ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಅಂಬೇಡ್ಕರ ೧೯೮೧ ಮೂಲ: ನಾಮದೇವ ಡಸಾಲ್ ಕನ್ನಡಕ್ಕೆ: ಕಮಲಾಕರ ಕಡವೆ ಮುಂಗಾರಿನಂತೆ ನಿನ್ನ ಬರವು ನಮ್ಮ ಕಡೆ ನಿನ್ನ ತಯಾರಿಯಲ್ಲಿ ನಾವಿರಬೇಕು ಎಲ್ಲಿಲ್ಲ ನೀನು? ಬಿಸಿಲು ಮಳೆಯಲ್ಲಿ, ಗಾಳಿ ಸುಂಟರಗಾಳಿಯಲ್ಲಿ, ಭೂತಕಾಲದಲ್ಲಿ ಹಳೆಯ ನೋವಲ್ಲಿ, ನನ್ನ ಕಣ್ಣುಗಳಲ್ಲಿ, ಈ ನೆಲದ ಕಾಮನಬಿಲ್ಲಿನಲ್ಲಿ ಸ್ವಪ್ನಗಳ ಆಸರೆಗೆ ಪೆಟ್ಟು ಕೊಡುತ್ತ ಅಸ್ತಿತ್ವದ ಈ ಕಾಂಪೋಸಿಷನ್ನನ್ನು ಉತ್ತುಂಗವಾಗಿಸುತ್ತ ನಿನ್ನ ಶೇಷ, ನಿನ್ನ ಅವಶೇಷ ನಿನ್ನ ನಿರರ್ಗಳ ಉಜ್ವಲ ಪ್ರತಿಬಿಂಬ ಅವರು ಹೊರಟಿದ್ದಾರೆ ಚೆಲ್ಲಾಪಿಲ್ಲಿಯಾಗಿಸುತ್ತ ಭಯೋತ್ಪಾದನೆ ಭಯೋತ್ಪಾದನೆ ಹೇಗೆ ನಿನ್ನ ಹೆಸರಾದೀತು? ಜ್ಞಾನದ ಎಲೆಯೊಂದಿಗೆ ಧೃಢವಾಗುತ್ತ ದಿಗಂತವೇ ಆಗುವವ ನೀನು ಕ್ಷುದ್ರ ಕಣ್ಣಿನ ಲಫಂಗರು ಯಾಕೆ ನಿನ್ನನ್ನು ಕ್ಷಿತಿಜಕ್ಕೆ ಮಾತ್ರ ಬಂಧಿಯಾಗಿಸಿಡಬೇಕು? ತಮ್ಮ ಕುಂಡಿಯ ಮೇಲಿನ ಮಚ್ಚೆ ಎಣಿಸಲು ಬಾರದ ಇವರಿಗೆ ಬರೀ ಸಾಮಾನ ಪಿಟೀಲು ತುಣ ತುಣಿಸುವುದು ಮತ್ತು ಕುಂಡೆಯ ಡೋಲು ಬಾರಿಸುವುದು ಯಾಕೆ ಬೇಕು? ಬೆರೆಯುವ ಹೆಸರಲ್ಲಿ ಇವರು ಮೈಮೇಲೆ ಹೊದ್ದುಕೊಂಡಿರುವ ಸಂಪತ್ತಿನ ಶಾಲು ಕೊನೆಗೂ ರಾಧಾಬಾಯಿ, ಭೀಮಾಬಾಯಿಯರ ಕರುಣಾಷ್ಟಕ ಕೊನೆಗೂ ಯೆಲ್ಲಮ್ಮನ ತಿರುಪೆ ಪಾತ್ರೆ, ಈ ಚಾಣಾಕ್ಷ ಉರಿಶಿಶ್ನ ಇವರುಗಳ ಪಂಚಾಯತಿ ಹಮಾಲ ಇವರುಗಳ ಗುಡಾಣತುಂಬುವ ಟ್ರಸ್ಟ್ ಇವೇ ಇವರುಗಳ ಎಂಟು ಹೊತ್ತಿನ ಸುಗ್ರಾಸ ಊಟದ ಶಿಬಿರ ನಂತರ ರಾತ್ರಿ ಸ್ವಪ್ನಕ್ಕೆ ಕಾಡಿಗೆ ಹಚ್ಚಿಕೊಂಡು ಸುಗ್ರಾಸ ಸಂಭೋಗ ಪುನಃ ಹೊಸ ದಿನಕ್ಕಾಗಿ ಶುಭ್ರ ಖಾದಿ ಹೊದ್ದು ಸುಪರ್ ಸ್ಟ್ರಕ್ಚರ್ ಹಾಗೆ ನಲ್ಲ ನಲ್ಲೆ ಸ್ವಂತದ್ದೇ ಶಿಲುಬೆ ಸ್ವಂತ ಹೆಗಲುಗಳ ಮೇಲೆ ಹೊತ್ತೊಯ್ಯಲು ಹಲ್ಕಟರಾದ ಇವರು ಇಲ್ಲಿ ಅಜ್ಞಾನ ಫಲ ಕೊಡಲಿ, ಅರಳಲಿ ದಲಿತರಿಗೆ ಮಾತ್ರ ಏನೂ ತಿಳಿಯದಿರಲಿ ಈ ಪ್ರವಾದಿಗಳ ನೆತ್ತಿಯ ಮೇಲೆ ಬೆಣ್ಣೆ ಕರಗುತ್ತಲಿರಲಿ ಇತ್ತೀಚೆ ಇವರ ಸಮಾಜವಾದಿ ಪಿಂಡಗಳನ್ನೂ ಕಾಗೆ ತಿನ್ನ ತೊಡಗಿವೆ ಈ ಕಾಗೆಗಳು ಇಡೀ ಶಹರವನ್ನೇ ಹೊಲಸು ಮಾಡಿ ಬಿಟ್ಟಿದ್ದಾವೆ ಓ ಮಬ್ಬು ಆಕಾಶವೇ ಆ ನಮ್ಮ ಹಿತೈಷಿ ಮುಂಗಾರು ನಮ್ಮನ್ನ ಒದ್ದೆಯಾಗಿಸುತ್ತ ಬರುತ್ತಿದೆಯಲ್ಲ ! ಈ ಎಂಬತ್ತೊಂದರ ವರ್ಷದ ಮಹಾದ್ವಾರವು ಅವನಿಗಾಗಿ ಪೂರ್ತಿ ತೆರೆಯಲಿ ಅವನಿಗಾಗಿ ಈ ಹೃದಯ, ಅವನಿಗಾಗಿ ಈ ರಕ್ತ ಅವನಿಗಾಗಿ ಈ ಪ್ರೇಮ ಸ್ವಪ್ನಗಳ ಪರದೆ ಹರಿದು ಸಿಂಹಗರ್ಜನೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದೇವೆ ನಾವೀಗ ಯಾರಪ್ಪನ ಭಯ ನಮಗೆ? *******

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಒಳದನಿ                                                    ಶಹನಾಜ್ ಬಿ. ಸಿರಿವ್ಯಾಲ ಒಳದನಿ ಅಂದು ನೀನು ನೆಟ್ಟಿದ್ದ ಜಾತ್ಯತೀತತೆಯ ವೃಕ್ಷ ಇಂದು ರಾಜಕೀಯ ವಿಷ ಗಾಳಿಗೆ ಸಿಲುಕಿ ನಿತ್ಯವೂ ನರಳುತ್ತಿದೆ. ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ ದಮನಿತರ ಕಣ್ಣುಗಳಲ್ಲಿ ನೋವು ಮಡುಗಟ್ಟಿದೆ. ಅದ್ಯಾಕೋ ನಿನ್ನ  ಬುದ್ಧನಿಂದಲೂ ಈ ಸಮಾಜವನ್ನು ತಿದ್ದಲಾಗಲಿಲ್ಲ. ವೇಮುಲನ ಮುಖ ಪ್ರತಿ ಬಾರಿ ನೆನೆದಾಗಲೂ , ಎಲ್ಲೋ ಬಾಪುವಿನ ನಾಡಲ್ಲಿ ಕೃಶ ದೇಹಗಳಿಂದ ರಕ್ತ ಒಸರಿದಾಗಲೂ , ಮತ್ತೆಲ್ಲೋ ಅವಳ ತಿಂದುಂಡ ದೇಹಕ್ಕೆ ಬಲವಂತದ ಬೆಂಕಿ ಹಚ್ಚಿದಾಗಲೂ , ನಿನ್ನ ಆಳೆತ್ತರದ ಸದ್ಗ್ರಂಥವ  ಹಿಡಿದ ದಾರಿ ತೋರುತ್ತಿರುವ ಪ್ರತಿಮೆ ಧುತ್ತೆಂದು ಸ್ಮೃತಿಪಟಲದಲ್ಲಿ  ಮಿಂಚಿ ಮಾಯವಾಗುತ್ತದೆ. ನೀ ಮತ್ತೆ ಹುಟ್ಟಿ ಬಾ ಎಂದು ಹೇಳಲಾರೆ. ನಿನ್ನ ಚಿಂತನೆಗಳು ನಿನ್ನವರನ್ನ ಮಾತ್ರ ಆವರಿಸಿಲ್ಲ  ಈ ಧರಣಿಯ ಎಲ್ಲ ಶೋಷಿತರ  ನೋವಿಗೆ ಮುಲಾಮಾಗಿವೆ. ನವ ಸಮಾಜ ಸಮ ಸಮಾಜ ಕಟ್ಟುವ ಕನಸಿಗೆ  ರಂಗು ಹಚ್ಚಿವೆ . ಇದ್ಯಾಕೆ ‘ಈ’ ಜನ ಹೀಗೆ ಎಂದು ಪ್ರತಿ ಬಾರಿ ಕುಸಿದಾಗಲೂ ಶಕ್ತಿ ಕೊಡುವ ಮಹಾ ಚೇತನವೇ ನಿನಗೊಂದು ನನ್ನ ಸಲಾಮು.   *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರತೆ ಜ್ಯೋತಿ ಡಿ.ಬೊಮ್ಮಾ ಧರ್ಮ ದೇವರುಗಳೆಲ್ಲ ಕಿರುಚಾಟದ ಸರಕುಗಳಾದವು.. ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳಲಿರುವ ಕಚ್ಚಾ ವಸ್ತುಗಳಾದವು.. ಜಾತಿಯ ಹೆಸರಲ್ಲಿ ರಂಪಾಟವೆಬ್ಬಿಸುವ ಕ್ಷುಲ್ಲಕ ಕಾರಣಗಳಾಗಿರುವವು.. ಈ ವಿಷಯಗಳೆ ಈಗ ಪ್ರಚಲಿತ ವಿದ್ಯಾಮಾನವಾಗಿರುವವು.. ಮನುಷ್ಯರ ಮನಸ್ಸುಗಳ ಮದ್ಯ ಗೋಡೆಗಳೆದ್ದವು ಬಣ್ಣಗಳು ಹಗೆ ಸಾಧಿಸುವ ಸಾಧನಗಳಾದವು ದೇಶ ಗಡಿಗಳು ಇವುಗಳಡಿ ನರಳಾಡಿದವು ಮನುಷ್ಯರೆಲ್ಲ ಮುಖವಾಡಗಳಡಿ ಬಳಲುವ ಚಮರಗೀತೆಗಳಾದರು.. ಆರಂಭ ಎಲ್ಲಿಂದ. .ಅಂತ್ಯ ಯಾವದು.. ಗೊತು ಗುರಿಯಿಲ್ಲದ ವಿಚಾರ ಧಾರೆಗಳು.. ಒಬ್ಬರ ವಾದ ಮತ್ತೊಬ್ಬರು ಒಪ್ಪಬಾರದೆಂಬ ಹಠ ಪ್ರತಿಯೊಬ್ಬರಲ್ಲೂ.‌. ಈಗ ಮಂದಿರ ಮಜ್ಜಿದ ಎರಡರ ಗೋಡೆಗಳು ಮೌನವಾಗಿ ಆಲಿಸುತ್ತಿರುವವು..ಎರಡರಲ್ಲೂ ಬೆರೆಯುವದು ಕಲ್ಲು ಮಣ್ಣೆ ಮತ್ತೆಕೆ ಕಚ್ಚಾಡುತ್ತಿರುವರವರು..! ದೂರದ ಪ್ರತಿಮೆಗಳಲ್ಲಿ ಗಾಂಧಿ ,ಅಂಬೇಡ್ಕರ್ ನಿಶ್ಯಬ್ದ ವಾಗಿ ನಿಂತಿರುವರು.. ತಾವು ಸಾರಿದ ತತ್ವಗಳು ಇವರು ಬಳಸಿಕೊಳ್ಳುತ್ತಿರುವ ಪರಿ ಕಂಡು.. ಬುದ್ದ ಬಸವಣ್ಣರು ಅಚ್ಚರಿಗೊಂಡಿರುವರು ತಾವು ಜಗಕ್ಕೆ ಸಾರಿದ ಸಮಾನತೆ ಮಂತ್ರವೆ ನಶಿಸಿ ಅಸಮಾನತೆ ಹೋಗೆ ಎಲ್ಲೆಲ್ಲೂ ಹರಡಿರುವದು ಕಂಡು.. ಮಹಾನುಭಾವರ ತತ್ವಗಳೆಲ್ಲ ಪುಸ್ತಕದಲ್ಲೆ ಉಳಿದುಹೋದವು.. ಅವರ ಹೆಸರುಗಳು ಮಾತ್ರ ನಮ್ಮ ಸ್ವಂತದ್ದಾದವು.. ಬುಧ್ದ ಬಸವ ಅಂಬೇಡ್ಕರ್ ಮುಖದಲ್ಲಿ ಈಗಲೂ ಮಂದಹಾಸವಿದೆ.. ಮನುಜ ಕುಲವೊಂದೆ ವಲಂ. ಎಂದು ಕಾಣುವ ಉತ್ಕಟ ಬಯಕೆ ಇದೆ. ಆದರೆ…ಆಚರಿಸುವ ನಮ್ಮಲೆ ಎನೋ ಕೊರತೆ ಇದೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀನಿಲ್ಲದ ಈ ಹೊತ್ತು ಬಿದಲೋಟಿ ರಂಗನಾಥ್ ದೇಶ ಸುಡುವ ಕಣ್ಣುಗಳ ನಡುವೆ ನಿನ್ನ ಹೆಜ್ಜೆಗಳ ಸವಾರಿ ಹೋಗುತ್ತಲೇ ಇದೆ ಬಿಸಿಲು ಬೇಗೆಗೆ ಸೊಪ್ಪಾಕದೆ ಬರೆದ ಸಂವಿಧಾನ ಕರುಳು ನೋಯುತ್ತಿದೆ ಸೂಜಿಗೆ ದಾರ ಸೇರಿಸಿ ನಾಟಾಕುವ ಕೈಗಳಿಗೆ ಹೆದರಿ ನಿನ್ನುಸಿರನು ಸೇರಿಸಿ ಬರೆದ ಬೇರು ಸಂವಿಧಾನದಲಿ ನಿನ್ನ ನಿನ್ನವರ ಕನಸುಗಳು ಆಯಾಸವಿಲ್ಲದೆ ಆಡುತ್ತಿದ್ದವು ಆದರೇ ಕತ್ತರಿ ತೋರಿಸುತ್ತಲೇ ಇವೆ ಹಿಡಿಗಾತ್ರದ ಮನಸುಗಳು ಬರೆದ ಸಂವಿಧಾನದ ಪುಟಗಳ ಚೂರು ಮಾಡಲು ಬೆವರಲೇ ಬೆಂದ ನಿನ್ನ ಜನರ ಆಶಾಗೋಪುರಕೆ ನೀನೆ ಬೇಲುದಾರ ಸುಡುವ ಮನಸುಗಳ ದಾರಿಯ ಮೇಲೆ ನಿನ್ನೆಜ್ಜೆಗಳ ಸಾಂತ್ವಾನದ ಉಸಿರಾಟ ಬೆವರ ಬಿಕ್ಕಳಿಕೆಯಲಿ ನಿನ್ನುಟ್ಟೆ ಜೀವ ಜಲ ನೀನಿಲ್ಲದೇ ಹೋಗಿದ್ದರೆ ಮೌಢ್ಯತೆಯ ಬೆಂಕಿ ಉರಿದು ಎಷ್ಟೊಂದು ಮುಗ್ಧ ಮನಸುಗಳ ಆಹುತಿಗೆ ಬಲಿಯಾಗುತ್ತಿದ್ದವೋ ಆದರೇ ನಿನ್ನ ಹೆಜ್ಜೆಗಳ ಮೇಲೆ ನಡೆದ ಜಾತಿ ಸುಟ್ಟ ಮನಸುಳಿಗೂ ಬೆನ್ನು ನೋವು ನೀನಿಲ್ಲದ ಈ ಹೊತ್ತು ********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ದಲಿತ ಸೂರ್ಯ ದಲಿತ ಸೂರ್ಯ..