ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ.
ಅಂಕಣ ಬರಹ ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ ಡಾ ಪ್ರೇಮಲತ .ಬಿ. ಪರಿಚಯ ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಕಳೆದ 18 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ.ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಲೇಖನಗಳು,ಅಂಕಣ ಬರಹ, ಕಥೆ, ಕವನಗಳು ಮತ್ತು ಪ್ರಭಂದಗಳನ್ನು ಬರೆದಿದ್ದಾರೆ.ತುಷಾರ ಚಿತ್ರಕವನ ಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯ ಬಹುಮಾನ, ಸಿಂಗಾಪೂರ್ ನಡೆಸುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ೨೦೨೦ ರ ಕಹಳೆ ಕಥಾ ಸ್ಪರ್ಧೆಯಲ್ಲಿ ಅವರದೊಂದು ಕಥೆ ಅತ್ಯುತ್ತಮ ಕಥೆಯೆನ್ನುವ ಗೌರವಕ್ಕೆ ಪಾತ್ರವಾಗಿದೆ. ಅವರ ಪ್ರಥಮ ಕಥಾ ಗುಚ್ಛ ’ಛಂದ ಪ್ರಕಾಶನದ’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಸುಧಾ, ತರಂಗ, ಮಯೂರ, ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ.’ಬಾಯೆಂಬ ಬ್ರಂಹಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ. ಕನ್ನಡಪ್ರೆಸ್.ಕಾಂ ನಲ್ಲಿ ಆರು ತಿಂಗಳ ಕಾಲ ಅಂಕಣ ಬರಹವಾಗಿ ಪ್ರಕಟಗೊಂಡ ಅವರ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ’ಕೋವಿಡ್ ಡೈರಿ’ ಎನ್ನುವ ಈ ಬರಹಗಳ ಗುಚ್ಛದ ಈ ಪುಸ್ತಕ ಈ ತಿಂಗಳ ನವಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಟಾಪ್-ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಸೇರಿದೆ.…………………………… ಕವಿತೆ, ಕಥೆಗಳನ್ನು ಯಾಕೆ ಬರೆಯುತ್ತೀರಿ? ಸೃಜನಾತ್ಮಕವಾಗಿ ಯಾವುದೋ ಒಂದು ನಿಮಿಷವನ್ನು ಕಟ್ಟಿಕೊಡುವ ತುಡಿತದಿಂದ. ಅದು ಮನಸ್ಸಿಗೆ ಸಂತೋಷವನ್ನು ನೀಡುವುದರಿಂದ. ಸಾಹಿತ್ಯ, ಕಥೆ, ಕವಿತೆಗಳನ್ನು ಓದುವುದರಿಂದ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಯಾವಾಗ ಬೇಕಾದರೂ ಆಗಬಹುದು. ಆದರೆ ಮನಸ್ಸಿನ ಮೇಲೆ ಯಾವುದೋ ಒಂದು ವಿಚಾರ ಮೋಡಕಟ್ಟಿದ ರೀತಿ ಆವರಿಸಿಕೊಂಡ ನಂತರ ಮಳೆಯಾಗಲೇ ಬೇಕು ಎನ್ನುವ ಧಾವಂತದ ರೀತಿಯಲ್ಲಿ ಬರಹಗಳೂ ಹುಟ್ಟಿ ಬಿಡುತ್ತವೆ. ಅಗಲೇ ತೃಪ್ತಿ ಮತ್ತು ಸಮಾಧಾನ. ಆದರೆ ಇದು ನನಗೆ ಬೇಕೆಂದಾಗ ಆಗುವುದಿಲ್ಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು ? ಕವಿತೆಗಳು ಪ್ರೀತಿ, ಭಾವನೆ ಮತ್ತು ಪರಿಸರದ ಮೇಲೆ ಹೆಚ್ಚಿವೆ. ಪ್ರಚಲಿತ ಸಮಸ್ಯೆಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವುದು ಕಡಿಮೆ. ಕಾರಣ ಎಂದರೆ ಅಂಥಹ ವಿಚಾರಗಳು ಕವಿತೆಯ ಅಲಂಕಾರ, ರೂಪಕಗಳನ್ನು ನಿರ್ಲ್ಯಕ್ಷಿಸಿ ವಸ್ತುನಿಷ್ಠ ಮತ್ತು ವಾಸ್ತವಕ್ಕೆ ಸಂಭಂದಿಸಿದ ಲೇಖನಗಳೋ ಮತ್ತೊಂದೋ ಆಗಿರುವುದೇ ಹೆಚ್ಚು. ಕಥೆಗಳಲ್ಲಿ ಮನುಷ್ಯನ ಮನೋವ್ಯಾಪಾರದ ಬಗ್ಗೆ ಹೆಚ್ಚು ಬರೆದಿದ್ದೇನೆ. ನನ್ನ ಕಥೆಗಳ ವ್ಯಾಪ್ತಿಯಲ್ಲಿ ಸಮಾಜದ ಶೀತಲ ಕ್ರೌರ್ಯಗಳು ಎದ್ದು ಕಾಣುವಷ್ಟು ಇರುತ್ತವೆ.ಆದರೆ ತೀರ್ಮಾನಗಳಿರುವುದಿಲ್ಲ.ಅತಿಯಾದ ಭಾವುಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಆ ಮಟ್ಟಕ್ಕೆ ಮಿತವೂ ಹೌದು.ಪದೇ ಪದೇ ಕಾಡವ ವಿಷಯವೆಂದರೆ ಅದು ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಮತ್ತು ವಿನೋದತ್ಮಕ ಮನೋವ್ಯಾಪಾರ. ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಖಂಡಿತ. ಹರೆಯವನ್ನಾದರೂ ಹತ್ತಿಕ್ಕಬಹುದು ಆದರೆ ಬಾಲ್ಯದ ನೆನಪುಗಳದ್ದು ಗಾಢ ಬಣ್ಣಗಳು. ಅವು ಬೇರೆ,ಬೇರೆ ಆಯಾಮಗಳಲ್ಲಿ ಮತ್ತೆ ಡಣಾ ಡಾಳಾಗಿ ಇಣುಕುತ್ತವೆ. ಸಮಕಾಲೀನ ಬದುಕಿನ ಸ್ಪಂದನೆಗಳೊಂದಿಗೆ ಉತ್ತಮ ಸಾಥ್ ನೀಡುತ್ತವೆ. ನೀವು ವೃತ್ತಿಯಿಂದ ದಂತ ವೈದ್ಯರು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯ ಸದಾ ಜನರೊಂದಿಗೆ ಆತ್ಮೀಯವಾಗಿ ಒಡನಾಡಲು ಅವಕಾಶವಿರುವ ನನ್ನ ಕೆಲಸ ಜನರ ಬದುಕಿನ ಬಗ್ಗೆ ಬರೆಯುವ ಅವಕಾಶವನ್ನು ಕೂಡ ಹಿಗ್ಗಿಸುತ್ತದೆ. ದಿನಕ್ಕೆ ಇಪ್ಪತ್ತೈದು ಹೊಸ ಮುಖಗಳನ್ನು ನೋಡುತ್ತ, ಹೊಸ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಅತಿವೃಷ್ಟಿ ಒಮ್ಮೊಮ್ಮೆ ಬರೆಯುವ ಗೀಳನ್ನು ತಗ್ಗಿಸುತ್ತದೇನೋ.ಕೆಲಸಮಾಡುವಾಗ ಇರುವ ಕರ್ತವ್ಯದ ದೃಷ್ಟಿಗೂ, ಬರಹಕ್ಕೆ ಕುಳಿತಾಗ ಬರುವ ಉಮೇದಿಗೂ ಯಾವ ನೇರ ತಾಳೆಯೂ ಇಲ್ಲದಿರಬಹುದು.ಆದರೆ ರೋಗಿಗಳನ್ನು ನಿಭಾಯಿಸಿದಂತೆಯೇ ಕಥೆಯ ಪಾತ್ರಗಳನ್ನು ಕೂಡ ನಿಭಾಯಿಸಲು ಪರೋಕ್ಷವಾದ ಪ್ರಭಾವ ಇದ್ದಿರಬಹುದು. ಬರೇ ಮೇಜು, ಕುರ್ಚಿ, ಕಂಪ್ಯೂಟರಿನ ನಡುವೆ ಕುಳಿತವರು ಕೂಡ ಅದ್ಭತವಾದ ಕಥೆಗಳನ್ನು ಹೆಣೆಯುವುದನ್ನು ಗಮನಿಸಿದ್ದೇನೆ.ಹಾಗಾಗಿ ಯಾರು ಬೇಕಾದರೂ ಬರೆಯಬಲ್ಲರು ಅನ್ನೋದರಲ್ಲಿ ಸಂಶಯವಿಲ್ಲ.ವೃತ್ತ ಪರಿಜ್ಞಾನ ಮತ್ತು ಬರಹದ ಭಾವುಕಥೆಯ ಜೊತೆಗೆ ವೃತ್ತಿಯ ಪ್ರಭಾವದಿಂದ ಬರುವ ಸ್ಥಿತಪ್ರಜ್ಞತೆಯನ್ನಂತೂ ನನ್ನ ಬರಹದಲ್ಲಿ ಖಂಡಿತ ನೋಡಬಹುದು. ಕೆಲವೊಮ್ಮೆ ಅದನ್ನು ಕಳೆದು ಬರೆಯುವುದು ಕೂಡ ತೊಡಕಾಗಿದೆಯೆನ್ನಬಹುದು. ವೃತ್ತಿ ಹಾಗೂ ಸೃಜನಶೀಲತೆ ಮತ್ತು ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು? ದಿನದಲ್ಲಿ ಎಲ್ಲರಿಗೂ ಇರುವ ಅವೇ ೨೪ ಗಂಟೆಗಳನ್ನು ಪ್ರೀತಿಪಾತ್ರವಾದ ಮೂರಕ್ಕೂ ಹಂಚಲು ಇರುವ ಒಂದೇ ವಿಧಾನ ಎಂದರೆ, ಬರೇ ಎರಡರಲ್ಲಿ ಅಥವಾ ಒಂದರಲ್ಲೇ ತೊಡಗಿದವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸಮಾಡುವುದು. ಜಾಣತನದಿಂದ ಸಮಯ ಪೋಲಾಗದಂತೆ ನೋಡಿಕೊಳ್ಳುವುದು. ಅಲಂಕಾರ, ಕಾಡು ಹರಟೆ, ಗಾಸಿಪ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದು ಏಕಾಂತದ ಸಮಯವನ್ನು ಉಳಿಸಿಕೊಳ್ಳುವುದು. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಅತಿಯಾದ ನಿಯಮಗಳನ್ನು ಹಾಕಿಕೊಳ್ಳದೆ, ಅತಿಯಾಗಿ ಯಾವುದನ್ನೂ ಹಚ್ಚಿಕೊಳ್ಳದೆ ನಮ್ಮತನವನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಪಾಲಿಸುವುದು.ಮಲ್ಟಿ ಟಾಸ್ಕಿಂಗ್ ಮೊದಲಿಂದಲೂ ಇತ್ತು.ಕಾಲ ಕ್ರಮೇಣ ಬದುಕು ಅವುಗಳನ್ನು ನಿಭಾಯಿಸುವ ಕಲೆಯನ್ನು ಕಲಿಸಿತು ಎನ್ನಬಹುದು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಅದೊಂದು ಅವಿರತ ಚಕ್ರ. ಹಿಂದೊಮ್ಮೆ ಏಕತ್ವದ ಸಂಕುಚಿತ ಲೋಕವಿತ್ತು. ಅದು ಜಾಗತೀಕರಣದೊಂದಿಗೆ ಬಹುತ್ವಕ್ಕೆ ತೆರೆದುಕೊಂಡಿತು. ಅದಕ್ಕೆ ಬಹಳ ಸಮಯ ಹಿಡಿಯಿತು. ಅದು ಪೂರ್ಣವಾಗುವ ಮೊದಲೇ ನ್ಯಾಷನಲಿಸ್ಟಿಕ್ ಮೂವ್ ಮೆಂಟ್ ಗಳು ಶುರುವಾಗಿವೆ. ಅದು ಪೂರ್ಣವಾಗುವ ಮಾತಂತು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಈ ಪ್ರಪಂಚ ವೈವಿಧ್ಯಮಯ. ಅದರಲ್ಲು ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಪ್ರಪಂಚ ಈಗ ಮುಷ್ಠಿಗಾತ್ರಕ್ಕೆ ತಿರುಗಿದೆ.ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಗಳು, ವಾಣಿಜ್ಯ ವಿಚಾರಗಳು,ಜಾಗತಿಕ ಮಾರುಕಟ್ಟೆ , ಪ್ರವಾಸ, ಮಾಹಿತಿ ತಂತ್ರಜ್ಞಾನ ಇವೆಲ್ಲವೂ ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದಿರವ ಈ ಕಾಲದಲ್ಲಿ ಒಂದು ದೇಶದ ಜನರು ಹಲವು ದೇಶಗಳಲ್ಲಿ ಹಂಚಿಹೋಗಿದ್ದಾರೆ. ಇವೆಲ್ಲ ಸಾವಿರಾರು ವರ್ಷಗಳ ಕಾಲ ನಡೆದ ಸಂಘರ್ಷಗಳ, ಪರಿವರ್ತನೆಗಳ ಪರಿಣಾಮವೂ ಹೌದು. ಹಾಗಿರುವಾಗ ಅದನ್ನೆಲ್ಲ ಇಲ್ಲವಾಗಿಸಿ ಏಕತ್ವ ಅಥವಾ ಸ್ವ-ಹಿರಿಮೆಯ ಸಂಕುಚಿತ ಲೋಕಕ್ಕೆ ಹಿಂತಿರುಗಿ ಹೋಗುವ ಪ್ರಯತ್ನ ಅಪಹಾಸ್ಯದ್ದು. ಸ್ವಾರ್ಥಕ್ಕಾಗಿ ದೇಶವನ್ನು ಆಳವಾಗಿ ಒಡೆದು ಒಂದು ಬಣದ ಶ್ರೇಷ್ಠತೆಯನ್ನು ಮಾತ್ರ ಮೆರೆಸಲು ಮಾಡುವ ಪ್ರಯತ್ನ ಅಮೆರಿಕಾದಲ್ಲಾದಂತಹ ಅರಾಜಕತೆಯನ್ನು, ಅಧೀರತೆಯನ್ನು ಸೃಷ್ಠಿಸಬಲ್ಲದು.ಅದನ್ನು ಹೊರಗಿಟ್ಟು ಇಡೀ ದೇಶ ಒಂದು ಎನ್ನುವ ಒಗ್ಗಟ್ಟಿನ ಭಾವಕ್ಕೆ ಪುಷ್ಟಿ ಕೊಟ್ಟು ದೇಶದ ಏಳ್ಗೆಯ ಬಗ್ಗೆ ಯೋಚಿಸುವ ರಾಜಕಾರಣದ ಅಗತ್ಯವಿದೆ.ಪ್ರಪಂಚವೆಂಬ ಮನೆಯಲ್ಲಿ ಮನಸ್ಸನ್ನು ತೆರೆದಿಟ್ಟು ಬದುಕುವಲ್ಲಿನ ವೈವಿಧ್ಯತೆ, ವೈರುದ್ಧ್ಯತೆ, ಸಾಮ್ಯತೆ ಸೃಜನಶೀಲ ಮನಸ್ಸುಗಳ ವಿಕಸನಕ್ಕೆ ಅತ್ಯಗತ್ಯ. ಸ್ವಾರ್ಥದ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಇದ್ದೆ ಇರುತ್ತದೆ. ದೊಡ್ಡ ಪ್ರಜಾ ಪ್ರಭುತ್ವದ ದೇಶಗಳಲ್ಲು ಸಹ. ಅದನ್ನು ಹಿತ ಮಿತವಾಗಿಡುವಲ್ಲಿ ಎಲ್ಲೆಡೆಯ ರಾಜಕೀಯ ಹೋರಾಟಗಳು ಸಮತೋಲನ ಸಾಧಿಸಬೇಕಷ್ಟೆ. ಎಡ-ಬಲಗಳ ತಿಕ್ಕಾಟ ಅಗತ್ಯವಿಲ್ಲದ ಸ್ವಾರ್ಥದ ರಾಜಕೀಯ ಮಾತ್ರ. ದೇಶ ಭಕ್ತಿಯೆನ್ನುವುದು ಎಡ-ಬಲಗಳ ರಾಜಕೀಯ ದಿಂದ ಹೊರತಾದ ವಿಚಾರ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ದೇವರನ್ನು ನಂಬುತ್ತೇನೆ. ನಾಸ್ತಿಕಳೇನಲ್ಲ. ಆದರೆ ಧರ್ಮದ ವಿಚಾರ ಬಂದಾಗ ಸಂಪ್ರದಾಯಸ್ಥಳಲ್ಲ. ಬೇರೆಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಆ ಬಗ್ಗೆ ನಾನು ಸಹಿಷ್ಣು. ದ್ವೇಷವನ್ನು ಬಿತ್ತುವ ನಂಜಿನ ಮಾತುಗಳು ನನಗೆ ಸಹ್ಯವಲ್ಲ.ನನಗೆ ಬೇಕಾದ ರೀತಿಯಲ್ಲಿ ಬದುಕುವ ಹಿಂದೂ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರ ಭಾವ ವೈಶಾಲ್ಯತೆಯ ಬಗ್ಗೆ ಪ್ರೀತಿಯಿದೆ. ಶಾಂತಿಯುತವಾಗಿ ಬದುಕಬೇಕಿದ್ದಲ್ಲಿ ನಾವು ಇತರರ ಬಗ್ಗೆ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.ಹಾಗೆ ಹಿಂದೂ ಧರ್ಮಕ್ಕೆ ’ಅಸಹಿಷ್ಣು’ ಎನ್ನುವ ಹಣೆ ಪಟ್ಟಿಯನ್ನು ಅಂಟಿಸುವ ಕೆಲಸ ನಡೆಯದಿರಲಿ.ಅವರವರ ಧರ್ಮ ಅವರವರಿಗೆ ದೊಡ್ಡದು. ಇನ್ನೊಂದು ಧರ್ಮವನ್ನು ಗೌರವಿಸದ ಎಲ್ಲರೂ ತಪ್ಪಿತಸ್ಥರೇ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಇದು ಜಾಗತಿಕ ಯುಗ. ತೊರೆ-ಹಳ್ಳಗಳು ಹರಿದು ನದಿಯಾಗಿರುವ ಕಾಲ. ಅದರಲ್ಲಿ ರಾಜಕೀಯದ , ಸ್ವಾರ್ಥದ ಕಶ್ಮಲಗಳನ್ನು ಸೇರಿಸದಿದ್ದಲ್ಲಿ ಅದು ಹಲವು ಜೀವಗಳನ್ನು, ಸೃಜನಶೀಲತೆಯನ್ನು ಸಮೃದ್ಧವಾಗಿ ಬೆಳೆಸಬಲ್ಲದು. ಸಾಂಸ್ಕೃತಿಕ ಅರಿವು-ಆಳಗಳು ಹಿಗ್ಗಿಸಬಲ್ಲವು.ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ. ಅದು ತಿಳಿಗೊಳ್ಳಬೇಕು. ಹೃದಯ ವೈಶಾಲ್ಯತೆ ಹೆಚ್ಚಾಗಬೇಕು.