ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—52 ಯಕ್ಷಗಾನದ ಸಿಹಿ-ಕಹಿ ನೆನಪುಗಳು ಹವ್ಯಾಸಿ ಕಲಾವಿದನಾಗಿ ನಾನು ಯಕ್ಷಗಾನ ರಂಗದಲ್ಲಿ ತೊಡಗಿಕೊಂಡ ಬಳಿಕ ಕಾಲೇಜಿನ ಆಚೆಗೂ ನನ್ನ ಜೀವನಾನುಭವಗಳು ವಿಸ್ತಾರಗೊಂಡವು. ಪ್ರೇಕ್ಷಕರ ಅಭಿಮಾನ ಒಲವುಗಳು ಒಂದು ಕಡೆ ರೋಮಾಂಚನಗೊಳಿಸಿದರೆ ಸಂಘಟಕರ ಅಪೇಕ್ಷೆಯಂತೆ ನಡೆದುಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ನಿಷ್ಠುರವನ್ನು, ವಿರೋಧವನ್ನು ಎದುರಿಸಬೇಕಾದ ಅನಿವಾರ್ಯ ಸನ್ನಿವೇಶಗಳೂ ಸೃಷ್ಟಿಯಾಗುತ್ತಿದ್ದವು. ಬೇರೆ ಬೇರೆ ಕೌಟುಂಬಿಕ ಪರಿಸರದಿಂದ ಬಂದ ಕಲಾವಿದರ ಆಲೋಚನೆ, ಸ್ವಭಾವಗಳಿಗೆ ಹೊಂದಿಕೊಳ್ಳುವುದು ಹಲವು ಬಾರಿ ಕಷ್ಟವೇ ಎನಿಸಿದರೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ಸಹ್ಯವಾಗಿಸಿಕೊಳ್ಳುವ ಅವಶ್ಯಕತೆಯಿರುತ್ತಿತ್ತು. ಜೊತೆಗೆ ನಾನೊಬ್ಬ ಕಾಲೇಜು ಉಪನ್ಯಾಸಕನಾದ್ದರಿಂದ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲೇಬೇಕಾದ ಗುರುತರವಾದ ಜವಬ್ದಾರಿಯೂ ನನ್ನ ಮೇಲಿತ್ತು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಸಂಘಟಕರು ಸಂಘಟಿಸುವ ಕಾರ್ಯಕ್ರಮದಲ್ಲಿ ನಮಗೆ ಎಲ್ಲೆಡೆಯೂ ನಿರೀಕ್ಷಿತ ಮಟ್ಟದ ವ್ಯವಸ್ಥೆ ಇರುವ ಭರವಸೆಯೇನೂ ಇರುತ್ತಿರಲಿಲ್ಲ. ಎಲ್ಲೋ ಕುಳಿತು ಬಣ್ಣ ಬಳಿದುಕೊಳ್ಳುವ, ಎಂಥಹದೋ ನೆಲದಲ್ಲಿ ನಿದ್ದೆಗಾಗಿ ಒರಗಿಕೊಳ್ಳುವ, ಮೆಚ್ಚದ ಅಡಿಗೆಯನ್ನೂ ಹೇಗೋ ಉಂಡು ಹೊಟ್ಟೆತುಂಬಿಕೊಳ್ಳುವ ಸಂದರ್ಭಗಳು ಬಂದಾಗ ನನ್ನ ಉಪನ್ಯಾಸಕನೆಂಬ ಅಹಮಿಕೆಯನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಗಳು ನನ್ನನ್ನು ಪರಿಪೂರ್ಣ ಮತ್ತು ಸಹನಶೀಲ ಮನುಷ್ಯನನ್ನಾಗಿ ರೂಪಿಸಲು ನೆರವಾದವು ಎಂದೇ ನನಗೆ ಅನಿಸುತ್ತದೆ. ಮತ್ತು ಅದೇ ಕಾರಣದಿಂದ ಎಲ್ಲರೊಡನೊಂದಾಗುವ ಸಂಯಮದ ಜೀವನ ಪಾಠ ನೀಡಿ ಯಕ್ಷಗಾನವೇ ನನ್ನನ್ನು ತಿದ್ದಿ ಪರಿಷ್ಕರಿಸಿದೆ ಎಂದು ನಂಬಿದ್ದೇನೆ. ಕಲೆಯೊಂದರ ಪ್ರಭಾವ ಮತ್ತು ಫಲಿತಾಂಶ ಅಂತಿಮವಾಗಿ ಇದೆ ಅಲ್ಲವೇ?           ಯಕ್ಷರಂಗಕ್ಕೆ ಸಂಬಂಧಿಸಿದಂತೆ  ಎರಡು ಮರೆಯಲಾಗದ ಸಿಹಿ-ಕಹಿ ಘಟನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು……..           ೧೯೮೮-೯೦ ರ ಸಮಯ. ಅಂಕೋಲೆಯ ನಮ್ಮ ಹವ್ಯಾಸಿ ಯಕ್ಷಗಾನ ತಂಡವು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡಬೇಕಿತ್ತು. ಅಂದು ತುಂಬ ಹೆಸರು ಮಾಡಿದ, ಹಲವಾರು ವೃತ್ತಿಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಪರಿಚಿತರಾದ ಅಗ್ಗರಗೋಣದ ಎಂ.ಎಂ. ನಾಯಕರು ನಮ್ಮ ತಂಡದ ನಾಯಕತ್ವ ಮತ್ತು ಪ್ರದರ್ಶನದ ಜವಾಬ್ದಾರಿ ವಹಿಸಿದ್ದರು. ಎಂ.ಎಂ.ನಾಯಕರು ವೃತ್ತಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲಾ ಶಿಕ್ಷಣ ತಪಾಸಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಆದರೂ ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಮೇಲಿಂದ ಮೇಲೆ ಯಕ್ಷಗಾನ ಪ್ರದರ್ಶನ, ಸಂಘಟನೆ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದರು. ಅವರ ದುಷ್ಟ ಬುದ್ಧಿ, ಕಂಸ, ಜರಾಸಂಧ ಮುಂತಾದ ಪಾತ್ರಗಳು ಬಹಳಷ್ಟು ಜನಮನ್ನಣೆ ಗಳಿಸಿದ್ದವು.           ಅಂದು ನಾವು ಹುಬ್ಬಳ್ಳಿಯಲ್ಲಿ ಪ್ರದರ್ಶನ ನೀಡಬೇಕಾದ ಪ್ರಸಂಗ “ಚಂದ್ರಹಾಸ ಚರಿತ್ರೆ”. ಅದರಲ್ಲಿ ಎಂ.ಎಂ. ನಾಯಕರ ದುಷ್ಟಬುದ್ಧಿ, ವಂದಿಗೆ ವಿಠೋಬ ನಾಯಕರ ಕುಳಿಂದ, ಗೋಕರ್ಣದ ಅನಂತ ಹಾವಗೋಡಿಯವರ ಮದನ, ನನ್ನದು ಚಂದ್ರಹಾಸ. ಮತ್ತಿತರ ಪಾತ್ರಗಳನ್ನು ತಂಡದ ವಿವಿಧ ಕಲಾವಿದರು ನಿರ್ವಹಿಸಬೇಕಿತ್ತು.           ಸಂಜೆಯ ಆರು ಗಂಟೆಗೆ ನಮ್ಮ ಪ್ರದರ್ಶನ ಆರಂಭವಾಗಬೇಕಿದ್ದುದರಿಂದ ನಾವು ಮಧ್ಯಾಹ್ನ ಹನ್ನೊಂದು ಗಂಟೆಗೆ ಅಂಕೋಲೆಯಿಂದ ಪ್ರಯಾಣ ಆರಂಭಿಸಿದೆವು.           ಒಂದು ಬಾಡಿಗೆ ಟೆಂಪೋ ಗೊತ್ತು ಮಾಡಿಕೊಂಡು ನಮ್ಮ ಯಕ್ಷಗಾನ ಪರಿಕರಗಳು ಇತ್ಯಾದಿ ಹೇರಿಕೊಂಡು ಹಿಮ್ಮೇಳ, ಮುಮ್ಮೇಳದ ಕಲಾವಿದರೆಲ್ಲ ಸೇರಿ ಟೆಂಪೋ ಭರ್ತಿಯಾಗಿತ್ತು. ಒಂದು ಒಂದುವರೆ ತಾಸಿನ ಪ್ರಯಾಣ ಮಾಡಿ ನಾವು ಅರಬೈಲ್ ಘಟ್ಟ ಹತ್ತಿಳಿದು ಯಲ್ಲಾಪುರ ನಗರ ಪ್ರವೇಶಕ್ಕೆ ಸನಿಹವಾಗಿದ್ದೆವು.           ಸ್ವಲ್ಪ ದೂರದಿಂದಲೇ ನಮಗೆ ದ್ವಿಚಕ್ರವಾಹನಗಳೂ ಸೇರಿದಂತೆ ಸಾಲುಗಟ್ಟಿ ನಿಂತ ಬೇರೆ ಬೇರೆ ವಾಹನಗಳು ಗೋಚರಿಸಿದವು. ವಿಚಾರಿಸಿದಾಗ, “ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ” ಎಂಬ ವರ್ತಮಾನ ತಿಳಿಯಿತು.           ನಮಗೆ ಸಮಯದ ಕಾಳಜಿ ತುಂಬ ಇದೆ. ನಾವು ಮುಂದಿನ ಎರಡು ಗಂಟೆಗಳ ಪ್ರಯಾಣ ಮಾಡಿ ಹುಬ್ಬಳ್ಳಿ ತಲುಪಬೇಕು. ಆ ಬಳಿಕ ವೇಷ ಇತ್ಯಾದಿ ಸಿದ್ಧಗೊಂಡು ಆರು ಗಂಟೆಗೆ ಪ್ರದರ್ಶನ ಆರಂಭವಾಗಬೇಕು!           ತಂಡದ ನಾಯಕರಾದ ಎಂ.ಎಂ.