ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಡಿಸಿಲಿನ ಗುಬ್ಬಚ್ಚಿ ನಾನು.
ತಂದೆ–ತಾಯಿಯ ಪ್ರೀತಿ,
ಅಪ್ಪನ ದುಡಿಮೆ ದುಡ್ಡಿನಿಂದ
ಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿ
ಹಾರಲು ಕಲಿತೆ.

ಗೂಡು ಬಿಟ್ಟು,
ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;
ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,
ಎತ್ತರಕ್ಕೆ ಏರುತ್ತಿದ್ದೆ.

ಗುಬ್ಬಚ್ಚಿಯ ಗೂಡಲ್ಲಿ
ಬಡತನ ಇದ್ದರೂ ಬವಣೆ ಇರಲಿಲ್ಲ;
ಹಣ ಇರಲಿಲ್ಲ, ಆದರೆ ಆನಂದ ಇತ್ತು.
ನೋವಿತ್ತು, ನಂಜಿರಲಿಲ್ಲ;
ಕೊಳಕು ಇತ್ತು, ಕತ್ತಲೆ ಇರಲಿಲ್ಲ.

ಶುಭ್ರ ನೀಲಿ ಆಕಾಶ,
ತಣ್ಣನೆಯ ಗಾಳಿ,
ತಳಿರಿನ ತಂಪು,
ಮಲ್ಲಿಗೆಯ ಕಂಪು—
ಇವೆಲ್ಲಾ ನನಗೆ ಗುರಿಯಾಗಿ,
ಗುರುವಾಗಿ,
ಗುರಿಯವರೆಗೂ ಕರೆದೊಯ್ದವು.

ಆಮೇಲೆ…
ಅರಮನೆ ಸೇರಿದೆ.
ಅಂದ–ಚಂದದ ಮೈಮಾಟ,
ಮೋಹ–ಮಾಯೆಯ ಪಾಶ;
ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,
ಹಾರಲು ಆಗಲಿಲ್ಲ.

ಪಂಜರದೊಳಗೆ ರೆಕ್ಕೆ ಬಡಿಯುತ್ತಾ,
ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿ
ನಲಿವು ಕಾಣದೆ
ಕಾದು ಕುಳಿತು ಕಂಗಾಲಾದೆ.

ಹೊಸ ಪ್ರಪಂಚದಲ್ಲಿ
ದಾರಿ ತಪ್ಪಿದೆ;
ದಾರಿ ತೋರಿಸುವವರೇ
ಕತ್ತಲಿನ ಪರದೆ ಕಟ್ಟಿದರು.

ಹಾರಲೂ ಆಗದೆ,
ಹೊರಳಲೂ ಆಗದೆ,
ಮರುಗುತ, ಸೊರಗುತ, ಕೊರಗುತ
ಕುಳಿತೆ—
ರೆಕ್ಕೆ ಮುರಿದ ಹಕ್ಕಿಯಂತೆ.

ಪಂಜರದಿಂದ ಬಿಡುಗಡೆ ಯಾವಾಗ?
ನಾನು ಹಾರಬೇಕು—
ಶುಭ್ರ ಗಾಳಿಯ ತಂಪಿನಲ್ಲಿ,
ಸ್ವಚ್ಛ ನೀಲಿ ಆಕಾಶದ ಕಡೆಗೆ.

ಮೌನವೇ ಮಾತಾಗಿದೆ.
ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?
ಒಂದು ದಿನ ಪಂಜರದ ಸರಳು ಮರುಗಿತು
“ಬಿಡುಗಡೆ ನೀಡುವೆ ಹೋಗು ನೀನು”

ಹಾರುವ ಚೈತನ್ಯ ಇಲ್ಲ;
ಅದೇ ಆಕಾಶ, ಅದೇ ಗಾಳಿ—
ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದ
ರೆಕ್ಕೆ ಮುರಿದ ಹಕ್ಕಿ.


About The Author

13 thoughts on “ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ””

    1. ನಿಮ್ಮ ಶಿಷ್ಯ ಬಳಗದಲ್ಲಿ ನಾವು ಇದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಸರ್. Hats of you sir

  1. ಸೂಕ್ಷ್ಮ ಸಂವೇದನಾಶೀಲ ಭಾವಾಭಿವ್ಯಕ್ತಿ, ಇನ್ನಷ್ಟು ಭಾವಗಳ ಒರತೆ ಚಿಮ್ಮಲಿ ಸರ್

  2. ಪ್ರಸ್ತುತ ಸನ್ನಿವೇಶಗಳೊಂದಿಗೆ ಅದ್ಭುತ ರೂಪಕ ಸರ್

  3. ನಿಮ್ಮ ಕನ್ನಡ ಬರವಣಿಗೆ ಬಹಳ ಅರ್ಥಗರ್ಭಿತವಾಗಿದೆ ಮತ್ತು ಮನ ಮುಟ್ಟುವಂತಿದೆ , ನಿತ್ಯ ಬವಣೆ ಮತ್ತು ಆಶಾವಾದದ ಬದುಕಿನ ಅರ್ಥ ಹೇಳುವಂತಿದೆ. ಸಾರ್ಥಕ ಬದುಕು ಎಂದರೆ ಇದೆಲ್ಲವ ಮೀರಿ ಬೆಳೆದಾಗಲೇ ಎಂಬುದು ಈ ನಿಮ್ಮ ಕವಿತೆಯಲ್ಲಿ ಅಡಗಿದೆ.ಈಗೆ ಹೆಚ್ಚು ಹೆಚ್ಚು ಅರ್ಥಗರ್ಭಿತ ಬರಹಗಳು ಮೂಡಿಬರಲಿ ಸರ್.

    1. ಸಾಂಕೇತಿಕವಾಗಿ ರೆಕ್ಕೆ ಮುರಿದ ಹಕ್ಕಿ ಅಷ್ಟೇ ಆದರೂ ಬಾಲ್ಯದ ಎಷ್ಟೋ ಮಕ್ಕಳ ಮನಸ್ಸುಗಳ ಅಂತರಾಳ ಈ ಕವಿತೆಗಳ ಮೂಲಕ ಅನಾವರಣಗೊಳಿಸಲು ನಮ್ಮ ಕವಿ ಹೃದಯ ಪ್ರಯತ್ನಿಸಿದೆ ಬಹಳ ಸರಳ ಅರ್ಥಗರ್ಭಿತವಾದ ಪದ ಪುಂಜಗಳ ಜೋಡಣೆ ಆಕರ್ಷಣೆ ಇದೆ ಎಂದರೆ ಅತಿಶಯೋಕ್ತಿಯಲ್ಲ…. ಇದೇ ರೀತಿ ಸಾಹಿತ್ಯ ಕಾರ್ಯ ಮುಂದುವರಿಯಲಿ ಎಂದು ಮಾನ್ಯರಿಗೆ ಹಾರೈಸೋಣ ❤️

  4. ನಿಜವನ್ನು ಪ್ರಕೃತಿಗೆ ಮೈವೇಳಿಸಿ ಬರೆಯುವ ಕವಿಗಳು ಸಿಗುವುದು ಅಪರೂಪ. ಮತ್ತೆ ಸಾಮಾನ್ಯರಿಗೆ ತಿಳಿಯುವಂತೆ ಪದಗಳನ್ನು ಇಳಿಸುವುದು ಸುಲಭದ ಕೆಲಸವಲ್ಲ. ಕವಿಗಳ ಸಾಲುಗಳಲ್ಲಿ ನನ್ನದೂ ವಿಷಯ ಇದೆಯಲ್ಲ ಅಂತ ನಾನು ಅಂದುಕೊಂಡೆ… ಇವರಲ್ಲಿ ಬಹಳ ಗಟ್ಟಿ ಸಾಹಿತಿ ಅಡಗಿದ್ದಾರೆ ಎಂಬ ಸತ್ಯವನ್ನು ಧೈರ್ಯವಾಗಿ ಹೇಳಬಲ್ಲೆ. ಮಾನ್ಯರಿಗೆ ಶುಭವಾಗಲಿ.

Leave a Reply

You cannot copy content of this page

Scroll to Top