ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ ವ್ಯಭಿಚಾರಿ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಎರಡರ ನಡುವೆ ವಿಭಾ ಪುರೋಹಿತ ಎಲ್ಲಿ ಹೋದರಲ್ಲಿ ಬೆಂಬತ್ತಿ ತೆರೆದ ಕೋರೆಹಲ್ಲು ಎದೆಗುಂಡಿಗೆ ಇರಿಯುತ್ತದೆ ಎನ್ನೆದೆಗುದಿಗಳನು ದಿಕ್ಕೆಡಿಸಿ ಅಡವಿಗೆ ಕೆಡವುತ್ತದೆ ಏನಿದು, ನನಗೇ ಹೀಗಾ ? ಎಲ್ಲರಿಗೂ ಬೆನ್ನಿಗೊಂದು ಭೂತ ವಕ್ಕರಿಸಿಕೊಂಡಿರುತ್ತಾ ? ಎಡಬಲಗಳ ನಡುವೆ ನಡೆಯುವುದು ದುರ್ಬರ !! ವರ್ತಮಾನದ ಕಾಲಗತಿಯಲಿ ದ್ವಂದ್ವ ಗಳ ಆಂತರ್ಯ ಹೆಜ್ಜೆ ಇಡಿಸುತ್ತದೆ ಭ್ರಮೆ ಬಿಡಿಸುತ್ತದೆ ಸಿಕ್ಕದ ದಕ್ಕದ ದೂರದ ಹಾದಿಗೆ !!! ಓಡುತ್ತಾ ಮುಗ್ಗರಿಸುತ್ತ…… ಸಿಗದ ಆಕಾಶಕ್ಕೆ ಛಂಗನೆ ! ಜಿಗಿಸಿ ಲಗ್ಗೆ ಹಾಕುತ್ತದೆ ಕನಸಿನೊಳಗಿನ ಮನಸು ಅಗೋಚರ ಕಾಳ್ಗಿಚ್ಚು ಸುತ್ತಲೂ ಕುಣಿಯುತ್ತದೆ ಎಲ್ಲೋ ಕಾರುತ್ತದೆ ತೆಗಳಿಕೆ, ತಿರಸ್ಕಾರ ನಿಂತಲ್ಲಿ ಕೂತಲ್ಲಿ, ಕವಿತೆಯ ಕಂತೆಯಲ್ಲಿ ಕಾಡುತ್ತದೆ ವಿಕ್ರಮಾದಿತ್ಯನ ಬೇತಾಳವಾಗಿ ನಿರ್ಲಿಪ್ತ ನನ್ನ ದಾರಿಗೆ ಲುಬ್ಧ ಶೂನ್ಯ ಗಮ್ಯಕ್ಕೆ ವಾಸ್ತವದ ಮೌನ ಭವಿಷ್ಯ ಗರ್ಭದಲ್ಲಿ ಬೆಳೆದು ಉತ್ತರಗಳಾಗಬೇಕಿದೆ. ತಟಸ್ಥ ವಾಗದೇ ನಡುನಡುವೆ ಸೆಡ್ಡು ಹೊಡೆದು ನಿಲ್ಲುವ ಪ್ರಶ್ನೆಗಳಿಗೆ !! ಜಗದಪುಟಕೆ ಸದಾ ತೆರೆದಿಟ್ಟ ನನ್ನ ಹೃದಯ ಯಾವ ಅರಿವಿನ ಸ್ಪರ್ಶಕ್ಕೆ ಶಪಿತಶಿಲೆ ಅಹಲ್ಯೆ ಯಾಗಿ ಜೀವತಳೆವುದೋ ? ಯಾವ ಕಾಲದ ಕರೆ ಎಂಥ ಸಂಕಲ್ಪ ಗೀತೆಯ ಯುಗ ಯುಗದ ಧ್ವನಿಯಾಗಿ ಗುಡುಗಿಸುವುದೋ ?