ನಾಯಕ ಮತ್ತಿತರ ಕಲಾವಿದರು ವಾಹನದಿಂದ ಇಳಿದು ಮುಂದೆ ಹೋಗಿ ಪೊಲೀಸು ಅಧಿಕಾರಿಗಳನ್ನು ಕಂಡು ನಮ್ಮ ಪರಿಸ್ಥಿತಿಯನ್ನು ನಿವೇದಿಸಿಕೊಂಡರು. ಆದರೂ ಸರತಿಯ ಸಾಲಿನಲ್ಲೇ ಬರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶಿಸಿ ಅವರನ್ನು ಹಿಂದೆ ಕಳುಹಿಸಿದರು. ಅವರ ಪರಿಶೀಲನೆಯ ನಿಧಾನ ಗತಿಯಿಂದ ತಂಡದ ಎಲ್ಲ ಕಲಾವಿದರಿಗೂ ಚಡಪಡಿಕೆ ಆರಂಭವಾಗಿತ್ತು. ತಾಸು ಕಳೆದ ಬಳಿಕ ನಮ್ಮ ವಾಹನದ ಬಳಿ ಬಂದ ಕಾನ್‌ಸ್ಟೇಬಲ್ ಓರ್ವ ನಮ್ಮ ವಾಹನವನ್ನು ಹತ್ತಿಳಿದು, ವಾಹನಕ್ಕೆ ಒಂದು ಸುತ್ತು ಬಂದು ಪರಿಶೀಲಿಸಿದಂತೆ ಮಾಡಿ ಮರಳಿ ಹೊರಟವನು ನಮ್ಮ ವಾಹನ “ಓವರ್ ಲೋಡ್” ಆಗಿದೆಯೆಂದೇ ದೂರು ಸಲ್ಲಿಸಿದನಂತೆ. ದಂಡ ಇತ್ಯಾದಿ ವಸೂಲಿ ಪ್ರಕ್ರಿಯೆಗಳು ಮುಗಿಯದೇ ನಮ್ಮನ್ನು ಸುಲಭವಾಗಿ ಬಿಡಲು ಸಾಧ್ಯವೇ ಇಲ್ಲವೆಂದು ಪೊಲೀಸು ಅಧಿಕಾರಿ ಇನ್ನಷ್ಟು ಉಪೇಕ್ಷೆ ಮಾಡಿ ಬೇರೆ ವಾಹನ ಪರೀಕ್ಷೆಯಲ್ಲಿ ತಲ್ಲೀನರಾದರು.           ಇನ್ನರ್ಧ ತಾಸು ವ್ಯರ್ಥ ಕಾಲ ಹರಣವಾಯಿತು. “ಇದು ಸುಲಭದಲ್ಲಿ ಬಗೆಹರಿಯುವ ಹಾಗೆ ಕಾಣುತ್ತಿಲ್ಲ” ಎಂದು ಕೊಳ್ಳುತ್ತ ಇದುವರೆಗೆ ವಾಹನದಿಂದ ಕೆಳಗಿಳಿಯದೇ ಕುಳಿತುಕೊಂಡಿದ್ದ ನಾನು ಮತ್ತು ಸಹ ಕಲಾವಿದರಿಬ್ಬರು ವಾಹನದಿಂದ ಇಳಿದು ರಸ್ತೆಗೆ ಬಂದೆವು.           ದೂರದಲ್ಲಿ ಪೊಲೀಸು ಅಧಿಕಾರಿ ತನ್ನ ಮೋಟಾರ್ ಬೈಕನ್ನು ಅಡ್ಡವಿಟ್ಟು ಅದರ ಮೇಲೆ ಕುಳಿತುಕೊಂಡು ಕಾನ್‌ಸ್ಟೇಬಲ್‌ಗಳಿಗೆ ಸೂಚನೆ ನೀಡುತ್ತಿರುವುದು ಕಾಣಿಸುತ್ತಿತ್ತು. ನಮ್ಮ ತಂಡದ ಪರವಾಗಿ ಅಹವಾಲು ಸಲ್ಲಿಸುತ್ತಿದ್ದ ಹಿರಿಯರೂ ಅಲ್ಲಿಯೇ ನಿಂತಿದ್ದರು. “ನೋಡುವಾ ಏನು ನಡಿತೀದೆ ಅಲ್ಲಿ” ಎಂಬ ಕುತೂಹಲದಿಂದ ನಾವೂ ನಾಲ್ಕು ಹೆಜ್ಜೆ ಮುಂದೆ ನಡೆದು ಅವರನ್ನು ಸಮೀಪಿಸಿದೆವು.           ಒಮ್ಮೆ ನಮ್ಮತ್ತ ನೋಡಿದ ಪೊಲೀಸು ಅಧಿಕಾರಿ ಕುತೂಹಲದಿಂದ ನಮ್ಮನ್ನು ಗಮನಿಸುತ್ತಲೇ ಚಂಗನೆ ತನ್ನ ಬೈಕ್ ಮೇಲಿಂದ ಕೆಳಗಿಳಿದು ನಿಂತವನು ನಮ್ಮತ್ತಲೇ ಧಾವಿಸಿ ಬರುತ್ತ ನೇರವಾಗಿ ನನ್ನ ಕೈಗಳನ್ನು ಹಿಡಿದುಕೊಂಡು “ಸರ್ ನೀವು?” ಎಂದು ಹಸನ್ಮುಖಿಯಾಗಿ ಉದ್ಘರಿಸಿದ! ನನ್ನನ್ನು ಸೇರಿ ನಮ್ಮ ಗುಂಪಿನ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು. ಪೊಲೀಸು ಅಧಿಕಾರಿ ಯಾರೆಂದು ನನಗಿನ್ನೂ ಗುರುತೇ ಹತ್ತಿರಲಿಲ್ಲ! ಮೂಕ ವಿಸ್ಮಿತರಾಗಿದ್ದೆವಷ್ಟೇ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆತನೇ ಮುಂದುವರಿದು “ಸರ್ ನಾನು ಸದಾನಂದ ನಾಯಕ…. ನಿಮ್ಮ ವಿದ್ಯಾರ್ಥಿ” ಎಂದು ಪರಿಚಯಿಸಿಕೊಂಡ ಕ್ಷಣದ ಸಂತೋಷವನ್ನು ಇಲ್ಲಿ ಶಬ್ಧಗಳಲ್ಲಿ ವರ್ಣಿಸಲು ಅಸಾಧ್ಯವೇ.           ಮುಂದಿನದನ್ನು ನಾನು ವಿವರಿಸಬೇಕಿಲ್ಲ. ನಮ್ಮ ತಂಡಕ್ಕೆ ಗೌರವಪೂರ್ಣ ವಿದಾಯ ಯಲ್ಲಾಪುರ ಪೊಲೀಸ್ ಇಲಾಖೆಯಿಂದ ದೊರೆಯಿತು. ನಮ್ಮ ಯಕ್ಷ ತಂಡದ ಸದಸ್ಯರೆಲ್ಲ ನನ್ನನ್ನು ಹೃತ್ಪೂರ್ವಕ ಅಭಿನಂದಿಸಿದರು. ಸಕಾಲದಲ್ಲಿ ನಾವು ಹುಬ್ಬಳ್ಳಿ ತಲುಪಿ ಸಮಯಕ್ಕೆ ಸರಿಯಾಗಿಯೇ ಪ್ರದರ್ಶನ ನೀಡಿ ಊರಿಗೆ ಮರಳಿದ್ದೆವು.           ನನಗೆ ಇಲ್ಲಿ ಬಹಳ ಮುಖ್ಯವಾಗಿ ಕಂಡದ್ದು ಸದಾನಂದ ನಾಯಕ ಎಂಬ ನನ್ನ ವಿದ್ಯಾರ್ಥಿಯ ಸೌಜನ್ಯಶೀಲತೆ. ನಾನು ಆತನಿಗೆ ಮಾಡಿದ ಪಾಠವೆಷ್ಟು? ಆತ ಬಿ.ಎಸ್.ಸಿ ಭಾಗ ಒಂದರ ಒಂದು ವರ್ಷ ಮಾತ್ರ. ಕನ್ನಡ ಓದಿದ ವಿದ್ಯಾರ್ಥಿ. ಅದರಲ್ಲೂ ವಾರದ ಮೂರು ತಾಸಿನ ಅವಧಿಯಲ್ಲಿ ನಾನು ಪಾಠ ಹೇಳಿದ್ದು ವಾರದ ಒಂದು ತಾಸು ಮಾತ್ರ. ಅಷ್ಟು ಅಲ್ಪಾವಧಿಯ ಪಾಠ ಕೇಳಿದ ಆತ ತನ್ನ ಹೃದಯದಲ್ಲಿ ಉಳಿಸಿಕೊಂಡಿದ್ದ ನನ್ನ ಕುರಿತಾದ ಗೌರವಾದರಗಳು ಬೆಲೆ ಕಟ್ಟಲಾಗದಷ್ಟು ಎಂಬುದು ನನಗೆ ಈ ಸನ್ನಿವೇಶದಲ್ಲಿ ಸ್ಪಷ್ಟವಾಯಿತು. ಶಿಕ್ಷಕ ವೃತ್ತಿಗೆ ಅಂತಿಮವಾಗಿ ಸಿಗುವ ಫಲವೆಂದರೆ ಎಲ್ಲೋ ಹೇಗೋ ಇರುವ ವಿದ್ಯಾರ್ಥಿಯೊಬ್ಬ ಅಭಿವ್ಯಕ್ತಿಸುವ ಗೌರವಾದರಗಳೇ ಅಲ್ಲವೇ?           ಮುಂದಿನ ದಿನಗಳಲ್ಲಿ ಕಾರವಾರದ ಕೊಂಕಣ ಮರಾಠಾ ಸಮುದಾಯದ ಇದೇ ಸದಾನಂದ ನಾಯಕ ಎಂಬ ಪೊಲೀಸು ಅಧಿಕಾರಿ ಅಂಕೋಲೆಯ ಗೋವಿಂದರಾಯ ನಾಯಕ ಮಾಸ್ತರರ ಹಿರಿಯ ಮಗಳು (ಡಾ. ಶ್ರೀದೇವಿ ತಿನೇಕರ ಅವರ ಹಿರಿಯ ಸಹೋದರಿ) ವೀಣಾ ಎಂಬುವವರ ಕೈ ಹಿಡಿದು ಸಮೃದ್ಧ ದಾಂಪತ್ಯ ಜೀವನ ನಡೆಸಿದರು. ಇಲಾಖೆಯಲ್ಲಿ ಎಸ್.ಪಿ ಹುದ್ದೆಯವರೆಗೆ ಪದೋನ್ನತಿ ಪಡೆದು ಈಗ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.           ಇದೇ ಕಾಲಾವಧಿಯಲ್ಲಿ ನಡೆದ ಒಂದು ನೋವಿನ ಕಥೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕು. ನನ್ನ ಪತ್ನಿ ನಿರ್ಮಲಾ ನನ್ನ ಎರಡನೆಯ ಮಗನಿಗೆ ಜನ್ಮ ನೀಡಿ (ಅಭಿಷೇಕ) ಬಾಣಂತಿಯ ಉಪಚಾರದ ಅವಧಿ ಮುಗಿಸಿಕೊಂಡು ತೌರಿಂದ ಅಂಕೋಲೆಗೆ ಮರಳಿದ್ದಳು. ಮಕ್ಕಳು ಬಾಣಂತಿ ಮನೆಗೆ ಬಂದರೆಂದು ಅಡಿಗೆ ಇತ್ಯಾದಿ ಸಹಾಯಕ್ಕಾಗಿ ನನ್ನ ತಾಯಿ ನಮ್ಮನೆಗೆ ಬಂದು ಉಳಿದುಕೊಂಡಿದ್ದಳು.           