ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬೆಳಕಿನ ಸಂತ ಶಿವಶಂಕರ ಸೀಗೆಹಟ್ಟಿ. ಊರೂರು ಸುತ್ತಿದ ಬಿಕ್ಕುಪಾತ್ರೆ ನನ್ನ ಮುಂದೆಯೇ ಬಂದು ನಿಂತಿದೆ ಪಾತ್ರೆಗೆ ಬೀಳುವ ಎಲ್ಲವೂ ನನ್ನೊಳಗೆ ಅಕ್ಷಯವಾಗುತ್ತಿವೆ ಅಚ್ಚರಿಯೆನಿಸಿತು ನಾನು ಕತ್ತಲನು ಸುರಿದಾಗ ಬೆಳದಿಂಗಳು ನನ್ನ ಕಣ್ಣೆದುರಿಗಿತ್ತು ಊರೂರು ತಿರುಗಿದ ಬೆಳಕು ಮನವೆಂಬ ಗುಡಿಸಲಿಗೂ ಬಂದು ಬೆಳಕು ಕೊಟ್ಟಿದೆ ಬೆಳಕು ಪಡೆಯುವ ತವಕದ ಬಯಕೆಯಲ್ಲಿ ಗಾಳಿ ತಾಗಬಹುದೆಂದು ಬದುಕ ಅಡ್ಡಗಟ್ಟಿದ್ದೇನೆ ಹೆಗಲ ಜೋಳಿಗೆಯಲ್ಲಿ ಬಯಲೆಂಬ ಸಿರಿಯು ಬದುಕುಗಟ್ಟಿದೆ ಬಾಚಿ ತಬ್ಬುವ ತವಕದಲ್ಲಿ ಬೆನ್ನ ಹಿಂದೆಯೇ ಸಾವರಿಸಿ ನಡೆಯುತಿದ್ದೇನೆ ಆಸೆ ಅತಿಯಾಗಬಾರದೆಂಬ ಬುದ್ದಗುರುವಿನ ಮಾತುಗಳನು ನೆನೆದು ಅರಿವಿನ ಮರದ ಬಳಿ ದಾರಿ ಕಾಯುತ್ತಿದ್ದೇನೆ. ಮನದ ಕೊಳೆ ತೊಳೆದ ಅರಿವಿನ ಸಂತನಿಗೆ ಕಾರುಣ್ಯದ ಬತ್ತಿಯನು ಜೀವರಸವೆಂಬ ನೂಲಿನಲದ್ದಿ ಬೆಳಕೆಂಬ ಬೆಳಕಿಗೆ ಪೂಜಿತನಾಗಿದ್ದೇನೆ ಆತನೊ ಜಂಗಮಕೆ ನಡೆನಡೆದು ಜಗದ ಗುರುವೆನಿಸಿದನು ನಾನು ಬಯಲಲ್ಲಿ ಮೈತ್ರಿಯನಂಚಿ ಆನಂದಿತನಾದೆನು. ******

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವೈಶಾಖ ಹುಣ್ಣಿಮೆ ರಾತ್ರಿ ಶಾಲಿನಿ ಆರ್. ಮನುಕುಲದ ಭಾಗ್ಯ ನಮ್ಮ ಸರ್ವಾಥ ಸಿದ್ಧ/ ಲೋಕದ ಜನರ ದುಃಖ ನಿವಾರಿಸಲರಿತು ಎದ್ದ// ವೈಶಾಖ ಹುಣ್ಣಿಮೆಯ ರಾತ್ರಿ ಹಳೆನೆನಪುಗಳ ಕಳಚಿತು/ ದಿವ್ಯಚಕ್ಷುವಿನಿಂದಾದ ಯೋಗ ಜ್ಞಾನಜ್ಯೋತಿ ಬೆಳಗಿತು// ದೇದೀಪ್ಯಮಾನ ಬೆಳಗದು ಮನುಕುಲದ ತಮವ ಕಳಚಿತು/ ಧ್ಯಾನದೊಳಿದ್ದರು ಎಚ್ಚರವಾಗಿರುವ ಮನದ ನೇತ್ರ ಅರಳಿತು// ಬಿಂದುವೊಂದು ಸಿಂಧುವಾದ ಆನಂದದಾ ಮೊಗ/ ಅನಿರ್ವಚನೀಯ ಕಲ್ಮಷರಹಿತ ಪರಮಾನಂದದಾ ಯೋಗ// ಮಾನವ ಕುಲ ಒಂದು ಆಸೆಯೇ ದುಃಖಕ್ಕೆ ಕಾರಣ ಎಂದ/ ಸಮ್ಯಕ್ ಬೋಧಿ’ ಸಿದ ಅಷ್ಟಾಂಗ ಮಾರ್ಗ ಅರುಹಿದ// ಬಹುಜನ ಹಿತಾಯ ಬಹುಜನ ಸುಖಾಯ ಬೋಧಿಸಿದ / ಮರಣ ಜನನದ ಅನಿವಾರ್ಯವೆಂದು ನಿರ್ವಣದ ದಾರಿ ತೋರಿಸಿದ// ಜಗದ ಅಮರಜ್ಯೋತಿಯಾಗಿ ಅಮೃತಧಾರೆ ಹರಿಸಿದ/ ಧನ್ಯನಾದ ಗುರು ನಮ್ಮ ಸರ್ವಾಥಸಿದ್ಧ ಬುದ್ಧನಾದ// ******

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆ ವಿಶೇಷ-ಕವಿತೆ

ಬೆಳಕಿಗೊಂದು ಮುನ್ನುಡಿ ಅರಸುತ. ಪೂರ್ಣಿಮಾ ಸುರೇಶ್ ವಿಶ್ವವೆಲ್ಲವನು ಕಪ್ಪು ಕವಿದಾವರಿಸಿದ ವೇಳೆ ಸೃಷ್ಟಿಯಖಿಲದ ಜೀವಜಾತಗಳಿಗೆಲ್ಲ. ನಿದ್ರೆಯ ಮಾಯೆ ಮುಸುಕಿರುವ ವೇಳೆ ಸೊಬಗಿನೈಸಿರಿಯೆ ಸಾಕಾರಗೊಂಡಂತೆ ಪಕ್ಕದಲಿ ಪವಡಿಸಿದ ಸುಕೋಮಲೆಯ. ಘನವಾದ ಕಟ್ಟಕ್ಕರೆಯ ಚೆಂಬೆಳಕ ಲೆಕ್ಕಿಸದೆ ಹೊರಟೇಬಿಟ್ಟ ಪುಣ್ಯಾತ್ಮ. ಹೊಸ ಬೆಳಕಿನ ಮೂರ್ತತೆಯ ಹುಡುಕಾಟದಲ್ಲಿ ಬದುಕಿನರ್ಥವ ಬಗೆವ ಬೆದಕು ನೋಟದಲ್ಲಿ ನನ್ನೊಳಗೂ ಆಗಾಗ್ಗೆ ತುಂಬಿಕೊಳ್ಳುವ. ಕಪ್ಪಿಗೆ ಕಪ್ಪ ಸಲ್ಲಿಸುತ್ತಲೇ ಬಂದಿರುವೆ. ಆದರೀಗ ಕಪ್ಪಿನೆದೆಯನ್ನಿರಿದು ಆಚೆ ಹೆಜ್ಜೆ ಹಾಕಿರುವೆ. ಅವ್ಯಕ್ತದೆಡೆಗೆ ಅವನಂತೆ ಒಬ್ಬಂಟಿ- ಕೆಮ್ಮಣ್ಣ ಮಾದಕ ಕಂಪನ್ನು ಮೂಸಿ ಮುಟ್ಟಿರುವೆನವನ ಸಂಪ್ರೀತಿ ದಡವ ಅವನ ಕಣ್ಣುಗಳ ಒಳಪುಟಗಳಲ್ಲಿ ಅಚ್ಚಾದ ನಲ್ಗವಿತೆಯನ್ನು ಕದ್ದು ನನ್ನೆದೆಯ ತಂತಿಯಿಂದದನು ಶ್ರುತಿಗೊಳಿಸಿ ದನಿ ನೀಡಿ ನಯವಾಗಿ ಹರ್ಷಿಸಿರುವೆ ತುಂತುರು ತುಂತುರಾಗಿ ಜಿನುಗುವ ನಾದದ ಬೆಳಕನ್ನು ಬೊಗಸೆಯಲ್ಲಿ ಹಿಡಿದಿಡುವ ಸಾಹಸದ ಆಟ ನನಗೆ; ಹಂಬಲದ ಅರಗಿಣಿಯ ರಮಣೀಯ ರೆಕ್ಕೆಗಳ ವಿವಿಧ ವರ್ಣಗಳ ಚೆಂದನೆಯ ಗರಿಗಳಿಂದ ಅಲಂಕರಿಸಿ, ಸೊಬಗ ಸವಿಯುತ ನನ್ನ ಮೈಯನು ಮರೆತು ಮಹದಾನಂದಕ್ಕೆ ಚೊಕ್ಕ ಮುನ್ನುಡಿ ಬರೆವಾಸೆ ನನಗೆ. ಕೊನೆಗೆ, ನಟ್ಟಿರುಳಿನಲ್ಲಿ ಏಕಾಏಕಿ ಅರಮನೆ ತೊರೆದವನ. ಶಾಂತ ವದನದ ಕಾಂತಿಯುಕ್ತ ತೇಜಸ್ಸಿನಲಿ ಮಿಂದೆದ್ದು, ಶುಚಿಗೊಳುವ. ಅದಮ್ಯ ಸಾರ್ಥಕ್ಯದಾಸೆ ನನಗೆ. *********

ಬುದ್ಧ ಪೂರ್ಣಿಮೆ ವಿಶೇಷ-ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ

ಬುದ್ದಂ ಶರಣಂ! ಚೈತ್ರಾ ಶಿವಯೋಗಿಮಠ ನಿನ್ನಲ್ಲಿ ನನ್ನಲ್ಲಿ ಎಲ್ಲೆಲ್ಲಿಯೂ ದೇವರ ಕಂಡೆ ಅಂತಹದರಲ್ಲಿ ನನ್ನನೇ ನೀನು ದೇವರ ಮಾಡಿಕೊಂಡೆ ದೀಪವ ಮುಡಿಸಿ, ಧೂಪವ ಹಾಕಿದೆ ಮೂರ್ತಿ ಮಾಡಿ ಒಳಗಿನ ದೀಪವ ಬೆಳಗಲಾರೆಯ ಮನದ ಸೊಡರಿಗೆ ಕಿಡಿ ನೀಡಿ? ಅನ್ನವ ಬೇಯಿಸಿ, ಹಿಸುಕಿ ಪರೀಕ್ಷಿಸಿ ಬೆಂದನ್ನವ ಸಮರ್ಪಿಸಿದೆ ಎಡೆಯೆಂದು ಮನದ ಗಡಿಗೆಯಲಿ ಭಾವದನ್ನವ ಬೇಯಿಸಲಾರೆಯ ನೀನಿಂದು? ನಾನು ದೇವರಲ್ಲ, ನಿನ್ನೊಳಗಿನ ಪ್ರಾಂಜಲ ದೈವತ್ವ! ದೇವರಾಗಿಸದೆ, ಮರೆಯದೆ ಮೆರೆಸಿದರೆ ಸಾಕು ಮನುಷ್ಯತ್ವ! ಇನ್ನಾದರೂ ನಿನ್ನೊಳಗಿರುವ ನನ್ನ ಕೂಗನ್ನ ಕೇಳು ಮಲಗಿದ್ದು ಸಾಕು ಬಿಡು.ನಡಿ ಬೆಳದಿಂಗಳ ದಾರಿ ಹಿಡಿ ,ಏಳು. ********

ಬುದ್ಧ ಪೂರ್ಣಿಮೆಯ ವಿಶೇಷ-ಕವಿತೆ Read Post »

ಇತರೆ

ಹರಟೆ

ಇಲಿ ಪುರಾಣ ಶೀಲಾ ಭಂಡಾರ್ಕರ್ “ಇಲಿಗಳ ಸಂಸಾರದಲ್ಲೂ ಅಜ್ಜಿಯರು ಇರ್ತಾರಾ? ರಾತ್ರಿ ಮಲಗುವಾಗ ಒಳ್ಳೊಳ್ಳೆ ನೀತಿ ಕತೆಗಳನ್ನು ಹೇಳಿ ಮಲಗಿಸ್ತಾರಾ? ಹೇಗೆ ತಪ್ಪಿಸಿಕೊಳ್ಳುವುದು ಅನ್ನುವ ಟಿಪ್ಸ್ ಹೇಳಿ ಕೊಡ್ತಾರಾ?” ಗೊಣಗ್ತಾ ಇದ್ದೆ ನಾನು. ಮಕ್ಕಳಿಬ್ಬರೂ ಮುಖ ಮುಖ ನೋಡಿಕೊಂಡು “ಅಮ್ಮ ಶಶಿಕಪೂರ್” ಅಂತ ಮುಸಿ ಮುಸಿ ನಗ್ತಾ ಇದ್ರು. ನಮ್ಮನೇಲಿದ್ದ ಗೊಣಗುವ ಶೇಷಿಯ ಕತೆ ಹೇಳಿದ್ನಲ್ಲ. ಶೇಷಿಗೆ ದಿನ್ನು, ಶಶಿಕಪೂರ್ ಅಂತ ಹೆಸರಿಟ್ಟಿದ್ದನ್ನೂ ಹೇಳಿದ್ದೇನೆ. ನಿಮಗೆ ಮರೆತಿರಬಹುದು. ನನಗೆ ಕೋಪ ಬಂತು. “ನಿಮಗೇನು ಗೊತ್ತು? ನಗ್ತಿದಿರಲ್ಲ ನೀವು!” ಅಂತ ಬೈದೆ. ದೊಡ್ಡವಳು ಕೂಡಲೇ ಕೂತಲ್ಲಿಂದ ಎದ್ದು ಅಡುಗೆ ಮನೆಗೆ ಬಂದು ನನ್ನ ಭುಜ ಹಿಡಿದು ಪ್ರೀತಿಯಿಂದ “ಏನಾಯ್ತಮ್ಮ?” ಅಂದಾಗ.. ಚಿಕ್ಕವಳೂ ಬಂದು ನಿಂತಳು. “ಏನಿಲ್ವೆ… ಇಷ್ಟು ವರ್ಷದಲ್ಲಿ ಮೊದಲ ಸಲ ನಮ್ಮನೇಲಿ ಇಲಿ ಸೇರಿಕೊಂಡಿದೆ. ಒಂದೆರಡು ಸಲ ನೋಡಿದೆ” ಅನ್ನುವುದರೊಳಗೆ, … ಚಿಕ್ಕವಳು “ಅಬಾ….” ಅಂದವಳೇ ಒಂದೇ ಉಸಿರಿಗೆ ಓಡಿ ಡೈನಿಂಗ್ ಟೇಬಲ್ ಚೇರ್ ಹತ್ತಿ ನಿಂತು ಬಿಟ್ಟಳು. ದೊಡ್ಡವಳು ಸ್ವಲ್ಪ ಧೈರ್ಯದಿಂದ “ಎಲ್ಲಿ!?” ಅಂತ ಕೇಳಿದಳು. “ಇಲ್ಲೇ ಈಗ ನೋಡಿದೆ. ಆದರೆ ಪಕ್ಕದ ಮನೆಯವರ ಹತ್ತಿರ ಇಲಿ ಹಿಡಿಯುವ ಬೋನು ತಂದು ಇಟ್ಟು ಮೂರು ದಿನ ಆಯ್ತು. ಬೋನ್ ಹತ್ರ ಮಾತ್ರ ಹೋಗ್ತಿಲ್ಲ. ಜಾಗ ಬದಲಿಸಿ ಬದಲಿಸಿ ಇಟ್ಟು ನೋಡಿದೆ.” ಅಂದೆ. ಅಡುಗೆ ಮನೆಯ ಒಳಗಿದ್ದವಳು ಮೆಲ್ಲ ಮೆಲ್ಲ ಹೊರಗೆ ಹೋಗುತ್ತಾ.. “ಇರು ಗೂಗಲ್ ಮಾಡ್ತೇನೆ. ಮೌಸ್ ಹೇಗೆ ಹಿಡಿಯುವುದು ಅಂತ” ಅನ್ನುತ್ತಾ ಮೊಬೈಲ್ ತಗೊಂಡು