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ಮಿತಾ ಅಮೃತರಾಜ್ ಯಾವುದೋ ಒಂದು ಅದೃಶ್ಯ ಗಳಿಗೆಯಲ್ಲಿ ಹೇಗೋ ಬಂದು ನುಸುಳಿಕೊಂಡಿದೆಯಲ್ಲ ನನ್ನ_ನಿನ್ನ ನಡುವಲ್ಲೊಂದು ತೆಳು ಗೆರೆ. ಎಳೆದದ್ದು ನೀನಲ್ಲವೆಂದೆ ನಾನಂತೂ ಮೊದಲೇ ಅಲ್ಲ ಕಂಡೂ ಕಾಣದಂತಿರುವ ಎಳೆ ಸೂಕ್ಷ್ಮ ಗೆರೆ ಹಾಗಾದರೆ ಬಂದದ್ದಾದರೂ ಎಲ್ಲಿಂದ? ಇಂಚಿಂಚೇ ಬೆಳೆಯುತ್ತಿದೆ ಬಲಿಯುತ್ತಿದೆ. ಇಬ್ಬರಿಗೂ ಅದರ ಮೇಲೆ ಅಸಡ್ಡೆ ಎಳೆಯದ ಗೆರೆಯನ್ನು ಅಳಿಸುವುದೇತಕೆ? ಮಿತಿ ಮೀರಿ ಬೆಳೆದು ಗೆರೆಯೇ ಗೊಡೆಯಾದರೆ ನನಗೆ ನೀನು,ನಿನಗೆ ನಾನು ಕಾಣಿಸುವುದಾದರೂ ಎಂತು? ಗೆರೆಯ ಮೊನಚು ಈಗ ಎದೆಯವರೆಗೂ ಬಂದು ತಾಕಿ ಭಯ ಹುಟ್ಟಿಸುತ್ತಿದೆ. ಗೆರೆಗಳು ಒಂದನ್ನೊಂದು ಕೂಡಿಸುತ್ತದೆ. ಕೆಲವೊಮ್ಮೆ ಗುಣಿಸಿ,ಭಾಗಿಸಿ,ಕಳೆದು ಬರೇ ಶೇಷವನ್ನಷ್ಟೇ ಉಳಿಸಿಬಿಡುತ್ತದೆ ಕೂಡ… ಇಲ್ಲಿ ತೀರಾ ನಿಗಾ ಬೇಕು. ಬಿಡು, ಹೇಗೋ ಹುಟ್ಟಿಕೊಂಡಿದೆ ಸಧ್ಯ ಕಂಡಿತಲ್ಲ! ಬಿಗುಮಾನ ಬಿಟ್ಟು ಬಾ ಬೇಗ ಅಳಿಸಿ ಬಿಡೋಣ. ಆ ನಡುವಲ್ಲಿ ಕಂಡೂ ಕಾಣದಂತಿರುವ ಕನ್ನಡಿಯೊಂದ ತೂಗಿ ಬಿಡೋಣ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವು ಕಾರ್ಮಿಕರು ರಾಜು ದರ್ಗಾದವರ ಕಲ್ಲುಬಂಡೆ ತಲೆ ಮೇಲೆ ಹೊತ್ತು ಆಗಸದಗಲ ನಗುವ ಬಯಸಿ ಕಷ್ಟನಸ್ಟ ಪಕ್ಕಕ್ಕಿಟ್ಟು ಜೋಳಿಗೆಯಲ್ಲಿ ಕೂಸುಬಿಟ್ಟು ದೂರದ ಬೆಟ್ಟಕ್ಕೆ ಲಗ್ಗೆ ಜಡಿದು ಹಗಲುಗನಸು ಅದರೊಂದಿಗೆ ಬೆಸೆದು ಇರುಳು ಕಳೆದು, ಹಗಲು ಬರುವ ದಿಕ್ಕಿನಡಿಗೆ ಬಿಸಿಲುಬಾಗಿಲ ಬಡಿದು, ಗಟ-ಗಟ ಗಂಟಲ ಸಪ್ಪಳದಿ ಹೊಟ್ಟೆಯ ಹಸಿವನ್ನು ತಳಕು ಹಾಕಿದವರು ನಾವು ಕಾರ್ಮಿಕರು,ನಾವು ಕಾರ್ಮಿಕರು ಕೊಳಕುಬಟ್ಟೆ ಮೈಮೇಲೆ ಉಟ್ಟು ಮನದ ತುಂಬ ಪಿರುತಿ ಹೊಯ್ದು