ಅದು ಯುಗಾದಿ ಹಬ್ಬದ ಮುನ್ನಾ ದಿನ. ಅಂಕೋಲೆಯ ಸಮೀಪದ ಹಾರವಾಡ ಎಂಬ ಹಳ್ಳಿಯಲ್ಲೊಂದು ಆಟ. ಹಾರವಾಡ ಗ್ರಾಮದಲ್ಲಿ ನನ್ನನ್ನು ತುಂಬಾ ಗೌರವಿಸುವ ಸಮಾಜದ ಹಿರಿಯರಾದ ಕಾನೂನು ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಥಾಕು ಹಾರವಾಡೇಕರ ಎಂಬುವರು. ಅವರ ಸಹೋದರ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಜಿ.ಎಂ. ಹಾರವಾಡೇಕರ, ಮತ್ತವರ ಇಡಿಯ ಕುಟುಂಬ ನೆಲೆಸಿದೆ. ಅವರ ಒತ್ತಾಯದ ಮೇರೆಗೆ ಅಂದಿನ ಯಕ್ಷಗಾನ ಪ್ರಸಂಗದಲ್ಲಿ ನಾನೂ ಅತಿಥಿ ಕಲಾವಿದನಾಗಿ ಒಂದು ಪಾತ್ರವಹಿಸಲು ಒಪ್ಪಿಕೊಂಡೆ.           ಅಂದು ಥಾಕು ಹಾರವಾಡೇಕರ, ಜಿ.ಎಂ.ಹಾರವಾಡೇಕರ ಸಹಿತ ಊರಿನ ಹಲವು ಸಮಾಜ ಬಂಧುಗಳೇ ಪಾತ್ರ ನಿರ್ವಹಿಸಿದ್ದರು. ನನ್ನದು ಒಂದು ರಕ್ಕಸ ಪಾತ್ರ. ಮಧ್ಯರಾತ್ರಿಯ ಬಳಿಕವೇ ರಂಗ ಪ್ರವೇಶಿಸುವ ನನ್ನ ಪಾತ್ರ ಬೆಳಕು ಹರಿಯುವವರೆಗೆ ಮುಂದುವರಿಯಬೇಕಿತ್ತು. (ಅಪರೂಪದ ಕಥಾನಕವಾದ್ದರಿಂದ ಪ್ರಸಂಗ ಮತ್ತು ಪಾತ್ರದ ಹೆಸರು ಮರೆತಿದೆ ಕ್ಷಮಿಸಿ) ಸಾಧಾರಣವೆನ್ನಿಸುವ ಮಟ್ಟಿಗಷ್ಟೇ ನನ್ನ ಪಾತ್ರ ನಿರ್ವಹಣೆ ನನಗೆ ಸಾಧ್ಯವಾಗಿತ್ತು.           ಆಟ ಮುಗಿಸಿ ಹೊರಡುವುದಕ್ಕೆ ನನ್ನ ಸ್ವಂತ ವಾಹನವಿತ್ತು. ಈ ಮೊದಲಿನ ಎಜ್ಡಿ ಬೈಕ್‌ನ್ನು ಬದಲಾಯಿಸಿ ಕೆಲವೇ ತಿಂಗಳ ಹಿಂದೆ “ವೆಸ್ಪಾ ಎಲ್.ಎಂ.ಎಲ್” ಎಂಬ ಸ್ಕೂಟರ್‌ನ್ನು ಖರೀದಿಸಿದ್ದೆ.           ನನ್ನ ಜೊತೆಯಲ್ಲಿಯೇ ಆಟಕ್ಕೆ ಬಂದ ನನ್ನ ಆಪ್ತ ಗೆಳೆಯ ವಸಂತ ಲಕ್ಷ್ಮೇಶ್ವರ ಮತ್ತು ನಾನು ಅಂಕೋಲೆಯತ್ತ ಹೊರಟೆವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ನಮ್ಮೂರಿನಿಂದ ಆಟ ನೋಡಲು ಬಂದಿದ್ದ ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಊರಿಗೆ ಮರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ. ಅವನನ್ನು ಅಂಕೋಲೆಯವರೆಗೆ ಬಿಡುವ ಮನಸ್ಸಿನಿಂದ ಸ್ಕೂಟರ್ ಏರಿಸಿಕೊಂಡೆ.           ಮುಂದುವರೆದು ಅವರ್ಸಾ ಎಂಬ ಊರು ದಾಟಿ ಅಂದು ರಸ್ತೆಯ ಅಂಚಿಗೆ ಇರುವ ಗೌರಿ ಕೆರೆಯ ತಿರುವಿನಲ್ಲಿ ಆಕಸ್ಮಿಕವಾಗಿ ಲಾರಿಯೊಂದು ಎದುರಿಗೆ ಬಂದಿತು. ತಪ್ಪಿಸಿಕೊಳ್ಳಲು ಟಾರ್ ರಸ್ತೆಯಿಂದ ನನ್ನ ಸ್ಕೂಟರ್‌ನ್ನು ಕೆಳಗಿಳಿಸಿದೆ. ಕಚ್ಚಾರಸ್ತೆಯಲ್ಲಿ ಸಮತೋಲನ ತಪ್ಪಿದಂತಾದಾಗ ವಾಹನದ ಮೇಲಿದ್ದ ಇಬ್ಬರೂ ಜಿಗಿದು ಬಿಟ್ಟರು. ಸ್ಕೂಟರ್ ನಿಯಂತ್ರಣ ತಪ್ಪಿ ಟಾರ್ ರಸ್ತೆಯ ಮೇಲೆ ಬಿತ್ತಲ್ಲದೆ ನನ್ನನ್ನು ಕೊಂಚ ದೂರದವರೆಗೆ ಎಳೆದುಕೊಂಡು ಹೋಗಿತ್ತು.           ಅತ್ತಿತ್ತಲಿಂದ ಯಾರೋ ಬಂದು ನನ್ನನ್ನು ಹಿಡಿದೆತ್ತಿದರು. ಮಂಡಿಯ ಚಿಪ್ಪಿನಿಂದ ಕೊಂಚ ಕೆಳಗೆ ಚರ್ಮ ಹರಿದು ಹೋಗಿ ಒಂದು ಕಾಲಿನ ಎಲುಬು ಕಣ್ಣಿಗೆ ಕಾಣಿಸುತ್ತಿತ್ತು. ಅದೇ ಕಾಲಿನ ಪಾದದ ಮೇಲ್ಭಾಗದಲ್ಲಿಯೂ ಆಳವಾದ ಗಾಯವಾಗಿತ್ತು. ಟಾರು ರಸ್ತೆಗೆ ಬಿದ್ದ ಎಡಗೈ ಅರ್ಧಭಾಗದ ಚರ್ಮ ಸಂಪೂರ್ಣ ಸುಲಿದು ಕೆಂಪಾದ ಮಾಂಸಖಂಡಗಳು ಕಾಣಿಸುತ್ತಿದ್ದವು. ಮೈಮೇಲಿನ ಬಟ್ಟೆಗಳೆಲ್ಲ ಹರಿದು ಚಿಂದಿಯಾಗಿದ್ದವು.! ಹೊಸತೇ ಆಗಿದ್ದ ಸ್ಕೂಟರ್‌ನ ಮುಂಭಾಗ ನುಜ್ಜು ಗುಜ್ಜಾಗಿ ನಡೆಸಲೂ ಆಗದಂತೆ ವಿಕಾರಗೊಂಡಿತ್ತು. ಯಾರೋ ಪುಣ್ಯಾತ್ಮರು ತಮ್ಮ ವಾಹನದಲ್ಲಿ ಅಂಕೋಲೆಯ ಮಿಷನರಿ ಆಸ್ಪತ್ರೆಗೆ ನನ್ನನ್ನು ತಲುಪಿಸಿ ಉಪಕಾರ ಮಾಡಿದರು.           ಡಾ. ಅಬ್ರಾಹ್ಮಂ ಬಂದು ಪರೀಕ್ಷೆ ಮಾಡಿದ ಬಳಿಕ ಕೈ ಕಾಲುಗಳ ಎಲುಬು ಮುರಿದಿಲ್ಲವಾದರೂ ಆಗಿರುವ ಆಳವಾದ ಗಾಯಗಳ ಉಪಚಾರಕ್ಕೆ ದವಾಖಾನೆಗೆ ದಾಖಲಾಗುವಂತೆ ಸಲಹೆ ನೀಡಿದರು. ಆಗಲೂ ನಾನು ನಡೆದಾಡ ಬಲ್ಲೆನಾದ್ದರಿಂದ ಆಸ್ಪತ್ರೆಗೆ ದಾಖಲಾಗಲು ಒಪ್ಪದೆ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರ ಒಪ್ಪಿಗೆ ಪಡೆದೆ. ಗಾಯಕ್ಕೆ

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

ಅಂಕಣ ಸಂಗಾತಿ, ನೆನಪಿನ ದೋಣಿಯಲಿ

ಅಂಕಣ ಸಂಗಾತಿ ನೆನಪಿನದೋಣಿಯಲಿ ಜಟಕಾ ವಿಧಿಯೆಂಬ ಚಾಲಕನು ಓಡಿಸುತಿಹ  ಬಂಡಿಯಲಿ ಕುಳಿತು ನಡೆದಿದೆ ಬಾಳಪಯಣ.  ಅಲ್ಲಿಷ್ಟು ಇಲ್ಲಿಷ್ಟು ಒಂದಷ್ಟು ನೆನಪುಗಳ ಬುತ್ತಿ ಔತಣ .  ** ಕಾಲನ ನಾಗಾಲೋಟದ ಪಯಣವು  ಗಾಡಿಗೆ ಕಟ್ಟಿದ ಕುದುರೆಗಳು ನಾವು  ವಿಧಿಯ ಕಡಿವಾಣದ ಬಿಗಿ ಅಂಕೆ  ನಡೆದಿಹೆವು ಆಮಿಷಕೆ , ಚಾಟಿಯಾ ಭಯಕೆ “ಹಾಯ್ ಹಾಯ್ ಬಾಜೂ ಬಾಜೂ”  ಟಕ್ ಟಕ್ ಅನ್ನುವ ಕುದುರೆಗಳ ಖರಪುಟದ ಶಬ್ದದೊಂದಿಗೆ ಈ ಪದಗಳು ಕಿವಿಗೆ ಬಿತ್ತೆಂದರೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳೆಲ್ಲ ಬದಿಗೆ ಸರಿದು ಗೌರವ ಸಲ್ಲಿಸುವಂತೆ ನಿಲ್ಲುತ್ತಿದ್ದೆವು.  ಬೀದಿಯ ಕೊನೆಯಲ್ಲಿ ತಿರುಗುವವರೆಗೂ ಅದನ್ನೇ ನೋಡುತ್ತಾ ಅಥವಾ ನಿಂತರೆ ಯಾರ ಮನೆಗೆ ಎಂದು ಮಾತನಾಡುತ್ತಾ. ಆ ಪಕ್ಕಕ್ಕೆ ನಿಲ್ಲುವ ಕ್ರಿಯೆಯೋ! ಎಲ್ಲರೂ ಹೇಳಿ ಹೇಳಿ ಅಚ್ಚೊತ್ತಿಬಿಟ್ಟಿತ್ತು.  ಓಡುವ ಕುದುರೆಯಡಿ ಮಕ್ಕಳು ಸಿಕ್ಕಿ ಗಾಯಗೊಳ್ಳುತ್ತಿದ್ದ ಪ್ರಕರಣಗಳು ಆಗ ಅಪರೂಪವೇನಲ್ಲ. ಇದೆಲ್ಲಾ ಅರುವತ್ತರ ದಶಕದ ಮೊದಲಿನ ವರ್ಷಗಳ ಮೈಸೂರಿನ ದೃಶ್ಯ.    