ಇವೆಲ್ಲ ಮೊದಲಿಂದಲೂ ಇದ್ದವಾದರೂ ಈಗೀಗ ’ಅತಿ ’ ಎನ್ನುವ ಮಟ್ಟಕ್ಕೆ ಬೆಳೆಯುತ್ತಿದೆ. ಒಳ್ಳೆಯ ವಿಚಾರ ಎಂದರೆ ಇವೆಲ್ಲದರಿಂದ ದೂರವಿರುವ, ಮುಕ್ತರಾಗಿರುವ ಜನರೂ ಇರುವುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಮೇಲಿನ ಮಾತೇ ಅನ್ವಯವಾಗುತ್ತದೆ. ಅದರಲ್ಲೂ ಹೊಸತಿನ ನಿರೀಕ್ಷೆಯಲ್ಲಿ ಸದಾ ತುಡಿಯುವ ಕನ್ನಡ ಸಾಹಿತ್ಯಕ್ಕೆ ದಡ ಕಟ್ಟಬಾರದು. ತಮಗೆ ತಿಳಿದ, ತಮ್ಮೂರಿನ, ತಮ್ಮ ಪ್ರಪಂಚದ ಬಗ್ಗೆ ಬರೆದದ್ದಷ್ಟೆ ಸಾಹಿತ್ಯ ಆಗಬಾರದು. ರಾಜಕೀಯ ಘೋಷಣೆಗಳು ಸಾಹಿತ್ಯಕ್ಕೆ ಅಗತ್ಯವಿಲ್ಲ. ಅರಿವೇ ಇಲ್ಲದೆ ಎಡ-ಬಲ ಎಂದು ಹಣೆಪಟ್ಟಿ ಹೊರುವ ಭಯದಲ್ಲಿ ಹಲವರು ವೈಚಾರಿಕ ಸಾಹಿತ್ಯರಚನೆಯನ್ನು ಮಾಡಲು ಹಿಂಜರಿಯಬೇಕಾದ ಕಾಲ ಘಟ್ಟವಿದು. ಇದು ನಿಜಕ್ಕೂ ವಿಶಾದನೀಯ.ವಿಮರ್ಶಕನೊಬ್ಬ ’ನಮ್ಮೂರಿನ ಬರಹಗಾರ” ಎಂಬ ಮೊಳ ಹಿಡಿದು ಸಾಹಿತ್ಯವನ್ನು ಅಳೆವಾಗ ಅತ್ಯಂತ ಬೇಸರವಾಗುತ್ತದೆ. ಪ್ರಾಂತೀಯತೆಯ ಸೊಗಡು ಸುಂದರವಾದರೂ ಮುಖ್ಯವಾಹಿನಿಯಲ್ಲಿ ಸೇರಿದಾಗ ಬರಹಗಳನ್ನು ಅವುಗಳ ತಂತ್ರ, ಸರಾಗತೆ, ವೈಚಾರಿಕತೆ, ಭಿನ್ನತೆ, ಪ್ರಾಮಾಣಿಕತೆ, ಕುಶಲತೆ, ನವಿರು, ಸೂಕ್ಷ್ಮತೆ ಮತ್ತು ಹೊಸತನ ಇನ್ನೂ ಮುಂತಾದ ಅಳತೆಗೋಲಿನಿಂದ ಅಳೆಯುವುದು ಸಾಹಿತ್ಯದ ಬೆಳವಣಿಗೆಗೆ ಅಗತ್ಯವೆನಿಸುತ್ತದೆ.ನಿಜವಾದ ವಿಮರ್ಶಾ ಸಾಹಿತ್ಯವೂ ವಿರಮಿಸಿ ಕುಳಿತಿರುವ ಕಾಲವಿದು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಾನು ಅನಿವಾಸಿ ಭಾರತೀಯಳಾದ ಕಾರಣ, ಭಾರತದ ಚಲನೆಯನ್ನು ಅದರದ್ದೇ ಆದ ಚೌಕಟ್ಟಿನಿಂದ ಹೊರಗೆ ನಿಂತು ನೋಡಬಲ್ಲೆ.ಭಾತರ ಎಂತಹ ಅಗಾಧ ಮತ್ತು ಹೇಗೆ ಇತರೆ ದೇಶಗಳಿಗಿಂತ ಭಿನ್ನ ಎಂಬುದನ್ನು ಕಾಣಬಲ್ಲೆ.ತನ್ನದೇ ಸುಳಿಗಳ ಸೆಳೆತಕ್ಕೆ ಸಿಲುಕಿ ಚಲಿಸುವ ದೇಶ ನಮ್ಮದು. ಅದರ ಶಕ್ತಿ ಅಗಾಧವಾದ್ದು. ಹಿಂದೂಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಏಕೈಕ ದೇಶವಾಗಿ ಭಾರತ ನೂರಾರು ಭಾಷೆ, ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡು ಸದಾ ಚೈತನ್ಯಮಯಿಯಾಗಿ ಮಿಡಿಯುವಂತದ್ದು. ಅಪಾರವಾದ ಜನಶಕ್ತಿಯನ್ನು ಪಡೆದ ಶಕ್ತಿಶಾಲಿ ದೇಶವಿದು. ಪ್ರತಿಭೆಗಂತೂ ಇಲ್ಲಿ ಕೊರತೆಯೇ ಇಲ್ಲ.ಆದರೆ ವ್ಯವಸ್ಥೆಗಳು ಒಟ್ಟಾಗಿ ದುಡಿಯಲು ಹೆಣಗುತ್ತವೆ. ಅತಿಯಾದ ಧಾರ್ಮಿಕತೆ ನಮ್ಮ ದೇಶದ ಅತ್ಯಂತ ದೊಡ್ಡ ತೊಡಕಾಗಿದೆ. ಅದರಿಂದ ಹೊರತಾಗಿ ಜಗತ್ತನ್ನು ನೋಡಲು ಬಹಳ ಜನರು ಅಶಕ್ತರಾಗುತ್ತಾರೆ. ಕಾನೂನು, ಪೋಲೀಸರು ಮತ್ತು ಭದ್ರತೆ ಇವು ಜನಸಾಮಾನ್ಯರ ಪರವಾಗಿ ಕೆಲಸಮಾಡಬೇಕಾಗಿರುವ ಅತ್ಯಂತ ಮುಖ್ಯ ವಿಚಾರಗಳು. ಅವುಗಳನ್ನು ಭದ್ರಪಡಿಸುವ,ಎಲ್ಲರಿಗೂ ಸಮಾನ ಸವಲತ್ತನ್ನು ನೀಡಬಲ್ಲ ರಾಜಕಾರಣ ಅತ್ಯಂತ ಮುಖ್ಯ.ಇಂತಹ ದೊಡ್ಡ ದೇಶ ಸಾಧ್ಯವಾದಷ್ಟು ಒಟ್ಟಾಗಿ ತುಡಿಯಬೇಕೆಂದರೆ ಒಗ್ಗಟ್ಟಿನ ಮಂತ್ರ ಪಠಣೆ ಅತ್ಯಂತ ಮುಖ್ಯ. ಒಡಕಿನ ಮಾತುಗಳು ಈ ದೇಶದ ಚಲನೆಗೆ ಮಾರಕ. ಕಾಲಚಕ್ರದ ಹೊಡೆತಕ್ಕೆ ಸಿಕ್ಕ ಭಾರತ ನಗರ ಪ್ರದೇಶಗಳಲ್ಲಿ ಬಹಳ ಬದಲಾಗುತ್ತ ನಡೆಯುತ್ತಿದೆ ಎನ್ನುವುದು ಕೂಡ ಸುಳ್ಳಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯ ನನ್ನ ಅಂದಂದಿನ ತೃಪ್ತಿ.ಇನ್ನೂ ಬರೆಯಬೇಕನ್ನುವ ಹಂಬಲವಿದೆ. ಅದಕ್ಕಿಂತ ಹೆಚ್ಚೇನು ಕನಸೇನಿಲ್ಲ.ಸವಾಲುಗಳಿಗೆ ತೆರೆದುಕೊಂಡು ಸೃಜನಶೀಲವಾದದ್ದೇನನ್ನೋ ರಚಿಸಬೇಕೆನ್ನುವ ತುಡಿತ ಇರುವವರೆಗೆ ಸಾಹಿತ್ಯ ರಚನೆ ನಡೆಯುತ್ತಿರುತ್ತದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ನಾನು ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವಳಲ್ಲ.ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ವಶೀಲಿಯಂತೂ
ಅಂಕಣ ಬರಹ ಜೀವ ಜಂತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಥೆ ಹುಟ್ಟುತ್ತದೆ “ ಸುರೇಶ್ ಹೆಗಡೆ ಪರಿಚಯ: ಸುರೇಶ್ ಹೆಗಡೆ ಹೊನ್ನಾವರದ ಕರ್ಕಿ ಗ್ರಾಮದವರು .1952 ಜನನ. ಇವರ ತಂದೆ ಚಂದ್ರ ಮಾಸ್ತರ ಇವರ ಗುರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನದ ವಿಷಯದಲ್ಲಿ ಪದವಿ ಪಡೆದರು. 1973 ರಲ್ಲಿ ಕರ್ನಾಟಕ ವಿದ್ಯುತ್ ನಿಗಮದಲ್ಲಿ 38 ವರ್ಷ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ಕತೆ ಬರೆಯುತ್ತಿದ್ದ ಇವರು ,ಅವುಗಳನ್ನು ಪ್ರಕಟಿಸಿದ್ದು, ನಿವೃತ್ತಿ ನಂತರ. 2020 ರಲ್ಲಿ ಇವರ ಮೊದಲ ಕಥಾ ಸಂಕಲನ ಇನಾಸ ಮಾಮನ ಟಪಾಲು ಚೀಲ ಪ್ರಕಟವಾಯಿತು. ಇದೇ ಹೆಸರಿನ ಕತೆ ಸಹ ತುಂಬಾ ಸೂಕ್ಷ್ಮ, ಸರಳವಾಗಿದೆ. ಚಿಕ್ಕಂದಿನಿಂದ ಯೌವ್ವನ ಕಾಲದ ಓದು ಇವರನ್ನು ಮಾಗಿಸಿದೆ. ಸುಧಾ ಮಯೂರ ಗಳಲ್ಲಿ ಬರೆಯುತ್ತಿದ್ದ ಇವರು , ನಾಟಕ ಅಭಿನಯದ ಹವ್ಯಾಸ ಸಹ ಹೊಂದಿದ್ದಾರೆ. ಆಕಾಶವಾಣಿಯಲ್ಲಿ ಸಹ ಭಾಗವಹಿಸುವಿಕೆ ಇದೆ. ನೆನಪುಗಳನ್ನು ಹೆಕ್ಕಿ ಬರೆಯುವ ಜಾಣತನ ಇವರಿಗೆ ಸಿದ್ಧಿಸಿದೆ. ಮಾನವೀಯ ಗುಣದ ಸುರೇಶ್ ಹೆಗಡೆ ಅವರು ಜಾತಿಯನ್ನು ಮೀರಿದ ಮನುಷ್ಯತ್ವ ಹೊಂದಿದವರು ಎಂಬುದು ಮುಖ್ಯ. ………… ೧) ಕತೆಗಳನ್ನು ಯಾಕೆ ಬರೆಯುತ್ತೀರಿ? ಮುಖ್ಯವಾಗಿ ನಾನು ಕತೆಗಳನ್ನು ಬರೆಯುವುದು ನನ್ನೊಳಗಣ ತುಡಿತಕ್ಕಾಗಿ (urges) ಯಾವುದಾದರೂ ಗಳಿಗೆಯಲ್ಲಿ ಹೊಸ ವಿಚಾರ ಹೊಳೆದಾಗ, ನನ್ನೊಳಗಣ ಹುಕಿ ಎಬ್ಬಿಸಿ ಕಥಾ ಹಂದರಕ್ಕೆ ಸಜ್ಜುಗೊಳಿಸುತ್ತದೆ. ೨) ಕತೆ ಹುಟ್ಟುವ ಕ್ಷಣ ಯಾವುದು? ಯಾವುದಾರೂ ಪುಸ್ತಕ ಓದುವಾಗ, ಹಿರಿಯರ ಜೊತೆ ಮಾತನಾಡುವಾಗ, ಸಮಾನ ಮನಸ್ಕರೊಂದಿಗೆ ಹರಟೆಗೆ ಇಳಿದಾಗ, ಪ್ರಕೃತಿಯ ವಿಕೃತಿಯನ್ನು ಗಮನಿಸಿದ ಕ್ಷಣಗಳಲ್ಲಿ ನನ್ನ ಕತೆಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರು ಘಟನೆಗಳು ನನ್ನ ಭಾವನೆಗಳನ್ನ ತಟ್ಟಿದಾಗಲೂ ಭಾವನಾತ್ಮಕ ಕಥೆಗಳು ಹುಟ್ಟುತ್ತವೆ. ನಮ್ಮ ಸುತ್ತಣ ಪರಿಸರದಲ್ಲಿ ಒಂದಿಷ್ಟು ಜೀವ ಜಂತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೊಂದು ಸುಂದರ ಕಥೆ ಮೂರ್ತಗೊಳ್ಳುತ್ತದೆ. ೩) ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಜೀವನಾನುಭವದಿಂದ ಮೊಗೆದ ಘಟನೆಗಳು ಮತ್ತು ಅನುಭವಿಸುತ್ತಿರುವ ಪರಿಸರಗಳೇ ನನ್ನ ಕತೆಗಳ ವ್ಯಾಪ್ತಿ. ಬಾಲ್ಯದಲ್ಲಿ ನಾನು ಕಂಡ ಬಡತನ, ಮನೆತನ, ಗಳೆತನಗಳ ಮೆಲಕು, ಕಥೆಗಳಿಗೆ ಪುಷ್ಠಿ ಕೊಡುತ್ತವೆ. ಬರೆಯಬಹುದಾಗಿದ್ದರೂ, ನಾನು ಈ ಮೊದಲೇಕೆ ಸುಮ್ಮನೆ ಕುಳಿತುಬಿಟ್ಟೆ ಎಂಬುದು ನನ್ನನ್ನು ಪದೇ ಪದೇ ಕಾಡುತ್ತದೆ. ೪) ಕತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯಾ? ಹೌದು, ನನ್ನ ಕತೆಯ ಹರಿಹದಲ್ಲಿ ಎಲ್ಲಾ ಅವಸ್ಥೆಗಳೂ ಇವೆ. ಅವೇ ಕಥಾ ಪ್ರಸಂಗದ ಮೂಲ ವಸ್ತು. ೫) ಪ್ರಸ್ತುತ ರಾಜಕೀಯ ಸನ್ನಿವೇಷದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಇಂದಿನ ರಾಜಕೀಯ ಎನ್ನುವುದೊಂದು ಡೊಂಬರಾಟ. ಸಾಹಿತ್ಯ ಮತ್ತು ರಾಜಕೀಯ ಪರಸ್ಪರ ವಿರೋಧಾಭಾಸದ ಪದಗಳು. ಸಾಹಿತಿಯಾದವನು ರಾಜಕೀಯ ಪಲ್ಲಟಗಳಿಗೆ ತಲೆ ಹಾಕಬಾರದು. ಆದರೆ ರಾಜಕೀಯ ಸ್ಥಿತ್ಯಂತರಗಳು ಸಾಹಿತಿಯ ಬರಹಕ್ಕೆ ಗ್ರಾಸವಾಗಬಹುದು. ರಾಜಕೀಯ ವಿಡಂಬನೆಗಳಿಂದ ಸಾಹಿತಿಯೊಬ್ಬ ಪ್ರಜೆಗಳ ಕಣ್ಣು ತೆರೆಸಬಲ್ಲ. ೬) ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿ ಮನುಷ್ಯನಿಗೂ ಒಂದು ಧರ್ಮಬೇಕು. ಅದು ಅವನ ಅಸ್ಮಿತೆಯ ಅಷ್ಟಬಂಧ. ಆ ಧರ್ಮವನ್ನು ಗೌರವಿಸಿ ಪಾಲಿಸಿದರೆ, ಅದೇ ಧರ್ಮ ಅವನನ್ನು ರಕ್ಷಿಸುತ್ತದೆ. ದೇವರು ಎನ್ನುವುದೊಂದು ನಿರಾಕಾರ, ಆಗೋಚರ ಶಕ್ತಿ. ಅದು ಇಡೀ ವಿಶ್ವವನ್ನ ನಿಯಂತ್ರಿಸುವ ಮಹಾಕಾಯ. ಅದನ್ನೇ ಮನುಷ್ಯ, ವಿವಿಧ ಬಣ್ಣ, ಆಕಾರ, ಹೆಸರು ಕೊಟ್ಟು ಭಾವನೆಯಿಂದ ಪೂಜಿಸುತ್ತಾನೆ. ದೇವರ ಮೇಲನ ಭಯ, ಭಕ್ತಿಯಿಂದಲೇ ಮನುಷ್ಯ ಇಂದು ಇನ್ನೂ ಪೂರ್ಣ ಹದ ತಪ್ಪಿಲ್ಲ. ೭) ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಬಗ್ಗೆ ನಿಮಗೆ ಏನೆನ್ನಿಸುತ್ತದೆ? ನನಗನ್ನಿಸಿದಂತೆ ಸಂಸ್ಕೃತಿ ಕಲುಷಿತಗೊಂಡಿದೆ. ವಿತಂಡವಾದ, ಅವಹೇಳನ, ‘ಇಸಂ’ಗಳಿಗೆ ಮನುಷ್ಯ ಕಟ್ಟು ಬಿದ್ದಿದ್ದಾನೆ. ಇವುಗಳಿಂದ ಹೊರಬಂದು, ನಮ್ಮ ಪರಂಪರೆಯನ್ನು ಅರ್ಥಮಾಡಿಕೊಂಡರೆ ನಮ್ಮ ಅದೇ ಸುಸಂಸ್ಕೃತಿ ಉಳಿದುಕೊಳ್ಳುತ್ತದೆ. ೮) ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಯಿಸುವಿರಿ? ಇದೊಂದು ದೊಡ್ಡ ‘ಲಾಬಿ’ ಎಂದೇ ಹೇಳಬೇಕು. ಎಡ, ಬಲ, ಜಾತಿ, ಕುಲ, ಪರಿವಾರ ಎನ್ನುತ್ತ, ಬಿರುದು ಬಾವಲಿ, ಪ್ರಶಸ್ತಿಗಳ ಬೆನ್ನುಹತ್ತಿ ರಾಜಕಾರಣ ಮಾಡಿ ಅಲ್ಲೊಂದು ಮೌಲಿಕ ಅದಃ ಪತನವಾಗುತ್ತಿದೆ. ಇದೊಂದು ದುರಂತ. ಈ ಸ್ಥಿತಿಯಲ್ಲಿ ಯಾವುದೇ ಬಲವಿಲ್ಲದ ಶಾಸ್ತ್ರೀಯ ಸಾಹಿತಿಗಳು ಎಲೆ ಮರೆಯ ಕಾಯಿಗಳಾಗೇ ಉಳಿದು ನೇಪಥ್ಯಕ್ಕೆ ಸರಿಯುತ್ತಾರೆ. ರಾಜಕಾರಣ ಸಾಹಿತ್ಯದಲ್ಲಿ ನುಸುಳದಿದ್ದರೆ, ಸಾಹಿತ್ಯಕ್ಕೆ ‘ಕಸು’ ಬರುತ್ತದೆ. ೯) ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ? ಈ ದೇಶವನ್ನು ಆಳಲು ಉದಾತ್ತ ಮನಸ್ಸಿನ ಒಂದೇ ಪಕ್ಷವಿರಬೇಕು. ನಾಯಕನ ನಿರ್ಣಯಕ್ಕೆ ಎಲ್ಲರ ಸಹಮತವಿರಬೇಕು. ದೇಶಕ್ಕೆ ಭವ್ಯ ಪರಂಪರೆ ಇದೆ. ಸುಭಿಕ್ಷವಾದ ರಾಮರಾಜ್ಯ ಕಂಡ ಖಂಡ ಇದು, ಬುದ್ದ, ಬಸವ, ಗಾಂಧಿ, ಅಶೋಕರ ನಾಡಿದು. ಇತಿಹಾಸ ಮರುಕಳಿಸಿ ನಮ್ಮ ದೇಶ ವೈಭವದಿಂದ ಮೆರೆಯುವದು ಮತ್ತೆ. ೧೦) ಸಾಹಿತ್ಯದ ಬಗ್ಗೆ ನಿಮ್ಮ ಕನಸೇನು? ಸಾಹಿತ್ಯದ ಕ್ಷೇತ್ರ ಸಾಗರದಂತೆ ವಿಶಾಲವಾಗಿದೆ. ಮೊಗೆದಷ್ಟೂ ಮತ್ತೆ ಸೊರೆಯುವ ಗಂಗೆ ಅದು. ಶತಮಾನಗಳಿಂದ ಅಭಿವೃದ್ಧಿಗೊಳಿಸಿಟ್ಟ ಸಾಹಿತ್ಯ ಪರಂಪರೆಯನ್ನು ಮುಕ್ಕಾಗದಂತೆ ಕಾಪಿಟ್ಟು, ಗಟ್ಟಿತನ ಕಳೆದು ಹೋಗದಂತೆ ಕಾಯಬೇಕು. ಸಾಹಿತ್ಯದಲ್ಲಿ ಮುಕ್ತ ಮನಸ್ಸು ಮತ್ತು ವಿಶಾಲ ಭಾವನೆ ಇರಬೇಕು. ಅದೇ ನನ್ನ ಕನಸು. ೧೧) ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಸಾಹಿತಿ ಯಶವಂತ ಚಿತ್ತಾಲರು. ಇಷ್ಟವಾದ ಕವಿ- ಕೆ.ಎಸ್. ನರಸಿಂಹಸ್ವಾಮಿ. ಕೆ.ಎಸ್.ನ.