ಕೂತಳು. “ಅದಕ್ಕೆಲ್ಲ ಗೂಗಲ್ ಯಾಕೆ? ಬೋನಿನೊಳಗೆ ಬೀಳುತ್ತೆ. ಆದರೆ ನನಗೆ ಡೌಟ್ ಅದರಜ್ಜಿ ಎಲ್ಲೋ ಹೇಳಿಕೊಟ್ಟಿರಬೇಕು.” ಅನ್ನುತ್ತಾ ದೋಸೆ ತಟ್ಟೆಗೆ ಹಾಕಿ ಚಟ್ನಿ ಬೆಣ್ಣೆ ಡೈನಿಂಗ್ ಟೇಬಲ್ ಮೇಲಿದೆ ತಗೊಂಡು ತಿನ್ನು ಅಂತ ಚಿಕ್ಕವಳನ್ನು ಕರೆದರೆ. ಅಲ್ಲಿಂದಲೇ “ನೀನೇ ಹಾಕಿ ಕೊಡು ನಾನಿಲ್ಲಿ ನಿಂತೇ ತಿನ್ನುತ್ತೇನೆ.” ದೊಡ್ಡವಳು ಮೊಬೈಲಿಂದ ತಲೆ ಎತ್ತದೆ “ಇಷ್ಟು ಡುಮ್ಮಿ ಇದಿಯಾ. ನಿನ್ನ ಒಂದು ಬೆರಳಿನಷ್ಟಿರೋ ಇಲಿಗೆ ಹೆದರ್ತಿಯಲ್ಲ” ಅಂತ ಛೇಡಿಸಿದಾಗ, ಫಕ್ಕನೆ ಕುರ್ಚಿಯಿಂದ ನೆಗೆದು, ನಂಗೆ ಡುಮ್ಮಿ ಅಂತಿಯಾ ಅಂತ ಅವಳಿಗೆ ಹೊಡೆಯಲು ಹೋದಳು. “ಅಮ್ಮಾ…. ಇಲಿ” ಅಂತ ದೊಡ್ಡವಳು ಕಿರುಚಿದಾಗ ಡುಮ್ಮಿ ಒಂದೇ ನೆಗೆತಕ್ಕೆ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ನಿಂತಾಯ್ತು. ಪಾಪ ಅಂತ ಅಲ್ಲಿಯೇ ತಟ್ಟೆ ಕೈಗೆ ಕೊಟ್ರೆ ತಿನ್ನುತ್ತಾ ” ಬೋನಿನೊಳಗೆ ಹೇಗೆ ಹೋಗುತ್ತೆ?”  ಅವಳು ಹಾಗೆಯೇ. “ಅಬ್ಬಾ!! ಶುರುವಾಯ್ತು ಇನ್ನು ಪ್ರಶ್ನೆಗಳ ಸರಮಾಲೆ. ಅಮ್ಮ ನೀನೇ ಹೇಳ್ತಾ ಹೋಗು. ಇವಳಿಗೆ ಪ್ರಶ್ನೆ ಕೇಳಲಿಕ್ಕೆ ಬಿಡಬೇಡ.”  ದೊಡ್ಡವಳು ಅಂದಾಗ. ಕುರ್ಚಿಯ ಮೇಲಿನವಳು ” ಇರು ನಿಂಗೆ. ಇಲಿ ಹೋಗ್ಲಿ. ಆಮೇಲೆ ಮಾಡ್ತಿನಿ”. “ದೇವರೇ… ಇಲಿ ಇಲ್ಲೇ ಇರಲಿ.” ದೊಡ್ಡವಳಿಗೆ ಆಟ. ಚಿಕ್ಕವಳಿಗೆ ಸಂಕಟ. ಹೊಟ್ಟೆ ತುಂಬಿತೇನೋ ಚಿಕ್ಕವಳಿಗೆ ಯೋಚನೆ ಶುರುವಾಯ್ತು. “ನಾನು.. ಶಾಲೆಗೆ, ಟ್ಯೂಷನ್ ಗೆ ಹೇಗೆ ಹೋಗ್ಲಿ” “ಮೊದಲು ಇಳಿದು ಕೈ ತೊಳೆಯಲು ಹೋಗು” ಅಂದೆ. “ಅಯ್ಮಮ್ಮಾ…… ಆಗಲ್ಲ. ನಂಗೆ ಭಯ” ನಾನು ಹೇಳಿದೆ, “ಪಕ್ಕದ ಮನೆಯವರ  ಇಲಿ ಬೋನು ತಂದು ಇಟ್ಟಿದ್ದೇನೆ. ಅವರಂದ್ರು, ಕಾಯಿ ಚೂರಾಗಲಿ, ವಡೆ ಬೋಂಡ ಅಂತಾದ್ದು ಏನಾದರೂ ಆ ತಂತಿಗೆ ಸಿಕ್ಕಿಸಿಡಿ ಅಂತ. ಈ ನಿಮ್ಮಪ್ಪ, ಒಂದು ಈರುಳ್ಳಿ ಹೆಚ್ಚಿ ನಾಲ್ಕು ಬೋಂಡ ಮಾಡು ಮೂರು ನನಗಿರಲಿ, ಒಂದು ಇಲಿಗೆ ಇಡು. ಪಾಪ ನಮ್ಮನೆಗೆ ಬಂದಿದೆ ಅಷ್ಟಾದರೂ ನೋಡಿಕೊಳ್ಳಬೇಕಲ್ವಾ. ಅಂತೆ. ಈರುಳ್ಳಿ ಬೋಂಡ ಇಟ್ಟು ಮೂರು ದಿನ ಆಯ್ತು, ಇನ್ನೂ ಬಿದ್ದಿಲ್ಲ” ಅಂದೆ. ” ಏನೂ… ಮೂರು ದಿನ ಆಯ್ತಾ? ಯೆಬ್ಬೇ. ದಿನಾ ಫ್ರೆಶ್ ಆಗಿ ಇಡಬೇಕಮ್ಮ. ಪಾಪ.” ಅಂದ ದೊಡ್ಡವಳ ತಲೆಯ ಮೇಲೊಂದು ಮೊಟಕಿ ಹೇಳಿದೆ, ” ಅಥವಾ ನಿಮ್ ತರ ಈಗಿನ ಜಮಾನಾದ ಇಲಿಗೂ ಪಿಜ಼ಾ, ಬರ್ಗರ್ ಬೇಕೇನೋ ಯಾರಿಗ್ಗೊತ್ತು.” ಇದೊಳ್ಳೆ ಮಾಡರ್ನ್ ಇಲಿ ಆಯ್ತಲ್ಲ. ಏನು ಮಾಡುವುದೀಗ? ಪಕ್ಕದ ಮನೆಯವರ ಬಳಿ ಹೇಳಿದಾಗ ಅವರಂದರು ಈವಾಗ ಏನೋ ಮ್ಯಾಟ್ ತರ ಬಂದಿದೆಯಂತೆ ಅದನ್ನು ಬಿಡಿಸಿಟ್ಟರೆ ಅದರಲ್ಲಿರೋ ಜೆಲ್ ಗೆ ಇಲಿ ಅಂಟಿ ಕೊಳ್ಳುತ್ತಂತೆ ಅಂತ. ಅದನ್ನು ತಂದಿಟ್ಟು ನೋಡೋಣ ಅಂದೆ. “ನಿನ್ನ ಮಾಡರ್ನ್ ಇಲಿ ಮರಿ ಅದನ್ನೂ ಗೂಗಲ್ ಮಾಡಿ ನೋಡಿರಬಹುದು, ಅದನ್ನು ದಾಟೋದಕ್ಕೆ ಉಪಾಯವನ್ನು ಕೂಡ ಕಂಡು ಹಿಡಿದಿರಬಹುದು” ಅಂದಳು ನಮ್ಮ ಗೂಗಲ್ ರಾಜಕುಮಾರಿ. ನಮ್ಮಜ್ಜಿ, ನಮ್ಮಮ್ಮ ಎಲ್ಲಾ ಹೇಳ್ತಿದ್ರು, ಗಣಪತಿಗೇನಾದರೂ ಹರಕೆ ಹೇಳಿದ್ದು ಮರೆತು ಹೋಗಿದ್ದರೆ ನೆನಪಿಸಲು ಇಲಿಯನ್ನು ಕಳಿಸ್ತಾನೆ ಅಂತ. ಮರೆತಿರಬಹುದಾದ ಎಲ್ಲ ಹರಕೆಗಳನ್ನು ತೀರಿಸುತಿದ್ದೇನೆ. ನೋಡೋಣ ಯಾವಾಗ ಹೋಗುತ್ತೋ. ಅದರ ಬಾಯಿಗೆ ಯಾವುದೂ ಸಿಗದ ಹಾಗೆ ಇಡುವ ಕೆಲಸವೇ ಇಡೀ ದಿನ. ಅಥವಾ ಹೊಸ ಬಜ್ಜಿ ಬೋಂಡದ ಆಸೆಗೆ ಕಾಯ್ತಾ ಇದೆಯೋ. ಇವಳು ಈ ಜನ್ಮದಲ್ಲಿ ಫ್ರೆಶ್ ಬೋಂಡ ಇಡಲ್ಲ ಅಂತ ಗೊತ್ತಾಗ್ಲಿ. ಮತ್ತೆ ಯಾವತ್ತೂ ನಮ್ಮನೆ ದಾರಿಲಿ ಬರಕೂಡದು. ಹಾಗಂದುಕೊಂಡಿದ್ದೇನೆ ***********************