ತೀರ ಇತ್ತೀಚೆಗೆ 8 ವರ್ಷದ ತಂಗಿಯ ಮಗ ಸುಧನ್ವನಿಗೆ ಕುದುರೆಗಾಡಿ ಅನುಭವ ಕೊಡಿಸಲೆಂದು ಜಟಕಾ  ಸವಾರಿಗೆ ಕರೆದೊಯ್ದಿದ್ದೆವು. ಟಾಂಗಾ ಸವಾರಿಯ ಹಳೆಯ ನೆನಪುಗಳೆಲ್ಲ ರೀಲಿನಂತೆ ಬಿಚ್ಚಿಕೊಂಡವು. ಅರಮನೆಯ ಎದುರಿಗಿನ ಟಾಂಗಾ ನಿಲ್ದಾಣದಿಂದ ಸಯ್ಯಾಜಿರಾವ್ ರಸ್ತೆ ಮತ್ತು ಸುತ್ತಲ ಪಾರಂಪರಿಕ ಕಟ್ಟಡಗಳನೆಲ್ಲಾ ನೋಡಿ ಬರುವಾಗ ಹಳೆಯ ಸಂಗತಿಗಳು ಸ್ಮರಣೆಯ ಕೋಶದಲ್ಲಿ ಅಡಗಿದ್ದವು. ಗೂಡು ಚದುರಿಸಿದಾಗ ಚೆಲ್ಲಾಪಿಲ್ಲಿಯಾಗುವ ಇರುವೆಗಳ ತರಹ ಸರಿದಾಡತೊಡಗಿದ್ದವು . ಅವುಗಳನ್ನು ಹಾಗೆಯೇ ಇಲ್ಲಿ ಹಿಡಿದಿಡುವ ಪ್ರಯತ್ನ . ನನಗೆ ನೆನಪಿರುವಷ್ಟು ಹಿಂದಕ್ಕೆ ಅಂದರೆ 5 ಅಥವಾ 6 ವರ್ಷದವಳಿದ್ದಾಗ ಮೈಸೂರಿನಲ್ಲಿ ಆಂತರಿಕ ಸಾರಿಗೆಯೆಂದರೆ ಜಟಕಾನೇ ಆಗಿತ್ತು.  ಸಿಟಿ ಬಸ್ಸುಗಳು ಇರದಿದ್ದ ಕಾಲ. ಪುಟ್ಟಮಕ್ಕಳು ನಡೆಯಲು ಹಾಗೂ ಸ್ವಲ್ಪ ದೂರದ ಪಯಣ ಇದ್ದಾಗಲೆಲ್ಲಾ ಆಶ್ರಯಿಸುತ್ತಿದ್ದುದು ಜಟಕಾವನ್ನೇ. ಮೈಸೂರಿನ ಮಹಾರಾಜರು ೧೮೯೭ ರಲ್ಲಿ ಟಾಂಗಾವನ್ನು ಮೈಸೂರಿಗೆ ತಂದರಂತೆ.  ಸುಮಾರು ಐನೂರು ಆರುನೂರು ಜಟಕಾ ಗಳಿದ್ದ ಕಾಲವೂ ಇತ್ತು ಎಂದು ಹೇಳುತ್ತಾರೆ. ಈಗ ಅವುಗಳ ಸಂಖ್ಯೆ ಶತಕ ದಾಟಿಲ್ಲ. ಅವುಗಳಿಗೆಲ್ಲಾ ನೋಂದಣಿ ಸಂಖ್ಯೆ, ಚಾಲಕರಿಗೆ ಗುರುತಿನ ಬಿಲ್ಲೆ ಕೊಡುತ್ತಿದ್ದರು. ಮುನಿಸಿಪಾಲಿಟಿಯ ಅಧಿಕಾರವ್ಯಾಪ್ತಿಗೆ ಬರುತ್ತಿದ್ದವು.  ಈಗಿನ ಆಟೋಗಳ ಹಾಗೆ ಅವುಗಳಿಗೆಂದೇ ಪ್ರತ್ಯೇಕ ಸ್ಟ್ಯಾಂಡ್ ನಿಲ್ದಾಣಗಳು ಇರುತ್ತಿತ್ತು .ನಾನೇ ಕಂಡಂತೆ ಚಾಮುಂಡಿಪುರಂ ಸರ್ಕಲ್, ಅಗ್ರಹಾರ, ಅರಮನೆಯ ಮುಂದುಗಡೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೆ ಆರ್ ಆಸ್ಪತ್ರೆಯ ಮುಂದೆ ಇಲ್ಲೆಲ್ಲಾ ಕುದುರೆ ಗಾಡಿಗಳು ಸಾಲಾಗಿ ನಿಂತಿರುತ್ತಿದ್ದವು .  ಸಾಮಾನ್ಯವಾಗಿ ಜಟಕಾ ಮತ್ತು ಟಾಂಗಾ ಎರಡೂ ಕುದುರೆ ಗಾಡಿಗೆ ಬಳಸುವ ಪದಗಳಾದರೂ ಎರಡರ ರಚನೆಯಲ್ಲಿ ಸ್ವಲ್ಪ ವ್ಯತ್ಯಾಸವಿದೆ .ಎತ್ತಿನಗಾಡಿಯದೇ ಸ್ವಲ್ಪ ಪರಿಷ್ಕೃತ ಸುಧಾರಿತ ರೂಪ ಜಟಕಾ. ಆದರೆ ಟಾಂಗಾ ನವೀನ ಮಾದರಿಯ ಐಶಾರಾಮಿ ತರಹದ್ದು.  ಮೈಸೂರು ಮಹಾರಾಜರಿಗೆಂದೇ ವಿಶೇಷ ವಿನ್ಯಾಸದಲ್ಲಿ ಮಾಡಿರುವ ಇಬ್ಬರೇ ಕೂರುವ ಇದನ್ನು ಅರಸರು ಬಹಳವಾಗಿ ಮೆಚ್ಚಿದ್ದರಿಂದ “ಷಾ ಪಸಂದ್” ಟಾಂಗಾಗಳು ಎನಿಸಿಕೊಂಡಿದ್ದವು . ಈಗೀಗ ಬರುತ್ತಿರುವ ಸಾರೋಟುಗಳು ಮತ್ತು ಐಷಾರಾಮಿ ಹಾಗೂ ವೈಭವೋಪೇತವಾಗಿರುವವು.  ಆಗಲೇ ಹೇಳಿದೆನಲ್ಲ ದೂರ ಹೋಗುವುದಿದ್ದರೆ ಜಟಕಾದಲ್ಲಿ ಅಂತ .  ಆಗೆಲ್ಲ ನಿಲ್ದಾಣಕ್ಕೆ ಬರುವುದು . ಆಗಲೂ ಈಗಿನ ಆಟೊ ಚಾಲಕರ ಹಾಗೆ ಸಾಹೇಬರುಗಳು (ಸಾಮಾನ್ಯ ಜಟಕಾ ಓಡಿಸುತ್ತಿದ್ದವರು ಮುಸಲ್ಮಾನರೇ ಆಗಿದ್ದರಿಂದ ಆ ಪದ ವಾಡಿಕೆಗೆ ಬಂದಿರಬಹುದು) ಆ ಕಡೆ ಬರಲ್ಲ ಅನ್ನುವುದು, ಜನ ಜಾಸ್ತಿಯಾಯಿತು ಅನ್ನುವುದು, ಆಣೆ ಕಾಸುಗಳಿಗೆ ಚೌಕಾಶಿ ಮಾಡುವುದು ಸಾಮಾನ್ಯವಾಗಿತ್ತು.  ಇನ್ನೂ ಆ ಚೌಕಾಶಿಯೋ… ಜುಗ್ಗಾಡಿ ಜುಗ್ಗಾಡಿ ಇಬ್ಬರೂ ಅವರವರ ಬೆಲೆಗಳಲ್ಲಿ ನಿಂತು ಕಡೆಗೆ 1 ಮದ್ಯದ ಬೆಲೆಗೆ ಒಪ್ಪಿತವಾಗುತ್ತಿತ್ತು . ಚೌಕಾಶಿ ಮಾಡದೇ ಏನನ್ನೂ ವ್ಯವಹರಿಸುತ್ತಿರಲಿಲ್ಲ ಅಂದಿನ ಹಿರಿಯರು . ನಮಗೋ ಮಕ್ಕಳಿಗೆ ಬೇಗ ಕುದುರೆಗಾಡಿ ಏರುವ ಆಸೆ .ಕೆಲವೊಮ್ಮೆ ಏರಿದ ಕುದುರೆಗಾಡಿಯವನೊಂದಿಗಿನ  ಚೌಕಾಶಿ ಗಿಟ್ಟದೆ ಮತ್ತೆ ಇಳಿದು ಬೇರೆ ಗಾಡಿಯಲ್ಲಿ ಕುಳಿತ ಪ್ರಸಂಗಗಳೂ ಇದೆ . ನಮಗೆ ಮಕ್ಕಳಿಗೆ ನೋಡಲು ಬಣ್ಣಬಣ್ಣವಾಗಿ ಅಂದವಾಗಿ ಕಾಣುತ್ತಿದ್ದ ಜಟಕಾದಲ್ಲಿ ಹೋಗುವ ಆಸೆ .ಹಿರಿಯರು ಕಟ್ಟುಮಸ್ತಾಗಿ ಆರೋಗ್ಯವಾಗಿ ಕುದುರೆ ಇರುವ ಗಾಡಿ ಆರಿಸುತ್ತಿದ್ದರು ಈ ರೀತಿ ತುಂಬಾ ಓಡಿಯಾಡಿದ ನೆನಪುಗಳು. ಒಂದೆರಡು ಘಟನೆ ನೆನಪಿದೆ ಎಷ್ಟರಮಟ್ಟಿಗೆ ಮೆದುಳಲ್ಲಿ ಹೂತಿದೆ ಎಂದರೆ ಇತ್ತೀಚೆಗೆ ಕುದುರೆಗಾಡಿಯಲ್ಲಿ ಕೂತಾಗಲೂ ಎಡಕ್ಕೆ ವಾಲಿದರೇ ಬಿದ್ದೇಬಿಟ್ಟೆನೇನೋ  ಅಂತ ಹೃದಯ ಬಾಯಿಗೆ ಬಂದಿತ್ತು. ಓಂದು ಬಾರಿ ಜೂ ಗಾರ್ಡನ್ನಿಗೆ ಹೊರಟಿದ್ದೆವು.  ನನಗೆ ಆಗ 4 / 5 ವರ್ಷ ಇರಬಹುದು. ಮನೆಗೆ ಬಂದ ನೆಂಟರೆಲ್ಲ ಸೇರಿ ಒಂದೇ ಜಟಕಾದಲ್ಲಿ ಹೇರಿಕೊಂಡೆವು.  ಚಿಕ್ಕವಳೆಂದು ಚಾಲಕನ ಪಕ್ಕದ ಸೀಟು ಖಾಯಂ ಆಗ ನನಗೆ . ಮುಂಭಾರ ಹಿಂಭಾರ ಎಲ್ಲ ಸರಿದೂಗಿಸಿ ಹೊರಟ . ಖುಷಿಯಾಗಿಯೇ ಇತ್ತು . ಅರಮನೆಯ ಹಿಂದಿನ ದ್ವಾರದ ರಸ್ತೆಯಲ್ಲಿ ಬಂದು ಬಲಗಡೆಗೆ ತಿರುಗಬೇಕಿತ್ತು . ಎಡಗಡೆಗೆ ಸ್ವಲ್ಪ ತಗ್ಗಿನಲ್ಲಿ ಅರಮನೆಯ ಮಾರಮ್ಮನ ದೇವಸ್ಥಾನದ ಅವರಣ.  ಬಲಗಡೆಗೆ ದೊಡ್ಡಕೆರೆ ಏರಿ ಇನ್ನೂ ಕೆರೆ ಮುಚ್ಚಿರಲಿಲ್ಲ. ನೀರಿತ್ತು. ಧಡ್ ಧಡ್ ಗಾಡಿಯ ಸದ್ದು, ಒಳಗಡೆ ದೊಡ್ಡವರ ಮಾತು, ಮಕ್ಕಳ ಕೇಕೆ, ಸಾಹೇಬನ ಬಾಜೂ ಬಾಜೂ ಇವುಗಳ ಮಧ್ಯೆ ಎಡ ಚಕ್ರದ ಕಡಾಣಿ ಕಳಚಿ ಬಿದ್ದ ಸದ್ದು ಯಾರಿಗೂ ಕೇಳಿಲ್ಲ . ಮುಂದೆ ಅಷ್ಟು ದೂರ ಓಡಿ ಗಾಡಿಯ ಚಕ್ರ ಕಳಚಿ ಮಾರಮ್ಮನ ಗುಡಿ ಹಳ್ಳಕ್ಕೆ ಗಾಡಿ ಒಮ್ಮೊಗವಾಗಿ ರಸ್ತೆಯಲ್ಲಿ ಉರುಳಿತ್ತು . ಮುಂದೆ ಕುಳಿತ ನಾನು ರಸ್ತೆಗೆ….. ಒಳಗಿದ್ದವರು ಒಬ್ಬರ ಮೇಲೊಬ್ಬರು. ಎಲ್ಲರದೂ ಕಿರುಚಾಟ .ಸಣ್ಣಪುಟ್ಟ ತರಚು ಗಾಯ ನೆನಪಿನಲ್ಲಿ ಅವತ್ತಿನವೇ ಕ್ಷಣಗಳು ಇನ್ನೂ ಗಿರಕಿ ಹೊಡೆಯುತ್ತೆ .