ರ. ಮೈಸೂರ ಮಲ್ಲಿಗೆಯ ಘಮ ನನ್ನನ್ನು ಪದೇ ಪದೇ ಆವರಿಸಿಕೊಂಡು ಕಾಡುತ್ತದೆ. ಆಂಗ್ಲ ಸಾಹಿತ್ಯದಲ್ಲಿ ಇಷ್ಟವಾದ ಸಾಹಿತಿ – ಪೌಲೋ ಕೋಹಿಲೋ ಇಷ್ಟವಾದ ಕವಿ- ಜಾನ್ ಮಿಲ್ಟನ್, ಹದಿನೇಳನೇ ಶತಮಾನದ ಇಂಗ್ಲಿಷ್ ಕವಿಯ ಕ್ಲಿಷ್ಟ ಮಹಾಕಾವ್ಯ ‘ಪ್ಯಾರಾಡೈಸ್ ಲಾಸ್ಟ’ ಓದಿದಷ್ಟು ಹೊಸ ತತ್ವಕ್ಕೆ ಒಯ್ದು ಕಾಡುತ್ತದೆ. ಅದೊಂದು ವಿಭಿನ್ನ ಓದು. ೧೨) ಈಚೆಗೆ ಓದಿದ ಕೃತಿಗಳಾವವು? ಕಶೀರಾ- ಸಹನಾ ವಿಜಯಕುಮಾರ ೧೩) ನಿಮಗೆ ಇಷ್ಟವಾದ ಕೆಲಸವಾವುದು? ಓದು, ಬರಹ, ಹರಟೆ, ರುಚಿ ರುಚಿ ಅಡಿಗೆ ಮಾಡಿ ತಿನ್ನುವುದು, ತಿನಿಸುವುದು. ಹೂದೋಟ ಪಾಲನೆ. ೧೪) ನಿಮಗೆ ಇಷ್ಟವಾದ ಸ್ಥಳ ಯಾವುದು? ಮುಂಬಯಿ- ಅದೊಂದು ಬದುಕಲು ಕಲಿಸುವ ಪ್ರಕೃತಿ ಶಾಲೆ. ೧೫) ನಿಮ್ಮ ಪ್ರೀತಿಯ ತುಂಬಾ ಇಷ್ಟದ ಸಿನಿಮಾ ಯಾವುದು? ನಾನು ಇಷ್ಟ ಪಟ್ಟಿದ್ದು ಹಳೆಯ ಹಿಂದಿ ಚಿತ್ರ ‘ಸದ್ಮಾ’ – ಶ್ರೀದೇವಿ, ಕಮಲಹಾಸನ ೧೬) ನೀವು ಮರೆಯಲಾರದ ಘಟನೆ ಯಾವುದು ? ವಯಸ್ಸಾದ ಅಪ್ಪ, ನಮ್ಮಿಬ್ಬರನ್ನು ಆಟೋದಲ್ಲಿ ಕೂಡ್ರಿಸಿ, ತಾನು ಮಳೆಯಲ್ಲಿ ನಮ್ಮ ಹಿಂದಿನಿಂದ ಸೈಕಲ್ಲಿನಲ್ಲಿ ಟಾಕೀಸಿಗೆ ಬಂದಿದ್ದು. ೧೭) ಏನಾದರೂ ಹೇಳುವುದಿದೆಯಾ? ಹೌದು ನಾನು ಕಂಡ ಸತ್ಯದ ಮಾತು- ಜೀವನೋತ್ಸಾಹಕ್ಕೆ ವಯದ ಹಂಗಿಲ್ಲ. ನಾನು ಒಂದಿಷ್ಟು ಓದು ಬರಹದ ಜೊತೆಗೆ ಬೆಳೆಸಿಕೊಂಡ ಹವ್ಯಾಸ ಹೂದೋಟ ಪಾಲನೆ. ನನ್ನ ತಾರಸಿ ತೋಟ ಹಸಿರಿನಿಂದ ಕಂಗೊಳಿಸಿದೆ. ಹೂ ಸಸ್ಯಗಳ ಜೊತೆ ಫಲ ಬಿಡುವ ಗಿಡಗಳೂ ಇವೆ. ಲಿಂಬು, ಮಾವು, ದಾಳಿಂಬೆ, ಅಂಜೂರ ಇತ್ಯಾದಿ. ನಿತ್ಯವೂ ಕೆಲಹೊತ್ತು ನೀರು ಗೊಬ್ಬರ ಉಣಿಸುವ ನಡುವೆ ಸಸ್ಯ ಗಳ ಜೊತೆ ನನ್ನ ಮೌನ ಸಂವಾದ ನಡೆದಿರುತ್ತದೆ. ಸಸ್ಯಗಳು ಬಿಡುವ ಮೊಗ್ಗು, ಹೂ, ಹೀಚು, ಕಾಯಿ, ಹಣ್ಣಿನ ಪ್ರತಿ ಅವಸ್ಥೆಯಲ್ಲೂ ನನ್ನ ಖುಷಿಯ ಸಂವೇದನೆಗೆ ಅವು ಸ್ಪಂದಿಸುತ್ತವೆ. ಈ ಮುದುಕ ಸೇವೆ ಮಾಡುತ್ತಿದ್ದಾನೆಂಬ ಅನುಕಂಪಕ್ಕೆ ಇರಬೇಕು, ನನ್ನ ಮಾವಿನ ಗಿಡ ವರ್ಷಕ್ಕೆ ಎರಡು ಬಾರಿ ಕಾಯಿ ಬಿಡುತ್ತದೆ. ಹುಬ್ಬಳ್ಳಿಯ ತಮಿಳು ನರ್ಸರಿಯವನೇನೋ “ಇದು ಒಳ್ಳೆಯ ಜಾತಿ ಮಾವು” ಎಂದೇ ಕಸಿ ಗಿಡ ಕೊಟ್ಟಿದ್ದ. ಆದರೆ ನನ್ನ ದುರಾದೃಷ್ಟಕ್ಕೆ ಅದು ಬಿಡುತ್ತಿರುವುದು ಹುಳಿಮಾವು. ಹುಟ್ಟಿದ ಮಗ ಕಪ್ಪೆಂದು ಎಂದಾದರೂ ಎಸೆದು ಬಿಡುತ್ತಾರೆಯೇ? ಜೀರಿಗೆ ವಾಸನೆ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ಸ್ವಾಧಿಷ್ಟ.! ಹೀಗಾಗಿ ಆ ಗಿಡ ನನಗಿಷ್ಟ. *********************************************************** ನಾಗರಾಜ ಹರಪನಹಳ್ಳಿ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ದೀಪ್ತಿ ಭದ್ರಾವತಿ ಪರಿಚಯ: ದೀಪ್ತಿ ಭದ್ರಾವತಿ ಕನ್ನಡದ ಕತೆಗಾರ್ತಿ. ಮೂಲತಃ ದಕ್ಷಿಣ ಕನ್ನಡದವರಾದರು, ದೀಪ್ತಿ ನೆಲೆ ನಿಂತದ್ದು ಭದ್ರಾವತಿಯಲ್ಲಿ. ಆರೋಗ್ಯ ಇಲಾಖೆಯಲ್ಲಿ ನೌಕರಿ. ಕವಿತೆ ಬರೆಯುತ್ತಿದ್ದ ದೀಪ್ತಿ ಆರಂಭದಲ್ಲಿ ಕಾಗದದ ಕುದುರೆ, ಗ್ರೀನ್ ರೂಂನಲ್ಲಿ ಎಂಬ ಎರಡು ಕವಿತಾ ಸಂಕಲನ ಪ್ರಕಟಿಸಿದರು. ಆ ಬದಿಯ ಹೂ, ಗೀರು ಇವರ ಕಥಾ ಸಂಕಲನಗಳು. ಆ ಬದಿಯ ಹೂ ಸಂಕಲನಕ್ಕೆಕತೆಗಳಿಗೆ ಮಾಸ್ತಿ ಕಥಾ ಪ್ರಶಸ್ತಿ ಪಡೆದವರು, ಗೀರು ಕಥಾ ಸಂಕಲನಕ್ಕೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತನ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸಹ ಈಚಿಗೆ ದಕ್ಕಿದೆ.ಬಸವರಾಜ ಕಟ್ಟೀಮನಿ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪ್ರಶಸ್ತಿ , ದೇವಾಂಗನ ಶಾಸ್ತ್ರಿ ಪ್ರಶಸ್ತಿ ಸಹ ಇವರಿಗೆ ಒಲಿದಿವೆ ರಂಗಭೂಮಿ ಸಹ ಇವರ ಆಸಕ್ತಿ. ಕಲಾವಿದೆ. ಜೀವಪರ ಮನಸ್ಸುಳ್ಳವರು.ಕಷ್ಟಕ್ಕೆ ಮುಖಕೊಟ್ಟು ಮಾತಾಡಿಸುವವರು. ಬಡತನ ಮತ್ತು ಅಸಹಾಯಕತೆಯ ಜೊತೆ ಕುಳಿತು ಮಾತಾಡುವ ತಾಳ್ಮೆ ಕಾರಣ ಕತೆ ಬರೆದ ದೀಪ್ತಿ, ಬದುಕಿನ ವಿಶಾಲತೆಯ ಹುಡುಕಿ ಹೊರಟ ಕತೆಗಾರ್ತಿ. ನಿರ್ಲಕ್ಷ್ಯ ಎಂಬುದರ ಕಡೆಗೆ ತುಡಿದು ಅದನ್ನು ಅಕ್ಷರಗಳಲ್ಲಿ ಹಿಡಿದವರು. ಸೂಕ್ಷ್ಮ ಗ್ರಹಿಕೆ ಇವರ ಕತೆಗಳ ಜೀವಾಳ.…………….. ಸಂದರ್ಶನ ಕತೆ -ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕತೆ ಕವಿತೆ ಬರೆಯುವುದು ನನಗೆ ಬಿಡುಗಡೆಯಂತೆ ಕಾಣಿಸುತ್ತದೆ. ಆ ಕ್ಷಣಗಳಲ್ಲಿ ನಾನು ನಾನಾಗಿರುತ್ತೇನೆ. ಕವಿತೆ ಕತೆ ಹುಟ್ಟುವ ಕ್ಷಣ ಯಾವುದು ? ಇಂತದ್ದೇ ಎನ್ನುವ ಕ್ಷಣ ಇರುವುದಿಲ್ಲ. ಅದು ಯಾವಾಗ ಬೇಕಿದ್ದರೂ ನಮ್ಮೊಳಗೆ ಬಂದು ಕೂತು ಬಿಡುತ್ತದೆ. ಒಂದು ನಿರ್ದಿಷ್ಟ ಕಾಲದಲ್ಲಿ ಬರೆಸಿಕೊಳ್ಳುತ್ತದೆ. ನಿಮ ಕತೆ ಕವಿತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಯಾವುದಕ್ಕು ಸೀಮಿತಗೊಂಡಿಲ್ಲ. ಆದರೂ ನನಗೆ ನೋವು, ಬಡತನ, ಸ್ತ್ರೀಯರ ಸಮಸ್ಯೆಗಳು ಹೆಚ್ಚು ಕಾಣಿಸುತ್ತದೆ. ಮಾನವೀಯ ನೆಲಗಟ್ಟುಗಳು ಮುಖ್ಯ ಎನ್ನಿಸುತ್ತವೆ. ನೀವು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದೆಯೇ ? ಹೌದು. ಆಸ್ಪತ್ರೆ ಎನ್ನುವುದು ಸಂತನ ಹಾಗೆ ನನಗೆ ಕಾಣಿಸುತ್ತದೆ. ಇಲ್ಲಿ ಹುಟ್ಟು ಮತ್ತು ಸಾವು ಎರಡೂ ಮುಖಾಮುಖಿಯಾಗುತ್ತಲೆ ಇರುತ್ತದೆ. ನನಗೆ ವಿನಯತೆ, ಮನುಷ್ಯತ್ವ ಮತ್ತು ಮನುಷ್ಯರನ್ನು ನಿಷ್ಕಾರಣವಾಗಿ ಪ್ರೀತಿಸುವುದನ್ನು, ಬದುಕಿನ ಮತ್ತೊಂದು ಮಗ್ಗಲನ್ನು ಅರಿವುದಕ್ಕೆ ಮತ್ತು ನಿರ್ಲಿಪ್ತವಾಗಿ ಎಲ್ಲವನ್ನು ನೊಡುವುದು ಸಾಧ್ಯವಾಗಿರುವುದು ನನ್ನ ವೃತ್ತಿಯಿಂದಲೆ. ವೃತ್ತಿ ಮತ್ತು ಸೃಜನಶೀಲತೆ ಹಾಗೂ ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು ? ಹೇಗೆ ನಿಭಾಯಿಸುವಿರಿ? ನನಗಿದು ಸವಾಲಿನದ್ದೆ. ಆದರೆ ಅನಿವಾರ್ಯ. ಎಷ್ಟೋ ಖಾಸಗಿ ಕಾರ್ಯಕ್ರಮವನ್ನು, ಸಾಹಿತ್ಯದ ಚಟುವಟಿಕೆಗಳನ್ನು ತಪ್ಪಿಸಿಕೊಂಡಿದ್ದೇನೆ. “ಎಲ್ಲೂ ಬರಲ್ಲ” ಎನ್ನುವ ದೂರನ್ನು ಕೇಳಿಸಿಕೊಂಡಿದ್ದೇನೆ. ಕೋವಿಡ್ನ ಕಾರಣಕ್ಕೆ ಕಳೆದ ಒಂಭತ್ತು ತಿಂಗಳಿಂದ ಹೆಚ್ಚು ಓದಿಲ್ಲ ಬರೆದಿಲ್ಲ. ಹೇಗೆಲ್ಲ ಸಮಯ ಸಿಗುತ್ತದೆಯೋ ಹಾಗೆ ಹೊಂದಿಸಿಕೊಳ್ಳುವ ಯತ್ನದಲ್ಲಿರುತ್ತೇನೆ. ನಿಮ್ಮ ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ? ಇಲ್ಲ. ನಾನು ಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುವುದಿಲ್ಲ. ಕತೆ ಹೇಗೆ ತನ್ನ ದಾರಿಯನ್ನು ಹುಡುಕಿಕೊಳ್ಳುತ್ತದೆಯೋ ಅದನ್ನು ಕುತೂಹಲದಿಂದ ಗಮನಿಸುತ್ತೇನೆ. ಪಾತ್ರಗಳ ಆಯ್ಕೆಯೂ ಹಾಗೆಯೇ ಕತೆಗೆ ತಕ್ಕಂತಹ ಪಾತ್ರಗಳು ಅವಾಗಿಯೇ ರೂಪುಗೊಳ್ಳುತ್ತವೆ. ಕೆಲವೊಂದು ಕತೆ ಬರೆದಾಗ ಈ ಕತೆ ನನ್ನೊಳಗೆ ಎಲ್ಲಿತ್ತು ಅಂತ ಅಚ್ಚರಿ ಪಟ್ಟಿದ್ದೇನೆ. ಕನ್ನಡ ವಿಮರ್ಶಾಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ ? ನನ್ನ ಮೊದಲ ಕಥಾ ಸಂಕಲನ ಬಂದಾಗ ಅಂತಹ ಯಾವ ಗುರುತಿಸುವಿಕೆಯೂ ಸಿಗಲಿಲ್ಲ. ಆದರೆ ಓದಿದ ಎಲ್ಲರೂ ಹಿರಿಯರನ್ನು ಸೇರಿದಂತೆ ಒಳ್ಳೆಯ ಮಾತಾಡಿದ್ದರು. ಎರಡನೇ ಸಂಕಲನಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂತು. ಬಹಳಷ್ಟು ಜನ ಇಲ್ಲಿನ ಕತೆಗಳ ಬಗ್ಗೆ ಮಾತಾಡಿದ್ರು. ಬರೆದ್ರು. ಅದು ಖುಷಿ ಕೊಟ್ಟಿದೆ. ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸಮಸ್ಯೆ, ಸವಾಲುಗಳೇನು ? ನಾನೊಬ್ಬಳೆ ಅಲ್ಲ, ಬಹುತೇಕ ಎಲ್ಲಾ ಬರಹಗಾರ್ತಿಯರ ಸಮಸ್ಯೆಯೂ ಕೂಡ ಇದೆ ಆಗಿರುತ್ತದೆ. ಬರಹದೊಳಗೆ ಬರಹಗಾರ್ತಿಯರನ್ನೆ ಹುಡುಕುವ ಮನಸ್ಥಿತಿಯೊಂದು ಬೆಳೆದು ಬಂದಿದೆ. ಪುರುಷರ ಬರವಣಿಗೆ ಲೋಕಕ್ಕೆ ಸಂಬಂಧಿಸಿದ್ದು ಮಹಿಳೆಯರು ಬರೆದರೆ, ಅದು ಸ್ವಂತದ್ದು ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಆ ಎಚ್ಚರದಲ್ಲಿಯೇ ಬರೆಯಬೇಕಾಗುತ್ತದೆ. ಮನೆ, ಸಂಸಾರ ಸಮಾಜದ ಚೌಕಟ್ಟುಗಳು ಒಮ್ಮೊಮ್ಮೆ ಹೇಳಬೇಕಾದದ್ದು ಹೇಳುವಲ್ಲಿ ತಡೆಯುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಹೀಗಾಗಿ ಹೇಳಬೇಕಾದ್ದು ಕೆಲವೊಮ್ಮೆ ಉಳಿದು ಬಿಡುವ ಸಾಧ್ಯತೆಗಳು ಹೆಚ್ಚು. ನನ್ನ ಮೊದಲ ಕಥಾ ಸಂಕಲನ ಬಂದಾಗ ಅದರಲ್ಲಿ ಸ್ತ್ರೀ ಕೇಂದ್ರಿತ ಕತೆಗಳು ಇರಲಿಲ್ಲ. ಕವನ ಸಂಕಲನದಲ್ಲಿಯೂ ಕೂಡ . ಆಗ ಕೆಲವೊಬ್ಬರು ನೀವು ಮಹಿಳೆಯಾಗಿ ಮಹಿಳೆಯರ ನೋವು ಬರೆಯಲ್ವಾ ಎಂದಿದ್ದರು. ನೀವು ಈ ರೀತಿ ಯಾರದ್ದೋ ಕತೆಯನ್ನು ಹೇಳಿದ್ರೆ ಅದರಲ್ಲಿ ಪ್ರಾಮಾಣಿಕತೆ ಎಲ್ಲಿರತ್ತೆ ಎಂದಿದ್ರು. ಮಹಿಳೆ ವೈಯಕ್ತಿಕ ನೋವು, ದಾಂಪತ್ಯ, ಲೈಂಗಿಕತೆಯ ಬಗ್ಗೆ ಬರೆದರೆ ಮಾತ್ರ ಅದು ಪ್ರಾಮಾಣಿಕ ಬರಹ ಅಂದುಕೊಳ್ಳುವುದು ತಪ್ಪು. ಮಹಿಳೆಯರಿಗೆ ಹೊರ ಪ್ರಪಂಚದ ಅರಿವು ಇರುವುದಿಲ್ಲ ಎಂದುಕೊಳ್ಳುವುದೇ ಮಿತಿ. ಮಹಿಳೆಯರು ಹೊರ ಜಗತ್ತಿಗೆ ತೆರೆದುಕೊಂಡಾಗಿದೆ ಮತ್ತು ಆಕೆ ಕಾಣುವ ಲೋಕವನ್ನು ದಾಖಲಿಸುವುದು ಕೂಡ ಇಂದಿನ ತುರ್ತು. ಸಾಹಿತ್ಯ ಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ ? ಇಲ್ಲ ಹಾಗೇನು ಇಲ್ಲ. ಬಹುತೇಕರು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ. ಆದರೆ ಕೆಲವು ಸಂಘ ಸಂಸ್ಥೆಗಳಲ್ಲಿ ಅನುಭವಿಸಿದ್ದೇನೆ. ಪುರುಷರೆಲ್ಲ ವೇದಿಕೆಯಲ್ಲಿ ಕೂರುವ ಮತ್ತು ಮಹಿಳೆಯರನ್ನು ಹೂ ಗುಚ್ಛ ನೀಡುವುದಕ್ಕೆ ನಿಲ್ಲಿಸುವ ಕ್ರಮವನ್ನು ವಿರೋಧಿಸಿದ್ದೇನೆ. ಕೆಲವೊಂದು ಕಡೆ ಬಿಟ್ಟು ಬಂದಿದ್ದೇನೆ. ಎಡ ಪಂಥೀಯ, ,ಬಲ ಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು? ಎರಡು ಕಲ್ಲು ಉಜ್ಜಿದಾಗ ಬೆಳಕು ಬರತ್ತೆ ಅಲ್ವಾ. ಎಡ ಮತ್ತು ಬಲದ ನಡುವೆ ತಿಕ್ಕಾಟವಿದ್ದಾಗಲೇ ಹೊಸದಾದ ಮೈಲಿಗಲ್ಲೊಂದು ಎದುರಾಗತ್ತೆ. ಅದಿಲ್ಲದಿದ್ದರೆ ಹರಿವು ಎನ್ನೋದು ಎಲ್ಲಿರತ್ತೆ. ಆದರೆ ಯಾವುದು ಅತಿಯಾದರೆ, ಪ್ರಶ್ನಾತೀತವಾದರೆ ಅದರಿಂದ ಹೊಸದೇನು ಉದ್ಭವಿಸುವುದಿಲ್ಲ. ಬದಲಾಗಿ ಅವನತಿ ಶುರುವಾಗತ್ತೆ. ಯಾವುದರಿಂದ ಮನುಷ್ಯರ ಬದುಕು ಹಸನಾಗತ್ತೊ ಅದಾಗಲಿ ಬಿಡಿ. ಅದರಲ್ಲೇನಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಅಭಿಪ್ರಾಯವೇನು? ರಾಜಕೀಯದ ಕುರಿತು ಏನನ್ನು ಹೇಳಲಾರೆ. ಧರ್ಮ ಮತ್ತು ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಧರ್ಮ ಯಾವತ್ತು ಮನುಷ್ಯನನ್ನು ರೂಪಿಸುವ ಮಾರ್ಗವಾಗಬೇಕು. ಅದು ಹೇರಿಕೆಯಾಗಬಾರದು. ಯಾವುದೇ ಧರ್ಮಕ್ಕು ಮನುಷ್ಯತ್ವ ಎನ್ನುವುದು ಮೂಲ ರೂಪವಾಗಬೇಕು. ಮತ್ತದು ಮನುಷ್ಯರ ಬದುಕನ್ನು ಹಸನುಗೊಳಿಸಲು ಯತ್ನಿಸಬೇಕೆ ಹೊರತು ಸಂಘರ್ಷ ಹುಟ್ಟು ಹಾಕಬಾರದು. ದೇವರು ಕೂಡ ಮನುಷ್ಯ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹುಟ್ಟು ಹಾಕಿಕೊಂಡಿರುವಂತದ್ದು. ನಾನು ದೇವರನ್ನು ನಂಬುವುದಿಲ್ಲ. ಆದರೆ ನಂಬುವವರನ್ನು ನಿರಾಕರಿಸುವುದಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಬದಲಾವಣೆ ಎನ್ನುವುದು ಎಲ್ಲ ಕಾಲಘಟ್ಟದ ಸಹಜ ಕ್ರಿಯೆ. ಪ್ರತಿಯೊಂದಕ್ಕು ಒಂದೊಂದು ಹೊರಳು ಇದ್ದೇ ಇರುತ್ತದೆ. ಅದೇ ಸ್ಥಿತಿಯಲ್ಲಿ ಇವತ್ತು ಸಾಂಸ್ಕೃತಿಕ ವಾತಾರವಣ ಇದೆ. ಪುಸ್ತಕಕ್ಕೆ ಮೀಸಲಾದ ಸಾಹಿತ್ಯ, ಆಡಿಯೋ, ವಿಡಿಯೋಗಳಾಗಿ, ವೆಬಿನಾರ್ಗಳು ಹೆಚ್ಚಿ ಎಲ್ಲೆಲ್ಲೋ ಇರುವವರನ್ನ ತಲುಪುತ್ತಿದೆ. ಜಗತ್ತು ಕೈಗೆಟುಕುತ್ತಿದೆ. ಸಾಹಿತ್ಯ ತಲುಪುವ ವ್ಯಾಪ್ತಿ ಹೆಚ್ಚಾಗುತ್ತಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ತುಸು ಹೆಚ್ಚೇ ಇದೆ ಎಂದು ಕೆಲವು ವಿದ್ಯಮಾನಗಳನ್ನು ನೋಡಿದಾಗ ಅನ್ನಿಸೋದಕ್ಕೆ ಶುರುವಾಗಿದೆ. ಮತ್ತು ಮನುಷ್ಯರು ಇದ್ದಲ್ಲಿ ಇವೆಲ್ಲ ಸಹಜ ಕೂಡ. ಬೇಕಾದವರಿಗೆ ಅತೀ ಒತ್ತು ಕೊಡುವ. ಅಲ್ಲದವರನ್ನು ಗಮನಿಸದಂತೆ ನಟಿಸುವ ಪ್ರಕ್ರಿಯೆಗಳು ಇದ್ದೇ ಇವೆ. ಬಹುಶ: ಹಿಂದೆಯು ಹೀಗೆ ಇದ್ದಿರಬಹುದು. ನಾವು ಏನೆಲ್ಲ ಸರ್ಕಸ್ ಮಾಡಿದರೂ ಕೊನೆಗೆ ಉಳಿಯುವುದು ಸಾಹಿತ್ಯ ಮಾತ್ರ ಎನ್ನುವುದಷ್ಟನ್ನೆ ಮನಗಂಡಿದ್ದೇನೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ ? ಚಲನೆ ಸ್ವಾಭಾವಿಕ ಪ್ರಕ್ರಿಯೆ. ಯಾವುದನ್ನು ಅಡಗಿಸಲಾಗಿರುತ್ತದೆಯೊ ಅದು ಒಂದು ಕಾಲಕ್ಕೆ ಮುನ್ನೆಲೆಗೆ ಬರುತ್ತದೆ. ಯಾವುದು ಮುಂಚೂಣಿಯಲಿ ನಿಂತಿರುತ್ತದೆಯೋ ಅದು ಹಿಂಸರಿಯುತ್ತದೆ. ದೇಶದ, ದೇಶಿಗರ ಮನಸ್ಥಿತಿಯು ಈಗ ಹೀಗೆ ಇದೆ. ಕುಸಿದಿರುವ ಆರ್ಥಿಕತೆ, ನಿರುದ್ಯೋಗ, ರೈತರ ಸಮಸ್ಯೆಗಳು, ಈ ಕುರಿತು ಹೆಚ್ಚು ಹೆಚ್ಚು ಆಲೋಚಿಸಬೇಕಾದ ಅವಶ್ಯಕತೆ ಇದೆ. ದೇಶ ಸ್ವಾವಲಂಬಿಯಾದಾಗ ಮಾತ್ರ ಜನರ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಕನಸು ಅಂತೇನು ಇಲ್ಲ. ಸಾಹಿತ್ಯದ ಮೂಲಕ ಎಲ್ಲರನ್ನು ಪ್ರೀತಿಸುವಂತಾದರೆ ಅದಕ್ಕಿಂತ ಬೇರೇನು ಬೇಕು?. ನಿಮ್ಮ ಇಷ್ಟದ ಲೇಖಕರು ಯಾರು ? ಬೇಂದ್ರೆ, ಮಹಾಶ್ವೇತಾದೇವಿ, ಓ ಹೆನ್ರಿ. ನೀವು ಈಚೆಗೆ ಓದಿದ ಕೃತಿಗಳು ಯಾವವು? ಈಚೆಗೆ ಬಂದ ಹೊಸಬರ ಕೃತಿಗಳು. ಈಗ ದುರ್ಗಾಸ್ತಮಾನದ ಮರು ಓದು ನಿಮಗೆ ಇಷ್ಟದ ಕೆಲಸ ಯಾವುದು ? ಏಕಾಂಗಿ ಸುಮ್ಮನೆ ಅಲೆಯುವುದು ನಿಮಿಗೆ ಇಷ್ಟವಾದ ಸ್ಥಳ ಯಾವುದು? ಕಡಲಿರುವ ಯಾವುದೇ ಊರು ನಿಮ್ಮ ಪ್ರೀತಿಯ ಸಿನಿಮಾ ,ಇಷ್ಟದ ಸಿನಿಮಾ ಯಾವುದು ? ಕಾನೂರು ಸುಬ್ಬಮ್ಮ ಹೆಗ್ಗಡತಿ, ತಮಿಳಿನ ಪ್ರಕಾಶ್ ರೈ ಅಭಿನಯದ ಕಾಂಜೀಪುರಂ ನೀವು ಮರೆಯಲಾರದ ಘಟನೆ ಯಾವುದು ? ನನ್ನ ಮೊದಲ ಕಥಾ ಸಂಕಲನಕ್ಕೆ ಮಾಸ್ತಿ ಪ್ರಶಸ್ತಿ ಪಡೆದ ಕ್ಷಣ ಕನ್ನಡದಲ್ಲಿ ಬರೆಯುವವರಿಗೆ ಏನು ಹೇಳಲು ಬಯಸುವಿರಿ ? ಹೇಳುವುದು ಅಂತೇನು ಇಲ್ಲ. ಎಲ್ಲ ಹಿರಿಯರ ಹೇಳಿದ್ದನ್ನೇ ಹೇಳುವೆ. ಬರಹಗಾರರಿಗೆ ಒಂದು ಸ್ಪಷ್ಟತೆ ಇರಬೇಕು. ಪರಂಪರೆಗಳ ಅರಿವು ಇರಬೇಕು. ಮುಖ್ಯವಾಗಿ ಕನ್ನಡದ ಕುರಿತಾಗಿ ಗೌರವದ ಜೊತೆಗೆ ಮಮತೆ ಇರಬೇಕು. ಇದು ನನ್ನದು ಎನ್ನುವ ಆಪ್ತತೆ ಇರಬೇಕು. ಸದಾ ಹೀಗಳೆಯುತ್ತ ಕೂತರೆ ಯಾವುದು ಸಾಧ್ಯವಾಗುವುದಿಲ್ಲ. ಬರಹ ಮತ್ತು ಬದುಕು ಬೇರೆ ಬೇರೆ ಅಂದುಕೊಂಡು ಬದುಕುವುದಾದರೆ ಮತ್ತೊಬ್ಬರಿಗೆ ಬೋಧಿಸುವ ಅಗತ್ಯ ಏನಿದೆ?. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ನಿರ್ಮಲಾ ಶೆಟ್ಟರ್ ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ ಪರಿಚಯ: ನಿರ್ಮಲಾ ಶೆಟ್ಟರ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಧಾರವಾಡ ಜಿಲ್ಲೆಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಅತ್ಯುತ್ತಮ ಬೋಧನೆಯಿಂದ ತಾಲೂಕಾಮಟ್ಟದ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಈ ವರೆಗೂ ‘ಬೆಳಕಿನೊಡನೆ ಪಯಣ’ ಮತ್ತು ‘ನಿನ್ನ ಧ್ಯಾನಿಸಿದ ಮೇಲೂ’ ಎನ್ನುವ ಎರಡು ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಅದರಲ್ಲಿ ಒಂದು ಕಾವ್ಯಸಂಕಲನವಾದರೆ, ಇನ್ನೊಂದು ಗಜಲ್ ಸಂಕಲನವಾಗಿದೆ. ಸಧ್ಯ, ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಕಾವ್ಯಸಂಕಲನ ಬಿಡುಗಡೆಗೊಳ್ಳಲಿದೆ. ೨೦೧೭ರಲ್ಲಿ ಅನುಪಮಾ ನಿರಂಜನ ಕಥಾಬಹುಮಾನ, ೨೦೧೯ರ ಪ್ರಜಾವಾಣಿ ಸಂಕ್ರಾಂತಿ ಲಲಿತಪ್ರಬಂಧ ಬಹುಮಾನ ಪಡೆದಿರುತ್ತಾರೆ. ಕಥೆ ಮತ್ತು ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಉತ್ತರ ತುಸು ಕಷ್ಟ ಆದರೂ ಹೇಳಬೇಕೆಂದರೆ, ಹೇಳಲಾಗದ ನೋವುಗಳನ್ನು, ಬಿಚ್ಚಿಡಲಾಗದ ಗುಟ್ಟುಗಳನ್ನು ಹೇಳಲು ಕವಿತೆ ಮತ್ತು ಕಥೆ ಒಳ್ಳೆಯ ಮಾಧ್ಯಮ. ಎಲ್ಲ ನೋವುಗಳಿಗೆ ಧ್ವನಿಯಾಗಿ ಕಥೆಗಳನ್ನು ಮತ್ತು ಕವಿತೆಗಳನ್ನು ಬರೆಯುತ್ತೇನೆ. ಕಥೆ,ಕವಿತೆ ಹುಟ್ಟುವ ಕ್ಷಣ ಯಾವುದು? ಇಂಥದೇ ಘಳಿಗೆ ಅಥವಾ ಸಮಯ ಅದಕ್ಕಾಗಿ ನಿಗದಿಯಾಗಿರುವುದಿಲ್ಲ. ಒಮ್ಮೊಮ್ಮೆ ಕಾಡಿದ ಮತ್ತು ಕಾಡಿಸಿಕೊಂಡ ವಿಷಯ, ಘಟನೆಗಳು, ಚಿತ್ರಗಳು ಸರೋರಾತ್ರಿಯಲ್ಲಿ ಬರೆಯಲು ಹಚ್ಚುತ್ತವೆ. ನಿಮ್ಮ ಕಥೆ/ಕವಿತೆಯ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೆ-ಪದೆ ಕಾಡುವ ವಿಷಯ ಯಾವುದು? ಕವಿತೆ, ಕಥೆಗೆ ಇಂಥವೇ ವಸ್ತುವಾಗಬೇಕೆಂದು ನನಗನಿಸುವುದಿಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಮುಖ್ಯ ಆದರೆ, ಎದುರಿರುವ ವಸ್ತು,ವ್ಯಕ್ತಿ ನನ್ನೊಳಗೆ ಇಳಿದು ಬರೆಯಲು ಪ್ರೇರೇಪಿಸಿ ವಿಸ್ತಾರಗೊಳ್ಳುತ್ತಾ ಹೋದಂತೆ ಕಥೆ/ಕವಿತೆಯಾಗುತ್ತದೆ. ಕಥೆಯ ಕೇಂದ್ರ ಒಳಮನದಲ್ಲಿ ಬೇರುಬಿಟ್ಟರೂ ಅದರ ವ್ಯಾಪ್ತಿ ಜಗದಗಲ. ಪದೇ ಪದೇ ಕಾಡುವ ವಿಷಯ ಯಾವುದೇ ಆಗಿರಲಿ, ಅದು ಕೊನೆಗೆ ಕನೆಕ್ಟ್ ಆಗುವುದು ಮಾತ್ರ ಸಾಮಾಜಿಕ ಆಗುಹೋಗುಗಳೊಂದಿಗೆ ಎನ್ನುವುದಂತೂ ಸತ್ಯ.ಕಥೆ/ಕವಿತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯೆ?ಅರೆ, ಅವುಗಳಿಲ್ಲದ ಕಥೆ/ಕವಿತೆ ಬಾಲಂಗೋಚಿ ಇಲ್ಲದ ಪಟಗಳಂತೆ. ಆ ದಟ್ಟ ಅನುಭವ ಬೇರೆ-ಬೇರೆ ರೂಪಗಳಲ್ಲಿ ಬರವಣಿಗೆಯನ್ನು ಸಮೃದ್ಧಗೊಳಿಸುತ್ತವೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ರಾಜಕೀಯ ತನ್ನ ಮೂಲ ಆಶೋತ್ತರಗಳನ್ನು ಗಾಳಿಗೆ ತೂರಿದೆ. ಹಾಗಾಗಿ ನಮ್ಮಂಥವರು ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ಲೇಸು ಎಂಬಲ್ಲಿಗೆ ಬಂದು ತಲುಪಿದ್ದೇವೆ. ಇತ್ತೀಚೆಗಂತೂ ರಾಜಕೀಯ ಸನ್ನಿವೇಶ ಅಸಹ್ಯಕರ ಎನ್ನಿಸುವಷ್ಟು ಬೇಸರ ಹುಟ್ಟಿಸಿದೆ. ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಮಾನವತೆಯೆ ಧರ್ಮ. ಅದನ್ನು ಪ್ರತಿಯೊಬ್ಬರಲ್ಲಿ ಮೂಡಿಸಿ ಸಾಮಾಜಿಕ ಸ್ವಾಸ್ಥö್ಯವನ್ನು ಮತ್ತು ಸಾಮರಸ್ಯವನ್ನು ಉಂಟುಮಾಡುವ ಅರಿವೆ ದೇವರು.ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ?ಮನುಷ್ಯನಲ್ಲಿರುವ ಸೃಜನಶೀಲತೆಯ ಸಂಕೇತವೆ ಆತನೊಳಗಿನ ಸಾಂಸ್ಕೃತಿಕ ಪ್ರಜ್ಞೆ. ಅದು ಅವನನ್ನು ಹೊಸ-ಹೊಸ ಅನ್ವೇಷಣೆಯತ್ತ ಚಲಿಸುವಂತೆ ಮಾಡುತ್ತದೆ. ಆ ಮುಖಾಂತರ ಸಾಮಾಜಿಕ ಶ್ರೀಮಂತಿಕೆಯನ್ನು ಕಂಡುಕೊಳ್ಳಲು ಸಾಧ್ಯ. ಆದರೆ, ಅಲ್ಲಿ ಜಾತಿ ಮತಗಳು ರಾಜ್ಯಬಾರ ನಡೆಸಿ ಎಲ್ಲವನ್ನು ಕುಂಠಿತಗೊಳಿಸುತ್ತಿದೆ. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವುರು? ಸಾಹಿತ್ಯ ಮತ್ತು ರಾಜಕಾರಣ ವಿಭಿನ್ನ ವಿಚಾರಗಳಿಂದ ಕೂಡಿವೆ. ಅಲ್ಲದೆ ಎರಡೂ ಬೇರೆ ಬೇರೆ ಕ್ಷೇತ್ರಗಳು. ಅವೆರಡು ಪೂರಕವಾಗಿರಬೇಕು. ಹಾಗಾದಾಗ ಮಾತ್ರ ಸಮಾಜದ ಬೇಡಿಕೆ ಹಾಗೂ ಸ್ವಸ್ಥತೆಯನ್ನು ಪೂರ್ಣಗೊಳಿಸಲು ಸಾಧ್ಯ. ಆದರೆ, ಇಂದಿನ ರಾಜಕಾರಣ ತನ್ನ ಹಸ್ತಕ್ಷೇಪವನ್ನು ಸಾಹಿತ್ಯವಲಯದಲ್ಲಿ ಯಾವ ಮಟ್ಟದಲ್ಲಿ ಮಾಡುತ್ತಿದೆ ಎಂದರೆ, ಸರಿಯಾದ ನ್ಯಾಯವನ್ನು ಸಾಹಿತ್ಯಕ್ಷೇತ್ರದಿಂದ ಸಮಾಜಕ್ಕೆ ಒದಗಿಸಲಾಗುತ್ತಿಲ್ಲ. ಇದರಿಂದ ಓದುಗರ ವಲಯವು ದಾರಿ ತಪ್ಪುತ್ತಿದೆ ಎಂದೆನಿಸುತ್ತಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ದೇಶದ ಚಲನೆ ಎನ್ನುವುದು, ವಿಸ್ತಾರವಾದ ವಿಷಯ. ಕೇವಲ ಯಾವುದೋ ಒಂದು ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅದನ್ನು ನಿರ್ಧರಿಸಲಾಗದು. ಆದಾಗ್ಯೂ ನಾವು ಯಾವುದರಲ್ಲೂ ಹಿಂದೆ ಬಿದ್ದಿಲ್ಲ. ವಿಭಿನ್ನತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವ ನಮ್ಮ ನಾಡು-ನುಡಿಯ ಹರವು ದೊಡ್ಡದು. ಅದು ದೇಶದಲ್ಲಿಯೇ ತನ್ನನ್ನು ಗುರುತಿಸಿಕೊಂಡಿದೆ. ಅಲ್ಲದೇ ಸಾಹಿತ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಹೀಗೆ ಇನ್ನೂ ಅನೇಕ ವಿಚಾರಗಳಲ್ಲಿ ನೀಡಿದ ಕೊಡುಗೆ ಅಪಾರ. ಅದರಿಂದ ದೇಶವು ತನ್ನನ್ನು ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ, ದೇಶವನ್ನು ಸಮೃದ್ಧವಾಗಿ ಮುನ್ನೆಡೆಸುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯದ ಯಾವುದೇ ಪ್ರಕಾರದ ರಚನೆಗೆ ಸಂಬಂಧಿಸಿದ ವಿಷಯ ಬಂದಿತೆಂದರೆ, ಅಲ್ಲಿ ಪ್ರಥಮ ಆದ್ಯತೆ ರಚನಾಕಾರನ ಓದಾಗಿರಬೇಕು.ಇದರಿಂದ ಸತ್ವಯುತ ಬರವಣಿಗೆ ಸಾಧ್ಯ. ಮತ್ತೆ ಅಂತಹ ಬರವಣಿಗೆ ಬರಹಗಾರ ಹಾಗೂ ಓದುಗನ ನಡುವೆ ಸಂವಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಒಂದು ಓದುಗವಲಯವೇ ನಿರ್ಮಾಣ ಆಗುತ್ತದೆ. ಅಂತಹ ವಾತಾವರಣವು ರಾಜಕೀಯ, ದಾರ್ಮಿಕ, ಸಂಕುಚಿತತೆಯನ್ನು ದೂರಮಾಡಿ ಸಾಹಿತ್ಯವನ್ನು ವಿಶ್ವವ್ಯಾಪಿಯನ್ನಾಗಿಸುತ್ತದೆ. ಕನ್ನಡ ಹಾಗೂ ಆಂಗ್ಲಭಾಷಾಸಾಹಿತ್ಯದಲ್ಲಿ ನಿಮ್ಮ ಇಷ್ಟದ ಮತ್ತು ನಿಮ್ಮನ್ನು ಕಾಡಿದ ಸಾಹಿತಿ ಯಾರು? ಕನ್ನಡದಲ್ಲಿ ಇಷ್ಟವಾದ ಕವಿಗಳೆಂದರೆ, ಪ್ರತಿಭಾ ನಂದಕುಮಾರ ಹಾಗೂ ವಾಸುದೇವ ನಾಡಿಗ. ನನ್ನದು ಹಿಂದಿ ಸಾಹಿತ್ಯದ ಓದಾಗಿರುವುದರಿಂದ, ನಿರಾಲಾ ಮತ್ತು ಮಹಾದೇವಿ ವರ್ಮಾ ನನ್ನ ನೆಚ್ಚಿನ ಕವಿಗಳು. ಕತೆಯ ವಿಚಾರಕ್ಕೆ ಬಂದರೆ, ಲಂಕೇಶ, ಕೇಶವರೆಡ್ಡಿ ಹಂದ್ರಾಳ, ಸುನಂದಾ ಕಡಮೆ ಅನೇಕ ಹಿರಿಯರ ಕತೆಗಳು ನನಗಿಷ್ಟ. ಇತ್ತೀಚೆಗೆ ಓದಿದ ಕೃತಿಗಳಾವುವು? ಶಶಿಕಲಾ ವಸ್ತ್ರದ ರವರ ಆತ್ಮಕತೆಯಾದ, ‘ಇದ್ದೆನಯ್ಯಾ ಇಲ್ಲದಂತೆ’ ಮತ್ತುಲಕ್ಷ್ಮಣ ಕೊಡಸೆ ಅವರು ಬರೆದ ‘ನಾರಾಯಣ ಗುರುಗಳ ಆಪ್ತ ಪದ್ಮನಾಭನ್ ಪಲ್ಪು’ ಇತ್ತೀಚೆಗೆ ಓದಿದ ಪುಸ್ತಕಗಳು. ನಿಮಗೆ ಇಷ್ಟವಾದ ಕೆಲಸಗಳಾವುವು? ಓದುವುದು, ಬರೆಯುವುದು. ನಿಮಗೆ ಇಷ್ಟವಾದ ಸ್ಥಳ ಯಾವುದು? ಪ್ರಕ್ರತಿಯ ಯಾವುದಾದರೂ ಸ್ಥಳವಿರಲಿ, ಇಷ್ಟವಾಗುತ್ತದೆ. ವಿಶೇಷವಾಗಿ ಲಕ್ಷ್ಮೀಶ್ವರದ ಸೋಮನಾಥ ದೇವಸ್ಥಾನದ ಪ್ರಾಂಗಣ. ನಿಮ್ಮ ಪ್ರೀತಿಯ, ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಗುರು-ಶಿಷ್ಯರು ನೀವು ಮರೆಯಲಾರದ ಘಟನೆ ಯಾವುದು? ಸಹೋದರನ ಅಕಾಲಿಕ ಸಾವು ಮರೆಯಲಾರದ ಘಟನೆ. ಬಹುಷಃ ಬದುಕಿನ ಕೊನೆಯವರೆಗೂ ಅವನನ್ನು ಯಾರಾರಲ್ಲೋ ಹುಡುಕುತ್ತಿರುತ್ತೇನೆ.