತಿ ಮತ್ತು ಪ್ರೀತಿ ಮಾತ್ರಲೇಖಕರು – ಜ್ಯೋತಿ ಗುರು ಪ್ರಸಾದ್ ಆರಂಭದ ಲೇಖನದಲ್ಲಿ ಪರಿಸರ ಹೋರಾಟಗಾತಿಯಾದ ದಿವಂಗತ ಕುಸುಮಾ ಸೊರಬ ಅವರ ಬಗ್ಗೆ ತಿಳಿಸುತ್ತಾ ಲೇಖಕಿಯು ಅವರ ಈ ಮಾತುಗಳನ್ನುಉಲ್ಲೇಖಿಸುತ್ತಾರೆ ಗಮನಿಸಿ – ” ಗಿಡ ಬೆಳೆಸಿದೆವನಿಗೆ ನರಕವಿಲ್ಲ” ಎಂಬ ಅಂಶ ಗರುಡ ಪುರಾಣದಿಂದಲೇ ಆರಂಭವಾಗಿ ಅಂದಿನ ಜನಜೀವನದ ದಿನನಿತ್ಯ ಕಾರ್ಯಕ್ರಮವಾಗಿತ್ತು. ಪರಿಸರ ರಕ್ಷಣೆ ಹಾಗೆಂದು ತಿಳಿದುಕೊಳ್ಳದೆಯೇ ಜೀವನದ ಆಂಗ ಆಗಿತ್ತು. ಈಗ ಮಾತ್ರ ಇದು ಫ್ಯಾಶನ್. ಮಳೆ – ಇಳೆ ಎಂಬ ಪೃಥ್ವಿಯನ್ನು ರಕ್ಷಣೆ ಮಾಡುವುದೇ ಎಂದರೆ ತನ್ನನ್ನು ತಾನೆ ರಕ್ಷಣೆ ಮಾಡಿಕೊಳ್ಳುವುದೇ ಮಹಿಳೆಯ ರಕ್ಷಣೆ. ಮದುವೆ ಮುಂಜಿಗಳಿಗೆ ಹೋಗಲು ಅನುಮತಿ ಬೇಕಾಗಿಲ್ಲ. ಆದರೆ ಯಾವುದೆ ಪರಿಸರ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಮಹಿಳೆಗೆ ‘ ಅನುಮತಿ’ ಬೇಕಾಗಿದೆ. ಎಷ್ಟೊಂದು ಸತ್ಯವಿದೆ ! ಇಂತಹ ಮಾತುಗಳನ್ನು ಪ್ರಾಮುಖ್ಯ ಮಾಡುತ್ತ ಹೋಗುವಲ್ಲಿ ಲೇಖನ ಹೆಚ್ಚುಪರಿಣಾಮಕಾರಿಯಾಗಿದೆ.ದಾಂಪತ್ಯದ ಬಗ್ಗೆ ಸೊಗಸಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ “ಕಾಮ ಪ್ರೇಮವಾಗಿ ವಾತ್ಸಲ್ಯವಾಗಿ ಹರಿಯುವುದೇ ದಾಂಪತ್ಯ ನಿಷ್ಠೆ”.ಗೊಮ್ಮಟನ ಎತ್ತರವನ್ನು ಕಣ್ಮುಂದೆ ನಿಲ್ಲಿಸಲು ಬರೆದ ಈ ಸಾಲುಗಳು ಲೇಖನದ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಫಲ“ಭೂಮಿಯ ತಾಳ್ಮೆಯನ್ನು ಆಕಾಶಕ್ಕೆ ಮುಟ್ಟಿಸಲು ಹೊರಟಿರುವಂಥ ಸಂತ. ಮನುಷ್ಯ ಕುಲದಲ್ಲಿ ಎತ್ತರದ ಮೌಲ್ಯಗಳಿಗೆ ಎಲ್ಲಿಯವರೆಗೆ ಪ್ರಾಶಸ್ತ್ಯಇರುವುದೋ ಅಲ್ಲಿಯವರೆಗೆ ನಮ್ಮ ಬಾಹುಬಲಿ ಬೆಳಯುತ್ತಿರುತ್ತಾನೆಶುದ್ಧ ಮನಸುಗಳ ಭಾಗವಾಗುತ್ತಾನೆ ಬಾಹುಬಲಿಯ ನಗ್ನತೆಯು ನಮ್ಮ ತೆರೆದ ಮನಸ್ಸಿನ ದಿಟ್ಟತನವಾಗಿ ನಮ್ಮ ಹೃದಯದ ಸೌಂದರ್ಯವನ್ನು ಕಾಯ್ದುಕೊಳ್ಳಲಿ” ಎಂಬಮಾತುಗಳು ಗೊಮ್ಮಟನ ಎತ್ತರವನ್ನು ಸಹೃದಯಿಗಳ ಕಣ್ಮುಂದೆ ನಿಲ್ಲಿಸುವಲ್ಲಿ ಯಶಸ್ವಿಯಾಗಿವೆ.ತುಮಕೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್ ರವರು ‘ ಪುಣ್ಯಕೋಟಿ ‘ ಪದ್ಯದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಪ್ರಸ್ತಾಪಿಸುತ್ತ ಓದುಗರನ್ನು ಯೋಚನೆಗೆ ಹಚ್ಚುತ್ತಾರೆ.ಪೂ.ಚಂ.