ಅಕಸ್ಮಾತ್ ಬಲ ಬದಿಯ ಕೆರೆಗೆ ಬಿದ್ದಿದ್ದರೆ ಏನು ಗತಿ?ಇದನ್ನು ಬರೆಯಲು ನಿಮ್ಮ ಮುಂದೆ ನಾನೇ ಇರುತ್ತಿರಲಿಲ್ಲವೇನೋ ? ಮುಂದೆ ಎಷ್ಟೋ ದಿನ ಜಟಕಾ ಹತ್ತಲು ಭಯಪಡುತ್ತಿದ್ದೆನಂತೆ . ಅಣ್ಣ 1 ಬಾರಿ ಪಕ್ಕದಲ್ಲಿ ಕೂರಿಸಿಕೊಂಡು 1 ಸುತ್ತು ಹೊಡೆಸಿಕೊಂಡು ಬಂದಮೇಲೆ ಸರಿ ಹೋದೆನಂತೆ.   ಇನ್ನೊಂದು ಸ್ವಲ್ಪ ನಗೆಯ ಪ್ರಸಂಗ .ಆಗೆಲ್ಲ ಶ್ರೀರಂಗಪಟ್ಟಣ ಪ್ರವಾಸ ಅಂದರೆ ಬಸ್ ನಲ್ಲಿ ಅಲ್ಲಿಗೆ ಹೋಗಿ 1 ಜಟಕಾ ಮಾತಾಡಿಕೊಂಡು ದೇವಸ್ಥಾನ ನಂತರ   ದರಿಯಾದವಲತ್ ಗುಂಬಜ್ ಮತ್ತು ಸಂಗಮಗಳಿಗೆ ಭೇಟಿ (ನಿಮಿಷಾಂಬ ಆಗಿನ್ನೂ ಪ್ರಸಿದ್ಧವಾಗಿರಲಿಲ್ಲ) . ಹಾಗೆ ಗಾಡಿಯಲ್ಲಿ ಯಥಾಪ್ರಕಾರ ಡಬಲ್ ಜನ ತುಂಬಿದ್ದೆವು . ದೇವಸ್ಥಾನ ಮುಗಿಸಿ ದರಿಯಾದೌಲತ್ ಕಡೆಗೆ ಹೊರಟರೆ ದಾರಿಯಲ್ಲಿ 1 ಸಿನಿಮಾ ಟೆಂಟ್ . ಕುದುರೆ ಅಲ್ಲಿಂದ ಮುಂದಕ್ಕೆ ಹೋಗ್ತಾನೇ ಇಲ್ಲ .ಪೂಸಿ ಹೊಡೆದರೂ ಇಲ್ಲ ಚಾಟಿ ಏಟಿಗೂ ಬಗ್ತಿಲ್ಲ. ಸಾಹೇಬ ಹೇಳಿದ್ದು ಬರೀ ಅಲ್ಲಿ ತನಕ ಮಾತ್ರ ಸವಾರಿ ಬರ್ತಿದ್ದಂತೆ. ಮುಂದೆ ಹೋಗ್ಲಿಲ್ಲ ಅದಕ್ಕೆ ಅಂತ . ಕಡೆಗೆ ಕುದುರೆ ಹಟಾನೇ ಗೆದ್ದು ನಮ್ಮನ್ನೆಲ್ಲ ಬೇರೆ ಗಾಡಿಗೆ ಹತ್ತಿಸಲಾಯಿತು.  ಮನುಷ್ಯರಷ್ಟೇ ಅಲ್ಲ ಕುದುರೆಗಳಿಗೂ ಎಂತಹ “ಅಭ್ಯಾಸಬಲ” ನೋಡಿ ! ಆಗೆಲ್ಲ ಹೊಸ ಮದುವಣಿಗರು ಮೈಸೂರಿಗೆ ದಸರಾಗೆ ಬರುವ ವಾಡಿಕೆ . ಹೊಸಜೋಡಿಗಳು ಯಾವಾಗಲೂ ಷಾಪಸಂದ್ ಟಾಂಗಾದಲ್ಲಿ ಇಬ್ಬರೇ ಕೂತು ದೀಪಾಲಂಕಾರ ನೋಡಲು ಹೋಗುವುದು ಒಂದು ರಿವಾಜು. ಹೆಮ್ಮೆಯಿಂದ ನೆಂಟರಿಷ್ಟರಿಗೆಲ್ಲಾ ಕೊಚ್ಚಿಕೊಳ್ಳುವ ವಿಷಯವಾಗಿತ್ತು ಆಗ ಅದು.  ಹಾಗೆ ಆ ಬಾರಿ ನಮ್ಮ ಮನೆಗೂ ನವ ವಿವಾಹಿತ ಜೋಡಿ ಬಂದಿತಂತೆ .ಹೊರಡುವ ಮೊದಲು ಸುಮ್ಮನೆ ಸೌಜನ್ಯಕ್ಕೆಂದು ನನ್ನ ಕರೆದರೆ ಹೋಗಿಯೇ ತೀರುವೆನೆಂದು ನನ್ನ ಹಠವಂತೆ . ಅಪ್ಪ ಅಮ್ಮ ಎಷ್ಟು ಹೇಳಿದರೂ ಕೇಳದೆ ಅತ್ತು ಕರೆದು ಅವರ ಜತೆ ಹೊರಟೇಬಿಟ್ಟೆನಂತೆ. ಪಾಪ ನನ್ನನ್ನು ಎಷ್ಟು ಬಯ್ದುಕೊಂಡಿದ್ದರೋ ಏನೋ ..ಆದರೆ ಇದೆಲ್ಲಾ ಒಂದು ಚೂರೂ ನೆನಪಿಲ್ಲ ನನಗೆ. ಅಮ್ಮ ಹೇಳುತ್ತಿದ್ದುದು ಅಷ್ಟೆ  ಬರಬರುತ್ತಾ ಪೆಟ್ರೋಲ್ ವಾಹನಗಳು ಹೆಚ್ಚಾಗಿ ದ್ವಿಚಕ್ರ ವಾಹನ, ಚತುಷ್ಚಕ್ರ ವಾಹನಗಳ ಭರಾಟೆ ಹೆಚ್ಚಿದ ಮೇಲೆ ಸಮಯದ ಹಿಂದಿನ ಓಟದ ಸ್ಪರ್ಧೆಯಲ್ಲಿ ನಿಧಾನಗತಿಯ ಈ ಸಂಚಾರ ಸಾಧನ ಮೂಲೆಗುಂಪಾಯಿತು.  ಒಂದಷ್ಟು ದಿನ ಸರಕು ಸಾಗಾಣಿಕೆ ವಾಹನವಾಗಿ ಮುಂದುವರಿಯಿತು. ಈಗ ಸವಾರಿಯ ಶೋಕಿಯ ಅನುಭವಕ್ಕಷ್ಟೇ ಬಳಕೆ. ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯ ಗ್ರಾಹಕರು . ಇದನ್ನೇ ಉದರಂಭರಣಕ್ಕಾಗಿ ನೆಚ್ಚಿದ್ದ ಕುಟುಂಬಗಳಲ್ಲಿ ಎಷ್ಟೋ ಕುಟುಂಬಗಳು ಬೇರೆ ಉದ್ಯೋಗವನ್ನರಸಿ ಹೋಗಿವೆ . ಜಟಕಾದ ಬಗ್ಗೆ ಹೇಳಿದ ಮೇಲೆ ಕುದುರೆಯ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ಪೂರ್ಣವಾಗುವುದಿಲ್ಲ .ಮುಂಚೆ ಈ ಕುದುರೆಗಳನ್ನು ದೂರದ       ಗಳಿಂದ ತರಿಸಿಕೊಳ್ಳುತ್ತಿದ್ದರಂತೆ . ಕುದುರೆಯ ಮಾಲೀಕರು ಗಳಂತೂ ಅದನ್ನು ತಮ್ಮ ಮಕ್ಕಳಷ್ಟೇ ಪ್ರೀತಿಯಿಂದ ಸಾಕಿ ಹುರುಳಿ ಹಸಿಹುಲ್ಲು ಒಣಹುಲ್ಲುಗಳನ್ನು ಕೊಡುತ್ತಿದ್ದರು. ಅವುಗಳಿಗೆ ಅಲಂಕಾರ ಅಂತೂ ಪೈಪೋಟಿಯಲ್ಲಿ ಮಾಡುತ್ತಿದ್ದರು.  ಬಣ್ಣಬಣ್ಣದ ಮುತ್ತಿನ ಗೆಂಡೆಗಳು ಕುಚ್ಚುಗಳು ನೋಡಲು 2 ಕಣ್ಣು ಸಾಲ್ತಿರಲಿಲ್ಲ . ಹಾಗೆಯೇ ಬಡಕಲಾದ ನಿಶ್ಶಕ್ತವಾದ ಕಾಲು ಮುರಿದುಕೊಂಡ ವಯಸ್ಸಾದ ಕುದುರೆಗಳನ್ನು ಹಾಗೆಯೇ ಬೀದಿಗೆ ಬಿಟ್ಟು ಬಿಡುತ್ತಿದ್ದರಿಂದ ಬೀದಿ ಹಸುಗಳ ತರಹ ಬೀದಿ ಕುದುರೆಗಳ ಕಾಟವೂ ಇರುತ್ತಿತ್ತು ಆಗೆಲ್ಲ . ಮೇರಾ ರಾಜ ಬೇಟಾ,  ಮೇರಾ ಸೋನಾ ಬೇಟಾ ಎಂದೆಲ್ಲಾ ಮುದ್ದಿಸುವಂತೆಯೇ ಚಾಟಿಯೇಟು ಹೊಡೆಯುವಾಗ ಹರಾಮ್ ಜಾದೇ ಬೈಗುಳವೂ ಇರುತ್ತಿತ್ತು. ಒಟ್ಟಿನಲ್ಲಿ ಕುದುರೆ ಗಾಡಿ ಓಡಿಸುವವರ ಮನೆಯ ಸದಸ್ಯನಂತೆಯೇ ಆಗಿಬಿಟ್ಟಿರುತ್ತಿತ್ತು ಕುದುರೆಗಳೂ.  ಪಾರಂಪರಿಕ ವಸ್ತುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಮೈಸೂರು ಅಂದರೆ ಅರಮನೆ, ಮಲ್ಲಿಗೆ, ವೀಳೆಯದೆಲೆ, ಬದನೆಕಾಯಿಗಳ ಹಾಗೆ ಟಾಂಗಾಗಳು ನೆನಪಿನ ಬೆಸುಗೆಗೆ ಜೋಡಿಸಿಕೊಳ್ಳುತ್ತದೆ. ಪ್ರವಾಸಿಗರಿಗೆ ಇದರ ಪರಿಚಯಕ್ಕೆಂದು NERM  ಯೋಜನೆಯಡಿ ಹೊಸ ಕುದುರೆಗಾಡಿಗಳನ್ನು ಕೊಳ್ಳಲು ಸಾಲ ರೂಪದಲ್ಲಿ ಧನಸಹಾಯ ಮಾಡಿ ಈ ಸಾಂಸ್ಕೃತಿಕ ಸಂಚಾರಿ ರಾಯಭಾರಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ ಅದೇನೇ ಆದರೂ ಜನತೆಯೂ ಸಹ ಇದನ್ನು ಪ್ರೋತ್ಸಾಹಿಸುವ ಮೂಲಕ ಮೈಸೂರಿನ ಹೆಮ್ಮೆಯ ಪ್ರಸಿದ್ಧಿಯ ಟಾಂಗಾಗಳು ಉಳಿಯುವಂತೆ ಮಾಡಬೇಕು . ಇವು  ಈಗ ವಿರಳವಾಗಿದ್ದರೂ ಪಳೆಯುಳಿಕೆಯಾಗಿಲ್ಲ ಎಂಬುದಷ್ಟೇ ನೆಮ್ಮದಿ ತರುವ ವಿಷಯ . ಇನ್ನೂ ಜಟಕಾ ಅಂದರೆ ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಡಿವಿಜಿಯವರ ಈ ಪ್ರಸಿದ್ಧ ಮಂಕುತಿಮ್ಮನ ಕಗ್ಗ ನೆನಪಿಗೆ ಬಾರದೆ ಇರದು .  ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಕುದುರೆ ನೀನಂ ಅವನು ಪೇಳ್ದಂತೆ ಪಯಣಿಗರು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು  ಪದಕುಸಿಯೆ ನೆಲವಿಹುದು ಮಂಕುತಿಮ್ಮ                              _ ಡಿ ವಿ ಜಿ  ಇಲ್ಲಿ ಕುದುರೆ ಗಾಡಿಗೂ ಮನುಷ್ಯನ ಜೀವನಕ್ಕೂ ಸಾಮ್ಯತೆಯನ್ನು ಹೇಳುತ್ತಾ ಹಿರಿದಾದ ಬಾಳ ತತ್ವವನ್ನು ಅನಾವರಣಗೊಳಿಸಿದ್ದಾರೆ.  ನಿಜ! ನಮ್ಮ ಬದುಕು ಒಂದು ಜಟಕಾ ಗಾಡಿಯೇ. ನಾವೆಲ್ಲಾ ಹೇಳಿದಂತೆ ಮಾತ್ರ ನಡೆಯಬೇಕಾದ ಕುದುರೆಗಳು. ಓಡಿಸುವ ಸಾಹೇಬ ವಿಧಿ! ಆ ದೇವರು.  ಅವನ ಮರ್ಜಿ ಇದ್ದೆಡೆಗೆ ನಮ್ಮ ಪಯಣ. ನಲಿವು ಸಂತೋಷದ ಮದುವೆ ಮನೆಗಾದರೂ ಆಗಿರಬಹುದು ; ನೋವು ಸಂಕಟದ ಸ್ಮಶಾನಕ್ಕಾದರೂ ಕರೆದೊಯ್ಯಬಹುದು . ಕರ್ತವ್ಯಗಳ ಛಡಿ ಏಟಿನ ಜವಾಬ್ದಾರಿಗಳ ಭಯ ಕೆಲವೊಮ್ಮೆ ಮುನ್ನಡೆಸಿದರೆ,  ಹುರುಳಿ ಹುಲ್ಲು ವಿರಾಮದ ಆಮಿಷಗಳು ವೇಗ ಹೆಚ್ಚಿಸಬಹುದು. ಆದರೆ ಪಯಣವಂತೂ ನಿರಂತರ . ಇನ್ನು ನಡೆಯಲಾರೆ ನನ್ನಿಂದಾಗದು ಎಂದು ಕುಸಿಯಲೂ ಬಹುದು . ಆಶ್ರಯ ಕೊಡಲು ಭೂಮಿತಾಯಿ ಇದ್ದಾಳೆ ತಾತ್ಕಾಲಿಕ ವಿರಾಮದ ಸಾವರಿಸಿ ಏಳುವವರೆಗೂ ಆಸರೆಯಾಗಿ ಅಥವಾ ಮುಂದೆ ಏಳಲೇ ಆಗದು ಎಂದಾಗ ಶಾಶ್ವತವಾಗಿ ಮಲಗಲು ತಾವು

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—51 ಅಘನಾಶಿನಿಯಲ್ಲಿ ಪಾರಾದೆ, ಪುತ್ರೋದಯದ ಸಂತಸದಲ್ಲಿ ಮುಳುಗಿದೆ ಕುಮಟಾ ತಾಲೂಕಿನ ಮಿರ್ಜಾನಿನಲ್ಲಿ ಒಂದು ಆಟ. ನಾನು ‘ಗದಾಪರ್ವ’ ಪ್ರಸಂಗದಲ್ಲಿ ಕೌರವನ ಪಾತ್ರ ನಿರ್ವಹಿಸಬೇಕಿತ್ತು. ಮಿರ್ಜಾನ್‌ನಂಥ ಊರಿನಲ್ಲಿ ನನ್ನ ಮೊದಲ ಪಾತ್ರವಾದ್ದರಿಂದ ಸರಿಯಾದ ಸಿದ್ಧತೆಯೊಂದಿಗೆ ಪ್ರದರ್ಶನ ನೀಡಿ ಜನರ ಮನಗೆಲ್ಲುವ ಅನಿವಾರ್ಯತೆಯೂ ಇತ್ತು. ಥಿಯೇಟರ್ ಆಟ ಬೇರೆ. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಸಂತೋಷವಾಗುವಂತೆ ಪಾತ್ರ ನಿರ್ವಹಣೆ ಸಾಧ್ಯವಾಗದಿದ್ದರೆ ಅವರ ಟೀಕೆಗಳನ್ನು ಸಹಿಸಲೇ ಬೇಕಾಗುತ್ತದೆ. ನಾನು ಕಾಳಜಿ ಪೂರ್ವಕವಾಗಿ ಪಾತ್ರಕ್ಕೆ ಬೇಕಾದ ಸಾಧ್ಯವಾದಷ್ಟೂ ಸಿದ್ಧತೆ ಮಾಡಿಕೊಂಡಿದ್ದೆ. ಪತ್ನಿ ನಿರ್ಮಲಾ ಮೊದಲ ಹೆರಿಗೆಗಾಗಿ ತವರೂರು ಹುಬ್ಬಳ್ಳಿಗೆ ಹೋಗಿದ್ದಳು. ನಮ್ಮೂರು ಮಾಸ್ಕೇರಿಗೆ ಹೊರಟು ಅಲ್ಲಿನ ನನ್ನ ಯಕ್ಷಗಾನ ಪ್ರೇಮಿಗಳಾದ ಬಾಲ್ಯದ ಗೆಳೆಯರನ್ನು ಕೂಡಿಕೊಂಡು ಆಟಕ್ಕೆ ಹೋಗಲು ನಿರ್ಧರಿಸಿ ಊರಿಗೆ ಬಂದೆ. ಹೇಗೂ ಎರಡನೆಯ ಪ್ರಸಂಗದಲ್ಲಿ ನನ್ನ ಪಾತ್ರವಿದೆ. ಅವಸರವೇನೂ ಇಲ್ಲವೆಂದು ರಾತ್ರಿಯ ಊಟ ಮನೆಯಲ್ಲೇ ಮುಗಿಸಿ ಗೋಕರ್ಣ ಬಸ್ಸು ಹಿಡಿದು ಗೆಳೆಯರೊಂದಿಗೆ ಹೊರಟೆ. ಅದಾಗಲೇ ನುರಿತ ಭಾಗವತನೂ ಆಗಿದ್ದ ಕೃಷ್ಣ ಮಾಸ್ಕೇರಿ, ಮಾಸ್ತರಿಕೆಯೊಂದಿಗೆ ‘ಚಿನ್ನದ ಪೆಟ್ಟಿಗೆ’ಯ ಸಣ್ಣ ವ್ಯವಹಾರ ಆರಂಭಿಸಿದ್ದ ಭಾವ ಹೊನ್ನಪ್ಪ ಮಾಸ್ತರ, ನನ್ನ ಸಹೋದರ ಶಿಕ್ಷಕ ನಾಗೇಶ ಗುಂದಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎನ್.ಬಿ.ಗಣಪತಿ, ನಿರಕ್ಷರಿ ಗೆಳೆಯ ನಾರಾಯಣ ಮತ್ತು ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಎಂಬ ಹಿರಿಯರು ಸೇರಿ ಆಟಕ್ಕೆ ಹೊರಟೆವು. ನಾವು ಗೋಕರ್ಣದಿಂದ ತದಡಿ ಎಂಬ ಊರಿಗೆ ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಅಘನಾಶಿನಿ ನದಿಯನ್ನು ನಾವೆಯ ಮೂಲಕ ದಾಟಿ ಆಚೆ ದಂಡೆಯ ಮೇಲಿರುವ ಮಿರ್ಜಾನ ಎಂಬ ಊರು ಸೇರಬೇಕಿತ್ತು. ಆದರೆ ನಾವು ತದಡಿಗೆ ಬಂದಿಳಿಯುವಾಗ ರಾತ್ರಿ ಒಂಭತ್ತರ ಮೇಲಾಗಿತ್ತು. ಅಷ್ಟು ಹೊತ್ತಿಗೆ ಪ್ರಯಾಣಿಕರನ್ನು ಅಘನಾಶಿನಿ ನದಿ ದಾಟಿಸುವ ಮಶಿನ್ ಬೋಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹೇಗಾದರೂ ನಮ್ಮನ್ನು ನದಿ ದಾಟಿಸಲು ವಿನಂತಿಸೋಣವೆಂದರೆ ಮಶಿನ್ ಬೋಟ್ ಆಚೆ ದಡವನ್ನು ಸೇರಿ ಲಂಗರು ಹಾಕಿತ್ತು. ನದಿ ಸಮುದ್ರ ಸೇರುವ ಸ್ಥಳವಾದುದರಿಂದ ನದಿಯ ವಿಸ್ತಾರವೂ ಅಧಿಕವಾಗಿತ್ತು. ನಾವು ಧ್ವನಿಗೈದು ಕರೆದರೂ ಕೇಳುವ ಸ್ಥಿತಿ ಇರಲಿಲ್ಲ. ಇನ್ನು ನಮಗಿರುವ ದಾರಿಯೆಂದರೆ ಮರಳಿ ಹೊರಟು ಸಾಣಿಕಟ್ಟಾ, ಮಾದನಗೇರಿ, ಹಿರೇಗುತ್ತಿ ಮೊದಲಾದ ಊರುಗಳನ್ನು ಸುತ್ತಿ ಮಿರ್ಜಾನ್ ಸೇರುವುದು. ಇದು ಬಹಳ ಸುತ್ತಿನ ದಾರಿ ಮಾತ್ರವಲ್ಲದೆ ನಮಗೆ ಸಕಾಲದಲ್ಲಿ ವಾಹನಗಳು ದೊರೆಯುವುದೂ ದುಸ್ತರವಾದ ಸಮಯ. ನಾವು ಯೋಚನೆಗೆ ಒಳಗಾದೆವು. ಉಳಿದವರ ಮಾತು ಅಂತಿರಲಿ ನಾನು ಆಟವನ್ನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಯಾವ ಸಬೂಬು ಹೇಳಿದರೂ ಹಣಕೊಟ್ಟು ಬಂದ ಪ್ರೇಕ್ಷಕರು ತಗಾದೆ ಮಾಡದೇ ಇರುವುದಿಲ್ಲ. ಸಂಘಟಕರಿಗೆ ಇದು ತುಂಬಾ ತೊಂದರೆಗೆ ಈಡು ಮಾಡುತ್ತದೆ. ಹಾಗಾಗಿ ನನಗೆ ಆಟಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ನಾವು ದಿಕ್ಕುಗಾಣದವರಂತೆ ಯೋಚಿಸುತ್ತ ನಿಂತಿರುವಾಗ ಆಪತ್‌ದ್ಭಾಂದವನಂತೆ ನಾವಿಕನೊಬ್ಬ ನಮ್ಮ ಬಳಿಗೆ ಬಂದ. ಯುವಕನಂತೆ ಕಾಣುವ ಆತ ನಮ್ಮ ಸಮಸ್ಯೆಯನ್ನು ಕೇಳಿ ತಾನು ನದಿ ದಾಟಿಸುವ ಭರವಸೆ ನೀಡಿದ. ಕೊಡಬೇಕಾದ ಹಣಕಾಸಿನ ತೀರ್ಮಾನವಾದ ಬಳಿಕ ಸಮೀಪದಲ್ಲಿಯೇ ಬೇಲೆಯ ಮೇಲೆ ಎಳೆದು ಹಾಕಿದ ಒಂದು ಚಿಕ್ಕ ದೋಣಿಯನ್ನು ನೀರಿಗೆಳೆದು ನಮ್ಮ ಬಳಿಗೆ ತಂದು ನಿಲ್ಲಿಸಿದ. ಆಗಲೇ ನಾವು ಏಳು ಜನರಿದ್ದೆವು. ನಾವಿಕನೂ ಸೇರಿ ಎಂಟು ಜನ ಈ ದೋಣಿಯಲ್ಲಿ ಪ್ರಯಾಣಿಸುವುದು ಕಷ್ಟವೆನ್ನಿಸಿತು. ಆ ಪುಟ್ಟ ದೋಣಿಯಲ್ಲಿ ಒತ್ತಾಗಿ ಕುಳಿತು ನೋಡಿದೆವು. ನಮ್ಮ ದಾಯಾದಿ ಚಿಕ್ಕಪ್ಪ ಮತ್ತು ನಾರಾಯಣ ದೋಣಿಗೆ ಭಾರವಾಗುವುದೆಂದೇ ನಿರ್ಧರಿಸಿ ತಮ್ಮ ಆಟ ನೋಡುವ ಆಸೆಗೆ ತಿಲಾಂಜಲಿ ಇಟ್ಟು ಹಿಂದೆ ಸರಿದರು. ನಾವಿಕನೂ ಸೇರಿದಂತೆ ಆರು ಜನ ಪ್ರಯಾಣ ಹೊರಟೆವು. ಬೆಳದಿಂಗಳು ಹರಡಿ ವಿಸ್ತಾರವಾದ ನದಿಯ ಹರಹನ್ನೂ ತೆರೆಯ ಏರಿಳಿತದ ಭಯಾನಕತೆಯನ್ನು ಕಣ್ಣಿಗೆ ರಾಚುವಂತೆ ಪ್ರದರ್ಶಿಸುತಿತ್ತು. ನಾವಿಕನನ್ನು ಹೊರತುಪಡಿಸಿ ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡಿದ್ದೆವು….. ಪಶ್ಚಿಮಕ್ಕೆ ಹೊರಳಿ ನೋಡಿದರೆ ತೀರ ಸನಿಹದಲ್ಲೇ ಭೋರ್ಗರೆಯುವ ಕಡಲು….. ಉತ್ತರ ದಿಕ್ಕಿನಿಂದ ವಿಶಾಲವಾಗಿ ತೆರೆಯನ್ನೆಬ್ಬಿಸುತ್ತ “ಇನ್ನೇನು ಬಂದೇ ಬಿಟ್ಟಿತು ನನ್ನಿನಿಯನ ಅರಮನೆ………” ಎಂಬ ಸಂಭ್ರಮದಲ್ಲಿ ಧಾವಿಸುವ ಅಘನಾಶಿನಿಯ ಪ್ರವಾಹ………..! ನಾವೆಯು ನದಿಯ ಅರ್ಧಭಾಗವನ್ನು ಕ್ರಮಿಸಿರಬಹುದು. ನಮ್ಮ ಅರಿವಿಗೇ ಬಾರದಂತೆ ನಾವೆಯಲ್ಲಿ ನೀರು ತುಂಬುತ್ತಿರುವುದು ನಮ್ಮ ಗಮನಕ್ಕೆ ಬಂದಿತು! ನಾವೆಯ ತಳದಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದು ನೀರು ಉಕ್ಕಿ ಬರುವುದನ್ನು ನೋಡಿದಾಗಲೇ ನಮ್ಮ ಗಮನಕ್ಕೆ ಬಂದಿತು. ನಮ್ಮೆಲ್ಲರ ಎದೆಗೂಡಿನಲ್ಲಿ ಅಳಿದುಳಿದ ಧೈರ್ಯವೂ ಒಮ್ಮಿಂದೊಮ್ಮೆಲೇ ಸೋಸಿ ಹೋದಂತೆ ಕಳವಳಗೊಂಡೆವು. ಕ್ಷಣಕ್ಷಣಕ್ಕೂ ನಾವೆಯಲ್ಲಿ ನೀರು ತುಂಬುವುದನ್ನು ಕಂಡಾಗ ನಮ್ಮೆಲ್ಲರ ಜಂಘಾಬಲವೇ ಉಡುಗಿ ಹೋಯಿತು. ತುಂಬಾ ಗಾಬರಿಗೊಂಡಿದ್ದ ಭಾವ ಹೊನ್ನಪ್ಪ ಮಾಸ್ತರ ಮತ್ತು ಗೆಳೆಯ ಗಣಪತಿ ಅಂಜಿಕೆಯನ್ನು ತೋರಗೊಡದೆ ದೋಣೆಯಲ್ಲಿ ತುಂಬಿದ ನೀರನ್ನು ಬೊಗಸೆಯಲ್ಲಿ ಎತ್ತಿ ನದಿಗೆ ಚೆಲ್ಲುತ್ತಿದ್ದರು. ಸಹೋದರ ನಾಗೇಶ ಮಾತೇ ಬಾರದವನಂತೆ ಕುಳಿತಿದ್ದ. ಕೃಷ್ಣ ಭಾಗವತರು ಮಾತ್ರ “ಏನೂ ಆಗುವುದಿಲ್ಲ ಹೆದ್ರಬೇಡಿ” ಎಂದು ಸುಳ್ಳು ಸಾಂತ್ವನ ಹೇಳುತ್ತಿದ್ದರು. ನನಗೆ ಆಚೆ ಕುಣಿಯಬೇಕಿದ್ದ ದುರ್ಯೋಧನ, ಚೊಚ್ಚಿಲ ಹೆರಿಗೆಯ ಸಂಭ್ರಮದಲ್ಲಿ ಹುಬ್ಬಳ್ಳಿಯ ತೌರುಮನೆಯಲ್ಲಿರುವ ಪತ್ನಿ ನಿರ್ಮಲಾ, “ಕೌರವ ಜೋರಾಗ್ಲಿ ಹಾಂ……” ಎಂದು ಹರೆಸಿ ಕಳಿಸಿದ ಅವ್ವ, ಮುಗುಳ್ನಕ್ಕು ಅನುಮೋದಿಸಿದ ಅಪ್ಪ, ಮನೆಯಲ್ಲಿ ಉಳಿದ ತಮ್ಮ-ತಂಗಿಯರೆಲ್ಲ ಸಾಲು ಸಾಲಾಗಿ ನೆನಪಾಗತೊಡಗಿದರು…… ನಾವಿಕ ಮಾತ್ರ ಒಂದೂ ಮಾತನಾಡದೇ ಜೋರಾಗಿ ಹುಟ್ಟು ಹಾಕುವ ಕಾಯಕದಲ್ಲೇ ನಿರತನಾಗಿದ್ದ. “ದೋಣಿಗೆ ತೂತು ಬಿದ್ದದ್ದು ನಿನಗೆ ಗೊತ್ತಿಲ್ವಾಗಿತ್ತೇನೋ?” ಎಂದು ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ನದಿಯ ಅರ್ಧಕ್ಕಿಂತ ಹೆಚ್ಚು ಭಾಗ ಕ್ರಮಿಸಿದ್ದೆವು. ಮರಳಿ ಹಿಂದೆ ಸಾಗುವ ಪ್ರಶ್ನೆಯೇ ಇಲ್ಲ. ಇನ್ನೂ ಅರ್ಧದಷ್ಟು ನದಿಯನ್ನು ದಾಟಬೇಕಿದೆ. ಸುಲಭದ ಮಾತಲ್ಲ. ಸಂಕಷ್ಟಕ್ಕೆ ನಾವೆಲ್ಲ ಮುಖಾಮುಖಿಯಾಗಿರುವುದು ಸ್ಪಷ್ಟವಾಗಿತ್ತು. ಅಂಜತ್ತಲೇ ಹೊರಳಿ ನೋಡಿದೆ. ಸಮುದ್ರದ ಮೀನುಗಾರಿಕೆಗೆ ಹೊರಟು ಬಂದು ದಂಡೆಯ ಕೊಂಚ ದೂರ ಲಂಗರು ಹಾಕಿ ನಿಂತಿರುವ ಮರ‍್ನಾಲ್ಕು ಬೋಟುಗಳು ಮಸುಕು ಮಸುಕಾಗಿ ಕಾಣಿಸಿದವು. ದಂಡೆಯನ್ನಂತೂ ಸುರಕ್ಷಿತ ತಲುಪುವುದು ಅಸಾಧ್ಯ. ನಡುವೆಯೇ ನಿಂತ ಬೋಟುಗಳನ್ನಾದರೂ ಮುಟ್ಟಬಹುದೇನೋ ಎಂಬ ಯೋಚನೆ ಬಂದದ್ದೇ ನಾವಿಕನಿಗೆ ಸೂಚನೆ ನೀಡಿದೆ, ಎಲ್ಲರೂ ಬೋಟುಗಳನ್ನು ಗಮನಿಸಿದರು. ನಾವಿಕನೂ ಅತ್ತ ಹೊರಳಿಸಿ ದೋಣಿಯನ್ನು ಮುನ್ನಡೆಸತೊಡಗಿದ. ತುಂಬಿದ ನೀರನ್ನು ಮೊಗೆದು ಹಾಕುವ ಕಾಯಕವನ್ನು ಗೆಳೆಯರು ಮುಂದುವರಿಸಿದ್ದರು. ಮಸುಕು ಮಸುಕಾಗಿ ಕಾಣಿಸುತ್ತಿದ್ದ ಬೋಟುಗಳು ಸಮೀಪಿಸುತ್ತಿದ್ದಂತೆ ಸ್ಪಷ್ಟವಾಗತೊಡಗಿದವು. ತೀರ ಸನಿಹಕ್ಕೆ ಬಂದಾಗ ಲಂಗರು ಇಳಿಬಿಟ್ಟ ಹಗ್ಗವನ್ನು ಯಾರೋ ಕೈಚಾಚಿ ಹಿಡಿದುಕೊಂಡ ಕ್ಷಣದಲ್ಲಿ ಎಲ್ಲರೂ ಹೋದ ಜೀವ ಬಂದಂತೆ ಹಗುರಾದೆವು. ಕಷ್ಟಪಟ್ಟು ಹಗ್ಗದೊಡನೆ ಸರ್ಕಸ್ಸು ಮಾಡದೇ ವಿಧಿ ಇರಲಿಲ್ಲ. ನಾವೆಲ್ಲ ಬೋಟುಗಳನ್ನು ಸೇರಿದ ಬಳಿಕ ನಾವಿಕ ಆಚೆ ದಂಡೆಗೆ ಕೂಗು ಹಾಕಿ ಅಲ್ಲಿರುವ ನಾವಿಕರನ್ನು ಕರೆದ. ಯಾರೋ ಪುಣ್ಯಾತ್ಮರು ನಮ್ಮ ಸಂಕಷ್ಟವನ್ನು ತಿಳಿದು ಕನಿಕರ ತೋರಿ ಬೇರೆ ನಾವೆಯನ್ನು ತಂದು ನಮ್ಮನ್ನು ಆಚೆ ದಡಕ್ಕೆ ಮುಟ್ಟಿಸಿದರು. ನಮ್ಮನ್ನು ಕರೆದು ತಂದ ನಾವಿಕ ಮಾತ್ರ ತನ್ನ ನಾವೆಯನ್ನು ತನ್ನ ಪಾಡಿಗೆ ಬಿಟ್ಟು ನಮ್ಮೊಡನೆ ಆಟದ ಡೇರೆಯತ್ತ ಹೊರಟಾಗ ಯಾರೋ ಆತನನ್ನು ಪ್ರಶ್ನಿಸಿದರು. “ಹೌದು…….