ಇನ್ನು ಕೆಲ ಹೇಳಲೇಬೇಕಾದ ಸಂಗತಿಗಳಿದ್ದರೆ, ಹೇಳಿ…ಯಾರೋ ಗೊತ್ತಿರದ, ಪರಿಚಯವಿರದ ವ್ಯಕ್ತಿಗೆ ನೋವಾಗುವುದನ್ನು ಕಂಡರೆ, ಸಹಿಸಲಾಗುವುದಿಲ್ಲ. ಬಹುಷಃ ಅದೇ ನನ್ನೊಳಗಿನ ಮಾನವತೆ ಅನಿಸುತ್ತದೆ. ಹಾಗಾಗಿ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಸುಂದರವಾಗಿಸಬಹುದು ಎಂದು ನಂಬಿರುವವಳು ನಾನು. ಆದರೆ, ಮಾನವನಿಂದ ಮಾನವಪ್ರೀತಿ ಸಾಧ್ಯವಾಗದಷ್ಟು ನಾಗರೀಕತೆಯ ಹಮ್ಮಿನಲ್ಲಿರುವ ನಾವು ತುಸುವಾದರೂ ಮಾನವರಾಗಬೇಕಾದ ತುರ್ತಿನಲ್ಲಿದ್ದೇವೆ. ನಡೆಯಂತೆ ನುಡಿಯಿರದ, ನುಡಿದಂತೆ ನಡೆಯದ ವಾತಾವರಣವು ಕೊನೆಯಾಗುವುದನ್ನು ಯಾವಾಗಲೂ ಹಂಬಲಿಸುತ್ತೇನೆ. ******************************************************************* ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚುಕಾಡುವ ವಿಷಯ” ಈ ಸಲದ ಮುಖಾಮುಖಿ ಯಲ್ಲಿ ನಾಗರಾಜ್ ಹರಪನಹಳ್ಳಿ ಸಂದರ್ಶಿಸಿದ್ದಾರೆ ಕವಿ,ಕತೆಗಾರ ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರನ್ನು.……….ಪರಿಚಯ :ಸಂಯುಕ್ತ ಕರ್ನಾಟಕ, ಉದಯವಾಣಿ, ಗೌರಿಲಂಕೇಶ್ ಪತ್ರಿಕೆಗಳು ಸೇರದಂತೆ ೧೪ ವರ್ಷಗಳ ಕಾಲ ಪತ್ರಕರ್ತನಾಗಿ ಕೆಲಸ. ಸಧ್ಯ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಡಿಪ್ಲೋಮಾ, ಕನ್ನಡ ಎಂ.ಎ. ಪದವಿಧರ. ಸುಮಾರು ಎರಡು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರು. ಮಾದಪ್ಪನ ಸಾವುಅದೃಶ್ಯ ಲೋಕದ ಮಾಯೆ ನಿರ್ವಾಣಗಾಂಧಿ ವೃತ್ತದ ದಂಗೆ ಕಥಾ ಸಂಕಲನಗಳು, ಮನಸೆಂಬ ಮಾಯಾವಿ ಆಯ್ದ ಕತೆಗಳ ಸಂಕಲನ.ಜೋಗವ್ವ ತಲ್ಲಣನೆಲೆ `ದಾಳಿ ಕಾದಂಬರಿ ಸೇರದಂತೆ ಒಟ್ಟು ೧೦ ಕೃತಿಗಳು ಪ್ರಕಟವಾಗಿವೆ.ಜೋಗವ್ವ ಕಾದಂಬರಿಗೆ ಅಮೆರಿಕಾದಲ್ಲಿ ನಡೆದ ೨೦೦೬ರ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸ್ಪರ್ಧೆಯ ಪುರಸ್ಕಾರ ಹಾಗೂ ಕತೆಗಳಿಗೆ ಕ.ಸಾ.ಪ. ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಪತ್ನಿ ಅನುಪಮ ಮತ್ತು ಇಬ್ಬರು ಪುತ್ರರೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ.…………………………………. ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಬರೆವಣಿಗೆ ಎಂಬುದು ನನಗೆ ಮಾಸಿಕ ಬಿಡುಗಡೆಯ ಒಂದು ಮಾರ್ಗ. ಹೊಟ್ಟೆ ಹಸಿದಾಗ ಹೇಗೆ ಊಟದ ಅಗತ್ಯವಿರುತ್ತದೋ ಹಾಗೆ, ಬರೆವಣಿಗೆ ಮನಸ್ಸಿನ ಹಸಿವು ನೀಗಿಸುವ ಒಂದು ಕ್ರಮ ಎಂದುಕೊಂಡಿದ್ದೇನೆ. ನನಗೆ ಕತೆಗಳಲ್ಲಿ ಹೆಚ್ಚು ಆಸಕ್ತಿ. ಅದು ಕನಸೋ, ಅನುಭವವೋ, ಹುಡುಕಾಟವೋ ಅಥವಾ ಇನ್ನೇನೋ ಆಗಿರಬಹುದು. ಅದನ್ನು ಅಕ್ಷರಗಳಲ್ಲಿ ತೆರೆದಿಟ್ಟು ನಿರಾಳವಾಗುವುದಕ್ಕೆ ಬರೆಯುತ್ತೇನೆ. ವಸ್ತುಸ್ಥಿತಿಯೊಂದರ ಬೆನ್ನುಬಿದ್ದು ಹೊರಟು ಧ್ಯಾನದ ಉತ್ತುಂಗದ ಸ್ಥಿತಿಯಲ್ಲಿ ದೊರೆತ ಅರಿವಿನ ಸಾಕ್ಷಾತ್ಕಾರದ ಫಲವೇ ಕಥನ ಎಂಬುದು ನನ್ನ ನಂಬಿಕೆ. ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು? ಆನಂದವಾಗಲಿ, ವಿಸ್ಮಯವಾಗಲಿ, ದುಃಖವಾಗಲಿ ಅಥವಾ ಶೋಧನೆಯ ಹಂಬಲವೇ ಇರಲಿ ಯಾವ ಒಂದು ಸಂಗತಿ ಮನಸ್ಸನ್ನು ತಟ್ಟುತ್ತದೋ; ಬಹಳ ದಿನ ಕಾಡುತ್ತದೋ, ಚಿಂತನೆ-ಜಿಜ್ಞಾಸೆಗೆ ಹಚ್ಚುತ್ತದೋ ಅದು ಕತೆ-ಕವಿತೆಯ ಸ್ವರೂಪದಲ್ಲಿ ರೂಪಗೊಂಡು ವ್ಯಕ್ತವಾಗುತ್ತದೆ. ಅದಕ್ಕೆ ಇಂತಹದೇ ಸಮಯ ಎಂಬುದು ಇಲ್ಲ. ಮನಸ್ಸಿಗೆ ಹತ್ತಿರವಾದದ್ದು, ನಾನೇ ಅರಿಯದ ನನ್ನ ಪ್ರಜ್ಞೆ ಯೊಂದನ್ನು ಜಾಗೃತಗೊಳಿಸುವ ಸಂಗತಿ, ಘಟನೆ, ವ್ಯಕ್ತಿ ಕತೆ ಹುಟ್ಟುವ ಕ್ಷಣಕ್ಕೆ ಮೂಲ. ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಮನುಷ್ಯ ಸಂಬಂಧಗಳ ನಿಗೂಢ ನೆಲೆಗಳನ್ನು ಶೋಧಿಸುವುದು, ಆ ಮೂಲಕ ವಾಸ್ತವಿಕ ನೆಲೆಗಟ್ಟಿನಲ್ಲಿ ಬದುಕನ್ನು ನೋಡುವುದು ನನ್ನ ಹಲವು ಕತೆಗಳ ಗುಣ ಅಥವಾ ವಸ್ತು ಎನ್ನಬಹುದು. ನಾವು ಪರಂಪರೆಯನ್ನು ಒಪ್ಪಿಕೊಂಡು ಯಾವುದನ್ನು ಬದುಕು ಎಂದು ಕೊಂಡು ಕಣ್ಣುಮುಚ್ಚಿ ಜೀವಿಸುತ್ತಿದ್ದೇವೊ ಅದನ್ನು ಮೀರಿದ ಒಂದು ಬದುಕಿನ ಆಯಾಮವನ್ನು ಅನ್ವೇಷಿಸುವ, ದರ್ಶಿಸುವ ಕ್ರಮ ನನ್ನ ಕತೆಗಳಲ್ಲಿ ಹೆಚ್ಚಾಗಿ ವ್ಯಕ್ತವಾಗಿದೆ ಎಂದು ಭಾವಿಸಿದ್ದೇನೆ. ನಮ್ಮ ದೇಶದ ಜನರಿಗೆ ಅಂಟಿಕೊಂಡಿರುವ ಕರಾಳ ಮೌಢ್ಯ ಎಂಬುದು ೨೧ನೇ ಶತಮಾನದಲ್ಲೂ ವಿಮೋಚನೆಯಾಗಿಲ್ಲವಲ್ಲ ಎಂಬುದು ಮತ್ತು ಈ ಜನರು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಅಂಧಶ್ರದ್ಧೆಯಲ್ಲಿ ನಂಬಿಕೆ ಇಟ್ಟಿರುವುದು ನನಗೆ ಹೆಚ್ಚು ಕಾಡುವ ವಿಷಯ. ನಮ್ಮ ದೇಶದಲ್ಲಿ ಇದಕ್ಕೆ ಕೊನೆಯೇ ಇಲ್ಲವೇನೊ!? ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಸಾಮಾನ್ಯವಾಗಿ ಎಲ್ಲ ಲೇಖಕರ ಬರವಣಿಗೆಯಲ್ಲಿ ಬಾಲ್ಯ ಮತ್ತು ಹರೆಯದ ಕಾಲಘಟ್ಟದ ಸಗತಿಗಳು ವ್ಯಕ್ತವಾಗಿರುತ್ತವೆ. ಬಾಲ್ಯವೆಂಬುದು ನಮ್ಮ ಬದುಕಿನ ಅಡಿಪಾಯವಿದ್ದಂತೆ ಹಾಗಾಗಿ ವ್ಯಕ್ತಿ ಎಷ್ಟೇ ಪ್ರಬುದ್ಧನಾದರೂ ಬಾಲ್ಯವನ್ನು ಮರೆಯಲಾರ. ಅದರಂತೆ ಹರೆಯದ ಕಾಲಘಟ್ಟವನ್ನು ಒಂದು ಭಾವಗೀತೆಗೆ ಹೋಲಿಸಬಹುದು. ಅಲ್ಲಿ ವಾಸ್ತಕ್ಕಿಂತ ಹೆಚ್ಚು ಕನಸುಗಳೇ ಇರುತ್ತವೆ. ಹಾಗಾಗಿ ಕತೆ ಮತ್ತು ಕವಿತೆಗಳಲ್ಲಿ ಇವೆರಡೂ ಹಂತಗಳನ್ನು ದಾಟಿ ನಾನೀಗ ಬದುಕು, ಸಮಾಜ ಮತ್ತು ಜಗತ್ತನ್ನು ಒಂದು ಪ್ರಬುದ್ಧ ನೋಟದಿಂದ ನೋಡುವ ಹಂತಕ್ಕೆ ಬಂದಿದ್ದೇನೆ ಅನಿಸುತ್ತದೆ. ಹಾಗಾಗಿ ಹಿಂದೆ ಬರೆದದ್ದೆಲ್ಲ ಅಪೂರ್ಣ ಅನಿಸುತ್ತದೆ. ಇನ್ನುಮುಂದೆ ಬರೆಯುವುದೆಲ್ಲ ಇನ್ನೂ ಪಕ್ವವಾಗಿರಬೇಕು ಅನ್ನಿಸುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಪ್ರಸ್ತುತ ರಾಕೀಜಯ ಸನ್ನಿವೇಶಗಳ ಬಗೆಗೆ ಮಾತನಾಡಿ ನಮ್ಮ ನೈತಿಕತೆ, ಬದ್ಧತೆಯನ್ನು ಮಲಿನ ಮಾಡಿಕೊಳ್ಳುವುದು ಬೇಡ ಅನ್ನಿಸುತ್ತದೆ. ನೈತಿಕತೆ ಮತ್ತು ಬದ್ಧತೆಯ ವಿಚಾರದಲ್ಲಿ ಇಂದು ರಾಜಕೀಯ ಆ ಮಟ್ಟಕ್ಕೆ ಅಧಃಪತನಗೊಂಡಿದೆ. ದೇಶದಲ್ಲಿ ಇಂದು ಪಕ್ಷ-ಸಿದ್ಧಾಂತಗಳು ಎಂಬುವವೇ ಅಸ್ತಿತ್ವದಲ್ಲಿ ಇಲ್ಲ. ಅಧಿಕಾರ ಸಿಗುವುದಾದರೆ ಯಾವ ವ್ಯಕ್ತಿಯೇ ಆದರೂ ಯಾವುದೇ ಗುಂಪು-ವಿಷಯಗಳೊಂದಿಗೆ ರಾಜಿಯಾಗಬಲ್ಲ. ತನ್ನ ಬದ್ಧತೆಯನ್ನು ತಾನೇ ತುಳಿದು ಅದರ ಮೇಲೆ ಜನರ ಹಿತವನ್ನು ಸಮಾಧಿ ಮಾಡಬಲ್ಲ. ಒಟ್ಟಾರೆ, ಹಣ ಬಲ, ಪ್ರಭಾವ, ಶಕ್ತಿ ಇದ್ದವನೇ ಜನಪ್ರತಿನಿಧಿ ಎನ್ನುವಂತಹ ನೀಚ ಮಟ್ಟಕ್ಕೆ ಈ ಪ್ರಜಾಪ್ರಭುತ್ವ ವ್ಯವಸ್ಥೆ ರೂಪಾಂತರಗೊಂಡಿದೆ. ಜನ ಇದನ್ನು ಅರ್ಥ ಮಾಡಿಕೊಂಡು ಜಾಗೃತರಾಗುವವರೆಗೆ ಇದಕ್ಕೆ ಕೊನೆ ಇಲ್ಲ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನನ್ನ ಪ್ರಕಾರ ಮನುಷ್ಯ ಮಾನವೀಯ ಸಂಸ್ಕಾರಗಳನ್ನು ಅಳವಡಿಸಿಕೊಂಡು ಜೀವಿಸುವುದೇ ಧರ್ಮ. ಧರ್ಮದ ವಿಚಾರದಲ್ಲಿ ಇದನ್ನು ಮೀರಿದ ಇತರ ಸಂಗತಿಗಳೆಲ್ಲ ವ್ಯವಹಾರ-ವ್ಯಾಪಾರಗಳಷ್ಟೇ. ಸಮಾಜದಲ್ಲಿ ಇಂದು ಧರ್ಮದ ವಿಷಯ ಬಂಡವಾಳವಾಗಿ ಮಾರ್ಪಟ್ಟಿದೆ. ತಮ್ಮ ಧರ್ಮವೇ ಹೆಚ್ಚು, ತಮ್ಮ ಧರ್ಮವೇ ಉಳಿಯಬೇಕು- ಬೆಳೆಯಬೇಕು, ವ್ಯಾಪಿಸಬೇಕು ಎಂಬ ಕ್ಷುದ್ರ ಉದ್ದೇಶಗಳು ಧರ್ಮದ ಅರ್ಥವನ್ನು ವಿರೂಪಗೊಳಿಸಿವೆ. ಅದ್ದರಿಂದ ನಾನು ಹೇಳುವುದೇನೆಂದರೆ ಸಮಾಜದಲ್ಲಿ ಸಮದಾಯಗಳು ಸಾವಿರಾರು ಇದ್ದರೂ ಧರ್ಮಕ್ಕೆ ಇರುವ ಅರ್ಥ ಒಂದೇ. ಎಲ್ಲ ಸಮುದಾಯಗಳು ಅದನ್ನು ಅರಿಯಬೇಕಿದೆ. ಸೃಷ್ಟಿಯಲ್ಲಿ ಧರ್ಮ ಮತ್ತು ದೇವರ ಪರಿಕಲ್ಪನೆಗಳು ಸಮನ್ವಯವಾದಂತಹವು. ನಾನು ಯಾವುದನ್ನು ಮಾನವೀಯ ಸಂಸ್ಕಾರ ಎಂದು ಹೇಳಿದೆನೊ ಮನುಷ್ಯನಲ್ಲಿ ಅದನ್ನು ಜಾಗೃತಗೊಳಿಸುವ ಪ್ರಜ್ಞೆಯೇ ದೇವರು. ಅದಕ್ಕೆ ಮೂರ್ತವಾದ ಆಕೃತಿ ಎಂಬುದು ಇಲ್ಲ. ಅದೊಂದು ಮನುಷ್ಯನಲ್ಲಿ ಇರಬೇಕಾದ ಸಕಾರಾತ್ಮಕ ಭಾವವಷ್ಟೇ. ಹಾಗಾಗಿ ದೇವರು ಇದ್ದಾನೋ-ಇಲ್ಲವೋ ಎಂಬುದರ ಕುರಿತು ಮಾತನಾಡುವ ಮೊದಲು `ದೇವರು ಎಂದರೆ ಏನು ಎಂಬುದನ್ನು ವಾಸ್ತವವಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯ. ದೇವರು ಎಂಬ ಇಂತಹ ಶ್ರೇಷ್ಠ ಭಾವ ಇಂದು ಸಮಾಜದಲ್ಲಿ ಕೆಲವರಿಂದ ವ್ಯಾಪಾರೀಕರಣಗೊಂಡು, ರಾಜಕೀಯಕರಣಗೊಂಡು ಇಡೀ ಸಮಾಜವನ್ನೇ ಅಂಧಶ್ರದ್ಧೆಯ ಕೂಪಕ್ಕೆ ತಳ್ಳುವ ಚಟುವಟಿಕೆಯಾಗಿ ಬೆಳೆದಿದೆ. ಅದು ಈ ದೇಶದ ದುರಂತವೆಂದೇ ಹೇಳಬೇಕು. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತಹ ದೇವರ ರೂಪಗಳನ್ನು ಸೃಷ್ಟಿಸಿಕೊಂಡು ಜನ ಆ ರೂಪಕ್ಕೆ ಹಾಲು-ತುಪ್ಪ, ಹಣ ಸುರಿದು, ಹಸಿದ ಹೊಟ್ಟೆಗಳನ್ನು ಹೊರಳಿಯೂ ನೋಡದಿರುವುದನ್ನು ಕಂಡರೆ `ಅಯ್ಯೋ ಅನಿಸುತ್ತದೆ. ಈ ದೇಶದಲ್ಲಿ ಬುದ್ಧ ಬಂದು ಹೋದ, ಬಸವಣ್ಣ ಬಂದು ಹೋದ, ಅಂಬೇಡ್ಕರ್ ಅವರಂತಹ ಮಹಾ ಜ್ಞಾನಿ ಬಂದು ಹೋದರೂ, ಕ್ರೂರ ಮೌಢ್ಯದಿಂದ ಹೊರ ಬರದ ಈ ಜನರನ್ನು ಕಂಡಾಗಲೆಲ್ಲ ನನಗೆ ಆಕ್ರೋಶ, ಕೋಪ, ಕಡೆಗೆ ವಿಷಾದ ಮೂಡುತ್ತದೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ? ಪ್ರಸ್ತುತ ಸಾಂಸ್ಕೃತಿಕ ಕ್ಷೇತ್ರ ತನ್ನ ಧ್ಯೇಯೋದ್ದೇಶಗಳನ್ನು ಕಳೆದುಕೊಂಡು ವ್ಯಾಪಾರಕ್ಕೆ ತಿರುಗಿದೆ ಎಂದು ಹೇಳಬಹುದು. ನಾವು ಯಾವುದನ್ನು ಸಂಸ್ಕೃತಿ ಎಂದು ಅಭಿಮಾನದಿಂದ ಪೋಷಿಸುತ್ತ ಬಂದಿದ್ದೇವೆಯೋ ಇಂದು ಅದು ವ್ಯಾಪಾರದ ಸರಕಾಗಿ ಮಾರ್ಪಟ್ಟಿದೆ. ಕಲೆ-ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಅದಕ್ಕೆ ಕಾರಣ ಜಾಗತೀಕರಣ, ತಂತ್ರಜ್ಞಾನ ಬೆಳವಣಿಗೆ ಮತ್ತು ರಾಜಕೀಯ ಶಕ್ತಿಗಳು. ಕಲೆ, ಸಾಹಿತ್ಯ, ಸಂಸ್ಕೃತಿ ಎಂಬವು ಆಯಾ ದೇಶದ ಸೌಂದರ್ಯದ ದ್ಯೋತಕವಾಗಿರುತ್ತವೆ. ಅವು ವಿರೂಪಗೊಂಡರೆ ದೇಶದ ಸೌಂದರ್ಯವೇ ವಿರೂಪಗೊಂಡತೆ. ಇವನ್ನು ಪೋಷಿಸಬೇಕಾದ ಸರ್ಕಾರಗಳು ಈ ವಿಚಾರವನ್ನು ನಿರ್ಲಕ್ಷಿಸುತ್ತಿವೆ. ಸಮಾಜದಲ್ಲಿ ಕ್ರೌರ್ಯ ಬೆಳೆಯಲು ಇದೂ ಒಂದು ಕಾರಣವಾಗಿರಬಹುದು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ರಾಜಕಾರಣವೆಂಬುದು ಇಂದು ಎಲ್ಲ ಕ್ಷೇತ್ರದಲ್ಲಿ ಇರುವಂತಹದೆ. ರಾಜಕಾರಣ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವುದರಿಂದಲೇ ಸತ್ಯ ಮತ್ತು ಮೌಲ್ಯಗಳು ನೆಲೆ ಕಳೆದುಕೊಂಡಿವೆ. ಅರ್ಹತೆ ಮತ್ತು ಪ್ರತಿಭೆ ಎಂಬುದು ಮೂಲೆಗುಂಪಾಗಿದೆ. ಆದ್ದರಿಂದ ರಾಜಕಾರಣದಲ್ಲಿ ಸಾಹಿತ್ಯ-ಸಂಸ್ಕೃತಿ ಇರಬೇಕೆ ಹೊರತು ಸಾಹಿತ್ಯ-ಸಂಸ್ಕೃತಿಯಲ್ಲಿ ರಾಜಕಾರಣವಿರಬಾರದು. ಇಂದು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ವಿಚಾದರಲ್ಲಿ ಕೆಲವು ಸಾಹಿತಿಗಳು ರಾಜಕಾರಣಿಗಳನ್ನೂ ಮೀರಿಸುವಂತೆ ರಾಜಕೀಯ ಮಾಡುತ್ತಿರುವುದನ್ನು ನೋಡಿದರೆ ಸಾಹಿತ್ಯದ ಮೌಲ್ಯ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಅರ್ಥವಾಗುತ್ತದೆ. ಸಾಹಿತ್ಯವೆಂಬುದು ಜ್ಞಾನ-ಅರಿವಿನ ಮಾರ್ಗವೇ ಹೊರತು ಸ್ಥಾನಮಾನ, ಅಧಿಕಾರ, ಪ್ರಶಸ್ತಿ, ಸನ್ಮಾನಗಳ ಹಪಾಹಪಿತನವಲ್ಲ. ಈ ಎಲ್ಲದರ ನಡುವೆಯೂ ಪ್ರಾಮಾಣಿಕ ಸಾಹಿತ್ಯ, ಸಾಹಿತಿಗಳು ನೇಪಥ್ಯದಲ್ಲೇ ಇದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ನಮ್ಮ ಮನಸು ಏನು ಹೇಳುತ್ತಿದೆ? ಈ ವಿಷಯವಾಗಿ ನಾನು ಮಾತನಾಡುವ ಮೊದಲು ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನನಗೆ ಯಾವುದೇ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಇಲ್ಲ. ಯಾಕೆಂದರೆ ಎಲ್ಲ ಪಕ್ಷಗಳಿಗೂ ಅಧಿಕಾರ ಮುಖ್ಯ ಹೊರತೂ ಜನರ ಹಿತವಲ್ಲ. ಮಾನವೀಯ ಗುಣಗಳನ್ನು ಪ್ರತಿಪಾದಿಸುವ ರೀತಿ-ಸಿದ್ಧಾಂತಗಳಲ್ಲಿ ನಂಬಿಕೆ ಇದೆ. ಅದು ಎಲ್ಲಿದ್ದರೂ ಸ್ವೀಕಾರರ್ಹ. ಚುನಾಯಿತ ಯಾವುದೇ ವ್ಯಕ್ತಿ, ಮಂತ್ರಿ-ಸರ್ಕಾರವೇ ಇರಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕಾಗುತ್ತದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ತಮ್ಮದೇ ಶಾಸನ ಸೃಷ್ಟಿಸುವ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನೇ ಪಲ್ಲಟಗೊಳಿಸಬಹುದಾದ ಹುನ್ನಾರಗಳನ್ನು ನಾನು ಒಪ್ಪಲಾರೆ. ಒಂದು ರಾಷ್ಟವೆಂದರೆ ಒಂದು ಸಮುದಾಯ, ಧರ್ಮ ಕೇಂದ್ರಿತ ಭೂಪ್ರದೇಶವಲ್ಲ. ಸರ್ವ ಸಮುದಾಯ, ಧರ್ಮ ಕೇಂದ್ರಿತ ಭಾರತದಂತಹ ರಾಷ್ಟ್ರವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಿ ರೂಪಾಂತರಗೊಳಿಸುವ ಹುನ್ನಾರ ಸಲ್ಲದು. ದೇಶವನ್ನು ಮುನ್ನಡೆಸುವವರು ಇದನ್ನು ಅರಿಯಬೇಕು. ಓಟ್ ಬ್ಯಾಂಕ್ಗಾಗಿ ಸಮುದಾಯ, ಧರ್ಮದ ವಿಷಯಗಳನ್ನು ಅಸ್ತçವಾಗಿಸಿಕೊಂಡು ಜನರ ಮನಸ್ಸು ಒಡೆಯುವುದು ಯಾವ ಪಕ್ಷ-ಸಿದ್ಧಾಂತದ ಮೌಲ್ಯ? ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನನ್ನ ಅರಿವಿನಲ್ಲಿ ಹೇಳುವುದಾದರೆ ಸಾಹಿತ್ಯವೆಂಬುದು ಅಂತರಂಗದಲ್ಲಿ ಬೆಳಗುವ ಜ್ಯೋತಿ. ಅದಕ್ಕೆ ಯಾವುದೇ ತರಹದ ಆಡಂಬರ, ವೈಭವ, ಮೆರವಣಿಗೆಗಳ ಅಗತ್ಯವಿಲ್ಲ. ಬರವಣಿಗೆ ಎಂಬುದು ಆ ಜ್ಯೋತಿಯನ್ನು ಹೊತ್ತಿಸಿದರೆ, ಓದು ಎಂಬುದು ಅದನ್ನು ನಿರಂತರವಾಗಿ ಬೆಳಗಿಸುತ್ತದೆ. ಸಾವು ಕಣ್ಣೆದುರು ಬಂದರೂ ಈ ಅರಿವಿನ ಆನಂದ ವೆಂಬುದು ಅದರ ಭಯವನ್ನು ಮರೆಸುತ್ತದೆ. ಹಾಗಾಗಿ ನಾನು ಸಾಹಿತ್ಯದ ಈ ಪ್ರಕ್ರಿಯೆಯನ್ನು ನನ್ನ ಜೀವಿತಾವಧಿಯವರೆಗೂ ಜಾಗೃತವಾಗಿಟ್ಟುಕೊಳ್ಳಲು ಬಯಸುತ್ತೇನೆ. ಇಂದಿಗಿಂತ ನಾಳೆ ಇನ್ನೂ ಚೆನ್ನಾಗಿ ಬರೆಯಬೇಕು ಎಂಬ ಹಂಬಲದಲ್ಲಿರುತ್ತೇನೆ. ಇದು ಆತ್ಮೋದ್ಧಾರದ ಮಾರ್ಗ! ವ್ಯಾಪಾರವಾಗದೇ ಉಳಿಯಬೇಕು ಎಂಬುದು ನನ್ನ ಆಶಯ. ಆದರೆ ಲೇಖಕರು ಬಡವರಾಗಿಯೇ ಉಳಿದು, ಪ್ರಕಾಶಕರು ಮಾತ್ರ ಶ್ರೀಮಂತರಾಗುತ್ತಿರುವುದು ವಿಪರ್ಯಾಸ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಬೇರೆ ಬೇರೆ ಲೇಖಕರು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗುತ್ತಾರೆ. ಹಲವರಲ್ಲಿ ಹಲವು ಬಗೆಯ ವೈವಿಧ್ಯವಾದ ಗುಣಗಳು ಇಷ್ಟವಾಗಬಹುದು. ಆದಾಗ್ಯೂ ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತರು ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾನ್ಜ್ ಕಾಫ್ಕಾ, ಆಲ್ಬರ್ಟ್ ಕಮೂ ಅವರು ನನಗೆ ಹೆಚ್ಚು ಇಷ್ಟವಾಗುವ ಲೇಖಕರು. ಯಾವುದೇ ವರ್ಗಕ್ಕೂ ಸೇರಬಹುದಾದ ವಿಶಿಷ್ಟ ಪ್ರಬೇಧದ ಬರವಣಿಗೆ ಮೂಲಕ ತೇಜಸ್ವಿ ಇಷ್ಟವಾದರೆ, ಕಾರಂತರು ಪ್ರಖರ ವೈಚಾರಿಕ ನಿಲುವಿನಿಂದ ಇಷ್ಟವಾಗುತ್ತಾರೆ. `ಮೆಟಮಾರ್ಫಸಿಸ್ ನಂತಹ ಬೆರಗು ಮೂಡಿಸುವಂತಹ ಅಸಂಗತ ಕಾದಂಬರಿ ಮೂಲಕ ಪ್ರಾನ್ಜ್ ಕಾಫ್ಕಾ ಇಷ್ಟವಾಗುತ್ತಾನೆ. ಈಚೆಗೆ ಓದಿದ ಕೃತಿಗಳಾವುವು? ಟಿ.ಪಿ. ಅಶೋಕ ಅವರ ಕಥನ ಭಾರತಿ, ಅಮರೇಶ ನುಗಡೋಣಿ ಅವರ ದಂದುಗ, ವಸುಧೇಂದ್ರ ಅವರ ತೇಜೋ ತುಂಗಭದ್ರಾ ಮತ್ತು ಇತರ ಕೃತಿಗಳು. ನಿಮಗೆ ಇಷ್ಟವಾದ ಕೆಲಸ ಯಾವುದು? ಓದು, ಬರೆವಣಿಗೆಯಂತೆ ಪ್ರವಾಸ ಮತ್ತು ಕಾಡಿನಲ್ಲಿ ಚಾರಣ ಮಾಡುವುದು ಕೂಡ ಇಷ್ಟ. ಕಾಂಕ್ರಿಟ್ ಕಾಡಿನಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ಬೆರೆಯುವುದು ಎಂದಿಗೂ ನನಗೆ ಇಷ್ಟದ ಕೆಲಸ. ಅದೇ ರೀತಿ
ಅಂಕಣ ಬರಹ ” ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ “ ಇಂದುಮತಿ ಲಮಾಣಿ ಪರಿಚಯ; ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ. ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ ಶ್ರಮಿಸುತ್ತಿದ್ದಾರೆ.ಇವರ ಮಗ ಬಸವರಾಜು ಡಿವೈಎಸ್ಪಿಯಾಗಿ ಕರ್ತವ್ಯ ಮಾಡುತ್ತಿದ್ದಾರೆ. ಈ ಸಲದ ಮುಖಾಮುಖಿಯಲ್ಲಿ ಕತೆಗಾರ್ತಿ, ಕವಿ ಇಂದುಮತಿ ಲಮಾಣಿ ಇವರನ್ನು ಮಾತಾಡಿಸಿದ್ದಾರೆ ನಾಗರಾಜ್ ಹರಪನಹಳ್ಳಿ ಕತೆಗಳನ್ನು ಯಾಕೆ ಬರೆಯುತ್ತೀರಿ ? ಮನಸ್ಸಿಗೆ ಕಾಡುವ ಕೆಲ ವಿಷಯಗಳು, ಎನಾದರೂ ಬರೆಯಲು ಪ್ರೇರೇಪಿಸುತ್ತವೆ. ಆಗ ಸಹಜ ಕಥೆಯ ರೂಪದಲ್ಲಿ ಬರಹ ಆರಂಭವಾಗುತ್ತವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲೂ ನನ್ನ ಬರಹ ಕಾರಣವಾಗಿದೆ. ಕತೆ ಹುಟ್ಟುವ ಕ್ಷಣ ಯಾವುದು ? ನನ್ನ ಸುತ್ತ ಮುತ್ತ ಘಟಿಸುವ ಆಗುಹೋಗುಗಳು ಮನಸಿನ ಮೇಲೆ ಘಾಡ ಪರಿಣಾಮ ಬೀರಿದಾಗ, ಒಂಟಿಯಾಗಿ ಇರುವಾಗ ಅವು ಕಥೆ ರೂಪದಲ್ಲಿ ಹೊರ ಹೊಮ್ಮುತ್ತವೆ. ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯನ್ನು ಕತ್ತು ಹಿಸುಕುವಂಥಹ ಸನ್ನಿವೇಶ, ಮತ್ತು, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ ,ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ಆಕೆಯ ಜೀವನ ಪಥ, ಜಾತಿ ಭೇದತೆ, ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ. ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಖಂಡಿತಾ. ಎರಡೂ ಇರುತ್ತವೆ.ಆ ಎರಡೂ ಇದ್ದಾಗಲೇ ಕಥೆಗೆ ಇಂಬು ಮೂಡುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ರಾಜಕೀಯ ಇವತ್ತು ಸ್ವಾರ್ಥದ ಅಂಗಿ ತೊಟ್ಟು, ಮುಖವಾಡ ಧರಸಿ ತಿರುಗುತ್ತಿದೆ. ಅಂದಿನ ಜನನಾಯಕರ ನಡೆ, ನುಡಿ, ನಿಸ್ವಾರ್ಥ ಈಗ ಇಲ್ಲ. ಮುಖ ನೋಡಿ ಮಣೆ ಹಾಕುವುದೇ ಜನ್ಮ ಸಿದ್ದ ಹಕ್ಕು ಎಂಬಂತಾಗಿದೆ. ಜನರಿಗಾಗಿ ಅಂದು ಅವರು ದುಡಿದರು,ಮಡಿದು ಹೆಸರಾದರು. ಇವತ್ತು ಜನರೇ ಇವರಿಗಾಗಿ ಹೋರಾಡಿ ಹಾರಾಡಿ ಮಡಿಯುತ್ತಿದ್ದಾರಷ್ಟೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಮಾತಾಪಿತರ ಕಾಳಜಿ, ಮಹಿಳೆ ಮತ್ತು ಹಿರಿಯರಲ್ಲಿ ಗೌರವ, ಇರುವಲ್ಲಿ ಮತ್ತು, ಎಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾಗುತ್ತಾರೋ ಅದೇ ಧರ್ಮ. ಕಷ್ಕಕ್ಕಾದವರೇ ಪರಮ ದೇವರು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಂಸ್ಕೃತಿ ಜೀವಂತ ಇರೋತನಕಾ ಸಾಂಸ್ಕೃತಿಕ ಬದುಕು ಸದಾ ಇರುತ್ತದೆ. ಇವತ್ತು ಸಂಸ್ಕೃತಿ ಮುಸುಕಾಗಿದೆ. ಫ್ಯಾಷನ್ ಯುಗ ಎಲ್ಲೆಲ್ಲೂ ಕುಣಿಯುತ್ತಿದೆ. ಕೇವಲ ಸಿನೇಮಾ,ಧಾರಾವಾಹಿ, ವೇದಿಕೆಯಲ್ಲಿ ಸಂಸ್ಕೃತಿ ತೋರಿಸುವದಲ್ಲ. ನಮ್ಮ ನಿಮ್ಮ ನಡೆ,ನುಡಿಯಲ್ಲಿ ಅದು ಪಕ್ಕಾ ಇರಬೇಕು. ಸಂಸ್ಕೃತಿ ನಶಿಸುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಈಗ ಈ ವಿಷಯ ಅತ್ಯಂತ ಬೇಸರ ತರಿಸುವಂಥಹದ್ದು. ಸಾಹಿತ್ಯದಲ್ಲಿ ರಾಜಕೀಯ ಇವತ್ತು ಕೈಯಾಡಿಸದೆ ನಡಿಯೋದೇ ಇಲ್ಲವೆನ್ನುವಂತಾಗಿದೆ. ಸಾಹಿತ್ಯದ ಯಾವ ಗಂಧ ಗಾಳಿಯೂ ಇಲ್ಲದವರನ್ನು ತಂದು ಮೆರೆಸುವದು, ಸಾಹಿತ್ಯ ಪ್ರತಿಭೆಗೆ ಸಿಗಬೇಕಾದ ಮನ್ನಣೆಗೆ ಕತ್ತರಿ ಹಾಕುವುದು, ಲಾಭಿ ಮಾಡುವವರನ್ನು ದೊಡ್ಡ ವೇದಿಕೆಯಲ್ಲಿ ಕೂಡಿಸುವದು ಇತ್ತೀಚೆಗೆ ತೀರಾ ಸಾಮಾನ್ಯ ಆಗಿದೆ. ಸಾಹಿತಿಗಳಿಗೆ ಸಿಗದ ಪರಿಷತ್ತಿನ ಅಧಿಕಾರ, ರಾಜಕೀಯ ವ್ಯಕ್ತಿಗಳು ಅಲಂಕರಿಸುವದು ಕೂಡ ಸಹಜವಾಗಿಯೇ ಇದೆಯೆಂದು ಖಾತ್ರಿ ಅನಿಸುತಿದೆ. ಸಾಹಿತ್ಯಕ್ಕೆ ಮಾನ ಮನ್ನಣೆ ಸಿಗಬೇಕು ಅಂದರೆ ಮುಂದಾಳತ್ವ ನುರಿತ ಸಾಹಿತಿಯಿಂದ ಮಾತ್ರ ಅರಿವು ಬರೋದು. ಇಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ನಮ್ಮ ದೇಶವೀಗ ಬಲಿಷ್ಠತೆಯಲ್ಲಿ ಯಾವ ದೇಶಗಳಿಗಿಂತಲೂ ಕಮ್ಮಿ ಎನಿಲ್ಲ.ಬಡತನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿದ್ದನ್ನು ಕಾಣುತ್ತಿದ್ದೆವೆ. ಈಗ ಮೊದಲಿಗೆ ಇದ್ದ ಬಡತನ ಇಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಇಂಧನಭಾಗ್ಯ ಹೀಗೆ ಹಲವಾರು ಉಪಕೃತ ಯೋಜನೆಗಳನ್ನು ಕಾಣುತ್ತಿದ್ದೆವೆ.ಆಗಿನಂತೆ ಈಗ ಹಸಿವಿನಿಂದ ಸಾವು ಇಲ್ಲ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಇವತ್ತು ಇತರ ದೇಶಕ್ಕಿಂತ ಹೆಚ್ಚಿನ ಪ್ರಗತಿಯಲ್ಲಿ ಸಾಗಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಸಾಹಿತ್ಯದಲ್ಲಿ ನಾನು ಇನ್ನೂ ಬೆಳೆಯಬೇಕು, ಕಲಿಯಬೇಕು. ತಿಳಿದುಕೊಳ್ಳಬೇಕು. ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದ ಕವಿ ನಿಸಾರ್ ಅಮಹ್ಮದ . ಈಚೆಗೆ ಓದಿದ ಕೃತಿಗಳಾವವು? ನಾಗೇಶ್ ಜೆ, ನಾಯಕರ ಓಲವ ತುಂತುರು ಮತ್ತು ವಿಶ್ವೇಶ್ವರ ಮೇಟಿ ಅವರ ಸೋಲಾಪುರ ಜಿಲ್ಲೆಯ ಇತಿಹಾಸದತ್ತ ಒಂದು ನೋಟ ನಿಮಗೆ ಇಷ್ಟವಾದ ಕೆಲಸ ಯಾವುದು? ಬರವಣಿಗೆ ನಿಮಗೆ ಇಷ್ಟವಾದ ಸ್ಥಳ ಯಾವುದು ? ಬಾಗೇವಾಡಿ ತೋಟದ ಮನೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಶರಪಂಜರ ನೀವು ಮರೆಯಲಾರದ ಘಟನೆ ಯಾವುದು? ಪತಿಯ ಅಗಲಿಕೆ ಇನ್ನು ಕೆಲ ಹೇಳಲೇ ಬೇಕಾದ ಸಂಗತಿಗಳಿದ್ದರೂ ಹೇಳಿ……. ಇವತ್ತು ನಾವು ಮಹಾತ್ಮಾ ಗಾಂಧೀಜಿಯವರ ಕುರಿತು ಹೊಗಳಿಕೆಯ ಭಾಷಣ ಮಾಡುತ್ತೆವೆ, ಅದೇ ರೀತಿ ಜಗತ್ತಿನಲ್ಲಿ ಮಹಾ ಮಹಾನ್ ರಾಗಿ ಆಗಿ ಹೋದವರ ಕುರಿತು ಹಾಡಿ ಅಭಿಮಾನ ತೋರುತ್ತೆವೆ. ದುರಂತವೆಂದರೆ, ನಾವು ಅವರಾಗುವದಿಲ್ಲ. ಅವರನ್ನೇ ಹುಟ್ಟಿ ಬರಬೇಕು ಅಂತ ಬಯಸುತ್ತೆವೆ. ಹುಟ್ಟಿರುವ ನಾವೇಕೆ ಅವರ ದಾರಿಯಲ್ಲಿ ನಡಿಯೋದಿಲ್ಲ? ಅತ್ತೆಯೊಬ್ಬಳು, ವೇದಿಕೆಯಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ,ದ ಕುರಿತು, ಅವಳಿಗೆ ಬೇಕಾದ ಸ್ವಾತಂತ್ರ್ಯದ ಕುರಿತು ಭಾಷಣ ಮಾಡುತ್ತಾಳೆ, ಆದರೆ ಮನೆಯಲ್ಲಿ ಸೊಸೆಗೆ ಸ್ವಾತಂತ್ರ್ಯ ಏಕೆ ಬೆಕೆಂದು ಅವಾಜು ಹಾಕುತ್ತಾಳೆ. ಇದಕ್ಕೆ ತದ್ವಿರುಧ್ಧವಾಗಿ ಅತ್ತೆಯು, ಸೊಸೆಯನ್ನು ಮಗಳಾಗಿ ಪ್ರೀತಿಸಿದರೂ ಸೊಸೆ ಪರಕೀಯತೆಯಿಂದ ಹೊರ ಬಾರದೆ ಪತಿ ಸಹಿತ ಬೇರೆ ಹೋಗಿ, ಅತ್ತೆಯನ್ನು ಕತ್ತೆ ಸಮಾನವಾಗಿ ಕಾಣುತ್ತಾಳೆ. ಮಕ್ಕಳು ಇದ್ದರೂ ಭಿಕಾರಿಯಾಗಿ ತಿರಗುವ ಹೆತ್ತವರ ಪಡಿಪಾಲು ನೋವು ನೀಡುತ್ತವೆ. ಇವೆಲ್ಲ ನೋಡುತ್ತಾ ಇರುವಾಗ ಅನಿಸಿದ್ದೆನೆಂದರೇ, ನಾವೆಕೆ ಮನುಷ್ಯರಾದೆವು!! ನಾವೂ ಉಳಿದ ಜೀವಜಂತುಗಳಂತೆ ಇರಬಹುದಿತ್ತಲ್ಲವೆ! ದೇವರು ತನ್ನ ಆಟಕ್ಕೆ ಮನುಷ್ಯರನ್ನೇ ತನ್ನಾಟದ ದಾಳವೆಂದೆಕೆ ಆಯ್ಕೆ ಮಾಡಿಕೊಂಡ ಅಂತ!! ಇಂಥಹ ವೈಪ್ಯರೀತತೆಗಳು ಬಹಳ ಕಾಡುತ್ತವೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ನಾಗರಾಜ ಎಂ ಹುಡೇದ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ. ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆ ಮಾಡುವ ಮೂಲಕ ಹಿಂದುಳಿದ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ್ದಾರೆ. ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ, ಪುರಸ್ಕಾರ: • ವಾ.ಕ.ರ.ಸಾ ಸಂಸ್ಥೆ ಯಲ್ಲಾಪುರ ಘಟಕದ ಕನ್ನಡ ಕ್ರಿಯಾ ಸಮಿತಿಯವರ ಅಭಿನಂದನಾ ಸನ್ಮಾನ. • ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ನೀಡುವ ‘ರಾಜ್ಯೋತ್ಸವ ಯುವ ಕೃತಿ’ ಪುರಸ್ಕಾರ. • ಜಿಲ್ಲಾ, ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ, ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ. ಪ್ರಕಟಿತ ಕೃತಿಗಳು: • ನಗುವ ತುಟಿಗಳಲ್ಲಿ – ಕವನ ಸಂಕಲನ • ಸುವರ್ಣ ಜ್ಞಾನ – ಕರ್ನಾಟಕ ಸಂಬAಧಿತ ರಸಪ್ರಶ್ನೆಗಳು. • ಕಿರುಗೊಂಚಲು – ಸಂಪಾದಿತ. • ಸೇಡಿನ ಹುಲಿಗಳು – ಸಾಮಾಜಿಕ ನಾಟಕ. • ಭರವಸೆ – ಕವನ ಸಂಕಲನ. • ಶಬ್ದಕೋಶ – ಕನ್ನಡ, ಗೌಳಿ,ಇಂಗ್ಲೀಷ ಭಾಷೆಯಲ್ಲಿ. • ಅವತಾರ್ ಮತ್ತು ಹಾರುವ ಕುದುರೆ – ಮಕ್ಕಳ ಕಥಾ ಸಂಕಲನ ಈ ವಾರದ ಮುಖಾಮುಖಿಯಲ್ಲಿ ಶಿಕ್ಷಕ, ಕವಿ ನಾಗರಾಜ ಹುಡೇದ ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ ” ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು “ ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಮನದ ಭಾವನೆಗಳನ್ನು ಮಲ್ಲಿಗೆಯಾಗಿಸಿ ನನಗೆ ನಾನು ಹಗುರಾಗಲು ಬರೆಯುವುದು ಒಂದು ಕಾರಣವಾದರೆ, ಸಮಾಜದ ಸಂಕಟ, ಸಮಸ್ಯೆಗಳಿಗೆ ಸ್ಪಂಧಿಸುವ ಒಬ್ಬ ಜವಾಬ್ಧಾರಿಯುತ ವ್ಯಕ್ತಿಯಾಗಿ ಕವನಗಳನ್ನು ಬರೆಯುತ್ತೇನೆ. ಕವಿತೆ ಹುಟ್ಟುವುದು ಯಾವಾಗ? ಯಾವುದೋ ಒಂದು ವಿಷಯ ಮನಸ್ಸಿಗೆ ತಾಗಿ ಸಂತೋಷ, ಸಂಕಟ, ದುಃಖ ದುಮ್ಮಾನ, ಪ್ರೀತಿ , ಪ್ರಕೃತಿ ಸೌಂದರ್ಯ ಮುಂತಾದ ವಿಷಯಗಳ ಮನಸ್ಸಿನಲ್ಲಿ ಒಂದು ರೀತಿಯ ತುಡಿತ ಹೆಚ್ಚಾಗಿ ಕವಿತೆ ಹುಟ್ಟುತ್ತದೆ. ಆ ಸಮಯದಲ್ಲಿ ಏಕಾಂತ ಮತ್ತು ಪ್ರಶಾಂತವಾದ ಸ್ಥಳ ಬೇಕೆನಿಸುತ್ತದೆ. ನಿಮ್ಮ ಕವಿತೆಗಳಲ್ಲಿ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಪ್ರೀತಿ ಮತ್ತು ಪ್ರಕೃತಿ, ಸೌಂದರ್ಯ ಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ. ವಯೋ ಸಹಜವಾಗಿ ಮತ್ತು ಸರ್ವಕಾಲಕ್ಕೂ ಪ್ರೀತಿ- ಪ್ರೇಮ ಎವರ್ ಗ್ರೀನ್. ಈ ಮಲೆನಾಡಿನ ಮಳೆ – ಹಸಿರ ಕಾಡು ಹೆಚ್ಚು ಪ್ರಭಾವಿಸಿವೆ ಮತ್ತು ಕವನವಾಗಿವೆ. ದೇಶಪ್ರೇಮ, ನಾಡು-ನುಡಿ ಬಗ್ಗೆಯೂ ಅಗಾಧ ಪ್ರೀತಿ ಇದೆ. ನಾನು ನಮ್ಮ ವ್ಯಕ್ತಿಗಳ ಸ್ವಭಾವಗಳನ್ನು ಬಹಳ ಕುತೂಹಲದಿಂದ ನೋಡುತ್ತೇನೆ. ಕೆಲವರಿಗೆ ನಿಜ-ಸುಳ್ಳುಗಳನ್ನು ನಿರ್ಧರಿಸುವಷ್ಟು ಬುದ್ಧಿವಂತರಿಲ್ಲದೆ ಇರೋದು. ದ್ವೇಷ , ಸ್ವಾರ್ಥ, ಭ್ರಷ್ಟಾಚಾರಗಳಂಥ ವಿಷಯಗಳು ಬಹಳ ಕಾಡುವಂತವುಗಳಾಗಿವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಬಾಲ್ಯ ಎಲ್ಲರ ಜೀವನದಲ್ಲಿಯೂ ಬಹಳ ಪ್ರಭಾವ ಬೀರುವಂತದು. ಆ ಬಾಲ್ಯದ ಘಟನೆಗಳು ನೆನಪಾದಾಗ ಮತ್ತೆ ಮತ್ತೆ ಬಾಲ್ಯಕ್ಕೀಳಿಯುತ್ತೇವೆ. ಗೆಳೆಯರೆಲ್ಲ ಕೂಡಿ ಆಡಂಭರವಿಲ್ಲದ ಅಂದಿನ ಆಟಗಳು ಈಗಲೂ ನೆನಪಾಗುತ್ತವೆ. ನಾನು ಸಾಕಿದ್ದ ಪಾರಿವಾಳಗಳನ್ನು ಬೆಕ್ಕೊಂದು ಕದ್ದೊಯ್ದಿತ್ತು. ಆಗ ನಾನು ಅತ್ತಿದ್ದೇನೆ. ಅದೇ ಕವನವೂ ಆಯಿತು. “ಪ್ರೀತಿಯ ಹಕ್ಕಿ ನನ್ನೆದೆಯ ಕುಕ್ಕಿ ಅಳುತಿದೆ ಬಿಕ್ಕಿ.” ನಾನು ನನ್ನ ಗೆಳೆಯ ಸುಮ್ಮನೆ ಮಾತು ಬಿಟ್ಟಾಗಿನ ಸಂದರ್ಭವನ್ನು ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯ ವೃದ್ಧಿಸುವಂತೆ ಬರೆದೆ. ಅದೊಂದು ಪ್ರಸಿದ್ಧ ಕವನವೂ ಆಯಿತು. ಬಾಲ್ಯದ ಕ್ಷಣಗಳನ್ನು ನೆನಪಿಸಿ ಅನೇಕ ಮಕ್ಕಳ ಕವನಗಳನ್ನೂ ರಚಿಸಿದ್ದೇನೆ. ಹರೆಯವಂತೂ ಕಲ್ಪನೆ, ಕನಸುಗಳಿಂದ ತುಂಬಿರುತ್ತದೆ. ಯಾವಾಗಬೇಕಾದರೂ ಕವನವಾಗಿ ಬಿಡುತ್ತೆ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಮಹಾಕವಿ ಪಂಪ ಅವರ ಹೇಳಿಕೆಯಂತೆ ‘ಮಾನವ ಕುಲಂ ತಾನೊಂದೇ ವಲಂ’ ಎಂಬ ನಿಲುವು ನನ್ನದು. ಅವರವರ ಧರ್ಮ, ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು. ಒಬ್ಬರನ್ನೊಬ್ಬರು ಪ್ರೀತಿ ಗೌರವಿಸಬೇಕು. ಅದು ಎಲ್ಲ ಧರ್ಮ ,ಜಾತಿಗಳಿಂದಲೂ ಆಗಬೇಕು. ನಮ್ಮ ನಮ್ಮ ಜಾತಿ, ಧರ್ಮದಲ್ಲಿ ನಂಬಿಕೆ, ಅಭಿಮಾನವಿರಲಿ. ಅಂಧಾನುಕರಣೆ, ದುರಭಿಮಾನ ಬೇಡ ಎಂಬುದು ನನ್ನ ವಿಚಾರ. ದಯವೇ ಧರ್ಮದ ಮೂಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ? ಕಲೆ, ಸಾಹಿತ್ಯ, ಜನಪದ ಕಲೆಗಳು ಆಧುನಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬರುತ್ತಿರುವುದು ಖುಷಿಯ ವಿಚಾರ. ಅವಕಾಶಗಳು ಸಾಕಷ್ಟಿವೆ. ಭರಾಟೆಯ ಮಧ್ಯ ಜೊಳ್ಳು ಹೆಚ್ಚು ವಿಜೃಂಭಿಸುವ ಸಾಧ್ಯತೆಯಿದೆ. ಸತ್ವಯುತವಾದ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಬೇಕಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಪ್ರದೇಶವಾರು ಬೇಧಭಾವವನ್ನು ನಮ್ಮ ಸಾಹಿತಿಗಳು ಮಾಡತ್ತಾರೆ. ಮೊದಲು ನಮ್ಮ ಹಿರಿಯರು ನಾಡು-ನುಡಿ ಮೇಲಿನ ಅಭಿಮಾನದಿಂದ ಸಾಹಿತ್ಯ ರಚಿಸಿ ತಲೆಮೇಲೆ ಹೊತ್ತು ಮಾರುತ್ತಿದ್ದರು. ಸರ್ಕಾರಗಳು ಅನುದಾನ ನೀಡೊದು ಶುರುಮಾಡಿದಾಗಿನಿಂದ ಏನೂ ಗಂಧವಿಲ್ಲದವರು, ರಾಜಕಾರಣ ಬಳಸಿ ಚುಕ್ಕಾಣಿ ಹಿಡಿಯಲಿಕ್ಕೆ ಬರುತ್ತಿದ್ದಾರೆ. ಅವರಿಗೆ ಸಾಹಿತ್ಯ ತಿಳಿದಿಲ್ಲ, ಸಾಹಿತಿಗಳ ಮೇಲಂತೂ ಗೌರವವೇ ಇಲ್ಲ. ಹಣ ಚೆಲ್ಲಿ ಹಣ ಮಾಡೋ ಕಾಯಕಕ್ಕಿಳಿದಿದ್ದಾರೆ. ಬಂಡಾಯ ಸಾಹಿತ್ಯ ಪ್ರಾರಂಭವಾದಾಗಿನಿಂದ ಎಲ್ಲ ಜನಾಂಗದವರಿಗೂ ಅವಕಾಶಗಳು ದೊರೆಯುತ್ತಿರುವುದು ಸಮಾಧಾನ ತಂದಿದೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ದೇಶ ಅಂದ್ರೆ ನಾವೂ. ಪ್ರತಿಯೊಬ್ಬ ಪ್ರಜೆಯ ಮನಸ್ಥಿತಿಯೂ ಬದಲಾಗಬೇಕಿದೆ. ಪ್ರಾಮಾಣಿಕತೆ, ಮಾನವೀಯತೆಯತ್ತ ನಮ್ಮ ಮನಸ್ಸು ತುಡಿಯಬೇಕಿದೆ. ತುಳಿತಕ್ಕೊಳಗಾದ, ಹಿಂದುಳಿದವರನ್ನು ಮೇಲೆತ್ತುವ ಕಾರ್ಯಯೋಜನೆಗಳು ಜಾರಿಯಾಗಬೇಕಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಕನ್ನಡ ಹಾಗೂ ಆಂಗ್ಲಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು? ಸಾಹಿತ್ಯ ಪ್ರತಿ ಭಾಷೆಗೂ ಜೀವ ಇದ್ದಂತೆ. ಆ ಭಾಷೆಯ ಮೌಲ್ಯವು ಹೆಚ್ಚಾಗಬೇಕಾದರೆ ಭಾಷೆಯಲ್ಲಿ ವಿಭಿನ್ನ ಪ್ರಯೋಗವುಳ್ಳ ಸಾಹಿತ್ಯ ಕೃಷಿಯಾಗಬೇಕು. ನಮ್ಮ ಕನ್ನಡ ಭಾಷೆಯೂ ಸಹಿತ ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾಷೆಯಾಗಿದೆ. ಸಂಪದ್ಭರಿತವಾದ ಭಾಷೆಯಾಗಿರುವುದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿದೆ. ಕನ್ನಡದಲ್ಲಿ ಕಾವ್ಯಕ್ಕೆ ದ.ರಾ.ಬೇಂದ್ರೆಯವರು ನನ್ನಿಷ್ಟದ ಕವಿ. ಕಾವ್ಯವು ಎಷ್ಟು ಸಾರಿ ಓದಿದರೂ ಹೊಸ ಹೊಳಹನ್ನುಂಟು ಮಾಡುತ್ತದೆ. ಹಾಗೆಯೇ ಕುವೆಂಪು, ದಿನಕರ ದೇಸಾಯಿ, ಬರಗೂರು ರಾಮಚಂದ್ರಪ್ಪ ಅವರು ಇಷ್ಟವಾಗುತ್ತಾರೆ. ಈಚೆಗೆ ಓದಿದ ಕೃತಿಗಳು ಯಾವುವು? ಗಂಗಾಧರ ನಾಯ್ಕ ಅವರ ‘ಡೋಂಟ್ ಗಿವ್ ಅಫ್ ಮುಂದಕ್ಕೆ ಸಾಗೋಣ’, ನಾಗರಾಜ ಹರಪನಹಳ್ಳಿಯವರ ‘ವಿರಹಿ ದಂಡೆ’, ಗಂಗಾಧರ ಎಸ್.ಎಲ್ ಅವರ ‘ನಮ್ಮ ಪಯಣ’ ನಿಮಗೆ ಇಷ್ಟವಾದ ಕೆಲಸ ಯಾವುದು? ಮಕ್ಕಳಿಗೆ ಪಾಠ ಹೇಳಿಕೊಡೋದು ನನಗೆ ಬಹಳ ಇಷ್ಟ. ನಿಮ್ಮ ಪ್ರೀತಿಯ , ತುಂಬಾ ಇಷ್ಟಪಡುವ ಸಿನೇಮಾ ಯಾವುದು? ನಾನು ವಿಷ್ಣುವರ್ಧನ್ ಅವರ ಅಭಿಮಾನಿ. ‘ಅವರ ಯಜಮಾನ’ ಸಿನೆಮಾ ನನಗೆ ಬಹಳ ಇಷ್ಟ. ನೀವು ಮರೆಯಲಾರದ ಘಟನೆ ಯಾವುದು? ಮರೆಯಲಾರದ ಅನೇಕ ಘಟನೆಗಳಿವೆ. ಅದರಲ್ಲಿ ಸಿಹಿ-ಕಹಿಗಳಿವೆ. ಬಡತನದಲ್ಲಿ ಬೆಳೆದು ಕವನ ಸಂಕಲನ ಬಿಡುಗಡೆಯ ಕ್ಷಣ. ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಪಡೆದು ನಮ್ಮ ಗೌಳಿವಾಡದ ಜನ ಸನ್ಮಾನಿಸಿದ್ದು, ಮತ್ತು ನನ್ನ ತಾಯಿ ತೀರಿಕೊಂಡಾಗಿನ ದುಃಖದ ಘಟನೆ ಮರೆಯಲಾಗದು. ತೀರಾ ಕಡು ಬಡತನದಲ್ಲಿ ನಮ್ಮನ್ನು ಓದಿಸಿ ಬೆಳೆಸಿದ ನನ್ನ ತಂದೆ-ತಾಯಿಗಳನ್ನು, ನನ್ನ ಸಹೋದರರನ್ನು ಸ್ಮರಿಸುವೆ. ******************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅಂಕಣ ಬರಹ ಸುಜಾತಾ ಎನ್. ರವೀಶ್ ಸುಜಾತಾ ಎನ್. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದದ್ದು .ಬಿಕಾಂ ಪದವೀಧರೆ. ಅನಂತರ ಅಂಚೆ ದೂರಶಿಕ್ಷಣದ ಮೂಲಕ ಎಂಕಾಂ ಪದವಿ ಪೂರೈಸಿದರು. ಚಿಕ್ಕಂದಿನಿಂದ ಓದುವ ಹವ್ಯಾಸ ಇತ್ತು. ಶಾಲೆ ಕಾಲೇಜು ಪತ್ರಿಕೆಗಳಲ್ಲಿ ಕಥೆ ಕವನಗಳು ಪ್ರಕಟವಾದವು. ಭಾರತೀಯ ಜೀವ ವಿಮಾ ನಿಗಮ ಮೈಸೂರು ಶಾಖೆ ೫ ರಲ್ಲಿ ವೃತ್ತಿ. ಈ ಮಧ್ಯೆ ಸುದೀರ್ಘ ಮೂವತ್ತು ವರ್ಷಗಳ ಅವಧಿಯಲ್ಲಿ ಓದುವ ಹವ್ಯಾಸ ಮುಂದುವರಿದಿದ್ದರೂ ಏಕೋ ಬರವಣಿಗೆ ಕೈ ಹಿಡಿದಿರಲಿಲ್ಲ. ಇತ್ತೀಚೆಗೆ ಮೂರು ವರ್ಷಗಳಲ್ಲಿ ಎಫ್ .ಬಿ. , ವಾಟ್ಸಾಪ್ ಗ್ರೂಪುಗಳಲ್ಲಿ ಸಕ್ರಿಯವಾದರು. ನಂತರ ,ಕವನಗಳ ಕೃಷಿ ಮತ್ತೆ ಮೊದಲಾಗಿ ಈಗ ಐನೂರಕ್ಕೂ ಹೆಚ್ಚು ಕವನಗಳು, ೨೦೦ ಗಝಲ್ಗಳು ರಚಿಸಿದ್ದಾರೆ. ರುಬಾಯಿ, ಟಂಕಾ ,ಹಾಯಿಕು, ವಚನ ಇನ್ನಿತರ ಪ್ರಕಾರಗಳು ರಚಿಸಿದ್ದಾರೆ. ಈಗ ಸೋದರ ಮುತ್ತುಸ್ವಾಮಿಯವರ ಪ್ರೋತ್ಸಾಹದಶ್ರೀಯುತ ನಾಗೇಶ ಮೈಸೂರು ಅವರು ಸಂಪಾದಿಸಿದ “ನಾವು ನಮ್ಮವರು” ಕವನ ಸಂಕಲನದಲ್ಲಿನ ಅವರ ‘ ನನ್ನ ಮುಖವಾಡಗಳು’ ಎಂಬ ಕವನವನ್ನು ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿಎಸ್ ಸಿ ತರಗತಿಯ ಪೂರಕ ಪಠ್ಯವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇವರ ಪ್ರಥಮ ಸಂಕಲನ “ಅಂತರಂಗದ ಆಲಾಪ” ೭೬ ಕವನಗಳ ಸಂಕಲನವಾಗಿದ್ದು ಮೇ ೨೦೧೯ ರಲ್ಲಿ ಲೋಕಾರ್ಪಣೆಗೊಂಡಿದೆ .