ತೇಜಸ್ವಿಯವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿತೆರೆದಿಡಲು ಲೇಖಕಿಯು ಹೇಳುವ ಮಾತುಗಳು ಅವರ ಆಆಶಯವನ್ನು ನೆರವೇರಿಸುತ್ತ ಲೇಖಕಿಯ ಪ್ರೌಢ ಭಾಷಾ ಶೈಲಿಗೆ ಸಾಕ್ಷಿಯಾಗುತ್ತವೆ. ಕೆಳಗಿನ ಸಾಲುಗಳನ್ನು ಓದಿರಿ-೧. ತೇಜಸ್ವಿಯವರ ಬಗ್ಗೆ ಬರೆಯುವುದೆಂದರೆ ಜೀವನದಸರಳ ಸತ್ವಗಳನ್ನು ನಮಗೆನಾವೇ ಸಂಶೋಧಿಸಿಕೊಂಡಂತೆತೋರಿಕೆಯ ಯಾವುದೇ ಭಾರವಿಲ್ಲದೆ ಅವರ ಆತ್ಮಸಾಕ್ಷಿಗೆಅನುಗುಣವಾಗಿ ಅನಾವರಣವಾಗುವ ತೇಜಸ್ವಿ ಕುವೆಂಪುಅವರು ಆಶಯಗಳಿಗೆಲ್ಲಾ ರೂಪಕದಂತಿದ್ದಾರೆ.೨. ಕೀರ್ತಿ ಶನಿ ತೊಲಗಾಚೆ ದೂರ’ ಎನ್ನುವ ತಂದೆಯ ಕವಿವಾಣಿಗೆ ತಾವೇ ದನಿಯಾಗಿ,ತಮ್ಮ ಸ್ವತಂತ್ರ ವ್ಯಕ್ತಿತ್ವದಿಂದತಮ್ಮ ಕೃಷಿ ಆಸಕ್ತಿಯಲ್ಲಿ ತೊಡಗಿಸಿಕೊಂಡು ನಶ್ವರದ ಈಪುಟ್ಟ ಜೀವನದಲ್ಲಿ ಯಾವ ಸೋಗೂ ಇಲ್ಲದೆ ಒಬ್ಬ ‘ಸರಳ ಮನುಷ್ಯ’ ನಾಗಿ ಹೇಗೆ ಸಲ್ಲ ಬಹುದು ಎಂಬುದಕ್ಕೆ ತೇಜಸ್ವಿಖಂಡಿತ ಮಾದರಿಯಾಗಿದ್ದಾರೆ.೩. ಯಾವ ವಶೀಲಿ ಬಾಜಿಗಳಿಗೂ ಒಳಗಾಗಿದೆ ಪರಿಸರದಮುಖ್ಯ ಜೀವವಾಗಿ ಹಕ್ಕಿಯಂತೆ, ಮರದಂತೆ ಜೀವಿಸುತ್ತಾ ಇರುವ ಅವರ ಜೀವನ ತೆರೆದ ಪುಸ್ತಕದಂತಿದೆ.ವೀಚಿ (ಚಿಕ್ಕ ವೀರಣ್ಣನವರು )ಯವರ ಏನೂ ತಿಳಿಯದಓದುಗನಿಗೂ ಸಹ ಅವರ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಲು “ಇರುವ ಬದುಕನೆತ್ತರಿಸಲು, ಉತ್ತರಿಸಲು ಧ್ಯಾನಿಸು”,“ಪ್ರೀತಿಗೊಂದೇ ಮುಖವು ದ್ವೇಷಕ್ಕೆ ಹಲವಾರು”,“ಮುದವೆಂದರೇನನ್ನೋ ಕಲಿಯುವುದಿಲ್ಲ ತಾನೇ ಅದಾಗುವುದು” ಎಂಬ ಸಾಲುಗಳನ್ನು ಗುರುತಿಸಿದ್ದಾರೆ.ಹಾಗೆ ” ಕನ್ನಡಿಯೋ ಅಥವಾ ದೀಪವೋ ಆಗದ ಸಾಹಿತ್ಯ ಚಿಂತನೆ ವ್ಯರ್ಥ” ಎಂಬ ಡಿ. ಆರ್. ನಾಗರಾಜರವರ ಉಕ್ತಿಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಿದ ಲೇಖಕರಾದ ಮುರಾರಿ ಬಲ್ಲಾಳರ ಬರಹದ ಬಗ್ಗೆ ಓದುಗರ ಕುತೂಹಲ ಮೂಡಿಸುವಲ್ಲಿ ಲೇಖಕಿಯು ಸಫಲರಾಗಿದ್ದಾರೆ.ಪ್ರೇಮವನ್ನು ಕುರಿತು ಲೇಖಕಿ ನೀಡಿರುವ ವ್ಯಾಖ್ಯಾನವುಎಷ್ಟು ಅರ್ಥಪೂರ್ಣ.”ಪ್ರೇಮ ನಮ್ಮ ಪ್ರಬುದ್ಧ ಆಯ್ಕೆಯ ಒಂದು ಸ್ಥಾಯಿಯಾದ ಶೋಧ. ಅದನ್ನು ಎಳೆದು ತಂದುಗಂಟು ಹಾಕಲಾಗುವುದಿಲ್ಲ”ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಬಗ್ಗೆ ಲೇಖಕಿಯು ಹೇಳಿದ ಮಾತು ಹದಿನಾರು ವರ್ಷಗಳು ಕಳೆದರೂ ಪ್ರಸ್ತುತವಾಗಿದೆಸ್ತ್ರೀವಾದದ ಬಗ್ಗೆ ಜ್ಯೋತಿಯವರ ಪ್ರತಿಪಾದನೆ ಹೀಗಿದೆ _ “ಸ್ತ್ರೀವಾದವೆಂದರೆ ಹೆಣ್ಣಿನ ನೈಸರ್ಗಿಕ ಅಸ್ತಿತ್ವವನ್ನು ಉಳಿಸಿ ಕೊಂಡು ಆ ಸವಿಯ ಸ್ವಾತಂತ್ರದಲ್ಲೇ ಕಂಡು ಕೊಳ್ಳುವ ವ್ಯಕ್ತಿತ್ವದ ಪೂರ್ಣದೃಷ್ಟಿಯೆ ಹೊರತು ಬರಿಯ ವಾದಕ್ಕಾಗ ವಾದ ಮಾಡುವ ಒಣವಾದವಲ್ಲ” ಎಂಬ ಲೇಖಕಿಯವರ ಅಭಿಪ್ರಾಯ ಪರಿಪಕ್ವವಾಗಿದೆ. ಭಾರತದ ಸಾಂಸ್ಕೃ,ತಿಕ ಅನನ್ಯತೆಯನ್ನು ಪ್ರಸ್ತಾಪಿಸಿ “ತಲೆಬಾಗುವ ವಿನಯವೇ,ಕೈ ಜೋಡಿಸುವ, ಆಕಾಶಕ್ಕೆ ಕೈಯೊಡ್ಡಿಪ್ರಾರ್ಥಿಸುವ, ಎದೆ ಮುಟ್ಟಿ ದೇವರನ್ನು ಸ್ಪರ್ಶಿಸುವ ಅಂತರಂಗದ ಆಲಾಪವೇ ನನಗೆ ನಮ್ಮ ದೇಶದ ಮಹತ್ವ ಸಾಂಸ್ಕೃತಿಕ ಅನನ್ಯತೆ” ಈ ಮಾತು ನೈಜ ದೇಶಪ್ರೇಮದ ಪ್ರತೀಕ.