ಹರಟೆ Read Post »

ಕಾವ್ಯಯಾನ

ಕಾವ್ಯಯಾನ

ಎರಡು ಲಾಕ್ ಡೌನ್ ಕವಿತೆಗಳು ಶ್ರೀದೇವಿ ಕೆರೆಮನೆ ಮಾತು ಮುಗಿದ ಹೊತ್ತಲ್ಲಿ ನೀನು ಸಂಪರ್ಕಗಳೆಲ್ಲವನ್ನೂ ನಿಲ್ಲಿಸಿ ಅಂತರ ಕಾಯ್ದುಕೊಳ್ಳ ತೊಡಗಿದ ಮೇಲೆ ನಾನು ಫೋನು ಕೈಗೆತ್ತಿಕೊಂಡೆ ಅತ್ತಕಡೆಯ ನೀರಸ ಮಾತುಗಳ ಹೊರತಾಗಿಯೂ ಒಂದಿಷ್ಟು ಜೀವ ತುಂಬಲು ಯಾವುದೋ ಹಳೆ ನೆನಪುಗಳ ಹೆಕ್ಕಿ ಪೋಣಿಸುತ್ತ ಮಾಲೆ ಮಾಡಿದರೂ ಕಾಣದ ಉತ್ಸಾಹ ನಿನ್ನ ಮಾತಿನಲ್ಲಿ ಅರ್ಥವಿಲ್ಲದ ನೀರಸ ಮಾತುಗಳ ಆಡುವುದಾದರೂ ಅದೆಷ್ಟು ಸಮಯ ? ಹತ್ತೇ ನಿಮಿಷಗಳಲ್ಲಿ ಮಾತು ಸೋತು ಅಲ್ಲಿಯೂ ಅಂತರ ಇಣುಕಿ ವ್ಯರ್ಥ ಪ್ರಲಾಪವೆನಿಸಿದಾಗ ಮತ್ತದೇ ಅಂತರ ಮಾತ್ತೆಲ್ಲವೂ ಮುಗಿದು ಎರಡೂ ಬದಿಯಿಂದ ಬರಿದೇ ಮತ್ತೆ ಎಂಬ ಶಬ್ಧ ಪುನರಾವರ್ತನೆಯಾಗುವ ವಿಕ್ಷಿಪ್ತ ಹೊತ್ತಲ್ಲಿ ನಾನು ನಿಟ್ಟುಸಿರಿಡುತ್ತ ಮಾತು ಮುಗಿಸುವ ಮಾತನಾಡುವಾಗಲೇ ಅತ್ತ ಕಡೆಯಿಂದ ತೇಲಿ ಬರುತ್ತದೆ ‘ಈ ದಿಗ್ಬಂಧನವೆಲ್ಲ ಮುಗಿದು ಸಿಗುವುದಾದರೂ ಯಾವಾಗ ನೀನು ಒಮ್ಮೆ ನನ್ನತೋಳಿಗೆ ? ಅದೆಷ್ಟು ತಿಂಗಳು ಕಾಯಬೇಕು ನಾನು , ನಿನ್ನದೊಂದು ಮೈಮರೆಸುವ ಅಪ್ಪುಗೆಗೆ ನಶೆಯೇರಿಸುವ ಮುತ್ತಿಗೆ?’ ಮುಗಿಯುತ್ತ ಬಂದ ಮಾತುಗಳಲ್ಲೀಗ ತುಳುಕುತಿದೆ ಹೊಸ ಹರೆಯ ದೂರದಲ್ಲೆಲ್ಲೋ ಕೂಗುವ ಕೋಗಿಲೆ ಅನುರಣಿಸಿ ಇಬ್ಬರ ಫೋನಿನಲ್ಲೂ ಜೊತೆಗಿರುವ ಭರವಸೆ ತುಂಬುತಿದೆ ———– ದಿಗ್ಭಂದನ ಮುಗಿಯುವಾಗ ನಾಗಾಲೋಟದಿಂದ ಓಡುತ್ತಿದ್ದ ದಿನಗಳೀಗ ಬಸವನಹುಳದಂತೆ ತೆವಳುತಿದೆ ನಿಮಿಷಗಳೆಲ್ಲ ಗಂಟೆಗಳಾಗಿ ಸೆಕೆಂಡುಗಳೂ ಇನ್ನೇನು ಗಂಟೆಗಳಾಗುವ ಈ ದುರಂಧರ ಸಮಯದಲ್ಲಿ ಇಬ್ಬರ ಮುಖದಲ್ಲೂ ಪ್ರತಿಫಲಿಸುವ ಪೇಲವ ನಗೆಗೆ ಅಂತರ ಮುರಿಯುವ ಶಕ್ತಿಯಿಲ್ಲ ದೇಶ ದೇಶಗಳಾದಿಯಾಗಿ ರಾಜ್ಯ, ಜಿಲ್ಲೆ ತಾಲೂಕು ಗ್ರಾಮಗಳ ಮಾತು ಬಿಡಿ ಶಹರ, ಹಳ್ಳಿಗಳ ಒಂದೊಂದು ಗಲ್ಲಿ, ಓಣಿಯೂ ದಿಗ್ಬಂಧನ ಹಾಕಿಸಿಕೊಂಡು ಜೈಲಿನಲ್ಲಿರುವ ಏಕಾಂಗಿ ಕೈದಿಯಂತಾಗಿ ವಿಲವಿಲನೆ ಒದ್ದಾಡುತ್ತಿರುವಾಗ ನಮ್ಮದೇನು ಹೆಚ್ಚುಗಾರಿಕೆಯಿಲ್ಲ ಬಿಡು ಅತ್ತ ತಿರುಗಿದರೂ ಕಿರುಗುಡುವ ಜೋಡಿಮಂಚ ಇತ್ತ ತಿರುಗಿದರೂ ಸದ್ದು ಮಾಡುವುದನು ಕೇಳಿಯೂ ಒಂದೊಂದು ತುದಿಗೆ ಒಬ್ಬೊಬ್ಬರು ನಿಟ್ಟುಸಿರಿಡುತ್ತಲೇ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಅರಿವಿದೆ ನಮ್ಮಿಬ್ಬರಿಗೂ ಮುಂಜಾನೆ ಬೇಗನೆದ್ದು ಚಹಾಕ್ಕೆ ನೀರಿಡುವ ಮೊದಲೇ ಗೀಜರ್’ನ ಬಟನ್ ಒತ್ತಿ ಎಲ್ಲಕ್ಕಿಂತ ಮೊದಲು ಆಗಿಬಿಡಲಿ ಸ್ನಾನವೇ ಎಂದು ಗೊಣಗಿ ತಲೆಗೆರೆದುಕೊಂಡು, ಹಣೆಗೆ ಬಿಂದಿ ಇಡಲು ಕನ್ನಡಿ ಎದುರು ನಿಂತಾಗಲೇ ಕಾಣುತ್ತದೆ ಅಂತರ ಮುಗಿದ ಸೂಚನೆಗೆ ಇನ್ನೂ ಹಾಸಿಗೆ ಬಿಟ್ಟೇಳದ ನಿನ್ನ ಮುಖದಲ್ಲಿ ಅರಳುವ ಮುಗುಳ್ನಗೆ **********

ಕಾವ್ಯಯಾನ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ಬುದ್ಧನಾಗಲಾರೆ…. ನಾಗರಾಜ ಹರಪನಹಳ್ಳಿ  ಗಾಳಿಯ ಮುಗಿಲಲ್ಲಿ ತೇಲಿದ ಮೋಡಗಳು ಒಲವಿನ ಸರಿಗಮ ಹಾಡಿದವು ದೂರದಲ್ಲಿದ್ದು ನೀನಾಡಿದ ಮಾತುಗಳು ಮನದಲ್ಲಿ ಪ್ರೇಮ ಪಲ್ಲವಿಯಾದವು ಸಿದ್ಧಾರ್ಥನಾಗಿಯೇ ಉಳಿಯುವೆ ಬುದ್ಧನಾಗಲಾರೆ…. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷದ ಬೆನ್ನು ಹತ್ತಲಾರೆ ಬುದ್ಧನಾಗಲಾರೆ ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ!! ಬಗೆಹರಿಯದ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡುವುದೆಂದರೇನು? ಸಿದ್ಧಾರ್ಥ ಮೋಕ್ಷವ ಹುಡುಕ ಹೊರಟಂತೆಯೇ ? ಗರ್ಭದಲ್ಲಿ ಕೋಶ ಬೆಳೆದಂತೆ ತನ್ನದೇ ಜೀವಕೋಶದ ಆಶ್ರಯದಿ ರಕ್ತಮಾಂಸವ ಪ್ರೀತಿಯ ತಾಯ್ತನವನುಂಡು ಬೆಳೆದಂತೆಯೇ? ಮೋಕ್ಷದ ಬೆನ್ನು ಹತ್ತಲಾರೆ ಪ್ರೀತಿಯ ಹುಡುಕುತ್ತ… ******* …..

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ

ವಿಶ್ವವೇ….ಶರಣು.. ಶಿವಲೀಲಾ ಹುಣಸಗಿ ಯಾವ ಅಮೃತ ಗಳಿಗೆಯೋ ನಾ ಕಾಣೇ.. ಅರಿವಿನ ಕ್ಷೀತಿಜದೊಳು…                                                ಶಶಿಯುದಯಿಸಿದಾ ಕ್ಷಣದೊಳು ಹೊಸದೊಂದು ಹುರುಪು,ನವೋಲ್ಲಾಸದ ಸುಖ ತಾರೆಯದಿಪತಿಗೆ ಸವಾಲಾಗುವ ಕ್ಷಣಗಳು.. ಬಯಸಿದ್ದೊಂದು…ಆಗುವುದೊಂದು.. ಸುಖಾತೀತ ಭಾವಗಳೆಲ್ಲ..ಮರಿಚೀಕೆಯಾಗಿಂದು     ಮುಳ್ಳಿನ ಸೊಲ್ಲುಗಳಿಗೊಂದಂದು ಎಕ್ಕೆಹಾಲನೇರೆವಂತೆ…ಸೂಸಿದ ಹನಿಗಳು.. ಯ್ಯಾರು ಕಾಡಲಿಲ್ಲ,.ಬೇಡಲಿಲ್ಲ ನಿನ್ನೆದೆಗೆ ಇರಿಯಲಿಲ್ಲ ಆದರೂ ಹೃದಯ ಕೇಳಲಿಲ್ಲ..ಬಣ್ಣಗಳೆಲ್ಲ ಮಾಸಿದಂತೆ.. ಬರಸಿಡಿಲು ಬಡಿದಂತೆ..ಏಕಾಏಕೀ..ಚಿತ್ತ ಹೊರಟಂತೆ.. ಕಂಗಳಿಗೆ ಬರೀ….ಮಿಂಚುಗಳು ಆರ್ಭಟದಂತೆ.. ಯ್ಯಾರು ಕರೆದರೋ…? ಯ್ಯಾರು ಬಂದರೋ.?        ನಡುರಾತ್ರಿ ಶ್ವೇತಾಶ್ವಗಳ ರಥವೇರಿ ಮೌನ ನಡಿಗೆಯ ಬೀರಿ ಕಾಮದಮಲು ಕರಗಿತ?…ಕೂಸಿನ ಹಂಬಲ ತೀರಿತೇ.? ಎದೆಗಂಟಿದ ಬೆವರಹನಿಗಳು. ‌ಮಾಯವಾಯಿತೇ.. ರೋಧಿಸಲಾರಿಲ್ಲದಾ ಗಳಿಗೆ….ಚಿರನಿದ್ರೆ..ಆವರಿಸಿದೆ..! ಮೋಹಬಂಧನವ ಕಳಚಿದಾಗ ಮೌನ ಮಡುಗಟ್ಟಿದೆ. ಜ್ಞಾನ ದಾಹದ ತೀರಕೆ..ಕರೆಬಂದಿದೆಯೆಂಬಂತೆ.. ಹೋರಟಿತೊಂದು ಆತ್ಮದ ಮೆರವಣಿಗೆ…… ಅಷ್ಟಾಂಗಿಮಾರ್ಗದ ನೆರಳಿನೊಳು.. ಕಷ್ಟಕಾರ್ಪಣ್ಯದ ಹೊಂಗಿರಣದೊಳು.. ಬೋಧಿವೃಕ್ಷದ ದಿವ್ಯಾನುಭದೊಳು ಲೋಕವ ಬೆಳಗಿಸುವ ಸಂಕಲ್ಪದೊಳು.. ಪ್ರಜ್ಞೆಯ ವಾಸ್ತವದಲಿ ಮನಸರಳಿ ಶೀಲ ಚಾರಿತ್ರ್ಯದ ಮೇರು ಪರ್ವತವಾಗಿ.. ಸಮಾಧಾನದ ಸಮಾಧಿ ಸ್ಥಿತಿಯೋಳು ಆಸೆಯೇ ದುಃಖಕ್ಕೆ ಮೂಲವೆಂಬಾಮೃತವ ಸಾರಿ… ಹುಣ್ಣಿಮೆಯ ಚಂದಿರನ ನಿರ್ಲಿಪ್ತ ಭಾವದೊಳು ಜ್ಞಾನ ಜ್ಯೋತಿಯಾಗಿ ಮುಕ್ತಿ ಮಾರ್ಗದ ಬೆಳಕಿನೊಳು ಭವ ಸಂಕಟವ ಕರಗಿಸುವ ಸರಳಮಾಂತ್ರಿಕನೊಳು ವಿಶ್ವವೇ …ಶರಣಾಗಿಹುದು ಧ್ಯಾನದೊಳು….. ******