ವಿಶ್ವಮಾನವ… ಜೈಭೀಮ….!              ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.” …………….ಡಾ!!ಬಿ.ಆರ್ ಅಂಬೇಡ್ಕರ್ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ವ್ಯಕ್ತಿತ್ವವಾಗಿ ಪರಿವರ್ತನೆಗೊಳ್ಳುವ ಸಮಯ ಬಹು ಕಷ್ಟದ್ದು.ಜೀವನದ ಪ್ರತಿಕ್ಷಣದಲ್ಲೂ ಏಳುಬೀಳುಗಳನ್ನು ಕಂಡು,ನೋವಿನ ಅಗ್ನಿ ಕುಂಡದಲ್ಲಿ ಬೆಂದರೂ,ಪುಟಕ್ಕಿಟ್ಟ ಚಿನ್ನದಂತೆ ಪ್ರಖರವಾದ ಪ್ರಕಾಶ ಹೊರಹೊಮ್ಮಿಸುತ್ತಿರುವುದು ಪ್ರತಿಭೆಯ ಆಗರದ ಪ್ರತಿಮೆಯೆಂದರೆ ತಪ್ಪಾಗದು.ಇಂದು ನಾವೆಲ್ಲ ಭವ್ಯ ಭಾರತದ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿ  ಶ್ರೀ ಜಗಜ್ಯೋತಿ ಬಸವಣ್ಣನವರು  ಶ್ರೀ ಮಹಾತ್ಮಗಾಂಧೀಜಿ, ಡಾ!!ಬಿ.ಆರ್.ಅಂಬೇಡ್ಕರ್….ತ್ರಿಮೂರ್ತಿಗಳು ….ದೇಶ ವಿದೇಶಗಳಲ್ಲಿ ಈ ಮಹಾತ್ಮರ ಪ್ರತಿಮೆಗಳು,ವಿಶ್ವ ಇವರನ್ನು  ಗೌರವಿಸಿ,ಅವರ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವತ್ತ ಜಗತ್ತು ಸಾಗುತ್ತಿದೆ……ಅದು ಹೆಮ್ಮೆಯ ಸಂಗತಿ.ಲಿಖಿತ ಸಂವಿಧಾನದ ಕೊಡುಗೆ ಇಡೀ ಪ್ರಪಂಚಕ್ಕೆ ಭಾರತದ ಹೆಜ್ಜೆಗಳು ಪಕ್ಕಾ ಹಾಗೂ ಶಾಶ್ವತವಾದ ಭದ್ರ ಬುನಾದಿ, ಎಲ್ಲರೂ ಸಂವಿಧಾನಕ್ಕೆ ಕಾಯಾ ವಾಚಾ ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಮಾದರಿ ನೀಡಿದ ಮಹಾನುಭಾವ, “ಜ್ಞಾನಿಗಳು ಪುಸ್ತಕಗಳನ್ನು ಪೂಜಿಸಿದರೆ, ಅಜ್ಞಾನಿಗಳು ಕಲ್ಲನ್ನು ಪೂಜಿಸುತ್ತಾರೆ”……  ಎಂಬ ಜೈಭೀಮರವರ ಮಾತು ಇಂದಿಗೂ ಪ್ರಸ್ತುತ ಎಂದರೆ ಅಲ್ಲಗಳೆಯುವಂತಿಲ್ಲ. … ಭರತಖಂಡದಲ್ಲಿ ಇಂತಹ ಅಭೂತಪೂರ್ವ ಮಾಣಿಕ್ಯ ಜನಿಸಿದ್ದು.. ಏಪ್ರಿಲ್ ೧೪, ೧೮೯೧ ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ಜನಿಸಿದರು.ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿಯ ಖೇಡಾ ತಾಲೂಕಿನ ಅಂಬೆವಾಡ ಗ್ರಾಮದವರು.ಇವರು ಮಹಾರ್ ಜಾತಿಯಲ್ಲಿ ಹುಟ್ಟಿದರು.ಇವರಜ್ಜ ಮಾಲೋಜಿ ಸಕ್ವಾಲ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೊಂಬೆ ಸೇನೆಯಲ್ಲಿ ಹವಾಲ್ದಾರ್ ರಾಗಿ ನಿವೃತ್ತಿ ಹೊಂದಿದವರು. ಆ ಕಾಲದಲ್ಲಿಯೇ ಇವರು ೧೯ ಮೆಡಲ್ಗಳನ್ನು ಗಳಿಸಿದ್ದರು. ಮಗ ರಾಮಜೀ ಸಕ್ವಾಲ ಸೊಸೆ ಭೀಮಾಬಾಯಿಯ ೧೪ನೆಯ ಪುತ್ರರಾಗಿ ಭೀಮ ಜನಿಸಿದ್ದು …ಜಗತ್ತನ್ನು ಹೊಸಚಿಂತನೆಗೆ ದಾರಿ ತೋರುವ ನವ ಭಾಸ್ಕರ ಉದಯಿಸಿದಂತೆ  ನಭದಲ್ಲಿ ನಕ್ಷತ್ರಗಳು ಹೊಳಪನ್ನೆಲ್ಲ ಈ ಬಾಲಕನಲ್ಲಿ ತುಂಬಿದಂತೆ ಕಾಣಿತಿತ್ತು.ಕಾಣುವ ಕಂಗಳಿಗೆ ಮಾತ್ರ‌..!ತಂದೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಾ…ಭೀಮನಲ್ಲಿ ದೇಶ ಪ್ರೇಮ,ಭಕ್ತಿ,ಧರ್ಮ,ಜ್ಞಾನದ ಬೆಳಕನ್ನು ಬಿತ್ತುವ ಕಾರ್ಯ ಮಾಡುತ್ತಿದ್ದರು.ತಾಯಿ ಭೀಮಾಬಾಯಿ ಕರುಣೆಯ ಸಾರ ಉಣಿಸುವಾಗಲೇ ಕಣ್ಮರೆಯಾದರು…ಆ ಪ್ರೀತಿಯನ್ನು ಸೋದರತ್ತೆ ಮೀರಾ ಉಣಿಸಿ ಬೆಳೆಸುತ್ತಿದ್ದಳು. ಜಾತಿ ಭೇದ ಮೇಲುಕೀಳು ಬಡವ ಶ್ರೀಮಂತ ಎನುವ ಅಸಮಾನತೆ ತುಂಬಿರುವ ಈ ಸಮಾಜವ ನಾಗರಿಕ ಎಂದು ನಾ ಹೇಗೆ ಹೇಳಲಿ?? ನಾಚಿಕೆ ತುಂಬಾ ನಾಚಿಕೆ ನಾಗರಿಕತೆ ಎನುವ ಪದಕೆ ನಾಚಿಕೆ………. ಈ ಮೇಲಿನ ಸಾಲುಗಳು ಎನ್ನೆದೆಯಲ್ಲಿ ಇನ್ನು ಮುಳ್ಳು ಮುರಿದಂತೆ ಭಾಸವಾಗುತ್ತದೆ……ಎಂತಹ ಅಗಾಧ ಶಕ್ತಿ, ಪ್ರತಿಭೆಗಳಿದ್ದರೂ…….