ಬದುಕು ಬರಹದ ನಡುವೆ ಅಂತರಉಳಿಸಿಕೊಂಡ ಲೇಖಕ ಲಂಕೇಶ್ ರವರನ್ನು ಕಂಡಾಗ ಆದ ಭ್ರಮನಿರಸನ ಕುರಿತು ತಿಳಿಸಿದ್ದಾರೆಕೆಲವೊಂದು ಚಲನೆ ಚಿತ್ರಗೀತೆಗಳ ವಿಮರ್ಶೆ, ಮೆಚ್ಚಿನನಟರ ಬಗ್ಗೆ ಬರೆಯುವಂತೆ ಬಿ. ಆರ್. ಲಕ್ಷ್ಮಣ್ ರಾವ್ ರವರ ಪ್ರೇಮದ ಕುರಿತು ಪಂದ್ಯವನ್ನು ಟೀಕಿಸುತ್ತಾ.”ಆಕ್ಟ್ಆಫ್ ಲಿವಿಂಗ್” ಬಗ್ಗೆ ಹೇಳವಲ್ಲಿ ವಿಶೇಷ ಹೊಳಹುಗಳಿವೆಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯನ್ನು ನೆನೆಯುವಕೃತಜ್ಞತೆಯ ಮಹಾಪೂರದಲ್ಲಿ “ಸೂರ್ಯ ನಮಸ್ಕಾರ’ದ,‘ ಸಂಧ್ಯಾವಂದನೆ’ ಯು ‘ಗಾಯತ್ರಿ ಮಂತ್ರ’ದ ಎಲ್ಲಾ ಫಲಸಿದ್ಧಿಸುತ್ತವೆ. ಮುಖ್ಯ ಬೇಕಾಗಿರುವುದು ಒಳನೋಟ – ನಿಜದ ಸಂತಸವೆನ್ನವ ಲೇಖಕರ ಈ ಮಾತುಗಳು ಮನದಆಳಕ್ಕೆ ಇಳಿಯುತ್ತವೆ ಎಂಬುದು ಅಷ್ಟೇ ನಿಜ.ಮತಾಂಧರ ಕಣ್ಣಿಗೆ ಅಂಜನ ಹಾಕುವ ಅಂಜನೆ ಬೇಕಾಗಿದೆ ಎಂಬ ಸತ್ಯದ ಬೆಳಕಿನಲ್ಲಿ ಆಂಜನೇಯನ ಕಲ್ಪನೆಯಿದೆ.ಒಟ್ಟಾರೆ ಈ ಕೃತಿಯು ಲೇಖಕರ ಪ್ರಬುದ್ಧ ಚಿಂತನೆ ಹಾಗೂ ಪ್ರತಿಭೆಯ ಭಾರಕ್ಕೆ ಬಾಗಿದ ಕೃತಿಯೆನ್ನಬಹುದು. ಪ್ರೀತಿಗೆ ಪಾತ್ರರಾದವರ, ಪ್ರೀತಿಯ ಹಾಡುಗಳು ಹಾಗೂ ಪ್ರೀತಿಯ ವಸ್ತುಗಳೊಂದಿಗೆ ಪ್ರೀತಿಯ ಸೋಜಿಗವನ್ನು ನೋಡುತ್ತಾ ಬದುಕಿನ ಪ್ರೀತಿಗೆ ಬೇಕಾದ ಒಳನೋಟವನ್ನು ಒದಗಿಸುವ ಈ ಕೃತಿಯ ಶೀರ್ಷಿಕೆಯು ಸಮಂಜಸವಾಗಿದೆ ********** ಎಂ. ಆರ್. ಅನಸೂಯ

ಪ್ರೀತಿ ಮತ್ತು ಪ್ರೀತಿ ಮಾತ್ರ Read Post »

ಅಂಕಣ ಸಂಗಾತಿ, ಸ್ವಾತ್ಮಗತ

ಸ್ವಾತ್ಮಗತ

ಸುಭಾಷ್ ಪಾಳೇಕರರ ‘ಸಹಜ ಕೃಷಿ ಪದ್ದತಿ’ಯೂ..! ಮೈಸೂರಿನ ಆರ್.ಸ್ವಾಮಿ.ಆನಂದರ ‘ಸುಭಾಷ್ ಪಾಳೇಕರರ ಸಹಜ ಕೃಷಿ’ ಪುಸ್ತಕವೂ.!! ಕಳೆದ ಜುಲೈನಲ್ಲಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ‘ಶೂನ್ಯ ಬಂಡವಾಳದ (ನೈಸರ್ಗಿಕ) ಕೃಷಿ’ಯನ್ನು ಉತ್ತೇಜಿಸುವುದಾಗಿ ಉಲ್ಲೇಖಿಸಿದ್ದರು. ಇದಕ್ಕೂ ಮುಂಚೆಯೇ ಕರ್ನಾಟಕವೂ ಸೇರಿದಂತೆ ಆಂಧ್ರ ಪ್ರದೇಶ, ಛತ್ತೀಸ್ ಘಡ, ಹಿಮಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲೂ ಈ ಕೃಷಿ ಪದ್ದತಿಯನ್ನು  ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯಾಯ ರಾಜ್ಯ ಸರ್ಕಾರಗಳು ಹಮ್ಮಿಕೊಂಡಿವೆ. ಈ ನಡುವೆ ನೈಸರ್ಗಿಕ ಕೃಷಿ ಪದ್ಧತಿಯ ಬಗ್ಗೆ ಅನೇಕ ಕೃಷಿ ಪಂಡಿತರು, ವಿಜ್ಞಾನಿಗಳು, ರೈತಪರ ಚಿಂತಕರು ಕೃಷಿ ವಿಶ್ಲೇಷಕರು ಒಳಗೊಂಡಂತೆ ರಾಷ್ಟ್ರವ್ಯಾಪಿ ಚರ್ಚೆಗಳು ನಡೆದಿವೆ. ಕಳೆದ ಕೆಲ ವಾರಗಳ ಹಿಂದೆ ರಮೇಶ್ ಮುಳಬಾಗಿಲುರವರು ಬರೆದ ‘ನೈಸರ್ಗಿಕ ಕೃಷಿಯೊಳಗಿನ ಬಲಪಂಥೀಯವಾದ’ ಲೇಖನಕ್ಕೆ ಚುಕ್ಕು ನಂಜುಡಸ್ವಾಮಿಯವರು ಪ್ರತಿಕ್ರಿಯೆ ನೀಡಿದ್ದರು. ‘ಶೂನ್ಯ ಬಂಡವಾಳ’– ನೈಸರ್ಗಿಕ ಕೃಷಿಯನ್ನು ವಿಮರ್ಶೆ ಮಾಡುತ್ತಿರುವ ಅನೇಕ ಕೃಷಿ ತಜ್ಞರಿಗೆ ನೈಸರ್ಗಿಕ ಕೃಷಿ ಬಗ್ಗೆ ಅನೇಕ ಅನುಮಾನಗಳು ಇದ್ದಂತಿವೆ. ಯಾವ ಬಂಡವಾಳವೂ ಹೂಡದ ಕೃಷಿ ಸಾಧ್ಯವೇ? ಈ ಪದ್ದತಿಯಿಂದ ದೇಶದ 130 ಕೋಟಿ ಜನರ ಹೊಟ್ಟೆ ತುಂಬಿಸಲು ಸಾಧ್ಯವೇ? ದೇಶದ ಎಲ್ಲ ಹವಾಮಾನ ವಲಯಗಳಲ್ಲಿ ಇದನ್ನು ಅಳವಡಿಸಲು ಸಾಧ್ಯವೇ. ಈ ಪದ್ಧತಿಯು ಕೃಷಿ ವಿಶ್ವ ವಿದ್ಯಾಲಯಗಳ ಮಾನ್ಯತೆ ಪಡೆದಿದೆಯೇ ಎಂಬ ಪ್ರಶ್ನೆಗಳನ್ನು ಎತ್ತಿದ್ದರು. ಈ ಕೃಷಿ ಪದ್ಧತಿಯನ್ನು ಸಂಶೋಧನೆಗೆ ಒಳಪಡಿಸಿ ಪರೀಕ್ಷಿಸಬೇಕೆಂದು ಇನ್ನೂ ಕೆಲವರು ಅಭಿಪ್ರಾಯಪಟ್ಟಿದ್ದರು. ಈ ದೇಶದ ಬಹು ಸಂಖ್ಯಾತರ ಭೂಮಿ ಮತ್ತು ಬದುಕನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ನಮ್ಮ ಕೃಷಿ ವಿಶ್ವವಿದ್ಯಾಲಯಗಳಿಗೆ ಕೊಡಲಾಗಿತ್ತು. ಆದರೆ ನಮಗೆ ಎದುರಾಗಿದ್ದ ಸವಾಲುಗಳಿಗೆ ನಮ್ಮಲ್ಲೇ ಉತ್ತರ ಹುಡಕುವ ಗೋಜಿಗೆ ಹೋಗಲಿಲ್ಲ ಈ ವಿಶ್ವವಿದ್ಯಾಲಯಗಳು. ಪಾಶ್ಚಿಮಾತ್ಯ ದೇಶಗಳಿಂದ ಎರವಲು ಪಡೆದ ‘ಹಸಿರು ಕ್ರಾಂತಿ’ಯನ್ನು ಪ್ರಚುರಪಡಿಸಿದ್ದಷ್ಟೇ ಇವುಗಳ ಸಾಧನೆಯಾಯಿತು. ಹಸಿರು ಕ್ರಾಂತಿಯ ನಂತರ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು ಎನ್ನುವುದೇನೋ ಸತ್ಯ. ಎರಡನೇ ಮಹಾಯುದ್ಧದ ನಂತರ ಶಸ್ತ್ರಾಸ್ತ್ರಗಳಿಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ ಕಂಪೆನಿಗಳಿಗೆ ಮಾರುಕಟ್ಟೆ ಇಲ್ಲದಂತಾಗಿತ್ತು. ಕೃಷಿ ಸಾಧನ ಸಲಕರಣೆಗಳು- ಬೀಜ ಗೊಬ್ಬರ ಕೀಟನಾಶಕಗಳ ತಯಾರಿಕೆಯಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸಲು ಈ ಎಲ್ಲ ಕಂಪೆನಿಗಳಿಗೆ ಹಸಿರು ಕ್ರಾಂತಿಯೇ ರತ್ನಗಂಬಳಿ ಹಾಸಿಕೊಟ್ಟಿತು ಎಂಬುದೂ ಅಷ್ಟೇ ಸತ್ಯ. ಹಸಿರು ಕ್ರಾಂತಿಗೂ ಮುಂಚೆ ಭಾರತದ ‘ಕೃಷಿ’ ಬದುಕಿನ ಭಾಗವಾಗಿತ್ತು. ಸಂಸ್ಕೃತಿಯ ನೆಲೆಯಾಗಿತ್ತು. ನಿಸರ್ಗದಲ್ಲಿರುವ ವೈವಿಧ್ಯತೆಯನ್ನು ಆರಾಧಿಸಿ ನಮ್ಮ ಹಿರಿಯರು ಮಾಡುತ್ತಿದ್ದುದು ಮಿಶ್ರ ಬೆಳೆ ಪದ್ಧತಿ. ಕರ್ನಾಟಕದಲ್ಲಿ ಅಕ್ಕಡಿ ಎಂದು ಕರೆದರೆ, ಉತ್ತರ ಭಾರತದಲ್ಲಿ `ಬಾರಾ ಅನಾಜ್” (ಹನ್ನೆರಡು ದವಸ ಧಾನ್ಯ) ಎಂದು ಕರೆದರು. ಮನೆಯ ಆಹಾರ ಭದ್ರತೆಗೆ ಬೇಕಾದ ಧವಸ, ಧಾನ್ಯ, ಬೇಳೆಕಾಳುಗಳು, ಎಣ್ಣೆಬೀಜಗಳನ್ನು ಒಂದಕ್ಕೊಂದು ಹೊಂದುವಂತೆ ಬಿತ್ತಿ ಬೆಳೆಯುವ ಪದ್ಧತಿ ನಶಿಸುತ್ತ ಬಂದು ಅದರ ಜಾಗವನ್ನು ಕಾಲಕ್ರಮೇಣ ಏಕ ಬೆಳೆಯ ಪದ್ಧತಿಯು ಆವರಿಸಿಕೊಂಡಿತು. ನಮ್ಮಲ್ಲಿದ್ದ ಕೋಟ್ಯಾಂತರ ತಳಿಗಳು ಕಾಣೆಯಾದವು. ಹೆಚ್ಚು ಹೆಚ್ಚು ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರಗಳು-, ಕ್ರಿಮಿನಾಶಕಗಳನ್ನು ಮನೆ ಬಾಗಿಲಿಗೆ ತಂದುಕೊಟ್ಟರು. ಇವುಗಳನ್ನು ಸುರಿದು ಭೂಮಿ ಬಂಜರಾಯಿತು. ಎಕರೆಗಟ್ಟಲೇ ಭೂಮಿಯಲ್ಲಿ ರೈತರು ಕಬ್ಬು, ಭತ್ತ, ಹತ್ತಿ, ಅಡಿಕೆಯಂತಹ ಬೆಳೆಗಳನ್ನು ಈ ದೇಶದ ಆಹಾರ ಸ್ವಾವಲಂಬನೆಗಾಗಿ ಬೆಳೆದರು. ಮಿಕ್ಕೆಲ್ಲದಕ್ಕೂ ಮಾರುಕಟ್ಟೆಯ ಮೊರೆ ಹೋಗುವಂತಾಯಿತು. ಆಹಾರದ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಯಿತು. ರೈತ ತನ್ನ ಖುದ್ದು ಆಹಾರ ಭದ್ರತೆಗೆ ಪರಾವಲಂಬಿಯಾದ. ಬೇರೆಯವರಿಗೆ ಕೊಡುತ್ತಿದ್ದ ರೈತನ ಕೈ ಮೂರು ಕಾಸಿನ ಸಬ್ಸಿಡಿ ಬೇಡಿ ಚಾಚುವಂತಾಯಿತು. ಇದೆಲ್ಲದರ ಶ್ರೇಯಸ್ಸು ಈ ದೇಶದ ಕೃಷಿ ವಿಜ್ನಾನಿಗಳಿಗೇ ಸಲ್ಲಬೇಕು. ಇದರ ನಡುವೆ ತೊಂಬತ್ತರ ದಶಕದಲ್ಲಿ ಮುಕ್ತ ಮಾರುಕಟ್ಟೆ ನೀತಿ ಜಾರಿಯಾಯಿತು. ವಿದೇಶೀ ಕೃಷಿ ಉತ್ಪನ್ನಗಳು ಯಾವುದೇ ಆಮದು ಸುಂಕವಿಲ್ಲದೇ ಅಗ್ಗದ ದರದಲ್ಲಿ ದೇಶದೊಳಗೆ ಭಾರೀ ಪ್ರಮಾಣದಲ್ಲಿ ಸುರಿದವು. ನಮ್ಮ ದೇಶದ ರೈತರ ಗಾಯದ ಮೇಲೆ ಬರೆ ಎಳೆದವು. ನಮ್ಮ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದಂತಾಯಿತು. ಇಂದಿಗೂ ಕೃಷಿ ಮಾರುಕಟ್ಟೆ ಜೂಜಾಟವಿದ್ದಂತೆಯಾಯಿತು. ಯಾರು ಯಾವಾಗ ಬಾಜಿ ಕಟ್ಟುತ್ತಾರೋ ಯಾರಿಗೂ ತಿಳಿಯದು. ಇಂದಿಗೂ ಬೆಳೆಗಳ ಬೆಲೆ ರಕ್ಷಣೆಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಯಾವ ಶಾಸನವೂ ಇಲ್ಲ. ಬೆಂಬಲ ಬೆಲೆ ನೀತಿಗಾಗಿ ಪ್ರತಿ ವರ್ಷ ನಡೆಯುವ ರೈತರ ಹೋರಾಟಗಳು ಮತ್ತು ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಲಕ್ಷಾಂತರ ರೈತರ ಆತ್ಮಹತ್ಯೆಗಳು ನಮ್ಮ ಕಣ್ಮುಂದೆಯೇ ಇವೆ. ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಅಂಕಿಅಂಶಗಳ ಪ್ರಕಾರ 1951ರಲ್ಲಿ ಭಾರತದಲ್ಲಿ ಒಕ್ಕಲುತನದಲ್ಲಿ ತೊಡಗಿದ್ದ ಜನಸಂಖ್ಯೆಯ ಒಟ್ಟು ಶೇಕಡಾ 69.7%. ಈ ಪ್ರಮಾಣ 2011 ರಲ್ಲಿ 54.6% ಕ್ಕೆ ಕುಸಿಯಿತು. ಇಷ್ಟೆಲ್ಲಾ ಆದರೂ ಸರ್ಕಾರಗಳೇ ಆಗಲಿ, ಕೃಷಿ ವಿಶ್ವವಿದ್ಯಾಲಯಗಳೇ ಆಗಲಿ, ಕೃಷಿ ಒಂದು ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆಯೆಂದು ಗುರುತಿಸುವ ಕನಿಷ್ಠ ಕೆಲಸವನ್ನು