ಉಪ್ಪುನೀರು ಹರಿಯಲುಬಿಟ್ಟು ಎಚ್ಚತ್ತ ಕಣ್ಣು ಮಲಗದಂತೆ,ಬೆಚ್ಚನೆ ಕಣ್ಣೀರಿಗೆ ಕರಿಗಲ್ಲ ತೊಯ್ದು ಕಾರು,ಬಂಗ್ಲೆ ಆಸೆ ಗಂಟುಮಾಡಿ ಸುಟ್ಟುಬಿಟ್ಟು ಹೊತ್ತುಗಂಜಿ ಆಸೆಪಟ್ಟು ಕುದಿಯುವ ರೋಡಿಗೆ ಬರಿಗಾಲ ಎದೆಯ ಬಡಿದು ಹಳ್ಳಿಯಿಂದ ಮುಖ ತಿರುವಿ,ದುಡಿವ ಮೈಯ ಕೊಡವಿ, ಪಟ್ಟಣದ ಗರ್ಭವ ಸೇರಿ ಎತ್ತೆತ್ತರ ಕಟ್ಟಡದ ಅಂಗಾಲಲಿ ಬಗ್ಗಿ ನಡೆದು ಅಣಿಕಿಸಿಹೋಗುವ ಹೊತ್ತು ಕಳೆದವರು ನಾವು ಕಾರ್ಮಿಕರು, ನಾವು ಕಾರ್ಮಿಕರು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಖಾಲಿಯಾಗುಳಿಸಿದವನು ಶಿವಲೀಲಾ ಹುಣಸಗಿ ಈಗೆಲ್ಲಿ ಮಾಯವಾದೆ ನಿನ್ನೊಡನಾಟದ ಬಿಸಿಯೊಳಗೆ ಬೀಸಿದಬ್ಬರದ ಬಿರುಗಾಳಿಯಲಿ ಸಿಲುಕಿ ಹೊಯ್ದಾಡುತಿಹೆ ದೇಹದ ಕಣಕಣದಲೂ ಬೆರೆತ ನೀನು ಬಯಸಿದಾಗ ಕೈ ಜಾರುವ ಮೀನು ಹೆಪ್ಪುಗಟ್ಟಿದ ನರಗಳಲಿ ನೆತ್ತರು ಹರಿಸಿ ನೀನಪ್ಪಿದಾಗ ಬಯಕೆ ಕಾಡಿತ್ತು ನಿನ್ನೊಳಗೊಂದಾಗುವ  ಕ್ಷಣದೆ  ಬಟಾಬಯಲು ಗಾಳಿಯ ಹುಯಿಲು ಮರುಚಣ ಮುತ್ತಿದ ಮೌನದ ಹೊರತಾಗೇನು ಉಳಿದಿಲ್ಲವಿಲ್ಲಿ ಕನಸಿಗೆ ಮುನ್ನುಡಿಯಾದವನು ಬೆನ್ನುಡಿಯಾಗಲಿಲ್ಲ ನನಸಿಗೆ ಇಲ್ಲೀಗ ಅದೇ ಕೋಣೆ ಅದೇ ಕನಸುಗಳು ಅದೇ ಹಾಸಿಗೆದಿಂಬುಗಳು ಮತ್ತೆ ಮರಳುವೆಯೇನು ಹಸಿವಾದಾಗ? ಎದೆಗೊರಗಿ ಮಲಗಿದವ ಹೇಳಿ ಹೋಗಬಾರದಿತ್ತೇನು ಪಿಸುಮಾತಿನಲಾದರೂ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಿಂಕೆಗೆ ಜೀವ ಬರಲು ಧಾಮಿನಿ ಪ್ರಿಯಾ ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು ಕಾರಣ ನೀನು ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ ಜೀವನ ಪೂರ್ತಿ ನಡೆಯುವಂತದ್ದಲ್ಲ ಮೈಮೇಲೆ ಹರಿದಾಡಿದಂತೆ ಹಾವು ಮುದಗೊಳಿಸುವಂತ ಕಾವು ಹಾವಿನೊಂದಿಗೆ ಸರಸವೇ ನಾಗಮಂಡಲ ನೋಡಿಲ್ಲವೇ ಬೆಣ್ಣೆಯಂತಹ ಮೈ ಕರಗಿತ್ತಲ್ಲಾ ಸೈ ಕೈ ಕಾಲುಗಳಿಗೆ ಎಂತದೋ ಹುರುಪು ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ ಕಾರಣ ನೀನೇನಾ ? ಎಂತಾ ಅದ್ರಷ್ಟವಂತೆಯೇ ನೀ ಇವನನ್ನು ಇವನೇ ಎಂದುಕೋ ಬೇಡ ಬಿಡಿ ಇಲ್ಲಿ ಅವನೇತಕೋ ಏನೂ ಕಡಿಮೆಯಿಲ್ಲ ಸಂಭ್ರಮಕೋ ಈಗ ಅವನ ನೆನೆವುದೂ ಬೇಡ ಇವಳ ಹೋಲಿಕೆಯೂ ಬೇಡ ಇಬ್ಬರೂ ಒಬ್ಬರ ಮುಂದೊಬ್ಬರು ಪ್ರತ್ಯಕ್ಷವಾಗಿದ್ದೇವಲ್ಲ ಈಗ ಜೀವಂತ ಜಿಂಕೆ ನಾನು ಜಿಂಕೆಗೆ ಜೀವ ಕೊಟ್ಟ ಉಸಿರು ನೀನು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು ಅವನ ಜೇಬೋ ನಕ್ಷತ್ರದೂರು ತಾರೆಯೂರ ಚಂದ್ರಣ್ಣ ಬೆಳಗು ಬಳಿಯೋ.. ಹಟ್ಟಿಯ ಹುಡುಗರ ಚ್ವಾಮಂದೇವರ ಮೆರವಣಿಗೆ ಹರಕೆ ಕುಣಿತ ತಟ್ಟೆಯ ಬಡಿತ ಹಾಳು ಬಾವಿಗೆ ಗಣೇಶ ಸಂಭ್ರಮ ಜೈ ಜೈ ಹೊಗೆ ಕಿಂಡಿಯ ಬೆಳಕಲ್ಲಿ ಜೇಡ ಹೆಣೆದ ಬಲೆಯಲ್ಲಿ ಹಲ್ಲಿಯ ಬೇಟೆ ಬುಡ್ಡಿ ಉರಿದು ಕತ್ತಲಿಗೆ ಕೇಡು ಮಾಡಿತ್ತು ದೂರ ಬೆಟ್ಟದ ಕನಸು ರಂಗೋಲಿಯ ಹಾಸಿತ್ತು ಮೂರು ಪಟ್ಟಿಗೆ ಕೈಲಾಸ ನಾಮಕ್ಕೆ ವೈಕುಂಟ ಕಾಯ್ವ ಊರ ಮಾರಿಗೆ ಕರಿ ಹುಂಜನ ಭೇಟೆಯ ಊಟ ಮಡಿ ಪೂಜಾರಿಯ ಕಾಲಿಗೆ ನಾಯಿ ಉಚ್ಚೆಯ ಮಜ್ಜನ ಮಾಡಿತ್ತು ಬೊಚ್ಚು ಬಾಯ ಅಜ್ಜಿ ಅಂಗಳದ ಕತೆಗೆ ಹೂಂಗುಡುವ ಹುಡುಗರ ಸಾಲು ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರೊನ ಕಾಲದಲ್ಲಿ… ಶ್ವೇತಾ ಎಂ ಯು. ಕರೋನಾ ಕಾಲದಲ್ಲಿ ಕೂತುಂಡು ಮೈ ಭಾರ ಹೆಚ್ಚಿಸಿದವರ ನಡುವೆ ದುಡಿಮೆಯಿಲ್ಲದೆ ಜೀವಭಯದಿಂದ ಬದುಕೊ ಹಠವು ನಾಳೆ ಹೇಗೆಂದು ಸೊರಗಿದವರು ಅನಾಯಾಸವಾಗಿ ಸಿಕ್ಕ ರಜೆಗೆ ಹಾಯಾಗಿ ಪ್ರವಾಸ ಮಾಡಲಾಗದೆ ಮರುಗುತಿರುವ ಮಂದಿಯ ನಡುವೆ ತವರ ಸೇರಿಕೊಳ್ಳಲು ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು ಚೆಂದ ಸೀರೆಯುಟ್ಟು ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು ರಾಜಕೀಯ ಭವಿಷ್ಯವು ಲೆಕ್ಕಾಚಾರವು ಸಹಾಯ ಹಸ್ತ ಚಾಚಿ ತೆಗೆದ ಸೆಲ್ಫಿಗೆ ನಗುವ ಚೆಲ್ಲಿ, ಕೈ ಚಾಚಿದ ನೋವ ಮರೆತು ಹಸಿದೊಡಲ ತುಂಬಲು ಕಾದುನಿಂತಿರುವವರು ಕುಡಿದು ಮೋಜು ಮಸ್ತಿ ಖಾಲಿ ರೋಡು ಜಾಲಿ ರೈಡು ದಕ್ಕಿದ ಪಾಸಿಗೆ ತುಂಬಿದ ಜೇಬು ತುಂಬು ಗರ್ಭಿಣಿ ಹತ್ತಾರು ಮೈಲಿ ನಡೆದು ಉಸಿರ ಬಿಡುವಾಗ ಅಯ್ಯೋ! ಏನದ ಯಾವುದೇ ಚೆಕ್ ಪೋಸ್ಟು ಮನೆಯಲ್ಲಿರಿ ಸುರಕ್ಷಿತರಾಗಿರಿ ಎಂದರೆ ರಸ್ತೆಗಿಳಿದು ಗೊತ್ತು ಗುರಿಯಿಲ್ಲದೆ ಸುಖಾಸುಮ್ಮನೆ ಅಲೆದವರ ನಡುವೆ ತಮ್ಮವರ ಸಾವು ನೋವಿಗೂ ಸ್ಪಂದಿಸಲಾರದೆ ಕ್ವಾರಂಟೈನ್ ಗೆ ಸಿಲುಕಿದ ಬಡಪಾಯಿಗಳು ದೊಡ್ಡ ಕಾರೊಳಗಿದ್ದ ಸೆಲೆಬ್ರಿಟಿ ಮಾಡಿದ ಅಪಘಾತಕ್ಕೆ ಚಿಕ್ಕದೆ ಒಂದು ಕೇಸು ದೊಡ್ಡವರ ಕಾನೂನಿಗೆ ಹೆದರಿ ರೈಲು ಹಳಿಗಳ ಮೇಲೆ ದಣಿವಾರಿಸಿಕೊಳ್ಳುವ ಧಾವಂತದಲ್ಲಿ ಕಟ್ಟಿಟ್ಟರೊಟ್ಟಿ ಮರೆತು ಪ್ರಾಣ ತೆತ್ತು ಕರೋನ ಕಾಲದಲ್ಲಿ ಸುದ್ದಿಯಾದವರು ನನ್ನ ಜನ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದು ಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ ನೀ ಬರಲೇ ಇಲ್ಲ ನೇಸರ ಮಗ್ಗಲು ಬದಲಿಸುವ ಮುನ್ನ ಮರಳಿ ಬರುವ ನೀರಿಕ್ಷೆ ಇತ್ತು ಪಾದ ಮುತ್ತಿಕ್ಕಿದ ಎದೆಯ ಹೊಸ್ತಿಲು ಕಾಯುತಿದೆ ನೀ ಬರಲೇ ಇಲ್ಲ ಸಾಚಿಯ ಆ ದಿನಗಳ ನೆನಪು ಕುಡಿದು ತೂರಾಡುತಿವೆ ತುಟಿಯ ಮೊಗ್ಗಿಗೆ ಮಧು ಸವರಲು ಕಾದೆ ನೀ ಬರಲೇ ಇಲ್ಲ

ಕಾವ್ಯಯಾನ Read Post »

You cannot copy content of this page