ಅಡ್ಡಗೋಡೆ ಜಾತಿ *ಮಹಾರ್ನಾವೆಷ್ಷೇ ಸಮಾಜದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದರೂ…ಪ್ರಗತಿ ಸಾಧಿಸಿದರೂ ನಮ್ಮ ನಿಲುವುಗಳು ಮಾತ್ರ ಭಿನ್ನವಾಗಿಲ್ಲ…….ದಲಿತ,ಅಸ್ಪೃಶ್ಯತೆ ನುಡಿಯೇ,ಪದವೇ ಮೆಟ್ಟಿ ತುಳಿದು ನಿಲ್ಲುವಂತಹುದು.. ಇಂತಹ  ಸನ್ನಿವೇಶ  ಪ್ರತಿ ಹಂತದಲ್ಲೂ ಬಾಲ್ಯದ ಜೀವನ ಹಾಗೂ ಬದುಕಿನುದ್ದಗಲಕ್ಕೂ ಈ ಹಿಂಸೆಯನ್ನು      ಅನುಭವಿಸಿದ್ದರು….ಅದೊಂದು ಚಮತ್ಕಾರ ಇವರ ಜೀವನದಲ್ಲಿ  ಎಲ್ಲ ಶಿಕ್ಷಕರಿಗೂ,ಸಹಪಾಠಿಗಳಿಗೂ ಭೀಮ ಕೀಳುಜಾತಿಯವನಾಗಿದ್ದರೂ,ತರಗತಿಯ ಮೂಲೆ,ಬಾಗಿಲ ಬಳಿ ತಟ್ಟನ್ನು ಹಾಸಿ ಕುಳಿತು ಕಲಿಯುವಾಗ ದೃತಿಗೆಡಲಿಲ್ಲ..! ಆ ಸಂಧರ್ಭದಲ್ಲಿ ಅವನ ಗುರುಗಳಾದ #ಶ್ರೀ ಫೆಂಡಸೇ ಅಂಬೇಡ್ಕರ್# ದಲಿತ ಮಗುವೆಂದು ತಿಳಿದರೂ,ತನ್ನ ಮನೆಯಿಂದ ತಂದ ಊಟದಲ್ಲೆ ಊಟ ಮಾಡಿಸುತ್ತಿದ್ದ.ಕುಲದಲ್ಲಿ ಬ್ರಾಹ್ಮಣ ರಾದರೂ ಭೀಮನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದರು.ಭೀಮನ ಹಾಜರಿಯಲ್ಲಿ ಭೀಮರಾವ್ ರಾಮಜೀ ಅಂಬೆವಾಡ್ಕರ ಎಂಬುದನ್ನು ತಿದ್ದಿ *ಭೀಮರಾವ್ ಅಂಬೇಡ್ಕರ್ ಆದುದು.. . ಸತ್ಯ…ಇಂತಹ ಶಿಕ್ಷಕರು ಎಲೆಮರೆಯ ಭಾಗವಾಗಿ ಮರೆಯಾಗುತ್ತಾರೆ.ಮುಂದೊಂದು ದಿನ ಈ ಭೀಮ ಜಗತ್ತಿಗೆ ** ಜೈಭೀಮನಾಗುವನೆಂಬ ಭವಿಷ್ಯ ಕಂಡಂತಿತ್ತು… ವಿಧ್ಯೆ ಯಾರ ಸೊತ್ತಲ್ಲ…ಅದು ಒಲಿಯುವುದು ಸಾಧನೆಯ ಮೆಟ್ಟಿಲನ್ನು ಹತ್ತಲು ಛಲ ಹೊಂದಿದವರಿಗೆ. ಎಡಬಿಡದೇ ಸಂಘರ್ಷಗಳ ನಡುವೆ…ಹತಾಶೆಯ ಕೂಪದಲ್ಲಿ ಮಿಂದರೂ ಕಮಲದಂತೆ ಪರಿಶುದ್ಧ… ಜೈಭೀಮ…! ಓದುವುದರಲ್ಲಿ ನಿಸ್ಸೀಮ.! ಅಂಧಕಾರದ ಕರಿ ನೆರಳಲ್ಲಿ ಜ್ಯೋತಿಯಂತೆ ಬೆಳಗಲು ಬಂದನಿಲ್ಲಿ.. ಮೌಡ್ಯತೆಗಳ ಮೋಡಗಳ ಕರಗಿಸಲು ಪಣ ತೊಟ್ಟನಿಲ್ಲಿ….. ಭೀಮರಾವ್…ಗಳಿಸಿರುವ ಪದವಿಗಳ ಸಾಲು  ನೆನೆದರೇನೆ…ಮನತುಂಬಿ ಬರುತ್ತದೆ… ಹತ್ತನೇ ತರಗತಿ ಮುಗಿದಿದ್ದೇ ತಡ ಭೀಮನಿಗೆ ಕಂಕಣ ಬಲ ಕೂಡಿ ಬಂದಿತ್ತು.. ಡಾಪೋಲಿಯಾ ಬಿಕ್ಕು ವಾಲಂಗಕರ್  ರವರ ಪುತ್ರಿ ರಮಾಬಾಯಿಯವರೊಂದಿಗೆ ನೆರವೇರುತ್ತೆ….ಜ್ಞಾನ ದಾಹದ ಝರಿ ಕಡಲನ್ನು ಸೇರಲು ಹಾತೊರೆಯುತ್ತಿತ್ತು..ಅದಕ್ಕೆ ಕೈಜೋಡಿಸಿದವರು..ಕೆ.ಎ.ಕೇಲಸ್ಕರವರು ..ಬರೋಡಾ ಮಹಾರಾಜರಿಂದ ತಿಂಗಳಿಗೆ ೨೫ ರೂಪಾಯಿ ಶಿಕ್ಷಣ ವೇತನ ನಿಗದಿ ಪಡಿಸಿ ಪಿ.ಯು.ಸಿ, ಬಿ.ಎ. ಶಿಕ್ಷಣಕ್ಕೆ,ಉನ್ನತ ವ್ಯಾಸಂಗಕ್ಕೆ ಅಮೇರಿಕಾ ಕೊಲಂಬಿಯಾ ವಿಶ್ವವಿದ್ಯಾಲಯ ದಲ್ಲಿ,ಅರ್ಥಶಾಸ್ತ್ರ, ಸಮಾಜಶಾಸ್ತ್ರ,ಇತಿಹಾಸ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ, ಪಿ.ಎಚ್.ಡಿ.ಅಲ್ಲದೆ ಅಮೇರಿಕಾ,ಇಂಗ್ಲೆಂಡ್ ಗ್ರೇಸ್ ಇನ್ ಕಾಲೇಜನಲ್ಲಿ ಕಾನೂನು ಪದವಿ,ಲಂಡನ್ ದಲ್ಲಿ ಎಮ್.ಎಸ್.ಇ,ಹಾಗೂ ಡಿ.ಎಸ್ಸಿ,ಪಡೆಯಲು ಪ್ರೋತ್ಸಾಹ ನೀಡುವರು ಹಾಗೂ ಸ್ನೇಹಿತರು,ಸ್ವಯಂ ದುಡಿಮೆಯಿಂದ ಪೂರೈಸಿಕೊಂಡು,ತಾಯ್ನಾಡಿಗೆ ಮರಳಿದರು.ಒಪ್ಪಂದದಂತೆ ಬರೋಡಾಮಹಾರಾಜರ ಆಸ್ಥಾನದಲ್ಲಿ ಕಾರ್ಯರ್ಶಿಯಾಗಿ ನೇಮಕವಾದರು…. ಮಹಾರಾಜರಲ್ಲಿ ಪ್ರಜೆಗಳೆಲ್ಲ ಒಂದೆಂಬ ಭಾವನೆಯಿದ್ದರೂ ಅವರ ಅರಿವಿಗೆ ಬಾರದಂತೆ ಭೀಮರಾವ್ ರವರ ಫೈಲುಗಳನ್ನು ಆಸ್ಥಾನದ ಸಿಪಾಯಿ ಕೂಡ ಮುಟ್ಟುತ್ತಿರಲಿಲ್ಲ..ಅಲ್ಲದೆ ಉಳಿದುಕೊಳ್ಳಲು ಆಸ್ಥಾನದಲ್ಲಿ ನಿವೇಶನವನ್ನು ನೀಡದೇ ಪಾರ್ಸಿ ಹೋಟೆಲ್ ನಿಂದ ಹೊರದಬ್ಬಿದರು…. …ಅಸಾಮಾನ್ಯ ವಿದ್ಯಾವಂತ ದೇಶದ ಹೆಮ್ಮೆಯ ಪುತ್ರ ಇವರ ಕಣ್ಣಿಗೆ ಕೇವಲ ಮಾಹರ ಜಾತಿಯ ಭೀಮ ಕಂಡ.  ಬಿಟ್ಟರೆ ಬೇರೇನೂ ಕಾಣಲಿಲ್ಲ…. ಅಂಬೇಡ್ಕರ್ ರ ಉದ್ದೇಶ ಸ್ಪಷ್ಟವಾಗಿತ್ತು..ವಕೀಲ ವೃತ್ತಿ ಪ್ರಾರಂಭಿಸುತ್ತಾ..ಸಾಮಾಜಿಕ ಕಾಳಜಿಯುಳ್ಳ ಇವರು ೧೯೨೭ರಲ್ಲಿ ದಲಿತ ವರ್ಗದವರನ್ನು ಜಾಗೃತವಾಗಿ ಮಾಡಲುಬಹಿಷ್ಕೃತ ಭಾರತ* ಪತ್ರಿಕೆಯ ಮೂಲಕ,ಹಾಗೂ ೧೯೨೦ರಲ್ಲೆ ಮುಖ ನಾಯಕಪತ್ರಿಕೆ ಪ್ರಕಟಿಸಿದ್ದು ಮರೆಯುವಂತಿಲ್ಲ.. ಮಹಾಡದ ಚೌಡದ ಕೆರೆಯ ನೀರನ್ನು ಮುಟ್ಟುವ ಚಳುವಳಿ,೧೯೩೦ರಲ್ಲಿ ಹದಿನೈದು ಸಾವಿರ ಅನುಯಾಯಿಗಳೊಂದಿಗೆ ನಾಸಿಕ ಕಾಳರಾಂ ದೇವಾಲಯದ ಪ್ರವೇಶ ಚಳುವಳಿ….ಹೀಗೆ   ಭೀಮ ದಲಿತರ ಧ್ವನಿಯಗುವುದರೊಂದಿಗೆ….೧೯೩೦-೩೨ ರವರೆಗೆ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ಕಲ್ಪಿಸಿಕೊಟ್ಟ ಧೀಮಂತ ನಾಯಕ ಭೀಮ.ಮತದಾನ ನಮ್ಮ ಹಕ್ಕೆಂದು ಮನವರಿಕೆ ಮಾಡಿಕೊಟ್ಟವ.ಇಂಗ್ಲೆಂಡ್ ಪ್ರಧಾನಿ ವ್ಯಾಕಡೋನಾಲ್ಡ್ ನೀಡಿದ ಕೋಮು ಆದೇಶವನ್ನು ತೀರ್ಪನ್ನು ಮಹಾತ್ಮ ಗಾಂಧಿಯವರು ಇಡೀ ಹಿಂದು ಧರ್ಮ ಒಡೆದು ಹೋಗುತ್ತದೆಂದು ವಿರೋಧಿಸಿ…ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ನಂತರ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಒಪ್ಪಂದ. ೧೯೩೨ ರಲ್ಲಿ.ಪ್ರತ್ಯೇಕ ಮತದಾನ ತ್ಯಜಿಸಿ ಜಂಟಿ ಮತದಾನ ಸೀಟುಗಳ ಸಂಖ್ಯೆ ೧೪೮ ನೀಡಿದರು. ಇದನ್ನು ಪೂನಾ*ಒಪ್ಪಂದವೆಂದು ಕರೆಯಲಾಯಿತು. ಅಸ್ಪೃಶ್ಯತೆ ನಿವಾರಣೆಗಾಗಿ ,ಅವರ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಹಾಗೂ ವರ್ಣ ವ್ಯವಸ್ಥೆಯ ವಿರುಧ್ದ ನಡೆಸಿದರು.ಅಲ್ಲದೇ ಮನಸ್ಸು ರೋಸಿಹೋಗಿತ್ತು… ೧೯೩೫. ಅಂಬೇಡ್ಕರ್ ರವರು* ಯೌಲ್ ಸಮ್ಮೇಳನದಲ್ಲಿ “ನಾನು ಹಿಂದೂ ಧರ್ಮ ದಲ್ಲಿ ಇರುವುದಿಲ್ಲ,ನಾನು ಹಿಂದೂವಾಗಿ ಹುಟ್ಟಿದ್ದು ಅನಿಶ್ಚಿತವಾಗಿ,ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂಬ ಪ್ರತಿಜ್ಞೆ ಮಾಡುತ್ತಾರೆ” ಎಂದ ಮೇಲೆ ಅವರು ಅನುಭವಿಸಿದ ನೋವು ಇಂದು ಸಹ ಅನುಭವಿಸುತ್ತಿರುವುದು ವಿಪರ್ಯಾಸ…!! ಬದಲಾಗದ ಸಾಂಪ್ರದಾಯಿಕ ಮೌಢ್ಯ ಕಟ್ಟುಪಾಡುಗಳು.,.. ೧೯೩೬ರಲ್ಲಿ  *ಇಂಡಿಪೆಂಡೆಂಟ್ ಲೇಬರ್ ಪಾರ್ಟಿ*ಸ್ಥಾಪಿಸಿ ಹದಿನೈದು ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿ,ದಲಿತರಿಗೆ ಶಿಕ್ಷಣ ಅತೀ ಅವಶ್ಯವೆಂದು ಮನಗಂಡು ೧೯೪೬ ರಲ್ಲಿ ಫಿಲಿಪ್ಸ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಪ್ರಾರಂಭಿಸಿದರು…. *ದಲಿತ ಸೂರ್ಯ ನಿನಗಿದೋ ನಮನ ಭೀಮರಾಯ ನಿನಗಿದೋ ನಮನ……ಎಂಬ ಸಾಲುಗಳು ಅರಿವಿಲ್ಲದೆ   ಮನದ ಮೂಲೆಯಲ್ಲಿ ಗುಣುಗುಟ್ಟಿದ್ದಂತೂ ಸತ್ಯ…ವೇದಗಳು‌ ಸಾರುವ ಮೂಲತತ್ವದ ಬೇರ ಅರಿಯಬೇಕಿದೆ…೧೯೪೬ ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿ ೧೯೪೭ರಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಮೂರು ವರ್ಷ ಹಗಲೆನ್ನದೇ ರಾತ್ರಿಯೆನ್ನದೇ ಸಂವಿಧಾನ ಬರೆದು ೧೯೫೦ ರಲ್ಲಿ ಭಾರತ ಮಾತೆಗೆ ತಮ್ಮ ಕರ್ತವ್ಯದ ಋಣ ಅರ್ಪಿಸಿದರು…ಪ್ರಜೆಗಳು ನ್ಯಾಯ ಸಮ್ಮತ ವಿಧೇಯಕ ಗಳು ದೇಶದ ಭವಿಷ್ಯ ಸುಭದ್ರಗೊಳಿಸುವುದಾಗಿದೆ. ದೇಶಭಕ್ತ ಜಾತಿ ಧರ್ಮ ಎಂದೆಣಿಸದೇ ನ್ಯಾಯ ನೀಡಿರುವುದು ನಮ್ಮ ಹೆಮ್ಮೆ.. .