ಕೂಡ ಮಾಡಲಿಲ್ಲ. ಕೃಷಿಯಲ್ಲಾಗುತ್ತಿದ್ದ ಅನ್ಯಾಯ, ಮೋಸಗಳ ಕುರಿತು ಕಣ್ಣು ಬಾಯಿ ಕಿವಿ ಮುಚ್ಚಿಕೊಂಡವು. ಇದೇ ಸಮಯದಲ್ಲಿ ಅನೇಕ ವರ್ಷಗಳ ಸಂಶೋಧನೆಗಳ ನಂತರ ಹಸಿರು ಕ್ರಾಂತಿಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ತಿಳಿ ಹೇಳುತ್ತಾ ನೈಸರ್ಗಿಕ ತತ್ವಗಳನ್ನಾಧರಿಸಿದ “ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ” ಎಂಬ ಹೆಸರಿನ ಒಂದು ಪರ್ಯಾಯವನ್ನು ದೇಶದ ರೈತರ ಮುಂದಿಟ್ಟವರು ಮಹಾರಾಷ್ಟ್ರದ ಸುಭಾಷ್ ಪಾಳೇಕರ್ ರವರು. ಸುಭಾಷ್ ಪಾಳೇಕರರ ಸಹಜ ಕೃಷಿ ಪದ್ಧತಿ– ಇದಕ್ಕೂ ಮುಂಚೆ ನೈಸರ್ಗಿಕ ತತ್ವಗಳನ್ನಾಧರಿಸಿ ಮಾಡಬಹುದಾದ ಕೃಷಿಯನ್ನು “ಶೂನ್ಯ ಉಳುಮೆ ಕೃಷಿ” (Zero Tillage Farming) ಎಂಬ ಹೆಸರಿನ ಸಹಜ ಕೃಷಿಯನ್ನು ಜಗತ್ತಿಗೇ ಪರಿಚಯಿಸಿದ್ದು ಜಪಾನಿನ ಕೃಷಿ ಸಂತ ಮಸನೊಬು ಫುಕುವೊಕಾ. ಆನಂತರ ನಮ್ಮವರೇ ಆದ ತಮಿಳುನಾಡಿನ ಶ್ರೀಯುತ ನಮ್ಮಾಳವರ್, ಗ್ರಾಮೀಣ ಗಾಂಧೀ ಎಂದೇ ಹೆಸರುವಾಸಿಯಾಗಿದ್ದ ಭಾಸ್ಕರ್ ಸಾವೆ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಡಾ.ನಾರಾಯಣರೆಡ್ಡಿಯವರು. 2002 ನೇ ಇಸವಿಯಲ್ಲಿ ಕರ್ನಾಟಕದ ರೈತ ಚಳವಳಿಯ ಹಿರಿಯ ಮುಖಂಡರಾಗಿದ್ದ ಬಸವರಾಜ್ ತಂಬಾಕೆಯವರು ಸುಭಾಷ್ ಪಾಳೇಕರ್ ರವರನ್ನು ಕರ್ನಾಟಕಕ್ಕೆ ಪರಿಚಯ ಮಾಡಿದರು. ಅಲ್ಲದೇ ನಮ್ಮ ಮೈಸೂರಿನ ಪತ್ರಕರ್ತರಾದ ಆರ್.ಸ್ವಾಮಿ ಆನಂದ ಅವರು ಈ‌ ಸುಭಾಷ್ ಪಾಳೇಕರ್ ರನ್ನು ಕಟ್ಟಿಕೊಂಡು ರಾಜ್ಯದ ಮೂಲೆಮೂಲೆಗಳಲ್ಲಿ ಸುತ್ತಾಡಿ ಸುಭಾಷ್ ಪಾಳೇಕರರ ಈ ಕೃಷಿ ಪದ್ದತಿಯನ್ನು ಪ್ರಚುರಪಡಿಸಿದರು. ಅಷ್ಟೇ ಅಲ್ಲ ರೈತರಿಗೆ ಸಹಜ ಕೃಷಿಯನ್ನು ಪದ್ದತಿ ಆಹಾರ ಉತ್ಪಾದನೆಗೆ ಎಷ್ಟು ಬಹುಮುಖ್ಯವೆಂದು ಸಾರಿಸಾರಿ ಹೇಳಿದರು. ಅಲ್ಲದೇ ನಮ್ಮ ‘ಅಗ್ನಿ’ ವಾರಪತ್ರಿಕೆಯಲ್ಲಿ ಅಂಕಣವೊಂದನ್ನು ಧಾರಾವಾಹಿಯಾಗಿ ‘ಸಹಜ‌ ಕೃಷಿ’ಯ ಬಗೆಗೆ ಕಂತುಗಟ್ಟಲೇ ಬರೆದು ರೈತರನ್ನು ಎಚ್ಚರಿಸುವ ಲೇಖನ ಮಾಲೆಯನ್ನು ಹೊರತಂದರು. ಈ ಸಹಜ ಕೃಷಿ ಕೃಷಿ ಬಗೆಗಿನ ಪುಸ್ತಕ ೩-೪ ಮುದ್ರಣ ಕಂಡಿತು. ಇರಲಿ… ಆರ್. ಸ್ವಾಮಿ ಆನಂದರ ಜೊತೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸುಭಾಷ್ ಪಾಳೇಕರರ ಅನೇಕ ತರಬೇತಿಗಳನ್ನು ಆಯೋಜಿಸಿತು. ಶಿಬಿರಕ್ಕೆ ಬರುತ್ತಿದ್ದ ರೈತರ ಊಟ, ವಸತಿಗೆ ಅನೇಕ ಪ್ರಗತಿಪರ ಮಠಾಧೀಶರುಗಳ ಸಹಕಾರ ದೊರಕಿತು. ಕರ್ನಾಟಕದಲ್ಲಿ ಮೊದಲಿಗೆ ಈ ಕೃಷಿ ಪದ್ಧತಿಯಲ್ಲಿ ರೈತ ಸಂಘದ ಕಾರ್ಯಕರ್ತ ಬನ್ನೂರಿನ ಕೃಷ್ಣಪ್ಪ ಅಳವಡಿಸಿ ಎಲ್ಲರೂ ಹುಬ್ಬೇರಿಸುವಂತೆ ಬಾಳೆ ಬೆಳೆದರು. ಆಗ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಮೈಸೂರಿನ ಸ್ವಾಮಿ ಆನಂದ್ ರವರು ಕೃಷ್ಣಪ್ಪರವರ ಬಾಳೆಯ ಬಗ್ಗೆ ಲೇಖನ ಬರೆದರು. ನಂತರ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ಕರ್ನಾಟಕದಲ್ಲಿ ವ್ಯಾಪಕಗೊಳ್ಳುತ್ತಾ ಹೋಯಿತು. 