ಎಲ್ಲಿ ಕಟ್ಟ ಹಾಕಿ ಬಂದ್ಯೋ ಇಲ್ವೋ ನಿನ್ನ ದೋಣಿಯ……….. ಅದರ ತಳಕ್ಕೆ ತೂತು ಇರೋದು ಗೊತ್ತಿದ್ರೂ ನಮ್ಮ ಕರಕೊಂಬಂದ್ಯಲ್ಲ ಮಾರಾಯ….” ಎಂದು ಬೇಸರ ತೋಡಿಕೊಂಡರು. ಆತ ಅತ್ಯಂತ ನಿರ್ಭಾವುಕನಾಗಿ “ನಂಗೇನ ಗೊತ್ತಿತ್ರಾ…… ಅದು ನನ್ನ ದೋಣಿ ಅಲ್ಲ…….. ನಿಮ್ಮಂಗೇ ನಾನು ಆಟ ನೋಡುಕ ಬಂದವ…….” ಎಂದು ಉತ್ತರಿಸಿದಾಗ ನಮಗೆಲ್ಲ ಮತ್ತೊಮ್ಮೆ ನೀರಿಗೆ ಬಿದ್ದು ಮುಳುಗಿಯೇ ಹೋದಂಥ ಅನುಭವವಾಯಿತು! ನಡೆದ ಎಲ್ಲ ವಿದ್ಯಮಾನಗಳಿಂದ ಗೊಂದಲಗೊಂಡಿದ್ದ ನಾನು ಈ ಎಲ್ಲ ಅಧ್ವಾನಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಪಾತ್ರದ ಕುರಿತು ಯೋಚಿಸತೊಡಗಿದೆ. ಸಂಪೂರ್ಣ ತನ್ಮಯನಾಗಿ ಪಾತ್ರ ನಿರ್ವಹಿಸಿದೆ. ಪ್ರದರ್ಶನ ಯಶಸ್ವಿಯಾಯಿತು. ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳ ಪ್ರತಿಕ್ರಿಯೆಯಿಂದ ನಾನು ಯಶಸ್ವಿಯಾದೆ ಎಂಬ ಸಮಾಧಾನವಾಯಿತು. ಸಹ ಕಲಾವಿದರೂ ಮುಕ್ತ ಮನಸ್ಸಿನಿಂದ ಪ್ರಸಂಶೆಯ ಮಾತನಾಡಿದರು. ಪಾತ್ರ ಮುಗಿಸಿ ಒಳಗೆ ಬಂದಾಗಲೂ ಚೌಕಿ ಮನೆಗೆ ಬಂದ ಅನೇಕ ಸಹೃದಯರು ಮೆಚ್ಚುಗೆಯ ಮಾತನಾಡಿ ಅಭಿನಂದಿಸಿದರು. ನಾನು ಹೆಮ್ಮೆಯಿಂದ ಬೀಗಿದೆ! ಆದರೆ ಮರುಕ್ಷಣವೇ ತನ್ನ ವೇಷ ಕಳಚುತ್ತಿದ್ದ ಧರ್ಮರಾಯನ ಪಾತ್ರಧಾರಿ ನನ್ನನ್ನು ಉದ್ದೇಶಿಸಿ, “ನೀವು ಹಾಗೆಲ್ಲ ಮಾತಾಡಬಾರದ್ರಿ……….ಎದುರು ಪಾತ್ರಗಳನ್ನು ಗೌರವಿಸಿ ಮಾತನಾಡಬೇಕು……ಇದು ಒಳ್ಳೆ ಕಲಾವಿದರ ಲಕ್ಷಣವಲ್ಲ……” ಎಂದು ಕಟುವಾಗಿ ಮಾತಾಡಿದ. ಪಾತ್ರ ಯಶಸ್ವಿಯಾಯಿತೆಂದು ಉಬ್ಬಿಹೋದ ನಾನು ಗಾಳಿ ಬಿಟ್ಟ ಬಲೂನಿನಂತೆ ಒಮ್ಮೆಯೇ ಕುಸಿದು ಹೋದೆ. “ಏನು ತಪ್ಪಾಯಿತು?” ಎಂದೆ. “ನಾನು ದೇವಸ್ಥಾನಗಳಲ್ಲಿ ಪೂಜೆ ಮಾಡುವುದಕ್ಕೇ ಯೋಗ್ಯ ಎಂದು ಹಂಗಿಸಿದರಲ್ಲ? ಅದು ಸರಿಯಲ್ಲ” ಎಂದು ಉತ್ತರಿಸಿದ. ನನಗೆ ಏನು? ಏತ್ತ? ಎಂಬುದೇ ತಿಳಿಯದೇ ಗೊಂದಲಗೊಂಡೆ. ಅಷ್ಟೂ ಜನರ ಮುಂದೆ ಅವನ ನಿಷ್ಠುರವಾದ ನುಡಿಗಳು ನನ್ನನ್ನು ಸಿಗ್ಗಾಗಿಸಿದವು. ನಡೆದದ್ದು ಇಷ್ಟೆ.. ಪಾಂಡವರೈವರನ್ನೂ ಒಂದೊಂದು ಬಗೆಯಿಂದ ನಿಂದಿಸಿ ಅವರ ದೌರ್ಬಲ್ಯವನ್ನು ಎತ್ತಿ ಹೇಳುವುದು ದುರ್ಯೋಧನನ ಪಾತ್ರಕ್ಕೆ ಪೂರಕವಾದದ್ದೇ. ಹಾಗೆಯೇ ವಿರಾಟ ನಗರಿಯಲ್ಲಿ ಪೂಜಾರಿಯಾಗಿ ವೇಷ ಮರೆಸಿಕೊಂಡಿದ್ದ ಧರ್ಮರಾಯನ ಮೋಸವನ್ನು ಎತ್ತಿ ಹೇಳಿ ಸಹಜವಾಗಿ ನಾನು ಕೆಣಕಿದ್ದೆ. ಇದರಲ್ಲಿ ಪಾತ್ರಪೋಷಣೆಯಲ್ಲದೆ ನನಗೆ ಬೇರೆ ದುರುದ್ದೇಶವಿರಲಿಲ್ಲ. ಆದರೆ ಧರ್ಮರಾಯ ಪಾತ್ರಧಾರಿ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣವೇನೆಂದು ಸಹಕಲಾವಿದರು ನನಗೆ ತಿಳಿಸಿ ಹೇಳಿದಾಗಲೇ ನನಗೆ ನನ್ನ ತಪ್ಪಿನ ಅರಿವಾಯಿತು……….. ಧರ್ಮರಾಯನ ಪಾತ್ರ ಮಾಡಿದವರು ಬೀರಪ್ಪ ಗುನಗ ಎಂಬುವವರು. ಅವರು ವೃತ್ತಿಯಿಂದ ಗ್ರಾಮ ದೇವತೆಯ ಪೂಜಾರಿಯಂತೆ. ನನಗೆ ಇದು ಗೊತ್ತಿರಲಿಲ್ಲ. ತನ್ನ ವೃತ್ತಿಯನ್ನೇ ಉಲ್ಲೇಖಿಸಿ ಮಾತನಾಡಿದುದ್ದಕ್ಕೆ ಆತ ಬೇಸರಗೊಂಡಿದ್ದ ಎಂಬುದು ನಂತರ ತಿಳಿಯಿತು. ನಾನು ವೇಷ ಕಳಚಿದ ಬಳಿಕ ಆತನಿಗೆ ವಾಸ್ತವವನ್ನು ವಿವರಿಸಿ ಸಾಂತ್ವನ ಹೇಳಿದೆ. ಆತ ಸಮಾಧಾನಗೊಂಡ. ಮಾತ್ರವಲ್ಲದೆ ಬೀರಪ್ಪ ಗುನಗ ಉತ್ತಮ ಪ್ರಸಾದನ ಕಲಾವಿದನೂ ಆದುದರಿಂದ ಮುಂದಿನ ದಿನಗಳಲ್ಲಿ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ನನಗೆ ಮೇಕಪ್ ಮಾಡಿ ಪಾತ್ರವನ್ನು ರೂಪಿಸಿ ನೆರವಾಗಿದ್ದಾನೆ. ಆಗೆಲ್ಲ ತದಡಿಯ ಅಂದಿನ ಘಟನೆಯನ್ನು ಸ್ಮರಿಸಿಕೊಂಡು ನಾವು ನಕ್ಕು ಹಗುರಾಗುತ್ತಿದ್ದೆವು. ಹಗಲು ನಿದ್ದೆ ಮುಗಿಸಿ ನಾಳೆ ಕಾಲೇಜು ಉಪನ್ಯಾಸಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆಯಿಂದ ನಾನು ಊರಿಗೆ ಹೋಗದೆ ಗೆಳೆಯರಿಂದ ಬೀಳ್ಕೊಂಡು ಅಂಕೋಲೆಯ ಬಸ್ಸು ಹಿಡಿದೆ. ಮಧ್ಯಾಹ್ನದ ನಾಲ್ಕು ಗಂಟೆಯ ಹೊತ್ತಿಗೆ ನಾನು ಗಾಢ ನಿದ್ದೆಯಲ್ಲಿರುವಾಗ ಟೆಲಿಗ್ರಾಮ ಸಂದೇಶವೊಂದು ನನ್ನನ್ನು ಹುಡುಕಿ ಬಂದಿತು. ನನ್ನ ಭಾವ ಕೃಷ್ಣರಾವ್ ಸುಲಾಖೆ “ಮೇಲ್ ಚೈಲ್ಡ ಬೋಥ್ ದಿ ಮದರ್ ಎಂಡ್ ಚೈಲ್ಡ್ ಆರ್ ಸೇಫ್….” ಎಂಬ ತಂತಿ ಸಂದೇಶ ಕಳುಹಿಸಿದ್ದರು. ಅಂದು ೧೯೮೫ ರ ಏಪ್ರಿಲ್ ಇಪ್ಪತ್ನಾಲ್ಕನೇಯ ತಾರೀಖು. ನನಗೆ ಗಂಡು ಮಗು ಹುಟ್ಟಿದ ಸಂತೋಷ ತಂದ ದಿನ. ಮನೆಯಲ್ಲಿ ನಾನೊಬ್ಬನೇ ಇದ್ದುದರಿಂದ ಸಂತಸ ತಡೆಯಲಾಗದೆ ತಂತಿ ಸಂದೇಶವನ್ನು ಮುದ್ದಿಸಿ ಮತ್ತೊಮ್ಮೆ ದುರ್ಯೋಧನನ ದಿಗಿಣ ಹೊಡೆದೆ! ಅದು ದೇಶದ ನೆಚ್ಚಿನ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನವೇ ಆದುದರಿಂದ ನನ್ನ ಜೇಷ್ಠ ಪುತ್ರನಿಗೂ ‘ಸಚಿನ್ ಕುಮಾರ್’ ಎಂದೇ ಹೆಮ್ಮೆಯಿಂದ ನಾಮಕರಣ ಮಾಡಲಾಯಿತು. ರಾಮಕೃಷ್ಣ ಗುಂದಿ

Read Post »

ಅಂಕಣ ಸಂಗಾತಿ

ನಾನು ಮೊಟ್ಟಮೊದಲು ಬಾವಿ ನೋಡಿದ್ದು ನಾವು ಬಾಡಿಗೆಗಿದ್ದ ಚಾಮುಂಡಿಪುರಂನ ಮನೆಯಲ್ಲಿಯೇ.  ನಲ್ಲಿಯಲ್ಲಿ ಧಾರಾಳ ಕಾವೇರಿ ನೀರು ಬಂದರೂ ಅಲ್ಲಿದ್ದ ಮನೆ ಮಾಲಕಿ ಮಡಿಹೆಂಗಸು ಅಜ್ಜಿ ಬಾವಿ ನೀರನ್ನೇ ಸೇದಿ ಉಪಯೋಗಿಸುತ್ತಿದ್ದುದು ಚಿಕ್ಕ ಮಕ್ಕಳಾದ ನಮಗೆ ಕೌತುಕದ ವಿಷಯ.

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ

‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

You cannot copy content of this page

Scroll to Top