ನಮ್ಮ ದೇಶ ಲಿಖಿತ ಸಂವಿಧಾನದ ಹೊಂದಿದ ರಾಷ್ಟ್ರವೆಂಬ ಹೆಮ್ಮೆಗೆ ಕಾರಣವಾಗಲು ಅದ್ವಿತೀಯ ಅಸಾಮಾನ್ಯ ಸರಸ್ವತಿ ಪುತ್ರ ವಿದ್ಯಾ ಆರಾಧಕ…ಭೀಮರಾವ್ ಅಂಬೇಡ್ಕರ್….. ಇಂತಹ ಸಾಧನೆಗೆ ೧೯೫೦ರಲ್ಲಿ  ಅಮೆರಿಕಾ ಕೊಲಂಬಿಯಾ ವಿಶ್ವವಿದ್ಯಾಲಯ ಇವರನ್ನು ಸಂವಿಧಾನ ಶಿಲ್ಪಿಆಧುನಿಕ ಭಾರತದ ನಿರ್ಮಾತೃಎಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು,ಆಂದ್ರಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯ ಇವರನ್ನು *ಡಾಕ್ಟರ್ ಆಫ್ ಲಿಟರೇಚರ್*ಎಂದು ಗೌರವಿಸಿರುವುದು..ಹೆಮ್ಮೆ… ನಿನ್ನ ಹೆತ್ತ ಭಾರತಾಂಭೆ ಪುಣ್ಯವಂತಳೋ *ಹುಟ್ಟಿ ಬಂದೆ ಕೋಟಿಜನರ ನೋವಿನೊಳಗೆ ನೀನು ಕಷ್ಟ ಕೊಟ್ಟರು ಘಾಟಿ ಜನರು ಗೆದ್ದು ಬಂದೆ ನೀನು ಪುಣ್ಯ ಪುರುಷ ನೀನು,ಏಕಲವ್ಯ ನೀನು ಮುಂದೆ ಸಾಗಲಿ ನಿನ್ನ ರಥವು ಇಂದು ನಾವು ಇವರ ಬಗ್ಗೆ ಅಧ್ಯಯನ ಮಾತ್ರ ಮಾಡದೇ…ಅದರ ಹಿಂದಿರುವ ಶಕ್ತಿ ಯನ್ನು ಗುರುತಿಸಿ ನಮ್ಮೊಳಗೊಬ್ಬ ಭೀಮ ಹುಟ್ಟು ವಂತೆ ಮಾಡಬೇಕಾದುದು ಅನಿವಾರ್ಯ……ಜಾತಿಗಳು,ಧರ್ಮಗಳು ಮನುಷ್ಯನ ಅಸ್ಥಿತ್ವದಲ್ಲಿರುವ ವಿಷಬೀಜಗಳು….ಅವನ್ನು ಕಿತ್ತೊಗೆಯದೇ ಮನುಷ್ಯನಲ್ಲಿ ಮಾನವೀಯ ಗುಣಗಳು ಬೇರೂರುವ ಸಮಯ ಇಡೀ ವಿಶ್ವವೇ ಕಾದು ಕುಳಿತಂತಿದೆ.. ಅಂಬೇಡ್ಕರ್ ರವರು ಪಾರ್ಲಿಮೆಂಟ್ ನಲ್ಲಿ  ಹಿಂದೂ ತಂದ ಕೋಡ್ ಬಿಲ್.. ದೇಶದ  ಮಹಿಳಾ ವಿಮೋಚನೆಯನ್ನು ಮನುಸ್ಮೃತಿ ಯ ಮೂಲಕ ಶೋಷಿತ ಮಹಿಳೆಯರ ಬಿಡುಗಡೆಗೊಳಿಸಲು .ಮತ್ತು.. ಸಮಾನ ಹಕ್ಕನ್ನು ನೀಡಲು ಮಂಡಿಸಿದರು.ಆದರೆ ಇವರ ಈ ಬಿಲ್ಲನ್ನು… ಸಂಪ್ರದಾಯದಿಂದ ಕೂಡಿದ ಪಾರ್ಲಿಮೆಂಟ್ ಸಭೆ “ಹಿಂದೂ ಕೋಡ್ ನ್ನು” ನಿರಾಕರಿಸಿತು.ಮನನೊಂದ ಅಂಬೇಡ್ಕರ್ ರವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು….ನಂತರದ ದಿನಗಳಲ್ಲಿ ಬೌದ್ಧಧರ್ಮದ‌ ಆಚಾರ ಹಾಗೂ ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು…೧೯೫೫ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು. ೧೯೫೬ ಅಕ್ಟೋಬರ್ ೧೪ ರಂದು ೫ ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆ ನಾಗ ಜನತೆಯ ಮೂಲ ನಾಡಾದ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ…ನಾನು ಹಿಂದುವಾಗಿ  ಸಾಯಲಾರೆ ಎಂಬ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದರು….ಬರ್ಮಾದ ಬೌದ್ಧ ಬಂತೆ,ವೀರ ಚಂದ್ರಮಣಿ ಬೌದ್ಧಧೀಕ್ಷೆ ನೀಡಿದರು    ಡಿಸೆಂಬರ್ ೬ ,೧೯೫೬ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ  ನಿಧನರಾದರು..ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೃತಿಗಳು ೮ ಭಾರತದಲ್ಲಿ ಜಾತಿಪದ್ದತಿ,ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ.ಇತ್ಯಾದಿ…….ವಿಶ್ವದ ದೇಶಗಳು ಇಂದಿಗೂ ಅಂಬೇಡ್ಕರ್ ರ ಜೀವನ ಚರಿತ್ರೆಯಿಂದ ಯಶಸ್ಸಿನ ಮುನ್ನುಡಿ ಬರೆಯುತ್ತಿವೆ..   ವಿಶ್ವಮಾನವ *ಸಂದೇಶದ ಮೂಲಪುರುಷನನ್ನು.ತಮ್ಮ ಯು ಎಸ್ ಎ.ತಮ್ಮ ಗ್ರಂಥಾಲಯಕ್ಕೆ ಅಂಬೇಡ್ಕರ್ ಪುತ್ಥಳಿಯಿರಿಸಿ ಗೌರವಿಸಿವೆ…….ದೀಪದ ಬುಡಕ್ಕೆ ಕತ್ತಲು ಎಂಬಂತೆ ನಮ್ಮ ದೇಶದ ಜನತೆ ಈ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಅನಾವರಣ ಮಾಡಲು ತಾಕತ್ತು,ಸಂಯಮ,ಛಲ ತಮ್ಮದಾಗಿಸಿಕೊಳ್ಳಲು ಶ್ರಮಪಡಬೇಕಿದೆ…. ಭಾರತರತ್ನ **ಪ್ರಶಸ್ತಿ ಲಭಿಸಿದರೂ ನಮ್ಮೊಳಗಿನ ಮೌಡ್ಯತೆ ಬೇರುಸಹಿತ ಕಿತ್ತುವ ತನಕ ಎಲ್ಲರೂ ನಮ್ಮವರು,ನಮ್ಮಂತೆ ಇರುವವರೆಂಬ ಭಾವ ಗಟ್ಟಿಯಾಗಿ ನೆಲೆನಿಲ್ಲುವ ತನಕ ಸಾಧಕರ ಸಾಧನೆಗೆ ಬೆಲೆ ಬರಲಾರದು….