ಸಾಹಿತ್ಯೋತ್ಸವ ಎಂಬ ಮುಖ ಹೊತ್ತಿಗೆಯ ಸಾಹಿತ್ಯಿಕ ಗುಂಪಿನ ನಿರ್ವಾಹಕರಲ್ಲಿ ಒಬ್ಬಳಾಗಿದ್ದಾರೆ. ಅಲ್ಲಿನ ಸಾಪ್ತಾಹಿಕ ಕವನ ಸ್ಪರ್ಧೆ “ಪದ ಪದ್ಯೋತ್ಸವ”ದ ನಿರ್ವಹಣೆ ನಡೆಸುತ್ತಿದ್ದಾರೆ ಮುಖಾಮುಖಿಯಲ್ಲಿ ಈ ಸಲ ಸುಜಾತ ರವೀಶ್ ಮೈಸೂರು ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ. ” ನಾನು ದೇವರನ್ನು ಖಂಡಿತಾ ನಂಬುತ್ತೇನೆ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ನನ್ನ ಮನಸ್ಸಿನ ನೋವನ್ನಾಗಲಿ, ನಲಿವನ್ನಾಗಲಿ ಆಂತರಿಕ ತುಮುಲ ದ್ವಂದ್ವಗಳನ್ನಾಗಲಿ, ಒಂದು ವಿಷಯದ ಬಗೆಗಿನ ಜಿಜ್ಞಾಸೆಯಾಗಲಿ, ಕೆಲವೊಮ್ಮೆ ಸಣ್ಣಪುಟ್ಟ ಸಂಭ್ರಮಗಳನ್ನಾಗಲಿ, ಇವುಗಳನ್ನೆಲ್ಲಾ ಹೊರಹಾಕುವ ಹಂಚಿಕೊಳ್ಳುವ ಮಾಧ್ಯಮ ನನಗೆ ಕವಿತೆ . ಕವಿತೆ ಹುಟ್ಟುವ ಕ್ಷಣ ಯಾವುದು ? ಮನಸ್ಸಿನ ಭಾವನೆಗಳನ್ನು ಒಳಗೇ ಅದುಮಿಟ್ಟುಕೊಳ್ಳಲಾಗದೇ ಈ ಕ್ಷಣ ಪದಗಳಲ್ಲಿ ಹೊರಹಾಕಲೇಬೇಕು , ಅವು ಅದಮ್ಯ ಎನಿಸಿದ ಆ ಹೊತ್ತು .ಇದ್ದಕ್ಕಿದ್ದ ಹಾಗೆ ಪದಪುಂಜಗಳು ತಲೆಯಲ್ಲಿ ಮೂಡಿ ಬಿಡುತ್ತವೆ. ಆ ಕ್ಷಣ ಅವುಗಳನ್ನು ಬರೆದಿಡಬೇಕು ನಂತರ ಬರೆವೆನೆಂದರೆ ಆ ಕ್ಷಣದ ತೀವ್ರತೆ ಅದೇ ಪದಗಳು ಮತ್ತೆ ಬರುವುದಿಲ್ಲ . ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? . ಹೆಚ್ಚಾಗಿ ನನ್ನ ಕವನಗಳೆಲ್ಲ ಭಾವನಾಜಗತ್ತಿಗೆ ಸಂಬಂಧಪಟ್ಟಂಥವು. ನಿತ್ಯ ಜೀವನದ ಸುಖ ದುಃಖಗಳು. ಸುತ್ತಣ ಪ್ರಕೃತಿಯ ದೃಶ್ಯಗಳು. ಒಮ್ಮೊಮ್ಮೆ ಸಮಾಜದಲ್ಲಿ ನಡೆಯುವ ಅನ್ಯಾಯ ಅನಾಚಾರಗಳು ನನ್ನ ಕವಿತೆಗೆ ಕಾರಣವಾಗಿವೆ . ಕೆಲವೊಂದು ವಸ್ತುಗಳು ಸಂಧರ್ಭಗಳು ಹಾಗೂ ಸ್ಥಳಗಳು ಕವಿತೆಗೆ ವಸ್ತುವಾಗಿಸಿದೆ ಪುರಾಣದ ಪಾತ್ರಗಳು ನನ್ನ ಮತ್ತೊಂದು ಮೆಚ್ಚಿನ ವಿಷಯ ಊರ್ಮಿಳೆ, ಗಾಂಧಾರಿ, ಕೈಕೇಯಿ, ಅಹಲ್ಯೆ, ಭೀಷ್ಮ, ಕರ್ಣ ಇವರೆಲ್ಲ ನನ್ನ ಕವನದಲ್ಲಿ ಬಂದು ಹೋಗಿದ್ದಾರೆ . ಆದರೆ ಅನುಭವದ ಕೊರತೆಯೋ ನನ್ನ ದೌರ್ಬಲ್ಯವೋ ಗೊತ್ತಿಲ್ಲ ಮನಸ್ಸಿನ ಭಾವನೆ ತುಮುಲಗಳೇ ಹೆಚ್ಚಾಗಿ ನನ್ನನ್ನು ಕಾಡಿ ಕವಿತೆ ಬರೆಸುತ್ತವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಖಂಡಿತ… ಕವಿತೆಗಳು ಬಾಲ್ಯ ಹರೆಯದ ಮೆಲುಕುಗಳು ಅನುಭವದ ಪಡಿ ನೋಟಗಳೇ ಅಗಿವೆ .ಮುಗ್ಧತೆ ಬೆರಗು ತುಂಬಿದ ನೋಟ ಪ್ರಪಂಚದೆಡೆಗಿನ ಅಚ್ಚರಿ ಇದೆಲ್ಲ ಬಾಲ್ಯದ ಕಾಣಿಕೆಯಾದರೆ ,ನನ್ನ ಹೆಚ್ಚಿನ ಪ್ರೇಮ ಕವಿತೆಗಳಲ್ಲಿ ಹರೆಯ ಇಣುಕಿ ಹಾಕಿದೆ . ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಸ್ವಾರ್ಥ ಹಾಗೂ ಜನಹಿತಕ್ಕಾಗಿ ಮಿಡಿಯುವುದು ಇದು ರಾಜಕೀಯಕ್ಕೆ ಬರುವವರ ಮೂಲಭೂತ ಮಂತ್ರ. ಆದರೆ ಅದೇ ಕಣ್ಮರೆಯಾಗುತ್ತಿರುವ ವಿಪರ್ಯಾಸದ ದುರಂತ ಕಣ್ಣಿಗೆ ಕಟ್ಟುತ್ತಿದೆ ವಿಷಾದ ತರಿಸುತ್ತಿದೆ . ಜನಗಳ ಏಳಿಗೆಯನ್ನು ದೃಷ್ಟಿಯಲ್ಲಿರಿಸಿಕೊಂಡ ನಾಯಕರುಗಳ ಕೊರತೆ ನಮ್ಮಲ್ಲಿ ಕಾಡುತ್ತಿದೆ ಅಂತಹ ನಾಯಕರನ್ನು ಬೆಳೆಸಿ ಆರಿಸುವುದು ನಮ್ಮಗಳ ಕರ್ತವ್ಯವೂ ಎಂಬುದು ನೆನಪಿಗೆ ಬರುತ್ತದೆ . ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ನಾನು ದೇವರನ್ನು ಖಂಡಿತಾ ನಂಬುತ್ತೇನೆ ದೇವರು ಎಂಬುದು ಒಂದು ನಂಬಿಕೆ ಹಾಗೂ ಗಮ್ಯವಾದರೆ ಧರ್ಮಗಳು ಅದನ್ನು ಸೇರುವ ಮಾರ್ಗಗಳು. ದಾರಿ ಯಾವುದಾದರೇನು ಗಮ್ಯವನ್ನೇ ಮುಟ್ಟುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣದ ಪರಿಭಾಷೆ ಬದಲಾಗುತ್ತಿದೆ ಮೊದಲೆಲ್ಲಾ ಮುಖತಃ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ದೂರದರ್ಶನ ಹಾಗೂ ಆನ್ ಲೈನ್ ಮೂಲಕ ನಡೆಯುತ್ತಿವೆ. ಎಲ್ಲೋ ವೈಯುಕ್ತಿಕ ಸಂಪರ್ಕ ಹಾಗೂ ಅದರ ಮೂಲಕ ನಡೆಯುತ್ತಿದ್ದ ವಿಶಿಷ್ಟ ಸಂವಹನದ ಕೊರತೆ ಎದ್ದು ಕಾಣುತ್ತಿದೆ. ಸಂಗೀತವಾಗಲಿ ನೃತ್ಯವಾಗಲಿ ಕಲೆಯ ಪ್ರದರ್ಶನಕ್ಕಿಂತ ತಾಂತ್ರಿಕತೆಯ ಅದ್ಧೂರೀಕರಣ ಕಣ್ಣಿಗೆ ರಾಚುತ್ತದೆ. ವೈಭವ ಹಾಗೂ ಪ್ರದರ್ಶನಪ್ರಿಯತೆ ಹೆಚ್ಚಾಗುತ್ತಿದೆ. ಕಲೆಗಾಗಿ ಕಲೆ ಎನ್ನುವುದು ಮಾಯವಾಗಿ ಎಲ್ಲದರಲ್ಲೂ ವಾಣಿಜ್ಯೀಕರಣದ ಭರಾಟೆ . ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ತೀರಾ ಇತ್ತೀಚೆಗೆ 2 ವರ್ಷದಿಂದ ಬರೆಯುತ್ತಾ ಬಂದಿರುವ ನನಗೆ ಅದರ ಪರಿಚಯ ಇಲ್ಲ .ಬರೆಯುವ ಸಾಹಿತ್ಯ ಗಟ್ಟಿಯಾಗಿದ್ದರೆ ಇಂದಲ್ಲ ನಾಳೆ ಮೌಲ್ಯ ಇದ್ದೇ ಇದೆ ಎನ್ನುವ ನಂಬಿಕೆ ಇದೆ. ಇನ್ನು ಪರಿಷತ್ತು ಹಾಗೂ ಇನ್ನಿತರ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ ಹೇಳ ಬೇಕೆಂದರೆ ಹಿಡಿಯಬೇಕಾದ ಹಾದಿಯನ್ನು ಬಿಟ್ಟು ಬೇರೆತ್ತಲೋ ಸಾಗುತ್ತಿದೆ ಅಂತ ಅನ್ನಿಸುತ್ತೆ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉನ್ನತ ಪರಂಪರೆ ಸಂಸ್ಕ್ರತಿಯ ದೇಶ ನನ್ನದು ಅಂತ ಬರಿ ಗತ ಇತಿಹಾಸದ ಬಗ್ಗೆ ಗರ್ವ ಪಡದೆ ಈ ಯುಗದಲ್ಲಿ ಹೇಗೆ ಮುನ್ನಡೆಯಬೇಕೆಂಬ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ. ಹೊಸ ಚಿಗುರು ಹಳೆ ಬೇರು ಎಂಬ ತತ್ವದಡಿಯಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸುವ ಕೆಲಸ ಆಗಬೇಕಿದೆ. ಆದರೆ ಸ್ವಹಿತಾಸಕ್ತಿ ರಾಜಕೀಯ ದೊಂಬರಾಟಗಳ ಮಧ್ಯೆ ಮೂಲೋದ್ದೇಶ ಮರೆತು ಕವಲುದಾರಿಯಲ್ಲಿ ಸಾಗುತ್ತಿದೆ ಎನ್ನಿಸುತ್ತದೆ . ಜನರಲ್ಲಿ ಇನ್ನೂ ಹೆಚ್ಚಿನ ದೇಶಪ್ರೇಮ ಜಾಗೃತಿ ಮೂಡಿಸಬೇಕು. ಆದರೆ ಮಾಡುವರ್ಯಾರು ? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರು ಯಾರು ಎಂಬ ಹಾಗೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೂಡಿದ್ದ ಐಕ್ಯತೆ ಅದೇ ಕೆಚ್ಚು ಈಗಲೂ ಬಂದರೆ ನಾವು ಏನನ್ನಾದರೂ ಸಾಧಿಸಬಹುದು . ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ನನಗೇನೂ ಅಂಥ ದೊಡ್ಡ ಕನಸುಗಳಿಲ್ಲ. ಇನ್ನೂ ಇನ್ನೂ ಓದುತ್ತಾ ಮತ್ತಷ್ಟು ಹೆಚ್ಚಿನ ಮೌಲಿಕ ಸಾಹಿತ್ಯ ರಚಿಸಬೇಕೆಂಬ ಬಯಕೆ ಅಷ್ಟೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಕುವೆಂಪು ಮತ್ತು ಎಸ್ ಎಲ್ ಭೈರಪ್ಪ ಅವರು. ಕುವೆಂಪು ಅವರು ವರ್ಣಿಸುವ ಪ್ರಕೃತಿ ಅವರ ಪದಗಳ ಪ್ರಯೋಗ ಕುತೂಹಲ ಮೂಡಿಸುತ್ತವೆ ಮತ್ತೆ ಮತ್ತೆ ಓದಬೇಕೆನಿಸುತ್ತದೆ .ಭೈರಪ್ಪನವರ ಯೋಚನಾಲಹರಿ ಅವರ ಪಾತ್ರಗಳ ಸಂಕೀರ್ಣತೆ ಯೋಚನೆಗಳಿಗೆ ಅವರು ಕೊಡುವ ಸ್ಪಷ್ಟತೆ ಮತ್ತು ಅವರು ಕಥೆ ಕಟ್ಟುವ ರೀತಿ ತುಂಬಾ ಇಷ್ಟವಾಗುತ್ತದೆ. ಇಂಗ್ಲಿಷಿನಲ್ಲಿ ಹೆಚ್ಚು ಓದಿಕೊಂಡಿಲ್ಲ ಆದರೆ ಶೇಕ್ಸ್ ಪಿಯರ್ ಇಷ್ಟ . ಈಚೆಗೆ ಓದಿದ ಕೃತಿಗಳಾವವು? ಡಾ ರಾಜಶೇಖರ ಜಮದಂಡಿ ಅವರು ಸಂಪಾದಿಸಿದ ಪ್ರಮುಖ ನೂರು ಲೇಖಕರ ಅಪ್ಪನ ಬಗ್ಗೆ ಬರೆದ ಆಪ್ತ ಬರಹಗಳು ” ಅಪ್ಪನ ಹೆಗಲು “. ತಮ್ಮ ತಂದೆಯವರ ಬಗ್ಗೆ ಪ್ರಮುಖ ಲೇಖಕರುಗಳು ಬರೆದ ಲೇಖನವನ್ನು ಸಂಪಾದಿಸಿದ್ದಾರೆ ಓದಲು ಆಸಕ್ತಿದಾಯಕವಾಗಿದೆ ದಿ” ಲಾಸ್ಟ್ ಲೆಕ್ಚರ್” ರ್ಯಾಂಡಿ ಪಾಶ್ ಅವರು ಬರೆದು ಕನ್ನಡಕ್ಕೆ ಉಮೇಶ್ ಅವರು ಅನುವಾದಿಸಿದ ಪುಸ್ತಕ. ಕ್ಯಾನ್ಸರ್ ನಿಂದ ಇನ್ನೇನು ಸಾವು ಖಚಿತ ಎನ್ನುವ ವ್ಯಕ್ತಿಯೊಬ್ಬ ತನ್ನ ಮಕ್ಕಳಿಗಾಗಿ ತನ್ನ ಆಲೋಚನೆಗಳನ್ನು ತೆರೆದಿಡುವ ಹಾಗೂ ಜೀವನದ ಸಾರವನ್ನು ಶಬ್ದಗಳಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನ. ಮನಸ್ಸಿಗೆ ತುಂಬಾ ತಟ್ಟಿತು ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರವಣಿಗೆ ಬಿಟ್ಟರೆ, ಅಡುಗೆ ಮಾಡುವುದು ನಿಮಗೆ ಇಷ್ಟವಾದ ಸ್ಥಳ ಯಾವುದು ? ಕುಪ್ಪಳ್ಳಿಯ ಕವಿಶೈಲ. ತುಂಬಾ ವರ್ಷಗಳಿಂದ ನೋಡಬೇಕೆಂದಿದ್ದೆ. ಈಗ ಕಳೆದ 2 ವರ್ಷದಲ್ಲಿ 2 ಬಾರಿ ಸಂದರ್ಶಿಸಿದ್ದೇನೆ. ಆ ಮನೆಯ ಗಹನ ಗಂಭೀರತೆ, ಕವಿ ಶೈಲ ದಲ್ಲಿನ ಒಂದು ರೀತಿಯ ನಿಗೂಡತೆ, ಹರಡಿ ಹಾಸಿ ಚೆಲ್ಲಿದ ಪ್ರಕೃತಿ ಸೌಂದರ್ಯ ಎಲ್ಲಾ ನನ್ನ ಮನಸ್ಸನ್ನು ಸೆರೆಹಿಡಿದಿವೆ. ಅಲ್ಲಿ ಓಡಾಡುವಾಗಲೆಲ್ಲ ಇಲ್ಲಿ ರಸಋಷಿ ಗಳು ನಡೆದಿದ್ದರು ಎಂಬ ಭಾವವೇ ಒಂದು ರೀತಿಯ ಪುಳಕ ತರುತ್ತದೆ . ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಹಿಂದಿಯ ದೋ ಆಂಖೆ ಬಾರಹ್ ಹಾಥ್ ಹಾಗೂ ಕನ್ನಡದ ಶರಪಂಜರ ನೀವು ಮರೆಯಲಾರದ ಘಟನೆ ಯಾವುದು? ಯಾವುದೇ ವಶೀಲಿ ಶಿಫಾರಸ್ಸು ಇಲ್ಲದೆ “ನಾವು ನಮ್ಮವರು” ಎಂಬ ಸಂಪಾದಿತ ಸಂಕಲನದಲ್ಲಿನ ನನ್ನ “ಮುಖವಾಡಗಳು” ಕವನವನ್ನು ಕುವೆಂಪು ವಿಶ್ವವಿದ್ಯಾಲಯದ ಎರಡನೇ ಬಿ ಎಸ್ಸಿಯ ಪೂರಕ ಪಠ್ಯವಾಗಿ ಆಯ್ಕೆಮಾಡಿದ್ದು. ತುಂಬಾ ಖುಷಿ ಕೊಟ್ಟ ಸಂಗತಿಯೂ ಹೌದು ಹೇಳಲೇ ಬೇಕಾದ ಕೆಲ ಸಂಗತಿಗಳು; ಕಾಲೇಜು ಓದುವ ಕಾಲದಲ್ಲಿ ಬರೆಯುವ ಹವ್ಯಾಸ ಇತ್ತು .ಅದನ್ನು ಮುಂದುವರಿಸಿಕೊಂಡು ಹೋಗಲು ಆಗದಿದ್ದುದಕ್ಕೆ ಖೇದವಿದೆ. ಅದಕ್ಕಾಗಿಯೇ ಈಗ ಬರೆಯುವ ಆಸಕ್ತಿಯಿರುವವರಿಗೆ “ಸಾಹಿತ್ಯೋತ್ಸವ” ಎಂಬ ಮುಖಹೊತ್ತಿಗೆಯ ಗುಂಪಿನ ನಿರ್ವಾಹಕಿಯಾಗಿ ಕೈಲಾದಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ . ಇಷ್ಟು ಬರೆಯುವ ತುಡಿತ ಮಿಡಿತ ಇಟ್ಟುಕೊಂಡು ಇಷ್ಟು ದಿನ ಬರೆಯದೆ ಹೇಗೆ ಸುಮ್ಮನಿದ್ದೆ ಎಂದು ನನ್ನ ಬಗ್ಗೆ ನನಗೇ ಆಶ್ಚರ್ಯ ಉಂಟಾಗುತ್ತದೆ. ಈಗಂತೂ ದಿನಕ್ಕೆ ಏನಾದರೂ ಚೂರು ಬರೆಯದಿದ್ದರೆ ಆಗುವುದೇ ಇಲ್ಲ . ಇನ್ನು ನನ್ನ ಬರವಣಿಗೆಯ ಬಗ್ಗೆ ಹೇಳಬೇಕೆಂದರೆ ಸಾಹಿತ್ಯ ಕ್ಷೇತ್ರದಲ್ಲಿ ಈಗ ಅಂಬೆಗಾಲಿಡುತ್ತಿರುವ ತೊದಲು ನುಡಿ ಆಡುತ್ತಿರುವ ಮಗು ನಾನು. ನನ್ನ ಪ್ರಥಮ ಸಂಕಲನದ ವಿಮರ್ಶೆ ಮಾಡಿದ ಶ್ರೀಯುತ ಪ್ರಕಾಶ ಕಡಮೆ ಅವರು ಹೇಳಿದಂತೆ ಪ್ರಾಸದ ತ್ರಾಸ ಕಳಚಿಕೊಳ್ಳಬೇಕಾಗಿದೆ, ಅಂತರಂಗದ ಪರಿಧಿಯನ್ನು ದಾಟಿ ಯೋಚನೆಗಳು ಕವಿತೆಗಳು ವಿಸ್ತೃತ ವಿಶಾಲ ಹರಹಿಗೆ ಚಾಚಿಕೊಳ್ಳಬೇಕಾಗಿದೆ. ಸಾಮಾಜಿಕ ತುಡಿತ ಮಿಡಿತಗಳಿಗೆ ಸಾಕ್ಷಿಯಾಗಬೇಕಾಗಿದೆ. ಇವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಸಾಹಿತ್ಯ ಕೃಷಿ ನಡೆಸಬೇಕಾಗಿದೆ ಮತ್ತಷ್ಟು ಮೌಲ್ಯಯುತ ಬರವಣಿಗೆಯನ್ನು ಕೊಡಬೇಕಿದೆ. ************************************************************************ ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ







