ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಂತಿ ಹರಿದ ವೀಣೆ ನಾನು,
ಮೌನದೊಳಗೇ ನಾದ ನಾನು;
ಮುರಿದ ಕನಸ ದಾರಿ ನಾನು,
ನಡೆಯುತಿರುವ ಜೀವ ನಾನು.

ಕತ್ತಲ ರಾತ್ರಿ ಜೊತೆಯಾದರೂ,
ನಕ್ಷತ್ರದಂತೆ ಬೆಳಕು ನಾನು;
ಕಣ್ಣೀರ ಹನಿಯ ಮಣ್ಣಿನೊಳಗೆ,
ಮೊಳೆಯುತಿರುವ ಬೀಜ ನಾನು.

ಗಾಳಿ ತಾಕಿದ ಕ್ಷಣದಲ್ಲೇ,
ಮೌನವೇ ಮಧುರ ರಾಗ;
ನೋವು ತಾಕಿದ ಹೃದಯದಲ್ಲೇ,
ಹುಟ್ಟುತ್ತದೆ ಹೊಸ ನಾದ.

ಮುರಿದ ತಂತಿ ಎಂದರೇನು,
ನಾದ ಮಡಿಯುವುದಿಲ್ಲ;
ಮುರಿದ ಮನಸು ಎಂದರೇನು,
ಆಸೆ ಸಾಯುವುದಿಲ್ಲ.

ಒಂದು ಹೂವಿನಿಂದ ವಸಂತವಿಲ್ಲ,
ಒಂದು ನೆರಳಿಂದ ದಾರಿಯಿಲ್ಲ;
ನೂರ ಕನಸು ಸೇರಿದಾಗಲೇ,
ಜೀವನಕ್ಕೆ ಸೋಲಿಲ್ಲ.

ಮಣ್ಣು ಕಲಿಸಿದ ಸಹನೆ ನಾನು,
ಆಕಾಶ ಕೊಟ್ಟ ಕನಸು ನಾನು;
ಹೊಳೆ ಹೇಳಿದ ಹರಿವು ನಾನು,
ಗಾಳಿಯ ಮಧುರ ಸ್ಪರ್ಶ ನಾನು.

ಹಳೆಯ ನೋವು ದೂರವಾದರೂ,
ನೆನಪು ಆಗಿ ಉಳಿಯುತ್ತದೆ;
ಹೊಸ ಬೆಳಕು ಬಂದಾಗಲೇ,
ಬದುಕು ಮತ್ತೆ ನಗುತ್ತದೆ.

ನೀ ನಡೆದ ದಾರಿ ನೆರಳಾದರೂ,
ನನ್ನ ದಾರಿ ಬೆಳಕು ಆಗಲಿ;
ತಂತಿ ಹರಿದ ವೀಣೆ ಆದರೂ,
ನನ್ನ ನಾದ ಉಳಿದು ಹೋಗಲಿ.


About The Author

Leave a Reply

You cannot copy content of this page

Scroll to Top