ಬುದ್ಧ ಪೂರ್ಣಿಮೆಯ ವಿಶೇಷ -ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಬುದ್ಧನಾಗದೇ ನಿನ್ನ ಗ್ರಹಿಸಲಾರೆ ಡಾ.ಗೋವಿಂದ ಹೆಗಡೆ ನಾನು ಕೇವಲ ಮನುಷ್ಯ. ಮಾನುಷ ಅನುಭವಗಳ ಬಗ್ಗೆ ಹೇಳಬಲ್ಲೆ ಅವ ಎತ್ತರ ಇವ ಕುಳ್ಳು ಇವ ಜಾಣ ಅವ ದಡ್ಡ ಅವನೋ ಕ್ರೂರಿ ಇವ ದಯಾಮಯಿ- ಹೀಗೆ ದೈವಿಕ ಅನುಭವಗಳ ಒರೆಗೆ ಹಚ್ಚಲಿ ಹೇಗೆ ‘ನಾವು ಮನುಷ್ಯರಾಗಿ ಬಂದಿಲ್ಲ ಮನುಷ್ಯರಾಗಲು ಬಂದಿದ್ದೇವೆ’ ಅನ್ನುತ್ತಾರೆ ‘ನಾವು ಮನುಷ್ಯರಾಗಿ ದೈವಿಕತೆಯನ್ನು ಹುಡುಕುತ್ತಿಲ್ಲ, ದಿವಿಜರೇ ಆಗಿದ್ದು ಮಾನುಷ ಅನುಭವ -ವನ್ನು ಹಾಯುತ್ತಿದ್ದೇವೆ’ ಎಂಬ ಮತವೂ ಇದೆ ನನಗೆ ಎರಡೂ ಅರಿವಿಗೆ ದಕ್ಕದೆ… ನೀನು ದೈವತ್ವದ ಕುರಿತು ಉಸಿರೆತ್ತಲಿಲ್ಲ ಕೇವಲ ಮನುಜನ ಬಿಡುಗಡೆಯ ಮಾತಾಡಿದೆ ಸದ್ವಿಚಾರ, ಸನ್ನಡತೆ, ಸತ್ಕರ್ಮಗಳ ಮೂಲಕ ಯಾತನೆಯಿಂದ ಬಿಡುಗಡೆಯ ಮಾತನಾಡಿದೆ ನಿನ್ನ ಮಾತನ್ನು ಅರಿಯಬಲ್ಲೆ ಮೌನವನ್ನು ಹೇಗೆ ಗ್ರಹಿಸುವೆ ನಿನ್ನನರಿಯಲು ನಾನು-ನೀನೇ ಆಗಬೇಕೇ ? •• ಗೋವಿಂದ ಹೆಗಡೆ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ Read Post »

ಕಾವ್ಯಯಾನ

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ

ಅರಿವೇ ಅಷ್ಟಾಂಗ ಶೃತಿ ಮೇಲುಸೀಮೆ ಅಜ್ಞಾನದ ಅಂಧಕಾರದಲ್ಲೊಂದು ಅರಿವಿನ ಅಂಕುರ ಅಮ್ಮನ ಕನಸಿನಲ್ಲೇ ಕರಿಯ ಹೂ ಮಾಲೆಯ ಪುರಸ್ಕಾರ ಅಶಿತ ಮುನಿಯ ಕಂಬನಿಯ ಕುಂಚ ಅಪ್ಪನ ಆಂತರಿಕ ತುಮುಲತೆಯ ಶುದ್ಧ ವೈಶಾಖದ ಪೂರ್ಣಮಿಯಲಿ ಅರಳಿದ ಅರಮನೆಯ ಕಮಲ ಯಶೋಧರೆಯ ಮ್ಲಾಮತೆ ರಾಹುಲನ ಪಿತ ಚೆನ್ನನ ಮಾಲೀಕ ಕಂಥಕನ ಕಾಂತಿಮತಿ ಈ ಸಿದ್ದಾರ್ಥ ದಿಕ್ಕನ್ನೇ ದರ್ಶಿಸಿದ ಬೀದಿ ಬದುಕು ಸತ್ಯ ಅನ್ವೇಷಣೆಯ ಪರಿತ್ಯಾಗಿ ಜ್ಞಾನಕ್ಕಾಗಿ ಪರಿತಪಿತ ವಿವೇಕಿ ಜಗಕೆ ಶಾಂತಿ ಬೋಧಿಸಿದ ಯೋಗಿ ಶುದ್ಧ ಚಾರಿತ್ರ್ಯದ ಮೂರ್ತಿ ಮಂದಸ್ಮಿತದ ವದನದ ಕ್ರಾಂತಿ ಧ್ಯಾನ, ಮೌನ, ಜೀವನ ಪ್ರೀತಿಯ ಪ್ರತೀಕ ಅಷ್ಟಾಂಗ ಮಾರ್ಗದ ದರ್ಶಕ ಮತ್ತೊಮ್ಮೆ ಕುದರೆಯೇರಿ ಆಸೆ ,ಅಹಂಕಾರ ಮೀರಿ ಹಿಂದಣ ಮುಂದಣ ಭಾವ ಸೀಳಿ ಎಲ್ಲರ ಮನವ ಗೆಲ್ಲಲು ನೀ ಬಾ ನಮ್ಮ ಬುದ್ಧ *****

ಬುದ್ಧ ಪೂರ್ಣಿಮಾ ವಿಶೇಷ-ಕವಿತೆ Read Post »

You cannot copy content of this page

Scroll to Top