2006 ಅಥವಾ 2007 ಇರಬೇಕು. ಕೂಡಲ ಸಂಗಮದಲ್ಲಿ ನಡೆದ ಪಾಳೇಕರ್ ರವರ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ ರೈತರ ಸಂಖ್ಯೆ ಆರು ಸಾವಿರ ದಾಟಿತ್ತು. ಕರ್ನಾಟಕದಲ್ಲಿ ಮೌನವಾಗಿ ನಡೆಯುತ್ತಿದ್ದ ಈ ಚಳವಳಿಯನ್ನು ನೋಡಿದ ತಮಿಳುನಾಡಿನ ‘ಪಸುಮೈ ವಿಕಟನ್’ ಪತ್ರಿಕೆ ತಮಿಳುನಾಡಿನಲ್ಲೂ ಪಾಳೇಕರರ ಶಿಬಿರ ಆಯೋಜಿಸಿತು. ನಂತರ ಕೇರಳ, ಪಂಜಾಬ್, ಆಂಧ್ರ ಪ್ರದೇಶ, ರಾಜಸ್ಥಾನ ಹೀಗೆ ನೈಸರ್ಗಿಕ ಕೃಷಿಯ ಆಂದೋಲನ ವ್ಯಾಪಕವಾಗಿ ಬೆಳೆಯತೊಡಗಿತು. ವಿಶ್ವ ರೈತ ಚಳವಳಿಯಾದ ‘ಲಾ ವಿಯಾ ಕ್ಯಾಂಪೆಸಿನಾ’ದ ಮೂಲಕ ಶ್ರೀಲಂಕಾ, ನೇಪಾಳ ಮತ್ತು ಇಂಡೋನೇಷಿಯಾದಲ್ಲೂ ಅನೇಕ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿ ಯಶಸ್ಸನ್ನು ಕಂಡಿದ್ದರು. ಆದರೆ, ಇದೆಲ್ಲದರ ನಡುವೆ ನಮ್ಮ ಯಾವೊಬ್ಬ ಕೃಷಿ ವಿಜ್ಞಾನಿಯೂ, ಕೃಷಿ ಅಧಿಕಾರಿಯೂ ಇದರ ಕಡೆ ತಿರುಗಿ ನೋಡಲಿಲ್ಲ. ಪಾಳೇಕರ್ ಪದ್ಧತಿ ಅವೈಜ್ಞಾನಿಕ ಅಥವಾ ಅರ್ಥಹೀನ ಎಂದು ತೀರ್ಮಾನಿಸಿದಂತಿತ್ತು ಅವರ ನಡೆ. ಇವರೆಲ್ಲರನ್ನೂ ಮೀರಿ ಅನೇಕ ರಾಜ್ಯ ಸರ್ಕಾರಗಳು ಮತ್ತು ಇತ್ತೀಚೆಗೆ ಕೇಂದ್ರ ಸರ್ಕಾರವೂ ಸೇರಿದಂತೆ ಶೂನ್ಯ ಬಂಡವಾಳ (ನೈಸರ್ಗಿಕ) ಕೃಷಿಗೆ ಒತ್ತು ನೀಡಲು ತೀರ್ಮಾನಿಸಿಯಾಗಿದೆ. ಆಂಧ್ರ ಪದೇಶದ ಸರ್ಕಾರ 2015ರಲ್ಲಿ ಈ ಕೃಷಿ ಪದ್ಧತಿಯನ್ನು ರಾಜ್ಯದಾದ್ಯಂತ ಒಯ್ಯಲು ಕೈಗೊಂಡ ತೀರ್ಮಾನವೇ ಇದೆಲ್ಲಕ್ಕೆ ನಾಂದಿ ಆಗಿತ್ತು. 2024 ರವರೆಗೆ ಇಡೀ ರಾಜ್ಯವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಬೇಕೆಂದು ಆಂಧ್ರ ಈಗ ಪಣ ತೊಟ್ಟಿದೆ. ಇದಕ್ಕೆ ಮೀಸಲಿಟ್ಟಿರುವ ಹಣ ಹದಿನೇಳು ಸಾವಿರ ಕೋಟಿಗಳಷ್ಟು. ಇದರ ಬಗ್ಗೆ ಅನೇಕ ಟೀಕೆಗಳೂ ಕೇಳಿ ಬರುತ್ತಿವೆ. ಶೂನ್ಯ ಬಂಡವಾಳವೆಂದ ಮೇಲೆ ಹದಿನೇಳು ಸಾವಿರ ಕೋಟಿ ಏಕೆ? ಹದಿನೇಳು ಸಾವಿರ ಕೋಟಿ ಮೀಸಲಿಟ್ಟಿರುವುದು ಎಂಟರಿಂದ ಹತ್ತು ವರ್ಷಗಳ ಯೋಜನಾ ಅವಧಿಗೇ ಹೊರತು ಕೇವಲ ಒಂದು ವರ್ಷಕ್ಕಲ್ಲ. 2024 ರ ಒಳಗೆ ರಾಜ್ಯದ ಅರವತ್ತು ಲಕ್ಷ ರೈತರನ್ನು ತಲುಪಲು ಈ ಹಣವನ್ನು ಬಳಸಲಾಗುತ್ತಿದೆ. (http://apzbnf.in/an-open-letter-to-critics/). ಈ ಹಣ ಬಹುರಾಷ್ಟೀಯ ಕಂಪೆನಿಗಳಿಂದ ಅಥವಾ ಜಗತ್ತಿನ ದೈತ್ಯ ಕಂಪೆನಿಗಳಿಂದ ಬರುತ್ತಿದ್ದಲ್ಲಿ, ಅದನ್ನು ವಿರೋಧಿಸಬೇಕಾಗುತ್ತೆ. ಆದರೆ ಈ ಆಪಾದನೆಗಳಿಗೆ ಸದ್ಯ ಯಾವ ಪುರಾವೆಗಳೂ ಇಲ್ಲ. ಈಗ ವಿಮರ್ಶೆ ಮಾಡಿರುವ ಅನೇಕರು ‘ಶೂನ್ಯ ಬಂಡವಾಳ’ ಎಂಬುದನ್ನು ಯಥಾವತ್ ಅರ್ಥ ಮಾಡಿಕೊಂಡಂತಿದೆ. ಪಾಳೇಕರ್ ಅವರು ಹೇಳಿರುವುದು ಒಂದು ಬೆಳೆಯನ್ನು ಬೆಳೆಯಲು ತಗಲುವ ವೆಚ್ಚವನ್ನು ಬೆಳೆಯ ನಡುವೆ ಬೆಳೆಯಬಹುದಾದ ಅಂತರ ಬೆಳೆಯಿಂದ ಬರುವ ಆದಾಯದಿಂದ ಭರಿಸುವುದೆಂದು. ಅದಕ್ಕೂ ಮಿಗಿಲಾಗಿ ‘ಶೂನ್ಯ ಬಂಡವಾಳ’ ಎಂಬುದು ಒಂದು ಪರ್ಯಾಯ ಕೃಷಿ ಚಿಂತನೆಗೆ ಆಹ್ವಾನ ನೀಡುವ ಘೋಷಣೆಯೂ ಆಗಿದೆ. ಈಗ ಸುಭಾಷ್ ಪಾಳೇಕರ್ ರವರು ಹೆಸರನ್ನು ಬದಲಾಯಿಸಿದ್ದಾರೆ. ಅದಕ್ಕೆ ಅನೇಕರ ಸಹಮತ ಇಲ್ಲ. ಶೂನ್ಯ ಬಂಡವಾಳದ ಕೃಷಿಯಲ್ಲಿ ಹೊರಗಿನಿಂದ ಏನನ್ನೂ ತರುವುದಿಲ್ಲ. ಬೀಜ, ಜೀವಾಮೃತ, ಕ್ರಿಮಿನಾಶಕಗಳ ಸಿದ್ಧತೆಯಲ್ಲಿ ಪ್ರಕೃತಿದತ್ತವಾಗಿ ಸಿಗುವದನ್ನೇ ಬಳಸಲಾಗುತ್ತದೆ. ಇದನ್ನು ವೈಜ್ನಾನಿಕ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿರುವ ವಿಜ್ಞಾನಿಗಳು ಕಾನೂನು ಬಾಹಿರವಾಗಿ ಮಾರಲಾಗುತ್ತಿರುವ ಬಿಟಿ ಬದನೆ ಬೀಜಗಳ ಬಗ್ಗೆ ಯಾಕೆ ಬಾಯಿ ಬಿಡುತ್ತಿಲ್ಲ? ಜಗತ್ತಿನ ಅನೇಕ ದೇಶಗಳಲ್ಲಿ ಈಗಾಗಲೇ ನಿಷೇಧಿಸಲಾಗಿದ್ದು ನಮ್ಮ ದೇಶದಲ್ಲಿ ರಾಜಾರೋಷವಾಗಿ ಮಾರಾಟ್ವಾಗುತ್ತಿರುವ ಹಾನಿಕಾರಕ Glyphosate ಅಥವಾ Round Up ಕಳೆ ನಾಶಕಗಳ ಬಗ್ಗೆ ಯಾವುದೇ ವಿಜ್ಞಾನಿ ಏಕೆ ಪ್ರಶ್ನೆ ಮಾಡುತ್ತಿಲ್ಲ? ನೈಸರ್ಗಿಕ ಕೃಷಿಗೆ ವೈಜ್ಞಾನಿಕ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಅಪ್ರಸ್ತುತವಾಗಿದೆ. ಈಗಾಗಲೇ ಹದಿನೈದು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಮಾಡುತ್ತಿರುವ ರೈತರೇ ಮಾನ್ಯತೆ ಕೊಟ್ಟಿರುವಾಗ, ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆಯುವ ಅಗತ್ಯವಿದೆಯೇ? ಹಿಮಾಚಲದ ಸೇಬು ಬೆಳೆಗಾರರಿಂದ ಹಿಡಿದು ಬೀದರ ಜಿಲ್ಲೆಯ ಖುಷ್ಕಿ ಬೆಳೆಗಾರರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಎಲ್ಲಾ ಹವಾಮಾನಗಳಿಗೂ ಹೊಂದುವುದಿಲ್ಲ ಎನ್ನುವವರಿಗೆ ಒಂದು ಸಲಹೆ– ದಯವಿಟ್ಟು ನೈಸರ್ಗಿಕ ಕೃಷಿ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಮಾತನಾಡಿಸಿ. ವಿತಂಡ ವಾದಗಳನ್ನು ಮಾಡುತ್ತಿರುವವರಿಗೆ ಜಗತ್ತಿನ ಮುಂದೆ ನಿಂತಿರುವ ಅತಿ

ಸ್ವಾತ್ಮಗತ Read Post »

You cannot copy content of this page

Scroll to Top