ಡಾ!!ಬಿ.ಆರ್.ಅಂಬೇಡ್ಕರ್ ಮಾನವತಾವಾದಿ ಭಾರತರತ್ನ ಅಂಬೇಡ್ಕರ್ ಧ್ವನಿಯ ನೀಡಿದ ಮೂಕ ನಾಯಕ ನಿನಗಿದೋ ವಂದನೆ ಬುದ್ದ, ಬಸವ ಕರುಣಿಸಿದ ವರಪ್ರಸಾದ.. ಬಹುಜನನಾಯಕ ಜಯ ಜೈ ಭೀಮ ಅಮರಗೊಳಿಸುವೆವು ನಿನ ನಾಮ ನಿನ್ನ ತತ್ವದಲಿ ಮುನ್ನಡೆವೆವು ಜೈಭೀಮ…… ನಮ್ಮೆದೆಯ ಗೂಡಲಿ ಬಂದೂಕುಗಳು ಮೊಳಗದಿರಲಿ…ಪ್ರೀತಿ ನಗೆಯ ಮಲ್ಲಿಗೆ ಅರಳಲಿ….ವಿಶ್ವ ನಾಯಕನ ದಿನದಿಂದಾದರೂ ನಾವೆಲ್ಲ ಮನುಕುಲದ ಉಳಿವಿಗೆ ಒಗ್ಗಟ್ಟಿನಿಂದ ಬದುಕ ನಡೆಸುವ ಶಪಥ ಮಾಡೋಣ…ಪ್ರತಿ ಮನೆಯಲ್ಲಿ ಛಲವಿರುವ,ಗುರಿಯಿರುವ  ಜೈಭೀಮನಂತವರು ಜಾತಿ,ಧರ್ಮ,ಅಂಧಾನುಕರಣೆ ಮೆಟ್ಟಿನಿಲ್ಲುವ ಪುತ್ರರು ಜನಿಸಲಿ….ಭಾರತಾಂಬೆಯ ಕೀರ್ತಿ ಬೆಳಗಿಸುವಂತಾಗಲಿ.     ಮಸ್ತಕದಲಿ ಪುಸ್ತಕ ಅರಳುವಂತೆ ಮಾಡೋಣವೆಂದು  ….ಮತ್ತೊಮ್ಮೆ ಭವ್ಯ ಚೇತನ ದಿವ್ಯಾನಿಭೂತಿಯ ಬೌದ್ಧ ಅನುಯಾಯಿಗೆ ಶಿರ ಸಾಷ್ಟಾಂಗ ನಮನಗಳು…ಜೈಭೀಮ…. ******* ಶಿವಲೀಲಾ ಹುಣಸಗಿ

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಮೂಕ ಭಾರತದ ನಾಯಕ ನಾಗರಾಜ ಹರಪನಹಳ್ಳಿ ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು ನೀನೋ || ಪಲ್ಲವಿ|| ನನ್ನ ಅವ್ವಂದಿರ ಅಕ್ಷರದ ಬೆಳಕು ನೀನೋ ಬಡ ಭಾರತದ ಬಾಬಾ ಸಾಹೇಬ ನೀನೋ ಜಾತಿವಾದಿಗಳ ಕೈಯ ಬೊಗಸೆ ಕೆಂಡ ನೀನೋ ಮನುಷ್ಯವಾದಿಗಳ ಬದುಕ ಬೆಳದಿಂಗಳೊ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| ಬಡವರ ಪಾಲಿನ ಬೆಳಕು ನೀನೋ ಬಹುತ್ವ ಭಾರತವನ್ನು ತಿಳಿದವ ನೀನೋ ಮನುವಾದಿಗಳ ಕಣ್ಣು ತೆರೆಸಿದವ‌ ನೀನೋ ಬ್ರಿಟಿಷರ ಮನಮನ‌ ಗೆದ್ದವ ನೀನೋ ಷಾಹು ರಾಜನ ಹೃದಯ ಆಳ್ದವ ನೀನೋ ಮೂಕ ಭಾರತದ ಮೂಕ‌ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| ಬಹಿಷ್ಕೃತ ಭಾರತದ ಕಣ್ಮಣಿ ನೀನೋ ಜನುಮ‌ ಜನುಮಕೂ ನಾಯಕ ನೀನೋ || ಅಂಬೇಡ್ಕರ ಅಂಬೇಡ್ಕರ ದುಡಿವ ಜನಗಳ ಧ್ವನಿಯು‌‌ ನೀನೋ|| *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾಬಾಸಾಹೇಬ ತಾವು ದೇವರಾದರೆ! ಡಿ‌. ಎಮ್.ನದಾಫ್. ಗುಲಾಮಗಿರಿಯನ್ನು ಬುಡ ಸಮೇತ ಕಿತ್ತು ಅಜ್ಞಾನ, ಅವಮಾನಗಳನ್ನು ಧೈರ್ಯದಿಂದ ಒದ್ದು ದಿಕ್ಕಿಲ್ಲದವರಿಗೆ ಧವಳ ಕೀರ್ತಿ ತಂದುಕೊಟ್ಟು ಮಾನವತೆಯನ್ನು ಮರಳಿ ಸ್ಥಾಪಿಸಿದ ಅಂಬೇಡ್ಕರ್ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ಯಜ್ಞ-ಯಾಗ ಪ್ರಯಾಗಗಳನ್ನೆಲ್ಲ ಪ್ರಜ್ಞೆ, ಕರುಣೆ ಶೀಲದಲ್ಲಿ ಕಂಡವನೇ ಸ್ವರ್ಗ,ಮುಕ್ತಿ,ಬಂಧನಗಳನ್ನೆಲ್ಲ ಜ್ಞಾನ,ಸಮಾನತೆ,ಸೇವೆಯಲ್ಲಿ ಮಿಂದವನೇ ಮತ್ತೆ ನೀ ದೇವರಾದಾಗ ಬಾಯಿಗೆ ಉಗುಳುಬಟ್ಟಲು,ಬಾರಿಗೆ ನೆನಪಾಗುತ್ತವೆ. ಶಾಸ್ತ್ರ, ಪುರಾಣ ಆಗಮಗಳಿಗೆ ಬೀಗ ಹಾಕಿ ಶತಶತಮಾನಗಳ “ಕರ್ಮಫಲ”ಗಳ ನೊಗ ಕಿತ್ತು ಹಾಕಿ ಪಟ್ಟ ಭದ್ರರಿಗೆ ಬೆಟ್ಟದಂಥ ಸವಾಲಾದವನೇ ನೀ ದೇವರಾಗಬೇಡ ನೀ ದೇವರಾದರೆ ಮತ್ತೆ ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ ನಾಲಿಗೆ ಸೀಳಿ ಬಗೆದಂತೆ ಕನಸು ಬೀಳುತ್ತದೆ. ಅದಕ್ಕಾಗಿ ಅಂಬೇಡ್ಕರ್ ದೇವರಾಗಬೇಡ,ದೊರೆಯಾಗಬೇಡ, ಗುರುವಾಗು,ಮಾರ್ಗದರ್ಶಿಯಾಗು,ನಮಗೆ ತತ್ವ ಜ್ಞಾನಿಯಾಗು ಅಂಬೇಡ್ಕರ್ ನೀ ದೇವರಾದಾಗ ನನ್ನೆದೆ ಝಲ್ಲೆನ್ನುತ್ತದೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದಲಿತ ಚೇತನ ಮನುಶ್ರೀ ಸಿದ್ದಾಪುರ ಓ ದಲಿತರ ಮಹಾಚೇತನವೇ ಇಗೋ ನಿನಗೆನ್ನಯ ನಮನ ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ. ನರನಾಡಿಗಳ ಬತ್ತಿಯಾಗಿ ತಾನುರಿದು ಸುತ್ತಲೂ ಜ್ಞಾನದ ಬೆಳಕು ಹರಡಿದೆ. ಶೋಷಿತರ ದನಿಗೆ ಮೂಕನಾಯಕನಾಗಿ ಸೆಟೆದು ನಿಂತೆ ದೀನ ದಲಿತರ ಬದುಕಿನ ಉದ್ದಾರಕೆ. ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ ಕೂಗಿ ಕರೆದು ತೋರಿಸಿದೆ ಮಹಾಮನೆಯ ಬಿರುಕನು ಶಿಕ್ಷಣ ಸಂಘಟನೆ ಹೋರಾಟದ ತ್ರಿಪಟಿಕ ಸೂತ್ರ ದಲಿತರ ಬದುಕಿನ ಪಾವನದಿ ಸಾಗಿಬಂದ ಮಹಾಪಾತ್ರ. ಹೊನ್ನ ಚರಿತೆಯ ಮಹಾಪುರುಷರಲಿ ನೀನಾದೆ ಪುರುಷೋತ್ತಮ ವಿಶ್ವವೇ ಸಾರಿದೆ ನೀ ಎಂದಿಗೂ ಭಾರತಾಂಭೆಯ ಭಾರತರತ್ನ.. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂಬೇಡ್ಕರ್ ಸ್ವಗತ ಮಧುಕುಮಾರ ಸಿ ಎಚ್ ಯಾವುದು ಆಗಬಾರದೆಂದು ನಾ ಎಣಿಸಿದೆನೋ ಅದು ಆಗಿಯೇ ತೀರಿದೆ ಅದಕ್ಕಾಗಿ ವಿಷಾದಿಸುತ್ತೇನೆ. ವ್ಯಕ್ತಿಪೂಜೆ ಬೇಡವೆಂದ ಮಾತು ಹಳ್ಳ ಹಿಡಿದು ಇಲ್ಲಿ ಈ ದಿನ ಪ್ರತಿಮೆಗೆ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಅಭಿಮಾನ ತೋರುವ ಆಚರಣೆ ವಿಜೃಂಭಣೆಯಿಂದಲೇ ನಡೆದಿದೆ. ನಾಲ್ಕು ತಿಂಗಳು ಕಳೆದ ಬಳಿಕ ಅಲ್ಲಲ್ಲಿ ‘ಗಣೇಶನ’ ಕೂರಿಸಿ ಮತ್ತದೇ ಹಾರ ತುರಾಯಿ ಹಾಕಿ ಜೈಕಾರ ಮೊಳಗಿಸಿ ಕುಡಿದು ಕುಣಿದು ಕುಪ್ಪಳಿಸುವುದು ತಪ್ಪದೇ ನಡೆಯುವುದಿದೆ. ಎಡ-ಬಲ ಎರಡೆರಡು ಹೋಳಾಗಿ ಒಳಗೊಳಗೊಂದು ಬಣ ಕಟ್ಟಿ ಒಣ ಪ್ರತಿಷ್ಟೆ ಹೆಚ್ಚಾಗಿ ಗದ್ದುಗೆಗಾಗಿ ಸ್ವಾಭಿಮಾನ ಬದಿಗೆ ತಳ್ಳುತ ಹಲ್ಲು ಕಿಸಿಯುವವರ ಮಧ್ಯೆ ಒಂದಷ್ಟು ಜನರ ಕೂಗಾಟ ಹೆಣಗಾಟ ಇದ್ದೇ ಇದೆ. ಅಂಟು ಜಾಡ್ಯದ ಮಂಕು ಕವಿದು ಮೇಲೆ ನಗು ಒಳಗೆ ಕಿಚ್ಚು ಒಬ್ಬರನ್ನೊಬ್ಬರು ಬೀಳಿಸುವ ಹುಚ್ಚು ಹೊಟ್ಟೆ ತುಂಬಿದವರಿಗೆ ನಿದ್ರೆಯ ಮಂಪರು ಹಸಿದವರಿಗೆ ನಿದ್ರೆ ಬಾರದ ತೊಡರು ಮುಂದೆ ಒಂದು ದಿನ ದೇಗುಲ ಕಟ್ಟಿ ಹಾಲು ಅಭಿಷೇಕ ಜಾತ್ರೆ ರಥೋತ್ಸವ ಅನ್ನಸಂತರ್ಪಣೆ ನೃತ್ಯ ಕಾರ್ಯಕ್ರಮ ಒಂದಷ್ಟು ಗುಣಗಾನ ಸನ್ಮಾನ ಮತ್ತಿನ್ನೇನೋ……? ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾಬಾರವರ ನೆನಪಲ್ಲಿ ಹೆಚ್ ರಾಠೋಡ ಬಾಬಾ ನಿನ್ನ ನೆರಳಿನಲ್ಲಿಭರತಖಂಡ ನಡೆದಿದೆ ಶ್ರೇಷ್ಠ ಭಾರತದೇಶ ಎಂಬ ಹೆಗ್ಗಳಿಕೆಯು ಪಡೆದಿದೆ ಭರತ ಭೂಮಿ ನಿತ್ಯ ನಿನ್ನ ನೆನೆದು ಹೆಜ್ಜೆ ಇಡುತ್ತಿದೆ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಧನ್ಯ ಸಾರ್ಥಕತೆ ಮೆರೆದಿದೆ ನೀನುಹಾಕಿಕೊಟ್ಟ ದಾರಿಯಲ್ಲೇ ಇಂದು ದೇಶ ಸಾಗಿದೆ ನಿನ್ನ ಜ್ಞಾನ ಪಾಂಡಿತ್ಯಕ್ಕೆ ವಿಶ್ವವೇ ತಲೆದೂಗಿದೆ ಸಮಾನತೆಯ ಭಾವದಲ್ಲಿ ಸಂವಿಧಾನ ರಚಿಸಿದೆ ಶ್ರೇಷ್ಠ ಸಂವಿಧಾನ ರಚಿಸಿದ ಶಿಲ್ಪಿ ಎಂದೆನಿಸಿದೆ ಭಾರತೀಯರ ಎದೆಯಲ್ಲಿ ನಿನ್ನ ಪ್ರತಿಮೆ ನಿಂತಿದೆ ಅಂಬೇಡ್ಕರ್ ಎಂಬ ನಾಮ ಅಜರಾಮರವಾಗಿದೆ ಭೀಮನೆಂಬ ನಾಮ ಸ್ಮರಣೆ ನಾಲಿಗೆಯಲಿನಲಿತಿದೆ ದೀನ ದಲಿತರುಳವಿಗಾಗಿ ಕಾನೂನು ರೂಪ ನೀಡಿದೆ ಹಲವು ದೇಶ-ಕೋಶ ಓದಿ ಜ್ಞಾನ ಕಣಜ ಎನಿಸಿದೆ ಲೆಕ್ಕವಿಲ್ಲದಷ್ಟು ಪದವಿ ಪುರಸ್ಕಾರ ಗಳಿಸಿದೆ ತೋರು ಬೆರಳು ತೋರಿ ಪ್ರತಿಮೆ ಕೈ ಎತ್ತಿ ನಿಂತಿದೆ ತಮ್ಮ ಪಡೆದ ಭರತಮಾತೆ ವಿಶ್ವಮಾತೆಯ ಎನಿಸಿದೆ ಪುಟಕ್ಕಿಟ್ಟ ಬಂಗಾರವಾಗಿ ಭಾರತ ರತ್ನ ಎನಿಸಿದೆ ಸದಾ ಜೈ ಭೀಮ ಎಂಬ ಘೋಷವಾಕ್ಯ ಮೊಳಗಿದೆ ********

ಕಾವ್ಯಯಾನ Read Post »

You cannot copy content of this page

Scroll to Top